ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Sunday, September 30, 2012

ವಲಿ.... (ಭಾಗ-4)


ಮಹಮದನ ನೂತನ ಧರ್ಮದ ವಿರುದ್ಧ ನಡೆದ ಅನೇಕ ಆರಂಭಿಕ ದ್ವೇಷಪೂರಿತ ಹೋರಾಟಗಳು ಇತಿಹಾಸಕಾರರಿಂದ ದಾಖಲಿಸಲ್ಪಟ್ಟಿವೆ. ಅವುಗಳಲ್ಲಿ ಪ್ರಸಿದ್ಧಿ ಪಡೆದ ಕಥೆಯೊಂದು ಹೀಗಿದೆ.... 'ಮುಸಬ್ ಇಬ್ನ ಒಮೈರ್' ಎಂಬ ಪ್ರಸಿದ್ಧ ಖುರೈಷಿ ಬುಡಕಟ್ಟಿನ ಯುವ ವ್ಯಕ್ತಿಯೊಬ್ಬ ಅಲ್ ಅಕ್ರಮನ ಮನೆಯಲ್ಲಿ ನಡೆಯುತ್ತಿದ್ದ ಮಹಮದನ ಮತ ಭೋದನೆಯಿಂದ ಪ್ರಭಾವಿತನಾಗಿ ಅವನ ಧರ್ಮಕ್ಕೆ ಮತಾಂತರಗೊಂಡ. ಅವನ ಈ ಉದ್ಧಟ ನಡುವಳಿಕೆಯಿಂದ ಕುಪಿತಗೊಂಡ ಅವನ ಹತ್ತಿರದ ಸಂಬಂಧಿಕರು ಅವನ ವಿರುದ್ಧ ಬಹಿಷ್ಕಾರ ಹಾಕಿದರು, ಅದರಲ್ಲೂ ಈ ಬಗ್ಗೆ ವಿಪರೀತ ನೊಂದುಕೊಂಡ ಆತನ ತಾಯಿ ತನ್ನ ನಿಲುವಿಗೆ ವಿರುದ್ಧವಾಗಿ ಮಗ ಮತಾಂತರಗೊಂಡದ್ದರಿಂದ ಮಗ ಹಾಗೂ ಮಹಮದನ ಮೇಲೆ ಕೆರಳಿ ಕೆಂಡವಾದಳು. ಅವಳ ಈ ಕೋಪ ಮಗನನ್ನು ಗೃಹಬಂಧನದಲ್ಲಿರುವ ಮೂಲಕ ಪರ್ಯಾವಸನಗೊಂಡಿತು. ಆದರೆ ಆತ ಅದು ಹೇಗೊ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಅಬಿಸೀನಿಯಕ್ಕೆ ಓಡಿಹೋದ. ಅಲ್ಲಿಂದ ಕೆಲಕಾಲದ ಬಳಿಕ ಆತ ಮೆಕ್ಕಾಗೆ ಹಿಂದಿರುಗಿದಾಗ ಆತನ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿ ತೀರಾ ಶೋಚನೀಯವಾಗಿತ್ತು. ಆದರೆ ಮಗನ ಬಗ್ಗೆ ಕಠಿಣ ನಿಲುವು ತೆಳೆದಿದ್ದ ತಾಯಿ ಆತನನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ, ಹೀಗಾಗಿ ವಿಧಿಯಿಲ್ಲದೆ ಆತ ಕ್ಯಾರವಾನ್ ಒಂದರ ಹಿಂದೆ ಅಲೆಮಾರಿಯಾಗಿ ಎತ್ತಲೊ ಹೋಗಬೇಕಾಯಿತು. ಇದಾಗಿ ಎರಡುವರ್ಷಗಳ ನಂತರ ಆತ ಮರಳಿ ಮೆಕ್ಕಾಕ್ಕೆ ಬಂದ. ಆಗಲೂ ಅವನ ಪರಿಸ್ಥಿತಿ ಹೆಚ್ಚು ಸುಧಾರಿಸಿರಲಿಲ್ಲ. ಈ ಸಾರಿ ಆತನ ಕಡೆಗೆ ಕೊಂಚ ಮೃದುವಾಗಿದ್ದ ಆತನ ತಾಯಿ ಹಳೆಯ ಮಮತೆಯಿಂದ "ಈಗಲೂ ನೀನು ಸ್ವ-ಮತ ಭ್ರಷ್ಟನಾಗಿದ್ದೀಯ?" ಎಂದು ಪ್ರಶ್ನಿಸಿದಳು. ಆತ "ನಾನು ಸತ್ಯಧರ್ಮವಾದ ಇಸ್ಲಾಮನ್ನು ಹಾಗೂ ಪ್ರವಾದಿಯನ್ನು ಹಿಂಬಾಲಿಸುತ್ತಿದ್ದೇನೆ!" ಎಂದು ಉತ್ತರಿಸಿದ. "ಬಾಳಿನ ಉದ್ದಕ್ಕೂ ಹೀಗೆಯೆ ಶೋಚನೀಯ ಸ್ಥಿತಿಯಲ್ಲೆ ಕಾಲ ಹಾಕಬೇಕೆನ್ನುವುದೆ ನಿನ್ನ ಅಂತಿಮ ನಿರ್ಧಾರವ?" ಎಂದಾಕೆ ಮರಳಿ ಪ್ರಶ್ನಿಸಿದಳು. ತನ್ನನ್ನು ಈಕೆ ಮತ್ತೆ ಗೃಹ ಬಂಧನಕ್ಕೆ ಒಳಪಡಿಸಬಹುದು ಎಂಬ ಆತಂಕಕ್ಕೆ ಒಳಗಾದ ಆತ "ಏನು ಒಬ್ಬ ಶ್ರದ್ಧಾವಂತ ಮುಸ್ಲೀಮನನ್ನು ಧರ್ಮ ತ್ಯಜಿಸಲು ನೀನು ಆಮಿಷ ಒಡ್ಡುತ್ತಿದ್ದೀಯ! ಹಾಗೊಂದು ವೇಳೆ ನನ್ನನ್ನು ಇಚ್ಛೆಗೆ ವಿರುದ್ಧವಾಗಿ ಬಂಧನಕ್ಕೆ ಒಳಪಡಿಸಿದೆಯಾದಲ್ಲಿ ನಾನು ನಿನ್ನನ್ನು ಕೊಲ್ಲಲೂ ಹೇಸುವುದಿಲ್ಲ?!" ಎಂದು ಆವೇಶದಿಂದ ಕೂಗಿದ. ತಾಯಿಯೂ ಕನಲಿ "ತೊಲಗು! ಹಾಗಿದ್ದಲ್ಲಿ ಕ್ಷಣ ಮಾತ್ರವೂ ನನ್ನೆದುರು ನಿಲ್ಲಬೇಡ!!" ಎಂದು ಕೂಗಿದಳು. ಆತ ದುಃಖತಪ್ತನಾಗಿ " ಅಮ್ಮಾ,ನಿನಗೆ ಕರುಣಾಮೃತವಾದ ಉಪದೇಶ ನೀಡುತ್ತೇನೆ ಕೇಳು. ದೇವರೊಬ್ಬನೇ ಮಹಮದ್ ಆತನ ಸೇವಕ ಹಾಗೂ ಪ್ರವಾದಿ ಎನ್ನುವುದನ್ನ ನುಡಿದು ನರಕದಿಂದ ಪಾರಾಗು" ಎಂದು ನುಡಿದಾಗ ಆಕೆಗೆ ಕೋಪ ಕಟ್ಟೆಯೊಡೆದು " ನಿನ್ನ ಸೈತಾನ ಧರ್ಮಕ್ಕೆ ಸೇರುವ ಬೆಪ್ಪಳಾಗಲಾರೆ! ತೊಲಗು ಇಲ್ಲಿಂದ, ಇಂದಿಗೆ ನೀ ನನ್ನ ಪಾಲಿಗೆ ಸತ್ತೆ" ಎಂದು ಚೀರಿದಳು. ಮಹಮದ್ ಆರಂಭದಲ್ಲಿ ಆರ್ಥಿಕವಾಗಿ ಹಿಂದುಳಿದಿದ್ದ ಸಮಾಜದ ಕೆಳವರ್ಗದ ಮಂದಿಯನ್ನ ತನ್ನ ಪ್ರಭಾವಲಯದೊಳಗೆ ಮೆಕ್ಕಾದ ಸುತ್ತಮುತ್ತ ಸೆಳೆದುಕೊಳ್ಳುವ ಪ್ರಯತ್ನಮಾಡಿದ. ಅನಂತರ ಖುರೈಶಿಗಳಲ್ಲಿ ಪ್ರತಿಷ್ಠಿತವಾದವರತ್ತ ತನ್ನ ಮೋಹಜಾಲ ಬೀಸಲು ಆರಂಭಿಸಿದ. ಹೀಗೊಮ್ಮೆ ಖುರೈಶಿಗಳಲ್ಲೇ ಉನ್ನತ ವರ್ಗದವನಾಗಿದ್ದ ಅಲ್ ವಾಲಿಬನೊಡನೆ ಧಾರ್ಮಿಕ ಚರ್ಚೆಯಲ್ಲಿ ತೊಡಗಿಕೊಂಡಿದ್ದಾಗ ಅಬ್ದುಲ್ಲಾ ಇಬ್ನ ಉಮ್ಜ್ ಮಕ್ತೂಮ್ ಎಂಬ ಅಂಧ ವ್ಯಕ್ತಿಯೊಬ್ಬ ನಡುವೆ ಬಾಯಿಹಾಕಿ ತನಗೂ ಖುರಾನನ್ನು ತಿಳಿಹೇಳಬೇಕೆಂದು ಕೋರಿದ. ಆದರೆ ಆ ಕ್ಷಣ ಕೋಪಕ್ಕೆ ತುತ್ತಾದ ಮಹಮದ್ ಅವನ್ನು ಕಡೆಗಣಿಸಿ ಗಡುಸಾಗಿ ಮಾರುತ್ತರವನ್ನಿತ್ತ. ಆದರೆ ಕೆಲಹೊತ್ತಿನ ನಂತರ ತನ್ನ ಈ ಹೀನ ನಡುವಳಿಕೆಗೆ ಸ್ವತಃ ನಾಚಿಕೆಪಟ್ಟುಕೊಂಡು 'ಯಾವ ದೇವರು ಒಬ್ಬ ಕುರುಡನನ್ನು ಸೃಷ್ಠಿಸಿದ್ದಾನೊ ಅವನನ್ನು ನಾನು ಕಡೆಗಣಿಸಿದ್ದು ತಪ್ಪು, ತೋರಿಕೆಯ ಸಿರಿವಂತನ ಎದುರು ಅವನನ್ನು ಅನಾದರಿಸಬಾರದಿತ್ತು ಎಂದು ಗೋಳಾಡಿದಾಗ ಸಂತೈಸುವ ದೈವವಾಣಿ ಅವನಿಂದಲೆ ಹೊರಬಂತು. ಹಾಗೆ ಹೊರ ಹೊಮ್ಮಿದ್ದೆ ಸುರಾ 80/1-11 ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಈ ಘಟನೆಯ ಮುಖಾಂತರ ದೀನ ದಲಿತರ ಬಗ್ಗೆ ಉದಾತ್ತ ಭಾವನೆಯೊಂದು ಮಹಮದನ ಹೃದಯವನ್ನು ಹೊಕ್ಕು ಪ್ರಕಾಶಿಸಿತು ಎನ್ನಬಹುದು. ಇದೆ ಸಮಯದಲ್ಲಿ ಆತನ ಮತಪ್ರಚಾರದ ದಿಕ್ಕು ಅರಬೇತರರಾದ ಗ್ರೀಕ್ ಸಮುದಾಯಕ್ಕೆ ಸೇರಿದ ಕ್ರೈಸ್ತರ ಕಡೆಗೆ ತಿರುಗಿತು. ಗುಲಾಮನಾಗಿ ಅರಬ್ಬಿ ಬೆದಾವಿನ್ ಬುಡಕಟ್ಟಿಗೆ ಮಾರಲ್ಪಟ್ಟಿದ್ದ ಸಿನಾನನ ಮಗ ಸಾಹೇಬ್ ಎಂಬ ಗ್ರೀಕನೊಬ್ಬ ಈ ಹೊತ್ತಿಗೆ ಇಸ್ಲಾಂ ಸ್ವೀಕರಿಸಿದ. ಮೆಕ್ಕಾದ ಪ್ರಮುಖ ವ್ಯಕ್ತಿಯಾಗಿದ್ದ ಇಬ್ನ ಜುಡಾನನ ಗುಲಾಮನಾಗಿದ್ದ ಅಪ್ಪಟ ಬಿಳಿಯ ಜನಾಂಗದ ಇವನಿಂದ ಕ್ರೈಸ್ತಧರ್ಮದ ಹಲವು ಒಳಮರ್ಮಗಳನ್ನು ಮಹಮದ್ ಅರಿತು ಬಳಸಿಕೊಳ್ಳಲು ಸಾಧ್ಯವಾಯಿತು, ಅದನ್ನೆ ಸುರಾ 4/164-183ರಲ್ಲಿ ಕಾಣಬಹುದು ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಕುರಾನಿನಲ್ಲಿ ಒಟ್ಟು ಇಪ್ಪತೈದು ಪ್ರವಾದಿಗಳ ಹೆಸರು ಪ್ರಸ್ತಾಪವಾಗಿದೆ. ಅವರಲ್ಲಿ ಮಹಮದ್, ನೂರ್. ಇಬ್ರಾಹಿಮ್, ಜೀಸಸ್ ಹಾಗೂ ಮೂಸಾ ಈ ಐವರಿಗೆ ಪ್ರಬಲ ಆತ್ಮಸ್ಥೈರ್ಯವಿರುತ್ತದೆ ಎನ್ನಲಾಗಿದೆ. ದಿನ ಕಳೆದಂತೆ ಹೊಸತಾಗಿ ಮತಾಂತರಿತವಾಗಿದ್ದ ದೀನ, ದಲಿತ ಹಾಗೂ ಗುಲಾಮರ ಮೇಲೆ ಧರ್ಮನಿಷ್ಠ ಖುರೈಷಿಗಳ ಕೆಂಗಣ್ಣು ಬಿಟ್ಟು ಅವರನ್ನು ಹಿಡಿದು ದೈಹಿಕವಾಗಿ ಹಿಂಸಿಸುವುದು, ಸೆರೆಮನೆಗೆ ತಳ್ಳುವುದು, ಹನಿ ನೀರನ್ನೂ ಕೊಡದೆ ಸುಡುಬಿಸಿಲಿನಲ್ಲಿ ನಿಲ್ಲಿಸಿ ವಿಧಿಯಿಲ್ಲದೆ ಮರಳಿ ಮಾತೃಧರ್ಮಕ್ಕೆ ಬರುವಂತೆ ಮಾಡುವುದು ಹೀಗೆ ಅನೇಕ ಕುಟಿಲೋಪಾಯಗಳನ್ನು ಅವರು ಹೂಡತೊಡಗಿದರು. ಈ ಬಗೆಯ ಹಿಂಸೆ ಅನುಭವಿಸಿದವರಲ್ಲಿ ಒಬ್ಬನಾಗಿದ್ದ ಬಿಲಾಲ್ ಎಂಬ ಗುಲಾಮ ಮಾತ್ರ ಸುತಾರಾಂ ಅದಕ್ಕೆ ಒಪ್ಪದೆ ತನ್ನ ಮಾಲೀಕ ಪರಿಪರಿಯಾಗಿ ದೈಹಿಕವಾಗಿ ಹಿಂಸಿಸಿದರೂ 'ಅಹಾದ್ ಅಹಾದ್' ಅಂದರೆ ಅರಬ್ಬಿಯಲ್ಲಿ 'ದೇವರೊಬ್ಬನೆ...ಒಬ್ಬನೇ ದೇವರು' ಎಂದು ಕಷ್ಟದಲ್ಲಿದ್ದರೂ ಜಪಿಸಹತ್ತಿದ. ಅವನ ಬಾಯಿಯಿಂದ ಹೊರಬರುತ್ತಿದ್ದ ಈ ಶಬ್ದಗಳನ್ನು ಆಲಿಸಿದ ಅದೆ ದಾರಿಯಲ್ಲಿ ಸಾಗುತ್ತಿದ್ದ ಅಬು ಬಕರ್ ಈ ಶೋಷಣೆಗೆ ಮನನೊಂದು ಕರುಣೆಯಿಂದ ಅವನ ಒತ್ತೆ ಹಣ ಪಾವತಿಸಿ ಅವನನ್ನು ಗುಲಾಮಗಿರಿಯಿಂದ ಬಿಡಿಸಿದ. ಇತ್ತ ಮಹಮದನ ಮತಾನುಯಾಯಿಗಳ ಪರಿಸ್ಥಿತಿ ಹೀಗೆ ಹದಗೆಡುತ್ತಿದ್ದರೆ ಅತ್ತ ಮಹಮದ್ ಮಾತ್ರ ಕ್ಷೇಮದಿಂದಿದ್ದ. ಅವನ ದೊಡ್ಡಪ್ಪ ಅಬು ತಾಲಿಬನ ರಕ್ಷಣೆಯಲ್ಲಿ ಅವನನ್ನು ಮುಟ್ಟುವ ಧೈರ್ಯ ಯಾವ ಖುರೈಶಿಗಳಿಗೂ ಹುಟ್ಟಿರಲಿಲ್ಲ. ಅಬು ತಾಲಿಬ್ ವಯಕ್ತಿಕವಾಗಿ ಇಸ್ಲಾಮಿಗೆ ಮತಾಂತರಿತನಾಗಿರದಿದ್ದರೂ ಮಹಮದನ ಪ್ರಭಾವಕ್ಕೆ ಒಳಗಾಗಿದ್ದಂತೂ ಸತ್ಯ. ಅಲ್ಲದೆ ಅನಾಥನಾಗಿದ್ದ ಮಹಮದನ ಮೇಲೆ ಆತನಿಗೆ ಪ್ರೀತಿ ವಾತ್ಸಲ್ಯ ಅಪಾರವಾಗಿದ್ದ ಕಾರಣ ಆತನ ರಕ್ಷಣೆ ತನ್ನ ಹೊಣೆಗಾರಿಕೆ ಎಂಬಂತೆ ಆತ ವರ್ತಿಸುತ್ತಿದ್ದ. ಅದೆ ರೀತಿ ಪ್ರತಿಷ್ಠಿತ ಖುರೈಶಿ ವರ್ಗಗಳ ಭರ್ತ್ಸನೆಗಳಿಂದ ಅಬು ಬಕರ್ ಮಹಮದನನ್ನು ಪಾರುಮಾಡುತ್ತಿದ್ದ. ಒಂದು ಕುಟುಂಬ ಮತಾಂತರಿತವಾದರೆ ಇಷ್ಟವೋ- ನಷ್ಟವೋ ಅವರ ಸಂಬಂಧಿ ಕುಟುಂಬಸ್ತರು ಒಲ್ಲದ ಮನಸ್ಸಿನಿಂದಲಾದರೂ ನೆರವು ಸಹಕಾರಗಳನ್ನು ಜಾರಿಯಲ್ಲಿ ಇಟ್ಟುಕೊಂಡೆ ಇರುತ್ತಿದ್ದರು. ಆದರೆ ಒಂದಿಡಿ ಬುಡಕಟ್ಟಿಗೆ ಬುಡಕಟ್ಟೆ ಮತಾಂತರವಾದರೆ ಮಾತ್ರ ಅದರ ವಿರೋಧಿ ಬುಡಕಟ್ಟಿನವರಿಂದ ಹಲ್ಲೆಗೆ ಒಳಗಾಗುವ ಸಂದರ್ಭಗಳೆ ಹೆಚ್ಚಾಗಿದ್ದವು. ಹೀಗಾಗಿ ಸ್ವತಃ ತಾನು ಸುರಕ್ಷಿತನಾಗಿದ್ದರೂ ತನ್ನನ್ನು ನಂಬಿ ಬಂದವರ ಸುರಕ್ಷತೆಯ ಬಗ್ಗೆ ಸಹಜವಾಗಿ ಮಹಮದ್ ಆತಂಕಿತನಾಗಿದ್ದ. ಹೀಗಾಗಿ ಅವರಲ್ಲಿ ಆನೇಕರಿಗೆ ಸುರಕ್ಷತೆಯ ದೃಷ್ಟಿಯಿಂದ ಪ್ರಾಣವುಳಿಸಿಕೊಳ್ಳಲು ಅಬಿಸೀನಿಯಾಕ್ಕೆ ವಲಸೆ ಹೋಗುವ ಸಲಹೆ ನೀಡಿದ. ಆಗಿನ ಕಾಲದ ಅಬಿಸೀನಿಯದಲ್ಲಿ ಧಾರ್ಮಿಕ ಸಹಿಷ್ಣುತೆ ನೆಲೆಸಿದ್ದುದೆ ಅದಕ್ಕೆ ಕಾರಣ. ಅಲ್ಲದೆ ಅಲ್ಲಿಗೆ ವಲಸೆ ಹೋಗುವುದು ಸಾಮಾನು ಸರಂಜಾಮುಗಳ ಸಾಗಣೆಯ ದೃಷ್ಟಿಯಿಂದ ಸುಲಭದ್ದಾಗಿತ್ತು. ಹೀಗೆ ಆತನ ಆದೇಶದಂತೆ ಆರಂಭದಲ್ಲಿ ಮಹಮದನ ಸ್ವಂತ ಪುತ್ರಿ ರೋಕೈಯಾ ಹಾಗೂ ಆಕೆಯ ಪತಿ ಒತ್ಥಮಾನನೂ ಸೇರಿದಂತೆ ಹನ್ನೊಂದು ಮಂದಿ ವಲಸೆಹೋದರು. ಇದೆ ಮೊತ್ತ ಮೊದಲ 'ಹಿಜ್ರಾ' ಎಂದು ಕರೆಯಲಾಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ. ಈ ವಲಸೆ ಆರಂಭವಾದ ಮೊದಲ ನಾಲ್ಕು ವರ್ಷಗಳಲ್ಲಿ ಮಹಮದನಿಗೆ ಕುರಾನ್ ಸಂದೇಶಗಳು ಸುಮಾರು ಇಪ್ಪತ್ತು ಸುರಾಗಳ ಮೂಲಕ ಹೊರಬಂದವು ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಈ ಎಲ್ಲಾ ಸುರಾಗಳಲ್ಲಿ ಮಹಮದ್ 'ಸ್ವರ್ಗ-ನರಕಗಳ ಸ್ಥಿತಿಗತಿಗಳು, ಪುನರುತ್ಥಾನ (ಇಸ್ಲಾಮಿನಲ್ಲಿ ಪುನರ್ ಜನ್ಮದ ಕಲ್ಪನೆ ಇಲ್ಲ ಅನ್ನುವುದನ್ನು ಗಮನಿಸಿ), ಅಂತಿಮ ತೀರ್ಪಿನ ದಿನ, ಧರ್ಮ ಬದ್ಧರು- ನೀಚರು, ಯಕ್ಷ- ಬೇತಾಳ- ಪಿಶಾಚಿಗಳು ಹೀಗೆ ವಿವಿಧ ಸಂಗತಿಗಳನ್ನು ಮಹಮದನ ಉದ್ದೇಶಕ್ಕೆ ಅನುಗುಣವಾಗಿ ಚಾಕಚಾಕ್ಯತೆಯಿಂದ ನುಡಿಯುವ ಚಿತ್ರಣದ ವಿವರಣೆ ತುಂಬಿದೆ ಅನ್ನುತ್ತಾನೆ' ಇತಿಹಾಸಕಾರ ಮ್ಯೂರ್. (ಇನ್ನೂ ಇದೆ...)

Truth...


I was your love once, you stay in my heart ever since / me really can not say.... you just remain there only hence?, but the holy truth will not get rub from our past.... // It may be your will though, i choose this way.... you may now with your new heart, myself is still sat in the bank of my eye drops bay / i do accept the fact that me do have none meaning in your dictionary now, well, how can i too do the same .... you know? my sole loved you just a sake of love ! // I was your love once, you stay in my heart ever since / me really can not say.... you just remain there only hence?, but truth will not get rub from our past.... yes that I was your love once! //

Saturday, September 29, 2012

ವಲಿ....(ಭಾಗ-3)

ಈ ಧಾರ್ಮಿಕ ಗುಪ್ತಸಂಘದ ಸದಸ್ಯರು ತಾವು ಕೇವಲ ಧಾರ್ಮಿಕ ಕಾರಣಗಳಿಂದ ಮಾತ್ರ ಹೀಗೆ ಮತಾಂತರಿತಗೊಂಡಿದ್ದೇವೆ ಎಂದು ಬಿಂಬಿಸುತ್ತಿದ್ದರೂ ಗುಲಾಮಗಿರಿಯೆಂಬ ನರಕದಿಂದ ಪಾರಾಗುವುದೆ ಬಹುತೇಕರ ಒಳ ಉದ್ದೇಶವಾಗಿತ್ತು. ಅಲ್ಲದೆ ಇಸ್ಲಾಮಿನಲ್ಲಿ ಪಾಪ- ಪುಣ್ಯಗಳಿಗೆ ಅತಿ ಹೆಚ್ಚಿನ ಮಹತ್ವವನ್ನು ನೀಡಿ, ಪುಣ್ಯವಂತರು ಸ್ವರ್ಗವಾಸಿಗಳಾಗುತ್ತಾರೆ ಹಾಗೂ ಪಾಪಿಗಳು ನರಕದ ಉರಿಜ್ವಾಲೆಯಲ್ಲಿ ಬೆಂದುಹೋಗುತ್ತಾರೆ ಎಂದು ನಂಬಿಕೆ ಹುಟ್ಟಿಸಿದ್ದು ಕೂಡ ಅತಿಹೆಚ್ಚಿನ ಸಂಖ್ಯೆಯ ಅನಕ್ಷರಸ್ತ ಬಡ ಅರಬ್ಬೀ ಧರ್ಮಭೀರುಗಳು ಮತಾಂತರವಾಗಿ ನರಕದ ಜ್ವಾಲೆಯಿಂದ ಪಾರಾಗಲು ಮಾಡಿದ್ದ ಲೌಕಿಕ ಪ್ರಯತ್ನವೆ ಅನ್ನುವುದು ಇತಿಹಾಸಗಾರ ಮಾರ್ಗೊಲಿಯತ್ತನ್ನ ಅನಿಸಿಕೆ. ಮಹಮದ್ ತನ್ನ ನೂತನ ಧರ್ಮಾನುಯಾಯಿಗಳಿಗೆ 'ಸಲಾಂ ಆಲೈಕುಂ' ಅಂದರೆ ಅರಬ್ಬಿಯಲ್ಲಿ 'ಶಾಂತಿಯಿರಲಿ ನಿನ್ನ ಮೇಲೆ"ಎಂಬ ಪರಸ್ಪರ ಹಾರೈಕೆಗಳ ವಿನಿಮಯದ ಆಚರಣೆ ಜಾರಿಗೆ ತರಲು ಅದಾಗಲೆ ಅಂತಹ ಹಾರೈಕೆಗಳ ಹಿನ್ನೆಲೆಯಿದ್ದ ಯಹೂದಿ ಹಾಗೂ ಕ್ರೈಸ್ತ ಧರ್ಮಗಳ ಪ್ರಭಾವದ ಕಾರಣದಿಂದಲೆ ಅನ್ನುವುದು ಮಾರ್ಗೊಲಿಯತ್ತನ್ನ ಹೇಳಿಕೆ. ಮಹಮದನ ಇಸ್ಲಾಮನ್ನು ಅಪ್ಪಿಕೊಂಡವರನ್ನ 'ಮುಸ್ಲಿಂ' ಇಲ್ಲವೆ 'ಹನೀಫಾ'ರೆಂದು ಕರೆಯಲಾಯಿತು. ಹೀಬ್ರೂ ಭಾಷೆಯಲ್ಲಿ 'ಹನೀಫಾ' ಎಂದರೆ 'ಆಷಾಢಭೂತಿ' ಎಂದೂ ಸಿರಿಯಾಕ್ ಭಾಷೆಯಲ್ಲಿ 'ಪಾಷಂಡಿ' ಎಂಬರ್ಥ ಬರುತ್ತದೆ. ಸಿರಿಯಾಕಿನಲ್ಲಿ 'ಮುಸ್ಲಿಂ' ಎಂದರೆ 'ವಿಶ್ವಾಸಘಾತುಕ' ಎಂದರ್ಥ! ಹಾಗೆ ನೋಡಿದರೆ ಇಸ್ಲಾಮಿಗಿಂತಲೂ ಹಿಂದೆಯೆ ಅರೇಬಿಯಾದಲ್ಲಿ ಏಕದೈವಾರಾಧಕರಿದ್ದು ಅವರನ್ನೂ ಸಹ 'ಹನೀಫಾ'ರೆಂದೆ ಕರೆಯಲಾಗುತ್ತಿತ್ತು, ಅನಂತರ ಇಸ್ಲಾಂ ಅನುಯಾಯಿಗಳಿಗೂ ಇದೆ ಹಣೆಪಟ್ಟಿ ಮುಂದುವರೆಯಿತಷ್ಟೆ. ಇದು ಮಹಮದನ ಧರ್ಮವಿರೋಧಿಗಳು ಕುಚೋದ್ಯದಿಂದ ಗೇಲಿಮಾಡಲು ಕೊಟ್ಟಿರಬಹುದಾದ ಹೆಸರಾಗಿರುವ ಸಾಧ್ಯತೆಯೂ ಇದೆ ಎನ್ನುವ ಇತಿಹಾಸಕಾರ ಮ್ಯೂರ್ ಹಂಗಿಸುವ ಅರ್ಥದಲ್ಲಿ ಹೀಗೆ ಕರೆಯಲಾಯಿತು ಎಂದಿದ್ದಾನೆ. ಆದರೆ ಮುಂದಿನ ದಿನಗಳಲ್ಲಿ ಮಹಮದ್ ಅದನ್ನೆ ಮುಸಲ್-ಉಲ್-ಇಮಾನ್ ಎಂದು ಉಚ್ಚರಿಸಿ ಹೊಸತೆ ಗೌರವಾರ್ಹವಾದ ಅ ರ್ಥಕಲ್ಪಿಸುವುದರಲ್ಲಿ ಸಫಲನಾದ. ಒಂದುದಿನ ಧೈರ್ಯ ಮಾಡಿ ಮಹಮದ್ ಕಾಬಾದ ಬಳಿಯೆ ನಿಂತು ಬಹಿರಂಗವಾಗಿ ತನ್ನ ಮತಪ್ರಚಾರವನ್ನು ಆರಂಭಿಸಿದ. ಅಲ್ಲಿ ನೆರೆದ ಜನರ- ಜಂಗುಳಿಯನ್ನು ಉದ್ದೇಶಿಸಿ "ಅಲ್ಲಾ ಒಬ್ಬನೆ ನಿಜವಾದ ದೈವ, ಅವನ ವಿನಃ ಇನ್ಯಾವ ದೈವವಿಲ್ಲ" (ಅಲ್ಲಾ ಹೋ ಅಕ್ಬರ್) ಎಂದು ನಿರಂತರವಾಗಿ ಕೂಗಿಕೂಗಿ ಹೇಳಲು ಆರಂಭಿಸಿದ. ಅವನ ಮಾತಿನಿಂದ ರೊಚ್ಚಿಗೆದ್ದ ಅಲ್ಲಿ ನೆರೆದಿದ್ದ ಬಹುಮಂದಿ ಅವನ ಮೇಲೆ ಹಲ್ಲೆ ನಡೆಸಲು ಶುರುವಿಟ್ಟರು. ಹೀಗೆ ಆತ ಆಪತ್ತಿನಲ್ಲಿ ಸಿಲುಕಿಕೊಂಡಿರುವ ಸಂಗತಿ ಖತೀಜಾ ಕುಟುಂಬಕ್ಕೆ ತಲುಪಿತು. ಆಕೆಯ ಮೊದಲ ಗಂಡ ಅಬು ಹಾಲತ್'ನ ಮಗ ಅಲ್ ಹಾರುಥ್ ತನ್ನ ಮಲತಂದೆಯ ರಕ್ಷಣೆಗಾಗಿ ಕೂಡಲೆ ಧಾವಿಸಿದ. ನಡೆದ ಕಾದಾಟದಲ್ಲಿ ವಿರೋಧಿಗಳು ಅವನನ್ನು ಅಲ್ಲಿಯೆ ಹೊಡೆದು ಕೊಂದರು. ಹೀಗಾಗಿ ಅವನು ಇಸ್ಲಾಮಿನ ಪ್ರಪ್ರಥಮ 'ಹುತಾತ್ಮ'ನ ಪಟ್ಟ ಗಳಿಸಿಕೊಂಡ ಅನ್ನುತ್ತಾನೆ ಇತಿಹಾಸಕಾರ ಮಾರ್ಗೊಲಿಯತ್. "ತಾನು ದೇವದೂತ,ಹೊಸ ಮತವೊಂದರ ಆರಂಭಕ್ಕೆ ದೇವರು ಪ್ರೇರೇಪಿಸಿ ತನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ" ಎಂಬ ಮಹಮದನ ಪ್ರಚಾರವನ್ನ ಕಾಬಾದ ಮುಖ್ಯ ಆರಾಧ್ಯ ದೈವ ಹುಬಾಬ್ ಸಹಿತ ಇನ್ನುಳಿದ 360 ದೇವರ ಅಚಲ ವಿಶ್ವಾಸಿಗಳಾಗಿದ್ದ ಬಹುತೇಕ ಮೆಕ್ಕಾ ನಿವಾಸಿಗಳು ಬಲವಾಗಿ ವಿರೋಧಿಸಲು ಆರಂಭಿಸಿದರು. ತಮಾಷೆಯೆಂದರೆ ಅವರು ಆರಾಧಿಸುತ್ತಿದ್ದ ಹುಬಾಬ್ ಹೊರತುಪಡಿಸಿದ ಇನ್ನುಳಿದ ಮೂರ್ತಿಗಳಲ್ಲಿ ಅಲ್ಲಾನದ್ದೂ ಒಂದು ಪ್ರತಿಮೆ ಇತ್ತು. ಅಂದರೆ ಅಲ್ಲಾ ಇಸ್ಲಾಂ ಪೂರ್ವದಿಂದಲೂ ಜನರ ವಿಶ್ವಾಸ ಸಂಪಾದಿಸಿದ್ದ ಒಬ್ಬ ದೈವವಾಗಿದ್ದ ಹಾಗೂ ಇಸ್ಲಾಂ ಪೂರ್ವದಲ್ಲಿ ಆತನ ಕಾಬಾದಲ್ಲಿ ಅಲ್ಲಾನ ಮೂರ್ತ ಸ್ವರೂಪವಿದ್ದು ಮೂರ್ತಿಯನ್ನೆ ಅಲ್ಲಿ ನಿತ್ಯ ಪೂಜಿಸಲಾಗುತ್ತಿತ್ತು. ಅದಕ್ಕೂ ನಿತ್ಯ ಪೂಜೆ ಸಲ್ಲುತ್ತಿತ್ತು! ಜನರು ಮಹಮದನಿಗೆ ಜಿನ್ ಅಂದರೆ ದೆವ್ವ ಮೆಟ್ಟಿಕೊಂಡಿದೆ ಎಂದು ತಲೆಗೊಬ್ಬರಂತೆ ಆಡಿಕೊಳ್ಳಲು ಆರಂಭಿಸಿದರು. ಅವರ ಈ ಆಪಾದನೆ ಮಹಮದನನ್ನು ತೀವ್ರವಾಗಿ ಘಾಸಿಗೊಳಿಸಿತು. ಇದರಿಂದ ಅವನು ಬೇಸರಕ್ಕೆ ತುತ್ತಾದ. ಅದನ್ನೆ ಅವನು ಕುರಾನಿನ ಸುರಾಗಳ ಮೂಲಕ (ಸುರಾ 67/24-27) ತೋಡಿಕೊಂಡ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ. ಸುಮಾರು ಹತ್ತುವರ್ಷಗಳವರೆಗೆ ಹೀಗೆಯೆ ವಿರೋಧಿಗಳ ನಡುವೆ ಮೆಕ್ಕಾದಲ್ಲಿಯೆ ಬಾಳಿ ಬದುಕಿದ ಮಹಮದ್ ತನ್ನ ಮತಪ್ರಚಾರ ಯಶಸ್ವಿಯಾಗಿ ಕೈಗೊಳ್ಳಲು ಮಹಮದನ ಪತ್ನಿ ಖತೀಜಳ ಅರ್ಪಣಾ ಭಾವದಿಂದ ಕೂಡಿದ ಭಕ್ತಿ ಹಾಗೂ ಆಕೆಯ ಸಂಪತ್ತಿನ ಪ್ರಭಾವದಿಂದ, ಅಲ್ಲದೆ ದೊಡ್ಡಪ್ಪ ಅಬು ತಾಲಿಬ್'ನ ಪ್ರೀತಿ ಒಲುಮೆ ವಿಶ್ವಾಸ ಹಾಗೂ ಅಬು ಬಾಕರ್'ನ ಪ್ರೇರೇಪಣಾಗುಣದಿಂದ ಹಾಗೂ ಅಂಧ ವಿಶ್ವಾಸಗಳಿಂದ ಮಾತ್ರ ಸಾಧ್ಯವಾಯಿತು ಅನ್ನೋದು ಇತಿಹಾಸಕಾರ ಮ್ಯೂರನ ಅಂಬೋಣ. ದೊಡ್ಡಪ್ಪ ಅಬುತಾಲೀಬನ ಸಮಯಪ್ರಜ್ಞೆಯಿಂದ ಅನೇಕಬಾರಿ ಖುರೈಷಿಗಳಿಂದ ಒದಗಿಬರಬಹುದಾಗಿದ್ದ ಅತಿ ಹಿಂಸೆ ಅಥವಾ ಪ್ರಾಣಹಾನಿಯಿಂದ ಮಹಮದ್ ತಪ್ಪಿಸಿಕೊಂಡ. ಆದರೆ ಅಪರೂಪವಾಗಿ ಇಸ್ಲಾಮಿಗೆ ಮತಾಂತರವಾದ ಖುರೈಶಿಗಳಲ್ಲಿ ಕೆಲವರು ತಾವು ಅಪ್ಪಿದ ಹೊಸ ಧರ್ಮಕ್ಕಾಗಿ ಸ್ವಂತ ಹೆತ್ತವರ- ಒಡಹುಟ್ಟಿದವರ ವಿರುದ್ಧವೆ ಹೋರಾಡಿದ ನಿದರ್ಶನಗಳೂ ಕಂಡುಬಂದವು. ಧರ್ಮಪ್ರಚಾರದ ಹೊತ್ತಲ್ಲಿ ಪ್ರವಚನ, ಭಾಷಣ ಇಲ್ಲವೆ ಜನರನ್ನು ಉದ್ದೇಶಿಸಿ ಮಾತನಾಡಲು ಉಧ್ಯುಕ್ತನಾಗುತ್ತಿದ್ದ ಸಂದರ್ಭಗಳಲ್ಲಿ ಮಹಮದನ ಕೆನ್ನೆ ಕೆಂಪಗಾಗುತ್ತಿತ್ತು ಮತ್ತು ಧ್ವನಿ ತಾರಕಕ್ಕೆ ಏರುತ್ತಿತ್ತು. ಆ ಕ್ಷಣ ಅವನ ನಿತ್ಯದ ನಿರ್ಲಿಪ್ತ ಸ್ವಭಾವ ಉಗ್ರವಾಗುತ್ತಿತ್ತು. ಆತ ಎಷ್ಟು ಪ್ರಬಲ ಭಾಷಣಕಾರನಾಗಿದ್ದನೊ ಅಷ್ಟೆ ಕೆಟ್ಟ ಚರ್ಚಾಪಟುವಾಗಿದ್ದನು. ತನ್ನ ಈ ನ್ಯೂನತೆಯನ್ನು ಬಹಳ ಚೆನ್ನಾಗಿ ಅರಿತಿದ್ದ ಆತ ಅಂತಹ ಪರಿಸ್ಥಿತಿಗಳಲ್ಲಿ ದೈವವಾಣಿಯ ಮೊರೆ ಹೋಗುತ್ತಿದ್ದ. ಅವಿಶ್ವಾಸಿಗಳ ಪ್ರಶ್ನೆಗಳಿಗೆ ತರ್ಕಬದ್ದ ಉತ್ತರ ನೀಡಲಾರದೆ ಅವರು ಅಲ್ಲಿಂದ ನಿರ್ಗಮಿಸುವಂತೆ ಸುರಾದ ಆಜ್ಞೆ ಪಡೆದುಕೊಂಡು ಅದನ್ನ ಪಾಲಿಸಿ ಪಾರಾಗುತ್ತಿದ್ದ ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಈ ಪಲಾಯನವಾದದ ಕುರುಹು ಇಂದಿಗೂ ಇಸ್ಲಾಮಿನ ಅನುಯಾಯಿಗಳಿಗೆ ಬಳುವಳಿಯಾಗಿ ಸಂದಿರುವುದು ದುರಂತ. ಮುಂದಿನ ನಾಲ್ಕು ವರ್ಷಗಳಲ್ಲಿ ಕೇವಲ ನಲವತ್ತು ಮಂದಿಯಷ್ಟೆ ಇಸ್ಲಾಮಿಗೆ ಪರವಶವಾದರು. ಮೊದಮೊದಲು ಈ ಬಗ್ಗೆ ಉದಾಸೀನರಾಗಿದ್ದ ಮೆಕ್ಕಾದ ಖುರೈಷಿಗಳು ಕ್ರಮೇಣ ಅದನ್ನ ಅಸಹನೆಗೆ ತಿರುಗಿಸಿಕೊಂಡರು. ಅರೇಬಿಯಾದ ಅತ್ಯಂತ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಾಬಾದ ಪ್ರಾಮುಖ್ಯತೆ ಮಹಮದನ ಧರ್ಮೊಪದೇಶದಿಂದ ಮುಕ್ಕಾದೀತು ಎಂಬ ಆತಂಕ ಅವರದ್ದಾಗಿತ್ತು. ಹೀಗೆಯೆ ಮುಂದುವರೆಯಲು ಬಿಟ್ಟರೆ ಕಾಬಾದ ಅಸ್ತಿತ್ವಕ್ಕೆ ಖಂಡಿತ ಸಂಚಕಾರ ಬರಲಿದೆ ಎಂಬುದನ್ನು ಅರಿತ ಖುರೈಷಿಗಳು ಹಿಂಸಾತ್ಮಕವಾಗಿ ಮಹಮದನ ಧರ್ಮಪ್ರಚಾರಕ್ಕೆ ಎದಿರೇಟು ಕೊಡಲು ಆರಂಭಿಸಿದರು. ಮತಾಂತರಗೊಂಡ ಒಬ್ಬನ ವಿರುದ್ಧ ಅವರು ದೌರ್ಜನ್ಯ ಎಸಗುತ್ತಿದ್ದಾಗ ಬಿಡಿಸಿಕೊಳ್ಳಲು ಬರುವ ಅಂತವನ ನೆಂಟರೂ ಅವರ ಹಿಂಸೆಗೆ ತುತ್ತಾಗಬೇಕಾಗುತ್ತಿತ್ತು, ಯಾರೊಬ್ಬರ ನೈತಿಕ ಬೆಂಬಲವೂ ಸಿಗದ ಗುಲಾಮರ ಪರಿಸ್ಥಿತಿಯಂತೂ ತೀರಾ ಶೋಚನೀಯವಾಗಿದ್ದಿತು. ಹೀಗೆ ಶುರುವಾದ ಖುರೈಷಿಗಳ ಹಿಂಸಾ ವಿನೋದದ ವಿರುದ್ಧವಾಗಿ ನೂತನ ಧರ್ಮಾನುಯಾಯಿಗಳು ಆತ್ಮರಕ್ಷಣೆಗೆ ಮುಂದಾದರು. ಅವರೂ ಹಿಂಸಾಚಾರಕ್ಕಿಳಿದರು. ಮಹಮದ್ ಹಾಗೂ ಆತನ ಅನುಯಾಯಿಗಳಿಗೆ ಅದು ಕ್ರಮೇಣ ರೂಢಿಯಾಗಿ ಸಹನೆ, ತಾಳ್ಮೆಗಳನ್ನೆಲ್ಲ ಕಿತ್ತೊಗೆದು ವಿರೋಧಿಗಳ ವಿರುದ್ಧ ನೇರಕಾರ್ಯಾಚರಣೆಗೆ ಅವರಿಳಿಯಲು ಇದರಿಂದ ಮೊದಲಾಯಿತು. ಕ್ರಿಸ್ತಶಕ 613ರ ಸುಮಾರಿಗೆ ಅದೂವರೆಗೂ ಗುಪ್ತವಾಗಿ ಸಾಗುತ್ತಿದ್ದ ಮಹಮದನ ಮತಪ್ರಚಾರ ಅನಂತರದ ದಿನಗಳಲ್ಲಿ ಅನುಯಾಯಿಗಳ ಸಂಖ್ಯೆ ವೃದ್ಧಿಸಿದಂತೆ ತೀರ ಬಹಿರಂಗಗೊಂಡಿತು. ಆತ ಖುರೈಷಿಗಳ ವಿಗ್ರಹಾರಾಧನೆಯನ್ನ ಕಟುವಾಗಿ ಖಂಡಿಸಿದ. ಅವರ ಪಿತೃಗಳೂ ವಿಗ್ರಹಾರಾಧಕರಾಗಿ ಆತ್ಮನಾಶಕ್ಕೀಡಾಗಿದ್ದಾರೆ ಎಂದು ಆತ ಹೇಳಿದಾಗ ಖುರೈಷಿಗಳು ಕೆರಳಿ ನಿಂತರು. ಮೆಕ್ಕಾದ ಹೊರವಲಯದಲ್ಲಿ ಮಹಮದನ ಬಂಟ ಸಾದ್ ಬಹಿರಂಗವಾಗಿ ನಮಾಜ್ ಮಾಡುತ್ತಿದ್ದಾಗ ಅದನ್ನು ಕಂಡು ಕೋಪಗೊಂಡ ಖುರೈಷಿಗಳು ಕಲಹಕ್ಕೆ ನಾಂದಿ ಹಾಡಿದರು, ಜಗಳ ರಕ್ತಪಾತಕ್ಕೆ ತಿರುಗಿ ಒಂಟೆಯನ್ನು ಹೊಡೆಯುವ ಮೊನೆಗೋಲಿನಿಂದ ಸಾದ್ ವಿರೋಧಿಯೋಬ್ಬನನ್ನು ಅಲ್ಲಿಯೆ ಹೊಡೆದುಸಾಯಿಸಿದ. ಇತಿಹಾಸಕಾರ ಅಲ್ ತಮೀಮಿಯ ಪ್ರಕಾರ ಇದು 'ಇಸ್ಲಾಮಿಗಾಗಿ ಚಲ್ಲಿದ ಮೊತ್ತ ಮೊದಲನೆಯ ರಕ್ತ'. ಇದೆ ಸಮಯದಲ್ಲಿ ಪ್ರಾಯಶಃ ಮಹಮದ್ ನೂತನವಾಗಿ ಮತಾಂತರವಾಗಿದ್ದ ಅಕ್ರಂ ಎಂಬಾತನ ಮನೆಯನ್ನ ಆಶ್ರಯಕ್ಕಾಗಿ ಪಡೆದುಕೊಂಡು ಅಲ್ಲಿದ್ದುಕೊಂಡೆ ಮತಪ್ರಚಾರವನ್ನು ಮುಂದುವರೆಸಿದ. ಅದು ಕಾಬಾ ಗುಡಿಯ ಹತ್ತಿರದಲ್ಲೆ ಇದ್ದು ಅಲ್ಲಿಗೆ ಹೋಗಿ ಬರುವ ಯಾತ್ರಿಕರು ಸಾಗುವ ದಾರಿಯಲ್ಲೆ ಇದ್ದುದರಿಂದ ಜನಸಾಂದ್ರತೆ ಸಹಜವಾಗಿ ಹೆಚ್ಚಿದ್ದು ಪ್ರಚಾರಕ್ಕೆ ಹೆಚ್ಚಿನ ಅವಕಾಶಗಳು ಅಲ್ಲಿದ್ದವು. ಮುಂದೆ ಇದೆ 'ಇಸ್ಲಾಮಿನ ಮನೆ' ಎಂಬ ಪಟ್ಟ ಪಡೆಯಿತು. ಇತ್ತೀಚಿಗೆ ಕಾಬಾದ ಉಸ್ತುವಾರಿ ಹೊತ್ತ ಸೌದಿ ದೊರೆಯ ಆಡಳಿತ ಕಾಬಾಕ್ಕೆ ಸನಿಹದಲ್ಲಿಯೆ ಹಜ್ ಯಾತ್ರಿಕ ಸಿರಿವಂತರಿಗಾಗಿ ದೊಡ್ಡದೊಡ್ಡ ಬಹುಮಹಡಿ ಕಟ್ಟಡಗಳನ್ನ, ಪಂಚತಾರ ಹೋಟೆಲುಗಳನ್ನ ಕಟ್ಟಿಸುವ ಹುಮ್ಮಸ್ಸಿನಲ್ಲಿ ಅಬುಬಾಕರನ ಹಾಗೂ ಖತೀಜಾಳ ಮನೆಯನ್ನ ನೆಲಸಮಗೊಳಿಸಿತ್ತು ಅಕ್ರಮನ ಮನೆಗೂ ಸ್ಮಾರಕದ ಬೆಲೆ ಅರಿಯದ ಈ ಧ್ವಂಸಕರು ಒಂದು ಮೋಕ್ಷ ಕಾಣಿಸಿದ್ದಾರೆ ಏನೇನೂ ಅಚ್ಚರಿಯಿಲ್ಲ. (ಇನ್ನೂ ಇದೆ....)

