ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Tuesday, July 22, 2014

ಸಂದರ್ಶನ - ತಾರಾ ಶೈಲೇಂದ್ರ

ತಾರಾ ಶೈಲೇಂದ್ರ ಅವರು ನಡೆಸಿದ ಜಯಂತ ಕಾಯ್ಕಿಣಿ ಅವರ ಸಂದರ್ಶನದ ಒಂದು ಆಯ್ದ ಭಾಗ. ಪೂರ್ತಿ ಓದಿಗೆ ಈ ಲಿಂಕ್ ಕ್ಲಿಕ್ಕಿಸಿ...
http://taraantaranga.blogspot.in/2014/06/blog-post.html

ಪ್ರಶ್ನೆ : ತಾವು ಮೂಲತಃ Biochemist ಆಗಿದ್ದು , ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದು ಹೇಗೆ ?
ಉತ್ತರ : ವಿಜ್ಞಾನ ಹಾಗೂ ಸಾಹಿತ್ಯ ಬೇರೆ ಎಂಬ ಕಲ್ಪನೆ ತಪ್ಪು .
ಕುವೆಂಪು ಅವರು QUANTUM PHYSICS ಓದಿದವರು .
ಬೇಂದ್ರೆಯವರ ಗ್ರಂಥಾಲಯದ ೧೩,೦೦೦ ಪುಸ್ತಕಗಳಲ್ಲಿ ೧೦,೦೦೦ ವಿಜ್ಞಾನಕ್ಕೆ ಸಂಬಂಧಿಸಿದವು .
ಯಶವಂತ್ ಚಿತ್ತಾಲರು ಒಬ್ಬ Polymer Chemist.
ಪೂರ್ಣಚಂದ್ರ ತೇಜಸ್ವಿಯವರು ಒಬ್ಬ ಸಸ್ಯಶಾಸ್ತ್ರಜ್ಞರು
ಕಾರಂತರು ನಡೆದಾಡುವ ವಿಜ್ಞಾನ ವಿಶ್ವಕೋಶ ಎನಿಸಿಕೊಂಡವರು
ನಿಸಾರ್ ಅಹ್ಮದ್ ಅವರು Geologist ಆಗಿದ್ದವರು .
ನಾವು ಮಕ್ಕಳಲ್ಲಿ ವಿಜ್ಞಾನ ಓದಿದವ ಬುದ್ಧಿವಂತ , ಕಲೆ ಓದಿದವ ದಡ್ಡ ಎಂಬ ತಪ್ಪು ಅಭಿಪ್ರಾಯ ಬೆಳೆಸಿ, ದಾರಿ ತಪ್ಪಿಸಿದ್ದೇವೆ. ವಿಜ್ಞಾನ ಮತ್ತು ಕಲೆ ಎರಡೂ ಒಂದಕ್ಕೊಂದು ಪೂರಕವಾಗಿರಬೇಕು.

Wednesday, July 16, 2014

ಅಮ್ಮ- ಸ್ಮತಿ ಶ್ರೀ


ಸುದ್ದಿಗುದ್ದುbyPHD‬ - P Harish Dixit Marathe,

ಮಹಿಳೆಯರ ಹಿತ ಕಾಯಲು ಸರ್ಕಾರ ವಿಫಲ - ಶಾಸಕ ಆರ್.ಅಶೋಕ್.
.
ಸರ್ಕಾರ ವಿಫಲವಾದರೇನು, ದೇವರಿಲ್ಲವೇ?
ರಾಜ್ಯದ ಕರೆಂಟನ್ನು ತೆಗೆದ ದೇವರಿಗೆ ಅತ್ಯಾಚಾರ ಮಾಡುವ ಗಂಡಸರ ಫ್ಯೂಸ್ ತೆಗೆಯುವುದು ಗೊತ್ತಿಲ್ಲವೇ? 

ಸುದ್ದಿಗುದ್ದುbyPHD‬ - P Harish Dixit Marathe,

ಕೂಡಗಿ ಸ್ಥಾವರವನ್ನು ಇನ್ನಷ್ಟು ಪರಿಸರ ಸ್ನೇಹಿ ಆಗಿಸಲು ''ಅಲ್ಟ್ರಾ ಮಾಡರ್ನ್ ಸೂಪರ್ ಕ್ರಿಟಿಕಲ್ ತಂತ್ರಜ್ಞಾನ'' ಅಳವಡಿಸಿಕೊಳ್ಳಲು ಸಾಧ್ಯವೇ ಎಂಬುದರ ಕುರಿತು ಪರಿಶೀಲಿಸಲಾಗುವುದು. ''ಜನ ಭಯಪಡುವ ಅಗತ್ಯವಿಲ್ಲ.'' - ಎಂ.ಬಿ. ಪಾಟೀಲ. - ಪತ್ರಿಕಾ ವರದಿ
.
ಅಲ್ಟ್ರಾ ಮಾಡರ್ನ್ ಸೂಪರ್ ಕ್ರಿಮಿನಲ್ ಏಥೂ  ಕ್ರಿಟಿಕಲ್ ...... ಈ ಪದಪುಂಜವೇ ಭಯ ಹುಟ್ಟಿಸುವಂತಿದೆಯಲ್ಲ ಸಿವಾ 

