ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Thursday, September 13, 2012

ಹೀಗಿತ್ತು ನಮ್ಮೂರು....






ನಮ್ಮೂರಿನ ಜನ ಬಡ ಭಾರತದ ಇನ್ಯಾವುದೇ ಹಳ್ಳಿಗಾಡಿನ ಪ್ರಜೆಗಳಂತೆ ಸಾಕಷ್ಟು ಎಬಡರಾಗಿದ್ದರು. ವಿಪರೀತವೆನ್ನುವಷ್ಟು ದೈವಭಕ್ತರು. ಸಾಲ ಮಾಡಿಯಾದರೂ ವರ್ಷಕ್ಕೊಂದಾವರ್ತಿ ಧರ್ಮಸ್ಥಳ, ಉಡುಪಿ, ಕಟೀಲು, ಮಂದಾರ್ತಿ, ಸುಬ್ರಮಣ್ಯಕ್ಕೆ ಯಾತ್ರೆ ಹೋಗಿ ಇಡೀ ವರ್ಷ ಹುಟ್ಟಿದ್ದಕ್ಕೆ-ಸತ್ತದ್ದಕ್ಕೆ-ಜಾನುವಾರು ಕಳೆದು ಹೋಗಿದ್ದಕ್ಕೆ-ಸೀಕಾದದ್ದಕ್ಕೆ ಹೀಗೆ ಹೊತ್ತ ಅಸಂಖ್ಯ ಹರಕೆಗಳನ್ನೆಲ್ಲ ತೀರಿಸಿ ತಲೆ ಬೋಳಿಸಿಕೊಂಡೆ ಬರುವವರು. ಮಾತುಮಾತಿಗೆ "ಕೆಳಗಿನ ದೇವರ ಆಣೆ" ( ಧರ್ಮಸ್ಥಳದ ಮಂಜುನಾಥನ ಭಕ್ತರಾಗಿದ್ದ ಎಲ್ಲರಿಗೂ ಅವನ ಹೆಸರನ್ನ ಹೇಳೋಕೂ ಅಂಜಿಕೆ!) ಹಾಕಿ ಭಯ ಹುಟ್ಟಿಸುವುದರಲ್ಲಿ ನಿಸ್ಸೀಮರು. ಅವರ ಭಕ್ತಿಯ ಬೆಳೆಯಲ್ಲಿ ದೇವರಿಗೆ ಕೊಟ್ಟಷ್ಟೇ ಮಹತ್ವ ಭೂತಕ್ಕೂ ಇತ್ತು,ಈಗಲೂ ಇದೆ. ಘಟ್ಟದ ಮೇಲಿನ ಊರಾಗಿದ್ಧರೂ ತೀರ್ಥಹಳ್ಳಿಯ ಬಹುಸಂಖ್ಯಾತರು ದಕ್ಷಿಣ ಕನ್ನಡ ಮೂಲದವರೆ ಆಗಿರೋದರಿಂದಲೂ ಏನೋ ಭೂತಾರಾಧನೆ ಅಲ್ಲಿ ಸಹಜವಾಗಿ ಬೇರುಬಿಟ್ಟಿತ್ತು. ತೀರ್ಥಹಳ್ಳಿ ಈಗೇನೋ ಬೆಳೆದು ದೊಡ್ಡ ಊರಾಗಿರಬಹುದು ಆದರೆ ಕೇವಲ ಇಪ್ಪತ್ತೇ-ಇಪ್ಪತ್ತು ವರ್ಷಗಳ ಹಿಂದೆ ಹೆಸರಿಗೆ ತಕ್ಕಂತೆ ದೊಡ್ಡದೊಂದು ಹಳ್ಳಿಯಾಗಿಯೆ ಇತ್ತು.


