ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Wednesday, March 20, 2013

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ - ಕುವೆಂಪು


ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರಾ..

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರಾ..

ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗೀ..
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವ ಭವದಿ ಭವಿಸಿಹೇ ಭವ ವಿದೂರಾ

ನಿತ್ಯವೂ ಅವತರಿಪ ಸತ್ಯಾವತಾರಾ
ನಿತ್ಯವೂ ಅವತರಿಪ ಸತ್ಯಾವತಾರಾ

|| ಬಾ ಇಲ್ಲಿ ||

ಮಣ್ ತನಕೆ ಮರತನಕೆ ಮಿಗತನಕೆ ಖಗತನಕೆ
ಮಣ್ತನಕೆ ಮರತನಕೆ ಮಿಗತನಕೆ ಖಗತನಕೆ
ಮುನ್ನಡೆಗೆ ಕಣ್ಣಾದ ಗುರುವೆ ಬಾರಾ
ಮೂಡಿ ಬಂದೆನ್ನಾ ನರ ರೂಪ ಚೇತನದೀ…
ಮೂಡಿ ಬಂದೆನ್ನಾ ನರ ರೂಪ ಚೇತನದಿ
ನಾರಾಯಣತ್ವಕ್ಕೆ ದಾರಿ ತೋರ
ನಿತ್ಯವೂ ಅವತರಿಪ ಸತ್ಯಾವತಾರ

|| ಬಾ ಇಲ್ಲಿ ||

ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ,

ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ
ಅಲ್ಲಿ ತುರುಪಟ್ಟಿಯಲಿ, ಇಲ್ಲಿ ಕಿರುಗುಡಿಸಲಲಿ,

ದೇಶದೇಶದಿ ವೇಷವೇಷಾಂತರವನಾಂತು
ವಿಶ್ವಸಾರಥಿಯಾಗಿ ಲೀಲಾರಥವನೆಂತು
ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲ ,
ಚೋದಿಸಿರುವೆಯೊ ಅಂತೆ, ಸೃಷ್ಟಿಲೋಲಾ,

ಅವತರಿಸು ಬಾ…
ಅವತರಿಸು ಬಾ…

ಅವತರಿಸು ಬಾ ಇಲ್ಲಿ ಇಂದೆನ್ನ ಚೈತ್ಯದಲಿ
ಹೇ ದಿವ್ಯ ಸಚ್ಚಿದಾನಂದ ಶೀಲ
ಹೇ ದಿವ್ಯ ಸಚ್ಚಿದಾನಂದ ಶೀಲ
ಹೇ ದಿವ್ಯ ಸಚ್ಚಿದಾನಂದ ಶೀಲ

ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರ
|| ಬಾ ಇಲ್ಲಿ ||

|| ಬಾ ಇಲ್ಲಿ ||

ಮುಚ್ಚು ಮರೆ ಇಲ್ಲದೆಯೇ - ಕುವೆಂಪು


ಮುಚ್ಚು ಮರೆ ಇಲ್ಲದೆಯೇ ನಿನ್ನಮುಂದೆಲ್ಲವನು ಬಿಚ್ಚಿಡುವೇ ಓ ಗುರುವೇ ಅಂತರಾತ್ಮ
ಪಾಪವಿದೆ ಪುಣ್ಯವಿದೆ , ನರಕವಿದೆ ನಾಕವಿದೆ, ಸ್ವೀಕರಿಸು ಓ ಗುರುವೇ ಅಂತರಾತ್ಮ
|| ಮುಚ್ಚು ಮರೆ ಇಲ್ಲದೆಯೇ ||

ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು, ಪಾಪ ತಾನುಳಿಯುವುದೇ ಪಾಪವಾಗಿ
ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಂಗೇ, ನರಕ ತಾನುಳಿಯುವುದೇ ನರಕವಾಗಿ
|| ಮುಚ್ಚು ಮರೆ ಇಲ್ಲದೆಯೇ ||

ಸಾಂತ ರೀತಿಯನೆಮ್ಮೀ ಕದಡಿರುವುದೆನ್ನಾತ್ಮ, ನಾಂತರೀತಿಯು ಅದೆಂತೋ ಓ ಅನಂತ
ನನ್ನ ನೀತಿಯ ಕುರುಡಿನಿಂದೆನ್ನ ರಕ್ಶಿಸಯ್, ನಿನ್ನ ಪ್ರೀತಿಯ ಬೆಳಕಿನ ಆನಂದಕೆ
|| ಮುಚ್ಚು ಮರೆ ಇಲ್ಲದೆಯೇ ||

ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ - ಕುವೆಂಪು


ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ
ಜೊನ್ನ ಜೇನಿಗೆ ಬಾಯಾರಿದೆ ಚಕೋರ ಚುಂಬನ

ಚಂದ್ರಿಕಾಮಧುಪಾನಮತ್ತ
ಪೀನಕುಂಭಪಯೋಧವಿತ್ತ
ವಕ್ಷಪರಿಲಂಭನ ನಿಮಿತ್ತ ನಿರಾವಲಂಬನ
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ

ಚರಣನೂಪುರಕಿಂಕಿಣಿಕೊಳ
ಮದನಸಿಂಜಿನಿ ಜನಿತ ನಿಹ್ವಳ
ಚಿತ್ತ ರಂಜನಿ ತಳುವದೀಕ್ಷಣ
ಚಂದ್ರ ಮಂಚಕೆ ಬಾ ಚಕೋರಿ
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ

ತೆರೆಯ ಚಿಮ್ಮಿಸಿ ನೊರೆಯ ಹೊಮ್ಮಿಸಿ
ಕ್ಷೀರಸಾಗರದಲ್ಲಿ ತೇಲುವ
ಬಾಗುಚಂದ್ರನ ತೂಗುಮಂಚಕೆ
ಬಾ ಚಕೋರಿ ಬಾ ಚಕೋರಿ ಎದೆ ಹಾರಿದೆ
ಬಾಯಾರಿದೆ ಚಕೋರ ಚುಂಬನ
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ

ನಿಕುಂಜ ರತಿವನ ಮದನ ಯಾಗಕೆ
ಅನಂಗರಕ್ತಿಯ ಬಿಂಬ ಭೋಗಕೆ
ಕಾಂಕ್ಷಿಯಾಗಿದೆ ನಗ್ನ ಯೋಗಕೆ
ಇಕ್ಷು ಮಂಚದ ಸಾಗ್ನಿ ಪಕ್ಷಿಯ ಅಚಂಚು ಚುಂಬನ
ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ

ಇಳಿದು ಬಾ ತಾಯೆ ಇಳಿದು ಬಾ - ಕುವೆಂಪು


ಓಂ ಸಚ್ಚಿದಾನಂದ ತ್ರಿತ್ವ ಮುಖವಾದ ಪರಬ್ರಹ್ಮದಲ್ಲಿ
ಅಭವದೊತ್ತಾದೆ ಭವದ ಬಿತ್ತಾದೆ ಋತದ ಚಿತ್ತಾದೆ ನೀ
ಇಳಿದು ಬಾ ಇಳೆಗೆ ತುಂಬಿ ತಾ ಬೆಳೆಗೆ ಜೀವ ಕೇಂದ್ರದಲ್ಲಿ
ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತ ಪೃಥ್ವಿಯಲ್ಲಿ ||

ಋತದ ಚಿತ್ತಾಗಿ ವಿಶ್ವಗಳ ಸೃಜಿಸಿ ನಡೆಸುತಿಹ ಶಕ್ತಿಯೆ
ಅನ್ನ ಪ್ರಾಣಗಳ ಮನೋಲೋಕಗಳ ಸೂತ್ರಧರ ಯುಕ್ತಿಯೆ
ಅಖಿಲ ಬಂಧನದ ಹೃದಯದಲ್ಲಿ ಅವಿನಾಶಿ ಆಸಕ್ತಿಯೆ
ನಿನ್ನ ಅವತಾರವೆನ್ನ ಉದ್ಧಾರ ಬಾ ದಿವ್ಯ ಮುಕ್ತಿಯೆ
ಎಲ್ಲವನು ಮಾಡಿ ಎಲ್ಲರೊಳಗೂಡಿ ನೀನೆ ಎಲ್ಲವಾದೆ
ಜ್ಯೋತಿಯಾದರೂ ತಮೋಲೀಲೆಯಲಿ ಜಡದ ಮುದ್ರೆಯಾದೆ
ಎನಿತು ಕರೆದರೂ ಓಕೊಳ್ಳದಿರುವಚಿನ್ನಿದ್ರೆಯಾದೆ
ಬೆಳಗಿ ನನ್ನಾತ್ಮಕಿಳಿದು ಬಾ ತಾಯೆ ನೀನೆ ಬ್ರಹ್ಮ ಬೋಧೆ
ಇಳಿದು ಬಾ ತಾಯೆ ಇಳಿದು ಬಾ ||

