ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Monday, October 29, 2012

ಯಾರದ್ದೋ ಕಸ... ಅಣ್ಣಮ್ಮನ ಜಾತ್ರೆ?!


ನಾಡಿನ -ನುಡಿಯ ಇಲ್ಲಿನ ನೆಲ-ಜಲದ ಕುರಿತು ಪುಟಗಟ್ಟಲೆ ಪತ್ರಿಕೆಗಳಲ್ಲಿ ಹಾರಾಡುವ "ಉಟ್ಟು ಖನ್ನಡ ಓರಾಟಗಾರರು" ಅದೆಲ್ಲಿ ಹಪ್ತಾ ಕಮಾಯಿಸುತ್ತಾ ಅಂಡಲೆಯುತ್ತಿದ್ದಾರೆ? ಈ ವಸೂಲಿ ವೀರರಿಂದ ಮೊದಲು ಕನ್ನಡ ಹಾಗೂ ಕರುನಾಡನ್ನ ಕಾಪಾಡಬೇಕಿದೆ. ಥರೇವಾರಿ ಕಾಯಿಲೆಗಳು ಕಸದ ಹೆದ್ದಾರಿಯೇರಿ ನಗರ ಪ್ರವೇಶಿಸುವ ಮೊದಲು ಇದಕ್ಕಾಗಿ ಹೋರಾಡಲಿಕ್ಕೇನಾಗಿದೆ ರೋಗ ಈ ಅರ್ಜೆಂಟ್ ಕನ್ನಡಮ್ಮನ ಅರ್ಜೆಂಟ್ ಕುವರರ ಅರ್ಭಟಕ್ಕೆ? ನಮ್ಮೂರಿನ ಪೇಪರ್'ಗಳಲ್ಲಿ ಕೈ ಸೋಲುವಷ್ಟು ಬರೆದು ಬರೆದು ಕೈ ಬಿದ್ದು ಹೋಗಿದ್ದರೂ "ಕ್ಯಾರೇ!" ಅನ್ನದ ಎಲ್ಲರೂ ಇದೀಗ ಅಮೇರಿಕಾದ "ನ್ಯೂಯಾರ್ಕ್ ಟೈಮ್ಸ್"ನ ಕಮಂಡಲದಿಂದ ತೀರ್ಥ ಸುರಿದಿದ್ದೇ ತಡ "ಸತ್ತಂತಿಹರನು ಬಡಿದೆಚ್ಚರಿಸಿ"ದಂತೆ ಗಡಿಬಿಡಿ ಮಾಡ್ತಿದಾರೆ. ಇನ್ನು ಇಷ್ಟು ದಿನ "ನಿತ್ಯ" "ಋಷಿ" ಮೂಲದ ತಲಾಷಿನಲ್ಲಿ ನೌಟಂಕಿಯಾಡುತ್ತಿದ್ದ "ಉತ್ತಮ ಸಮ್ 'ಮಜ'"ಕ್ಕಾಗಿ "ನೇರ (ವಾಗಿ)- (ಮೂರೂ) ಬಿಟ್ಟ- ನಿರಂತರ (ಹಡಬೆ)"ಗಳು ಈಗ "ಕಸದಿಂದ ಟಿಆರ್'ಪಿ ರಸ"ವನ್ನ ತೆಗೆಯಲು ಹೊರಟಿದ್ದಾರೆ! ಅಂತೂ ಕೂಗು ಮಾರಿಗಳಿಗೆಲ್ಲ ಅಮೇರಿಕಾದ ಮೋಹನ ಮುರುಳಿಯ ರಾಗಕ್ಕೆ ಅರ್ಜೆಂಟ್ ಎಚ್ಛರವಾಗಿದೆ. ಅಂತೂ ನಮ್ಮೂರಿನವರು ಬರೆದರೆ ರದ್ದಿ, ಅಮೇರಿಕೆಯಲ್ಲಿ ಪ್ರಕಟವಾದರಷ್ಟೆ ಸುದ್ದಿ ಅನ್ನುವುದು ಮತ್ತೆ ಸರಾಸಗಟಾಗಿ ಸಾಬೀತಾಯಿತು. ನಾಚಿಕೆಗೇಡು. ಊರೆಲ್ಲಾ ವಿಲೇವಾರಿಯಾಗದ ಕಸದ ರಾಶಿ ಹೊತ್ತು ನಾರುತ್ತಿದೆ. ನಮ್ಮಲ್ಲಿ ನಿಮ್ಮೂರಿನ ದರಿದ್ರ ಕಸ ತಂದು ಸುರಿಯಬೇಡಿ ಎಂದು ಆಗ್ರಹಿಸುವ ಮಂಡ್ಲೂರು ಮತ್ತಿತರ ಕಸ ಸುರಿವ ತಾಣಗಳ ಜನರ ನೋವೂ ನ್ಯಾಯವೆ ಆಗಿದೆ. ನಮಗದು ಕಸವಾಗಿದ್ದರೆ ಅವರಿಗೂ ಅದು ಕಸವೇ ತಾನೆ? ಸಂಸ್ಕರಿಸುವ ಉದ್ದೇಶ ಹೊತ್ತು ಪಡೆದ ಅಲ್ಲಿನ ಭೂಮಿಗಳಲ್ಲಿ ಮಾಡಬೇಕಿದ್ದ ಕಸ ಸಂಸ್ಕರಣೆಯ ಹೆಸರಲ್ಲಿ ಹಡಬಿಟ್ಟಿ ದುಡ್ಡು ಹೊಡೆದ ಜನಪ್ರತಿನಿಧಿಗಳ, ಪಾಲಿಕೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ದುಷ್ಟ ಗ್ಯಾಂಗ್; ಈಗ ಮ್ಯೂಸಿಕಲ್ ಛೇರಿನಂತೆ ತಪ್ಪನ್ನ ಇನ್ನೊಬ್ಬರ ಮೇಲೆ ಸರಾಗವಾಗಿ ವರ್ಗಾಯಿಸುತ್ತಾ ಮುಸಿಮುಸಿ ನಗುತ್ತಿದ್ದಾರೆ. ಕಸದಲ್ಲಿ ಹೊಡೆದ ಕಾಸು ಅವರ ತಿಜೋರಿಯಲ್ಲಿ ಗಹಗಹಿಸುತ್ತಿದೆ. ಲಜ್ಜೆ ಮರೆತು ಮಾಡುವ ಕೆಲಸಬಿಟ್ಟು ಮೆರೆಯುತ್ತಾ ಇರುವ ಈ ಆಳುವ ಮಂದಿಗೆ ಮಾನ-ಮರ್ಯಾದೆ ಎನಾದರೂ ಇದೆಯ? ಅಂದಹಾಗೆ ಖರ್ಚಿಗೆ ಕಾಸಿಲ್ಲದೆ ಬಿಬಿಎಂಪಿ ಕಂಡಕಂಡವರಲ್ಲಿ ಸಾಲ ಎತ್ತುತ್ತಿದೆಯಂತಪ್ಪ! ಇದಾಗಲೆ ಎತ್ತಿದ್ದ ತೀರಿಸಲಾಗದ ಹಳೆ ಸಾಲ ತೀರಿಸೋಕೆ ಮತ್ತೊಂದು ಹೊಸ ಸಾಲ!! ಇವಕ್ಕೆ ಹಣ ಹೊಂದಿಸೊಕೆ ಪಾಲಿಕೆಯ ದೊಣೆನಾಯಕರು ಜನರ ಆಸ್ತಿಗಳನ್ನ ಕಂಡಕಂಡವರಿಗೆ ಅಡ ಹಾಕುತ್ತಾ ಕಾಲ ಹಾಕುತ್ತಿದ್ದಾರೆ. ಬಡ ಬೆಂಗಳೂರಿಗ ಮಾತ್ರ ಮೂಗು ಮುಚ್ಚಿಕೊಳ್ಳಲು ಪರದಾಡುತ್ತಿದ್ದರೆ ಅಧಿಕಾರದ ಮತ್ತಿನಲ್ಲಿ ಮೇಯೋರು ಮಾತ್ರ ಹಸನಾಗಿ ಮೂರೂ ಬಿಟ್ಟು ಮೇಯ್ತಾನೆ ಇದಾರೆ. ಇವರ ಕೃಪೆಯಿಂದ ಈಗಷ್ಟೆ ಶುರುವಾಗಿರುವ ಚಳಿಯಲ್ಲಿ ನಗರದ ನಾಗರೀಕರ ಚಳಿಯಲ್ಲಿ ನಾಸಿಕಕ್ಕೆ ನಿರಂತರ ಉಚಿತವಾದ ನಾತ. ಇಂತಾ ಸು"ಭಿಕ್ಷ" ಕಾಲದಲ್ಲಿ ತಿರುಪತಿ ತಿಮ್ಮಪ್ಪನ ಹೆಸರಿಟ್ಟು ಕೊಂಡಿರೋ ಮೇಯರ್-ಉಪ ಮೇಯರ್'ಗಳೆಂಬ ಗಳ ಹಿಡುಕರಿಬ್ಬರೂ ಸೇರಿ ಪಾಲಿಕೆಯನ್ನ ಚನ್ನಾಗಿ ಮುಂಡಾಯಿಸಿ ಇಡೀ ಬೆಂದಕಾಳೂರಿನ ಪ್ರಜೆಗಳಿಗೆ ಉಚಿತ ಉಂಡೆನಾಮ ತಿಕ್ಕುತ್ತಿದ್ದಾರೆ. ಇಂತದ್ದರಲ್ಲಿ ಇವರಲ್ಲೊಬ್ಬ ಹೈವಾನ ತನ್ನ ಜಾತಿಯ "ಕುರಿ" ಪುರಸೇವಕರ ಮಂದೆ ಹೊಡಕೊಂಡು ಥೇಟ್ "ಕುರುಬ"ನ ಗೆಟಪ್ಪಿನಲ್ಲಿ ದುಬೈಗೆ ಹೋಗಿ ಬಂದ, ಅಫ್'ಕೋರ್ಸ್ ಬಿಬಿಎಂಪಿಯ ಖಜಾನೆಯ ಖರ್ಚಲ್ಲಿ. ಇದಕ್ಕೆ ಸಡ್ಡು ಹೊಡೆಯುವಂತೆ ಅಳಿದೂರಿಗೆ ಉಳಿದವನೆ "ಗೌಡ"ನಂತಾಡಿದ ಇನ್ನೊಬ್ಬ ತನ್ನ ಜಾತಿಯ ಪುರಸೇವಕರನ್ನೆಲ್ಲ ಥೇಟ್ ಗೌಡಿಕೆಯ ಗತ್ತಲ್ಲಿ ಅದೆ ಪಾಲಿಕೆಯ ಖರ್ಚಿನಲ್ಲಿ ಮೂರ್ಮೂರು ದಿನ ಮಡಿಕೇರಿ ಸುತ್ತಿಸಿದ. ಊರು ನೈರ್ಮಲ್ಯದ ವಿಷಯದಲ್ಲಿ ಹಳ್ಳ ಹಿಡಿಯುತ್ತಿದ್ದರೆ ಈ ಖದೀಮರಿಗೆ ಮಾತ್ರ ತೆರಿಗೆದಾರರ ದುಡ್ಡಲ್ಲಿ ಚಿಲ್ಲರೆ ಶೋಕಿ ಮಾಡುವ ಖಾಯಿಲೆ. ನೆನಪಿಡಿ ಬಿಬಿಎಂಪಿಯೆಂಬ ಬಡ ಗೋಮಾಳವನ್ನ ಈ ಇಬ್ಬರೂ ಮನಸೋ ಇಚ್ಛೆ ಅಧಿಕಾರದ ಹೆಸರಲ್ಲಿ ನಿರಾತಂಕವಾಗಿ ಮೇಯ್ದು "ಮೇಯರ್" ಎನ್ನುವುದು "ಮೇಯುವವರ್" ಕೂಡಾ ಆಗಬಹುದು ಎನ್ನುವುದನ್ನ ಸಾಬೀತು ಪಡಿಸಿ ಪುನೀತರಾದರು. ಇಬ್ಬರ ಪ್ರವಾಸದ ಖರ್ಚನ್ನೂ ಬಡ ಬಿಬಿಎಂಪಿಯೆ ಸಾಲದ ಶೂಲ ಹೊತ್ತೇ ಭರಿಸಲಾಗದೆ ಭರಿಸಿತು. ಮೇರಾ ಭಾರತ್ ಮಹಾನ್!

Friday, October 12, 2012

ಅನುದಿನದ ಅಕಾಲಿಕ ಮರಣ....


ಕೇವಲ ಮನಡದೊಳಗೆ ಆರದೆ ಉಳಿದ ಇಬ್ಬನಿ ಹನಿಯಲ್ಲ ನೀನು ಆಡದೆ ಉಳಿದ ಮೋಹಕ ದನಿಯೂ ಅಲ್ಲ... ನೀ ನನ್ನೊಳಗಿನ ಮೌನ, ನಾನದರಲ್ಲೆ ತಲ್ಲೀನ/ ಬಂಧಕ್ಕಿಂತ ಮಿಗಿಲಾದ ಸಂಬಂಧ ಬೆಸೆದಿರುವಾಗ ನಿನ್ನೊಂದಿಗೆ ಇನ್ನಿತರ ಬೆಸುಗೆಗಳ ಬಯಕೆ ನನಗಿಲ್ಲವೆ ಇಲ್ಲ... ಪ್ರತಿ ಪದವೂ ನಿನ್ನ ಹೆಸರನ್ನೆ ಪದೆಪದೆ ಉಸುರುವಾಗ ಈ ನನ್ನ ಉಸಿರು ಕೇವಲ ನನ್ನದಷ್ಟೆ ಹೇಗಾದೀತು?, ಕನಸ ಚಂಬಿಸುವ ಭ್ರಮೆಗಳ ಈಡೇರದ ಬಯಕೆಗಳದ್ದು ಅನುದಿನ ಅಕಾಲಿಕ ಮರಣ// ಮೋಡದಾಚೆಗೆ ಜಾರಿದ ಭಾಸ್ಕರನ ತೆರೆಮರೆಯ ಕಣ್ಣಾಮುಚ್ಚಾಲೆಯಲ್ಲಿ ಧರೆ ಪುಳಕಗೊಳ್ಳುತ್ತಿದೆ.... ಅರಳಿದ ಮನದಾವರೆ ಮುದುಡಿ ಮೆಲ್ಲಗೆ ಬಾಡುವ ಕ್ಷಣದಲ್ಲಿ ನಿನ್ನ ನೆನಪುಗಳ ಕೊನೆ ಹನಿಯನ್ನ ತನ್ನೆದೆಯೊಳಗೆ ಇಳಿಸಿಕೊಂಡಿದೆ, ನಿನ್ನ ಹೆಜ್ಜೆಗುರುತುಗಳು ಹಸಿ ಆವೆ ಆವರಿಸಿರುವ ನನ್ನೆದೆಯಲ್ಲಿ ಆಳವಾಗಿ ಉಳಿದು ಹೋಗಿ... ನಿನ್ನನೆ ಪದೇಪದೇ ನೆನಪಿಸುತ್ತಿದೆ/ ಕಮರಿದ ಕನಸನ್ನು ಮತ್ತರಳಿಸಿದ ನಿನ್ನ ನೆನಪುಗಳಿಗೆ ನನ್ನ ಮನಸು ಸದಾ ಋಣಿ.... ಸ್ವಪ್ನಗಳ ಗಾಢಾಲಿಂಗನದಲ್ಲಿ ಮಗ್ನ ಮನ ನಿನ್ನೆದೆಯ ಕಾವಲ್ಲಿ ತುಸು ಬೆಚ್ಛಗಾಗುತ್ತಿದೆ// ಕಡೆಯ ಕುರುಹನ್ನೂ ಉಳಿಸದೆ ನೀ ಒರೆಸಿ ಹಾಕಿದ್ದರೂನು ನನ್ನೆಲ್ಲ ನೆನಪುಗಳನ್ನು.... ನನ್ನೆದೆಯ ಸಂದೂಕದಲ್ಲಿ ನಿನ್ನೆಲ್ಲಾ ಪಳಯುಳಿಕೆಗಳು ಶಾಶ್ವತ ಉಳಿದಿವೆ, ಎದೆ ಸುಡುವ ವಿರಹದ ಉರಿಗೆ... ನೆನಪುಗಳನ್ನೂ ಕರಕಲಾಗಿಸುವ ಶಕ್ತಿ ಇಲ್ಲ/ ಸಾದ್ಯಂತ ಸಲಹುವ ನೆನಪಿನ ಅಲಗು ಅದೆಷ್ಟೆ ಹರಿತವಾಗಿದ್ದರೂ... ನಿತ್ಯ ಎಡೆ ತೂರಿ ಅದು ಹೊರಬರುವಾಗ ಮೂಡುವ ನೋವಿನಲ್ಲೂ ಒಂದು ಸುಖವಿದೆ, ಇದು ಎಂದಿಗೂ ಸರಿ ಹೋಗದ ಹುಚ್ಚು ಮನಕ್ಕೆ ನೀನೆಂದರೆ ಇನ್ನೂ ನೆಚ್ಚು.... ನೀ ಇನ್ನೆಲ್ಲದಕ್ಕಿಂತ ನನಗೆ ಹೆಚ್ಚು// ನನ್ನೆದೆ ಕುದಿ ಮೌನದ ಕುಡಿ ಮನದ ಜ್ವಾಲಾಮುಖಿಯಲ್ಲಿ ನಿನ್ನದೆ ನೆನಪಿನ ಲಾವಾರಸ ಉಕ್ಕುತ್ತಿದೆ... ಕಾರಣವಿಲ್ಲದೆ ಕೆಣಕುವ ಕನಸುಗಳೆ ನೆಮ್ಮದಿಯ ನಿದ್ರೆ ಬರುವ ಈ ರಾತ್ರಿ ನಿಮಗೆ ನನ್ನ ಮನಸ ಕದ ಮುಚ್ಚಲಾಗಿದೆ/ ಗಾಳಿ ಗೀಚಿದ ಮೋಡದೆದೆಯ ಮೇಲಿನ ಗಾನ ನನ್ನ ಮನದ ಶ್ರುತಿಯನ್ನೂ ಮೀಟಿ ಮಳೆಹನಿಗಳ ಮಧುರ ಹಾಡಾಗಿಸಿದೆ.... ಒಳಮನದ ಇಳಿಮನೆಯಲ್ಲಿ ಉಳಿದ ನೂರು ಕನಸುಗಳು ನಿನ್ನ ದಾರಿಯನ್ನೆ ಕಡೆವರೆಗೂ ಕಾಯುತ್ತವೆ//

Sunday, October 7, 2012

ನನಸಾಗದ ಕನಸಿನ ಆನೆಯ ಅಂಬಾರಿಯೇರಿ...


