ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Sunday, November 18, 2012

ನಿನ್ನ ಹೊರತು ಇನ್ಯಾರಿಗೂ......


ಎಂದೆಂದೂ ಒಂದು ಸೇರಲಾರೆವೆಂದು ನಿರೀಕ್ಷೆಯ ಹಳಿಗಳಿಗೆ ಅರಿವಿದ್ದರೂ..... ಅದರ ಮೇಲೆ ಬಾಳಬಂಡಿ ನಿಲ್ಲದೆ ಓಡಲೆ ಬೇಕು, ಸಂಕಟ ಸಂತಸದ ಬೋಗಿಗಳನ್ನ ಸರಿಸಮನಾಗಿ ಎಳೆದೊಯ್ಯಲೇಬೇಕು.... ತನ್ನ ನಿಟ್ಟುಸಿರಿದ್ದರೂ ನೂರಾರು ತಾನು ಬಿಡುತ್ತಿದ್ದರೂ ಹಾದಿಯುದ್ದ ಅರ್ತನಾದದ ಬಿಸಿಯುಸಿರು/ ಆಗಾಗ ಸಂಭ್ರಮದ ಸೀಟಿ ಹೊಡೆಯುವ ಮನಸಾಗೋದೂ ಹೌದು ಎಲ್ಲೆ ಮೀರಿದಾಗ ಖುಷಿ.... ವಿಧಿ ಅಘಾತದ ಸರಪಳಿಯನ್ನ ಎಳೆದು ಒತ್ತಾಯವಾಗಿ ನಿಲ್ಲಿಸಲೂಬಹುದು, ತುರ್ತು ಅಘಾತದ ಸರಿಗೆ ಎಳೆದಾಗ ನಿಲ್ಲಿಸದೆ ಮುನ್ನುಗ್ಗುವಂತಿಲ್ಲ ಅಂತಿಮ ನಿಲ್ದಾಣ ಎಂದಿಗೂ ಸೇರೆನೆಂಬ ಹಟ ಹಿಡಿಯುವಂತಿಲ್ಲ..... ವಿಧಿ ಹೊಡೆದಟ್ಟಿದಲ್ಲಿ ಹೋಗಲೆ ಬೇಕಾದ ನಿರ್ಜೀವ ಯಂತ್ರಕ್ಕೆ ಸಮಾನ ಮನಸು ಮತ್ತೆ ಒಂದಾಗಲಾರೆವು ಎಂಬ ಖಚಿತ ಸುಳಿವಿರುವಾಗ ಅದೆಂದೋ ಕರಟಿ ಹೋಗಿವೆ ಕಣ್ಣೊಳಗಿನ ಕೋಟಿ ಕನಸು// ಕನಸುಗಳಿಲ್ಲದ ಕುರುಡು ಹಾದಿಯಲ್ಲಿ ಸತ್ತ ಮನಸಿನ ಅಂತಿಮಯಾತ್ರೆ ಸಾಗಿದ ಬರಡು ಬೀದಿಯಲ್ಲಿ.... ಒಂಟಿತನವನ್ನು ಅನುಕ್ಷಣ ಮಾರುವ ಮುರುಕು ಮೌನದ ಅಂಗಡಿ ಅನುಗಾಲವೂ ತೆರೆದೆ ಇದೆ, ಪ್ರತಿ ಸಂಜೆ ಕನವರಿಸುವ ಬೆಳಕಿನ ಕನಸು ಕಡು ಕತ್ತಲಿನಲ್ಲಿಯೆ..... ನಿರಾಸೆಯಲ್ಲಿ ಕೊನೆಗೊಳ್ಳುತ್ತದೆ/ ಉದುರಿದ ಕನಸಿನ ಪಕಳೆಗಳೆಲ್ಲ ಒಲವ ಗಿಡಕ್ಕೇನೆ ಗೊಬ್ಬರವಾಗಿ..... ತನ್ನ ಜಾಗದಲ್ಲಿ ಮತ್ತೊಂದು ಸುಮವರಳಿದ್ದನ್ನು ಕಂಡು ಒಳಗೊಳಗೆ ನರಳುತ್ತಲೆ ನಗುವ ನಟಿಸುತ್ತಿದೆ, ನಿರ್ಮಲ ಮನಸಿಗೆ ಬಿದ್ದ ಕಂಬನಿಯ ಪುಟ್ಟ ಹನಿಯಿಂದ ಬಾಳಿನ ಭಿತ್ತಿಯ ಮೇಲೆ.... ಢಾಳಾದ ಕಲೆಯೆದ್ದಿದೆ// ಇನ್ಯಾರನ್ನೋ ಮುಟ್ಟಿ ಅವರೆದೆಯ ಕಲಕುವ ನನ್ನ ಅನುಗಾಲದ ವೇದನೆಗಳಿಗೆ.... ನಿನ್ನ ಕನಸಿನಲ್ಲಿ ಗೇಣು ಜಾಗವೂ ಇಲ್ಲದ್ದು ವಿಚಿತ್ರವಾದರೂ ಸತ್ಯ, ಕರಗದ ಕಲ್ಲಿಗೂ ಒಂದು ಮನಸಿರಬಹುದು ಅದರೊಳಗೂ ಬಾಡದ ಒಂದು ಕನಸಿರಬಹುದು..... ನನ್ನ ನಿರೀಕ್ಷೆ ತೀರ ಹುಸಿ ಹೋಗಲಿಕ್ಕಿಲ್ಲ/ ಪ್ರೀತಿಸುವಷ್ಟಲ್ಲದಿದ್ದರೂ ದ್ವೇಷಿಸುವಷ್ಟಂತೂ ನಾನು ಕೆಟ್ಟವನಿದ್ದಿರಲಿಕ್ಕಿಲ್ಲ ಅನ್ನಿಸುತ್ತೆ.... ಇಲ್ಲದಿದ್ದರೆ ತೀವೃವಾಗಿ ನನ್ನನಿಂದು ದ್ವೇಷಿಸುವ ನಿನಗೂ ಒಂದೊಮ್ಮೆ ನಾನು ಅಷ್ಟು ಇಷ್ಟವಾಗುತ್ತಿದ್ದೆನ?, ಮನಸು ಪಿಸುಗುಡುವ ಪ್ರತಿ ಗುಟ್ಟಲ್ಲೂ ನೀನೆ ನೀನಾಗಿ ಉಳಿದಿರುವಾಗ... ನನ್ನೊಳಗೆ ಯಾವುದೆ ಸಂಗತಿ ಗುಟ್ಟಿನ್ನೆಲ್ಲಿ?// ಪ್ರತಿ ಬಾರಿ ನಿನ್ನ ನೆನಪು ಸುಳಿವಾಗ ನನ್ನೊಳಗೆ ಮಿಡುಕಾಟ ಮೂಡಿಸುವ..... ಮಧುರ ಭಾವಗಳು ಖಂಡಿತ ನನ್ನ ಹಿತಶತ್ರುಗಳು, ಗುಜುರಿಗೆ ಹಾಕುವಷ್ಟು ಹಾಳಾಗಿ ಹೋಗಿರುವ ಹೃದಯ ನನ್ನದು.... ನಿನ್ನ ಹೊರತು ಇನ್ಯಾರಿಗೂ ಅದರ ಮೌಲ್ಯ ಅರಿವಾಗದು/ ಕನಸ ಕರಗಿಸುವ ಕಡುಗಪ್ಪು ಇರುಳೆ ಹಗಲು ಕನಸು ಕಾಣುವ ನಾನೇನಾದರೂ.... ನಾನು ನಿನ್ನ ಕಣ್ಣಿಗೂ ಮರುಳೆ?, ತುಸುವಾದರೂ ಬೀಳಲಿ ಬರಡು ಬಾಳಲ್ಲಿ ಕನಸು ಮೌನದೊಂದಿಗೆ ಮಾತಿಗೆ.... ಇದ್ಯಾತರ ಮುನಿಸು?//

Monday, November 12, 2012

ನಾನೂ ನನ್ನಾ ಕ(ನ)ಸಾ..........!


"ಕರುನಾಡ ಕಸಾ ಕಣೆ...." ಅಂತ ಬೆಂಗಳೂರಿಗ ಮೂರು ರಸ್ತೆ ಸೇರುವಲ್ಲಿ ತನ್ನ ಆಸನ(?) ಊರಿ ಗಂಟಲು ಹರಿದು ಹೋಗುವಷ್ಟು ಎತ್ತರದ ಧ್ವನಿಯಲ್ಲಿ ಇನ್ನು ಮುಂದೆ ನಿರಾತಂಕವಾಗಿ ಊಳಿಡಬಹುದು. "ಕ...." ಅನ್ನುವ ಮಾತು ಸುದ್ದಿ ಸುಬ್ಬಪ್ಪಗಳ ನಾಲಿಗೆ ತುದಿಯಲ್ಲಿ ಹುಟ್ಟುವ ಮೊದಲೆ ಎಲ್ಲಿ "....ಸಾ!" ಎಂದು ಅಮಾಯಕ ಮಗುವಿನಂತೆ ಮುಗ್ಧತೆ ನಟಿಸಿ, ಯಾವುದೋ ಕೇಳ ಬಾರದ ಕೇಳಿಸಿಕೊಂಡವರಂತೆ ಇಂತಹ ಘಾತುಕ ಪ್ರಶ್ನೆ ಕೇಳಿದ ಬದ್ಮಾಶರನ್ನು ಕೇವಲ ಕಣ್ಣೋಟದಲ್ಲಿಯೆ ಸುಟ್ಟು ಬಿಡುವ ದೂರ್ವಾಸರಂತೆ ದಿಟ್ಟಿಸುತ್ತಾ ಬಾಯಲ್ಲಿ ಮಾತ್ರ ಮೇಲಿನಂತೆ ಕೇಳುವ ಮಾನ್ಯ ಮುನ್ಸಿಪಾಲ್ಟಿ ಕಮೀಶನರ್ರನ್ನೂ, ಪೂಜ್ಯ ಮೇಯುವವರನ್ನೂ ಮೂಗಿದ್ದವರಿಗೆ ಖಡ್ಡಾಯ ನಿಷೇಧ ಹೇರಲೆ ಬೇಕಿರುವ "ಕಸ ಪೀಡಿತ" ಬೆಂದಕಾಳೂರಿನ ಬಿಟ್ಟಿ ದರ್ಶನ ಮಾಡಿಸಿ ಆದಷ್ಟು ಅವರ ಅಂತಃಚಕ್ಷುಗಳನ್ನ ತೆರೆಸುವ ಪ್ರಯತ್ನ ಮಾಡೋಣ ಅಂತಿದೀನಿ. ನಿಮ್ಮ ನಿಮ್ಮ "ಅತಿ ಸ್ವಚ್ಛ ಬಡಾವಣೆ"ಗಳ ನಾರುವ ಕಟ್ಟಕಡೆಯ ಕಸದ ರಾಶಿಯ ಛಾಯಾಚಿತ್ರವನ್ನ ನೀವೂ ಇಲ್ಲಿನ ಗೋಡೆಯ ಮೇಲೇರಿಸಿ. ಈ ಪವಿತ್ರ ಕಾರ್ಯದಲ್ಲಿ ನಿಮ್ಮ ಕಿಂಚಿತ್ ಸೇವೆಯನ್ನು ಮನಸ್ಸಿದ್ದಲ್ಲಿ ನೀವು ಸಲ್ಲಿಸಬಹುದು. ಕಮೀಶನ್ ವಸೂಲಿ ಸುಗ್ಗಿಯಲ್ಲಿ ಬೆದೆಗೆ ಬಂದ ಕುದುರೆಗಳಂತಾಗಿರುವ ಜನಪ್ರತಿ"ನಿಧಿ"ಗಳಿಗೆ ಕಸದವರೆಗೂ ಹೋಗೊ ಪುರುಸೊತ್ತಿಲ್ಲ ಪಾಪ! ನಾವೆ ಯಾಕೆ ಅವರಿದ್ದಲ್ಲಿಗೆ ಕಸವನ್ನ ಕೊಂಡೊಯ್ಯಬಾರದು?!

ಸಾವಿರದ ಸಾವಿರ ಕನಸುಗಳು.....