ಸುದ್ದಿಗುದ್ದುbyPHD‬ - P Harish Dixit Marathe

ಸರ್ಕಾರದ 'ಭಾಗ್ಯಲಕ್ಷ್ಮಿ' ಯೋಜನೆಯ ಫಲಾನುಭವಿಗಳಲ್ಲಿ 7814 ಮಕ್ಕಳು ಎಲ್ಲಿದ್ದಾರೆ ಎಂಬುದು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೇ ಗೊತ್ತಿಲ್ಲ ! -  ಪತ್ರಿಕಾ ವರದಿ
.
ರಸ್ತೆ ಬದಿಯಲ್ಲಿ ಒಬ್ಬ ಊದ್ದಕ್ಕೆ ಗುಂಡಿ ತೋಡ್ತಾ ಹೋಗ್ತಿದ್ನಂತೆ. ಮತ್ತೊಬ್ಬ ಮುಚ್ತಾ (ಮುಂಡಾ ಮೋಚ್ತಾ  ) ಬರ್ತಿದ್ನಂತೆ.
ಏನ್ರೋ ಇದು ಅಂತ ಕೇಳಿದ್ರೆ, ನಮ್ಮಿಬ್ರ ಮಧ್ಯ ಇನ್ನೊಬ್ಬ ಗಿಡ ನೆಡೋನು ಇರ್ಬೇಕಾಗಿತ್ತು ಸಾ, ಆದ್ರೆ ಅವ್ನಿವತ್ತು ಬಂದಿಲ್ಲ, ರಜಾ, ನಮ್ ಕೆಲ್ಸ ನಾವ್ ಮಾಡ್ತಾ ಇದೀವಿ ಸಾ ಅಂದ್ರಂತೆ ಇಬ್ರೂ.
ಹಾಗೇ, ಭಾಗ್ಯ ಕೊಟ್ಟೋರು ಭಾಗ್ಯ ತಗಂಡೋರು ಇಬ್ರೂ ಇದ್ದು ಲಕ್ಷ್ಮಿನೇ ಹುಟ್ಟಿಲ್ದಿದ್ರೆ ಈಗೇನ್ ಮಾಡೋಕಾಗತ್ತೆ! 

Thursday, July 10, 2014


ಭಾರತದ ಪ್ರಥಮ “72 ಜೀನಾಲಯ”

72 ಜೀನಾಲಯದ ಹೊರ ಆವರಣದ ಒಂದು ನೋಟ


ರಾಜಸ್ಥಾನ ರಾಜ್ಯದ  ಜಾಲೋರ ಜಿಲ್ಲೆ ಬೀನಮಾಲ್ ಬ್ಲಾಕನಲ್ಲಿ  (ತಾಲ್ಲೂಕು) ಲಕ್ಷ್ಮೀ ವಲ್ಲಭ 72 ಜೀನಾಲಯ ಇರುವುದು. ಇದು ಭಾರತ ದೇಶದ ಪ್ರಥಮ 72 ಜೀನಾಲಯವಾಗಿರುವುದು. ಬ್ಲಾಕನ ಕೇಂದ್ರ ಸ್ಥಳದಲ್ಲಿಯೇ ಈ ಮಂದಿರ ಇರುವದು. ಲುಕಡ ಪರಿವಾರದವರು ಕಟ್ಟಿಸಿರುವ ಈ ಜೀನಾಲಯದಲ್ಲಿ ಜೈನ ಧರ್ಮದ 72 ತೀರ್ಥಂಕರರ ವಿಗ್ರಹಗಳು ಇರುವುದು
72  ಜೀನಾಲಯದ ಇದರ
 ಸಂಪೂರ್ಣ ನೋಟ
ವಿಶೇಷವಾಗಿದೆ. ಜೈನ ಧರ್ಮದ ಅನುಯಾಯಿಗಳಿಗೆ ತಮ್ಮ ಎಲ್ಲಾ ತೀರ್ಥಂಕರರನ್ನು ಒಂದೇ ಮಂದಿರದಲ್ಲಿ ನೋಡುವ ಸೌಭಾಗ್ಯವನ್ನು ಈ ಜೀನಾಲಯ ಒದಗಿಸಿರುವುದು. ತನ್ನದೇ ಆದ ವಿಶಿಷ್ಠ ಅತ್ಯಂತ ಸುಂದರವಾದ ಶಿಲ್ಪ ಕಲೆಗಳಿಂದ ನಿಮೀ೯ತವಾದ ಈ ಜೈನ ದೇವಾಲಯ ಆಧುನಿಕ ಶಿಲ್ಪಕಲೆಯ ಪ್ರತಿಬಿಂಬವಾಗಿರುವುದು. ಬಿಳಿಯಾದ ಮಾರ್ಬಲಗಳಿಂದ ರಚಿತವಾದ ಈ ಮಂದಿರ ರಾಜಸ್ಥಾನದ ಒಂದು ಹೆಮ್ಮೆಯಾಗಿರುವುದು.  ಜಾಲೋರ-ಬೀನಮಾಲ ಮುಖ್ಯ ರಸ್ತೆಯ ಬದಿಯಲ್ಲಿಯೇ ಇರುವ ಇದು ದಾರಿಯಲ್ಲಿ ಸಾಗುವ ಎಲ್ಲರನ್ನು ಕೈ ಬೀಸಿ ಕರೆಯುತ್ತಿರುವುದು.
ವಿಶಾಲವಾದ ದೇವಾಲಯದ ಹೊರಗಿನ ಆವರಣ, ಜೀನಾಲಯದಲ್ಲಿ ಇರುವ ಪಾರಿವಾಳಗಳು, ಹಸಿರು ಹುಲ್ಲುಗಳು, ಸುಂದರ ಹೂವುಗಳು ಬೇವಿನ ಮರದ ಕೆಳಗಿನ ತಂಪಾದ ಗಾಳಿ ರಾಜಸ್ಥಾನದ ಊರಿ ಬಿಸಿಲಿನಲ್ಲಿಯೂ ನಾವು ಬೇರೆ ಯಾವುದೋ ಲೋಕದಲ್ಲಿರುವ ಅನುಭವವನ್ನು ನೀಡುವುದು.
ಸುಮಾರು 140 ಕೊಠಡಿಗಳ ಧರ್ಮಶಾಲೆ, ಭೋಜನಶಾಲೆ ಈ ಎಲ್ಲವೂ ಮಂದಿರದ ಆವರಣದಲ್ಲಿಯೇ ಇದ್ದು ಬರುವ ಪ್ರವಾಸಿಗರಿಗೆ ಸೇವೆಯನ್ನು ಒದಗಿಸುತ್ತಿರುವುದು.
ರಾಜಸ್ಥಾನದ ಪ್ರವಾಸಕ್ಕೆಂದು ನೀವು ಬಂದರೆ  ತಪ್ಪದೇ ಈ ದೇವಾಲಯದ ಸೌಂದರ್ಯವನ್ನು ಸವಿದೇ ಹೋಗಿರಿ. 72 ತೀರ್ಥಂಕರರನ್ನು ತಾವು ಸಹಾ ದರ್ಶನ ಮಾಡಿರಿ.


