ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Tuesday, May 31, 2011

ಮಂಕುತಿಮ್ಮನ ಕಗ್ಗ

 ಮಂಕುತಿಮ್ಮನ ಕಗ್ಗ


ಮಂಕುತಿಮ್ಮನ ಕಗ್ಗ - ಡಿ.ವಿ.ಜಿ.ಯವರ ಪದ್ಯ ಪುಸ್ತಕ. ಇದು ಕನ್ನಡದ -ಭಗವದ್ಗೀತೆ ಎಂದೆ ಕೆಲವರಲ್ಲಿ ಜನಪ್ರಿಯವಾಗಿದೆ. ಇದರಲ್ಲಿ ಡಿ.ವಿ.ಜಿ.ಯವರು ಜೀವನದ ವಿಶಿಷ್ಟ ಆಯಾಮಗಳನ್ನು,ಜೀವನದ ರೀತಿ ನೀತಿಗಳನ್ನು ಉದಾಹರಣೆ ಸಮೇತವಾಗಿ ವಿವರಿಸಿದ್ದಾರೆ. ಇದರಲ್ಲಿ ಮಹಾಭಾರತ, ರಾಮಾಯಣಗಳಲ್ಲದೆ ಪ್ರಸಕ್ತ ಕಾಲದ ಘಟನೆಗಳನ್ನು ಉಲ್ಲೆಖಿಸಿ ಜೀವನದ ಮೌಲ್ಯಗಳನ್ನು ವಿವರಿಸಲಾಗಿದೆ. ಇದನ್ನು ಕನ್ನಡಿಗರ ಭಗವದ್ಗೀತೆ ಸಹ ಎನ್ನಬಹುದು, ಆದರೆ ಡಿ.ವಿ.ಜಿ.ಯವರಿಗಾಗಲಿ, ಈ ಪುಸ್ತಕಕ್ಕಾಗಲಿ ತಕ್ಕ ಪ್ರಚಾರ ಹಾಗು ಗೌರವ ಸಿಕ್ಕಿಲ್ಲ ಎನ್ನುವುದು ವಿಪರ್ಯಾಸದ ಸಂಗತಿಯೆಂದು ಸಾಹಿತ್ಯಾಸಕ್ತರು ಪ್ರತಿಪಾದಿಸುತ್ತಾರೆ. ಈ ಪುಸ್ತಕದ ಉಲ್ಲೇಖಗಳನ್ನು ಕನ್ನಡಿಗರ ಉಪನ್ಯಾಸಾಳಲ್ಲಿ ಹಾಗೂ ಪುರಾಣದ ಚರ್ಚೆಗಳಲ್ಲಿ ಧೀಮಂತ ಜನರು ಉಪಯೋಗಿಸುತ್ತಾರೆ.ಈ ಪುಸ್ತಕವು ಇಂಗ್ಲಿಷ್, ಫ್ರೆಂಚ್ ಹಾಗೂ ಹಲವಾರು ಭಾಷೆಗಳಲ್ಲಿ ಅನುವಾದಗೊಂಡಿದೆ.

Monday, May 30, 2011

ಗಿರಣಿ ವಿಸ್ತಾರ ನೋಡಮ್ಮ

ಗಿರಣಿ ವಿಸ್ತಾರ ನೋಡಮ್ಮ
ಶರಣಿ ಕೂಡಮ್ಮ ||ಪಲ್ಲ||

ಧರಣಿಪತಿಯು ರಾಣಿ
ಕರುಣಾಕ ರಾಜ್ಯಕೆ
ತರಿಸಿದ ಘನಚೋದ್ಯವೋ ಚೀನಾದ ವಿದ್ಯವೋ ||ಅ.ಪ.||

ಜಲ ಅಗ್ನಿ ವಾಯು ಒಂದಾಗಿ
ಕಲೆತು ಚಂದಾಗಿ
ಜಲ ಅಗ್ನಿ ವಾಯು ಒಂದಾಗಿ
ನೆಲದಿಂದ ಗಗನಕ್ಕೆ ಮುಟ್ಟಿದಂತೆಸುವುದು
ಚಲುವ ಚನ್ನಿಗವಾದ ಕಂಭವೋ, ಹೊಗಿಯ ಬಿಂಬವೋ ||೧||

ಒಳಗೊಂದು ಬೇರೆ ಆಕಾರ
ತಿಳಕೋ ಚಮತ್ಕಾರ
ಒಳಗೊಂದು ಬೇರೆ ಆಕಾರ
ದಳಗಳೊಂಭತ್ತು ಚಕ್ರ ಸುಳಿವ ಸೂತ್ರಾಧಾರ
ಲಾಳಿ ಮೂರು ಕೊಳಿವಿಯೊಳು ಎಳೆ ತುಂಬುತದರೊಳು ||೨||

ಅಲ್ಲಿ ಬರದಿಟ್ಟರಳಿ ಹಿಂಜಿ
ಅಲ್ಯಾದವು ಹಂಜಿ
ಅಲ್ಲಿ ಬರದಿಟ್ಟರಳಿ ಹಿಂಜಿ
ಗಾಲಿಯೆರಡರ ಮೇಲೆ ಮೂಲಬ್ರಹ್ಮದ ಶೀಲ
ನಾಡಿ ಸುಷುಮ್ನನು ಕೂಡಿ ಅಲ್ಲಾಯ್ತೋ ಕುಕ್ಕಡಿ ||೩||

ಪರಮಾನೆಂಬುವ ಪಟ್ಟೇವೋ ಅಲ್ಲೆ
ಮಾರಾಟಕಿಟ್ಟೇವೋ
ಪರಮಾನೆಂಬುವ ಪಟ್ಟೇವೋ
ಧರೆಯೊಳು ಶಿಶುನಾಳ ದೇವಾಂಗ ಋಷಿಯಿಂದ
ನೇಸಿ ಹಚ್ಚಡ ಹೊಚ್ಚಿತೋ ಲೋಕ ಮೆಚ್ಚಿತೋ ||೪||

Sunday, May 29, 2011

ಮನಸೇ ಮನಸಿನ ಮನಸ ನಿಲ್ಲಿಸುವುದು

ಮನಸೇ ಮನಸಿನ ಮನಸ ನಿಲ್ಲಿಸುವುದು
ಮನಸಿನ ಮನ ತಿಳೀಯುವ ಮನ ಬ್ಯಾರೆಲೊ ಮನಸೇ.
ತನುತ್ರಯದೊಳು ಸುಳಿದಾಡುವ ಜೀವದ
ಗುಣವರಿತರೆ ನಿಜ ಬ್ಯಾರೆಲೊ ಮನಸೇ.

ದಶದಿಕ್ಕಿಗೆ ಹಾರಾಡುವ ಹಕ್ಕಿಯು
ವಶವಾಗಲಾಪರಿ ಬ್ಯಾರೆಲೊ ಮನಸೇ.
ಗೋವಿಂದ ಗುರುವಿನ ಚರಣ ಕಮಲದವಳು
ಗಾನಗೈಯೆಲೊ ಭ್ರಮರಾಳೀಯ ಮನಸೇ.

ವಿಷಯಗಳಲಿ ಸುಖಬಯಕೆ ಬಯಸಿ ಬಲು
ಕಸಿವಿಸಿಗೊಂಬುವುದೇತಕೊ ಮನಸೇ.
ಇಳೆಯೊಳು ಶಿಶುನಾಳಾಧೀಶ ನಿರ್ಮಲನ
ತಿಳಿದರೆ ಒಳಹೊರಗೊಂದೆಲೊ ಮನಸೇ.

Saturday, May 28, 2011

ಎಲ್ಲರಂಥವನಲ್ಲ ನನ ಗಂಡ

ಎಲ್ಲರಂಥವನಲ್ಲ ನನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ ಗಂಡ ||ಪಲ್ಲ||

ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲಿಗೋಗದ್ಹಾಂಗ ಮಾಡಿಟ್ಟಾ
ಕಾಲ್ಮುರಿದು ಬಿಟ್ಟಾ ||ಅ.ಪ.||

ಮಾತಾಪಿತರ ಮನೆಯೊಳಿರುತಿರಲು
ಮನಸೋತು ಮೂವರು
ಪ್ರೀತಿಗೆಳೆತನ ಮಾತಿನೊಳತಿರಲು
ಮೈನೆರೆತು ಮಾಯದಿ
ಘಾತವಾಯಿತು ಯವ್ವನವು ಬರಲು
ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲಿ ಕೂಡಿ ||೧||

ಅಕ್ಕತಂಗಿಯರಾರು ಮಂದಿಗಳಾ
ಅಗಲಿಸಿದನೈವರ
ಕಕ್ಕುಲಾತಿಯ ಅಣ್ಣತಮ್ಮಗಳಾ
ನೆದರೆತ್ತಿ ಮ್ಯಾಲಕ
ನೋಡಗೊಡದೇ ಹತ್ತು ದಿಕ್ಕುಗಳಾ
ಮಾಡಿದನೆ ಮರುಳಾ
ತೆಕ್ಕೆಯೊಳು ಬಿಗಿದಪ್ಪಿ ಸುರತಾ-
ನಂದಸುಖ ತಾಂಬೂಲ ರಸಗುಟ-
ಗಿಕ್ಕಿ ಅಕ್ಕರತಿಯಲಿ ನಗುವನು ತಾ
ಬಹು ಸುಗುಣನೀತಾ ||೨||