Friday, September 28, 2012

ಬಾಕಿಯುಳಿದ ಕೊನೆಯ ಹನಿ....

ಸಾಂಗತ್ಯದ ಅಗತ್ಯ ಪ್ರತಿ ಏಕಾಂತಕ್ಕೂ ಇದ್ದೆ ಇರುತ್ತದೆ ಮೌನಕ್ಕೂ ಕೆಲವೊಮ್ಮೆ ಮಾತಿನ ಸನಿಹ ಬೇಕೆನ್ನಿಸುತ್ತದೆ.... ಕಣ್ಣ ಕೊನೆಯಲ್ಲಿ ಕಾಡಿಗೆಯನ್ನೂ ಕರಗಿಸುವ ನಿರೀಕ್ಷೆಯ ಹನಿ ನಿತ್ಯ ಜಾರುವಾಗ, ಬದುಕಿನ ಮುಂದಿನ ಹಾದಿಯೆಲ್ಲ ಮಂಜಾದಂತೆ ಕಾಣಿಸಿ ಮನ ಕಂಗಾಲಾಗುತ್ತದೆ / ನನ್ನುಸಿರು ಚರ.... ಅದರೊಳಗೆ ಅಡಗಿರುವ ನಿನ್ನ ಅನುದಿನದ ಜಪದ ಆವರ್ತ ಮಾತ್ರ ಚಿರ, ಗಗನದ ತುದಿಯಂಚಿನಲ್ಲಿ ಮಡುಗಟ್ಟಿರುವ ಮೋಡದ ಎದೆಯಾಳದಲ್ಲಿ ನೋವು ತುಂಬಿ ಬಂದಾಗ ... ಇಳೆಗೆ ಮಳೆ ಖಾತ್ರಿ // ಸಾಲು ಸಾಲು ಸುಳ್ಳುಗಳ ನಡುವೆ ಸತ್ಯದ ತಲಾಶಿನಲ್ಲಿರುವ ಮನಸ ಮೂರ್ಖತನ.... ಎಷ್ಟೊಂದು ಅವಾಸ್ತವ!, ರಾಗದ ಹಂಗಿಲ್ಲದ ಈ ನನ್ನ ಮೌನ ವೇದನೆಯ ಆಲಾಪ ನಿನ್ನ ಕಿವಿ ಮುಟ್ಟಿದರೂ..... ನಿನ್ನೊಳಗಿನ ಸಂಕಟವನ್ನದು ಎಂದೂ ಕೆದಕದಿರಲಿ / ಒಬ್ಬಂಟಿತನದ ಹನಿ ನೋವೂ ನಿನ್ನನೆಂದೂ ತಟ್ಟದಿರಲಿ ವಿರಹದ ಪಸೆಯಷ್ಟೂ ನೋವು ನಿನ್ನ ಕಡೆ ತನಕ ಮುಟ್ಟದಿರಲಿ... ಕಾಲಿರದ ಕನಸುಗಳದು ಬೆಳಕಿನ ವೇಗದ ಪಯಣ ನನ್ನದೊಂದು ಕನಸಿನ ಚೂರು ಈಗಷ್ಟೇ ನಿನ್ನೆದೆಯ ಮಾಳಿಗೆ ಹೊಕ್ಕಿರಬಹುದು , ಹುಡುಕಿ ನೋಡು! // ಗಡಿಬಿಡಿಯೇನಿಲ್ಲ ಕಾಯಲು ಕೊನೆಯುಸಿರಿರುವ ತನಕ ಸಮಯವಿದೆಯಲ್ಲ ಕಾಯುತ್ತೀನಿ ಬಿಡು.... ನನಗಿನ್ನೇನು ತಾನೇ ಇದೆ ಇದಕ್ಕಿಂತಾ ಮಹತ್ತರವಾದ ಕೆಲಸ?, ಮೌನ ಕಲಕುವ ಮೌನದ ಕೊಳದಲ್ಲಿ ಏಳುವ ಪ್ರತಿ ಅಲೆಯಲ್ಲೂ ನಿನ್ನ ನೆನಪಿನ ದೋಣಿಯೇರಿ ತೇಲಿ ಹೋಗುವ ಹಂಬಲ ನನಗೆ / ನಿಡುಸುಯ್ಯುವ ಮೌನದ ಪ್ರತಿ ಉಶ್ವಾಸ ನಿಶ್ವಾಸಗಳಲ್ಲೂ ನಿನ್ನ ಉಸಿರ ಬಿಸಿ ಇನ್ನೂ ಉಳಿದಿದೆ... ಗೀಚಿದ ಅಕ್ಷರಗಳೆಲ್ಲ ತನ್ನಿಂತಾನೆ ಪದಗಳಾಗಿ ತನ್ನ ಪ್ರತಿ ಸಾಲುಗಳಲ್ಲೂ ನಿನ್ನ ನೆನಪುಗಳನ್ನೇ ಅದು ಹೇಗೊ ಪ್ರತಿಫಲಿಸುವಾಗ, ನಾನೊಂದು ನಿಶ್ಚಲ ಬಿಂಬವಷ್ಟೆ ಅಗುಳಿದಿದ್ದೇನೆ // ಕೇವಲ ಕೊನೆಯದೊಂದು ಹನಿ ಬಾಕಿಯುಳಿದಿದೆ ನಿನ್ನ ನಿರೀಕ್ಷೆಯಲ್ಲಿ..... ನನ್ನ ಕಣ್ಣಲ್ಲಿ, ಕಣ್ಣು ಕಾಯುವ ನಿನ್ನ ಹಾದಿಯಲ್ಲಿ ಕಿರು ಸದ್ದಾದರೂ ಸರಿ ಅದನ್ನಾಲಿಸಲು ಕಿವಿಯೂ ಸದಾ ಕಾತರವಾಗಿರುತ್ತದೆ / ಗಾಲವನ ಗಲ್ಲದ ಮೇಲಿನ ಮಚ್ಚೆ ನಾನು ನಿನಗಲ್ಲದೆ ಹೇಳು ಇನ್ಯಾರ ಕಣ್ಣಿಗೆ ನಾ ಕಾಣಿಸಿಯೇನು?.... ಸಿಗದ ಪದಗಳನ್ನ ಸುಮ್ಮನೆ ಕಷ್ಟ ಪಟ್ಟು ಕಟ್ಟಿ ಕೃತಕವಾಗಿಸುವುದಕ್ಕಿಂತ ಮೌನದಲ್ಲಿ ಕಣ್ಣು ದಾಟಿಸುವ ಮಾತಿಗೆ ಧ್ವನಿಯಾದರೆ ಸಾಕಲ್ಲ? //

ವಲಿ..... (ಭಾಗ-2)

ಈ ವಿಶ್ವಾಸಾರ್ಹತೆಯ ತಳಹದಿಯ ಮೇಲೆ ಅದಾಗಲೆ ಎರಡೆರಡು ಮದುವೆಯಾಗಿದ್ದು ಎರಡು ಗಂಡು ಹಾಗೂ ಒಂದು ಗಂಡು ಮಗುವನ್ನು ಹೊಂದಿದ್ದ ಖತೀಜ ಮಹಮದ್ ಮೇಲೆ ಅನುರಾಗ ಬೆಳೆಸಿಕೊಂಡು ವಿವಾಹ ಪ್ರಸ್ತಾಪವನ್ನು ಮುಂದಿಟ್ಟಳು. ಆದರೆ ಅವರಿಬ್ಬರ ನಡುವಿನ ಅಂತಸ್ತಿನ ವ್ಯತ್ಯಾಸದ ದೆಸೆಯಿಂದ ಅವಳನ್ನು ಮರುವಿವಾಹವಾಗಲು ಅಷ್ಟರಲ್ಲಿ ಯತ್ನಿಸಿ ಸೋತಿದ್ದ ಖುರೈಷಿ ಗಣ್ಯರಿಂದ ಈ ಮದುವೆಗೆ ಭಾರಿ ವಿರೋಧ ವ್ಯಕ್ತವಾಯಿತು. ಸಾಲದ್ದಕ್ಕೆ ಸುಂದರಿ ವಿಧವೆ ಖತೀಜಳ ಮುದಿತಂದೆ ಈ ಮದುವೆಗೆ ತನ್ನ ಅಸಮ್ಮತಿ ಪ್ರಕಟಿಸಿದ. ಇದರ ಹಿಂದಿನ ಹುನ್ನಾರ ಗ್ರಹಿಸಿದ ಖತೀಜ ಮದುವೆಗೆ ಮಹಮದ್'ನ ಸಮ್ಮತಿ ದೊರೆತ ನಂತರ ಉಪಾಯವಾಗಿ ಒಂದುದಿನ ಮನೆಗೆ ತನ್ನ ತಂದೆ ಹಾಗೂ ಬುಡಕಟ್ಟಿನ ಗಣ್ಯರನ್ನು ಊಟಕ್ಕಾಗಿ ಆಹ್ವಾನಿಸಿ ಅವರಿಗಾಗಿಯೆ ವಿಶೇಷವಾಗಿ ದನ ಕಡಿಸಿ ಅದರ ಮಾಂಸ ಹಾಗೂ ಮದ್ಯದ ಸಮಾರಾಧನೆಯನ್ನೆ ನಡೆಸಿ, ಅವರೆಲ್ಲ ಮತ್ತಿನಲ್ಲಿ ತೇಲುತ್ತಿದ್ದಾಗ ಕಾಟಾಚಾರಕ್ಕೆ ಅವರೆಲ್ಲರ ಸಮ್ಮತಿ ಪಡೆದು ಅಂದೆ ವಿವಾಹ ನೆರವೇರಿಸಿ ಕೊಂಡುಬಿಟ್ಟಳು! ನಶೆ ಇಳಿದು ಸ್ಮೃತಿ ತಿಳಿಯಾದ ಬಳಿಕ ನಡೆದ ಎಲ್ಲಾ ವಿದ್ಯಾಮಾನವನ್ನರಿತ ಖತೀಜಳ ತಂದೆ ಈ ವಿವಾಹವನ್ನ ವಿರೋಧಿಸಿ ಕಾಲುಕೆರೆದು ಜಗಳಕ್ಕೆ ನಿಂತ. ಆದರೆ ಬುಡಕಟ್ಟಿನ ಮುಖಂಡರ ಸಮಯಸ್ಪೂರ್ತಿಯಿಂದ ಜಗಳ ರಕ್ತಪಾತಕ್ಕೆ ತಿರುಗುವ ಮೊದಲೆ ಸಂಧಾನ-ಸಮಾಧಾನದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ಹೀಗೆ ನಲವತ್ತು ವರ್ಷದ ಸುಂದರಿ- ಸಿರಿವಂತ ವಿಧವೆ ಖತೀಜ ಇಪ್ಪತ್ತೈದರ ಚಲುವ ತರುಣ ಮಹಮದ್'ನ ಮಡದಿಯಾದಳು. ಅಥವಾ ನಿಜಾರ್ಥದಲ್ಲಿ ಸಂಸಾರಿಯಾದ ಮಹಮದ್ ಖತೀಜಾಳ ಪತಿಯಾದ. ಸುಖಮಯವಾಗಿ ಮುಂದಿನ ಹನ್ನೆರಡುವರ್ಷ ಸಾಗಿದ ಅವರ ಸಂಸಾರದ ಫಲವಾಗಿ ಎಂಟು ಗಂಡು ಮಕ್ಕಳೂ. ನಾಲ್ಕು ಹೆಣ್ಣುಮಕ್ಕಳೂ ಜನ್ಮತಾಳಿದರು. ಆದರೆ ದುರದೃಷ್ಟದಿಂದ ಯಾವೊಂದು ಗಂಡು ಮಗುವೂ ಬದುಕುಳಿಯಲಿಲ್ಲ. ಮದುವೆಯ ನಂತರ ಮಡದಿಯ ಅಂತಸ್ತಿಗೆ ತಕ್ಕ ಹಾಗೆ ಮಹಮದ್ ಕುರಿ ಕಾಯದೆ ಹೆಂಡತಿಯ ವ್ಯಾಪಾರದಲ್ಲಿ ಸಕ್ರಿಯನಾಗಿ ತೊಡಗಿಕೊಂಡ. 'ದೇವರು ಕರುಣಾಮಯಿ ; ತನ್ನನ್ನು ನಂಬಿದವರನ್ನೆಂದೂ ಕೈಬಿಡದೆ ಅವರ ವ್ಯವಹಾರಗಳಲ್ಲಿ ವೃದ್ಧಿ ತರುವ ಆತ... ಅವಿಶ್ವಾಸಿಗಳಿಗೆ ನಷ್ಟವನ್ನಷ್ಟೆ ಕೊಡುತ್ತಾನೆ' ಎನ್ನುತ್ತಾ ಆತ ವ್ಯಾಪಾರಕ್ಕೆ ಒಂದು ಧಾರ್ಮಿಕ ಘನತೆಯನ್ನು ಆರೋಪಿಸಿ ಆಗೋಚರವಾಗಿಯೂ ಆಗುತ್ತಿದ್ದ ಮೋಸ- ವಂಚನೆಗಳನ್ನ ಹಿಡಿತಕ್ಕೆ ತಂದ. ಹೀಗೆ ಸುಖಮಯವಾಗಿದ್ದ ಮಹಮದ್ ವಯಕ್ತಿಕ ಜೀವನಕ್ಕೆ ಕುತ್ತು ಬಂದದ್ದು ಮದುವೆಯ ಹದಿಮೂರನೆ ವರ್ಷಕ್ಕೆ ಒದಗಿಬಂದ ಕಾಬಾದ ಮರುನಿರ್ಮಾಣ ಕಾರ್ಯದಿಂದ. ಆಗ ಆತನಿಗೆ ಮೂವತ್ತೆಂಟು ವರ್ಷ ವಯಸ್ಸಾಗಿತ್ತು. ಪ್ರಾಕೃತಿಕವಾಗಿ ವಿರಳ ಮಳೆ ಕಾಣುತ್ತಿದ್ದ ಅರೇಬಿಯದಲ್ಲಿ ಕ್ರಿಸ್ತಶಕ 605ರಲ್ಲಿ ಕುಂಭದ್ರೋಣ ವರ್ಷಧಾರೆ ಸುರಿದು ಪ್ರವಾಹ ಬೀದಿಗಳಲ್ಲಿ ಉಕ್ಕಿ ಹರಿಯಿತು. ಕಾಬಾ ಗುಡಿ ಸಹಜವಾಗಿ ಜಖಂ ಆಯಿತು. ಹೀಗಾಗಿ ಗುಡಿಯ ದುರಸ್ತಿ ನಡೆಸಿ ಇನ್ನಷ್ಟು ಎತ್ತರದ ಗೋಡೆ ಹಾಗೂ ಛಾವಣಿ ನಿರ್ಮಿಸಲು ಖುರೈಷಿಗಳು ತೀರ್ಮಾನಿಸಿದರು. ಅವರ ಅದೃಷ್ಟಕ್ಕೆ ಆ ಮಳೆಗಾಲದಲ್ಲಿ ಎದ್ದಿದ್ದ ಬಿರುಗಾಳಿಗೆ ಸಿಲುಕಿ ಕೆಂಪು ಸಮುದ್ರದ ದಡಕ್ಕೆ ಬಂದು ಅಪ್ಪಳಿಸಿ ಪತನವಾದ ಗ್ರೀಕ್ ವ್ಯಾಪಾರಿ ನೌಕೆಯೊಂದು ವರದಾನದಂತೆ ಒದಗಿಬಂತು. ಇದರ ಖಚಿತ ಸುದ್ದಿ ತಿಳಿದ ಖುರೈಷಿಗಳ ಮುಖಂಡ ಅಲ್ ವಾಲಿದ್ ಅಲ್ಲಿಗೆ ಧಾವಿಸಿ ನೌಕೆಯ ಅಳಿದುಳಿದ ನಿರುಪಯುಕ್ತ ಮರ ಹಾಗೂ ಲೋಹಗಳ ಅವಶೇಷಗಳನ್ನು ಖರೀದಿಸಿದ. ಮೆಕ್ಖಾ ಸಮೀಪದ ಕೆಂಪು ಕಲ್ಲುಗಳ ಕಣಿವೆಯಿಂದ ಕಲ್ಲುಗಳನ್ನೂ ತರಿಸಿ ಬಾಕುನ್ ಎಂಬ ರೋಮನ್ ವಾಸ್ತುಶಿಲ್ಪಿಯ ಮಾರ್ಗದರ್ಶನದೊಂದಿಗೆ ಹೊಸ ಕಾಬಾದ ನಿರ್ಮಾಣ ಕಾರ್ಯ ಆರಂಭಿಸಿದ. ಗೋಡೆಗಳು ಮೇಲೆದ್ದು ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದಾಗ 'ಪವಿತ್ರ ಕಪ್ಪುಶಿಲೆ'ಯನ್ನು ಎಲ್ಲಿ, ಹೇಗೆ, ಯಾರು ಇರಿಸಬೇಕು? ಎಂಬ ನೈತಿಕ ಪ್ರಶ್ನೆ ಉದ್ಭವವಾಯ್ತು.ಈ ಶಿಲೆ ಆರು ಇಂಚು ಎತ್ತರ ಹಾಗೂ ಎಂಟಿಂಚು ಅಗಲವಾಗಿತ್ತು, ಭಕ್ತಾದಿಗಳ ಶ್ರದ್ಧಾಭಕ್ತಿಗೆ ಅದು ಒಳಗಾಗಿತ್ತು ಎನ್ನುತ್ತಾನೆ ವಿಲ್ ಡ್ಯೂರಂಟ್. ಆ ಶಿಲೆಯ ಹಣೆಬರಹ ನಿರ್ಧರಿಸುವುದು ತಮ್ಮ ಹಕ್ಕೆಂದು ಕೆಲವು ಖುರೈಷಿ ಗಣ್ಯರು ಗದ್ದಲ ತೆಗೆದರು. ಇನ್ನಿತರರು ತಮ್ಮ ಹಕ್ಕು ಮಂಡಿಸಿ ಅದನ್ನು ಬಲವಾಗಿಯೆ ವಿರೋಧಿಸಿದರು. ಈ ವಾದ ವಿವಾದ ತಾರಕಕ್ಕೇರಿ ಹೊಯ್'ಕೈ ನಡೆದು ಮತ್ತೆ ರಕ್ತದೋಕುಳಿಯಾಡುವ ಎಲ್ಲಾ ಸೂಚನೆಗಳು ಕಂಡುಬಂದಾಗ ಖುರೈಷಿಗಳಲ್ಲೆ ಹಿರಿಯನಾಗಿದ್ದವನೊಬ್ಬ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಸಂಧಾನ ಸೂತ್ರವನ್ನೇರ್ಪಡಿಸಿದ. ಅದು ಹೀಗಿತ್ತು 'ಇಂದು ಯಾವ ವ್ಯಕ್ತಿ ಮೊತ್ತ ಮೊದಲನೆಯವನಾಗಿ ಕಾಬಾದ ಒಳಕ್ಕೆ ಹೊರಗಿನಿಂದ ಬರುತ್ತಾನೊ, ಅವನಿಗೆ ಈ ಸಮಸ್ಯೆಗೆ ಪರಿಹಾರ ಸೂಚಿಸುವ ಅಥವಾ ಅವನಿಗೆ ಕರಿಶಿಲೆಯನ್ನ ಸೂಕ್ತ ಸ್ಥಳದಲ್ಲಿರಿಸುವ ಅಧಿಕಾರ ನೀಡೋಣ" ಅನ್ನುವುದಾಗಿತ್ತು. ನೆರೆದಿದ್ದವರ ಸಮ್ಮತಿ ಆ ಸೂತ್ರಕ್ಕೆ ದೊರಕುತ್ತಿದ್ದಾಗಲೆ ಮಹಮದ್ ಮೊದಲನೆಯವನಾಗಿ ಗುಡಿಯ ಒಳ ಪ್ರವೇಶಿಸಿದ್ದು ಎಲ್ಲರ ಕಣ್ಣಿಗೂ ಬಿತ್ತು! ಆವಾಗ ಎಲ್ಲರೂ 'ಅಲ್ ಅಮೀನ್' ಮೊದಲು ಬಂದ ಹೀಗಾಗಿ ಅವನು ಸೂಚಿಸುವ ಸೂತ್ರಕ್ಕೆ ನಮ್ಮ ಸಮ್ಮತಿಯಿದೆ ಎಂದು ಸಾಮೂಹಿಕವಾಗಿ ಕೂಗಿದರು. ಅತ್ಯಂತ ಸಾವಧಾನ ಚಿತ್ತದಿಂದ ಮಹಮದ್ ಈ ಕಾರ್ಯಭಾರವನ್ನು ಒಪ್ಪಿಕೊಂಡು ಕಾರ್ಯಪ್ರವೃತ್ತನಾದ. ತಾನು ಹೂದ್ದಿದ್ದ ಬಟ್ಟೆಯನ್ನು ನೆಲಕ್ಕೆ ಹಾಸಿ ಕಪ್ಪುಶಿಲೆಯನ್ನು ಅದರ ಮೇಲಿರಿಸಿ ಖುರೈಷಿಗಳ ನಾಲ್ಕೂ ಗುಂಪಿನ ಸದಸ್ಯರನ್ನು ಕರೆದು ಬಟ್ಟೆಯ ನಾಲ್ಕು ತುದಿಗಳನ್ನು ಅವರಿಂದ ಎತ್ತಿಸಿ ಅವರೆಲ್ಲರೂ ಕೂಡಿ ಕಪ್ಪುಶಿಲೆಯನ್ನು ಗೋಡೆಯ ಬದಿಗೆ ಅಂಟಿಸುವಂತೆ ಮಾಡಿದ. ತಾನೂ ಸ್ವತಃ ಈ ಕಾರ್ಯದಲ್ಲಿ ಅವರೊಂದಿಗೆ ಸಹಕರಿಸಿದ. ಹೀಗಾಗಿ ಕಟ್ಟಡದ ಕಾರ್ಯ ಸುಗಮವಾಗಿ ಸಾಗುವಂತಾಯಿತು. ಇದೆ ಸಂದರ್ಭದಲ್ಲಿ ಒಂದು ಘಟನೆ ನಡೆಯಿತು. ಈ ಕಾರ್ಯ ಸಾಗುವಾಗ ಭಯ ಭಕ್ತಿಯಿಂದ ಖುರೈಶಿಗಳು ತಮ್ಮ ಒಳವಸ್ತ್ರವನ್ನು ತೆಗೆದು ಹೆಗಲ ಮೇಲೆ ಇಳಿಬಿಟ್ಟುಕೊಂಡಿದ್ದರು.ಮಹಮದನೂ ಹಾಗೆಯೆ ಮಾಡಿದ್ದವ ಕೊನೆಯಲ್ಲಿ ಎಡವಿ ಮುಖ ಕೆಳಗಾಗಿ ನೆಲಕ್ಕೆ ಬಿದ್ದ. ಆಗ "ನಿನ್ನ ಗುಪ್ತಾಂಗವನ್ನು ಇನ್ಯಾರಿಗೂ ತೋರಿಸಬೇಡ" ಎಂಬ ಒಂದು ಅಶರೀರವಾಣಿ ಅವನಿಗೆ ಕೇಳಿಸಿದಂತಾಯಿತು. ಆದರಿಂದ ಅಂದಿನಿಂದ ಅದನ್ನು ಯಾರೊಬ್ಬರೂ ಕಾಣಲಿಲ್ಲ ಅನ್ನುತ್ತಾನೆ ಇತಿಹಾಸಕಾರ ಅಲ್-ಮುಬಾರಕಿ. ಈ ಸಮಸ್ಯೆ ಸುರಳಿತವಾಗಿ ನೆಲೆಕಂಡರೂ ಮೆಕ್ಕಾದಲ್ಲಿ ಸೂಕ್ತ ಅಧಿಕಾರ ಕೇಂದ್ರದ ಅಭಾವ ಎದ್ದುಕಾಣುತ್ತಿತ್ತು. ಖುರೈಷಿಗಳ ಒಳ ಪಂಗಡಗಳಲ್ಲೆ ವಿಪರೀತ ಕಚ್ಚಾಟವಿದ್ದರೂ ಅದೊಂದು ಬಗೆಯ ಸಾಮರಸ್ಯವೂ ಅವರಲ್ಲಿದ್ದು ವ್ಯಾಪಾರ- ವ್ಯವಹಾರಗಳಿಗೆ ಅದರಿಂದ ಅಡ್ಡಿಯಾಗದೆ ಮೆಕ್ಕಾ ಆರ್ಥಿಕವಾಗಿ ಬಲಗೊಂಡಿತ್ತು. ಉದ್ದಿಮೆದಾರರು ದೂರದ ಸಿರಿಯಾ, ನೆರೆಯ ಇರಾಕ್ ನಡುವೆ ವ್ಯಾಪಾರ ಸಂವರ್ಧನೆ ಸಾಧಿಸಿದ್ದರು. ಕ್ರಿಸ್ತ ಶಕ 606ರಲ್ಲಿ ಪರ್ಶಿಯಾದೊಂದಿಗೆ ವ್ಯಾಪಾರಿ ಸಂಬಂಧಗಳು ಅಬು ಸಫ್ಯಾನನ ಮುಂದಾಳುತ್ವದಲ್ಲಿ ಧೃಡಗೊಂಡವು. ಹೀಗೆ ಮೆಕ್ಕಾ ಉನ್ನತಿಯತ್ತ ಸಾಗುತ್ತಿದ್ದರೆ ಇತ್ತ ಮಹಮದ್'ನ ವೈವಾಹಿಕ ಜೀವನದಲ್ಲೂ ಶಾಂತಿ ನೆಲೆಸಿತ್ತು. ಮೂವರು ಹೆಣ್ಣು ಮಕ್ಕಳಿಗೆ ವಿವಾಹ ಯೋಗ ಕೂಡಿಬಂದಿತ್ತು. ಮೊದಲನೆಯವಳಾದ ಜನಾಬ್'ಳನ್ನು ಖತೀಜಳ ತಂಗಿಯ ಮಗನಿಗೆ ಕೊಟ್ಟು ಲಗ್ನ ಕುದುರಿಸಲಾಯಿತು. ಗಮನಿಸಿ ಅರಬ್ಬಿಗಳಲ್ಲಿ ಸೋದರಿಕೆಯ ಒಳವಿವಾಹಗಳು ನಿಶಿದ್ಧವಾಗಿರಲಿಲ್ಲ, ಅಂದರೆ ಅಣ್ಣತಮ್ಮಂದಿರ ಮಕ್ಕಳು ಹಾಗೂ ಅಕ್ಕತಮ್ಮಂದಿರ ಮಕ್ಕಳು ವಿವಾಹವಾಗಬಹುದಿತ್ತು. ಅದೆ ಸಾಮಾಜಿಕ ವ್ಯವಸ್ಥೆಯನ್ನ ಜಗತ್ತಿನ ಎಲ್ಲಾ ಮುಸ್ಲೀಮರೂ ಪಾಲಿಸುತ್ತಾರೆ. ಇನ್ನಿಬ್ಬರು ಹೆಣ್ಣುಮಕ್ಕಳಾದ ರೋಶಿಯಾ ಹಾಗು ಉಮ್'ಕುಲ್'ಸುಮ್'ರನ್ನು ಅಬು ಲಹಾಬ್'ನ ಮಕ್ಕಳಾದ ಓತ್ವಾ ಹಾಗೂ ಒಬೈಬಾರಿಗೆ ಕೊಟ್ಟು ಲಗ್ನ ನೆರವೇರಿಸಲಾಯಿತು. ಮಹಮದ್ ತನ್ನ ಎಳೆಮಗ ಕಾಸಿಂ ಮರಣ ಹೊಂದಿದ ಮೇಲೆ ಅಬು ತಾಲಿಬ್'ನ ಐದು ವರ್ಷದ ಮಗ ಆಲಿಯನ್ನು ದತ್ತಕಕ್ಕೆ ತೆಗೆದುಕೊಳ್ಳುತ್ತಾನೆ. ಅಬು ತಾಲಿಬ್ ಕಡು ಬಡತನದಲ್ಲಿದ್ದುದ್ದರಿಂದ ಮಹಮದ್ ಮಗುವನ್ನು ತನ್ನ ಆಶ್ರಯಕ್ಕೆ ತೆಗೆದುಕೊಂಡು ಅವನ ಸಂಕಟವನ್ನು ಕೊಂಚ ನಿವಾರಿಸಿದನು. ಇದೆ ಅಲಿ ಮುಂದೆ ಮಹಮದನಿಗೆ ಪ್ರಾಮಾಣಿಕನಾಗಿದ್ದುಕೊಂಡು ಆತನ ಧರ್ಮಾಭಿಮಾನಿಯಾಗಿ ಮೆರೆಯಲಾರಂಭಿಸಿದ. ಅದೆ ಸಮಯದಲ್ಲಿ ಆಲಿಯಂತೆಯೇ ತನ್ನ ಕುಟುಂಬಕ್ಕೆ ಪರಕೀಯನಾಗಿದ್ದ ಹಾರಿಥಾ ಎಂಬ ವ್ಯಕ್ತಿಯ ಮಗನಾದ ಜೈದ್'ಎಂಬಾತನನ್ನೂ ಹೀಗೆಯೆ ದತ್ತು ತೆಗೆದುಕೊಳ್ಳಲಾಯಿತು. ಹಾರಿಥಾ ವಾಸ್ತವವಾಗಿ ಸಿರಿಯನ್ ಕ್ರೈಸ್ತ ಬುಡಕಟ್ಟಿಗೆ ಸೇರಿದ್ದ. ಜೈದ್ ಇನ್ನೂ ಮಗುವಾಗಿದ್ದಾಗಲೆ ಅರಬ್ಬಿ ದರೋಡೆಗಾರರ ಕೈಸೇರಿ ಗುಲಾಮಗಿರಿಗೆ ತಳ್ಳಲ್ಪಟ್ಟಿದ್ದ ಹಾಗೂ ಖತೀಜಳಿಗೆ ಗುಲಾಮನಾಗಿ ಮಾರಲ್ಪಟ್ಟಿದ್ದ. ಲಗ್ನದ ನಂತರ ಆಕೆಯ ಕೊಡುಗೆಯಾಗಿ ಜೈದ್ ಮಹಮದ್'ನಿಗೆ ಸಂದಿದ್ದ. ಮಹಮದ್ ಆತನನ್ನು ಗುಲಾಮನಾಗಿ ಪರಿಗಣಿಸದೆ ತನ್ನ ಒಡಹುಟ್ಟಿದವನಂತೆ ಕಂಡು ಕಡೆಗೊಮ್ಮೆ ತನ್ನ ದತ್ತು ಮಗನನ್ನಾಗಿ ಸ್ವೀಕರಿಸಿದ. ಆದರೆ ಕಾಲಕ್ರಮೇಣ ಹಾರಿಥಾನಿಗೆ ಕಳೆದು ಹೋಗಿದ್ದ ತನ್ನ ಮಗನ ಸುಳಿವು ಸಿಕ್ಕು ಆತ ಮಗನನ್ನು ಗುಲಾಮಗಿರಿಯಿಂದ ಬಿಡಿಸಿಕೊಳ್ಳಲು ಮೆಕ್ಕಾಗೆ ಧಾವಿಸಿದ. ಅದಕ್ಕಾಗಿ ಮಹಮದನಿಗೆ ಅಪಾರ ಒತ್ತೆಹಣ ನೀಡಲು ಆತ ತಯಾರಿದ್ದರೂ ಮಹಮದ್ ಅದನ್ನು ಒಪ್ಪದೆ ಜೈದ್'ನಿಗೆ ತಂದೆಯೊಂದಿಗೆ ಸಾಗುವ ಅಥವಾ ಸ್ವತಂತ್ರವಾಗಿ ಬಾಳುವ ಹಕ್ಕನ್ನು ನೀಡಿದ. ಜೈದ್ ಮಾತ್ರ ತಂದೆಯೊಂದಿಗೆ ಸಾಗಲು ನಿರಾಕರಿಸಿ ಮಹಮದನೆ ತನ್ನ ತಂದೆ-ತಾಯಿಯೆಂದು ಘೋಷಿಸಿಕೊಂಡು ಅಲ್ಲೆ ಉಳಿಯುವ ನಿರ್ಧಾರ ಪ್ರಕಟಿಸಿದ. ಅವನ ಈ ನಡೆಯಿಂದ ವಿಪರೀತ ಹರ್ಷಿತನಾದ ಮಹಮದ್ ಜೈದನ್ನು ಕಾಬಾದ ಕರಿಶಿಲೆಯ ಸಾಕ್ಷಿಯಾಗಿ ತನ್ನ ಉತ್ತರಾಧಿಕಾರಿಯೆಂದು ಪ್ರಮಾಣ ಮಾಡಿದ. ಅಂದಿನಿಂದ ಜೈದ್'ನನ್ನು 'ಜೈದ್ ಇಬ್ನ ಮಹಮದ್' ಅಂದರೆ ಮಹಮದನ ಮಗ ಜೈದ್ ಎಂದು ಗುರುತಿಸಲಾಯಿತು. ಮಹಮದನ ಇಚ್ಛೆಯ ಪ್ರಕಾರವೆ ಜೈದ್ ಮುಂದೆ ಉಮ್ ಐಮನ್ ಎಂಬ ಕೆಲಸದವಳೊಬ್ಬಳನ್ನು ವಿವಾಹವಾಗಬೇಕಾಯಿತು. ಇತಿಹಾಸಕಾರ ಮ್ಯೂರನ ಪ್ರಕಾರ ಆಕೆಯ ವಯಸ್ಸು ಜೈದನ ವಯಸ್ಸಿನ ಎರಡರಷ್ಟಾಗಿತ್ತು!. ಹೀಗಿದ್ದರೂ ಅವರ ವೈವಾಹಿಕ ಬದುಕಿಗೆ ಅದರಿಂದೇನೂ ತೊಂದರೆಯಾಗಲಿಲ್ಲ.'ಒಸಾಮಾ'ನೆಂಬ ಮಗ ಅವರಿಗೆ ಹುಟ್ಟಿದ. ತನ್ನ ವಯಸ್ಸು ನಲವತ್ತರ ಸಮೀಪ ಮುಟ್ಟುತ್ತಿದ್ದ ಹಾಗೆ ಮಹಮದನ ಒಳಮನಸು ತೀವ್ರವಾಗಿ ಚಡಪಡಿಸಲು ಆರಂಭಿಸಿತ್ತು. ಸ್ವಭಾವತಃ ಅಂತರ್ಮುಖಿಯಾಗಿದ್ದ ಆತ ಈಗ ಹಿಂದಿಗಿಂತಲೂ ಹೆಚ್ಚಾಗಿ ಯೋಚನಾಪರನಾಗಿ ಕಾಲ ಕಳೆಯಹತ್ತಿದ್ದ. ಈ ಪರಿಯ ಆತ್ಮಾವಲೋಕನದ ಸಮಯದಲ್ಲಿ ಆತನಿಗೆ ದೈವತ್ವ ಹಾಗೂ ಧರ್ಮದ ಕುರಿತು ಜಿಜ್ಞಾಸೆ ಒಳಗೊಳಗೆ ಮೂಡಲು ಆರಂಭಿಸಿತ್ತು. ಹೀಗೆ ಮುಕ್ಕಾದ ಸುತ್ತಲಿನ ಪರ್ವತದ ಕಣಿವೆಗಳಲ್ಲಿರುವ ಗುಹೆಗಳಲ್ಲಿ ದೀರ್ಘಕಾಲ ಏಕಾಂತದಲ್ಲಿದ್ದು ಚಿಂತಿಸಲು ಆತ ತೊಡಗಿದ. ಹೀರಾ ಪರ್ವತದಲ್ಲಿದ್ದ ಒಂದು ಗುಹೆ ಆತನಿಗೆ ಆಪ್ತವಾದ ಸ್ಥಳವಾಗಿದ್ದಿತು. ಹೀಗೆ ಏಕಾಂತದಲ್ಲಿ ಚಿಂತಿಸುತ್ತಾ ಧ್ಯಾನಾಸಕ್ತನಾಗಿ ಬಹು ಸಮಯವನ್ನ ಅಲ್ಲಿಯೆ ಕಳೆಯಲು ಆರಂಭಿಸಿದ ಕೆಲದಿನಗಳ ನಂತರ ಒಮ್ಮೆ ಅಲ್ಲಿಯೆ ತಿರುಗಾಡುತ್ತಿದ್ದಾಗ ಆಗಸದಿಂದ ಒಬ್ಬ ಯಕ್ಷನ ಗಟ್ಟಿಧ್ವನಿಯೊಂದು ಮಹಮದನಿಗೆ ಕೇಳಿಸಿದಂತಾಗಿ ಆತ ಗಾಬರಿಯಾದ. ತಲೆಯೆತ್ತಿ ನೋಡಿದಾಗ ಅತಿಮಾನುಷ ಯಕ್ಷನ ದರ್ಶನ ಅವನಿಗಾಯಿತು. ಮನೆಗೆ ಹಿಂದಿರುಗಿದ ಆತ ಪತ್ನಿ ಖತೀಜಳಲ್ಲಿ ಈ ವಿಷಯವನ್ನ ಅರಹುತ್ತಾ "ವಿಗ್ರಹಾರಾಧನೆ ಹಾಗು ಭವಿಷ್ಯವಾಣಿ ನುಡಿಯುವುದನ್ನ ನಂಬದಿರುವ ಹಾಗೂ ಅಸಹ್ಯ ಪಡುವ ನಾನೆ ಈಗ ನನಗರಿವಿಲ್ಲದ ಹಾಗೆ ಭವಿಷ್ಯ ನುಡಿವ ಜೋತಿಷಿಯಾಗುತ್ತಿದ್ದಿನೇನೊ!" ಎನ್ನುತ್ತಾ ವಿಹ್ವಲನಾದ. ಆದರೆ ಆತನ ಈ ಮಾತಿಗೆ ಸೊಪ್ಪು ಹಾಕದೆ ಖತೀಜಾ 'ಖಂಡಿತಾ ಇಲ್ಲ! ದೇವರು ನಿನಗೆ ಹಾಗಾಗಲು ಬಿಡನು" ಎಂದು ಸಮಾಧಾನಿಸಿ ಈ ಸಂಗತಿಯನ್ನ ತನ್ನ ಹಿರಿಯ ಸಂಬಂಧಿಕ ವರಾಕನಿಗೆ ತಿಳಿಸುತ್ತಾಳೆ. ಇದನ್ನು ಕೇಳಿ ಹರ್ಷಿತನಾದ ವರಾಕ "ಸಂಶಯವಿಲ್ಲ ಇದೆಲ್ಲ ಒಳ್ಳೆಯದರ ಆರಂಭ! ಆತ ದೇವರ ದಯದಿಂದ ಸತ್ಯವನ್ನಷ್ಟೆ ನುಡಿಯುತ್ತಿದ್ದಾನೆ" ಎಂದು ಪ್ರತಿಕ್ರಿಯಿಸಿದ. ಅಲ್ ವಾಕಿಡಿ, ಇಬ್ನ ಹಿಶಾಮ್ ಹಾಗೂ ಅಲ್ ತಾಬರಿಯಂತಹ ಇತಿಹಾಸಕಾರರು ಮಹಮದ್ ಯಕ್ಷ ಗೇಬ್ರಿಯಲ್'ನಿಂದ ಅಪೌರುಷೇಯವಾದ ದಿವ್ಯಜ್ಞಾನ ಪಡೆದಿದ್ದನ್ನು ದಾಖಲಿಸಿದ್ದಾರೆ. ಇವರನ್ನೆ ಉದಾಹರಿಸುತ್ತ ಇತಿಹಾಸಕಾರ ಸರ್ ವಿಲಿಯಂ ಮೊಯಿರ್ ತಮ್ಮ ಗ್ರಂಥದಲ್ಲಿ ಕೊಡುವ ಸಾರಾಂಶ ಇಷ್ಟು "ಮಹಮದ್ ತನ್ನ ಕುಟುಂಬಸ್ಥರೊಂದಿಗೆ ಒಂದೊಮ್ಮೆ ಹೀರಾಪರ್ವತದ ಗುಹೆಯಲ್ಲಿ ನಿದ್ರಿಸುತ್ತಿದ್ದಾಗ ಅಲ್ಲಿಗೆ ಗೇಬ್ರಿಯಲ್ಲನ ಪ್ರವೇಶವಾಗುತ್ತದೆ. ಅವನ ಕೈಯಲ್ಲಿ ಒಂದು ರೇಷ್ಮೆಯ ತುಂಡಿದ್ದು ಅದರಲ್ಲಿ ಅದೇನೂ ಬರೆದಿರುತ್ತದೆ. ಯಕ್ಷ ಮಹಮದನನ್ನು ಗಟ್ಟಿಯಾಗಿ ಹಿಡಿದುಕೊಂಡು 'ಓದು' ಎಂದು ಆದೇಶಿಸುತ್ತಾನೆ. ಆದರೆ ಅನಕ್ಷರಸ್ಥನಾಗಿದ್ದ ಮಹಮದ್ ಓದಲಾಗದೆ ಯಕ್ಷನ ಬಿಗಿ ಹಿಡಿತದಿಂದ ವೇದನೆ ಅನುಭವಿಸುತ್ತಾ 'ಏನನ್ನು ಓದಲಿ?' ಎಂದು ಕೇಳಲು, ಗೇಬ್ರಿಯಲ್ ದೇವರ ಹೆಸರಲ್ಲಿ ಓದು ಎಂದಾಗ ಹುಟ್ಟುವುದೆ ಖುರಾನಿನ 96ರಿಂದ 5ರವರೆಗಿನ ಸುರಾಗಳು ಅಂದರೆ ಶ್ಲೋಕಗಳು. ಅವುಗಳನ್ನಾತ ಗಟ್ಟಿಯಾಗಿ ನುಡಿದ ನಂತರ ಯಕ್ಷ ಅಲ್ಲಿಂದ ನಿರ್ಗಮಿಸಿದ ; ಅವಷ್ಟೂ ಸುರಾಗಳೂ ಮಹಮದನ ಹೃದಯದಲ್ಲಿ ಅಚ್ಚು ಹಾಕಿದಂತೆ ಅನುಭವವಾಯಿತು" ಹೀಗೆ ಕುರಾನಿನ 96ನೆ ಸುರಾದಲ್ಲಿದ್ದ 15 ಪದ್ಯಗಳು ಮಹಮದನಿಗೆ ಮೊದಲು ವ್ಯಕ್ತವಾದದ್ದು ಅಪೌರುಷೇಯವಾಣಿಯೊಂದರಿಂದ. ಹೀಗೆ ಕೆಲತಿಂಗಳುಗಳು ಕಳೆದ ನಂತರ ಯಕ್ಷ ಗೇಬ್ರಿಯಲ್ಲನ ಪುನರಾಗಮನವಾಯಿತು. ಈ ಹಂತದಲ್ಲಿ ಆದ ಮಾನಸಿಕ ತಳಮಳ ಹಾಗು ಆಂತರಿಕ ಹತಾಶೆಯಿಂದ ಮಹಮದ್ ಹತಾಶನಾಗಿಹೋಗಿ ಆತ್ಮಹತ್ಯೆಗೂ ಯೋಚಿಸಿದ್ದ ದಿನಗಳವು! ಆದರೆ ಇದ್ದಕ್ಕಿದಂತೆ ಒಂದು ದಿನ ಆಗಸದಲ್ಲಿ ಸಿಂಹಾಸನದಲ್ಲಿ ಕೂತಿದ್ದ ಗೇಬ್ರಿಯಲ್ಲನ ದರ್ಶನ ಅವನಿಗಾಯಿತು. ಯಕ್ಷ "ಓ ಮಹಮದ್! ನೀನೀಗ ದೇವರ ಪ್ರವಾದಿ ಹಾಗೂ ನಾನು ಯಕ್ಷನಾದ ಗೇಬ್ರಿಯಲ್... ಇದು ಸತ್ಯ!" ಎಂದು ಸಾರಿದ್ದನ್ನು ಮಹಮದ್ ಆಲಿಸಬೇಕಾಯಿತು. ಅವನೊಳಗೆ ಅಡಗಿದ್ದ ಗೊಂದಲಗಳನ್ನೆಲ್ಲಾ ಗೇಬ್ರಿಯಲ್ ಒಂದೊಂದಾಗಿ ಪರಿಹರಿಸಿ ಅವನನ್ನು ಮಾನಸಿಕವಾಗಿ ತಣಿಸಿದ. ಧೃಡಗೊಂಡ ಮನಸ್ಸಿನಿಂದ ಮುಂದಿನ ದಿನಗಳಲ್ಲಿ ಮಹಮದ್ ಮರಳಿ ಮರಳಿ ದೈವವಾಣಿಯ ಸಾರುವಿಕೆಯನ್ನ ಆರಂಭಿಸಿದ್ದು ಹೀಗೆ. ಇದೆ ಮುಂದೆ 'ಖುರಾನ್' ಎಂದು ಪ್ರಸಿದ್ಧವಾದ ಧರ್ಮಗ್ರಂಥವಾಯಿತು. 'ತನಗೆ ದೈವವಾಣಿಯ ಸಾಕ್ಷಾತ್ಕಾರವಾಗಿದೆ, ತಾನಿನ್ನು ಅಲ್ಲಾನ ಪ್ರವಾದಿ' ಎಂದು ಆರಂಭಿಸಿದ ಮಹಮದನ ಮತಪ್ರಚಾರಕ್ಕೆ ಮೊದಲು ಸಮ್ಮತಿಸಿ ಆತನ ಶಿಷ್ಯೆಯಾದವಳು ಸ್ವತಃ ಆತನ ಮಡದಿ ಖತೀಜಾ. ಆಕೆ ಗಂಡನನ್ನು ಪ್ರವಾದಿ ಎಂದು ಒಪ್ಪಿಕೊಂಡ ಮೇಲೆ ನಿಧಾನವಾಗಿ ಸಂಬಂಧಿಕರು, ಸ್ನೇಹಿತರು ಕುಟುಂಬದ ಆತ್ಮೀಯರು ಹೀಗೆ ಒಬ್ಬೊಬ್ಬರಾಗಿ ಆಕೆಯನ್ನು ಹಿಂಬಾಲಿಸಲಾರಂಭಿಸಿದರು. ಕುಟುಂಬದ ಸದಸ್ಯರಲ್ಲಿ ಪ್ರಮುಖವಾಗಿ ಮಹಮದನ ಸಾಕು ಮಗ ಜೈದ್, ದೊಡ್ಡಪ್ಪನ ಮಗ ಆಲಿ, ಪತ್ನಿ ಖತೀಜಾಳ ಬಂಧು ವರಾಕಾ, ಆಪ್ತ ಸ್ನೇಹಿತ ಅಬು ಬಕರ್ ಪ್ರಮುಖರು.ಅಬು ಬಕರ್ ಮಹಮದನಿಗಿಂತ ಕೇವಲ ಎರಡುವರ್ಷಕ್ಕೆ ಕಿರಿಯನಾಗಿದ್ದು ಆತನ ವಿಧೇಯ ಚುರುಕು ಬುದ್ದಿಯ ಆಪ್ತಮಿತ್ರನಾಗಿದ್ದ. ಪ್ರವಾದಿಯೊಂದಿಗೆ ಸಲುಗೆಯ ನಿಕಟ ಬಾಂಧವ್ಯ ಹೊಂದಿದ್ದ ಆತನನ್ನು ಮುಸ್ಲಿಂ ಪ್ರಪಂಚ 'ಅಸ್ ಸಿದ್ಧಿಕಿ' ಎಂದೆ ಗುರುತಿಸುತ್ತದೆ, ಅರಬ್ಬಿಯಲ್ಲಿ ಹಾಗೆಂದರೆ ಸತ್ಯವಂತ ಎಂದರ್ಥ. ವಾಸ್ತವವಾಗಿ ಅವನ ಅಸಲಿ ಹೆಸರು 'ಅಬ್ದುಲ್ಲಾ ಇಬ್ನ ಒತ್ಹಾಮನ್ ಅಬು ಕುಹಾಫಾ' ಎಂದಾಗಿದ್ದರೂ ಒಂಟೆಗಳ ಮೇಲೆ ಅವನಿಗಿದ್ದ ವಿಪರೀತ ಮೋಹ ಹಾಗೂ ಕಾಳಜಿಯ ಕಾರಣದಿಂದ ಆತನಿಗೆ ಅಬು ಬಕರ್ ಎಂಬ ಅಡ್ಡ ಹೆಸರು ಇಡಲಾಗಿತ್ತು ಅನ್ನುತ್ತಾನೆ ಇತಿಹಾಸಗಾರ ಮ್ಯೂರ್. ವ್ಯವಹಾರಸ್ಥನಾಗಿ ಅಪಾರ ಹಣಗಳಿಸಿದ್ದ ಅಬು ಬಕರ್ ತನ್ನ ಹಿತಮಿತ ಹಾಗೂ ಸೌಜನ್ಯಯುತ ಸಂಭಾಷಣೆಗಳಿಂದ ಜನಮನ ಗೆದ್ದಿದ್ದ. ತನ್ನ ನ್ಯಾಯಯುತ ನಡುವಳಿಕೆಗಳಿಂದ ತನ್ನ ಖುರೈಷಿ ಬುಡಕಟ್ಟಿನ ಮುಖಂಡರ ಸ್ನೇಹ ಗೌರವ ಸಂಪಾದಿಸಿದ್ದ. ಒಬ್ಬ ವೀರ ಪೂಜಕನಾಗಿದ್ದ ಆತ ತನ್ನ ಕೊನೆಯ ಉಸಿರಿರುವವರೆಗೂ ತಾನು ನಂಬಿದ ನಾಯಕನನ್ನು ಅತ್ಯಂತ ವಿಧೇಯನಾಗಿ ಆರಾಧಿಸಿದ. ಇಂತಹ ಅಬು ಬಕರ್'ನ ಶ್ರದ್ಧಾಪೂರ್ಣ ನಂಬಿಕೆಗೆ ಪಾತ್ರನಾದದ್ದು ಮತಪ್ರಚಾರದ ದೃಷ್ಟಿಯಿಂದ ಮಹಮದ್ ಸಾಧಿಸಿದ ಮೊತ್ತಮೊದಲ ವಿಜಯವಾಗಿತ್ತು. ಅಬು ಬಕರ್'ನ ಪ್ರಭಾವದಿಂದಲೆ ಮುಂದೆ ಐವರು ಪ್ರಮುಖ ಖುರೈಷಿ ಪ್ರಮುಖರು ನೂತನ ಧರ್ಮಾನುಯಾಯಿಗಳಾಗಳು ಸಾಧ್ಯವಾಯಿತು. ಅವರೆಂದರೆ ತನ್ನ ಹದಿನಾರನೆ ವಯಸ್ಸಿನಲ್ಲಿಯೆ ಹೊಸಧರ್ಮಕ್ಕೆ ಸೇರಿದ ಸಾದ್ ಎಂಬ ಯುವಕ, ಅಲ್ ಗುಬೈರ್ ಎಂಬ ಖತೀಜಾ ಹಾಗೂ ಮಹಮದನ ನಿಕಟ ಸಂಬಂಧಿ, ಮುಂದೆ ಮಹಮದನ ಮಗಳು ರೋಕೈಯಾಳ ಎರಡನೆ ಪತಿಯಾದ 'ಒತ್ಹಮನ್' ಎಂಬ ಯುವಕ ( ಅದಾಗಲೆ ಒತ್ವಾನನ್ನು ವಿವಾಹವಾಗಿದ್ದ ರೋಕೈಯಾ ಮುಂದೆ ಆತನಿಂದ ವಿಚ್ಚೇದಿತೆಯಾಗಿ ಈ ಒತ್ಹಮನ್'ನನ್ನು ಮರುವಿವಾಹವಾದಳು). ತಲ್ಹಾ ಎಂಬ ಅಬು ಬಕರನ ಸಂಬಂಧಿ ಹಾಗೂ ಮಹಾಮದನಿಗಿಂತ ವಯಸ್ಸಿನಲ್ಲಿ ಹತ್ತುವರ್ಷ ಕಿರಿಯನಾಗಿದ್ದ ಅಬ್ದುಲ್ ರೆಹಮಾನ್ ಎಂಬ ಯುವಕ. ಗುಲಾಮಗಿರಿಯಿಂದ ವಿಮೋಚಿತರಾಗುವ ಆಕರ್ಷಣೆಯಿಂದ ಹಲವಾರು ಗುಲಾಮರು ಮತಾಂತರಗೊಂಡರು. ಆ ಪೈಕಿ ಅಬಿಸೀನಿಯಾ ದೇಶದ ಗುಲಾಮ ಬಿಲಾಲ್ ಪ್ರಮುಖನಾದವ, ಅಬು ಬಾಕರ್ ಆತನನ್ನು ಒತ್ತೆಹಣ ನೀಡಿ ಗುಲಾಮಗಿರಿಯಿಂದ ಬಿಡಿಸಿದ ಮೇಲೆ ಆತನನ್ನು ಸಂತೋಷದಿಂದಲೆ ಮಹಮದ್ ತನ್ನ ಧರ್ಮಕ್ಕೆ ಬರಮಾಡಿಕೊಂಡ. ಇದೆ ಬಿಲಾಲ್ ಮುಂದೆ ಇಸ್ಲಾಮಿಕ್ ಪ್ರಪಂಚದ ಮೊತ್ತಮೊದಲ 'ಮುಯಾಜಿನ್' ಎಂದು ಕರೆಸಿಕೊಂಡ. ಮುಯಾಜಿನ್ ಅಂದರೆ ಅರಬ್ಬಿಯಲ್ಲಿ 'ಪ್ರಾರ್ಥನೆಗೆ ಕರೆನೀಡುವ ವ್ಯಕ್ತಿ' ಎಂದು ಅರ್ಥ ಬರುತ್ತದೆ. ಅಬ್ದುಲ್ಲಾ ಇಬ್ನ ಮಸೂದ್ ಎಂಬ ಇನ್ನೊಬ್ಬ ಮತಾಂತರಿತ ಗುಲಾಮ ಮುಂದೆ ಮಹಮದನ ಆಪ್ತಸೇವಕನಾಗಿ ಪ್ರಸಿದ್ಧಿಗಳಿಸಿದ. ಕಾಬ್ದಾಲ್ ಎಂಬ ಇನ್ನೊಬ್ಬ ಗುಲಾಮನನ್ನೂ ಈ ಪಟ್ಟಿಯಲ್ಲಿ ಹೆಸರಿಸಬಹುದು. ಈ ಬಹುತೇಕ ಮತಾಂತರಿತ ಗುಲಾಮರು ಮೂಲದಲ್ಲಿ ಒಂದೋ ಯಹೂದಿ ಅಥವಾ ಸಿರಿಯನ್ ಕ್ರೈಸ್ತರಾಗಿದ್ದು ತಮ್ಮ ಕೆಟ್ಟ ನಸೀಬಿನಿಂದ ಪಾರಾಗಿ ಗುಲಾಮಗಿರಿಯಿಂದ ಮುಕ್ತರಾಗಲು ಮತಾಂತರವಾದದ್ದು ಸಹಜ ಎನ್ನುತ್ತಾನೆ ಇತಿಹಾಸಕಾರ ಅಲ ಹಾಜ್ ಕಾಸಿಂ ಅಲಿ ಜೈರಾಜಬಿ. ಹೀಗೆ ಸ್ಥಾಪಿತವಾಗಿದ್ದ ಮಹಮದನ ನೂತನ ಧರ್ಮ ಸಾಮಾಜಿಕ ಭೀತಿಯಿಂದ ಆರಂಭದಲ್ಲಿ ಕೇವಲ ಒಂದು 'ಗುಪ್ತ ಸಂಘ'ವಾಗಿದ್ದಿತು. ಅತ್ಯಂತ ಗೌಪ್ಯವಾಗಿ ಮತಪ್ರಚಾರದ ಕಾರ್ಯಕೈಗೊಳ್ಳಲಾಗುತ್ತಿತ್ತು. ಕ್ರಮೇಣ ಇಸ್ಲಾಂ ಬಲಗೊಂಡಾದ ಮೇಲೆ ಗುಪ್ತ ಪ್ರಚಾರದ ನಿಯಮಗಳನ್ನೆಲ್ಲಾ ಬದಿಗೊತ್ತಿ ಬಹಿರಂಗ ಪ್ರಚಾರಕ್ಕೆ ಹೆಚ್ಚು ಒತ್ತುಕೊಡಲಾಯಿತು ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಒಮ್ಮೆ ಯಾರಾದರೂ ಈ ಸಂಘದ ಸದಸ್ಯರಾದರೆ ಅನಂತರ ಕೊನೆಯುಸಿರು ಇರುವವರೆಗೂ ಅವರು ಅಲ್ಲಿನ ಅಜೀವ ಸದಸ್ಯರಾಗಿಯೆ ಬಾಳುವುದು ಕಡ್ಡಾಯವಾಗಿತ್ತು. ಹಾಗೊಂದು ವೇಳೆ ಇನ್ಯಾವುದೊ ಹೊಸ ನಂಬಿಕೆಗೆ ಮಾರುಹೋದರೆ ಜೀವ ತೆರಬೇಕಾಗಿದ್ದಿತು. ಇದೆ ಅತಿರೇಕದ ನಿಯಮ ಇನ್ನೂ ಇಸ್ಲಾಮಿನಲ್ಲಿ ಚಾಲ್ತಿಯಲ್ಲಿದೆ. ಇಂದಿಗೂ ಇಸ್ಲಾಮಿನಲ್ಲಿ ಈ ನಿಯಮ ಪಾಲನೆಯನ್ನು ಕಾಣಬಹುದಾಗಿದೆ. ಒಮ್ಮೆ ಮುಸ್ಲೀಮನಾಗಿ ಮತಾಂತರವಾದವನ ಪುನರ್ ಮತಾಂತರ ದುಸ್ಸಾಧ್ಯ! ( ಇನ್ನೂ ಇದೆ...)