72 ಜೀನಾಲಯದ ಮುಖ್ಯ ದ್ವಾರದ 
ಒಂದು ನೋಟ

72 ಜೀನಾಲಯದ ಎರಡು 
ಬದಿಯ ನೋಟ
72 ಜೀನಾಲಯದ ಹೊರ 
ಆವರಣದ ಒಂದು ನೋಟ


- ಮುಖ್ಯ ದ್ವಾರದ ಸೌಂದರ್ಯ ಹೆಚ್ಚಿಸಿರುವ ಪಾರಿವಾಳಗಳು


                 72  ಜೀನಾಲಯದ ಇದರ ಸಂಪೂರ್ಣ ನೋಟ



ವರದಿ , ವಿವೇಕ ಬೆಟ್ಕುಳಿ,

Wednesday, July 9, 2014

ಇಳಿದು ಬಾ ತಾಯಿ ಇಳಿದು ಬಾ - ದ ರಾ ಬೇಂದ್ರೆ,

ಇಳಿದು ಬಾ ತಾಯಿ ಇಳಿದು ಬಾ || ಪ ||

ಹರನ ಜಡೆಯಿಂದ ಹರಿಯ ಅಡಿಯಿಂದ
ಋಷಿಯ ತೊಡೆಯಿಂದ ನುಸುಳಿ ಬಾ;
ದೇವದೇವರನು ತಣಿಸಿ ಬಾ
ದಿಗ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ ಇಳಿದು ಬಾ.

ನಿನಗೆ ಪೊಡಮಡುವೆ ನಿನ್ನನುಡುತೊಡುವೆ
ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ
ಬಯಲ ಜರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ, ತಾಯಿ ಇಳಿದು ಬಾ
ಇಳಿದು ಬಾ, ತಾಯೇ ಇಳಿದು ಬಾ.

ನನ್ನ ತಲೆಯೊಳಗೆ
ನನ್ನ ಬೆಂಬಳಿಗೆ
ನನ್ನ ಒಳಕೆಳಗೆ ನುಗ್ಗಿ ಬಾ,
ಕಣ್ಣ ಕಣ ತೊಳಿಸಿ
ಉಸಿರ ಎಳೆ ಎಳಿಸಿ
ನುಡಿಯ ಸಸಿ ಮೊಳಸಿ ಹಿಗ್ಗಿ ಬಾ;
ಎದೆಯ ನೆಲೆಯಲ್ಲಿ ನೆಲೆಸಿ ಬಾ
ಜೀವ ಜಲದಲ್ಲಿ ಚಲಿಸಿ ಬಾ
ಮೂಲ ಹೊಲದಲ್ಲಿ ನೆಲೆಸಿ ಬಾ
ಇಳಿದು ಬಾ ತಾಯೇ ಇಳಿದು ಬಾ.