ಗಾಳಿಗುಸಿರು ನೀ ಬೆಂಕಿಗುರಿಯು ನೀನುದಕಕದರ ಜೀವ
ಅಗ್ನಿ ಇಂದ್ರ ವರುಣಾರ್ಕ ದೇವರನು ಮಾಡಿ ನೋಡಿ ಕಾವ
ಶಿವನ ಶಕ್ತಿ ನೀ, ವಿಷ್ಣು ಲಕ್ಷ್ಮೀ ನೀ, ಚತುರ್ಮುಖನ ರಾಣಿ
ದಿವ್ಯ ವಿಜ್ಞಾನ ನನ್ನೊಳುದ್ಭವಿಸೆ ಮತಿಗಾಗಮಿಸು, ವಾಣಿ
ಹೃದಯ ಪದ್ಮ ತಾನರಳೆ ಕರೆವೆ ಬಾರಮ್ಮ ಬಾ, ಇಳಿದು ಬಾ
ಮನೋದ್ವಾರ ತಾ ಬಿರಿಯೆ ಕರೆವೆ ಜಗದಂಬೆ ಬಾ, ಇಳಿದು ಬಾ
ಅಗ್ನಿ ಹಂಸ ಗರಿಗೆದರೆ ಕರೆವೆ ಬಾ ತಾಯೆ ಬಾ, ಇಳಿದು ಬಾ
ಚೈತ್ಯ ಪುರುಷ ಯಜ್ಞಕ್ಕೆ ನೀನೆ ಅಧ್ವರ್ಯು, ಬಾ, ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ ||'


ನೀನಿಲ್ಲದೇ ನನಗೇನಿದೇ - ಎಂ ಎನ್ ವ್ಯಾಸರಾವ್


ನೀನಿಲ್ಲದೇ ನನಗೇನಿದೇ
ಮನಸ್ಸೆಲ್ಲಾ ನಿನ್ನಲ್ಲಿ ನೆಲೆಯಾಗಿದೆ
ಕನಸ್ಸೆಲ್ಲಾ ಕಣ್ಣಲ್ಲೇ ಸೆರೆಯಾಗಿದೇ

ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೇ ನಾನು
ಕಹಿಯಾದ ವಿರಹದ ನೋವೂ ಹಗಲಿರುಳು ತಂದೇ ನೀನು
ಎದೆಯಾಸೆ ಏನೋ ಎಂದೂ ನೀ ಕಾಣದಾದೇ
ನಿಶೆಯೊಂದೆ ನನ್ನಲ್ಲೀ ನೀ ತುಂಬಿದೇ
ಬೆಳಕೊಂದೆ ನಿನ್ನಿಂದಾ ನಾ ಬಯಸಿದೇ

ನೀನಿಲ್ಲದೇ ನನಗೇನಿದೇ…

ಒಲವೆಂಬ ಕಿರಣಾ ಬೀರೀ ಒಳಗಿರುವ ಕಣ್ಣಾ ತೆರೆಸೀ
ಒಣಗಿರುವ ಎದೆನೆಲದಲ್ಲಿ ಭರವಸೆಯ ಜೀವ ಹರಿಸಿ
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದಾ ನಾ ತಾಳುವೇ
ಹೊಸ ಲೋಕ ನಿನ್ನಿಂದಾ ನಾ ಕಾಣುವೇ

ನೀನಿಲ್ಲದೇ ನನಗೇನಿದೇ …

ಹಾವು ಅಂದ್ರೆ ಮರಿ ಗುಬ್ಬಿಗೆ ಭಾರಿ ದಿಗಿಲೇನೆ - ಡಾ.ಹೆಚ್. ಎಸ್. ವೆಂಕಟೇಶಮೂರ್ತಿ,


ಹಾವು ಅಂದ್ರೆ ಮರಿ ಗುಬ್ಬಿಗೆ ಭಾರಿ ದಿಗಿಲೇನೆ
ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ
ಒಂದು ಸಾರಿ ಪುಟಾಣಿ ಗುಬ್ಬಿ ಅಮ್ಮನ ಕೇಳುತ್ತೆ
ಅಮ್ಮ ಅಮ್ಮ ಬುಸ್ಸ್ ಬುಸ್ಸ್ ಹಾವು ಹ್ಯಾಗಿರತ್ತೆ ||

ಒಕ್ಕಲಿ ಬೆನ್ನು ತಿಕ್ಕಿ ಕೊಳ್ತಾ ಅಮ್ಮ ಅನ್ನುತ್ತೆ
ಒಳ್ಳೆ ಪ್ರಶ್ನೆ ಹಾವು-ಹ್ಯಾಗಿರತ್ತೆ ಹಾವು ಹ್ಯಾಗಿರತ್ತೆ
ಹಾವಿರತ್ತೆ ಹಾವಿನ ಹಾಗೆ ಕಾಗೆ ಕಪ್ಪಗೆ
ಸಪೂರ ಥಳ ಥಳ ಕೆಂಡದ ಕಣ್ಣು ಕಡ್ಡಿ ದಪ್ಪಗೆ ||

ಸೂರಿಗೆ ಸುತ್ತಿ ಜೋತಾಡತ್ತೆ ಗೋಧಿ ಬೆನ್ನು
ದೀಪದ ಹಾಗೆ ಉರಿತಿರತ್ತೆ ಹಾವಿನ ಕಣ್ಣು
ಬುಸ್ಸ್ ಎನ್ನುತ್ತೆ ದರಿದ್ರ ಹಾವಿಗೆ ತುಂಬದ ಹೊಟ್ಟೆ
ಇಡಿ ಇಡಿಯಾಗಿ ನುಂಗ್ ಬಿಡುತ್ತೆ ಹಕ್ಕಿ ಮೊಟ್ಟೆ

ಹಕ್ಕಿಯ ಮೊಟ್ಟೆ ನುಂಗಿದ್ ಮೇಲೆ ಇಡಿ ಇಡೀಲಿ
ಹಕ್ಕಿ ಮರಿ ಬೆಳ್ಕೊಳುತ್ತೆ ಹಾವಿನ ಹೊಟ್ಟೆಲಿ
ಹಕ್ಕಿ ಮರಿ ಹುಟ್ಕೋಳ್ಳತ್ತೆ ಹಾವಿನ ಹೊಟ್ಟೆಲಿ
ಅಂತ ಪುಟಾಣಿ ಕುಣಿದಾಡ್ತಿತ್ತು ಅಮ್ಮನ ತೋಳಲ್ಲಿ

ನಿಟ್ಟುಸಿರಿತ್ತು ಅಮ್ಮ ಗುಬ್ಬಿ ಇಲ್ಲ ಬಂಗಾರ
ಇನ್ನೂ ನಿನಗೆ ತಿಳೀದಮ್ಮ ಹಾವಿನ ಹುನ್ನಾರ
ಹಾವಿನ ಹೊಟ್ಟೆ ಸೇರಿದ್ ಮೇಲೆ ಹೇಳೋದ್ ಇನ್ನೇನು
ಹಾವಿನ ಮೊಟ್ಟೆ ಆಗ್ಬಿಡತ್ತೆ ಹಕ್ಕಿ ಮೊಟ್ಟೇನು

Sunday, March 17, 2013

ಜೀವನ


ಜೀವನ ಹುಮ್ಮಸು
.......ಹುಮ್ಮಸು ಜೀವನವಲ್ಲ

ನಗುವ ಜೀವನವಿರಲ್ಲಿ
.......ಜೀವನ ನಗುವಗದಿರಲ್ಲಿ

ಎಂಥಾ ದಿನಗಳವು ಮರೆಯಾಗಿ ಹೋದವು - ಸುಬ್ರಾಯ ಚೊಕ್ಕಾಡಿ


ಎಂಥಾ ದಿನಗಳವು ಮರೆಯಾಗಿ ಹೋದವು
ಮಿಂಚಂಥ ಕ್ಷಣಗಳವು ಇನ್ನೆಂದೂ ಬಾರವು ||

ಸುರಿವ ಮಳೆಗೆ ದೋಣಿಯನ್ನು ತೇಲಿ ಬಿಟ್ಟೆವು,
ಚಿಟ್ಟೆ ಹೂವ ಗೊಂದಲದಲಿ ನಕ್ಕು ನಲಿದೆವು
ಮುಗಿಲ ಬಣ್ಣ ಚಂದ್ರ ತಾರೆ ಹಾಡ ಹಿಡಿದೆವು
ಮುಂದೆ ನುಗ್ಗಲೇನೋ ಬಡಿದು ಕೆಳಗೆ ಕುಸಿದೆವು || ಎಂಥಾ ||

