ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Wednesday, September 24, 2014

ಶಿಲ್ಪಕಲೆ ‍೬ - ರಾಜೇಶ್ ಶ್ರೀವತ್ಸ


ಸ್ನೇಹಿತರೊಬ್ಬರು ಬದಾಮಿ ಬನಶಂಕರಿಯ ವಿಗ್ರಹದ ಸ್ವರೂಪ ಹೇಗಿದೆ ಎಂದು ಕೇಳಿದ್ದಾರೆ. ಯಾವಾಗಲೂ ಅಲಂಕಾರದಲ್ಲಿ ಮುಚ್ಚಿ ಹೋಗಿರುವ ದೇವಿಯ ವಿಗ್ರಹದ ವಿವರಗಳು ಕಾಣುವುದಿಲ್ಲವಾದ್ದರಿಂದ ಅವರಿಗೆ ಅದರ ಬಗ್ಗೆ ತಿಳಿದುಕೊಳ್ಳಬೇಕು ಎನಿಸಿರಬಹುದು. ಬದಾಮಿ ಬನಶಂಕರಿ ಚಾಲುಕ್ಯರ ಆರಾಧ್ಯ ದೇವತೆ. ಹಿಂದೊಮ್ಮೆ ದುರ್ಗಮನೆಂಬ ಅಸುರ ಬ್ರಹ್ಮನನ್ನು ಒಲಿಸಿಕೊಂಡು ವೇದಗಳನ್ನು ತನ್ನ ವಶದಲ್ಲಿಟ್ಟುಕೊಂಡನಂತೆ. ವೇದಗಳ ಮರೆವಿನಿಂದ ಜನರು ಧರ್ಮಭ್ರಷ್ಟರಾಗಿ ಭೂಮಿಯ ಮೇಲೆ ಮಳೆ ಇಲ್ಲದೆ ಬರಗಾಲ ಉಂಟಾಯಿತಂತೆ. ಜನರ ಕಷ್ಟ ನೋಡಲಾಗದೆ ಆದಿಶಕ್ತಿಯು ಅವತಾರವೆತ್ತಿದಳು. ಜನರ ದೀನ ಸ್ಥಿತಿಯನ್ನು ನೋಡಿ ಆಕೆ ದುಃಖದಿಂದ ಮೈಯೆಲ್ಲಾ ನೂರಾರು ಕಣ್ಣುಗಳನ್ನು ಹೊಂದಿ ಕಂಬನಿಯ ಮಳೆಬರಿಸಿದಳು(=ಶತಾಕ್ಷಿ) . ತನ್ನ ಮೈಯಿಂದಲೇ ಫಲ,ಪುಷ್ಪ,ಗೆಡ್ದೆ,ಗೆಣಸುಗಳನ್ನು (=ಶಾಕಂಭರಿ) ಸೃಷ್ಟಿಸಿ ಜನರ ಹಸಿವನ್ನು ನೀಗಿಸಿದಳು . ನಂತರ ಭಯಂಕರ ಕೋಪದಿಂದ ದುರ್ಗಮಾಸುರನೊಡನೆ ಹೋರಾಡಿ ಅವನನ್ನು ಸಂಹರಿಸಿ ವೇದಗಳನ್ನು ಮರಳಿ ಪಡೆದಳು. ದುರ್ಗಮಾಸುರನನ್ನು ಸಂಹರಿಸಿ ದುರ್ಗೆ ಎನಿಸಿಕೊಂಡಳು. ನಂತರ ತಿಲಕಾರಣ್ಯದಲ್ಲಿ (ಈಗಿನ ಬದಾಮಿ) ನೆಲೆಸಿದಳು. ವನದಲ್ಲಿ ನೆಲೆಸಿದ್ದರಿಂದ ವನಶಂಕರಿ ಎನಿಸಿಕೊಂಡಳು.
ದೇವೀ ಭಾಗವತ ಹಾಗು ಸಪ್ತಶತಿಗಳಲ್ಲಿ ದೇವಿಯು ಶಾಕಂಭರಿ ಅವತಾರದಲ್ಲಿ ತನ್ನ ನಾಲ್ಕು ಕೈಗಳಲ್ಲಿ ಬಲ ಕೈಯಗಳಲ್ಲಿ ಬಾಣ ಹಾಗು ಶಾಕಸಮೂಹ (ಫಲ,ಪುಷ್ಪ,ಗೆಡ್ದೆ,ಗೆಣಸು)ವನ್ನು , ಎಡಕೈಗಳಲ್ಲಿ ಧನಸ್ಸು ಹಾಗು ತಾವರೆಯನ್ನು ಹಿಡಿದಿರುವಂತೆ ವರ್ಣಿಸಲಾಗಿದೆ. ಆದರೆ ಬದಾಮಿಯ ಧ್ಯಾನ ಶ್ಲೋಕದಲ್ಲಿ ಬೇರೆಯ ರೂಪವನ್ನು ವರ್ಣಿಸಲಾಗಿದೆ.ವಿಗ್ರಹವು ಕರಿಕಲ್ಲಿನ ಅರೆ ಉಬ್ಬು ಶಿಲ್ಪ. ಇಲ್ಲಿ ಆಕೆ ಅಷ್ಟಭುಜೆ. ಪ್ರಭಾವಳಿಗೆ ಹೊಂದಿಕೊಂಡಂತೆ ಆಕೆಯ ದೇಹ ಹಾಗು ಕೈಗಳನ್ನು ಕೆತ್ತಲಾಗಿದೆ. ಬಲ ಭಾಗದ ನಾಲ್ಕು ಕೈಗಳಲ್ಲಿ ಮೇಲಿನಿಂದ ಕೆಳಗೆ ಖಡ್ಗ, ಘಂಟೆ, ತ್ರಿಶೂಲ ಹಾಗು ಬಲತೊಡೆಯ ಮೇಲಿಟ್ಟಿರುವ ಕೈಯಲ್ಲಿ ಪುಸ್ತಕ (ವೇದ) ಇವುಗಳನ್ನು ಧರಿಸಿದ್ದಾಳೆ. ಎಡ ಕೈಗಳಲ್ಲಿ ಮೇಲಿನಿಂದ ಕೆಳಗೆ ಡಮರುಗ , ಡಮರು, ದುರ್ಗಮಾಸುರನ ತಲೆ ಹಾಗು ಎಡತೊಡೆಯ ಮೇಲೆ ಇಟ್ಟಿರುವ ಕೈಯಲ್ಲಿ ಮಧುಪಾತ್ರೆಗಳನ್ನು ಧರಿಸಿದ್ದಾಳೆ. ದೇವಿಯು ಸಿಂಹದ ಮೆಲೆ ಕುಳಿತಿದ್ದು ಎರಡೂ ಕಾಲುಗಳನ್ನು ಅಕ್ಕ ಪಕ್ಕ ಇಳಿಬಿಟ್ಟಿದ್ದಾಳೆ. ಎಡ ಬಲಗಳಲ್ಲಿ ಜಯೆ-ವಿಜಯೆಯರು ಚಾಮರಹಿಡಿದಿದ್ದಾರೆ. ಬಲದಲ್ಲಿ 
ಜಯೆಯ ಎದುರು ವಾಮಾಕ್ಷೀ, ವಿಜಯೆಯ ಎದುರು ವಾರುಣಿ ವಾದ್ಯಗಳನ್ನು ನುಡಿಸುತ್ತಾ ಕುಳಿತಿದ್ದಾರೆ. ದೇವಿಯ ಎರಡೂ ಪಾದಗಳಿಗೆ ಆಧಾರವಾಗಿ ಬಲಭಾಗದಲ್ಲಿ ಶಾಕಿಣಿ ಎಡಭಾಗದಲ್ಲಿ ಡಾಕಿಣಿಯರು ಇದ್ದಾರೆ. ಸಿಂಹವು ಶಾಂತವಾಗಿದ್ದು ಎರಡೂ ಕಾಲುಗಳನ್ನು ಕೆಳಗಿರುವ ಎರಡು ಆನೆಗಳ ಮೇಲೆ ಊರಿನಿಂತಿದೆ. ಆನೆಗಳು ಆಮೆಯ ಮೇಲೆ ನಿಂತಿವೆ.

ದೇವಿಯು ತ್ರಿಲೋಚನೆ ಅಗಲವಾದ ಹಣೆಯಲ್ಲಿ ಮೂರನೆಯ ಕಣ್ಣನ್ನು ಧರಿಸಿದ್ದಾಳೆ. ಯಾವುದೇ ಕುಸುರಿಯ ಕೆತ್ತನೆ ಇಲ್ಲದ ಮೆಟ್ಟಿಲು ಮೆಟ್ಟಿಲಾದ ದೊಡ್ದ ಕಿರೀಟ. ದುಂಡನೆಯ ಬಿಲ್ಲೆಯಂತಾ ದೊಡ್ದದಾದ ಚಿತ್ತಾರ ರಹಿತ ಕಿವಿಯೋಲೆಗಳು. ದೇವಿಯ ಎಲ್ಲಾ ಆಭರಣಗಳು ಸರಳವಾಗಿವೆ ಅಥವ ಕಾಲಾಂತರದಲ್ಲಿ ಪೂಜೆ, ಅಭಿಷೇಕಾದಿಗಳಿಂದ ವಿವರಗಳು ಸವೆದು ಹೋಗಿವೆ ಎನ್ನಬಹುದು. ಪ್ರಭಾವಳಿಯಲ್ಲಿ ಸಿಂಹ ಲಲಾಟವಿದ್ದು ಅದರ ಮೇಲಿರುವ ಬಳ್ಳಿಯ ಚಿತ್ತಾರಗಳು ಎಡ ಬಲಗಳಲ್ಲಿ ಬೇರೆ ಬೇರೆಯಾಗಿವೆ. ಕೈಲಿರುವ ಮಧು ಪಾತ್ರೆಯಿಂದ ಆಗಷ್ಟೇ ಪಾನಮಾಡಿದಂತಿರುವ ಅರೆತೆರೆದ ತುಟಿಗಳು, ದುಂಡನೆಯ ಕಣ್ಣುಗುಡ್ದೆಗಳು ದೇವಿಯ ಮುಖಕ್ಕೆ ಸ್ವಲ್ಪ ಉಗ್ರಕಳೆಯನ್ನು ನೀಡಿದೆ ಅನ್ನಬಹುದು.