ಕಂಚು ಮಿಂಚಾಗಿ ತೆರಳಿ ಬಾ
ನೀರು ನೀರಾಗಿ ಉರುಳಿ ಬಾ
ಮತ್ತೆ ಹೊಡೆಮರಳಿ ಹೊರಳಿ ಬಾ,
ದಯೆಯಿರದ ದೀನ
ಹರೆಯಳಿದ ಹೀನ
ನೀರಿರದ ಮೀನ ಕರೆಕರೆವ ಬಾ
ಇಳಿದು ಬಾ ತಾಯೇ ಇಳಿದು ಬಾ.

ಕರು ಕಂಡ ಕರುಳೆ
ಮನ ಉಂಡ ಮರುಳೆ
ಉದ್ದಂಡ ಅರುಳೆ
ಸುಳಿಸುಳಿದು ಬಾ;
ಶಿವಶುಭ್ರ ಕರುಣೆ
ಅತಿಕಿಂಚದರುಣೆ
ವಾತ್ಸಲ್ಯವರಣೆ
ಇಳಿ ಇಳಿದು ಬಾ
ಇಳಿದು ಬಾ ತಾಯೇ ಇಳಿದು ಬಾ.

ಕೊಳೆಯ ತೊಳೆವವರು ಇಲ್ಲ ಬಾ
ಬೇರೆ ಶಕ್ತಿಗಳ ಹೊಲ್ಲ ಬಾ
ಹೀಗೆ ಮಾಡಿದರು ಅಲ್ಲ ಬಾ
ನಾಡ ನಾಡಿಯನು ತುತ್ತ ಬಾ
ನಮ್ಮ ನಾಡನ್ನೆ ಸುತ್ತ ಬಾ
ಸತ್ತ ಜನರನು ಎತ್ತ ಬಾ.

ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುದ್ಧ ಶುದ್ಧ ನೀರೆ!
ಎಚ್ಚೆತ್ತು ಎದ್ದ ಆಕಾಶದುದ್ದ ಧರೆಗಿಳಿಯಲಿದ್ದ ಧೀರೆ!
ಸಿರಿವಾರಿಜಾತ ವರಪಾರಿಜಾತ ತಾರಾ-ಕುಸುಮದಿಂದೆ
ವೃಂದಾರವಂದ್ಯೆ ಮಂದಾರಗಂಧೆ ನೀನೇ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ!
ಬಂದಾರೆ ಬಾರೆ ಒಂದಾರೆ ಸಾರೆ ಕಣ್ಧಾರೆ ತಡೆವರೇನೆ?
ಅವತಾರವೆಂದೆ ಎಂದಾರೆ ತಾಯಿ, ಈ ಅಧಃಪಾತವನ್ನೆ?

ಹರಕೆ ಸಂದಂತೆ
ಮಮತೆ ಮಿಂದಂತೆ
ತುಂಬಿ ಬಂದಂತೆ
ದುಮ್ ದುಮ್ ಎಂದಂತೆ ದುಡುಕಿ ಬಾ
ನಿನ್ನ ಕಂದನ್ನ ಹುಡುಕಿ ಬಾ
ಹುಡುಕಿ ಬಾ ತಾಯೆ ದುಡುಕಿ ಬಾ ಇಳಿದು ಬಾ ತಾಯಿ ಇಳಿದು ಬಾ

ಹರಣ ಹೊಸದಾಗಿ ಹೊಳೆದು ಬಾ
ಬಾಳುಬೆಳಕಾಗೆ ಬೆಳೆದು ಬಾ
ಕೈ ತೊಳೆದು ಬಾ
ಮೈ ತಳೆದು ಬಾ
ಇಳೆಗಿಳಿದು ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯೇ ಇಳಿದು ಬಾ.

ಶಂಭು ಶಿವಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ ಇಳಿದು ಬಾ

Monday, July 7, 2014

ವಿಶ್ವದ ಮೊದಲ ಹಡಗು ಮಂದಿರ - ವರದಿ * ವಿವೇಕ ಬೆಟ್ಕುಳಿ

ರಾಜಸ್ಥಾನ ರಾಜ್ಯದ ಜಾಲೋರ ಜಿಲ್ಲೆಯಲ್ಲಿ ಬರುವ ಜಿಲ್ಲೆಯ ಸಾಯಲಾ ಬ್ಲಾಕನ ಮಂಡವಾಲಾ ಗ್ರಾಮದಲ್ಲಿ ವಿಶ್ವದ ಪ್ರಥಮ ಹಡಗು ಮಂದಿರವಿರುವುದು. ಜಾಲೋರದಿಂದ 20-22 ಕಿ. ಮೀ ದೂರವಿರುವ ಜೈನ ಮಂದಿರವನ್ನು  ಜಹಾಜ್ ಮಂದಿರವೆಂದೆ ಕರೆಯುವರು. ಜಹಾಜ್ ಎಂದರೆ ಹಡಗು ಎಂದರ್ಥ.