ಹಕ್ಕಿ ಬೆನ್ನನೇರಿ ಗಗನ ಮೀರಿ ನೆಗೆದೆವು
ಇಂದ್ರ ಚಾಪದಲ್ಲಿ ಕೈ ಕೈ ಬೆಸೆದು ನಡೆದೆವು
ಈಗ ಹಕ್ಕಿ ರೆಕ್ಕೆ ಮುರಿದು ಧರೆಗೆ ಉರುಳಿದೆ
ಕಿಸೆಯಲಿಟ್ಟ ಬಿಲ್ಲ ತುಣುಕು ಕಳೆದು ಹೋಗಿದೆ || ಎಂಥಾ ||




ಸಾಹಿತ್ಯ – ಸುಬ್ರಾಯ ಚೊಕ್ಕಾಡಿ
ಸಂಗೀತ – ಸಿ ಅಶ್ವಥ್
ಗಾಯನ – ಸಂಗೀತ ಕಟ್ಟಿ ಕುಲಕರ್ಣಿ / ಅಜಯ್ ವಾರಿಯರ್

ಬಾ ಸವಿತಾ ಬಾ ಸವಿತಾ ಬಾ ಸವಿತಾ - ಮಾಸ್ತಿ ವೆಂಕಟೇಶ ಅಯ್ಯಂಗಾರ್


ಬಾ ಸವಿತಾ ಬಾ ಸವಿತಾ ಬಾ ಸವಿತಾ..

ಒಳಗಿನ ಕಣ್ಣನು ಮುಚ್ಚಿಸಿವೊಮ್ಮೆ
ತಿಳಿವಿಗೆ ಬಣ್ಣವ ಹಚ್ಚಿಸಿವೊಮ್ಮೆ
ಒಳಿತಲ್ಲದುದೆ ಒಳಿತೆಂಬುದರ
ಚಳಕವೆಲ್ಲಕೆ ವಿನಾಶವತಾ || ಬಾ ||

ನೆಲೆಯಿಂದ ಹೊರಟು ಅಲೆ ಅಲೆ ಅಲೆ ಅಲೆ
ಛಲ ತೊಟ್ಟ ಮಲ್ಲ, ವಾಹಿನಿ ಬಾ
ನಿಲವಿಲ್ಲಾ ಜಗದಿ ಕತ್ತಲೆಗೆಂದು
ಗೆಲವನು ಸಾರುವ ಭಾಸವ ತಾ || ಬಾ ||

ಓಂ ತತ್ಸವಿತುರ್ವರೇಣ್ಯವೆಂಬೆವು
ಅಂತಲ್ಲದೆ ಬೇರೆಯದನು ನಂಬೆವು
ಪಂಥವ ಬೆಳೆಗಿಸಿ ನಿರೂಪಿಸಿ ಕೋಂಬೆವು
ಶಾಂತಸುಂದರ ಶಿವದಾ ಸವಿತಾ || ಬಾ ||

ಸಾಹಿತ್ಯ – ಮಾಸ್ತಿ ವೆಂಕಟೇಶ ಅಯ್ಯಂಗಾರ್
ಸಂಗೀತ – ಮೈಸೂರು ಅನಂತಸ್ವಾಮಿ

ಅಕೋ ಶ್ಯಾಮ ಅವಳೇ ರಾಧೆ - ಪು.ತಿ.ನ


ಅಕೋ ಶ್ಯಾಮ ಅವಳೇ ರಾಧೆ
ನಲಿಯುತಿಹರು ಕಾಣಿರೇ |
ನಾವೆ ರಾಧೆ ಅವನೇ ಶ್ಶಾಮ
ಬೇರೆ ಬಗೆಯ ಮಾಣಿರೇ ||

ಕಲರವದೊಳು ಯಮುನೆ ಹರಿಯೆ
ಸೋಬಾನೆಯ ತರುಗಳುಲಿಯೆ
ತೆನೆತೆನೆಯೊಳು ಹರಸಿದಂತೆ
ಬಾನಿಂ ಜೊನ್ನ ಭೂಮಿಗಿಳಿಯೆ ||

ಕಂಪ ಬಿಡುವ ದಳಗಳಂತೆ
ಸುತ್ತಲರಳಿ ಕೊಳ್ಳಿರೇ|
ಒಲುಮೆಗಿಡುವ ಪ್ರಭಾವಳಿಯ
ತೆರದಿ ಬಳಸಿ ನಿಲ್ಲಿರೇ ||

ಕಡಗ ಕಂಕಣ ಕಿನಿಕಿನಿಯೆನೆ
ಅಡಿಗೆಯಿರುಲೆ ಝಣರೆನೆ |
ಎದೆ ನುಡಿತಕೆ ಚುಕ್ಕಿ ಮಿಡಿಯೆ
ಕೊಳಲನೂದಿ ಕುಣಿವನೆ ||

ನಮ್ಮ ಮನವ ಕೋದು
ಮಾಲೆ ಗೈದು ಮುಡಿಯುತಿಹನೆನೆ |
ಮಾಧವನೂದುವ ಮಧುರ ಗಾನ
ಎದೆಯ ಹಾಯ್ವುದಾಯೆನೆ ||

ನೋಡಿ ತಣಿಯೆ ಹಾಡಿ ತಣೆಯೆ
ಲೇಸನಾಡಿ ತಣಿಯೆನೆ |
ಕುಣಿದು ತಣಿಯೆ ದಣಿದು ತಣಿಯೆ
ದಣಿವಿಲ್ಲದೆ ನಲಿವೆನೆ ||

ಸಾಹಿತ್ಯ – ಪು.ತಿ.ನ
ಸಂಗೀತ – ಸಿ ಅಶ್ವಥ್
ಗಾಯನ – MS ಶೀಲ / KS ಸುರೇಖ

ಶಿವಮಂದಿರಸಮ ವನಸುಂದರ - ಕುವೆಂಪು


ಶಿವಮಂದಿರಸಮ ವನಸುಂದರ ಸುಮಶೃಂಗಾರದ ಗಿರಿಶೃಂಗಕೆ ಬಾ!
ಬಾ ಫಾಲ್ಗುಣ ರವಿ ದರ್ಶನಕೆ!

ಕುಂಕುಮ ಧೂಳಿಯ ದಿಕ್ತಟವೇದಿಯೊಳೋಕುಳಿಯಲಿ ಮಿಂದೇಳುವನು
ಕೋಟಿವಿಹಂಗಮ ಮಂಗಲರವ ರಸನೈವೇದ್ಯಕೆ ಮುದ ತಾಳುವನು
ಚಿನ್ನದ ಚೆಂಡನೆ ಮೂಡುವನು; ಹೊನ್ನನೆ ಹೊಯ್‌ನೀರ್ ನೀಡುವನು
ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆಹರಿಯಿಸಿ ರವಿ ದಯಮಾಡುವನು || ಬಾ ||

ತೆರೆತೆರೆಯಾಗಿಹ ನೊರೆನೊರೆ ಕಡಲೆನೆ ನೋಡುವ ಕಣ್ಣೋಡುವವರೆಗೆ
ಬನಸಿರಿ ತುಂಬಿದ ಕಣಿವೆಯ ಹಂಬಿರೆ ಧೂಳೀಸಮಹಿಮ ಬಾನ್‌ಕರೆಗೆ
ಪ್ರತಿಭೆಯ ಹೋಮಾಗ್ನಿಯ ಮೇಲೆ ಕವಿಮನ ತಾನುರಿದುರಿದೇಳೆ
ಮರಗಿಡದಲಿ ಜಡದೊಡಲಲಿ ಇದೆಕೋ ಸ್ಪಂದಿಸುತಿದೆ ಭಾವಜ್ವಾಲೆ || ಬಾ ||

ವರ್ಣನದಿಂದ್ರಿಯ ನಂದನವನು ದಾಂಟುತೆ ದರ್ಶನ ಮುಕ್ತಿಯ ಸೇರಿ
ವ್ಯಕ್ತಿತೆ ಮೈಮರೆವುದು ಸೌಂದರ್ಯ ಸಮಾಧಿಯೊಳಾನಂದವ ಹೀರಿ
ಸರ್ವೇಂದ್ರಿಯ ಸುಖನಿಧಿ ಅಲ್ಲಿ; ಸರ್ವಾತ್ಮನ ಸನ್ನಿಧಿ ಅಲ್ಲಿ
ಸಕಲಾರಾಧನ ಸಾಧನಬೋಧನ ಅನುಭವರಸ ತಾನಹುದಲ್ಲಿ || ಬಾ ||

ಸಾಹಿತ್ಯ – ಕುವೆಂಪು
ಗಾಯನ - ನರಸಿಂಹ ನಾಯಕ್


ಬದುಕು ಮಾಯೆಯ ಮಾಟ - ದ ರಾ ಬೇಂದ್ರೆ


ಬದುಕು ಮಾಯೆಯ ಮಾಟ  -
ಮಾತು ನೊರೆ-ತೆರೆಯಾಟ
ಜೀವ ಮೌನದ ತುಂಬ ಗುಂಭ ಮುನ್ನೀರು
ಕರುಣೋದಯದ ಕೂಡ
ಅರುಣೋದಯವು ಇರಲು
ಎದೆಯ ತುಂಬುತ್ತಲಿದೆ ಹೊಚ್ಚ ಹೊನ್ನೀರು!