ರಾಜೇಶ್ ಶ್ರೀವತ್ಸ

ಶಿಲ್ಪಕಲೆ : ೫ - ರಾಜೇಶ್ ಶ್ರೀವತ್ಸ


ಬಹುತೇಕ ಎಲ್ಲಾ ಪುರಾಣಾಗಳಲ್ಲೂ ಜಗತ್ ಸೃಷ್ಟಿಯ ಕಥೆ ಬರುತ್ತದೆ. ಪುರಾಣದ ಕಥೆಗಳ ಪ್ರಕಾರ ಕಶ್ಯಪ ಹಾಗು ದಿತಿಯರ ಎರಡನೆಯ ಮಗ ಹಿರಣ್ಯಾಕ್ಷ ಭೂಮಿಯನ್ನು ಚಾಪೆಯಂತೆ ಸುರುಳಿ ಸುತ್ತಿ
ಸಮುದ್ರದಡಿಯಲ್ಲಿ ಬಚ್ಚಿಟ್ಟ. ಆಗ ವಿಷ್ಣು ವರಾಹ (ಕಾಡು ಹಂದಿ) ರೂಪವನ್ನು ತಾಳಿ ನೀರಿಗಿಳಿದು ಹಿರಣ್ಯಾಕ್ಷನನ್ನು ಎಡಗಾಲಿಂದ ಒದ್ದು ಸಂಹರಿಸಿ ಕೋರೆದಾಡೆಗಳ ಮೂಲಕ ಭೂಮಿಯನ್ನು ಮೇಲೆತ್ತಿ
ಮೊದಲಿದ್ದಂತೆ ನೀರಿನ ಮೇಲೆ ಪ್ರತಿಷ್ಠಾಪಿಸಿದ. ಬ್ರಹ್ಮ ವರಾಹನನ್ನೆ ಸೃಷ್ಟಿಯಜ್ಞದ ಪಶುವನ್ನಾಗಿಸಿ ತನ್ನ ಕಾರ್ಯವನ್ನು ಪ್ರಾರಂಭ ಮಾಡಿದನು. ಆ ಯಜ್ಞ ಸ್ವರೂಪಿ ವರಾಹನನ್ನು ಈ ರೀತಿ ಬಣ್ಣಿಸಲಾಗುತ್ತದೆ. ನಾಲ್ಕು ವೇದಗಳೇ ಅವನ ಕಾಲುಗಳು, ಯೂಪ ಸ್ತಂಭವೇ ಅವನ ಕೋರೆಹಲ್ಲುಗಳು, ಯಾಗಗಳೆಲ್ಲಾ ಅವನ ದಂತಗಳು, ಚಯನವೇ ( ಅಗ್ನಿವೇದಿಕೆ ) ಮುಖ, ಅಗ್ನಿಯೇ ನಾಲಗೆ, ದರ್ಭೆಗಳೆ ರೋಮಗಳು, ಬೆವರಹನಿಗಳೇ ತಿಲ(ಎಳ್ಳು), ರಾತ್ರಿ-ಹಗಲುಗಳೇ ಇವನ ಕಣ್ಣುಗಳು, ಆಕಾಶವೇ ಒಡಲು, ಗುಡುಗಿನ ಶಬ್ಧಗಳೇ ವಾದ್ಯಗಳು, ಸಾಮಗಾನವೇ ಅವನ ಸ್ವರ, ಅವನ ಮೂತಿಯೇ ಸೃಕ್ -ಸ್ರುವಗಳು (ತುಪ್ಪಹೊಯ್ಯುವ ಚಮಚಗಳು ), ರಕ್ತವೇ ಆಜ್ಯ(ತುಪ್ಪ), ಅಸ್ಥಿಗಳೇ ಸಮಿತ್ತ್ತು(ಕಟ್ಟಿಗೆ), ಗುಪ್ತರ ಕಾಲದಲ್ಲಿ ನಾಲ್ಕುಕಾಲಿನ ಪಶುರೂಪಿ ವರಾಹನ ಮೂರ್ತಿಗಳೇ ಪ್ರಚಲಿತವಾಗಿದ್ದವು, ಪಲ್ಲವ, ಚಾಳುಕ್ಯ ಕಾಲದಿಂದ ನೃವರಾಹ (ಮನುಷ್ಯ ದೇಹ ಕಾಡುಹಂದಿಯ ತಲೆ) ರೂಪದಿಂದ ಅವನ ವಿಗ್ರಹಗಳ ಕೆತ್ತನೆ ಪ್ರಾರಂಭವಾಯ್ತು.


ಮೊದಲನೇ ಚಿತ್ರದಲ್ಲಿರುವುದು ಮಹಾಬಲಿಪುರಂ ನ ಆದಿವರಾಹ. ಚತುರ್ಭುಜ ವರಾಹನು ಆಗಷ್ಟೇ ಭೂಮಿಯನ್ನು ಹಿರಣ್ಯಾಕ್ಷನ ಸೆರೆಯಿಂದ ಪಾರು ಮಾಡಿ ಮೇಲೆತ್ತಿ ತಂದಿದ್ದಾನೆ. ಸುತ್ತಲಿರುವ ಎಲ್ಲರಿಗಿಂತ ಆತನೇ ಬಲಶಾಲಿ ಭೂಮಿಯನ್ನು ಮೇಲೆತ್ತಲು ಇವನೇ ಸರಿ ಎನ್ನುವಂತ ಮಾಹಾಕಾಯ ರೂಪದಲ್ಲಿ ಶಿಲ್ಪಿ ಅವನನ್ನು ತೋರಿಸಿದ್ದಾನೆ. ಬಲಗಾಲನ್ನು ಆದಿ ಶೇಷನ ಮೇಲೆ ಎತ್ತರಿಸಿ ಇಟ್ಟಿದ್ದರೆ ಎಡಗಾಲನ್ನು ನೆಲದ ಮೇಲೆ ಊರಿದ್ದಾನೆ. ಅವನ ಈ ಸಾಹಸವನ್ನು ನೋಡಿ ದೇವತೆಗಳು ಧನ್ಯವಾದಗಳನ್ನರ್ಪಿಸಲು ನಮಸ್ಕರಿಸುತ್ತಿದ್ದಾರೆ. ಆದರೆ ಅವರ ನಮಸ್ಕಾರ ಸ್ವೀಕರಿಸಲು ಅವನಿಗೆ ಸಮಯವಿಲ್ಲ. ಅವನಿಗೆ ತನ್ನ ಪ್ರಿಯಪತ್ನಿಯ ಯೋಗಕ್ಷೇಮದ ಚಿಂತೆ. ಎರಡೂ ಕೈಗಳಿಂದ ಭೂದೇವಿಯನ್ನು ಹಿಡಿದು ತನ್ನ ಬಲತೊಡೆಯ ಮೇಲೆ ಕೂರಿಸಿಕೊಂಡಿದ್ದಾನೆ. ಅವನ ಎಡಗೈ ಭೂ ದೇವಿಯ ಕಾಲನ್ನು ಭದ್ರವಾಗಿ ಹಿಡಿದಿದ್ದು ಬಲಗೈ ಆಕೆಯ ಹಿಂಭಾಗವನ್ನು ಬಳಸಿದೆ. ತನ್ನ ಮೂತಿಯಿಂದ ದೇವಿಯ ಸ್ತನಗಳನ್ನು ಪ್ರೇಮದಿಂದ ಸ್ಪರ್ಷಿಸುತ್ತಾ ಇದ್ದಾನೆ ( ಏನೂ ತೊಂದರೆ ಅಗಿರಲಿಲ್ಲ ತಾನೆ ಅನ್ನುವಂತೆ) ಇವರ ಏಕಾಂತಕ್ಕೆ ಅಡ್ದಿಯಾಗದಂತೆ ಅವನ ಎಡಬದಿಯಲ್ಲಿರುವ ಬ್ರಹ್ಮ (ಎಡ ಬಲದ ಮುಖಗಳನ್ನು ಸ್ಪಷ್ಟವಾಗಿ ಕೆತ್ತಿಲ್ಲ,) ಕೆಲವರ ಪ್ರಕಾರ ಅದು ಪ್ರಜಾಪತಿ .( ಆತನೂ ಸೃಷ್ಟಿಕಾರ್ಯ ನಡೆಸುವವನು ) ಹುಸಿನಗೆ ಬೀರುತ್ತಾ ಇತ್ತ ತಿರುಗಿದ್ದಾನೆ , ಬಲಬದಿಯಲ್ಲಿರುವ ಇಂದ್ರ ತಲೆ ತಗ್ಗಿಸಿದ್ದಾನೆ. ಮೇಲ್ಭಾಗದಲ್ಲಿರುವ ಸೂರ್ಯನಿಗೆ ತಮ್ಮ ಪ್ರೇಮ ಸಲ್ಲಾಪ ಕಾಣದಂತೆ ವರಾಹನೇ ತನ್ನ ಕೈಲಿರುವ ಸುದರ್ಶನ ಚಕ್ರವನ್ನು ಅಡ್ದ ಹಿಡಿದಿರುವಂತೆ ಶಿಲ್ಪಿ ಕೆತ್ತಿದ್ದಾನೆ. ಭೂಮಿಯಾದರೋ ತನ್ನ ಸ್ತ್ರೀ ಸಹಜ ನಾಚಿಕೆ ಸಂಕೋಚಗಳಿಂದ ತಲೆಯನ್ನು ಅರೆ ತಗ್ಗಿಸಿ ಪ್ರೇಮ ಕೃತಜ್ಞತೆಗಳಿಂದ ತನ್ನ
ಪತಿಯನ್ನು ನೋಡುತ್ತಿದ್ದಾಳೆ. ಪತಿರಾಯನ ಕೈಲಿ ತನ್ನ ಕಾಲು ಹಿಡಿಸಿಕೊಂಡ ಮೊದಲ ಹೆಣ್ಣಿರಬೇಕು ಆಕೆ  ಅವಳ ದೇಹ ಭಂಗಿ, ನೋಟಗಳು ಸಂಕೋಚ , ಪ್ರೇಮ , ಕೃತಜ್ಙತೆಗಳ ಮಿಶ್ರಣ.
ಎರಡನೆಯ ಚಿತ್ರ ಬದಾಮಿಯ ಗುಹಾ ಕೆತ್ತನೆ. ಇಲ್ಲಿ ಭೂದೇವಿ ಕಷ್ಟದಿಂದ ಪಾರಾದೆ ಸಾಕಪ್ಪಾ ಸಾಕು ಎನ್ನುವಂತೆ ವರಾಹನ ಸೊಂಡಿನ ಮೇಲೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಳೆ. ಆಕೆಯ ಮುಖದಲ್ಲಿ ಈಗ ನಿರ್ಭಯ. ವರಾಹ ಅವಳಿಗೆ ಎಲ್ಲಿ ನೋವಾಗುವುದೋ ಎಂಬಂತೆ ತಾವರೆ ಹೂವಿನ ಸಹಿತ ಆಕೆಯನ್ನು ಮೇಲೆತ್ತಿದ್ದಾನೆ. ಅವನ ಮುಖದಲ್ಲಿ ಪ್ರೇಮಾರಾಧನಾ ಭಾವ. ಆದರೆ ಶಿಲ್ಪಿ ವರಾಹನ ಅಂಗ ಪ್ರಮಾಣತೆಯಲ್ಲಿ ಅಷ್ಟು ಲಕ್ಷ್ಯವಹಿಸಿದಂತಿಲ್ಲ.
ರಾಜೇಶ್ ಶ್ರೀವತ್ಸ

ಶಿಲ್ಪಕಲೆ; ೪ - ರಾಜೇಶ್ ಶ್ರೀವತ್ಸ


ಖಟ್ವಾಂಗಧಾರಿಣಿ ಚಾಮುಂಡಾ:
ದುರ್ಗಾ ಸಪ್ತಶತಿಯ ಏಳನೆಯ ಅಧ್ಯಾಯದಲ್ಲಿ ಚಾಮುಂಡಿಯ ಕಥೆ ಬರುತ್ತದೆ. ಶುಂಭ-ನಿಶುಂಭರ ಸೇವಕರಾದ ಚಂಡ ಮುಂಡರು ದೇವಿಯನ್ನು ಬಂಧಿಸಿ ಕರೆದೊಯ್ಯಲು ಬರುತ್ತಾರೆ. ಆಗ ಕೋಪದಿಂದ ಹುಬ್ಬುಗಂಟ್ಟಿಕ್ಕಿದ ದುರ್ಗೆಯ ಮುಖದಿಂದ ಕಡುಗಪ್ಪಿನ ಶಕ್ತಿದೇವಿಯೊಬ್ಬಳು ಆವಿರ್ಭವಿಸುತ್ತಾಳೆ.ಆಕೆ ಕೈಗಳಲ್ಲಿ ಕತ್ತಿ , ಹಗ್ಗ, ಖಟ್ವಾಂಗ ಮೊದಲಾದ ಅಯುಧಗಳನ್ನು ಕೈಗಳಲ್ಲಿ ಹಿಡಿದಿರುತ್ತಾಳೆ. ಹುಲಿಚರ್ಮವನ್ನು ಧರಿಸಿರುತ್ತಾಳೆ. ಮೈಯಲ್ಲಿ ಮಾಂಸವಿಲ್ಲದ ಅಸ್ಥಿ ಪಂಜರದಂತೆ ಕಾಣಿಸುವ

ಜೋಲು ಸ್ತನಗಳ ಶುಷ್ಕದೇಹಿ ಆಕೆ, ಜಟೆಗಟ್ಟಿದ ಕೆಂಪು ಕೂದಲು, ಕತ್ತಿನ ಸುತ್ತ ತಲೆಬುರುಡೆಗಳ ಮಾಲೆ, ಗುಳಿಬಿದ್ದ ಬೆಕ್ಕಿನ ಕಣ್ಣುಗಳು, ಕೋರೆದಾಡೆಗಳು ಹೊರ ಚಾಚಿರುವ ಅಗಲವಾದ ಬಾಯಿ, ಮುಖದಲ್ಲಿ ವಿಕಟ ನಗೆ. ಅವಳು ಏರಿರುವ ವಾಹನ ಬೇತಾಳ ಹೊಕ್ಕಿರುವ ಶವ. ಅದು ಆಕೆಯನ್ನೆತ್ತಿ ಎಲ್ಲಿಂದರಲ್ಲಿಗೆ ಹಾರಾಡುತ್ತದೆ. ಅವಳನ್ನು ನೋಡಿಯೇ ಎಷ್ಟೋ ಶತ್ರು ರಾಕ್ಷಸರು ಎದೆಯೊಡೆದು ಸಾಯುತ್ತಾರೆ. (ಇದನ್ನು ಓದಿಯೇ ನಮ್ಮ ಎದೆ ಒಡೆಯುತ್ತದೆ ಬಿಡಿ  ) ರಾಕ್ಷಸ ಸೇನೆಯನ್ನು ಕ್ಷಣ ಮಾತ್ರದಲ್ಲಿ ನಿರ್ನಾಮ ಮಾಡಿದ ಆಕೆ ಚಂಡ- ಮುಂಡರ ತಲೆ ಕತ್ತರಿಸಿ ದೇವಿಯ ಬಳಿ ತರುತ್ತಾಳೆ. ಅವಳ ಶೌರ್ಯಕ್ಕೆ ಮೆಚ್ಚಿದ ದುರ್ಗೆ ಅವಳನ್ನು ಚಾಮುಂಡಾ ಎಂದು ಕರೆಯುತ್ತಾಳೆ. ಮುಂದಿನ ಅಧ್ಯಾಯಗಳಲ್ಲಿ ಆಕೆ ರಕ್ತಬೀಜನನ್ನು ನಿರ್ಮೂಲ ಮಾಡಿದ ಕತೆ ಬರುತ್ತದೆ. ವರಾಹ ಹಾಗು ಪದ್ಮ ಪುರಾಣಗಳಲ್ಲಿ ಅಂಧಕಾಸುರ ವಧೆಯ ಕಥೆಗಳಲ್ಲೂ ಈಕೆಯ ಪ್ರತಾಪ ವರ್ಣನೆ ಇದೆ.
ಸಪ್ತಮಾತೃಕೆಯರ ಶಿಲ್ಪಗಳ ಸಾಲಿನಲ್ಲಿ ಯಾವಾಗಲೂ ಕೊನೆಯಲ್ಲಿ ಇರುವ ದೇವತೆ ಈ ಚಾಮುಂಡಿ.( ಸಪ್ತ ಮಾತೃಕೆಯರ ಸಾಲು ಯಾವಾಗಲೂ ಬ್ರಾಹ್ಮಿ , ಮಾಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ,

ಚಾಮುಂಡಾ ಇದೇ ಕ್ರಮದಲ್ಲಿರುತ್ತದೆ) ಶಿಲ್ಪಶಾಸ್ತ್ರಗಳು ಅವಳ ಭೀಕರ ರೂಪ ಸಾಲದು ಎಂಬಂತೆ ಇನ್ನಷ್ಟು ಭೀಕರತೆಯನ್ನು ಸೇರಿಸಲು ಕಿವಿಯಲ್ಲಿ ಚೇಳಿನ ಆಭರಣ, ಸರ್ಪಗಳ ಸ್ತನಬಂಧ, ಮೂಳೆಗಳ ಗೆಜ್ಜೆ ಹಾಗು ನಡುಕಟ್ಟು, ಮೈತುಂಬಾ ಹಾವುಗಳ ಆಭರಣ, ತಲೆಯಲ್ಲಿ ಹೂವಿನಂತೆ ಜೋತು ಬಿದ್ದಿರುವ ಬಾವಲಿ. ಜೇಡ.... ಇತ್ಯಾದಿಗಳ ಅಲಂಕಾರವನ್ನು ವಿಧಿಸುತ್ತದೆ. ಸಪ್ತಮಾತೃಕೆಯರಲ್ಲಿ ಇತರರಿಗಿಲ್ಲದ ಮನ್ನಣೆ, ಅದೃಷ್ಟ ಆಕೆಯದ್ದು. ಹೇಗೆಂದರೆ ಆಕೆ ಸಪ್ತಮಾತೃಕೆಯರ ಸಾಲಿನಲ್ಲೂ ಅಲ್ಲದೆ ದೇಗುಲಗಳ ಗೋಡೆ ಕಂಬಗಳ ಮೇಲೆ ಪ್ರತ್ಯೇಕವಾಗಿ ಕೂಡ ಕಾಣಿಸಿಕೊಳ್ಳುತ್ತಾಳೆ. ಅಲ್ಲದೆ ಆಂಧ್ರದ ಅಲ್ಲಂಪುರದಲ್ಲಿರುವ ಜೋಗುಳಾಂಬ, ಶಿವಗಂಗೆಯ ಬೆಟ್ಟದ ಮೇಲಿರುವ ಸ್ವರ್ಣಾಂಬ (ಹೊನ್ನಾದೇವಿ) ದೇವಾಲಯಗಳು ಆಕೆಗೆಂದೇ ಅರ್ಪಿತವಾದವುಗಳು. ( ಹೆಸರು ಚಾಮುಂಡೇಶ್ವರಿ ಎಂದಿದ್ದರೂ ಮೈಸೂರು ಚಾಮುಂಡೇಶ್ವರಿಯ ದೇವಸ್ಥಾನ ಮಹಿಷಾಸುರಮರ್ದಿನಿ ಸ್ವರೂಪದ ದುರ್ಗೆಯದ್ದು) . ತನ್ನ ಶವವಾಹನದ ಮೇಲೆ ನಿಂತಿರುವ, ಕುಳಿತಿರುವ , ನರ್ತಿಸುತ್ತಿರುವ ವಿಗ್ರಹಗಳು ಕಾಣಸಿಗುತ್ತವೆ. ಚತುರ್ಭುಜ, ಅಷ್ಟಭುಜ , ದಶಭುಜಗಳ ವಿಗ್ರಹಗಳು ಕಾಣಸಿಗುತ್ತವೆ. ಕೈಯಲ್ಲಿ ಖಡ್ಗ, ಚೂರಿ, ತ್ರಿಶೂಲ, ಡಮರುಗ, ಪಾನಪಾತ್ರೆ, ಖಟ್ವಾಂಗ, ಕತ್ತರಿಸಿದ ತಲೆಗಳನ್ನು ಹಿಡಿದಿರುತ್ತಾಳೆ. ಕೆಲವು ವಿಗ್ರಹಗಳ ಕೈಗಳಲ್ಲಿ ನರ್ತನ ಮುದ್ರೆಗಳನ್ನು ಪ್ರದರ್ಶಿಸಿರುವುದೂ ಉಂಟು. ಹಳೇಬೀಡಿನ ವಿಗ್ರಹದಲ್ಲಿ ವಿಸ್ಮಯ ಮುದ್ರೆಯ ಪ್ರದರ್ಶನವಿದೆ. ಭಯಂಕರ ಬೇತಾಳಗಣಗಳು ವಾದ್ಯಗಳನ್ನು ನುಡಿಸುತ್ತಾ , ನರ್ತಿಸುತ್ತಾ ಆಕೆಯನ್ನು ಸುತ್ತುವರೆದಿರುತ್ತವೆ.


-------------------
ಖಟ್ವಾಂಗ ಒಂದು ಅನುಭವ ; ಉದ್ದವಾದ ಕೋಲಿನ ತುದಿಗೆ ತಲೆಬುರುಡೆಯನ್ನು ಸಿಕ್ಕಿಸಿರುವ ಯಕ್ಷಿಣಿ ದಂಡ( magic wand).ಪುರಾಣಗಳ ಪ್ರಕಾರ ಇದನ್ನು ಒಮ್ಮೆ ಬೀಸಿದರೆ ಶತ್ರುಗಳು ಮಂಕು ಕವಿದು ಬೀಳುವುದು, ರಕ್ತ, ಹಾವು- ಚೇಳುಗಳ ಮಳೆ ಸುರಿವ ಭ್ರಮೆ ಮೂಡುವುದು. ಶತ್ರುಗಳ ಚರ್ಮ ಸುಲಿಯುವುದು, ಅವರು ರಕ್ತಹೀನರಾಗುವುದು ಇತ್ಯಾದಿ ಪರಿಣಾಮಗಳಾಗುತ್ತವೆ.
ಕೊಲ್ಕೊತ್ತಾದಲ್ಲಿ ಇದನ್ನು ಹಿಡಿದುಕೊಂಡು ಓಡಾಡುವ ಬಾಬಗಳನ್ನು ನೋಡಿದ್ದೆ. ಕರುಣೋಮೋಯಿ ( ಕರುಣಾಮಯಿ ಕಾಳಿ) ದೇಗುಲದ ಬಳಿ ಒಮ್ಮೆ ಕುತೂಹಲದಿಂದ ನನ್ನ ಸ್ನೇಹಿತನೊಬ್ಬನೊಂದಿಗೆ ಹತ್ತಿರದಿಂದ ನೋಡಲು ನಡೆದೆ. ಅದು ಖಟ್ವಾಂಗವೆಂದು ಗೊತ್ತಿದ್ದರೂ ಅದೇನೆಂದು ಕೇಳಿದೆ. ಬಾಬ ಏನನ್ನೂ ಹೇಳದೆ ಮಣ ಮಣ ಮಂತ್ರ ಹೇಳುತ್ತಾ ಅದನೆತ್ತಿ ನಮ್ಮೆದುರು ಗಾಳಿಯಲ್ಲಿ ಆಡಿಸಿದ. ತಕ್ಷಣ ನನ್ನ ಸ್ನೇಹಿತ ಮೂರ್ಚೆ ಹೋಗಿ ಅಲ್ಲೇ ಉರುಳಿದ. ನನಗೇನೂ ಆಗಲಿಲ್ಲ, ಒಳಗೆ ಹೆದರಿಕೆಯಾಗುತ್ತಿದ್ದರೂ ಮಾತನಾಡದೆ ಅಲ್ಲೇ ನಿಂತಿದ್ದೆ. ಐದು ನಿಮಿಷಗಳ ಬಳಿಕ ನನ್ನ ಸ್ನೇಹಿತ ಮೇಲೆದ್ದ ಮೇಲೆ ಬಾಬ ತನ್ನ ಚೀಲದಿಂದ ಹುಣಸೆಕಾಯಿಗಳನ್ನು ತೆಗೆದು ಕೊಟ್ಟ. ನಮಸ್ಕರಿಸಲು ಹೋದ ನನ್ನ ಸ್ನೇಹಿತನನ್ನು ನಿನ್ನ ನಮಸ್ಕಾರ ಯಾರಿಗೆ ಬೇಕು? ಒಳಗೆ ಹೋಗಿ ತಾಯಿಗೆ ನಮಸ್ಕರಿಸು ಎಂದು ಗದರಿಸಿದ. ನಾವು ಮಕ್ಕಳ ಹಾಗೆ ರುಚಿಯಾದ ಹುಣಸೆಕಾಯಿ ತಿನ್ನುತ್ತಾ ಹಿಂತಿರುಗಿದೆವು.