             ಹಡಗು ಮಂದಿರದ ಒಂದು ನೋಟ

ಶ್ರೀ ಕಾಂತಿಸಾಗರಸೂರಿ ಸ್ಮಾರಕ ಟ್ರಸ್ಟನವರು ನಿಮಿ೯ಸಿರುವ ಮಂದಿರ ತನ್ನದೇ ಆದ ವಿಶೇಷತೆಯನ್ನು ಹಂದಿರುವುದುಕ್ರಿ. 1992 ರಲ್ಲಿ ಕಟ್ಟಲ್ಪಟ್ಟ   ಜೈನ ಮಂದಿರ ಮಾರ್ಬಲನಿಂದ ನಿಮಿ೯ತವಾಗಿರುವುದು. ಮಂದಿರದ ಒಳಗೆ ಬಳಕೆ ಮಾಡಿರುವ ಎಲ್ಲಾ ಸಾಮಗ್ರಿಗಳು ತಳ ತಳ ಹೊಳುಯುವಂತಹ ಸಾಮಗ್ರಿಯಾಗಿದೆ. ಸಂಪೂರ್ಣ ಮಂದಿರ ಶ್ರೀಮಂತಿಕೆಯಿಂದ ತುಂಬಿ ತಳ ತಳಸಿರುವುದು.  ಪುರಾಣ ಕಾಲದ ಮಂದಿರಗಳನ್ನು ನೋಡುತ್ತಾ ಅವುಗಳನ್ನು ವಣಿ೯ಸುತ್ತಾ ಇತಿಹಾಸ ಕೆದಕುತ್ತಾ ಇರುವ ನಾವು ಆಧುನಿಕ ಯುಗದಲ್ಲಿ ಹೆಚ್ಚು ವೈಭವೋಪ್ರೇರಿತ ಮಂದಿರಗಳನ್ನು ನಿಮಿ೯ಸಿರುವುದು ಕಡಿಮೆ ಇರುವುದುಇಂತಹ ಸಂದರ್ಭದಲ್ಲಿ ಜೈನ ಸಮುದಾಯವರು ನಿಮಿ೯ಸಿರುವ ಹಡಗು ಮಂದಿರ ಎಲ್ಲರ ಆಕರ್ಷಣೆಯ ಬಿಂದುವಾಗಿರುವುದುಮುಂದೆ ಇದು ಜೈನ ಧರ್ಮದ ಇತಿಹಾಸ ಆಗುವುದರಲ್ಲಿ ಯಾವ ಸಂದೇಹವು ಇಲ್ಲ.
ದೇವಾಲಯದ ಹೆಸರೆ ಹೇಳುವಂತೆ ಇದು ಹಡಗು ಮಂದಿರ. ದೂರದಿಂದ ನೋಡಿದಾಗ ದೊಡ್ಡದಾದ ಹಡಗು ಬಂದರಿನಲ್ಲಿ ಬಂದು ನಿಂತಂತೆ ಕಾಣುವುದು. ರಾತ್ರಿಯಲ್ಲಿ ನೋಡಿದಾಗ ಇದು ದೇವಾಲಯ ಎಂದು ಹೇಳಲು ಬಾಯಿ ಬರದು ಬದಲಾಗಿ ಸಮುದ್ರದಲ್ಲಿ ನಿಂತಿರುವ ಹಡಗಾಗಿರುವುದು.
ಹಡಗು ಮಂದಿರದ ಒಳಗೆ ತಳ ತಳಿಸುವ ಮಾಬ್ರಲ್, ವಿವಿಧ ಕಲ್ಲುಗಳು, ಅಗತ್ಯಕ್ಕೆ ತಕ್ಕ ಲೈಟ್ ವ್ಯವಸ್ಥೆ ಎಲ್ಲವು ಮಂದಿರದ ಸೌಂಧರ್ಯವನ್ನು ಇಮ್ಮಡಿಗೊಳಿಸಿರುವುದು.
ರಾಜಸ್ಥಾನದ ಪ್ರಮಾಸಕ್ಕಾಗಿ ತಾವುಗಳು ಬಂದರೆ ಮಂದಿರವು ಸಹಾ ನಿಮ್ಮ ಯೋಜನೆಯಲ್ಲಿರಲಿ. ಇಲ್ಲಿ ತಮಗೆ ಬೇಕಾದ ವಸತಿ ಮತ್ತು ಊಟದ ವ್ಯವಸ್ಥೆಯೂ ಇರುವುದು.