( ಮುಂದುವರೆದದ್ದು...) ಆನೆಯ ಸವಾರಿ ಮಾಡುವ ನಾಡದೇವಿ ರಾಮೇಶ್ವರ ದೇವಸ್ಥಾನದಿಂದ ಹೊರಟು ಕುಶಾವತಿಯ ಪಾರ್ಕ್ ಮುಟ್ಟಲು ಆ ಜನಜಂಗುಳಿಯಲ್ಲಿ ಭರ್ತಿ ಎರಡರಿಂದ ಮೂರು ಘಂಟೆಯ ಕಾಲ ಬೇಕಾಗುತ್ತಿತ್ತು. ಹೆಚ್ಚು ಕಡಿಮೆ ಮೂರು ಕಿಲೋಮೀಟರ್ ದೂರವಿದ್ದ ಈ ಅಂತರ ಘಂಟೆಗೆ ಒಂದು ಕಿಲೋಮೀಟರ್ ವೇಗದಲ್ಲಿ ನೆರೆದವರನ್ನು ರಂಜಿಸುತ್ತಾ ಅಕ್ಷರಶಃ ತೆವಳಿಕೊಂಡು ಹೋಗುತ್ತಿದ್ದುದರಿಂದ ಇಷ್ಟು ಗರಿಷ್ಠ ವೇಗ ಇದ್ದದ್ದೆ ಹೆಚ್ಚು. ಇಷ್ಟೊಂದು "ಅತಿವೇಗ" ಇರುತ್ತಿದ್ದುದೆ ಈ ಎಲ್ಲಾ ಕಿರಿಕಿರಿಯನ್ನೂ ಸಹಿಸಿಕೊಂಡು ಸ್ಥಬ್ಧಚಿತ್ರಗಳಾಗಿ ವಿವಿಧ ತೆರೆದ ವಾಹನಗಳಲ್ಲಿ ಚಿತ್ರವಿಚಿತ್ರ ವೇಷ ತೊಟ್ಟು -ಧಾರಾಳ ಬಣ್ಣ ಬಳಿಸಿಕೊಂಡು ಸುಡು ಸೆಖೆಯಲ್ಲಿ ನಿಂತಿರುವ ಪಾತ್ರಧಾರಿಗಳ ಹಾಗೂ ಅಂಬಾರಿ ಹೊತ್ತು ಬಿಸಿಲಲ್ಲಿ ಬರಿಗಾಲಲ್ಲಿ ಅಷ್ಟು ದೂರ ಕಾದ ಟಾರು ರಸ್ತೆಯಲ್ಲಿ ಸಾಗುವ ಆನೆಯಮ್ಮನ ಪೂರ್ವಜನ್ಮದ ಭಾಗ್ಯ!. ಇದು ಸಾಲದು ಎಂಬಂತೆ ನಡುನಡುವೆ ತಟ್ಟಿರಾಯ, ಹುಲಿವೇಷ, ಈಗೀಗ ಜಾಗತೀಕರಣದ ಗಾಳಿ ಬಲವಾಗಿಯೆ ಬೀಸಲಾರಂಭಿಸಿದ ಮೇಲೆ ನೇರ ಅಮೆರಿಕಾದ ಡಿಸ್ನಿಲೋಕದಿಂದ ಹಾರಿ ಬಂದಂತೆ ಕಾಣುವ ಡೋನಾಲ್ದ್ ಡೆಕ್, ಮಿಕ್ಕಿ ಮೌಸ್ ಹೀಗೆ ಅಸಹಜ ಗಾತ್ರದ ಅರ್ಜೆಂಟ್ ಫಾರನ್ ಛದ್ಮವೇಷಗಳು, ಅದೇನನ್ನೋ ನೋಡಿ(?) ಅವಾಕಾಗಿ ಬಾಯಿಗೆ ಬೆರಳಿಟ್ಟು ಕೊಂಡ ಕೂಚುಭಟ್ಟ, ಬೊಚ್ಚು ಬಾಯಿ ಕಳಿದ ಅಜ್ಜ -ಅಜ್ಜಿಯ ಜೋಡಿ ಹೀಗೆ ಇನ್ನೂ ಅನೇಕ ದೊಡ್ಡಗಾತ್ರದ ಬೊಂಬೆಗಳಿಗೂ ಭರಪೂರ ಪ್ರತಿಭಾ(?) ಪ್ರದರ್ಶನಕ್ಕೆ ಅವಕಾಶವಾಗಬೇಕಲ್ಲ? ಹೀಗಾಗಿ ಅನಿವಾರ್ಯವಾಗಿ ಇಡಿ ಮೆರವಣಿಗೆ ಯಾವುದೋ ಸ್ಲೋಮೋಶನ್ ಸಿನೆಮಾದ ಹಾಡಿನ ಶಾಟಿನಂತೆ ನೋಡುವವರ ಕಣ್ಣಿಗೆ ಬೀಳುತ್ತಿತ್ತು. ಉತ್ಸಾಹಿ ಹುಲು ಮಾನವರ ಇವೆಲ್ಲ ಕೋಟಲೆಗಳನ್ನ ಸಹಿಸಿಕೊಂಡ ಆನೆಯಮ್ಮನ ಮೆರವಣಿಗೆ ಶಿವಮೊಗ್ಗ ರಸ್ತೆಯಲ್ಲಿದ್ದ ಊರಿನ ಗಡಿ ಮುಟ್ಟುವಾಗ ಅಂತೂ ಬಾನಾಡಿಗಳು ತಮ್ಮ ಗೂಡು ಸೇರುವ ಹೊತ್ತಾಗಿರುತ್ತಿತ್ತು. ಅಲ್ಲಿ ಕುಶಾವತಿಯ ನೆಹರೂ ಉದ್ಯಾನವನದಲ್ಲಿದ್ದ ಶಮಿವೃಕ್ಷದ ಪೂಜೆಯನ್ನ ಆನೆಯಮ್ಮನ ಬೆನ್ನ ಮೇಲಿರುತ್ತಿದ್ದ ಮೂಲದೇವಿಯ ಮುಖಬಿಂಬದ ಮುಂದೆ ನೆರವೇರಿಸಿ ;ಚಿಗುರಿರುತ್ತಿದ್ದ ಆ ಗಿಡದ ಮೇಲೆರಗಿದ ಭಕ್ತಾದಿಗಳೆಲ್ಲ ಭಕ್ತಿಯ ಪರಾಕಾಷ್ಠೆಯಲ್ಲಿ ಸಾಸಿವೆ ಗಾತ್ರದ ಕೊಟ್ಟ ಕೊನೆಯ ಹಸಿರು ಎಲೆಯನ್ನೂ ಬಿಡದಂತೆ ಮರವನ್ನ ಬೋಳಿಸಿ, "ಪ್ರೀತಿ ವಿಶ್ವಾಸವಿರಲಿ" ಅಂತ ಪರಸ್ಪರ ಹೇಳಿಕೊಳ್ಳುತ್ತಾ ಊರಿನುದ್ದ ಎಲ್ಲರೂ ಅವನನ್ನ ವಿನಿಮಯ ಮಾಡಿಕೊಳ್ಳುತ್ತಿರುವಾಗ ಬಾನೆಲ್ಲ ಕಾಡಿಗೆ ತೀಡಿದಂತೆ ಪೂರ್ಣ ಕತ್ತಲಾವರಿಸಿ ದಸರೆಯ ಸಂಭ್ರಮಗಳೆಲ್ಲ ಆ ವರ್ಷದ ಮಟ್ಟಿಗೆ ಕೊನೆಯಾಗಿ ಆನೆಯಮ್ಮ ಮರು ಮೆರವಣಿಗೆಯನ್ನ ದೇವಿಯ ಬಿಂಬವನ್ನ ಮರಳಿ ಹೊತ್ತು ದೇವಸ್ಥಾನಕ್ಕೆ ಮುಟ್ಟಿಸುವ ಶಾಸ್ತ್ರ ಮುಗಿಸಿ ತನ್ನ ಸಕ್ರೆಬೈಲಿನ ಬಿಡಾರಕ್ಕೆ ಹೊರಟು ನಿಲ್ಲುತ್ತಿದ್ದಳು, ಅವಳ ಕಿರು ಸೊಂಡಿಲು ಕುಮಾರ ತನ್ನ ಪುಟ್ಟ ಕಿವಿಯಾಡಿಸುತ್ತಾ ನಮ್ಮೂರಿಗೆ ಸಂತಸದಿಂದಲೇ ವಿದಾಯ ಹೇಳುತ್ತಿದ್ದ. ದಸರಾದ ಸಡಗರ ಹೀಗೆ ಪ್ರತಿ ವರ್ಷವೂ ಹೊಸತಾಗಿಯೆ ನಮ್ಮನ್ನ ಆವರಿಸಿ ಕೊಳ್ಳುತ್ತಿದ್ದುದು ಹೀಗೆ. ಆದರೆ 1996ರ ದಸರೆಯನ್ನ ಕೊನೆಯುಸಿರಿರುವ ತನಕವೂ ಬಾಳಿನುದ್ದ ನಾನು ಮರೆಯಲಾರೆ. ಏಕೆಂದರೆ ಅಂತಹ ಒಂದು ಮೆರವಣಿಗೆಯಲ್ಲಿ ಹದಿನೈದು ವರ್ಷಗಳ ಹಿಂದೆ ನಾನೂ ಒಂದು ಪಾತ್ರಧಾರಿಯಾಗಬೇಕಿತ್ತು! ಅದು ಸಮುದ್ರ ಮಥನದ ಸ್ತಬ್ಧಚಿತ್ರ. ನೋಡಲು ಎಳೆತನದಲ್ಲಿ ಕತ್ತೆಯೂ ಮುದ್ದಾಗಿಯೇ ಇರುತ್ತದಂತೆ, ಅಲ್ಲದೆ ನನಗೂ ಕತ್ತೆಮರಿಯ ವಯಸ್ಸಾಗಿದ್ದ ಪುಣ್ಯಕಾಲವದು!! ಹೀಗಾಗಿ ಯಾವುದೋ ಪೂರ್ವಜನ್ಮದ ಪುಣ್ಯದಿಂದ ನಮ್ಮ ಇಂಗ್ಲಿಶ್ ಮಾತಾಜಿ ಅಲಿಯಾಸ್ ಶಾಂತಲಾ ಮಾತಾಜಿಯ ಕಣ್ಣಿಗೆ ನನ್ನ ಚೆಲುವು ರಾಚಿಯೇಬಿಟ್ಟಿತು!!! ಅದು ಅಕಾಲದಲ್ಲಿ ರಾಚಿದ ತಪ್ಪಿಗೆ ನಾನೂ ಅವರು ರೂಪಿಸಿದ್ದ "ಸಮುದ್ರ ಮಥನ" ಸ್ತಬ್ಧ ಚಿತ್ರದಲ್ಲಿ ರಬ್ಬರ್ ವಾಸುಕಿಯನ್ನ ಹಿಡಿದೆಳೆವ ಒಬ್ಬ ವೇಷಧಾರಿ ದೇವತೆಯಾಗಿ ಅನಿರೀಕ್ಷಿತವಾಗಿ ಆಯ್ಕೆಯಾದೆ. ಅರುಂಧತಿ ಎನ್ನುವ ನಮ್ಮ ಶಾಲೆಯ ಹಿರಿಯ ವಿಧ್ಯಾರ್ಥಿನಿ ವಿಷ್ಣುವಾಗಿ ಅವತಾರ ಎತ್ತಲಿಕ್ಕಿದ್ದಳು ಅಂತ ನೆನಪು. ಅವಳನ್ನ "ಮುಂಗಾರಿನ ಮಿಂಚು" ಚಿತ್ರ ಕೊನೆಯ ದೃಶ್ಯದಲ್ಲಿ ನೀವು ನೋಡಿರುತ್ತೀರಿ. ಈ ಆಯ್ಕೆಯ ಹಿಂದಿನ ಕಾರಣ ಇಷ್ಟೆ. ನಾನಾಗ ಮಂಗಳೂರಿನಲ್ಲಿ ಓದುತ್ತಿದ್ದೆ. ಬೇಸಿಗೆ ರಜೆಯಲ್ಲಿ ತೀರ್ಥಹಳ್ಳಿಗೆ ಹೋದಾಗ "ಮಾತೃ ಮಂಡಳಿ"ಯ ಪರವಾಗಿ ಶಾಂತಲಾ ಮಾತಾಜಿ ಏರ್ಪಡಿಸುತ್ತಿದ್ದ ಬೇಸಿಗೆ ಶಿಬಿರದಲ್ಲಿ ಭಾಗವಹಿಸುತ್ತಿದ್ದೆ. ಅಲ್ಲಿ ಚೂಟಿಯಾಗಿ ಹೇಳಿದ ಕೆಲಸ ಮಾಡಿ ಕೊಡುತ್ತಾ, ಹೇಳಿ ಕೊಡುತ್ತಿದ್ದ ಎಲ್ಲಾ ಶ್ಲೋಕ ಹಾಗೂ ವೇದವನ್ನ ತಪ್ಪಿಲ್ಲದೆ ಕಲಿತು ಒಪ್ಪಿಸುತ್ತಿದ್ದ ನನ್ನ ಉಚ್ಚಾರದ ಸ್ಪಷ್ಟತೆ ಅವರನ್ನ ಮೊದಲಿಗೆ ಆಕರ್ಷಿಸಲಿಕ್ಕೂ ಸಾಕು. ಜೊತೆಗೆ ನನ್ನ ಚೆಲುವು ಎದ್ದು ಕಾಣುವಷ್ಟು ಅವರ ದೃಷ್ಠಿಗೂ ದೋಷ ಇತ್ತೇನೋ! ಅಂತೂ ಮುಂದಿನ ರಜೆಯಲ್ಲಿ ಊರಿಗೆ ಬಂದವ ನಾನೂ ಅರ್ಜೆಂಟ್ ದೇವತೆಯಾದೆ. ದಸರಾಕ್ಕೆ ಇನ್ನೂ ಹದಿನೈದು ದಿನವಿತ್ತು, ಪರ್ಫೆಕ್ಷನ್ನಿಗೆ ವಿಪರೀತ ಮಹತ್ವ ಕೊಡುತ್ತಿದ್ದ ಶಾಂತಲಾ ಮಾತಾಜಿ ಇನ್ನೂ ಹದಿನೈದು ದಿನ ದೂರವಿದ್ದ ವಿಜಯದಶಮಿಗೆ ಬಹಳ ಕಟ್ಟುನಿಟ್ಟಿನ ಅಭ್ಯಾಸ ಮಾಡಿಸುತ್ತಿದ್ದರು, ಎರಡು ಘಂಟೆ ಗೊಂಬೆಗಳಂತೆ ನಿಲ್ಲುವುದನ್ನು ಕಷ್ಟಪಟ್ಟು ಅಭ್ಯಾಸ ಮಾಡಿಯೆ ಮಾಡಿದೆವು! ನಸುಕಿನಲ್ಲಿ ಎದ್ದು ಬಪಮನ ಮಗ ಸಣ್ಣಣ್ಣ ಕೊಟ್ಟಿದ್ದ ಊರ ತುಂಬಾ "ಕನ್ನಡಪ್ರಭ" 'ಇಂಡಿಯನ್ ಎಕ್ಸ್'ಪ್ರೆಸ್" ಹಂಚುವ ಕೆಲಸ ಮುಗಿಸಿ ಬೆಳಗ್ಯೆ ತಿಂಡಿಯ ನಂತರ ಈ "ಕಲ್ಲಾಗಿ ನಿಲ್ಲುವ" ಹಟಯೋಗವನ್ನು ನಾನು ಕಟ್ಟೆ ಚನ್ನಕೇಶವನ ಬೀದಿಯಲ್ಲಿದ್ದ ಶಾಂತಲಾ ಮಾತಾಜಿಯ ಮನೆಯಲ್ಲಿ ಕಲಿತರೆ, ಸಂಜೆ ಮೂರರ ನಂತರ ಅವರದ್ದೆ "ಮಾತೃ ಮಂಡಳಿ"ಯ ರಾಮ ಮಂದಿರದಲ್ಲಿನ ವೇದ ತರಗತಿಯಲ್ಲಿ ಭಗವತ್ಗೀತೆಯ ಸಾಲುಗಳನ್ನ ಉರು ಹೊಡೆಯುತ್ತಾ ಕಾಲ ಹಾಕುತ್ತಿದ್ದೆ. ನಡುನಡುವೆ ಶಾಂತಲಾ ಮಾತಾಜಿ ಮನೆಯ ಚಿಕ್ಕಪುಟ್ಟ ಕೆಲಸಗಳಿಗೆ ದಿನದ ಕಾರ್ಯ ಚಟುವಟಿಕೆ ಸೀಮಿತವಾಗಿರುತ್ತಿತ್ತು. ಪರಿಸ್ಥಿತಿ ಹೀಗಿರುವಾಗ ನನ್ನ ತಾಯಿ ಹಾಗೂ ತಂದೆಗೆ ನಾನೂ ಒಬ್ಬ ದೇವತೆಯಾಗುವ ಸಂಭ್ರಮದಲ್ಲಿ ಅದನ್ನ ಅವರ ಪರಿಚಿತರ ಕಿವಿಗೆಲ್ಲ ಯಾರೂ ಕೇಳದೆ ಇದ್ದರೂ ಇವರೆ ಬಿತ್ತರಿಸಿ ಬೀಗಿದ್ದರು. ಹೀಗೆ ಖುಷಿಖುಷಿಯಾಗಿದ್ದ ದಸರೆಗೆ ವಾರದ ಅಂತರವಿದ್ದಾಗ ನನಗೆ ತಗುಲಿತು ಮೊದಲ ಆಘಾತ. ನೋಡಲು ಸುಮಾರಾಗಿದ್ದ ಶಾಂತಲಾ ಮಾತಜಿಯ ಇನ್ನೊಬ್ಬ ನನ್ನದೆ ವಯಸ್ಸಿನ ಶಿಷ್ಯೋತ್ತಮನಿಗಾಗಿ ನಾನು ದೇವತೆಯಿಂದ ರಾಕ್ಷಸನಾಗಿ ಪಾತ್ರಾಂತರ ಮಾಡಬೇಕಾಯಿತು. ಸಿರಿವಂತಿಕೆಯೊಂದೆ ಆ ಅರ್ಜೆಂಟ್ ದೇವನಿಗಿದ್ದ ಏಕೈಕ ಯೋಗ್ಯತೆ! . "ಬೇಜಾರು ಮಾಡ್ಕೋಬೇಡ ಪುಟ್ಟು, ರಾಕ್ಷಸರೇನೂ ದೇವತೆಗಳಿಗಿಂತ ಕಡಿಮೆಯವರಲ್ಲ!" ಅಂತ ಹೇಳಿ ಶಾಂತಲಾ ಮಾತಾಜಿ ನನ್ನ ತಲೆ ಸವರಿದರು! ನಾನು ಪಾಲಿಗೆ ಬಂದ ಪಂಚಾಮೃತಕ್ಕೆ ತೃಪ್ತಿಪಟ್ಟು ಅದನ್ನೆ ಶ್ರದ್ದೆಯಿಂದ ಅಭ್ಯಸಿಸಿದೆ. ದಸರೆಗೆ ಇನ್ನೂ ವಾರದ ಅಂತರವಿದ್ದುದರಿಂದ ರಾಕ್ಷಸನಾಗಿಯೆ ನನ್ನ ಸ್ತಬ್ಧ ನಟನಾ ಸಾಮರ್ಥ್ಯ(!) ಮೆರೆಯಲು ಅಭ್ಯಾಸ ನಿರತನಾದೆ. ಆದರೆ ನನ್ನ ಈ ಶ್ರದ್ಧೆಗೆ ಇನ್ನೊಂದು "ಪ್ರಭಾವಿ" ಸಹಪಾಠಿಯ ಪ್ರತಿಭಾ ಪ್ರದರ್ಶನದ ತವಕ ಅಷ್ಟಮಿಯಂದೆ ವೀಟೊ ಚಲಾಯಿಸಿತು. ಪುನಃ " ಪುಟ್ಟೂ... ಛೆ ಆ ಬಿಸಿಲಲ್ಲಿ ಅಷ್ಟೆಲ್ಲ ಹೊತ್ತು ನಿಲ್ಲೋದು ತುಂಬಾ ಕಷ್ಟ! ಅದೆಲ್ಲ ಅಂತವರಿಗೆ(?) ಇರ್ಲಿ ಬಿಡು. ಬಿಸಿಲಲ್ಲಿ ನಿಂತರೆ ನೀನು ಕಪ್ಪಾಗಿ ಬಿಡ್ತೀಯ?!, ನೀನು "ಮಾತೃ ಮಂಡಳಿ"ಯ ಬ್ಯಾನರ್ ಹಿಡಿದು ಕೊಂಡು ಆರಾಮವಾಗಿ ವ್ಯಾನಿನ ಹಿಂದೆ ಕೂತುಕೋ ಆರಾಮಾಗಿರುತ್ತೆ!!!" ಅಂತ ಶಾಂತಲಾ ಮಾತಾಜಿ ಮತ್ತೆ ನಯವಾಗಿಯೆ ನನ್ನ ತಲೆ ಸವರಿದರು!. ಮೊದಲಿನಿಂದಲೂ ಇಂತಹ ಪಕ್ಷಪಾತ ನೈಪುಣ್ಯತೆಯಲ್ಲಿ ಪಳಗಿದ್ದ ಅವರಿಗದು ಸಹಜವಾಗಿತ್ತು. ಇದಕ್ಕೆ ಒಂಚೂರೂ ಮನಸಿಲ್ಲದಿದ್ದರೂ, ಅಸಹಾಯಕತೆಯಿಂದ ಕಣ್ತುಂಬಿ ಬಂದರೂ ನಾನು ಅವರ ಸಿಹಿ ಲೇಪಿಸಿದ ಕ್ವಿನೈನಿನಂತಹ ಮೃದು ಮಾತುಗಳಿಗೆ ಗೋವಿನಂತೆ ತಲೆಯಾಡಿಸಿದೆ. ವಿಜಯದಶಮಿಯ ಮೆರವಣಿಗೆಯುದ್ದಕ್ಕೂ ಆಗಾಗ ನಾನು ಕಣ್ಣನ್ನ ಒರೆಸಿಕೊಳ್ಳುತ್ತಿದ್ದೆ. ಇಡಿ ಮೆರವಣಿಗೆ ನನಗೆ ಮಂಜುಮಂಜಾಗಿ ಕಾಣಿಸುತ್ತಿತ್ತು. ನನ್ನ "ದೇವತೆ ಪಾತ್ರ"ವನ್ನ ನೋಡಲು ಕೊಪ್ಪ ಸರ್ಕಲ್ಲಿನ ರಸ್ತೆ ಪಕ್ಕದ ಜಂಗುಳಿಯಲ್ಲಿ ಕುತ್ತಿಗೆ ಉದ್ದ ಮಾಡಿಕೊಂಡು ಕಾಯುತ್ತಿದ್ದ ನನ್ನ ತಂದೆ- ತಾಯಿ ಅದೆಷ್ಟೇ ಕಣ್ಣು ಕಿರಿದುಗೊಳಿಸಿಕೊಂಡು ಹುಡುಕಿದರೂ ದೇವತೆಗಳ ಸಾಲಿನಲ್ಲಾಗಲಿ- ರಾಕ್ಷಸರ ಗುಂಪಿನಲ್ಲಾಗಲಿ ನನ್ನನವರು ಕಾಣಲಿಲ್ಲ. ಕಡೆಗೆ ಸ್ತಬ್ಧಚಿತ್ರದ ಮೂಲೆಯಲ್ಲಿ ಬ್ಯಾನರ್ ಹಿಡಿದು ಕೂತ ಉರಿ ಬಿಸಿಲಿಗೆ ಕೆಂಪೇರಿ ಮುದುದಿದ್ದ್ದ ನನ್ನ ಮುಖವನ್ನ ನೋಡಿ ಅವರ ಮುಖದಲ್ಲಿ ಕಂಡ ನಿರಾಸೆ ಇನ್ನೂ ನನ್ನ ನೆನಪಿನಲ್ಲಿಯೆ ಅಚ್ಚು ಹಾಕಿದಂತೆ ಉಳಿದಿದೆ. ನಾನು ಕೊನೆಯ ಕ್ಷಣದವರೆಗೂ ನನ್ನ ಈ ಪಾತ್ರಾಂತರದ ಗುಟ್ಟನ್ನ ಮನೆಯಲ್ಲಿ ಬಿಟ್ಟು ಕೊಟ್ಟಿರಲೇ ಇಲ್ಲ! ನಾನೂ ಒಬ್ಬ ಎಳೆಯನಾಗಿದ್ದ ಕಾಲ ಅದು. ಇನ್ನೊಬ್ಬ ಎಳೆಯನ ಮನ ಅರಳಿಸಲು ಮುಲಾಜಿಲ್ಲದೆ ಒಂದು ಮಗುವಿನ ಮನ ಮುದುಡಿಸಲು ಶಾಂತಲಾ ಮಾತಾಜಿಗೆ ಮನಸಾದರೂ ಹೇಗೆ ಬಂತು? ಎನ್ನುವ ಪ್ರಶ್ನೆ ಇನ್ನೂ ನನ್ನ ಮನಸಿನಲ್ಲಿ ಉಳಿದಿದೆ. ನಾನು ಆ ಪಾತ್ರವನ್ನ ಎಂದೂ ಬೇಡಿರಲಿಲ್ಲ. ಅವರೇ ಕರೆದು ಕೊಟ್ಟರು, ಇನ್ನೊಬ್ಬನ ಪ್ರವೇಶವಾದಾಗ ನನ್ನನ್ನ ಅವರೆ ಕೆಳ ದೂಡಿದರು! ಅವರ ಈ ಕಸರತ್ತಿನಲ್ಲಿ ಹಣವಂತನಾಗಿಲ್ಲದಿದ್ದುದೆ ನನ್ನ ಕೊರತೆಯಾಗಿತ್ತೆ? ಶಿಕ್ಷಕ ವೃತ್ತಿಯಲ್ಲಿರುವವರಿಗೂ ಸಮತೆಯ ದೃಷ್ಟಿ ಇರದಿರುವುದು ಶಿಕ್ಷಣ ವ್ಯವಸ್ಥೆಯ ಕೊರತೆಯಲ್ಲವೆ? ಹೀಗೆ ತಾರತಮ್ಯಕ್ಕೆ ಒಳಗಾದ ಮಗು ಮುಂದೆ ಸಿನ್ಕನಾಗುವ ಅಪಾಯ ಇದೆಯಲ್ಲವೇ? ಹೀಗೆ ಉತ್ತರ ಕಾಣದ ಅನೇಕ ಪ್ರಶ್ನೆಗಳು ನನ್ನೊಳಗೆ ಇನ್ನೂ ಹಾಗೆ ಉಳಿದಿವೆ. ಉತ್ತರಿಸಲು ಶಾಂತಲಾ ಮಾತಾಜಿ ಇಂದೂ ಬದುಕಿ ಉಳಿದಿರುವ ಬಗ್ಗೆ ನನಗೆ ಸಂಶಯವಿದೆ. ಬೇಸರವಿದೆ ನಿಜ ಅದಕ್ಕಿಂತಲೂ ಹೆಚ್ಚು ಅನುಕಂಪ ಅವರ ಮೇಲೆ ಈಗ ನನಗಿದೆ. ಅಷ್ಟು ಸೂಕ್ಷ್ಮವಾಗಿ ಆಲೋಚಿಸದ್ದು ಅವರ ಸಂಸ್ಕಾರದ ಮಿತಿ ಅಂದು ಕೊಳ್ಳುತ್ತೇನೆ. ಎಲ್ಲಿದ್ದರೂ ಅವರ ಆತ್ಮಕ್ಕೆ ಶಾಂತಿಯನ್ನ ಮನಃಪೂರ್ವಕ ಬಯಸುತ್ತೇನೆ. ಅದೇನೆ ಇದ್ದರೂ ನನಗೆ ಭಾಷೆಯೊಂದರ ಹೊಸ ಪರಿಚಯ ಮಾಡಿಸಿದ್ದ ಶಾಂತಲಾ ಮಾತಾಜಿಗೆ ನಾನು ಚಿರಋಣಿ. ಗುರು ಋಣವನ್ನ ಎಂದೂ ತೀರಿಸಲಾರೆ. ಪರದೇಶಿ ಇಂಗ್ಲಿಷಿನ ಸೋಂಕನ್ನ ನನಗೆ ಮೊದಲು ತಗಲಿಸಿದ್ದು ಶಾಂತಲಾ ಮಾತಾಜಿ, ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದ ನಮಗೆ ಅಧಿಕೃತವಾಗಿ ಆಂಗ್ಲ ಭಾಷಾ ಪರಿಚಯ ಆಗಲಿಕ್ಕಿದ್ದುದು ಸರಕಾರಿ ಭಾಷಾ ನೀತಿಯ ಪ್ರಕಾರ ಐದನೆ ತರಗತಿಯಿಂದ. ಆದರೆ ಶಾಂತಲಾ ಮಾತಾಜಿಯ ಕೃಪೆಯಿಂದ ನಾವೆಲ್ಲಾ ಒಂದನೆ ತರಗತಿಯಲ್ಲಿಯೆ "ಕನ್ನಡ ಮಾಧ್ಯಮ"ದಲ್ಲಿದ್ದು ಕೊಂಡೂ "ಇಂಗ್ಲೀಷ್ ಪಂಡಿತ"ರಾಗಿದ್ದೆವು!. ನಾವೆಲ್ಲಾ ಅವರನ್ನ ಇಂಗ್ಲೀಶ್ ಮಾತಾಜಿ ಅಂತ ಕರಿಯುತ್ತಿದ್ದೆವು. ಅವರ ಊರು ನಾವು ಕೇಳಿ ಮಾತ್ರ ಗೊತ್ತಿದ್ದ ದೂರದ ಮದರಾಸಂತೆ. ಅಲ್ಲಿನ ಕಸಗುಡಿಸುವವರೂ ಕೂಡ ಸ್ವಚ್ಛ ತಮಿಳಿನಲ್ಲಿ ಮಾತನಾಡುತ್ತಾರಂತೆ ! ಈ ಸಂಗತಿ ಕನ್ನಡ ಮಾತ್ರ ಗೊತ್ತಿದ್ದ ನಮ್ಮಂತವರಿಗೊಂದು ವಿಸ್ಮಯದ ಸಂಗತಿಯಾಗಿತ್ತು. ಆದರೆ ಅವರು ಬಹಳ ಹಿಂದಿನಿಂದಲೆ ತೀರ್ಥಹಳ್ಳಿಯಲ್ಲಿ ನೆಲೆಸಿದ್ದರು. ಅವರ ಗಂಡನಿಗೆ ಇಲ್ಲಿಯೆ ಏನಾದರೂ ಕೆಲಸ ಇತ್ತೇನೊ ಗೊತ್ತಿಲ್ಲ. ಅವರಿಗೆ ಮಕ್ಕಳ ಭಾಗ್ಯವಿರಲಿಲ್ಲ. ಹೀಗಾಗಿ ಅವರು ನಮ್ಮ ಶಾಲೆ "ಸೇವಾಭಾರತಿ"ಯಲ್ಲಿ ಸ್ವಯಂ- ಶಿಕ್ಷಕಿಯಾಗಿ ಮಕ್ಕಳೊಂದಿಗೆ ಬೆರೆಯುತ್ತಿದ್ದರು, ಗೌಡ ಸಾರಸ್ವತರಾಗಿದ್ದ ಅವರ ಮಾತೃ ಭಾಷೆ ಕೊಂಕಣಿ. ತೀರ ಹಳ್ಳಿಗರಾಗಿದ್ದು ಮಾತೃಭಾಷೆಯಾಗಿದ್ದ ತುಳು, ಕೊಂಕಣಿ, ಬ್ಯಾರಿ, ಕನ್ನಡದ ಹೊರತು ಇನ್ಯಾವುದೆ ಭಾಷೆಯ ಪರಿಚಯವಿಲ್ಲದಿದ್ದ ನಮಗೆ ಏಕಕಾಲದಲ್ಲಿ ಕನ್ನಡ, ಹಿಂದಿ, ಸಂಸ್ಕೃತ, ತಮಿಳು, ಕೊಂಕಣಿ ಹೀಗೆ ಹಲವು ಭಾಷೆಗಳನ್ನ ಮಾತಾಡ ಬಲ್ಲವರಾಗಿದ್ದ ಶಾಂತಲಾ ಮಾತಾಜಿ ನಡೆದಾಡುವ ಆಲ್ ಇಂಡಿಯಾ ರೇಡಿಯೋದಂತೆ ಕಾಣಿಸುತ್ತಿದ್ದರು! ಅವರ ಕೀರಲಾದ ದೊಡ್ಡ ಧ್ವನಿಯೂ ಈ ಉಪಮಾಲಂಕಾರಕ್ಕೆ ಪೂರಕವಾಗಿತ್ತು. ನಮಗೆಲ್ಲರಿಗೂ ಅವರೆ ಇಂಗ್ಲೀಷಿನ ಮೊದಲ ಪರಿಚಯ ಮಾಡಿಸಿದರು. ರಾಷ್ಟ್ರೋತ್ಥಾನ ಪರಿಷತ್ತಿನ ಅಂಗವಾಗಿದ್ದ ನಮ್ಮ ಶಾಲೆ ಅದೆ ಪರಿಷತ್ತಿನ ಇನ್ನೊದು ಅಂಗವಾಗಿದ್ದ "ಮಾತೃ ಮಂಡಳಿ"ಯ ಕಾರ್ಯಕರ್ತೆಯಾಗಿದ್ದ ಶಾಂತಲಾ ಮಾತಾಜಿಯವರನ್ನ ಗೌರವ ಶಿಕ್ಷಕಿಯಾಗಿ ನಮ್ಮ ಶಾಲೆಯಲ್ಲಿ ಬೋಧಿಸಲು ಅವಕಾಶ ಕೊಟ್ಟಿತ್ತು. ನಾವು ನೋಡುವಾಗಲೆ ಬೆಳ್ಳಿ ಕೂದಲಿನವರಾಗಿದ್ದ ಶಾಂತಲಾ ಮಾತಾಜಿ ತಮ್ಮ ಕೋಳಿ ಜುಟ್ಟಿನಂತಹ ಕಿರು ಕೇಶರಾಶಿಗೆ ಒಂದು ರಿಬ್ಬನ್ ಸಿಕ್ಕಿಸಿಕೊಂಡು ತಮ್ಮ ಗೋಪಾದದಷ್ಟು ಕೂದಲನ್ನ ಬಿಗಿಯಾಗಿ ಕಟ್ಟಿಕೊಳ್ಳುತ್ತಿದ್ದರು. ಅವರ ಇಂಗ್ಲಿಶ್ ಪಾಠಕ್ಕೆ ಅವರೆ ಒಂದು ಪಾಠದ ಕ್ರಮವನ್ನು ರೂಪಿಸಿಕೊಂಡಿದ್ದರು. ವರ್ಷಕ್ಕೊಮ್ಮೆ ಬೆಂಗಳೂರಿನಿಂದ ಅವರೆ ಮಾಡಿಸಿದ ನಾಲ್ಕು ಬಗೆಯ ಪಾಠ ಪುಸ್ತಕಗಳು ನಮ್ಮ ಶಾಲೆಗೆ ಬಂದು ಮುಟ್ಟುತ್ತಿದ್ದವು. ಐದನೆ ತರಗತಿಯಿಂದ ಸರಕಾರದ ಪಾಠ ಪುಸ್ತಕಗಳು ಅಧಿಕೃತ ಇಂಗ್ಲಿಶ್ ಕಲಿಕೆಗಾಗಿ ನಮ್ಮ ಕೈ ಸೇರುವ ಮುಂಚೆಯೆ ಶಾಂತಲಾ ಮಾತಾಜಿಯ ಕೃಪೆಯಿಂದ ಅವುಗಳಲ್ಲಿರುತ್ತಿದ್ದ ಅನೇಕ ಪದ್ಯಗಳು ಈ ಮೂಲಕ ನಮಗೆ ಬಾಯಿಪಾಠವಾಗಿ ಹೋಗಿರುತ್ತಿದ್ದವು! ಅಗತ್ಯವಿತ್ತೋ ಇಲ್ಲವೋ ಅಂತೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಾಗಿದ್ದರೂ ನಮಗೆ ಆರಂಭಿಕ ಇಂಗ್ಲಿಶ್ ಕಲಿಕೆಗೂ ಹೀಗೆ ಅವಕಾಶ ಒದಗಿ ಬಂದಿತ್ತು. ಮೊದಲ ಶಾಲೆಯಾಗಿದ್ದ ಬಾಲವಾಡಿಯಲ್ಲಿ ಸಾಥ್ ಕೊಟ್ಟಿದ್ದ ರೊಟ್ಟಿ ಅಂಗಡಿ ಕಿಟ್ಟಪ್ಪನೆ ಶಾಂತಲಾ ಮಾತಾಜಿಯ "ಕ್ಲಾಸ್"ನಲ್ಲಿ ಹಾಟ್ ಕ್ರಾಸ್ ಬನ್ ಮಾರುತ್ತಿದ್ದ! ಮೈಸೂರಿನ ಅರಮನೆಗೆ ದಸರೆ ನೋಡಲು ಹೋಗಿದ್ದ ಮುದ್ದಿನ ಸೊಕ್ಕಾಗಿದ್ದ ಬೆಕ್ಕು ಇವರ ಇಂಗ್ಲಿಶ್ ರಿಮೇಕಿನಲ್ಲಿ ಅದು ಹೇಗೊ ಅಷ್ಟು ದೂರದ ಲಂಡನ್ನಿಗೆ ಫೆಸ್ಟಿವಲ್ ನೋಡಲು ಹೋಗಿ ಬಂದಿರುತ್ತಿತ್ತು!! ಇಲ್ಲಿನ ಬೆಕ್ಕು ರಾಣಿಯ ಜೊತೆಗೆ ರಾಜನೂ ಇದ್ದ ಮೈಸೂರಿನ ಅಂತಃಪುರದೊಳಗೆ ಹೊಕ್ಕಿ ಬಂದಿದ್ದಾರೆ, ಅವರ ಪುಸ್ಸಿ ಕ್ಯಾಟ್ ಲಂಡನ್ನಿನಲ್ಲಿ ಕ್ವೀನನ್ನ ನೋಡಿಯೆ ಬಂದಿರುತ್ತಿದ್ದು ವಿಸ್ಮಯ ಹುಟ್ಟಿಸುತ್ತಿತ್ತು. ಬಾವಿಗೆ ನೀರು ತರಲು ಹೋಗುತ್ತಿದ್ದ ನಮ್ಮ ಪುಟ್ಟಾ-ಪುಟ್ಟಿ ಅವರ ಇಂಗ್ಲಿಷಿನಲ್ಲಿ ಜಾಕ್ ಎಂಡ್ ಜಿಲ್ಲಾಗಿ ನೀರು ಹೊತ್ತು ತರಲು ಗುಡ್ಡಕ್ಕೆ ಹತ್ತಿ ಹೋಗಿರುತ್ತಿದ್ದರು!!! ನಮ್ಮ ತಿಂಡಿ ಬೇಡುತ್ತಿದ್ದ ನಾಯಿ ಮರಿಯೆ ಅವರ ಬಿಸ್ಕೆಟ್ ಬೇಡುವ ಟಾಮಿಯಾಗಿರುತ್ತಿತ್ತು !!! ನೀರು ತರದ ಸೋಮಾರಿ ಮಲ್ಲ, ಜಾನಿಯಾಗಿ ಪಪ್ಪನ ಮುಂದೆ ಎಸ್ ಹೇಳುತ್ತಿದ್ದ!!! ಹೀಗಾಗಿ ಶಾಂತಲ ಮಾತಾಜಿ ನಮಗೆ ಮೋಡಿ ಹಾಕಲು ಹೆಚ್ಚು ಶ್ರಮ ಪಡುವ ಅಗತ್ಯ ಬೀಳಲೆ ಇಲ್ಲ. ಹೀಗೆ ಇಂಗ್ಲಿಷ್ ಜಗತ್ತಿನ ಕಿರು ಕಿಟಕಿಯನ್ನ ನನ್ನ ಬಾಳಲ್ಲಿ ಮೊದಲಿಗೆ ತೆರೆದು ಇನ್ನೊಂದು ವಿಚಿತ್ರ ಪ್ರಪಂಚದ ವಿಸ್ಮಯಗಳನ್ನು ಪರಿಚಯಿಸಿ ಕೊಟ್ಟವರು ಶಾಂತಲಾ ಮಾತಾಜಿ. ಅಲ್ಲಿಯವರೆಗೂ ಕೇವಲ ಒಂದು ಎರಡಷ್ಟೇ ಕಲಿತು ಗೊತ್ತಿದ್ದ ನನಗೆ ವನ್ ಟೂವನ್ನು ಕಲಿಸಿದ, "ಪ್ರಭಾವ- ವಿಭವ" ದಂತಹ ಸಂವತ್ಸರಗಳ ಹೆಸರನ್ನ, ರವಿವಾರದಿಂದ- ಶನಿವಾರದವರೆಗಿನ ವಾರಗಳನ್ನ, ಚೈತ್ರ - ವೈಶಾಖದಂತಹ ಮಾಸಗಳನ್ನ. ಅನುರಾಧಾ- ಮೂಲದಂತಹ ನಕ್ಷತ್ರಗಳ ಹೆಸರನ್ನಷ್ಟೆ ಉರು ಹೊಡೆದು ನೆನಪಿಟ್ಟುಕೊಳ್ಳುತ್ತಿದ್ದ ನಾನು ಸಂಡೆ ಮಂಡೆಯಿಂದಾರಂಭಿಸಿ ಜನವರಿ- ಡಿಸೆಂಬರಿನ ಗಡಿಯನ್ನ ಶ್ರಮವಿಲ್ಲದೆ ಮುಟ್ಟಿಬರಲು ಸಾಧ್ಯವಾಗುವಂತಾಗಿಸಿದ ಆರಂಭಿಕ ಆಸರೆಯ ಕಿರು ಬೆರಳು ಶಾಂತಲಾ ಮಾತಜಿಯದ್ದೆ. ಹೀಗಾಗಿ ತಂಪು ಹೊತ್ತಿನಲ್ಲಿ ಅವರನ್ನ ನೆನೆಯುತ್ತೇನೆ. ದಸರಾ ಮತ್ತೆ ಮರಳಿ ಬಂದಾಗ ಇವೆಲ್ಲ ಮತ್ತೆಮತ್ತೆ ನೆನಪಾಗುತ್ತವೆ. ಕಹಿಯಾಗಿದ್ದರೂ ನೆನಪು ನನ್ನದೆ ತಾನೆ?