ತುಂಟನಿವ ಸೊಂಟಮುರಿ ಹೊಡೆದಾ
ಒಣ ಪಂಟುಮಾತಿನ
ಗಂಟಗಳ್ಳರ ಮನೆಗೆ ಬರಗೊಡದಾ
ಹದಿನೆಂಟು ಮಂದಿ
ಕುಂಟಲಿಯರ ಹಾದಿಯನು ಕಡಿದಾ
ಎನ್ನ ಕರವ ಪಿಡಿದಾ
ಕುಂಟಕುರುಡಾರೆಂಟು ಮಂದಿ
ಗಂಟು ಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ
ತಕ್ಕವನೆ ಸಿಕ್ಕಾ ||೩||

ಅತ್ತೆಮಾವರ ಮನೆಯ ಬಿಡಿಸಿದನೇ
ಮತ್ತೆಲ್ಲಿ ಮೂವರ
ಮಕ್ಕಳೈವರು ಮಮತೆಯ ಕೆಡಿಸಿದನೇ
ಎನ್ನನು ತಂದು
ರತ್ನಜ್ಯೋತಿಯ ಪ್ರಭೆಯೊಳಿರಿಸಿದನೇ
ಎನಗೊತ್ತಿನವನು
ಎತ್ತ ಹೋಗದೆ ಚಿತ್ತವಗಲದೆ
ಗೊತ್ತಿನಲಿ ಇಟ್ಟು ಎನ್ನನು
ಮುತ್ತಿನಾ ಮೂಗುತಿಯ ಕೊಟ್ಟಾನೇ
ಅವನೇನು ದಿಟ್ಟನೇ ||೪||

ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂಥ ಪುರುಷನು
ಬಂದು ದೊರಕಿದ ಪುಣ್ಯಫಲದಿಂದಾ
ಎನ್ನಂತರಂಗದ
ಕಾಂತ ಶ್ರೀ ಗುರುನಾಥ ಗೋವಿಂದಾ
ಶಿಶುನಾಳದಿಂದ
ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಗೆ ಒಯ್ದು
ಭ್ರಾಂತಿ ಭವ ದುರಿತವನು ಪರಿಹರಿಸಿ
ಚಿಂತೆಯನು ಮರಸಿ ||೫||

Friday, May 27, 2011

ದುಡ್ಡು ಕೆಟ್ಟದ್ದು ನೋಡಣ್ಣ - ದುಗ್ಗಾಣಿಗೆ

ದುಡ್ಡು ಕೆಟ್ಟದ್ದು ನೋಡಣ್ಣ - ದುಗ್ಗಾಣಿಗೆ
ದಡ್ಡನಾಗಬೇಡೋ, ತಿಂದೀ ನೀ ಮಣ್ಣ !
ದುಡ್ಡು ಕೆಟ್ಟದ್ದೊ ಹೆಡ್ಡ ಮೂಢಾತ್ಮ
ದೊಡ್ಡ ದೊಡ್ಡವರನ್ನೆ ಹೆಗ್ಗಾಲು ಇಡಿಸಿತು.

ದುಡ್ಡು ಕೆಟ್ಟದ್ದು ನೋಡಣ್ಣ
ಹೆಣ್ಣಿನ ಪೂಜೆಗೆ ಇಳಿಸಿ - ಮಣ್ಣಿನ
ಸಂತೇಲಿ ಇಲ್ಲದ ಮರ್ಯಾದೆ ಕೊಡಿಸಿ
ಮಿಣ್ಣನೆ ತಿಂದೀತು ಒಳಗ - ಮೆಲ್ಲನೆ

ಥಣ್ಣಗ ಮಾಡೀತು ಬೆಂಕಿಯ ಕಿಡಿ.
ರೊಕ್ಕ ಮುಕ್ಕಿಸೀತು ಮಣ್ಣು - ಅದ
ತಕ್ಕಂತೆ ಬಳಸಲು ತೆರೆಸೀತು ಕಣ್ಣು
ಮುಕ್ಕುವ ಚಪಲ ಏಕಿನ್ನು - ಮುಕ್ಕಿ

ಬಿಕ್ಕಳಿಸಲು ಕುಡಿಸೀತು ನೀರನ್ನು.
ಆಸೆ ಬಿದ್ದು ಮನದ ಮಾರಿ
ಹೊಂಟ್ಯಳೊ ಹುಡುಕುತ್ತ ನೂರೆಂಟು ಕೇರಿ
ಕಾಸು ಕಾಸನ್ನೂ ಹೆಕ್ಕಿ - ಮೂಳಿ
ಶಿಶುನಾಳಾಧಿಶನ ಮರೆತಾಳು ಸೊಕ್ಕಿ.

Thursday, May 26, 2011

ಬಿಡತೇನಿ ದೇಹ ಬಿಡತೇನಿ

ಬಿಡತೇನಿ ದೇಹ ಬಿಡತೇನಿ ||ಪಲ್ಲ||

ಬಿಡತೇನಿ ದೇಹವ ಕೊಡತೇನಿ ಭೂಮಿಗೆ
ಇಡತೇನಿ ಮಹಿಮಾದ ನಡತೆ ಹಿಡಿದು ದೇಹಾ ||೧||

ಪಾವಕಾಗುಹುತಿ ಮಾಡಿ ಜೀವನದಸು
ನಾ ಬೇರೆ ಬೈಲು ಬ್ರಹ್ಮದೊಳಾಡುತಲಿ ದೇಹಾ ||೨||

ಅವನಿಯೊಳು ಶಿಶುನಾಳಧೀಶನೆ ಗತಿಯೆಂದು
ಜವನಬಾಧೆಗೆದ್ದು ಶಿವಲೋಕದೊಳು ದೇಹಾ ಬಿಡತೇನಿ ||೩||

Wednesday, May 25, 2011

ಕೋಡಗನ್ನ ಕೋಳಿ ನುಂಗಿತ

ಕೋಡಗನ್ನ ಕೋಳಿ ನುಂಗಿತ
ನೋಡವ್ವ ತಂಗಿ ||ಪಲ್ಲ||

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ಲಿ ನುಂಗಿತ ||೧||

ಒಳ್ಳು ಒನಕಿಯ ನುಂಗಿ
ಬೀಸುಕಲ್ಲು ಗೂಟವ ನುಂಗಿ
ಕುಟ್ಟಲಿಕೆ ಬಂದ ಮುದುಕಿಯ ನೊಣವು ನುಂಗಿತ ||೨||

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನ ಕುಣಿಯು ನುಂಗಿತ ||೩||

ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕಟ ತಿರುವೊ ಅಣ್ಣನ ಮೇಳಿ ನುಂಗಿತ ||೪||

ಗುಡ್ಡ ಗಂವ್ಹರ ನುಂಗಿ
ಗಂವ್ಹರ ಇರಿವೆ ನುಂಗಿ
ಗುರುಗೋವಿಂದನ ಪಾದ ಆತ್ಮ ನುಂಗಿತ ||೫||

Tuesday, May 24, 2011

ಹುಟ್ಟಿದ ಹೊಲಿಮನಿ

ಹುಟ್ಟಿದ ಹೊಲಿಮನಿ
ಬಿಟ್ಟರೆ ಖಾಲಿಮನಿ
ಎಷ್ಟಿದ್ದರೇನಿದು ಗಳಿಗಿ ಮನಿ.


ವಸ್ತಿ ಇರುವ ಮನಿ
ಗಸ್ತಿ ತಿರುಗೋ ಮನಿ
ಶಿಸ್ತಿಲೆ ಕಾಣುವ ಶಿವನ ಮನಿ.

ಚಿಂತೆ ಕಾಂತೆಯ ಮನಿ
ಸಂತಿ ಸವತಿಯ ಮನಿ
ಅಂತು ಬಲ್ಲವರಿಗೆ ಆಡೂ ಮನಿ.


ಒಂಬತ್ತು ದ್ವಾರ ದಾಟಿ
ಗಂಟಿಕ್ಕಿ ಹೋಗುವಾಗ
ಗಂಟೆ ಬಾರಿಸಿದಂತೆ ಗಾಳಿಮನಿ.


ವಸುಧೆಯೊಳಗೆ ನಮ್ಮ
ಶಿಶುನಾಳಧೀಶನ
ಹಸನಾದ ಪದಗಳ ಹಾಡೂ ಮನಿ.

Monday, May 23, 2011

ಎಂಥಿಂಥಾದೆಲ್ಲಾನು ಬರಲಿ

ಎಂಥಿಂಥಾದೆಲ್ಲಾನು ಬರಲಿ
ಚಿಂತೆಯಂಬೋದು ನಿಜವಾಗಿರಲಿ ||ಪಲ್ಲ||
ಪರಾತ್ಪರನಾದ ಗುರುವಿನ
ಅಂತಃಕರಣ ಒಂದು ಬಿಡದಿರಲಿ ||ಅನುಪಲ್ಲ||

ಬಡತನೆಂಬುದು ಕಡೆತನಕಿರಲಿ
ವಡವಿ ವಸ್ತ ಹಾಳಾಗಿ ಹೋಗಲಿ
ನಡುವಂಥ ದಾರಿಯು ತಪ್ಪಿ
ಅಡವಿ ಸೇರಿದಂತಾಗಿ ಹೋಗಲಿ ||೧||

ಗಂಡಸ್ತಾನ ಇಲ್ಲದಂತಾಗಲಿ
ಹೆಂಡರು ಮಕ್ಕಳು ಬಿಟಗೊಟ್ಟು ಹೋಗಲಿ
ಕುಂಡಿ ಕುಂಡಿ ಸಾಲ್ದವರೊದೆಯಲಿ
ಬಂಡು ಮಾಡಿ ಜನರು ನಗಲಿ ||೨||