ನೆನಪಿನ ದಂಡೆಯ ಮೇಲೆ....

ನಿನ್ನ ನೆನಪಿನ ಗಂಗೆಯಲಿ ಮಿಂದು, ನಿನ್ನ ಹಾದಿಯನೆ ಮನದ ಯಮುನೆಯ ದಡದಲ್ಲಿ ಕಾದು.... ನಿನ್ನ ವಿರಹದ ನೋವಿನ ತುಂಗೆಯನ್ನೆ ನಿತ್ಯ ಕುಡಿದು ಅನುಗಾಲದ ಮನದ ದಾಹವನ್ನ ತೀರಿಸಿ ಕೊಳ್ಳುತ್ತಿರುವ ನನಗೆ ಇಲ್ಲೇ ಮುಕ್ತಿ ಕಟ್ಟಿಟ್ಟಿರುವಾಗ, ಇನ್ನೊಂದು ಜನ್ಮ ಯಾವ ಕರ್ಮಕ್ಕೆ? / ಅಲ್ಪ ತೃಪ್ತ ನನ್ನ ಮನಕ್ಕೆ ನಿನ್ನದೊಂದು ನಿಷ್ಕಲ್ಮಶ ನಗುವಿನ ನೆನಪೆ ಸಾಕು..... ಪ್ರಾಮಾಣಿಕ ಪ್ರೀತಿಗೆ ಹೇಳು. ಇದಕ್ಕಿಂತ ಹೆಚ್ಚಿನ್ನೇನು ಬೇಕು? // ಸುಮ್ಮನಿರುವ ನನ್ನ ಮನಸನ್ನ ಮೆತ್ತಗೆ ಕೆಣಕುವ ನಿನ್ನ ನಿನಪುಗಳಿಗೆ ಹೊತ್ತು ಗೊತ್ತು ಒಂದೂ ಇಲ್ಲವ?, ಕೇವಲ ಮಾತಿನಲ್ಲಿಯೆ ಮಹಲು ಕಟ್ಟುವ ಬಯಕೆ ನನಗಿಲ್ಲ.... ಮೌನದ ಮಹತ್ತನ್ನ ಕೊನೆಯ ತನಕ ನಿನಗಾಗಿ ಕಾದು ಕೂತು ನಿರೂಪಿಸುತೀನಿ ನಾನು / ಕಿವಿಯಲ್ಲಿ ಕದ್ದು ಗಾಳಿಯುಸುರಿದ ನನ್ನೆದೆಯ ಖಾಸಗಿ ಗುಟ್ಟುಗಳನ್ನೆಲ್ಲ ನಿಜವೆಂದೆ ಭಾವಿಸಿದ್ದ.... ನನ್ನ ಮನದ ಮೂಢತನಕ್ಕೆ ನೀನು ಖಂಡಿತ ಹೊಣೆಯಲ್ಲ, ನೆನ್ನಿನಿರುಳು ಸುರಿದ ಮಳೆಗೆ ಇಂದೂ ಮತ್ತೆ ಹನಿಯಲು ಬಿಡುವಾದಲ್ಲಿ ನನ್ನ ಇರುಳ ಕಂಬನಿಗಳಿಗೆ ಒಂಟಿತನದಲ್ಲೊಂದು.... ಒಂದು ಜೊತೆಯಾದರೂ ಸಿಕ್ಕೀತೇನೋ // ಕೇವಲ ಮೌನದ ಆಸರೆಯಿದೆ ಮನದೊಳಗೆ ಹೊರಳಾಡುವ ಕಳವಳದ ಮಿಡುಕಾಟಕ್ಕೆ.... ನೆನಪುಗಳು ಹೊದಿಸಿದ ಚಾದರ ಬೇಸರವಿದೆ, ಸೂಕ್ಷ್ಮ ನನ್ನೆದೆಯ ಭಾವಗಳು... ನೀ ಮಾಡಿದ ಆಳ ಗಾಯ ಮಾಯಲು ಬಹುಷಃ ಈ ಒಂದು ಜನ್ಮವೂ ಅದಕ್ಕೆ ಸಾಲಲಾರದೇನೋ / ನನ್ನ ಮನಸ ಆಗಸದ ನೀಲಿಯಲ್ಲಿ ಗುಂಪು ಗುಂಪಾಗಿ ತೇಲುವ ನಿನ್ನ ನೆನಪುಗಳ ಮೋಡ.... ಸದಾ ಕಣ್ಣ ಹನಿಗಾಗಿಯೇ ಕೆಳಕ್ಕೆ ಹನಿಯುವುದಾದರೂ ಏಕೆ?, ಪಿಸುನುಡಿವ ಒಳ ಮನದ ಆಕ್ಷಾಂಶೆಗಳಿಗೆ ಮೌನದ ಗುಹೆಯಲ್ಲೆ ಮತ್ತೆ ಅಡಗಿಕೊಳ್ಳುವ ಮೊದಲು... ನಿನ್ನ ನೆನಪುಗಳನ್ನೊಮ್ಮೆ ಸೋಕಿ ಹೋಗುವ ಆಳದ ಆಸೆ // ಇರುಳಿಗೆ ತಂಪಿಲ್ಲ ಹಗಲಿಗೆ ಕಾವಿಲ್ಲ ನಿನ್ನ ನೆನಪಿರುವ ತನಕ ಮನಸಿಗೆ ವಿರಹದ ನೋವರಿವಿಲ್ಲ.... ನೀನಿಲ್ಲದ ಗುಂಗು ನನ್ನೊಳಗಿನ ನಾನು ಸತ್ತು ಹೋಗಿದ್ದರೂ ಈ ಹಾಳು ಕುಟುಕು ಜೀವದ ಹಂಗು, ಇನ್ನೂ ನನ್ನ ಕಾಯವನ್ನ ಕೇವಲ ಉಸಿರಾಡುವ ಕಾಷ್ಠವಾಗಿಸಿಟ್ಟಿವೆ/ ಕಾಪಿಟ್ಟ ಕನಸುಗಳಿಗೆ ಕಾದಿಟ್ಟ ನಿಧಿಯಂತಾ ಒಳಮನದ ಖುಷಿಗಳಿಗೆ.... ಅಸಲು ಮೌಲ್ಯ ಹುಟ್ಟೋದು ನೀನು ಬಂದಾಗಲೇ ತಾನೆ ಬರೋದು, ಕಾದ ಪ್ರತಿ ಕ್ಷಣದ ಕಪ್ಪ ಕಣ್ಣ ಹನಿಗಳಾಗಿಯೆ ಉದುರಿ ಹೋಗೋದು ಖಾತ್ರಿ,,,, ಆದರೆ ನೀ ಮರಳಿ ಬರುವ ಬಗ್ಗೆ ಮನಸಿಗೆ ಖಚಿತ ಮಾಹಿತಿಯಿಲ್ಲ //

ದಸರೆಯ ಗಮ್ಮತ್ತು....

ದಸರಾ ಬಂತೆಂದರೆ ಸಾಮಾನ್ಯವಾಗಿ ನಮಗೆಲ್ಲ ಬಾಲ್ಯದಲ್ಲಿ ಹೊಸ ಉಲ್ಲಾಸ ಉತ್ಸಾಹ ಚಿಗುರುತ್ತಿತ್ತು. ಸಾಮಾನ್ಯವಾಗಿ ದಸರಾ ಮಧ್ಯಂತರ ಶಾಲಾ ರಜೆಗಳ ಕಾಲದಲ್ಲಿಯೆ ಬರುತ್ತಿದ್ದರೂ ಅಪರೂಪಕ್ಕೆ ಅದರ ಹಿಂಚು ಮುಂಚಿನಲ್ಲೂ ವಿಜಯದಶಮಿಯ ದಿನ ಬೀಳುತ್ತಿದ್ದುದೂ ಉಂಟು. ಆಗೆಲ್ಲ ಶಾಲೆಗೆ ಇನ್ನೆರಡು ದಿನಗಳ ಹೆಚ್ಚುವರಿ ರಜೆ ಸಿಗುತ್ತಿದ್ದರಿಂದ ನಾನಂತೂ ದಸರಾ ರಜೆಯಲ್ಲಿ ಬಾರದೆ ರಜೆ ಮುಗಿದ ಮೇಲೆಯೆ ಬರಲಿ ಅಂತ ಕಂಡಕಂಡ ದೇವರಿಗೆಲ್ಲ ಮನಸೊಳಗೆ ಹರಕೆ ಹೊರುತ್ತಿದ್ದೆ. ನನ್ನ ಈ ಬೇಡಿಕೆ ಕೆಲವೊಮ್ಮೆ ಪೂರೈಸಿದ್ದು ಹೌದಾದರೂ ನನ್ನ ಆ ಅರ್ಜೆಂಟ್ "ರಜಾಪೇಕ್ಷಿತ" ಹರಕೆಗಳು ಸಕಾಲದಲ್ಲಿ ಸಂದು ಸಂತೃಪ್ತರಾಗುವ ಯೋಗ ಇನ್ನೂ ಯಾವ ದೇವರಿಗೂ ಕೂಡಿಬಂದಿಲ್ಲ. ವಿಷಯ ಹೀಗಿದ್ದರೂ ವರ್ಷವರ್ಷವೂ ನಾನು ಈ ಎಂದೆಂದೂ ಈಡೇರಿಸದ ಹರಕೆ ಹೊರುವುದನ್ನು ನಿಲ್ಲಿಸುತ್ತಿರಲಿಲ್ಲ, ಅಭ್ಯಾಸ ಬಲದಿಂದ ನನ್ನ ಹರಕೆಗಳನ್ನ ಕೇಳುವ ಅನಿವಾರ್ಯ ಕರ್ಮದಿಂದ ಯಾವೊಬ್ಬ ದೇವರಿಗೂ ಆಗೆಲ್ಲ ಮುಕ್ತಿಯಿರಲಿಲ್ಲ! ತೀರ್ಥಹಳ್ಳಿಯಲ್ಲಿ ದಸರಾ ಆಚರಣೆಗೆ ಶಿವಮೊಗ್ಗ ಜಿಲ್ಲೆಯಲ್ಲಿಯೆ ಒಂದು ಮೆರುಗಿತ್ತು. ಮೈಸೂರು ದಸರಾಕ್ಕೆ ಹೋಲಿಸಿದರೆ "ಸಿಂಗನ ಮುಂದೆ ರಂಗ" ಎನ್ನುವಂತಿದ್ದರೂ ಆಚರಣೆಯ ಅಚ್ಚುಕಟ್ಟುತನದಲ್ಲಿ ಯಾವ ಮೈಸೂರಿಗೂ ತೀರ್ಥಹಳ್ಳಿ ಕಡಿಮೆಯಿರಲಿಲ್ಲ. ನಮ್ಮಲ್ಲೂ ಅನೆ ಮೇಲೆ ನಾಡದೇವಿಯ ಅಂಬಾರಿ ಇರುತ್ತಿತ್ತು. ಆನೆಯ ಮುಂದೆ ಸುಮಾರು ಹತ್ತಕ್ಕೂ ಹೆಚ್ಚು ವಿವಿಧ ಸ್ತಬ್ಧ ಚಿತ್ರಗಳು ತೆವಳಿಕೊಂಡು ಸಾಗುತ್ತಿದ್ದವು. ಅವೆಲ್ಲಕ್ಕೂ ಮುಂದೆ ನಮ್ಮ ಸೇವಾಭಾರತಿಯ ಶಾಲಾ ಬ್ಯಾಂಡ್'ಸೆಟ್, ಹೋಂಗಾರ್ಡಿನವರ ಬ್ಯಾಂಡ್'ಸೆಟ್, ಕಂಗಿಲು ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಕಂಭದ ಕಾಲು ನಡಿಗೆ, ತಟ್ಟೀರಾಯ, ಕೀಲುಕುದುರೆ ಬೇತಾಳ ಹೀಗೆ ಯಾವುದುಂಟು ಯಾವುದಿಲ್ಲ ಹೇಳಿ! ಎಲ್ಲಕ್ಕೂ ಹೆಚ್ಚಾಗಿ ವಿವಿಧ ವರ್ಣಗಳ ಹುಲಿವೇಷದ ಹಿಂದೆ ಅಲ್ಲಿ ತುಂಬಿ ತುಳುಕುತ್ತಿತ್ತು. ಅಂತೂ ಮೆರವಣಿಗೆ ಊರಿನ ರಾಜರಸ್ತೆಯುದ್ದಕ್ಕೂ ರಂಗೇರಿಸುತ್ತಾ, ಅಸಾಧ್ಯ ಗದ್ದಲವೆಬ್ಬಿಸುತ್ತಾ ಹೋಗುತ್ತಿದ್ದರೆ ಇವೆಲ್ಲಕ್ಕೂ ಕಟ್ಟ ಕೊನೆಯಲ್ಲಿ ಛತ್ರಿ ಚಾಮರಗಳೊಂದಿಗೆ ದೇವಿಯ ಮೂರ್ತಿ ಹೊತ್ತ ಭೋವಿಗಳ ಪಲ್ಲಕಿ ಸಾಗುತ್ತಿತ್ತು. ಅದರ ಹಿಂದೆ ಸಕ್ರೆಬೈಲಿನ ಆನೆ ಬಿಡಾರದಿಂದ ಬಂದಿರುತ್ತಿದ್ದ ಆನೆ ಗಜ ಗಾಂಭೀರ್ಯದಿಂದ ಅಂಬಾರಿಯಲ್ಲಿ ದೇವಿಯ ಮೂಲ ವಿಗ್ರಹ ಹೊತ್ತು ಮೆಲ್ಲಗೆ ಹೆಜ್ಜೆ ಹಾಕುತ್ತಿತ್ತು. ಮೆರವಣಿಗೆ ಶುರುವಾಗುವ ರಥಬೀದಿಯಿಂದ ಆರಂಭಿಸಿ ಕೊನೆಗೊಳ್ಳುವ ಕುಶಾವತಿಯ ನೆಹರೂ ಪಾರ್ಕಿನವರೆಗೂ ಎಲ್ಲಿ ನೋಡಿದರಲ್ಲಿ ಜನವೋ ಜನ. ಎಳ್ಳಮವಾಸ್ಯೆ ಬಿಟ್ಟರೆ ತೀರ್ಥಹಳ್ಳಿ ಅಷ್ಟು ಜನ ಪ್ರವಾಹವನ್ನ ಕಾಣುತ್ತಿದ್ದುದು ಬಹುಷಃ ವಿಜಯದಶಮಿಯ ದಿನ ಮಾತ್ರ. ಸಕ್ರೆಬೈಲಿನ ಆನೆ ಬಿಡಾರದಿಂದ ಆನೆಯನ್ನ ಹಿಂದಿನ ದಿನವೆ ತಂಪು ಹೊತ್ತಿನಲ್ಲಿ ಹೊರಡಿಸಿ ತೀರ್ಥಹಳ್ಳಿಗೆ ಅರಣ್ಯ ಇಲಾಖೆಯವರೆ ತಮ್ಮ ದೊಡ್ಡ ಲಾರಿಯಲ್ಲಿ ಹತ್ತಿಸಿಕೊಂಡು ತರುತ್ತಿದ್ದರು. ಆದರೆ ಅದ್ಯಾಕೆ ಹೆಣ್ಣು ಆನೆಗಳನ್ನೆ ತರುತ್ತಿದ್ದರು ಅಂತ ನನಗೆ ಇಂದಿಗೂ ಅರ್ಥವಾಗಿಲ್ಲ. ಒಂದೆರಡು ಸಲವಂತೂ ಇನ್ನೂ ಎಳೆಮರಿ ಜೊತೆಗಿರುವ ತಾಯಿ ಆನೆಯನ್ನ ಈ ಭೂಪರು ಮೆರವಣಿಗೆಗೆ ತಂದಿದ್ದರು! ಅಂಬಾರಿ ಹೊತ್ತ ತಾಯಿಯ ಮೇಲೆ ಊರವರೆಲ್ಲರ ಕಣ್ಣಿದ್ದರೆ.ತಾಯಿಯೊಂದಿಗೆ ಪುಟುಪುಟು ಹೆಜ್ಜೆ ಹಾಕುತ್ತಾ ಆಗಾಗ ಅಕ್ಕ ಪಕ್ಕದಲ್ಲಿನವರ ಅಂಗಿಯನ್ನೋ, ಬೀದಿಯನ್ಚಿಗೆ ಕಟ್ಟಿರುವ ತೋರನವನ್ನೋ ತನ್ನ ಕಿರು ಸೊಂಡಿಲಿನಿಂದ ಎಳೆಯುತ್ತಾ ತಾಯಿಯ ಕೆಂಗಣ್ಣಿಗೆ ಗುರಿಯಾಗುತ್ತಿದ್ದ ನಮ್ಮಷ್ಟೆ ಮಂಗಾಟ ಪ್ರಾವೀಣ್ಯತೆಯನ್ನೂ ಗಳಿಸಿದ್ದ ಮರಿಯಾನೆಯ ಮೇಲೆ ನಮ್ಮ ತದೇಕ ದೃಷ್ಟಿ ನೆಟ್ಟಿರುತ್ತಿತ್ತು. ಚೇಷ್ಟೆ ಮಾಡುವ ಮರಿಯನ್ನ ಪುಟ್ಟದೊಂದು ಗುಟುರು ಹಾಕುತ್ತಲೆ ಅಮ್ಮ ಆನೆ ನಿಯಂತ್ರಿಸುತ್ತಾ ಮೆರವಣಿಗೆಗೆ ತನ್ನ ಮಗುವಿನ ತುಂಟಾಟ ತೊಂದರೆ ತಾರದಂತೆ ಮುನ್ನೆಚ್ಚರಿಕೆ ವಹಿಸುತ್ತಿತ್ತು. ರಾಮೇಶ್ವರ ದೇವಸ್ಥಾನದ ರಥದ ಕೊಟ್ಟಿಗೆ ಎದುರು ವಿಜಯದಶಮಿಯ ಮುಂಜಾನೆ ಆನೆಯಮ್ಮನ ಮೇಕಪ್ ಶುರುವಾಗುತ್ತಿತ್ತು. ಮೊದಲಿಗೆ ಅವಳನ್ನ ಪಕ್ಕದಲ್ಲಿಯೇ ಹರಿಯುತ್ತಿದ್ದ ತುಂಗೆಯ ದಡಕ್ಕೆ ಕರೆದು ಕೊಂಡು ಹೋಗಿ ಈಜಿಸಿ ಮೀಯಿಸಲಾಗುತ್ತಿತ್ತು. ಅವಳ ಆನೆಬಿದಾರದಲ್ಲಿಯೂ ಇದೆ ತುಂಗೆ ಹರಿಯುತ್ತಲಾದ್ದರಿಂದ ಇಬ್ಬರದ್ದೂ ಒಂಥರಾ ಹಳೆ ಪರಿಚಯ.ಮನಸಾರೆ ಈಜಿ ದಡಕ್ಕೆ ಬರುತ್ತಿದ್ದ ಆನೆಯಮ್ಮನ ಕಡೆದ ಕಲ್ಲಿನಂತಹ ಕಪ್ಪುಕಪ್ಪು ಅಂಗ ಸೌಷ್ಠವ ಆಗ ಮಾತ್ರ ಕಣ್ಣಿಗೆ ರಾಚುವಂತೆ ಕಾಣುತ್ತಿತ್ತು. ಅವಳ ಕಾವಾಡಿ ನೀರಿನಲ್ಲಿ ಕರಿಬಂಡೆಯಂತೆ ಕಾಣುತ್ತಿದ್ದ ಅವಳ ಮೇಲೇರಿ ಒರಟು ತೆಂಗಿನ ಚೊಪ್ಪಿನಲ್ಲಿ ಕತ್ತ ಮಾಡಿಕೊಂಡು ಅವಳನ್ನ ಉಜ್ಜಿ ಉಜ್ಜಿ ಮೀಯಿಸುತ್ತಿದ್ದ. ಅವನ ಉಜ್ಜಾಟವೆಲ್ಲ ಆಕೆಯ ಒರಟು ಮೈಗೆ ಹಿತವಾದ ಮಾಲೀಸಿನಂತೆ ಭಾಸವಾಗುತ್ತಿತ್ತೋ ಏನೋ? ಒಂದೊಮ್ಮೆ ಈ ಉಜ್ಜಾಟದ ಭರದಲ್ಲಿ ಅವನ ಕೈಯೆಲ್ಲಾದರೂ ಆಕೆಯ ಗುಪ್ತಾಂಗಗಳ ಬಳಿ ಸುಳಿದಾಡಿದರೂ ಆಕೆ ಅದನ್ನ ಚೂರೂ ಪರಿಗಣಿಸಿ ಪ್ರತಿಭಟಿಸದೆ ಆನಂದದಿಂದ ಕಣ್ಣು ಮುಚ್ಚಿ ಕೊಂಡು ಮಜಾ ಅನುಭಿಸುತ್ತಿರುವಂತೆ ದೂರಕ್ಕೆ ತೋರುತ್ತಿತ್ತು! ಇಷ್ಟೆಲ್ಲಾ ಮೀಯಾಟ ಆಗಿ ಆಕೆ ದಡಕ್ಕೆ ಹತ್ತುವಾಗ ಅಲ್ಲಿಯೆ ನಯವಾಗಿ ಬಿದ್ದಿರುತ್ತಿದ್ದ ಹಿಟ್ಟಿನಂತಹ ಧೂಳನ್ನ ತನ್ನ ನೀಳ ಸೊಂಡಿಲಲ್ಲಿ ಒಮ್ಮೆ ಎಳೆದು ಕೊಂಡು ತನ್ನ ಬೆನ್ನು ಹಾಗು ಮೈಗಳಿಗೆ ಪೌಡರಿನಂತೆ ಎರಚಿ ಕೊಳ್ಳುತ್ತಿದ್ದಳು. ಅಲ್ಲಿಗೆ ಅಷ್ಟು ಹೊತ್ತಿನ ಅವಳ ಸ್ನಾನವೆಲ್ಲ ಮಣ್ಣು ಪಾಲಾಗುತ್ತಿತ್ತು. ಉಳಿದೆಲ್ಲಾ ಹೊತ್ತಿನಲ್ಲಿ ತನ್ನ ಮಾವುತ ಹಾಗೂ ಕಾವಾಡಿಗಳಿಗೆ ಪರಮ ವಿಧೇಯಳಾಗಿದ್ದುಕೊಂಡು ನಮ್ಮ ಕೊಟ್ಟಿಗೆಯ ಲಕ್ಷ್ಮಿಯಷ್ಟೇ ಸಾಧುವಾಗಿದ್ದ ಆಕೆ ಆ ಒಂದು ಕ್ಷಣದಲ್ಲಿ ಮಾತ್ರ ಅವರಿಬ್ಬರ ಮಾತಿಗೆ ಕವಡೆ ಕಿಮ್ಮತ್ತನ್ನೂ ಕೊಡುತ್ತಿರಲಿಲ್ಲ! ಇದನ್ನ ನೋಡುವಾಗ ನನಗೆ ಅವಳ ಸೌಂದರ್ಯ ಪ್ರಜ್ಞೆಯ ಬಗ್ಗೆಯೆ ಸಂಶಯ ಮೂಡುತ್ತಿತ್ತು. ಸಾಲದ್ದಕ್ಕೆ ಆಗಾಗ ಅಜ್ಜನೂ ಹೀಗೆ ನಶ್ಯ ಎಳೆದು ಕೊಂಡು ಸೀನಿನ ಸರಣಿಯನ್ನೆ ಹೊಮ್ಮಿಸುತ್ತಿದ್ದುದು ನೆನಪಾಗಿ. ಸೊಂಡಿಲು ಆನೆಯ ಮೂಗಲ್ಲವ? ಇಷ್ಟು ಧೂಳು ಅದರಲ್ಲಿ ಹೊಕ್ಕರೂ ಅದಕ್ಕೆ ಸೀನು ಬರಲ್ಲವಾ! ಅಂತ ತಲೆ ತುರಿಸಿ ಕೊಳ್ಳುತ್ತಿದ್ದೆ. ನಮ್ಮಜ್ಜನ ನಶ್ಯದ ಚಟದಂತೆಯೆ ಆನೆಯಮ್ಮನಿಗೆ ಧೂಳಿನ ಚಟ ಅಂತ ಲೆಕ್ಖ ಹಾಕಿದ್ದೆ ಆಗೆಲ್ಲ. ಈ ಅತಿ ಮೇಕಪ್ಪಿಗೆ ಮತ್ತೆ ದೇವಸ್ಥಾನದ ತೇರು ಕೊಟ್ಟಿಗೆಯಲ್ಲಿ ತಕ್ಕ ಶಾಸ್ತಿ ಅವಳಿಗೆ ಆಗುತ್ತಿತ್ತು ಅನ್ನೋದು ಬೇರೆ ಸಂಗತಿ. ಅಲ್ಲಿ ಬಕೆಟುಗಟ್ಟಲೆ ನೀರನ್ನ ಹೊಯ್ದು ಅವಳ ಧೂಳಿನ ತೆರೆಯಿಂದ ಮತ್ತೆ ಕರಿ ಬಣ್ಣದ ಮೈಯನ್ನ ಹೊರ ತೆಗೆಯಲಾಗುತ್ತಿತ್ತು. ಅನಂತರ ತರು ಕಟ್ಟಿಗೆಯ ಮುಂದೆ ರಾಶಿ ಹಾಕಿದ ಬೈನೆ- ಬೈಹುಲ್ಲು- ಕಬ್ಬು- ತರಕಾರಿ ಗುಡ್ಡದ ಮುಂದೆ ಅವಳು ಮಂಡಿಯೂರಿ ಮಲಗಿ ಕೊಳ್ಳುತ್ತಿದ್ದಳು. ನುರಿತ ಚಿತ್ರಕಾರರು ಕಾವಡಿಯ ಮುತುವರ್ಜಿಯಲ್ಲಿ ಅವಳ ಹಣೆ ಕೆನ್ನೆ ಕಣ್ಣಿನ ಸುತ್ತ ಹಾಗೂ ಕಂಭದಂತಹ ಕಾಲುಗಳ ಮೇಲೆ ಸುಣ್ಣದ ನೀರು ಹಾಗೂ ನೀರಿನಲ್ಲಿ ನೆನೆಸಿದ ಸೀಮೆ ಸುಣ್ಣದ ಕಡ್ಡಿ ಬಳಸಿ ರಂಗೋಲಿಯ ಚಿತ್ತರದಂತಹ ಚಿತ್ರಗಳನ್ನ ತನ್ಮಯರಾಗಿ ಬರೆಯುತ್ತಿದ್ದರು. ಚಾಮರದಂತೆ ಆಗಾಗ ಅವಳು ಬೀಸುತ್ತಿದ್ದ ಅಗಲ ಕಿವಿಗಳಿಗೂ ಈ ಚಿತ್ತಾರದ ಅಲಂಕಾರ ಸಾಗುತ್ತಿತ್ತು. ಈ ನಡುವೆ ಆಕೆಯ ಎಳೆ ಕುಮಾರ ಒಂದಷ್ಟು ತಂಟೆ ಮಾಡಿ ಅಮ್ಮನಿಂದಲೂ, ಅಮ್ಮನ ಮಾವುತನಿಂದಲೂ ನಡುನಡುವೆ ಸರದಿಯಂತೆ ಉಗಿಸಿಕೊಳ್ಳುತ್ತಿದ್ದ. ಇನ್ನು ಆನೆಯಮ್ಮ ಹೊಟ್ಟೆಗೆ ಅಲ್ಲಿ ರಾಶಿ ಹಾಕಿದ್ದ ಭಕ್ಷ್ಯಗಳನ್ನ ಎಡೆಬಿಡದೆ ಇಳಿಸಿಕೊಳ್ಳುತ್ತಲೇ ಎದ್ದು ನಿಂತು ಉಚ್ಚೆ- ಲದ್ಧಿಗಳನ್ನ ನಿರ್ದಾಕ್ಷಿಣ್ಯವಾಗಿ ಬುಟ್ಟಿಗಟ್ಟಲೆ ಉದುರಿಸಿ ಏನೂ ಆಗದವಳಂತೆ ಬಾಲವಾಡಿಸುತ್ತಿದ್ದಳು. ಇದರ ಮಧ್ಯೆಯೆ ಅವಳ ಬಾಹ್ಯ ಅಲಂಕಾರ ನಡೆಯುತ್ತಿದ್ದರೂ ಆ ಬಗ್ಗೆ ಆಕೆ ಪರಮ ನಿರ್ಲಕ್ಷ್ಯವನ್ನ ನಟಿಸುತ್ತಿದ್ದಳು. ಮಧ್ಯಾಹ್ನ ಸಮಯ ಸೂರ್ಯ ನೆತ್ತಿಗೆ ಮುಟ್ಟಲಿಕ್ಕಾದಾಗ ಅವಳ ಅನ್ನದಮುದ್ದೆಗೆ ಬೆಲ್ಲ ರಾಗಿ ಬೆರೆಸಿ ತೌಡಿನಲ್ಲಿ ಕಲಸಿದ ಮುದ್ದೆಗಳನ್ನಾಗಿಸಿ ಬೈ ಹುಲ್ಲಿನಲ್ಲಿ ಸುತ್ತಿ ಕಾವಾಡಿ ಅವಳ ಬಾಯಿಗೆ ಕೊಡುತ್ತಿದ್ದ. ಈ ಗಜ ಭೋಜನವನ್ನ ನಾವು ಬಿಟ್ಟ ಕಣ್ಣು ಬಿಟ್ಟಂತೆ ನೋಡಿ ಬೆರಗಾಗುತ್ತಿದ್ದೆವು. ಒಂದು ದಪ್ಪ ಹಾಸಿಗೆಯಂತಹ ಮೆತ್ತೆಯನ್ನ ಮಡಚಿ ಅವಳ ಬೆನ್ನಿಗೇರಿಸಿ ದನ ಕಟ್ಟುವಂತಹ ದಪ್ಪ ಹಗ್ಗದಲ್ಲಿ ಮಾವುತ ಕಾವಾಡಿ ಬಿಗಿದೆಳೆದು ಅವಳ ಹೊಟ್ಟೆಯಡಿಯಿಂದ ತಂದು ಗಟ್ಟಿಯಾಗಿ ಭದ್ರ ಕಟ್ಟುತ್ತಿದ್ದರು. ಮುಂದೆ ಅದರ ಮೇಲೆಯೆ ಅಂಬಾರಿ ಇಡಲಾಗುತ್ತಿತ್ತು. ಅವಳ ತಲೆಯಿಂದ ಇಳಿಬಿದ್ದ ಹಾಗೆ ಒಂದು ಕೆಂಪನೆ ವಸ್ತ್ರವನ್ನು ಸೊಂಡಿಲಿನಂಚಿಗೆ ಕಟ್ಟುತ್ತಿದ್ದರು. ಅದರ ಮೇಲೆ ಚಿತ್ತಾರಗಳನ್ನ ಕುಸುರಿಯಲ್ಲಿ ಕೊರೆದ ಬಂಗಾರದ ಬಣ್ಣದ ಹಿತ್ತಾಳೆ ಆಭರಣದಂತಹದ್ದೊಂದನ್ನ ಅದರ ಮೇಲೆ ಸೇರಿಸಿ ಬಿಗಿಯಲಾಗುತ್ತಿತ್ತು. ಆಮೇಲೆ ಗುಲಾಬಿ ಬಣ್ಣದ ಜರಿಯ ಅಂಚಿರುವ ರೇಶಿಮೆ ಶಾಲಿನಂತಹ ದೊಡ್ಡ ವಸ್ತ್ರವನ್ನು ಅವಳ ಎರಡೂ ಹೊಟ್ಟೆಯ ಪಕ್ಕ ನೇಲುವಂತೆ ಮೆತ್ತೆಯ ಮೇಲೆ ಹೊದಿಸಿ ಅನಂತರ ಬೆನ್ನಿನ ಮೇಲೆ ಒಂದು ದೊಡ್ಡ ಮರದ ಅಂಬಾರಿ ಕಟ್ಟಿ ಬಂದೋಬಸ್ತು ಮಾಡಲಾಯಿತೆಂದರೆ ಮಹಾರಾಣಿಯ ಅಲಂಕಾರ ಪುರಾಣ ಕಡೆಗೂ ಮುಗಿದಂತೆ. ಈ ಅಲಂಕಾರ ಸಂಭ್ರಮ ಒಂದೆಡೆ ಸಾಗುತ್ತಿದ್ದರೆ ಊರಿನ ಉದ್ದಗಲಕ್ಕೂ ಮನೆಮನೆಯ ಮುಂದೆ ಅನೇಕ ಹುಲಿವೇಷಗಳು ಕಂಡಾಪಟ್ಟೆ ಕುಣಿ ಕುಣಿದು ತಮ್ಮ ಪ್ರತಿಭೆಯನ್ನ ಮುಕ್ತವಾಗಿ ತೀರ್ಥಹಳ್ಳಿಯ ಬೀದಿದೀದಿಯುದ್ದಕ್ಕೂ ಪ್ರದರ್ಶಿಸಿ ಕಲಾರಸಿಕರಿಂದ ಕಾಸಿನ ಶಹಭಾಸ್'ಗಿರಿ ಗಿಟ್ಟಿಸುತ್ತಿದ್ದರು. ಬಾಯಲ್ಲಿ ಇಡಿ ಲಿಂಬೆಹಣ್ಣನ್ನ ಕಚ್ಚಿಕೊಂಡೆ ಕುಣಿಯೋದೇನು!, ಕುಣಿಯುತ್ತಲೇ ನೆಲಕ್ಕೆ ಹಾಕಿದ ಕಾಸನ್ನ ಕೈಯಲ್ಲಿ ಮುಟ್ಟದೆ ಕೇವಲ ಬಾಯಲ್ಲೇ ಕಚ್ಚಿ ಎತ್ತೋದೇನು!! ಕೋವಿ ಹಿಡಿದ ಬೇಟೆಗಾರನ ವೇಷದವನೊಂದಿಗೆ ಪೈಪೋಟಿಯಲ್ಲಿ ಅಬ್ಬರಿಸಿ ಬೊಬ್ಬಿರಿದು ಕುಣಿಯೋದೇನು!!! ಚುಮುಣಿ ಎಣ್ಣೆಯನ್ನ ಬಾಯಿಂದ ಉರುಟಿ ಕೈಯಲ್ಲಿ ಹಿಡಿದ ದೊಂದಿಯಿಂದ ಬೆಂಕಿಯ ಕೋಲನ್ನ ಬಾನಿನತ್ತ ಎಬ್ಬಿಸೋದೇನು!!! ಏನುಂಟು ಏನಿಲ್ಲ? ಯಾವುದನ್ನ ಕೇಳ್ತೀರಿ ಅಲ್ಲಿ! ಈ ಹುಲಿವೇಷ ಹಾಕುವವರು ಕೂಡ ಒಂದೋ ಬಂಟರ ಅಥವಾ ಬ್ಯಾರಿಗಳ ಕಲಾ ನಿಪುಣರೆ ಆಗಿರುತ್ತಿದುದೊಂದು ವಿಶೇಷ. ಅಪರೂಪಕ್ಕಲ್ಲಲ್ಲಿ ಪೂಜಾರಿ, ಪರ್ಬುಗಳೂ ಹುಲಿವೇಷ ಕುಣಿಯುವುದನ್ನ ಕಾಣಬಹುದಾಗಿತ್ತು. ಇವರ ಕಲೆಯನ್ನ ಆಸ್ವಾದಿಸಿದ ಕೆಲವು ಕಲಾಭಿಮಾನಿಗಳು ಈ ಥೆರೆವಾರಿ ಕುಣಿತದ ಕೊನೆಗೆ ಇವರ ಕುತ್ತಿಗೆಗೆ ದುಡ್ಡಿನ ಹಾರವನ್ನ ಹಾಕೋದು ಅಲ್ಲಿ ತೀರಾ ಮಾಮೂಲಿ ಪ್ರಹಸನವಾಗಿತ್ತು. ಇತ್ತಾಗಿ ದಸರೆಯ ಮೆರವಣಿಗೆಯುದ್ದಕ್ಕೂ ನೋಟಿನ ಹಾರವನ್ನ ಹೆಮ್ಮೆಯಿಂದ ಹೊತ್ತು ಕುಣಿಯುತ್ತಿರುವ ಹಿರಿ- ಮರಿ- ಕಿರಿ ಹುಲಿಗಳ ಕಿರಿಕಿರಿ ಹುಟ್ಟಿಸುವಷ್ಟು ಜಬರ್ದಾಸ್ತಾಗಿರುತ್ತಿದ್ದ ಸಾಮೂಹಿಕ ಎರ್ರಾಬಿರ್ರಿ ಕುಣಿತವನ್ನು ಕಾಣಬಹುದಾಗಿತ್ತು. ಅಂದು ನಾನು ಕಾಣುತ್ತಿದ್ದ ಹುಲಿ ವೇಷದ ಕುಣಿತದ ಮುಂದೆ ಇಂದಿನ ಸ್ಟ್ರೀಟ್ ಡ್ಯಾನ್ಸರ್ ರೇಣುಕುಮಾರನ ಕುಣಿತವೂ ಸಾಟಿಯಲ್ಲ! ಮೈತುಂಬ ಆಯಿಲ್ ಪೇಯಿಂಟಿನಿಂದ ಪಟ್ಟೆಪಟ್ಟೆ ಬಣ್ಣ ಬಳಿಸಿ ಕೊಂಡು ಸಾಕ್ಷಾತ್ ಹುಲಿಗಳಾಗಿರುತ್ತಿದ್ದ ಅವರ ಹೊಟ್ಟೆ ಭಾಗದಲ್ಲಿ ಕಪ್ಪು ಬಿಳಿ ಚುಕ್ಕಿಗಳಿರುತ್ತಿದ್ದವು. ಕೇವಲ ಬಿಗಿಯಾದ ಲಂಗೋಟಿಯಂತದ್ದನ್ನು ಕಟ್ಟಿ ಕೊಂಡಿರುತ್ತಿದ್ದ ಹುಲಿಗಳ ಹಿಂದೆ ಉದ್ದುದ್ದನೆಯ ಬಾಲವನ್ನೂ ಬಿಗಿದಿರಲಾಗುತ್ತಿದ್ದು. ಬಿಸಿಲು -ಸೆಖೆ ಯ ಆ ವಾತಾವರಣದಲ್ಲಿ ಹುಲಿವೇಷಧಾರಿಗಳ ಆ ಬಾಲ ಹೊತ್ತೆ ಬ್ಯಾಲೆನ್ಸ್ ಮಾಡಿಕೊಂಡು ಲಯಬದ್ಧವಾಗಿ ಕುಣಿಯುವ ರಣೋತ್ಸಾಹ ಇಂದಿಗೂ ನನಗೆ ಬೆರಗು ಹುಟ್ಟಿಸುತ್ತದೆ. ಇವರನ್ನ ಬಿಟ್ಟರೆ ನನಗೆ ಬೆರಗು ಅನ್ನಿಸುತ್ತಿದ್ದುದು ತಟ್ಟೀರಾಯ. ಸೊಗಸಾಗಿ ಹಲ್ಲು ಕಿರಿದು ಕೊಂಡಂತಿರುತ್ತಿದ್ದ ದೊಡ್ಡ ದೊಡ್ಡ ತಟ್ಟೀರಾಯನ ಟೊಳ್ಳು ಗೊಂಬೆಗಳನ್ನ ಅದರ ಒಳಗೆ ತೂರಿರುತ್ತಿದ್ದ ಪುಣ್ಯಾತ್ಮ ಅಷ್ಟೊಂದು ಭಾರವನ್ನ ಹೊತ್ತು ಕೊಂಡು ಬೀದಿಯುದ್ದ ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದ. ಗೊಂಬೆಯ ಸೊಂಟದ ಭಾಗಧಲ್ಲಿ ಒಂದು ತೂತು ಅವನ ದಾರಿ ಕಾಣಲಿಕ್ಕಾಗಿ ಬಿಟ್ಟಿರುತ್ತಿದ್ದರು. ಇನ್ನು ಸೊಂಟದವರೆಗೆ ಕುದುರೆಯೊಳಗೆ ಹೂತು ಹೋದ ರಾಜ ರಾಣಿಯರ ಕೀಲು ಕುದುರೆ ಸವಾರಿಯ ಗೌಜಿಯೇನು, ಶಿವಮೊಗ್ಗದ ಪೊಲೀಸ್ ಪಡೆಯ ದೊಡ್ಡ ಕುದುರೆಯೂ ಆಗ ಬಂದು ಇವೆಲ್ಲವನ್ನೂ ಒಳಗೊಂಡ ಮೆರವಣಿಗೆ ಶಮಿ ವೃಕ್ಷವಿದ್ದ ಪಾರ್ಕಿಗೆ ಕುಣಿಕುಣಿಯುತ್ತಾ ಸಾಗಿ ಹೊರಟರೆ ಕಟ್ಟ ಕಡೆಗೆ ದೇವಿಯ ಮೂಲ ಮೂರ್ತಿ ಹೊತ್ತ ಗಜರಾಣಿ ಗಾಂಭೀರ್ಯದ ಹೆಜ್ಜೆಯಿಡುತ್ತಾ ಎರಡು ಕಿಲೋಮೀಟರ್ ದೂರದ ಪಾರ್ಕಿನತ್ತ ಹೆಜ್ಜೆಯಿಡುತ್ತಿತ್ತು. ಈ ದಸರ ನನ್ನ ಪಾಲಿಗೆ ನಲಿವಿಗಾಗಿ ನೆನಪಿರುವಷ್ಟೇ ನೋವಿನ ಕಾರಣಕ್ಕಾಗಿಯೂ ನೆನಪಿನಲ್ಲಿದೆ. ಮುಂದಿನ ಮುಂದುವರೆದ ಭಾಗದಲ್ಲಿ ಅದನ್ನ ಹೇಳುತ್ತೇನೆ. --