ಹಡಗು ಮಂದಿರದ ರಾತ್ರಿಯ ಒಂದು ನೋಟ

                   ಮಂದಿರದಲ್ಲಿ ಇರುವ  ಪ್ರತಿಮೆ


ಮಂದಿರದ ಒಳಗಿನ ತಳ ತಳಿಸುವ ಕಂಬಗಳ ಸಾಲು

ಇಲ್ಲಿ ಕಾಣಿಕೆ ಹಾಕುವುದು ಹಡಗಿನಲ್ಲಿಯೇ ಆಗಿರುವುದು

                       ಮಂದಿರದ ಮೇಲ್ಭಾಗದ ಒಂದು ನೋಟ





                                                                                                                              ವಿವೇಕ ಬೆಟ್ಕುಳಿ

Saturday, July 5, 2014

ಈಶ್ವರ ಸಣಕಲ್ಲ ಅವರ ಪ್ರಖ್ಯಾತ ಕವಿತೆ "ಕೋರಿಕೆ" - ಶ್ರೀವತ್ಸ ಜೋಶಿ

ನಿಮ್ಮ ಮೆಚ್ಚಿನ FB ಪೋಸ್ಟುಗಳು...
====================
ಈ ವಾರ, ಕೋರಿಕೆಗೆ ಕೋರಿಕೆ! ಅಂದರೆ, ಈಶ್ವರ ಸಣಕಲ್ಲ ಅವರ ಪ್ರಖ್ಯಾತ ಕವಿತೆ "ಕೋರಿಕೆ" ಪ್ರಕಟಿಸುವಂತೆ ಕೋರಿಕೆ ಎಂದು ಅರ್ಥ  ಪತ್ರ ಬರೆದವರು ಶಿಕಾಗೋದಿಂದ Anil Deshpande.

ಇದು ಮನಮಿಡಿಯುವ ಪದ್ಯ. ನಾನು ಕಲಿತ ಸಿಲೆಬಸ್‌ನಲ್ಲಿರಲಿಲ್ಲವಾದರೂ ಬೇರೆಬೇರೆ ವರ್ಷಗಳಲ್ಲಿ ಕನ್ನಡ ಪಠ್ಯಪುಸ್ತಕಗಳನ್ನು ಅಲಂಕರಿಸಿ, ವಿದ್ಯಾರ್ಥಿಗಳ ಮನದಾಳದಲ್ಲಿ ಅಚ್ಚಳಿಯದೇ ನಿಂತಿರುವ ಕವನಕುಸುಮಗಳಲ್ಲಿ ಇದೊಂದು. ಪ್ರಪಂಚದಲ್ಲಿ ಈಗೀಗ ಪ್ರತಿಯೊಬ್ಬರೂ ತನ್ನ ಲಾಭ, ತನ್ನ ಸಂಪತ್ತು, ತನ್ನ ಸುಖಗಳಲ್ಲಷ್ಟೇ ಮಗ್ನರಾಗಿರುವಾಗ ಕವಿಯ ಆಶಯ ತದ್ವಿರುದ್ಧ! ತನಗೆ ಕಷ್ಟಗಳಿರಲಿ, ಬಡತನವಿರಲಿ ಚಿಂತೆಯಿಲ್ಲ, ಆದರೆ ಜಗತ್ತು ಸುಖವಾಗಿರಲಿ ಎಂಬ ಹಂಬಲ ಕವಿಯದು. ಈಶ್ವರ ಸಣಕಲ್ಲರವರು ಇದನ್ನು "ಅಕ್ಷರಗಳನ್ನಲಂಕರಿಸುತ್ತಾ ನಾನೂ ಒಂದು ಕವನ ಬರೆದೆ, ಫೇಸ್‌ಬುಕ್‌ನಲ್ಲಿ ಹತ್ತಾರು ಲೈಕುಗಳನ್ನು ಗಿಟ್ಟಿಸಿದೆ" ಎಂಬ ರೀತಿಯಲ್ಲಿ ಬರೆದದ್ದಲ್ಲ. ಅವರು ಬರೆದಂತೆಯೇ ಬದುಕಿದವರು, ಬದುಕಿದಂತೆಯೇ ಬರೆದವರು. ಕಸ್ತೂರಿನಿವಾಸ ಚಿತ್ರಗೀತೆಯಲ್ಲಿ ಚಿ.ಉದಯಶಂಕರ್ ಬರೆದ "ಮೈಯನೆ ಹಿಂಡಿ ನೊಂದರೂ ಕಬ್ಬು ಸಿಹಿಯ ಕೊಡುವುದು... ತೇಯುತಲಿದ್ದರೂ ಗಂಧದ ಪರಿಮಳ ತುಂಬಿ ಬರುವುದು... ತಾನೇ ಉರಿದರೂ ದೀಪವು ಮನೆಗೆ ಬೆಳಕ ಕೊಡುವುದು...’ ಎಂಬ ಸಾಲುಗಳಲ್ಲಿನ ಕಬ್ಬು, ಗಂಧ, ದೀಪಗಳಂತೆಯೇ ಈ ಕವಿಯ ಆತ್ಮ. ತನಗೆ ತೊಂದರೆಯಾದರೂ ಸರಿಯೇ, ಜಗವು ನಗುನಗುತಿರಲಿ ಎಂಬ ನಿವೇದನೆ.