ನಂಬಿಗೆ ಎಳ್ಳಷ್ಟಿಲ್ಲದಂತಾಗಲಿ
ಅಂಬಲಿ ಎನಗೆ ಸಿಗದೆ ಹೋಗಲಿ
ಹುಂಬಸುಳೇಮಗನೆಂದು ಬೈಯಲಿ
ಕಂಬಾ ಮುರಕೊಂಡು ಎನ್ನ ಮ್ಯಾಲೆ ಬೀಳಲಿ ||೩||

ವ್ಯಾಪಾರುದ್ಯೋಗ ಇಲ್ಲದಾಂಗಾಗಲಿ
ಬುದ್ಧಿಯೆಂಬುದು ಮಸಣಿಸಿ ಹೋಗಲಿ
ಮದ್ದು ಹಾಕಿ ಎನ್ನನು ಕೊಲ್ಲಲಿ
ಹದ್ದು ಕಾಗಿ ಹರಕೊಂಡು ತಿನ್ನಲಿ ||೪||

ಭಾಷೆ ಪಂಥ ನಡಿದ್ಹಾಂಗಾಗಲಿ
ಹಾಸ್ಯ ಮಾಡಿ ಜನರೆಲ್ಲರು ನಗಲಿ
ಈ ಶಿಶುನಾಳಧೀಶ ಸದ್ಗುರುವಿನ
ಲೇಸಾದ ದಯವೊಂದು ಕಡೆತನಕಿರಲಿ ||೫||


Sunday, May 22, 2011

ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ

ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ ||ಪಲ್ಲ||

ಕರ ಪಿಡಿದು ಎನ್ನ ಕರಣದೊಳಗೆ ಮೊದಲು
ವರಮಂತ್ರ ಬೋಧಿಸಿ ಕರವಿಟ್ಟು ಶಿರದೊಳು ||೧||

ಮಸ್ತಕ ಪಿಡಿದೆತ್ತಿ ಹಸ್ತದಿ ತರ್ಕೈಸಿ
ದುಸ್ತರ ಭವಬಾಧೆ ಕಸ್ತು ಬಿಸಾಕಿದಿ ||೨||

ಗುರುವರ ಗೋವಿಂದ ಪರಮಗಾರುಡಿಗ ನೀ—
ನಿರುತಿಹೆ ತಿಳಿಯದು ನರರಿಗೆ ಪರಿಯಿದು ||೩||

Saturday, May 21, 2011

ಒಳ್ಳೇ ನಾರಿ ಕಂಡೆ

.ಒಳ್ಳೇ ನಾರಿ ಕಂಡೆ
ಒಳ್ಳೇ ನಾರಿ ಕಂಡೆ - ಈಗಲೆ
ಒಳ್ಳೇ ನಾರಿ ಕಂಡೆ,
ಇಳೆಯ ತಳದಿ ತಪದೊಳು ನಿಂತು
ಕಳೆಯ ಋಷಿಗಳ ಮರಳು ಮಾಡುವ



ಕೈಯು ಕಾಲು - ಉಸುರು
ಮೈಯಿ ಮೊದಲೆ ಇಲ್ಲ;
ಚೆಲ್ಲುತ ಪರಮಾನಂದ ಎದಿಯೊಳು
ಎಲ್ಲವ ಬಿಡಿಸಿ ಕರುಣದಿ ಕಾಯುವ

ಮುಟ್ಟಲು ಕೊಲ್ಲುವಳೋ - ಕಾಮನ
ಕಟ್ಟಿ ಆಳುತಿಹಳೊ ;
ಬಟ್ಟಕುಂಚಕ, ಬರೆದಿಟ್ಟ ಕುಪ್ಪಸಕ
ನಟ್ಟು ಮನಸು ನಡೆಗೆಟ್ಟು ನಿಂತಿತೋ.

ಮೀಸಲು ನಗೆಯುವಳು - ಶಿಶುನಾಳಾ
ಧೀಶಗೆ ಸೋತವಳು ;
ವಾಸಿಸಿ ಗುಡಿಪುರದಿ - ಗೋವಿಂದನ
ದಾಸರನ್ನು ತಾ ಸೆಳೆಯುತಲಿಹಳು.

Friday, May 20, 2011

ಮೋಹದ ಹೆಂಡತಿ ಸತ್ತ ಬಳಿಕ

ಮೋಹದ ಹೆಂಡತಿ ಸತ್ತ ಬಳಿಕ
ಮಾವನ ಮನೆಯ ಹಂಗಿನ್ನ್ಯಾಕೋ ||ಪಲ್ಲ||
ಸಾವು ನೋವಿಗೆ ತರುವ ಬೀಗನ
ಮಾತಿನ ಹಂಗೊಂದೆನಗ್ಯಾಕೋ ||ಅನುಪಲ್ಲ||

ಖಂಡವನದಿ ಸೋಂಕಿ ತನ್ನ ಮೈಯೊಳು ತಾಕಿ
ಬಂಡೆದ್ದು ಹೋಗುವದು ಭಯವ್ಯಾಕೋ
ಮಂಡಲನಾಡಿಗೆ ಪಿಂಡದ ಗೂಡಿಗೆ
ಚಂಡಿತನದಿ ಚರಿಸ್ಯಾಡುವದ್ಯಾಕೋ ||೧||

ತಂದೆ ಗುರುಗೋವಿಂದನ ಸೇವಕ
ಕುಂದಗೋಳಕೆ ಬಂದು ನಿಂತಾನ್ಯಾಕೋ
ಬಂಧುರ ಶಿಶುನಾಳಧೀಶನ ದಯದಿಂದ
ಇಂದಿಗೆ ವಿಷಯದ ವ್ಯಸನಗಳ್ಯಾಕೋ ||೨||

Thursday, May 19, 2011

ನನ್ನ ಹೇಣ್ತೆ ನನ್ನ ಹೇಣ್ತೆ

ನನ್ನ ಹೇಣ್ತೆ ನನ್ನ ಹೇಣ್ತೆ
ನಿನ್ನ ಹೆಸರೇನ್ಹೇಳಲಿ ಗುಣವಂತೆ ||ಪಲ್ಲ||

ಘನಪ್ರೀತಿಲೆ ಈ ತನುತ್ರಯದೊಳು
ದಿನ ಅನುಗೂಡೂನು ಬಾ ಗುಣವಂತೆ ||ಅನುಪಲ್ಲ||

ಮೊದಲಿಗೆ ತಾಯ್ಯಾದಿ ನನ್ನ ಹೇಣ್ತೆ ಮತ್ತೆ
ಸದನಕ ಸೊಸಿಯಾದಿ ನನ್ನ ಹೇಣ್ತೆ ಮತ್ತೆ
ಮುದದಿಂದ ಮೋಹಿಸಿ ಮದುವ್ಯಾದವನಿಗೆ
ಮಗಳೆಂದೆನಿಸಿದೆ ನನ್ನ ಹೇಣ್ತೆ ||೧||

ಅತ್ತಿಗಿ ನಾದುನಿ ನನ್ನ ಹೇಣ್ತೆ
ನಮ್ಮತ್ಯಾಗಿ ನಡಿದೀಯೇ ನನ್ನ ಹೇಣ್ತೆ
ತುತ್ತು ನೀಡಿ ಎನ್ನೆತ್ತಿ ಆಡಿಸಿದಿ
ಹೆತ್ತವ್ವನೆನಸಿದೆ ನನ್ನ ಹೇಣ್ತೆ
ಚಿಕ್ಕಮ್ಮನ ಸರಿ ನೀ ನನ್ನ ಹೇಣ್ತೆ ಎನಗ
ತಕ್ಕವಳೆನಿಸಿದೆ ನನ್ನ ಹೇಣ್ತೆ ||೨||

ಅಕ್ಕರದಲ್ಲಿ ಅನಂತಕಾಲಾ ನಮ್ಮ
ಅಕ್ಕಾಗಿ ನಡೆದೆಲ್ಲ ನೀ ನನ್ನ ಹೇಣ್ತೆ
ಬಾಳೊಂದು ಚಲ್ವಿಕೆ ನನ್ನ ಹೇಣ್ತೆ
ಆಳಾಪಕೆಳಸಿದೆ ನನ್ನ ಹೇಣ್ತೆ
ಜಾಳಮಾತಲ್ಲವು ಜಗದೊಳು ಮೋಹಿಸಿ
ಸೂಳೆ ಎಂದೆನಿಸಿದೆ ನನ್ನ ಹೇಣ್ತೆ ||೩||

ಮಂಗಳರೂಪಳೆ ನನ್ನ ಹೇಣ್ತೆ
ಅರ್ಧಾಂಗಿಯೆನಿಸಿದೆ ನನ್ನ ಹೇಣ್ತೆ
ಶೃಂಗಾರದಿ ಸವಿ ಸಕ್ಕರೆ ಉಣಿಸುವ
ತಂಗೆಂದೆನಬೇಕ ನನ್ನ ಹೇಣ್ತೆ
ಕುಶಲದಿ ಕೂಡಿದ ನನ್ನ ಹೇಣ್ತೆ
ವಸುಧಿಯೊಳು ಶಿಶುನಾಳಧೀಶನಡಿಗೆ ಹೆಣ್ಣು
ಶಿಶುವಾಗಿ ತೋರಿದಿ ನನ್ನ ಹೇಣ್ತೆ
ನಿನ್ನ ಹೆಸರೇನು ಹೇಳಲಿ ಗುಣವಂತೆ ||೪||