Thursday, September 27, 2012

ವಲಿ..... (ಭಾಗ-1)

ಒಂದೊಮ್ಮೆ ಮೊಹಮದ್'ನ ಅಜ್ಜ ಅಬ್ದುಲ್ ಮುತ್ತಾಲಿಬ್ ಇಪ್ಪತ್ತನಾಲ್ಕು ವರ್ಷದ ತನ್ನ ಎಳೆಮಗ ಅಬ್ದುಲ್ಲಾನನ್ನು ಜೊತೆಗೆ ಕರೆದುಕೊಂಡು ದೂರದ ಸಂಬಂಧಿ ವಾಹಬ್'ನ ಮನೆಗೆ ಅತಿಥಿಯಾಗಿ ಹೋಗಬೇಕಾಯಿತು. ಅಲ್ಲಿ ವಹಾಬ್'ನ ಸಹೋದರಿಯ ಮಗಳಾದ ಅಮೀನಾಳನ್ನು ಕಂಡು ಸಂಪ್ರೀತನಾದ ಆತ ಆಕೆಯನ್ನು ತನ್ನ ಮಗನಿಗೆ ತಂದುಕೊಳ್ಳಲು ಪ್ರಸ್ತಾಪಿಸಿದ. ಅದಕ್ಕೊಪ್ಪಿದ ವಹಾಬ್ ಈ ವಿವಾಹ ನೆರವೇರಿಸಿಕೊಟ್ಟ, ಜೊತೆಗೆ ಅದಾಗಲೆ ಎಪ್ಪತ್ತರ ಆಸುಪಾಸಿನಲ್ಲಿದ್ದ ಮುತ್ತಾಲಿಬ್ ತಾನು ಸ್ವತಃ ವಹಾಬನ ಸ್ವಂತ ಮಗಳಾದ ಹಲಾಹಳನ್ನು ವಿವಾಹವಾದ! ತಂದೆ-ಮಕ್ಕಳಿಬ್ಬರೂ ಅಕ್ಕ-ತಂಗಿಯರನ್ನೆ ಮದುವೆಯಾದ ನಂತರ ಕೆಲಕಾಲ ಅಲ್ಲಿಯೆ ನೆಲಸಿದರು. ಅಮೀನ ಗರ್ಭವತಿಯಾದಳು. ಅದೇ ಸಮಯಕ್ಕೆ ಆಕೆಯ ಪತಿ ಅಬ್ದುಲ್ಲಾ ವ್ಯಾಪಾರದ ನಿಮಿತ್ತ ಸಿರಿಯಾದ ಕಡೆ ಸಾಗಬೇಕಾಯಿತು. ದುರಾದೃಷ್ಟವಶಾತ್ ಆತ ಅಲ್ಲಿಂದ ಮರಳುವಾಗ ಅನಾರೋಗ್ಯಕ್ಕೆ ತುತ್ತಾಗಿ ಅಸುನೀಗಿದ. ಮಗನ ಸಾವಿನ ಸುದ್ದಿ ಮುತ್ತಾಲಿಬನನ್ನು ಬಹುವಾಗಿ ಕಾಡಿಸಿತು. ಆತ ತನ್ನೊಂದಿಗೆ ಉಳಿದಿದ್ದ ಇನ್ನೊಬ್ಬ ಮಗನನ್ನು ಮುಂದಿನ ಉತ್ತರಕ್ರಿಯೆಗಳಿಗಾಗಿ ಮದೀನಕ್ಕೆ ಕಳುಹಿಸಿದ. ಆತ ಮದೀನ ತಲುಪಲು ತಿಂಗಳೆ ತಗುಲಿತು. ಅಲ್ಲಿ ಅಬ್ದುಲ್ಲ ಮರಣ ಹೊಂದುವಾಗ ಕೇವಲ ಐದು ಒಂಟೆಗಳನ್ನೂ, ಕೆಲವು ಮೇಕೆಗಳನ್ನೂ ಹಾಗೂ ಓರ್ವ ಗುಲಾಮಳನ್ನಷ್ಟೆ ಬಿಟ್ಟುಹೋಗಿದ್ದ. ಕ್ರಿಸ್ತಶಕ 570ರ ಅಗೊಸ್ತು 20ರಂದು ಮಹಮದ್'ನಿಗೆ ಜನ್ಮ ನೀಡುವಾಗ ಅಮೀನಳ ಪಾಲಿಗೆ ಬಂದ ಆಸ್ತಿಯೆಂದರೆ ಇವಿಷ್ಟೆ. ಮಗುವಿನ ಜನನದ ಸುದ್ದಿ ಅರಿತ ಮಾವ ಮುತ್ತಾಲಿಬ್ ಬಂದು ಮೊಮ್ಮಗನನ್ನು ಮುದ್ದಾಡಿ ಕಾಬಾಕ್ಕೆ ಮಗುವನ್ನೊಯ್ದು, ದೇವರಿಗೆ ಕೃತಜ್ಞತೆ ಸಲ್ಲಿಸಿ ಅಲ್ಲಿಯೆ ಕಂದನಿಗೆ 'ಮಹಮದ್' ಎಂದು ನಾಮಕರಣ ಮಾಡಿಬಿಟ್ಟ (ಅರಬ್ಬಿಯಲ್ಲಿ ಮಹಮದ್ ಎಂದರೆ ಕೊಂಡಾಡುವ ಎನ್ನುವ ಅರ್ಥ ಬರುತ್ತದೆ). ಮಹಮದ್ ಹುಟ್ಟಿದ ಆ ವರ್ಷ ಅರಬ್ಬಿಯನ್ ಪಂಚಾಗದ ಪ್ರಕಾರ ಆನೆಯ ವರ್ಷವಾಗಿತ್ತು. ಅರೇಬಿಯಾದ ಉತ್ತಮ ಕುಲದವರ ವಾಡಿಕೆಯಂತೆ ಹುಟ್ಟಿದ ಮಗುವಿಗೆ ದಾದಿಯಿಂದ ಮೊಲೆಯೂಡಿಸುವ ವ್ಯವಸ್ಥೆ ಮಾಡಲಾಯಿತು. ಇದಕ್ಕಾಗಿ ಥುವೈಬಾ ಎಂಬ ಗುಲಾಮಳ ಕೈಗೆ ಮಗುವನ್ನ ದಾಟಿಸಲಾಯಿತು. ಸ್ವಲ್ಪ ಸಮಯದ ನಂತರ ಹಲೀಮಾ ಎಂಬ ಇನ್ನೊಬ್ಬ ದಾದಿಯನ್ನೂ ಅದಕ್ಕಾಗಿ ನೇಮಿಸಿಕೊಳ್ಳಲಾಯಿತು. 'ಬೆನ್ ಸಾದ್' ಬುಡಕಟ್ಟಿನವಳಾದ ಈ ದಾದಿಯ ಎದೆಹಾಲು ಕುಡಿದು ಬೆಳೆದ ಮೊಹಮದ್ ಐದು ವರ್ಷ ಪ್ರಾಯದವನಾದ. ಮರುಭೂಮಿಯ ಭೀಕರ ವಾತಾವರಣದಲ್ಲೂ ಮಗುವಿನ ಆರೋಗ್ಯ ಸ್ಥಿರವಾಗಿರಲಿ ಎನ್ನುವ ಕಾರಣದಿಂದ ತಾಯಿ ಅಮೀನಾ ಈ ವ್ಯವಸ್ಥೆ ಮಾಡಿದ್ದಳು. ಆರನೆ ವಯಸ್ಸಿನಲ್ಲಿ ಮಗುವನ್ನ ತನ್ನೊಂದಿಗೆ ಬಂಧುಗಳಿಗೆ ತೋರಿಸಲು ಅಮೀನಾ ಮದೀನಕ್ಕೆ ಕರೆದೊಯ್ದಳು. ಅಲ್ಲಿ ಗಂಡನ ಮನೆ ಹಾಗು ಆತನ ಸಮಾಧಿಯ ದರ್ಶನವನ್ನ ಮಗುವಿಗೆ ಮಾಡಿಸಿದಳು. ಒಂದು ತಿಂಗಳು ಅಲ್ಲಿಯೆ ಉಳಿದು ಮರುಪಯಣಕ್ಕಾಗಿ ಮಗು ಹಾಗು ಗುಲಾಮಳಾದ ಲುಮ್'ಐಮನಳೊಂದಿಗೆ ಒಂಟೆಯೇರಿದ ಅಮೀನಾ ವಾತಾವರಣದ ವೈಪರೀತ್ಯದಿಂದ ತೀವ್ರ ಅಸ್ವಸ್ಥಲಾಗಿ ನಡುದಾರಿಯಲ್ಲೆ ಮರಣಿಸಿದಳು. ಆಕೆ ಅಸುನೀಗಿದ 'ಅಲ್-ಅಬ್ಬಾ'ದಲ್ಲಿಯೆ ಆಕೆಯನ್ನ ಮಣ್ಣು ಮಾಡಲಾಯಿತು. ಹೀಗೆ ಎಳೆಯ ಪ್ರಾಯದಲ್ಲಿಯೆ ಮಹಮದ್ ತಬ್ಬಲಿಯಾಗಬೇಕಾಯಿತು. ಗುಲಾಮಳಾದ ಲುಮ್-ಐಮನ್ ಮೆಕ್ಕಾಗೆ ಮಗುವನ್ನು ಕರೆದುಕೊಂಡು ಹೋದಳು. ಮುಂದೆ ಆಕೆಯೆ ಮಹಮದ್'ನ ಸಾಕುತಾಯಿಯಾಗಿ ದೇಖಾರೇಕಿ ನೋಡಿಕೊಂಡು ಬೆಳಸಿದಳು. ಅದರ ಖರ್ಚನ್ನೆಲ್ಲ ತಾತ ಅಬ್ದುಲ್ ಮುತ್ತಾಲಿಬ್ ವಹಿಸಿಕೊಂಡ. ಅದಾಗಲೆ ಎಂಬತ್ತು ವರ್ಷದ ಆಸುಪಾಸಿನಲ್ಲಿದ್ದ ಆತ ಮೊಮ್ಮಗನನ್ನು ಬಲು ಮುದ್ದಿನಿಂದಲೆ ಸಾಕಿ ಬೆಳೆಸಿದ. ಆದರೆ ವೃದ್ದಾಪ್ಯದ ಕಾರಣ ಮುಂದಿನ ಎರಡುವರ್ಷಗಳಲ್ಲಿ ಆತನೂ ಮರಣಿಸಿದ್ದರಿಂದ ಅಜ್ಜನ ಮುಚ್ಚಟೆ- ಪ್ರೀತಿ- ವಿಶ್ವಾಸಗಳನ್ನು ಕಂಡುಂಡಿದ್ದ ಮಹಮದ್ ಆಘಾತಗೊಂಡ. ಆತನ ಮನಸ್ಸಿನ ಮೇಲೆ ಈ ಸಾವು ಗಾಢ ಪರಿಣಾಮ ಬೀರಿತು. ಹೀಗಾಗಿ ಆತನ ಹೊಣೆಗಾರಿಕೆ ದೊಡ್ಡಪ್ಪ ಅಬು ತಾಲಿಬ್'ಗೆ ಸೇರಿತು.



ತನ್ನ ತಂದೆಯಷ್ಟೆ ಕರುಣಾಮಯಿಯಾಗಿದ್ದ ಆತ ಮುಂದಿನ ತಾರುಣ್ಯದವರೆಗೆ ಮಹಮದನನ್ನು ಒಲವಿನಿಂದಲೆ ಸಾಕಿ ಬೆಳೆಸಿದ. ಮುಂದೆ ಅಬು ತಾಲಿಬ್ ವ್ಯಾಪಾರಕ್ಕಾಗಿ ಸಿರಿಯಾದತ್ತ ಪ್ರಯಾಣಿಸಬೇಕಾಗಿ ಬಂದಾಗ ಆಗಿನ್ನೂ ಹನ್ನೆರಡರ ಹರೆಯದಲ್ಲಿದ್ದ ಮಹಮದ್ ಮನೆಯಲ್ಲಿ ಒಂಟಿಯಾಗಿರಬಯಸದೆ ಹಠ ಹೂಡಿ ತಾನೂ ಅವನೊಂದಿಗೆ ತೆರಳುತ್ತಾನೆ. ಈ ಪ್ರಯಾಣ ಆತನ ಬದುಕಲ್ಲಿ ಆರಂಭಿಕ ಅನುಭವ ತರುತ್ತದೆ. ಸಿರಿಯಾದಲ್ಲಿ ಆತ ಕ್ರೈಸ್ತರ ಹಾಗೂ ಯಹೂದಿಗಳ ಸಂಪರ್ಕಕ್ಕೆ ಬಂದ. ಮುಖ್ಯವಾಗಿ ಆತನಿಗೆ ಅಲ್ಲಿ ಯಹೂದಿಗಳ ಭಾಷೆ, ಸಂಸ್ಕೃತಿ, ರೀತಿ ನೀತಿ, ಕಟ್ಟಳೆ- ರಿವಾಜು, ಬದುಕಿನ ನಿಯಮಗಳೆಲ್ಲದರ ಪರಿಚಯವಾಯಿತು ಎಂದಿದ್ದಾನೆ ಇತಿಹಾಸಕಾರ ಮೂಯಿರ್. 'ಒಕಾಜಾ' ಅಕಾಲದ ಅರೇಬಿಯಾದ ಪ್ರಸಿದ್ಧ ಸಂತೆ ಕೂಡುವ ವ್ಯಾಪಾರಿ ಸ್ಥಳವಾಗಿತ್ತು. ಬೆನಿ ಹವಾಜಿನ್ ಹಾಗೂ ಖುರೈಷಿಗಳು ಅಲ್ಲಿ ವ್ಯಾಪಾರಕ್ಕಾಗಿ ಪ್ರತಿವರ್ಷಕ್ಕೊಮ್ಮೆ ಸೇರುವ ಪರಿಪಾಠವಿತ್ತು. ವಾಸ್ತವವಾಗಿ ಇವರಿಬ್ಬರಲ್ಲೂ ಜನಾಂಗೀಯ ದ್ವೇಷದ ಭವ್ಯ ಹಿನ್ನೆಲೆ ಇದ್ದುದ್ದರಿಂದ ಪರಸ್ಪರ ನೆತ್ತರು ಹರಿಸಿ ಅವರು ಕಾದಾಡುತ್ತಿದ್ದರು. ಎರಡೂ ಬುಡಕಟ್ಟಿನ ಹಿರಿಯರು ಈ ಅನಗತ್ಯ ವೈರತ್ವದಿಂದ ಸತ್ತವರ ಕುಟುಂಬಗಳಿಗೆ 'ಪರಿಹಾರ' ನೀಡುವ ಮೂಲಕ ಪರಿಸ್ಥಿತಿಯನ್ನು ಹಿಡಿತಕ್ಕೆ ತರಲು ಹೆಣಗುತ್ತಿದ್ದರು. ಅವರಲ್ಲಿ ಪರಸ್ಪರ ಇದ್ದ ಈರ್ಷ್ಯೆ- ಪ್ರತಿಕಾರದ ಸ್ವಭಾವಗಳ ಬಗ್ಗೆ ಒಂದು ರಂಜನೀಯ ಕತೆ ಚಾಲ್ತಿಯಲ್ಲಿದೆ. 'ಕಿನಾನಾ' ಬುಡಕಟ್ಟಿಗೆ ಸೇರಿದ ಒಬ್ಬ ವ್ಯಕ್ತಿ ಹವಾಜಿನ್ ಬುಡಕಟ್ಟಿನ ಸಾಲಗಾರನಿಂದ ಸಾಲ ಪಡೆದು ಅದನ್ನು ಹಿಂದಿರುಗಿಸದಿದ್ದಾಗ ಇದೆ 'ಒಕಾಜ್' ಸಂತೆಯ ಪ್ರಮುಖ ಸ್ಥಳದಲ್ಲಿ ಕೂತು ತನ್ನ ಬಳಿ ಒಂದು ಮಂಗವನ್ನು ಕಟ್ಟಿಹಾಕಿಕೊಂಡು "ಯಾರು ನನಗೆ ಇಂತಹದ್ದೆ ಒಂದು ಮಂಗವನ್ನು ನೀಡುತ್ತಾರೊ ಅವರಿಗೆ ಸಾಲ ಕೊಂಡವನ ಮೇಲೆ ನನಗಿರುವ ಹಕ್ಕನ್ನು ಬಿಟ್ಟು ಕೊಡುತ್ತೇನೆ!' ಎಂದು ಕೂಗಿಕೂಗಿ ಹೇಳಿದ. ಅವನ ಧ್ವನಿಯಲ್ಲಿ 'ಕಿನಾನಾ' ಪಂಗಡದ ಬಗ್ಗೆ ಇದ್ದ ಹೀಯಾಳಿಕೆಯನ್ನ ಕೇಳಿ ಕೆರಳಿದ ಆಗುಂತಕನೊಬ್ಬ ತಕ್ಷಣವೆ ಕೈಗತ್ತಿಯಿಂದ ಆ ಮಂಗದ ಕುತ್ತಿಗೆ ಕಡಿದು ಹಾಕಿದ. ಮುಂದೆ ಎರಡುದಿನ ಬಿಡದೆ ನಡೆದ ಕಾಳಗಕ್ಕೆ ಇಷ್ಟು ಕಾರಣ ಧಾರಾಳ ಸಾಕಾಯಿತು!. ಇಂತಹ ದುರದೃಷ್ಟಕರ ಘಟನೆಗಳನ್ನು ಮರುಕಳಿಸದಂತಾಗಿಸಲು ಎರಡೂ ಗುಂಪಿನ ಹಿರಿಯರು ಅಲ್ಲಿಗೆ ವ್ಯಾಪಾರಕ್ಕೆ ಬರುವಯಾರೂ ಮಾರಣಾಂತಿಕ ಶಸ್ತ್ರಾಸ್ತ್ರಗಳನ್ನು ಅಲ್ಲಿಗೆ ತರುವಂತಿಲ್ಲವೆಂದೂ, ಬಳಿಯಿರುವುದನ್ನು ಮೆಕ್ಕಾದ ಅಬ್ದುಲ್ಲ ಇಬ್ನ ಜುಡಾನನ ಬಳಿ ಒತ್ತೆಯಿಸಿ ನಿರಾಯುಧರಾಗಿ ಬರುವಂತೆ ಕಾನೂನನ್ನೆ ಜಾರಿ ಮಾಡಿದರು. ಹೀಗಾಗಿ ಮುಂದೆ ಬಹುಕಾಲ ಅಲ್ಲಿನ ಶಾಂತಿಯನ್ನ ಕಾಪಾಡಿಕೊಳ್ಳುವುದು ಸಾಧ್ಯವಾಯಿತು, ಆದರೆ ಕ್ರಿಸ್ತಶಕ 580ರಲ್ಲಿ ಅಲ್ಲೊಂದು ಕೊಲೆಯಾಯಿತು, 'ಅಲ್ ಹಿರಾ' ಪ್ರಾಂತ್ಯದ ರಾಜಕುಮಾರ ವ್ಯಾಪಾರಕ್ಕಾಗಿ ಅಲ್ಲಿಗೊಂದು ಕ್ಯಾರವಾನನ್ನು ಆ ಹಂಗಾಮಿನಲ್ಲಿ ಕಳುಹಿಸಿದ್ದ. ಅವನ ಬಗ್ಗೆ ಈರ್ಷ್ಯೆಯಿದ್ದ ಖುರೈಶಿಗಳಲ್ಲೊಬ್ಬ ಆ ಕ್ಯಾರವಾನನ್ನು ಲೂಟಿಹೊಡೆಯಲಿಕ್ಕಾಗಿ ಹವಾಜಿನರ ಆ ಕ್ಯಾರವಾನಿನ ಮುಖಂಡನನ್ನು ಹತ್ಯೆ ಮಾಡಿ ಸಂಪತ್ತನ್ನು ದೋಚಿದ. ಈ ಸುದ್ದಿ ತಿಳಿದ ಖುರೈಶಿಗಳೆಲ್ಲ ಮೆಕ್ಕಾದಲ್ಲಿ ಒಂದಾದರು. ಅವರಿಗೆ ಮುಂದಾಗುವ ಅನಾಹುತದ ಮುನ್ಸೂಚನೆ ಸಿಕ್ಕಿತು. ಅವರ ಎಣಿಕೆಯಂತೆ ಹವಾಜಿನರು ಖುರೈಷಿಗಳ ಬೆನ್ನು ಹತ್ತಿದರು. ಆದರೆ ಅವರಾಗಲೆ ಮೆಕ್ಕಾದಲ್ಲಿದ್ದುದ್ದರಿಂದ ಪವಿತ್ರ ಸ್ಥಳದಲ್ಲಿ ಕಾದಾಡಲಾಗದೆ ಕೈಚೆಲ್ಲ ಬೇಕಾಯಿತು. ಹೀಗಾಗಿ ಮರುವರ್ಷ ಒಕಾಜ್'ನಲ್ಲೆ ಕಾದಾಡಲು ಆಮಂತ್ರಣ ನೀಡಿ ಹವಾಜಿನರು ಅಲ್ಲಿಂದ ನಿರ್ಗಮಿಸಿದರು. ಈ ಆಮಂತ್ರಣವನ್ನು ಒಪ್ಪಿದ ಖುರೈಷಿಗಳು ಮರುವರ್ಷ ತಪ್ಪದೆ ಬಂದು ಜೀವದ ಹಂಗು ಬಿಟ್ಟು ಹವಾಜಿನರೊಂದಿಗೆ ಕಾದಾಡಿದರು!. ಹೀಗೆ ನಾಲ್ಕುವರ್ಷ ಕದನ ನಡೆದರೂ ಯಾರೊಬ್ಬರೂ ಗೆಲ್ಲದೆ, ಯಾರೊಬ್ಬರೂ ಸೋಲದೆ ಕಡೆಗೆ ಸಂಧಾನ ಅನಿವಾರ್ಯವಾಯಿತು?! ಹವಾಜಿನರಲ್ಲೆ ಹೆಚ್ಚಿನ ಪ್ರಾಣ ಹಾನಿಯಾಗಿದ್ದರಿಂದ ಅವರಿಗೆ 'ರಕ್ತಹಣ' (blood money) ವನ್ನು ನೀಡುವ ನಿಯಮಕ್ಕನುಸಾರವಾಗಿ ಖುರೈಷಿಗಳು ತಮ್ಮ ಜನರನ್ನು ಅವರ ಬಳಿ ಒತ್ತೆಯಿತ್ತರು. ಅವರಲ್ಲಿ ಮುಂದೆ ಮಹಮದ್'ನ ನೆಂಟ ಹಾಗೂ ವೈರಿಯಾಗಿದ್ದ ಅಬು ಸಫ್ಯಾನನೂ ಒಬ್ಬನಾಗಿದ್ದ. ಈ ಕದನದಲ್ಲಿ ಖುರೈಷಿಗಳ ಪೈಕಿ ಎಲ್ಲಾ ಪಂಗಡದವರೂ ಪಾಲ್ಗೊಂಡಿದ್ದರು. ಉಮೈಯ್ಯಾ ಹಾಗೂ ಹಾಶಿಮ್ ಕುಟುಂಬದವರು ಅವರಲ್ಲಿ ಪ್ರಮುಖರಾಗಿದ್ದರು. ಈ ಕಾದಾಟದಲ್ಲಿ ಮಹಮದ್ ನೇರವಾಗಿ ಕತ್ತಿ ಹಿಡಿದು ಕಾದಾಡದಿದ್ದರೂ ರಣರಂಗದಲ್ಲಿ ಬತ್ತಳಿಕೆಯಿಂದ ನೆಲಕ್ಕೆ ಬಿದ್ದ ಬಾಣಗಳನ್ನು ಆಯುವ ಕೆಲಸ ಮಾಡಿ ಯೋಧರಿಗೆ ನೆರವಾದ. ಮನರಂಜನೆಗೆ ಧಾರಾಳ ಕೊರತೆಯಿದ್ದ ಆ ಕಾಲದ ಮರುಭೂಮಿಯಲ್ಲಿ ಈ ಕಾದಾಟವೂ ಒಂದು ಮನರಂಜಕ ಮಾರ್ಗವೆ ಆಗಿತ್ತು ಅಂತ ಕಾಣುತ್ತದೆ!. ಈ 'ಅಪವಿತ್ರ ಯುದ್ಧ' ನಾಲ್ಕುವರ್ಷ ನಡೆದು ಶಾಂತಿ ನೆಲೆಸಿದ ನಂತರ ಮಹಮದ್ ಬುಡಕಟ್ಟಿನ ಕುರಿ- ಮೇಕೆಗಳನ್ನು ಊರ ಹೊರಗಿನ ಕಣಿವೆಗಳಲ್ಲಿ ಮೇಯಿಸುವ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ. ಗುಡ್ಡಬೆಟ್ಟಗಳಿಂದ ಆವೃತವಾಗಿದ್ದ ಈ ಪರಿಸರದಲ್ಲಿ ತನ್ನ ಸ್ವಭಾವಕ್ಕನುಗುಣವಾಗಿ ಏಕಾಂತದಲ್ಲಿ ಪ್ರಾಕೃತಿಕ ಸೌಂದರ್ಯ ಆಸ್ವಾದಿಸುತ್ತಾ, ಅಲ್ಲಿನ ಮೌನದಲ್ಲಿ ಲೀನವಾಗುವ -ಕಣಿವೆಯ ಭವ್ಯತೆಯನ್ನು ಅವಲೋಕಿಸಿ ಅನುಭವಿಸುವ ನಿರಾಯಾಸದ ಅವಕಾಶ ಮಹಮದನಿಗೆ ಹೀಗೆ ಒದಗಿ ಬಂತು. ಒಂಟಿಯಾಗಿ ಕುರಿಮಂದೆಯೊಂದಿಗೆ ಹಗಲು ರಾತ್ರಿ ಕಳೆದರೂ ಮಹಮದ್ ಯವ್ವನದ ಸಹಜ ಆಕರ್ಷಣೆಗಳಿಗೆ ಬಲಿಯಾಗದೆ ತನ್ನ ಸದ್-ಚಾರಿತ್ರ್ಯವನ್ನು ಕಾಪಾಡಿಕೊಂಡು ಬಂದನು. ಉಚ್ಛರೀತಿಯ ನಡತೆ ಹೊಂದಿದ್ದ ಆತ ಮೆಲು ಮಾತಿನ-ನಾಜೂಕಿನ ನಡೆ ಹೊಂದಿದ್ದ ವ್ಯಕ್ತಿಯಾಗಿ ಗುರುತಿಸಲ್ಪಟ್ಟನು. ಗಾಂಭೀರ್ಯದ ರೀತಿಯಲ್ಲಿ ಪಳಗಿದ್ದ ಆತ ಏಕಾಗ್ರಚಿತ್ತನಾಗಿ ತನ್ನದೆ ಭಾವಪ್ರಪಂಚದಲ್ಲಿ ಮುಳುಗಿ ಹೋಗಿರುತ್ತಿದ್ದ. ಅವನ ಇವೆ ಗುಣಗಳಿಂದ ಮೆಕ್ಕಾ ನಿವಾಸಿಗಳಿಂದ ಮಹಮದ್ 'ಅಲ್-ಅಮೀನ್' ಎಂದು ಹೊಗಳಿಸಿಕೊಂಡ.



 ಹಾಗೆಂದರೆ ಅರಬ್ಬಿಯಲ್ಲಿ 'ಶ್ರದ್ಧಾಳು' ಎಂದರ್ಥ. ಹೀಗೆ ಯವ್ವನವನ್ನು ದೊಡ್ಡಪ್ಪ ಅಬುತಾಲಿಬನ ಮನೆಯಲ್ಲೆ ಕಳೆದ ಆತ ಮುಂದೆ ಅವನ ಸಂಸಾರದ ಸದಸ್ಯರ ಸಂಖ್ಯೆ ಹೆಚ್ಚಾಗಿ, ಸಂಸಾರ ನಿರ್ವಹಣೆಯ ಖರ್ಚು ಹೆಚ್ಚಾದುದರಿಂದ ತಾನೂ ದೊಡ್ಡಪ್ಪನ ಹೊಣೆಗೆ ಹೆಗಲುಕೊಡುವ ಅನಿವಾರ್ಯತೆ ಹುಟ್ಟಿತು. ಹೀಗಾಗಿ ಉದ್ಯೋಗದ ನಿಮಿತ್ತ ಮಹಮದನನ್ನು ಅಬು-ತಾಲಿಬ್ ಸಿರಿಯಾದ ಕಡೆ ಸಾಗುವ ಒಂದು ಕ್ಯಾರವಾನ್'ಗೆ ಸೇರಿಸಿದ. ಆ ಕ್ಯಾರವಾನ್ ಖತೀಜಾ ಎಂಬ ಸಿರಿವಂತ ವಿಧವೆಗೆ ಸೇರಿತ್ತು. ಮೊಹಮದ್ ಆ ಕ್ಯಾರವಾನಿನ ಭಾಗವಾದ. ತಾನು ಹದಿಮೂರುವರ್ಷಗಳ ಹಿಂದೆ ದೊಡ್ಡಪ್ಪನೊಂದಿಗೆ ಸಾಗಿದ ದಾರಿಯಲ್ಲೆ ಮತ್ತೆ ಈಗಲೂ ಆತ ಸಾಗಬೇಕಾಯಿತು. ಕ್ಯಾರವಾನ್ ಸಿರಿಯಾದ ರಾಜಧಾನಿ 'ಡಮಾಸ್ಕಸ್' ಸಮೀಪದ ಬಸ್ರಾದಲ್ಲಿ ಲಂಗರು ಹಾಕಿತು. ಮಹಮದ್ ಚಾಕಚಾಕ್ಯತೆಯಿಂದ ಉತ್ತಮ ವ್ಯಾಪಾರವನ್ನೆ ಮಾಡಿ ಲಾಭದೊಂದಿಗೆ ಮರಳಿ ಸ್ವದೇಶದತ್ತ ಹೆಜ್ಜೆ ಹಾಕಿದ. ಆಗಲೆ ಬಸ್ರಾ ಪಟ್ಟಣದಲ್ಲಿದ್ದ ಸಿರಿಯನ್ ಕ್ರೈಸ್ತರ ಸಂಪರ್ಕ ಮಹಮದನಿಗೆ ಆಗಿ ಅವರಿಂದ ಪ್ರಭಾವ ಹೊಂದುವಂತಾಯಿತು. ಅವರ ಪೂಜಾರಿ, ಸನ್ಯಾಸಿಗಳ ಹಾಗೂ ಉಚ್ಚ ವರ್ಗದವರೊಂದಿಗೆ ಧಾರ್ಮಿಕ ಚರ್ಚೆ- ವಿಚಾರ ವಿನಿಮಯ ನಡೆಯಲು ಅದು ಕಾರಣವಾಯಿತು. ಇದರ ಪರಿಣಾಮವನ್ನು ಮುಂದಿನ ಮಹಮದನ ಧರ್ಮಭೋದನೆಗಳಲ್ಲಿ ಕಾಣಬಹುದಾಗಿದೆ. ಮೆಕ್ಕಾಗೆ ಹಿಂದಿರುಗಿದ ಮೊಹಮದ್ ಖತೀಜಾಳಿಗೆ ವ್ಯಾಪಾರದ ಪ್ರಾಮಾಣಿಕ ಲೆಕ್ಖದ ವರದಿ ಒಪ್ಪಿಸಿದ.ಹೀಗೆ ಆತ ಆಕೆಯ ಮನಗೆದ್ದ. ( ಇನ್ನೂ ಇದೆ... )

ಮರಳುಗಾಡಿನ ಮರ್ಮರ... (ಭಾಗ -2)