ಸ್ನೇಹಿತ ಅನಿಲ ದೇಶಪಾಂಡೆಯವರು ಈ ಕೋರಿಕೆ ಸಲ್ಲಿಸಿರುವುದು ಅರ್ಥಪೂರ್ಣವೇ ಆಗಿದೆ. ಅವರು ‘SEWA’ (Selfless Efforts for Welfare of All. www.sewausa.org ) ಎಂಬ ಸ್ವಯಂಸೇವಾ ಸಂಸ್ಥೆಯ ಶಿಕಾಗೋ ಶಾಖೆಯ ಸಕ್ರಿಯ ಕಾರ್ಯಕರ್ತ. ಈ ಕವಿತೆಯು ಅವರ ಮೇಲೆ ಪ್ರಭಾವ ಬೀರಿರುವುದು, ಮತ್ತು, ಇನ್ನಷ್ಟು ಸಮಾನಮನಸ್ಕರ ಮೇಲೆ ಇದು ಪ್ರಭಾವ ಬೀರಲಿ ಎಂದು ಅವರು ಬಯಸಿರುವುದು ಸಹಜವೇ ಆಗಿದೆ. ಇಷ್ಟು ಒಳ್ಳೆಯ, ಭಾವಪೂರ್ಣ ಕವಿತೆಯನ್ನು ನೆನಪಿಸಿದ್ದಕ್ಕೆ ಅನಿಲ್ ಅವರಿಗೆ ಧನ್ಯವಾದಗಳು.

* * *
ಇನ್ನೋರ್ವ ಹಿರಿಯಸ್ನೇಹಿತ ಪುತ್ತೂರಿನ Moorthy Deraje ಅವರ ಸಂಗ್ರಹದಿಂದ, ಗಾಯಕ ಗರ್ತಿಕೆರೆ ರಾಗಣ್ಣ ಅವರ ಧ್ವನಿಯಲ್ಲಿ ಈ ಕವಿತೆಯನ್ನು ಇಲ್ಲಿ ಕೇಳಬಹುದು:
https://soundcloud.com/srivathsajoshi/mbnaooaoyiok

* * *
"ಕೋರಿಕೆ" - ಈಶ್ವರ ಸಣಕಲ್ಲ ಅವರ ಪದ್ಯದ ಸಾಹಿತ್ಯ:

ಜಗವೆಲ್ಲ ನಗುತಿರಲಿ!
ಜಗದಳುವು ನನಗಿರಲಿ!
ನಾನಳಲು, ಜಗವೆನ್ನನೆತ್ತಿಕೊಳದೇ?
ನಾ ನಕ್ಕು, ಜಗವಳಲು ನೋಡಬಹುದೇ?

ತೆರವಾಗಿ ನನ್ನೆದೆಯು,
ಧರೆಯೆದೆಯು ಉಕ್ಕಿರಲಿ!
ಧರೆಯೊಳಗೆ ತೇಲಿಸುವೆನೆನ್ನೆದೆಯನು!
ಧರೆ ಬತ್ತಿ, ಎನ್ನೆದೆಯು ಉಕ್ಕಲೇನು?

ಪೊಡವಿಯೈಸಿರಿವಡೆದು,
ಬಡತನವು ನನಗಿರಲಿ
ಕೈಯೊಡ್ಡೆ ಪೊಡವಿಯೆನಗಿಕ್ಕದೇನು?
ಪೊಡವಿಯೇ ಮೈಯಳಿಯೆ, ಮಾಡಲೇನು?

ವಿಶ್ವವನು ತುಂಬಿರುವ
ಈಶ್ವರನೆ ಅಳತೊಡಗೆ,
ಸೈತಿಡಲು, ಸೈಪಿಡಲು ಬರುವನಾವಂ?
’ಹೇ ತಂದೆ’,ಎನಲೆನ್ನನವನೆ ಕಾವಂ!