Wednesday, May 18, 2011

ಗುಡಿಯ ನೋಡಿರಣ್ಣಾ ದೇಹದ

ಗುಡಿಯ ನೋಡಿರಣ್ಣಾ ದೇಹದ
ಗುಡಿಯ ನೋಡಿರಣ್ಣಾ ||ಪಲ್ಲ||

ಗುಡಿಯ ನೋಡಿರಿದು
ಪೊಡವಿಗೆ ಒಡೆಯನು
ಆಡಗಿಕೊಂಡು ಕಡುಬೆಡಗಿನೊಳಿರುತಿಹ
ಗುಡಿಯ ನೋಡಿರಣ್ಣಾ ||ಅನುಪಲ್ಲ||

ಮೂರು ಮೂಲೆಯ ಕಲ್ಲು ಅದರೊಳು
ಜಾರುತಿರುವ ಕಲ್ಲು
ಧೀರ ನಿರ್ಗುಣನು ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರ್ಯಾಗಿರುತಿಹ
ಗುಡಿಯ ನೋಡಿರಣ್ಣಾ ||೧||

ಆರು ಮೂರು ಕಟ್ಟಿ ಮೇಲಕೆ
ಏರಿದನು ಘಟ್ಟಿ
ಭೇರಿ ಕಾಳಿ ಶಂಖ
ಭಾರಿ ಸುನಾದದಿ
ಮೀರಿದಾನಂದ ತೋರಿ ಹೊಳೆಯುತಿಹ
ಗುಡಿಯ ನೋಡಿರಣ್ಣಾ ||೨||

ಸಾಗುತಿಹವು ದಿವಸ ಬಹುದಿನ
ಹೋಗಿ ಮಾಡಿ ಪಾಯ್ಸ
ಯೋಗಿ ರಾಜ ಶಿಶುನಾಳಧೀಶ ತಾ—
ನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣಾ ||೩||

Tuesday, May 17, 2011

ಸ್ನೇಹ ಮಾಡಬೇಕಿಂತವಳ!

ಸ್ನೇಹ ಮಾಡಬೇಕಿಂತವಳ!
ಸ್ನೇಹ ಮಾಡಬೇಕಿಂಥವಳ! - ಒಳ್ಳೇ

ಮೋಹದಿಂದಲಿ ಬಂದು - ಕೂಡುವಂಥವಳ
ಚಂದ್ರಗಾವಿ ಶೀರೀನುಟ್ಟು - ದಿವ್ಯ
ಕೆಂದಾವರಿ ಮಗ್ಗಿ ಕುಪ್ಪಸ ತೊಟ್ಟು
ಬಂದಳು ಮಂದಿರ ಬಿಟ್ಟು - ನಾಲ್ಕು

ಮಂದಿಯೊಳು ಬಂದು ನಾಚುವಳೆಷ್ಟು!
ಅರಗಿಳಿ ಸಮ ಇವಳ ನುಡಿಯು - ಚೆಲ್ವ
ಸುಳಿನಾಭಿ ಕುಚಕುಂಭಗಳ ಹಂಸನಡೆಯು
ಥಳಥಳಿಸುವ ತೋಳ್ತೊಡೆಯು - ಒಳ್ಳೇ

ಬಳುಬಳುಕುವ ನಡುವು ತಳಿರಡಿಯು.
ಮುಕ್ತ ಕಾಮಿನಿ ಎನ್ನ ಕಾಡಿ - ಮೋಹ
ಮತ್ತ ಸುರತಸುಖ ಸುಡುವಂತೆ ಕೂಡಿ
ಹುಟ್ಟನ್ನೇ ಕಳೆದಳೊ ಖೋಡಿ - ದೇವ
ಶಿಶುನಾಳಾಧೀಶನ ಪಾದಕೆ ದೂಡಿ!

ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ ನಮೂನೆ


Monday, May 16, 2011

ಅತ್ತ ಇತ್ತ ಹರಿದಾಡುವ ಮನಸಿಗೆ.


ಅತ್ತ ಇತ್ತ ಹರಿದಾಡುವ ಮನಸಿಗೆ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ.
ಕಡುವಿಷಯದಿ ಸಂಸಾರಕೆ ಮರುಗುತ
ಪೊಡವಿ ತಳದಿ ಮಿಡಿಕ್ಯಾಡುವ ಮನಸಿಗೆ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ.


ಸಿರಿ ಸಂಪದ ಸೌಭಾಗ್ಯ ತನಗೆ ಬಲು
ಹಿರಿದಾಗಲಿಬೇಕೆಂಬುವ ಮನಸಿಗೆ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ.



ವಸುಧೆಯೊಳಗೆ ಶಿಶುನಾಳಾಧೀಶನ
ಹೆಸರು ಮರೆತು ಕೊಸರ್‍ಯಾಡುವ ಮನಸಿಗೆ
ಮಚ್ಚಿಲ್ಹೊಡೆದು ನಿಲ್ಲಿಸು ಜಾಣ.




.

Saturday, May 14, 2011

ಜಂಗಲ್ ಬೂಕ್ - ಶೀಷಿಕೆ ಗೀತೆ

ಜಂಗಲ್ ಜಂಗಲ್ ಬಾತ್ ಚಲಿ ಹೈ, ಪತಾ ಚಲಾ ಹೈ
ಜಂಗಲ್ ಜಂಗಲ್ ಬಾತ್ ಚಲಿ ಹೈ, ಪತಾ ಚಲಾ ಹೈ
ಅರೆ ಚಡ್ಡಿ ಪಹೆನ್ ಕೆ ಫ್ಹೂಲ್ ಖಿಲಾ ಹೈ ಫ್ಹೂಲ್ ಖಿಲಾ ಹೈ
ಅರೆ ಚಡ್ಡಿ ಪಹೆನ್ ಕೆ ಫ್ಹೂಲ್ ಖಿಲಾ ಹೈ ಫ್ಹೂಲ್ ಖಿಲಾ ಹೈ

ಜಂಗಲ್ ಜಂಗಲ್ ಪತಾ ಚಲಾ ಹೈ
ಚಡ್ಡಿ ಪಹೆನ್ ಕೆ ಫ್ಹೂಲ್ ಖಿಲಾ ಹೈ
ಜಂಗಲ್ ಜಂಗಲ್ ಪತಾ ಚಲಾ ಹೈ
ಚಡ್ಡಿ ಪಹೆನ್ ಕೆ ಫ್ಹೂಲ್ ಖಿಲಾ ಹೈ
ಏಕ್ ಪರಿಂದ ಹೈ ಶರ್ಮಿಂದ ತಾ ವೋ ನಂಗಾ,
ಐ ಇಸಸೇ ತೋ ಅಂದೇ ಕೇ ಅಂದರ್ ತಾ ವೋ ಚಂಗಾ,
ಸೋಚ್ ರಹಾ ಹೈ ಬಾಹರ್ ಅಖಿರ್ ಕ್ಯೂ ನಿಕಲಾ ಹೈ
ಅರೆ ಚಡ್ಡಿ ಪೆಹನ್ ಕೇ ಫ್ಹೂಲ್ ಖಿಲಾ ಹೈ ಫ್ಹೂಲ್ ಖಿಲಾ ಹೈ 

ಜಂಗಲ್ ಜಂಗಲ್ ಪತಾ ಚಲಾ ಹೈ
ಚಡ್ಡಿ ಪಹೆನ್ ಕೆ ಫ್ಹೂಲ್ ಖಿಲಾ ಹೈ
ಜಂಗಲ್ ಜಂಗಲ್ ಪತಾ ಚಲಾ ಹೈ
ಚಡ್ಡಿ ಪಹೆನ್ ಕೆ ಫ್ಹೂಲ್ ಖಿಲಾ ಹೈ

krupe : Shri harsha hegde

ಅಗ್ಗದ ಅರಿವಿ ತಂದು

ಅಗ್ಗದ ಅರಿವಿ ತಂದು
ಹಿಗ್ಗಿ ಹೊಲಿಸಿದೆ ಅಂಗಿ
ಹೆಗ್ಗಣ ಒಯ್ತವ್ವ ತಂಗಿ ಈ ಅಂಗಿ.

ಅಗಣಿತ ವಿಷಯದ
ಆರುಗೇಣೀನ ಕವಚ
ಬಗಲಿನ ಬೆವರನು ಕುಡಿದು
ಸಿಗದೆ ಹೋಯಿತವ್ವ ತಂಗಿ ಈ ಅಂಗಿ.

ಬುದ್ದಿಗೇಡಿಗಳಾಗಿ
ನಿದ್ದಿ ಕೆಡಿಸಿಕೊಂಡು
ಎದ್ದು ನೋಡಲು ಕರ್ಮದ
ಗುದ್ದಿನೊಳಡಗಿತ್ತವ್ವ ತಂಗಿ ಈ ಅಂಗಿ.

ಕಳೆದೆನೀಪರಿ ರಾತ್ರಿ
ಬೆಳಗಾಗೋ ಸಮಯದಿ
ಚೆಲುವ ಶಿಶುನಾಳಾಧೀಶನು
ಉಳುವಿ ಕೊಟ್ಯಾನವ್ವ ತಂಗಿ ಈ ಅಂಗಿ.

ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಬಗ್ಗೆ ದೃಢಿಕರಣ ಪತ್ರ

Friday, May 13, 2011

ಬಿದ್ದಿಯಬ್ಬೇ ಮುದುಕಿ

ಬಿದ್ದಿಯಬ್ಬೇ ಮುದುಕಿ
ಬಿದ್ದೀಯಬ್ಬೇ.

ನೀ ದಿನ ಹೋದಾಕಿ
ಇರು ಭಾಳ ಜೋಕಿ
ಬಿದ್ದೀಯಬೇ ಮುದುಕಿ ಬಿದ್ದೀಯಬೇ.