ನಿಜದಲ್ಲೆ ಒಲವಿರಲಿ
ಚೆಲುವಿನಲೆ ನಲಿವಿರಲಿ
ಒಳಿತಿನಲೆ ಬಲವಿರಲಿ ಜೀವಕೆಳೆಯಾ!
ದೇವ ಜೀವನ ಕೇಂದ್ರ
ಒಬ್ಬೊಬ್ಬನು ಇಂದ್ರ
ಏನಿದ್ದರು ಎಲ್ಲ ಎಲ್ಲೆ ತಿಳಿಯಾ.

ಆತನಾಕೆಯೆ ನಮ್ಮ
ಜೀವನೌಕೆಯ ತಮ್ಮ
ಧ್ರುವ ಮರೆಯದಂತೆ ನಡೆಸುತ್ತಲಿರಲಿ
ಈ ನಾನು ಆ ನೀನು
ಒಂದೆ ತಾನಿನ ತಾನು
ತಾಳಲಯ ರಾಗಗಳು ಸಹಜ ಬರಲಿ

ಸಾಹಿತ್ಯ – ದ ರಾ ಬೇಂದ್ರೆ
ಸಂಗೀತ / ಗಾಯನ – ಸಿ ಅಶ್ವಥ್

Monday, March 11, 2013

ಸುಭಾಷರ ಜನ್ಮದಿನವೂ ಕಾಡುವ ಸಾವಿನ ಸಂಕಟ - ಪ್ರತಾಪ ಸಿಂಹ


ಕೃಪೆ : http://pratapsimha.com/2013/01/30/bos/




Mr. Subhas Chandra Bose is dead!
ಇಂಥದ್ದೊಂದು ಆಘಾತಕಾರೀ ಸುದ್ದಿ ಮೊದಲು ಹೊರಬಿದ್ದದ್ದು 1945ರ ಆಗಸ್ಟ್ 23ನೇ ತಾರೀಕು. ಸುದ್ದಿ ಬಿತ್ತರಿಸಿದ್ದು ಜಪಾನಿನ ‘ರೇಡಿಯೋ ಟೋಕಿಯೋ’. ಇಡೀ ಜಗತ್ತು ಇವತ್ತಿಗೂ ಅನುಮಾನದಿಂದಲೇ ನೋಡುವ ಅತ್ಯಂತ ದೊಡ್ಡ ಐತಿಹಾಸಿಕ ಸುಳ್ಳೊಂದು ಸದ್ದಿಲ್ಲದೆ ಹೀಗೆ ಹುಟ್ಟಿಕೊಂಡಿತು. ರೇಡಿಯೋ ಟೋಕಿಯೋದ ನ್ಯೂಸ್ ರೀಡರ್ ಹೇಳಿದ್ದಿಷ್ಟು “ವಿಮಾನ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡ ಮಿಸ್ಟರ್ ಸುಭಾಶ್ಚಂದ್ರ ಬೋಸ್ ಜಪಾನಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಭಾರತದ ‘ಆಜಾದ್ ಹಿಂದ್‌’ ಪ್ರಾಂತೀಯ ಸರ್ಕಾರದ ಮುಖ್ಯಸ್ಥರಾಗಿದ್ದ ಮಿ. ಬೋಸ್ ಆಗಸ್ಟ್ ಹದಿನಾರನೇ ತಾರೀಕಿನಂದು ವಿಮಾನದ ಮೂಲಕ ಸಿಂಗಾಪುರದಿಂದ ಜಪಾನಿಗೆ ಪ್ರಯಾಣಿಸುತ್ತಿದ್ದರು. ಜಪಾನಿನ ರಾಜಧಾನಿ ಟೋಕಿಯೋದಲ್ಲಿ ಅಲ್ಲಿನ ಜಪಾನೀ ಸರಕಾರದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲಿಕ್ಕಾಗಿ ಹೋಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಯಿತು. ಆಗಸ್ಟ್ ಹದಿನೆಂಟರ ಹದಿನಾಲ್ಕು ಗಂಟೆಗೆ (ಪೂರ್ವಾಹ್ನ ಎರಡು ಗಂಟೆಗೆ) ತೈಹೋಕು ವಿಮಾನ ನಿಲ್ದಾಣದ ಸಮೀಪ ಈ ಅಪಘಾತ ಸಂಭವಿಸಿತು. ತೀವ್ರವಾಗಿ ಗಾಯಗೊಂಡ ಬೋಸ್‌ರನ್ನು ಜಪಾನಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಆತ ಮಧ್ಯರಾತ್ರಿ ಸಾವನ್ನಪ್ಪಿದರು. ಬೋಸ್ ಅವರ ಜೊತೆಗೆ ಪ್ರಯಾಣಿಸುತ್ತಿದ್ದ ಲೆಫ್ಟಿನೆಂಟ್ ಜನರಲ್ ತ್ಸುನಾಮಸಾ ಶಿಡೈ ಅವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಸುಭಾಶ್ಚಂದ್ರ ಬೋಸ್ ಅವರ ಸೇನೆಯ ಅಧಿಕಾರಿ ಹಾಗೂ ಆಪ್ತ ಹಬೀಬರ್ ರೆಹಮಾನ್ ಮತ್ತಿತರ ನಾಲ್ಕು ಮಂದಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ”.
ಆದರೆ…
ಈ ಕುರಿತು ಜಪಾನ್ ಸರ್ಕಾರವಾಗಲಿ, ಅಲ್ಲಿನ ರಾಜಪ್ರಭುತ್ವಕ್ಕೊಳಪಟ್ಟ ಸೈನ್ಯದ ಮುಖ್ಯ ಕಚೇರಿಯಾಗಲಿ ಯಾವುದೇ ಅಧಿಕೃತ ಘೋಷಣೆ ಮಾಡಲಿಲ್ಲ, ಪ್ರಕಟಣೆ ಹೊರಡಿಸಲಿಲ್ಲ! ಒಂದು ವೇಳೆ ಜಪಾನ್ ರಾಜತಾಂತ್ರಿಕ ಕಾರಣಗಳಿಗಾಗಿ ಈ ಸುದ್ದಿಯನ್ನು ಮುಚ್ಚಿಟ್ಟಿತೆಂದು ನಂಬೋಣವೆಂದುಕೊಂಡರೂ ಅದಷ್ಟು ಸುಲಭವಿರಲಿಲ್ಲ. ಏಕೆಂದರೆ ನೇತಾಜಿ ಜೊತೆಗೆ ಜಪಾನಿ ಸೈನ್ಯದ ಲೆಫ್ಟಿನೆಂಟ್ ಜನರಲ್ ತ್ಸುನಾಮಸಾ ಶಿಡೈ ಕೂಡಾ ಸಾವನ್ನಪ್ಪಿದ್ದರು ಅಂತ ರೇಡಿಯೋ ಟೋಕಿಯೋ ಬಿತ್ತರಿಸಿತ್ತು. ಜನರಲ್ ಶಿಡೈ ಜಪಾನಿ ಸೇನೆಯ ಅತ್ಯಂತ ಹಿರಿಯ ಕಮಾಂಡರ್‌ಗಳಲ್ಲೊಬ್ಬರಾಗಿದ್ದರಲ್ಲದೆ, ಕೆಲಸಮಯದ ಹಿಂದಷ್ಟೆ ಕ್ವಾಂಟುಂಗ್ ಪ್ರಾಂತೀಯ ಸೈನ್ಯದ ಉಪಮುಖ್ಯಸ್ಥರಾಗಿ ನೇಮಕವಾಗಿದ್ದರು. ಹಾಗಾಗಿ ಜಪಾನ್ ಸರ್ಕಾರ ಮತ್ತು ಸೈನ್ಯ ಜನರಲ್ ಶಿಡೈ ಸಾವನ್ನು ಮುಚ್ಚಿಟ್ಟಿದ್ದು ಸಂಶಯ ತರಿಸುತ್ತದೆ.
ಹಾಗಾದರೆ ನಿಜಕ್ಕೂ ನಡೆದಿದ್ದೇನು?
1945 ಆಗಸ್ಟ್ ಇಪ್ಪತ್ಮೂರನೇ ತಾರೀಕು ‘ರೇಡಿಯೋ ಟೋಕಿಯೋ’ದ ಉದ್ಘೋಷಕ ಓದಿದ ಸುದ್ದಿಯನ್ನು ಎರಡು ದಿನದ ಹಿಂದೆಯೇ ಬರೆಯಲಾಗಿತ್ತು! ಅಂದರೆ ಆಗಸ್ಟ್ 21ನೇ ತಾರೀಕಿಗೇ ಈ ಸುದ್ದಿ ಸಿದ್ಧವಾಗಿತ್ತು. ಆಶ್ಚರ್ಯವೆಂದರೆ ಇದನ್ನು ಬರೆದಾತ ಒಬ್ಬ ಭಾರತೀಯ! ಹೆಸರು ಎಸ್. ವಿ. ಅಯ್ಯರ್! ಆ ಸಮಯದಲ್ಲಿ ಈತ ನೇತಾಜಿ ಸ್ಥಾಪಿಸಿದ್ದ ‘ಇಂಡಿಯನ್ ನ್ಯಾಶನಲ್ ಆರ್ಮಿ’ಯ ಸದಸ್ಯನಾಗಿದ್ದ. ಅಷ್ಟೇ ಅಲ್ಲ, ನೇತಾಜಿ ಬೋಸ್ ನೇತೃತ್ವದ ‘ಆಜಾದ್ ಹಿಂದ್‌’ ಪ್ರಾಂತೀಯ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಮಂತ್ರಿಯೂ ಆಗಿದ್ದ. ಇದಕ್ಕೂ ಮಿಗಿಲಾಗಿ ಸ್ವತಂತ್ರ ಭಾರತದ ಕನಸು ಕಂಡಿದ್ದ ನೇತಾಜಿ ಮಹತ್ವಾಕಾಂಕ್ಷೆಯಿಂದ ಸ್ಥಾಪಿಸಿದ್ದ ‘ಆಜಾದ್ ಹಿಂದ್ ರಾಷ್ಟ್ರೀಯಯ ಬ್ಯಾಂಕ್‌’ನ ಮುಖ್ಯಸ್ಥನೂ ಆಗಿದ್ದ. ನೇತಾಜಿಯವರ ನಂಬಿಕಸ್ಥ ಜೊತೆಗಾರನೊಬ್ಬನೇ ಅವರ ಸಾವಿನ ಸುದ್ದಿಯನ್ನು ಬರೆದಿದ್ದನೆಂಬುದು ನಿಜಕ್ಕೂ ಆಶ್ಚರ್ಯ ತರಿಸುತ್ತದೆ. ಆ ಸುದ್ದಿ ಬರೆಯೋದಕ್ಕಿಂತ ಕೇವಲ ನಾಲ್ಕು ದಿನ ಮೊದಲು ಅಂದರೆ ಆಗಸ್ಟ್ 17ನೇ ತಾರೀಕಿಗೆ ಈ ಅಯ್ಯರ್ ನೇತಾಜಿ ಜೊತೆಗೇ ಸೈಗಾನ್‌ಗೆ ಬಂದಿದ್ದ. ಅಲ್ಲಿಂದ ನೇತಾಜಿ ತೈಪೆಗೆ ಬಂದಾಗ ಅಯ್ಯರ್ ಜೊತೆಗಿರಲಿಲ್ಲ. ಸೈಗಾನ್‌ನಲ್ಲಿದ್ದ ಅಯ್ಯರ್‌ನನ್ನು ಟೋಕಿಯೋಗೆ ಕರೆಸಿಕೊಳ್ಳಲಾಗಿತ್ತು. ಆಗ ಆತನ ಜೊತೆಗಿದ್ದಿದ್ದು ಜಪಾನೀ ಸೇನಾಧಿಕಾರಿ ಕರ್ನಲ್ ಟಾಡಾ. ನೇತಾಜಿಯ ಆಜಾದ್ ಹಿಂದ್ ಸರ್ಕಾರದ ವಾರ್ತಾ ಮಂತ್ರಿಯೇ ಮಂತ್ರಿಯೇ ಖುದ್ದು ಬರೆದ ನೇತಾಜಿ ಸಾವಿನ ಸುದ್ದಿಯೇ ಜಗತ್ತಿನಾದ್ಯಂತ ಪತ್ರಿಕಾ ಮತ್ತು ರೇಡಿಯೋ ಕಚೇರಿಗಳಿಗೆ ತಲುಪಿದವು. ಈ ಕೆಲಸ ಮಾಡಿದ್ದು ಆ ಕಾಲದ ಜಪಾನಿನ ವಾರ್ತಾ ಸಂಸ್ಥೆ ‘ಡೊಮೈ ನ್ಯೂಸ್ ಏಜೆನ್ಸಿ’.


