ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Monday, January 16, 2012

ಮಾತಿಲ್ಲದೆ ಮೌನದಲ್ಲಿ ಮತ್ತೆ ಮರಳಿ ಬೆಳಗಾಗಲಿ ಬಿಡು.....

ಎದೆಯನ್ನ ಇರಿದ ನೆನಪುಗಳ ಅಂಬುಗಳನ್ನೆಲ್ಲ
ಆಗಾಗ ಹೊರಗೆಳೆದು.....
ಹಳೆಯ ಸವೆದ ದಿನಗಳನ್ನ ಕ್ಷಣಕ್ಷಣವೂ
ನೋವಿನೊಂದಿಗೆ ಸ್ಮರಿಸೋದು ನನ್ನ ನಿತ್ಯದ ಕನವರಿಕೆ,
ನೀ ಕಾದಿರುವ ಸಾಗರ
ನಾನೋ ಬಾಯಾರಿ ಕಾತರಿಸುವ ತುಂಬು ನದಿ......
ನಿನ್ನೆಡೆಗೆ ಸಾಗುವ ನಿತ್ಯದ ನನ್ನಾತುರ
ನಿನ್ನೆದೆಯಲ್ಲೆ ಅಡಗಿದೆ ಅಡಗಿದೆ ನನ್ನ ನೆಮ್ಮದಿಯ ನಿಧಿ/
ಮಾತಿಲ್ಲದೆ ಮೌನದಲ್ಲಿ ಮತ್ತೆ ಮರಳಿ ಬೆಳಗಾಗಲಿ ಬಿಡು
ನಿನ್ನುಸಿರ ಲೆಕ್ಖ ಹಾಕುತ ಇರುಳೆಲ್ಲ....
ನಿನ್ನೆದೆಯ ಮೇಲೆ ಒರಗಿಯೆ ನಿರಾಳವಾಗಿ ಈ ನಿಶಾರಾತ್ರಿಯ ನಾ ಕೊಲ್ಲಲ?//



ಕನಸಲ್ಲ ನಾನು
ಆಗಾಗ ಬಂದು ಕಾಡುವ ನೋವಿನಿಂದ ನೆನೆದ ಆಘಾತದ ನನಸೂ ಅಲ್ಲ....
ಏಕಾಂತ ಹಿಂಸೆಯ ಆರ್ತನಾದದ ಧ್ವನಿ ಅಷ್ಟೆ
ಕೇವಲ ಸಂಕಟದೊಂದು ತುಣುಕಿನ ಪಸೆ ಮಾತ್ರ ನಾನು,
ಹೇಗಾದರೂ ಬರಿ
ನನ್ನ ನೀನ್ಯಾವುದಾದರೂ ಹೆಸರಿಂದ ಕರಿ....
ನಿನ್ನ ಮೇಲಿನ ಮೋಹದಿಂದ ಖಂಡಿತ ನಿನ್ನತ್ತ ತಿರುಗಿ ನೋಡುತೀನಿ,
ನೀ ಬರೆದ ಪದಪದವನ್ನೂ ಮನಸಿಟ್ಟು ಓದುತೀನಿ.....
ಏಕಾಂತದಲ್ಲಿ ತಪ್ತವಾಗಿರುವಾಗ ನಿನ್ನ ಮನಸು ಆಗಾಗ ಕನಸಲ್ಲಿ ಬಂದು ನಾ ನಿನ್ನ ಕಾಡುತೀನಿ/
ಕಣ್ಣಲಡಗಿದ ಮಚ್ಚೆಯ ಕಿರು ಕನಸಿನಂತೆ
ಬೆತ್ತಲೆ ಪಾದಗಳಲ್ಲಿ ಇಬ್ಬನಿ ಹೊದ್ದ ಗದ್ದೆ ಬದುವಲ್ಲಿ ಸಾಗುವಾಗ ಆದ ಹುಲ್ಲುಗಳ ಕಚಗುಳಿಯ ಸೊಗಸಿನಂತೆ....
ನನ್ನನು ಆಗಾಗ ನೇವರಿಸುವ
ನಿನ್ನ ನೆನಪುಗಳು ಮುದದಿಂದಿಟ್ಟಿವೆ ನನ್ನ//


ದಟ್ಟ ಕಾಡಿನ ನಡುವೆ ಸವೆದ ಬೈತಲೆ ಕಾಲುಹಾದಿಯಲ್ಲಿ
ನಿನಗಾಗಿ ನಿತ್ಯ ನನಸಿನಲ್ಲೆ ಕಾಯುತ್ತಿರುತ್ತೇನೆ....
ಉಸಿರು ನಿಲ್ಲುವ ಮೊದಲು ಕನಿಷ್ಠ ಕನಸಿನಲ್ಲಾದರೂ ಒಮ್ಮೆ ಬರುತ್ತೀಯಲ್ಲ,
ಸರಾಗ ಸರಿಗಮದಿಂದ ಮುನಿಸಿಕೊಂಡಿದೆ ಬದುಕು
ಮುರುಳಿ ಎಂದುಕೊಂಡು ಮೆಲುವಾಗಿ ಎತ್ತಿಕೊಂಡು ನಿನ್ನ ತುಟಿಗಳಿಗೆ ತಾಕಿಸು ಕೊಂಚ ಸಮಯ......
ನನ್ನೆದೆಯಲ್ಲಿ ಮತ್ತೆ ಮೆಲುರಾಗವೊಂದು ಮೂಡಿದರೂ ಅಚ್ಚರಿಯಿಲ್ಲ
ಹಾಗಾದರೂ ಮತ್ತೆ ಮರೆತ ನಿನ್ನ ಹಾಡನ್ನ ಹಾಡಿಯೇನು/
ಮೃತ್ಯು ಮುದ್ದಿಸುವಲ್ಲಿ, ಮರಣದ
ಮಡಿಲಲ್ಲಿ ತಲೆಯಿಟ್ಟು ಮಲಗಬೇಕೆನ್ನಿಸುತಿದೆ....
ನಿನ್ನ ಕಣಕಣದಲ್ಲೂ ಆತ್ಮವಾಗಿ ಬೆರೆತು
ಮರೆಯಾಗಬೇಕೆನ್ನಿಸುತ್ತಿದೆ ಶಾಶ್ವತವಾಗಿ,
ಒಂದೇ ಒಂದು ಪುನರವಕಾಶ ಮತ್ತೊಮ್ಮೆ ಸಿಗಬಹುದ?//

ನಿನ್ನ ಪ್ರೀತಿಯ ಶೇಷ ಹಾಗೇನೆ ನನ್ನೆದೆಯಲ್ಲಿ ಉಳಿದು ಹೋಗಿದೆ....

ಒಲವು ಎದೆ ಭಿತ್ತಿಯಲ್ಲಿ ಅದಾಗಿಯೆ
ಮೂಡುವ ಕನಸಿನ ಬಣ್ಣಗಳ ಸುಂದರ ಚಿತ್ತಾರ....ಹೇಳು,
ಬಯಸಿ ಬಯಸಿ ಸಣ್ಣಪುಟ್ಟ ಕ್ಷುಲ್ಲಕ ಕಾರಣಗಳಿಗೆಲ್ಲ
ಅದನ್ನ ಶಾಶ್ವತವಾಗಿ ಅಲ್ಲಿಂದ ಯಾರಾದ್ರೂ ಅಳಿಸ್ತಾರಾ/
ನನ್ನೆದೆಯ ನಿಘಂಟಿನಲ್ಲಿ ಒಲವಿಗೆ ಪರ್ಯಾಯ ಪದ ನೀನೇನೆ
ನೀ ಹೀಗೆ ಕಾಡುತಿರು ಕೊನೆವರೆಗೂ, ನಾನು ಕಾಯುತಿರುತೀನಿ ಹೀಗೇನೆ....
ಧೂಳು ಬಿದ್ದಿದೆ ಅಂತ ಆಗಾಗ ನೀನೂನು ಕಣ್ಣೊರೆಸಿಕೊಂಡು
ಕಂಬನಿಯ ಮರೆಮಾಚುತ್ತೀಯಲ್ಲ,
ನಿನ್ನ ಕಣ್ಣಲ್ಲಿ ಬಿದ್ದು ಕಾಡುವ ಆ ದುಷ್ಟ ಧೂಳು ನಾನೇನ//