* * *
ಕವಿ ಕೃತಿ ಪರಿಚಯ:
ಈಶ್ವರ ಸಣಕಲ್ಲ (1906-1984): ’ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ…’ ಎಂದು ಹಾಡಿ, ಸಂಭಾವಿತ ಕವಿ ಎಂಬ ಅಗ್ಗಳಿಕೆಗೆ ಪಾತ್ರರಾಗಿ ಬದುಕಿನುದ್ದಕ್ಕೂ ಕಷ್ಟಗಳನ್ನೇ ಉಂಡ ಈಶ್ವರ ಸಣಕಲ್ಲರು ಹುಟ್ಟಿದ್ದು ಜಮಖಂಡಿ ತಾಲ್ಲೂಕಿನ ರಬಕವಿಯಲ್ಲಿ. ತಂದೆ ಮಹಾರುದ್ರಪ್ಪ, ತಾಯಿ ನೀಲಮ್ಮ. ನೇಕಾರರ ಕುಟುಂಬ. ಪ್ರಾರಂಭಿಕ ವಿದ್ಯಾಭ್ಯಾಸ ತಾಯಿಯ ತೌರೂರಾದ ಯಾದವಾಡ, ರಬಕವಿಯಲ್ಲಿ. ಬಾಲ್ಯದಿಂದಲೇ ಓದಿನಲ್ಲಿ ಆಸಕ್ತಿ, ಪ್ರೌಢಶಿಕ್ಷಣ ಬೆಳಗಾವಿಯ ಜಿ.ಎ. ಹೈಸ್ಕೂಲ್‌ನಲ್ಲಿ. ಆಗಲೇ ಹಲವಾರು ಕವನಗಳ ರಚನೆ. ಶಿವಾನಂದ ಸ್ವಾಮಿಗಳವರ "ಬ್ರಹ್ಮಚರ‍್ಯವೇ ಜೀವನ, ವೀರ‍್ಯನಾಶವೇ ಮೃತ್ಯು" ಗ್ರಂಥದ ಕನ್ನಡಾನುವಾದ ಮಾಡಿದ್ದು 22ರ ಹರೆಯದಲ್ಲಿ. 1929ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣ. ಕೊಲ್ಲಾಪುರದ ರಾಜಾರಾಮ ಕಾಲೇಜಿಗೆ ಸೇರ‍್ಪಡೆ. ಹಣಕಾಸಿನ ತೊಂದರೆಯಿಂದ ಕಾಲೇಜು ಶಿಕ್ಷಣಕ್ಕೆ ಸಂಚಕಾರ. ಉದ್ಯೋಗಕ್ಕೆ ಸೇರಿದ್ದು ರಬಕವಿಯಲ್ಲಿ . ಮಿತ್ರ ಸಮೂಹ ಖಾದಿ ಭಂಡಾರ, ನಂತರ ವಚನ ಪಿತಾಮಹ ಫ.ಗು.ಹಳಕಟ್ಟಿಯವರ ‘ಶಿವಾನುಭವ’ ಮತ್ತು ನವಕರ್ನಾಟಕದ ಪತ್ರಿಕೆಯ ಪ್ರಕಟಣೆಯ ಸಹಾಯಕರಾಗಿ. 1934ರಲ್ಲಿ ಮೊದಲ ಕವನ ಸಂಕಲನ ‘ಕೋರಿಕೆ’ಪ್ರಕಟ. ನಂತರ ಉದ್ಯೋಗಕ್ಕೆ ಸೇರಿದ್ದು ಹರ್ಡೇಕರ್ ಮಂಜಪ್ಪನವರ ಆಲಮಟ್ಟಿ ಆಶ್ರಮದಲ್ಲಿ. ಶರಣ ಸಂದೇಶ, ಖಾದಿ ಗ್ರಾಮೋದ್ಯೋಗ ಪತ್ರಿಕೆಗಳ ಸಂಪಾದಕತ್ವ, ಬೆಳಗಾವಿಯ ಗ್ರಾಮಸೇವಕ ಪತ್ರಿಕೆಯ ಉಪಸಂಪಾದಕ, ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ. ಹಿರೇಮಠರವರಿಂದ ಬಂದ ಕರೆ, ಸಂಶೋಧನೆ ಶಾಖೆಯಲ್ಲಿ 1962ರಿಂದ 1972ರವರೆಗೂ ಸೇವೆ. ಈಶ್ವರ ಸಣಕಲ್ಲ ಸತ್ಯ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದರು. ನಿಷ್ಠುರವಾದಿಗಳಾಗಿದ್ದರು. ಆ ಕಾರಣದಿಂದಾಗಿಯೇ ಅವರು ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಆಗಲಿಲ್ಲ. ಮತ್ತು ಸಾಂಸಾರಿಕ ಜೀವನದಲ್ಲಿಯೂ ನೆಮ್ಮದಿ ಕಾಣಲಿಲ್ಲ. ಬಡತನದ ಬೇಗೆಯಿಂದ ಹೊರಬರಲೂ ಇಲ್ಲ. ಬದುಕಿನ ಉದ್ದಕ್ಕೂ ಬಡತನವನ್ನೇ ಹಾಸಿ, ಬಡತನವನ್ನೇ ಹೊದ್ದು ಬದುಕು ನೂಕಿದರು. ಒಟ್ಟು ಸುಮಾರು ಇಪ್ಪತ್ತು ಕೃತಿ ಪ್ರಕಟಿತ. ‘ಬಟ್ಟೆ’ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ, 1980ರ ಬೆಳಗಾವಿ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ. ಸಣಕಲ್ಲರ ಉತ್ತಮ ಬರವಣಿಗೆಯಿಂದಾಗಿ ರಾಷ್ಟ್ತ್ರಕವಿ ಕುವೆಂಪು ಮನದಲ್ಲಿಯೂ ಅವರು ಸ್ಥಾನ ಪಡೆದಿದ್ದರು. ಸಾಮಾನ್ಯವಾದುದಾವುದನ್ನೂ ಒಪ್ಪಿಕೊಳ್ಳದ ಕುವೆಂಪು ಅವರು ತಮ್ಮ ಆತ್ಮ ಕಥೆಯಲ್ಲಿ ಈಶ್ವರ ಸಣಕಲ್ಲರ ಬಗ್ಗೆಯೂ ಉಲ್ಲೇಖಿಸಿದ್ದಾರನ್ನುವುದು ಸಾಮಾನ್ಯ ಸಂಗತಿಯಲ್ಲ.























ಶ್ರೀವತ್ಸ ಜೋಶಿ