Thursday, September 18, 2014

ಜಿಜ್ಙಾಸೆ


ಭರತ ಎಂದರೆ ಯಾರು ?
ನಮ್ಮ ಇತಿಹಾಸ/ಪುರಾಣದಲ್ಲಿ ಎಷ್ಟು 'ಭರತ'ರಿದ್ದಾರೆ?
ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಬಂದಿದ್ದು ಇವರಲ್ಲಿ ಯಾರಿಂದ?



೧ . ಅಗ್ನಿಯ ಮಗ ೨.,ಋಷಭ ದೇವನ ಮಗ ೩ ಶಕುಂತಲೆ-ದುಷ್ಯಂತರ ಮಗ ೪.ಧಶರಥನ ಮಗ ೫. ನಾಟ್ಯ ಶಾಸ್ತ್ರವನ್ನು ಬರೆದವನು. ಇವರಲ್ಲಿ ಚಕ್ರವರ್ತಿಗಳಾಗಿ ಮೆರೆದವರು ೧ . ಋಷಭದೇವನ ಮಗ ೨ ದುಷ್ಯಂತನ ಮಗ. ಇವರಲ್ಲಿ ಪುರಾತನನಾದವನು ಋಷಭದೇವ ಹಾಗು ಜಯಂತಿಯರ ಮಗನಾದ ಭರತ. ಭಾಗವತ , ವಿಷ್ಣು ಪುರಾಣಗಳ ಪ್ರಕಾರ ಇವನು ಆಳಿದ ಭೂ ಭಾಗವೇ ಭರತವರ್ಷ ಅಥವ ಭಾರತ. (ಜೈನ ಧರ್ಮದಲ್ಲಿ ಬರುವ ಬಾಹುಬಲಿಯ ಸೋದರ ಭರತನೂ ಇವನೆ). ’ಅಜನಾಭಂ ನಾಮೈತದ್ವರ್ಷಂ ಭಾರತಮಿತಿ ಯತ ಆರಭ್ಯ ವ್ಯಪದಿಶಂತಿ" ( ಭಾಗವತ ಪಂಚಮ ಸ್ಕಂದ ಏಳನೇ ಅಧ್ಯಾಯ ಮೂರನೇ ಶ್ಲೋಕ ; ಅಜನಾಭವರ್ಷವೆಂದು ಹೆಸರಾಗಿದ್ದ ಈ ವರ್ಷ(ಭೂ ಭಾಗಕ್ಕೆ)ಕ್ಕೆ ಭರತ ಚಕ್ರವರ್ತಿಯ ಕಾಲದಿಂದ ಭರತವರ್ಷವೆಂದು ಹೆಸರಾಯ್ತು.). ಇವನ ನಂತರ ಬಂದ ದುಷ್ಯಂತನ ಮಗ ಚಕ್ರವರ್ತಿಯಾಗಿ ಇಡೀ ಭೂಮಂಡಲವನ್ನಾಳಿದ . ಅವನಿಂದ ಆ ವಂಶಕ್ಕೆ ಭರತವಂಶವೆಂದು ಹೆಸರಾಯಿತೆಂದು ಹೇಳಿದ್ದರೂ ಅವನಿಂದ ಈ ಭೂ ಭಾಗಕ್ಕೆ ಭಾರತವೆಂದು ಹೆಸರಾಯ್ತೆಂದು ಭಾಗವತದಲ್ಲಿ ಹೇಳಿಲ್ಲ.

ಋಷಭನ ಮಗ ಭರತ ವಾನಪ್ರಸ್ಥಕ್ಕೆ ಹೋದ ಮೇಲೆ ಭರತ ಮುನಿಯೆನಿಸಿಕೊಂಡ. ಜಿಂಕೆಮರಿಯೊಂದರೆ ಮೋಹಕ್ಕೆ ಬಿದ್ದು ಮರಣ ಹೊಂದಿದ. ನಂತರ ಜಿಂಕೆಯಾಗಿ ಜನ್ಮ ತಾಳಿದ. ಮುಂದಿನ ಜನ್ಮದಲ್ಲಿ ಅಂಗಿರಸ ಮುನಿಗೆ ಭರತನೆಂಬ ಮಗನಾಗಿ ಮತ್ತೆ ಜನ್ಮತಾಳಿದ. ಅವನೇ ಜಡ ಭರತ


ರಾಜೇಶ್ ಶ್ರೀವತ್ಸ, 



ಸೋಮೇಶ್ವರ ಶತಕ

ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ |
ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ ||
ಕೆಲವಂ ಸಜ್ಜನಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ |
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೧||


ಹಲವಾರು ನದಿಗೊ ಸೇರಿ ಸಮುದ್ರ ಹೇಂಗೆ ಉಂಟಾವುತ್ತೋ ಹಾಂಗೇ, ನಮ್ಮ ಜ್ಞಾನ ಕೂಡಾ.
ಕೆಲವು ವಿಶಯಂಗಳ ನಾವು ಗೊಂತಿಪ್ಪವರಿಂದ ಕಲಿತ್ತು, ಇನ್ನು ಕೆಲವು ಶಾಸ್ತ್ರಂಗಳ ಕೇಳಿ ತಿಳ್ಕೊಳುತ್ತು, ಇನ್ನು ಕೆಲವು ಮಾಡುವ ಕೆಲಸಂಗಳ ನೋಡಿ ಅನುಭವ ತೆಕ್ಕೊಳ್ತು, ಇನ್ನು ಕೆಲವರ ನಮ್ಮ ಸ್ವ ಬುದ್ಧಿಂದ ಕಲಿತ್ತು. ಇನ್ನು ಕೆಲವು ಒಳ್ಳೆ ಜೆನರ ಸಹವಾಸಂದಲೂ ಕಲಿತ್ತು. ಹೀಂಗೆ ಬೇರೆ ಬೇರೆ ಮೂಲಂಗಳಿಂದ ತಿಳ್ಕೊಂಡೇ ಸರ್ವಜ್ಞ ಆವುತ್ತು.



ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ|
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೨||

ಕೈಲಿ ಕನ್ನಾಟಿ ಇಪ್ಪಗ ಅದರ ಬಿಟ್ಟು ನೀರಿಲ್ಲಿ ಮೋರೆ ನೋಡ್ತವಾ?  ಹಾಲಿಂಗಾಗಿ ಕಾಮಧೇನು ಇಪ್ಪಗ ಬೇರೆ ಹಸುಗಳ ಸಾಂಕುತ್ತವೋ? ಗುಣವಂತರು ಹಾಲು ಉಂಡ ಮತ್ತೆ ಬೇರೆ ಎಂತಾರೂ ಉಣ್ಣುತ್ತವೋ? ಗಿಳಿಯ ಮಾತಿಲ್ಲಿ ಇಪ್ಪ ಇಂಪಿಂದ ಹೆಚ್ಚಿನದ್ದು ಕಾಕೆಯ ಕೂಗಿಲ್ಲಿ ಇದ್ದಾ? ರಂಭೆಯ ನೃತ್ಯ ನೋಡಿದ ಮತ್ತೆ ಡೊಂಬರಾಟ  ನೋಡ್ತವಾ? ಸ್ನೇಹಿತರಿಂದ ಹೆಚ್ಚಿನ ದೊಡ್ಡ ವಸ್ತು ಎಂತಾರೂ ಇದ್ದಾ?
(ಮುಕುರಂ= ಕನ್ನಾಟಿ)



ಕವಿಯೇ ಸರ್ವರೊಳುತ್ತಮಂ ಕನಕವೇ ಲೋಹಂಗಳೊಳ್ ಶ್ರೇಷ್ಠ ಜಾ |
ಹ್ನವಿಯೇ ತೀರ್ಥದೊಳುನ್ನತಂ ಗರತಿಯೇ ಸ್ತ್ರೀ ಜಾತಿಯೊಳ್ ವೆಗ್ಗಳಂ ||
ರವಿ ಮುಖ್ಯಂ ಗ್ರಹ ವರ್ಗದೊಳ್ ರಸಗಳೊಳ್ ಶೃಂಗಾರವೇ ಬಲ್ಮೆ ಕೇಳ್ |
ಶಿವನೇ ದೇವರೊಳುತ್ತಮಂ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೩||


ಇದರಲ್ಲಿ ಕವಿ, ಆರು ಶ್ರೇಷ್ಠ ಹೇಳಿ ವ್ಯಾಖ್ಯಾನ ಮಾಡ್ತ°.
ಮನುಷ್ಯರಲ್ಲಿ ಕವಿ, ಲೋಹಂಗಳಲ್ಲಿ ಚಿನ್ನ, ತೀರ್ಥಂಗಳಲ್ಲಿ (ನೀರಿಲ್ಲಿ) ಗಂಗಾಜಲ, ಹೆಂಗಸರಲ್ಲಿ ಪತಿವ್ರತೆ, ಗ್ರಹಂಗಳಲ್ಲಿ ಸೂರ್ಯ, ರಸಂಗಳಲ್ಲಿ ಶೃಂಗಾರ ರಸ, ದೇವತೆಗಳಲ್ಲಿ ಶಿವನೇ ಶ್ರೇಷ್ಠ


ರವಿಯಾಕಾಶಕೆ ಭೂಷಣಂ ರಜನಿಗಾ ಚಂದ್ರಂ ಮಹಾ ಭೂಷಣಂ |
ಕುವರಂ ವಂಶಕೆ ಭೂಷಣಂ ಸರಸಿಗಂಭೋಜಾತಗಳ್ ಭೂಷಣಂ ||
ಹವಿ ಯಜ್ಞಾಳಿಗೆ ಭೂಷಣಂ ಸತಿಗೆ ಪಾತಿವ್ರತ್ಯವೇ ಭೂಷಣಂ |
ಕವಿಯಾಸ್ಥಾನಕೆ ಭೂಷಣಂ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೪||

ಇದರಲ್ಲಿ ಕವಿ, ಎಲ್ಲೆಲ್ಲಿ ಆರು ಭೂಷಣಪ್ರಾಯರಾಗಿ ಇರ್ತವು ಹೇಳ್ತ°:
ಆಕಾಶಕ್ಕೆ ಸೂರ್ಯನೂ, ಇರುಳಿಂಗೆ ಚಂದ್ರನೂ, ವಂಶಕ್ಕೆ ಮಗನೂ, ಸರೋವರಕ್ಕೆ ತಾವರೆಯೂ, ಯಜ್ಞಕ್ಕೆ ಹವಿಸ್ಸೂ, ಹೆಂಗಸರಿಂಗೆ ಪಾತಿವ್ರತ್ಯವೂ, ರಾಜರ ಸಭೆಗೆ ಕವಿಯೂ ಅಲಂಕಾರ.