ಈ ಕಾಬಾ ಗುಡಿಯ ಸ್ಥಾಪನೆ, ಆರಾಧನೆ ಅರೇಬಿಯಾದ ಪುರಾಣ ಕಥೆಗಳಲ್ಲಿ ಬರುವ ಯಹೂದಿ ಹಾಗು ಕ್ರೈಸ್ತರ ಪ್ರವಾದಿ ಅಬ್ರಾಹಂನಿಂದ ಆಯಿತು ಎಂದು ಮುಸ್ಲೀಮರು ನಂಬುತ್ತಾರೆ. ದೇವರು ಅಬ್ರಾಹಂನನ್ನು ಭೂಮಿಗೆ ಕಳುಹಿಸಿ "ದೇವರೊಬ್ಬನೆ ಹಾಗೂ ಅಬ್ರಾಹಂ ಆತನ ಪ್ರತಿನಿಧಿ" ಎಂದು ಸಾರಲು ಆದೇಶಿಸುತ್ತಾನೆ. ಈ ಅಬ್ರಾಹಮನಾದರೋ ಸ್ವತಹ ಪ್ರವಾದಿಯಾಗಿದ್ದರೂ ಕೇವಲ ಮೂರೆ ಬಾರಿ ತನ್ನ ಜೀವನದಲ್ಲಿ ಸುಳ್ಳುಹೇಳಿರುತ್ತಾನೆ. ಎರಡು ಬಾರಿ ದೇವರ ಸಲುವಾಗಿ "ನನಗೆ ಸೌಖ್ಯವಿಲ್ಲ" ಅಂತಲೂ, "ಇಗೋ! ಇದೆ ಆ ಬೃಹತ್ ವಿಗ್ರಹ ಎಸಗಿದೆ!" ಅಂತಲೂ ಹಾಗೂ ಮೂರನೆ ಬಾರಿ ತನ್ನ ಮಡದಿ ಸಾರಾಳ ದೆಸೆಯಿಂದ ಸುಳ್ಳು ಹೇಳುತ್ತಾನೆ. ಆ ಸುಳ್ಳಿನ ಕಥೆ ಹೀಗಿದೆ. ಅಲೆಮಾರಿಯಾಗಿದ್ದ ಅಬ್ರಾಹಂ ಹೀಗೆ ಸುತ್ತುತ್ತಾ ಪ್ರಜಾಪೀಡಕನಾಗಿದ್ದ ರಾಜನೊಬ್ಬನ ರಾಜ್ಯಕ್ಕೆ ಬಂದಾಗ ಆ ಕಟುಕ ರಾಜ ತನ್ನ ಹೆಂಡತಿಗಾಗಿ ಹಂಬಲಿಸಿಯಾನು ಎಂದರಿತು, ಹೆಂಡತಿಗೆ 'ತಾನು ಅವಳ ಅಣ್ಣನೆಂದು...ಪತಿಯಲ್ಲವೆಂದು!' ಹೇಳುವಂತೆ ತಿಳಿಸುತ್ತಾನೆ. ಅವನು ನೆನೆಸಿದಂತೆ ರಾಜದೂತರು ಅವಳನ್ನು ರಾಜನ ಸನ್ನಿಧಿಗೆ ಕೊಂಡೊಯ್ಯುತ್ತಾರೆ. ಅಲ್ಲಿ ಅವಳನ್ನು ಕಂಡು ಮೋಹಿಸುವ ರಾಜ ಅವಳ ಕೈ ಹಿಡಿಯಲು ಧಾವಿಸುತ್ತಾನೆ. ದುರದೃಷ್ಟವಶಾತ್ ಆ ಕೈ ಭದ್ರವಾಗಿ ಅಲ್ಲಿಯೆ ಅಂಟಿಕೊಂಡು ಬಿಡುತ್ತದೆ! ಹೆದರಿದ ರಾಜ "ದಯವಿಟ್ಟು ಕೈ ಬಿಡುಗಡೆಯಾಗುವಂತೆ ದೇವರನ್ನು ಬೇಡಿಕೊ"ಎಂದು ಯಾಚಿಸಲು ಆಕೆ ಬೇಡಿದಾಗ ಕೈ ಬಿಡುಗಡೆಯಾಗುತ್ತದೆ. ನಿಟ್ಟುಸಿರು ಬಿಡುವ ರಾಜ ಅವಳ ದೈವಿಶಕ್ತಿಗೆ ಹೆದರಿ ಅವಳಿಗೊಬ್ಬ ಗುಲಾಮ ಹೆಣ್ಣನ್ನು ಬಳುವಳಿಯಾಗಿ ಕೊಟ್ಟು ತನ್ನ ಆಸ್ಥಾನದಿಂದ ಹೊರಗಟ್ಟುತ್ತಾನೆ. ಇತ್ತ ಪತ್ನಿಯನ್ನ ರಾಜನ ಬಳಿ ಕಳುಹಿಸಿ ದೈವದ ಮೊರೆಹೋಗಿದ್ದ ಅಬ್ರಾಹಂ ಈ ಪರಿ ಆಕೆ ಮರಳಿ ಬಂದಾಗ ಸಂತೋಷಗೊಂಡು ಕೂಡಲೆ ಇರಾಕ್ ಹಾಗು ಸಿರಿಯಾದ ದಿಕ್ಕಿಗೆ ಪ್ರಯಾಣಿಸುತ್ತಾನೆ. ಹೀಗೆ ಸಾಗುವಾಗ ಗುಲಾಮ ಹೆಣ್ಣು ಹಾಜರಾಳೊಂದಿಗೆ ಅಬ್ರಾಹಂ ನಡೆಸುವ ದೈಹಿಕ ಸಂಬಂಧದಿಂದ 'ಇಸ್ಮಾಯಿಲ್' ಎಂಬ ಬಾಲಕನ ತಂದೆಯಾಗುತ್ತಾನೆ. ಅದರಿಂದ ಸವತಿ ಮಾತ್ಸರ್ಯಕ್ಕೆ ತುತ್ತಾಗುವ ಸಾರಾಳ ಒತ್ತಡ ತಾಳಲಾರದೆ ತಾಯಿ- ಮಗ ಇಬ್ಬರನ್ನೂ ಮೆಕ್ಕಾಗೆ ತಂದು ಬಿಡುತ್ತಾನೆ. ಇತ್ತ ಮರಳಿ ಸಾರಾಳನ್ನ ಬಂದು ಸೇರುವ ಅಬ್ರಾಹಂ ಅವಳಿಂದ ಐಸಾಕ್ ಹಾಗೂ ಜಾಕೊಬ್ ಎಂಬ ಮಕ್ಕಳನ್ನ ಪಡೆಯುತ್ತಾನೆ. ಅಬ್ರಾಹಂ ಮೆಕ್ಕಾದ ಎತ್ತರ ಪ್ರದೇಶವೊಂದರ ಮರದಡಿ ಹಾಜರಾ ಮತ್ತು ಇಸ್ಮಾಯಿಲ್ ಇಬ್ಬರನ್ನೂ ಬಿಟ್ಟು ಹೋದನಲ್ಲ, ಜನವಸತಿಯಾಗಲಿ- ಜಲವಸತಿಯಾಗಲಿ ಇಲ್ಲದ ಈ ಬರಡು ಭೂಮಿಯಲ್ಲಿ ಹೀಗೆ ತ್ಯಜಿಸಿ ಹೋಗುವವನನ್ನ ಹಾಜರಾ ಹಿಂಬಾಲಿಸಿ ಹೋಗುತ್ತಾಳೆ. 'ನಮ್ಮನ್ನು ಅನಾಥರಾಗಿ ಈ ಅಪರಿಚಿತ ಸ್ಥಳದಲ್ಲಿ ಬಿಟ್ಟು ಎಲ್ಲಿ ಹೋಗುತ್ತೀಯ?' ಎಂದವಳು ಕೇಳಿದಾಗ ಅವನಿಂದ ಉತ್ತರ ಬರುವುದಿಲ್ಲ. ಆಕೆ ಪುನಃ 'ದೇವರ ಆದೇಶದಂತೆ ನೀನು ಈ ಕೆಲಸ ಮಾಡುತ್ತಿರುವುದಾ?" ಎಂದು ಮರುಪ್ರಶ್ನಿಸಿದಾಗ ಅಬ್ರಾಹಂ "ಹೌದು!" ಎಂದೆ ಉತ್ತರಿಸುತ್ತಾನೆ. 'ಯಾರ ಆಸರೆಯಲ್ಲಿ ನಾವಿರಬೇಕು?' ಎನ್ನುತ್ತಾಳವಳು. ಇವನ ಉತ್ತರ "ದೇವರು!". "ಹೀಗಿದ್ದರೆ ನಾನಿದನ್ನು ಸ್ವೀಕರಿಸುವೆ" ಎನ್ನುವ ಆಕೆ ಹಿಂದಿರುಗುತ್ತಾಳೆ. ಹೀಗೆ ಹಾಜರಾ ಮರೆಯಾದ ನಂತರ ಅಬ್ರಾಹಂ ಈಗಿರುವ ಕಾಬಾದ ಕಡೆಗೆ ಮುಖಮಾಡಿ ದೇವರನ್ನು "ನನ್ನ ಹೆಂಡತಿ ಹಾಜರಾ ಹಾಗು ಮಗು ಇಸ್ಮಾಯಿಲ್'ನನ್ನು ಈ ಪವಿತ್ರ ಕಣಿವೆಯ ಬಳಿ ಬಿಟ್ಟಿದ್ದೇನೆ. ಅವರಿಗೆ ಸುಖ ಸಮೃದ್ಧಿ ದೊರಕಲಿ ಎಂದು ಪ್ರಾರ್ಥಿಸುತ್ತಾನೆ. ಇತ್ತ ಹಾಜರಾ ತನ್ನೊಂದಿಗೆ ಇದ್ದ ಚರ್ಮದ ಚೀಲದಲ್ಲಿದ್ದ ನೀರನ್ನೆಲ್ಲ ಕುಡಿದಾದ ನಂತರ ತನ್ನ ಮಗುವಿಗೆ ಹಾಲೂಡಿಸುತ್ತಾಳೆ, ಆದರೆ ಅವಳ ದಾಹ ಹೆಚ್ಚುತ್ತದೆ. ಕೂಸನ್ನು ಅಲ್ಲಿಯೆ ಬಿಟ್ಟು ನೀರಿಗಾಗಿ ಹುಡುಕುತ್ತ ಅಲೆದು ಹತ್ತಿರದ 'ಸಾಫಾ' ಗಿರಿಯನ್ನೇರುತ್ತಾಳೆ. ಶಿಖರದ ಮೇಲೇರಿ ದೂರದೂರದವರೆಗೆ ದಿಟ್ಟಿಸಿದರೂ ಜನವಸತಿ ಕಾಣದೆ ಹತಾಶಳಾಗುತ್ತ ಹತ್ತಿರದ ಇನ್ನೊಂದು ಗಿರಿ 'ಮಾರ್ವ'ವನ್ನೇರಿದಾಗ ಅವಳಿಗೊಂದು ಅಶರೀರವಾಣಿ ಕೇಳಿಸುತ್ತದೆ. "ಒಹ್! ನನಗೆ ನೀನು ಕೇಳಿಸುತ್ತಿದ್ದೀಯ! ನನಗೆ ಸಹಾಯಕವಾಗಲು ನಿನ್ನ ಬಳಿ ಏನಿದೆ?" ಎಂದಾಕೆ ದಿಗ್ಭ್ರಮೆಯಿಂದ ಕೇಳಲು ಅವಳಿಗೆ ಕಂಡದ್ದು ಒಬ್ಬ ಯಕ್ಷ. ಮೆಕ್ಕಾದ 'ಜುಮ್ ಜುಮ್' ಎಂಬಲ್ಲಿ ಆತ ತನ್ನ ಹಿಮ್ಮಡಿಯಿಂದ ನೆಲ ಅಗಿಯುತ್ತಿರುವಾಗ ಅಲ್ಲಿ ಜಲಧಾರೆ ಉಕ್ಕುತ್ತದೆ. ಆಗ ತಡ ಮಾಡದೆ ಆ ನೀರನ್ನೆಲ್ಲ ತನ್ನ ತೊಗಲಿನ ಚೀಲಕ್ಕೆ ತುಂಬಿಕೊಳ್ಳುವ ಆಕೆ ಅಲ್ಲಿಯೆ ತಂಗುತ್ತಾಳೆ. ಕಾಲಕ್ರಮೇಣ ನೀರು ಕಂಡ ಪಕ್ಷಿಗಳೂ, ಅದರ ಜಾಡು ಹಿಡಿದ ಬುಡಕಟ್ಟಿನವರೂ ಅಲ್ಲಿ ಬಂದು ತಂಗುತ್ತಾರೆ. ಹೀಗೆ ಹಾಜಿರಾ ನೆಮ್ಮದಿಯ ಬಾಳನ್ನು ಕಾಣುವಂತಾಗುತ್ತದೆ. ಕಾಲಾನಂತರ ಅವಳ ಮರಣವಾಗಿ, ವಯಸ್ಕನಾಗುವ ಅವಳ ಮಗನಿಗೆ ಅದೆ ಬುಡಕಟ್ಟಿನವರು ಹೆಣ್ಣುಕೊಟ್ಟು ಮದುವೆ ಮಾಡುತ್ತಾರೆ. ಹೀಗೆ ಅವನ ಸಂಸಾರ ಸಾಗುತ್ತಿರುವಾಗ ಅಬ್ರಾಹಂ ತಾನು ತೊರೆದು ಹೋದ ಕುಟುಂಬವನ್ನ ನೋಡಲು ಬರುತ್ತಾನೆ. ಆದರಾಗ ಇಸ್ಮಾಯಿಲ್ ಮನೆಯಲ್ಲಿರುವುದಿಲ್ಲ. ಅವನು ಅನ್ನ ಸಂಪಾದಿಸಲು ಹೊರಗೆ ಹೋಗಿದ್ದಾನೆನ್ನುವ ಹೆಂಡತಿಗೆ "ನಿನ್ನ ಗಂಡನಿಗೆ ನನ್ನ ವಿಜ್ಞಾಪನೆ ತಿಳಿಸು ಹಾಗೂ ಮನೆಯ ಹೊಸ್ತಿಲನ್ನ ಶೀಘ್ರ ಬದಲಿಸೋಕೆ ಹೇಳು!" ಎನ್ನುವ ಅಬ್ರಾಹಂ ಅಲ್ಲಿಂದ ನಿರ್ಗಮಿಸುತ್ತಾನೆ. ಯಾಥಾವತ್ ಮಾತುಗಳನ್ನ ಗಂಡ ಬಂದಾಗ ಆಕೆ ಅರುಹಿದಾಗ. ಒಡನೆಯೆ ಇಸ್ಮಾಯಿಲ್ " ಒಹ್! ಬಂದಿದ್ದವನು ನನ್ನ ತಂದೆ ಅವನು ನಿನ್ನನ್ನು ತ್ಯಜಿಸಲು ಹೇಳಿದ್ದಾನೆ! ಎಂದವನೆ ಆಕೆಗೆ ವಿಚ್ಚೇದನ ಕೊಟ್ಟು ಇನ್ನೊಬ್ಬಳನ್ನ ಕಟ್ಟಿಕೊಳ್ಳುತ್ತಾನೆ. ಆಕೆ ತವರಿಗೆ ಮರಳುತ್ತಾಳೆ. ಪುನಃ ಸ್ವಲ್ಪ ಕಾಲದ ನಂತರ ಅಬ್ರಾಹಂ ಮಗನ ಮನೆಗೆ ಬರುತ್ತಾನೆ. ಆತನ ಹೊಸ ಹೆಂಡತಿಯನ್ನ ನೋಡಿ ಸಂಸಾರದ ಸ್ಥಿತಿಗತಿಯನ್ನ ವಿಚಾರಿಸಿದಾಗ ಆಕೆ "ನಾವು ಚೆನ್ನಾಗಿದ್ದೇವೆ" ಎಂದು ತಿಳಿಸುತ್ತಾಳೆ. ಸಂತುಷ್ಟನಾಗುವ ಅಬ್ರಾಹಂ "ಆತನಿಗೆ ನನ್ನ ವಿಜ್ಞಾಪನೆ ತಿಳಿಸು ಹಾಗೂ ಮನೆಯ ಹೊಸ್ತಿಲನ್ನ ಭದ್ರವಾಗಿರಿಸಿಕೊಳ್ಳಲು ತಿಳಿಸು" ಎಂದು ಹೇಳಿ ಮರೆಯಾಗುತ್ತಾನೆ. ಪತಿ ಮನೆಗೆ ಬಂದಾಗ ಅವಳು ಆತನಿಗಿದನ್ನ ತಿಳಿಸಿದಳು. ಆಗ ಇಸ್ಮಾಯಿಲ್ "ಬಂದವನು ನನ್ನ ತಂದೆ! ನಿನ್ನನ್ನ ತ್ಯಜಿಸದೆ ಇಟ್ಟುಕೊಳ್ಳಲು ನನಗೆ ಉಪದೇಶವಾಗಿದೆ" ಎಂದಂದ. ಮುಂದೊಮ್ಮೆ ಮರಳಿ ಅಬ್ರಾಹಂ ಮಗನನ್ನು ಹುಡುಕಿಕೊಂಡು ಬಂದಾಗ ಅವನಿಗೆ ಮಗನ ಸಹಾಯವೂ ಸೇರಿ ಮೊತ್ತ ಮೊದಲಿಗೆ 'ಕಾಬಾ'ದ ಗುಡಿ ಮೇಲೆದ್ದಿತು ಅನ್ನುವುದು ಐತಿಹ್ಯ. ಇಸ್ಮಾಯಿಲ್'ನ ವಂಶಸ್ಥರಲ್ಲಿ ಅವರ್ ಬಿನ್ ಲುಹಾಯಿ ಪ್ರಸಿದ್ಧನಾಗಿದ್ದ. ಬಲು ಧರ್ಮಿಷ್ಠನಾಗಿದ್ದ ಆತ ತನ್ನ ಉದಾರ ದಾನ-ಧರ್ಮಗಳ ಕಾರಣದಿಂದ ಜನಾನುರಾಗಿಯಾಗಿದ್ದ. ಈ ಜನಪ್ರಿಯತೆಗೆ ಮಾರುಹೋದ ಅಲ್ಲಿನ ಬುಡಕಟ್ಟಿನವರು ಅವನನ್ನೆ ತಮ್ಮ ರಾಜನನ್ನಾಗಿ ಘೋಷಿಸಿಕೊಂಡರು. ಮೆಕ್ಕಾ ಹಾಗು ಅಲ್ಲಿನ ಕಾಬಾ ಅವನ ಆಳ್ವಿಕೆಗೆ ಒಳಪಟ್ಟಿತ್ತು. ಮಧ್ಯಪ್ರಾಚ್ಯದ ದೇಶಗಳಾದ ಸಿರಿಯಾ, ಲೆಬೆನಾನ್ ಹಾಗೂ ಪ್ಯಾಲಸ್ತೈನ್'ಗಳನ್ನು ಸಂದರ್ಶಿಸಿದ ಆತ ಅಲ್ಲಿನ ವಿಗ್ರಹಾರಾಧನೆಗಳಿಂದ ಅತ್ಯಂತ ಪ್ರಭಾವಿತನಾಗಿ ಅಲ್ಲಿಂದ ಮರಳುವಾಗ ತನ್ನ ಜೊತೆಯಲ್ಲಿಯೆ ಮೆಕ್ಕಾಗೆ ಒಂದು ವಿಗ್ರಹ ತಂದ. 'ಹುಬಾಬ್' ಎಂದು ಆತ ಅದನ್ನು ಕರೆದು ಕಾಬಾದಲ್ಲಿ ಅದನ್ನ ಪ್ರತಿಷ್ಠಾಪಿಸಿದ. ತನ್ನ ಜನರಿಗೆ ಅದನ್ನ ಆರಾಧಿಸಲು ಆತ ಕರೆನೀಡಿದ. ತಮ್ಮ ರಾಜನ ಆಗ್ರಹಕ್ಕೆ ಮಣಿದ ಬುಡಕಟ್ಟಿನ ಮಂದಿ ಮತ್ತೆ ಹಳೆಯ ವಿಗ್ರಹಾರಾಧನೆಗೆ ಮರಳಿದರು. ಇಸ್ಲಾಮಿಕ್ ನಂಬಿಕೆಗಳ ಪ್ರಕಾರ ಅಬ್ರಾಹಂ ಹಾಗೂ ಇಸ್ಮಾಯಿಲ್ ಕಾಬಾವನ್ನು ನಿರ್ಮಿಸಿದ ಬಳಿಕ ಅದರ ಒಡೆತನವನ್ನು "ಜೋರ್'ಹೂಮ್" ಬುಡಕಟ್ಟಿನವರು ತಮ್ಮ ವಶಕ್ಕೆ ತೆಗೆದುಕೊಂಡರು. ಆದರೆ ಅವರ ದುಂಡಾವರ್ತಿ ನಡೆ ಹೆಚ್ಚಿದ್ದರಿಂದ ಮೆಕ್ಕಾದ ಖುರೈಷಿ ಪಂಗಡದವರು ಅವರನ್ನು ಅಲ್ಲಿಂದ ಹೊಡೆದೋಡಿಸಬೇಕಾಯಿತು. ಖುರೈಷಿಗಳಲ್ಲಿ ಹುಲುಲ್ ಹಾಗೂ ಅರಾಮ್ ಎಂಬ ಎರಡು ಪಂಗಡಗಳಿದ್ದವು. ಅಲ್ಲದೆ 'ಬಾನ್ ಕಿನಾನಾಹ್' ಎನ್ನುವಲ್ಲಿಂದ ವಲಸೆ ಬಂದಿದ್ದ ಅನೇಕ ಕುಟುಂಬಗಳೂ ಮೆಕ್ಕಾದಲ್ಲಿ ವಾಸವಿದ್ದವು. ಖುರೈಷಿಗಳ 'ಕಹುಜಾಹ್ನ್' ಎಂಬಾತ ಕಾಬಾದ ಪಾರುಪತ್ಯ ವಹಿಸಿಕೊಂಡ. ಅನಂತರದ ಪಾರುಪತ್ಯದ ಜವಾಬ್ದಾರಿ ಅವನ ಸಂತತಿಯವರಿಗೆ ಸಂದಿತು. ಅವರು ಮುಂದೆ ಹಲೀಲ್ ಬಿನ್ ಹುಬೈಷಾ ಎಂಬಾತನಿಗೆ ಅದನ್ನ ವಹಿಸಿಕೊಟ್ಟರು. ಈ ಹಲೀಲ್'ನ ಮಗಳನ್ನು ಕುಸೈ ಬಿನ್ ಕಿಲಾಬ್ ಎಂಬಾತ ಲಗ್ನವಾಗಿ ಹಲೀಲ್ ಮರಣ ಹೊಂದಿದ ಬಳಿಕ ಬುಡಕಟ್ಟಿನ ಇತರ ಆಕ್ಷಾಂಶಿಗಳೊಂದಿಗೆ ಕಾದಾಡಿ ಕಾಬಾದ ಪಾರುಪತ್ಯಕ್ಕೆ ಪ್ರಯತ್ನಿಸಿದ. ಅಂತಿಮವಾಗಿ ಒಪ್ಪಂದವೊಂದು ಜರುಗಿ ಖುರೈಶಿಗಳಿಗೆ ಅಲ್ಲಿ ಹೆಚ್ಚಿನ ಅಧಿಕಾರ ಇರುವುದಾಗಿ ತೀರ್ಮಾನ ಹೊರಬಿದ್ದು ಅವನಿಗೆ ಕಾಬಾದ ಪಾರುಪತ್ಯವನ್ನ ಅವರ ಸಮ್ಮತಿ ಪಡೆದು ವಹಿಸಲಾಯ್ತು. ಅವನು ಕ್ರಮೇಣ ತನ್ನವರನ್ನಲ್ಲಿಗೆ ಬರಮಾಡಿಕೊಂಡು ಮುಂದೆ ತಾನೆ ಅಲ್ಲಿನ ರಾಜ ಎಂದು ಕರೆದುಕೊಂಡ ! ಕುಸೈನ ಆಡಳಿತದಲ್ಲಿ ಕಾಬಾಕ್ಕೆ ಬರುವ ಯಾತ್ರಿಕರಿಗೆ ನೀರು ನೀಡುವ ಪವಿತ್ರ ಕಾರ್ಯ , 'ಎನ್-ನದ್ವಾ' ಸಭಾಂಗಣದ ಯಜಮಾನಿಕೆ, ಯುದ್ಧ ದ್ವಜದ ಸ್ವಾಧೀನತೆ ಅವನ ಬಳಿಯೆ ಇತ್ತು. ಅವನ ನಂತರ ಅವನ ನಾಲ್ವರು ಮಕ್ಕಳು ಸೌಹಾರ್ದತೆಯಿಂದ ಭಿನ್ನಾಭಿಪ್ರಾಯಕ್ಕೆ ಎಡೆ ಮಾಡಿಕೊಡದಂತೆ ತಂದೆ ಹಾಕಿಕೊಟ್ಟಿದ್ದ ದಾರಿಯಲ್ಲೆ ಆಡಳಿತದ ಯಜಮಾನಿಕೆ ನಡೆಸಿದರು. ಆನಂತರ ಅವನ ಸಹೋದರರ ಮಕ್ಕಳ ಕೈಮೇಲಾಗಿ ಖುರೈಶಿಯರ ಅಬ್ಬೆ ಮುನಾಫನ ಮಗ ಅಲ್-ಮುತ್ತಲಿಬ್ ಪ್ರಮುಖನಾಗಿ ಹೊಮ್ಮಿದ. ಅವನ ನಂತರ ಮೆಕ್ಕಾ ಅವನ ತಮ್ಮ ಹಾಶೀಮನ ಕೈಸೇರಿತು. ಆದರೆ ಉಮಯ್ಯ ಎಂಬಾತ ಚಿಕ್ಕಪ್ಪನ ಮೇಲೆ ಹಕ್ಕಿಗಾಗಿ ವಾಜ್ಯ ಹೂಡಿದ. ಇದು ಪ್ರಕೋಪಕ್ಕೆ ತಿರುಗಿ ಹೋರಾಟ ನಡೆದರೂ ಹಾಶೀಮನದೆ ಮೇಲುಗೈಯಾಯಿತು. ಕ್ರಿಸ್ತಶಕ 510ರಲ್ಲಿ ಹಾಶೀಮ್ ಸತ್ತ ನಂತರ ಅವನ ಮಗ ಅಬ್ದುಲ್ ಮುತ್ತಾಲಿಬ್ ಬೆಳಕಿಗೆ ಬಂದ. ಇವನಿಗೆ ಒಟ್ಟು ಹನ್ನೆರಡು ಗಂಡು ಹಾಗು ಆರು ಹೆಣ್ಣು ಮಕ್ಕಳಿದ್ದರು. ಮುಂದೆ ಪ್ರವಾದಿ ಎಂದೆನಿಸಿದ ಮಹಮದ್ದನ ತಂದೆ ಅಬ್ದುಲ್ಲಾ ಇವರಲ್ಲೊಬ್ಬ. ಆತ ನಂತರ 'ಖುರಾಯಿಶ್' ಬುಡಕಟ್ಟಿನ 'ಸುಹ್ರಾ' ಮನೆತನದ ಅಮೀನಾ ಎನ್ನುವ ಕನ್ಯೆಯನ್ನ ವಿವಾಹ ಮಾಡಿಕೊಂಡ, ಇವರ ಒಬ್ಬನೆ ಮಗ ಮಹಮದ್. ದಾಖಲೆಗಳ ಪ್ರಕಾರ ಮಹಮದ್ ಜನಿಸಿದ್ದು ಕ್ರಿಸ್ತಶಕ 571ರಲ್ಲಿ. ಈ ಕಾಲಘಟ್ಟದಲ್ಲಿ ಮೆಕ್ಕಾದ ಮೇಲಿನ ಹಕ್ಕಿಗಾಗಿ ಆಗಾಗ ಹಾಶಿಮ್ ಹಾಗು ಉಮಯ್ಯಾನ ಸಂತತಿಯವರು ಕಾದಾಡುತ್ತಲೆ ಇದ್ದರು. ಅಲ್ಲಿನ ಶೇಖ್ ಪದವಿ ಗಳಿಸಿದ ಹಶೀಂ ಕುಲದವರು ಉಮೈದರನ್ನು ಅವಕಾಶ ಸಿಕ್ಕಾಗಲೆಲ್ಲ ಹೀಯಾಳಿಸಿ- ಕೆಣಕಿ ಈರ್ಷ್ಯೆಯಿಂದ ಅವರ ಸ್ಥಾನಮಾನಗಳಿಗೆ ಧಕ್ಕೆ ತರುತ್ತಲೆಯಿದ್ದರು. ಜೋರ್'ಹೂಮ್' ಬುಡಕಟ್ಟಿನವರು ಕಾದಾಟದಲ್ಲಿ ಸೋತ ನಂತರ ಮೆಕ್ಕಾದ ಒಡೆತನ ಖುಜಾಹ ಬುಡಕಟ್ಟಿಗೆ ಸರಿದಾಗ ಅವರು ಅಲ್ಲಿನ ಪವಿತ್ರ ಕಪ್ಪುಶಿಲೆ 'ಮುಕಾಂ ಇಬ್ರಾಹಿಮ್'ನ್ನು ಹಾಗೂ ಜುಮ್ ಜುಮ್ ಬಾವಿಯನ್ನೂ ಯಾರಿಗೂ ಸಿಗದಂತೆ ಹುಗಿದು ಮೆಕ್ಕಾವನ್ನು ತ್ಯಜಿಸಿ ಹೋದರು. ಕ್ರಮೇಣ ಕುಸೈ ಬಿನ್ ಕಿಲಾಬನ ಕಾಲಕ್ಕೆ ಮತ್ತೆ ಮೆಕ್ಕಾ ಮೆರಗು ಪಡೆಯಿತು. ಖುರೈಷಿಗಳು ಬಂದು ಅಲ್ಲಿ ನೆಲೆಯೂರಿದರು. ಆದರೆ ಅಬ್ದುಲ್ ಮುತ್ತಾಲಿಬನ ಕಾಲದವರೆಗೂ ಜುಮ್ ಜುಮ್ ಬಾವಿ ಪತ್ತೆಯೆ ಆಗಿರಲಿಲ್ಲ. ಮಹಮದ್'ನ ಅಜ್ಜ ಅಬ್ದುಲ್ ಮುತ್ತಲಿಬ್'ನಿಗೆ ಒಂದು ರಾತ್ರೆ ಬಿದ್ದ ಕನಸು ಅದರ ಕುರುಹನ್ನು ತೋರಿಸಿತು. ಆ ಪ್ರಕಾರವೆ ನೆಲ ಅಗೆದ ಅವನಿಗೆ ಬಾವಿ ಗೋಚರಿಸಿತು. ಇನ್ನೂ ನೆಲ ಅಗೆದಾಗ ಅಪಾರ ಶಸ್ತ್ರಾಸ್ತ್ರ ಹಾಗೂ ಚಿನ್ನಾಭರಣಗಳೂ ಅಲ್ಲಿ ದೊರೆತವು. ಇದರ ವಾಸನೆ ಹಿಡಿದ ಖುರೈಷಿಗಳು ಸಂಪತ್ತಿನ ಹಂಚಿಕೆಗೆ ಕೋರಿದರು, ಆದರೆ ಅಬ್ದುಲ್ ಮುತ್ತಾಲಿಬ್ ನಿರಾಕರಿಸಿದ. ಆದರೆ ಆತ ಸಮಸ್ಯೆಯ ಪರಿಹಾರಕ್ಕೆ ಮಧ್ಯವರ್ತಿಯೋಬ್ಬನ ನೇಮಕಕ್ಕೆ ಒಪ್ಪಿಕೊಂಡ! ಅದೆ ಸಮಯಕ್ಕೆ ಒಂದು ವಿಚಿತ್ರವಾದ ಹರಕೆಯನ್ನೂ ಹೊತ್ತ. ಅದೇನೆಂದರೆ ದೇವರು ತನಗೆ ಹತ್ತು ಮಕ್ಕಳನ್ನು ಕರುಣಿಸಿದರೆ ಅವರಲ್ಲಿ ಒಬ್ಬನನ್ನು ಆತ ವಯಸ್ಸಿಗೆ ಬಂದ ಕೂಡಲೆ ಕಾಬಾದ ಗುಡಿಗೆ ಬಲಿನೀಡುವೆ! ಎಂಬುದಾಗಿತ್ತು. ಅದೆ ಪ್ರಕಾರ ಅವನಿಗೆ ಸಾಲಾಗಿ ಹತ್ತು ಮಕ್ಕಳಾದವು. ಅವರಲ್ಲಿ ಅಬ್ದುಲ್ಲ ಎಂಬಾತನಿದ್ದ, ಅವನೆ ಮುಂದೆ ಮಹಮದ್'ನ ತಂದೆಯಾದದ್ದು. ಮಕ್ಕಳಿಗೆ ಈ ವಿಷಯ ಅರುಹಿದ ಮುತ್ತಲಿಬ್, ಅವರು ತಂದೆಯ ಹರಕೆ ಪೂರೈಸಲು ಸಿದ್ಧರಾದರು. ಆದರೆ ಯಾರನ್ನ ಬಲಿ ನೀಡೋದು ಎಂಬ ಪ್ರಶ್ನೆ ಉದ್ಭವಿಸಿತು. ಅದಕ್ಕೆ ಪರಿಹಾರವಾಗಿ ಕಾಬಾದ 'ಹುಬುಲ್' ವಿಗ್ರಹದ ಮುಂದೆ ಹತ್ತೂ ಜನರ ಹೆಸರು ಬರೆದ ಪ್ರತ್ಯೇಕ ಬಾಣಗಳನ್ನಿಟ್ಟು ಅಲ್ಲಿನ ಪೂಜಾರಿಯಿಂದ ಒಂದನ್ನು ಎತ್ತಿಸಲಾಯಿತು. ಸಂಪ್ರದಾಯದ ಪ್ರಕಾರ ಅದನ್ನ ಬಿಲ್ಲಿಗೆ ಹೂಡಿ ಹೊಡೆದಾದ ನಂತರ ನೋಡಿದಾಗ ಅದು ಅಬ್ದುಲ್ಲಾನ ಹೆಸರಿನದಾಗಿತ್ತು! ಅವನ ಬಗ್ಗೆ ಕನಿಕರಗೊಂಡ ಖುರೈಷಿಗಳು ಮುತ್ತಲಿಬ್ ಬಲಿ ನೀಡಲು ಒರೆಯಿಂದ ಕತ್ತಿ ತೆಗೆದಾಗಲೆ ಅವನನ್ನ ತಡೆದರು. ಹೀಗಾದರೆ ಹರಕೆ ಪೂರೈಕೆ ಹೇಗೆಂದು ಆತ ಕೇಳಿದಾಗ, ಅಬ್ದುಲ್ಲಾನ ಬದಲು ಹತ್ತು ಒಂಟೆ ಬಲಿನೀಡಲು ಸೂಚಿಸಲಾಯಿತು. ಅವರ ಸೂಚನೆಯಂತೆ ಒಂಟೆಗಳನ್ನು ಪ್ರತಿನಿಧಿಸುವ ಹೆಸರುಗಳ ಒಟ್ಟಿಗೆ ಅಬ್ದುಲ್ಲಾನ ಹೆಸರಿನ ಚೀಟಿ ಇಟ್ಟು ಎತ್ತಿದಾಗ ಅಬ್ದುಲ್ಲನ ಚೀಟಿಯೆ ಬಂತು! ಹೀಗೆ ಹತ್ತರ ಸಂಖ್ಯೆಗಳಲ್ಲಿ ಒಂಟೆಗಳ ಸಂಖ್ಯೆ ಹೆಚ್ಚಿಸುತ್ತಾ ಹೋದಾಗಲೂ ದುರಾದೃಷ್ಟವಶಾತ್ ಅಬ್ದುಲ್ಲಾನ ಹೆಸರೆ ಮತ್ತೆ ಮತ್ತೆ ಬಂತು! ಕಡೆಗೆ ಅವನ ಹೆಸರು ತಪ್ಪಿದ ಚೀಟಿ ಮೇಲೇಳುವಾಗ ಒಂಟೆಗಳ ಸಂಖ್ಯೆ ನೂರು ಮುಟ್ಟಿತ್ತು. ಹೀಗಾಗಿ ಆ ನೂರೂ ಒಂಟೆಗಳನ್ನ ಬಲಿನೀಡಿ ಮುತ್ತಲಿಬ್ ತನ್ನ ಹರಕೆ ಮುಟ್ಟಿಸಿದ. ಹೀಗಾಗಿ ಮುಂದೆ ಮಹಮದ್ ತಾನು 'ಎರಡು ಬಲಿದಾನಗೈದವರ ಮಗ" ಎಂದು ಹೇಳಿಕೊಳ್ಳಲು ಇದೆ ಕಾರಣ. ಮೆಕ್ಕವನ್ನ ಯಾವ ಅಧಿಕೃತ ಸರಕಾರಗಳೂ ಎಂದೂ ಆಳಿರಲಿಲ್ಲ. ಅದು ಆಗಾಗ ಬುಡಕಟ್ಟುಗಳ ಅಧೀನದಲ್ಲಷ್ಟೆ ಇತ್ತು. ಅವಕ್ಕೂ ಅವುಗಳದ್ದೆ ಆದ ರೀತಿನೀತಿ,ನಡೆನುಡಿಗಳಿದ್ದವು. ಕ್ಷುಲ್ಲಕ ಕಾರಣಕ್ಕೂ ರಕ್ತ ಚೆಲ್ಲಿ ಕಾದಾಡುವ ಹಾಗೂ ಪ್ರತಿಕಾರಕ್ಕಾಗಿ ಹಾತೊರೆಯುವ ಅರಬ್ಬರ ಗುಣ ಇಂದಿಗೂ ಅಷ್ಟೆ ಪ್ರಖರವಾಗಿರುವುದನ್ನು ಕಾಣಬಹುದಾಗಿದೆ. ಒಂದು ಬಾರಿ ಒಬ್ಬನ ರಕ್ತ ಚಲ್ಲಿದಾಗ ಆ ವ್ಯಕ್ತಿಯ ಕುಟುಂಬ, ಬುಡಕಟ್ಟು, ಪಂಗಡ, ಜನಾಂಗದ ಉಳಿದವರು ಅವನನ್ನು ಕೊಲೆ ಮಾಡಿದ ವ್ಯಕ್ತಿಯನ್ನು ಅಥವಾ ಅವನ ಬುಡಕಟ್ಟನ್ನು ಪ್ರತಿಕಾರದ ಸಲುವಾಗಿ ಬೇಟೆಯಾಡುವುದು ಅಂದೂ ಸಾಮಾನ್ಯವಾಗಿತ್ತು, ಇಂದೂ ಅದು ಅಲ್ಲಿನ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿಯೆ ಉಳಿದುಬಂದಿದೆ ! ಹಾಗೊಂದು ವೇಳೆ ಎದುರಾಳಿಗಳು ಬಲಿಷ್ಠರಾಗಿದ್ದಾಗ ಕೆಲಕಾಲ ಹಿಂದಡಿ ಇಡಲಾಗುತ್ತಿತ್ತಾದರೂ ಒಂದೊಮ್ಮೆ ಅವಕಾಶ ಸಿಕ್ಕರೆ ಪ್ರತಿಕಾರ ತೀರಿಸಿಕೊಳ್ಳುವುದು ತಮ್ಮ ಜನ್ಮಸಿದ್ಧ ಹಕ್ಕೆಂದೆ ಅಲ್ಲಿ ಬಗೆಯಲಾಗುತ್ತಿತ್ತು. ಅದಕ್ಕೆ ಅಗತ್ಯವಾಗಿ ಇನ್ನೊಬ್ಬ ಬಲವಂತನ ನೆರವನ್ನು ಪಡೆಯಲಾಗುತ್ತಿತ್ತು. ಅಂತಹ ಒಬ್ಬ ಬಲವಂತನೆ ಪ್ರವಾದಿ ಮಹಮದ್ ಪೂರ್ವಜ ಕೂಸೈ. ಕ್ರಿಸ್ತಶಕ 400ರ ಕಾಲಕ್ಕೆ ಈತ ಪ್ರಶ್ನಾತೀತನಾಗಿರಲು ಜನಬೆಂಬಲಿತ ಈತನ ಬಾಹುಬಲವೆ ಕಾರಣ ಎಂದರೂ ತಪ್ಪಿಲ್ಲ. (ನಿರೂಪಣೆ ಇಲ್ಲಿಗೆ ಮುಗಿಯಿತು... ಇನ್ನು ಪ್ರವಾದಿಯ ಕಥೆ ಶುರು...)

Wednesday, September 26, 2012

ಮರಳುಗಾಡಿನ ಮರ್ಮರ...