ವಲಿ.... (ಭಾಗ -10 )


ಮೆಕ್ಕಾ ಪಟ್ಟಣವನ್ನು ತ್ಯಜಿಸಿದ ಎಂಟನೆ ದಿನ ಅವರ ಸವಾರಿ ಮದೀನ ಪಟ್ಟಣದ ಮೇರೆಯನ್ನು ಹೋಗಿ ಮುಟ್ಟಿತು. ಆದರೆ ಆ ಕೂಡಲೆ ಪುರ ಪ್ರವೇಶಿಸದ ಅವರಿಬ್ಬರೂ ಹತ್ತಿರದ ಕೊಬಾ ಎನ್ನುವ ಹಳ್ಳಿಯಲ್ಲಿಯೆ ಉಳಿದುಕೊಂಡರು. ಮದೀನಾ ವಾಸಿಗಳಲ್ಲಿ ಕೆಲವರು ಅದಾಗಲೇ ನೂತನ ಇಸ್ಲಾಮನ್ನು ಒಪ್ಪಿಕೊಂಡಿದ್ದರೂ ಸಹ ಮೆಕ್ಕಾದಲ್ಲಿ ಆದಂತೆ ಇಲ್ಲಿಯೂ ಅವರ ಬುಡಕಟ್ಟಿನೊಳಗೆ ಅದೆ ಕಾರಣಕ್ಕೆ ಒಡಕು ಉಂಟಾಗಿರಬಾರದೇಕೆ? ಅವರು ಅದೇನೆ ಹೊಸ ಧರ್ಮ ಪಾಲಿಸುವ ಪ್ರಮಾಣ ಮಾಡಿದ್ದರೂ ಅವರನ್ನ ಮುಕ್ತವಾಗಿ ನಂಬೋದು ಹೇಗೆ? ಏಕಾಏಕಿ ನಾವು ಅಲ್ಲಿಗೆ ಕಾಲಿಟ್ಟರೆ ದೊರೆಯುವ ಆತಿಥ್ಯದ ಭೀಕರತೆ ಹೇಗಿರಬಹುದು? ಎನ್ನುವ ಆತಂಕಗಳೆಲ್ಲ ಸಹಜವಾಗಿ ಇದ್ದುದರಿಂದ ಈ ಸಂಶಯಾಸ್ಪದ ಆತ್ಮರಕ್ಷಕ ನಡೆಯನ್ನ ಮಹಮದ್ ಹಾಗೂ ಅಬು ಬಕರ್ ಅನುಸರಿಸಿದರು. ನೂತನ ಮತಾಂತರಿಗಳನ್ನ ಇನ್ನೊಮ್ಮೆ ಪರೀಕ್ಷಿಸಿಯೆ ಅಲ್ಲಿಗೆ ಕಾಲಿಡಲು ಅವರಿಬ್ಬರೂ ನಿರ್ಧರಿಸಿದರು. ಕೊಬಾದ ಮುಖಂಡ ಕುಲ್ತ್ಹುಂ ಎಂಬಾತನ ಮನೆಯಲ್ಲಿ ಮುಸಾಫಿರನಾಗಿ ಮಹಮದ್ ಆಶ್ರಯ ಪಡೆದರೆ, ಅಬು ಬಕರ್ ಖಾರಿಜಾ ಎಂಬಾತನ ಅತಿಥಿಯಾದ. ಈ ಆತಿಥ್ಯ ಪಡೆಯುವ ಭರದಲ್ಲಿ ಅಬು ಬಕರ್ ಖಾರಿಜಾನ ಮಗಳನ್ನ ಮುಂದೆ ಮದುವೆಯೂ ಆಗಿ ಮಾವನ ಮನೆಯಳಿಯನಾಗಿ ಅಲ್ಲಿಯೆ ಖಾಯಂ ಠಿಕಾಣಿ ಹೂಡಿದ! ಇದರ ಮೂರು ದಿನಗಳ ನಂತರ ಮಹಮದನ ದೊಡ್ಡಪ್ಪನ ಮಗ ಅಲಿ ಮೆಕ್ಕಾದಿಂದ ಪಾರಾಗಿ ಬಂದು ಕೊಬಾದಲ್ಲಿ ಅಣ್ಣನನ್ನು ಸೇರಿ ಕೊಂಡನು. ಅದರ ಮುಂದಿನ ಶುಕ್ರವಾರ ಮಹಮದ್, ಅಬು ಬಕರ್ ಹಾಗೂ ಅಲಿ ಈ ಮೂವರೂ ಸೇರಿ ಮದೀನಾದ ದಾರಿ ಹಿಡಿದರು. ದಾರಿಯ ಮಧ್ಯದಲ್ಲಿ ಬೆನ್ ಸಾಲಿಂ ಎಂಬ ಸ್ಥಳದಲ್ಲಿ ಪ್ರಯಾಣಕ್ಕೆ ವಿರಾಮ ಕೊಟ್ಟು ಒಂದು ಪ್ರಾರ್ಥನಾ ಸ್ಥಳದಲ್ಲಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸಿದರು. ಈ ಸ್ಥಳದಲ್ಲಿ ಒಂದು ಮಸೀದಿ ಕಟ್ಟಿಸಿದ ಮುಸ್ಲೀಮರು ಮುಂದೆ ಇದನ್ನೆ "ಜುಮ್ಮಾ ಮಸೀದಿ" ಎಂದು ಕರೆದರು.. ಮಹಮದ್ ಹಾಗೂ ಅವನ ಅನುಚರರ ಸವಾರಿ ಮದೀನದತ್ತ ಹೆಜ್ಜೆ ಹಾಕುತ್ತಿದ್ದ ಹಾಗೆ ಅದಾಗಲೆ ಇಸ್ಲಾಮಿನತ್ತ ಆಕರ್ಷಿತರಾಗಿದ್ದ ಆಸಕ್ತ ಜನರು ಇವರನ್ನು ದಾರಿಯುದ್ದ ಅವರನ್ನು ಸ್ವಾಗತಿಸಿ ಆದರಿಸಿದರು. ದಾರಿಯಲ್ಲಿ ಬಳಲಿದ ಮಹಮದನ ಒಂಟೆ ಬಳಲಿ ಒಂದು ಖರ್ಜೂರದ ತೋಟದಲ್ಲಿ ನಿಂತಿತು. ಆ ಜಾಗ ಯಾರದ್ದೆಂದು ವಿಚಾರಿಸಲು ಮಹಮದ್ ಒಂಟೆಯಿಂದ ಕೆಳಗಿಳಿದ. ಖರ್ಜೂರದ ಮರಗಳಿಂದ ಆವೃತ್ತವಾಗಿದ್ದ ಆ ಜಾಗ ಬೆನ್ ಆನ್ ನೆಝಾರ್ ಕುಟುಂಬಸ್ಥರದ್ದು ಅನ್ನುವ ಪತ್ತೆಯಾಯಿತು. ಮನೆಯೊಡೆಯ ಅಬು ಅಯೂಬನ ಪರಿಚಯವಾಗಿ ಆತ ಅತಿಥಿಗಳನ್ನ ಸತ್ಕರಿಸಿದ. ಈ ಸತ್ಕಾರಕ್ಕೆ ಮಾರುಹೋದ ಮಹಮದ್ ಮುಂದೆ ಮದೀನದಲ್ಲಿ ತನ್ನ ಮನೆ ಹಾಗೂ ಸ್ವಂತ ಮಸೀದಿಯ ನಿರ್ಮಾಣ ಆಗುವವರೆಗೂ ಅಬು ಅಯೂಬನ ಅತಿಥಿಯಾಗಿಯೆ ಉಳಿದ. ಅಲ್ಲಿ ಮೊದಲಿಗೆ ಒಂಟೆ ಬಳಲಿ ನಿಂತ ಜಾಗವನ್ನು ಖರೀದಿಸಲು ನಿರ್ಧರಿಸಿದ ಮಹಮದ್ ಅದರ ಮಾಲಕರನ್ನು ಹುಡುಕಿಸಿದ. ಅವರು ಅನಾಥ ಬಡಪಾಯಿಗಳಾಗಿದ್ದರು. ಅವರಿಗೆ ಹಣ ಪಾವತಿಸಿ ಜಾಗ ಕೊಂಡ ನಂತರ ಅಲ್ಲಿದ್ದ ಮರಗಳನ್ನ ಕಡಿಸಿ ಅನಂತರ ಅಲ್ಲಿದ್ದ ಎಲ್ಲಾ ಹಳೆ ಗೋರಿಗಳನ್ನ ಆಗಿಸಿ ಸಿಕ್ಕ ಮೂಳೆಯ ಅವಶೇಷಗಳನ್ನ ಅಲ್ಲಿಂದ ದೂರ ಸಾಗಿಸಿದ ನಂತರ ಮನೆ ಹಾಗೂ ಮಸೀದಿ ನಿರ್ಮಾಣಕ್ಕೆ ಅಡಿಪಾಯ ಹಾಕಿಸಿದ ಎನ್ನುತ್ತಾನೆ ತನ್ನ " ಸೀಲ್ದ್ ನೆಕ್ತರ್" ಕೃತಿಯಲ್ಲಿ ಇತಿಹಾಸಕಾರ ಅಲ ಮುಬಾರಖಿ. ಇದಾದ ನಂತರ ಮೆಕ್ಕದಿಂದ ಹೆಣ್ಣು ಮಕ್ಕಳಾದ ಉಂಕುಲ್ಸುಂ, ಫಾತಿಮಾ ಹಾಗೂ ಹೆಂಡತಿ ಸೌದಾಳನ್ನು ತಾನಿದ್ದಲ್ಲಿಗೆ ಮಹಮದ್ ಕರೆಸಿಕೊಂಡ. ಮಹಮದನ ಹಿರಿಯ ಮಗಳಾದ ಜೈನಬ್ ಹಾಗೂ ಅವಳ ಗಂಡನ ಹೊರತು ಇನ್ನುಳಿದ ಕುಟುಂಬವರ್ಗದವರೆಲ್ಲ ಮದೀನಕ್ಕೆ ಬಂದು ಮುಟ್ಟಿದರು.ಈ ಹಿಂದೆಯೆ ಮೆಕ್ಕಾದಿಂದ ಓಡಿ ಹೋಗಿದ್ದ ಗುಪಿನಲ್ಲಿ ಇನ್ನೊಬ್ಬ ಮಗಳು ರೋಕೈರಾ ಹಾಗೂ ಅವಳ ಗಂಡ ಒತ್ತೆಮನ್ ಬಂದಿದ್ದರು. ಮಹಮದನ ಆಪ್ತ ಗುಲಾಮ ಜೈದ್ ತನ್ನ ಪತ್ನಿ ಉಂಐಮನ್ ಹಾಗೂ ಮಗ ಒಸಾಮನೊಂದಿಗೆ ಮದೀನದಲ್ಲಿಯೆ ಸ್ವಲ್ಪ ಸಮಯ ಹಿಂದಿನಿಂದ ಬೀಡು ಬಿಟ್ಟಿದ್ದ. ಅಬು ಬಕರನ ಸಂಸಾರವೂ ಮಹಮದನ ವಧುವಾಗಿದ್ದ ಎಳೆಯ ಮಗಳು ಆಯೆಷಾಳೊಂದಿಗೆ ಮದೀನದಲ್ಲಿಯೆ ನೆಲೆ ಕಂಡಿತು. ಆದರೆ ಆ ಸಮಯದಲ್ಲಿ ಮದೀನದ ಹವೆ ಅಷ್ಟೇನೂ ಹಿತಕರವಾಗಿಲ್ಲದೆ ಇದ್ದುದರಿಂದ ಬಂದ ಆರಂಭದಲ್ಲಿ ಅವರೆಲ್ಲರೂ ಒಂದಲ್ಲಾ ಒಂದು ಖಾಯಲೆಗೆ ತುತ್ತಾಗಿ ನರಳಿದರು. ಅನಾರೋಗ್ಯದ ಸರಣಿ ಅವರನ್ನ ಕಾಡಿತು. ಮದೀನದ ಪ್ರಜೆಗಳೊಂದಿಗೆ ಭ್ರಾತ್ತ್ರತ್ವ ಬೆಳೆಸುವ ಇರಾದೆಯಿಂದ ತನ್ನೊಂದಿಗೆ ಬಂದ ಎಲ್ಲಾ ಮೆಕ್ಕಾ ಮೂಲದವರಿಗೂ ಸ್ಥಳೀಯ ಮದೀನ ವಾಸಿಗಳಲ್ಲಿ ಇಬ್ಬರನ್ನು ತಮ್ಮ ಸಹೋದರರೆಂದು ಭಾವಿಸಿ ಅವರ ಜೊತೆಗೂಡಿ ಜೀವನ ಸಾಗಿಸುವ ಸೂತ್ರ ಜಾರಿಗೆ ತಂದ. ಆದರೆ ಈ ಸೂತ್ರ ಕೇವಲ ಪುರುಷ ನಿರಾಶ್ರಿತರಿಗೆ ಅನ್ವಯವಾಗುತ್ತಿತ್ತು ಅನ್ನುವುದು ಗಮನಾರ್ಹ ! ಇತಿಹಾಸಕಾರ ಅಲ್ ಮುಬಾರಖಿ ಈ ಈ ಸ್ನೇಹ-ಸಂಬಂಧ ಹಾಗೂ ಭ್ರಾತ್ರತ್ವದ ಮಹಿಮೆ ಸಾರುವ ಉದಾಹರಣೆಯನ್ನು ನೀಡುತ್ತಾನೆ. ಅಬ್ದುಲ್ ರೆಹಮಾನ್ ಎನ್ನುವ ಮೆಕ್ಕಾವಾಸಿ ಇಸ್ಲಾಂ ಸ್ವೀಕರಿಸಿ ಮದೀನಕ್ಕೆ ನಿರಾಶ್ರಿತನಾಗಿ ಬಂದು ಮುಟ್ಟಿದಾಗ ಅವನನ್ನು ಸಾದ್ ಇಬ್ನ ಅರಬ್ ಎಂಬಾತನ ಮನೆಯಲ್ಲಿ ನಿಲ್ಲಲು ನೆಲೆ ಕಲ್ಪಿಸಿ ಅವನನ್ನು ತನ್ನ ಸಹೋದರನಂತೆ ನೋಡಿಕೊಳ್ಳಲು ಮಹಮದ್ ಸೂಚಿಸಿದ. ನೂತನ ಮತಾಂತರಿಯಾಗಿದ್ದ ಸಾದ್ ಇಬ್ನ ಅರಬ್ ತನ್ನ ಮನೆಯಲ್ಲಿ ಅಬ್ದುಲ್ ರೆಹಮಾನನಿಗೆ ಆಶ್ರಯ ನೀಡುವ ಜೊತೆಗೆ ತನ್ನ ಇಬ್ಬರು ಪತ್ನಿಯರಲ್ಲಿ ಒಬ್ಬಳನ್ನು ತೊರೆದು ಅವನಿಗೆ ಆಕೆಯೊಂದಿಗೆ ಮದುವೆ ಮಾಡಿ ಕೊಟ್ಟ! ಇಸ್ಲಾಂ ಕಟ್ಟಳೆಯಂತೆ ಅಬ್ದುಲ್ ರೆಹಮಾನ್ ವಧುದಕ್ಷಿಣೆಯಾಗಿ ಒಂದು ಖರ್ಜೂರದ ಗಾತ್ರದ ಚಿನ್ನದ ಚೂರನ್ನ ನೀಡಿ ಈ ಲಗ್ನ ಮಾಡಿಕೊಂಡು ಸಂಸಾರಿಯಾದ!!. ತನ್ನ ಅನುಚರರ ಕರಸೇವೆಯಿಂದ ಮಹಮದ್ ತಾನು ಕೊಂಡಿದ್ದ ಜಾಗದಲ್ಲಿ ಮನೆಯೊಂದನ್ನು ಕಟ್ಟಿ ಮುಗಿಸಿದ. ಮನೆಯ ಪೂರ್ವದ ಗೋಡೆಗೆ ಅಂಟಿಕೊಂಡಂತೆ ಮಹಮದ್ ತನ್ನ ಹಾಗೂ ತನ್ನ ಪತ್ನಿಯರ ವಸತಿಗಳನ್ನು ನಿರ್ಮಿಸಿಕೊಂಡ.ಕ್ರಮೇಣ ಪತ್ನಿಯರ ಸಂಖ್ಯೆ ಹೆಚ್ಚಿಸಿ ಕೊಂಡಂತೆ ಈ ಜನಾನವನ್ನು ಕಾಲಕಾಲಕ್ಕೆ ವಿಸ್ತರಿಸಲಾಯಿತು. ಅವೆಲ್ಲ ಕೇವಲ ಮಣ್ಣಿನ ಗುಡಿಸಲುಗಳೆ ಆಗಿದ್ದವು ಎನ್ನುತ್ತಾನೆ ವಾಸ್ತುಶಿಲ್ಪಿಯೂ ಆಗಿದ್ದ ಇತಿಹಾಸಕಾರ ಬರ್ಟನ್. ಮಹಮದ್ ಮದೀನದಲ್ಲಿ ಮೊತ್ತಮೊದಲಿಗೆ ಕಟ್ಟಿಸಿದ ಮಸೀದಿಯ ಗುಮ್ಮಟ ಹಾಗೂ ಸಪೂರವಾದ ಸ್ಥಂಭಗಳು ಪ್ರಪಂಚದ ಇತರ ಮಸೀದಿಗಳ ನಿರ್ಮಾಣಕ್ಕೆ ಮಾದರಿಯಾದವು. ಅದರ ಸರಳತೆ ಹಾಗೂ ಸುಂದರತೆಯನ್ನ ಇನ್ನಿತರ ಎಲ್ಲಾ ಮಸೀದಿಗಳಲ್ಲೂ ಕಾಣಬಹುದು ಎಂದು ಇತಿಹಾಸಕಾರ ಮ್ಯೂರ್ ಅಭಿಪ್ರಾಯ ಪಡುತ್ತಾನೆ. ಏಳು ತಿಂಗಳ ನಿರ್ಮಾಣ ಕಾರ್ಯ ಮುಗಿದ ನಂತರ ತನ್ನ ಪತ್ನಿ ಸೌದಾಳೊಂದಿಗೆ ಮಹಮದ್ ನೂತನ ಗೃಹ ಪ್ರವೇಶ ಮಾಡಿದ. ಈಗಾಗಲೆ ಆಯೆಷಾಳೊಂದಿಗೆ ನಿಶಿತಾರ್ಥ ಮುಗಿದಿದ್ದರಿಂದ ಆಕೆಯನ್ನು ಮದುವೆಯಾಗಿ ನೂತನ ಮನೆ ತುಂಬಿಸಿಕೊಂಡ. ಹತ್ತು ವಯಸ್ಸಿನ ವಧು ಆಯೆಷಾ ಬಿನ್ ಅಬು ಬಕರ್ , ಐವತ್ತು ಮೂರು ವರ್ಷ ಪ್ರಾಯದ ವರ ಮಹಮದ್ ಬಿನ್ ಅಬ್ದುಲ್ಲಾ ಎಂಬ ವರನನ್ನು ಲಗ್ನವಾಗಿ ಸಂಸಾರ ಸಾಗರಕ್ಕೆ ಅಡಿಯಿಟ್ಟಳು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ. ಮಹಮದನ ನಿರ್ಮಿತಿ ಮಸೀದಿಯೆ ಇಸ್ಲಾಮಿನ ಪ್ರಥಮ ಅಭಯಾಶ್ರಯವಾಯಿತು. ಅಲ್ಲಿಯೆ ಆತನ ದೈವವಾಣಿಗಳು ಪುಂಖಾನುಪುಂಖವಾಗಿ ಮೂಡಿ ಬಂದಿತ್ತು. ದಾರ್ಶನಿಕರನ್ನು ಆತ ಭೇಟಿ ಮಾಡುವ ನಗರದ ಸಭಾಂಗಣವೂ ಅದೆ ಆಯಿತು. ಮಹಮದ್ ನಿರ್ಮಿಸಿದ್ದ ಆ ಮಸೀದಿ ಅತ್ಯಂತ ಸರಳ ವಾಸ್ತು ಹೊಂದಿದ್ದು ಯಾವೊಂದು ಭವ್ಯತೆ ಹಾಗೂ ಆಡಂಬರವಿಲ್ಲದಂತೆ ಇತ್ತು. ವಾಸ್ತವವಾಗಿ ತನ್ನ ನಿರ್ವಹಣೆ ಮದೀನಾವಾಸಿಗಳಿಗೆ ಹೊರೆಯಾಗಬಾರದು ಎನ್ನುವ ಮಹಮದನ ಉದ್ದೇಶ ಇದರ ಹಿಂದಿದ್ದರೂ ಇಸ್ಲಾಮಿನ ಮತ ಪಂಡಿತರು ಅದನ್ನ ಪ್ರವಾದಿಯ ಸರಳತೆಯ ಭೋದನೆ ಎಂದು ವ್ಯಾಖ್ಯಾನಿಸಿ ಅದಕ್ಕೊಂದು ದೈವತ್ವವನ್ನು ಆರೋಪಿಸಿದರು. ಬಿಲಾಲ್ ಎಂಬ ದೊಡ್ಡ ಗಂಟಲಿನ ತನ್ನ ಅನುಚರನಿಗೆ ನಿತ್ಯ ಐದು ಹೊತ್ತಿನ ಪ್ರಾರ್ಥನೆಗೆ ಎಲ್ಲಾ ಇಸ್ಲಾಂ ಶ್ರದ್ಧಾಳುಗಳಿಗೆ ಕರೆ ನೀಡುವ ಮಹತ್ವದ ಜವಾಬ್ದಾರಿಯನ್ನು ಮಹಮದ್ ವಹಿಸಿದ. ಉಚ್ಚ ಧ್ವನಿಯ ಬಿಲಾಲನ ದೊಡ್ಡ ಗಂಟಲಿನ ಉಪಯೋಗವನ್ನು ಮಹಮದ್ ಸರಿಯಾಗಿಯೆ ಪಡೆದುಕೊಂಡ. ಆಜಾನ್ ಎಂದು ಕರೆಯಲಾಗುವ ಈ ವಿಧಿಯನ್ನ ಜಾರಿಗೆ ತರುವಲ್ಲಿ ಮಹಮದ್ ಬಹಳಷ್ಟು ಪ್ರಯಾಸ ಪಡಬೇಕಾಯಿತು. ಮಹಮದನೊಂದಿಗೆ ತಾವು ಹೊಸತಾಗಿ ನಂಬಿದ ಧರ್ಮಕ್ಕಾಗಿ ಊರು ಬಿಟ್ಟು ಮದೀನಕ್ಕೆ ಬಂದ ಎಲ್ಲರನ್ನೂ "ಮಜಹರೀನ್" ಅಂದರೆ ನಿರಾಶ್ರಿತರೆಂದು ಮದೀನಾವಾಸಿಗಳು ಕರೆದರು. ತಮ್ಮ ಸಕಲವನ್ನೂ ತ್ಯಾಗ ಮಾಡಿ ಬಹುತೇಕ ಬರಿಗೈಯಲ್ಲಿಯೆ ಬಂದಿದ್ದ ಅವರನ್ನು ಯಾವೊಂದೂ ಕೊರತೆಯಾಗದಂತೆ ಮದೀನಾ ವಾಸಿಗಳು ಆದರಿಸಿದರು. ಹೀಗೆ ಆದರಿಸಿ ಆಶ್ರಯ ನೀಡಿದ ಮದೀನಾವಾಸಿಗಳನ್ನು "ಅನ್ಸಾರಿ"ಗಳೆಂದು ಕರೆಯಲಾಯಿತು. 'ಅನ್ಸಾರ್" ಎಂದರೆ ಅಭಯ ಹಸ್ತ ಚಾಚುವವರು ಅಥವಾ ಸನ್ಮಿತ್ರರು ಎನ್ನುವ ಅರ್ಥ ಬರುತ್ತದೆ. ಮದೀನಾವಾಸಿಗಳಲ್ಲಿ ಆವ್ಸ್ ಹಾಗೂ ಖಸ್ರಾಜ್ ಬುಡಕಟ್ಟಿನವರೆ ಅಧಿಕ ಸಂಖ್ಯೆಯಲ್ಲಿದ್ದು ಶತಶತಮಾನಗಳ ವೈರತ್ವ ಅವರ ನಡುವೆಯಿದ್ದು ರಕ್ತಪಾತವಾಗುವ ಮಟ್ಟಿಗೆ ಅವರು ಪರಸ್ಪರ ಕಾದಾಡುತ್ತಿದ್ದರು. ಆದರೆ ಮಹಮದನ ನೂತನ ಮತ ಒಪ್ಪಿಕೊಂಡ ನಂತರ ಅವರು ಹಳೆಯ ವಯಕ್ತಿಕ ವೈರವನ್ನು ಮರೆತು ಮಹಮದನ ನಾಯಕತ್ವವನ್ನು ಒಪ್ಪಿಕೊಂಡರು. ಆದರೂ ಇಸ್ಲಾಮಿಗೆ ಆರಂಭದಲ್ಲಿ ದೊರೆತ ಗೌರವ, ಭಕ್ತಿ ಹಾಗೂ ಮಹಮದನ ನಾಯಕತ್ವಕ್ಕೆ ದೊರೆತ ಮನ್ನಣೆ ಪೂರ್ಣ ಪ್ರಮಾಣದ್ದಾಗಿರಲಿಲ್ಲ ಅನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ. ಎದುರಿಗೆ ವಿಶ್ವಾಸ ನಟಿಸಿದರೂ ಹಿಂದೆ ಆಕ್ರೋಶ ಪ್ರಕಟಿಸುವವರೂ ಕೊರತೆಯಿಲ್ಲದಷ್ಟು ಇದ್ದರು. ಅವರೆಲ್ಲರನ್ನೂ ಮಹಮದ್ "ಕಪಟ ವಿಶ್ವಾಸಿ'ಗಳೆಂದು ಕರೆದ. ಮದೀನಾ ವಾಸದ ಆರಂಭದ ದಿನಗಳಲ್ಲಿ ಮಹಮದ್ ಯಹೂದಿಗಳ ವಿಶ್ವಾಸ ಗಳಿಸಲು ಅನೇಕ ಸ್ನೇಹ ವರ್ಧಕ ಕ್ರಮಗಳನ್ನು ಕೈಗೊಂಡ. ಉದಾಹಾರಣೆಗೆ ಯಹೂದಿಗಳು ಆಚರಿಸುತ್ತಿದ್ದ "ಪ್ರಾಯಶ್ಚಿತದ ದಿನ"ವನ್ನು ಉಪವಾಸದ ದಿನವನ್ನಾಗಿ ಆಚರಿಸಲು ಕರೆ ನೀಡಿದ. ಇಸ್ಲಾಮಿಗೆ ಧರ್ಮಾಂತರವಾದ ನಂತರವೂ ಅಸಲಂ ಬುಡಕಟ್ಟಿನ ಯಹೂದಿಗಳಿಗೆ ಅದೆ ಪೂರ್ವ ಧರ್ಮಾಚರಣೆಯ "ಪ್ರಾಯಶ್ಚಿತದ ದಿನ" ಆಚರಿಸಲು ಸಮ್ಮತಿ ನೀಡಿದ. "ಟೋರಾ"ದಲ್ಲಿ ಬರೆದಿರುವಂತೆ ತಮ್ಮ ಮುಂದಿನ ಪ್ರವಾದಿಗಳು ಸಿರಿಯಾದಲ್ಲಿ ಹುಟ್ಟಿ ಬರುವರೆಂಬ ನಂಬಿಕೆ ಹೊಂದಿದ್ದ ಯಹೂದಿಗ;ಳನ್ನ ಭಾವನಾತ್ಮಕವಾಗಿ ಯಾಮಾರಿಸಲು ಸಿರಿಯಾದತ್ತ ಪ್ರಯಾಣ ಬೆಳೆಸಿದರೂ ಸಹ ಉರಿ ಬಿಸಿಲಿನ ಹವಾಮಾನ ವೇಪರಿತ್ಯದಿಂದಾಗಿ ಈ ನಕಲಿ ನಾಟಕ ನಡೆಸಲಾಗಲಿಲ್ಲ ಅನ್ನೋದು ಬೇರೆ ಮಾತು. ಆದರೂ ಈ ಯಹೂದಿಗಳ ವಿಶ್ವಾಸ ಗಳಿಸುವ ಪ್ರಯತ್ನದಲ್ಲಿ ಅವರ ಅನೇಕ ಆಚರಣೆಗಳಿಗೆ ಇಸ್ಲಾಮಿನಲ್ಲಿಯೂ ಗೌರವ ಪೂರ್ವಕ ಒತ್ತು ನೀಡಿದ. ಯಹೂದಿಗಳ ಅಂತಿಮ ಯಾತ್ರೆ ಹಾದು ಹೋಗುವ ಸಂದರ್ಭಗಳಲ್ಲಿ ಮಹಮದ್ ಹಾಗೂ ಅವನ ಅನುಯಾಯಿಗಳು ಎದ್ದು ನಿಂತು ಗೌರವ ಪ್ರಕಟಿಸುತ್ತಿದ್ದರು. ಯಹೂದಿಯೊಬ್ಬ ಒಮ್ಮೆ ಮಹಮದನನ್ನು ತನ್ನ ಮನೆಗೆ ಊಟಕ್ಕೆ ಆಹ್ವಾನಿಸಿ ಅಲ್ಲಿ ರೊಟ್ಟಿ, ಬಾರ್ಲಿ ಹಾಗೂ ಕೊಳೆತ ಮಾಂಸವನ್ನು ನೀಡಿದರೂ ಮಹಮದ್ ಅದನ್ನು ಸಭ್ಯತೆಯಿಂದ ಒಲ್ಲೆ ಎನ್ನದೆ ತಿಂದು ಮುಗಿಸಿದ! ಯಹೂದಿಗಳ ಒಡನಾಟದಿಂದ ಅವರ ಧರ್ಮದ ಬಗ್ಗೆ ಮಹಮದ್ ತಿಳಿದು ಕೊಂಡು ಅನೇಕ ಧರ್ಮ ಸೂಕ್ಷ್ಮದ ಮಾಹಿತಿಗಳನ್ನ ಕಲೆ ಹಾಕಿದರೂ ಸಹ ಆತ ಅವರ ಧರ್ಮಗ್ರಂಥದ ಸಂಪೂನ ಅಧ್ಯಯನ ಕೈಗೊಂಡು ಅದರ ಆಚರಣೆಗೆ ಇಳಿದಿರಲಿಲ್ಲ. ಅನಕ್ಷರಸ್ಥನಾದ ಅವನಿಗೆ ಅದು ಅಸಾಧ್ಯವೂ ಆಗಿತ್ತು. "ಬೆನ್ ಕುರೈಜಾ" ಬುಡಕಟ್ಟಿನ ಯಹೂದಿಯೊಬ್ಬ ಬೈಬಲ್ಲಿನ ಹೊಸ ಒಡಂಬಡಿಕೆಯ ಕೆಲ ಅಧ್ಯಾಯಗಳನ್ನು ಅರೆಬ್ಬಿಯಲ್ಲಿ ಅನುವಾದಿಸಿ ಅದರ ಪ್ರತಿಯೊಂದನ್ನು ಅಧ್ಯಯನಕ್ಕೆಂದು ಮಹಮದನ ನೆಂಟ ಓಮರನಿಗೆ ನೀಡಿದಾಗ ಆತ ಮಹಮದನ ಅಪ್ಪಣೆಯಿಲ್ಲದೆ ಅದನ್ನ ಓದುವುದಿಲ್ಲವೆಂದು ಸಾರಿದ. ಇದಕ್ಕೆ ಒಪ್ಪಿಗೆ ನೀಡದ ಮಹಮದ್ ಕೂಡ " ಒಂದೊಮ್ಮೆ ಪ್ರವಾದಿ ಮೂಸ ( ಯಹೂದಿಗಳ ಮೊದಲನೆ ಪ್ರವಾದಿ ಮೋಸೆಸ್.) ಪುನರ್ಜನ್ಮ ತಾಳಿ ಪುನಃ ಭೂಮಿಯಲ್ಲಿ ಹುಟ್ಟಿ ಬಂದರೂ, ಇಸ್ಲಾಮನ್ನ ಒಪ್ಪಿ ನಡೆಯುವವರ್ಯಾರೂ ತನ್ನ ಬಿಟ್ಟು ಮರಳಿ ಅವರ ಹಿಂದೆ ನಡೆಯುವಂತಿಲ್ಲ!" ಎಂದು ಅಬ್ಬರಿಸಿದ! ಇಸ್ಲಾಮಿನಲ್ಲಿ ಸ್ವತಃ ಮಹಮದನೆ ಘೋಷಿಸಿದ ಹಾಗೆ ಪುನರ್ಜನ್ಮದಲ್ಲಿ ನಂಬಿಕೆಯೆ ಇಲ್ಲ ಎನ್ನುವುದು ನೆನಪಿಡಬೇಕಾದ ಸಂಗತಿ?! ( ಇನ್ನೂ ಇದೆ...)

Saturday, October 6, 2012

ವಲಿ.... ( ಭಾಗ- 9 )


ಇಷ್ಟಲ್ಲದೆ ಕ್ರಿಸ್ತನ ಹುಟ್ಟು ಹಾಗೂ ಆತನ ಶಿಲುಬೆಗೇರಿಸಿದ ವಧೆಯನ್ನು ಮಹಮದ್ ಸಾರಾಸಗಟಾಗಿ ಅಲ್ಲಗೆಳೆದ. ಸುರಾ 19/1 ಹಾಗೂ 5/109ಗಳ ಮೂಲಕ ದೈವಾನುಗ್ರಹದಿಂದ ಕನ್ಯಾ ಮೇರಿಮಾತೆಯ ಒಡಲಲ್ಲಿ ಕ್ರಿಸ್ತನ ಜೀವಾಂಕುರವಾಯಿತು ಎಂದ ! ಜೈವಿಕವಾಗಿ ಅಸಾಧ್ಯವಾದ ಈ ನೆಲಗಟ್ಟಿಲ್ಲದ ಪೊಳ್ಳು ನಂಬಿಕೆಯನ್ನ ಬೈಬಲ್ಲಿನಂತೆಯೇ ಖುರಾನ್ ಕೂಡ ಸಮರ್ಥಿಸುತ್ತದೆ. ಆದರೆ ಮಹಮದ್ ಇಷ್ಟಕ್ಕೆ ನಿಲ್ಲಿಸದೆ, ದೇವರ ಕೃಪೆಯಿಂದ ಇನ್ನೂ ಜನಿಸಿ ತೊಟ್ಟಿಲಲ್ಲಿದ್ದಾಗಲೆ ತಾನು ದೇವರ ಸೇವಕ ಎಂಬುದು ಅವನಿಗೆ ಅರಿವಾಗಿ ಕ್ರಿಸ್ತ ತಾನು ದೇವದೂತನೆಂದು ಸಾರಿದ ಎಂದ !. ಮಗು ತೊಟ್ಟಿಲಿನಲ್ಲಿಯೇ ತಾರ್ಕಿಕವಾಗಿ ಮಾತನಾಡಿತು ಎನ್ನುವ ಅತಾರ್ಕಿಕ ವಾದವನ್ನ್ನ ಖುರಾನ್ ಸಾರಿ ಹೇಳಿತು!!! ಎಸುವಿನಿಂದ ತನಗೊಂದು ಧರ್ಮಗ್ರಂಥ ಕೊಡಲ್ಪಟ್ಟಿದೆ ಎಂದ ಮಹಮದ್ ತನ್ನ ಮರಣಕ್ಕೆ ಹಲವು ವರ್ಷ ಮೊದಲು ಮದೀನಾದಲ್ಲಿ ಸುರಾ 3/32-57ರ ಮೂಲಕ ಕ್ರಿಸ್ತನ ಜನನ, ಜೀವನ ಹಾಗೂ ಮರಣಗಳ ಕುರಿತ ತನ್ನ ವ್ಯಾಖ್ಯಾನಗಳನ್ನು ಪುನರುಚ್ಚರಿಸಿದ. ಈ ಮೂಲಕ ಮಹಮದ್ ಏಸುವಿನ ಜನನ, ಮರಣ ಹಾಗೂ ಆತ ಸಾರಿದ ತತ್ವಗಳ ಬಗ್ಗೆ ಕ್ರಿಸ್ತ ಮತಾವಲಂಭಿಗಳಲ್ಲಿದ್ದ ಪುರಾತನ ನಂಬಿಕೆಗಳನ್ನ ನಿರಾಕರಿಸಿದ. ಕ್ರಿಸ್ತನನ್ನು ಅವನ ಪ್ರಕಾರ ಯಹೂದಿಗಳು ಶಿಲುಬೆಗೆ ಏರಿಸಿಯೆ ಇರಲಿಲ್ಲ! ವಧೆಯಾಗದೆ ಆತ ದೇವರ ಕೈಹಿಡಿದು ಸಶರೀರನಾಗಿ ಸ್ವರ್ಗ ಆರೋಹಣ ಮಾಡಿದ ಎಂದು ಅವನು ಸುರಾ 4/155-159 ಹಾಗೂ 5/109-110ಗಳ ಮೂಲಕ ಆತ ಸಾಧಿಸಿದ. ಖುರಾನ್ ಪ್ರತಿಪಾದನೆಯ ಪ್ರಕಾರ ಅಲ್ಲಿಗೆ ದೇವಲೋಕಕ್ಕೆ ದೇವದೂತ ಏಸು ಸಾಯದೆ ಬದುಕಿದ್ದೆ ಸ್ವರ್ಗ ಸೇರಿ ಹೋಗಿದ್ದ ?! ಮಹಮದನ ಈ ಹೊಸ ಉಪಖ್ಯಾನದ ಹಿನ್ನೆಲೆಯಲ್ಲಿ ಪ್ರಾಯಶಃ ಏಸುವಿನ ಕೊಲೆಯ ಆರೋಪದಿಂದ ಯಹೂದಿಗಳನ್ನು ಮುಕ್ತಗೊಳಿಸಿ ಅವರನ್ನೂ ಇಸ್ಲಾಮಿನತ್ತ ಸೆಳೆದುಕೊಳ್ಳುವ ಹುನ್ನಾರ ಅಡಗಿತ್ತು ಎನ್ನುವ ಊಹೆ ಇತಿಹಾಸಕಾರ ಕ್ಲೇರನದ್ದು. ಇದೇನೆ ಇದ್ದರೂ ಮಹಮದ್ ಏಸು ಒಬ್ಬ ಪ್ರವಾದಿಯೆಂದು ಸಾಧಿಸಿ ಆತನ ಕೊಲೆಯಾಗದೆ ನೇರ ದೇವರೆ ಕೈಹಿಡಿದು ಆತನ ಸ್ವರ್ಗಾರೋಹಣ ಮಾಡಿಸಿದ ಎಂದು ಸಾರಿದ್ದು ವಿಶೇಷ ಮಹತ್ವ ಪಡೆಯುತ್ತದೆ. ಹೀಗಿರುವಾಗ ಮೆಕ್ಕಾದಲ್ಲಿ ಪ್ರತಿವರ್ಷದಂತೆ ಜರಗುವ ವರ್ಷಾವಧಿಯ ಪವಿತ್ರ ಯಾತ್ರೆಗೆ ಮದೀನದ ನವ ಮತಾಂತರಿತರೂ ಯಾತ್ರೆ ಕೈಗೊಂಡು ಕಾಬಾದ ಆರಾಧನೆಗೆ ಸಿದ್ಧರಾದರು. ಆದರೆ ಅವರ ಮತಾಂತರದ ಸುದ್ದಿ ಖುರೈಷಿಗಳಿಗೇನಾದರೂ ತಿಳಿದ್ದಿದ್ದೆ ಹೌದಾಗಿದ್ದಲ್ಲಿ ಅವರು ಖುರೈಶಿಗಳೊಂದಿಗೆ ಹೊಡೆದಾಟ ಹಾಗು ರಕ್ತಪಾತಕ್ಕೂ ಈ ಬಾರಿ ಅಣಿಯಾಗಿಯೇ ಹೋಗಬೇಕಿತ್ತು! ಆದರೆ ಮಹಮದನಿಗೆ ಇಂತಹದ್ದೊಂದು ತಿಕ್ಕಾಟ ಬೇಕಿರಲಿಲ್ಲ. ಹಾಗೊಂದು ವೇಳೆ ಹೊಡೆದಾಟವಾದರೆ ಅದರಿಂದ ತನ್ನ ಗುರಿ ಸಾಧನೆಗೆ ಘೋರ ಧಕ್ಕೆ ಬಂದೊದಗುತ್ತದೆ ಎಂಬ ಅರಿವು ಅವನಿಗಿತ್ತು. ಹೀಗಾಗಿ ಅದಕ್ಕೂ ಮೊದಲೆ ಆತ ಮದೀನಾದ ನವ ಮತಾಂತರಿಗಳನ್ನು ಗುಪ್ತವಾಗಿ ಸಂಧಿಸಿದ. ಅವರ ಸಂಖ್ಯೆ, ಧರ್ಮನಿಷ್ಠೆ ಹಾಗೂ ಮನೋಗುಣ ಅರಿಯುವ ಪ್ರಯತ್ನ ಇದಾಗಿತ್ತು. ಆತ ಅವರನ್ನು ಅಕಾಬಾದಲ್ಲಿಯೆ ಸಂಧಿಸಿದ. ಮಧ್ಯರಾತ್ರಿ ನಡೆದ ಆ ಸಭೆಯಲ್ಲಿ ಮತಾಂತರಿತ ಎಪ್ಪತ್ತೆರಡು ಮದೀನಾವಾಸಿಗಳನ್ನು ಉದ್ದೇಶಿಸಿ ಮಹಮದ್ ಖುರಾನ್ ದೈವವಾಣಿಗಳನ್ನು ಸಾದರ ಪಡಿಸಿದ. ಜೊತೆಗೆ ತನ್ನ ಜೀವ ರಕ್ಷಣೆಯ ಪ್ರತಿಜ್ಞೆಯನ್ನು ಅವರೆಲ್ಲರಿಂದಲೂ ಮಾಡಿಸಿಕೊಂಡ ! ಎನ್ನುತ್ತಾನೆ ಇತಿಹಾಸಕಾರ ಕ್ಯಾರನ್ ಅರ್ಮೆಸ್ತ್ರಾಂಗ್. ಈ ಪೈಕಿ ಹನ್ನೆರಡು ಮೂಲ ಮತಾಂತರಿತರನ್ನು ಅವರೆಲ್ಲರ ನಾಯರನ್ನಾಗಿ ಆತ ನೇಮಿಸಿದ, ಇದನ್ನೆ 'ಎರಡನೆ ಅಲ್ ಅಕಾಬಾ' ಎಂದು ಕರೆಯಲಾಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ. ಆದರೆ ಗುಪ್ತಚಾರರ ಮೂಲಕ ಈ ಗುಪ್ತ ಸಭೆಯ ಸುದ್ದಿ ಖುರೈಶಿಗಳನ್ನು ಮಿಂಚಿನಂತೆ ಮುಟ್ಟಿತು. ಅವರು ಆ ಎಲ್ಲಾ ಮತಾಂತರಿತ ಮದೀನ ನಿವಾಸಿಗಳನ್ನು ಸೆರೆ ಹಿಡಿಯಲು ಅತ್ತ ಧಾವಿಸುವಷ್ಟರಲ್ಲಿ ಆ ಎಲ್ಲಾ ಯಾತ್ರಿಕರೂ ಅಲ್ಲಿಂದ ಸಕಾಲದಲ್ಲಿ ಕಾಲು ಕಿತ್ತಾಗಿತ್ತು. ಆದರೆ ಈ ಘಟನೆಯ ನಂತರ ಮಹಮದನಿಗೆ ಶಾಂತಿ ಎನ್ನುವುದು ಮೆಕ್ಕಾದಲ್ಲಿ ಅಕ್ಷರಶಃ ಮರೀಚಿಕೆಯೆ ಆಯಿತು. ಖುರೈಷಿಗಳ ಇಮ್ಮಡಿಗೊಂಡ ಆಕ್ರೋಶ ನಾನಾ ಕೋಟಲೆಗಳಾಗಿ ಅವನ ಮೇಲೆರಗಿತು. ಮಹಮದ್ ಹಾಗೂ ಅವನ ಸ್ಥಳೀಯ ನಿವಾಸಿ ಅನುಯಾಯಿಗಳ ಮೇಲೆ ಹಿಂಸೆ ಹೆಚ್ಚಾಯಿತು. ಹೀಗಾಗಿ ಮತ್ತೆ ಆತ ಮೆಕ್ಕಾವನ್ನು ತೊರೆಯಲು ನಿರ್ಧರಿಸಿದ. ನೂರಕ್ಕೆ ನೂರರಷ್ಟು ಪ್ರಾಣ ಸುರಕ್ಷತೆಯ ಖಾತ್ರಿಯಿರುವ ತನ್ನ ನವ ಹಿಂಬಾಲಕರಿರುವ ಮದೀನಕ್ಕೆ ತೆರಳಲು ಆತ ನಿರ್ಧರಿಸಿದ. ತನ್ನ ಮತ ಬಾಂಧವರಿಗೂ ಆತ ಇದೆ ಅಪ್ಪಣೆಯನ್ನು ರವಾನಿಸಿದ. ಅಕಾಬಾದಲ್ಲಿ ಮದೀನಾ ವಾಸಿಗಳಿಂದ ಮಾಡಿಸಿಕೊಂಡಿದ್ದ ಪ್ರತಿಜ್ಞೆ ಅವನ ಈ ನಿರ್ಧಾರಕ್ಕೆ ಬಲತುಂಬಿತ್ತು. ಮನೆ- ಮಠ ತೊರೆದು ಮೆಕ್ಕಾದಿಂದ ನೂರಾ ಎಂಬತ್ತು ಮೈಲಿ ದೂರದಲ್ಲಿದ್ದ ಮದೀನಕ್ಕೆ ಕೈಗೊಂಡ ಆ ವಲಸೆ ಅವರೆಲ್ಲರಿಗೂ ಸಾಕಷ್ಟು ಸಂಕಷ್ಟಗಳನ್ನು ತಂದೊಡ್ಡಿತು. ಪ್ರಯಾಸಕರವಾಗಿದ್ದ ಆ ಪ್ರಯಾಣದಲ್ಲಿ ಸುಮಾರು ಇನ್ನೂರು ಮಂದಿ ಮೆಕ್ಕಾದಿಂದ ಮದೀನಕ್ಕೆ ವಲಸೆ ಹೋದರೆಂದು ಇತಿಹಾಸಕಾರ ಅಲ್ ಮುಬಾರಕಿ ತಿಳಿಸುತ್ತಾನೆ. ಅತ್ಯಂತ ಗುಟ್ಟಾಗಿ ಕೈಗೊಂಡಿದ್ದ ಈ ಪಯಣ ಸುಮಾರು ಎರಡು ತಿಂಗಳಲ್ಲಿ ಮುಗಿಯಿತು! ಹೇಗೊ ಸುರಕ್ಷಿತವಾಗಿ ಮದೀನಾ ತಲುಪಿಕೊಂಡ ಅವರನ್ನು ಮದೀನಾದ ಮುಸ್ಲೀಮರು ಆದರ ಹೊತ್ತ ಅಂತಃಕರಣದಿಂದ ಬರಮಾಡಿಕೊಂಡರು. ಇತ್ತ ಈ ವಿಷಯ ಅರಿವಾದ ಖುರೈಶಿಗಳಿಗೆ ದಿಗ್ಭ್ರಮೆಯಾಯಿತು. ಚೂರೂ ಸುಳಿವು ಕೊಡದೆ ಕುಟುಂಬಗಳು ತಮ್ಮ ಮನೆ- ಮಠ ಗಳನ್ನು ಇದ್ದಕ್ಕಿದಂತೆ ಅದೆ ಸ್ಥಿತಿಯಲ್ಲಿ ತೊರೆದು ಹೋಗಿದ್ದು ಅವರೆಲ್ಲರ ಅಚ್ಚರಿಗೆ ಕಾರಣವಾಯಿತು. ಹಾಗೊಂದು ವೇಳೆ ಆ ಬಗ್ಗೆ ಅವರಿಗೆ ಸುಳಿವು ಮೊದಲೆ ದೊರೆತಿದ್ದರೂ ಅವರೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅವರೇನಾದರೂ ಉಗ್ರವಾಗಿ ವರ್ತಿಸಿದ ಪಕ್ಷದಲ್ಲಿ ತಮ್ಮ ರಕ್ತ ಸಂಬಂಧಿಗಳೊಂದಿಗೆ ಕಾದಾಡಿ ಅವರ ದ್ವೇಷ ಕಟ್ಟಿಕೊಳ್ಳಬೇಕಾಗುತ್ತಿತ್ತು, ಅಲ್ಲದೆ ಅದು ಅವರ ಬುಡಕಟ್ಟಿನ ಒಳಗೆ ಅದು ಬಿರುಕು ಮೂಡಿಸಿದ್ದರೂ ಆಶ್ಚರ್ಯ ಪಡಬೇಕಾಗಿರಲಿಲ್ಲ. ಒಟ್ಟಿನಲ್ಲಿ ಖುರೈಷಿಗಳು ನಿಸ್ಸಹಾಯಕರಾಗಿದ್ದರು. ಇಷ್ಟರ ನಡುವೆಯೂ ಮಹಮದ್, ಅವನ ಮಾವ ಅಬು ಬಕರ್ ಹಾಗೂ ದೊಡ್ಡಪ್ಪನ ಮಗ ಅಲಿಯೊಂದಿಗೆ ಅವನ ಕುಟುಂಬದವರು ಇನ್ನೂ ಅಲ್ಲಿಯೆ ಉಳಿದುಕೊಂಡಿದ್ದರು! ಮಹಮದನ ಈ ನಡೆ ಖುರೈಶಿಗಳಂತೆ ಅಬು ಬಕರನಿಗೂ ಬಿಡಿಸಲಾರದ ಒಗಟಾಗಿತ್ತು. ಮಹಮದನೂ ಅವರೊಂದಿಗೆ ಹೋಗಿದ್ದಿದ್ದರೆ ಪೀಡೆ ತೊಲಗಿತು ಎಂದುಕೊಳ್ಳಲು ತಯಾರಿದ್ದ ಖುರೈಶಿಗಳೆಲ್ಲ ಈ ಹಿನ್ನೆಲೆಯಲ್ಲಿ ಸಭೆಗೂಡಿದರು. ಅಲ್ಲಿ ಕೆಲವರು ಮಹಮದನ ಜೀವಹರಣ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲಹೆ ಕೊಟ್ಟರಾದರೂ ಹಾಗೊಂದು ವೇಳೆ ಮಹಮದನ ಕೊಲೆ ಮಾಡಿದರೆ ಆತನ ಕುಟುಂಬಸ್ಥರು ಅರಬ್ಬಿ ಬುಡಕಟ್ಟಿನ ಒಳ ನಿಯಮಗಳಂತೆ ಪ್ರತಿಕಾರಕ್ಕೆ ಮುನ್ನುಗ್ಗಿದರೆ ವ್ಯಥಾ ರಕ್ತಪಾತ ಆದೀತು ಎಂಬ ಅಭಿಪ್ರಾಯವೂ ಎದುರಾಗಿ, ಅವನನ್ನು ಅವನ ಮನೆಯಲ್ಲೆ ಭೇಟಿಯಾಗಿ ತೀವ್ರವಾಗಿ ಅವನನ್ನು ಹೆದರಿಸಿ ಸುಮ್ಮನಾಗಿಸಲು ತೀರ್ಮಾನ ಕೈಗೊಂಡು ಸಭೆ ಬರಖಾಸ್ತುಗೊಳಿಸಲಾಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ. ಆದರೆ ಮಹಮದನಿಗೆ ಖುರೈಷಿಗಳ ಸಂಧಾನದ ಕರೆ ಸಂಶಯ ಮೂಡಿಸಿತು. ಹಾಗೊಮ್ಮೆ ತಾನವರನ್ನು ಎದುರುಗೊಂಡರೆ ಅವರು ತನ್ನ ಹತ್ಯೆ ಜರುಗಿಸಿಯಾರು ಎಂಬ ಸಂಶಯಕ್ಕೆ ಅವನು ಒಳಗಾದ. ಖುರಾನಿನ ಸುರಾ 8/30ರಲ್ಲಿ ಅದನ್ನವನು ವ್ಯಕ್ತಪಡಿಸಿದ ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಈ ವಿಷಯ ತಿಳಿದ ಮಹಮದ್ ಆಲಿಯನ್ನು ತನ್ನ ಮನೆಯಲ್ಲಿ ಇರಲು ಹೇಳಿ ಅಬು ಬಕರನ್ನು ಕಾಣಲು ದೌಡಾಯಿಸಿದ. ಅಲ್ಲಿ ಮದೀನಕ್ಕೆ ಪಲಾಯನ ಮಾಡಲು ತೀರ್ಮಾನಿಸಲಾಯಿತು. ಅದೆ ರಾತ್ರಿ ಆತ ಹಾಗೂ ಅಬುಬಕರ್ ಮೆಕ್ಕಾದಿಂದ ಓಡಿಹೋದರು. ಎರಡು ಘಂಟೆ ಪ್ರಯಾಣಿಸಿ ದಾರಿಯಲ್ಲಿ ಸಿಗುವ ಥೌರ್ ಎಂಬ ಬೆಟ್ಟವನ್ನು ಕಷ್ಟದಿಂದ ಏರಿ ಅಲ್ಲಿದ್ದ ಗುಹೆಯೊಂದರಲ್ಲಿ ಇಬ್ಬರೂ ಅಡಗಿಕೊಂಡರು. ಅಬು ಬಕರನ ಮಗ ಅಬ್ದುಲ್ಲಾ ಹಾಗೂ ಮಗಳು ಆಸ್ಮಾ ಇವರಿಗೆ ಹಾಲು-ಹಣ್ಣು ಹಾಗೂ ಅಗತ್ಯ ತಿನಿಸುಗಳನ್ನು ಸರಬರಾಜು ಮಾಡಿದರು. ಇದೆ ಗುಹೆಯಲ್ಲಿ ಅಡಗಿ ಕುಳಿತಾಗ ಜೇಡವೊಂದು ಗುಹೆ ಬಾಗಿಲಿಗೆ ಬಲೆ ಹೆಣೆದು ಹಿಂಬಾಲಿಸಿ ಬಂದ ಕೊಲೆಗಡುಕ ಖುರೈಶಿಗಳಿಂದ ಮಹಾಮದನನ್ನು ಪಾರುಮಾಡಿತು ಎಂಬ ದಂತಕಥೆಯೊಂದು ಚಾಲ್ತಿಯಲ್ಲಿದೆ. ಇತ್ತ ಮಹಮದನ ಪಲಾಯನದ ಸುದ್ದಿ ಅರಿತ ಖುರೈಷಿಗಳು ಗಲಿಬಿಲಿಗೊಂಡರು. ಅವನನ್ನು ಹಿಡಿದು ಹೆಡೆಮುರಿಗೆ ಕಟ್ಟಿತರಲು ಬೆನ್ನ ಹಿಂದೆಯೆ ಪಡೆಗಳನ್ನೂ ಅಟ್ಟಲಾಯಿತು. ಆ ಪ್ರಯತ್ನವೂ ವಿಫಲವಾದ ನಂತರ ಮೂರು ದಿನಗಳನ್ನು ಗುಹೆಯೊಳಗೆ ಕಳೆದ ಮಹಮದ್ ಹಾಗೂ ಅಬು ಬಕರ್ ಧೈರ್ಯವಹಿಸಿ ಗುಹೆಯಿಂದ ಹೊರಬಿದ್ದರು. ಅವರಿಗಾಗಿಯೆ ಬೆಟ್ಟದ ತಪ್ಪಲಿನಲ್ಲಿ ಗುಪ್ತವಾಗಿ ಒಂಟೆಗಳನ್ನು ಸಿದ್ಧಪಡಿಸಿ ಇಡಲಾಗಿತ್ತು. ಅವನ್ನೇರಿ ಇಬ್ಬರೂ ಮದೀನದತ್ತ ಪೇರಿಕಿತ್ತರು. ಕ್ಷೇಮವಾಗಿಯೆ ಅವರಲ್ಲಿಗೆ ಮುಟ್ಟಿದರು. ಹೀಗೆ ಮದೀನದತ್ತ ಆತ ಯಾತ್ರಿಸಿದ ದಿನ ಮುಸ್ಲೀಮರಿಗೆ ಪವಿತ್ರವಾಗಿ ಪರಿಣಮಿಸಿ ಅಂದಿನಿಂದ 'ಹಿಜ್ರಾ' ಶಕೆ ಆರಂಭವಾಯಿತು ಎನ್ನುವುದು ಇತಿಹಾಸಕಾರ ಮ್ಯೂರನ ಅಭಿಪ್ರಾಯ. ದಿನದರ್ಶಿಕೆಯ ಪ್ರಕಾರ ಅಂದು ಕ್ರಿಸ್ತಶಕೆ 622ರ ಜೂನ್ 20ನೆ ತಾರೀಕು ಆಗಿತ್ತು. ಮಹಾಮದನಿಗಾಗ ಐವತ್ತಮೂರರ ಹರೆಯ. ಮಹಮದನ ದೊಡ್ಡಪ್ಪನ ಮಗ ಆಲಿ, ಆತನ ಹೆಂಡತಿ ಸೌದ, ಮಕ್ಕಳಾದ ಜೈನಾಬ್, ಉಮ್'ಕುಲ್'ಸುಮ್ ಹಾಗೂ ಫಾತಿಮಾರ ಜೊತೆಗೆ ಮಹಮದನ ಎಳೆಯ ಹೆಂಡತಿ ಆಯೆಷಾ ಇವರಿಷ್ಟು ಮಂದಿ ಮಾತ್ರ ಇನ್ನೂ ಮೆಕ್ಕಾದಲ್ಲಿಯೆ ಉಳಿದುಕೊಂಡಿದ್ದರು. ಇವರಿಗ್ಯಾರಿಗೂ ಖುರೈಷಿಗಳು ಉಪಟಳ ನೀಡದಿದ್ದುದ್ದು ಸೋಜಿಗ ಹುಟ್ಟಿಸಿತು ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಏಕೆಂದರೆ ಮಹಮದ್ ಖುರೈಷಿಗಳ ಪುರಾತನ ಮತ, ವಿಗ್ರಹಾರಾಧನೆ ಹಾಗೂ ಆಚಾರಗಳ ವಿರುದ್ಧ ಎಸಗಿದ ಅಪಚಾರ ಇವೆಲ್ಲ ಅವರಲ್ಲಿ ಅವನ ಹಾಗೂ ಅವನ ಆತ್ಮೀಯರ ವಿರುದ್ಧ ವೈರತ್ವ ಸಾರುವಂತೆ ಮಾಡಿತ್ತು, ಹೀಗಿರುವಾಗ ಆತ ಕೈಸಿಗದೆ ಪಲಾಯನಗೈದ ಹತಾಶೆ ಆತನ ಕುಟುಂಬದವರ ಮೇಲೆ ಹಿಂಸಾತ್ಮಕವಾಗಿ ತಿರುಗದಿದ್ದುದು ಅಚ್ಚರಿ ಹುಟ್ಟಿಸುವುದು ಸಕಾರಣವಾಗಿದೆ. ಇದೇನೆ ಇದ್ದರೂ ಮಹಮದ್ ಕ್ಷೇಮವಾಗಿ ಅಬು ಬಕರನೊಂದಿಗೆ ಮದೀನ ಮುಟ್ಟಿದ. ಈ ಹಿಂದೆ ಮದೀನವನ್ನು 'ಯಾತ್ರಿಬ್' ಎಂದು ಕರೆಯಲಾಗುತ್ತಿತ್ತು. ಕ್ರಮೇಣ ಖುರಾನಿನಲ್ಲಿ ಅದನ್ನು ಯಹೂದಿಗಳು ಅರಮಾಯಿಕ್ ಭಾಷೆಯಲ್ಲಿ ಕರೆಯುತ್ತಿದ್ದಂತೆ 'ಮೆದಿಂಕಾ' ಅಂದರೆ 'ನಗರ'ವೆಂದು ಕರೆಯಲಾಯಿತು. ಇದೆ ಮದಿಂಕಾ ಮುಂದೆ ಮದೀನ ಎಂದು ಕರೆಸಿಕೊಂಡಿತು. ಮಹಮದ್ ಅಲ್ಲಿಗೆ ವಲಸೆ ಬಂದ ನಂತರ ಅದನ್ನು 'ಅಲ್ ಮದೀನಾತ್' ಅಂದರೆ 'ಪ್ರವಾದಿಯ ನಗರ'ವೆಂದು ಕರೆಯಲಾಯಿತು ಎನ್ನುತ್ತಾನೆ ಇತಿಹಾಸಕಾರ ಕ್ಯಾರನ್ ಅರ್ಮೆಸ್ಟ್ರಾಂಗ್. (ಇನ್ನೂ ಇದೆ....)

Thursday, October 4, 2012

ವಲಿ.... ( ಭಾಗ-8 )


ಮುಂದೆ ಕ್ರಿಸ್ತಶಕ ನಾಲ್ಕನೆ ಶತಮಾನದಲ್ಲಿ ಅರೇಬಿಯಾದ ದಕ್ಷಿಣ ಪ್ರಾಂತ್ಯದ ಎಮನ್'ನಿಂದ ಅರಬ್ಬಿ ಮೂಲದವರು ವಲಸೆ ಹೋಗಿ ಸಿರಿಯಾ ಹಾಗೂ ದಾರಿಯಲ್ಲಿ ಸಿಗುವ ಮದೀನಾದ ಸುತ್ತಲೂ ಬೇರೂರಿದರು. ಹೀಗೆ ವಲಸೆ ಹೋದವರಲ್ಲಿ 'ಅವ್ಸ್' ಹಾಗೂ 'ಖಸ್'ರಾಜ್' ಬುಡಕಟ್ಟಿನ ಮಂದಿ ಪ್ರಮುಖರು. ಈ ಅರಬ್ಬಿ ವಲಸೆಗಾರರು ಅದಾಗಲೆ ಮೂರು ಶತಮಾನದ ಹಿಂದೆಯೆ ಅಲ್ಲಿಗೆ ವಲಸೆ ಬಂದು ನೆಲೆಸಿದ್ದ ಯಹೂದಿಗಳೊಂದಿಗೆ ಅವರ ವಾಸದ ಜಾಗವನ್ನು ಆಕ್ರಮಿಸುವ ಉದ್ದೇಶದಿಂದ ಸಮರ ಹೂಡಿದರು. ಆದರೆ ವಾಸ್ತವದಲ್ಲಿ ಬಲು ಹಿಂದಿನಿಂದಲೂ ಇವೆರಡು ಅರಬ್ಬಿ ಬುಡಕಟ್ಟಿನವರ ಮಧ್ಯೆಯೆ ದ್ವೇಷ ಹೊಗೆಯಾಡುತ್ತಿತ್ತು. ಈಗ ಹೂಡಿದ್ದ ಸಮರದಲ್ಲಿ ಅವರ ಪ್ರಯತ್ನ ಯಶಸ್ವಿಯಾಗಿ ಎರಡೂ ಗುಂಪಿನವರ ಒತ್ತಡ ತಾಳಲಾರದೆ ಯಹೂದಿಗಳು ಅಲ್ಲಿಂದ ಕಾಲು ಕಿತ್ತರೂ, ಇವೆರಡು ಬುಡಕಟ್ಟಿನವರ ನಡುವೆಯೆ ಮತ್ತೆ ಆರಂಭವಾದ ಕಿತ್ತಾಟ ಬಿಡುವಿಲ್ಲದೆ ಮುಂದುವರೆಯಿತು. ಈ ಆಂತರಿಕ ಕಲಹದಲ್ಲಿ ಅಂತಿಮವಾಗಿ 'ಖಸ್'ರಾಜ್' ಬುಡಕಟ್ಟಿನವರು ಜಯ ಸಾಧಿಸಿದರೂ ದ್ವೇಷದ ಮಟ್ಟ ಮಾತ್ರ ಇನಿತೂ ಕಡಿಮೆಯಾಗಲಿಲ್ಲ. 'ಖಸ್'ರಾಜ್' ಗುಂಪಿನ ನಾಯಕರಲ್ಲೊಬ್ಬನಾದ ಅಸಾದ್ ಎನ್ನುವವನು ಮುಂದೆ ಮದೀನಾದ ಪುರಪ್ರಮುಖನಾಗಿ ಮೆರೆದ. ಅವನ ಮನಸ್ಸಿನಲ್ಲಿ ಅವರ ವೈರಿಗಳು ಅಷ್ಟೊಂದು ತೀವ್ರತರವಾಗಿ ತಮ್ಮವರ ವಿರುದ್ಧ ಕಾದಾಡಲು ಅವರಿಗೆ ಯಹೂದಿಗಳ ಕುಮ್ಮಕ್ಕು ಸಿಕ್ಕಿದ್ದೆ ಕಾರಣ ಎನ್ನುವ ಬಲವಾದ ಭಾವನೆ ಮನೆಮಾಡಿತ್ತು. ಹೀಗಾಗಿ ವಿನಾಕಾರಣ ಅವನು ಯಹೂದಿಗಳ ಮೇಲೆ ದ್ವೇಷ ಸಾಧಿಸುತ್ತಿದ್ದ. ಆದರೆ ಕ್ರಮೇಣ ಇತ್ತಂಡಗಳಿಗೂ ಶಾಂತಿಯ ಅವಶ್ಯಕತೆ ಕಂಡು ಬಂತು. ಅದಾಗಲೆ ಅವರಿಬ್ಬರ ಬಳಗಗಳಿಗೂ ಮಹಮದನ ಪರಿಚಯವಾಗಿ ಭೋದನೆಯೂ ಆಗಿತ್ತು. ಮದೀನದ ಸುತ್ತಮುತ್ತಲೂ ನೆಲೆಯೂರಿದ್ದ ಯಹೂದಿಗಳ ಧರ್ಮದ ಮರ್ಮ, ಅದರ ಆಚರಣೆಯ ಗುಟ್ಟುಗಳು, ಧರ್ಮಾಚರಣೆ ಪರಿಪಾಲನೆಯ ಪರಿಚಯ ಮಹಮದನಿಗೂ ಆಗಿದ್ದರಿಂದ ದೇವರ ವಿವರಣೆ, ಪ್ರವಾದಿ ಮೋಸಸ್ ಮತ್ತು ಇತರ ದೇವದೂತರ ದೈವವಾಣಿಗಳು ಹಾಗೂ ಯಹೂದಿ ಪುರಾಣ ಪುಣ್ಯ ಕಥೆಗಳ ವಿವರಣೆ ಅವನ ಪ್ರವಚನಗಳಲ್ಲೂ ನಿಯಮಿತವಾಗಿ ಕಾಣಿಸಿಕೊಂಡು ಮದೀನಾದ ಯಹೂದಿಯೇತರ ಅರಬರಿಗೂ ಅಲ್ಪಸ್ವಲ್ಪ ಅವುಗಳ ಪರಿಚಯವಾಗಿದ್ದಿತು. ಯಹೂದಿಗಳು ನಂಬಿದ್ದಂತೆ ದೇವರ ಪುನರುತ್ತಾನ ಹಾಗೂ ಅದಕ್ಕೆ ಮುನ್ನ ಆಗುವ ದೇವದೂತ ಹಾಗೂ ಪ್ರವಾದಿಯ ಪುನರಾಗಮನದ ನಂಬಿಕೆಯ ಅನುಸಾರ ತಾನೆ ಆ ಕೊನೆಯ ಪ್ರವಾದಿಯೆಂದು, ತನ್ನ ಮೂಲಕವೆ ದೇವರು ಧರ್ಮದ ಪುನರ್ ಸಂಸ್ಥಾಪನೆಗೆ ಆಗಮಿಸಲಿದ್ದಾನೆ ಎಂದು ಮಹಮದ ಪ್ರಚಾರ ಆರಂಭಿಸಿದ. ಆಗ ಹೊರಹೊಮ್ಮಿದ ಸುರಾ 2;89=90ರಮೂಲಕ ಈ ಹಿಂದೆ ದೇವರು ಭೂಮಿಗೆ ಕಳುಹಿಸಿದ್ದ ಪವಿತ್ರ ಗ್ರಂಥಗನ್ನು ಹಾಗೂ ಪ್ರವಾದಿಗಳಾದ ಏಸು ಮತ್ತು ತನ್ನನ್ನು ನಂಬದಿರುವುದರಿಂದಲೆ ದೇವರ ಶಾಪ ಯಹೂದಿಗಳಿಗೆ ತಟ್ಟಿದೆ ಎಂದು ನಿರೂಪಿಸಿದ. ಮರುವರ್ಷ ಅಂದರೆ ಕ್ರಿಸ್ತಶಕ 621ರಲ್ಲಿ ಮೆಕ್ಕಾದ ಪವಿತ್ರ ಯಾತ್ರೆಯ ದಿನಗಳಲ್ಲಿ ಮದೀನಾದಿಂದ ಭಕ್ತರು ಯಾತ್ರಾರ್ಥಿಗಳಾಗಿ ಬಂದಾಗ ಮಹಮದ್ ಅವರನ್ನು ಖುದ್ದಾಗಿ ಸಂಪರ್ಕಿಸಿದ. ಅವನ ಪ್ರಭಾವಕ್ಕೆ ಒಳಗಾದ ಖಾಸ್'ರಾಜ್ ಬುಡಕಟ್ಟಿನ ಹತ್ತು ಮಂದಿ ಹಾಗೂ ಅವಸ್ ಬುಡಕಟ್ಟಿನ ಇಬ್ಬರು ಆ ಸಂದರ್ಭದಲ್ಲಿ ಇಸ್ಲಾಮಿಗೆ ಮತಾಂತರಗೊಂಡರು. ತಾವು ಇಸ್ಲಾಮನ್ನು ಒಪ್ಪಿಕೊಂಡಿದ್ದೇವೆ ಎಂಬುದಕ್ಕೆ ಸಾಕ್ಷಿಯಾಗಿ ಅವರು 'ನಾವಿನ್ನು ಏಕದೇವನನ್ನಲ್ಲದೆ ಇತರ ದೇವರನ್ನು ಆರಾಧಿಸುವುದಿಲ್ಲ, ವ್ಯಭಿಚಾರಗೈಯ್ಯುವುದಿಲ್ಲ, ನಮ್ಮ ಮಕ್ಕಳನ್ನು ಹತ್ಯೆಗೈಯುವುದಿಲ್ಲ, ಯಾರ ಮೇಲೂ ಯಾವುದೆ ರೀತಿಯ ಮಿಥ್ಯಾರೋಪ ಮಾಡುವುದಿಲ್ಲ ಹಾಗೂ ಪ್ರವಾದಿ ವಿಧಿಸಿರುವ ಯಾವುದೆ ಒಳ್ಳೆಯದಕ್ಕೆ ಅವಿಧೇಯ ಪೂರ್ಣರಾಗಿರುವುದಿಲ್ಲ' ಎಂದು ಕಾಬಾದ ಎದುರೆ ಪ್ರತಿಜ್ಞೆ ಕೈಗೊಂಡರು. ಇದೆ ಮುಂದೆ ಇಸ್ಲಾಂ ಇತಿಹಾಸದ ಪುಟಗಳಲ್ಲಿ ಮೊತ್ತಮೊದಲ ಅಕಾಬಾದ ಪ್ರತಿಜ್ಞೆ ಎಂದು ಪ್ರಸಿದ್ಧಿ ಪಡೆಯಿತು ಎನ್ನುತ್ತಾನೆ ಇತಿಹಾಸಕಾರ ಅಲ್ ತಮೀಮಿ. ಹೀಗೆ ಮತಾಂತರಿತವಾದ ಹನ್ನೆರಡು ಮಂದಿ ಮದೀನಕ್ಕೆ ಮರಳಿದ ನಂತರ ಮಹಮದನ ಮತದ ಪ್ರಚಾರ ಕೈಗೊಂಡ ಪ್ರಮುಖ ಶಿಷ್ಯಂದಿರಾದರು. ಮದೀನಾದ ಮನೆಮನೆಗಳಿಗೂ ತೆರಳಿ ಬಿರುಸಿನಿಂದ ಅವರೆಲ್ಲರೂ ಕೈಗೊಂಡ ಮತಪ್ರಚಾರದ ಫಲವಾಗಿ ಅನೇಕರನ್ನು ಇಸ್ಲಾಮಿನತ್ತ ಸೆಳೆದು ಮತಾಂತರಿಸಲು ಅವರಿಗೆ ಸಾಧ್ಯವಾಯಿತು. ಇದೆ ಸಮಯದಲ್ಲಿ ಬೆಜಂಟೈನ್ ಗ್ರೀಕರ ಹಾಗೂ ಪರ್ಷಿಯನ್ ಸಾಮ್ರಾಜ್ಯಶಾಹಿಗಳ ನಡುವೆ ಕದನ ಜರುಗಿ ಅದರಲ್ಲಿ ಪರ್ಶಿಯನ್ನರ ಕೈ ಮೇಲಾಗಿ ಅವರು ಬಹುತೇಕ ಕಾನ್'ಸ್ಟಾಂಟಿನೋಪೋಲಿನ ಬಾಗಿಲವರೆಗೂ ತಲುಪಿಯಾಗಿತ್ತು, ಆದರೆ ತಡವಾಗಿಯಾದರೂ ಬೆಜಂಟೈನರ ರೋಮನ್ ಸಾಮ್ರಾಟ ಹಿರಾಕ್ಲಿಯಸ್ ಮೈ ಕೊಡವಿಕೊಂಡು ಎದ್ದಾಗ ಪರ್ಷಿಯನ್ನರು ಸೋತು ಹಿಮ್ಮೆಟ್ಟಲೆ ಬೇಕಾಯಿತು. ಈ ಘಟನಾವಳಿ ಕ್ರಿಸ್ತಶಕ 621ರಲ್ಲಿಯೆ ಜರುಗಿತ್ತು ಎನ್ನುವ ಕುರುಹು ಅಲ್ ತಮೀಮಿಯ ಐತಿಹಾಸಿಕ ದಾಖಲೆಗಳಿಂದ ಸ್ಪಷ್ಟವಾಗುತ್ತದೆ. ಈ ಚಾರಿತ್ರಿಕ ಘಟನೆ ಮಹಮದನ ಅರಿವಿಗೆ ಬಂದಿರುವುದು ಖುರಾನಿನ ಸುರಾ 30/1/6ರ ಮೂಲಕ ಸ್ಪಷ್ಟವಾಗುತ್ತದೆ. ಅದೆ ಸುರಾದಲ್ಲಿ ಮ್ಸಹಮದ್ ಗ್ರೀಕರ ವಿಜಯದ ಕುರಿತು ಭವಿಷ್ಯ ನುಡಿದಂತೆ ಮೇಲ್ನೋಟಕ್ಕೆ ಕಂಡುಬಂದರೂ ಆ ಸುರಾಕ್ಕಿಂತಲೂ ಮೊದಲೆ ಈ ಸಂಗತಿ ಜರುಗಿ ಮುಗಿದೆ ಹೋಗಿತ್ತು!. ಈ ನಡುವೆ ಮೆಕ್ಕಾದಲ್ಲಿ ಶಾಂತಿ ನೆಲೆಸಿತ್ತು. ಮದೀನದಲ್ಲಿ ಸಫಲಗೊಂಡಿದ್ದ ಮಹಮದನ ಮತಪ್ರಚಾರದ ಬಿಸಿ ಮೆಕ್ಕಾದ ಮಟ್ಟಿಗೆ ಮಾತ್ರ ತಣ್ಣಗಾಗಿತ್ತು. ಹೀಗಾಗಿ ವಯಕ್ತಿಕವಾಗಿ ಶಾಂತ ಜೀವನ ಸವೆಸಿದರೂ ಆ ಸಮಯದಲ್ಲಿ ಮಹಮದನ ಆರ್ಥಿಕ ಸ್ಥಿತಿ ಅಷ್ಟೇನೂ ಹಿತಕರವಾಗಿರಲಿಲ್ಲ. ಈ ಬಡತನದ ಹೊತ್ತಿನಲ್ಲಿಯೆ ಮೆಕ್ಕಾದಲ್ಲಿ ತನ್ನ ಮತ ಪ್ರಚಾರ ಮಾಡುತ್ತಿರುವಾಗಲೆ ಇಸ್ಲಾಂ ಜಗತ್ತಿನಲ್ಲಿ ಇಂದಿಗೂ ಪ್ರಚಲಿತದಲ್ಲಿರುವ ಮಹಮದನ ಪ್ರಸಿದ್ಧ ಜೆರೂಸಲಂ ಯಾತ್ರೆ ಜರುಗಿತು ಎಂಬ ನಂಬಿಕೆಯ ಜನನವೂ ಆಯಿತು ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅದು ಪ್ರಸಿದ್ಧ ಯಾತ್ರಾಸ್ಥಳವಾಗಿದ್ದ ಜೆರೂಸಲಮ್ಮಿಗೆ ಮಹಮದ್ ಆಕಾಶಯಾನ ಮಾಡಿದ್ದ ಕಪೋಲ ಕಲ್ಪಿತ ಸಂಗತಿಯಿದು. ಪುರಾತನ ಕಾಲದಿಂದಲೂ ಅತ್ಯಂತ ಪವಿತ್ರ ಯಾತ್ರಾಸ್ಥಳವಾಗಿ ಜೆರೂಸಲಂ ಮೆರೆದಿದೆ. ಮಹಮದ್ ಕೂಡ ಮಾನಸಿಕವಾಗಿ ಅಲ್ಲಿನ ಯಹೂದಿ ಹಾಗೂ ಕ್ರೈಸ್ತ ಗುಡಿ- ಗೋಪುರಗಳನ್ನು ಆರಾಧಿಸುತ್ತಿದ್ದ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ. ಮದೀನಕ್ಕೆ ವಲಸೆ ಬಂದ ನಂತರ ಪ್ರಾರ್ಥನೆ ಮಾಡುವಾಗ ಅದರ ವಿಧಿಗಳನ್ನು ಜೆರೂಸಲಮ್ಮಿನ ದಿಕ್ಕಿಗೆ ಮುಖಮಾಡಿ ಸಲ್ಲಿಸಬೇಕೆಂಬ ಕಟ್ಟಳೆಯನ್ನೂ ಆತ ಮಾಡಿದ್ದ. ಅದು ಆ ನಗರದ ಪಾವಿತ್ರ್ಯತೆಯ ಬಗ್ಗೆ ಅವನಿಗಿದ್ದ ಶ್ರದ್ಧೆಗೊಂದು ದ್ಯೋತಕವಾಗಿತ್ತು. ವಸ್ತುಸ್ಥಿತಿ ಹೀಗಿರುವಾಗಲೆ ಯಕ್ಷ ಗೇಬ್ರಿಯಲ್ ತನ್ನನ್ನು ರೆಕ್ಕೆಗಳಿಂದ ಕೂಡಿದ್ದ ಅಶ್ವಾರೂಢನನ್ನಾಗಿಸಿ ಅಲ್ಲಿಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ನೆರೆದಿದ್ದ ಪ್ರಾಚೀನ ಪ್ರವಾದಿಗಳಿಂದ ತನಗೆ ಸ್ವಾಗತ ಹಾರ್ದಿಕವಾಗಿ ಸಿಕ್ಕಿದ್ದು, ಅಲ್ಲಿಂದ ಅದೆ ಅಶ್ವದ ಮೇಲೆ ಕುಳಿತೆ ಒಂದೊಂದೆ ಮೆಟ್ಟಲೇರಿ ಅಂತಿಮವಾಗಿ ತಾನು ಏಳನೆ ಸ್ವರ್ಗದ ಮುಂಬಾಗಿಲು ದಾಟಿದಾಗ ತನಗಲ್ಲಿ ಸಾಕ್ಷಾತ್ ದೈವದರ್ಶನವಾಗಿದ್ದು, ದೇವರು ಅವನ ನೂತನ ಮತಾನುಯಾಯಿಗಳು ನಿತ್ಯ ಐದುಬಾರಿ ಪ್ರಾರ್ಥನೆ ಸಲ್ಲಿಸಲು ಕಟ್ಟಪ್ಪಣೆ ಮಾಡಿ ಅಂತರ್ಧನವಾಗಿದ್ದು ಇವೆಲ್ಲವನ್ನೂ ಪರಿಭಾವಿಸುತ್ತಿದ್ದಾಗ ಸೊಗಸಾದ ನಿದ್ದೆ ಒಡೆದು ಅದೂವರೆಗೂ ಕಾಣುತ್ತಿದ್ದ ಸುಂದರ ಕನಸಿನಿಂದ ಮಹಮದ್ ಹೊರಬಂದ ! ಎಚ್ಚರಗೊಂಡ ಬೆಳಗ್ಯೆ ಕೂಡಲೆ ಅಬು ತಾಲೀಬನ ಮನೆಗೆ ಆವೇಶಪೂರಿತನಾಗಿ ಧಾವಿಸಿ ಅಲ್ಲಿದ್ದ ಅವನ ಮಗಳಿಗೆ ಮಹಮದ್ ಈ ವಿಷಯವನ್ನು ಹೇಳಿದಾಗ ಅವಳು ಅದಕ್ಕೆ ಸೊಪ್ಪು ಹಾಕಲಿಲ್ಲ. ಆದರೆ ಅವಳ ವಿವೇಕದ ಮಾತುಗಳಿಗೆ ಇನಿತೂ ಕಿವಿಗೊಡದೆ ಮಹಮದ್ ತನಗೆ ಜೆರೂಸಲಂನಲ್ಲಿ ದೇವರದರ್ಶನವಾದ ಸಂಗತಿಯನ್ನು ಪ್ರಕಟಪಡಿಸಿದ ಎನ್ನುತ್ತಾನೆ ಇತಿಹಾಸಕಾರ ಕ್ಲೇರ್.ಅವನ ಈ ಕನಸಿನ ಸಾಕಾರ ಸ್ವರೂಪವನ್ನು ಖುರಾನಿನ ಸುರಾ 17/1 ರಲ್ಲಿ ಗಮನಿಸಬಹುದು. ಆದರೆ ಈ ಯಾತ್ರೆಯನ್ನು ಭಾವುಕವಾಗಿ ಸ್ವೀಕರಿಸಿ ನಿಜವೆಂದೆ ನಂಬಿದ ಮಹಮದನ ಹಿಂಬಾಲಕರು ಜೆರೂಸಲಮ್ಮಿನ ಓಮರ್ ಮಸೀದಿಯಲ್ಲಿ ಮಹಮದ್ ಸ್ವರ್ಗದಿಂದ ಕೆಳಗಿಳಿದ ಸ್ಥಳದಲ್ಲಿ ಆತನದೆಂದು ನಂಬಿಸಲಾಗುವ ಪಾದದ ಬಿಂಬಗಳನ್ನು ಇಂದಿಗೂ ಪವಿತ್ರವೆಂದು ಪೂಜಿಸಿ ಧನ್ಯತೆ ಅನುಭವಿಸುತ್ತಾರೆ!. ಮಹಮದ್ ಅಲ್ ತೈಫ್'ನಿಂದ ಮೆಕ್ಕಾನಗರಕ್ಕೆ ಮರಳಿದ ಮೇಲೆ ತನ್ನ ದೈವವಾಣಿಯ ಮೂಲಕ ಕ್ರಿಸ್ತಧರ್ಮದ ಬಗ್ಗೆ, ಮೇರಿ ಮಾತೆಯ ಬಗ್ಗೆ, ಕ್ರಿಸ್ತನ ಜನನದ ಬಗ್ಗೆ, ಆತನ ಜೀವನ ಹಾಗೂ ಸಾವಿನ ಕುರಿತು ಸ್ವಲ್ಪ ಮಟ್ಟಿಗೆ ತನ್ನ ಸುರಾ 19/5, 43/57-62, 4/171ಗಳಲ್ಲಿ ತನಗೆ ಲಭ್ಯವಾದ ಮಾಹಿತಿ ಹೊರಗೆಡವಿದ್ದಾನೆ ಎನ್ನುತ್ತಾರೆ ಇತಿಹಾಸಕಾರರಾದ ಇಶಾಕ್, ಕ್ಲೇರ್ ಹಾಗೂ ಮ್ಯೂರ್ ಒಕ್ಕೊರಲಿನಿಂದ. ಈ ಬಗ್ಗೆ ಅವರಲ್ಲಿ ಭಿನ್ನಭಿಪ್ರಾಯಗಳಿಲ್ಲ. ಯಹೂದಿ ಹಾಗೂ ಕ್ರಿಸ್ತ ಮತದ ಬಗ್ಗೆ ಅದಾಗಲೆ ಅರಿತಿದ್ದ ಮಂದಿ ಇದರಿಂದ ಮಹಮದನ ಭೋದನೆಯಲ್ಲಿ ಹೊಸತೇನನ್ನೂ ಕಾಣದೆ ಅವನ ಖುರಾನ್ ಈ ಹಿಂದೆ ಹೊರಬಂದ 'ಟೋರಾ' ಹಾಗೂ 'ಬೈಬಲ್'ನ ನಕಲಿಯಾಗಿದೆ ಹಾಗೂ ಕೇವಲ ಕಟ್ಟುಕಥೆಗಳ ಕಂತೆಯಾಗಿದೆ ಎಂದು ಆರೋಪಿಸಿದರು. ಆ ಎಲ್ಲಾ ಟೀಕೆಗಳಿಗೆ ಮಹಮದ್ ಸುರಾ 46.47ಗಳಲ್ಲಿ ಸಮಜಾಯಷಿ ನೀಡಲು ಯತ್ನಿಸಿದ್ದಾನೆ. ಮಹಮದ್ ಯಹೂದಿಗಳ ಪವಿತ್ರಗ್ರಂಥವಾದ 'ತಾಲ್'ಮಡ್'ನಲ್ಲಿ ಬರುವ ಹಲವಾರು ದಂತಕಥೆಗಳನ್ನು ಖುರಾನಿನಲ್ಲೂ ಮಕ್ಕಿ-ಕಾ-ಮಕ್ಕಿ ಕಾಪಿ ಹೊಡೆದು ಬಳಸಿಕೊಂಡಿರುವ ಉದಾಹಾರಣೆಗಳನ್ನು ಇತಿಹಾಸಕಾರ ಕ್ಲೇರ್ ಸಾಧಾರವಾಗಿ ನೀಡುತ್ತಾನೆ. ಮಹಮದ್ ಯಹೂದಿ ಹಾಗೂ ಕ್ರಿಸ್ತಮತಾವಲಂಭಿಗಳಿಗೆ ತಮ್ಮತಮ್ಮ ಧರ್ಮಗ್ರಂಥಗಳನ್ನೆ ಆಧರಿಸಿ ಅವುಗಳ ಸಂದೇಶಗಳನ್ನು ಪಾಲಿಸಬೇಕೆಂದು ಆರಂಭದಲ್ಲಿ ಕರೆಯಿತ್ತಿದ್ದ. ಸುರಾ 5/72 ಹಾಗೂ 5/47ರಲ್ಲಿ ಇದನ್ನು ಕಾಣಬಹುದು. ಈ ಉದಾರ ನೀತಿಯನ್ನ ಯಹೂದಿ ಹಾಗು ಕ್ರೈಸ್ತರಿಗೆ ನೀಡುತ್ತ ಸುರಾ 42/3-53,ಹಾಗೂ 42/115ರಲ್ಲಿ 'ನಿಮ್ಮ ದೇವ ನಮ್ಮ ಹಾಗೂ ನಿಮ್ಮ ಪ್ರಭುವೂ ಆಗಿರುತ್ತಾನೆ!' ಎನ್ನುವ ಮೂಲಕ ನೀಡಿದ್ದಾನೆ. ಆದರೆ ಕ್ರಮೇಣ ಇಸ್ಲಾಂ ಪ್ರಬಲಗೊಳ್ಳುತ್ತಿದ್ದಂತೆ ತನ್ನ ಈ ಉದಾರ ನೀತಿಯನ್ನು ಮಹಮದ್ ಮುಲಾಜಿಲ್ಲದೆ ಬದಲಿಸಿದ!. ಎಲ್ಲಿಯೂ ಕ್ರೈಸ್ತ ಅಥವಾ ಯಹೂದಿ ಧರ್ಮಗ್ರಂಥಗಳ ಹೆಸರನ್ನು ಉಲ್ಲೇಖಿಸದೆ ( ತಾನೇ ಭೋದಿಸಿದ ಖುರಾನಿನ ಹೊರತು ಅನಕ್ಷರಸ್ತನಾದ ಆತನಿಗೆ ಕೇಳಿ ಅರಿವಿದ್ದ ಇತರ ಧರ್ಮಗ್ರಂಥಗಳು ಅವೆರಡು ಮಾತ್ರ ಎನ್ನುವುದು ಇತಿಹಾಸಕಾರ ಅಲ್ ತಮೀಮಿಯ ಅಂಬೋಣ. ) ಖುರಾನ್ ಮೂಲಕ ದೇವರು ಈ ಹಿಂದೆ ಉಪದೇಶಿತವಾದ ಎಲ್ಲಾ ಧರ್ಮಗ್ರಂಥಗಳನ್ನು ರದ್ದುಪಡಿಸಿದ್ದಾನೆ! ಎಂದು ಸಾರಿದ. ಇಷ್ಟಕ್ಕೆ ನಿಲ್ಲಿಸದೆ ಖುರಾನ್ ಅಂತಿಮ ದೈವ ಸಂದೇಶವಾಗಿದ್ದು ತಾನು ಅಂತಿಮ ಪ್ರವಾದಿ ಎಂದೂ ಘೋಷಿಸಿಕೊಂಡ!!. ಇದಕ್ಕೆ ಪೂರಕವಾಗಿ ತನ್ನ ಅಂತಿಮ ಮೆಕ್ಕಾಯಾತ್ರೆಯ ಸಮಯದಲ್ಲಿ ಕಾಬಾದ ಬಳಿ ಯಹೂದಿ ಮತ್ತು ಕ್ರೈಸ್ತರು ಇನ್ನೆಂದೂ ಸುಳಿಯಬಾರದು ಎಂದು ಪ್ರತಿಬಂಧಿಸಿದ್ದನ್ನು ಅಲ್ ಮುಬಾರಕಿ ಎತ್ತಿ ತೋರಿಸುತ್ತಾನೆ. ( ಇನ್ನೂ ಇದೆ...)

Tuesday, October 2, 2012

ವಲಿ.... ( ಭಾಗ- 7 )


ಅಬು ತಾಲಿಬನ ಮರಣಾನಂತರ ಅವನ ಸಹೋದರ ಅಬು ಲಹಾಬ್ ಮಹಮದನ ಬಗ್ಗೆ ಕರುಣೆ ತೋರಿದ. ಎಷ್ಟಾದರೂ ತನ್ನ ಅಣ್ಣನ ಮಗನಲ್ಲವೆ ಎಂಬ ಕರುಣೆಯಿಂದ ಆತನೆದೆ ಮೃದುಧೋರಣೆ ಹೊಂದಿದ ಅಬು ಲಹಾಬ್ ತನ್ನ ಮಕ್ಕಳಿಗೆ ಮಹಮದನ ಇನ್ನಿಬ್ಬರು ಹೆಣ್ಣುಮಕ್ಕಳನ್ನು ತಂದು ಕೊಂಡು ಮಹಮದನಿಗೆ ದೊಡ್ಡಪ್ಪನ ಜೊತೆಗೆ ಬೀಗನೂ ಆದ. ಆದರೆ ಈ ಬಾಂಧವ್ಯ ಹೆಚ್ಚು ಕಾಲ ಬಾಳಲಿಲ್ಲ. ಇತರ ಖುರೈಷಿಗಳ ಪ್ರಭಾವ ದಟ್ಟವಾಗಿದ್ದುದರಿಂದ ಅಬು ಲಹಾಬ್ ಆತನ ನೂತನ ಮತಭೋದನೆ ಹಾಗೂ ಅದರ ಬಗ್ಗೆ ಮಹಮದನ ಪ್ರಚಾರ ವೈಖರಿಯ ಬಗ್ಗೆ ಕಿಡಿಕಾರತೊಡಗಿದ. ಈ ಅಸಹನೆಯಿಂದಲೆ ಮಹಮದನನ್ನು ಮತಭ್ರಷ್ಟನೆಂದು ಹೀಯಾಳಿಸಿ ಅವನಿಗೆ ಕಿರುಕುಳ- ಉಪಟಳ ನೀಡಲೂ ಆರಂಭಿಸಿದ. ಅವನ ಈ ಹಿಂಸೆಗೆ ರೋಸಿ ಹೋದ ಮಹಮದ್ ತನ್ನ ಒಂದು ದೈವವಾಣಿಯಲ್ಲಿ ಅವನ ಮೇಲಿದ್ದ ದ್ವೇಷವನ್ನು ಹೊರಹಾಕಿದ. ಅದೇ ಸುರಾ 111/1-5ದಲ್ಲಿನ ದೈವವಾಣಿ ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಅದರಲ್ಲಿ ಹೀಗೆ ಹೇಳಲಾಗಿದೆ: 1) ಅಬು ಲಹಾಬನ ಕೈಗಳು ಮುರಿದು ಹೋದವು ಹಾಗೂ ಅವನು ನಾಶವಾಗಿ ಹೋದನು. 2) ಅವನು ಮಾಡುತ್ತಿದ್ದ ಸಂಪಾದನೆಯಾಗಲಿ, ಅವನು ಕೂಡಿಟ್ಟ ಸಂಪತ್ತಾಗಲಿ ಅವನ ಯಾವ ಕೆಲಸಕ್ಕೂ ಬರಲಿಲ್ಲ. 3) ಖಂಡಿತವಾಗಿಯೂ ಅವನು ನರಕದ ಸುಡುವ ಬೆಂಕಿಯಲ್ಲಿ ಹಾಕಲ್ಪಡುವನು. 4) ಕುಪ್ರಚಾರಕಳಾದ ಅವನ ಪತ್ನಿಗೂ ಅದೆ ಭೀಕರ ನರಕ ಕಾದಿದೆ. 5) ಅವರಿಬ್ಬರ ಕತ್ತಿನಲ್ಲಿಯೂ ಆಗ ದರ್ಭೆಯ ಹಾರವಿರುವುದು. ಕ್ರಮೇಣ ಮಹಮದನಿಗೂ ಅವನ ಅನುಯಾಯಿಗಳಿಗೂ ಖುರೈಷಿಗಳ ಉಪಟಳ ಹೆಚ್ಚಾಗಿ ಅವರು ಅವಮಾನಪೂರಿತವಾಗಿ ಜೀವನ ಸಾಗಿಸಬೇಕಾಗಿತ್ತು. ಇತ್ತ ಅಬು ತಾಲೀಬನ ಮರಣದ ನಂತರ ಸೂಕ್ತ ಭದ್ರತೆಯೂ ಇಲ್ಲದೆ ದೈಹಿಕ ರಕ್ಷಣೆ ಒಂದು ಸವಾಲಾಗಿ ಪರಿಣಮಿಸಿತ್ತು ಅವನಿಗೆ. ಅಪ್ಪಿತಪ್ಪಿ ಮನೆಯಿಂದ ಹೊರಗೆ ಅಡಿಯಿಟ್ಟರೆ ಅವನ ಮತದತ್ತ ಹನಿಯಷ್ಟೂ ಆಸಕ್ತಿ ಪ್ರಕಟಿಸದ ಮೆಕ್ಕಾದ ಮಂದಿಯಿಂದ ಅವನ ಮೇಲೆ ಕಲ್ಲು ಮಣ್ಣುಗಳು ಎಲ್ಲೆಂದರಲ್ಲಿ ಸುರಿಮಳೆಯಾಗುತ್ತಿತ್ತು. ಅಲ್ಲದೆ ಅವನ ಮತಪ್ರಚಾರವೂ ಕುಂಠಿತವಾಗಿತ್ತು. ಹೀಗಾಗಿ ತನ್ನ ಜೀವಮಾನದ ಪರಮ ಗುರಿಯಾದ ಇಸ್ಲಾಂ ಪ್ರಚಾರಕ್ಕಾಗಿ ಸೂಕ್ತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಆತ ನಿರ್ಧರಿಸಿದ. ಅದೆ ಕಾರಣಕ್ಕೆ ಮೆಕ್ಕಾದಿಂದ ಅರವತ್ತು ಮೈಲಿ ದೂರದ ಅಲ್ ತೈಫ್ ಎಂಬ ಪಟ್ಟಣಕ್ಕೆ ಸೇವಕ ಜೈದ್'ನೊಂದಿಗೆ ಪ್ರಯಾಣಿಸಿದ. ಅಲ್ಲಿನ ಒಂದು ಕುಟುಂಬದೊಂದಿಗೆ ತನ್ನ ಉದ್ದೇಶ ತಿಳಿಸಿ ಅದಕ್ಕಾಗಿ ಅವರ ಬೆಂಬಲ ಅಪೇಕ್ಷಿಸಿದ. ಆದರೆ ಆತ ನಿರೀಕ್ಷಿಸಿದಷ್ಟು ಬೆಂಬಲ ವ್ಯಕ್ತವಾಗಲಿಲ್ಲ. ತನ್ನ ಹಾಗೂ ತನ್ನ ಮತಬಾಂಧವರ ರಕ್ಷಣೆಗೆ ಆತನಿಟ್ಟ ಮೊರೆಯನ್ನು ಅಲ್ಲಿನವರು ಪುರಸ್ಕರಿಸಲಿಲ್ಲ. ಅವನ ಹುಟ್ಟಿನ ಕುಲವಾದ ಖುರೈಶಿಗಗಳಿಂದಲೇ ದೊರೆಯದ ಬೆಂಬಲ ಇನ್ನುಳಿದವರರಿಂದ ಹೇಗೆ ನಿರೀಕ್ಷಿಸುತ್ತಿ ಎಂದು ಮೊದಲಿಸಿಕೊಂಡು 'ಅಂಗೈ ತೋರಿಸಿ ಅವಲಕ್ಷಣ' ಎನ್ನಿಸಿಕೊಂಡವನಂತೆ ಪೆಚ್ಚಾಗಿ ಆತ ಅಲ್ಲಿಂದ ಕಾಲ್ತೆಗೆಯಬೇಕಾಯಿತು. ಅಲ್ಲಿನ ಮಂದಿ ಮಹಮದ್ ಹಾಗೂ ಜೈದ್'ನನ್ನು ಅಲ್ಲಿಂದ ಹೊಡೆತ, ಬೈಗುಳ ಹಾಗೂ ಭರ್ತ್ಸನೆಗಳೊಂದಿಗೆ ಹೊರದಬ್ಬಿದರು ಎನ್ನುತ್ತಾನೆ ಇತಿಹಾಸಕಾರ ಡೋಜಿ. ಹೀಗೆ ಅವಮಾನಿತನಾದ ಮಹಮದ್ ಮರಳಿ ಮೆಕ್ಕಾಗೆ ವಾಪಸ್ಸಾಗುವಾಗ ಅತಿಯಾದ ಹಸಿವು ಹಾಗೂ ದೈಹಿಕ ಬಳಲಿಕೆಗೆ ತುತ್ತಾಗಿ ನಖ್ಲಾ ಎಂಬಲ್ಲಿ ಬೀಡು ಬಿಟ್ಟನು. ಅವರ ಹೀನಸ್ಥಿತಿ ಕಂಡು ಮರುಕಗೊಂಡ ಅಲ್ಲಿನ ತೋಟದ ಯಜಮಾನ ಕರುಣಾಪೂರಿತನಾಗಿ ಆಹಾರ ನೀಡಿ ಅವರಿಬ್ಬರನ್ನೂ ಆದರಿಸಿದ. ಅವರು ತಂಗಿದ್ದ ತೋಟ ವಾಸ್ತವವಾಗಿ ಇಬ್ಬರು ಖುರೈಷಿಗಳಿಗೆ ಸೇರಿತ್ತು. ಹೃದಯ ವೈಶಾಲ್ಯದ ಅವರುಗಳು ಅವನ ಸ್ಥಿತಿಗೆ ಮರುಗಿ ತಮ್ಮ ಕ್ರೈಸ್ತ ಸೇವಕನ ಕೈಯಲ್ಲಿ ದ್ರಾಕ್ಷಿಹಣ್ಣಿನ ಬುಟ್ಟಿಯೊಂದನ್ನು ಅವನಿಗಾಗಿ ಕಳುಹಿಸಿಕೊಟ್ಟರು. ಅದ್ವಾಸ್ ಎಂಬ ಆ ಸೇವಕನೊಂದಿಗೆ ಮಾತನಾಡುವಾಗ ಆತ ನಿನೆವಾ ಪಟ್ಟಣದವನು ಎಂಬುದು ಮಹಮದನ ಅರಿವಿಗೆ ಬಂತು. ಅಬ್ಬಾಸನೆದುರು ಬೈಬಲ್ಲಿನಲ್ಲಿ ಉಲ್ಲೇಖವಾಗಿರುವ ಪ್ರವಾದಿ ಮೋಸೆಸನ ಬಗ್ಗೆ ಪ್ರಸ್ತಾಪಿಸಿದ ಮಹಮದ್ ಅದ್ವಾಸನ ಅಚ್ಚರಿಗೆ ಕಾರಣವಾದ. ತನ್ನಂತೆ ಮೋಸೆಸ್ ಕೂಡ ಪ್ರವಾದಿ ಎಂದು ಮಹಮದ್ ಆತನಿಗೆ ಸಾರಿದ. ಮಹಮದನ ವಿನಯ ಹಾಗೂ ಧರ್ಮಶ್ರದ್ಧೆಗೆ ಮಾರುಹೋದ ಅಬ್ಬಾಸ್ ಮಹಮದನಿಗೆ ಒದಗಿ ಬಂದ ಸಂಕಟ ಹಾಗೂ ಪರಿತಾಪಗಳಿಗೆ ದೇವರಲ್ಲಿ ಪರಿಪರಿಯಾಗಿ ಪ್ರಾರ್ಥನೆ ಸಲ್ಲಿಸಿದ. ಮಹಮದನೂ ದೇವರಿಗೆ ತನ್ನ ಹೀನಸ್ಥಿತಿಯನ್ನು ಮನವರಿಕೆ ಮಾಡುವ ಪ್ರಾರ್ಥನೆಗಳನ್ನು ಸಲ್ಲಿಸಿ ದೇವರು ತನ್ನ ಮೊರೆಯನ್ನಾಲಿಸುವನು ಎಂಬ ನಂಬಿಕೆ ಹೊತ್ತು ಮೆಕ್ಕಾದೆಡೆಗೆ ಪ್ರಯಾಣ ಬೆಳೆಸಿದ. ದಾರಿಯಲ್ಲಿ ಸಿಗುವ ನೆಖ್ಲಾದ ಕಣಿವೆಯ ಬಳಿಯೆ ಇದ್ದ ಗುಡಿಯೊಂದರಲ್ಲಿ ತಂಗಿ, ಮರಳಿ ಮೆಕ್ಕಾ ಪ್ರವೇಶಿಸಿದರೆ ತನಗ್ಯಾವ ಸತ್ಕಾರ ಕಾದಿದೆಯೋ ಎಂದು ಹೆದರಿ ಆ ರಾತ್ರಿ ಅಲ್ಲಿಯೆ ವಿರಮಿಸಿದ. ರಾತ್ರಿ ಮಲಗುವ ಮುನ್ನ ದೇವರಿಗೆ ಪ್ರಾರ್ಥನೆ ಸಲ್ಲಿಸುವಾಗ ಅವನ ಖುರಾನಿನ ಸೂತ್ರ ಪಠಣವನ್ನು ಆಲಿಸಿದ 'ಜಿನ್ನು'ಗಳು (ಭೂತಗಳು) ಉತ್ತೇಜಿತರಾಗಿ ತಮ್ಮ ಬಳಗದವರನ್ನು ಕೂಡಿಕೊಂಡು ಮಹಮದನ ಪ್ರಾರ್ಥನೆಯನ್ನು ಆಲೈಸಿದವು. ಅವೆಲ್ಲ ಇದರಿಂದ ಪ್ರಭಾವಿತರಾಗಿ ಮಹಮದನ ಹಿಂಬಾಲಕರಾಗಿ ಖುರಾನಿನ ಆದೇಶ ಪಾಲಿಸಿದರೆ ಮುಕ್ತಿ ಖಚಿತ ಎಂದು ನಂಬಿ ಅಲ್ಲಿನ ಅವೆಲ್ಲ ನಿರ್ಗಮಿಸಿದವು. ಇದೆ ವಿವರಣೆ ಖುರಾನಿನ ಸುರಾ 66/28-30 ಹಾಗೂ 12/1 ಗಳಲ್ಲಿ ಪ್ರಸ್ತಾಪಿತವಾಗಿದೆ ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ಮರಳಿದ ನಂತರ ಖುರೈಷಿ ದ್ವೇಷಿಗಳಿಂದ ಮೆಕ್ಕಾದಲ್ಲಿ ಕಾದಿರಬಹುದಾದ ವಿಪತ್ತಿಗೆ ಹೆದರಿದ ಮಹಮದ್ ಖುರೈಷಿಗಳಲ್ಲೆ ದಯಾರ್ದವಾಗಿದ್ದ ಅಲ್ ಮಾತಮ್ ಎಂಬ ಮುಖಂಡನೊಬ್ಬನನ್ನು ಸಂಪರ್ಕಿಸಿ ಮರಳಿ ಊರನ್ನ ಹೊಕ್ಕಲು ಅವನ ಸಹಾಯವನ್ನು ಬೇಡಿದ. ಆಸರೆಯ ಭರವಸೆ ಅವನಿಂದ ದೊರಕಿದ ನಂತರ ಮೆಕ್ಕಾದ ಮನೆಗೆ ಹಿಂದಿರುಗಿದ ಮಹಮದನ ಪರಿಸ್ಥಿತಿ ದಿನದಿಂದ ದಿನಕ್ಕೆ ಕೆಡುತ್ತಲೆ ಹೋಯಿತು. ವಿಪರೀತವಾಗಿದ್ದ ಆರ್ಥಿಕ ಹಿನ್ನೆಡೆ ಅನೇಕ ಕಷ್ಟ ಕಾರ್ಪಣ್ಯಗಳಿಗೆ ಮೂಲವಾಯಿತು. ಆದರೆ ಇಂತಹ ಪರಿಸ್ಥಿಯನ್ನು ಎದುರಿಗಿಟ್ಟುಕೊಂಡೆ ಆತ ಸೌದಾ ಎಂಬ ವಿಧವೆಯೊಬ್ಬಳನ್ನು ಮರುವಿವಾಹವಾದ. ಮೂರು ತಿಂಗಳ ಹಿಂದಷ್ಟೆ ಪತ್ನಿ ಖತೀಜಳನ್ನು ಕಳೆದುಕೊಂಡು ವಿಧುರನಾಗಿದ್ದ ಮಹಮದ್ ಈಗ ಹೊಸ ಮದುವೆಯ ಜೊತೆಜೊತೆಗೆ ಗೆಳೆಯ ಅಬು ಬಕರನ ಆರು ವರ್ಷದ ಎಳೆ ಮಗಳು ಆಯೆಶಾಳೊಂದಿಗೆ ತನ್ನ ವಿವಾಹ ನಿಸ್ಚಿತಾರ್ಥವನ್ನೂ ನೆರವೇರಿಸಿಕೊಂಡ!. ಇದಕ್ಕೆ ಇತಿಹಾಸಕಾರರಾದ ಮ್ಯೂರ್ ಹಾಗೂ ಅಲ್ ಮುಬಾರಕಿ ಮುಂತಾದವರು ಮಹಮದನಿಗೆ ಅದಾಗಲೆ ಐವತ್ತುವರ್ಷ ವಯಸ್ಸಾಗಿದ್ದರೂ ಮುಂದಿನ ದಿನಗಳಲ್ಲಿ ತನ್ನ ಮತಪ್ರಚಾರಕ್ಕೆ ಅಬು ಬಕರನ ಪ್ರಬಲ ಬೆಂಬಲ ಅಪೇಕ್ಷಿಸಿ, ಅದಕ್ಕೆ ಪೂರ್ವಭಾವಿಯಾಗಿ ತಮ್ಮಿಬ್ಬರ ನಡುವಿನ ಸ್ನೇಹಕ್ಕೆ ಸಂಬಂಧದ ನಿಕಟತೆಯ ಲೇಪ ಹಚ್ಚಲು ಈ ನಿರ್ಧಾರಕ್ಕೆ ಬಂದಿದ್ದಾನೆ ಎಂದು ಹೇಳುತ್ತಾರೆ. ಕ್ರಿಸ್ತಶಕ 620ರಲ್ಲಿ ಮೆಕ್ಕಾದ ಪವಿತ್ರ ದಿನಗಳ ಜಾತ್ರೆ ಪ್ರಾರಂಭವಾದಾಗ ಅಲ್ಲಿಗೆ ಯಾತ್ರಾರ್ಥಿಗಳಾಗಿ ಬಂದಿದ್ದ ಅನೇಕ ಮದಿನಾ ವಾಸಿಗಳನ್ನು ಮಹಮದ್ ಅನಾಯಾಸವಾಗಿ ಸಂಪರ್ಕಿಸಿದ. ಮದೀನ ವಾಸಿಗಳು ಮಹಮದನ ನೂತನ ಧರ್ಮದ ಬಗ್ಗೆ ಕೇಳಿ ಅದಾಗಲೆ ಅರಿತಿದ್ದರು. ಅವನನ್ನೆ ಈಗ ನೇರವಾಗಿ ಭೇಟಿಯಾಗಿ ಅವನ ಸಂದೇಶಗಳನ್ನು ಕೇಳಿ ಸಂತುಷ್ಟರಾದರೂ ಒಮ್ಮೆಲೆ ಅವರಲ್ಲಿ ಯಾರೂ ಮತಾಂತರವಾಗಲಿಲ್ಲ. ಅಲ್ಲದೆ ಅಷ್ಟು ಸುಲಭವಾಗಿ ಅವರ ಬೆಂಬಲವೂ ಅವನಿಗೇನೂ ಸಿಗಲಿಲ್ಲ. ಆದರೆ ಆತನ ಹಾಗೂ ಆತನ ನೂತನ ಮತದ ಬಗ್ಗೆ ಸದ್ಭಾವನೆ ಬೆಳಿಸಿಕೊಂಡ ಅವರು ಮರಳಿ ಮದೀನಾ ಸೇರಿದಾಗ ಅದು ಅಲ್ಲಿ ಬಾಯಿಪ್ರಚಾರವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಮುಟ್ಟಿತು. ಅತ್ತ ಇಸ್ರೇಲಿನ ಯಹೂದಿಗಳು ರೋಮನ್ ಚಕ್ರಾಧಿಪತ್ಯದ ಅಧೀನಕ್ಕೆ ಒಳಪಟ್ಟು ಧರ್ಮ ದ್ವೇಷದ ಹಿನ್ನೆಲೆಯಲ್ಲಿ ಅವರಿಂದ ನಿರಂತರ ಹಿಂಸಾಚಾರಕ್ಕೆ ಒಳಗಾಗಿ ಪಡಬಾರದ ಪಾಡುಪಟ್ಟು ಅಲ್ಲಿಂದ ಅನಿವಾರ್ಯವಾಗಿ ದೇಶಭ್ರಷ್ಟರಾಗಿ ಪ್ರಪಂಚದಾದ್ಯಂತ ಹರಡಿಹೋದ ಐತಿಹಾಸಿಕತೆಗೆ ಈಗ ಹೊಸತಿರುವು ಸಿಗಲಾರಂಭಿಸಿತು. ಹೀಗೆ ನೆಲೆ ಕಳೆದುಕೊಂಡ ಯಹೂದಿಗಳ ಗುಂಪುಗಳು ಅರೇಬಿಯವನ್ನೂ ಪ್ರವೇಶಿಸಿ ಮದೀನ ಸುತ್ತಮುತ್ತಲು ನೆಲೆಯೂರಿ ಕೋಟೆ- ಕೊತ್ತಲು ಕಟ್ಟಿಕೊಂಡು ಜೀವನವನ್ನಾರಂಭಿಸಿದರು. ಹೀಗೆ ವಲಸೆ ಬಂದಿದ್ದ ಪ್ರಮುಖ ಯಹೂದಿ ಬುಡಕಟ್ಟುಗಳೆಂದರೆ ಅಲ್ ನದೆಶ್, ಬೆನ್ ಕುರೈಜಾ ಹಾಗೂ ಬೆನ್ ಕೆನುಕಾ. ಇವರ ವಲಸೆಯೆಲ್ಲ ಕ್ರಿಸ್ತಶಕಾರಂಭ 70ರಲ್ಲಿಯೆ ಆರಂಭವಾಗಿತ್ತು ಎನ್ನುವುದು ಇತಿಹಾಸಗಾರ ಮಾರ್ಗೊಲಿಯತ್ತನ ಅಭಿಪ್ರಾಯ. (ಇನ್ನೂ ಇದೆ....)

Monday, October 1, 2012

ವಲಿ.... (ಭಾಗ-6)