ಆ ಸಮಯದಲ್ಲಿ ಸುಭಾಷ್ ಚಂದ್ರ ಬೋಸರು ಬ್ರಿಟಿಷರಿಗೆ ಸಡ್ಡು ಹೊಡೆದು ‘ಆಜಾದ್ ಹಿಂದ್‌’ ಎಂಬ  ಪರ್ಯಾಯ ಸರಕಾರವನ್ನು ನಡೆಸುತ್ತಿದ್ದರು. ಅದೇ ಸರ್ಕಾರದಲ್ಲಿ ವಾರ್ತಾ ಮಂತ್ರಿಯಾಗಿದ್ದ ಅಯ್ಯರ್ ತನ್ನ ಪರಮೋಚ್ಛ ನಾಯಕ ಸಾವಿನ ಸುದ್ದಿಯನ್ನು ಅದು ಯಾಕೆ ಬರೆದ? ಟೋಕಿಯೋಗೆ ಬಂದ ಮೇಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನೇತಾಜಿ ಸತ್ತರೆಂಬ ಸಾಲುಗಳನ್ನು ಬರೆಯುವ ಮೊದಲು ಅಯ್ಯರ್ ಸುದ್ದಿ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಗೋಜಿಗೇ ಹೋಗಲಿಲ್ಲ ಯಾಕೆ?  ವಿಮಾನ ಅಪಘಾತಕ್ಕೀಡಾಯಿತು ಅಂತ ಹೇಳಲಾದ ತೈಪೆಯಲ್ಲೂ ಅಯ್ಯರ್ ಆ ಸಮಯದಲ್ಲಿ ಇರಲಿಲ್ಲ. ಹಾಗಾಗಿ ಸುದ್ದಿ ಬರೆಯುವ ವೇಳೆ ಅಯ್ಯರ್‌ಗಿದ್ದ ಏಕಮಾತ್ರ ಸುದ್ದಿಮೂಲವೆಂದರೆ ಜಪಾನೀ ಅಧಿಕಾರಿಗಳ ಹೇಳಿಕೆ ಮಾತ್ರ. ಇನ್ನೊಂದು ಆಶ್ಚರ್ಯವೆಂದರೆ ಇದು ತೈಪೆಯಲ್ಲಿ ಸುದ್ದಿಯಾಗಲೇ ಇಲ್ಲ!
ಇತ್ತ ಭಾರತದಲ್ಲಿ ನೇತಾಜಿಯ ಸಾವಿನ ಸುದ್ದಿ ಅವರ ಅಸಂಖ್ಯ ಅಭಿಮಾನಿಗಳಿಗೆ ಆಘಾತಕಾರಿಯಾಗಿತ್ತು, ದೇಶವೇ ಅಲ್ಲೋಲಕಲ್ಲೋಲವಾಗಿತ್ತು. ಇಲ್ಲಿ ಈ ಬಗ್ಗೆ ಮೊದಲು ವರದಿ ಮಾಡಿದ್ದು ‘ಹಿಂದುಸ್ತಾನ್ ಟೈಮ್ಸ್‌’ ಪತ್ರಿಕೆ. ಅದು ಆಗಸ್ಟ್ 25ರಂದು ಪ್ರಕಟಿಸಿದ ಸುದ್ದಿಯ ಮೂಲವೂ ಜಪಾನಿನ “ಡೊಮೈ ನ್ಯೂಸ್ ಏಜೆನ್ಸಿ”ಯದ್ದೇ ಆಗಿತ್ತು. ಆದರೆ ಈ ಪತ್ರಿಕೆ ಕೂಡಾ ವರದಿ ಸಂಪೂರ್ಣ ಸತ್ಯವೆಂಬಂತೇನೂ ಪ್ರಕಟಿಸಲಿಲ್ಲ. ಅದಕ್ಕಾಗಿಯೇ ಏನೋ ಅದು ಕೊಟ್ಟ ಹೆಡ್‌ಲೈನ್ “ರಿಪೋರ್ಟೆಡ್ ಡೆತ್ ಆಫ್ ಸುಭಾಷ್ ಬೋಸ್‌”! ವರದಿಯ ಕೊನೆಯಲ್ಲೊಂದು ಚಿಕ್ಕ ಟ್ವಿಸ್ಟ್ ಇತ್ತು. ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠವಾಗಿರುವ ಹಿಂದುಸ್ತಾನ್ ಟೈಮ್ಸ್, ‘ಜಪಾನೀಯರು ತಿಳಿಸಿದಂತೆ ಒಂದು ವೇಳೆ ನೇತಾಜಿಯ ಸಾವಿನ ಸುದ್ದಿ ನಿಜವೇ ಆಗಿದ್ದರೆ ಅದರಿಂದ ಕೋಟ್ಯಂತರ ಭಾರತೀಯ ಮನಸುಗಳಿಗೆ ಘಾಸಿಯಾಗುತ್ತದೆ. ಆದರೆ ಅದೇ ವೇಳೆಗೆ ಬ್ರಿಟಿಷ್ ಪ್ರಭುತ್ವಕ್ಕೆದುರಾಗಿದ್ದ ಬಹಳ ದೊಡ್ಡ ಸಂಕಟವೊಂದು ನಿವಾರಣೆಯಾಯ್ತು….” ಎಂದು ಷರಾ ಬರೆದಿತ್ತು.
ಅಂದರೆ ಒಂದು ವೇಳೆ ನೇತಾಜಿ ಬದುಕಿದ್ದರೆ ಅದರಿಂದ ಬ್ರಿಟಿಷ್ ಸರ್ಕಾರಕ್ಕೆ ಬಹಳ ದೊಡ್ಡ ವಿಪತ್ತು ಎದುರಾಗುತ್ತಿತ್ತು ಎಂಬುದು ನಿಚ್ಚಳವಾಯ್ತು. ಇದೇ ವೇಳೆಗೆ ಭಾರತದಲ್ಲಿ ನೇತಾಜಿ ಸಾವಿನ ಬಗ್ಗೆ ಜನ ಸಂಶಯ ವ್ಯಕ್ತಪಡಿಸತೊಡಗಿದರು. ಬಹುಶಃ ಜಪಾನೀಯರೇ ನೇತಾಜಿಯವರು ಭೂಗತರಾಗಲು ಸಹಕರಿಸಿರಬಹುದು. ಆ ಮೂಲಕ ಮಿತ್ರರಾಷ್ಟ್ರಗಳ ಮೇಲೆ ಯುದ್ಧ ಸಾರಿದ ತಪ್ಪಿಗಾಗಿ ದೊರಕುವ ಶಿಕ್ಷೆಯಿಂದ ನೇತಾಜಿಯವರನ್ನು ಪಾರು ಮಾಡಲು ಜಪಾನಿ ಸೈನ್ಯಾಧಿಕಾರಿಗಳೇ ಈ ಸುಳ್ಳು ಹಬ್ಬಿಸಿರಬಹುದೆಂಬ ಒಂದು ವಾದವೂ ಕೇಳಿಬಂತು. ಇಂಥದ್ದೊಂದು ಸಾಧ್ಯತೆಯನ್ನೂ ತಳ್ಳಿಹಾಕಲು ಸಾಧ್ಯವಿಲ್ಲ. ದಕ್ಷಿಣ ಭಾರತದ ಪ್ರಮುಖ ಇಂಗ್ಲಿಷ್ ದೈನಿಕ ‘ದಿ ಹಿಂದು’ ಈ ಬಗ್ಗೆ ನೇರವಾಗಿ ಬರೆಯಲಿಲ್ಲ. ಬದಲಿಗೆ ಅದು ಲಂಡನ್‌ನಲ್ಲಿ ವಾಸಿಸುತ್ತಿರುವ ಭಾರತೀಯರು ನೇತಾಜಿ ಸಾವಿನ ಸುದ್ದಿಯನ್ನು ನಂಬಲಿಲ್ಲ ಅಂತನ್ನೋ ರೀತಿಯ ವರದಿ ಬರೆಯಿತು. ಇದೇ ರೀತಿಯ ವರದಿಯನ್ನು ಹಿಂದುಸ್ತಾನ್ ಟೈಮ್ಸ್ ಕೂಡಾ ಪ್ರಕಟಿಸಿತು. ‘ಬೋಸ್ ಡೆಡ್, ಸ್ಟೋರಿ ನಾಟ್ ಬಿಲೀವ್ಡ್ ಇನ್ ಲಂಡನ್‌’ ಎಂಬ ಹೆಡ್ಡಿಂಗ್‌ನ ಈ ವರದಿಯಲ್ಲಿ ಒಂದು ಅತ್ಯಂತ ಮಹತ್ವದ ಸಂಗತಿಯನ್ನು ಉಲ್ಲೇಖಿಸಲಾಗಿತ್ತು. ಅದೇನೆಂದರೆ ಹಿಂದೊಮ್ಮೆ ಸುಭಾಷ್‌ಶ್ಚಂದ್ರ ಬೋಸ್‌ರು ಜರ್ಮನಿಯಿಂದ ನಾಪತ್ತೆಯಾದಾಗಲೂ ಜಪಾನ್ ಇದೇ ರೀತಿಯ ಸುದ್ದಿ ಹಬ್ಬಿಸಿತ್ತು. ಆದರೆ ಬಳಿಕ ನೇತಾಜಿ ಟೋಕಿಯೋದಲ್ಲಿ ಪ್ರತ್ಯಕ್ಷವಾಗಿದ್ದರು. ಈ ಘಟನೆಯನ್ನೇ ಉಲ್ಲೇಖಿಸಿ ತರ್ಕ ಮುಂದಿಟ್ಟ ಪತ್ರಿಕೆ ‘ಜಪಾನಿ ಸುದ್ದಿ ಸಂಸ್ಥೆಗಳಿಗೆ ಇಂತಹ ಚಾಳಿಯಿದೆ. ಈ ಬಾರಿ ನೇತಾಜಿ ಸಾವಿನ ಸುದ್ದಿಯು ಹೊರಬಂದ ಕಾಲ ಬಹಳ ಪರಿಪಕ್ವವಾಗಿದೆ. ಈ ಸುದ್ದಿ ಕಪೋಲಕಲ್ಪಿತವಾಗಿರುವ ಎಲ್ಲಾ ಸಾಧ್ಯತೆಗಳಿವೆ. ಬಹುಶಃ ನೇತಾಜಿಯವರೇ ಮಿತ್ರ ರಾಷ್ಟ್ರಗಳ ಸೇನೆಯಿಂದ ಸುಲಭವಾಗಿ ಪಾರಾಗಲು ಯೋಚಿಸಿರಬಹುದೇ?’ ಎಂಬ ಸಂಶಯವನ್ನೂ ವರದಿ ವ್ಯಕ್ತಪಡಿಸಿತ್ತು!
ಆದರೆ ನೇತಾಜಿ ಸಾವಿನ ಸುದ್ದಿಯ ಬಗ್ಗೆ ಮಹಾತ್ಮ ಗಾಂಧಿ ತಕ್ಷಣಕ್ಕೆ ನೀಡಿದ ಪ್ರತಿಕ್ರಿಯೆ ಏನು ಗೊತ್ತಾ? “ಸುಭಾಷ್ ಬೋಸ್ ಸತ್ತಿದ್ದಾರೆಂಬುದು ನಿಜವಾಗಿದ್ದರೂ ಆತ ನಿಸ್ಸಂಶಯವಾಗಿಯೂ ಮಹಾನ್ ದೇಶಭಕ್ತ. ಆದರೆ ಆತ ತಪ್ಪುದಾರಿ ಹಿಡಿದಿದ್ದ! ಇತ್ತ “ನಮ್ಮೊಳಗಿದ್ದ ವೈಯಕ್ತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಾನು ನೇತಾಜಿಯವರ ಬಗ್ಗೆ ಅತೀವವಾದ ಗೌರವಭಾವನೆ ಹೊಂದಿದ್ದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ” ಎಂದುಬಿಟ್ಟರು ನೆಹರು ಮಹಾಶಯರು!
ಭಾರತಕ್ಕೆ ಸ್ವಾತಂತ್ರ್ಯ ಬಂದ ಕ್ಷಣದಲ್ಲೂ ಸುಭಾಶರನ್ನು ಕಳೆದುಕೊಂಡ ಸೂತಕ ದೇಶವನ್ನು ಆವರಿಸಿತ್ತು. ಸಾವಿನ ರಹಸ್ಯವನ್ನು ಭೇದಿಸುವಂತೆ ನೆಹರು ಸರ್ಕಾರದ ಮೇಲೆ ಒತ್ತಡ ಬಿತ್ತು. ಹಾಗಾಗಿ 1956ರಲ್ಲಿ ಶಾ ನವಾಝ್ ಸಮಿತಿ ರಚನೆಯಾಯಿತು. ಬೋಸರು ಭಾರತೀಯ ರಾಷ್ಟ್ರೀಯ ಸೇನೆಯನ್ನು ತಂದರೆ ನಾನೇ ಅದರ ವಿರುದ್ಧ ಖಡ್ಗ ಹಿಡಿದು ಹೋರಾಡುತ್ತೇನೆ ಎಂದಿದ್ದ ನೆಹರು ರಚಿಸಿದ ಸಮಿತಿಯಿಂದ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ? “ವಿಮಾನ ಅಪಘಾತದಲ್ಲಿ ಮಡಿದರು” ಎಂದು ಷರಾ ಬರೆಯಿತು ಶಾ ನವಾಝ್ ಸಮಿತಿ. ಆದರೆ ಒತ್ತಡ ನಿಲ್ಲಲಿಲ್ಲ. ಅದಕ್ಕೆ ಮಣಿದ ನೆಹರು ಪುತ್ರಿ ಇಂದಿರಾ ಗಾಂಧಿಯವರು ಖೋಸ್ಲಾ ಸಮಿತಿ ರಚಿಸಿ, ಅದರ ಕೈಯಿಂದಲೂ “ಮಡಿದರು” ಎಂದು ಬರೆಸಿ ಕಣ್ಣೊರೆಸಲು ಯತ್ನಿಸಿದರೂ ಜನ ನಂಬಲಿಲ.್ಲ ಕೊನೆಗೆ 1998, ಏಪ್ರಿಲ್ 30ರಂದು ಕೋಲ್ಕತಾ ಹೈಕೋರ್ಟ್, “ವಿವಾದಕ್ಕೆ ಅಂತ್ಯ ಕಾಣಿಸುವಂಥ ಒಂದು ಕೂಲಂಕಷ ಶೋಧನೆ, ಪರಾಮರ್ಶೆ ಮಾಡುವ ಆಯೋಗ ರಚನೆ ಮಾಡಿ” ಎಂದು ಆಗಿನ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಆದೇಶ ನೀಡಿತು. 1999ರಲ್ಲಿ ಅಟಲ್ ಸರ್ಕಾರ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮನೋಜ್ ಮುಖರ್ಜಿಯವರ ಸಮಿತಿ ರಚನೆ ಮಾಡಿತು. ಅದು 2006ರಲ್ಲಿ ತನ್ನ ವರದಿ ನೀಡಿತು, ಆದರೆ ಅಷ್ಟರೊಳಗೆ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರ ವರದಿಯನ್ನೇ ತಿರಸ್ಕಾರ ಮಾಡಿಬಿಟ್ಟಿತು!