ಕಾದು ಕಾದು ಬಸವಳಿದ ನನ್ನ ಮನಕ್ಕೆ
ನೀ ಬಾರದಿದ್ದರೂ....
ನಿನ್ನ ನೆನಪುಗಳಾದರೂ ಬಂದವಲ್ಲ ಅನ್ನೋದಷ್ಟೆ ಸಣ್ಣ ಸಮಾಧಾನ,
ನೆನಪಿನ ನಾವೆ ಏರಿ ಹೊರಟ ಮನಸಿನ ತುಂಬಾ
ನಿನ್ನ ನೆನಪಿನದೆ ನಿಲ್ಲದ ಕಲರವ/
ಬಾಳಿನ ಹರಿವ ತೊರೆಯಲ್ಲಿ ಒಲವ ನೊರೆ....ಪ್ರೀತಿ
ಮನಸ ಸೋಕಿ ಕನಸ ಮುದ್ದಿಸೋದೆ ಅದರ ರೀತಿ,
ಎದೆಯ ತಾನಕ್ಕೆ ಕನಸಲ್ಲಿ ಬರೆದ
ಕನವರಿಕೆಯ ಸಾಲುಗಳನ್ನೆ ಒಲವೆನ್ನಬಹುದ//


ನಿನ್ನೊಂದಿಗೆ ಕಳೆದ
ನಾನು ಬಾಳಿನಲ್ಲಿ ಕೂಡಿದ ನೆನಪುಗಳನ್ನೆಲ್ಲ....
ಮನಸಾರ ಗುಣಿಸಿ ಭಾಗಿಸಿದರೂ
ನಿನ್ನ ಪ್ರೀತಿಯ ಶೇಷ ಹಾಗೇನೆ ನನ್ನೆದೆಯಲ್ಲಿ ಉಳಿದು ಹೋಗಿದೆ,
ಎದೆಯ ಕನವರಿಕೆಗಳೆಲ್ಲ ಕರಗಿ ಕಣ್ಣೀರಾಗಬಾರದಲ್ಲ
ನಿನ್ನ ನೆನಪುಗಳೆಲ್ಲ ಹಾಗೆ ಸೋರಿ ಹೋಗಬಾರದಲ್ಲ....
ಹಾಗಂತಲೆ ನೀನು ನೋವಿನಲ್ಲೂ ಈ ನಡುವೆ ಅಳೋದೇ ಇಲ್ಲ/
ಸರದಿ ಮುರಿದ ನೆನಪುಗಳೆಲ್ಲ
ಮತ್ತೆ ಕನಸಲ್ಲಿ ಬಂದು ಕಾಡುವಂತೆ.......
ನೀನೂ ನಿತ್ಯ ನನ್ನ ಸ್ವಪ್ನದಲ್ಲಿ
ಬಂದು ಕಾಡುವಿಯಂತೆ//

ಹೃದಯ ಮಾಡಿಕೊಳ್ಳುವ ಹನಿ ನೀರಾವರಿ ಪ್ರೇಮ....

ಪಾಪದ ನೆರಳಿದೆ ನನ್ನ ಹಿಂದೆ....
ಪಶ್ಚಾತಾಪಕ್ಕೂ ಇಷ್ಟು ಎಡೆ ಇರದಷ್ಟು ಸಂಕಟ ಚೀತ್ಕಾರದ ಕೊರಳಿದೆ
ನಿನ್ನ ಶಾಪಕ್ಕೆ ಖಂಡಿತಾ ಬಲಿಯಾಗುತ್ತೀನಿ ನಾನು,
ನನ್ನೆದುರಿಗೆ ನೀ ಬಿಟ್ಟ ನಿಟ್ಟುಸಿರುಗಳ ಆಕ್ರಂದನಗಳ ಉರುಳಿದೆ,
ಬಾಳಿನ ತಿರುವೊಂದರಲ್ಲಿ ಅಪ್ಪಿತಪ್ಪಿ ನಾವು ಮತ್ತೊಮ್ಮೆ ಎದುರಾದರೂ/
ನೀ ನನ್ನ ನೋಡಿ ಮುಗುಳ್ನಗ ಬೇಡ!,
ಈಗಾಗಲೆ ಸಂಕಟದ ಕೊನೆಯುಸಿರುಗಳನ್ನ ಎಣಿಸುತ್ತಿರುವ ನನಗೆ....
ಮತ್ತೆ ಮತ್ತಷ್ಟು ದಿನ ಬದುಕುಳಿಯಲು ಸುಲಭದ ನೆಪವೊಂದು ಸಿಕ್ಕ ಹಾಗಾಗುತ್ತದೆ,
ಎದೆಯ ಬಿರಿಸಿದ ಭಾವಗಳೊಂದೊಮ್ಮೆ....
ಮುರುಟಿದ ಮನಸಲ್ಲೂ ಮತ್ತು ಬರಿಸಿತ್ತು
ಕನಸ ಮರೆತ ನನ್ನ ಕಣ್ಗಳಿಗೂ ಒಮ್ಮೆ ಸುಖದ ನಿದ್ರೆ ತರಿಸಿತ್ತು//