ಕೇಡಿಗ ಮನಸು ಕಾಣುವ ಕನಸಿನಲ್ಲಿ ನಿನ್ನ ನೆನಪುಗಳೆ ಭರಪೂರ ಉಕ್ಕಿ ನನ್ನನ್ನ ಸಂತಸಕ್ಕಿಂತ ಸಂಕಟದಲ್ಲಿ...... ಬಿಕ್ಕಿಬಿಕ್ಕಿ ಅಳುವಂತೆ ಕಾಡುತ್ತದೆ, ಎದೆಗೂಡಿನಲ್ಲಿ ಗೂಡು ಕಟ್ಟಿದ ನಿನ್ನೊಲವಿನ ಹಕ್ಕಿ..... ಅದೇಕೋ ನನ್ನೆದೆಯನ್ನೆ ಕುಕ್ಕಿಕುಕ್ಕಿ ನೋವಿನ ನೆತ್ತರನ್ನ ಉಕ್ಕಿ ಹರಿವಂತೆ ಮಾಡುತ್ತದೆ/ ಕೇದಿಗೆಯ ಘಮವೂ ಮಂದ ಸುರಗಿಯ ಪೋಣಿಸಿ ಸುರಿವ ಹೂಗಳ ಹಾರವೂ..... ಕಳೆದುಕೊಂಡಂತೆ ತನ್ನ ಚಂದ ನೀನನ್ನನ್ನಾವರಿಸಿದ್ದೀಯ, ಅದೇನೆ ಇದ್ದರೂ ನನ್ನುಸಿರ ಪ್ರೇಷಕ ಹೊಮ್ಮಿಸುವ ನೋವಿನ ಕಂಪನದ ಅಲೆಗಳು..... ನಿನ್ನೊಳಗೆ ಅಂತರ್ಧನಾಗಿ ಹೋಗಲಿ ಎಂದು ಸ್ವಪ್ನದಲ್ಲೂ ನಾನು ಶಪಿಸಲಾರೆ// ನಿನ್ನೆದೆಯ ಬೆಚ್ಛನೆಯ ಸಂಚಿತ ಖಾತೆಯಲ್ಲಿ ನಾನಿಟ್ಟಿದ್ದ ಒಲವ ದೀರ್ಘಾವಧಿ ಠೇವಣಿಗೆ.... ಒಂದೆ ಕಂತಿನಲ್ಲಿ ನೀನಿತ್ತಿರುವ ವಿರಹದ ಬಡ್ಡಿಯನ್ನ ಕೂತುಂಡರೂ ಕರಗಿಸಲು ನನಗೆ ಇದೊಂದು ಜೀವಮಾನ ಸಾಲದು!, ಕಾದು ಬಸವಳಿದ ಕಣ್ಣುಗಳದ್ದು ಖಂಡಿತಾ ತಪ್ಪಲ್ಲ ಕಂಬನಿಯನ್ನ ಹಿಡಿದಿಟ್ಟುಕೊಳ್ಳುವುದು..... ಈಗೀಗ ಅದರ ಕೈಯನ್ನೂ ಮೀರಿದ್ದು/ ಅಂಧಕಾರದೊಂದಿಗೆ ಹೊಂದಾಣಿಕೆಯೆ ಬದುಕಾಗಿದೆ.... ಮೌನಮಾತ್ರ ಮನಸಿನ ಮಾತಾಗಿದೆ, ಬಾಳು ಬೋಳಾಗದಿರಲು ಕನಸಿನ ಹಾದಿಯಂದು ತೆರೆದಿರಬೇಕು.... ಅಲ್ಲಿ ನಿರೀಕ್ಷೆಯ ಕಂದೀಲು ಹಿಡಿದು ಮನಸನ್ನಾವರಿಸಿದವರು ಜೊತೆಯಲ್ಲಿ ಹೆಜ್ಜೆ ಹಾಕಲು ಕಾದಿರಬೇಕು// ನೀನಿಲ್ಲದ ಒಂಟಿ ಬಾಳು ಭೀಕರ ನಾನೆ ಸ್ವತಃ ಕಟ್ಟಿಕೊಂಡು ಹೊಕ್ಕಂತಾಗಿದೆ..... ದುರ್ಭರ ದಟ್ಟ ಸಂಕಟದ ಕಾಡು, ನನ್ನೆದೆಯ ಭಾವವೆಲ್ಲ ಪದಗಳಾಗಿ ಹನಿದು..... ಈ ಹಾಡಿನಲ್ಲಿ ಹರಿದು ಬಂದಿದೆ ನೋಡು/ ಕೆಲವೊಮ್ಮೆ ಅನ್ನಿಸುತ್ತೆ ನಿನ್ನ ನಿರ್ಧಾರ ನಿಜವಾಗಲೂ ಸರಿಯಾಗಿಯೆ ಇತ್ತು..... ನನ್ನ ಹೆಗಲೇರಿದ್ದ ಶನಿ ನಿನ್ನನೂ ಆವರಿಸುವ ಮೊದಲೆ ನೀನಿಲ್ಲಿಂದ ಪಾರಾದೆ, ಆದರೆ ಅದೇನೆ ಇದ್ದರೂ ನಾನಂತೂ ಒಳಗೊಳಗೆ ಒಡೆದು ಚೂರಾದೆ.... ಮೌನದ ಚಿಪ್ಪಿನಲ್ಲಿ ಅಡಗಿದ್ದರೂ ನುಚ್ಚುನೂರಾದೆ// ಇಂಗಿ ಹೋದ ಕನಸಿನ ಪಸೆಯ ಕೊನೆಯ ಆರ್ದ್ರತೆಯಲ್ಲೂ ನನಗೆ.... ನಿನ್ನದೆ ಸ್ಪರ್ಶದ ಹುಡುಕಾಟವಿದೆ, ಬೆತ್ತಲೆ ಪಾದಗಳಲ್ಲಿ ನೋವಿನ ಸುಡು ಮರಳ ಮೇಲೆ ಮರುಳನಂತೆ ಹೆಜ್ಜೆ ಹಾಕಲು ನನಗಿರೋದು...... ನಿನ್ನೊಲವಿನ ಓಯಸಿಸ್ನಲ್ಲಿ ದಾಹವಾರಿಸಿಕೊಳ್ಳುವ ತೀರದ ಸುಂದರ ಸುಳ್ಳು ನಿರೀಕ್ಷೆಯ ಜೊತೆಯೊಂದೆ!/ ಮೋಹಕ ಸ್ವಪ್ನಗಳ ನಾವೆಯಲ್ಲಿ ಹುಟ್ಟು ಹಾಕುವ ಹುಚ್ಚಿನಲ್ಲಿ.... ನೀನು ಮರೆತು ಹೋದ ಚಂದದ ಗುಟ್ಟು ಬಹುಷಃ ನಾನೆ!, ಸಾವಿರದ ಸಾವಿರ ಕನಸುಗಳು ಕುಟುಕು ಜೀವ ಹಿಡಿದುಕೊಂಡಿರಲು..... ನಿರೀಕ್ಷೆಯ ಆತ್ಮಬಲವೆ ಕಾರಣ.//

Sunday, November 11, 2012

ಶಾರದೆ ದಯೆ ತೋರಿದೆ.....