ಈ ರೀತಿ ಮತ ಪರಿವರ್ತಿತವಾದವರು ಮೆಕ್ಕಾ ಬಿಟ್ಟು ಮರಳಿ ಮತ್ತೆ ಅಬಿಸೀನಿಯಕ್ಕೆ ವಲಸೆಹೋದರು. ಹೀಗಾದರೂ ಸಹ ಮಹಮದನಿಗೆ ಖುರೈಷಿಗಳ ಕಾಟ ತಪ್ಪಲಿಲ್ಲ. ದೊಡ್ಡಪ್ಪ ಅಬು ತಾಲೀಬನ ಸುರಕ್ಷೆ ಇದ್ದ ಕಾರಣದಿಂದ ಅದು ಹೇಗೊ ಅವನ ರಕ್ಷಣೆ ಚ್ಯುತಿಯಿಲ್ಲದಂತೆ ಸಾಗುತ್ತಿತ್ತು. ಇತ್ತ ಅವನ ಈ ರಕ್ಷಣಾ ಅಭಯದ ವಿರುದ್ಧವಾಗಿ ಅಬು ತಾಲೀಬನಿಗೆ ಖುರೈಷಿಗಳು ತಾಳಲಾರದಷ್ಟು ಒತ್ತಡಗಳನ್ನು ತರಲಾರಂಭಿಸಿದರು. ವಯೋವೃದ್ಧನಾಗಿದ್ದ ಅಬು ತಾಲಿಬ್ ನಿಜಕ್ಕೂ ಈಗ ಸಮಾಜದ ಬಾಂಧವರನ್ನು ಎದುರು ಹಾಕಿಕೊಳ್ಳಲಾಗದೆ ಹಾಗೂ ತಮ್ಮನ ಮಗನ ಮೇಲಿನ ಮಮತೆ ಬಿಡಲಾಗದೆ ಅಡ ಕತ್ತರಿಯಲ್ಲಿ ಸಿಕ್ಕು ಹಾಕಿಕೊಂಡಿದ್ದ. ತನ್ನ ಆಶ್ರಯದಲ್ಲಿದ್ದ ಮಹಮದನ ಕಾರಣಕ್ಕೆ ಅವನು ತನ್ನ ಸಮಾಜವನ್ನೆ ಎದುರು ಹಾಕಿಕೊಳ್ಳುವ ಪರಿಸ್ಥಿತಿ ಉದ್ಭವಿಸಿತ್ತು. ಖುರೈಷಿಗಳು ಮಹಮದನನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಅವನ ಮೇಲೆ ಅಪಾರ ಒತ್ತಡ ತಂದಾಗ ಅದನ್ನು ತಾಳಲಾರದೆ ಮಹಮದನಿಗೆ ತಾನಿನ್ನು ಅವನ ರಕ್ಷಣೆಯ ಹೊಣೆ ಹೊರಲಾರೆನೆಂದು ಹೇಳಿ, ಅವನೆ ಸ್ವ-ರಕ್ಷಣೆಗೆ ಕಾಳಜಿ ವಹಿಸಿಕೊಳ್ಳುವುದು ಸೂಕ್ತ ಎಂಬ ಸೂಚನೆ ನೀಡಿದನು. ಅದನ್ನು ಕೇಳಿದ್ದೆ ತಡ ಬೆದರಿದ ಮಹಮದ್ ಅಪ್ರತಿಭನಾಗಿ ಕಣ್ಣೀರುಗೆರೆದನು. ಈ ಕಂಬನಿಯನ್ನು ಕಂಡು ಕರುಣಾಮಯಿಯಾದ ಅಬು ತಾಲೀಬನ ಅಂತಕರಣ ತುಂಬಿಬಂದು ಮರಳಿ ಅವನ ರಕ್ಷಣೆಯ ಹೊಣೆ ಹೊರಲು ಆತ ಕಟಿಬದ್ಧನಾದ. ಈ ಸಂಭಾಷಣೆ ಜರುಗಿದ ಸಂಜೆ ಅವನ ಮೊದಲ ಮಾತುಗಳನ್ನು ಕೇಳಿ ನೊಂದಿದ್ದ ಮಹಮದ್ ವ್ಯಾಕುಲಗೊಂಡು ಮನೆಯಿಂದ ಹೊರಹೋಗಿದ್ದವನು ಲುಪ್ತ ಸಮಯಕ್ಕೆ ಮರಳಿ ಬಾರದಿರುವುದನ್ನು ಕಂಡು ಖುರೈಶಿಗಳಿಂದ ಆತನ ಪ್ರಾಣಕ್ಕೆ ಕುತ್ತು ಒದಗಿ ಬಂದಿರಬಹುದು ಎಂದು ಅಬು ತಾಲಿಬ್ ಗಾಬರಿಗೊಂಡ. ಅದೆ ಸಂಶಯದಲ್ಲಿ ಆಯುಧಪಾಣಿಯಾಗಿ ತನ್ನವರೊಂದಿಗೆ ಮಹಮದನನ್ನು ಹುಡುಕುತ್ತಾ ಹೊರಟಾಗ ಬೀದಿಯ ಕೊನೆಯಲ್ಲಿ ಅವನಿಗೆ ಮಹಮದ್ ಎದುರಾದ. ಕೂಡಲೆ ಅಲ್ಲಿಂದಲೆ ಅವನನ್ನು ಕರೆದುಕೊಂಡು ಕಾಬಾದತ್ತ ಸಾಗಿದ ಅಬು ತಾಲಿಬ್ ಅಲ್ಲಿ ನೆರೆದಿದ್ದ ಖುರೈಷಿಗಳನ್ನು ಉದ್ದೇಶಿಸಿ "ನೋಡಿ ಇಂದು ನಿಮ್ಮೆಲ್ಲರಿಂದ ಮಹಮದನಿಗೆ ಹಾನಿಯಾಗಿದ್ದಿರಬಹುದೆಂದು ಊಹಿಸಿದ್ದೆ. ಹಾಗೇನಾದರೂ ಆಗಿದ್ದೆ ಹೌದಾಗಿದ್ದಿದ್ದಲ್ಲಿ ನಿಮ್ಮಲ್ಲಿ ಒಬ್ಬರೂ ಇಲ್ಲಿ ಉಸಿರಿನೊಂದಿಗೆ ಉಳಿಯುತ್ತಿರಲಿಲ್ಲ ಅನ್ನೋದನ್ನ ನೆನಪಿನಲ್ಲಿಡಿ! ಇದು ಇಂದಿಗಷ್ಟೆ ಅಲ್ಲ ಎಂದೆಂದಿಗೂ ಸತ್ಯ !!" ಎಂದು ಆವೇಶದಿಂದ ನುಡಿದ. ಅವನ ಈ ಎಚ್ಚರಿಕೆಯ ನುಡಿಗೆ ಬೆರಗಾದ ಖುರೈಷಿಗಳು ತಮ್ಮ ಸಿಟ್ಟು-ಸೆಡವು, ಸೊಕ್ಕನ್ನೆಲ್ಲ ಆ ಕ್ಷಣ ಬಲು ಕಷ್ಟದಿಂದ ತಡೆ ಹಿಡಿದುಕೊಂಡರು. ಇತಿಹಾಸದ ಪುಟಗಳಲ್ಲಿ ಅವನ ಮತವನ್ನೊಪ್ಪದವರಿಂದ ಮಹಮದನ ಮೇಲೆ ನಿಂದನೆ, ಭರ್ತ್ಸನೆ ಮುಂತಾದವುಗಳೊಂದಿಗೆ ದೈಹಿಕ ಹಲ್ಲೆ ನಡೆದ ಬಗ್ಗೆ ನಮೂದಾಗಿದ್ದರೂ ಅದು ಹಿಂಸೆಯ ಪರಿಧಿ ದಾಟಿದ ಬಗ್ಗೆ ಸೂಚನೆ ಎಲ್ಲೂ ಸಿಗುವುದಿಲ್ಲ. ಹೆಚ್ಚೆಂದರೆ ಹೊಲಸು ಪದಾರ್ಥಗಳನ್ನು ಅವನ ಮೇಲೆ ಎಸೆಯುವುದರ ಮೂಲಕ ಅವರ ಅಸಹಿಷ್ಣುತೆ ಪ್ರಕಟವಾಗುತ್ತಿತ್ತು ಅಷ್ಟೆ. ಕ್ರಿಸ್ತಶಕ 615ರಲ್ಲಿ ಮಹಮದ್ ತನ್ನ ಮತ ಭೋದನೆಯನ್ನು ಆರಂಭಿಸಿದಾಗ ಮೊದಲು ಎದ್ಸುರಾಗಿದ್ದ ಅಡ್ಡಿ ಆತಂಕಗಳೆಲ್ಲ ಕ್ರಮೇಣ ಇನ್ನಿಲ್ಲವಾಗಲು ಅವನ ಮತಕ್ಕೆ ಮಾರುಹೋದ ಇಬ್ಬರು ಪ್ರಮುಖವಾಗಿ ಕಾರಣವಾದರು. ಅವರೆ ಹಮ್ಜಾ ಮತ್ತು ಓಮರ್. ಈ ಹಮ್ಜಾ ಮಹಮದನ ಅಜ್ಜ ಅಬ್ದುಲ್ ಮುತಾಲಿಬ್ ತನ್ನ ಎಪ್ಪತ್ತನೆ ವಯಸ್ಸಿನಲ್ಲಿ ವಿವಾಹವಾಗಿ ಪಡೆದ ಮಗನಾಗಿದ್ದ. ಏಕಕಾಲದಲ್ಲಿ ಆತ ಮಹಮದನಿಗೆ ಮಲ ಸಹೋದರ (ತಾಯಿಯ ತಂಗಿಯ ಮಗ) ಹಾಗೂ ಚಿಕ್ಕಪ್ಪ (ತಂದೆಯ ದೊಡ್ಡಪ್ಪನ ಮಗ) ಏಕಕಾಲದಲ್ಲಿ ಎರಡೂ ಆಗುತ್ತಿದ್ದ! ಒಮ್ಮೆ ಅಸ್ ಸದಾಫ್ ಎಂಬ ಎತ್ತರದ ಸ್ಥಳದಲ್ಲಿ ಮಹಮದ್ ಕುಳಿತಿದ್ದಾಗ ಅಬು ಜಲಾಲ್ ಎಂಬ ಖುರೈಶಿಯೊಬ್ಬ ಅವನನ್ನು ಕಟುಮಾತುಗಳಿಂದ ನಿಂದಿಸಲಾರಂಭಿಸಿದ, ಮಹಮದ್ ಮಾತ್ರ ಅದನ್ನು ಕೇಳಿದರೂ ಕೇಳಿಸಿಕೊಳ್ಳದಂತೆ ಕಿವುಡನಂತೆ ನಿರ್ಲಕ್ಷಿಸಿ ಕೂತಿದ್ದ. ಆದರೆ ಅದನ್ನು ಗಮನಿಸಿದ ಒಬ್ಬ ಗುಲಾಮ ಸ್ತ್ರೀ ಮನೆಗೆ ಮರಳುವಾಗ ದಾರಿಯಾಲ್ಲಿ ಸಿಕ್ಕ ಹಮ್ಜಾನಿಗೆ ಈ ಘಟನೆಯನ್ನ ಹೇಳಿ ಪರಿತಾಪ ಪಟ್ಟಳು. ಮೂಲತಃ ಹಮ್ಜಾ ಒಳ್ಳೆಯ ಬಿಲ್ಲುಗಾರನಾಗಿದ್ದ. ಅಲ್ಲದೆ ಆಗಷ್ಟೆ ಆತ ಬೇಟೆಗೆ ಹೋಗಿದ್ದವ ಅಲ್ಲಿಂದ ಮನೆಗೆ ಮರಳಿಹೋಗುತ್ತಿದ್ದ. ಈ ಸಂಗತಿ ಕೇಳಿ ಕ್ಷುದ್ರನಾದ ಆತ ಕೂಡಲೆ ಇದ್ದ ಸ್ಥಿತಿಯಲ್ಲೆ ಕಾಬಾ ಬಳಿ ತೆರಳಿ ಅಲ್ಲಿ ಇತರ ಖುರೈಷಿಗಳೊಂದಿಗೆ ಹರಟೆ ನಿರತನಾಗಿದ್ದ ಅಬು ಜಹಾಲ್'ನನ್ನು ಕಂಡವನೆ ವರಸೆಯಲ್ಲಿ ತನ್ನ ಮಗನೂ ಮಲ ಸಹೋದರನು ಆದ ಮಹಮದನಿಗೆ ಆತ ಮಾಡಿದ ಅಪಮಾನವನ್ನು ನೆನೆಸಿಕೊಂಡು ಕೆಂಡಾಮಂಡಲನಾಗಿ ಅಲ್ಲಿಯೆ ಬಿಲ್ಲಿಗೆ ಹದೆಯೇರಿಸಿ ಬಾಣ ಹೂಡಿ ಆತನನ್ನು ಗಾಯಗೊಳಿಸಿ "ನೋಡು ನಾನೀಗ ಮಹಮದನ ಧರ್ಮವನ್ನು ಪಾಲಿಸುತ್ತೇನೆ! ನಿನಗೆ ಸಾಧ್ಯವಿದ್ದರೆ ತಡೆದು ನೋಡು ನೋಡೋಣ!" ಎಂದು ಬಹಿರಂಗ ಪಂಥಾಹ್ವಾನ ನೀಡಿ ಸೆಡ್ಡುಹೊಡೆದು ನಿಂತ. ಹೀಗೆ ಆವೇಶದಲ್ಲಿ ಆತ ಅವನಿಗೆ ಗೊತ್ತಿಲ್ಲದೆ ಮಾನಸಿಕವಾಗಿ ಆತ ಮತಾಂತರಿತವಾಗಿದ್ದ ! ಇದು ಹಮ್ಜಾನ ಕಥೆಯಾದರೆ ಇನ್ನೊಬ್ಬ ಓಮರನ ಕಥೆ ತುಸು ವಿಭಿನ್ನವಾಗಿತ್ತು. ಒಮರ್ ಒಬ್ಬ ಸದೃಢ ಖುರೈಷಿ ಯುವಕನಾಗಿದ್ದ. ಶೀಘ್ರಕೋಪಿ, ಮುಂಗೋಪಿ ಎರಡೂ ಆಗಿದ್ದ ಅವನದ್ದು ವಿಪರೀತ ದುಡುಕಿನ ಸ್ವಭಾವವಾಗಿತ್ತು. ಆವೇಗ ಪರನಾಗಿದ್ದ ಆತ ಇತರ ಖುರೈಶಿಗಳಂತೆ ಮೊದಲಿಗೆ ಮಹಮದನ ಕಟ್ಟಾ ವಿರೋಧಿಯಾಗಿದ್ದು ಅವನನ್ನು ಕಂಡಲ್ಲಿ ನಿಂದಿಸುತ್ತಾ, ಅವನ ಅನುಯಾಯಿಗಳನ್ನು ಸಾಧ್ಯವಾದಷ್ಟು ಹಿಂಸಿಸುತ್ತಿದ್ದ. ಅಂತವನ ಸ್ವಂತ ಸಹೋದರಿ ಫಾತಿಮಾ ಹಾಗು ಆಕೆಯ ಪತಿ ಇಸ್ಲಾಮಿಗೆ ಗೌಪ್ಯವಾಗಿ ಮತಾಂತರಿತವಾಗಿದ್ದರು. ಈ ವಿಷಯ ಇನ್ನೂ ಓಮರನ ಕಿವಿಯನ್ನು ಇನ್ನೂ ಮುಟ್ಟಿರಲಿಲ್ಲ. ಹೀಗೆ ಒಮ್ಮೆ ನವ ಮತಾಂತರಿತವಾದವನೊಬ್ಬನನ್ನು ಆತ ಪೀಡಿಸುತ್ತಿರುವಾಗ ಅದನ್ನು ತಾಳಲಾರದೆ ನರಳಿದ ಆ ಮುಸ್ಲೀಂ ರೋಷದಿಂದ ಮಾತನಾಡುವಾಗ ಅವನ ಸಹೋದರಿಯ ಮತಾಂತರದ ಬಗ್ಗೆ ಸುಳಿವು ನೀಡಿದ ! ಈ ಮಾತನ್ನು ಕೇಳಿ ಓಮರ್ ಕೆರಳಿ ಕೆಂಡವಾದ. ಅವನ ಬೆನ್ನ ಹಿಂದೆಯೆ ನಡೆದ ಈ ಮಹಮದನ ಕಿತಾಪತಿ ಅವನ ಸಿಟ್ಟಿಗೆ ತುಪ್ಪ ಸುರಿಯಿತು. ಇದರಿಂದ ನೊಂದು ತೀವ್ರ ಆಕ್ರೋಶಿತನಾದ ಒಮರ್ ಆ ಕೂಡಲೆ ಸೋದರಿಯ ಮನೆಗೆ ಧಾವಿಸಿದ. ಅಲ್ಲಿ ಅವನಿಗೆ ಕಂಡದ್ದು ಕುಟುಂಬದ ಗುಲಾಮನೊಬ್ಬ ಒಂದು ತುಂಡು ಕಾಗದವನ್ನು ಹಿಡಿದು ಓದುತ್ತಿರುವ ದೃಶ್ಯ. ಓಮರನ ಉರಿಮುಖ ಕಂಡವನೆ ಅವನು ಒಳಹೊಕ್ಕು ಅದೆಲ್ಲೊ ಅವಿತುಕೊಂಡ. ಆದರೆ ಆ ಕೂಡಲೆ ಅವನ ನಡೆಯ ಹಿನ್ನೆಲೆ ಓಮರನಿಗೆ ಅರಿವಾಗಿತ್ತು. ಆ ಗುಲಾಮ ಮಹಮದನ ಉಪದೇಶದ ಸಾರವನ್ನು ಗುಟ್ಟಾಗಿ ಓದಿ ಪಠಿಸುತ್ತಿದ್ದ. ಒಳಬಂದ ಬಳಿಕ ಎದುರಿಗೆ ಕಂಡ ಫಾತಿಮಾಳ ಪತಿಯನ್ನು ಈ ಬಗ್ಗೆ ಪ್ರಶ್ನಿಸಿ ಅವನ ಮೇಲೆ ಓಮರ್ ಹಲ್ಲೆ ಎಸಗುವಾಗ ನಡುವೆ ಅಡ್ಡಿ ಬಂದ ಫಾತಿಮಾಳೂ ಅವನಿಂದ ಪೆಟ್ಟು ತಿನ್ನಬೇಕಾಯಿತು. ಮುಖದ ಮೇಲೆ ಬಲವಾಗಿ ಬಿದ್ದ ಪೆಟ್ಟಿನಿಂದ ಆಕೆಗೆ ರಕ್ತಸ್ರಾವವಾದಾಗ ಸಂಯಮ ಕಳೆದುಕೊಂಡ ಆಕೆ ಸಹೋದರನ ಮೇಲೆಯೆ ಎಗರಿಬಿದ್ದಳು. "ಹೌದು! ನಾವು ಮತಾಂತರಗೊಂಡಿದ್ದೀವಿ. ನಾವು ದೇವರು ಹಾಗೂ ಅವನ ಪ್ರವಾದಿಯನ್ನ ನಂಬುತ್ತೇವೆ ನೀನು ಅದೇನೆ ಬೇಕಿದ್ದರೂ ಮಾಡಿಕೊಳ್ಳಬಹುದು" ಎಂದು ಚೀರಿಹೇಳಿ ಸ್ಮೃತಿ ತಪ್ಪಿಬಿದ್ದಳು. ಅವಳ ರಕ್ತಸಿಕ್ತ ಮುಖವನ್ನು ಕಂಡಾಗ ಓಮರ್ ಮೆತ್ತಗಾದ. ಅವನ ಕ್ಷಣಿಕ ಆವೇಶವೆಲ್ಲ ಜರ್ರನೆ ಇಳಿದು ಹೋಯಿತು. ಅವಳ ಕೈಯಲ್ಲಿಯೆ ಭದ್ರವಾಗಿದ್ದ ಕಾಗದದ ತುಣುಕಿನಲ್ಲಿದ್ದ ಉಪದೇಶ ಸಾರವನ್ನು ತಾನೂ ಸಹ ಓದಿ ಪ್ರಭಾವಿತನಾದ. ಆ ಕೂಡಲೆ ಮಹಮದನನ್ನು ಕಾಣಲು ಆತ ಇಚ್ಚೆಪಟ್ಟು ಆತ ಉಳಿದಿದ್ದ ಅಲ್ ಅಕ್ರಮನ ಮನೆಗೆ ಸಾಗಿದ. ತನ್ನ ಮೇಲೆ ವಿಶ್ವಾಸವಿರಿಸಿ ಬಂದ ಓಮರನನ್ನು ಮಹಮದ್ ಬಹಳ ಆದರದಿಂದಲೆ ಇಸ್ಲಾಮಿಗೆ ಬರಮಾಡಿಕೊಂಡ. ಈ ಇಬ್ಬರು ಪ್ರಭಾವಿಗಳ ಮತಾಂತರದಿಂದ ಮಹಮದನ ಆಶೋತ್ತರಗಳಿಗೆ ಮಹತ್ತರವಾದ ಬಲ ಬಂದೊದಗಿತು ಅನ್ನುತ್ತಾನೆ ಇತಿಹಾಸಕಾರ ಮ್ಯೂರ್. ಇಸ್ಲಾಮಿನ ಉನ್ನತಿಗಾಗಿ ಮುಂದೆ ಹೂಡಿದ ಅನೇಕ ಕಾಳಗಗಳಲ್ಲಿ ಹಮ್ಜಾ ಒಬ್ಬ ಅಪ್ರತಿಮ ವೀರನಾಗಿ ಕಂಗೊಳಿಸಿದರೆ ಒಮರ್ ಅಬುಬಕರನ ನಂತರ ಖಲೀಫನಾಗಿ ಮೆರೆದ. ಹುಂಬತನದ ಅತಿರೇಕಿಗಳ ಈ ಮತಾಂತರ ಮಹಮದನ ಮನೋಬಲ ವಿಪರೀತ ಹೆಚ್ಚಿತು. ಇವರಿಬ್ಬರಿಂದ ಮಹಮದನಿಗೆ ತನ್ನ ವಿಚಾರ ಮಂಡನೆಗೆ ವಿಚಿತ್ರ ಧೈರ್ಯ ಪ್ರಾಪ್ತಿಯಾಗಿತ್ತು. ಈ ಆನೆಬಲವನ್ನು ಹಿಂದಿಟ್ಟುಕೊಂಡೆ ಆತ ಇದೂವರೆಗೂ ಗುಪ್ತವಾಗಿಯಷ್ಟೆ ಮಾಡುತ್ತಿದ್ದ ತನ್ನ ಮತಪ್ರಚಾರವನ್ನು ಮರಳಿ ಬಹಿರಂಗವಾಗಿ ಕಾಬಾದ 'ಹುಬಾಬ್' ದೇವರ ಗುಡಿಯೆದುರಿಗೆ ಮಾಡಲು ಉಪಕ್ರಮಿಸಿದ. ಅಲ್ಲಿಯೆ ಆತನ ಪಠಣ- ಪ್ರವಚನ ಮತ್ತಿತರ ಪಾಠ ಪ್ರವಚನಗಳು ಆರಂಭವಾದವು. ಇದರಿಂದ ಇರುಸು ಮುರುಸಿಗೆ ಒಳಗಾದ ಖುರೈಷಿಗಳು ತಮ್ಮವರನ್ನೆಲ್ಲ ಮತ್ತೆ ಸಂಘಟಿಸಿ ಇದನ್ನು ವಿರೋಧಿಸಲು ಆರಂಭಿಸಿದರು. ಅದರ ಒಂದು ನಿರ್ಬಂಧಕ ಕ್ರಮವಾಗಿ ಅವರೆಲ್ಲರೂ ಕೂಡಿ ಮಹಮದನ ಕುಟುಂಬವಾಗಿದ್ದ 'ಹಶೀಮ್' ಉಪ ಬುಡಕಟ್ಟಿಗೆ ಸಾಮಾಜಿಕ ಬಹಿಷ್ಕಾರ ಹೇರಿದರು.ಅವರ ಕುಟುಂಬದೊಂದಿಗೆ ಸಮಾಜದ ಇತರರ ವೈವಾಹಿಕ ಸಂಬಂಧಗಳು ಕೊನೆಯಾದವು. ಅವರೊಂದಿಗೆ ವ್ಯಾಪಾರ- ವ್ಯವಹಾರಗಳಿಗೂ ತಿಲಾಂಜಲಿ ಕೊಡಲಾಯಿತು, ಎಲ್ಲಾ ಸಾಮಾಜಿಕ ವ್ಯವಹಾರಗಳಿಂದಲೂ ಅವರನ್ನು ದೂರ ತಳ್ಳಲಾಯಿತು, ಈ ಬಹಿಷ್ಕಾರದಿಂದ ತತ್ತರಿಸಿದ ಹಶೀಮರು ಮೆಕ್ಕಾ ತೊರೆದು ಸುತ್ತಲಿನ ಬೆಟ್ಟಗುಡ್ಡಗಳಲ್ಲಿ ಆಶ್ರಯ ಅರಸುವಂತಾಯಿತು. ಮಹಮದನ ಮೇಲಿದ್ದ ಅಭಿಮಾನಧ ಕಾರಣದಿಂದ ಆ ಕಷ್ಟದ ದಿನಗಳನ್ನು ಮಹಮದನ ಕುಟುಂಬದವರೆಲ್ಲ ಐಕ್ಯತೆಯಿಂದಲೆ ಹಲ್ಲುಕಚ್ಚಿ ಸಹಿಸಿ ಕಳೆದರು. ಆದರೆ ಅವರು ಜೀವನೋಪಾಯಕ್ಕೆ ಕಷ್ಟ ಬೀಳಬೇಕಾಯಿತು. ಹಸಿವಿನಿಂದ ಅವರು ನರಳುವುದನ್ನು ನೋಡಲಾಗದೆ ಕೆಲವು ಕರುಣಾಮಯಿಗಳಾದ ಖುರೈಷಿಗಳು ಗುಟ್ಟಾಗಿ ಹಿರಿಯರ ಕಣ್ಣುತಪ್ಪಿಸಿ ಅವರಿಗೆ ಆಹಾರ ಹಾಗೂ ಇನ್ನಿತರೆ ಜೀವನಾವಶ್ಯಕ ವಸ್ತುಗಳನ್ನ ಪೂರೈಸುವುದೂ ಆ ಕಾಲದಲ್ಲಿ ಅಲ್ಲಲ್ಲಿ ನಡೆಯಿತು. ವರ್ಷಕ್ಕೊಮ್ಮೆ ನಡೆಯುವ ಕಾಬಾ ಉತ್ಸವಗಳಲ್ಲಿ ಮಾತ್ರ ಅವರು ಮೆಕ್ಕಾ ಪ್ರವೇಶಿಸಿ ತಮ್ಮತಮ್ಮ ಮತಪ್ರಚಾರ ಕೈಗೊಳ್ಳಲು ಅಡ್ಡಿಯಿರಲಿಲ್ಲ. ಅಂತಹ ದಿನಗಳನ್ನು ಶಾಂತಿಯ ದಿನಗಳೆಂದು ಘೋಷಿಸಿದ್ದರಿಂದ ಮಹಮದ್ ನಿರಾತಂಕವಾಗಿ ತನ್ನ ಮತವನ್ನು ಮನಬಂದಂತೆ ಆ ಪವಿತ್ರ ಯಾತ್ರಾಕ್ಷೇತ್ರದಲ್ಲಿ ಭೋದಿಸಲು ಯಾರೂ ತಕರಾರು ತೆಗೆಯುತ್ತಿರಲಿಲ್ಲ. ಆದರೆ ಆತನ ಈ ಮತಪ್ರಚಾರದಿಂದ ಖುರೈಷಿಗಳೇನೂ ಪ್ರಭಾವಿತರಾಗಲಿಲ್ಲ. ಅವರ ನಾಯಕನಾದ ಅಬು ಲಹಾಬನಂತೂ ಬಹಿರಂಗವಾಗಿಯೆ ಮಹಮದನನ್ನು ಹೀಯ್ಯಾಳಿಸಲು ಹಿಂಜರೆಯುತ್ತಿರಲಿಲ್ಲ. 'ಅವನನ್ನು ನಂಬಬೇಡಿ ಅವನೊಬ್ಬ ವಂಚಕ ಧರ್ಮಭ್ರಷ್ಟ!' ಎಂದು ಕೂಗಿ ಮಹಮದನಿಂದ ಉಳಿದೆಲ್ಲರನ್ನೂ ಆತ ದೂರವಿರಿಸುವುದರಲ್ಲಿ ಸಫಲನಾಗಿದ್ದ. ಹೀಗಾಗಿ ಮಹಮದ್ ನೊಂದು ಸಂಕಟ ಪಡುವಂತಾಯಿತು. ಇದೆ ಸಮಯದಲ್ಲಿ ಮಹಮದನಿಗೆ ಕಾಬಾಕ್ಕೆ ತೀರ್ಥಯಾತ್ರೆಗೆ ಬಂದಿದ್ದ ಯಹೂದಿಗಳ ಸಂಪರ್ಕ ಏರ್ಪಟ್ಟು ಅವರ ವಿಚಾರಧಾರೆಗಳಿಂದ ಆತ ಬಹಳ ಪ್ರಭಾವಿತನಾಗುವಂತಾಯಿತು. ಇದು ಆ ಕಾಲದಲ್ಲಿ ಆತನಿಗೆ ದೊರೆತ ದೈವವಾಣಿಗಳಲ್ಲಿ ಅಡಗಿದ್ದ ಯಹೂದಿ ವಿಚಾರಧಾರೆಗಳಿಂದ ಸ್ಪಷ್ಟವಾಗುತ್ತದೆ ಎನ್ನುತ್ತಾನೆ ಇತಿಹಾಸಕಾರ ಮ್ಯೂರ್. ದೇವರ ಪುನರುತ್ಥಾನ ಮುಂತಾದ ಉದಾಹರಣೆಗಳನ್ನವನು ಕೊಡುತ್ತಾನೆ. ಇವೆಲ್ಲ ಸೇರಿ ಸುಮಾರು ಇಪ್ಪತ್ತು ಸುರಾಗಳು ಆ ಕಾಲದಲ್ಲಿ ಹೊರಬಂದವು. ಈ ಸುರಾಗಳಲ್ಲಿ ಮಹಮದ್ ದೇವರು ವಿಶ್ವವನ್ನು ಕೇವಲ ಆಟವನ್ನಾಗಿ ಸೃಷ್ಟಿಸದೆ ಒಂದು ನಿರ್ದಿಷ್ಟ ಗುರಿ, ಧ್ಯೇಯ ಹಾಗೂ ಉದ್ದೇಶಗಳನ್ನೆ ಇಟ್ಟುಕೊಂಡು ಸೃಷ್ಟಿಸಿದ ಎಂದು ಆತ ಸಾಧಿಸಿದ. ಇವನ್ನು ಸುರಾ 72/28ರಲ್ಲಿ ಸ್ಪಷ್ಟವಾಗಿ ಕಾಣಬಹುದು. ಯಹೂದಿಗಳ ಪ್ರವಾದಿ ಮೋಸೆಸ್'ನಿಗೆ (ಇಸ್ಲಾಮಿನಲ್ಲಿ ಮೂಸಾ-ಎ-ಅಸಲ್ಲಂ) ತಾಲ್'ಮೇಡ್'ನಲ್ಲಿ ದೇವರು ಕರುಣಿಸಿದ ದೈವವಾಣಿ ಹಾಗೂ ವಿಚಾರಧಾರೆಗಳೂ ಹೀಗಾಗಿ ಖುರಾನಿನ ಸುರಾಗಳಲ್ಲಿ ಕಾಣುತ್ತವೆ. ಮಹಮದ್ ಅವನ್ನು ಉದ್ದರಿಸುವಾಗ ತಾನು ಸಾರುತ್ತಿರುವ ಈ ವಿಚಾರಧಾರೆ ಈಗಾಗಲೆ ಇಂತಹ ಧರ್ಮಗ್ರಂಥಗಳಲ್ಲಿ ಮೂಡಿಬಂದಿದೆ ಎಂದು ಅವನ್ನು ಉದಾಹರಿಸಿ ಹೇಳುತ್ತಿದ್ದ. ಹಾಗೆ ಹಿಂದೆ ಬಂದ ಧರ್ಮಸಾರಗಳನ್ನೆ ಪುನಃ ಹೇಳಿ ಎಚ್ಚರಿಸಲು ತಾನು ಹುಟ್ಟಿ ಬಂದಿರುವುದಾಗಿಯೂ, ಅವುಗಳನ್ನೆಲ್ಲ ಅರೇಬಿಕ್ ಭಾಷೆಯಲ್ಲಿ ಪ್ರಚುರ ಪಡಿಸುವುದಷ್ಟೆ ತನ್ನ ಕರ್ತವ್ಯ ಎಂದು 4/160 ಹಾಗೂ 28/43ರಲ್ಲಿ ಘಂಟಾಘೋಷವಾಗಿ ಸಾರಿದ. ಇದರೊಂದಿಗೆ 2/256ರಲ್ಲಿ 'ಧರ್ಮದ ವಿಷಯಗಳಲ್ಲಿ ಯಾವುದೆ ಬಲಾತ್ಕಾರಗಳಿಲ್ಲ!' ಎಂದೂ ಸಾರಿದ. ಆದರೆ ಕ್ರಮೇಣ ಇಸ್ಲಾಂ ಪ್ರಬಲವಾಗುತ್ತಾ ಹೋದಂತೆ ಈ ಮಾತುಗಳಿಗೆ ಸ್ವತಃ ಮಹಮದನೆ ಕವಡೆಯ ಕಿಮ್ಮತ್ತನ್ನೂ ಕೊಡಲಿಲ್ಲ! ಆ ಬಗ್ಗೆ ಮುಂದಿನ ಅಧ್ಯಾಯಗಳಲ್ಲಿ ವಿವರಣೆಯಿದೆ. ಹಾಶಿಮ್ ಉಪ ಬುಡಕಟ್ಟಿನವರ ಮೇಲೆ ಹೇರಿದ್ದ ಬಹಿಷ್ಕಾರಕ್ಕೆ ಸ್ವತಃ ಖುರೈಷಿಗಳಲ್ಲೆ ಒಮ್ಮತವಿರಲಿಲ್ಲ. ಹೀಗಾಗಿ ಹಾಶೀಮರಿಗೆ ಅವರಲ್ಲೆ ಕೆಲವರಿಂದ ಗುಪ್ತವಾಗಿ ಸಹಕಾರಗಳು ಸಿಕ್ಕವು. ಅಷ್ಟರಲ್ಲಿ ಖುರೈಶಿಗಳಲ್ಲಿ ಒಬ್ಬ ನಾಯಕನೆನೆಸಿಕೊಂಡಿದ್ದ ಮಹಮದನ ದೊಡ್ಡಪ್ಪ ಅಬು ತಾಲಿಬ್ ಅವರೆಲ್ಲರೂ ಬಹಿಷ್ಕಾರದಿಂದ ಪಡುತ್ತಿರುವ ಬವಣೆಗಳನ್ನು ನೋಡಿ ಸಂತಾಪಗೊಂಡು ಒಂದು ದಿನ ತನ್ನ ಕೆಲವು ಸಂಗಡಿಗರೊಡನೆ ಕಾಬಾದತ್ತ ಹೆಜ್ಜೆಹಾಕಿದ. ಸಹತಾಪದಿಂದ ಕೂಡಿದ ಹೃದಯ ಹೊಂದಿದ್ದ ಅಬು ತಾಲಿಬ್ ಅವರು ಬರೆದಿರಿಸಿದ್ದ ಬಹಿಷ್ಕಾರ ಸನ್ನದನ್ನು ಪ್ರಸ್ತಾವಿಸುತ್ತಾ ಅಲ್ಲಿ ನೆರೆದಿದ್ದ ಇತರ ಖುರೈಶಿಗಳನ್ನ ಉದ್ದೇಶಿಸಿ "ನೀವು ಬರೆದು ದಾಖಲಿಸಿರುವ ಪತ್ರ ಆಗಲೆ ಗೆದ್ದಲು ತಿಂದು ಲಡ್ಡಾಗಿ ಹೋಗಿದೆ ! ಅದರಿಂದ ಇನ್ನು ಮೂರುಕಾಸಿನ ಉಪಯೋಗವಿಲ್ಲ, ಇದರ ಮೇಲೆಯೂ ನೀವೆಲ್ಲ ಇಚ್ಚಿಸಿದರೆ ಅವನನ್ನೆ ನಿಮ್ಮ ಮುಂದೆ ತರುತ್ತೇನೆ. ನಿಮ್ಮ ಇಷ್ಟದ ಪ್ರಕಾರ ವಿಚಾರಿಸಿ ತೀರ್ಮಾನ ಕೈಗೊಳ್ಳಿ. ಆದರೆ ಮೊದಲು ಈ ಬೋಳು ಬಹಿಷ್ಕಾರವನ್ನ ಮರುಮಾತಿಲ್ಲದೆ ಹಿಂತೆಗೆದುಕೊಳ್ಳಿ!" ಎಂದು ಅಬ್ಬರಿಸಿದ. ಈ ಆವೇಶದ ಮಾತುಗಳನ್ನು ಕೇಳಿದ ಅಲ್ಲಿನ ಪೂಜಾರಿ ಕಾಬಾದಲ್ಲಿನ ಸಂದೂಕದಲ್ಲಿ ಇರಿಸಿದ್ದ ಬಹಿಷ್ಕಾರ ಪತ್ರವನ್ನು ಹೊರತೆಗೆದು ನೋಡಿದಾಗ ಅದು ನಿಜಕ್ಕೂ ಲಡ್ಡಾಗಿ ಹುಳತಿಂದು ಹಾಳಾಗಿತ್ತು! ಇದನ್ನು ಕಂಡ ಖುರೈಷಿಗಳು ಗಾಬರಿಯಿಂದ ಕಂಗಾಲಾದರು. ಅವರ ಸೋಕ್ಕೆಲ್ಲ ಅಡಗಿಹೋಗಿ ಅವರಲ್ಲೆ ಹಿರಿಯರಾದವರು ಬಹಿಷ್ಕಾರ ರದ್ದುಪಡಿಸಿ ಹಾಶೀಮ್ ಕುಲಸ್ಥರನ್ನು ಮರಳಿ ಮೊದಲಿನಂತೆ ಮೆಕ್ಕಾ ಪ್ರವೇಶಿಸಲು ಅನುವು ಮಾಡಿಕೊಟ್ಟರು. ಹೀಗೆ ಬಹಿಷ್ಕಾರ ಮುಗಿದ ಮಾತ್ರಕ್ಕೆ ಮಹಮದನ ವಯಕ್ತಿಕ ಬವಣೆಗಳೇನೂ ಕೊನೆಯಾಗಲಿಲ್ಲ. ವಯೋ ವೃದ್ಧಳಾಗಿದ್ದ ಆತನ ಪತ್ನಿ ಖತೀಜಾ ಖಾಯಿಲೆಯಿಂದ ನರಳಿ ಕ್ರಿಸ್ತಶಕ 616ರ ಡಿಸೆಂಬರ್ ತಿಂಗಳಲ್ಲಿ ಕಣ್ಣು ಮುಚ್ಚಿದಳು. ಇದು ಮಹಮದನ ಪಾಲಿಗೆ ಅತ್ಯಂತ ನೋವಿನ ಸಂಗತಿಯಾಗಿತ್ತು. ಕಾಲುಶತಮಾನಗಳ ಕಾಲ ಆತನ ಪ್ರೀತಿಸುವ ಜೀವವಾಗಿ, ಹಿತೈಷಿಯಾಗಿ, ಬಾಳ ಗೆಳತಿಯಾಗಿ ಹಾಗೂ ಆತನಿಂದ ಮತಾಂತರ ಹೊಂದಿದ ಪ್ರಥಮ 'ಮುಸ್ಲೀಂ'ಮಳಾಗಿ ಆತನಿಗೆ ಒತ್ತಾಸೆ ನೀಡಿದ್ದ ಖತೀಜ ಮಹಮದನ ವಂಶೋದ್ಧಾರಕಳೂ ಆಗಿ ನಾಲ್ವರು ಹೆಣ್ಣುಮಕ್ಕಳ ತಾಯಿಯೂ ಆಗಿದ್ದು ತುಂಬು ಜೀವನ ಸವೆಸಿ ಕಣ್ಮುಚ್ಚಿದ್ದಳು. ವಯಕ್ತಿಕ ನೆಲೆಯಲ್ಲಿ ಇದು ಆತನನ್ನು ಸಹಜವಾಗಿ ಕೆಂಗೆಡೆಸಿತು. ಇದರ ಹಿಂದೆಯೆ ಗಾಯದ ಮೇಲೆ ಉಪ್ಪು ಸುರಿದಂತೆ ಆತನ ದೊಡ್ಡಪ್ಪ ಅಬು ತಾಲೀಬನೂ ಅದೆ ಕಾಲದಲ್ಲಿ ಕೊನೆಯುಸಿರು ಎಳೆದಿದುದರಿಂದಾಗಿ ಮಹಮದ್ ಸಂಕಟದಿಂದ ನರಳಬೇಕಾಯಿತು. ಮಹಮದನಿಗಾಗಿ ಸಂಪೂರ್ಣ ಖುರೈಷಿ ಕುಲದ ವೈರತ್ವವ್ವನ್ನೆ ಕಟ್ಟಿಕೊಳ್ಳಲು ಹೇಸದ ಅಬು ತಾಲೀಬ್ ವಯಕ್ತಿಕವಾಗಿ ಇಸ್ಲಾಮಿಗೆ ಮತಾಂತರವಾಗದಿದ್ದರೂ ಮಹಮದನ ಜೊತೆಗೆ ಬೆಸೆದು ಕೊಂಡಿದ್ದ ರಕ್ತ ಸಂಬಂಧದ ಕಟ್ಟಿಗೆ ಬೆಲೆಕೊಟ್ಟು ಆತನ ಸಮೀಪ ವರ್ತಿಯಾಗಿ ಮುತುವರ್ಜಿಯಿಂದ ಆತನ ಹಿತಬಯಸಿದ ನಿಸ್ಪ್ರಹ ಜೀವ ಅಬು ತಾಲೀಬನದು. ಹೆತ್ತವರನ್ನು ಬಾಲ್ಯದಲ್ಲೆ ಕಳೆದುಕೊಂಡಿದ್ದ ಮಹಮದನನ್ನು ಸ್ವಂತ ಹೆತ್ತಮಗನಂತೆ ಸಲಹಿದ್ದ ಅಬು ತಾಲೀಬನನ್ನು ಮಹಮದ್ ಕಳೆದುಕೊಂಡು ಶಾಂತಿಯಿಂದ ಇರುವುದು ಅಸಾಧ್ಯವಾಗಿತ್ತು. ಅವನು ಇದನ್ನು ಭಾವಪೂರ್ಣವಾಗಿ ಪ್ರಕಟಿಸಿ ಶೋಕಿಸಿದ. ನಾಲ್ಕು ದಶಕಗಳ ಈ ಗಟ್ಟಿಬಾಂಧವ್ಯ ಹೀಗೆ ಅಬು ತಾಲೀಬನ ಸಾವಿನಲ್ಲಿ ಕೊನೆಯಾದುದರಿಂದ ಮಹಮದ್ ಮಾನಸಿಕವಾಗಿ ಕೆಂಗೆಟ್ಟ. ( ಇನ್ನೂ ಇದೆ....)

ವಲಿ.... ( ಭಾಗ-5)

ಮೊದಮೊದಲು ಚುಟುಕಾಗಿರುತ್ತಿದ್ದ ಖುರಾನಿನ ಸುರಾಗಳು ಕ್ರಮೇಣ ಉದ್ದುದ್ದವಾಗುತ್ತಾ ಹೋದವು. ಹೀಗೆ ಖುರಾನಿನ ಸುರಾಗಳು ಉದ್ದವಾಗುತ್ತಾ ಹೋದಂತೆ ಅವುಗಳಲ್ಲಿ ಹೊರಹೊಮ್ಮಿದ ಉಪದೇಶಾಮೃತಗಳಲ್ಲಿ ಪರಸ್ಪರ ವಿರೋಧಾಭಾಸಗಳೂ ಗೋಚರಿಸಲಾರಂಭಿಸಿದವು. ದೈವಪ್ರೇರಣೆಯಿಂದ ಹೊರಹೊಮ್ಮಿದ ಉಪದೇಶದ ಸಾಲುಗಳೆ ಮುಂದೆ ಖಾಯಂ ದೈವವಾಣಿಗಳಾಗಿ ಅಂತಿಮವಾದುದನ್ನೂ ಗುರುತಿಸಬಹುದಾಗಿದೆ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ. ಅಷ್ಟೆ ಅಲ್ಲದೆ ಅರೇಬಿಯಾದಲ್ಲಿ ಆ ಕಾಲದಲ್ಲಿ ಪ್ರಚಲಿತವಿದ್ದ ಕೆಲವು ಕವಿತೆಗಳನ್ನು ಹಾಗ್ಹಾಗೆ ಖುರಾನಿನಲ್ಲೂ ಕಾಪಿ ಹೊಡೆದಂತೆ ಬಳಸಿರುವುದನ್ನು ಈತ ಗುರುತಿಸಿದ್ದಾನೆ ! ಇಲ್ಲಿಯವರೆಗೂ ಮಹಮದ್ ದೈವಪ್ರೇರಣೆಯ ಪ್ರಕಾರ ಹೇಳಿದ ಸುರಾಗಳು ಕೇವಲ ದೇವರ ಏಕಸಾಮ್ಯತೆ, ಮಹಮದ್ ಆತನ ಪ್ರವಾದಿ, ಮರಣ ಹೊಂದಿದವರ ಪುನರುತ್ಥಾನ, ಒಳ್ಳೆಯ ಮತ್ತು ಕೆಟ್ಟದರ ಪ್ರತಿಫಲಗಳು ಮುಂತಾದಕ್ಕೆ ಸೀಮಿತವಾಗಿದ್ದವು. ಈಗ ಅದರ ಮುಂದುವರಿಕೆಯಾಗಿ ಪ್ರಾರ್ಥನೆಗೈಯುವುದು, ದಾನ ಮಾಡುವುದು, ತೂಕ ಮತ್ತು ಅಳತೆಗಳಲ್ಲಿ ಪ್ರಾಮಾಣಿಕತೆ, ಸತ್ಯನುಡಿ, ನಡತೆಯ ಪರಿಶುದ್ಧತೆ, ಒಡಂಬಡಿಕೆಗಳ ಪ್ರಾಮಾಣಿಕ ಪರಿಪಾಲನೆ ಮುಂತಾದವುಗಳ ಕುರಿತಾಗಿಯೂ ಸುರಾಗಳು ಹೊರಬಂದವು. ವಿಗ್ರಹಾರಾಧನೆಯನ್ನು ಖಂಡತುಂಡವಾಗಿ ವಿರೋಧಿಸಿ ಮಹಮದ್ ನೀಡಿದ 109/1ರಿಂದ 6ರವರೆಗಿನ ಸುರಾವೂ ಅದೆಕಾಲದಲ್ಲಿ ಹೊರಬಂದದ್ದು ಕೂಡ ಗಮನಾರ್ಹವಾಗಿತ್ತು ಎನ್ನುತ್ತಾನೆ ಇತಿಹಾಸಕಾರ ಕ್ಲೈರ್. ಸ್ವರ್ಗ ಹಾಗೂ ನರಕಗಳ ಕುರಿತು ವಿವರಣೆ ನೀಡುವ ಸುರಾವೂ ಇದೇ ಸಮಯದಲ್ಲಿ ಹೊರಬಂದಿತ್ತು. ಸ್ವರ್ಗ- ನರಕಗಳ ಚಿತ್ರಣ, ಅಲ್ಲಿ ಸಿದ್ಧವಾಗುವ ಸುಖ ಹಾಗೂ ಕಷ್ಟಕಾರ್ಪಣ್ಯಗಳು, ಸ್ವರ್ಗದ ಕಣ್ಮನ ತಣಿಸುವ ತೋಟ- ತೋಪುಗಳು, ನೆಲ ತೊಳೆಯುತ್ತಾ ವರ್ಷಪೂರ್ತಿ ಹರಿಯುತ್ತಲೆ ಇರುವ ಅಲ್ಲಿನ ಎಂದೆಂದೂ ಬತ್ತದ ತುಂಬಿದ ತೊರೆಗಳು, ಅಲ್ಲಿನ ವನ ಸಮೃದ್ಧಿ, ತೊರೆಗಳ ದಡಗಳಲ್ಲಿ ಅರಳಿ ನಲಿಯುವ ಹೂಗಿಡಗಳು, ಮರಗಳ ನೆರಳಿನಲ್ಲಿ ಎಲ್ಲೆಂದರಲ್ಲಿ ಇರಿಸಿರುವ ಹೂವಿನ ಮೆತ್ತೆ ಹಾಸಿರುವ ಸುಖತೂಲಿಕಾ ತಲ್ಪಗಳು, ಚಿಮ್ಮುವ ಕಾರಂಜಿಗಳಿಂದ ಉಕ್ಕುವ ಕುಡಿಯುವ ಸಿಹಿನೀರು, ಅಲ್ಲಲ್ಲಿ ಇರಿಸಿರುವ ದ್ರಾಕ್ಷಾರಸಗಳ ಬೆಳ್ಳಿಬಟ್ಟಲುಗಳು, ಎಲ್ಲೆಲ್ಲೂ ಕೈಗೆಟಕುವಂತೆ ನೇತಾಡುತ್ತಿರುವ ಸಿಹಿಫಲಗಳ ಗೊಂಚಲುಗಳು, ಜೊತೆಗೆ ಅಲ್ಲಿಗೆ ಅಡಿಯಿಡುವವರ ಸಕಲ ಸೇವೆಗೂ(?) ಸದಾ ಸಿದ್ದವಾಗಿರುವ ಹ್ಯೂರಿ ಎಂಬ ಪಾರದರ್ಶಕ ಸುಂದರಿಯರು, ಎಲ್ಲಕ್ಕಿಂತಲೂ ಹೆಚ್ಚಾಗಿ ಬಯಸಿದಾಗ ಗುಂಡಿ ಅದುಮಿದಾಗ ಬೆಳಕು ಹೊಮ್ಮಿಸಲು ಇಂದು ಸಾಧ್ಯವಾಗುವಂತೆ ಇಷ್ಟಪಟ್ಟಾಗ ಬರಿಸಬಹುದಾದ ಮಳೆ ! ಹೀಗೆ ಮರುಭೂಮಿಯ ಒಣಭೂಮಿಯ ನಂಟನ್ನಷ್ಟೇ ಹೊಂದಿದ್ದ ಅರಬರಿಗೆ ಹೊಸತೆನಿಸುವ ಹಾಗೂ ಅತ್ಯಾಕರ್ಷಕ ಎನ್ನಿಸುವ ಈ ಎಲ್ಲಾ ವಿವರಣೆಗಳನ್ನ ಕೊಡುವುದರ ಮೂಲಕ ಅವರಿಗೆ ಮೋಡಿ ಹಾಕುವತ್ತ ಮಹಮದ್ ಕಾರ್ಯಶೀಲನಾಗಿದ್ದ, ಸುರಾ 9/64 ಸಾಹಿ ಅಲ್ ಬುಖಾರಿ -4/3243 ಈ ಸುರಾವನ್ನ ಅವಲೋಕಿಸಿದಾಗ ಆತನ ವಿವರಣೆ ಹೆಚ್ಚು ಸ್ಪಷ್ಟವಾಗುತ್ತದೆ. ಸ್ವರ್ಗವನ್ನು ಹೀಗೆ ರಂಗುರಂಗಾಗಿ ವರ್ಣಿಸಿ ಆಕರ್ಷಣೆ ಹುಟ್ಟಿಸಿದ ಮಹಮದ್ ನರಕವನ್ನು ಬಲು ಭೀಕರವಾಗಿ ವಿವರಿಸಿದ. ಹೆಜ್ಜೆಹೆಜ್ಜೆಗೂ ಸುಡುವ ಬಿಸಿನೀರಿನ ಬುಗ್ಗೆಗಳು, ಸಿಡಿಯುವ ಬೆಂಕಿ ಹೊಗೆಗಳು ನಿರಂತರ ಹೊರಹೊಮ್ಮುವ ಅಸಹ್ಯದ ಉಸಿರುಗಟ್ಟಿಸುವ ಜಾಗಗಳು. ಸುಡುಬಿಸಿಲಿಂದ ರಕ್ಷಣೆಗೆ ನೆರಳೆ ಇಲ್ಲದ ಸುಡುನೆಲ ಇವೆಲ್ಲವನ್ನೂ ಒಳಗೊಂಡಿತ್ತು ಈತನ ನರಕದ ವಿವರಣೆ. ಇವೆಲ್ಲವನ್ನೂ ಹೆಚ್ಚು ಕಡಿಮೆ ಇಹದಲ್ಲೆ ಅಗತ್ಯಕ್ಕಿಂತ ಹೆಚ್ಚು ಕಂಡುಂಡ ಅನುಭವಿಗಳಾಗಿದ್ದ ಅರಬರಿಗೆ ಸ್ವರ್ಗದ ಸುಖಮಯ ವಿವರಣೆ ಕೇಳುವಾಗಲೆ ಸುಖಾನುಭವ ತಂದದ್ದು ಮಾತ್ರ ಸುಳ್ಳಲ್ಲ!. ನರಕದ ಭೀಕರತೆಯ ವಿವರಣೆ ನೀಡುವ ಸುರಾಗಳನ್ನು 32/20/21, 40/24/71/72, 41/24/25, 44/42-49, 78/23-29 ಹಾಗೂ 37/23/2ಗಳಲ್ಲಿ ಗಮನಿಸಬಹುದು. ಸ್ವರ್ಗ ಮತ್ತು ನರಕಗಳ ವಿವರಣೆಗಳೊಂದಿಗೆ ಮಹಮದ್ ನಿರ್ಣಾಯಕ ದಿನದಂದು ಕಾದಿರುವ ಭಯಂಕರ ತೀರ್ಪಿನ ಬಗ್ಗೆಯೂ ಅರಬರಿಗೆ ದಿಗಿಲು ಹುಟ್ಟಿಸುವ ಸಂದೇಶಗಳನ್ನು ಸಾರಿದ. ಅವನ ಈ ಸಂದೇಶವನ್ನು ಆಲಿಸಿದ ಮೆಕ್ಕಾದ ಮಂದಿ ಸಂದೇಹಗೊಂಡು ಆ ಅಂತಿಮ ದಿನದ ಗಡುವು ಎಂದು ಸಮೀಪಿಸುವುದು ಯಾವಾಗ? ಎಂದು ಪ್ರಶ್ನಿಸಿದಾಗ 'ಅದು ತನಗೆ ಗೊತ್ತಿಲ್ಲ ದೇವರಿಗೆ ಮಾತ್ರ ಗೊತ್ತು!' ಎಂದು ಸುರಾ 27/65 ರ ಮೂಲಕ ಉತ್ತರಿಸಿದ. ಹೀಗೆ ಖುರಾನಿನಲ್ಲಿ ಕಂಡು ಬರುವ ಅನೇಕ ಸಾಲುಗಳ ಬಗ್ಗೆ ಮೆಕ್ಕಾದ ಮಂದಿಯ ಮನದಲ್ಲಿ ಎದ್ದ ಅಪನಂಬಿಕೆ, ಅಸಹನೆಗಳ ಬಗ್ಗೆ ಹಾಗೂ ಸತ್ತು ಮಣ್ಣಾದವರು ಪುನರುತ್ಥಾನದ ದಿನದಂದು ಮತ್ತೆ ಎದ್ದು ಬರುತ್ತಾರೆ ಎಂಬೆಲ್ಲ ಹೇಳಿಕೆಗಳ ವಿರುದ್ಧ ಎದ್ದ ಅವರ ಅಸಹನೆಗಳನ್ನು ತನ್ನದೆ ಆದ ವಾದ, ತರ್ಕ- ವಿಮರ್ಶೆಗಳ ಮೂಲಕ ತೊಡೆದು ಹಾಕಲು ಮಹಮದ್ ಯತ್ನಿಸಿದ. ಸುರಾ 67/24-27 29/1 69ಗಳ ಮೂಲಕ ಕ್ರಮೇಣ ಈ ಬಗ್ಗೆ ಉದ್ರೇಕಕಾರಿಯಾಗಿ ಪ್ರಚೋದನೆ ನೀಡುತ್ತ ತನ್ನನ್ನು ಪ್ರವಾದಿಯೆಂದು ನಂಬಿದ ಮತಬಾಂಧವರನ್ನು ಬಡಿದೆಬ್ಬಿ ಅವರು ಕಾರ್ಯಪ್ರವರ್ತರಾಗುವಂತೆ ಮಾಡಲು ಆತ ಆರಂಭಿಸಿದ. ಇತಿಹಾಸಕಾರ ಸಿಮೊನ್ ವೆಲ್ ಹೀಗೆ ಇನ್ನೊಬ್ಬರನ್ನು ಪ್ರಚೋದನೆಗೆ ಒಳಪಡಿಸಿ ಬಡಿದೆಬ್ಬಿಸುವುದು ಒಂದು ಕಲೆ ಎನ್ನುತ್ತಾನೆ. ಮೆಕ್ಕಾದ ಖುರೈಷಿಗಳ ಕೊನೆಗಾಣದ ಮೊದಲಿಕೆ, ಅಪಹಾಸ್ಯ ಹಾಗು ಕುಚೋದ್ಯದ ನುಡಿಗಳಿಗೂ ಮಹಮದ್ ತನ್ನ ಸುರಾಗಳ ಮೂಲಕವೆ ಇದಿರೇಟು ನೀಡಲಾರಂಭಿಸಿದ. ಸುರಾ 5/57 62,29/1,69ಗಳಲ್ಲಿ ಇವನ್ನು ಧಾರಾಳವಾಗಿ ಗಮನಿಸಬಹುದು. ವಿರೋಧಿಗಳ ಈ ಎಲ್ಲಾ ಬಿರುನುಡಿಗಳಿಗೆ ಸಹನೆ ಶಾಂತಿಯಿಂದಿರುವಂತೆ ಮಹಮದ್ ಭೋದಿಸಿದ. ನೆಜ್ರಾನ್ ಎಂಬಲ್ಲಿ ಯಹೂದಿಗಳು ಕ್ರೈಸ್ತರನ್ನು ಹಿಂದೆ ಬೆಂಕಿಯ ಹೊಂಡದಲ್ಲಿ ಹಾಕಿ ಜೀವಂತ ಸುಟ್ಟ ಸಂಗತಿಯನ್ನ ಉದಾಹರಿಸುತ್ತಾ ತನ್ನ ಹಿತವಚನಗಳನ್ನು ಅವರು ಒಪ್ಪುವಂತೆ ಸುರಾ 85/1-22 ರಲ್ಲಿ ಸಾರಿದ. 'ಇಸ್ಲಾಂ' ಎಂದರೆ ದೇವರಿಗೆ ತನ್ನನ್ನು ತಾನೆ ಸಂಪೂರ್ಣ ಅರ್ಪಿಸಿಕೊಳ್ಳುವುದು ಹಾಗೆ ಮಾಡುವವನೆ ಮತ ಶ್ರದ್ಧೆಯುಳ್ಳವನು ಅಥವಾ 'ಮುಸ್ಲೀಂ' ಎಂದ. ಯಾರು ತಾನು ಸಾರುವ ಏಕದೈವವಾಣಿಯನ್ನು ಆಲೈಸಿಯೂ ಬಹುದೇವರನ್ನೂ ಗುಟ್ಟಾಗಿ ಆರಾಧಿಸುವರೊ ಅವರೆ 'ಮುಶಿಕೀನ್'ಗಳೆನ್ನಿಸಿಕೊಳ್ಳುವರು. ತನ್ನ ದೈವವಾಣಿಯನ್ನು ಸಾರಾಸಗಟಾಗಿ ತಿರಸ್ಕರಿಸುವ ಎಲ್ಲರೂ 'ಕಾಫಿರಿನ್'ಗಳೆಂದು ಕರೆಸಿಕೊಳ್ಳುತ್ತಾರೆ. ಈ ಕಾಫಿರಿನ್ ಹಾಗೂ ಮುಶಿಕೀನ್'ಗಳು ಯಾವ ಹಂತದಲ್ಲೂ ತನಗೆ ವಿರೋಧಿಗಳೆ ಎಂದಾತ ಸಾರಿದ. ಈ ಬಗ್ಗೆ ಪ್ರಸಿದ್ಧ ಇತಿಹಾಸಕಾರರಾದ ಅಲ್ ವಾಕಿಡಿ ಹಾಗೂ ಅಲ್ ತಬರಿ ಜೋಡಿ ಹೀಗೊಂದು ಕಥಾರೂಪದ ವಿವರಣೆ ನೀಡುತ್ತಾರೆ. ಅದರಂತೆ ಕ್ರಿಸ್ತಶಕ 615ರ ಸುಮಾರಿಗೆ ತನ್ನ ಬುಡಕಟ್ಟಿನವರ ಆತ್ಮೋದ್ಧಾರ ಮಾಡುವ ಸಲುವಾಗಿ ತಾನು ಆರಂಭಿಸಿದ ನೂತನ ಧರ್ಮದಲ್ಲಿ ಖುರೈಷಿಗಳ ಪ್ರಬಲ ವಿರೋಧದ ಕಾರಣ ಅಂದುಕೊಂಡ ಸಫಲತೆ ಕಂಡು ಬಾರದೆ ಇದ್ದುದು, ತನ್ನೆಲ್ಲಾ ಪರಿಶ್ರಮದ ಹೊರತಾಗಿಯೂ ತಾನು ಕೇವಲ ನಲವತ್ತರಿಂದ ಐವತ್ತು ಮಂದಿಯ ಮನವೊಲಿಸಲು ಮಾತ್ರ ಶಕ್ತನಾಗಿದ್ದು, ಅದೆ ಪ್ರಯತ್ನದಲ್ಲಿ ಇಡಿ ಖುರೈಷಿ ಕುಲವನ್ನೆ ಎದುರು ಹಾಕಿಕೊಂಡದ್ದು ಇವೆಲ್ಲ ಮಹಮದನ ಮನಸ್ಸನ್ನು ತೀವೃವಾಗಿ ಘಾಸಿಗೊಳಿಸಿತು. ಇದೆ ಕಾರಣಕ್ಕೆ ಆತನ ಆತ್ಮ ನಲುಗಿ, ಭಾವನೆಗಳಿಗೆ ಬಲವಾದ ಪೆಟ್ಟುಬಿದ್ದಿತ್ತು. ಹಿಂದೊಮ್ಮೆ ಪ್ರೀತಿಪಾತ್ರರಾಗಿದ್ದ ಖುರೈಷಿ ಮುಖಂಡರ ವೈರತ್ವ ಅವನ ಹೃದಯ ಹಿಂಡಿತ್ತು. ದುಃಖಪೀಡಿತನಾದ ಮಹಮದ್ ಹೀಗಾಗಿ ಅವರೊಂದಿಗೆ ಸಂಧಾನಕ್ಕಾಗಿ ಹಾತೊರೆದ. ಒಂದು ಮುಂಜಾನೆ ಕಾಬಾದ ಬಳಿ ಖುರೈಷಿ ಪ್ರಮುಖರು ಕೂತು ಅದೇನನ್ನೂ ಚರ್ಚಿಸುತ್ತಿರುವಾಗ ಮಹಮದ್ ಕೂಡ ಅಲ್ಲಿಗೆ ಬಂದು ಅವರ ಸನಿಹದಲ್ಲೆ ಕುಳಿತುಕೊಂಡ. ಅವನು ಅಲ್ಲಿಯೆ ಆಗಷ್ಟೆ ತನಗೆ ಪ್ರೇರಣೆಯಾದ ಹೊಸ ಸುರಾದ ಸಾಲುಗಳನ್ನ ಪಠಿಸತೊಡಗಿದ. ಈ ರೀತಿ ಅವನ ಮಣಮಣ ಸಾಗಿದ್ದಾಗ ಒಂದು ದೆವ್ವ ಅವನ ಹೃದಯವನ್ನು ಹೊಕ್ಕಿತು ಎನ್ನುತ್ತಾರೆ ಅವರಿಬ್ಬರೂ. ಆ ದೆವ್ವ ಅದಾಗಲೆ ಅವನ ಮನದಲ್ಲಿ ಮನೆ ಮಾಡಿದ್ದ ಹೊಂದಾಣಿಕೆಯ ಸೂತ್ರಗಳೂ ಸುರಾದ ಮೂಲಕವೆ ಹೊರ ಬರುವಂತೆ ಮಾಡಿತು. ಅಲ್-ಲಾಟ್ ಸುರಾ 53/52ರ ಪ್ರಕಾರ ಹೆಣ್ಣುದೇವತೆಯರನ್ನೂ ಏಕದೈವದೊಂದಿಗೆ ಆರಾಧಿಸುವಂತೆ ಹೇಳಿ ಬಹು ದೇವತಾರಾಧನೆಗಳ ಬಗ್ಗೆ ಅನುಕಂಪದ ನುಡಿಯನ್ನೆ ಹೊರ ಹೊಮ್ಮಿಸಿತಂತೆ. ಉಜ್ವಲ ಸ್ತ್ರೀಯರ ಮಧ್ಯಸ್ಥಿಕೆಯ ಕುರಿತ ಒಂದು ಸಾಲೂ ಈ ಸುರಾದಲ್ಲಿ ಸೇರಿತ್ತು. ಮಹಮದನ ಈ ಹೊಸ ವಿಮರ್ಶಾ ವಿಧಿ ಆಲಿಸಿದ ಖುರೈಶಿಗಳಿಗೆ ನಿಜಕ್ಕೂ ಆಶ್ಚರ್ಯವಾಯಿತು. ಮಹಮದ್ ತಮ್ಮ ದೇವದೇವತೆಗಳ ಗುಣಗಳನ್ನು ಕೀರ್ತಿಸುವುದನ್ನು ಅವರಂತೂ ನಿರೀಕ್ಷಿಸಿರಲಿಲ್ಲ. ಅದನ್ನು ಕೇಳಿದ್ದೆ ಅಲ್ಲಿಯೆ ಅವರು ನೆಲಕ್ಕೆ ಬಾಗಿ ದೇವರಿಗೆ ಸ್ವಸ್ತಿ ಸಲ್ಲಿಸಿದರು. ಆಗ ಒಕ್ಕೊರಲಿನಿಂದ ಅವರೆಲ್ಲರೂ "ಜನ್ಮವನ್ನು ನೀಡಿ ಅದನ್ನು ಹಿಂತಿರುಗಿ ತೆಗೆದುಕೊಳ್ಳುವವನು ದೇವನೊಬ್ಬನೆ. ಅವನೆ ಸೃಷ್ಟಿಕರ್ತ- ಸಂರಕ್ಷಕ ಎಂಬುದೀಗ ನಮಗೆ ಅರಿವಾಗಿದೆ. ನಮ್ಮ ಸ್ತ್ರೀದೇವತೆಗಳ ಬಗ್ಗೆ ಹೇಳುವುದಾದರೆ ಅವರು ದೇವರ ಬಳಿ ನಮ್ಮ ಒಳಿತಿಗಾಗಿ ಬಿನ್ನಹ ಮಾಡುತ್ತಾರೆ. ನೀನು ಅವರನ್ನು ಒಪ್ಪಿಕೊಂಡಿರುವುದರಿಂದ ನಾವೂ ನಿನ್ನನ್ನು ಬೆಂಬಲಿಸಲು ಇಚ್ಚಿಸುತ್ತೇವೆ" ಎಂದರು . ಇದು ಸುರಾ 53/19-20 ರಲ್ಲಿ ನಿರೂಪಿತವಾಗಿದೆ. ಆದರೆ ಅವರಿಂದ ಇನ್ನೇನನ್ನೋ ನಿರೀಕ್ಷಿಸಿದ್ದ ಮಹಮದನಿಗೆ ಅವರ ಈ ಮಾತುಗಳು ತೃಪ್ತಿಹುಟ್ಟಿಸಲಿಲ್ಲ ಹೀಗಾಗಿ ಖಿನ್ನನಾಗಿ ಆತ ಮನೆಗೆ ಮರಳಿದ. ಅಂದೆ ಸಂಜೆ ಯಕ್ಷ ಗೇಬ್ರಿಯಲ್'ನ ಪುನರ್'ದರ್ಶನ ಅವನಿಗೆ ದೊರೆಯಿತು. ಅವತ್ತು ದೊರಕಿದ ದೈವವಾಣಿಯನ್ನು ಮಹಮದ್ ಅವನಿಗೆ ಅರುಹಿದ, ಅದನ್ನು ಕೇಳಿದ್ದೆ ಆತಂಕಿತನಾದ ಯಕ್ಷ "ನಾನು ಹೇಳದೆ ಇರುವ ಹಾಡು ಹರಟೆಗಳನ್ನೆಲ್ಲ ಜನರ ಮುಂದಿರಿಸಿದ್ದೆಯಲ್ಲ! ನಾನು ಹೇಳಿದ್ದೇನು? ನೀನು ಮಾಡಿದ್ದೇನು?" ಎಂದಾಗ ಮಹಮದ್ ಸಂಕಟದಿಂದ ನರಳಿದ. ದೇವರದಲ್ಲದ ಆ ಸಾಲುಗಳನ್ನ ತಾನು ಬಿತ್ತರಿಸಿರುವುದಕ್ಕೆ ಏನು ಕೇಡಾಗುವುದೊ ಎಂದಾತ ಹೆದರಿದ. ಆದರೆ ಗೇಬ್ರಿಯಲ್ ಆತನನ್ನು ಸಂತೈಸಿದ. ಅವನ ಭಯವನ್ನು ನಿವಾರಿಸುತ್ತಾ ಆ ಅಪ್ರಾಮಾಣಿಕ ಸುರಾಗಳನ್ನೆಲ್ಲ ಆತ ಕೂಡಲೆ ರದ್ದು ಪಡಿಸಿದ! ಮತ್ತು ಹೊಸತಾಗಿ ಸುರಾ 24/52, 35/14;39,17/26ಗಳ ಮೂಲಕ ಈಗಿರುವಂತೆ ಹೊಸ ಪದ್ಯಗಳನ್ನು ಸೃಷ್ಟಿಸಿದ. ಈ ಹೊಸ ಸಾಲುಗಳನ್ನು ಕೇಳಿದ್ದೆ ತಡ ಖುರೈಷಿಗಳ ದುಗುಡ ಮತ್ತಷ್ಟು ಹೆಚ್ಚಿತು. ನೆನ್ನೆಯಷ್ಟೆ ತಮ್ಮ ದೇವಾನುದೇವತೆಗಳ ಬಗ್ಗೆ ಸಹಾನುಭೂತಿಯ ಒಳ್ಳೆಯ ನುಡಿಗಳನ್ನಾಡಿದ್ದ ಮಹಮದ್ ಈಗ ಅದಕ್ಕೆ ಸಂಪೂರ್ಣ ವ್ಯತಿರಿಕ್ತವಾದ ಸಾಲುಗಳನ್ನೆ ಉದ್ಗರಿಸುತ್ತಿರುವುದು ಅವರನ್ನು ಇನ್ನಷ್ಟು ಕೆರಳಿಸಿತು. ಇದೆ ಸಮಯದಲ್ಲಿ ಅಬಿಸೀನಿಯಕ್ಕೆ ವಲಸೆ ಹೋಗಿದ್ದವರು ಮೆಕ್ಕಾದ ಖುರೈಷಿಗಳು ಮಹಮದನ ನೂತನ ಧರ್ಮಕ್ಕೆ ಮತಾಂತರಿತವಾಗಿದ್ದಾರೆ ಎಂಬ ಗಾಳಿಸುದ್ದಿ ಕೇಳಿ ಹಿಂದಿರುಗಲಾರಂಭಿಸಿದ್ದರು. ಆದರೆ ಇಲ್ಲಿನ ವ್ಯತಿರಿಕ್ತ ಸ್ಥಿತಿ ಕಂಡು ಅವರಿಗೆ ಆಘಾತವಾಯಿತು. ಮಹಮದ್ ಖುರೈಶಿಗಳಿಗೆ ಪ್ರಕಟಿಸಿದ್ದ ರಿಯಾಯತಿಗಳನ್ನು ಹಿಂತೆಗೆದುಕೊಂಡಿದ್ದ. ಪುನಃಪುನಃ ವಿಗ್ರಹಾರಾಧನೆಗಳನ್ನು ಕಟುವಾಗಿ ಖಂಡಿಸಿ ಏಕದೇವತಾರಾಧನೆಗೆ ಕರೆ ಕೊಡಲಾರಂಭಿಸಿದ್ದ. ಖುರೈಷಿಗಳ ದೇವತೆಗಳನ್ನೆಲ್ಲ ಆತ ಬಲವಾಗಿ ನಿರಾಕರಿಸಿದ್ದ. ತಮ್ಮ ಬಂಧು-ಮಿತ್ರರ ಸಹಕಾರಗಳಿಂದ ಈ ವಲಸೆಗಾರರು ಮರಳಿ ತಮ್ಮ ಹಳೆ ನಿವಾಸಗಳಲ್ಲಿ ನೆಲೆಸಲು ಪ್ರಯತ್ನಿಸಿದರೂ ಅದು ಹೆಚ್ಚುಕಾಲ ಸಾಗಲಿಲ್ಲ. ಮೊದಲಿಗಿಂತ ದುಪ್ಪಟ್ಟು ಹಿಂಸೆ, ಕಿರುಕುಳಗಳಿಂದ ಕೂಡಿದ ಖುರೈಷಿಗಳ ವೈರವನ್ನವರು ಇದೀಗ ಎದುರಿಸಬೇಕಾಯಿತು. ಈ ಪೀಡೆಯಿಂದ ಪಾರಾಗಲು ಮಹಮದ್ ಅವರನ್ನೆಲ್ಲ ಮರಳಿ ಅಬಿಸೀನಿಯಕ್ಕೆ ವಲಸೆ ಹೋಗುವಂತೆ ಪುಸಲಾಯಿಸಿ ಅದರಲ್ಲಿ ಯಶಸ್ವಿಯೂ ಆದ. ಈ ಬಾರಿ ನವ ಮತಾಂತರಿತ ಸುಮಾರು ನೂರು ಮಂದಿ ಹೀಗೆ ಮತ್ತೆ ವಲಸೆಹೋದರು ಎನ್ನುತ್ತಾನೆ ಇತಿಹಾಸ ತಜ್ಞ ಕ್ಯಾರೆನ್ ಅರ್ಮೆಸ್ಟ್ರಾಂಗ್. (ಇನ್ನೂ ಇದೆ....)