ಸದ್ಯಕಿದು ಹುಲುಗೂರ ಸಂತಿ
ಗದ್ದಲದೊಳಗ್ಯಾಕ ನಿಂತಿ?
ಬಿದ್ದು ಇಲ್ಲಿ ಒದ್ದಾಡಿದರ
ಎದ್ದು ಹ್ಯಾಂಗ ಹಿಂದಕ ಬರತಿ?

ಬುದ್ದಿಗೇಡಿ ಮುದುಕಿ ನೀನು ಬಿದ್ದೀಯಬೇ.
ಬುಟ್ಟಿಯಲ್ಲಿ ಪತ್ತಲ ಇಟ್ಟಿ
ಅದನು ಉಟ್ಟ ಹೊತ್ತೊಳು ಜೋಕಿ;
ಕೆಟ್ಟಗಂಟಿ ಚೌಡೇರು ಬಂದು

ಉಟ್ಟುದನ್ನೆ ಕದ್ದಾರ ಜೋಕಿ!
ಬುದ್ಧಿಗೇಡಿ ಮುದುಕಿ ನೀನು ಬಿದ್ದೀಯಬೇ.
ಶಿಶುನಾಳಾಧೀಶನ ಮುಂದೆ
ಕೊಸರಿ ಕೊಸರಿ ಹೋಗಬ್ಯಾಡ,

ಹಸನವಿಲ್ಲ ಹರಯ ಸಂದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಬುದ್ದಿಗೇಡಿ ಮುದುಕಿ ನೀನು ಬಿದ್ದೀಯಬೇ.

Thursday, May 12, 2011

ಅಳಬೇಡ ತಂಗಿ ಅಳಬೇಡ ನಿನ್ನ

ಅಳಬೇಡ ತಂಗಿ ಅಳಬೇಡ ನಿನ್ನ
ಕಳುಹಬಂದವರಿಲ್ಲಿ ಉಳುಹಿಕೊಂಬುವರಿಲ್ಲ ||ಪಲ್ಲ||

ಖಡೀಕೀಲೆ ಉಡಿಯಕ್ಕಿ ಹಾಕಿದರವ್ವಾ ಒಳ್ಳೆ
ದುಡಕೀಲೆ ಮುಂದಕ ನೂಕಿದರವ್ವಾ
ಮಿಡಕ್ಯಾಡಿ ಮದಿವ್ಯಾದಿ ಮೋಜು ಕಾಣವ್ವ ಮುಂದ
ಹುಡುಕ್ಯಾಡಿ ಮಾಯದ ಮರವೇರಿದೆವ್ವಾ ||೧||

ಮಿಂಡೇರ ಬಳಗವು ಬೆನ್ನ್ಹತ್ತಿ ಬಂದು ನಿನ್ನ
ರಂಡೇರೈವರು ಕೂಡಿ ನಗುತಲಿ ನಿಂದು
ಕಂಡವರ ಕಾಲ್ಬಿದ್ದು ಕೈಮುಗಿದು ನಿಂತರ
ಗಂಡನ ಮನಿ ನಿನಗ ಬಿಡದವ್ವ ತಂಗಿ ||೨||

ರಂಗೀಲಿ ಉಟ್ಟೀದಿ ರೇಶ್ಮಿದಡಿಶೀರಿ ಮತ್ತs
ಹಂಗನೂಲಿನ ಪರವಿ ಮರತೆವ್ವ ನಾರಿ
ಮಂಗಳ ಮೂರುತಿ ಶಿಶುನಾಳಧೀಶನ
ಅಂಗಳಕ ನೀ ಹೊರತಾದೆವ್ವ ಗೌರಿ ||೩||

Wednesday, May 11, 2011

ಸೋರುತಿಹುದು ಮನೆಯ ಮಾಳಿಗಿ

ಸೋರುತಿಹುದು ಮನೆಯ ಮಾಳಿಗಿ
ಅಜ್ನಾನದಿಂದ
ಸೋರುತಿಹುದು ಮನೆಯ ಮಾಳಿಗಿ.

ಸೋರುತಿಹುದು ಮನೆಯ ಮಾಳಿಗಿ
ದಾರು ಗಟ್ಟಿ ಮಾಳ್ಪರಿಲ್ಲ
ಕಾಳ ಕತ್ತಲೆಯೊಳಗೆ ನಾನು
ಮೇಲಕೇರಿ ಹೋಗಲಾರೆ.

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರುಕು ಚಪ್ಪರ ಜೇರುಗಿಂಡಿ
ಮೇಲಕೇರಿ ಹೋಗಲಾರೆ.

ಕರಕಿ ಹುಲ್ಲು ಕಸವು ಹತ್ತಿ
ಹರಿದು ಸಾಲು ಇರಬಿ ಮುತ್ತಿ
ಜಲದ ಭರದಿ ಸರಿಯೆ ಮಣ್ಣು
ಒಳಗೆ ಹೊರಗೆ ಏಕವಾಗಿ.

ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬು ಮಳೆಯು
ಎಂತೊ ಶಿಶುನಾಳಧೀಶನ ತಾನು
ನಿಂತು ಪೊರೆವನು ಎಂದು ನಂಬಿದೆ

Tuesday, May 10, 2011

ಕನ್ನಡ ಜನಪ್ರಿಯ ಒಗಟುಗಳು

೧. ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ-ಮಲ್ಲಿಗೆ
೨. ಅಂಗೈ ಅಗಲದ ರೊಟ್ಟಿಗೆ ಲೆಕ್ಕವಿಲ್ಲದಷ್ಟು ಉಪ್ಪಿನಕಾಯಿ-ಆಕಾಶ, ನಕ್ಷತ್ರ
೩. ಸುಟ್ಟ ಹೆಣ ಮತ್ತೆ ಸುಡ್ತಾರೆ-ಇದ್ದಿಲು
೪. ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ- ಹಲಸಿನ ಹಣ್ಣು , ಬೀಜ
೫. ಅಂಗೈ ಕೊಟ್ಟರೆ ಮುಂಗೈನೂ ನುಂಗುತ್ತದೆ- ಬಳೆ
೬. ಒಂದು ಹಪ್ಪಳ ಊರಿಗೆಲ್ಲ ಊಟ- ಚಂದ್ರ
೭. ಆಕಾಶದಲ್ಲಿ ಕೊಡಲಿಗಳು ತೇಲಾಡುತ್ತವೆ- ಹುಣಸೇಹಣ್ಣು
೮. ನೀಲಿ ಕೆರೆಯಲಿ ಬಿಳಿ ಮೀನು-ನಕ್ಷತ್ರ
೯. ಒಂದು ತೇಲುತ್ತೆ ,ಒಂದು ಮುಳುಗುತ್ತೆ, ಒಂದು ಕರಗುತ್ತೆ.-ವಾರ,ತಿಂಗಳು,ವರ್ಷ
೧೧. ಬಾ ಅಂದರೆ ಬರೋಲ್ಲ , ಹೋಗು ಅಂದರೆ ಹೋಗೋಲ್ಲ-ಮಳೆ
೧೧. ನಾ ಇರುವಾಗ ಬರುತ್ತೆ , ನಾ ಹೋದ ಮೇಲೂ ಇರುತ್ತೆ-ಕೀರ್ತಿ
೧೨. ಬೆಳ್ಳಿ ಸಮುದ್ರದಲ್ಲಿ ಕಪ್ಪು ಸೂರ್ಯ-ಕಣ್ಣು
೧೩ ಅಕ್ಕನ ಮೇಲೆ ಛತ್ರಿ- ರೆಪ್ಪೆ
೧೪. ತಮ್ಮಂಗೆ ಮೂರು ಕಣ್ಣು ಅಮ್ಮಂಗೆ ಒಂದೇ ಕಣ್ಣು-ತೆಂಗಿನ ಕಾಯಿ
೧೫. ಅಕ್ಕ ಓದುತ್ತಾಳೆ ತಂಗಿ ನಡೀತ್ತಾಳೆ-ಕಣ್ಣು
೧೬.ಅಮ್ಮನ ಆಕಾಶವಾಣಿ ನಾನು-ಮಗು
೧೭. ಅಂಗಡಿಯಿಂದ ತರೋದು ಮುಂದಿಟ್ಟುಕೊಂಡು ಅಳೋದು-ಈರುಳ್ಳಿ
೧೮. ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿಕೊಂಡು ನುಂಗಣ್ಣ- ಬಾಳೆಹಣ್ಣು
೧೯. ಗೂಡ್ನಲ್ಲಿರೋ ಜೋಡಿ ಪಕ್ಷಿ ಊರೆಲ್ಲ ನೋಡುತ್ತೆ-ಕಣ್ಣು
೨೦. ಒಂದು ಮಡಕೆ, ಮಡಕೆಯೊಳಗೆ, ಕುಡಿಕೆ, ಕುಡಿಕೆಯಲ್ಲಿ ಸಾಗರ-ತೆಂಗಿನ ಕಾಯಿ
೨೧. ನೀನಿಲ್ಲದೆ ಊಟವಿಲ್ಲ- ಉಪ್ಪು
೨೨. ಬಿಳಿ ಸರದಾರನಿಗೆ ಕರಿ ಟೋಪಿ-ಬೆಂಕಿಕಡ್ಡಿ
೨೩. ಕಾಲಿಲ್ದ ಹುಡುಗಿಗೆ ಮಾರುದ್ದ ಕಡಿವಾಣ - ಸೂಜಿ
೨೪. ಮೂರು ಕಾಸಿನ ಕುದುರೆಗೆ ಮುನ್ನೂರು ರೂಪಾಯಿನ ಹಗ್ಗ-ಹೇನು ಕೂದಲು
೨೫. ಕೆಂಪು ಕುದುರೆಗೆ ಲಗಾಮು, ಓಬ್ಬ ಹತ್ತುತ್ತಾನೆ , ಇನ್ನೊಬ್ಬ ಇಳಿತಾನೇ-ಬೆಂಕಿ,ಬಾಣಲೆ, ದೋಸೆ
೨೬ . ಒಂದು ಮನೆಗೆ ಒಂದೇ ತೊಲೆ-ತಲೆ
೨೭. ಕಂದ ಬಂದ ಕೊಂದ ತಂದ-ಶ್ರೀ ರಾಮ ಚಂದ್ರ
೨೮. ಕಲ್ಲಿಲ್ಲದ ಬೆಟ್ಟ ಮರಳಿಲ್ಲದ ಮರುಭೂಮಿ-ಭೂಪಟ
೨೯. ಚಿಕ್ಕಕ್ಕನಿಗೆ ಪುಕ್ಕುದ್ದ-ಸೌಟು
೩೦. ಎರಡು ಮನೆಗೆ ಒಂದೇ ದೂಲ-ಮೂಗು