ಭೂಮಂಡಲದಲ್ಲಿ ಅರೇಬಿಯಾ ಭೂಭಾಗ ಬೃಹತ್ ಮರಳುಗಾಡು ವ್ಯಾಪಿಸಿರುವ ಒಣ ಪ್ರದೇಶ. ಅದರ ಪೂರ್ವದಿಕ್ಕಿನಲ್ಲಿ ಪರ್ಷಿಯನ್ ಕೊಲ್ಲಿ, ಪಶ್ಚಿಮಕ್ಕೆ ಕೆಂಪುಸಮುದ್ರ ಹಾಗೂ ದಕ್ಷಿಣಕ್ಕೆ ಅರಬ್ಬಿಸಮುದ್ರ ಆವರಿಸಿದ್ದು ಅದೊಂದು ಪರ್ಯಾಯದ್ವೀಪವಾಗಿ ಅಸ್ತಿತ್ವದಲ್ಲಿದೆ. ಈ ಪರ್ಯಾಯದ್ವೀಪದ ಪಶ್ಚಿಮ ಭಾಗದಲ್ಲಿ ಕೆಂಪುಸಮುದ್ರಕ್ಕೆ ಅಂಟಿಕೊಂಡಂತೆ ಒರಟು ಕೆಂಪುಮರಳುಗಲ್ಲಿನ ಗಿರಿಶ್ರೇಣಿಗಳು ದಕ್ಷಿಣದಿಂದ ಉತ್ತರದ ಕಡೆಗೆ ಹರಡಿವೆ. ಇದರ ಒಂದು ಭಾಗ ಸಮುದ್ರ ತೀರದಡೆಗೆ ಚಾಚಿದ್ದರೆ ಇನ್ನೊಂದು ಭಾಗ ಸಮುದ್ರ ಮಟ್ಟಕ್ಕಿಂತ ಸ್ವಲ್ಪ ತಗ್ಗಿನವರೆಗೂ ಒಳನಾಡಿನತ್ತ ಮೈಲಿಗಳ ದೂರ ವ್ಯಾಪಿಸಿದೆ. ಈ ಗಿರಿಶಿಖರ ಹಾಗೂ ಕೆಂಪುಸಮುದ್ರದ ಮಧ್ಯದಲ್ಲಿರುವ ಪ್ರದೇಶದಲ್ಲಿರುವುದೆ ಇತಿಹಾಸ ಪ್ರಸಿದ್ಧ ಮೆಕ್ಕಾ ಹಾಗು ಮದೀನಾ ನಗರ ಗಳು. ಅರೇಬಿಯಾ ಒಟ್ಟಾರೆ 1400ಮೈಲಿ ಉದ್ದವಿದ್ದು, 1250ಮೈಲಿ ಅಗಲವಾಗಿದೆ. ಆದರೆ ಈ ವಿಶಾಲಪ್ರದೇಶ ಒಂದೇ ಒಂದು ದೊಡ್ಡ ನದಿ ಅಥವಾ ಹೊಳೆಯನ್ನ ಹೊಂದಿಲ್ಲದಿರುವುದು ವಿಸ್ಮಯ ಹುಟ್ಟಿಸುತ್ತದೆ. ಅರೇಬಿಕ್ ಭಾಷೆಯಲ್ಲಿ 'ಅರಬ' ಎಂದರೆ ಬರಡು ಎಂದರ್ಥ. ಹೆಸರಿಗೆ ತಕ್ಕಂತೆ ಈ ಪ್ರೆದೇಶ ಒಂದು ಬರಡು ಭೂಮಿಯೆ ಆಗಿದ್ದು ಈ ಎರಡು ನಗರಗಳಿರುವ ಪ್ರದೇಶದಿಂದ ಪೂರ್ವಕ್ಕೆ ಭೂಮಿ ಇಳಿಜಾರಾಗಿದ್ದು ನಡುನಡುವೆ ಕೆಲವೊಮ್ಮೆ 12000ಅಡಿ ಎತ್ತರದ ಪರ್ವತಗಳು ಏರ್ಪಟ್ಟು ಮತ್ತೆ ಕೊಲ್ಲಿಯವರೆಗೂ ಇಳಿಜಾರಾಗಿ ಒಂದು ಬಗೆಯ ವಿಲಕ್ಷಣತೆ ಹೊಂದಿರುವುದು ಒಂದು ವಿಶೇಷ. ಆದರೆ ಇಲ್ಲಿನ ನೈಋತ್ಯ ಭಾಗ ಸಣ್ಣಪುಟ್ಟ ನೀರಿನ ಒರತೆ-ಹಳ್ಳಗಳನ್ನು ಹೊಂದಿದ್ದು ಅಲ್ಲಿನ ಮಣ್ಣಿನ ಫಲವತ್ತತೆಯನ್ನ ಹೆಚ್ಚಿಸುವುದರಲ್ಲಿ ಸಹಕಾರಿಯಾಗಿದೆ. ಉಳಿದಂತೆ ಇನ್ನು ಯಾವ ಭಾಗವೂ ಆ ಭಾಗ್ಯ ಹೊಂದಿರದೆ ಬೆಂಗಾಡಾಗಿ ಕೇವಲ ಅಲ್ಲಲ್ಲಿ ಕಾಣುವ ಓಯಸಿಸ್'ಗಳಿಂದಷ್ಟೆ ನೀರುಂಡು ಕರ್ಜೂರ- ಬಾರ್ಲಿ- ಅಕೇಶಿಯ ಮುಂತಾದ ಸಸ್ಯಗಳನ್ನಷ್ಟೆ ಬೆಳೆದುಕೊಳ್ಳಲು ಶಕ್ತವಾಗಿವೆ. ಈ ಜಲವಸತಿಗಳ ಸುತ್ತ ಜನವಸತಿ ಹಬ್ಬಿದೆ. ಅನಾದಿಕಾಲದಿಂದಲೂ ಇಂತಹ ಓಯಸಿಸ್'ಗಳ ಸುತ್ತ ಏರ್ಪಟ್ಟ ಜನವಸತಿಗಳ ಬುಡಕಟ್ಟಿನ ಮಂದಿಗೆ ಇಲ್ಲಿನ ಉರಿ ಉಷ್ಣಾಂಶವೆ ಮೊದಲ ಶತ್ರು. ಹಗಲಲ್ಲಿ ತಾರಕಕ್ಕೇರುವ ಉಷ್ಣಾಂಶ ಜನರ ರಕ್ತ ಕುದಿಸಿ ಮುಖವನ್ನ ಸುಡಿಸುವಂತಿರುವುದರಿಂದ ಇಲ್ಲಿನ ನಿವಾಸಿಗಳು ಮರಳು ಮಿಶ್ರಿತ ಸುಡುಗಾಳಿಯಿಂದ ತಮ್ಮನ್ನು ಕಾಪಾಡಿಕೊಳ್ಳಲು ಮೈತುಂಬ ನಿಲುವಂಗಿ ಹಾಗೂ ತಲೆಗೆ ಸುತ್ತಿಕೊಳ್ಳುವ ಬಟ್ಟೆ ಧರಿಸುವುದು ವಾಡಿಕೆ. ಮಳೆ ಎನ್ನುವುದು ಕೇವಲ ನೆನಪಿನ ಮಿತ್ರನಾಗಿದ್ದು, ಉರಿಕೆಂಡದಂತಹ ಸೂರ್ಯನ ಸ್ನೇಹವಿರುವುದರಿಂದ ಆಕಾಶ ವರ್ಷಪೂರ್ತಿ ತಿಳಿಯಾಗಿದ್ದು ಬೀಸುವ ಗಾಳಿ 'ಹೊಳೆಯುವ ದ್ರಾಕ್ಷಾರಸ' (Sparkling Wine) ದಂತೆ ಅನುಭವವಾಗುತ್ತದೆ ಎಂದಿದ್ದಾನೆ ಖ್ಯಾತ ಇತಿಹಾಸಕಾರ ವಿಲ್ ಡ್ಯೂರಾಂಟ್. ತಮ್ಮದೆ ವಿಶಿಷ್ಟ ಸಂಸ್ಕೃತಿ, ನಡೆ- ನುಡಿ, ಹವ್ಯಾಸಗಳನ್ನ ಹೊಂದಿ ಇವೆಲ್ಲದರ ಕೂಡ ಬಾಳ್ವೆ ನಡೆಸುವುದು ಇಲ್ಲಿನ ಜನರಿಗೆ ಸಾಮಾನ್ಯ ಸಂಗತಿಯಾಗಿತ್ತು. ಆದರೆ ದಿನ ಬಳಕೆಯ ದವಸಧಾನ್ಯಗಳು ಹಾಗೂ ನಿತ್ಯೋಪಯೋಗಿ ಆಹಾರ ವಸ್ತುಗಳಿಗಾಗಿ ದೂರದೇಶದವರೊಂದಿಗೆ ವ್ಯಾಪಾರ ವಾಹಿವಾಟು ಇಟ್ಟುಕೊಳ್ಳುವುದು ಅರಬ್ಬಿಗಳಿಗೆ ತೀರಾ ಅನಿವಾರ್ಯವೆ ಆಗಿತ್ತು. ಹೀಗಾಗಿ ಸಾರ್ಥ (ಕ್ಯಾರವಾನ್) ಕಟ್ಟಿಕೊಂಡು ನೂರಾರು ಮೈಲಿ ಸುತ್ತುವುದನ್ನ ಜೀವನದ ಅಂಗವಾಗಿಸಿಕೊಂಡಿದ್ದ ಅರಬ್ಬಿಗಳು ಒಂಟೆ, ಕುದುರೆಗಳ ಮೇಲೆ ಕೊಂಡ ಸಾಮಾನುಗಳನ್ನ ಹೇರಿಕೊಂಡು ಅವುಗಳ ರಕ್ಷಣೆಗಾಗಿ ಅಂಗರಕ್ಷಕರ ನೆರವಿನಿಂದ ಅಥವಾ ಸ್ವತಃ ತಾವೆ ಶಸ್ತ್ರಸಜ್ಜಿತರಾಗಿ ದಾರಿಗಳ್ಳರೊಂದಿಗೆ ರೋಷಾವೇಶದಿಂದ ಹೋರಾಡುವುದನ್ನು ರೂಢಿಸಿಕೊಂಡಿದ್ದರು, ಅರೇಬಿಯಾದ ಉದ್ದಗಲಕ್ಕೂ ಇಂತಹ ಕ್ಯಾರವಾನ್'ಗಳು ಸರ್ವೆಸಾಮಾನ್ಯವಾಗಿದ್ದು, ಅದು ಅಲ್ಲಿನ ನಿವಾಸಿಗಳ ಬದುಕಲ್ಲಿ ಹಾಸು ಹೊಕ್ಕಾಗಿತ್ತು. ಅಲ್ಲಿನ ಭಯಂಕರ ದುರ್ಗಮ ಮರಳುಗಾಡಿನಲ್ಲಿ ಪ್ರಯಾಣಿಸುವುದು ಪ್ರಯಾಸಕರವಾಗಿದ್ದು ಅನಿರೀಕ್ಷಿತ ಅಪಾಯಗಳಿಗೇನೂ ಕೊರತೆಯಿರಲಿಲ್ಲ. ಹೀಗಾಗಿ ಕ್ಯಾರವಾನಿಗರು ತಮ್ಮ ಸ್ವತ್ತುಗಳ ರಕ್ಷಣೆಗಾಗಿ ಕಾಣದ ದೇವರನ್ನ ಮೊರೆ ಹೋಗುವುದು ಸ್ವಾಭಾವಿಕವೆ ಆಗಿತ್ತು. ದಾರಿಯುದ್ದ ಸಿಗುವ ವಿವಿಧ ದೇವತಾರಾಧನ ಸ್ಥಳಗಳಲ್ಲಿ ತಮ್ಮ ಬುಡಕಟ್ಟಿಗೆ ಸೇರಿದ ದೇವರನ್ನ ಶ್ರದ್ಧಾಭಕ್ತಿಯಿಂದ ಆರಾಧಿಸುವುದು, ದೈವ ಕೃಪೆಯನ್ನ ಅಪೇಕ್ಷಿಸಿ ಪ್ರಾರ್ಥಿಸುವುದು ಅವರ ಬಾಳಿನ ಒಂದು ಅವಿಭಾಜ್ಯ ನಡೆಯಾಗಿತ್ತು. ಅರಬ್ಬಿಗಳೊಂದಿಗೆ ವ್ಯಾಪಾರ ವಾಹಿವಾಟು ಇಟ್ಟುಕೊಂಡಿದ್ದ ಪ್ರಮುಖ ವಿದೇಶಗಳಲ್ಲಿ ಸಿರಿಯಾ ಹಾಗೂ ಪ್ಯಾಲಸ್ತೈನ್ ಪ್ರಮುಖವಾಗಿದ್ದವು. ಇವುಗಳೊಂದಿಗೆ ನೆರೆಯ ಇರಾನ್. ಇರಾಕ್ ಹಾಗೂ ಭಾರತದವರೆಗೂ ಅರಬ್ಬಿ ವಣಿಕರು ಕ್ಯಾರವಾನ್ ನಡೆಸುತಿದ್ದುದೂ ಇತ್ತು. ಅರಬ್ಬರಲ್ಲಿ ಕೆಲವರು ಹೀಗೆ ವ್ಯವಹಾರ ಕೌಶಲ್ಯ ಮೆರೆದರೆ, ಇನ್ನುಳಿದವರು ಹೊರದೇಶಗಳಲ್ಲಿ ಈ ವ್ಯವಹಾರ ಕೌಶಲ್ಯ ಮೆರೆದು ಪ್ರಸಿದ್ಧರೂ ಆಗಿದ್ದರು. ಆದರೆ ಅವರ ಆರ್ಥಿಕ ನೆಮ್ಮದಿಯನ್ನ ಕಲಕಿದ್ದು ವಿದೇಶಿ ವ್ಯಾಪಾರಗಳಲ್ಲಿ ರೋಮನ್ನರ ಅಧಿಪತ್ಯ. ಕ್ರೈಸ್ತ ಮತ ರಾಜಧರ್ಮವಾಗಿ ರೋಮನ್ ಸಾಮ್ರಾಜ್ಯ ಪ್ರವರ್ಧಮಾನಕ್ಕೆ ಬಂದ ಕಾರಣ ಕ್ಯಾರವಾನ್'ಗಳ ಮೇಲೆ ರೋಮನ್ ಸುಂಕಾಧಿಕಾರಿಗಳು ಹೇರಲಾರಂಭಿಸಿದ ದುಬಾರಿ ಶುಲ್ಕ ಹಾಗೂ ವಿಪರೀತ ನಿರ್ಬಂಧಗಳ ಕಾರಣ ಕೆಂಗೆಟ್ಟ ಅನೇಕ ಅರಬ್ಬರು ಮರಳಿ ಮಾತೃಭೂಮಿಗೆ ಬಂದು ಮೆಕ್ಕಾ, ಮದೀನ ಹಾಗೂ ಸಿರಿಯಾ ಸೇರಿದಂತೆ ಮಧ್ಯ ಪ್ರಾಚ್ಯದಾದ್ಯಂತ ಹರಿದು ಹಂಚಿಹೋದರು. ಗ್ರೀಕನ್ನರಿಂದ 'ಸೇರಾಕೆನಾಯ್' (Serakenoi) ಅಥವಾ "ಸಾರ್'ಸೆನ್ಸ್" ಎಂದು ಕರೆಸಿಕೊಂಡ ಅರೆಬಿಯಾವನ್ನ (ಅರಬ್ಬಿಯಲ್ಲಿ ಹಾಗೆಂದರೆ ಪೂರ್ವದವರು ಎಂದರ್ಥ) ಕ್ರಿಸ್ತಪೂರ್ವ 240ರಲ್ಲಿ ಮೊಗಾನ್ ಎಂಬುವವ ಆಳುತ್ತಿದ್ದ. ಅವನನ್ನು ಬೆಬಿಲೋನಿಯಾದ ರಾಜ ನರಂಸಿನ್ ಸೋಲಿಸಿದ ಬಗೆಗಿನ ಶಿಲಾಶಾಸನವೊಂದು ಲಭ್ಯವಿದೆ. ಅರೇಬಿಯಾದ ಇತರ ಶಾಸನಗಳ ಪ್ರಕಾರ ಕ್ರಿಸ್ತಪೂರ್ವ 800ರಲ್ಲಿ ಅದೆ ಮನೆತನದ ಇಪ್ಪತೈದಕ್ಕೂ ರಾಜರು ಅರೆಬಿಯಾವನ್ನ ಆಳಿದ್ದಾರೆ. ಇತಿಹಾಸ ಪ್ರಸಿದ್ಧ ರಾಣಿ ಶೀಬಾ ದಕ್ಷಿಣ ಅರೆಬಿಯಾದಲ್ಲಿರುವ ಯಮನ್'ನ ಸಾಬಾದಿಂದ ರಾಜ್ಯಭಾರ ಮಾಡುತ್ತಿದ್ದಳು. ಆಕೆ ಅವಳ ಕಾಲದವನೆ ಆಗಿದ್ದ ರಾಜಾ ಸೋಲೋಮನ್ನನನ್ನು ಕ್ರಿಸ್ತಪೂರ್ವ 950ರಲ್ಲಿ ಭೇಟಿಮಾಡಿದ್ದಳು. ಸಾಬಾದ ರಾಜರು ಮಾರಿಬ್'ನಲ್ಲಿ ಕಾಲಾನಂತರ ರಾಜಧಾನಿಯನ್ನು ಸ್ಥಾಪಿಸಿ ಉಛ್ರಾಯ ಸ್ಥಿತಿಯನ್ನ ತಲುಪಿ, ಉತ್ತಮ ನೌಕಾಪಡೆ ಹೊಂದಿ ದೂರದ ಭಾರತದೊಂದಿಗೆ ಸಮುದ್ರಮಾರ್ಗದ ವ್ಯಾಪಾರ ನಡೆಸುತ್ತಿದ್ದರು. ಕ್ರಮೇಣ ರೋಮನ್ನರ ಪ್ರಾಬಲ್ಯ ಹೆಚ್ಚಿ ಅವರು ಅರೇಬಿಯಾದ ಪ್ರಸಿದ್ಧ ರೇವುಪಟ್ಟಣವಾಗಿರುವ ಏಡನ್'ನ್ನು ಅತಿಕ್ರಮಿಸಿ ಈಜಿಪ್ಟ್ ಹಾಗೂ ಭಾರತದ ಮೇಲಿನ ವ್ಯಾಪಾರದ ಮೇಲೆ ಹತೋಟಿ ಸಾಧಿಸಿತು. ಏಡನ್ ಬದಲಾಗುತ್ತಿದ್ದ ಕಾಲಮಾನದಲ್ಲಿ ಅರಬ್, ರೋಮನ್ ಹಾಗು ಪರ್ಷಿಯನ್ ಚಕ್ರಾಧಿಪತ್ಯಕ್ಕೆ ಒಳಗಾಗಿದ್ದನ್ನು ಇತಿಹಾಸಕಾರರು ಗುರುತಿಸಿದ್ದಾರೆ. ಕ್ರಿಸ್ತಶಕ ಎರಡನೆ ಶತಮಾನವನ್ನೆ ಗಮನಿಸುವುದಾದರೆ ಸಮೈರಾ ನಗರದ ಸಾನಿಸ್ಸಾಡರು ರೋಮನ್ನರ ಅಧೀನದಲ್ಲಿದ್ದರೆ, ಯುಫ್ರೆಟಿಸ್ ನದಿಯ ದಡದಲ್ಲಿ ಇದ್ದ ಅಲ್-ಹಿರಾ ರಾಜ್ಯ ಪರ್ಶಿಯನ್ನರ ಪ್ರಭಾವದಲ್ಲಿತ್ತು. ಈ ಎರಡೂ ರಾಜ್ಯಗಳು ಕ್ರಿಸ್ತಮತದ ಪ್ರಭಾವಕ್ಕೆ ಒಳಪಟ್ಟಿದ್ದವು.ಕ್ರಿಸ್ತಶಕ ಏಳನೆ ಶತಮಾನದ ವೇಳೆಗೆ ಈ ಎರಡೂ ರಾಜ್ಯಗಳು ತಮ್ಮ ಅಸ್ಥಿತ್ವವನ್ನ ಕಳೆದುಕೊಂಡವು. ರೋಮ್ ಹಾಗೂ ಪರ್ಷಿಯಾ ಚಕ್ರಾದಿಪತ್ಯಗಳು ಉನ್ನತ ಸ್ಥಿತಿಯಲ್ಲಿದ್ದಾಗ ಇತ್ತ ಅರೇಬಿಯಾ ಕತ್ತಲೆಯತ್ತ ಜಾರತೊಡಗಿತ್ತು. ಕ್ರಿಸ್ತಪೂರ್ವದಲ್ಲಿ ಅಲ್ಲಿದ್ದ ವೈಭವ ಏಳನೆ ಶತಮಾನದಲ್ಲಿ ಅಸ್ತಂಗತವಾಗಿತ್ತು. ಹೊರಪ್ರಪಂಚದ ಮಟ್ಟಿಗೆ ಅರಬ್ಬರು ಅಪ್ರಸ್ತುತರಾಗಿಬಿಟ್ಟಿದ್ದರು. ಹೀಗಾಗಿ ಕಗ್ಗತ್ತಲೆಯ ಆಫ್ರಿಕಾ ಖಂಡದಂತೆ ಅರೇಬಿಯಾ ಪರ್ಯಾಯ ದ್ವೀಪವೂ ಕಗ್ಗತ್ತಲ ದ್ವೀಪವಾಗಿ ಪರಿಣಮಿಸಿತು. ಆರನೆ ಶತಮಾನದಲ್ಲಿ ಅರೇಬಿಯಾದ ನೂರಾರು ಬುಡಕಟ್ಟುಗಳ ಜನರು ಬದುಕಿನ ಬಹುತೇಕ ಆಸರೆ ಕಳೆದುಕೊಂಡು ಅಲೆಮಾರಿಗಳಾಗಿ, ಅಸಂಸ್ಕೃತರಾಗಿ ದೇಶವನ್ನ ಸುತ್ತುವುದು ಸಾಮಾನ್ಯವಾಗಿತ್ತು. ಅವರೆಲ್ಲರೂ ತಮ್ಮತಮ್ಮ ಬುಡಕಟ್ಟುಗಳ ಸಂಸ್ಕೃತಿಗೆ ಬಲವಾಗಿ ಅಂಟಿಕೊಂಡಿದ್ದು ಅಸಹನೆ, ಕೋಪ- ತಾಪ, ನಿಷ್ಠೂರತೆ ಮುಂತಾದ ಗುಣಧರ್ಮಗಳನ್ನು ವಿಪರೀತವಾಗಿ ಬೆಳೆಸಿಕೊಂಡಿದ್ದರು. ಯಾರ ಹಿಡಿತಕ್ಕೂ ಸಿಗದೆ ನಿರ್ಭೀತರಾಗಿ-ಸ್ವತಂತ್ರ ಮನೋಭಾವನೆ ಬೆಳೆಸಿಕೊಂಡಿದ್ದ ಇವರು ಒಂದು ನಿರ್ದಿಷ್ಟ ಕಾನೂನಿನ ಪ್ರಕಾರ ನಡೆದುಕೊಳ್ಳುತ್ತಿರಲಿಲ್ಲ. ಪ್ರತಿ ಬುಡಕಟ್ಟಿಗೆ 'ಶೇಖ್' ಎಂಬ ನೇತಾರನಿದ್ದರೂ ಅವನಿಂದಲೂ ಗುಂಪಿನ ಎಲ್ಲರನ್ನು ಬಯಸಿದಾಗ ನಿಯಂತ್ರಿಸೋದು ಕಷ್ಟವಾಗುತ್ತಿತ್ತು. ಒಂದು ವಿಚಿತ್ರ ರೀತಿಯ ಅರಬ್ಬರ ವ್ಯಕ್ತಿತ್ವದಲ್ಲಿ ಎದ್ದು ಕಾಣುವಂತಹ ವಿರೋಧಾಭಾಸಗಳು ಕಂಡು ಬರುತ್ತಿದ್ದವು ಎನ್ನುತ್ತಾನೆ ವಿಲ್ ಡ್ಯೂರಾಂಟ್. ಒಂದುಕಡೆ ಅಸಂಖ್ಯಾತ ಉಪ ಬುಡಕಟ್ಟುಗಳ ಜನರು ಒಂದೆ ಭಾಷೆ, ನಡೆ- ನುಡಿ, ನ್ಯಾಯ ಸೂತ್ರಗಳನ್ನ ಒಪ್ಪಿಕೊಂಡಿದ್ದರೂ ಸಹ ಆಂತರಿಕವಾಗಿ 'ಸ್ವತಂತ್ರ ಮನೋಭಾವ'ವನ್ನೆ ಬೆಳೆಸಿಕೊಂಡು ಸಮಯ ಬಂದಾಗ ಯಾವುದೆ ನೈತಿಕ ನ್ಯಾಯ ಸೂತ್ರಗಳಿಗೆ ಕವಡೆ ಕಿಮ್ಮತ್ತನ್ನೂ ಕೊಡದೆ ಸದಾ ಚಡಪಡಿಸುತ್ತಾ ತಮ್ಮ ತಮ್ಮಲ್ಲೆ ಹೊಡೆದಾಡುತ್ತಿದ್ದು ಸಣ್ಣಪುಟ್ಟ ಕ್ಷುದ್ರ ಕಾರಣಗಳಿಗೂ ಭೀಕರ ಮಾರಾಮಾರಿ- ಕದನ- ನೆತ್ತರ ಚೆಲ್ಲಾಟ ಸಾಮಾನ್ಯವೆಂಬಂತೆ ನಡೆಯುತ್ತಿದ್ದವು. ರಕ್ತ ಸಂಬಂಧ ಹಾಗೂ ಇನ್ನಿತರ ಯಾವುದೆ ಆಪ್ತ ಸಂಬಂಧಗಳ ಬೇಲಿಯೂ ಆ ಕ್ಷಣ ಅವರೊಳಗಿನ ಪಶು ವರ್ತನೆಯನ್ನು ತಡೆಯುತ್ತಿರಲಿಲ್ಲ. ಯಾವ ರಾಜನ ಚಕ್ರಾಧಿಪತ್ಯಕ್ಕೂ ಒಪ್ಪದೆ, ತಮ್ಮೊಳಗಿನ ನಾಯಕನ ಮುಂದಾಳತ್ವಕ್ಕೂ ಕಿಮ್ಮತ್ತು ಕೊಡದೆ ತಮಗೆ ಬೇಕಾದಂತೆ ಇರೋದು ಅವರ ರೂಢಿಯಾಗಿತ್ತು. ಐಕ್ಯತೆಯಲ್ಲಿ ನಂಬಿಕೆಯಿಡದೆ ಅನೈಕ್ಯತೆಯ ಅನಿಷ್ಟಗಳನ್ನ ಧಾರಾಳವಾಗಿ ಅನುಭವಿಸುತ್ತಿದ್ದ ಅರಬ್ಬರು ವಿರೋಧಾಭಾಸಪೂರಿತ ಜೀವನ ಶೈಲಿಯನ್ನು ಹೊಂದಿದ್ದದು ಸ್ಪಷ್ಟವಾಗಿತ್ತು. ಯಾವುದೆ ನಸರ್ಗಿಕ ತಡೆಗಳಿಲ್ಲದಿದ್ದರೂ ಅರಬ್ಬರ ಸ್ವಾತಂತ್ರ ಕಾಪಾಡಿದ್ದು ಇದೆ ವಿರೋಧಾಭಾಸ ಅನ್ನುವುದು ಇತಿಹಾಸಕಾರರ ಖಚಿತ ಅಭಿಪ್ರಾಯ. ಇಲ್ಲಿನ ಪ್ರತಿಯೊಂದು ಬುಡಕಟ್ಟು ಕೂಡ ಒಬ್ಬ ಪೂರ್ವಿಕನ ಹೆಸರಿನಿಂದ ಗುರುತಿಸಲ್ಪಡುತ್ತಿತ್ತು. ಉದಾಹಾರಣೆಗೆ 'ಬಾನ್ ಫಾಸನ್' ಬುಡಕಟ್ಟಿನವರು ತಾವು 'ಫಾಸನ್' ಎಂಬ ಸಂತತಿಗೆ ಸೇರಿದವರು ಎಂದು ಸಾರಿಕೊಳ್ಳುತ್ತಿದ್ದರು. ಹೀಗೆ ತಮ್ಮ ಬುಡಕಟ್ಟಿನ ಸಂಸ್ಕೃತಿ ಹಾಗೂ ಅಂತಸ್ತಿನ ಬಗ್ಗೆ ಅವರಲ್ಲಿ ಅತೀವ ಹೆಮ್ಮೆಯಿದ್ದು ತಮಗಿಂತ ಕೆಳ ಅಂತಸ್ತಿನ ಪಂಗಡದ ಜೊತೆ ಸಂಬಂಧ ಬೆಳೆಸುವುದರ ಬಗ್ಗೆ ಸಾಮಾಜಿಕ ವಿರೋಧ ವ್ಯಕ್ತವಾಗುತ್ತಿತ್ತು. ಅಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಐದನೆ ಮೂರು ಭಾಗದಷ್ಟು ಮಂದಿ ಅಲೆಮಾರಿ ಬಿದೊವಿನ್ (bedowin) ಪಂಗಡದವರಾಗಿದ್ದು ತಮ್ಮ ಜಾನುವಾರುಗಳೊಂದಿಗೆ ಜಲವಸತಿ ಹುಡುಕಿಕೊಂಡು ಅಲೆದಾಡುವ ಪರಿಪಾಠ ಅವರದ್ದಾಗಿತ್ತು. ಕುದುರೆಗಳನ್ನ ಸಾಕಿ ಬೆಳೆಸುವುದು ಅವರ ಅನ್ನಕ್ಕೆ ದಾರಿಯಾಗಿದ್ದರೂ ಒಂಟೆಗಳು ಅವರ ಸರ್ವಸ್ವವಾಗಿದ್ದವು. ಅವರ ಜೀವನದ ಅಂಗವಾಗಿದ್ದ ಒಂಟೆ ಅವರೊಂದಿಗೆ ಹುಟ್ಟಿ ಮರುಭೂಮಿಯ ವೈಪರೇತ್ಯಗಳನ್ನೆಲ್ಲ ಸಹಿಸಿಕೊಂಡು ಸಾವಿನಲ್ಲೂ ಉಪಕಾರಿಯಾಗಿಯೆ ಸಾಯುತ್ತಿತ್ತು. ಉರಿ ಬೇಸಿಗೆಯಲ್ಲಿ ಐದು ದಿನಗಳವರೆಗೆ ನೀರಿಲ್ಲದೆ ಬದುಕುವ ಒಂಟೆ ಚಳಿಗಾಲದಲ್ಲಿ ನೀರಿಲ್ಲದೆ ಇಪ್ಪತೈದು ದಿನ ಸವೆಸಬಲ್ಲದು. ಪೌಷ್ಟಿಕತೆ ಹೆಚ್ಚಿಸುವ ಅದರ ಹಾಲು, ಬೆರಣಿಯಾಗಿ ಇಂಧನವಾಗುವ ಅದರ ಸಗಣಿ, ಸತ್ತರೆ ಆಹಾರವಾಗಬಹುದಾದ ಅದರ ಮಾಂಸ, ಗುಡಾರ- ಉಡುಪು ಇನ್ನಿತರ ನಿತ್ಯೋಪಯೋಗಿ ವಸ್ತುಗಳಾಗುವ ಅದರ ಚರ್ಮ ಹೀಗೆ ಅವರ ಸಮಸ್ತ ಅಗತ್ಯಗಳನ್ನೂ ಪೂರೈಸುವ ಒಂಟೆಯೆಂದರೆ ಅವರಿಗೆ ಅಚ್ಚುಮೆಚ್ಚು. ಅದರಷ್ಟೆ ಅವರೂ ಕಷ್ಟ ಸಹಿಷ್ಣುಗಳಾಗಿದ್ದರು. ಹೋರಾಟ- ಮೋಜು- ಪ್ರೇಮ- ಕಲಹ ಇವಷ್ಟೆ ಅವರ ಬಾಳ್ವೆಯಾಗಿತ್ತು.ಇನ್ನಿತರ ಉಪ ಬುಡಕಟ್ಟುಗಳನ್ನ ಮಣಿಸಿ ಅವರನ್ನ ದೋಚುವುದು ; ಅಂತೆಯೆ ತನ್ನ ಮೇಲೆ ಎರಗುವ ಇತರ ಬುಡಕಟ್ಟುಗಳವರಿಂದ ತನ್ನನ್ನು ಕಾಪಾಡಿಕೊಳ್ಳಲು ಹೆಣಗುವುದು. ತನಗೆ ಅದೆಂದೊ ಒದಗಿದ್ದ ಅವಮಾನಕ್ಕೆ ಪ್ರತಿಕಾರವಾಗಿ ಸೇಡು ತೀರಿಸಿಕೊಳ್ಳುವುದು ಇವೆ ಅವರ ಜೀವನದ ರೀತಿಯಾಗಿತ್ತು .'ಪವಿತ್ರ ದಿನ'ಗಳೆಂದು ಪರಿಗಣಿಸುವ ದಿನಗಳಲ್ಲಿ ಅವರು ವಿಶ್ರಾಮದಲ್ಲಿರುತ್ತಿದ್ದು ಹೋರಾಟದಿಂದ ವಿಮುಖರಾಗುತ್ತಿದ್ದರು. ತಮ್ಮ ಪ್ರದೇಶದೊಳಗೆ ಅಕ್ರಮವಾಗಿ ನುಸುಳಿವ ಇತರ ಜನಾಂಗದವರನ್ನ ಬೆದರಿಸಿ- ಲೂಟಿ ಹೊಡೆದುಕಳಿಸಲಾಗುತ್ತಿತ್ತು! ಇವರನ್ನು 'ಕರುಣಾಳು, ಕೊಲೆಗಡುಕ, ಉದಾರಿ, ದುರಾಸಾಪೂರಿತ, ನಂಬಲರ್ಹ, ನಂಬಿಕೆ ದ್ರೋಹಿ ಹಾಗೂ ಎದೆಗಾರಿಕೆಯುಳ್ಳವರು!' ಎಂದು ವಿಚಿತ್ರವಾಗಿ ವಿಲ್ ಡ್ಯೂರಾಂಟ್ ವರ್ಣಿಸಿದ್ದಾನೆ. ರಾಜಕೀಯ ಸಂಗತಿಗಳಲ್ಲಿ ಹೊಂದಿದ್ದಷ್ಟೆ ಅನೈಕ್ಯತೆಯನ್ನ ಅರಬ್ಬರು ದೇವಾರಾಧನೆಗಳ ವಿಷಯದಲ್ಲೂ ಹೊಂದಿದ್ದರು. ಯಾವ ಸುಧಾರಣೆಗೂ ಸೊಪ್ಪು ಹಾಕದೆ, ಯಹೂದಿ ಹಾಗೂ ಕ್ರೈಸ್ತ ಏಕದೇವತಾರಾಧನೆಯನ್ನ ಒಪ್ಪದೆ ಬಹುದೇವರನ್ನ ನಂಬುತ್ತಾ ವಿಗ್ರಹಾರಾಧನೆಯಲ್ಲಿ ನಂಬಿಕೆಹೊಂದಿದ್ದರು. ಯಾವುದೆ ಬಾಹ್ಯ ಪ್ರಭಾವಗಳು ಈ ನಂಬಿಕೆಯನ್ನ ಸಡಿಲಗೊಳಿಸಿರಲಿಲ್ಲ. ದೇವರೊಂದಿಗೆ ಅವರು ದೆವ್ವಗಳನ್ನೂ (ಜಿನ್ ) ನಂಬುತ್ತಿದ್ದು ಆಗಾಗ ಬಲಿ ನೀಡುವ ಮೂಲಕ, ಕವಿತ್ವ ಪ್ರದರ್ಶನದ ಮೂಲಕ ಹಾಡಿ ಸ್ತುತಿಸಿ ನಲಿದು ದೇವರನ್ನ ಒಲಿಸಿಕೊಳ್ಳುವುದು ಅವರಿಗೆ ಅಭ್ಯಾಸವಾಗಿತ್ತು. ಅರಬ್ಬರ ಆರಾಧನಾ ಸ್ಥಳಗಳಲ್ಲಿ ಪುರಾತನ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಮೆಕ್ಕಾದ ವಿಗ್ರಹಾರಾಧನೆಯ ಗುಡಿಯೂ ಒಂದಾಗಿತ್ತು. ಆಯಕಟ್ಟಿನ ಸ್ಥಳದಲ್ಲಿದ್ದರಿಂದ ಮೆಕ್ಕಾ ಕ್ರಿಸ್ತಪೂರ್ವದಿಂದಲೂ ಪ್ರಸಿದ್ಧಿ ಪಡೆದಿತ್ತು ಅನ್ನುವುದು ಇತಿಹಾಸಕಾರರ ನಂಬಿಕೆ. ಮೆಕ್ಕಾ ಒಂದು ಬರಡು ಕಣಿವೆಯಲ್ಲಿದ್ದು ಅದರ ಸುತ್ತಲೂ ಕೆಂಪುಕಲ್ಲಿನ ಪರ್ವತಗಳಿಂದ ಅದು ಸುತ್ತುವರೆದಿದೆ. ಕೆಂಪುಸಮುದ್ರ ಇಲ್ಲಿಗೆ ಕೇವಲ ಐವತ್ತು ಮೈಲಿ ದೂರದಲ್ಲಿದೆ. ಅರೇಬಿಯಾದಿಂದ ಹೊರಸಾಗುವ ಕ್ಯಾರವಾನ್'ಗಳು ಹಾಗೂ ಅರೇಬಿಯಾದ ಒಳ ಪ್ರವೇಶಿಸುವ ಕ್ಯಾರವಾನ್'ಗಳು ಇಲ್ಲಿ ಲಂಗರು ಹಾಕುತ್ತಿದ್ದವು. ಇಂತಹ ಸಾವಿರಾರು ಕ್ಯಾರವಾನ್'ಗಳು ವಿಶ್ರಮಿಸುವ ಸರ್ವಋತು ತಂಗುದಾಣಕ್ಕೆ ಒಂದು ಪೂಜಾಸ್ಥಳದ ಅಗತ್ಯ ಕಂಡುಬರೋದರಲ್ಲಿ ಅಚ್ಚರಿಯೇನಿಲ್ಲ. ಸದಾ ವಣಿಕರಿಂದ ತುಂಬಿ ತುಳುಕುತ್ತಿದ್ದ ಈ ಸ್ಥಳದಲ್ಲಿ ತಮ್ಮ ಧಾರ್ಮಿಕ ಆಚರಣೆಗಳ ಅನುಸಾರ ಅರಬ್ಬರು ಒಂದು ಗುಡಿ ಕಟ್ಟಿಕೊಂಡಿದ್ದು ಅದನ್ನ 'ಕಾಬಾ' ಎಂದು ಕರೆದುಕೊಂಡಿದ್ದರು. ಇದೊಂದು ಚಚ್ಚೌಕದ ಕಟ್ಟಡವಾಗಿದ್ದು ಒಟ್ಟು ಹತ್ತು ಬಾರಿ ಇದನ್ನ ನಿರ್ಮಿಸಲಾಗಿದೆ ಅನ್ನುವುದು ಮುಸ್ಲೀಮರ ನಂಬಿಕೆ. ಮೊದಲನೆ ಕಟ್ಟಡ ಅನಾದಿಕಾಲದಲ್ಲಿ ದೇವದೂತರ ನಿರ್ಮಿತಿಯಾಗಿದ್ದಾರೆ ಎರಡನೆಯದನ್ನ ಬೈಬಲ್'ನಲ್ಲಿ ಬರುವ ಪ್ರವಾದಿ ಆದಂ ಕಟ್ಟಿದ ಎನ್ನಲಾಗುತ್ತದೆ. ಮೂರನೆಯದನ್ನು ಅವನ ಮಗ ಸೇಥ್, ನಾಲ್ಕನೆಯದನ್ನು ಮೊಮ್ಮಗ ಅಬ್ರಾಹಂ ಹಾಗೂ ಐದನೆಯದನ್ನು ಮರಿಮಗ ಹಗರ್ ಕಟ್ಟಿದ್ದನಂತೆ. ಆರು ಮತ್ತು ಏಳನೆಯದನ್ನು ಇಸ್ಲಾಂ ಪೂರ್ವದ ಖುರೈಷಿ ಬುಡಕಟ್ಟಿನವರು ಕಟ್ಟಿದ್ದಾರೆ ಎಂಟನೆಯದ್ದನ್ನು ಮಹಮದ್ ಕಾಲದಲ್ಲಿ ಮತ್ತವರೆ ಕಟ್ಟಿದ್ದರು. ಕ್ರಿಸ್ತಶಕ 681 ಮತ್ತು 696ರಲ್ಲಿ ಮುಸ್ಲೀಂ ಶ್ರದ್ಧಾಳುಗಳು ಒಂಬತ್ತನೆ ಹಾಗು ಹತ್ತನೆ ಕಟ್ಟಡವನ್ನು ನಿರ್ಮಿಸಿದರು ಎನ್ನಲಾಗುತ್ತದೆ. ಈಗ ಅಲ್ಲಿರುವ ಕಟ್ಟಡ ಅನಂತರದ ದಿನಗಳಲ್ಲಿ ವಿವಿಧ ಖಲೀಫರಿಂದ ನಿರ್ಮಾಣಗೊಂಡಿತು. 40 ಅಡಿ ಉದ್ದ ಹಾಗೂ 50 ಅಡಿ ಎತ್ತರ ಹಾಗೂ 35 ಅಡಿ ಅಗಲದ ಚಚ್ಚೌಕದಾಕೃತಿಯ ಕಾಬಾ ತನ್ನ ದಕ್ಷಿಣ ಭಾಗದಲ್ಲಿ ನೆಲದಿಂದ ಐದು ಅಡಿ ಎತ್ತರದಲ್ಲಿ 'ಪವಿತ್ರ ಕರಿಶಿಲೆ'ಯನ್ನ ಹೊಂದಿದೆ. ಮುಸ್ಲೀಮರಿಗೆ ಈ ಕರಿಶಿಲೆ ಪರಮ ಪವಿತ್ರ. ಅದನ್ನು ಸ್ವರ್ಗದಿಂದಲೆ ಪಡೆಯಲಾಗಿದೆ ಎಂದು ನಂಬುವ ಮುಸ್ಲಿಂ ಯಾತ್ರಿಕರು ಶ್ರದ್ಧಾ ಭಕ್ತಿಯಿಂದ ಉಮ್ರಾದಲ್ಲಿ ಅದಕ್ಕೆ ಮುತ್ತಿಟ್ಟು ಧನ್ಯರಾಗುತ್ತಾರೆ. 'ಕಾಬಾ' ಕಟ್ಟಡ ದೊಳಗೆ ಇಸ್ಲಾಮಿನ ಉಗಮಕ್ಕೂ ಪೂರ್ವದಲ್ಲಿಯೇ ಒಟ್ಟು 361 ವಿವಿಧ ದೇವರುಗಳ ವಿಗ್ರಹಗಳನ್ನು ಆರಾಧಿಸುವ ಪದ್ದತಿಯಿತ್ತು. ಈ ಅನೇಕ ವಿಗ್ರಹಗಳ ಪೈಕಿ 'ಅಲ್ಲಾಹ'ನೂ ಒಬ್ಬನಾಗಿದ್ದ. ಅವನನ್ನು ಕೇವಲ ಮೆಕ್ಕಾ ಮೂಲ ನಿವಾಸಿಗಳು ಆರಾಧಿಸುತ್ತಿದ್ದರು ಅನ್ನುವ ವಿಶ್ಲೇಷಣೆ ವಿಲ್ ಡ್ಯೂರಂಟನದು. ಇದು ಇಸ್ಲಾಂ ಪೂರ್ವದ ಅರೇಬಿಯಾದಲ್ಲಿ ಮೂರ್ತಿ ಪೂಜೆಯೊಂದಿಗೆ ಬಹುದೇವತಾರಾಧನೆಯೂ ಇತ್ತು ಎನ್ನುವುದನ್ನು ಸ್ಪಷ್ಟ ಪಡಿಸುತ್ತದೆ. ( ಇನ್ನೂ ಇದೆ.... )

Tuesday, September 25, 2012

ಮುಂಜಾನೆಯ ಮೀನು ರಾಗ....