ನನ್ನ ಹಳೆಯ ನೆನಪುಗಳಲ್ಲೊಂದು ಗರಿ ದಸರೆಯ ಶಾರದಾ ಪೂಜೆಯಲ್ಲಿ ಹುದುಗಿ ಹೋಗಿದೆ. ನಾನು ಹುಟ್ಟಿದ್ದು ಘಟ್ಟದ ಮೇಲಿನ ತೀರ್ಥಹಳ್ಳಿಯಲ್ಲಾದರೂ ನನ್ನ ಬೇರುಗಳಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ನಮ್ಮಲ್ಲಿ ಶಾರದ ಪೂಜೆಯೆ ದಸರೆಯ ಮಹತ್ವದ ದಿನ, ಆಯುಢ ಪೂಜೆ ಹಾಗೂ ವಿಜಯ ದಶಮಿಗಿಂತಲೂ ಶಾರದೆಯನ್ನ ಆರಾಧಿಸುವ ದಿನ ನಮಗೆ ಆಚರಣೆಯ ದೃಷ್ಟಿಯಿಂದ ಶ್ರೇಷ್ಠವಾಗಿದೆ. ನಾವು ಶೃಂಗೇರಿ ಶಾರದಾ ಪೀಠದ ಅನುಯಾಯಿಗಳಗಿದ್ದು, ಅಲ್ಲಿನ ಗುರುಗಳೆ ನಮ್ಮ ಕುಲಗುರುಗಳಾಗಿರುವುದೂ ಕೂಡ ಈ ಪ್ರತ್ಯೇಕ ಶ್ರದ್ಧೆಗೆ ಕಾರಣವಾಗಿರಬಹುದು. ನಮ್ಮ ಮನೆಯ ಎಲ್ಲಾ ಧಾರ್ಮಿಕ ನಿಲುವುಗಳೂ ಶೃಂಗೇರಿ ಶಾರದಾ ಪೀಠದ ಅದ್ವೈತ ಸಭ್ಯತೆಗೆ ಅನುಸಾರವಾಗಿಯೆ ನಡೆಯುತ್ತಿದ್ದುದು ಆ ಕಾಲದಿಂದಲೂ ನಡೆಯುತ್ತ ಬಂದ ಪದ್ಧತಿ. ಸಾಮಾನ್ಯವಾಗಿ ಮಧ್ಯಂತರ ರಜೆಯ ಕಾಲ ಅದಾಗಿರುತ್ತಿದ್ದರಿಂದ ಶಾಲೆಯೆಂಬ ಜೈಲಿನಿಂದ ತತ್ಕಾಲಿಕ ಪರೋಲ್ ಮೇಲೆ ಬಿಡುಗಡೆ ಸಿಕ್ಕು ಬಂದ ಖೈದಿಯ ಮನಸ್ಥಿತಿಯಲ್ಲಿ ನಾನಿರುತ್ತಿದ್ದೆ. ಅಮ್ಮ ನನ್ನನ್ನು ಆ ರಜಾವಧಿಯಲ್ಲಿ ತನ್ನ ತವರು ಮನೆಯಾದ ಸಾಗಿನಬೆಟ್ಟಿಗೆ ಕರೆದೊಯ್ಯುತ್ತಿದ್ದರು. ಶಾರದಾ ಪೂಜೆಯ ದಿನ ಮನೆಯಲ್ಲಿ ವಿಪರೀತ ಗೌಜಿ ಗದ್ದಲ ಏರ್ಪಡುತ್ತಿತ್ತು. ಮನೆಯ ದೇವರ ಮನೆಯನ್ನ ವಿಶೇಷವಾಗಿ ಅಲಂಕರಿಸಲಾಗುತ್ತಿತ್ತು. ನನ್ನ ಓರಗೆಯ ಸಹೋದರ ಸಂಬಂಧಿ ಹುಡುಗಿಯರಾದ ಕವಿತಾ, ಮಮತಾ, ಸುಷ್ಮಾ, ಅಮಣಿ ಎಲ್ಲರೂ ಹಿಂದಿನ ದಿನವೆ ದೇವರ ಮನೆಯ ಅಷ್ಟೂ ಪಾತ್ರೆ ಪಡಗ, ಕಾಲು ದೀಪಗಳನ್ನ ಹುಣಸೆ ಹಣ್ಣಿನಲ್ಲಿ ತಿಕ್ಕಿ ತಿಕ್ಕಿ ಹೊಳಪು ಬರುವಂತೆ ತೊಳೆದು ಒಣ ಬಟ್ಟೆಯಿಂದ ಒರೆಸಿಡುತ್ತಿದ್ದರು. ಅವರಿಗೆ ಪೂಜೆಯ ಹಿಂದಿನ ದಿನ ಮೈಮುರಿವ ಕೆಲಸ ಕಾದಿರುತ್ತಿತ್ತು. ನಮ್ಮದು ನಾಲ್ಕೆಂಟು ಒಕ್ಕಲುಗಳಿರುವ ತುಂಬು ಸಂಸಾರ. ಮನೆಯ ಎಲ್ಲಾ ಹಬ್ಬ ಹರಿದಿನಗಳಲ್ಲಿ ಒಕ್ಕಲುಗಳ ಮನೆಮಂದಿಯೂ ಬರುತ್ತಿದ್ದರಿಂದ ಎಲ್ಲರ ಊಟವೂ ಅವತ್ತು ನಮ್ಮಲ್ಲಿಯೆ. ಅವತ್ತಿಗೆ ಮುಖ್ಯವಾಗಿ ಮಾಡಲೆ ಬೇಕಾದ ಬುಟ್ಟಿಗಟ್ಟಲೆ ಉದ್ದಿನ ದೋಸೆಗಾಗಿ ಹಿಂದಿನ ದಿನವೆ ಸೇರುಗಟ್ಟಲೆ ನೆನೆಸಿಟ್ಟ ಅಕ್ಕಿ ಮತ್ತು ಉದ್ದನ್ನ ರುಬ್ಬುವ ಕಲ್ಲಿನಲ್ಲಿ ಹಾಕಿಕೊಂಡು ರುಬ್ಬಿಡ ಬೇಕಾಗಿತ್ತು. ಮರುದಿನ ಬೆಳಗ್ಯೆ ಚಟ್ನಿಗಾಗಿ ಸುಲಿದು ಒಡೆವ ಕಾಯಿಗಳ ರಾಶಿಯನ್ನ ತುರಿದು ತೆಗೆಯುವುದು, ಮಧ್ಯಾಹ್ನದ ಪದಾರ್ಥಕ್ಕಾಗಿ ತರಕಾರಿ ಹೆಚ್ಚುವುದು, ಸೌದೆ ಒಲೆಯ ಮುಂದೆ ಕೂತು ಎಂದೆಂದಿಗೂ ಮುಗಿಯದಷ್ಟಿರುತ್ತಿದ್ದ ಬಂದವನ್ನ ಮೊಗೆಮೊಗೆದು ದೋಸೆ ಹೊಯ್ಯುವುದು, ಇಡಿ ಮನೆಯನ್ನ ಚನ್ನಾಗಿ ಗುಡಿಸಿ ತೊಳೆಯುವುದು, ಅಂಗಳವನ್ನ ನೀರು ಹೊಡೆದು ಗುಡಿಸಿ ಸಗಣಿ ಸಾರಿಸಿ ರಂಗೋಲಿ ಬಿಡಿಸುವುದು ಹೀಗೆ ಅನೇಕ ಕೆಲಸಗಳ ಸರಣಿಯೆ ಆ ಎರಡು ದಿನಗಳು ಅವರನ್ನ ತುರಿಸಿ ಕೊಳ್ಳುವುದಕ್ಕೂ ಬಿಡುವಾಗದಂತೆ ಬಿಸಿಯಾಗಿಡುತ್ತಿತ್ತು. ಎಲ್ಲಾದರೂ ಅವರ ಕೆಲಸದ ನಡುವೆ ನಾನು ಮಂಗಾಟ ಮಾಡಿದರೆ ಎಲ್ಲಾ ಹುಡುಗಿಯರ ಗ್ಯಾಂಗ್ ಎಲ್ಲಿ ಹೊಡೆದು ಹೊಸಕಿ-ಬಿಸಾಕಿ ಒದ್ದು ಓಡಿಸಿ ಬಿಡುತ್ತಾರೋ ಎನ್ನುವ ರೀತಿ ಉಗ್ರವಾಗಿ ಎಗರಿ ಬೀಳುತ್ತಿದ್ದರು! ಇಂತಹ ಅಕಾಲದ ಅಪಾಯಗಳ ಖಚಿತ ಅರಿವಿದ್ದೂ ನಾನು ಆಗಾಗ ಅಲ್ಲಲ್ಲಿ ಬತ್ತಿಯುಟ್ಟು ಮಜಾ ತಗೊಳ್ಳುತ್ತಿದ್ದೆ. ಹಿಡಿದು ಬಡಿದು ಬುದ್ದಿ ಕಲಿಸಲು ಬರುವ ವೀರ ವನಿತೆಯರಿಂದ ಪಾರಾಗಲು ಹಟ್ಟಿಯ ಅಟ್ಟವಂತೂ ಇದ್ದೇ ಇತ್ತು! ಅದೇನೆ ಆಕಾಶ ಭೂಮಿ ಒಂದಾದರೂ ಲಂಗ ಹಾಕಿಕೊಂಡ ಅಡೆತಡೆಯ ಕಾರಣ ಅವರು ಅಟ್ಟ ಹತ್ತುವ ಸಾಹಸ ಮಾಡುತ್ತಿರಲಿಲ್ಲ ಎನ್ನುವ ಭರವಸೆ ನೂರಕ್ಕೆ ಇನ್ನೂರರಷ್ಟಿದ್ದಾಗ ಅದು ಬಾಲ್ಯದುದ್ದಕ್ಕೂ ನನ್ನ "ಅಜ್ಞಾತ ಸ್ಥಳ"ವಾಗಿ ಅಗತ್ಯ ಬಿದ್ದಾಗಲೆಲ್ಲಾ ಅಂತಹ ತುರ್ತು ಪರಿಸ್ಥಿತಿಯಲ್ಲಿ ಬಳಕೆಯಾಗುತ್ತಿತ್ತು. ಮರುದಿನ ಬೆಳಗ್ಯೆ ಮನೆಯ ಬಾಗಿಲುಗಳಿಗೆ, ಹಟ್ಟಿಯ ಮುಂಬಾಗಿಲಿಗೆ ಮಾವಿನ ಎಲೆಗಳ ತೋರಣ ಕಟ್ಟಿ ಬೆಳಗ್ಗಿನ ತಿಂಡಿಗಾಗಿ ಎಲ್ಲರಿಗೂ ದೋಸೆಯ ಸಮಾರಾಧನೆ ನಡೆಸಿ, ಅಂದಿನ ಪೂಜೆಯ ಎಡೆಯ ನೈವೇದ್ಯಕ್ಕಾಗಿ ಪಾಯಸ, ಅತಿರಸ ಇವನ್ನೆಲ್ಲ ಮಿಂದು ಮಡಿಯಲ್ಲೆ ಮಾಡಿ ಮಧ್ಯಾಹ್ನದ ಪೂಜೆಗೆ ಅರಳಿನ ಪ್ರಸಾದ, ಪಂಚಾಮೃತ ತಾಯಾರು ಮಾಡಿಟ್ಟು ಎಲ್ಲರೂ ಕೂಡಿದ ಮೇಲೆ ಅಮ್ಮನ ಅಣ್ಣ ಸುಂದರ ಮಾವ ಪೂಜೆ ಮಾಡಿ ಮಂಗಳಾರತಿ ಮುಗಿಸಿದ ಮೇಲೆ ಪಾಯಸದೂಟದ ಸೊರ ಸೊರ ಶುರು ವಾಗುತ್ತಿತ್ತು. ಎರಡೆರಡು ಬಗೆಯ ತೊಂಡೆ ಮತ್ತು ಗುಜ್ಜೆ ಪಲ್ಯ, ಕೋಸಂಬರಿ, ಹಪ್ಪಳ-ಸಂಡಿಗೆ. ಅತಿರಸ, ಪ್ರಸಾದದ ಶಿರಾ, ಸೌತೆಯ ಪದಾರ್ಥ, ಎಲ್ಲಕ್ಕೂ ಹೆಚ್ಚಾಗಿ ಕಡಲೆ ಬೇಳೆಯ ಪಾಯಸ ಹೀಗೆ ಸ್ವರ್ಗಕ್ಕೆ ಕಿಚ್ಚು ಹಚ್ಚುವ ಸದಾವಕಾಶವನ್ನ ಅಲ್ಲಿ ನೆರೆದ ಯಾರೊಬ್ಬರೂ ಕಳೆದು ಕೊಳ್ಳುತ್ತಿರಲಿಲ್ಲ. ಸಂಜೆಯಾದಾಗ ಮನೆ ಮಂದಿಯೆಲ್ಲ ಕೂಡಿ ಕೊಣಾಜೆ ಕಲ್ಲಿಗೆ ಹೋಗುತ್ತಿದ್ದೆವು. ಇಂದು ಪ್ರವಾಸಿ ಸ್ಥಳವಾಗಿ ಹೆಸರು ಮಾಡುತ್ತಿರುವ ಕೊಣಾಜೆ ಕಲ್ಲು ಒಂದು ಕಾಲಕ್ಕೆ ನಂಬಿದ ಕೆಲವು ಮಂದಿಯ ಹೊರತು ಇನ್ಯಾರೂ ಹೋಗದ ಗುಡ್ಡದ ನೀತಿಯ ಮೇಲಿನ ಬೃಹತ್ ಜೋಡಿ ಬಂಡೆಗಳು ನನ್ನಮ್ಮನ ಕುಟುಂಬದ ಜೊತೆ ಭಾವನಾತ್ಮಕ ಸಂಬಂಧ ಹೊಂದಿದೆ. ನನ್ನಮ್ಮ ಇನ್ನೂ ಮೂರ್ನಾಲ್ಕು ವರ್ಷದ ಕೂಸಾಗಿದ್ದಾಗ ಒಬ್ಬ ಸಂನ್ಯಾಸಿ ಮನೆಯಂಗಳಕ್ಕೆ ಬರಿಗಾಲಲ್ಲಿ ಅವರಪ್ಪನನ್ನು ಹುಡುಕಿಕೊಂದು ಬಂದರಂತೆ. ಹೀಗೆ ಬಂದ ಅನಾಮಿಕ ಕಾವಿಧಾರಿಗಳನ್ನ ಚಾವಡಿಯೇರಿಸಿ ಸತ್ಕರಿಸಿದಾಗ "ಹೆಗಡೆರೆ ನನಗೆ ಮುಡಿಯಕ್ಕಿ ಬೇಕು, ಮೊಗೆ ತೆಂಗಿನೆಣ್ಣೆ ಬೇಕು. ಜೊತೆಗೆ ಈಗಲೆ ನನ್ನ ಜೊತೆ ಕೈಗತ್ತಿ ಹಿಡಿದು ನೀವೂ ಬರಬೇಕು!" ಅಂದಾಗ ಅಮ್ಮನ ಅಪ್ಪ ಮರು ಮಾತನಾಡದೆ ಎಳೆಯ ಮಗಳಾಗಿದ್ದ ನನ್ನಮ್ಮನನ್ನು ಹೆಗಲ ಮೇಲೆ ಹೂರಿಸಿಕೊಂದು ಮನೆಯಾಳಿನ ಕೈಯಲ್ಲಿ ಅವರು ಕೇಳಿದ್ದನ್ನ ಹೊರೆಸಿ, ತಾನೊಂದು ಕೈಗತ್ತಿ ಹಿಡಿದು ಹೊರಟರಂತೆ. ಸೀದ ಅವರ ಅವರ ಸವಾರಿ ಸಾಗಿದ್ದು ಮನೆಯಿಂದ ನಾಲ್ಕು ಫರ್ಲಾಂಗ್ ದೂರದಲ್ಲಿ ಸರಕಾರಿ ರಾಜ ರಸ್ತೆಯಾಚೆಗೆ ಮತ್ತೆರಡು ಕಿಲೋಮೀಟರ್ ಮೇಲ್ಮುಖ ಸಾಗಿ ಹತ್ತಿ ಸಿಗುವ ಕೊಣಾಜೆ ಕಲ್ಲಿನತ್ತ. ತನ್ನ ದೈತ್ಯಾಕಾರದಿಂದ ಬಲು ದೂರದ ವರೆಗೂ ಕಾಣಲಿಕ್ಕೆ ಸಿಗುವ ಈ ದೊಡ್ಡ ಬಂಡೆಗಳ ಒಳಗೆ ತಳದಲ್ಲಿ ವಿಶಾಲವಾದ ಗುಹೆಗಳಿವೆ. ಕರಡಿ ಮತ್ತು ಹುಲಿಗಳು ವಾಸವಿದ್ದ ಜಾಗ ಅದಾಗಿದ್ದಂತೆ. ಅದನ್ನ ಮುತ್ತಲು ದಾರಿ ಅನ್ನುವಂತದ್ದೊಂದು ಅಲ್ಲದೆ ಇದ್ದುದ್ದರಿಂದ ಕೈಗತ್ತಿಯಲ್ಲಿ ಮುಳ್ಳು ಕಂಟಿ, ಕಾಡು ಬಳ್ಳಿಗಳನ್ನ ಕಡಿದು ಅಮ್ಮನ ಅಪ್ಪ ದಾರಿ ಮಾಡಿಕೊಂಡು ಮುಂದೆ ಸಾಗಿ ಸಂನ್ಯಾಸಿ ಹೇಳಿದಂತೆ ದಾರಿ ಸಾಗಿದರಂತೆ. ಕಡೆಗೂ ಗುಹೆಗಳೆದುರಾದಾಗ ಅಲ್ಲಿಯೆ ನಿಂತ ಆ ಸಂನ್ಯಾಸಿಗಳು ಅಲ್ಲಿಯೆ ನೆಲೆ ನಿಲ್ಲುವುದಾಗಿ ಘೋಷಿಸಿ ಅಲ್ಲಿ ಶಾರದೆಯ ನೆಲೆ ಇದೆ ಇನ್ನು ಮುಂದೆ ಇದೆ ನನ್ನ ನೆಲೆ ಎಂದರಂತೆ. ಅಲ್ಲಿ ಗುಂಪುಗುಂಪಾಗಿದ್ದ, ಈಗಲೂ ಇರುವ ರೌಡಿ ವಾನರ ಪಡೆ ಸಂನ್ಯಾಸಿಗಳ ತಂಟೆಗೆ ಬರದೆ ಅವರಿಗೆ ದೂರದಲ್ಲಿಯೆ ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ಇವರ ಕಾರುಬಾರನ್ನೆಲ್ಲ ನೋಡುತ್ತ ನಿಂತವಂತೆ. ಜೊತೆಯಲ್ಲಿ ಬಂದ ಆಳಿನ ಸಹಾಯದೊಂದಿಗೆ ಅಮ್ಮನ ಅಪ್ಪ ಆ ಜಾಗವನ್ನೆಲ್ಲ ಸ್ವಚ್ಛ ಮಾಡಿ ಒಪ್ಪಗೊಳಿಸಿ ಕೊಟ್ಟು ಸಂನ್ಯಾಸಿ ಮಾಡಿದ ಮೊದಲ ಪೂಜೆಯ ಹೂ ಪ್ರಸಾದ ತಗೊಂಡು ಮರಳಿ ಮನೆಗೆ ಬಂದರಂತೆ, ಮರುದಿನ ಇನ್ನಷ್ಟು ನಿತ್ಯೋಪಯೋಗಿ ಸಾಮಾನು, ಪಾತ್ರೆ ಪಡಗ ಹೊತ್ತು ಕೊಣಾಜೆ ಕಲ್ಲಿಗೆ ಮಕ್ಕಳು ಮತ್ತು ಹೆಂಡತಿ ನಮ್ಮ ಅವ್ವನನ್ನು ಕರೆದುಕೊಂಡು ಹೋಗಿ ಬಂದರಂತೆ. ಅಂದು ಅವರೆಲ್ಲರ ಊಟ ಅಲ್ಲಿಯೆ ಸಂನ್ಯಾಸಿಗಳ ಕೈಯಡುಗೆಯಲ್ಲಿಯೆ ಆಯಿತಂತೆ. ಅಲ್ಲಿಂದೀಚೆಗೆ ಅದು ನಮ್ಮೆಲ್ಲರ ಶ್ರದ್ಧಾ ಸ್ಥಳವಾಗಿದೆ. ಇವತ್ತಿಗೂ ನಾವು ಶ್ರದ್ಧಾ ಭಕ್ತಿಯಿಂದ ಅಲ್ಲಿಗೆ ವರ್ಷಕ್ಕೆ ನಾಲ್ಕಾರು ಬಾರಿ ಹೋಗಿ ಒಂದು ರಾತ್ರಿ ಅಲ್ಲಿಯೆ ಉಳಿದು ಮರುದಿನದ ಬೆಳಗಿನ ಝಾವದ ಫಲಾಹಾರ ಮತ್ತು ಚಾವನ್ನ ಅಲ್ಲಿಯೆ ತೀರಿಸಿ ಮರಳಿ ಬರುತ್ತೇವೆ. ಅಲ್ಲಿ ಸಂನ್ಯಾಸಿಗಳು ಬದಲಾಗುತ್ತಲೇ ಬಂದಿದ್ದಾರೆ. ಅವರು ಎಲ್ಲಿ ಹೋಗಿ ಮರೆಯಾಗುತ್ತಾರೆ? ಹೊಸ ಸಂನ್ಯಾಸಿಗಳು ಆ ಕೂಡಲೆ ಹೇಳಿ ಕಳಿಸಿದಂತೆ ಅದೆಲ್ಲಿಂದ ಬರುತ್ತಾರೆ? ಯಾರೊಬ್ಬರಿಗೂ ಗೊತ್ತಿಲ್ಲ! ಆದರೆ ಬಂದ ಹೊಸಬರಿಗೆ ನಮ್ಮ ಮನೆಯವರ ಸ್ಪಷ್ಟ ಪರಿಚಯವಿರುತ್ತದೆ. ಮತ್ತವರು ನಮ್ಮಲ್ಲಿಗೆ ಮೊದಲ ಕರೆ ಕಳಿಸುತ್ತಾರೆ! ಇಂದಿಗೂ ನಮ್ಮ ಸಾಗಿನ ಬೆಟ್ಟಿನ ಮನೆಯಿಂದ ಅಲ್ಲಿಗೆ ತಿಂಗಳಿಗೊಂದು ಮುಡಿ ಅಕ್ಕಿ, ಇನ್ನಿತರ ದಿನಸಿ ಸಾಗಣೆಯಾಗುತ್ತದೆ. ಕಾಲಕ್ರಮೇಣ ಸುತ್ತಮುತ್ತಲಿನ ವಿವಿಧ ಜಾತಿ ಪಂಗಡಗಳ ಮಂದಿ ಅಲ್ಲಿಗೆ ಬರುತ್ತಿದ್ದರೂ ನಮ್ಮ ಕುಟುಂಬಕ್ಕೆ ಈಗಲೂ ಅಲ್ಲಿ ಮೊದಲ ಮರ್ಯಾದೆಯಿದೆ. ಶಾರದಾ ಪೂಜೆಯ ದಿನದ ಸಂಜೆ ನಮ್ಮ ಕುಟುಂಬ ದಂಡು ಕಟ್ಟಿಕೊಂಡು ಅಲ್ಲಿಗೆ ಹೋಗಿ ತಪ್ಪದೆ ಪೂಜೆ ಮಾಡಿಸಿ ಬರಲಿಕ್ಕೂ ಈ ಅಂಟಿನ ನಂಟೆ ಕಾರಣ. ದೇವರಲ್ಲಿ ನಂಬಿಕೆಯಿರದ ನಾನೂ ಇದನ್ನ ಎಂಜಾಯ್ ಮಾಡ್ತೇನೆ, ವರ್ಷಕ್ಕೊಂದಾವರ್ತಿಯಾದರೂ ಅಲ್ಲಿಗೆ ಹೋಗಿದ್ದು ರಾತ್ರಿ ಉಳಿದು ಬರುತ್ತೇನೆ. ಅಲ್ಲಿನ ಸ್ವಾಮಿಗಳಿಗೂ ಗೊತ್ತು ನಾನು ದೇವರಿಗೆ ಕೈ ಮುಗಿಯುವುದಿಲ್ಲ ಅಂತ. ಆದರೆ ನನ್ನ ಅಲ್ಲಿನ ತಲೆಮಾರುಗಳ ಮುಂದುವರೆದ ಸೌಹಾರ್ದ ಬಾಂಧವ್ಯಕ್ಕೆ ಇದು ಎಂದೂ ತೊಡಕಾಗಿ ಪರಿಣಮಿಸಿಲ್ಲ. ಇಂದು ಅನೇಕ ಕಾರಣಗಳಿಂದ ಸಾಗಿನಬೆಟ್ಟು ಮನೆಯಲ್ಲಿ ಶಾರದಾ ಪೂಜೆ ಆಚರಣೆ ಚಾಲ್ತಿಯಲ್ಲಿದ್ದರೂ ಮೊದಲಿನ ಗೌಜಿಯನ್ನ ಕಳೆದುಕೊಂಡಿದೆ. ನಗರೀಕೃತ ಯಾಂತ್ರಿಕ ಬದುಕು ಹಬ್ಬದ ಹಳೆಯ ಲವಲವಿಕೆಯನ್ನ ನಮ್ಮೆಲ್ಲರಿಂದ ಕದ್ದುಕೊಂಡಿದೆ. ಇದು ಗೊತ್ತಿದ್ದೂ ಮಾಡುತ್ತಿರುವ ಸ್ವಯಂಕೃತಾಪರಾಧವಾಗಿದ್ದರೂ ಸಹ ನಾವು ಕನಿಷ್ಠ ಅದೇನನ್ನೋ ಕಳೆದುಕೊಂಡಂತೆ ನಟಿಸುತ್ತೇವೆ! ಅನ್ನದ ಬೆಲೆ ನನಗೆ ಅಮ್ಮನಿಂದ ಸಣ್ಣಂದಿನಿಂದಲೆ ಅರಿವಿಗೆ ಬರ ತೊಡಗಿತ್ತು. ತಂಬಿದ ಸಂಸಾರದ ಕಿರಿಯ ಕೂಸು ನಾನಾಗಿದ್ದೆ. ಅಜ್ಜನ ದುಡಿಮೆಯನ್ನೆ ಆಧರಿಸಿದ್ದ ಎಲ್ಲರ ಹೊಟ್ಟೆಗೆ ತುಂಬುವಷ್ಟನ್ನು ಹೊಂದಿಸುವ ಅಮ್ಮನ ಕಷ್ಟವನ್ನು ಊಹಿಸಬಲ್ಲೆ. ಅನ್ನದ ಪ್ರತಿ ಅಗುಳಿನ ಮಹತ್ವ ಆಕಾರಣದಿಂದಲೆ ಬಹುಷಃ ನನಗೆ ಗೊತ್ತಾಗಿದೆ. ನಮ್ಮ ಮನೆಯಲ್ಲಿ ಅನ್ನಕ್ಕೆ ಬರವಿರಲಿಲ್ಲ ಆದರೆ ಚಲ್ಲುವಷ್ಟು ಸಮೃದ್ಧಿಯಂತೂ ಖಂಡಿತ ಇರಲಿಲ್ಲ. ಹೀಗಿದ್ದರೂ ಹಂಚಿಕೊಂಡು ತಿನ್ನುವ ಸ್ವಭಾವ ಆಗಿನಂದಲೆ ಮನೆಯ ಹಿರಿಯರನ್ನ ನೊಡಿಕಂಡು ಕಲಿಯುವುದು ನನಗೆ ರೂಢಿಯಾಗಿತ್ತು. ನಮ್ಮ ಮನೆಗೆ ವಾರದ ಎಲ್ಲಾ ದಿನಗಳಲ್ಲೂ ಅನೆಕರು ಬೇಡಲು ಬರುತ್ತಿದ್ದರು. ಇವರನ್ನ ಭಿಕ್ಷುಕರೆಂದು ಕರೆಯುವುದು ಅಷ್ಟು ಸಮಂಜಸವಾಗಲಾರದು. ಸೋಮವಾರದ ಅಜ್ಜಿ, ಶಿವಾಯನಮಃದ ಜೋಗಿ, ಕುರುಕುರು ನರ್ಸಣ್ಣ ಮಾಮ, ಜಾಗಟೆ ದಾಸಯ್ಯ, ಕುಯ್ಯೋ ಢಕ್ಕೆ ಡೋಲಿನ ಅಮ್ಮಾ-ಮಗ, ಅಪರೂಪಕ್ಕೊಬ್ಬ ಕರಡಿ ಮಾಮ, ಅಮವಾಸ್ಯೆಗೊ ಹುಣ್ಣಿಮೆಗೊ ಬರುತ್ತಿದ್ದ ಹಾವಾಡಿಗ ಈ ಎಲ್ಲರಿಗೂ ನಮ್ಮ ಮನೆಯ ಹೊಸಿಲ ಬಳಿ ಅವರವರ ಅನುಕೂಲದ ದಿನಗಳಲ್ಲಿ ಸ್ವಾಗತವಿರುತ್ತಿತ್ತು. ಇವರೆಲ್ಲರಿಗೂ ನಮ್ಮ ಅಜ್ಜನ ಕಷ್ಟದ ದಿನಗಳ ದುಡಿಮೆಯಲ್ಲಿ ಒಂದು ಪಾಲಿರುತ್ತಿತ್ತು. ನಾನು ಅವರಲ್ಲಿ ಯಾರಾದರು ಮನೆ ಬಾಗಿಲಿಗೆ ಬಂದದ್ದೆ ತಡ ಅಮ್ಮ ಕೊಡುತ್ತಿದ್ದ ಒಂದು ಮುಷ್ಠಿ ಅಕ್ಕಿಯನ್ನೋ, ಇಲ್ಲವೆ ಮಾಡಿರುತ್ತಿದ್ದ ಬೆಳಗಿನ ತಿಂಡಿಯಲ್ಲಿ ಒಂದು ಪಾಲನ್ನೋ ಅಡುಗೆ ಮನೆಯಂದ ಓಯ್ದು ಅವರ ಕೈಪಾತ್ರೆಗೆ ಹೆಮ್ಮಯಿಂದ ಹಾಕುತ್ತಿದ್ದೆ. ಪ್ರತಿ ಸೊಮವಾರ ನಮ್ಮ ಬೀದಿಯ ಎಲ್ಲಾ ಮನೆಯ ಮಂಬಾಗಿಲಿನಲ್ಲೂ "ಶಿವಾಯ ನಮಃ.... ಅಮ್ಮಾ ಅಮ್ಮಾ..." ಎನ್ನುವ ಧ್ವನಿ ಕೇಳಿ ಬರುತ್ತಿತ್ತು. ಕಾವಿ ಅಥವಾ ಕಪ್ಪು ಶಾಠಿ ಹೊದ್ದು ಅಂತಹದ್ದೆ ಇನ್ನೊಂದು ಬಟ್ಟೆಯ ತುಂಡನ್ನ ಅವರು ಸೊಂಟಕ್ಕೆ ಬಿಗಿದುಕೊಂಡಿರುತ್ತಿದ್ದರು.ಬಿಳಿ ಗಡ್ಡದ ಕಡುಗಪ್ಪು ಮುಖದ ಅವರ ಕಣ್ಣುಗಳ ನಡುವಿನಲ್ಲಿ ದೊಡ್ಡ ಕುಂಕುಮದ ಬೊಟ್ಟಿದ್ದು ಅದಕ್ಕೂ ಮೇಲೆ ಮೂರು ವಿಭೂತಿ ಪಟ್ಟಿಯಿರುತ್ತಿತ್ತು. ಮೂಗಿನ ಕೊನೆಯಲ್ಲೊಂದು ಕಪ್ಪು ಅಂಚಿನ ದಪ್ಪ ಗಾಜಿನ ಕನ್ನಡಕ ಇಷ್ಟು ಅವರ ಅನುಗಾಲದ ವೇಷ. ಒಂದುವೇಳೆ ಅವರ ಒಂದು ಕೂಗಿಗೆ ಮನೆಯೊಳಗಿನಿಂದ ಯಾವುದೆ ಪ್ರತಿಕ್ರಿಯೆ ಬಾರದಿದ್ದರೆ ಮತ್ತೆ ಅದೆ ರಾಗವನ್ನ ಅವರು ಹಾಡಿಯೇ ಹಾಡುತ್ತಿದ್ದರು. ಅವರ ಬಗಲಲ್ಲಿ ಸದಾ ಒನ್ದು ಕಪ್ಪು "ಸಾಹಿತಿ ಚೀಲ"ದಂತಹ ಜೋಳಿಗೆ ನೇತಾಡುತ್ತಿತ್ತು. ಕೈಯಲ್ಲೊಂದು ಸಿಲವಾರದ ಕೈಪಾತ್ರೆಯನ್ನ ಅವರು ಹಿಡಿದಿರುತ್ತಿದ್ದರು. ನಾವು ಅದರಲ್ಲಿ ಹಾಕುತ್ತಿದ್ದ ಪಾವಕ್ಕಿಯನ್ನ ಅನಂತರ ಅವರು ಆ ಜೋಳಿಗೆಗೆ ಸುರಿದುಕೊಳ್ಳುತ್ತಿದ್ದರು. ಮೇಲುಬಸ್ಟಾಂಡಿಗೆ ಹೋಗುವ ದಾರಿಯಲ್ಲಿ ಖಾದರ್ ಸಾಬರ ಬಂಗಲೆಯ ಮಂದೆ ಮಸೀದಿ ರಸ್ತೆಗೆ ಹೊಗಲಿಕ್ಕಿದ್ದ ಸಣ್ಣ ದಾರಿಯ ಮೂಲೆಯಲ್ಲಿದ್ದ ಕಲ್ಲಿನ ಬಿಡಾರದಲ್ಲಿ ಅವರ ವಾಸ್ತವ್ಯವಿತ್ತು. ಪ್ರತಿ ಸೋಮವಾರ ಮಾತ್ರ ಅವರ ಸವಾರಿ ನಮ್ಮ ಮನೆಯಂಗಳದಲ್ಲಿ ಕಾಣಲಿಕ್ಕೆ ಸಿಗುತ್ತಿತ್ತು. ಅವತ್ತಿನ ಹೊರತು ಇನ್ಯಾವುದೇ ದಿನವೂ ಅವರು ಯಾರ ಮನೆಗೂ ಬೇಡಲು ಬರುತ್ತಲೆ ಇರಲಿಲ್ಲ. ದೂರದ ಪಡುಬಿದ್ರಿಯಲ್ಲಿ ಅವರ ಕುಟುಂಬ ಇತ್ತಂತೆ, ಅವರಿಗೆ ಊರಲ್ಲಿ ಹೆಂಡತಿ-ಮಕ್ಕಳೂ ಇದ್ದಾರಂತೆ. ಗುರುಪುರದ ಬಳಿಯಿರುವ ಲಿಂಗಾಯತ ಮಠದ ಅನುಯಾಯಿಗಳಾಗಿದ್ದ ಜೋಗಿ ಜಂಗಮರಂತೆ ಅವರು. ಹೀಗೆ ಬೇಡುವುದೇ ಅವರ ಕುಲ ಕಸುಬಂತೆ! ಅವರು ಹೇಗೆ ಬೇಡಿ ಬೇಡಿಯೇ ತಮ್ಮ ಮನೆ ನಡೆಸಿಕೊಂಡು ಮಕ್ಕಳ ಮದುವೆಯನ್ನೂ ಮಾಡಿ ಮುಗಿದಸಿದ್ದರಂತೆ!! ಆಗೆಲ್ಲಾ ಅವರು ಬಾರದ ಸೋಮವಾರಗಳಲ್ಲಿ ಏನೋ ಮಿಸ್ ಆದಂತೆ ಅನ್ನಿಸುತ್ತಿತ್ತು. ( ಮುಂದೂ ಇದೆ....)

Saturday, November 10, 2012

ನನ್ನ ಆಸೆ ವಾಸ್ತವಕ್ಕೆ ಬಹು ದೂರ.....


ನನಗೆ ಗೌಣವಾದಾಗಿದ್ದಾಗ ನಿನಗೆ ಮುಖ್ಯವಾಗಿದ್ದ ಸಾಂಗತ್ಯ..... ಇಂದು ತಿರುವು ಮುರುವಾಗಿದೆ ಕಾಲ ಬಹಳ ಕ್ರೂರಿ, ಕನಸು ಕಮರಿದ ಹಾಗೆ ಮನಸೂ ಸಹ ಮುರಿದಿದೆ ಮೌನ ಆಪ್ತ... ಸಂಕಟವೆಲ್ಲ ಎದೆಯೊಳಗೆ ಸುಪ್ತ/ ಇನ್ನೇನೂ ಹೇಳಲಿಕ್ಕೆ ಉಳಿದಿಲ್ಲ ನನ್ನಲ್ಲಿ ನಿನಗೆ ನಾ ದೂರ ನಿಜ ನನಗಂತೂ ನಿನ್ನಷ್ಟು ಇನ್ಯಾರೂ ಇಲ್ಲ ಹತ್ತಿರ... ಖಾತ್ರಿಯಿಲ್ಲದ ಕ್ಷಣಿಕ ಒಲವಿಗೆ ಇಡಿ ಬಾಳನ್ನೆ ಬಿಟ್ಟುಕೊಟ್ಟು ತ್ಯಾಗಿಯ ವೇಷದಲ್ಲಿ ನಿಂತ ನನ್ನ ನೋಡಿ ನೀನೆ ಒಂದುವೇಳೆ ನಕ್ಕರೂ, ಅದನ್ನ ಅಪಾರ್ಥ ಮಾಡಿಕೊಳ್ಳಲಾರದಷ್ಟು ದೂರದ ಹಾದಿಯನ್ನ ಒಂಟಿಯಾಗಿ.... ಬರಿಗಾಲಿನಲ್ಲಿಯೆ ಸವೆಸಿ ನಾನು ಬಂದಿದ್ದೇನೆ// ನೆನಪಿನೆಳೆಯ ಕೊನೆಯಂಚಿನಲ್ಲೂ ನಿನ್ನೆದೆಯ ಮಿಡಿತವೆ ಹುದುಗಿದೆ ಬೆಚ್ಚಗೆ.... ಕುದಿವೆದೆಯ ಬೇಗುದಿಯ ಮೌನ ನನ್ನ ನೋವಿನ ಪ್ರತಿ ಹನಿಗಳಲ್ಲೂ ನಿನ್ನದೆ ಧ್ವನಿಯಿದೆ, ಕಾಯಲು ಮರೆಯದ ಹಾದಿಯಲ್ಲಿ ಮೂಡಬಹುದಾದ ಹೆಜ್ಜೆ ಸಪ್ಪಳ ನಿನ್ನದೆ ಆಗಿರಲಿ ಅನ್ನುವ.... ನನ್ನ ಆಸೆ ವಾಸ್ತವಕ್ಕೆ ಬಹು ದೂರ/ ಕಳೆದು ಹೋದ ಕ್ಷಣಗಳ ಕನವರಿಕೆ ಕೊನೆಯವರೆಗೂ ಕೈಬಿಡದೆ ಕಾಡಲಿದೆ.... ಕಾದಿರಿಸಿರುವ ಎದೆಯ ಜಾಗ ಎಂದೆಂದೂ ನಿನ್ನದೆ ನೀನೊಂದು ವೇಳೆ ಮರಳಿ ಬಂದರೂ ಬಾರದಿದ್ದರೂ, ಇಂದಿಲ್ಲದ ಒಲವನ್ನ ಅಂದಿನ ಆಕ್ಷಾಂಶೆಯಲ್ಲಿ ಹುಡುಕುವ ನನ್ನದು ಹುಚ್ಚು ಪ್ರಾಮಾಣಿಕ ಪ್ರಯತ್ನ!// ಮರಗೆ ಸರಿದ ಮರೆಯಲಾಗದ ನೆನಪುಗಳ ಛಾಯೆಯ ಕಪ್ಪಲ್ಲಿ ನನ್ನ ಕಮರಿದ ಸ್ವಪ್ನಗಳ ಸಪ್ತ ರಂಗುಗಳ ಕಲೆ.... ಇನ್ನೂ ಉಳಿದಿವೆ, ನನ್ನ ಅತಿ ಸಾಧಾರಣ ಕವಿತೆಗಳಲ್ಲಿ ಅವಿತ ನಿನ್ನ ಹುಡುಕಿ ಕೊಟ್ಟವರಿಗೆ ಕೋಟಿ ವರಹದ ಬಹುಮಾನವಿದೆ ಈ ವಿರಹಿಯಿಂದ!/ ಮನಸಿನ ಪಡಸಾಲೆಯಲ್ಲಿ ತೊಟ್ಟಿಕ್ಕುವ ಭಾವನೆಗಳ ಹನಿಗಳೆಲ್ಲ ಮೌನದ ತಂಪಲ್ಲಿ ಮಿಂದೆದ್ದಿವೆ... ಕೂಡಿಡಲು ನನ್ನಲ್ಲಿ ನಿನ್ನವೆ ಕೋಟಿ ಕನಸುಗಳಿವೆ ಇನ್ನುಳಿದಂತೆ ಮನದ ಗೋದಾಮಿನಲ್ಲಿ ಎಲ್ಲಕ್ಕೂ ಖಡ್ಡಾಯ ನಿಷೇಧ, ಯಾತರದ ಚಿಂತೆ ನನಗೆ? ಹೃದಯದ ಅನುಗಾಲದ ಬೇನೆ ನನ್ನದೆ ಆಯ್ಕೆಯಾಗಿರುವಾಗ.... ನೀನದಕ್ಕೆ ಹೇಗೆ ತಾನೆ ಹೊಣೆ?// ಮಳೆ ಮೆಲ್ಲಗೆ ಉಸುರಿದ ಗುಟ್ಟನ್ನ ಕೇಳಿಸಿಕೊಂಡ ನೆಲ ನಾಚಿ ನೀರಾಗಿದೆ.... ದೂರದಲ್ಲೆಲ್ಲೋ ಮಳೆಯಾದ ಸುದ್ದಿ ಹರಡುವ ಹರಕು ಬಾಯಿಯ ಗಾಳಿ ಒಂದೆರಡು ಹನಿಗಳ ತಂಪನ್ನ ತಾನೂ ಕದ್ದು ತಂದಿದೆ, ಮನಸು ಮೌನದ ನದಿ ತೀರದಲ್ಲಿ ಲಂಗರು ಹಾಕಿರುವಾಗ ನೋವಿನ ಬಿರುಗಾಳಿ ಅದೆಷ್ಟಾದರೂ ಬೀಸಲಿ ಚಿಂತೆಯಿಲ್ಲ/ ಕವಲೊಡೆದ ದಾರಿಗಳು ಮುಂದೆಲ್ಲೋ ಒಂದೆಡೆ ಸೇರಿಯಾವು..... ಎನ್ನುವ ನಿರೀಕ್ಷೆಯ ಮೋಡ ನನ್ನೊಲವಿನ ಮಳೆಗಿಂತಲೂ ನನಗಾಪ್ತ, ನೆನಪಲ್ಲಿ ನೀನಿರುವ ತನಕ ಮನಸಲ್ಲಿ ನೋವು ಕೇವಲ ಒಂದು ತತ್ಕಾಲಿಕ ಅತಿಥಿ..... ಖಂಡಿತಾ ಸಂಕಟದ ಸಂಧ್ಯೆಯ ಸೆರಗಲ್ಲಿ ಅಡಗಿದ ಸೂರ್ಯನ ತುಂಟಾಟಕ್ಕೆ ಪಡುವಣದ ಬಾನು ಎಂದಾದರೊಮ್ಮೆ ನಿಜಕ್ಕೂ ರಂಗೇರಲಿದೆ...

Friday, November 9, 2012

ದಿಕ್ಕು ತಪ್ಪಿದ ಅನಾಮಿಕ ನಾವೆಗೆ....


ನಿನ್ನೆದೆಯ ಗಡಿಯಂಚಿನಲ್ಲಿಯೆ ನನ್ನೆಲ್ಲ ಕನಸುಗಳು ಅಹೋರಾತ್ರಿ ಕಾವಲಿಗಿವೆ.... ನನ್ನ ಕಣ್ಣಚಿಂದ ಜಾರಿದ ಕಿರು ಕನಸೊಂದು ನಿನ್ನ ನಗುವಲ್ಲಿ ಕರಗಿ ಕಣ್ಮರೆಯಾಗುವಾಗ ನಾನು ಪರಮ ಸುಖಿ, ಅಳಿಸಲಾಗದ ಗುರುತನ್ನ ಮನಸಲ್ಲಿ ಹಚ್ಚೆ ಹೊಯ್ದ ನೆನಪಿನ ಲೇಖನಿ ಇನ್ನೂ ಮನಸಿನಲ್ಲಿ.... ಬಾಣದಂತೆ ಚುಚ್ಚಿಕೊಂಡಿದೆ/ ಹೇಳದ ನೂರು ಮಾತುಗಳಿಗೆ ಒಂದು ಮೌನ ಸಮ ಕಣ್ಣ ಭಾಷೆಯದ್ದೆ ಅಸಮಾನ ಘಮ.... ನೀನಿಲ್ಲ ನಿನ್ನ ನೆನಪಿದೆ ಮರೆತಿಲ್ಲ ನಿನ್ನಲ್ಲೆ ನನ್ನ ಮನಸಿದೆ, ಕಣ್ಣ ಕನ್ನಡಿಯ ಪ್ರತಿ ಪ್ರತಿಫಲನವೂ ನಿನ್ನ ನೆನಪುಗಳಲ್ಲೆ ಹೊಳೆಯುವಾಗ.... ಇನ್ನು ನನ್ನದೇನು ಇಲ್ಲಿ ಹೇಳು?// ಕತ್ತಲಲ್ಲಿ ಕರಗಿದ್ದ ಕುರುಡು ಕನಸುಗಳಿಗೆ ನೀ ಜೊತೆಗಿದ್ದಾಗ ಕಡುಗಪ್ಪು ಹಾದಿಯೂ ನಿನ್ನ ಕಣ್ಬೆಳಕಲ್ಲಿ ಸಲೀಸು.... ಕಡೆಯವರೆಗೂ ಅಂತಹ ನೆನಪುಗಳ ನಿರಂತರ ಜೊತೆ ಮಾತ್ರ ನನಗೆ ಸಾಕು, ಪ್ರತಿ ಉಸಿರ ಆವರ್ತದ ಬಸಿರಿನಲ್ಲಿ ಬಿಸಿಯಾಗಿ ಹೊಮ್ಮುವ ನೀನಿತ್ತ ಬೆಚ್ಚನೆಯ ನೆನಪುಗಳ.... ಸಾಂಗತ್ಯ ಸದಾ ನನಗೆ ಬೇಕು/ ನೆಲದ ನಿರೀಕ್ಷೆಗೆ ಬಾನಿನ ಆರ್ದ್ರತೆಯ ಬಗ್ಗೆ ಆರ್ತ ನೋಟವಿದ್ದಾಗ ಮೋಡ ಮಳೆಯಾಗಿ ಇಳೆಯ ತಣಿಸುತ್ತಿದೆ.... ಧರೆಗೆ ತಂಪೆರೆವ ಇರುಳ ನಿಲಕ್ಕೆ ನೆಲವನ್ನ ಮುಟ್ಟುವ ಹಂಬಲ ನಿರಂತರ, ನೆನೆದಷ್ಟೂ ನಿನ್ನ ನೆನಪಲ್ಲಿ ನನ್ನ ಒಳ ಮನಕ್ಕೆ ಅದೇನೋ ಹಿತದ ಅಮಲೇರುತ್ತದೆ.... ಕೇವಲ ಕನಸಲ್ಲಿ ಹೀಗೆಯೆ ಕಾಡುತ್ತಿರು ಮನಸೊಳಗಿನ ನೆನಪುಗಳು ಬಾಡದಂತೆ ನೀ ಕಾಪಾಡುತ್ತಿರು.... ಹಗಲಿನ ಬೆಳಕ ಹಿನ್ನೆಲೆಯಲ್ಲಿ ಹೊಳೆವ ನಿನ್ನ ಕನಸುಗಳು ನನ್ನ ಹೀಗೆಯೆ ಆವರಿಸುತ್ತಿರಲಿ// ಖಚಿತ ಭರವಸೆಗಳ ಆಸರೆಯಿಲ್ಲದಿದ್ದರೂ ಕನಸುಗಳಿಗೆ ಬರವೆ ನನ್ನ ಕಣ್ಣುಗಳಲ್ಲಿ ಹೇಳು? ತಾವರೆ ಮೇಲಿಳಿವ ಹನಿ ನೀರು ಕೆಸುವಿನ ಪತ್ರೆ ಮೇಲಿರುವ ಹೊಳೆವ ಜಲದ ಬಿಂದುವಿನ ದನಿ ನಾನು.... ಜಾರುವುದು ಖಚಿತ ಆದರೂ ಅದು ನಿನ್ನ ಅಂಗೈ ಮೇಲೆ ಆಗಿರಲಿ ಅಂತನ್ನುವ ಕ್ಷೀಣ ಆಸೆ ನನ್ನದು, ಉಸಿರ ಕೊನೆಯ ಉಚ್ವಾಸದಲ್ಲೂ ನೋಡಿದೆಯ ನಿನ್ನದೆ ಅವಾಸ... ದಿನವಿಡಿ ಕಾದ ಮನ ಉಸಿರ ಕೊನೆ ಕ್ಷಣದವರೆಗೂ ನಿನ್ನ ಪ್ರತೀಕ್ಷೆಯಲ್ಲಿ ತಲ್ಲೀನ ನನ್ನೆಲ್ಲ ಮೌನ ನಿನ್ನ ಮಾತಲ್ಲಿ ಲೀನ/ ಕತ್ತಲ ಅಂತರಾಳದಲ್ಲಿ ಅಡಗಿರುವ ಕನಸುಗಳ ಕಣ್ಣುಗಳಲ್ಲಿ ಕಾತರದ ಕಡತಗಳ ದೊಡ್ಡ ದಾಸ್ತಾನಿದೆ..... ದೂರ ಇದ್ದಷ್ಟು ಬಾನಿಗೂ ನೆಲಕ್ಕೂ ತೀರದ ಸೆಳೆತ ಮೋಡದ ಮನದಲ್ಲಿ ನಿರಂತರ ಧರೆಯದೆ ನಾಮದ ಮಿಡಿತ, ಮನಕ್ಕೆ ಮುಸುಗಿರುವ ಮೋಡ ಮಳೆಯಾಗಿ ಮಣ್ಣು ಸೇರುವ ತನಕ ದುಗುಡದ ಕರಿಛಾಯೆ.... ಹೀಗೆಯೆ ಆವರಿಸಿರಲಿದೆ// ದೂರದ ದ್ವೀಪ ಮುಟ್ಟುವ ದಿಕ್ಕು ತಪ್ಪಿದ ಅನಾಮಿಕ ನಾವೆಗೆ.... ಕಡೆಗೂ ದಡ ಮುಟ್ಟಿದ್ದೊಂದೆ ಕಳ್ಳ ಸಮಾಧಾನ, ಸಾಗರದ ಎದೆಯ ಮೇಲೆ ಸಾಗುವ ದೋಣಿಗಳಿಗೆ ದಡ ಮುಟ್ಟಿಸುವ ಹೊಣೆ ಎಲ್ಲಾ ಅಲೆಗಳಿಗೂ ಇದ್ದೇ ಇದೆ/ ಕೇವಲ ನಿರೀಕ್ಶೆಯ ನೆಲೆಗಟ್ಟಿನ ಮೇಲೆಯೆ ಸಾಗಿಸ ಬೇಕಿದೆ ಬದುಕು.... ಅದರೊಂದಿಗೆ ಸಲ್ಲ ಬೇಕಿದೆ ಅದಕೂ-ಇದಕೂ, ಕಂಬನಿ ಹಿಡಿತ ಮೀರಿ ಉಕ್ಕುತ್ತಿರೋದು ಕನಸು ಕಮರಿ ಹೋಗಿದ್ದಕ್ಕೊ ಇಲ್ಲಾ ಮನಸು ಮುದುಡಿದ್ದಕ್ಕೋ ಗೊತ್ತಾಗುತ್ತಿಲ್ಲ.... ಕತ್ತಲ ಕೊನೆಯಂಚಿನಲ್ಲಿ ಅಡಗಿದ ಬೆಳಕಿನ ಭರವಸೆಯಲ್ಲಿಯೆ ಅಡಗಿದೆ ನಾಳಿನ ಬದುಕು//

Thursday, November 8, 2012

ಸಕಾರಣವಿದೆ.......


ಕಿತ್ತಿಡಲಾಗದ ಸಹಜ ಭಾವ ನಿನ್ನೆಡೆಗಿನ ನನ್ನ ಸೆಳೆತ ಇಷ್ಟು ಬೇಗ ನಾವು ಅಗಲಲೆ ಬೇಕಿತ್ತಾ?.... ಏನೆಲ್ಲಾ ಕನಸಿದ್ದೆ ಎಷ್ಟನ್ನೆಲ್ಲ ಕನವರಿಸಿದ್ದೆ ಕಮರಿತು ಸ್ವಪ್ನ ಸುಮ ಬಾಳಲ್ಲಿ ಇನ್ನೆಲ್ಲಿ ಸಂತಸದ ಸ್ನೇಹ ಘಮ, ಇಂದು ನೋವಿಗೆ ನೂರು ಕಾರಣಗಳಿವೆ ನಲಿವಿಗೆ ಮಾತ್ರ ನಿನ್ನ ಎಂದಿನದ್ದೋ ಒಂದು ನಿಷ್ಕಲ್ಮಶ ಮುಗುಳ್ನಗೆಯ ನೆನಪೊಂದೆ ನನಗಾಸರೆ/ ಕಂಡಿದ್ದ ಸುಂದರ ಕನಸು ಬಾಳಲ್ಲಿ ಕಡೆಗೂ ಸುಂದರ ಕನಸಾಗಿಯೇ ಉಳಿದು ಹೋಯಿತಲ್ಲ... ನಾನೆಂತಾ ನತದೃಷ್ಟ, ಬಾನು ಭೂಮಿಯ ಗಾಢ ಸಂಬಂಧದ ನಡುವೆ ಮೂಡುವ ಬಿರುಕೆ ಮುಗಿಲಂಚಿನ ಮಿಂಚು// ಗಾಳಿಗೂ ಮೋಡಕೂ ಕಳೆದೆರಡು ದಿನಗಳಿಂದ ವಿರಸ ಅದಕ್ಕೇನೆ ಬಾನು ಬಿಡುತ್ತಿದೆ ಕಡು ತಂಪಿನ ಶ್ವಾಸ... ಮನಸ ಬರಡು ಮರಳುಗಾಡಲ್ಲೂ ಉಳಿದ ನೆನಪ ಜೋಡಿ ಹೆಜ್ಜೆಗಳು ನೆನ್ನೆಯ ನೆನಪನ್ನ ಅಚ್ಚಳಿಯದಂತೆ ಉಳಿಸಿವೆ, ಸಾವಿರ ಕನಸುಗಳ ಅಶ್ವವನ್ನೇರಿ ನಿಶ್ಚಿತ ಗುರಿಯನ್ನಷ್ಟೆ ಹೋಗಿ ಸೇರುವ ಸ್ವಪ್ನಗಳೆಲ್ಲ.... ಹಾದಿಯುದ್ದ ಹೆಜ್ಜೆಗುರುತುಗಳನ್ನ ಉಳಿಸುತ್ತಾ ಸಾಗಿವೆ/ ನನ್ನ ಕಣ್ಣಚಿಂದ ಜಾರಿದ ಕಿರು ಕನಸೊಂದು ನಿನ್ನ ನಗುವಲ್ಲಿ ಕರಗಿ ಕಣ್ಮರೆಯಾಗುವಾಗ ನಾನು ಪರಮ ಸುಖಿ.... ಮಳೆಗೆ ಮರುಳಾದ ಇಳೆ ಇರುಳಿಡಿ ತೊಯ್ದು ಮನದ ಒಳಗೆ ಹನಿ ಒಲವನ್ನೂ ಹಿಡಿದಿಟ್ಟುಕೊಳ್ಳುತ್ತಿದೆ// ಕದಡಿ ಹೋಗಿದ್ದ ಕನಸಿನ ಕೊಳದಲ್ಲಿ ಮೆಲ್ಲಗೆ ಮಳೆಹನಿಗಳು ತಾಕಿ...... ನೆಮ್ಮದಿಯ ಅಲೆಗಳು ಏಳಲಿಕ್ಕೆ ಹವೆಣಿಸುತ್ತಲಿವೆ, ಸರಿ ಹೋಗದ ಮನಸ್ಥಿತಿಯಲ್ಲಿ ಕಿರು ಬೆಳಕು/ ಕಹಿ ನೂರಿದ್ದರೂ ನೆತ್ತಿಯ ಮೇಲೆ ಸಂಕಟದ ಶಾಶ್ವತ ಸೂರಿದ್ದರೂ ನಾಮ ಜಪದ ಕ್ಷಣಿಕ ಸಂತಸವೂ ನನ್ನ ಸಂಗಡವಿದ್ದೇ ಇದೆ, ಕರಿ ಮೆತ್ತಿದ ಕನಸುಗಳಿಗೆ ಬೆಳಕಿನ ನಿರೀಕ್ಷೆಯಿಲ್ಲ..... ಬರಿ ಮತ್ತಿನ ಮಾತುಗಳಿಗೆ ಸಾಕಾರದ ಅಪೇಕ್ಷೆಯೂ ಇಲ್ಲವಲ್ಲ// ಕಿತ್ತು ತಿನ್ನುವ ಹತ್ತು ನೋವುಗಳ ಸಂಗಡ ನಿತ್ಯ ಏಗುವ ಮನ ಮುಗ್ಧ ಮೂಢ..... ಮರೆಮಾಚಿದ ಮಾತುಗಳೆಲ್ಲ ಮೌನದಲ್ಲಿ ಲೀನವಾಗಿ ಮನಸೊಳಗೆ ಕರಗಿ ಹೋದವು, ಕಡುಚಳಿಯ ಕತ್ತಲ ಹಾದಿ ಸವಿಸಲಿದೆ ಎದೆಯಲ್ಲಿ ನೀ ಹೊತ್ತಿಸಿ ಹೋಗಿರುವ ಸುಡುವ ನೋವಿನ ಉರಿ ಅಗ್ಗಿಷ್ಟಿಕೆ/ ಕಾರಣವಿಲ್ಲದೆ ತುಂಬಿಬರುವ ಕಂಗಳಿಗೆ ಹನಿಯಲು ನಿನ್ನ ಅಗಲಿಕೆಯ ಸಕಾರಣವಿದೆ, ನನ್ನ ಕಣ್ನುಗಳು ಗುತ್ತಿಗೆ ಹಿಡಿದ ನಿನ್ನ ಕನಸುಗಳಿಗೆ ನಿತ್ಯ ನಿನ್ನ ನೆನಪಲ್ಲಿಯೆ ನವೀಕರಣ//

ಸುರಿವ ಹನಿಮಳೆಯೂ .......



ಒಲವೂ, ವಿರಹವೂ, ಸಂತಸವೂ, ಸಂಕಟವೂ ನೋವೂ, ನಲಿವೂ ನೀನೆ ತಾನೆ ನನಗಿತ್ತ ಗೋಳು.... ಎಲ್ಲವೂ ನಿನ್ನ ಭಿಕ್ಷೆ, ಅತಿರೇಕದ ಅವಲಂಬನೆಗೆ ಮನಸು ತೆತ್ತ ದುಬಾರಿ ದಂಡ ಎಕಾಂತದ ದೀರ್ಘ ಬಾಳು... ಇದೊಂಥರಾ ಸ್ವಯಂ ಶಿಕ್ಷೆ./ ಬಲು ಬೇಸರದ ಸಂಜೆ ಅದೇಕೊ ಆವರಿಸಿ ಮೆಲ್ಲನೆ ಮನಸ ಹಿಂಡುತ್ತಿದೆ.... ಕಣ್ಣ ಮರೆಯ ಕಡು ನೋವಲ್ಲೂ ತುಟಿಯಂಚಲ್ಲಿ ನಸು ನಗು ಅರಳಿಸುವಲ್ಲಿ ಯಶಸ್ವಿಯಾದ ನಿನ್ನ ನೆನಪುಗಳಿಗೆ ಎಂದೂ ಬೆಲೆ ಕಟ್ಟಲಾಗದು, ನಗುವಿನ ಮೊಗವಾಡ ಹೊತ್ತು ನಿನಗೆ ಶುಭ ಹಾರೈಸುವ ನನ್ನೊಳಗೆ... ನೋವಿನ ಮಡು ತುಂಬಿ ನಿಂತಿದೆ// ಮುರಿದ ಮನದ ಮೂಲೆಯಲ್ಲೂ ನಿನ್ನ ನೆನಪುಗಳದೆ ಮಾರ್ದನಿ... ಮನಸ ಪುಸ್ತಕದ ನಡು ಪುಟದಲ್ಲಿ ಇಟ್ಟು ಮರೆತಿದ್ದ ಬಣ್ಣದ ನವಿಲುಗರಿ ನೀನು, ಒಲವಲ್ಲಿ ನಲಿವಿಲ್ಲ ಬರಿದೆ ನೋವಿನ ಸುಳಿಯೆ ಈ ಮಡುವಲ್ಲಿ ತುಂಬಿದೆಯಲ್ಲ! ಆದೇನೆ ಇದ್ದರೂ.... ಮಳ್ಳ ಮನಸಿಗೆ ಇದರಿಂದ ಪಾರಾಗುವ ಇರಾದೆಯೆ ಇಲ್ಲ?!/ ಗತ್ತಿನಿಂದ ಹೇಳುವ ನನ್ನ ನೆನಪುಗಳಲ್ಲೆಲ್ಲ ನೀನೆ ಬಹುಪಾಲು ಆವರಿಸಿರುತ್ತೀಯಲ್ಲ.... ಇದೆಂಥಾ ವಿಸ್ಮಯ, ಕಣ್ಣು ಕದ್ದು ಕಾಣುವ ಕನಸುಗಳಿಗೆ ಸುಂಕವಿಲ್ಲ ಒಂದು ವೇಳೆ ಇದ್ದಿದ್ದರೆ.... ನಾನಿವತ್ತು ಪೂರ್ತಿ ದಿವಾಳಿಯಾಗಿರುತ್ತಿದ್ದೆ// ಕೆಲವನ್ನು ಹೇಳದೆ ಕೆಲವನ್ನ ಕೇಳದೆ ಅರಿತುಕೊಳ್ಳ ಬೇಕಿತ್ತು ನೀನು ನಾನಿನ್ನನರಿತಂತೆ.... ಸಂಜೆ ಅಚಾನಕ್ಕಾಗಿ ಕವಿಯುವ ಮೋಡ ಹನಿಯಾಗಿ ಧರೆಯ ಸೋಕುವಾಗ ಮನಕ್ಕೀಯುವ ಮುದ ವರ್ಣನೆಗೆ ಹೊರತು, ಕಳೆದ ಕೆಲವು ಕ್ಷಣಗಳ ಕದದ ಮರೆಯಲ್ಲಿ ಕುತೂಹಲದ ಕಳ್ಳ ಕಣ್ಣುಗಳು ಕಾಯುತ್ತಿರುವುದು ನಿನ್ನನ್ನೆ/ ಕರೆಯದೆ ಬರುತ್ತಿದ್ದ ನೀನು ನಿನ್ನ ನೆನಪಿನಲ್ಲೂ ಪೂರಾ ಹಾಗೆಯೆ ಹೋಲುತ್ತೀಯ.... ನೆನಪುಗಳೂ ಹೇಳದೆ ಕೇಳದೆ ದಾಳಿಯಿಡುತ್ತಿವೆಯಲ್ಲ !, ಕಣ್ಣಾಡಿಸುತ್ತಾ ಕಾದಿರುವ ಹಾದಿಯಲ್ಲಿ ನಿನ್ನ ಹಳೆಯ ಹೆಜ್ಜೆಗುರುತುಗಳು ಮಾಸುವ ಮುನ್ನ.... ಹೊಸತನ್ನ ಮತ್ತೆ ಮೂಡಿಸಲು ನೀ ಬಂದರೆ ನನಗಷ್ಟೇ ಸಾಕು.// ನೀರಲ್ಲಿ ಕರಗದ ಗಾಳಿ ಅಪಹರಿಸಲಾಗದ ಬಾನಲ್ಲಿ ಲೀನವಾಗದ ನನ್ನ ಒಲವಿಗೆ.... ಅಪ್ಪಟ ಮಣ್ಣಿನ ವಾಸನೆಯಿದೆ, ಇದೆಂದೂ ಮುಗಿಯದ ಕಥೆ ನಿನ್ನ ನೆನಪು ಮಾಸುವ ಇರಾದೆ ಇಟ್ಟುಕೊಂಡಂತಿಲ್ಲ.... ನನ್ನದು ನಿರಂತರ ವ್ಯಥೆ/ ಕಳೆದು ಕೊಂಡ ನಷ್ಟ ನನಗೋ? ಪಡೆಯದೆ ಹೋದ ಪಾಪಿ ನೀನೋ.... ಒಂದಂತೂ ನಿಜ ಎಲ್ಲೋ ಎನೋ ತಾಳತಪ್ಪಿದೆ, ಸುರಿವ ಹನಿಮಳೆಯೂ ಇಷ್ಟೊಂದು ಭೀಕರ ಶೀತಲ ಅನುಭವ ತರುವಾಗ... ನಿನ್ನ ಬೆಚ್ಛನೆ ಅಪ್ಪುಗೆಯಿಲ್ಲದ ಮುಂದಿನ ದೀರ್ಘ ಬಾಳು ದುರ್ಭರವೆನ್ನಿಸುತ್ತದೆ?!//

Wednesday, November 7, 2012

ಬಾಣ ಹೋಯ್ತು, ಪಿಸ್ತೂಲ್ ಬಂತು ಡುಂ ಡುಂ ಡುಂ....!