Courtesy : ಕನ್ನಡ ಜನಪ್ರಿಯ ಒಗಟುಗಳು



ಕೂ ಕೂ ಎನುತಿದೆ ಬೆಳವಾ

ಕೂ ಕೂ ಎನುತಿದೆ ಬೆಳವಾ-ಬಂದು
ಹೊಕ್ಕಿತು ಭವವೆಂಬ ದುಖಃದ ಹಳುವ


ಪುರುಷನ ಬುಟ್ಟೀಲಿ ಇಟ್ಟು- ಬಹು
ಹರುಷದಿ ಹಳ್ಳದೂಳ್ ತೇಲಾಕ ಬಿಟ್ಟು

ಮನವೆಂಬ ಗೂಡಿನೊಳಿಟ್ಟು- ತನ್ನ
ತನುವೆಂಬ ಮರ್ಅದೊಳು ಹಾರಾಕ ಬಿಟ್ಟು

ಆನಂದದೊಳು ತಾನಿರಲು- ಸ್ವಾ
ನಂದಿ ರೆಖ್ಖೆಯ ಕೆದರುತಲಿರಲು,

ಜ್ನಾನದ ಬೆಳಕಿನೊಳಿಹುದು- ದೇವ
ಶಿಶುನಾಳಾಧೀಶ ಗೋವಿಂದನ ವರವು.

Monday, May 9, 2011

ತರವಲ್ಲ ತಗಿ ನಿನ್ನ ತಂಬೂರಿ

ತರವಲ್ಲ ತಗಿ ನಿನ್ನ ತಂಬೂರಿ - ಸ್ವರ
ಬರದೆ ಬಾರಿಸದಿರು ತಂಬೂರಿ ;
ಸರಸ ಸಂಗೀತದ ಕುರುಹುಗಳರಿಯದೆ
ಬರದೆ ಬಾರಿಸದಿರು ತಂಬೂರಿ.


ಮದ್ದಲಿ ದನಿಯೊಳು ತಂಬೂರಿ - ಅದ
ತಿದ್ದಿ ನುಡಿಸಬೇಕೊ ತಂಬೂರಿ ;
ಸಿದ್ದ ಸಧಕರ ಸುವಿದ್ಯೆಗೆ ಒದಗುವ
ಬುದ್ದಿವಂತಗೆ ತಕ್ಕ ತಂಬೂರಿ.

ಬಾಳಬಲ್ಲವರಿಗೆ ತಂಬೂರಿ - ದೇವ
ಭಾಳಾಕ್ಷ ರಚಿಸಿದ ತಂಬೂರಿ ;
ಹೇಳಲಿ ಏನಿದರ ಹಂಚಿಕೆ ತಿಳಿಯದ
ತಾಳಗೇಡಿಗೆ ಸಲ್ಲ ತಂಬೂರಿ.

ಸತ್ಯ ಶರಧಿಯೊಳು ತಂಬೂರಿ - ನಿತ್ಯ
ಉತ್ತಮರಾಡುವ ತಂಬೂರಿ ;
ಬತ್ತೀಸರಾಗದ ಬಗೆಯನರಿಯದಂಥ
ಕತ್ತಿಗಿನ್ಯಾತಕೆ ತಂಬೂರಿ.

ಹಸನಾದ ಮ್ಯಾಳಕೆ ತಂಬೂರಿ - ಇದು
ಕುಶಲರಿಗೊಪ್ಪುವ ತಂಬೂರಿ.
ಶಿಶುನಾಳಧೀಶನ ಓದುಪುರಾಣದಿ
ಹಸನಾಗಿ ಬಾರಿಸೊ ತಂಬೂರಿ.

Sunday, May 8, 2011

ಸಂತ ಶಿಶುನಾಳ ಶರೀಫರು

ಶಿಶುನಾಳ ಶರೀಫರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಶುನಾಳ ಗ್ರಾಮದಲ್ಲಿ ಕ್ರಿ.ಶ. ೧೮೧೯ ಮಾರ್ಚ ೭ರಂದು ಜನಿಸಿದರು. ಇವರ ತಂದೆ ದೇವಕಾರ ಮನೆತನದ ಇಮಾಮ ಹಜರತ ಸಾಹೇಬರು ಹಾಗು ತಾಯಿ ಹಜ್ಜೂಮಾ. ಇವರ ಪೂರ್ಣ ಹೆಸರು ಮಹಮ್ಮದ ಶರೀಫ.ಮುಲ್ಕಿ ಪರೀಕ್ಷೆ ಪಾಸು ಮಾಡಿದ ಬಳಿಕ ಶರೀಫರು ಕೆಲ ಕಾಲ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರೆಂದು ಕೆಲಸ ಮಾದಿದರು. ಆದರೆ ಮುಂದೆ ಈ ಕೆಲಸವನ್ನು ಬಿಟ್ಟು ಬಿಟ್ಟರು. ಈ ಸಮಯದಲ್ಲಿ ಶರೀಫರಿಗೆ ಕಳಸದ ಗುರು ಗೋವಿಂದಭಟ್ಟರಿಂದ ಅನುಗ್ರಹವಾಯಿತು. ಮಗನು ಕೆಲಸವನ್ನು ಬಿಟ್ಟು ಆಧ್ಯ್ಶಾತ್ಮಚಿಂತನೆಯಲ್ಲಿ ತೊಡಗಿಸಿಕೊಂಡದ್ದರಿಂದ ಶರೀಫರ ತಂದೆ ತಾಯಿ ಅವರಿಗೆ ಕುಂದಗೋಳ ನಾಯಕ ಮನೆತನದ ಫಾತಿಮಾ ಎಂಬ ಕನ್ಯೆಯೊಂದಿಗೆ ಮದುವೆ ಮಾಡಿದರು.

ಕೆಲವು ಸಮಯದ ನಂತರ ಇವರಿಗೆ ಒಂದು ಹೆಣ್ಣು ಮಗು ಜನಿಸಿತು.ದುರ್ದೈವದಿಂದ ಕೆಲವು ತಿಂಗಳುಗಳಲ್ಲಿ ಹೆಂಡತಿ ತೀರಿಕೊಂಡರು. ಶರೀಫರು ಆ ಬಳಿಕ ತಮ್ಮ ಜೀವನವನ್ನು ಆಧ್ಯಾತ್ಮಸಾಧನೆಗೆ ಮುಡಿಪಿಟ್ಟರು.

ಶರೀಫರ ಮರಣದ ತರುವಾಯ ಅವರ ಅಂತ್ಯಕ್ರಿಯೆಯು ಹಿಂದು ಹಾಗು ಮುಸಲ್ಮಾನ ಭಕ್ತರ ಸಮ್ಮುಖದಲ್ಲಿ ನೆರವೇರಿತು. ಶರೀಫರು ಹಾಡಿದ ಪದಗಳು ಧಾರವಾಡ ಜಿಲ್ಲೆಯ ಆಡುಭಾಷೆಯ ಶೈಲಿಯಲ್ಲಿವೆ. ಈ ಪದಗಳಲ್ಲಿ ಕೆಲವು ದೇವತಾಸ್ತುತಿಯ ಪದಗಳಾದರೆ, ಇನ್ನು ಕೆಲವು ಪದಗಳು ತತ್ವಬೋಧನೆಯ ಪದಗಳಾಗಿವೆ.ಹೆಚ್ಚಿನ ಪದಗಳು ಕನ್ನಡದಲ್ಲಿ ಇದ್ದರೂ ಸಹ ಕೆಲವು ಪದಗಳು ಉರ್ದು ಭಾಷೆಯಲ್ಲಿವೆ. ಕನ್ನಡದ ಖ್ಯಾತ ಹಾಡುಗಾರ ಶ್ರೀ ಅಶ್ವಥ್ಥರು ಇವರ ಅನೇಕ ಪದಗಳನ್ನು ಹಾಡಿದ್ದಾರೆ.