ಹೀಗಾಗಿ ಅಲ್ಲಿನ ಪ್ರತಿ ಬಡಾವಣೆಗಳಲ್ಲೂ ಭೂತರಾಯಸ್ವಾಮಿಯದ್ದೋ ಇಲ್ಲ ಚೌಡಿಯದ್ದೋ ಬನ ಇದ್ದೆ ಇರುತ್ತಿತ್ತು. ಆಗೆಲ್ಲ ಸಣ್ಣ ಮಕ್ಕಳು ಸಂಜೆ ಕವಿದ ಮೇಲೆ ಹೋಗಲು ಹೆದರುತ್ತಿದ್ದ ಇಂತಹ ಬನಗಳ ಸುತ್ತಮುತ್ತ ಇತ್ತೀಚಿಗೆ ಜೀವಂತ ಭೂತಗಳಂತ ಜನರು ಎರಡೋ-ಮೂರೋ ಅಂತಸ್ತಿನ ಉಪ್ಪರಿಗೆಯ ಮನೆ ಕಟ್ಟಿಕೊಂಡಿರೋದು ಇತ್ತೀಚಿಗೆ ಊರಿಗೆ ಹೋಗಿದ್ದಾಗ ನೋಡಿ ಬೇಜಾರಾಯಿತು. ನಾವೆಲ್ಲ ಚಿಕ್ಕವರಾಗಿದ್ಧಾಗ ಒಂದು ತರಹ ನಿಗೂಡ ಭಯ ಹುಟ್ಟಿಸುವ ಇಂತಹ ಪವರ್ ಫುಲ್(!) ಭೂತದ ಕಲ್ಲುಗಳಿದ್ದ ತಾಣಗಳೆಲ್ಲ ಇಂದು ಗತ ವೈಭವ ಕಳೆದುಕೊಂಡು ಪಳಯುಳಿಕೆಯಂತೆ ನಿಂತಿವೆ. ಹಿಂದೊಮ್ಮೆ ತಮಗೆ ಹೆದರುತ್ತಿದ್ದ ಹುಲುಮಾನವರಿಗೆ ಇದೀಗ ತಾವೇ ಹೆದರಿ ಸಾಯಬೇಕಾದ ದೈನೇಸಿ ಸ್ಥಿತಿ ಭೂತಗಳಿಗೆ! ಅದಕ್ಕೆ ಇರಬೇಕು ಇಂದಿನ ಮಕ್ಕಳಿಗೆ ನಮಗಿದ್ದಷ್ಟು ಕಲ್ಪನಾ ಸಾಮರ್ಥ್ಯವೂ ಇಲ್ಲ. ನಾವು ಕಂಡ ಚಂದದ ತೀರ್ಥಹಳ್ಳಿಯ ಕಾಣೋ ಭಾಗ್ಯವೂ ಅವರಿಗಿಲ್ಲ. ಒಟ್ಟಿನಲ್ಲಿ ನಾನು ಕಂಡು ಬೆಳೆದಿದ್ದ ಆ ತೀರ್ಥಹಳ್ಳಿ ಇವತ್ತು ಎಲ್ಲೋ ಕಳೆದೇಹೋಗಿದೆ. ಕಣ್ಣು ಮುಚ್ಚಿಕೊಂಡು ತೀರ್ಥಹಳ್ಳಿಯನ್ನು ನೆನಪಿಸಿಕೊಂಡರೆ ಮೊದಲಿಗೆ ನನಗೆ ನೆನಪಾಗೋದು ವೆಂಕಟೇಶ್ವರ ಟಾಕೀಸು, ಆಮೇಲೆ ಸೋಮವಾರದ ಸಂತೆ, ಅದರ ನಂತರ ರಾಮೇಶ್ವರ ದೇವಸ್ಥಾನ, ಅನಂತರ ತುಂಗಾ ಹೊಳೆ ಮಧ್ಯದ ರಾಮಮಂಟಪ, ಅದಾದ ಮೇಲೆ ನಮ್ಮ ಮನೆ ಕೆಳಗಿದ್ದ ನಾಗರಬನ. ಅದಾದ ನಂತರ ನಾನು ಇಷ್ಟಪಟ್ಟು ಹೋಗುತ್ತಿದ್ದ ಸರಕಾರಿ ಜೆ ಸಿ ಆಸ್ಪತ್ರೆ (ಸಣ್ಣಪುಟ್ಟ ಸೀಕಿಗೂ ಇಂಜೆಕ್ಷನ್ ಹಾಕಿಸಿಕೊಳ್ಳುವ ವಿಲಕ್ಷಣ ಖಯಾಲಿ ನನಗಿತ್ತು, ಸಾಮಾನ್ಯವಾಗಿ ಪುಟ್ಟ ಮಕ್ಕಳು ಸೂಜಿಗೆ ಅಂಜುತ್ತವೆ... ನಾನದಕ್ಕೆ ಅಪವಾದವಾಗಿದ್ದೆ. ನನ್ನ ಅಂಜಿಸುತ್ತಿದ್ದುದು ಕಹಿ ಸಿರಪ್ ಹಾಗು ಮಾತ್ರೆಗಳಷ್ಟೆ!). ಬಸ್'ಸ್ಟ್ಯಾಂಡ್'ನಲ್ಲಿದ್ದಕಾರಂತರ ಮಯೂರ ಹೋಟೆಲಿನಲ್ಲಿ ಅಜ್ಜ ಕೊಡಿಸುತ್ತಿದ್ದ ಮಸಾಲೆ ದೋಸೆ! ಹೀಗೆ ಇವೆಲ್ಲ ನನ್ನ ಸ್ಮ್ರತಿಯಲ್ಲಿ ಫ್ರೇಮ್ ಹಾಕಿದಂತೆ ಉಳಿದುಬಿಟ್ಟಿವೆ.ಬಹುಶಃ ನಾನೂ ಅಲ್ಲಿಯೇ ಫ್ರೀಜ್ ಆಗಿದ್ದೇನೆ!


ಹಾಗೆ ನೋಡಿದರೆ ನಮ್ಮ ಅಜ್ಜನಿಗೆ ಒಟ್ಟು ಆರು ಮಕ್ಕಳು. ನನ್ನ ಹೆತ್ತಮ್ಮ ಮೊದಲನೆಯವಳು, ನನ್ನ ಮೊದಲ ಚಿಕ್ಕಮ್ಮನಿಗೆ ಎರಡೆ-ಎರಡು ವರ್ಷ ವಯಸ್ಸಾಗಿದ್ದಾಗ ಕ್ಷುಲ್ಲಕ ಕಾರಣಕ್ಕಾಗಿ ನನ್ನಜ್ಜಿ ಆತ್ಮಹತ್ಯೆ ಮಾಡಿಕೊಂಡರಂತೆ. ಡ್ರೈವರ್ ಕೆಲಸ ಮಕ್ಕಳ ದೆಖಾರೇಖಿ ಮಾಡಿಕೊಳ್ಳಬೇಕಾದ ಸಂಕಟ ನೋಡಲಾರದೆ ಅಳಿಯನ ಮರು ಮದುವೆಯನ್ನ ತಾವೇ ಖುದ್ಧಾಗಿ ಹೆಣ್ಣು ನೋಡಿ ಅತ್ತೆ-ಮಾವನೆ ಮುಂದೆನಿಂತು ಮಾಡಿಸಿಕೊಟ್ಟರಂತೆ. ಶೀಘ್ರ ಕೋಪಿಯೂ, ಅವಿವೇಕಿಯೂ ಆದ ಮಗಳ ತಪ್ಪು ತಿಳಿದ ವಿವೇಕಿಗಳು ಅವರಿದ್ದಿರಬಹುದೇನೋ!. ಹೀಗೆ ನಮ್ಮ ಮನೆತುಂಬಿ ಬಂದವರೇ ನನ್ನಮ್ಮ. ಅವರಿಗೂ ಎರಡು ಗಂಡು ಹಾಗು ಎರಡು ಹೆಣ್ಣು ಮಕ್ಕಳಾದವು. ನನ್ನ ಹೆತ್ತಮ್ಮ ಅಹಲ್ಯ, ಚಿಕ್ಕಮ್ಮ ನಾಗರತ್ನ, ಮಾವಂದಿರಾದ ಸುರೇಶ-ಪ್ರಕಾಶ, ಕಿರಿಚಿಕ್ಕಮ್ಮಂದಿರು ಆಶಾ -ಪೂರ್ಣಿಮಾ ಇವರಿಷ್ಟೇ ಇದ್ದ ನಮ್ಮ ಮನೆಗೆ ಕಿರಿಯವನಾಗಿ ನಾನು ಹುಟ್ಟಿದ್ಧು ೨೬ ಆಗೋಸ್ಟ್ ೧೯೮೨ ರಂದು. ಮನೆಗೆ ಮೊದಲ ಮೊಮ್ಮಗ ನಾನಾಗಿದ್ದರಿಂದ ಆ ಕಾಲದ ಪದ್ದತಿಯಂತೆ ನಾನು ಮನೇಲೆ ಹುಟ್ಟಿದೆ.

ಇಲ್ಲೊಂದು ತಮಾಷೆಯೂ ಇದೆ.ನನ್ನ ಹುಟ್ಟಿನ ಕಾಲಕ್ಕೋ ನಮ್ಮಜ್ಜ ಡ್ಯೂಟಿ ಮೇಲಿದ್ದರು, ಅವರು ಬಂದು ನನ್ನ ಮೊದಲಿಗೆ ನೋಡಿದಾಗ ನಾನು ನಾಲ್ಕು ಧಿನ ದೊಡ್ಡವನಾಗಿದ್ದೆ. ಇವರು ಪುರಸಭೆಗೆ ಜನನ ನೋಂದಣಿ ಮಾಡಿಸೋಕೆ ಹೋದಾಗ ಅಲ್ಲಿನವರು ತಡವಾಗಿ ಬಂದುದಕ್ಕೆ "ಏನ್ರಿ ನಾಲ್ಕ್ ದಿನದಿಂದ ಮಗು ಹುಟ್ಟಲೇ ಇತ್ತ?" ಅಂತ ಸರಿಯಾಗಿ ಬೈದರಂತೆ.ಅವರ ಮಾತಿಗೆ ಬೆಪ್ಪಾಗಿ ನನ್ನ ಜನನ ದಿನವನ್ನ ಅಜ್ಜ ಅದೇ ದಿನಕ್ಕೆ ಅಂದರೆ ೧ನೆ ಸೆಪ್ಟೆಂಬರ್ ಅಂತಲೇ ಬರಿಸಿದ್ದಾರೆ. ಹೀಗಾಗಿ ದಾಖಲಾತಿಗಳಲ್ಲಿ ನಾನು ನಾಲ್ಕುದಿನ ತಡವಾಗಿ ಹುಟ್ಟಿದೆ! ನಾನು ಹುಟ್ಟುವಾಗ ಮೊದಲ ಚಿಕ್ಕಮ್ಮ ಅಲ್ಲೆ ಸಮೀಪದ ಕಟ್ಟೆಹಕ್ಕಲು ಎಂಬ ಊರಲ್ಲಿ ಟೀಚರ್ ಆಗಿದ್ದರು. ಮಾವಂದಿರು ಕಾಲೇಜಿನ ಮೆಟ್ಟಲು ಹತ್ಟಿದ್ದರೆ ಒಬ್ಬ ಚಿಕ್ಕಮ್ಮ ಹೈಸ್ಕೂಲಿನಲ್ಲೂ ಇನ್ನೊಬ್ಬಳು ನಾಲ್ಕನೇ ಕ್ಲಾಸಿನಲ್ಲೂ ಇದ್ದಳು. ಹೀಗಾಗಿ ನಾನೆಂದರೆ ಎಲ್ಲರಿಗೂ ವಿಪರೀತ ಪ್ರೀತಿ. ಅವರೆಲ್ಲರಿಗೂ ಆಡಲು ಒಂದು ಜೀವಂತ ಬೊಂಬೆ ಸಿಕ್ಕಂತೆ ಆಗಿತ್ತೇನೋ! ಅದೇನೇ ಇದ್ದರೂ ನನ್ನ ನೆನಪಿನಲ್ಲಿ ಭದ್ರವಾಗಿರುವ ಮೊದಲ ನಾಲ್ಕೈದು ವರ್ಷಗಳು ಸಂಭ್ರಮದಿಂದಲೇ ಕೂಡಿದ್ದವು.