ಹರನಿಂದುರ್ವಿಗೆ ದೈವವೇ ಕಿರಣಕಿಂದುಂಬಿಟ್ಟು ಸೊಂಪುಂಟೆ ಪೆ|
ತ್ತರಿಗಿಂತುಂಟೆ ಹಿತರ್ಕಳುಂ ಮಡದಿಯಿಂ ಬೇರಾಪ್ತರಿನ್ನಿರ್ಪರೇ ||
ಸರಿಯೇ ವಿದ್ಯಕೆ ಬಂಧು ಮಾರನಿದಿರೊಳ್ ಬಿಲ್ವಾಳೆ ಮೂಲೋಕದೊಳ್
ಗುರ್ವಿಂದುನ್ನತ ಸೇವ್ಯನೇ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೫||

ಶಿವನಿಂದ ಮೇಲ್ಪಟ್ಟು ದೊಡ್ಡ ದೇವರು ಆರೂ ಇಲ್ಲೆ, ಚಂದ್ರನ ಕಿರಣಂದ ಹೆಚ್ಚಿನ ತಂಪಿನ ಕಿರಣ ಬೇರೆ ಯಾವುದೂ ಇಲ್ಲೆ.
ನಮ್ಮ ಹೆತ್ತವರಿಂದ ಹೆಚ್ಚಿನ ಹಿತ ಬಯಸುವವು ಆರೂ ಇಲ್ಲೆ. ಗ್ರಹಸ್ಥರಿಂಗೆ ಹೆಂಡತಿಗಿಂತ ಹೆಚ್ಚಿನ ಆಪ್ತರು ಬೇರೆ ಆರೂ ಇಲ್ಲೆ.
ವಿದ್ಯೆಗಿಂತ ಹೆಚ್ಚಿನ ನೆಂಟರು ಆರೂ ಇಲ್ಲೆ. ಮನ್ಮಥನ ಮೀರುಸುವ ಬಿಲ್ಲಾಳುಗೊ ಆರೂ ಇಲ್ಲೆ. ಸೇವೆ ಮಾಡುಸಲೆ ಗುರುವಿಗಿಂತ ಉತ್ತಮರು ಆರೂ ಇಲ್ಲೆ.


Krupe : http://oppanna.com/

ಶಿಲ್ಪಕಲೆ :೩ - ರಾಜೇಶ್ ಶ್ರೀವತ್ಸ

ಐಹೊಳೆಯ ಗಜ ಪೃಷ್ಟಾಕಾರದ (ಅರ್ಧ ವೃತ್ತಾಕಾರದ ಹಿಂಬದಿಯ) ದುರ್ಗಾ ದೇವಾಲಯ ಚಾಳುಕ್ಯರ ವಿಶಿಷ್ಟ ವಾಸ್ತು ಪ್ರಯೋಗ. ಅದು ನಿಜವಾಗಿ ವಿಷ್ಣುವಿನ ದೇಗುಲ . ದುರ್ಗದ (ಕೋಟೆಯ) ದೇವಾಲಯ ದುರ್ಗಾ ದೇವಾಲಯವಾಗಿ ಆಡು ಮಾತಿನಲ್ಲಿ ಬಂದು ಬಿಟ್ಟಿದೆ. ಎತ್ತರ ಜಗುಲಿಯ ಮೇಲೆ ದೇವಾಲಯವನ್ನು ಸುತ್ತುವರೆದಿರುವ ಪ್ರದಕ್ಷಿಣಾ ಪಥದ ಹೊರಾಂಗಣವಿದೆ. ದೇವಾಲಯದ ಗೋಡೆಯ ಸುತ್ತಲೂ ರಚಿಸಿರುವ ಗೂಡುಗಳಲ್ಲಿ ಹರಿಹರ, ಲಕ್ಷ್ಮೀನಾರಾಯಣ, ನರಸಿಂಹ, ವರಾಹ, ವೃಷಭವಾಹನ, ಗರುಡಾರೂಢ, ತ್ರಿವಿಕ್ರಮ, ಅರ್ಧನಾರೀಶ್ವರ ಹಾಗು ಮಹಿಷಾಸುರ ಮರ್ದಿನಿ ವಿಗ್ರಹಗಳಿವೆ.
ಇಲ್ಲಿರುವ ಮಹಿಷಾಸುರ ಮರ್ದಿನಿಯ ಶಿಲ್ಪವು ಬಹಳ ಪ್ರಸಿದ್ಧವಾದದ್ದು. ಗೂಗ‌‌‌ಲ್ನಲ್ಲಿ ಮಹಿಷಾಸುರ ಮರ್ದಿನಿ ಶಿಲ್ಪವೆಂದು ಹುಡುಕಿದರೆ ಕೇವಲ ಇದರ ಚಿತ್ರಗಳೇ ಕಾಣಿಸುವಷ್ಟು.
ಶಿಲ್ಪದಲ್ಲಿ ಮಹಿಷಾಸುರನನ್ನು ಕೋಣನ ರೂಪದಲ್ಲಿ ಬಿಂಬಿಸಲಾಗಿದೆ. ಅವನನ್ನು ತ್ರಿಶೂಲದ ಬುಡದದಿಂದ ತಿವಿಯುತ್ತಿರುವಂತೆ ದೇವಿಯನ್ನು ತೋರಿಸಲಾಗಿದೆ. ದೇವಿ ಎಂಟು ಕೈಗಳನ್ನು ಹೊಂದಿದ್ದು ಎಡಗಾಲು ಹಾಗು ಎಡ ಭಾಗದ ೪ ಕೈಗಳು ಈಗ ಭಿನ್ನವಾಗಿವೆ. ಬಲಕೈಗಳಲ್ಲಿ ತ್ರಿಶೂಲ, ಚಕ್ರ, ಬಾಣ, ಖಡ್ಗ ಗಳನ್ನೂ ಎಡಗೈಯಲ್ಲಿ ಘಂಟೆ, ಶಂಖಗಳನ್ನು ಹಿಡಿದಿದ್ದು ಉಳಿದೆರಡು ಕೈಗಳು ಭಿನ್ನವಾಗಿವೆ. ಬಲಗಾಲನ್ನು ನೆಲದ ಮೇಲೆ ಊರಿನಿಂತಿದ್ದು ಎಡಗಾಲನ್ನು ಕೋಣನ ಬೆನ್ನಿನ ಮೇಲೆ ಊರಿದ್ದಾಳೆ.
ಕೋಣವು ತಲೆಯನ್ನು ನೆರವಾಗಿ ಮೇಲಕ್ಕೆತ್ತಿದ್ದು ತನ್ನನ್ನು ಅದುಮಿ ಕೆಳಗೆ ಒತ್ತಿರುವ ದೇವಿಯ ಕಾಲಿನಿಂದ ಬಿಡುಗಡೆ ಹೊಂದಲು ತುದಿಕಾಲುಗಳ ಮೇಲೆ ನಿಂತು ಮೇಲೇಳಲು ಪ್ರಯತ್ನಿಸುತ್ತಿದೆ. ಬಾಲವು ಅರ್ಧವೃತ್ತಾಕಾರದಲ್ಲಿ ಸೆಟೆದುಕೊಂಡಿದ್ದು ಕುತ್ತಿಗೆಯನ್ನು ಇರಿಯುತ್ತಿರುವ ಶೂಲದ ನೋವು ರಾಕ್ಷಸನ ಬಾಲದ ಮೂಲಕ ವ್ಯಕ್ತವಾಗುತ್ತಿದೆ. ಕೋಣದ ಕೋಡುಗಳು ನೈಜವಾಗಿದ್ದು ಅದರ ಮೇಲೆ ಗೆರೆಗಳನ್ನೂ ಕೆತ್ತಿದ್ದಾನೆ ಶಿಲ್ಪಿ. ಕುತ್ತಿಗೆಯ ಸುಕ್ಕಿನ ಸುರುಳಿ ಗೆರೆಗಳು, ಪುಷ್ಟವಾದ ಮಾಂಸ ಖಂಡಗಳು ಕಲಾವಿದನು ಪ್ರಾಣಿ ಅಂಗರಚನಾ ಶಾಸ್ತ್ರವನ್ನು ಅಭ್ಯಾಸಮಾಡಿರುವುದಕ್ಕೆ ಸಾಕ್ಷಿಯಾಗಿದ್ದರೆ ಕೋಣನ ಚಡಪಡಿಕೆಯನ್ನು ಸಮರ್ಥವಾಗಿ ಕೆತ್ತನೆಯಲ್ಲಿ ವ್ಯಕ್ತಪಡಿಸಿರುವುದು ಪ್ರಾಣಿಯ ನಡುವಳಿಕೆಯನ್ನು ಅಭ್ಯಾಸ ಮಾಡಿರುವುದಕ್ಕೆ ಸಾಕ್ಷಿ.
ದುರ್ಗೆಯು ಸೊಂಟದಿಂದ ಮೊಣಕಾಲಿನವರೆಗೆ ತೆಳುವಾದ ಮೈಗಂಟಿದಂಟಿರುವ ವಸ್ತ್ರವನ್ನು ಧರಿಸಿದ್ದು ಸಕಲಾಭರಣ ಭೂಷಿತೆಯಾಗಿದ್ದು ಅಡಿಯಿಂದ ಮುಡಿಯವರೆಗೆ ಆಭರಣಗಳಿಂದ ಅಲಂಕರಿಸಲ್ಪಟ್ತಿದ್ದಾಳೆ. ತಲೆಕೂದಲನ್ನು ಮುಕುಟದಂತೆ ಎತ್ತಿಕಟ್ಟಿದ್ದು ಬಾಸಿಂಗ, ಕಿರೀಟಗಳಿಂದ ಅಲಂಕರಿಸಲಾಗಿದೆ. ಬಲಕಿವಿಯಲ್ಲಿ ಸಣ್ಣ ಕುಂಡಲ, ಎಡ ಕಿವಿಯಲ್ಲಿ ದೊಡ್ದ ಕರ್ಣಪೂರವನ್ನು. ಧರಿಸಿದ್ದಾಳೆ. ಕತ್ತಿನಲ್ಲಿ ವೈಜಯಂತಿಮಾಲೆ ಹಾಗು ಮುತ್ತಿನ ಮಾಲೆಗಳು ಹಾಗು ಕೈಯಲ್ಲಿ ಧರಿಸಿರುವ ಕಡಗಗಳ ಮೇಲೆ ಸೂಕ್ಶ್ಮ ಹೂವಿನ ಕೆತ್ತನೆಗಳಿವೆ.
ಶಿಲ್ಪದ ಹೆಚ್ಚುಗಾರಿಕೆ ಇರುವುದು ದೇವಿಯು ಅಂಗ ಸೌಷ್ಠವದಲ್ಲಿ ಹಾಗು ನಿಂತಿರುವ ಭಂಗಿಯಲ್ಲಿ ತುಂಬಿರುವ ಕ್ರಿಯಾಶೀಲತೆಯಲ್ಲಿ. ನೀಳವಾದ ಕೈ- ಕಾಲುಗಳು, ಸ್ಥಿರವಾದ ಸ್ತನಗಳು, ತೆಳುವಾದ ಉದರ ಆರೋಗ್ಯಪೂರ್ಣ ಯೋಧೆಯ ದೇಹ. ತ್ರಿಶೂಲ ಹಾಗು ಘಂಟೆಯನ್ನು ಹಿಡಿದಿರುವ ಕೈಗಳನ್ನು ಉತ್ಸಾಹದಿಂದ ಮೇಲಕ್ಕೆ ಎತ್ತಿ ಹಿಡಿದು ವಿಜಯವನ್ನು ಸಾರುತ್ತಿದ್ದಾಳೆ. ಕಾಲಕೆಳಗೆ ಬಿದ್ದಿರುವ ಮಹಿಷನ ಕಡೆ ಆಕೆಗೆ ಲಕ್ಷ್ಯವೇ ಇಲ್ಲ . ವಿಜಯವಿನ್ನು ನನ್ನದೇ ಎಂಬ ಆತ್ಮವಿಶ್ವಾಸ ಆಕೆಯ ಅಗಲವಾದ ಕಣ್ಣಿನಲ್ಲಿ ಎದ್ದು ಕಾಣುತ್ತಿದೆ. ತಲೆಯ ಹಿಂದೆ ಕೆತ್ತಿರುವ ಪ್ರಭಾವಳಿ ದೇವಿಗೆ ಅಲೌಕಿಕ ದೈವೀಕಳೆಯನ್ನು ತುಂಬಿದೆ.
ದೇವಿಯ ಬಲ ಭಾಗದಲ್ಲಿರುವ ಸಿಂಹವು ಮಹಿಷನೆಡೆಗೆ ಘರ್ಜಿಸುತ್ತಾ ಭಯಂಕರ ಕಣ್ಣುಗಳಿಂದ ನೋಡುತ್ತ ಇದೆ. ಅದರ ಕೆದರಿದ ಕೇಸರಗಳ ಕೆತ್ತನೆ ಸಿಂಹಕ್ಕೆ ಜೀವಂತಿಕೆಯನ್ನು ತುಂಬಿದೆ. ಭಿನ್ನವಾಗಿದ್ದರೂ ಶಿಲ್ಪದ ಎದುರು , ಎಡ, ಬಲ ಯಾವ ಕಡೆ ನಿಂತು ನೋಡಿದರೂ ಶಿಲ್ಪದ ಸೌಂದರ್ಯ, ಕ್ರಿಯಾಶೀಲತೆ , ಜೀವಂತಿಕೆ, ದೈವಿಕತೆಗಳ ಅರಿವಾಗುತ್ತದೆ