ಶಿಶುನಾಳ ಶರೀಫರನ್ನು ಕರ್ನಾಟಕದ ಕಬೀರ್ ದಾಸ್ ಎಂದು ಕರೆಯಲಾಗುತ್ತದೆ. ಹಿಂದೂ, ಮುಸ್ಲಿಮರೆಂಬ ಭೇದವಿಲ್ಲದೆ ಎಲ್ಲರೂ ಅವರನ್ನು ಸಂತರೆಂದು ಪರಿಗಣಿಸಿದ್ದಾರೆ. ಕರ್ನಾಟಕದ ಮೊದಲನೆಯ ಮುಸ್ಲಿಂ ಕವಿ ಎಂಬ ಖ್ಯಾತಿ ಕೂಡ ಅವರಿಗಿದೆ.ಇಮಾಮ್ ಸಾಹೇಬ್ ಮತ್ತು ಹಾಜುಮಾ ಎಂಬ ದಂಪತಿಗಳ ಮಗನಾಗಿ ಜನಿಸಿದ ಶರೀಫರ ಹುಟ್ಟೂರು ಧಾರವಾಡ ಜಿಲ್ಲೆಯ ಶಿಶುನಾಳ ಎಂಬ ಚಿಕ್ಕ ಗ್ರಾಮ. ಅಲ್ಲಿಯೇ ಕನ್ನಡ ಮತ್ತು ಉದು ಕಲಿತು ಕನ್ನಡ ಉಪಾಧ್ಯಾಯನಾಗಿ ಸ್ವಲ್ಪ ಕಾಲ ಸೇವೆ ಸಲ್ಲಿಸಿದರು. ಶರೀಫರು ಫಾತೀಮಾ ಎಂಬಾಕೆಯನ್ನು ಮದುವೆಯಾದರು. ಒಂದು ಹೆಣ್ಣು ಮಗುವಾಯಿತು.ಸ್ವಲ್ಪ ಕಾಲದ ನಂತರ ಮಗು ತಾಯಿ ಇಬ್ಬರೂ ಗತಿಸಿದರು. ಶರೀಫರಿಗೆ ಜೀವನದಲ್ಲಿ ಬೇಸರವಾದರೂ, ದೇವರಲ್ಲಿ ನಂಬಿಕೆ ಉಳಿದಿತ್ತು. ತಾಳ್ಮೆಯಿಂದ ಸಜ್ಜನರ ಹಾಗೂ ವಿದ್ಯಾವಂತರ ಸಹವಾಸದಲ್ಲಿಯೇ ಕಾಲ ಕಳೆಯುತ್ತಾ ಬಂದರು. ತಮಗೆ ಸರಿಯಾಗಿ ಮಾರ್ಗದರ್ಶನ ನೀಡುವಂತಹ ಗುರುವಿಗಾಗಿ ಅವರು ಊರೂರು ಅಲೆದರು. ಕೊನೆಗೆ ಗೋವಿಂದ ಭಟ್ಟ ಎಂಬ ಗುರುವಿನಲ್ಲಿ ಸರಿಯಾದ ಮಾರ್ಗದರ್ಶನ ದೊರೆಯಿತು. ಯಾವುದೇ ಮತತ ಬಗ್ಗೆ ಮೂಡನಂಬಿಕೆ ಇಲ್ಲದ ಈ ಗುರುಗಳು ಶರೀಫರಿಗೆ ತುಂಬಾ ಮೆಚ್ಚುಗೆಯಾದರು. ಗುರುಶಿಷ್ಯರಿಬ್ಬರೂ ಮಸೀದಿಗಳಿಗೆ, ದೇವಾಲಯಗಳಿಗೆ ಸಂದರ್ಶನಕ್ಕಾಗಿ ಹೊರಟರು. ಶರೀಫರು ಅನೇಕ ಹಾಡುಗಳನ್ನು ರಚಿಸಿ ಹಾಡಿದರು. ಈ ಗುರುಗಳ ಜೊತೆಗೆ ನವಲಗುಂದದ ನಾಗಲಿಂಗಮತಿ ಮತ್ತು ಗಂಗೆಯ ಮಡಿವಾಳಪ್ಪ ಎಂಬುವರು ಸಹ ಶರೀಫರ ಮೇಲೆ ಹೆಚ್ಚಿನ ಪರಿಣಾಮ ಬೀರಿದರು. ಅಡವಿ ಸ್ವಾಮಿ ಹಾಗೂ ಸಿದ್ದಾರೂಢ ಸ್ವಾಮಿಗಳ ಪ್ರಭಾವವೂ ಅವರ ರಚನೆಗಳಲ್ಲಿ ಕಂಡುಬರುತ್ತದೆ.

Saturday, May 7, 2011

ಯೆಂಡ ಯೆಡ್ತಿ ಕನ್ನಡ್ ಪದಗೊಳ್

ಯೆಂಡ ಯೆಡ್ತಿ ಕನ್ನಡ್ ಪದಗೊಳ್
ಅಂದ್ರೆ ರತ್ನಂಗ್ ಪ್ರಾಣ!
ಬುಂಡೇನ್ ಎತ್ತಿ ಕುಡದ್ಬುಟ್ಟಾಂಡೆದ್ರೆ-
ತಕ್ಕೊ! ಪದಗೊಳ್ ಬಾಣ!

 ಬಗವಂತ್ ಏನ್ರ ಬೂಮೀಗ್ ಇಳದ
ನನ್ ತಾಕ್ ಬಂದಾಂತ್ ಅನ್ನು;

ಪರ್ ಗಿರೀಕ್ಸೆ ಮಾಡ್ತಾನ್ ಔನು-
ಬಕ್ತನ್ ಮೇಲ್ ಔನ್ ಕಣ್ಣು!

'ಯೆಂಡ ಕುಡಿಯಾದ್ ಬುಟ್ ಬುಡ್ ರತ್ನ!
'ಅಂತ್ ಔನ್ ಏನಾರ್ ಅಂದ್ರೆ-
ಮೂಗ್ ಮೂರ್ ಚೂರಾಗ್ ಮುರಸ್ಕೋಂತೀನಿ

ದೇವರ್ ಮಾತ್ಗ್ ಅಡ್ಬಂದ್ರೆ!
'ಯೆಂಡ ಬುಟ್ಟೆ. ಯೆಡ್ತೀನ್ ಬುಟ್ ಬುಡ್!'

ಅಂತ್ ಔನ್ ಏನಾರ್ ಅಂದ್ರೆ-
ಕಳದೋಯ್ತ್ ಅಂತ ಕುಣದಾಡ್ತೀನಿ
ದೊಡ್ಡ್ ಒಂದ್ ಕಾಟ! ತೊಂದ್ರೆ!

'ಕನ್ನಡ ಪದಗೊಳ್ ಆಡೋದ್ನೆಲ್ಲ
ನಿಲ್ಲೀಸ್ ಬುಡಬೇಕ್ ರತ್ನ!'
ಅಂತ್ ಔನ್ ಅಂದ್ರೆ - ದೇವ್ರ್ ಆದ್ರ್ ಏನು!
ಮಾಡ್ತೀನ್ ಔನ್ಗೆ ಖತ್ನ!

ಆಗ್ನೆ ಮಾಡೋ ಐಗೋಳ್ ಎಲ್ಲಾ
ದೇವ್ರೆ ಆಗ್ಲಿ - ಎಲ್ಲ!
ಕನ್ನಡ್ ಸುದ್ದೀಗ್ ಏನ್ರ ಬಂದ್ರೆ
ಮಾನಾ ಉಳಸಾಕಿಲ್ಲ

ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ
ಬಾಯ್ ಒಲಿಸಾಕಿದ್ರೂನೆ-
ಮೂಗ್ನಲ್ ಕನ್ನಡ್ ಪದವಾಡ್ತೀನಿ!
ನನ್ ಮನಸನ್ನ್ ನೀ ಕಾಣೆ!

ಯೆಂಡ ಓಗ್ಲಿ! ಯೆಡ್ತಿ ಓಗ್ಲಿ!
ಎಲ್ಲಾ ಕೊಚ್ಕೊಂಡ್ ಓಗ್ಲಿ!
ಪರ್ಪಂಚ್ ಇರೋ ತನಕ ಮುಂದೆ
ಕನ್ನಡ್ ಪದಗೊಳ್ ನುಗ್ಲಿ!

Friday, May 6, 2011

ರತ್ನನ್ ಪರ್ಪಂಚ.

ಯೇಳ್ಕೊಳ್ಳಾಕ್ ಒಂದ್ ಊರು
ತಲೇಮೇಗ್ ಒಂದ್ ಸೂರು
ಮಲಗಾಕೆ ಬೂಮ್ತಾಯಿ ಮಂಚ;
ಕೈ ಯಿಡದೋಳ್ ಪುಟ್ನಂಜಿ
ನೆಗನೆಗತ ಉಪ್ಗಂಜಿ
ಕೊಟ್ರಾಯ್ತು ರತ್ನನ್ ಪರ್ಪಂಚ!

ಅಗಲೆಲ್ಲ ಬೆವರ್ ಅರ್ಸಿ
ತಂದದ್ರಲ್ಲ್ ಒಸಿ ಮುರ್ಸಿ
ಸಂಜೇಲಿ ವುಳಿ ಯೆಂಡ ಕೊಂಚ
ಯೀರ್‍ತ ಮೈ ಝುಂ ಅಂದ್ರೆ
ವಾಸ್ನೆ ಘಂ ಘಂ ಅಂದ್ರ್‍ಎ
ತುಭೋಯ್ತು ರತ್ನನ್ ಪರ್ಪಂಚ!

ಏನೋ ಕುಸಿಯಾದಾಗ
ಮತ್ತ್ ಎಚ್ಚಿ ಓದಾಗ
ಅಂಗೇನೆ ಪರಪಂಚದ್ ಅಂಚ
ದಾಟ್ಕಂಡಿ ಆರಾಡ್ತ
ಕನ್ನಡದಲ್ ಪದವಾಡ್ತ
ಇಗ್ಗೋದು ರತ್ನನ್ ಪರ್ಪಂಚ!