" ಕೇಡುಗಾಲಕ್ಕೆ ಕುದುರೆ ಮೊಟ್ಟೆಯಿಟ್ಟಿತಂತೆ!" ಹಾಗಂತ ಅನ್ನಿಸಿದ್ದು "ಕನ್ನಡ"ದ ಹಡಾಲೆದ್ದು ಹೋದ "ಪ್ರಭೆ"ಯೊಂದರ, ಅಮಾಯಕರನ್ನು ಪತ್ರಿಕೋದ್ಯಮದ ಹೆಸರಿನಲ್ಲಿ ಹೆದರಿಸಿ ದೋಚಿ ಸಂಪಾದಿಸುವ ದಗಲ್ಬಾಜಿ "ಸಂಪಾದಕ"ನ ಸಾಮಾಜಿಕ ತಾಣಗಳಲ್ಲಿನ ಚಿಲ್ಲರೆ ಶೋಕಿಯನ್ನ ನೋಡುವಾಗ ನಗು ಒತ್ತರಿಸಿಕೊಂಡು ಬರುತ್ತಿದೆ. "ನೋಡಿ ನನ್ನ ರಿವಾಲ್ವರ್!" ಎಂದು ದೀಪಾವಳಿ ಪಿಸ್ತೂಲಿನಂತದೊಂದರ ಫೋಟೋ ಹಾಕಿಕೊಂಡು "ಹೆಂಗೆ" ಅನ್ನುವಂತೆ ಹಣಮಂತನ ಮೂತಿ ಮಾಡಿಕೊಂಡು ನಿಂತ ಇವರು ತನ್ನಲ್ಲಿ "ಬಾಣ" ಇಲ್ಲದಿದ್ದರೂ "ಬಿಲ್ವಿದ್ಯೆ"ಯಲ್ಲಿ ಅತಿ ನಿಪುಣರು! ಈ ಕಾರಣಕ್ಕಾಗಿಯೆ ದಿಗ್ವಿ"ವಿಜಯ"ಯಾತ್ರೆಯನ್ನ ಕರ್ನಾಟಕದಾದ್ಯಂತ ನಡೆಸುತ್ತಿದ್ದ ನಂಬರ್ ಒನ್ ಪತ್ರಿಕೆಯಿಂದ "ಹಚ್ಯಾ" ಅಂತ ಉಗಿದಟ್ಟಿಸಿ ಕೊಂಡಿದ್ದರು. ಇದಕ್ಕೆ ಪೂರಕವಾಗಿ ಅಲ್ಲಿಯೂ "ಸಂಪಾದಕ"(?)ರಾಗಿದ್ದ ಸನ್ಮಾನ್ಯರು ಲಿಂಬೆಹುಳಿಯಂತಹ "ಬೆಡ್ ಮೇಟ್"ನ ಜೊತೆ ಒಟ್ಟೊಟ್ಟಿಗೆ ರಾಜಧಾನಿಯಲ್ಲಿ "ರಾತ್ರಿ ಕಾರ್ಯಾಚರಣೆ"ಗೆ ಇಳೀದಿದ್ದೂ ಅಶ್ಯವಾಗಿ ಸುದ್ದಿಯಾದ್ದರಿಂದ "ಇಂಡಿಯಾ"ದ ದೊಡ್ಡ ಪತ್ರಿಕಾ ಸಮೂಹದವರು ಈ ಚೋರಗುರುವನ್ನ ಇವರ ಇನ್ನೆಲ್ಲ ಚಾಂಡಾಳ ಶಿಷ್ಯಂಡಿರೊಂದಿಗೆ ಸಕಲ ಗೌರವಾದಾರಗಳೊಂದಿಗೆ ಚಾಪೆ ಚೊಂಬು ಕೊಟ್ಟು ಬೀಳ್ಕೊಟ್ಟಿತ್ತು. ಆದರೆ "ಹುಟ್ಟು ಗುಣ ಸುಟ್ಟರೂ ಹೋಗದು" ಎಂಬಂತೆ ಅಂತರ್ಜಾಲ ತಾಣಗಳಲ್ಲಿ ತಮ್ಮ ನಾಲಿಗೆ ತೀಟೆಯನ್ನ ಹಳೆಯ ಅನ್ನದಾತ ಸಂಸ್ಥೆಯ ಮೇಲೆ ವ್ಯಥಾ ವಿಷ ಕಾರುವ ಮೂಲಕ ತೀರಿಸಿಕೊಂಡಿದ್ದರು. ಆಗಲೆ ನಡುವಯಸ್ಸಿನವರಾಗಿದ್ದ ಇವರು "ಅಮೇರಿಕೆಗೆ ಹೋಗುತ್ತೀನಿ" ಅಂತಲೂ, "ಅಲ್ಲಿ ಅದೆನನ್ನೋ ಓದಿ ಗುಡ್ಡೆ ಹಾಕುತ್ತೀನಿ" ಬಹಿರಂಗವಾಗಿ ಊಳಿಟ್ಟರಾದರೂ ಇವರ ಅಸಲಿಯತ್ತನ್ನ ಬಲ್ಲ ಬಲ್ಲಿದರು "ಬಹುಶಃ ರಾತ್ರಿ 'ಕೇಳ್ರಪ್ಪೋ ಕೇಳಿ' ನಡೆಸುವಾಗ ಹೇಗೆ ಸಿಕ್ಕಿಬೀಳದೆ ಬಚಾವಾಗೋದು?" ತರದ ಯಾವುದೊ "ಅಲ್ಪ" ಅವಧಿಯ ಕೋರ್ಸನ್ನ ಅಲ್ಲಿ ಅವರು ಮಾಡಿ "ಪದವಿಧರ"ರಾಗಬಹುದು ಅಂದುಕೊಂಡು ತುಟಿ ಅಂಚಿನಲ್ಲಿಯೆ ವ್ಯಂಗ್ಯದ ನಗೆ ನಕ್ಕು ಸುಮ್ಮನಾದರು.ಆದರೆ ಅಮೇರಿಕೆಯಿರಲಿ ಪಕ್ಕದ ಅಮ್ಮಸಂದ್ರಕ್ಕೂ ವಲಸೆ ಹೋಗದ ಇಲ್ಲದ "ಬಾಣ ಭಟ್ಟ"ರು ಕರುನಾಡ ಕಂಡಕಂಡ ಪತ್ರಿಕಾ ಸಮೂಹಗಳ ಬಾಗಿಲು ತಟ್ಟಿದರೂ ೈವರ "ಸಂಪಾದಕ" ನೈಪುಣ್ಯದ ಅರಿವಿದ್ದ ಎಲ್ಲರೂ ರಾಗವಾಗಿ "ಮುಂದೋಗಪ್ಪಾ....!" ಅಂತ ಸಾಗ ಹಾಕಿ ತೊಲಗಿತು ಶನಿ ಅಂತ ನಿಟ್ಟುಸಿರು ಬಿಟ್ಟರು. ಆದರೆ "ಕನ್ನಡ" ಪತ್ರಿಕೋದ್ಯಮದಲ್ಲಿ ತನ್ನ "ಪ್ರಭಾ"ವವನ್ನ ದಟ್ಟವಾಗಿ ಬೀರಲೆ ಬೇಕೆಂದು ಪಣ ತೊಟ್ಟಿದ್ದ ಈ ತೊಟ್ಟಿ ಗ್ಯಾಂಗ್ ಗಣಿ ಕಳ್ಳ ರೆಡ್ಡಿಯಿಟ್ಟ ಸ"ಗಣಿ" ತಿಂದು ತನ್ನ ಪತ್ರಿಕೆಯನ್ನ ಬಿಕರಿಗಿಟ್ಟು ಆಗಷ್ಟೆ ಹೊಸ ಗಿರಾಕಿಯನ್ನ ಹುಡುಕಿಕೊಂಡಿದ್ದ ಮನೋಜ ಮಾರ್ವಾಡಿಯೊಬ್ಬನಿಗೆ ಒಂದು ಕೋಟಿಯ ಕಕ್ಕ ತಿನ್ನಿಸಿ ಅಲ್ಲಿಗೆ ಪುನಃ "ಮೈತುಂಬ"(?!) ಸಂಪಾದಿಸಲು ತನ್ನ ಶನಿ ಶಿಷ್ಯಂದಿರೊಂದಿಗೆ ಅಮರಿಕೊಂಡು ಬಿಟ್ಟರು. ಅಲ್ಲಿಯವರೆಗೂ ಕೇಳಿದವರಿಗಿರಲಿ ಕೇಳದವರಿಗೂ ಕರೆಕರೆದು ಕರಕರೆಯಾಗುವ ಹಾಗೆ ಅಮೇರಿಕೆಯ ಕಥೆ ಹೇಳುತ್ತಿದ್ದ ಅಮ್ಮಸಂದ್ರದ ಈ ಅರ್ಜೆಂಟ್ ಗಿರಾಕಿ ಅಲ್ಲಿಗೆ ಬಂದದ್ದೆ ತಡ ಅಲ್ಲಿವರೆಗೂ ಆ ಪತ್ರಿಕೆಗೊಂದು ಕಳೆತಂದು ಕೊಟ್ಟಿದ್ದ ಉತ್ಸಾಹಿ ಸಂಪಾದಕರು "ಶಿವಾ" ಅಂತ ಇವನೊಂದಿಗೆ ಏಗಲಾರೆ ಅಂತ ಇವನ ಮುಖಕ್ಕೆ ರಾಜಿನಾಮೆ ರಾಚಿ ಧೀಮಂತಿಕೆಯಿಂದ ಎದ್ದು ಹೊರ ಬಂದರು. ಹೀಗೆ ಮೊದಲ ದಿನವೆ ಕ್ಯಾಕರಿಸಿ ಉಗಿಸಿ ಕೊಂಡರೂ ಅಭ್ಯಾಸ ಬಲದಿಂದ ಅದನ್ನ ಒರೆಸಿಕೊಂಡ ಈ "ಜಾಣ ಭಟ್ಟ"ರು ಮತ್ತೆ ಮೊದಲಿನ ಜೋಷಿನಿಂದಲೆ "ಎನೇನೆಲ್ಲ ಮಾಡ್ತೀವಿ ನೋಡ್ತಿರಿ!" ಅಂತ ಅಕ್ರಮ "ಸಂಪಾದನೆ"ಯ ಎರಡನೆ ಸುತ್ತಿನ ಕಾರ್ಯಾಚರಣೆಗೆ ಇಳಿದರು. ಈ ಸಾರಿ "ಇಪ್ಪತ್ನಾಲ್ಕು ಕ್ಯಾರೆಟ್" ರೋಲ್ಡ್'ಗೋಲ್ಡ್ ವಾರ್ತಾವಾಹಿನಿಯೊಂದು ಇವರ ಹಿಡಿತಕ್ಕೆ ಬಂದಿದ್ದರಿಂದ "ನಿತ್ಯ" "ಋಷಿ" ಮೂಲ ಹುಡುಕಿ ತಮ್ಮ ಅಕ್ರಮ ಗಳಿಕೆಯನ್ನ ಈ ಥರ್ಡ್'ರೇಟ್ ಸಂಪಾದಕ ದಿನ ದಿನಕ್ಕೂ ವೃದ್ಧಿಸಿಕೊಳ್ಳ ತೊಡಗಿದ. ತನ್ನ "ನೂರೆಂಟು ಗೂಟ"ಗಳನ್ನ ಹಲುಬಲು ಪತ್ರಿಕೆ, ಈ ಗೂಟದ ಸುಖದ ವ್ಯವಸ್ಥೆಗೆ ಛಾನಲ್! ಅಂದಿನಿಂದ "ಬಾಣ" ಬಿಟ್ಟಲ್ಲೆಲ್ಲ ಭಟ್ಟನ ಲಾಭದ ಒಸರು ಉಕ್ಕುಕ್ಕಿ ಹರಿಯುತ್ತಿದೆ. ಈ ನಡುವೆ "ದುಬಾರಿ ಕಾರು ಕೊಂಡೆ" ಅಂತ ಬೀಗಿದ ಇವ ವಾಸ್ತವವಾಗಿ ಅದನ್ನ ಕೋಟಾ ಜ್ಯೋತಿಷಿಯೊಬ್ಬನಿಂದ ನಯಾಪೈಸೆಯ ಖರ್ಚಿಲ್ಲದೆ ಕಿತ್ತು"ಕೊಂಡಿದ್ದ" ಅನ್ನೋದು ಎಲ್ಲರಿಗೂ ಗೊತ್ತಿತ್ತು. ತನ್ನ ಹೀನಚಾಳಿಗಳನ್ನ ಎಲ್ಲರಂತೆ ತಾವೂ ಹೇಳಿಕೊಂಡು ಕ್ಯಾಕರಿಸಿದರು ಎನ್ನುವ ಏಕೈಕ ಕಾರಣಕ್ಕಾಗಿ ಇನ್ನೊಂದು "ಪಟ್ಟಣ"ದಲ್ಲಿ ಶೆಟ್ಟರಾಗಿದ್ದ ತನ್ನ ವಿದ್ಯಾಗುರುಗಳನ್ನ ವ್ಯಥಾ ತನ್ನ "ನೂರೆಂಟು ಗೂಟ"ದಲ್ಲಿ ಅನ್ಗತ್ಯವಾಗಿ ಹೀನಾಯ ತಿವಿದು ನನ್ನ ಸುದ್ದಿಗೆ ಬಂದವರಿಗೆ ಇದೇ ಗತಿ ಎನ್ನುವ ಬಹಿರಂಗ ಬೆದರಿಕೆಯೊಡ್ಡಿದ. ಇಂತಹ ಪೊಳ್ಳೂ ಬೆದರಿಕೆಗಳಿಗೆ ನಯಾಪೈಸದ ಬೆಲೆ ಕೊಡದ ಪ್ರಜ್ಞಾವಂತರು "ಅದೇನು ಕಿತ್ಕೋಳ್ತೀಯೋ ಕಿತ್ಕೋ ಹೋಗೋಲೇಯ್" ಅಂತ ಇವನ ಊಳನ್ನ ಎಡಗಾಲಲ್ಲಿ ಒದ್ದರು. ಹಿಂಗಿರೊ ಈ ಕಮಂಗಿ ಮೊನ್ನೆಮೊನ್ನೆ "ಜ್ಞಾನಜ್ಯೋತಿ" ಸಭಾಂಗಣದಲ್ಲಿ ಬಸ್ಸುಗಟ್ಟಲೆ ಮಂದಿಯನ್ನ ವಿಶ್ವವಿದ್ಯಾಲಯದ ಹಾಸ್ಟೆಲ್'ಗಳಿಂದ ತುಂಬಿಕೊಂಡು ಬಂದ ಪಾರ್ಟ್'ಟೈಮ್ ರಾಜಕಾರಣಿ ಹಾಗೂ ಫುಲ್'ಟೈಮ್ ವಿಶ್ವವಿದ್ಯಾಲಯದ ಅಧಿಕಾರಿ ಚುನಾವಣೆಯಲ್ಲಿ ಡೆಪಾಜಿಟ್ ಜಪ್ತಾಗಿದ್ದ "ಮೈಲಾರಿ"ಯ ಜೊತೆ ಸೇರಿ ಮಾಡಿದ ಗಾಂಧಿ ಕುರಿತ ಕಾರ್ಯಕ್ರಮದ ಬಹಿರಂಗ ಶ್ರಾದ್ಧದ ಪ್ರತ್ಯಕ್ಷದರ್ಶಿಗಳಾಗಿದ್ದ ಹಿರಿಯ ಗಾಂಧಿವಾದಿಗಳೊಬ್ಬರು "ಗಾಂಧಿ ಕಾರ್ಯಕ್ರಮದ ವೇದಿಕೆಯಲ್ಲಿ ಈ ಗೂಂಡಾಗಳಿಗೇನು ಕೆಲಸ?" ಅಂತ ವಿಷಾದದಿಂದ ಲೊಚಗುಟ್ಟಿದರು. ಅಲ್ಲಿನ ವೇದಿಕೆಯಲ್ಲಿ "ನಾನು ಹದಿನೈದು ವರ್ಷದ ಹಿಂದೆ ಇಂಗ್ಲೆಂಡಿಗೆ ಹೋಗಿದ್ದಾಗ ಕನ್ನಡದಲ್ಲಿ ಈ ಮೈಲ್ ಹೊಂದಿದ ಮೊದಲ ಪತರಕರ್ತ ನಾನೆ!" ಅಂತ ತನ್ನ ಎಂದಿನ ಸ್ವಕುಚ ಮರ್ದನದ ಶೈಲಿಯಲ್ಲಿ ಈ ಕಪಿ ಆತ್ಮರತಿಗಿಳಿದಿದ್ದರೆ, ಮೈಲಾರಿಯ ಹಿಂ'ಬಾಲಕ"ರು ತಮ್ಮ ಕೊರಮ ಗುರುವಿನ ಹೆಸರು ಮೈಕಿನಲ್ಲಿ ಮೊಳಗಿದಾಗಲೆಲ್ಲ ಕೂಗಿ-ಕಿರುಚಿ, ಸಿಳ್ಳೆ ಹೊಡೆದು ಯಶಸ್ವಿಯಾಗಿ ಕಾರ್ಯಕ್ರಮದ ಆಶಯವನ್ನ ಹಳ್ಳ ಹಿಡಿಸಿಯೆಬಿಟ್ಟರು. ನಿಜವಾಗಿಯೂ ಕಾರ್ಯಕ್ರಮದ ಕುರಿತ ಆಸಕ್ತಿ ಹೊತ್ತು ಹೋದವರಿಗೆ ಅಂದು ಗತಿಯಾದದ್ದು ಕೇವಲ ನಿಟ್ಟುಸಿರು!. ಹಾಗೆ ನೋಡಿದರೆ ತನ್ನ ಪೂರ್ವಾಶ್ರಮದ ಪತ್ರಿಕೆಯಲ್ಲಿ "ಮೈಲಾರಿ"ಯ ಮಗ್ಗುಲು ಮುರಿಯುತ್ತಿದ್ದ ಈ ಬಾಣಭಟ್ಟ ಈಗ ಅದೆ ಮೈಲಾರಿಯನ್ನ ಅಪ್ಪಿ ಮುದ್ದಾಡುವಲ್ಲಿ ಕೈ ಬದಲಾಗಿರುವ ಮೈಲಿಗೆಯಾಗಿರುವ ಹಡಬೆ ಕಾಂಚಣದ ಝಣಝಣದ ಹಿರಿದಾದ ಪಾತ್ರ ಇರೋದು ಬಹಿರಂಗ ಗುಟ್ಟು. ಅದೆ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಗಳೆ ಹಾಜರಿದ್ದರೂ ಕುಲ ಸಚಿವರಿಗೆ ಮೊದಲ ಮಣೆ ಹಾಕಿದ ಅಪಸವ್ಯಗಳನ್ನೂ ಭಟ್ಟಂಗಿ ಬಾಣಭಟ್ಟ ನಡೆಸಿ ಧನ್ಯನಾದ. ಎಷ್ಟೆಂದರೂ ಬಾಚಿ ತಿಂದ ಕೊಳಕು ಕಾಸಿನ ಋಣ!. ಇವೆಲ್ಲವನ್ನೂ ಕಡೆಪಕ್ಷ ಇಷ್ಟು ದಿನ ತೆರೆಮರೆಯಲ್ಲಿ ಮಾಡಿ ಸಿಗ ಬೀಳುತ್ತಿದ್ದ ಈ "ಸಂಪಾದಕ" ಕೈಪಾರ್ಟಿಯ 'ವಿಗ್'ನೇಶ್ವರ ವಿದೇಶಾಂಗ ಖಾತೆಯಿಂದ ಮರಳಿ ಮಂಡ್ಯದ ಮಣ್ಣಿಗೆ ಮೊನ್ನೆಮೊನ್ನೆಯಷ್ಟೆ ಬಂದಾಗ "ಇನ್ನು ನನ್ನ ಪುಕ್ಸಟ್ಟೆ ವಿಮಾನದಲ್ಲಿ ಫಾರಿನ್ ಸುತ್ಸವ್ರ್ ಯಾರು?" ಅಂತ ಬಹಿರಂಗವಾಗಿ ರೋಧಿಸಿ ಎಲ್ಲರ ನಗೆಪಾಟಲಿಗೆ ಈಡಾದ. ಈ ಹಿಂದೆ "ಫಾರಿನ್ ಕೃಷ್ಣ" ಮಾಡಿಸಿದ್ದ ಬಿಟ್ಟಿ ಟ್ರಿಪ್ಪಿಗೆ ಮುಂದಿನ ದಿನಗಳಲ್ಲಿ "ಪ್ರ್ಭಭಾ"ವಶಾಲಿ ಭೋಪರಾಕನ್ನ ಕನ್ನಡದ ಕಣ್ಮಣಿಗಳು ಇನ್ನು ಮುಂದೆ ನಿರೀಕ್ಷಿಸಬಹುದು. ಜೊತೆಗೆ ಇಲ್ಲದ ಬಾಣದ ಜಾಗದಲ್ಲಿ ಹೊಸತಾಗಿ ಕೊಂಡುಕೊಂಡ "ದೀಪಾವಳಿ ಪಿಸ್ತೂಲು" ಬೇರೆ! ಈ ಖದೀಮರನ್ನ ಕ್ಯಾಕರಿಸಿ ದೂರವಿರಿಸಲು ಕನ್ನಡಿಗರಿಗೆ ಹೊಸತೊಂದು ಕಾರಣ ಸಿಕ್ಕಂತಾಯಿತು.