ಏಕೆ ಗೊತ್ತಾ?
ಶಾ ನವಾಝ್, ಖೋಸ್ಲಾ ಸಮಿತಿಗಳಂತೆ ನೆಹರು ಕುಟುಂಬಕ್ಕೆ ‘ಬೇಕಾದ’ ವರದಿಯನ್ನು ಮುಖರ್ಜಿ ಆಯೋಗ ನೀಡಲಿಲ್ಲ. ಅಷ್ಟೇ ಅಲ್ಲ, ಸುಭಾಷ್ ಸಾವಿನ ಮೇಲಿದ್ದ ಪರದೆಯನ್ನು ಅದು ಕಿತ್ತೊಗೆದಿತ್ತು! ಸುಭಾಷ್ ಚಂದ್ರ ಬೋಸ್ ಈಗ ಬದುಕಿಲ್ಲ, ಆದರೆ 1945 ಆಗಸ್ಟ್ 18ರಂದು ತೈವಾನಿನ ತೈಹೋಕು ಬಳಿ ನಡೆದ ವಿಮಾನ ಅಪಘಾತದಲ್ಲಿ ಮಡಿದರು ಎನ್ನಲು ಅಂಥದ್ದೊಂದು ಅಪಘಾತವೇ ನಡೆದಿಲ್ಲ, ಆ ವಿಮಾನ ಮರುದಿನವೂ ಹಾರಾಟ ನಡೆಸಿತ್ತು ಎಂಬ ಸತ್ಯವನ್ನು ಹೊರಹಾಕಿತ್ತು!! ಅಷ್ಟೇ ಅಲ್ಲ, ಜಪಾನಿನ ರೆಂಕೋಜಿ ದೇವಾಲಯದಲ್ಲಿರುವ ಚಿತಾಭಸ್ಮ ಕೂಡ ನೇತಾಜಿವರದ್ದಲ್ಲ ಎಂಬ ಕಠೋರ ಸತ್ಯವನ್ನು ಬಹಿರಂಗ ಮಾಡಿತ್ತು!!! ಈ ವರದಿಯನ್ನು ಆಧರಿಸಿ ನೇತಾಜಿ ಸೇನೆಯಲ್ಲಿದ್ದ ಮನ್ವತಿ ಆರ್ಯ ಅವರು “Judgement: No Aircrash, NO Death” ಎಂಬ ಪುಸ್ತಕ ಹೊರತಂದಿದ್ದಾರೆ. 2007ರಲ್ಲಿ ನೇತಾಜಿ ಬಗ್ಗೆ “Patriot” ಎಂಬ ಪುಸ್ತಕವನ್ನೂ ಬರೆದಿದ್ದರು. “ನೇತಾಜಿ ಸತ್ತಿದ್ದು ಭಾರತದಲ್ಲೇ ಹೊರತು, ವಿಮಾನ ಅಪಘಾತದಲ್ಲಲ್ಲ; ಬ್ರಿಟಿಷರನ್ನು ಹೊರದಬ್ಬಿದ್ದು ಗಾಂಧಿಯಲ್ಲ, ಬೋಸ್‌” ಎಂದು ಕಳೆದ ವರ್ಷ ಖ್ಯಾತ ಅಂಕಣಕಾರ ಟಿಜೆಎಸ್ ಜಾರ್ಜ್ ಕೂಡ ಬರೆದಿದ್ದರು. ಈ ಮೇಲಿನ ಪುಸ್ತಕಗಳು, ಮುಖರ್ಜಿ ಆಯೋಗದ ವರದಿ ಹಾಗೂ ಇತರ ದಾಖಲೆಗಳನ್ನು ಆಧರಿಸಿ ಸುಭಾಷ್ ಜನ್ಮ ದಿನವಾದ ಇಂದು(ಜನವರಿ 23) ಅವರ ಸಾವಿನ ರಹಸ್ಯವನ್ನು ಭೇದಿಸುವ ಪುಸ್ತಕ ಹೊರತರಲು ನಾನೂ ನಿರ್ಧರಿಸಿದ್ದೆ.  ಈ ಮಧ್ಯೆ, ಜನವರಿ 8ರಂದು ಕೋಲ್ಕತಾದ “ಸ್ಟೇಟ್ಸ್‌ಮನ್‌” ಪತ್ರಿಕೆಯಲ್ಲಿ ವರದಿಯೊಂದು ಪ್ರಕಟವಾಗಿದ್ದು ಬೋಸ್ ಬದುಕು-ಸಾವಿಗೆ ಸಂಬಂಧಿಸಿದ “33 ಕ್ಲಾಸಿಫಯ್ಡ್(ಗೌಪ್ಯ) ದಾಖಲೆ”ಗಳನ್ನು ನೀಡುವಂತೆ ಬೋಸ್ ಕುಟುಂಬದ 30 ಸದಸ್ಯರು ಮಾಹಿತಿ ಹಕ್ಕಿನ ಮೂಲಕ ಮನವಿ ಮಾಡಿದರೂ ಕೇಂದ್ರದ ಕಾಂಗ್ರೆಸ್ ಸರ್ಕಾರ ತಿರಸ್ಕಾರ ಮಾಡಿದೆ! ಎಲ್ಲ ಕಾರಣ, ದಾಖಲೆ, ಮಾಹಿತಿಗಳನ್ನು ಹೊಂದಿದ ಸಮಗ್ರ ಪುಸ್ತಕವನ್ನು ಇನ್ನೊಂದು ತಿಂಗಳೊಳಗಾಗಿ ನಿಮ್ಮ ಕೈಗಿಡುತ್ತೇನೆ.
ಇದೇನೇ ಇರಲಿ, ‘Give me blood and I will give you freedom ಎನ್ನುತ್ತಿದ್ದ, ಅಂಡಮಾನ್ ನಿಕೋಬಾರ್‌ಗಳನ್ನು ವಶಕ್ಕೆ ತೆಗೆದುಕೊಂಡು ಶಹೀದ್, ಸ್ವರಾಜ್ ಎಂಬ ಹೆಸರಿಟ್ಟು ಈ ದೇಶದ ಭೂಭಾಗವನ್ನು ಮೊದಲಿಗೆ ದಾಸ್ಯಮುಕ್ತವಾಗಿಸಿದ ಭಾರತಾಂಬೆಯ ಧೀರ ಪುತ್ರ ಏನಾದ ಎಂಬುದೇ ದೇಶವಾಸಿಗಳಿಗೆ ತಿಳಿದಾಗಿರುವುದು ಎಂತಹ ವಿಪರ್ಯಾಸವಲ್ಲವೆ? ಆ ಕಾರಣಕ್ಕಾಗಿಯೇ ಅವರ ಜನ್ಮದಿನವಾದ ಇಂದು ಅಂಥ ಸುಪುತ್ರ ನಮ್ಮ ನೆಲದಲ್ಲಿ ಜನಿಸಿದನಲ್ಲಾ ಎಂಬ ಖುಷಿಗಿಂತ ಸಾವಿನ ಸಂಟಕವೇ ಹೆಚ್ಚು ಕಾಡುತ್ತದೆ!