ಶ್ರಾವಣ ಬಂತೆಂದರೆ ಸಾಕು ನಮ್ಮ ಮನೆಯಂತೆ ಅಕ್ಕ ಪಕ್ಕದ ಮನೆಯವರಿಗೂ ಹೊಸ ಉತ್ಸಾಹ ಚಿಗುರುತ್ತಿತ್ತು. ಹಬ್ಬಗಳ ಸರಣಿ ಶುರುವಾಗುವ ಕಾಲ ಅದಲ್ಲವ? ಹಾಗಾಗಿ ಏನಾದರೊಂದು ಚಟುವಟಿಕೆಗಳು "ಅಡುಗೆ ಮನೆ" ಕಾರ್ಖಾನೆಯಲ್ಲಿ ನಡೆಯುತ್ತಲೇ ಇರುತ್ತಿದ್ದವು. ವರ್ಷದ ಇನ್ನುಳಿದ ದಿನಗಳಲ್ಲಿ ನಮ್ಮ ಬಡಾವಣೆಯ "ಮೀನುದಾತ" ಗಡ್ಡದ ಸಾಬರ ಸರ್ಕೀಟು ಸೊಪ್ಪುಗುಡ್ಡೆಯ ಪ್ರತಿ ಬೀದಿ ಬೀದಿಯ ಸರ್ವೇ ಮಾಡುತ್ತಾ ನಮ್ಮ ಬೀದಿಯನ್ನೂ ಎಡತಾಕುತ್ತಿದ್ದರೆ ಶ್ರಾವಣದಲ್ಲಿ ಮಾತ್ರ ಅದಕ್ಕೆ ತಾತ್ಕಾಲಿಕ ವಿರಾಮ. ಮಾಂಸಾಹಾರ ಹಾಗೂ ಮತ್ಸ್ಯ ಪ್ರಿಯರು ಶ್ರಾವಣದಲ್ಲಿ ಖಡ್ಡಾಯವಾಗಿ ಸಸ್ಯಾಹಾರವನ್ನ ಮಾತ್ರ ವೃತದಂತೆ ಸೇವಿಸುವುದರಿಂದ ಸಾಬರ ವ್ಯಾಪಾರ ಆ ಒಂದು ತಿಂಗಳು ಡಲ್ಲು ಹೊಡೆಯುತ್ತಿತ್ತು. ಬೀದಿಯ ಆರಂಭದಲ್ಲಿಯೇ ನಮ್ಮ ಮನೆಯಿರುತ್ತಿದ್ದುದರಿಂದಲೂ, ನಮ್ಮಂತೆ ಸಾಬರೂ ದಕ್ಷಿಣಕನ್ನಡದ ಮೂಲದ ಬ್ಯಾರಿಯಾಗಿದ್ದರಿಂದಲೂ ನನ್ನಜ್ಜ- ಅಮ್ಮನ ಬಳಿ ಮಾತಿನ ಸಲುಗೆ ಅವರಿಗೆ ಕುದುರಿತ್ತು. ಚೌಕುಳಿ ಮುಂಡು- ಕೊಕ್ಕರೆ ಬೆಳ್ಳನೆ ಅಂಗಿ ಹಾಕಿಕೊಂಡು ಸಾಬರು ತಮ್ಮ ಸೈಕಲ್ ರಥದ ಹ್ಯಾಂಡಲ್ ಹಿಡಕೊಂಡು ಅದಕ್ಕೆ ಕಟ್ಟಿರುವ ಹಸಿರು ಬಣ್ಣದ ದೊಡ್ಡ ಹಾರನನ್ನ ಊರೆಲ್ಲ ಬೆಚ್ಚಿ ಬೆದರುವಂತೆ "ಪೊಂಯ್ ಪೊಂಯ್" ಸದ್ದೆಬ್ಬಿಸುತ್ತಾ ಒತ್ತಿ ಹಿಡಿದು ಅದರ ಒಂದು ಪೆಡಲಿನ ಮೇಲೆ ಕೇವಲ ಬ್ಯಾಲೆನ್ಸಿಗೆ ನಿಂತು ವೆಂಕಟೇಶ ಟಾಕೀಸಿನ ಇಳಿಜಾರಿನಲ್ಲಿ ತೇಲಿಕೊಂಡು ಬರುವಾಗ ನಮ್ಮ ಬೀದಿಯ ಮತ್ಸ್ಯ ಪ್ರಿಯರ ಕಿವಿ ನೆಟ್ಟಗಾಗುತ್ತಿತ್ತು! ಈ ಸುನಾದದ ಸಂಗೀತ ಕೇಳಿ ಅವರ ಸೈಕಲ್ಲಿನ ಬಳಿ ದೌಡಾಯಿಸುವ ಅವರ ಅಭಿಮಾನಿಗಳಲ್ಲಿ ಬೀದಿಯಲ್ಲಿ ಎಲ್ಲರ ಮನೆಯಲ್ಲೂ ಎಂಬಂತೆ ಸಾಕಿರಲಾಗುತ್ತಿದ್ದ ನಾಲ್ಕು ಕಾಲಿನ ಬೆಕ್ಕುಗಳ ಹಿಂಡೂ ಸೇರಿರುತ್ತಿತ್ತು. ನಮ್ಮ ಮನೆಯಿಂದ ಚೂರು ಮುಂದೆ ತಮ್ಮ ಸೈಕಲ್ಲಿಗೆ ಸ್ಟ್ಯಾಂಡ್ ಏರಿಸಿ ನಿಲ್ಲಿಸಿದ ಸಾಬರು ವ್ಯಾಪಾರದ ವಿವಿಧ ವಿನೋದಾವಳಿಗೆ ಇಳಿಯುತ್ತಿದ್ದರು. ನಡುನಡುವೆ ತಮ್ಮ ಅತಿ ಅಭಿಮಾನ ತೋರುವ ಭರದಲ್ಲಿ ಅವರ ಕಾಲಿಗೆ ತಮ್ಮ ಮೈಯುಜ್ಜುತಿದ್ದ ಮಾರ್ಜಾಲ ಭೂಪರನ್ನೂ ಅಟ್ಟಾಡಿಸುತ್ತಾ ಸಾಬರು ವ್ಯಾಪಾರ ಸನ್ನದ್ಧರಾಗುತ್ತಿದ್ದರು. ಅವರ ಬಹುತೇಕ ಗಿರಾಕಿಗಳೆಲ್ಲ ಬೀದಿಯ ಹೆಂಗಸರೆ. ಸಾಬರ ತುಳುಗನ್ನಡ ಹಾಗೂ ಹೆಂಗಸರ ಜವಾರಿ ಮಲೆನಾಡು ಕನ್ನಡದ ಚರ್ಚಾಕೂಟದಂತಹ ವ್ಯಾಪಾರದ ನಡುನಡುವೆ ಏಳುವ " ಯಾ ರಬ್ಬೆ!" "ಎನ್ ತಂಬಿರಾನೆ" ಶ್ರುತಿಗೆ ಚೌಕಾಸಿಗೆ ಇಳಿಯುತ್ತಿದ್ದ ಅವರ ಗ್ರಾಹಕ ಮಹಿಳಾಮಣಿಗಳೆಲ್ಲ ತಮ್ಮದೂ ಓತಪ್ರೋತ ತಾರಕದ ಧ್ವನಿ ಸೇರಿಸುತ್ತಾ ವ್ಯಾಪಾರದ ಕಳೆ ಹೆಚ್ಚಿಸುತ್ತಿದ್ದರು. ದೂರದಿಂದ ಇದನ್ನ ಗಮನಿಸುವ ಹೊಸಬರ್ಯಾರಾದರೂ ಬೆಳ್ಳಂಬೆಳಗ್ಯೆಯೆ ಅಲ್ಲಿ ಗಂಡಸೊಬ್ಬನಿಗೆ ಹೆಂಗಸರ ಹಿಂಡಿನೊಂದಿಗೆ ಭಾರಿ ಮಾರಾಮಾರಿ ನಡೆಯುತ್ತಿದೆ ಎಂದು ತಪ್ಪು ತಿಳಿಯುವಂತೆ ಭರ್ತಿ ರಂಗೇರಿರುತ್ತಿತ್ತು ಲಬ್ಬೆ ಸಾಬರ ಈ ಮೀನಿನ ವ್ಯಾಪಾರ. ವಾರದ ಆಯ್ದ ಕೆಲವು ದಿನಗಳನ್ನ ಹೊರತುಪಡಿಸಿ ನಿತ್ಯ ಬೆಳಗ್ಯೆ ಏಳರಿಂದ ಎಂಟರ ನಡುವೆ ಈ ಮೀನು ವ್ಯಾಪಾರವೆನ್ನುವ ದೊಂಬರಾಟವನ್ನು ಅಲ್ಲಿ ಕಾಣ ಬಹುದಾಗಿತ್ತು. ಈ ವಿಶೇಷ ದಿನಗಳು "ದೇವರ ದಿನ"ಗಳಾಗಿದ್ದು ಅವತ್ತು ಮೀನು ತಿನ್ನೋದು ನಿಶಿದ್ಧವಂತೆ! ತಿನ್ನೋದೆ ಉಂಟಂತೆ ಈ ದಿನ, ವಾರ ಎಲ್ಲಾ ನೋಡುತ್ತಾ ಪಂಚಾಗ ಕೈಯಲ್ಲಿ ಹಿಡಿದು ಕೊಂಡೆ ಯಾಕೆ ಈ ಜನ ಮೀನು ತಿನ್ನೋದು ಅನ್ನುವುದು ಆಗೆಲ್ಲ ನನ್ನ ತಲೆ ಕೊರೆಯುತ್ತಿದ್ದ ಮಹತ್ವದ ಪ್ರಶ್ನೆಗಳಲ್ಲೊಂದಾಗಿತ್ತು, ಈಗಲೂ ಅದಕ್ಕೆ ಉತ್ತರ ಸಿಕ್ಕಿಲ್ಲ. ಬಹುಷಃ ತಮ್ಮ ವ್ಯಾಪಾರಕ್ಕೆ ಕಲ್ಲು ಹಾಕುತ್ತಿದ್ದ ಅಂತಹ ದಿನಗಳ ಬಗ್ಗೆ ಲಬ್ಬೆ ಸಾಬರಿಗೂ ಅದೆ ಅಭಿಪ್ರಾಯ ಇದ್ದರೂ ಇದ್ದೀತು ಅನ್ನಿಸುತ್ತೆ. ಅದೇ ಹೊತ್ತಿನಲ್ಲಿ ಮನೆಯ ಗಿಡಗಳಿಂದ ಹೂ ಕುಯ್ಯುತ್ತಲೋ ಇಲ್ಲವೆ ಬೆಳಗಿನ ಹಾಲನ್ನ ವರ್ತನೆ ಮನೆಗಳಿಗೆ ಮುಟ್ಟಿಸಿ ಆಗಷ್ಟೇ ಬಂದಿರುತ್ತಿದ್ದ ನಾನು ಮನೆಯ ದಣಪೆಯ ಕಲ್ಲಿಗೆ ಮೊಣಕೈ ಊರಿ ಅಂಗೈಯನ್ನ ಗಲ್ಲಕ್ಕೆ ಕೊಟ್ಟು ಆಸಕ್ತಿಯಿಂದ ಈ ಎಲ್ಲಾ ಪ್ರಹಸನವನ್ನ ಬಹಳ ತನ್ಮಯನಾಗಿ ನೋಡುತ್ತಿದ್ದೆ. ಕೆಲವು ನಿಮಿಷಗಳ ಈ ಅನುದಿನದ "ಜಂಗಿಕುಸ್ತಿ"ಯನಂತರ ತಮ್ಮ ಮನೆಯ ಗುಡಿಸುವ -ಒರೆಸುವ- ಮಕ್ಕಳಿಗೆ ಮೀಯಿಸುವ- ಅಂಗಳಕ್ಕೆ ಸಗಣಿ ಸಾರಿಸುವ ಸಕಲೆಂಟು ಕೆಲಸ ಗಳನ್ನ ಅರ್ಧರ್ಧಕ್ಕೆ ಬಿಟ್ಟು ಎತ್ತಿ ಸೊಂಟಕ್ಕೆ ಸಿಕ್ಕಿಸಿದ್ದ ಸೀರೆಯ ಅವತಾರದಲ್ಲಿಯೇ ಕೈಯಲ್ಲೊಂದು ಮಡಕೆ ಹೊತ್ತು ಸಾಬರ ಸೈಕಲ್ಲಿನ ರಣಾಂಗಣಕ್ಕೆ ಧಾವಿಸಿ ಧುಮುಕಿರುತ್ತಿದ್ದ ಮಹಿಳಾಮಣಿಗಳಿಗೂ, ಮೀನು ಸಾಬರಿಗೂ ಒಂದು ಮಧ್ಯಂತರ ಒಪ್ಪಂದ ಏರ್ಪಟ್ಟು ವ್ಯಾಪಾರದ ಬೆಲೆಯನ್ನು ಸಾಕಷ್ಟು ಹಗ್ಗ ಜಗ್ಗಾಟದ ನಂತರ ಇತ್ಯರ್ಥ ಗೊಳಿಸಿಕೊಳ್ಳುತ್ತಿದ್ದರು. ಇಷ್ಟಾದರೂ ಬೆಲೆ ನಿಗದಿಯ ಬಗ್ಗೆ ಇತ್ತಂಡಗಳಿಗೂ ಸಾಕಷ್ಟು ಅಸಮಧಾನ ಹೊಗೆಯಾಡುತ್ತಲೇ ಇರುವುದನ್ನು ಗಮನಿಸ ಬಹುದಾಗಿತ್ತು. ಬೆಳ್ಳಿ ಬಣ್ಣದಲ್ಲಿ ಎಳೆ ಸೂರ್ಯನ ನವಿರು ಬಿಸಿಲಿಗೆ ಹೊಳೆಯುತ್ತಾ ಇರುತ್ತಿದ್ದ ಮಿರಿಮಿರಿ ಮಿಂಚುವ ಬೂತಾಯಿ, ಬಂಗುಡೆ, ಕಾಣೆ, ಅಂಜಲ್ ಹೀಗೆ ಥರೆವಾರಿ ಮೀನನ್ನು ಅಳೆದೂ ಸುರಿದು ಸಾಬರು ಹೆಂಗಸರ ಅಗಲ ಬಾಯಿಯ ಮಡಿಕೆಗೆ ದಾಟಿಸುವಾಗ ಅದನ್ನೊಂದು ತೀರ ನಿಷ್ಕೃಷ್ಟ ವಸ್ತುವನ್ನ ನೋಡುವಂತೆ ಸೋಗುಹಾಕುತ್ತಾ ತಮಗೆ ಇನ್ನೂ ಬೆಲೆಯಲ್ಲಿ ಭಾರಿ ಅನ್ಯಾಯವೇ ಆಗಿ ಹೋಗಿದೆ ಎನ್ನುವ ಮುಖಭಾವ ಹೊತ್ತು ಈ ಸನ್ಮಾನ್ಯ ಗೃಹಿಣಿಯರು ತಮ್ಮ ಗಡಿಗೆಗೆ ಮೀನು ಹಾಕಿಸಿಕೊಳ್ಳುತ್ತಿದ್ದರು. ಅವರ ಗ್ರಾಹಕ ಬಾಂಧವರ ಈ ಅಕಾಲ ಸಾಸಾರದ ದೃಷ್ಟಿಯ ರಹಸ್ಯ ಬಲ್ಲ ಲಬ್ಬೆ ಸಾಬಾರು ನಿಗದಿ ಪಡಿಸಿದ್ದಕ್ಕಿಂತ ಒಂದು ಮೀನು ಹೆಚ್ಚು ಕೇಳಿದರೂ ಆಕ್ಷೇಪದ ಧ್ವನಿ ಎಬ್ಬಿಸುತ್ತ ತಮ್ಮ ತುಳುಗನ್ನಡ ದಲ್ಲಿ ವ್ಯಾಪಾರ ಮುಗಿಸಿ. ಸ್ಥಳದಲ್ಲೇ ಕೊಟ್ಟವರಿಂದ ಹಣವನ್ನ ಪಡೆದು, ಸಾಲ ಹೇಳಿದವರಿಂದ ಲೆಕ್ಖಕ್ಕೆ ಬರೆದು ಕೊಂಡು, ಊರಿಂದ ನೆಂಟರು ಬರಲಿದ್ದ ಮನೆಯ ಯಜಮಾಂತಿಯನ್ನ ಒತ್ತಾಯಿಸಿ ನಾಲ್ಕು ಮೀನನ್ನ ಅವಳಿಗೂ ಮಾರಿ, ದೂರದ ಊರಲ್ಲಿ ಓದಲು ಹೋಗಿದ್ದ ಮಗ ಮನೆಗೆ ಬಂದದ್ದು ಕಣ್ಣಿಗೆ ಬಿದ್ದರೆ ಅವನ ಹೆಸರು ಹೇಳಿ ಅವನಮ್ಮನಿಗೆ ಮೀನನ್ನು ಶತಾಯಗತಾಯ ಮಾರಿ ಅಂತೂ ತಮ್ಮ ಸೈಕಲ್ಲಿನ ಕ್ಯಾರಿಯರಿಗೆ ಕಟ್ಟಿರುತ್ತಿದ್ದ ತಮ್ಮ ಮೀನು ಬುಟ್ಟಿಯನ್ನ ಖಾಲಿಗೊಳಿಸಿಯೆ ರಂಗಸ್ಥಳದಿಂದ ನಿರ್ಗಮಿಸುತ್ತಿದ್ದರು. 'ನೀ ಬಿಡೆ ನಾಕೊಡೆ' ಶೈಲಿಯಲ್ಲಿ ನಡೆಯುತ್ತಿದ್ದ ಈ ಚೌಕಾಸಿ ಆಮೇಲೆ ಸಾಬರು ಮೂರು ಕಾಸು ಕಡಿಮೆ ಕೊಟ್ಟ ಹಾಗೆ ಮಾಡಿ, ಹೆಂಗಸರೆಲ್ಲ ಆರು ಕಾಸಿಗೆನೆ ಕೊಂಡಂತೆ ದಿಗ್ವಿಜಯದ ಗೆಲುವಿನ ಮುಗುಳ್ನಗೆ ಬೀರುವಂತೆ ಮಾಡುವಲ್ಲಿ ಪರಿ ಸಮಾಪ್ತಿಗೊಳಿಸುತ್ತಿದ್ದರು! ಈ ದಿನ ಬಿಟ್ಟು ದಿನ ನಡೆಯುತ್ತಿದ್ದ ಪುಕ್ಕಟೆ ನಾಟಕವನ್ನು ನಾನು ಬಾಲ್ಯದುದ್ದಕ್ಕೂ ನೋಡಿ ಆನಂದಿಸಿದ್ದೇನೆ! ಒಂದು ವೇಳೆ ಕಾರಣಾಂತರಗಳಿಂದ ಸಾಬರ ಸವಾರಿ ನಮ್ಮ ಬೀದಿಗೆ ಒಂದೆರಡು ದಿನ ಬರದಿದ್ದರೆ ನನ್ನ ಮನರಂಜನೆಗೆ ಭಾರಿ ಅನ್ಯಾಯವಾದಂತೆ ಪರಿತಪಿಸುತ್ತಿದ್ದೆ. ಮುಂಜಾನೆ ಸೂರ್ಯ ಹುಟ್ಟುವ ಮೊದಲೆ ಮೀನು ಮಾರ್ಕೆಟ್ಟಿನಿಂದ ಮೀನನ್ನ ಹೊತ್ತು ತಂದು. ಈ ಚಿಲ್ಲರೆ ಚೌಕಾಸಿ ವ್ಯಾಪಾರವನ್ನ ಅಷ್ಟೊಂದು ಜಗಳದ ಧಾಟಿಯಲ್ಲಿ ಮಾಡಿ ಸಾಬರಿಗೆ ಆಗುತ್ತಿದ್ದ ಲಾಭವಾದರೂ ಎಷ್ಟು? ಅನ್ನೋದು ಒಂದು ಚಿದಂಬರ ರಹಸ್ಯವಾಗಿಯೇ ಉಳಿದಿದೆ. ಆದರೂ ಸಾಬರ ಕರ್ಮಣ್ಯೇ ವಾಧಿಕಾರಸ್ತೆ ಎನ್ನುವಂತಿದ್ದ ರಸ್ತೆ ವ್ಯಾಪಾರದಲ್ಲಿ ಒಂದು ಶ್ರಮ ಜೀವಿಯ ಜೀವನಾಸಕ್ತಿಯನ್ನ ಕಂಡಿದ್ದೇನೆ. ವ್ಯಾಪಾರ ಮುಗಿಸಿ ನಮ್ಮ ಮನೆಯ ಎದುರಿನ ಖಾಲಿ ಸೈಟಿನ ಬಳಿ ತಮ್ಮ ಸೈಕಲ್ಲನ್ನ ನಿಲ್ಲಿಸಿದ ನಂತರ ಸಾಬರು ಅದನ್ನ ಸ್ವಚ್ಛ ಗೊಳಿಸಲು ಅಮ್ಮನ ಹತ್ತಿರ ನಮ್ರ ಧ್ವನಿಯಲ್ಲಿ ನೀರನ್ನ ಬೇಡುತ್ತಿದ್ದರು. ಅವರ ಬೇಡಿಕೆ ಏನೆಂದು ಗೊತ್ತಿದ್ದ ನಾನು ಅಮ್ಮನ ಆಜ್ಞೆ ಕಿವಿ ತಲುಪುವ ಮೊದಲೆ ಹಿತ್ತಲಲ್ಲಿದ್ದ ಕೊಟ್ಟಿಗೆಯ ಕೊಡಪಾನದಲ್ಲಿ ನೀರನ್ನ ಹೊತ್ತು ತಂದು ಎತ್ತಿ ಅವರ ಕೈಗೆ ಸುರಿಯುತ್ತಿದ್ದೆ. ಸೈಕಲ್ ಟ್ಯೂಬುಗಳಿಂದ ಕ್ಯಾರಿಯರಿಗೆ ಕಟ್ಟಿರುತ್ತಿದ್ದ ಮೀನು ಬುಟ್ಟಿಯ ಕೆಳಸಂದಿಯಲ್ಲೆಲ್ಲೋ ಅವರು ಹುದುಗಿಸಿಡುತ್ತಿದ್ದ "ಲೈಫ್ ಬಾಯ್" ಸೋಪಿನ ತುಂಡಿನಿಂದ ತಮ್ಮ ಮೊಣಗೈಯಿಯವರೆಗೂ ಅವರು ತೋಳೇರಿಸಿ ಕೈ ಸ್ವಚ್ಛ ಗೊಳಿಸಿಕೊಂಡ ನಂತರ ಅದೆ ಕೊಡಪಾನದಲ್ಲಿ ಉಳಿದ ನೀರನ್ನ ತಮ್ಮ ಬುಟ್ಟಿಗೂ ಅಷ್ಟು ಸುರಿದು ಇಡಿ ಸೈಕಲ್ಲನ್ನೆ ಅಡ್ಡ ಬಗ್ಗಿಸಿದ ಹಾಗೆ ಮಾಡಿ ಆ ನೀರನ್ನೆಲ್ಲ ಚರಂಡಿಗೆ ಹರಿಯ ಬಿಡುತ್ತಿದ್ದರು. ಆಶ್ಚರ್ಯಕರವಾಗಿ ಅವರು ಬಲವಾಗಿ ಕ್ಯಾರಿಯರಿಗೆ ಬಿಗಿದಿರುತ್ತಿದ್ದ ಮೀನು ಬುಟ್ಟಿ ಸೈಕಲ್ಲನ್ನ ಅಷ್ಟು ತಗ್ಗಿಸಿದರೂ ಕಳಚಿಕೊಂಡು ಬೀಳುತ್ತಿರಲಿಲ್ಲ! ಇದಾದ ನಂತರ ಅವರ ಸವಾರಿ ನಮ್ಮ ಅಂಗಳಕ್ಕೆ ಬರುತ್ತಿತ್ತು ದಣಪೆಯ ಹತ್ತಿರದ ಕಲ್ಲಿನ ಮೆಟ್ಟಿಲಿನ ಮೇಲಷ್ಟೇ ಕೂರುತ್ತಿದ್ದ ಸಾಬರು ಒಂದೇ ಒಂದು ದಿನವೂ ನಮ್ಮ ಹೊಸಿಲು ತುಳಿದು ಮನೆಯ ಒಳಗೆ ಬಂದ ನೆನಪು ನನಗಿಲ್ಲ. ಅಮ್ಮ ಹಾಗೂ ಇದ್ದರೆ ಅಜ್ಜನ ನಡುವೆ ಸುಮಾರು ಅರ್ಧ ಘಂಟೆ ಶುದ್ಧ ತುಳುವಿನಲ್ಲಿ ಅವರ ಹರಟೆ ಸಾಗುತ್ತಿತ್ತು. ಅವರ ಊರು ಉಳ್ಳಾಲದ ಹತ್ತಿರ ಎಲ್ಲೋ ಅಂತೆ. ನಮ್ಮ ಅಜ್ಜನಂತೆ ಅವರೂ ಅನ್ನ ಅರಸಿ ಕೊಂಡು ತೀರ್ಥಹಳ್ಳಿಗೆ ವಲಸೆ ಬಂದವರೆ ಆಗಿದ್ದರಿಂದ ಬಹುಷಃ ಅಜ್ಜನ ಬಳಿ ಮಾತನಾಡುವಾಗ ಅವರಿಗೆ ತನ್ನ ಊರಿಗೆ ಹೋದಂತಾಗಿ ಮಾತಿನಲ್ಲಿ ಆತ್ಮೀಯತೆ ಒಸರುತ್ತಿತ್ತು ಅನ್ನಿಸುತ್ತೆ. ಒಂದು ಲಂಗೋಟಿ ಮಾತ್ರ ಕಟ್ಟಿ ಕೊಂಡು ತಮ್ಮ ಎಣ್ಣೆ ಮಾಲೀಸಿನ ನಂತರ ತಾವೆ ನೆಟ್ಟ ಗಿಡಗಂಟಿಗಳ ಯೋಗಕ್ಷೇಮ ವಿಚಾರಣೆಯಲ್ಲಿ ಮಗ್ನರಾಗಿರುವಂತೆಯೆ ಅಜ್ಜನ ಅವ್ಯಾಹತ ಹರಟೆ ಸಾಬರೊಂದಿಗೆ ಸಾಗುತ್ತಿತ್ತು. ಅಜ್ಜ ಗಿಡದ ಪಾತಿ ಮಾಡುತ್ತಾ ಮೋಟು ಬೀಡಿ ಎಳೆಯುತ್ತಾ ಎಳೆ ಬಿಸಿಲಲ್ಲಿ ಕುಕ್ಕುರುಗಾಲಲ್ಲಿ ಕೂತ ಸಾಬರೊಂದಿಗೆ ಹರಟುತ್ತಿರುವ ಆ ಸ್ಥಿರ ದೃಶ್ಯವನ್ನ ನನಗೆ ಎಂದೂ ಮರೆಯಲಾಗದು. ನಡುನಡುವೆ ಆಜ್ಜನ ಅಪರೂಪದ ನಶ್ಯ ಸೇವನೆ ನಡೆದು ಬೀಡಿ ಪ್ರಿಯ ಸಾಬರಿಗೂ ಅದು ಚೂರು ಸಂದಾಯವಾಗುತ್ತಿತ್ತು. ನಮ್ಮ ಅಂಗಳದಲ್ಲಿ ಹರಟೆಯನ್ನೂ ಮುಗಿಸಿದ ವ್ಯಾಪಾರ ಮುಗಿದ ಸಾಬರ ಸವಾರಿ ಮನೆ ಸೇರಲು ನಟಿಕೆಯ ಸದ್ದು ಮೂಡಿಸುತ್ತ ಕಾಲನ್ನ ಎತ್ತಿಡುವ ಮೊದಲು ಅಮ್ಮ ನನ್ನ ಮೂಲಕ ಅವರಿಗೊಂದು ಕಪ್ಪು ಚಾ ಕಳಿಸಿ ಕೊಡುತ್ತಿದ್ದರು. ತುಂಬು ಕೃತಜ್ಞತೆಯಿಂದ ಸಾಬರು ಈ ಹಬೆಯಾಡುವ ಚಾವನ್ನ ಚುಮುಚುಮು ಚಳಿಯಲ್ಲಿ ಅರೆಮುಚ್ಚಿದ ಸಂತೃಪ್ತ ಕಣ್ಣುಗಳಲ್ಲಿ ಆನಂದಿಸುವಾಗ ಅವರ ಗಂಟಲಿನ ಮಣಿಗಳು ಲಯಬದ್ಧವಾಗಿ ಏರಿಳಿಯುವುದನ್ನ ನಾನು ಕಾಣುತ್ತಿದ್ದೆ. ನನಗೆ ಸಾಬರ ಚರ್ಯೆಗೂ ನನ್ನಜ್ಜನ ಚರ್ಯೆಗೂ ಹೆಚ್ಚು ವ್ಯತ್ಯಾಸ ಕಂಡೆ ಇಲ್ಲ. ಇಂತಹದ್ದೇ ಇನ್ನೊಬ್ಬ ಅಗೋಚರ ಬಾಂಧವರಾಗಿ ನಮ್ಮಲ್ಲಿಗೆ ಬರುತ್ತಿದ್ದ ಇನ್ನೊಬ್ಬ ಸಾಬರೆಂದರೆ "ಗುಜುರಿ ಸಾಬರು". ಮೀನು ಸಾಬರಿಗೆ ತಲೆಗೆ ಬಲೆಬಲೆ ಟೋಪಿಯಿದ್ದರೆ, ಗುಜುರಿ ಸಾಬರು ಒಂದು ಬಿಳಿ ಬೈರಾಸಿನಂತದ್ದನ್ನು ತಮ್ಮ ತಲೆಗೆ ಮುಂಡಾಸಿನಂತೆ ಕಟ್ಟಿ ಕೊಂಡಿರುತ್ತಿದ್ದರು. ಉಳಿದಂತೆ ಅವರ ವಸ್ತ್ರ ಸಂಹಿತೆ ಒಂದೆ ತೆರನಾಗಿತ್ತು. ನಾನು ನೋಡುವಾಗಲೆ ಇದ್ದ ಬದ್ದ ಹಲ್ಲೆಲ್ಲ ಉದುರಿ ಬೊಚ್ಚು ಬಾಯಿ ಬಿಟ್ಟು ನಗುತ್ತಿದ್ದ ಗುಜುರಿ ಸಾಬರ ಚೌಕಾಸಿಯ ವ್ಯಾಪಾರ ಅವರ ಅಸ್ಪಷ್ಟ ಮಾತುಗಳಿಂದ ನಮಗ್ಯಾರಿಗೂ ಅರ್ಥವೇ ಆಗದಿದ್ದರೂ ಅಜ್ಜನೊಂದಿಗಿನ ತುಳು ಹರಟೆಗೆ ಅವರು ಕಾತರಿಸುತ್ತಿದ್ದರು ಅನ್ನೋದು ನೆನಪು. ಇಂದು ಗುಜುರಿ ಸಾಬರಾಗಲಿ- ಮೀನು ಸಾಬರಾಗಲಿ ಬದುಕಿರುವಂತಿಲ್ಲ. ಈಗೆಲ್ಲ ಯಾರೂ ಮನೆಯ ಬಾಗಿಲಿಗೆ ಮೀನು ಮಾರಲು ಬರೋದಿಲ್ಲ ಅಂತ ಕಳೆದ ಬಾರಿ ಊರಿಗೆ ಹೋಗಿದ್ದಾಗ ಬೋಜ ಶೆಟ್ಟರ ಮನೆಯಾಕೆ ರಾಜೀವಕ್ಕ ಹೇಳುತ್ತಿದ್ದರು. ಸೂಪರ್ ಬಜಾರ್ ಈಗಾಗಲೆ ಕಣ್ಣು ಬಿಟ್ಟಿರುವ ತೀರ್ಥಹಳ್ಳಿಗೂ ಮಾಲ್ ಸಂಸ್ಕೃತಿ ಲಗ್ಗೆಯಿಡುವ ದಿನ ಖಂಡಿತ ದೂರವಿಲ್ಲ. ಚೌಕಾಸಿಯಿರಲಿ ಟಿಪ್ಸ್ ಕೊಟ್ಟು ತಮ್ಮ ಸಾಮಾನನ್ನ ತಾವೆ ಅಲ್ಲಿಂದ ಹೊತ್ತು ತರುವ ಹೊಸ ಪೀಳಿಗೆ ಅಲ್ಲೆಲ್ಲ ಆವರಿಸಿ ಕೊಳ್ಳಬಹುದೇನೋ. ವಿದೇಶಿ ನೇರ ಹೂಡಿಕೆಯ ದುಷ್ಪರಿಣಾಮಗಳನ್ನೆ ಎಲ್ಲಾ ಆಂಗ್ಲ ವಾರ್ತಾವಾಹಿನಿಗಳು- ವೃತ್ತ ಪತ್ರಿಕೆಗಳು ಎಡೆಬಿಡದೆ ಚರ್ಚಿಸುತ್ತಿರುವಾಗ ಈ ಹಳೆಯ " ನೇರ ವ್ಯಾಪಾರ"ದ ರಸವತ್ತಾದ ಹಳವಂಡಗಳೆಲ್ಲ ಆಯಾಚಿತವಾಗಿ ನೆನಪಿಗೆ ಬಂದವು. ಎಲ್ಲೋ ಹೊಸತರ ನಡುವೆ ಹಳೆಯ ಮಾನವೀಯ ಸಂಬಂಧಗಳು ಸಡಿಲವಾಗಿ ಕೇವಲ ವ್ಯಾಪಾರಿ ದುರಾಸೆಯೆ ನಮ್ಮನ್ನ ಆವರಿಸಿ ಕೊಳ್ಳುತ್ತಿರೋದನ್ನ ನೋಡುವಾಗ ನಿಜವಾಗಿಯೂ ವಿಷಾದವಾಗುತ್ತದೆ.

ಈ ನೆಲದ ಇಸ್ಲಾಂ ಕುರಿತ ನನ್ನ ಅಪೇಕ್ಷೆಗಳು....

ಮುಸಲ್ಮಾನ್ ಆಳು ದೊರೆಗಳಿಂದ ಭಾರತೀಯ ಉಪಖಂಡದ ನಿಯಂತ್ರಣ ನೇರವಾಗಿ ಬ್ರಿಟಿಶ್ ರಾಣಿಯ ಕೈ ಸೇರಿ ಅನಂತರ ಭಾರತೀಯರ ಸ್ವಂತ ಸರಕಾರಕ್ಕೆ ಅಧಿಕಾರ ಹಸ್ತಾಂತರ ವಾಗುವ ಹೊತ್ತಿಗಾಗಲೇ ಉನ್ನತ ಆಡಳಿತ ವಲಯದಲ್ಲೀ "ಇಸ್ಲಾಂ ಲಾಬಿ" ದುರ್ಬಲಗೊಂಡು ಪೇಲವವಾಗಿತ್ತು. ಆಳುವ ವರ್ಗವಾಗಿದ್ದ ತಾವು ಸ್ವತಂತ್ರ ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಪಾಲಿಗೆ ಕಾಲ ಕಸವಾಗುತ್ತೇವೆ ಎನ್ನುವ ಪೂರ್ವಾಗ್ರಹವನ್ನ ಮುಸ್ಲಿಂ ಸಮುದಾಯದಲ್ಲಿ ಅದರ ಧರ್ಮಾಂದ ಮೌಲ್ವಿಗಳು ಬೆಳೆಸಿದ್ದರು. ಇದರ ಅಸಲಿಯತ್ತನ್ನ ನನ್ನ ಮುಸಲ್ಮಾನ ಸ್ನೇಹಿತರು ಬಲವಾಗಿ ಅಲ್ಲಗೆ;ಲೆಯುತ್ತರಾದರೂ ನಾನವರಿಗೆ ಅದನ್ನ ಸಶಕ್ತ ಉದಾಹಾರನೆಯೊಂದಿಗೆ ಮನದಟ್ಟು ಮಾಡಿಸಲು ಯತ್ನಿಸಬಲ್ಲೆ. ಮಲಬಾರಿನಾದ್ಯಂತ 1920 ರಲ್ಲಿ ನಡೆದ "ಮಾಪಿಳ್ಳಾ ದಂಗೆ"ಗೆ, ಅದರ ಬರ್ಬರತೆಗೆ- ಆಗ ನಡೆದ ಒತಾಯದ ಸಾಮೂಹಿಕ ಮತಾಂತರಗಳಿಗೆ ಇದೆ ಸುಶುಪ್ತ ವ್ಯಗ್ರತೆಯೇ ನೇರ ಕಾರಣ. ಈ ಒಂದು ಪ್ರಕರಣ ಮುಂದೆ ಮಾಡಿದ ಅನಾಹುತ ಅಪಾರ. ಬ್ರಿಟಿಷರಿಗೂ ಅದೇ ಬೇಕಿತ್ತು! ಸ್ವತಂತ್ರ ಭಾರತವನ್ನ ಪರೋಕ್ಷವಾಗಿ ನಿಯಂತ್ರಿಸಲು ಹಾಗೂ ಸೋವಿಯತ್ ಸಾಮ್ರಾಜ್ಯಶಾಹಿಯನ್ನ ಏಷ್ಯಾದಲ್ಲಿ ವಿಸ್ತರಿಸದಂತೆ ತಡೆಯಲು ಅದಕ್ಕೊಂದು "ಮೆತ್ತೆ ರಾಷ್ಟ್ರ" (ಬಫರ್ ಸ್ಟೇಟ್ ) ಡ ಅಗತ್ಯವಿತ್ತು. ಈ ತೆರೆ ಮರೆಯ ಕಾರಣಕ್ಕೆ ನಮ್ಮ ದೇಶದ ಮುಸ್ಲಿಂ ಸಮುದಾಯದ ಒಡಕು ತುಪ್ಪ ಎರೆಯಿತು. ದೇಶ ಇಬ್ಭಾಗವಾಯಿತು. ಮೊಘಲ್ ಸಾಮ್ರಾಜ್ಯ ಅಳಿದ ನಂತರವೂ ದೇಶದಾದ್ಯಂತ ಕಿರು ಮುಸ್ಲಿಂ ಪಾಳೆಪಟ್ಟುಗಳು ಉಳಿದು ಹೋಗಿದ್ದವಲ್ಲ. ಹೀಗೆ ಉಳಿದಿದ್ದ ಶಾಹಿ ಮನೆತನಗಳ ದಖನ್ ಹುಕೂಮತ್ತು, ಆರ್ಕಾಟಿನ ನವಾಬಗಿರಿ, ಢಾಕಾ ನವಾಬಗಿರಿ, ಜುನಾಘಡದ ನವಾಬಗಿರಿ, ಅವಧದ ನವಾಬಗಿರಿ, ಹಿಸ್ಸಾರಿನ ನವಾಬಗಿರಿ, ಭೂಪಾಲದ ನವಾಬಗಿರಿ ಹೀಗೆ ಅಲ್ಲಲ್ಲಿ ಮುಸ್ಲಿಂ ಪಾಳೆಪಟ್ಟು ಸಕ್ರಿಯವಾಗಿತ್ತು. ಅದಾಗಲಷ್ಟೆ ಯುರೋಪಿಯನ್ನರ ಕಿರುಕುಳದ ವಿರುದ್ಧ ಸೆಟೆದು ನಿಲ್ಲಲು ಆರಂಭಿಸಿದ್ದ,ಭಾರತೀಯ ಯುವಮನಸ್ಸುಗಳಲ್ಲಿ ಧರ್ಮಾತೀತವಾಗಿ ಮೂಡಿದ್ದ ರಾಷ್ಟ್ರೀಯತೆಯ ಸ್ಪಷ್ಟ ಮನೋಭಾವ ತಾತ್ಕಾಲಿಕ ಐಕ್ಯತೆಯ ಆಶಾಭಾವ ಮೂಡಿಸಿದ್ದು ಹೌದಾದರೂ. ಒಡೆದು ಆಳುವುದರಲ್ಲಿ ನಿಸ್ಸೀಮರಾದ ಬ್ರಿಟೀಷರು ಇತ್ತಂಡಗಳಲ್ಲಿ ಸುಶುಪ್ತವಾಗಿದ್ದ ಧಾರ್ಮಿಕ ಅಸಹನೆಯನ್ನ ಪ್ರಚೋದಿಸಿದ ಪರಿಣಾಮ ಭಾರತದಲ್ಲಿ ಕೋಮು ಸಮರಗಳ ಸರಣಿಯೆ ನಡೆದುಹೋದವು- ದುರಾದೃಷ್ಟವಶಾತ್ ಇಂದೂ ಎಗ್ಗುಸಿಗ್ಗಿಲ್ಲದೆ ಅದು ನಡೆಯುತ್ತಲೆ ಇವೆ. ಇದರ ದೊಡ್ಡ ಆಘಾತವೆಂದರೆ ಧರ್ಮದ ಹೆಸರಿನಲ್ಲಿ ಆದ ದೇಶದ ವಿಭಜನೆ. ಅದರ ಪಾಶ್ಚಾತ್ ಪರಿಣಾಮಗಳು ಇಂದೂ ಸಹ ದೇಶದ ನೆಮ್ಮದಿಯನ್ನ ಆಗಾಗ ಕದಡುತ್ತಲೆ ಇವೆ. ಭಾರತೀಯ ಮುಸ್ಲೀಮರಲ್ಲಿ ಶೇಕಡಾ ಐದು ಭಾಗ ಅರಬ್ಬಿ ಬುಡಕಟ್ಟು ಮೂಲದ ಶುದ್ಧರಕ್ತದವರಾಗಿದ್ದರೆ ಉಳಿದವರೆಲ್ಲರೂ ಕಾರಣಾಂತರದಿಂದ ಮತಾಂತರವಾದ ಸನಾತನಧರ್ಮ ಮೂಲದವರೆ ಅನ್ನುವುದು ಸ್ಪಷ್ಟ. ಇದು ಆಯ್ಕೆಯ ಅವರೆಲ್ಲರ ಮತಾಂತರವಾಗಿತ್ತು ಎನ್ನುವ ಇಂದಿನ ಸೋ-ಕಾಲ್ಡ್ ಬುದ್ಧಿಜೀವಿಗಳ ಬುಡಭದ್ರವಿಲ್ಲದ ವಾದಸರಣಿ ಹಾಸ್ಯಾಸ್ಪದ. ಸಮಾಜದ ಮೇಲುವರ್ಗಗಳಲ್ಲಿ ಅಧಿಕಾರದ ಆಸೆಗಾಗಿ ವಿರಳವಾಗಿ ಇದಾಗಿರಬಹುದೇನೋ, ಆದರೆ ಕೆಳವರ್ಗದ ಮಂದಿಗೆ ಅಂತಹ ಯಾವುದೆ ಆಕರ್ಷಣೆಗಳಿರಲಿಲ್ಲ. ಅಲ್ಲದೆ ಶ್ರೇಣೀಕೃತ ವ್ಯವಸ್ಥೆಗೆ ಇತ್ತೀಚಿನವರೆಗೂ ಇದ್ದ ಸಾಮಾಜಿಕ ಸಮ್ಮತಿಯ ಹಿನ್ನೆಲೆಯಲ್ಲಿ ; ಹಿಂದೂ ಜಾತಿಭೇದ ಈ ಪರಿ ಮತಾಂತರಕ್ಕೆ ಪ್ರೋತ್ಸಾಹಿಸಿತು ಅನ್ನುವುದೂ ಕೂಡ ದುರ್ಬಲ ಪೊಳ್ಳುವಾದವೆ ಸರಿ. ಒಮ್ಮೆ ಧರ್ಮಭ್ರಷ್ಟನಾದರೆ ಸಾಕು ಅವನನ್ನ ಹೀನಾಯವಾಗಿ ಕಾಣುವ ಹಾಗೂ ಮರಳಿ ಮಾತೃಧರ್ಮಕ್ಕೆ ಪ್ರವೇಶ ನಿರಾಕರಿಸುವ ಹಿಂದೂ ಸನಾತನ ಧರ್ಮದ ವಿಲಕ್ಷಣತೆಯೆ ಅದರ ಅನೇಕ ಅನುಯಾಯಿಗಳನ್ನ ಕಾಲಕ್ರಮದಲ್ಲಿ ಇಸ್ಲಾಂ ಹಾಗೂ ಕ್ರೈಸ್ತ ಮತಗಳಿಗೆ ಶರತ್ತಿಲ್ಲದೆ ಧಾರೆ ಎರೆದು ಕೊಟ್ಟಿದೆ! ಗೋವೆಯ ಪೋರ್ಚಗೀಸ್ ಪ್ರೇರಿತ ಮತಾಂತರಗಳು ಹಾಗೂ ಮೇಲೆ ಹೇಳಿದ ಮಲಬಾರ್ ದಂಗೆಯ ಸಮಯದಲ್ಲಾದ ಒತ್ತಾಯದ ಮತಾಂತರಗಳು ಇದಕ್ಕೆ ಉತ್ತಮ ಉದಾಹಾರಣೆ. ತನ್ನ ಇಚ್ಚೆಯ ವಿರುದ್ಧವಾಗಿದ್ದರೂ ಸಹ ಒಮ್ಮೆ ಮತಭ್ರಷ್ಟನಾಗಿ ಅದರ ಮರುಕ್ಷಣ ತನ್ನದೇ ಕುಲ ಬಾಂಧವರಿಂದ ಹೀನಾಯವಾಗಿ ನಡೆಸಲ್ಪಟ್ಟ ನವ ಮತಾನ್ತರಿಯ ಮನಸು ಸಹಜವಾಗಿ ಕುದಿಯುತ್ತದೆ. ತನ್ನದಲ್ಲದ ತಪ್ಪಿಗೆ ಹುಟ್ಟುವ ಅಸಹಾಯಕತೆಗೆ ಆತ ತನ್ನ ಪೂರ್ವಧರ್ಮವನ್ನ ದ್ವೇಷಿಸುತ್ತಾನೆ ಜೊತೆಗೆ ನವ ಧರ್ಮವನ್ನ ಅಗತ್ಯಕ್ಕಿಂತ ಹೆಚ್ಚು ಕರ್ಮಠನಾಗಿ ಆಚರಿಸುತ್ತಾನೆ. ಭಾರತೀಯ ಮುಸ್ಲೀಮರ ಮೂಲಭೂತ ಸಮಸ್ಯೆಯೂ ಇದೆ ತಾನೆ? ಅಂದರೆ ಈ ನೆಲದ ಹಿಂದೂಯೇತರ ಧರ್ಮೀಯರ ಧಾರ್ಮಿಕ ಸಭ್ಯತೆ ಈ ಮತಾಂತರಗಳ ಮೂಲಕ ಬದಲಾಗಿದೆಯೆ ಹೊರತು ಅವರ ಭಾರತೀಯ ಸಂಸ್ಕೃತಿಯಲ್ಲ. ಅವರ ಧಾರ್ಮಿಕ ಶ್ರದ್ಧೆ ಅದೇನೆ ಇದ್ದರೂ, ಅವರೂ ಸನಾತನ ಧರ್ಮೀಯರಂತೆ ಇಲ್ಲಿನ ಎಲ್ಲಾ ಹಕ್ಕು- ಭಾದ್ಯತೆಗಳಿಗೆ ಕಟ್ಟು ಬದ್ಧರಾಗಿರಲೇಬೇಕು. ಅವರ ರಕ್ತದಲ್ಲಿ- ವಂಶವಾಹಿಗಳಲ್ಲಿ ಭಾರತೀಯತೆ ಸುಶುಪ್ತವಾಗಿ ಇರುವ ತನಕ ಬಾಹ್ಯ ಭೂಷಣ-ಆಹಾರಗಳಲ್ಲಿ ಇನ್ಯಾವುದೊ ದೇಶದವರನ್ನ ಅನುಕರಿಸುವುದು ಕೇವಲ ನಕಲಿ ಛದ್ಮವೇಷದಂತೆ ಕಾಣಿಸುತ್ತದೆ. ಭಾರತೀಯ ಮುಸ್ಲೀಮರು ಅದನ್ನು ಅರಿತುಕೊಂಡು ಪುಂಡ ಧರ್ಮಭೋದಕರ ಹಾಗೂ ಸ್ವಾರ್ಥಿ ರಾಜಕಾರಣಿಗಳ ಹುನ್ನಾರಕ್ಕೆ ಬಲಿಯಾಗಬಾರದು. ಅಲ್ಲದೆ ಈ ನಡುವೆ "ವಹಾಬಿ ಧರ್ಮಾಂಧತೆ"ಯ ಮಾರಿ ಭಾರತವನ್ನ ಆಂತರಿಕವಾಗಿ ಕೊರೆಯುತ್ತಿದೆ. ಶುದ್ಧ ಇಸ್ಲಾಂ(?) ಪ್ರತಿಪಾದಿಸುವ ಸೌದಿ ದೊರೆಗಳ "ತೈಲ ಧನ" ಪ್ರಾಯೋಜಿತ "ವಹಾಬಿ ಪಂಥ"ದ ಹಗಲು ಕಂಡ ಬಾವಿಗೆ ಭಾರತೀಯ ಮುಸ್ಲೀಮರು ಹಗಲೇ ಬೀಳುತ್ತಿರುವುದು ಮಾತ್ರ ದಿಗಿಲು ಹುಟ್ಟಿಸುವಂತಿದೆ. "ಭಾರತದಲ್ಲಿ ನಮಗೆ ಅಲ್ಲಾ ಬೇಕು ;ಆದರೆ ಮುಲ್ಲಾ ಅಲ್ಲ!". ಅರಬ್ ಜಗತ್ತಿನಲ್ಲಿಯೂ ಇಲ್ಲದ ಭಾರತೀಯ ಇಸ್ಲಾಮಿನ ಕೆಟ್ಟ ಉಪಲಬ್ಡಿ ಈ ಮುಲ್ಲಾಗಳು. ಮತ ಪಾಂಡಿತ್ಯದ ಸೋಗು ಹಾಕುತ್ತಾ ಮೂಲ ಇಸ್ಲಾಮಿನ ವ್ಯಾಖ್ಯೆಯನ್ನ ತಿರುಚಿ ವಾಸ್ತವ ಜಗತ್ತಿನಿಂದ ಧರ್ಮಾನುಯಾಯಿಗಳನ್ನ ವಂಚಿಸುವ ಈ ಧರ್ಮಾಂಧರ ದೆಸೆಯಿಂದ ತಲೆಮಾರುಗಳ ಹಿಂದೆ ಧರ್ಮಾಂತರವಾದ ಭಾರತೀಯ ಮುಸ್ಲಿಂ ಮನಸ್ಸುಗಳು ಇಬ್ಬಂದಿತನದಲ್ಲಿ ಸಿಲುಕಿ ಒದ್ದಾಡುವಂತಾಗುತ್ತಿದೆ. 'ದೀನ್ ಮೇ ಧಾಡಿ ಹೈ...ಪರ್ ಧಾಡಿ ಮೇ ದೀನ್ ನಹಿ!' ಎನ್ನುವುದು ಭಾರತೀಯ ಮುಸ್ಲಿಂ ಬಾಂಧವರಿಗೆ ಅರ್ಥವಾಗಬೇಕು. ಅಲ್ಲೊಬ್ಬ ಗೋಮುಖ ವ್ಯಾಘ್ರ ಕಸಾಯಿ ಎಸಿ ರೂಮಿನಲ್ಲಿ ಕುಳಿತು ಸದ್ಭಾವನೆಗಾಗಿ ಉಪಾವಾಸ ಮಾಡುವುದು ಈ ಸಮಾಜದ ಸ್ವಾಸ್ಥ್ಯಕ್ಕೆ ಎಷ್ಟು ಅಪಾಯಕಾರಿಯೊ, ಅಷ್ಟೆ ಅಪಾಯ ಕೇವಲ ಬಾಹ್ಯ ತೋರಿಕೆಯ ಧರ್ಮ ಭೋದಿಸುವ ಮುಲ್ಲಾಗಳಿಂದಲೂ ಕಟ್ಟಿಟ್ಟಿದೆ. ಅಷ್ಟಕ್ಕೂ ಮಹಮದ್ ಪೈಗಂಬರ್ ಭೋಧನೆಗಳು ಅರೇಬಿಯಾ ಮರಳುಗಾಡಿನ ಆಕಾಲದ ಖುರೈಶಿ ಬುಡಕಟ್ಟುಗಳ ಆಚರಣೆಗೆ ಅನುಸಾರವಾಗಿತ್ತು. ಅಲ್ಲಿನ ದೈನಂದಿನ ಕಟ್ಟು-ಕಟ್ಟಳೆಗಳು ಭಾರತದ ಮಟ್ಟಿಗೆ ಬಹುಪಾಲು ಅಪ್ರಸ್ತುತ. ಕೇವಲ ಗಡ್ಡ ಬಿಟ್ಟು, ಬಲೆಬಲೆ ಟೋಪಿ ಧರಿಸುವಂತೆ ಮಾಡಿ ಮುಸ್ಲಿಂ ಹುಡುಗರ ಪ್ರತ್ಯೇಕತೆಯನ್ನು ಮುಖ್ಯವಾಹಿನಿಯಿಂದ ಕಾಪಾಡಿಕೊಳ್ಳುವುದು, ಹಿಜಾಬ್ -ನಕಾಬ್ -ಬುರ್ಕಾ (ತಲೆವಸ್ತ್ರ- ಮುಖವಸ್ತ್ರ- ಮೈಮುಚ್ಚುವ ನಿಲುವಂಗಿ ) ಧರಿಸುವಂತೆ ಮುಸ್ಲಿಂ ಹೆಂಗಸರನ್ನ ಪೀಡಿಸುವುದು ಇಂತಹ ಬಹಿರಂಗ ಪ್ರದರ್ಶನಗಳು ಪರಸ್ಪರರಲ್ಲಿ ಅಪನಂಬಿಕೆಯನ್ನ ಹುಟ್ಟಿಸಿ ದೇಶದ ಸಾಮಾಜಿಕ ವ್ಯವಸ್ಥೆಗೆ ಮಾರಕವಾಗ ಬಲ್ಲದೆ ಹೊರತು ಎಂದಿಗೂ ಪೂರಕವಾಗಲಾರದು. ರೋಮಿನಲ್ಲಿ ರೋಮನ್ನರಂತಿರಬೇಕಲ್ಲವೆ? ಹಾಗಂತ ಮುಸ್ಲೀಮರಿಗೆ ಯಾವುದೆ ಧಾರ್ಮಿಕ ನಿರ್ಬಂಧಗಳು ಭಾರತದಲ್ಲಿಲ್ಲವಲ್ಲ? ಇನ್ಯಾವುದೆ ಶರಿಯತ್ ಬದ್ಧ ಮುಸ್ಲಿಂ ದೇಶಗಳಿಗಿಂತಲೂ ಇಲ್ಲಿನ ಆಡಳಿತ ಮುಸ್ಲೀಂ ಸಮುದಾಯದ ಪರವಾಗಿದೆ ಆನ್ನುವುದು ಸ್ಪಟಿಕದಷ್ಟು ಸುದ್ಧ ಸತ್ಯ. ಜಗತ್ತಿನ ಬಹುಸಂಖ್ಯಾತ ಮುಸ್ಲಿಂ ರಾಷ್ಟ್ರವಾಗಿರುವ ಇಂಡೋನೇಷಿಯ ಈ ಮಟ್ಟಿಗೆ ಜಗತ್ತಿಗೆ ಮಾದರಿಯಾಗಿದೆ. ಒಂದಾನೊಂದು ಕಾಲದಲ್ಲಿ ಸಂಪೂರ್ಣ ಹಿಂದೂಮಯವಾಗಿದ್ದ ಆ ದೇಶ ಇಂದು ಅದಕ್ಕೆ ತದ್ವಿರುದ್ಧವಾಗಿ ನೂರಕ್ಕೆ ನೂರು ಇಸ್ಲಾಮಿಕರಣಗೊಂಡಿದೆ. ಸುಮಾರು ಇಪ್ಪತ್ತ ಮೂರು ಕೋಟಿ ಮುಸ್ಲೀಮರಿರುವ ಅಲ್ಲಿನ ಜನ ತಮ್ಮ ಪೂರ್ವ ಸಂಸ್ಕೃತಿಯ ಬಗ್ಗೆ ಕುರುಡಾಗಿಲ್ಲ. ಇಂದಿಗೂ ತಮ್ಮ ಹೆಸರುಗಳಲ್ಲಿ- ನಾಗರೀಕ ಸೇವೆಗಳಲ್ಲಿ ನೆಲದ ಸಂಸ್ಕೃತಿಯ ಕುರುಹುಗಳನ್ನ ಉಳಿಸಿಕೊಂಡು ಬಂದಿದ್ದಾರೆ. ಅಂದರೆ ಇಸ್ಲಾಮನ್ನ ಅವರು ತಮ್ಮ ನೆಲದ ಅವಶ್ಯಕತೆಗಳಿಗೆ ತಕ್ಕಂತೆ ಮಾರ್ಪಡಿಸಿ ಒಗ್ಗಿಸಿ ಕೊಂಡಿದ್ದಾರೆ. ಅವರಿಗೆ ತಮ್ಮ ಪುರಾತನ ಸಂಸ್ಕೃತಿಯ ಬಗ್ಗೆ ಅತೀವ ಹೆಮ್ಮೆಯಿದೆ. ಮನುಷ್ಯನ ಧರ್ಮಾಚರಣೆ ವಯಕ್ತಿಕ ಮಟ್ಟದ್ದು. ಅದು ಬಹಿರಂಗವಾಗಿ ಗದ್ದಲವೆಬ್ಬಿಸುವ ಮಟ್ಟಕ್ಕೆ ಎಂದೂ ಇಳಿಯಬಾರದು. ಇಸ್ಲಾಂ ಹುಟ್ಟಿದ ಅರಬ್ ಜಗತ್ತಿನಲ್ಲಿಯೆ ನಮಾಜ್ ಕರೆಗೆ ಸೈರನ್ ಕೂಗಿಸುವ ವ್ಯವಸ್ಥೆ ಚಾಲ್ತಿಗೆ ಬಂದಿರುವಾಗ ಇನ್ನೂ ಭಾರತದಲ್ಲಿ 'ಬಾಂಗ್' ಕೂಗುವ ಹಳೆಯ ಪದ್ದತಿಗೆ ಅಂಟಿಕೊಳ್ಳುವುದು ಹೊಸತನವನ್ನು ತಂತ್ರಜ್ಞಾನದ ಪ್ರಸ್ತುತತೆಯನ್ನ ನಿರಾಕರಿಸಿದಂತೆ. ಅದಕ್ಕೆ ಪೈಪೋಟಿಯಾಗಿ ಸನಾತನ ಅವಿವೇಕಿಗಳೂ ಸಹ ಹೊತ್ತುಗೊತ್ತಿನ ಪರಿವೆಯಿಲ್ಲದೆ "ಎದ್ದೇಳು ಮಂಜುನಾಥಾ" ಎಂದು ಗದ್ದಲವೆಬ್ಬಿಸುತ್ತ ಬೆಳಗ್ಯೆ- ಮಧ್ಯಾಹ್ನ- ಸಂಜೆ ಹೀಗೆ ಅಸಂಬದ್ಧವಾಗಿ ಮಂಜುನಾಥನನ್ನ ಕ್ಷಣಕಾಲ ಮಲಗಲೂ ಬಿಡದೆ ನಿಮಿಷಕ್ಕೊಮ್ಮೆ ಬಡಿದೆಬ್ಬಿಸುತ್ತಾರೆ! ಗೋಮಾಂಸದ ಕುರಿತೂ ಇದೆ ಮಾತನ್ನ ಹೇಳಬಹುದು. ಹಿಂದೂ ಕೆಳವರ್ಗದ ಮಂದಿಯೂ ಕಡಿಮೆ ಬೆಲೆಗೆ ಸಿಗುವ ಕಾರಣ ಗೋಮಾಂಸವನ್ನ ಸೇವಿಸುತ್ತಾರೆ. ಅಂತೆಯೆ ಬಡ ಮುಸ್ಲೀಮರೂ ಸಹ. ಆದರೆ ಅದು ತಮ್ಮ ಧಾರ್ಮಿಕ ಸ್ವಾಭಿಮಾನದ ಸಂಕೇತ ಅಂತ ಮುಸ್ಲೀಮರು ಪರಿಗಣಿಸುವುದು ಕೊನೆಯಾಗಬೇಕು. ಆಹಾರ- ವಿಹಾರ ವ್ಯಕ್ತಿಯ ವಯಕ್ತಿಕ ವಿಚಾರಗಳು. ಕಡೆಯದಾಗಿ ಪರಸ್ಪರ ಅಪನಂಬಿಕೆಗೆ ಹಿಂದೂಗಳ ಕುರಿತ ಮುಸ್ಲೀಮರ ಹುಸಿ ಅಭದ್ರತೆಯ ಸಂಶಯ- ಮುಸ್ಲೀಮರ ಕುರಿತ ಹಿಂದೂಗಳ ದೇಶನಿಷ್ಠೆಯ ಸುಳ್ಳು ಸಂದೇಹ ಇವೆರಡೂ ಕಾರಣ. ಭಾರತೀಯ ಸಂಸ್ಕೃತಿ ಶ್ರೇಷ್ಠವಾದದ್ದನ್ನೆಲ್ಲ ಸ್ತ್ರೀ ರೂಪಕ್ಕೇರಿಸಿ ತಾಯಿಯನ್ನಾಗಿ ಆರಾಧಿಸುತ್ತೆ. ಉದಾಹಾರಣೆಗೆ ದೇಶ- ವಿದ್ಯೆ- ಅನ್ನ- ಹಣ- ನದಿ ಇವುಗಳನ್ನು ನೋಡಬಹುದು. ಆದರೆ ಧರ್ಮನಿಷ್ಠವಾಗಿ ಇಸ್ಲಾಂ ಪ್ರಕಾರ ನಡೆದುಕೊಂಡ ಅಂದಿನ ಇಸ್ಲಾಮಿ ಆಡಳಿತಗಾರರು ಈ ಭಾವನೆಗಳನ್ನೆ ಕೆಣಕುವಂತೆ ನಡೆದು ಕೊಂಡು ಸನಾತನ ಧರ್ಮೀಯರಾಲ್ಲಿ ಕಸಿವಿಸಿ ತಂದರು. ಹಿಂದೂ ಆರಾಧನಾಕ್ಷೇತ್ರಗಳ ಮೂರ್ತಿಗಳನ್ನ ಮಸೀದಿಗಳ ನೆಲಹಾಸು, ಮೆಟ್ಟಿಲು ಮಾಡಿಕೊಂಡದ್ದು. ಕಾಶ್ಮೀರದಲ್ಲಿ (ಹಿಂದೂ ನಂಬಿಕೆಗಳ ಪ್ರಕಾರ ಅದು ಶಾರದೆಯ ಆವಾಸ...ಅವಳನ್ನ 'ಕಾಶ್ಮೀರ ಪುರವಾಸಿನಿ' ಎಂದು ಕರೆಯಲಾಗುತ್ತೆ) ಆ ನೆಲದ ಭಾಷೆಯ ಸತ್ವವನ್ನೆ ಕಸಿಯಲಾಗಿದೆ. ಕಾಶ್ಮೀರಿ ಭಾಷೆಗೆ ಸ್ವಂತ ಲಿಪಿಯಿದ್ದರೂ ಇಂದು ಅದು ಬಳಕೆಯಲ್ಲಿಲ್ಲ, ಮೊಘಲ್ ಕಾಲದ ಹೇರಿಕೆಯ ಪರಿಣಾಮ ಅರಬ್ಬಿ ಲಿಪಿಯಲ್ಲಿ ಕಾಶ್ಮೀರಿ ಬರೆಯಲಾಗುತ್ತೆ. ತನ್ನ ನಿವಾಸದಲ್ಲೆ ವಿದ್ಯಾಧಿದೇವತೆ ಅನಾಥೆ ಆದದ್ದು ಹೀಗೆ! ಅದು ಇಂದಿಗೂ ಹಾಗೆಯೆ ಮುಂದುವರೆಯ ಬೇಕಿಲ್ಲ. ಧರ್ಮಕ್ಕಿಂತ ದೇಶ ಹಾಗೂ ಭಾಷೆ ಯಾವಾಗಲು ದೊಡ್ಡದು. ನಮ್ಮ ಮುಸ್ಲೀಂ ನೆರೆಕೆರೆಯವರಿಗೆ ಅರಬ್ಬಿಯೇ ಸಂವಹನ ಮಾಧ್ಯಮವಾದರೆ ಸಾಮನ್ಯ ಮುಸ್ಲಿಂ ಒಬ್ಬನಿಗೆ ಕಿರಿಕಿರಿ ಹುಟ್ಟಲಾರದೆ? ಹಿಂದೂ ಅತಿರೇಕಿಗಳಂತೆ ಇಸ್ಲಾಂ ಮೂಲಭೂತವಾದಿಗಳಿಗೂ "ಮಾನವ ಧರ್ಮ" ಎಲ್ಲಕಿಂತ ದೊಡ್ಡದು ಎಂಬುದನ್ನು ಒತ್ತಯವಾಗಿಯಾದರೂ ಅರಿವು ಮೂಡಿಸಲೆ ಬೇಕಿರುವುದು ಇಂದಿನ ತುರ್ತು ಅಗತ್ಯ. ಈ ನಿಟ್ಟಿನಲ್ಲಿ ಇಂಡೋನೇಷ್ಯ ನಮಗೆ ಮಾದರಿಯಾಗಬೇಕು. ಈ ದೇಶ ನಮ್ಮೆಲ್ಲರದು ಹಾಗೂ ಎಲ್ಲರೂ ಸಮಾನರು ಅನ್ನುವುದು ಮೊದಲು ಜಾರಿಯಾಗಲು ಅನುವಾಗುವಂತೆ ಮುಸ್ಲಿಂ ಸಮುದಾಯಕ್ಕೆ ಪ್ರತ್ಯೆಕವಾಗಿರುವ ಶರಿಯತ್ ಭಾರತೀಯ ನ್ಯಾಯಾಂಗ ವ್ಯವಸ್ಥೆಯಿಂದ ರದ್ದಾಗಬೇಕು. ಸದ್ಯ ಮುಸ್ಲಿಂ ವಯಕ್ತಿಕ ಮಂಡಳಿ ಶರಿಯತ್ತಿನ ಪ್ರಕಾರವೇ ಮುಸ್ಲಿಂ ವಿವಾಹ ವಿಚ್ಚೇದನಗಳನ್ನ ಪರಾಮರ್ಶಿಸಿ ನ್ಯಾಯ ದಯಪಾಲಿಸುವ ಅಧಿಕಾರ ಹೊಂದಿದೆ. ಗುರುಕುಲ ಪದ್ಧತಿಯನ್ನ ಮರೆಯಾಗಿಸಿದಂತೆ ಮದರಸಗಳಿಗೂ ಸರಕಾರಿ ರಾಜಾಶ್ರಯ ನಿಂತು ಮುಸ್ಲಿಂ ಮಕ್ಕಳು ಮುಖ್ಯವಾಹಿನಿಯ ಶಾಲೆಗಳಲ್ಲಿ ಉಳಿದೆಲ್ಲರಷ್ಟೆ ಕಲಿತು, ತನ್ನ ಸಮವಯಸ್ಕ ಅನ್ಯ ಕೋಮಿನ ಮಕ್ಕಳಿಗೆ ಓದಿನಲ್ಲಿ- ಇನ್ನಿತರ ಚಟುವಟಿಕೆಗಳಲ್ಲಿ ಪೈಪೋಟಿ ನೀಡುವಂತಾಗಬೇಕು. ಎರಡು ಕಣ್ಣಷ್ಟೇ ಗೋಚರಿಸುವ ಬುರ್ಕಾ ಜಾಹಿರಾತಿನ ವೀನೈಲ್'ಗಳು ಕರಾವಳಿಯ ಹೆದ್ದಾರಿಯ ಇಕ್ಕೆಲಗಳಲ್ಲಿ ಕಾಣುವುದು ನಿಂತಷ್ಟು ಶೀಘ್ರ ಮುಸ್ಲಿಂ ಮಹಿಳೆಯರು ನಿಟ್ಟುಸಿರು ಬಿಟ್ಟಾರು. ಕೊನೆಯ ಖಿಲಾಫತ್ ಅಸ್ತಿತ್ವದಲ್ಲಿದ್ದ ತುರ್ಕಿಯಲ್ಲಿಯೆ ಹೊಸತರದ ಇಸ್ಲಾಮನ್ನ ಜಾರಿಗೆ ತಂದಿರೋವಾಗ ನಮ್ಮಲ್ಲೇಕೆ ಹಳೆಯ ಮರಳುಗಾಡಿನ ಸಂಸ್ಕೃತಿಯ ಮೋಹ? "ಮೊದಲು ಭಾರತೀಯರಾಗೋಣ" ಆಮೇಲೆ ಇದ್ದೆ ಇದೆ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಬೌದ್ಧ, ಜೈನರಾಗೋದು. ನಾಳೆಯಿಂದ ಇಸ್ಲಾಂ ಉಗಮದ ಕಥೆ ಇಲ್ಲಿ ಮೂಡಿ ಬರಲಿದೆ. ಆರಂಭದಲ್ಲಿ ಅಂದಿನ ಅರಬ್ ಜಗತ್ತಿನ ವಿಸ್ಕೃತ ಪರಿಚಯ ಮಾಡಿಸುವುದು ಅನಿವಾರ್ಯ. ಬೋರ್ ಎನಿಸಿದರೂ ಅದನ್ನ ಓದದೆ ಇರಬೇಡಿ. ಆ ಮೊದಲ ಕಂತನ್ನ ಓದದಿದ್ದರೆ ಮುಂದಿನ ಕಥೆ ಅಷ್ಟಾಗಿ ಅರ್ಥವಾಗಲಾರದು. ನನ್ನ ದೃಷ್ಟಿಯಲ್ಲಿ ಇಸ್ಲಾಂ ಇಷ್ಟೆ. ನನ್ನ ಸಹೋದರನೊಬ್ಬ ಅದಕ್ಕೆ ಮಾರುಹೊದರೆ ಹೇಗೆಯೋ ಹಾಗೆಯೆ ಇನ್ನುಳಿದ ಮುಸ್ಲೀಮರು ನನ್ನ ಪಾಲಿಗೆ. ಏಕೆಂದರೆ ನಾನವರನ್ನ ಮೊದಲು ನೋಡೋದು ಭಾರತೀಯತೆಯ ಮೋಹರಿನಿಂದ. ಅವರ ಧಾರ್ಮಿಕ ಶ್ರದ್ಧೆ ನನಗೆ ಇಲ್ಲಿಯ ತನಕ ಮುಖ್ಯವಾಗಿಲ್ಲ, ಇನ್ನು ಮುಂದೆಯೂ ಆಗುವುದಿಲ್ಲ. 'ಇಸ್ಲಾಂ ಮರುಭೂಮಿಯ ಬುಡಕಟ್ಟಿಗೆ ಹೇಳಿಮಾಡಿಸಿದ ಧರ್ಮಾಚರಣೆ ; ಅದರ ಆಶಯಗಳು-ನಿಯಮಾವಳಿಗಳು ಅದನ್ನ ಹೆಚ್ಚು ಸ್ಪುಟಗೊಳಿಸುತ್ತವೆ' ಅನ್ನುವ ನನ್ನ ನಿರ್ಧಾರಕ್ಕೆ ಕಾರಣವಾದದ್ದು ಆಗುಂಬೆ ಎಸ್.ನಟರಾಜ್'ರವರು ಬರೆದ "ಮಹಮದ್ ಪೈಗಂಬರ್ ಹಾಗು ಖಲೀಫರು" ಎಂಬ ಇಸ್ಲಾಮಿನ ಆತ್ಮಕಥೆ. ಬೆಂಗಳೂರಿನಲ್ಲಿ ಕಳೆದ ಬಾರಿ ನಡೆದ 'ಕನ್ನಡ ಸಾಹಿತ್ಯ ಸಮ್ಮೇಳನ'ದಲ್ಲಿ ಬೆಳಕು ಕಂಡಿದ್ದ ಈ ಹೊತ್ತಗೆಯನ್ನ (ಹಂಸ ಪ್ರಕಾಶನ) ಹಿಂದೆಂದೋ ಕುತೂಹಲಕ್ಕಾಗಿ ಓದಿದ್ದ ಖುರಾನ್ ಹಾಗು ಹದೀಸ್'ಗಳೊಂದಿಗೆ ಹೋಲಿಸಿ ಓದಿದಾಗ ಇದು ಇನ್ನಷ್ಟು ಧೃಡವಾಯಿತು. ಬಹುಷಃ ನಿಮ್ಮೆಲ್ಲರ ಭಾವನೆಗಳು ಇದಕ್ಕೆ ವ್ಯತರಿಕ್ತವಾಗಿದ್ದಿರಲೂಬಹುದು. ಅದೇ ಹೊತ್ತಗೆಯ ಪ್ರತಿಯೊಂದು ಪುಟವೂ ಇಲ್ಲಿ 'ದಿನಕ್ಕೊಂದು ಪುಟ'ದಂತೆ ಪ್ರಕಟಿಸುತ್ತೇನೆ. ಇಸ್ಲಾಮಿನ ಉಗಮದ ಬಗ್ಗೆ ನಿಮಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನ ಓದುವ ಸುಖವೂ ನಿಮ್ಮದಾಗಲಿ. ( ಮುಗಿಯಿತು...)