ನನಗೆ ನೆನಪಿರುವ ಹಾಗೆ ನಮಗ್ಯಾರಿಗೂ ಬಾಲ್ಯದಲ್ಲೇನೂ ನಮ್ಮೆಲ್ಲರಿಗೆ ಸುಖ ಸಂತೋಷಕ್ಕೆ ಕೊರತೆಯಿರಲಿಲ್ಲ ಅಥವಾ ನೋವಿನ ಅರಿವೂ ಇರದ ಎಲ್ಲವೂ ಸುಂದರ ಎನಿಸೊ ಮುಗ್ಧ ಸ್ಥಿತಿಯದು ಎನ್ನೋದು ಹೆಚ್ಚು ಸರಿ. ಆಗಿನಿಂದಲೂ ನಾವು ಅಂದರೆ ನನ್ನಮ್ಮ, ಅಜ್ಜ, ಅಜ್ಜಿ. ಇಬ್ಬರು ಚಿಕ್ಕಮ್ಮಂದಿರು ಹಾಗೆ ಇಬ್ಬರು ಮಾವಂದಿರು ಜೊತೆಯಾಗಿಯೇ ಇದ್ದ ನೆಮ್ಮದಿಗೇನೂ ಕೊರತೆಯಿರದ ಸರಳ ಮಧ್ಯಮವರ್ಗದ ಕುಟುಂಬ ನಮ್ಮದು. ನನ್ನ ಪ್ರಪಂಚವೂ ಅಷ್ಟಕ್ಕೆ ಸೀಮಿತ. ಅದು ಬಿಟ್ಟರೆ ನಾನು ಹೋಗುತ್ತಿದ್ದ ಬಾಲವಾಡಿ, ಅಲ್ಲಿನ ಉದ್ದ ಜಡೆಯ ಟೀಚರ್ ಹಾಗು ತುರುಬಿನ ಟೀಚರ್ ಇವರಿಗೆ ನನ್ನ ಅರಿವಿನ ಪರಿಧಿ ಮುಗಿದಿರುತ್ತಿತ್ತು. ನಿಜವಾಗಿ ನಾನು ಅಂಟಿಕೊಂಡಿರುತ್ತಿದ್ದುದು ನನ್ನಜ್ಜಿಗೆ ಅವರನ್ನೇ ಅಮ್ಮ ಎಂದು ಕರೆಯುತ್ತಿದ್ದೆ, ಈಗಲೂ ಅವರನ್ನೇ ಅಮ್ಮ ಎನ್ನೋದು. ಬಡತನ ಸಾರ್ವತ್ರಿಕವಾಗಿದ್ದ ಆ ದಿನಗಳಲ್ಲಿ ಇಂದು ಎಲ್ಲರ ಮನೆಯಲ್ಲೂ ಕಾಣಸಿಗುವ ಐಶಾರಾಮಿ ಸಲಕರಣೆಗಳು ಎಲ್ಲೋ ಒಂದೆರಡು ಉಳ್ಳವರ ಮನೆಯ ಸ್ವತ್ತು ಮಾತ್ರ ಆಗಿದ್ದವು. ಹೀಗಾಗಿ ಯಾರಿಗೂ ಅದೊಂದು ಕೊರತೆ, ಅದಿಲ್ಲದ ಬಾಳು ಪರಿಪೂರ್ಣವಲ್ಲ ಅಂತ ಅನ್ನಿಸುತ್ತಲೇ ಇರಲಿಲ್ಲ ಅಂದುಕೊಳ್ಳುತ್ತೇನೆ.

ಮನೆಯಲ್ಲಿ ಆರು ಕರೆಯುವ ದನಗಳಿದ್ದವು ಅಜ್ಜ ಆಗಿನ್ನೂ ಗಜಾನನ ಕಂಪೆನಿಯಲ್ಲಿ ಡ್ರೈವರ್ ಆಗಿದ್ದರು. ನಿತ್ಯ ಉಡುಪಿಯಿಂದ ಶಿವಮೊಗ್ಗದ ರೂಟಲ್ಲಿ ಅವರದ್ದು ಪಾಪ ಗಾಣದೆತ್ತಿನ ದುಡಿತ. ಇತ್ತ ಮನೆಯಲ್ಲಿ ತಿನ್ನೋ ಕೈಗಳು ಹದಿನಾರು, ಅತ್ತ ದುಡಿಮೆ ಆಗುತಿದ್ದುದು ಎರಡೇ ಕೈಗಳಿಗೆ. ಹೀಗಾಗಿ ಅಷ್ಟಿಷ್ಟು ಮನೆ ಖರ್ಚು ಸರಿದೂಗಿಸಲು ಅಮ್ಮ ಮಾಡುತಿದ್ದ ಪ್ರಯತ್ನದ ಫಲವೆ ಹಾಲು ಮಾರಾಟಕ್ಕಾಗಿ ದನ ಸಾಕಣೆ. ಹೀಗೆ ಕರೆದ ಹಾಲನ್ನ ವರ್ತನೆಮನೆಗಳಿಗೆ ಕೊಟ್ಟು ಬರೊ ಜವಾಬ್ದಾರಿ ನನ್ನದಾಗಿತ್ತು. ಪುಟ್ಟ ಬುಟ್ಟಿಯಲ್ಲಿ ಅಮ್ಮ ತುಂಬಿಸಿಕೊಟ್ಟ ಚಟಾಕು ಬಾಟಲಿಗಳನ್ನೆಲ್ಲ ನನ್ನ ಪುಟ್ಟ ಅಂಗೈಯಲ್ಲಿ ಭದ್ರವಾಗಿ ತುಳುಕದಂತೆ ಹಿಡಿದು ಸಮೀಪದ ಮನೆಗಳಿಗೆ ಹೊತ್ತಿಗೆ ಸರಿಯಾಗಿ ನಾನು ಹಾಲು ಮುಟ್ಟಿಸುತ್ತಿದ್ದೆ.

No comments:

Post a Comment