ಈ ದಡದಲ್ಲಿ ನಾನಿನ್ನೂ ಕಾದು ನಿಂತೆ ಇದ್ದೇನೆ
ಸಂಜೆ ಸೂರ್ಯ ಕಂತಿದ ಮೇಲೂ ನೀ ಬರಬಹುದು....
ಹೀಗಾಗೆ ನನ್ನ ಕೈಗಳಲ್ಲಿ ನಿರೀಕ್ಷೆ ಮಿಣುಕುತ್ತಿರುವ ಕ್ಷೀಣ ರಶ್ಮಿಯ ಲಾಟೀನಿದೆ
ಕಡೆಯವರೆಗೂ ಹೀಗೆ ಕಾದಿರುತ್ತೇನೆ....ಮರೆಯದೆ ಬರುತ್ತೀಯಲ್ಲ?/
ಕಾಡುವ ನೆನಪುಗಳು ಒಳಗೊಳಗೇ ಕಾದುವಾಗ
ಮನಸು ಅಕಾರಣವಾಗಿ ರಣರಂಗವಾಗಿದೆ,
ಆಸೆಯ ಬೊಟ್ಟನ್ನ ಮಧುರ ಭಾವಗಳ ನೊಸಲಿಗಿಟ್ಟು.....
ಕನಸಿನ ಕಸೂತಿ ಹಣೆದ ಸೆರಗನ್ನ ಹಾಗೆ ಹೊದೆಸಿ,
ಬಿಸಿಲಿಗೆ ಬಾಡದಂತೆ ನಿನ್ನ ಮೌನವನ್ನ ಹಾಗೆ ನನ್ನೆದೆಗೆ ಇಳಿಸಿಕೊಳ್ಳುವ ಕನಸು
ನನಸಾಗುವ ದೂರದೂರದ ಸಾಧ್ಯತೆಗಳೂ ನನಗೆ ಗೋಚರಿಸುತ್ತಿಲ್ಲ//


ಕರೆದಲ್ಲಿಗೆ ಬರುವ ನಿನ್ನ ನೆನಪುಗಳಿಗೆ ನಿನ್ನಷ್ಟು ಭಿಡೆಯಿಲ್ಲ
ನೀನಿತ್ತ ಸುಮಧುರ ಯಾತನೆಗೆ ನನ್ನುಸಿರ ಕೊನೆವರೆಗೂ ತಡೆಯಿಲ್ಲ....
ಗುರಿಯಿರದೆ ಹೊರಟಿದ್ದೇನೆ ಅಂದುಕೊಂಡಿದ್ದಾರೆ ನೋಡಿದವರೆಲ್ಲರೂ
ಅದವರ ತಪ್ಪಲ್ಲ, ನಿನ್ನೆದೆಯ ಗುರಿ ನನಗೆ ಮಾತ್ರ ಕಾಣುತ್ತಿದೆ,
ಮುಗಿಲು ಹೆತ್ತ ಹನಿಗಳು ಸಂಕಟದ ಮಳೆಯೂ ಆಗಿರಬಹುದು
ಸಂತಸದ ಇಬ್ಬನಿ ಹೊಳೆಯೂ ಆಗಿರಬಹುದು
ಕಾಲ ಅದನ್ನ ನಿರ್ಧರಿಸುತ್ತೆ/
ನನ್ನೆದೆಗೆ ನಾನೇ ಹೊಡೆದ ಒಲವಿನ ಮೊಳೆ
ಕೀಳದಿದ್ದರೂ ನೋವೆ....
ಕಿತ್ತರೂ ಖಚಿತವಿದೆ ಸಾವೆ,
ಬರಡು ಬಾಳಿನ ಹಸನು ಹೆಚ್ಚಿಸಿಕೊಳ್ಳೋಕೆ
ಹೃದಯ ಮಾಡಿಕೊಳ್ಳುವ ಹನಿ ನೀರಾವರಿ ಪ್ರೇಮ....
ಅದೊಂಥರಾ ನಮ್ಮ ಕಣ್ಣ ಬಿಳುಪಿನಲ್ಲೆ ಮೂಡಿ
ನಮಗೇನೆ ಕಾಣದೆ ಮಿಂಚುವ ಚಂದದ ಕಪ್ಪು ಮಚ್ಚೆ//