Friday, November 2, 2012

ಕೊಡಚಾದ್ರಿ





ಕೊಡಚಾದ್ರಿ ಬೆಟ್ಟ ಸಾಲುಗಳು ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಇವೆ. ಇದರಲ್ಲಿ ಕೊಡಚಾದ್ರಿ ಬೆಟ್ಟದ ಎತ್ತರ ಸಮುದ್ರ ಮಟ್ಟದಿಂದ ಸುಮಾರು ೧೩೪೩ ಮೀ. ಕೊಡಚಾದ್ರಿ ಬೆಟ್ಟವು ಪ್ರಸಿದ್ದ ಯಾತ್ರಾ ಸ್ಥಳವಾದ ಕೊಲ್ಲೂರುಮೂಕಾಂಬಿಕ ದೇವಸ್ಥಾನದ ಹಿನ್ನೆಲೆಯಲ್ಲಿ ಇದ್ದು ಪ್ರಕೃತಿ ಪ್ರಿಯರಿಗೆ ಹಾಗು ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗ. ಕೊಡಚಾದ್ರಿ ಬೆಟ್ಟ ಸಾಲುಗಳು ಮೂಕಾಂಬಿಕ ವನ್ಯ ಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಕೊಡಚಾದ್ರಿ ಬೆಟ್ಟದ ಮೇಲೆ ಸರ್ವಜ್ಞ ಪೀಠವೆಂಬ ಒಂದು ಸಣ್ಣ ದೇವಾಲಯವಿದೆ. ಈ ಜಾಗದಲ್ಲಿ ಭಗವಾನ್ ಶ್ರೀ ಶಂಕರಾಚಾರ್ಯರು ತಪಸ್ಸು ಮಾಡಿದ್ದರು ಎಂದು ಪ್ರತೀತಿ. ಸರ್ವಜ್ಞ ಪೀಠಕ್ಕಿಂತ ೨ ಕಿ.ಮೀ ಮೊದಲು ಮೂಲ ಮೂಕಾಂಬಿಕ ದೇವಸ್ಥಾನವಿದೆ. ಸರ್ವಜ್ಞ ಪೀಠದಿಂದ ಮುಂದಕ್ಕೆ ಕಡಿದಾದ ಬೆಟ್ಟವನ್ನು ಇಳಿದರೆ ಚಿತ್ರಮೂಲ ಎಂಬ ಸ್ಥಳ ತಲುಪಬಹುದು. ಇದು ಸೌಪರ್ಣಿಕ ನದಿಯ ಉಗಮ ಸ್ಥಾನ. ಈ ಜಾಗವು ಹಲವಾರು ಜಾತಿಯ ಸಸ್ಯಗಳಿಗೆ ಹೆಸರುವಾಸಿಯಾಗಿದೆ. ಕೊಡಚಾದ್ರಿ ಬೆಟ್ಟವು ದಟ್ಟವಾದ ಅರಣ್ಯ ಹಾಗು ಶೋಲ ಕಾಡುಗಳಿಂದ ಆವೃತವಾಗಿದೆ.ಇಪ್ಪತ್ತನೆಯ ಶತಮಾನದಲ್ಲಿ ಪಶ್ಚಿಮ ಘಟ್ಟಗಳಲ್ಲಿ ವ್ಯಾಪಕವಾಗಿ ಸುತ್ತಾಡಿದ ಲೇಖಕ ಮತ್ತು ಪರಿಸರ ಪ್ರೇಮಿ ಡಾ.ಶಿವರಾಮ ಕಾರಂತರು ಒಂದೆಡೆ ಇದನ್ನು ದಾಖಲಿಸಿದ್ದಾರೆ. ಸಹ್ಯಾದ್ರಿಯ ಈ ಭಾಗದಲ್ಲಿ ಮೇಲೆದ್ದಿರುವ ಮೂರು ಪರ್ವತ ಶಿಖರಗಳನ್ನು ಕಾಲ್ನಡಿಗೆಯಲ್ಲಿ ಏರಿದ ಡಾ|ಕಾರಂತರ ಪ್ರಕಾರ ಕುದುರೆಮುಖ ಶಿಖರವು ಅತ್ಯಂತ ದೂರದ ಚಾರಣ, ಕುಮಾರ ಪರ್ವತವು ತುಂಬಾ ಕಠಿಣವೆನಿಸುವ ದಾರಿ; ಮತ್ತು ಕೊಡಚಾದ್ರಿಯು ಇವೆಲ್ಲ ಕ್ಕಿಂತಲೂ ಚಂದದ ತಾಣ.


Krupe _ http://kn.wikipedia.org

ಪೋಸ್ಟರ್ - by Hariprasad Holla ( Face book)


ಸುದ್ದಿ - - By Arun Javgal


ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕನ್ಮಡ ಪುಸ್ತಕ ಪ್ರಾದಿಕಾರದವರು ಮುಂದಿನ 10 ದಿನಗಳವರೆಗೆ ಕನ್ನಡ ಹೊತ್ತಗೆಯ 

ಅಂಗಡಿಯನ್ನು ಹಾಕಿದ್ದಾರೆ. ನೀವೆನಾದ್ರು ವಿಮಾನ ನಿಲ್ದಾಣಕ್ಕೆ ಹೋದರೆ ಈ ಅಂಗಡಿಯಿಂದ ಕನ್ನಡದ ಹೊತ್ತಿಗೆಯನ್ನು 

ಕೊಳ್ಳುವುದನ್ನು ಮರೆಯದಿರಿ. ಈ ವಿಶಯವನ್ನು ವಿಮಾನ ನಿಲ್ದಾಣಕ್ಕೆ ಹೋಗೊ ನಿಮ್ಮ ಸ್ನೇಹಿತರು/ಸಂಬಂದಿಕರಿಗೂ ತಿಳಿಸಿ.

ಸುದ್ದಿ -