ರಾಜೇಶ್ ಶ್ರೀವತ್ಸ
.

ಶಿಲ್ಪಕಲೆ ೨ - ರಾಜೇಶ್ ಶ್ರೀವತ್ಸ

ಭಾರತೀಯ ಕಲಾ ಪ್ರಪಂಚಕ್ಕೆ ಚಾಳುಕ್ಯರ ಕೊಡುಗೆ ಅನನ್ಯವಾದುದ್ದು. ಐಹೊಳೆ, ಪಟ್ತದಕಲ್ಲು, ಬಾದಾಮಿಗಳು ಶಿಲ್ಪ ಕಲೆಯ ಹಾಗು ಭಾರತೀಯ ವಾಸ್ತುಕಲೆಯ ಪ್ರಯೋಗ ಶಾಲೆಯೆಂದೇ ಹೆಸರಾಗಿದೆ. ಚಾಳುಕ್ಯರು ತಮ್ಮ ಸಮಕಾಲೀನ ಪಲ್ಲವರೊಡನೆ ಪೈಪೋಟಿಗೆ ಬಿದ್ದಂತೆ ರಚಿಸಿದ ಶಿಲಾದೇಗುಲಗಳ ವಾಸ್ತು ಹಾಗು ವಿಗ್ರಹಗಳು ಇಂದಿಗೂ ನವನವೀನ. ಪಟ್ತದಕಲ್ಲಿನ ವಿರೂಪಾಕ್ಷ ದೇವಾಲಯದ (ಹಿಂದೆ ಲೋಕಪಾಲೇಶ್ವರ ಹೆಸರಿತ್ತು) ಕಂಬ ಹಾಗು ಗೋಡೆಯ ಕೋಷ್ಠಕಗಳಲ್ಲಿರುವ ಕೆಲವು ಶಿಲ್ಪಗಳಂತೂ ಅದ್ಬುತ. ಉತ್ತರ ದ್ವಾರದ ಮಂಟಪದ ಬಲಕಂಬದಲ್ಲಿರುವ ಗಜೇಂದ್ರ ಮೋಕ್ಷ ಶಿಲ್ಪವು ಅವುಗಳಲ್ಲೊಂದು.
ಗಜೇಂದ್ರ ಮೋಕ್ಷ ಪ್ರಕರಣವು ವಿಷ್ಣು ಪರವಾದ ಬಹುತೇಕ ಎಲ್ಲಾ ಪುರಾಣಗಳಲ್ಲಿ ಕಾಣಿಸುತ್ತದೆ.ಸರೋವರದಲ್ಲಿ ತನ್ನ ಬಳಗದೊಡನೆ ಜಲಕ್ರೀಡೆಯಾಡುತ್ತಿದ್ದ ಗಜೇಂದ್ರನನ್ನು ಮೊಸಳೆಯೊಂದು ಕಚ್ಚಿ ನೀರಿನೊಳಗೆ ಸೆಳೆಯಲು ಪ್ರಾರಂಬಿಸುತ್ತದೆ. ಮೊಸಳೆಯ ದವಡೆಯಿಂದ
ತಪ್ಪಿಸಿಕೊಳ್ಳಲಾಗದೆ ಬವಳಿದ ಗಜೇಂದ್ರನನ್ನು ಇತರ ಆನೆಗಳು ಸಂಕಷ್ಟದಿಂದ ಪಾರುಮಾಡಲು ಯತ್ನಿಸಿ ಸೋತು ಕೈಚೆಲ್ಲುತ್ತವೆ. ಸೋಲೊಪ್ಪದ ಗಜರಾಜ ಮೊಸಳೆಯ ದವಡೆಯಿಂದ ಪಾರಾಗಲು ಏಕಾಂಗಿಯಾಗಿ ಹೋರಾಡುತ್ತಾನೆ. ಮೊಸಳೆಗಳಿಗೆ ನೀರಿನಲ್ಲೇ ಬಲ.
ಹಾಗಾಗಿ ಗಜರಾಜ ಕೊನೆಗೂ ಸೋಲನೊಪ್ಪಿ ಅಹಂಕಾರವನ್ನು ತ್ಯಜಿಸಿ ತನ್ನನ್ನು ಪಾರುಮಾಡಲು ಎಕಮೇವಾದ್ವಿತೀಯ ಭಗವಂತ ವಿಷ್ಣುವಿನ ಮೊರೆ ಹೋಗಿ ಆರ್ತನಾಗಿ ಸ್ತುತಿಸುತ್ತಾನೆ. ಸಾವಿನ ಬಾಯೋಳಗೆ ಹೊಕ್ಕಿರುವ ತನ್ನ ಭಕ್ತನನ್ನು ಕಾಪಾಡಲು ದೇವನು ಅರೆಕ್ಷಣವನ್ನೂ ವ್ಯರ್ಥ ಮಾಡದೆ ಗರುಡನ ಮೇಲೇರಿ ಧಾವಿಸುತ್ತಾನೆ.
ನಾಲ್ಕು ಪಾತ್ರಗಳಿರುವ ಈ ಪ್ರಸಂಗವನ್ನು ಶಿಲ್ಪದಲ್ಲಿ ಸಂಯೋಜಿಸುವುದು ಬಹಳ ಸವಾಲಿನ ಕೆಲಸ. ಹಾಗಾಗಿ ಭಗವಂತನ ಅತ್ಯಂತ ಪ್ರಮುಖ ಲೀಲೆಗಳಲ್ಲೊಂದಾದ ಗಜೇಂದ್ರ ಮೋಕ್ಷವು ಶಿಲ್ಪ ಕಲೆಯಲ್ಲಿ ಕಾಣಿಸಿಕೊಳ್ಳುವುದು ತುಂಬಾ ವಿರಳ. ಪಟ್ತದಕಲ್ಲಿನ ಈ ಶಿಲ್ಪದ ದೃಶ್ಯ ಸಂಯೋಜನೆ ಅದ್ಭುತವಾದುದ್ದು. ಶಿಲ್ಪಿಯು ಸಂಯೋಜನೆಯ ಸವಾಲನ್ನು ಸುಲಭವಾಗಿ ಬಗೆಹರಿಸಿದ್ದಾನೆ. (ಮೇಲುಭಾಗದಲ್ಲಿ ಗರುಡನ ಹೆಗಲಿನ ಮೇಲೆ ವಿಷ್ಣು, ಕೆಳಭಾಗದ ಸರೋವರದಲ್ಲಿ ಗಜ-ಮಕರಗಳು) ವಿಷ್ಣುವಿನ ಎಡ ಭಾಗದ ಎರಡೂ ಕೈಗಳು ಭಿನ್ನವಾಗಿದ್ದರೂ ಅದರಿಂದ ಅವನ ಹಿರಿಮೆಗೆ ಒಂದಿನಿತೂ ಮುಕ್ಕಾಗಿಲ್ಲ. ಭಕ್ತವತ್ಸಲನ ಮುಖದಲ್ಲಿ ತನ್ನ ಭಕ್ತನ ಸಂಕಷ್ಟವನ್ನು ನೋಡಿ ದುಃಖವನ್ನು ಅನುಭವಿಸುತ್ತಾ ಅದಕ್ಕೆ ಕಾರಣನಾದ ಮೊಸಳೆಯ ಮೇಲೆ ಕ್ರೋಧವನ್ನು ವ್ಯಕ್ತಪಡಿಸುತ್ತಾ ಇರುವ ದುಃಖ-ಕ್ರೋಧ- ಆತಂಕಗಳ ಮಿಶ್ರಭಾವವನ್ನು ಶಿಲ್ಪಿಯು ಸೆರೆಹಿಡಿದಿರುವ ಪರಿ ಅಪ್ರತಿಮವಾದುದ್ದು. ತಡವಾದರೆ ತನ್ನ ಭಕ್ತನಿಗೇನಾಗುವುದೋ ಎಂಬ ಆತಂಕದಿಂದ ನಾನೇ ಕೆಳಗೆ ನೆಗೆದು ಬಿಡುವೆ ಎನ್ನುವಂತೆ ಎಡ ಕಾಲನ್ನು ನೆಲದ ಮೇಲಿಡಲು ಹವಣಿಸುತ್ತಿದ್ದಾನೆ. ಬಲಗೈಲಿರುವ ಚಕ್ರವನ್ನೆಸೆಯಲುದ್ಯುಕ್ತನಾಗಿ ಕೈಯನ್ನು ಮೇಲೆತ್ತಿದ್ದಾನೆ. ಅಷ್ಟಾದರೂ ಅವನಿಗೆ ಗಾಂಭೀರ್ಯವನ್ನು ತುಂಬಲು ಶಿಲ್ಪಿಯು ಮರೆತಿಲ್ಲ . ಎಷ್ತಾದರೂ ಜಗದೋಡೆಯನಲ್ಲವೇ? ವಿಷ್ಣುವಿನ ಕೆಳಬಲಗೈಯನ್ನು ರಾಜಠೀವಿಯಿಂದ ತೊಡೆಯ ಮೇಲಿಟ್ಟಿರುವಂತೆ ಕೆತ್ತಿದ್ದಾನೆ. ಅದೇ ರೀತಿ ಬಲಗಾಲು ಇನ್ನೂ ಆಸನ ಭಂಗಿಯಲ್ಲಿ ಗರುಡನ ಹಸ್ತವನ್ನಾದರಿಸಿದೆ. ವಿಷ್ಣುವಿನ ಮೈಕಟ್ತು ಮನೋಹರವಾಗಿದ್ದು. ಹಿತಮಿತವಾದ ವಸ್ತ್ರಾಭರಣಗಳಿಂದ ಅಲಂಕೃತವಾಗಿದೆ.
ಗರುಡನು ತನ್ನ ಸ್ವಾಮಿಯನ್ನು ತಕ್ಕ ಸಮಯದಲ್ಲಿ ಗಮ್ಯಸ್ಥಳಕ್ಕೆ ತಲುಪಿಸುವ ಹೊಣೆಯಿಂದ ವೇಗವಾಗಿ ಧಾವಿಸಿ ಬರುತ್ತಿರುವನು. ಆ ವೇಗವನ್ನು ತೋರಿಸುವ ಕಲ್ಪನೆಯುಂಟಾಗಲು ಅವನ ಮುಖದಲ್ಲಿ ಆಯಾಸವನ್ನು ಶಿಲ್ಪಿ ತುಂಬಿದ್ದಾನೆ. ಮುಂಚಾಚಿರುವ ಗರುಡನ ಎದೆ ಎಡಕ್ಕೆ ವಾಲಿದ ಕತ್ತುಗಳು ಗರುಡ ನಿಜಕ್ಕೂ ಆಯಾಸವನ್ನು ಅನುಭವಿಸುತ್ತ ಇರುವಂತೆ ತೋರುತ್ತದೆ. ಗರುಡನ ರೆಕ್ಕೆಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡದೆ ಶಿಲ್ಪದ ಹಿಂಬದಿಯ ಕಂಭದ ಮೇಲೆ ಬಹುಪಾಲು ರೇಖಾ ಕೆತ್ತನೆಗಳಿಂದಷ್ಟೇ ಚಿತ್ರಿಸಿ ತೋರಿಸಿದ್ದಾನೆ.. ವೇಗವಾಗಿ ಹಾರುವ ಹಕ್ಕಿಯ ರೆಕ್ಕೆಗಳು ಮುಸುಕು ಮುಸುಕಾಗಿ ಕಾಣುವುದಿಲ್ಲವೇ ಹಾಗೆ. ತನ್ನೊಡೆಯ ನಾರಾಯಣನ ಧಾವಂತವನ್ನು ಅರ್ಥ ಮಾಡಿಕೊಂಡಿರುವ ಗರುಡ ಅವನು ಅವಸರದಲ್ಲಿ ಕೆಳಗೆ ಜಾರದಂದೆ ಕಾಲುಗಳನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಲು ಹೆಣಗಾಡುತ್ತಿದ್ದಾನೆ. ನಾರಾಯಣನ ಕಾಲುಗಳು ಕೋಮಲವಾಗಿದ್ದರೆ ಗರುಡನ ಕಾಲುಗಳು ಕಷ್ಟಜೀವಿಯ ಕಾಲುಗಳಂತೆ ಒರಟಾಗಿ ದಪ್ಪ ದಪ್ಪ ವಾಗಿವೆ.
ಕೆಳಗೆ ಸರೋವರದಲ್ಲಿ ತಾವರೆಯ ಗಿಡಗಳ ನಡುವೆ ಗಜರಾಜ ಹಾಗು ಮೊಸಳೆಯನ್ನು ಕೆತ್ತಲಾಗಿದೆ . ಆನೆಯ ಆರ್ತತೆಯು ಚೆನ್ನಾಗಿ ಚಿತ್ರಿತವಾಗಿದ್ದು ಅಂಗ ಭಂಗಿಗಳು ಸಹಜತೆಯಿಂದ ಕೂಡಿವೆ.
ಶಿಲ್ಪಿಯು ಎಡವಿರುವುದು ಮೊಸಳೆಯ ಕೆತ್ತನೆಯಲ್ಲಿ. ಮೊಸಳೆಯನ್ನು ಆಮೆಯಂತೆ ಚಿತ್ರಿಸಿ ದೊಡ್ದ ಪ್ರಮಾದವನ್ನೇ ಮಾಡಿಬಿಟ್ತಿದ್ದಾನೆ. ಇದರಿಂದ ಶಿಲ್ಪಿಗೆ ಮೊಸಳೆಯ ಪರಿಚಯವಿರಲಿಲ್ಲವೆಂಬುದು ಸುಸ್ಪಷ್ಟವಾಗಿ ತಿಳಿಯುತ್ತದೆ. ಸರೋವರದ ತಾವರೆಯ ಗಿಡಗಳಲ್ಲಿ ಶಿಲ್ಪಿಯು ಸಹಜವಾದ ಬಾಗು ಬಳುಕುಗಳನ್ನು ತುಂಬಿದ್ದಾನೆ.

ರಾಜೇಶ್ ಶ್ರೀವತ್ಸ

ಶಿಲ್ಪಕಲೆ ೧ ರಾಜೇಶ್ ಶ್ರೀವತ್ಸ

ಶಿಲ್ಪಕಲೆಯ ಅಭ್ಯಾಸ ನಮ್ಮ ಪಠ್ಯದ ಒಂದು ಭಾಗವಾಗಿತ್ತು. ನಮ್ಮ ಪ್ರಾಚಾರ್ಯರಾದ ’ಕಾಳೇಶ್ವರಾಚಾರ್ಯ ಹಂಸಬಾವಿ ’ಯವರೊಡನೆ ಮಹಾಬಲಿಪುರಮ್ ದೇವಸ್ಥಾನದ ವೀಕ್ಷಣೆಗೆ ಹೋಗಿದ್ದೆವು. ಗೈಡ್ಗಳ ಸಹಾಯವಿಲ್ಲದೆ ಶಿಲ್ಪಗಳನ್ನು ನೋಡಿ ಬಂದು ಟಿಪ್ಪಣಿ ಬರೆದು ತೋರಿಸಬೇಕೆಂದು ನಮ್ಮ ಗುರುಗಳ ಆದೇಶ. ಸರಿ ನಮ್ಮ ದೇಗುಲ ವೀಕ್ಷಣೆ ಮುಗಿಸಿ ಟಿಪ್ಪಣಿ ಬರೆದುಕೊಂಡು ಗುರುಗಳಿರುವಲ್ಲಿ ಹಿಂತಿರುಗಿದೆವು ಎಂದಿನಂತೆ ಮುಂದೆ ನಿಂತಿದ್ದ ನಾನೇ ಟಿಪ್ಪಣಿಯನ್ನು ಗುರುಗಳ ಕೈಗಿಟ್ತೆ. ನಾನು ಬರೆದ ಟಿಪ್ಪನಿಯ ಒಂದು sample...೧ನೇ ಗುಹೆಯಲ್ಲಿ ಸುಂದರವಾದ ಗಜಲಕ್ಶ್ಮೀ ದೇವಿಯ ಕೆತ್ತನೆ ಇದೆ. ಎಡ-ಬಲಗಳಲ್ಲಿ ಚಾಮರಧಾರಿಣಿಯರಿದ್ದಾರೆ. ೨ನೇ ಗುಹೆಯಲ್ಲಿ ಮಹಿಷಾಸುರಮರ್ದಿನಿ.. ಒಂದೆರಡು ಸಾಲುಗಳ ಮೇಲೆ ಕಣ್ಣಾಡಿಸುತ್ತಿದ್ದಂತೆ ಗುರುಗಳ ಮುಖ ಕೋಪದಿಂದ ಕಪ್ಪಿಟ್ತಿತು. ಪರ್ರನೆ ಕಾಗದವನ್ನು ಹರಿದು ಚೂರು ಚೂರು ಮಾಡಿದರು’ ಏನಪ್ಪಾ PWD report ಬರ್ದಿದ್ದೀಯಲ್ಲಾ... ನಿನ್ನಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಕಲೆ ನೋಡಲಿಕ್ಕೆ ಬಂದಿದ್ಯೋ ? ಕಲ್ಲು ನೋಡಲಿಕ್ಕೆ ಬಂದಿದ್ಯೋ? ನಡಿ ಮತ್ತೆ ಒಂದೇ ಒಂದು ಶಿಲ್ಪದ್ದಾದರೂ ಸರಿ ಬರ್ಕೊಂಡು ಬಾ..’. ಎಂದು ಗುಡುಗಿದರು. ಸರಿ ಸಾರ್ ಎಂದು ಮತ್ತೊಮ್ಮೆ ಶಿಲ್ಪ ವೀಕ್ಷ್ಣೆಣೆಗೆ ಹೋಗಲು ಹಿಂದೆ ತಿರುಗಿದೆ ಸಹಪಾಠಿಗಳೆಲ್ಲಾ ಮಂಗಮಾಯವಾಗಿದ್ದರು. ಒಬ್ಬರಿಗೂ ಅವರು ಬರೆದದ್ದನ್ನು ಗುರುಗಳಿಗೆ ತೋರಿಸುವ ಧೈರ್ಯ ಉಳಿದಿರಲಿಲ್ಲ. ತಲೆ ಕೆಡಿಸಿಕೊಂಡು ಎರಡನೆ ಸಲ ಬರೆದ ಟಿಪ್ಪಣಿ ಹೀಗಿತ್ತು.
"ಮಹಾಬಲಿಪುರಂನ ಮಹಿಷಾಸುರಮರ್ದಿನಿಯ ಶಿಲ್ಪವು ಕಲಾ ಪ್ರಪಂಚಕ್ಕೆ ಪಲ್ಲವರ ಅದ್ಭುತ ಕೊಡುಗೆಗಳಲ್ಲೊಂದು. ಇಲ್ಲಿ ದುರ್ಗೆಯನ್ನು ಭಯಂಕರವಾದ ಯುದ್ಧ ರಂಗದಲ್ಲಿ ಮಹಿಷಾಸುರನೊಡನೆ ನೇರವಾಗಿ ಮುಖಾಮುಖಿಯಾಗಿ ಹೋರಾಡುತ್ತಿರುವುದನ್ನು ಶಿಲ್ಪಿಯು ಚಿತ್ರಿಸಿದ್ದಾನೆ. ಮಹಿಷನಿಗೆ ಹೋಲಿಸಿದರೆ ದೇವಿಯು ಗಾತ್ರದಲ್ಲಿ ಸಣ್ಣವಳು. ಮಹಿಷನು ಕೋಣನ ತಲೆ ಮನುಷ್ಯನ ದೇಹವನ್ನು ಹೊಂದಿದ್ದು ಗಾತ್ರದಲ್ಲಿ ಬಹಳ ದೊಡ್ದವನು. ಆದರೂ ದೇವಿ ಹಾಗು ಮಹಿಷ ಇಬ್ಬರೂ ಇಲ್ಲಿ ಸಮಬಲರಾಗಿ ಚಿತ್ರಿತರಾಗುವಂತೆ ದೃಶ್ಯವನ್ನು ಸಂಯೋಜಿಸಲಾಗಿದೆ. ರಾಕ್ಷಸನ ಗಾತ್ರದಿಂದ ಸ್ವಲ್ಪವೂ ದೃತಿಗೆಡದೆ ದೇವಿಯು ಸಿಂಹ ವಾಹನೆಯಾಗಿ ವೀರಾವೇಶದಿಂದ ಧನುರ್ಬಾಣಗಳನ್ನು ಹಿಡಿದು ರಣರಂಗದಲ್ಲಿ ಮುನ್ನುಗ್ಗುತ್ತಿದ್ದಾಳೆ. ಇತ್ತ ಮಹಿಷನು ತನ್ನ ಭಯಂಕರ ಸೈನ್ಯದೊಡನೆ ಜಯವು ಇನ್ನು ತನ್ನದೇ ಎಂಬಂತೆ ಭಾರೀ ಗದೆಯೊಂದನ್ನು ಲೀಲಾಜಾಲವಾಗಿ ಎರಡೂ ಕೈಗಳಲ್ಲಿ ಆಟಿಕೆಯಂತೆ ಹಿಡಿದುಕೊಂಡು ಬೀಸಲು ಸಿದ್ದವಾಗುತ್ತಿರುವಂತೆ ಕೆತ್ತಿದ್ದಾನೆ. ಅವನ ರಾಜ ವೈಭವವನ್ನು ಎತ್ತಿ ಹಿಡಿಯಲು ಅವನಿಗೆ ಛತ್ರಿಹಿಡಿದಿರುವುದನ್ನು ತೋರಲಾಗಿದೆ. ದೇವಿಯ ಅನುಯಾಯಿಗಳು ಕುಬ್ಜರಾಗಿದ್ದರೂ ದೇವಿಯ ಹಿಂದು ಮುಂದೆ ಆತ್ಮ ವಿಶ್ವಾಸದಿಂದ ಹೋರಾಡುತ್ತಿದ್ದಾರೆ. ಯುದ್ದವೆಂಬುದು ಆ ಕುಬ್ಜರಿಗೆ ಆಟವೇನೋ ಎಂಬಂತೆ ಉತ್ಸಾಹದಲ್ಲಿ ನಲಿಯುತ್ತಿದ್ದಾರೆ. ಆದರೆ ಮಹಿಷನ ಸೈನಿಕರು ದೈಹಿಕವಾಗಿ ಬಲಶಾಲಿಗಳಾಗಿದ್ದರೂ ಬಾಣದ ಮಳೆಗೆ ಹಿಂಜರಿಯುತ್ತಿರುವಂತೆ ತೋರಿಸಲಾಗಿದೆ. ದೇವಿ ಹಾಗು ಮಹಿಷ ಇಬ್ಬರೂ ಯೋಧರಿಗೆ ಹಿತಮಿತವಾಗುವಷ್ಟು ಮಾತ್ರ ಆಭರಣಗಳನ್ನು ಧರಿಸಿದ್ದಾರೆ. ದೇವಿಯು ಅಷ್ಟ ಭುಜೆಯಾಗಿದ್ದು ಬಲಗೈಯೊಂದರಲ್ಲಿ ಘಂಟೆಯನ್ನು ಹಿಡಿದಿದ್ದು ಅದನ್ನು ಸೈನಿಕರನ್ನು ಹುರಿದುಂಬಿಸಲು ವಾದನಮಾಡತ್ತಿರುವಂತೆ ಹಸ್ತವನ್ನು ತೋರಿದ್ದನೆ. ಎಡಗೈಲಿ ಹಿಡಿದಿರುವ ಶಂಖವು ಬಾಯಿಗಿಡಲು ಸಿದ್ದವಾಗಿರುವಂತೆ ತುದಿಯನ್ನು ದೇವಿಯ ಮುಖದ ಕಡೆ ತಿರುಗಿಸಲಾಗಿದೆ. ದೇವಿಯ ವಾಹನ ಸಿಂಹದ ಮುಂಭಾಗದ ವಿವರಗಳನ್ನು ಮಾತ್ರ ಕೆತ್ತಲಾಗಿದ್ದು ಹಿಂಬದಿಯನ್ನು ಸೈನಿಕರಿಂದ ಮರೆಮಾಚಿ ರಣರಂಗವು ಸೈನಿಕರಿಂದ ದಟ್ತವಾಗಿ ತುಂಬಿರುವ ಭ್ರಮೆ ಮೂಡಿಸಲಾಗಿದೆ. ಸಿಂಹದ ಮುಖ್ಹದಲ್ಲಿ ಕ್ರೋಧ ಮಡುಗಟ್ಟಿದ್ದು ಅದರ ಬಲಗಾಲಿನ ಪಂಜವನ್ನೆತ್ತಿ ಧಾಳಿ ಮಾಡಲು ಮುನ್ನುಗ್ಗುತ್ತಿದೆ. ಸಿಂಹದ ಕತ್ತಿನ ಸುತ್ತ ಇರುವ ಸುರುಳಿ ಸುರುಳಿಯಾಗಿರುವ ಕೇಸರ ವನರಾಜನ ಗಾಂಭಿರ್ಯವನ್ನು ಎತ್ತಿ ತೋರಿಸುತಿದೆ."
ಎರಡನೇಯ ಟಿಪ್ಪಣಿ ಓದಿದ ನಮ್ಮ ಗುರುಗಳು "ಈಗ ಅರಿವಾಯ್ತಾ ಶಿಲ್ಪಕಲಾ ವೀಕ್ಷಣೆ ಅಂದರೆ ಏನೂ ಅಂತ ? " ಎನ್ನುತ್ತಾ ನನ್ನ ಬೆನ್ನು ತಟ್ಟಿದರೆಂದು ಹೇಳಬೇಕಿಲ್ಲ ತಾನೆ? ಅವರ ಆಶೀರ್ವಾದ ಸದಾ ನನ್ನ ಮೇಲಿರಲಿ