Friday, March 8, 2013

ಮನೆ ದೇವ್ರು


ಬುದಿವಂತ


ಉಪೇಂದ್ರ


ಮಿಲನ


ಕೆಂಪೇಗೌಡ


ವಿಷ್ಣುವರ್ಧನ


ಎಕೆ ೪೭


ಕನ್ನಡ ಸಿನಿಮಾ - ಮುಂಗಾರು ಮಳೆ




ಮಾಹಿತಿ ಕೃಪೆ - http://kn.wikipedia.org/wiki/ಮುಂಗಾರು_ಮಳೆ


ಮುಂಗಾರು ಮಳೆ

ಮುಂಗಾರು ಮಳೆ ೨೦೦೬ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ಗಣೇಶ್, ಸಂಜನಾ ಗಾಂಧಿ ಮತ್ತು ಅನಂತ್ ನಾಗ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾದ ೪೦೦ ದಿನಗಳ ನಂತರ ಗಲ್ಲಾಪೆಟ್ಟಿಗೆಯಲ್ಲಿ ೭೫ ಕೋಟಿ ಗಳಿಕೆ ಚಿತ್ರವು ಎಲ್ಲಾ ಅಪೇಕ್ಷೆಗಳನ್ನೂ ಮೀರಿ ಯಶಸ್ಸುಗಳಿಸಿದ್ದಕ್ಕೆ ಸಾಕ್ಷಿ. ಮುಂಗಾರು ಮಳೆ ಚಿತ್ರವು ರಾಜ್ಯದ ಹಲವೆಡೆ ಯಶಸ್ವಿ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿದ್ದಲ್ಲದೇ ಶತದಿನೋತ್ಸವವನ್ನು ದಾಟಿ ರಜತ ಮಹೋತ್ಸವವನ್ನು ಆಚರಿಸಿಕೊಂಡಿದೆ. ಬೆಂಗಳೂರಿನ ಪಿವಿಆರ್ ಸಿನೆಮಾಸ್ ಚಿತ್ರಮಂದಿರದಲ್ಲಿ ಸತತವಾಗಿ ಒಂದು ವರ್ಷ ಪ್ರದರ್ಶಿಸಲ್ಪಟ್ಟಿದ್ದು ಭಾರತದಲ್ಲಿ ಒಂದು ದಾಖಲೆ[೧].
ಚಿತ್ರವನ್ನು ತೆಲುಗಿನಲ್ಲಿ ವಾನ ಮತ್ತು ಬೆಂಗಾಲಿಯಲ್ಲಿ ಪ್ರೇಮೆರ್ ಕಹಿನಿ ಎಂದು ಮರು-ನಿರ್ಮಾಣ ಮಾಡಲಾಯಿತು.


ನಿರ್ದೇಶಕ ಯೋಗರಾಜ್ ಭಟ್ ಅವರು ಮಯೂರ್, ರಾಧಿಕಾ ನಟಿಸಿದ ಮಣಿ ಮತ್ತು ಸುದೀಪ್, ರಮ್ಯಾ ನಟಿಸಿದ ರಂಗ (ಎಸ್.ಎಸ್.ಎಲ್.ಸಿ) ಚಿತ್ರಗಳನ್ನ ನಿರ್ದೇಶಿಸಿದ್ದರು. ಎರಡೂ ಚಿತ್ರಗಳು ಹೆಚ್ಚಿನ ಯಶಸ್ಸು ಕಾಣಲಿಲ್ಲ. ನಂತರ ಯುವ ಲೇಖಕ ಪ್ರೀತಂ ಗುಬ್ಬಿ ಜೊತೆಗೂಡಿ ಮುಂಗಾರು ಮಳೆ ಚಿತ್ರದ ಕಥೆ ನಿರ್ಮಾಣ ಪ್ರಯತ್ನಿಸಿದ್ದರು. ಯೋಗರಾಜ್ ಭಟ್ ಅವರು ಚಿತ್ರದ ಕಥೆಯನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ನಿರೂಪಿಸಿದ್ದರು, ನಂತರ ಪುನೀತ್ ಅವರು ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದರು. "ಕಾಮಿಡಿ ಟೈಮ್" ಗಣೇಶ್ ಅವರು ಮುಂಗಾರು ಮಳೆ ಚಿತ್ರದ ಕಥೆ ನಿರ್ಮಾಣದ ಹಂತದಲ್ಲೆ ಯೋಗರಾಜ್ ಅವರೊಡನೆ ಕೆಲಸ ಮಾಡಿದ್ದರಿಂದ ಚಿತ್ರದಲ್ಲಿ ನಟಿಸುವ ಕುತೂಹಲದಲ್ಲಿದ್ದರು. ಯೋಗರಾಜ್ ಅವರನ್ನು ನಿರ್ಮಾಪಕ ಈ. ಕೃಷ್ಣಪ್ಪ ಅವರಿಗೆ ಭೇಟಿ ಮಾಡಿಸಿದವರ ಗಣೇಶ್ ಅವರೆ. ಕೃಷ್ಣಪ್ಪ ಅವರು ಮತ್ತು ಗಣೇಶ್ ಒಂದೆ ಊರಿನವರಾದ್ದರಿಂದ ಮುಂಚಿನ ಪರಿಚಯವಿತ್ತು, ಕೃಷ್ಣಪ್ಪನವರು ಚಿತ್ರ ನಿರ್ಮಿಸಲು ಒಪ್ಪಿದರು. ಕನ್ನಡದ ಯಾವುದೇ ಹೆಸರಾಂತ ನಟಿ ಸಿಗದಿದ್ದ ಕಾರಣ ಯೋಗರಾಜ್ ಅವರು ಉತ್ತರ ಭಾರತದ ಸಂಜನಾ ಗಾಂಧಿ ಅವರನ್ನು ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಿದರು. ಇದು ಇವತ್ತಿನವರೆಗು ಅದ್ಭುತ್ ಚಿತ್ರ ಹೆಲ್ಲಬಹುದು.


ಗಣೇಶ್ - ಪ್ರೀತಂ ಪಾತ್ರದಲ್ಲಿ
ಸಂಜನಾ ಗಾಂಧಿ - ನಂದಿನಿ ಪಾತ್ರದಲ್ಲಿ
ಅನಂತ್ ನಾಗ್ - ಕರ್ನಲ್ ಸುಬ್ಬಯ್ಯ ಪಾತ್ರದಲ್ಲಿ
ಸುಧಾ ಬೆಳವಾಡಿ - ಕಮಲಾ ಪಾತ್ರದಲ್ಲಿ
ಪದ್ಮಜಾ ರಾವ್ - ಬಬ್ಲೀ ಬಬೀತ ಪಾತ್ರದಲ್ಲಿ
ದಿಗಂತ್ - ಗೌತಮ್ ಪಾತ್ರದಲ್ಲಿ
ನೀನಾಸಂ ಅಶ್ವತ್ಥ್ - ಜಾಲಿ ಪಾತ್ರದಲ್ಲಿ
ಜೈಜಗದೀಶ್ - ಜಯಂತ್ ರಾವ್ ಪಾತ್ರದಲ್ಲಿ.

ಕೂಲ್ - ಕನ್ನಡ ಸಿನಿಮಾ,