Monday, September 24, 2012

ಇಸ್ಲಾಮಿನಡಿ ಭಾರತ......

ಜಗತ್ತಿನ ಇತಿಹಾಸದಲ್ಲಿ ಬಹುಸಂಖ್ಯಾತ ಪರಧರ್ಮೀಯರನ್ನ ಇಸ್ಲಾಂ ಅನುಯಾಯಿಗಳು ಧೀರ್ಘಾವಧಿಯವರೆಗೆ ನಿರಂಕುಶವಾಗಿ ಆಳಿದ್ದು ಬಹುಷಃ ಸ್ಪೇನ್ ಹೊರತು ಪಡಿಸಿದರೆ ಅದು ಕೇವಲ ಭಾರತದಲ್ಲಿಯೆ. ಕ್ರೈಸ್ತ ಮತಾವಲಂಬಿಗಳ ಸ್ಪೇನ್ ಕ್ರಿಸ್ತಶಕ 711ರಿಂದ ಸರಿಸುಮಾರು ಎಂಟು ಶತಮಾನಗಳ ಕಾಲ ಇಸ್ಲಾಂ ಜಗತ್ತಿನ ಭಾಗವಾಗಿತ್ತು ಅನ್ನುವುದು ಇಂದಿಗೂ ಮುಸ್ಲಿಂ ಜಗತ್ತಿಗೆ ಕಡುಹೆಮ್ಮೆಯ ವಿಚಾರ. ಆದರೆ ಕ್ರಿಸ್ತಶಕ 1492ರಲ್ಲಿ ಈ ನಿರಂಕುಶತೆಗೆ ಲಗಾಮು ಬಿದ್ದು ಸ್ಪೇನ್ ಮರಳಿ ಕ್ಯಾಥೊಲಿಕ್ ಪಂಥಾನುಯಾಯಿಗಳ ತೆಕ್ಕೆಗೆ ಜಾರಿದ್ದು ಹಾಗು ಅವರು ಇಸ್ಲಾಮಿ ಕಾಲಮಾನದ ಕರುಹು ಉಳಿಯದಂತೆ "ಇಸ್ಲಾಮಿ ಸ್ಪೇನ್"ನ ಎಲ್ಲಾ ಪಳೆಯುಳಿಕೆಗಳನ್ನ ನಿರ್ದಾಕ್ಷಿಣ್ಯವಾಗಿ ಕ್ಯಾಥೊಲಿಕ್ ಧರ್ಮಾಂಧತೆಯಿಂದಲೆ ಬುಡಸಹಿತ ಕಿತ್ತು ಹಾಕಿದ್ದನ್ನ ಮಾತ್ರ ಜಾಣತನದಿಂದ ನೆನಪಿಸಿಕೊಳ್ಳಲು ಮರೆಯುತ್ತಾರೆ! ಇದೇನೆ ಇದ್ದರೂ ಈ ಹೊತ್ತಲ್ಲಿ ಹಿಂದಿರುಗಿ ನೋಡಿದಾಗ ಏಳು ಶತಮಾನಗಳ ಕಾಲ ಭಾರತವನ್ನು ಆಳಿ ಅನಂತರ ಇಲ್ಲಿಯೆ ಬೀಡು ಬಿಟ್ಟ ಇಸ್ಲಾಮಿನಿಂದ ಭಾರತ ಪಡೆದುಕೊಂಡದ್ದೇನು? ಅದರ ಕೊನೆಯ ನಿಶಾನಿಯನ್ನೂ ಇನ್ನಿಲ್ಲವಾಗಿಸಿ ಸ್ಪೇನ್ ಕಳೆದು ಕೊಂಡದ್ದೇನು? ಅನ್ನುವುದನ್ನ ಸುಲಭವಾಗಿ ಅಂದಾಜಿಸಬಹುದು. ಕುತ್ಬುದ್ದೀನ್ ಐಬಕನಿಂದ ಮೊದಲುಗೊಂಡು ಗುಲಾಮಿ ಸಂತತಿ- ಖಿಲ್ಜಿ ಸಂತತಿ- ತುಘಲಕ್ ಸಂತತಿ- ಸಯ್ಯದ್ ಸಂತತಿ- ಲೋಧಿ ಸಂತತಿ ಹಾಗೂ ಕಟ್ಟಕಡೆಯಲ್ಲಿ ಮೊಘಲರ ಸಂತತಿಯ ಕೊನೆಯ ಬಾದಶಹ ಎರಡನೆ ಬಹದ್ದೂರ್'ಷಾನವರೆಗೂ ಇಸ್ಲಾಂ ಭಾರತೀಯ ನೆಲದಲ್ಲಿ ನಿರಂಕುಶ ಅಟ್ಟಹಾಸವನ್ನ ಮೆರೆದದ್ದು ಅಳಿಸಿ ಹಾಕಲಾಗದ ಐತಿಹಾಸಿಕ ಸತ್ಯ. ಈ ಏಳುನೂರು ವರ್ಷಗಳಲ್ಲಿ ಭಾರತೀಯ ಉಪಖಂಡದ ಬಹುಭಾಗ ದೆಹಲಿ ಗದ್ದುಗೆಯ ನೆರಳಿನಲ್ಲಿತ್ತು. ಹಿಂದೂ ಕೃತಿ- ಸಂಸ್ಕೃತಿಗಳು ಇಸ್ಲಾಮಿ ಕ್ರಿಯಾಶೀಲತೆಯಿಂದ ಅನೇಕ ಉತ್ತಮ ಅಂಶಗಳನ್ನು ಕಡಪಡೆದುಕೊಂಡವು. ವಿಶೇಷವಾಗಿ ಭಾಷೆಯ ದೃಷ್ಟಿಯಿಂದ ಗಮನಾರ್ಹ ಹೊಸತನಗಳು ಗೋಚರಿಸಿದವು. ಸಂಗೀತದಲ್ಲಿ ಅರಬ್ ಮೂಲದ ವಿದೇಶಿ ತಂತಿವಾದ್ಯಗಳು ಇಲ್ಲಿನ ಸಾಂಪ್ರದಾಯಿಕ ವಾದ್ಯಗಳ ಜೊತೆಯಾಗಿ ಇಲ್ಲಿನ ಮೂಲ ಸಂಗೀತದ ಮೆರುಗು ಹೆಚ್ಚಿತು. ಸಾಹಿತ್ಯವೂ ಸಮೃದ್ಧವಾಗಿ ವಿಕಸಿಸಿತು. ಖವ್ವಾಲಿ- ಗಜಲ್ ಅಮದಾದರೆ ಕಥಕ್- ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅವಿಷ್ಕರಣೆಯಾಗಿ ಭಾರತೀಯ ಸಾಂಸ್ಕೃತಿಕ ಜಗತ್ತು ಹೊಸತನವನ್ನ ಹೊತ್ತುಕೊಳ್ಳುವಂತಾಯಿತು. ಸಂಗೀತ- ಸಾಹಿತ್ಯ ಮಹಮದ್ ಪೈಗಂಬರನ ಉಕ್ತ ದೈವವಾಣಿಯ ಪ್ರಕಾರ ಇಸ್ಲಾಮಿ ಅನುಯಾಯಿಗಳಿಗೆ ಹರಾಮ್ ಎಂದು ಖುರಾನ್ ಹೇಳುವುದರಿಂದ ಅರೆಬ್ಬಿಯಾದಲ್ಲಿ ಅದರ ವಿಕಸನದ ಸ್ಥಿತಿ ಅಕ್ಷರಶಃ ಕೋಮಾಸ್ಥಿತಿಯಲ್ಲಿತ್ತು. ವಾಸ್ತವವಾಗಿ ಮಹಮದನಿಂದ ಬಹಳ ಹಿಂದೆ ಹುಟ್ಟಿದ್ದ ಪ್ರವಾದಿ ದಾವೂದನಿಗೆ ಅಲ್ಲಾ ದಯಪಾಲಿಸಿದ್ದು ಉದಾರವಾಗಿ ಉತ್ತಮ ಕಂಠ ಮಾಧುರ್ಯವನ್ನು. ಈ ಅಲ್ಲಾನ ಕಾರುಣ್ಯ ತನ್ನ ಮಹಿಮೆಗಳನ್ನು ಸ್ತುತಿಸಿ ಹಾಡಲ್ಲಿಕ್ಕೆಯೆ ಅನ್ನೋದು ಇಸ್ಲಾಂ ಮತಪಂಡಿತರಿಗೆ ಅರ್ಥವಾಗಲಾರದ್ದೇನಲ್ಲ. ಆದರೂ ಖುರಾನಿನ ಮಹಮದ್ ಕಾಲುವೆಯಾಗಿ ಹರಿದ ಅಲ್ಲಾನ ವಾಣಿಗಳನ್ನ ಬೇಕಾಬಿಟ್ಟಿ ವಿಶ್ಲೇಷಿಸಿ ಗೀತ- ಸಂಗೀತವನ್ನು ಇಸ್ಲಾಂ ನಿಷೇಧಿಸಿದೆ ಎಂದೇ ಬಲವಾಗಿ ಪ್ರತಿಪಾದಿಸಿ ಆಧುನಿಕ ಪ್ರಪಂಚದಲ್ಲೂ ತಮ್ಮ ಹಾಸ್ಯಾಸ್ಪದಾ ಮತಾಂಧತೆ ಮೆರೆಯುತ್ತಾರೆ. ಮರುಭೂಮಿಯ ಇಸ್ಲಾಮಿಕ್ ಸಂಸ್ಕೃತಿಯಲ್ಲಿ ಹರಾಮ್ ಎಂದು ಸಾರಲ್ಪಟ್ಟಿದ್ದ ಗೀತ- ಸಂಗೀತ- ಮೂರ್ತ ಶಿಲ್ಪ ಕಲೆಗಳಿಗೆ ಭಾರತದ ನೆಲದಲ್ಲಿ ಇಸ್ಲಾಮಿ ಕ್ರಿಯಾಶೀಲರಿಗೆ ಹೊಸಗಾಳಿ ಸಿಕ್ಕಂತಾಗಿ ತಮ್ಮ ಪ್ರತಿಭೆಯನ್ನೆಲ್ಲ ಅವರು ಮುಕ್ತವಾಗಿ ಇಲ್ಲಿ ಪ್ರದರ್ಶಿಸಿ ತಮ್ಮ ಪ್ರತಿಭೆಯ ಸಾಮರ್ಥ್ಯವನ್ನ ಇನ್ನೂ ಹೆಚ್ಚು ವಿಸ್ತರಿಸಿಕೊಳ್ಳಲು ಅವಕಾಶವಾಯಿತು. ಇನ್ನು ವಾಸ್ತುಶಿಲ್ಪದ ಕಥೆಯೂ ಹೆಚ್ಚು ಕಡಿಮೆ ಅಂತದ್ದೆ. ಮರಳುಗಾಡಿನ ನೆಲದಲ್ಲಿ ಧಾರ್ಮಿಕ ಹಾಗೂ ಪ್ರಾಕೃತಿಕ ನಿರ್ಬಂಧಕ್ಕೆ ಒಳಗಾಗಿದ್ದ ಅವರ ಸೌಂದರ್ಯಪ್ರಜ್ಞೆಗೆ ಭಾರತ ಒಂದು ತೆರೆದ ವೇದಿಕೆಯಂತಾಗಿ ತಡೆಯಿಲ್ಲದೆ ಅವರ ಪ್ರತಿಭೆ ಇಲ್ಲಿ ಪ್ರಕಾಶಿಸತೊಡಗಿತು. ಸ್ಪೇನ್'ನಲ್ಲಿನ ಇಸ್ಲಾಮಿ ವಾಸ್ತುಶಿಲ್ಪವೂ ಇದರ ಮುಂದೆ ಮಂಕು ಅನ್ನುವುದನ್ನು ನಾವು ಮರೆಯುವಂತಿಲ್ಲ. ವಾಸ್ತುಶಿಲ್ಪ ಶಾಸ್ತ್ರದಲ್ಲಿ ಹೊಸ ಇಂಡೋ-ಇಸ್ಲಾಮಿಕ್ ಶೈಲಿಯ ಕಟ್ಟಡಗಳು ಭಾರತೀಯ ಉಪಖಂಡದ ಉದ್ದಗಲಕ್ಕೂ ತಲೆಯೆತ್ತಿ ನಿಲ್ಲುವಂತಾಯಿತು. ವಿಸ್ಮಯಕಾರಿ ವಾಸ್ತು ಶಿಲ್ಪದ ಬಿಜಾಪುರದ ಗೋಲಗುಮ್ಮಟ, ಇಬ್ರಾಹಿಂ ರೋಜಾ ಹಾಗೂ ಬಾರಾ ಕಮಾಲ್, ಗೋಲ್ಕೊಂಡಾದ ಚಾರ್'ಮಿನಾರ್. ಲಾಹೋರಿನ ಲಾಲ್ ಮಸ್ಜಿದ್, ಗುಲಬರ್ಗಾದ ಬುಲಂದ್ ದರ್ವಾಜಾ, ದೆಹಲಿಯ ಕೆಂಪು ಕೋಟೆ, ಶ್ರೀನಗರದ ಶಾಲಿಮಾರ್ ಹೂದೋಟ ಇವೆಲ್ಲ ಇಸ್ಲಾಮಿ ಕ್ರಿಯಾಶೀಲರಿಂದ ಭಾರತೀಯತೆಗೆ ಸಂದ ವಿಶೇಷ ಕೊಡುಗೆಗಳು. ಹೀಗಾಗಿ ಕೇವಲ ಸಾಂಸ್ಕೃತಿಕ ನೆಲೆಗಟ್ಟಿನಿಂದ ಅವಲೋಕಿಸಿದ್ದೆ ಹೌದಾದರೆ ಇದಲ್ಲದರಿಂದ ಭಾರತ ಬಹಳಷ್ಟು ಪಡೆದುಕೊಂಡಿತೆ ವಿನಃ ಕಳಕೊಂಡದ್ದು ನಗಣ್ಯ. ಆದರೆ ಈ ಮಾತು ಕೇವಲ ಕ್ರಿಯಾಶೀಲ ಕಲೆಗಳಿಗೆ ಸೀಮಿತ ಅನ್ನೋದು ಗಮನಾರ್ಹ ಅಂಶ. ಜೊತೆಗೆ ಅನೇಕ ಮೂಲ ಹಿಂದೂ ದೇಗುಲಗಳನ್ನ ನೆಲಸಮಗೊಳಿಸಿ ಅಲ್ಲಿನ ನೆಲೆಗಟ್ಟುಗಳನ್ನೆ ಉಳಿಸಿಕೊಂಡು ಅವವೇ ಕಂಭ ಭೋದಿಗೆಗಳನ್ನ ಬಳಸಿ ಹೊಸ ಇಸ್ಲಾಮಿ ಆರಾಧನಾ ಸ್ಥಳಗಳನ್ನ ಕಟ್ಟಿ ಕೊಳ್ಳಲಾಯಿತು. ಸದರಿ ದೇವಸ್ಥಾನಗಳ ಆರಾಧನಾ ಮೂರ್ತಿಗಳನ್ನ ಪ್ರಜ್ಞಾಪೂರ್ವಕವಾಗಿ ಪರಿವರ್ತಿತ ಮಸೀದಿಯ ಮೆಟ್ಟಿಲುಗಳಾಗಿ ನೆಲಕ್ಕೆ ಹಾಸಲಾಯಿತು. "ಗ್ಯಾನವ್ಯಾಪಿ ಮಸೀದಿ"ಯಾಗಿ ಪರಿವರ್ತಿತವಾದ ಕಾಶಿಯ ವಿಶ್ವನಾಥ ದೇಗುಲ ( ಚಿತ್ರಗಳಲ್ಲಿ ಗಮನಿಸಿ ) ಹಾಗೂ "ತಾಜ್ ಮಹಲಾ"ಗಿ ಪರಿವರ್ತಿತವಾದ ಆಗ್ರಾದ ತೇಜೋ ಮಹಲ್ ಇದಕ್ಕೆ ಎರಡು ಅತ್ಯುತ್ತಮ ಉದಾಹಾರಣೆಗಳು ಅದೆ ಕಾಲಕ್ಕೆ ಒತ್ತಾಯದ ಸರಣಿ ಮತಾಂತರಗಳು, ಅದಕ್ಕೆ ಒಪ್ಪದ ಮೂಲಧರ್ಮೀಯರ ಮೇಲೆ ನಿರಂತರವಾಗಿ ಎಸಗಲಾದ ಜಜಿಯಾದಂತಹ ಖುರಾನ್ ಸಮ್ಮತಿತ ದೌರ್ಜನ್ಯ ಗಳು ನಡೆದೇ ನಡೆದವು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಚೀಲರು ಎಂಬ ಚಿತ್ರದುರ್ಗ ಸೀಮೆಯ ಬೇಡರ ಸಾಮೂಹಿಕ ಮತಾಂತರ ಹಾಗೂ ದಕ್ಷಿಣಕನ್ನಡ ಜೆಲ್ಲೆಯಂಚಿಂದ ಹಿಡಿದು ಮಲಬಾರಿನವರೆಗೂ ನಡೆದ ಬೆಸ್ತಕುಲದ ಮರಕ್ಕಲರ ಬಲವಂತದ ಮತಾಂತರಗಳು ಅತ್ಯಂತ ಹೇಯವಾಗಿದ್ದವು. ಸನಾತನ ಧಾರ್ಮಿಕ ಶ್ರದ್ಧಾಕೇಂದ್ರಗಳ ಧ್ವಂಸ ಹಾಗು ಮಸೀದಿಗಳಾಗಿ ಅವುಗಳ ಪರಿವರ್ತನೆ (ಉದಾಹಾರಣೆಗೆ ಕಾಶಿಯ ವಿಶ್ವನಾಥ ಮಂದಿರ ಗ್ಯಾನವ್ಯಾಪಿ ಮಸೀದಿಯಾದದ್ದು- ಅವಧದ ರಾಮಲಲ್ಲಾನ ದೇವಾಲಯ ಬಾಬರಿ ಮಸೀದಿಯಾದದ್ದು- ರಾವಳಪಿಂಡಿಯ ಕಟಾಸರಾಜ ದೇಗುಲದ ನಿರ್ಮೂಲನೆ- ಆಗ್ರಾದ ತೇಜೋಮಂದಿರದ ತಾಜ್'ಮಹಲ್ ಪರಿವರ್ತನೆ- ಮಥುರೆಯ ಕೃಷ್ಣ ದೇಗುಲ ಇಸ್ಲಾಮಿ ಶ್ರದ್ಧಾಕೇಂದ್ರವಾಗಿದ್ದನ್ನು ಗಮನಿಸಬಹುದು) ಕಾಶಿ, ಮಥುರಾ, ಅಯೋಧ್ಯ, ಸೋಮನಾಥ, ಢಾಕಾ, ಗೊಲ್ಕಂಡಾ, ಕೇರಳದ ಕೊಚ್ಚಿನ್ ಪ್ರಾಂತ್ಯದ ಒಳನಾಡುಗಳಲ್ಲಿ, ಕಾಶ್ಮೀರದ ಸರ್ವಜ್ಞಪೀಠದ (ಸದ್ಯ ಪಾಕ್ ಆಕ್ರಮಿತ ಕಾಶ್ಮೀರದ ಭೂಭಾಗದಲ್ಲಿದೆ) ದೇವಾಲಯಗಳ ಮೇಲಿನ ಉದ್ದೇಶಪೂರ್ವಕ ಧಾಳಿ ಇವೆಲ್ಲ ಮತಾಂಧತೆಯ ಅತಿರೇಕಗಳಾಗಿದ್ದವು ಎನ್ನುವುದನ್ನು ಮರೆಯುವ ಹಾಗಿಲ್ಲ. ಇಸ್ಲಾಂ ಶ್ರೇಷ್ಠ ಅನ್ನುವ ಅದನ್ನ ಅವಲಂಬಿಸಿದ ಅನುಯಾಯಿಗಳ ನಂಬಿಕೆಯನ್ನ ಒಪ್ಪೋಣ ಹಾಗೂ ಗೌರವಿಸೋಣ. ಆದರೆ ಇನ್ನಿತರ ಧರ್ಮಗಳು ಹೀನ ಅನ್ನೋದು ಮಾತ್ರ ಮತಾಂಧತೆಯಲ್ಲದೆ ಮತ್ತಿನ್ನೇನು? ನೈಸರ್ಗಿಗ ನ್ಯಾಯ ಇಸ್ಲಾಮಿನ ಅನುಯಾಯಿಗಳಿಗೊಂದು ಹಾಗೂ ಇನ್ನಿತರಿಗೊಂದು ಅನ್ನೋದು ಕುರಾನಿನ ಪ್ರಕಾರವೇ ಆದರೂ ಅದು ಅತಾರ್ಕಿಕ. ಇದೆ ಗೊಂದಲ ಒಬ್ಬ ಸಾಮಾನ್ಯ ಹಿಂದುವಿನ ಮನಸಿನಲ್ಲಿ ಮುಸ್ಲಿಂ ಸುದೀರ್ಘ ಆಳ್ವಿಕೆಯ ಕಾಲದ ಉದ್ದಕ್ಕೂ ಮುಳ್ಳಾಡಿಸುತ್ತಲೆ ಇತ್ತು. ಕ್ರಿಸ್ತಶಕ 1498ರಲ್ಲಿ ವಾಸ್ಕೋ-ಡಾ-ಗಾಮನ ನೇತೃತ್ವದಲ್ಲಿ ಭಾರತಕ್ಕೆ ಅಡಿಯಿಟ್ಟ ಯುರೋಪಿಯನ್ ವ್ಯಾಪಾರಿಗಳು ಮುಂದೆ ಇಡಿ ದೇಶವನ್ನೆ ರಾಜಕೀಯವಾಗಿ ಪ್ರಭಾವಿಸುವ ಮಟ್ಟಿಗೆ ಬೆಳೆದು, ಕಡೆಗೊಮ್ಮೆ ಕ್ರಿಸ್ತಶಕ 1622ರಲ್ಲಿ ಭಾರತ ಉಪಖಂಡ ಹೊಕ್ಕ ವಣಿಕರ ಸೋಗಿನ ಬ್ರಿಟಿಶ್ ಅತಿಕ್ರಮಣಕಾರರು ಕ್ರಮೇಣ ಬಲಿತು ಕ್ರಿಸ್ತಶಕ 1857 ರಲ್ಲಿ ಮೊಘಲರ ಕೊನೆಯ ನಾಮ್-ಕೆ-ವಾಸ್ತೆ ಬಾದಶಹನನ್ನು ಮಾಂಡಲೆಯ ಸೆರೆಮನೆಗೆ ಗಡಿಪಾರು ಮಾಡಿ ದೇಶದ ಆಡಳಿತದ ಚುಕ್ಕಾಣಿ ಹಿಡಿದುಕೊಳ್ಳುವ ಮೂಲಕ ಭಾರತೀಯ ಇಸ್ಲಾಮಿ ಸಾಮ್ರಾಜ್ಯಶಾಹಿಯ ಸೂರ್ಯ ಕೊನೆಗೂ ಮುಳುಗಿದ. ಆದರೆ ಕತ್ತಲಾದ ನಂತರವೂ ಅಲ್ಲಲ್ಲಿ ತಾರೆಗಳು ಹೊಳೆಯುವಂತೆ ಮೊಗಲ್ ಸಾಮಂತ ಸರದಾರರು ದೇಶದ ಅಲ್ಲಲ್ಲಿ ಒಂದೊ ಪ್ರಬಲ ಬ್ರಿಟಿಷರ ಸ್ನೇಹ ಸಾಧಿಸಿಯೋ ಇಲ್ಲವೆ ವೈರ ಕಟ್ಟಿಕೊಂಡೊ ಸ್ವತಂತ್ರವಾಗಿ, ತಮ್ಮ ಆಳ್ವಿಕೆಯನ್ನ ದೇಶ ರಾಜಕೀಯವಾಗಿ ಕ್ರಿಸ್ತಶಕ 1947ರಲ್ಲಿ ಬ್ರಿಟೀಷರಿಂದ ಸ್ವಾತಂತ್ರ ಪಡೆದ ಎರಡುವರ್ಷಗಳ ನಂತರದವರೆಗೂ ಉಳಿಸಿಕೊಂಡೆ ಬಂದರು. ಆಗಲೂ ಅವರಲ್ಲಿ ಕೆಲವರು ತಮ್ಮ ಧರ್ಮನಿಷ್ಠೆಗೆ ಅನುಸಾರವಾಗಿ ಸನಾತನ ಧರ್ಮಾನುಯಾಯಿಗಳ ಮೇಲೆ ಜಿದ್ದು ಸಾಧಿಸುವಂತೆ ನಡೆದುಕೊಂಡದ್ದೂ ಇತ್ತು. ಉದಾಹಾರಣೆಗೆ ಅಲ್ಪಾವಧಿಗೆ ಮೈಸೂರನ್ನು ಆಳಿದ ಟಿಪ್ಪೂ ಸುಲ್ತಾನ ಬಹಿರಂಗವಾಗಿ ಹಿಂದೂ ಶ್ರದ್ಧಾಕೇಂದ್ರವಾಗಿದ್ದ ಶೃಂಗೇರಿ ಶಾರದಾ ಪೀಠಕ್ಕೆ ಉದಾರ ದೇಣಿಗೆ ನೀಡುತ್ತಿದ್ದ ಅನ್ನುವುದು ಹೌದಾದರೂ (ಹಿಂದೂಗಳೇ ಆಗಿದ್ದ ಮರಾಠರು ಸಂಪತ್ತು ದೋಚುವ ದುರಾಸೆಯಿಂದ ಶೃಂಗೇರಿಗೆ ಧಾಳಿಯಿಟ್ಟು ಮೂಲ ಶಾರದೆಮೂರ್ತಿಯನ್ನೆ ದ್ವಂಸ ಮಾಡಿ ಬರ್ಭರವಾಗಿ ಲೂಟಿ ಎಸಗಿದ್ದ ದಿನಗಳವು), ಅದೆ ಟಿಪ್ಪು ಮಲಬಾರ್ ಹಾಗೂ ಕೊಡಗಿನಲ್ಲಿ ಒತ್ತಾಯದಿಂದ ಕತ್ತಿಮೊನೆಯಂಚಲ್ಲಿ ಎಸಗಿದ್ದ ಮತಾಂತರಗಳನ್ನ ಮರೆಯುವುದು ಹೇಗೆ? ಶೃಂಗೇರಿಗೆ ಹಾಗೂ ನಂಜನಗೂಡಿಗೆ ಅವನ ದಾನ ತನ್ನ ಬಹುಸಂಖ್ಯಾತ ಹಿಂದೂ ಪ್ರಜೆಗಳನ್ನ ರಾಜಕೀಯವಾಗಿ ಓಲೈಸಲು ಅವರ ಶ್ರದ್ಧಾಕೇಂದ್ರಗಳನ್ನ ಆತ್ಮೀಯವಾಗಿಟ್ಟುಕೊಳ್ಳುವ ಸರಳ- ಶುದ್ಧ ರಾಜಕೀಯ ನಡೆಯಾಗಿತ್ತು ಅನ್ನುವುದು ಸ್ಪಷ್ಟ. ಹಾಗೆಯೆ ಮತಾಂತರಗಳೂ ಕಟ್ಟರ್ ಇಸ್ಲಾಮಿಯಾಗಿ ಅವನ ಧರ್ಮಶ್ರದ್ಧೆ ವಿಧಿಸಿದ್ದ ಕರ್ತವ್ಯವೂ ಆಗಿತ್ತು. ನಮ್ಮ ಇಂದಿನ ಸಾಮಾಜಿಕ ಸಂಹಿತೆ ಹಾಗೂ ಕಾನೂನಿನ ಹಿನ್ನೆಲೆಯಲ್ಲಿ ಇತಿಹಾಸದ ಘಟನಾವಳಿಗಳನ್ನ ಒರೆಗೆ ಹಚ್ಚುವುದರಿಂದ ಆಗುವ ಎಡವಟ್ಟುಗಳು ಇವು ಅನ್ನೋದು ಸ್ಪಷ್ಟ. ಈಗಿನ ಜಾತ್ಯಾತೀತತೆಯ ಕಲ್ಪನೆಯೂ ಇದ್ದಿರದಿದ್ದ ಅಂದಿನ ಸಾಮಾಜಿಕ ಪರಿಸ್ಥಿತಿಗೆ ಬಹುಷಃ ಅದು ತಪ್ಪೆನಿಸುತ್ತಿರಲಿಲ್ಲವೇನೊ. ಆದರೆ ಇಂದಿನ ನಾಗರೀಕ ಕಾನೂನಿನ ಅಡಿಯಲ್ಲಿ ಅದು ಪ್ರಮಾದವಾಗಿ ಗೋಚರಿಸುತ್ತದೆ. ( ನಾಳೆಗೆ... )