ರಾಜೇಶ್ ಶ್ರೀವತ್ಸ


Friday, September 12, 2014

ದೃಢ ಮನಸ್ಸಿನವರ ೧೨ ವರ್ತನೆಗಳು


1 ಮುಂದೆ ಸಾಗಿ ಬಿಡ್ತಾರೆ. ಸಾರಿ ಗೀರಿ ಅಂತೆಲ್ಲ ಹೇಳಿಕೊಂಡು ಸಮಯ ವ್ಯರ್ಥ
ಮಾಡುವ ಮಾತೇ ಇಲ್ಲ.
2 ಖುಷಿಯಾಗಿರುತ್ತಾರೆ. ಯಾರನ್ನೂ ದೂರುವುದಿಲ್ಲ. ಕೈಲಾಗದ ಕೆಲಸಕ್ಕೆ ಮುಂದಾಗುವುದಿಲ್ಲ.
3 ಸುಮ್ಮನೆ ಸುಮ್ಮನೆ ಹೊಗಳುವುದಿಲ್ಲ. ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತಾರೆ. ಯಾರು ಯಾರಿಗೋ ಸಲಾಮು ಹೊಡೆಯುವುದಿಲ್ಲ.
4 ವರ್ತಮಾನಕ್ಕೆ ಶಕ್ತಿ ವ್ಯಯಿಸುತ್ತಾರೆ. ವರ್ತಮಾನದಲ್ಲಿ ಬದುಕುತ್ತಿರುತ್ತಾರೆ.
5 ಹಳೆಯ ತಪ್ಪನ್ನು ಒಪ್ಪಿಕೊಂಡಿರುತ್ತಾರೆ.ತಪ್ಪು ಮಾಡಿದ್ದಿದ್ರೆ ತಪ್ಪು ಅಂತ ಒಪ್ಪಿಕೊಂಡಿರುತ್ತಾರೆ. ಬೇರೆಯವರ ಮೇಲೆ ಅದನ್ನು ಹೊರಿಸುವುದಿಲ್ಲ. ಮುಂದೆ ಅಂಥ ತಪ್ಪು ಮಾಡುವುದಿಲ್ಲ.
6 ಬೇರೆಯವರ ಗೆಲುವಿಗೆ ಸಂಭ್ರಮಿಸುತ್ತಾರೆ. ಹೊಟ್ಟೆಕಿಚ್ಚು ಇಲ್ಲವೇ ಇಲ್ಲ. ಬೇರೆಯವರು ಗೆದ್ದರೆ ತಾವೇ ಗೆದ್ದಷ್ಟು ಖುಷಿಯಾಗುತ್ತಾರೆ.
7 ಏಕಾಂತವನ್ನೂ ಇಷ್ಟಪಡುತ್ತಾರೆ. ಏಕಾಂಗಿ ಅಂತ ನರಳುವುದಿಲ್ಲ, ಖುಷಿಯಲ್ಲಿರುತ್ತಾರೆ.
8 ಕೆಟ್ಟ ಯೋಚನೆಗಳಲ್ಲಿ ಮುಳುಗುವುದಿಲ್ಲ.ಬೇಡದ ವಿಷಯಗಳ ಬಗ್ಗೆ ಯೋಚಿಸುವುದೂ
ಇಲ್ಲ, ಮಾತನಾಡುವುದೂ ಇಲ್ಲ.
9 ಎಲ್ಲಿ ಹೋದರೂ ಸಲ್ಲುತ್ತಾರೆ.ಅದೇ ಬೇಕು, ಇದೇ ಬೇಕು ಅಂತ ಇಲ್ಲ. ಎಲ್ಲಿ ಹೋದರೂ ಹೇಗೆ ಇದ್ದರೂ ಹೊಂದಿಕೊಳ್ಳುತ್ತಾರೆ.
10 ಜಾಣ್ಮೆಯಿಂದ ಸವಾಲು ಎದುರಿಸುತ್ತಾರೆ. ಯೋಚನೆ ಮಾಡದೆ ಮುನ್ನುಗ್ಗಿ ಸೋಲುವುದಿಲ್ಲ. ಸಾಕಷ್ಟು ಲೆಕ್ಕಹಾಕಿ, ಯೋಚನೆ ಮಾಡಿ ಗೆಲ್ಲುತ್ತಾರೆ.
11 ಭಯಂಕರ ತಾಳ್ಮೆ ಇರುತ್ತದೆ. ಕೆಲಸ ಮಾಡುತ್ತಾರೆ, ತಾಳ್ಮೆಯಿಂದ ಕಾಯುತ್ತಾರೆ.
12 ಸೋಲುವುದಕ್ಕೂ ರೆಡಿ.ಯಾವತ್ತೂ ಸೋಲಬಾರದು ಅನ್ನುವ ಯೋಚನೆ ಇವರಿಗಿಲ್ಲ. ಸೋತರೆ ಅದನ್ನು ಸ್ವೀಕರಿಸುತ್ತಾರೆ.

ಕೃಪೆ: ಉದಯವಾಣಿ

Friday, September 5, 2014

ಕನಸು.

 ಕನಸು.*

ಬಾನಂಚಿನ ಅಂಗಳದಿ ನಾ ಕಂಡ ಆ ಕನಸು
ತಾರೆಗಳ ಆಗಸದಿ ಚಿತ್ತಾರವ ಬಿಡಿಸಿದಂತೆ
ಚಂದಿರನ ಬೆಳದಿಂಗಳಲಿ ನಾ ನಗುವ ಕಂಡೆ
ನಗುವಿನಾಳದ ನೋವ ಮರೆತು
ಮೋಡಗಳು ಬಂಧಿಸಿದ ಆ ಚಂದ್ರನ ಪರದಾಟ
ಜೀವನದಿ ಕಮರಿದ ಕನಸುಗಳ ಹುಡುಕಾಟ
ಕಪ್ಪಗಿನ ಮೋಡದ ಅಂಚಿನಲಿ ನಿಂತ ಮಳೆಯಹನಿ
ಕಣ್ಣಂಚಿನಲಿ ತುಂಬಿದ ಕಣ್ಣೀರ  ಹನಿಯ ಸಾಲು
ಮೋಡಗಳ ಪೈಪೋಟಿ ಭಾವನೆಗಳ ಮಿಡುಕಾಟ
ದೂರದಾಗಸದ ಕಡೆಗೆ ನೆಮ್ಮದಿಯ ನೋಟ.

ಸ್ಮೃತಿ..