ದುಕ್ಕಿಲ್ಲ ದಾಲಿಲ್ಲ
ನಮಗ್ ಅದರಾಗ್ ಪಾಲಿಲ್ಲ
ನಾವ್ ಕಂಡಿಲ್ಲ್ ಆ ತಂಚ ವಂಚ;
ನಮ್ಮಸ್ಟಕ್ ನಾವಾಗಿ
ಇದ್ದಿದ್ರಲ್ಲ್ ಆಯಾಗಿ
ಬಾಳೋದು ರತ್ನನ್ ಪರ್ಪಂಚ!

’ಬಡತನ ಗಿಡತನ
ಏನಿದ್ರೇನ್ ? ನಡೆತೇನ
ಚೆಂದಾಗ್ ಇಟ್ಕೊಳ್ಳಾದೆ ಅಚ್ಛ!’ -
ಅಂದ್ಕೊಂಡಿ ಸುಕವಾಗಿ
ಕಸ್ಟಕ್ ನೆಗಮೊಕವಾಗಿ
ನೆಗೆಯೋದೆ ರತ್ನನ್ ಪರ್ಪಂಚ!

ದೇವ್ರ್ ಏನ್ರ ಕೊಡಲಣ್ಣ
ಕೊಡದಿದ್ರೆ ಬುಡಲಣ್ಣ
ನಾವೆಲ್ಲ ಔನೀಗೆ ಬಚ್ಚ!
ಔನ್ ಆಕಿದ್ ತಾಳ್ದಂಗೆ
ಕಣ್ ಮುಚ್ಚೊಂಡ್ ಯೇಳ್ದಂಗೆ
ಕುಣಿಯಾದೆ ರತ್ನನ್ ಪರ್ಪಂಚ!

Thursday, May 5, 2011

ಮೊಟ್ಮೊದಲು.

ನನಗೂನೆ ಯೆಂಡಕ್ಕು ಬಲ್ ಬಲೆ ದೋಸ್ತಿ.
ಕುಡದ್ ಬುಟ್ಟಾಗ್ ಆಡೋದು ನಂಗ್ ಪೂರ ಜಾಸ್ತಿ.
ನಂಗ್ ಎಸರು ಯೇಳ್ತಾರೆ - ರ್ರರ್ರರ್ರರ್ರತ್ನ.
ನಾನ್ ಆಡೋ ಪದಗೋಳು ಯೆಂಡದ್ ಪ್ರಯತ್ನ.

ಮಾಬಾರ್‍ತ ಬರೆಯಾಕೆ ಯಾಸಂಗ್ ಇನಾಯ್ಕ
ಸಿಕ್ದಂಗೆ ನಂಗ್ ಒಬ್ಬ ಬೇವಾರ್ಸಿನಾಯ್ಕ
ಸಿಕ್ಕೋನೆ, ನನ್ ಆಡ್ನ ಕೂಡಿಸ್ದ ಬರ್‍ದು!
ಏನ್ ಐತೊ ಯಾರ್ ಬಲ್ರು ಔಂಗ್ ಇರೊ ದರ್‍ದು!

’ಬರಕೊಂಡ್ರೆ ಬರಕೊಂಡ್ ಓಗ್, ನಿಂಗೂನೆ ಐಲು;
ಆದಸ್ಟೂ ಮಾಡಾನೆ ಸಾಯ ನಂಕೈಲು’
ಅಂದ್ಕಂಡ್ ಔನ್ ಬರದಿದ್ನ ಅಚ್ಗ್ ಆಕೋಕ್ ಒಪ್ಪಿ
ಕಳಿಸಿವ್ನಿ. ಬೈದೀರ ನನಗೇನ್ರ ತಪ್ಪಿ!

ಅಕ್ಸಾರ ಗಿಕ್ಸಾರ ನನಗೇನೂ ಬರ್‍ದು.
(ದೊಡ್ ಚಾಕ್ರಿ ಬೇಕಂದ್ರೆ ಓದೆ ಬೇಕು ದರ್‍ದು!)
ಪದಗೋಳು ಚಂದ್ ಇದ್ರೆ ಯೆಂಡಕ್ ಸಿಪಾರ್ಸಿ!
ಚಂದಾಗ್ ಇಲ್ದಿದ್ರನಕ ತಪ್ಗೆ ಬೇವಾರ್ಸಿ!

Wednesday, May 4, 2011

ಕುಡಕರ್ ಮಾತ್ವ.

ಕುಡಕರ್ ಮಾತ್ವ ತಿಳಿಕೊಳ್ದೇನೆ
ನೂಕ್ಬಾರ್ದ್ ಔರ್‍ನ ಕೆಳಗೆ;
ಯಾವ್ ಚಿಪ್ನಾಗ್ ಮುತ್ತ್ ಐತೊ-
ಒಡದ್ ನೋಡ್ಬೇಕ್ ಒಳಗೆ!

ಕೊಚ್ಚೆ ನೀರೀನ್ ಸೋದೀಸ್ತ್ ಅಂದ್ರೆ
ಸಿಕ್ಕೋಕಿಲ್ವ ಗಂಗೆ?
ಸಾಜಾ ಯೇಳೋನ್ ಯಾರಾದ್ರೇನು?
ಸತ್ಯ ಕಣ್ ಕಂಡೌಂಗೆ!

ಆರ್‍ತ್ ಇಲ್ಲಾಂತ್ ನೆಗಬೇಡಾಣ್ಣ
ನಾಕುಡದಾಡೋ ಮಟ್ಟು!
ಕುಡಕನ್ ಪದಗೊಳ್ ಒಕ್ಕ್ ನೋಡಿದ್ರೆ
ಮಸ್ತಾಗ್ ಅವೆ ಗುಟ್ಟು!

’ರವ್ವಿ ಕಾಣದ್ ಕವಿ ಕಂಡ’
ಅಂದ್ರೆ ಕವಿಗೊಳ್ ತತ್ವ-
’ಕವ್ವಿ ಕಾಣದ್ ಕುಡಕ ಕಂಡ’
ಅನ್ನೊದ್ ಕುಡಕರ್ ಮಾತ್ವ!

Tuesday, May 3, 2011

ರತ್ನನ್ ಯೋಚ್ನೆ.


ಬಯಸಿದ ಸಾಮನ್ ಬೇಕಾದಂಗೆ
ಇರಲಿ ಇಲ್ದೇನ್ ಇರಲಿ-
ತಾಪತ್ರೇಯನಕ್ ತಪ್ಪಿದ್ದಲ್ಲ!
ಸುಳ್ಳಂತ್ ಅನ್ನೌನ್ ಬರಲಿ!

ಬುಂಡೇಲ್ ಒಂದ್ ತೊಟ್ ಇರೊಗಂಟ್ಲೂನೆ
ನಿದ್ದೆ ಗಿದ್ದೆ ಬರದು!
ಬುಂಡೇ ಕಾಲಿ ಆಗೋದ್ರನಕ
ನಿದ್ದೆ ಬರಲೇ ಬರದು!

ಈ ತಾಪತ್ರೇನ್ ತಳ್ಳಾಕಾಕೆ
ಏನ್ ಮಾಡ್ಬೇಕೊ ಕಾಣೆ!
ಯೋಚಿಸ್ದಸೂ ತಗಲ್ಕೋಂತೈತ್ ಆ
ಯೋಚ್ನೇಗ್ ಒಂದ್ ಒಸ್ ಸಾಣೆ!

ಬಯಸಿದ್ ಸಾಮಾನ್ ಬೇಕಾದಂಗೆ
ಇರಲಿ ಇಲ್ದೇನ್ ಇರಲಿ-
ತಾಪತ್ರೇಯನಕ್ ತಪ್ಪಿದ್ದಲ್ಲ!
ಸುಳ್ಳಂತ್ ಅನ್ನೌನ್ ಬರಲಿ.

Monday, May 2, 2011

ಬಣ್ಣದ ತಗಡಿನ ತುತ್ತೂರಿ

ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ

ಸರಿಗಮಪದನಿಸ ಊದಿದನು
ಸನಿದಪಮಗರಿಸ ಊದಿದನು

ತನಗೆ ತುತ್ತೂರಿ ಇದೆಯೆಂದು ಬೆರಾರಿಗು ಅದು ಇಲ್ಲೆಂದ
ತುತ್ತುರಿ ಊದಿದ ಕೊಳದ ಬಳಿ ಕಸ್ತುರಿ ನಡದನು ಬೀದೆಯಲಿ
ಜಂಬದ ಕೋಳಿಯ ರೀತಿಯಲಿ

ಜಾರಿತು ನೀರಿಗೆ ತುತ್ತೂರಿ ಗಂಟಲು ಕಟ್ಟಿತು ನೀರೂರಿ
ಸರಿಗಮ ಊದಲು ನೋಡಿದನು ಗಗಗಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು ಜಂಬದಕೋಳಿಗೆ ಗೋಳಾಯ್ತು

Sunday, May 1, 2011

ನಾಯಿಮರಿ ನಾಯಿಮರಿ ತಿಂಡಿ ಬೇಕೆ

ನಾಯಿಮರಿ ನಾಯಿಮರಿ ತಿಂಡಿ ಬೇಕೆ
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು

ನಾಯಿಮರಿ ನಿನಗೆ ತಿಂಡಿ ಏಕೆ ಬೇಕು
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು

ನಾಯಿಮರಿ ಕಳ್ಳ ಬಂದರೇನು ಮಾಡುವೆ
ಕ್ವೊಂ ಕ್ವೊಂ ಬೌ ಎಂದು ಕೂಗಿ ಪಾಡುವೆ

ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು