ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Saturday, March 29, 2014

ಋಗ್ವೇದ ಮಂಡಲ -೧, ಸೂಕ್ತ - ೧೬೧ರಲ್ಲಿ ಉಚಥ್ಯ ಋಷಿವರೇಣ್ಯರು ತಮ್ಮ ಸಂಶೋಧನಾ ಅನುಭವವನ್ನು ಗಣಕೀಕರಿಸಿ ಇಂತೆಂದಿದ್ದಾರೆ:

       

             "ಆಹುಸ್ತೇ ತ್ರೀಣಿ ಬಂಧನಾನಿ ತ್ರೀಣಿತ ಆಹುರ್ದಿವಿ ಬಂಧನಾನಿ ತ್ರೀಣ್ಯಪ್ಸು ತ್ರೀಣ್ಯಂತಃ ಸಮುದ್ರೇ "||

ಎಂಬುದು ಉಚಥ್ಯರ ಅಭಿಮತ. ಅದರ ಸೂತ್ರದ ಒಟ್ಟು ಸರಳ ಅರ್ಥ ಹೀಗಿದೆ- ಪ್ರಪಂಚದ ಎಲ್ಲಾ ಆಗುಹೋಗುಗಳಿಗೂ ಮುಖ್ಯವಾಗಿ ೩ ಕಾರಣವಿರುತ್ತದೆ. ಆ ಕಾರಣವೆಂಬುದೇ ಈ ಜೀವನಬಂಧನ. ಅಂದರೆ ಕರ್ಮ + ಋಣ + ಯೋಗ ಎಂಬ ಮೂರರಿಂದಾಗಿ ಜೀವ ಜಗತ್ತು ನಿರಂತರವಾಗಿರುತ್ತದೆ. ಆ ಬಂಧನ ಬಿಡಿಸಿಕೊಳ್ಳುವ ಜಾಣ್ಮೆಯನ್ನು ಜೀವಿಗಳು ತಪ್ಪಿಯೂ ಮಾಡಲಾರವು. ಹಾಗಾಗಿಯೇ ಜೀವ = ನೀರು, ಕಾಲ = ಮಧ್ಯ, ಆದಿ, ಅಂತ್ಯ. ಮಾರ್ಗ ಸಮಯೋಜಿತವಾದ ಜೀವನ ಸಾಗರ ಅಥವಾ ಸಮುದ್ರ. ಅದರ ಸಂಖ್ಯಾ ಮೊತ್ತವೇ ಕರ್ಮ. ಅದರ ಶೇಷವೇ ಯೋಗ. ಗುಣಿತವೇ ಋಣಗಳಾಗಿ ವ್ಯವಹರಿಸುತ್ತದೆ. ಗುಣಿತ ಮೂಲವ್ಯಾವುದು? ಮೊತ್ತವ್ಯಾವುದು? ಅರಿವಿಲ್ಲ ಜೀವಿಗಳಿಗೆ! ಹಾಗಾಗಿ ಅಸಂಖ್ಯಾತವೆಂದಿದೆ. ಅದಕ್ಕೊಂದು ಸೂತ್ರ ಅಳವಡಿಸಲ್ಪಟ್ಟಿದೆ. ಆ ಸಮೀಕರಣ ಅರ್ಥ ಮಾಡಿಕೊಂಡಲ್ಲಿ ಮಾನವ ಜೀವನ ಸಾರ್ಥಕ. ಆತನು ದೇವತ್ವಕ್ಕೇರುವುದ ಖಂಡಿತ. ಆದರೆ ಅರ್ಥ ಮಾಡಿಕೊಳ್ಳಲು, ಅಧ್ಯಯನ ಮಾಡಲು ನಿಮಗೆ ಪುರುಸೊತ್ತು ಇದೆಯೇ? ಇಲ್ಲ. ಕಾರಣ ನಮ್ಮ ಈಗಿನ ಸ್ಥಿತಿ. ನಾವೇ ವಿಧಿಸಿಕೊಂಡ ಜೀವನ ವಿಧಾನ. ನಮ್ಮ ಶಿಕ್ಷಣ ಪದ್ಧತಿ, ನಮ್ಮ ಧನದಾಹ, ನಮ್ಮ ಅತೀ ದುರಾಸೆ, ನಮ್ಮ ಮೂರ್ಖತನ, ನಮ್ಮ ಹುಚ್ಚು ಕಲ್ಪನೆ. ಇದಕ್ಕೆಲ್ಲಾ ಕಾರಣ ಬ್ರಿಟಿಷರು ನಮಗೆ ಮಾಡಿದ ಮೋಸ. ಬುದ್ಧಿಜೀವಿಗಳೆಂಬ ಸೋಗಲಾಡಿ ಲದ್ದಿಗಳಿಗೆ ಇದು ಅರ್ಥವಾಗಲಾರದು. ಅದಕ್ಕಾಗಿ ನಮ್ಮ ಹಿಂದಿನ ಜೀವನ ಪದ್ಧತಿಯ ಬಗ್ಗೆ ಸ್ವಲ್ಪ ಬರೆದು ನಂತರ ಸಮೀಕರಣದ ಬಗ್ಗೆ ಬರೆಯುತ್ತೇನೆ. ಏಕೆಂದರೆ ಆಗಲಾದರೂ ಸಮೀಕರಣ ನಮಗೆ ಸುಲಭವಾದೀತು.

        ಹದಿನೆಂಟನೆಯ ಶತಮಾನದ ಪೂರ್ವದಲ್ಲಿ ನಮಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು. ನಮ್ಮನ್ನು ನಾವೇ ಆಳಿಕೊಳ್ಳುತ್ತಿದ್ದೆವು. ಏಕೆಂದರೆ ಆಗ ನಮಗೆ ತೃಪ್ತಿಯಿತ್ತು, ಜೀವನದರಿವಿತ್ತು, ದುರಾಸೆ ಇರಲಿಲ್ಲ, ಮಹತ್ವಾಕಾಂಕ್ಷೆ ಇರಲಿಲ್ಲ, ಉತ್ತಮ ವಿಧ್ಯೆಯಿತ್ತು. ಅದರ ಕೆಲ ಮುಖ್ಯ ಧ್ಯೇಯ ಗಮನಿಸಿ -
·        ಮಾತೃದೇವೋ ಭವ
·        ಪಿತೃ ದೇವೋ ಭವ
·        ಆಚಾರ್ಯ ದೇವೋ ಭವ
·        ಅತಿಥಿ ದೇವೋ ಭವ
·        ಸಹನಾವವತು | ಸಹನೌಭುನಕ್ತು | ಸಹ ವೀರ್ಯಂ ಕರವಾವಹೈ | 
ತೇಜಸ್ವಿನಾವಧೀತಮಸ್ತು | ಮಾದ್ವಿಷಾವಹೈ ||
·        ಸಂಗ  ಚ್ಛಧ್ವಂ ಸಂ ವದಧ್ವಂ ಸಂ ವೋ ಮನಾಂಸಿ ಜಾನತಾಂ | 
ದೇವಾ ಭಾಗಂ ಯಥಾ ಪೂರ್ವೇ ಸಂಜಾನಾನಾ ಉಪಾಸತೇ ||
·        ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ಮನಃ ಸಹ ಚಿತ್ತಮೇಷಾಮ್ | 
ಸಮಾನಂ ಮಂತ್ರಮಭಿಮಂತ್ರಯೇ ವಃ ಸಮಾನೇನ ವೋ ಹವಿಷಾ ಜುಹೋಮಿ ||
·        ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ | 
ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ ||
·        ಕೃಣ್ವಂತೋ ವಿಶ್ವಮಾರ್ಯಂ ||
·        ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ
·        ಗಾವೋ ವಿಶ್ವಸ್ಯ ಮಾತರಃ
· ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ | ಗೋಬ್ರಾಹ್ಮಣೇಭ್ಯೋ ಶುಭಮಸ್ತು ನಿತ್ಯಂ ಲೋಕಾಃ ಸಮಸ್ತಾಃ ಸುಖಿನೋ ಭವಂತು ||

       ಹೀಗೆ ಉದಾಹರಿಸುತ್ತಾ ಹೋದರೆ ನಾವೆಷ್ಟು ವಿಶಾಲ ಹೃದಯಿಗಳು ಎಂಬುದು ಅರ್ಥವಾಗುತ್ತದೆ. ಆಗ ಇದ್ದುದ್ದು ಕೂಡು ಕುಟುಂಬ. ಒಬ್ಬ ಯಜಮಾನ, ಅವನೇ ಇಡೀ ಕುಟುಂಬದ ಪಾಲನೆ, ಪೋಷಣೆಗೆ ಜವಾಬ್ದಾರ. ಆಗಲೂ ದುಡಿಮೆ ಇತ್ತು. ಕುಟುಂಬ ಪೋಷಣೆ ಇತ್ತು. ಜನ ತೃಪ್ತರಾಗಿ ಬದುಕುತ್ತಿದ್ದರು. ನಿಧಾನವಾಗಿ ಬ್ರಿಟಿಷರು ಬಿತ್ತಿದ ವಿಷಬೀಜವು ನಮ್ಮ ಕುಟುಂಬ ವ್ಯವಸ್ಥೆಯನ್ನೇ ಒಡೆಯಿತು. ಯಜಮಾನಿಕೆ ಪದ್ಧತಿಯು ದಾಸ್ಯವೆಂದು ಬಿಂಬಿಸಿದರು. ಈಗ ಗಂಡ, ಹೆಂಡತಿ, ಮಕ್ಕಳು, ಎಲ್ಲರೂ ದುಡಿಮೆಯ ಯಂತ್ರಗಳಾಗುತ್ತಿದ್ದಾರೆ. ದುಡಿದು ದುಡಿದು ಸಾಯುತ್ತಿದ್ದಾರೆ. ಹಾಗಾಗಿ ಪುರುಸೊತ್ತಿಲ್ಲ. ಈಗ ಬಾಂಧವ್ಯಕ್ಕೆ ಬೆಲೆಯಿಲ್ಲ, ಗೌರವವಿಲ್ಲ. ಹಣ ಮಾತ್ರ ಲೋಕದ ಎಲ್ಲವೂ ಆಗಿದೆ. ಆದರೆ ತೃಪ್ತಿ ಇಲ್ಲ. ಹಿಂದೆ ತೃಪ್ತಿಯಿತ್ತು, ಪೂರ್ಣ ಸ್ವಾತಂತ್ರ್ಯವಿತ್ತು. ನೀವು ದುಡಿದ ಸಂಪತ್ತು ನಿಮ್ಮದಾಗಿತ್ತು. ಆದರೆ ಈಗ ನೀವು ದುಡಿದ ಹಣ ನಿಮ್ಮದಲ್ಲ. ನಿಮ್ಮದು ಎಂಬ ಭ್ರಾಂತಿಯಲ್ಲಿ ಇದ್ದೀರಷ್ಟೆ. ಈಗ ನಿಮ್ಮನ್ನು ನೀವು ಆಳಿಕೊಳ್ಳುತ್ತಿಲ್ಲ. ಇದು ಒಂದು ರೀತಿಯ "ಭಯಂಕರ ದಾಸ್ಯ". ಆದರೆ ಭ್ರಾಂತಿ, ಹುಚ್ಚಿನ ಅತಿರೇಕದಲ್ಲಿರುವ ನಿಮಗೆ ಅರ್ಥವಾಗುತ್ತಿಲ್ಲವಷ್ಟೆ.
     
ಹಿಂದೆ "ನಮ್ಮ ಹಿರಿಯರಿಗೆ ಸಾವಿರಾರು ಎಕರೆ ಜಮೀನಿತ್ತು". ಈ ವಾಕ್ಯ ದೇಶದ ೭೦% ಜನ ಹೇಳುತ್ತಾರೆ. ಈಗ ಅವರು ಸತ್ತರೆ ಹುಗಿಯಲು 3x6 ಅಡಿ ಜಾಗವಿಲ್ಲದವರ ಸಂಖ್ಯೆ ೨೦ ಕೋಟಿ. ಇವರಿಗೆ ಒಂದಿಂಚು ಭೂಮಿಯೂ ಇಲ್ಲ. ಇನ್ನು ೪೫ ಕೋಟಿ ಜನರಿಗೆ ಅಡಿಲೆಕ್ಕದಲ್ಲಿ ಎಲ್ಲೋ ಸ್ವಲ್ಪ ಜಮೀನಿರಬಹುದು. ಆದರೆ ಅದರ ಪೂರ್ಣ ಸ್ವಾತಂತ್ರ್ಯವಿಲ್ಲ. ಪ್ರತಿ ವರ್ಷ ನೀವು ನಿಮ್ಮ ಪಂಚಾಯಿತಿಗೆ ಅಥವಾ ನಗರಸಭೆಗೆ ಸ್ಥಳ ಬಾಡಿಗೆ ಅರ್ಥಾತ್ ಕಂದಾಯ ಕಟ್ಟಿದರೆ ಮಾತ್ರ ನಿಮ್ಮದದು. ಇಲ್ಲವಾದರೆ ನಿಮ್ಮದಲ್ಲ. ಬ್ಯಾಂಕಿನಲ್ಲಿ ಹಣ ಇಟ್ಟರೆ ಅದು ಲೆಕ್ಕಬದ್ಧವಾಗಿದ್ದರೆ ಮೊತ್ತ ಮಾತ್ರ ನಿಮ್ಮದು. ಬಡ್ಡಿ ಬಂದಾಗ ಅದಕ್ಕೂ ತೆರಿಗೆ ಕಟ್ಟಲೇಬೇಕು. ಉಳಿಕೆ ಮೊತ್ತ ನಿಮ್ಮದು. ಅದೂ ಬ್ಯಾಂಕ್ ದಿವಾಳಿಯಾಗುವವರೆಗೆ. ಬರೇ ಲೆಕ್ಕದ ರೂಪದ ಹಣ. ಅದಕ್ಕೆ ಬೆಲೆ ಇದೆಯೆಂದು ತಿಳಿದಿರಾ?

೧೯೪೫ನೇ ಇಸವಿಯಲ್ಲಿ ನೀವು ಬ್ಯಾಂಕಿನಲ್ಲಿ ಒಂದು ಲಕ್ಷ ಇಟ್ಟಿದ್ದರೆ ಅದು ಈಗ ಕೇವಲ ೧,೧೪೦ ರೂಪಾಯಯಾಗಿ ಪರಿವರ್ತನೆಯಾಗಿದೆ. ಹಣದ ಹಿಂಜರಿತ ಅಥವಾ ಮೌಲ್ಯಕ್ಷಯವೆಂದು ಹೇಳುತ್ತಾರೆ. ಹಾಗಾದರೆ ನಿಮ್ಮ ಹಣವೆಲ್ಲಿ ಹೋಯ್ತು? ಚಿಂತಿಸಿ. ಕೇವಲ ೨% ಅಂದರೆ "ಜೀವಚ್ಛವ" ಎನ್ನುತ್ತಾರೆ ಅರ್ಥವಾಯ್ತೇ? ಈಗ ಮಾನವ ಬರೇ ಜೀವಚ್ಛವ. ಆದರೆ ಅರ್ಥ ಮಾಡಿಕೊಳ್ಳಲಾರ. ಅಸಹಾಯಕ, ಗುಲಾಮ, ಮೂರ್ಖನಾಗಿಯೇ ಬದುಕುತ್ತಿದ್ದಾನೆ. ಅದರಂತೆ ಮುಂದಿನ ಒಗಟು ಸಾಲನ್ನು ಅರ್ಥಮಾಡಿಕೊಂಡರೆ ಉಚಥ್ಯರ ಅಭಿಪ್ರಾಯ ನಿಮಗಾಗುವುದು. ಅದನ್ನು ಸಂಖಲೀಕರಣ ಎಂಬ ಸೂತ್ರದಡಿಯಲ್ಲಿ ಬರೆದಿರುತ್ತೇನೆ.

ಮೂರರೊಳಗೇಳು ಇನ್ನೆರಡು ಲೋಕದ ಸೂತ್ರವಿದೆ
ತೋರಮುತ್ತಿನ ಬಣ್ಣ ಬಿಳಿಯಹುದೇ ನಿಜವಲ್ಲ
ಜಾರು ತರ ಮೂರು ಮೂರೆಂದು ಬಣ್ಣವಿದೆ ಅದರಲಿ
ತೋರುವುದು ಬಿಳಿಯಾಗಿ ಅದರೊಳಗಡಕವಿದೆ ಸಂಖ್ಯೆ, ಪ್ರಮಾಣ, ಘನ, ಶಕ್ತಿ, ವೀರ್ಯಗಳೂ || ೧ ||

ಮೊದಲೇರಡು ಇನ್ನು ಮೇಲೇಳು ಗುಣಕದಲಿ ಉದ್ಧತವು ಸಮುದ್ರ
ಚದುರಂಗದಾ ಲೆಕ್ಕದಲಿ ಕವಡೆ, ಪಕ್ಷಿಯು, ಹರಿಣ, ಮತ್ಸ್ಯವು ಕೂಡ
ಎದುರಲಿ ಕಾಂಬ ಲೆಕ್ಕದ ಮೊತ್ತವೇ ಮಹಿಯೊಳಗೆ ಹುಟ್ಟಿದಾ ಜೀವಿಯಾ ಲೆಕ್ಕ
ವಿದು ಅವಕನ್ನ, ಕಾಲ, ಬಟ್ಟೆಯ ಮೊತ್ತವೇ ಮಿತ್ತಿಹುದು ನೀನದರ ಗುಣಕ ದಂಕವು ಕೇಳು ಮನುಜಾ || ೨ ||

ಲೋಕವಿದೆ ಮೇಲೇಳು ಅದರೊಳು ಗಂಧರ್ವವನು ಕಳೆ
ದೇಕದಲಿ ಭಾಜಿಸಿರೆ ಅಶನವು ಅಶನಿಶಕ್ತಿಯ ಬಲ ವಜ್ರ
ದಂಕೆಯಲಿ ಅಶ್ವಬಲವಿದೆ ಮೂರನೆಯ ಲೋಕದಾಡಂಬರದಿ
ಶಾಖ ಸಖನ ಸಖನಂಕೆಯನು ಗುಣಿಸಿ ಯಮನೊಳು ಕಳೆಯೆ ಕಾಲಗಂಧರ್ವಾ || ೩ ||

ಕಿರಣಪಾತವು ನೈಮಿಷದ ಮೊದಲೆರಡು ಮತ್ತೊಂಬತ್ತು ಇನ್ನೆರಡು
ಕಾರಣವಿದೆ ಜನುಮ ಜನುಮಕೆ ಕರ್ಮವಿದೆ ಭೋಗ್ಯಕೆ ಯಮನದಕೆ
ವರಣವಿತ್ತಿಹ ಜೀವಿ ಕೇಳ್ ವರುಣಪಾಶದ ಬಂಧದಲಿ ಸಿಲುಕಿಹೆ ನೀನು
ಚರಣ ಸಂಖ್ಯೆಯ ಋಣದ ಕಾರಣ ಅಶನ ಭದ್ರತೆ ದೇವನೀವನು ಜನಿಜನಿತಜಾನಿತ್ರವೆಲ್ಲಾ || ೪ ||

ಓಡಿ ಬದುಕುವೆನೆಂಬಾಸೆ ಬಿಡು ಉಣು ನೀ ನಿನ್ನಯ ಕರ್ಮ
ಕೂಡಿ ಕಳೆವನು ಚಿತ್ರಕಾರನು ದಿವಿಯ ಬಂಧನ ಉಂಡಾ
ದೊಡೆ ಕೊನೆಯ ಲೆಕ್ಕವ ಪೇಳ್ವೆ ಜಿಗೀಷದೊಳು ಆಮಿಷದ
ಪಡೆದೇಳು ಆರರ ಮೂರರಲಿ ಅನುಭೋಗ ಓಷಧೀ ಇಳಾಗ್ರಸಿಷ್ಠವದೂ || ೫ ||

ಅದಕೆ ಹೊಂದಿ ಬಂದಿಹೆ ಈ ಶರೀರ ನಿನ್ನದಲ್ಲವು ಮಾತಾಪಿತರು
ಇದಕೆ ಋಣವಿದೆ ದ್ವಿಗುಣ ಮಾತ್ರವದು ಹೊಂದಿದೆ ಜ್ಞಾನ ನಿನ್ನದಲ್ಲಾ
ಅದಕೆ ಋಣ ಸಲ್ಲವು ಮುಂದಿನ ಋಣದ ಮೊತ್ತದ ಏಳು ಭಾಗವು ಈ
ಗದಕೆ ಕೂಡಿಸಿದೆ ನಿನ್ನಯ ಜೀವನ ಯಾವದಾ ಯೋಜನೆದಳತೆ ಬದುಕು ಅಲ್ಲಿಯವರೆಗೆಂಬೇ || ೬ ||


        ಈ ನಾಲ್ಕು ಸಾಲಿನ ಪದ್ಯಗಳು ಕನ್ನಡದಲ್ಲಿದ್ದರೂ ಗೂಡಾರ್ಥದಲ್ಲಿ ಅಡಕವಾಗಿದೆ. ಅದನ್ನು ಸಂಖಲೀಕರಣ ಸೂತ್ರವೆಂಬ ಗಣಿತ ಸೂತ್ರದಂತೆ ಶಬ್ದಗಳಿಗೆ ಅಕ್ಷರ ಸಂಜ್ಞೆಯನ್ನು ಕೊಟ್ಟು ಅಂಕಾದಿ ರೂಪು ಕೊಡುವುದು ಇದರ ರಹಸ್ಯ. ಒಂದು ಜೀವಿಯು ಭೂಮಿಯಲ್ಲಿ ಹುಟ್ಟಿ ಏನೇನು ಏನಕ್ಕೇನು ಮಾಡಬಹುದು ಎಂಬುವುದು ಈ ಆರು ಸೂತ್ರಗಳಲ್ಲಿ ನಿಖರವಾಗಿ ಕಂಡುಹಿಡಿಯಬಹುದು. ಇದು ಋಗ್ವೇದದ ೧ನೇ ಮಂಡಲದ ೧೬೩ನೇ ಸೂಕ್ತದಲ್ಲಿ ಅಳವಡಿಸಿದ್ದಾರೆ ಉಚಥ್ಯರು! ಅದನ್ನು ಅಧ್ಯಯನ ಮಾಡಿ ಅರ್ಥ ಮಾಡಿಕೊಂಡಲ್ಲಿ ಜಗದೆಲ್ಲವೂ ಎಷ್ಟು ಸರಳ ಸುಸೂತ್ರವೆಂಬರಿವು ನಿಮಗಾಗುತ್ತದೆ.

ಇಂತು
- ಕೆ. ಎಸ್. ನಿತ್ಯಾನಂದ
ಅಗಸ್ತ್ಯಾಶ್ರಮ ಗೋಶಾಲೆ
ಬಂದ್ಯೋಡ್, ಕಾಸರಗೋಡು

ಕವಿತೆ

ರಾಜಶೇಖರ ಬಂಡೆ
ಹಸಿದಿಹ ಒಡಲು ಹರಿಯದ ಕಡಲು
ನಿಶ್ಚಲ ಮೌನದ ಬೇಗೆಯಿದು
ಹರಿದಿಹ ಉಡುಪು ಬಡವನ ಕುರುಹು
ನಿತ್ಯವು ಇರಿಯುವ ನೋವು ಇದು

ಬಿಗಿವುದು ಕಂಠ ಗುನುಗುವ ಹೊತ್ತಿಗೆ
ಬಡವನ ಎದೆಗದೆ ಶಾಶ್ವತವು
ಹಾಡುವ ಕಂಗಳ ಅಂಚಲಿ ಮೂಡುವ
ಹನಿಗಳಿಗೂನು ಇದೆ ಹರಿವು

ದಿನದಿನದಲ್ಲೂ ಹುಟ್ಟುವ ಪೈರಿಗೆ
ಎರೆದುದು ರಕುತದ ಕೆಂಗಣವು
ಮೊಳೆಯುವ ಮೊದಲೇ ಚಿವುಟುವ ದೈವವೆ
ನಿನಗಿದೊ ಬಡವನ ಬಿಸಿಕಾವು

ಮನೆಮನೆಯಲ್ಲೂ ಬೆಳಗುವ ದೀಪ
ನೆತ್ತರನುಂಡೇ ಹೊಳೆಯುವುದು
ಯಾರನು ಕೇಳದೆ ಕವಿಯುವ ಇರುಳು
ಇವನೆದೆಗಾಸರೆಯಾಗುವುದು

ಭೋರ್ಗರೆಯುವ ಬಿಸಿ ರಕ್ತದ ಕಣಗಳು
ಜೊಯ್ಯನೆ ನರದೊಳಗಿಳಿಯುವವು
ಧಿಮಿಧಿಮಿ ಎನ್ನುವ ಹೆಜ್ಜೆಯ ಸದ್ದಿಗೆ
ಸಕಲವು ಗಡಗಡ ನಡುಗುವುವು.

ರಾಶೇಕ್ರ

Friday, March 28, 2014

ಅಲ್ಪಸಂಖ್ಯಾತೆ ರೇವತಿ ರಂಗಪ್ರವೇಶ



ಲೈಂಗಿಕ ಅಲ್ಪ­ಸಂಖ್ಯಾತೆ ಎ. ರೇವತಿ ತಮ್ಮದೇ ಆತ್ಮಕಥೆ ‘ಬದುಕು ಬಯಲು’ ನಾಟಕದ ಮೂಲಕ ರಂಗ­ಪ್ರವೇಶ ಮಾಡಲಿದ್ದಾರೆ.

ರೇವತಿ ಅವರ ಆತ್ಮಕಥೆ ‘ದಿ ಟ್ರೂತ್ ಎಬೌಟ್‌ ಮಿ’ ಅನ್ನು ಇಂಗ್ಲಿಷಿ­ನಲ್ಲಿ ಪೆಂಗ್ವಿನ್ ಪ್ರಕಾಶನ ಪ್ರಕಟಿಸಿತ್ತು. ಈ ಕೃತಿ­ಯನ್ನು ‘ಬದುಕು ಬಯಲು’ ಹೆಸರಿನಲ್ಲಿ ಕನ್ನಡಕ್ಕೆ ಲೇಖಕಿ ದು. ಸರಸ್ವತಿ ಅನುವಾದಿ­ಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಹೆಗ್ಗೋಡಿನ ‘ಜನಮನದಾಟ’ ತಂಡ­ದಲ್ಲಿ ಮಾರ್ಚ್‌ 5­­ರಿಂದ ರಿಹರ್ಸಲ್‌ ಆರಂಭಿಸಿ­ರುವ ರೇವತಿ, ತಮ್ಮದೇ ಆತ್ಮಕಥೆಯ ನಾಟಕ ರೂಪಕ್ಕೆ ಬಣ್ಣ ಹಚ್ಚುತ್ತಿರುವ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

* ರಂಗ ಪ್ರವೇಶದ ಆಸೆ ಮೊಳೆತದ್ದು ಹೇಗೆ?
–ಬಾಲ್ಯದಲ್ಲೇ ನನಗೆ ಅಭಿನಯದ ಬಗ್ಗೆ ಒಲವಿತ್ತು. ಶಾಲೆಯಲ್ಲಿ ನಾಟಕ­ಗಳಲ್ಲಿ ಅಭಿನಯಿಸಿದ್ದೆ. ‘ಸಂಗಮ’­ದಲ್ಲಿ­ದ್ದಾಗ ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆ­ಗಳನ್ನು ಕಲೆ ಮೂಲಕ ಜನರಿಗೆ ಸುಲಭ­ವಾಗಿ ತಲುಪಿ­ಸಬಹುದು ಎಂಬುದನ್ನು ಅರಿತಿದ್ದೆ.
‘ಬದುಕುಬಯಲು’ ನಾಟಕ ನೋಡಿ­ದಾಗ, ನನ್ನ ಪಾತ್ರ­ವನ್ನು ಬೇರೆ ಯಾರೋ ಅಭಿನಯಿಸುವು­ದ­ಕ್ಕಿಂತ ನಾನೇ ಅಭಿನಯಿಸಿದರೆ ಹೇಗೆ ಅಂತ ಪ್ರಶ್ನಿಸಿ­ಕೊಂಡೆ. ಈ ವಿಚಾರವನ್ನು ನಿರ್ದೇಶಕ ನೀನಾಸಂ ಗಣೇಶ್ ಅವ ರೊಂದಿಗೆ ಹಂಚಿ­ಕೊಂಡೆ.  ಅವರು ತಮ್ಮ ತಂಡಕ್ಕೆ ನನಗೆ ಪ್ರವೇಶ ನೀಡಿದರು.

* ನಿಮ್ಮದೇ ಆತ್ಮಕಥೆಯಲ್ಲಿ ನೀವೇ ಅಭಿನಯಿಸು­ತ್ತಿರು­ವುದು ಹೇಗನ್ನಿಸುತ್ತೆ?
–ಖುಷಿ ಅನ್ನಿಸುತ್ತೆ. ‘ನೀನಾಸಂ’ಗೆ ಬರಬೇಕು ಅಂತ ತುಂಬಾ ಸಲ ಅಂದು­ಕೊಂಡಿದ್ದೆ. ಆದರೆ, ಅದು ಈ  ರೀತಿ ಈಡೇರಿದೆ. ನಾಟಕದಲ್ಲಿ ರೇವತಿ ಪಾತ್ರ­ವನ್ನು ನಾನೇ ಮಾಡುತ್ತಿರುವುದರಿಂದ ಭಾವನೆಗಳನ್ನು ಸರಾಗವಾಗಿ ಅಭಿವ್ಯಕ್ತಿಪಡಿಸಲು ಸಾಧ್ಯ­ವಾ­ಗು­ತ್ತಿದೆ.

* ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆ­ಗಳ ಬಿಂಬಕ್ಕೆ ರಂಗ­­ಮಾಧ್ಯಮವನ್ನೇ ಆಯ್ಕೆ ಮಾಡಿದ್ದು ಏಕೆ?
–ಮಾತು, ಬರಹಕ್ಕಿಂತ ರಂಗ­ಭೂಮಿ ಮೂಲಕ ಸುಲಭವಾಗಿ ಜನ­ರನ್ನು ತಲು­ಪ­­ಬಹುದು. ಲೈಂಗಿಕ ಅಲ್ಪ­ಸಂಖ್ಯಾತರ ಬಗ್ಗೆ ಸಮಾಜ­ದಲ್ಲಿ ಇನ್ನೂ ಆರೋಗ್ಯ­ಕರ ಮುಕ್ತಭಾವ ಬಂದಿಲ್ಲ. ಈ ಮೊದಲು ‘ಬದುಕು­ಬಯಲು’  ನಾಟಕ ನೋಡಿದ ಅನೇಕರು ಪೂರ್ವ­ಗ್ರಹ­ ಬಿಟ್ಟು ನಮ್ಮನ್ನು ಸಾಮಾನ್ಯ­­­ರಂತೆಯೇ ನೋಡುವಂತಾ­ಗಿದೆ. ಈ ಬದಲಾವಣೆ  ಸಾಧ್ಯ­ವಾಗಿದ್ದು ನಾಟಕ­ದಿಂ ದಲೇ. ಹಾಗಾಗಿ, ರಂಗಭೂಮಿಯನ್ನೇ ಆಯ್ದು­ಕೊಂಡೆ.

* ನಾಟಕದ ಸಂದೇಶವೇನು?
–ಲೈಂಗಿಕ ಅಲ್ಪಸಂಖ್ಯಾತರೂ  ಮನುಷ್ಯರೇ. ಅವರಲ್ಲೂ ಮನಸ್ಸಿದೆ ಎನ್ನುವ ಸಂದೇಶ ಸಮಾಜಕ್ಕೆ ತಲುಪ­ಬೇಕು.

* ‘ಜನಮನದಾಟ’ ತಂಡದ ಜತೆ ನಿಮ್ಮ ಒಡನಾಟ  ಹೇಗಿದೆ?
–ತಂಡದಲ್ಲಿ ನಾನೂ ಸೇರಿದಂತೆ ಒಟ್ಟು 13 ಮಂದಿ ಇದ್ದೇವೆ. ಇಲ್ಲಿ ನನ್ನನ್ನು ಎಲ್ಲರೂ ಹೆಣ್ಣೆಂದೇ ಗುರು­ತಿಸು­ತ್ತಾರೆ. ಇತರ ಮಹಿ­ಳೆ­­ಯ­ರೊಂದಿಗೆ ಹೇಗೆ ಇರು ತ್ತಾರೋ ನನ್ನ ಜತೆಯೂ ಹಾಗೇ ಇರು­ತ್ತಾರೆ. ಇದು ನನಗೆ ಸಂತಸ ನೀಡಿದೆ ಎಂದು ಮಾತು ಮುಗಿಸಿದರು ರೇವತಿ.
‘ಬದುಕು ಬಯಲು’ ನಾಟಕ  58 ಪ್ರದರ್ಶನ ಕಂಡಿದೆ. ರೇವತಿ ಅಭಿ­ನಯದ ನಾಟಕ ಏ. 18ರಿಂದ ಪ್ರದ­ರ್ಶನವಾಗಲಿದೆ. ಜುಲೈನಲ್ಲಿ ಬೆಂಗ­ಳೂ­ರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟ­ಕದ 100ನೇ ಪ್ರದರ್ಶನ ನಡೆಯಲಿದೆ.  ನಾಟಕ ಪ್ರದರ್ಶನ–ಮಾಹಿತಿಗೆ ಮೊಬೈಲ್: 99002 57750
ಏನಂತಾರೆ ನಿರ್ದೇಶಕರು?
‘ರೇವತಿ ನಮ್ಮ ತಂಡಕ್ಕೆ ಬರುತ್ತೇನೆ ಅಂದಾಗ ಆಶ್ಚರ್ಯ, ಸಂತಸ ಒಟ್ಟಿಗೇ ಆಯಿತು. ಅವರು ನಮ್ಮ ಜತೆ ಬಂದಿ­ದ್ದಾರೆ ಅನ್ನೋದಕ್ಕಿಂತ ಅವರ ಜತೆಯೇ ನಾವಿದ್ದೇವೆ ಅನ್ನೋದು ಸೂಕ್ತ.  ನಾಟ­ಕದ ರಿಹರ್ಸಲ್‌ನಲ್ಲಿ ಅವರು ಇತರ­ರಂತೆ ಅಭಿ­ನ­ಯಿಸಲು ಪ್ರಯ­ತ್ನಿ­ಸುತ್ತಿದ್ದರು.
ಆದರೆ, ನಿಮ್ಮದೇ ಪಾತ್ರ. ಹಾಗಾಗಿ, ಅಭಿನಯ ಬೇಡ. ನೀವು ಇರು­ವಂತೆಯೇ ಇದ್ದರೆ ಚೆನ್ನ ಎಂದೆ. ಅದನ್ನ­ವರು ತಿದ್ದಿ­ಕೊಂಡು ಸಹಜ­ವಾಗಿಯೇ ನಾಟಕ­ದಲ್ಲಿ ತಮ್ಮನ್ನು ತೊಡಗಿಸಿ­ಕೊಂಡಿದ್ದಾರೆ. ಕನ್ನಡ ರಂಗಭೂಮಿ­ಯಲ್ಲಿ ಲೈಂಗಿಕ ಅಲ್ಪ-­ಸಂಖ್ಯಾತೆ­ಯೊಬ್ಬರು ಪೂರ್ಣ ಪ್ರಮಾಣದ ನಾಯಕಿಯಾಗಿ ಬಹುಶಃ ಇದೇ ಮೊದಲ ಬಾರಿ ಅಭಿನ­ಯಿ­ಸು­ತ್ತಿ­ದ್ದಾರೆ ಎನ್ನುತ್ತಾರೆ  ನಿರ್ದೇಶಕ ಎಂ. ಗಣೇಶ.

- ಮಂಜು ಶ್ರೀ . ಎಂ.ಕಡಕೋಳ
  ಸೌಜನ್ಯ : ಪ್ರಜಾವಾಣಿ

Monday, March 24, 2014

ಭಾರತ ಗೆಲ್ಲುವುದೇ.? ನಕಲಿ ಗಾಂಧೀಗಳ ಕುಟುಂಬ ಇತಿಹಾಸ ಸೇರುವುದೇ.? ಅಥವಾ ತೃತೀಯ ರಂಗದ ಸರ್ಕಾರ ಮರುಕಳಿಸುವುದೇ.? - ರೂಪೇಶ್ ಆರ್

ಭಾರತದ ಅಭಿವೃದ್ದಿಗೆ ಮುನ್ನುಡಿ ಬರೆಯುವುದೇ


2014ರ ಮಹಾಸಮರ...? 

“ಭಾರತ ಗೆಲ್ಲಿಸಿ” ಎಂದು ಭಾರತೀಯ ಜನತಾ ಪಾರ್ಟಿ, “ನಾನು ಅಲ್ಲ ನಾವು” ಎನ್ನೋಣ ಎಂದು ಕಾಂಗ್ರೆಸ್, ಬಿ‌ಜೆ‌ಪಿ ಮತ್ತು ಕಾಂಗ್ರೆಸ್ ಬಿಟ್ಟು ಪರ್ಯಾಯ ಶಕ್ತಿಗೆ ಅವಕಾಶ ಕೊಡಿ ಎಂದು ತೃತೀಯ ರಂಗ. ಪ್ರಧಾನಿ ಕುರ್ಚಿಗೆ ನರೇಂದ್ರ ಮೋದಿ ಅವರಿಂದ ಹಿಡಿದು ಎಚ್.ಡಿ.ದೇವೇಗೌಡರ ವರೆಗೆ ಸಾಲಲ್ಲಿ ನಿಂತಿರುವ ಅನೇಕ ನಾಯಕರು. ಕಾಕತಾಳೀಯವೆಂಬಂತೆ 1947 ಮತ್ತು 2014ರ  ಕ್ಯಾಲೆಂಡರ್  ಒಂದೇ. ಮತ್ತೊಮ್ಮೆ ಸ್ವಾತಂತ್ರ ಸಿಗುವ ಸೂಚನೆಯೇ ಇರಬೇಕು.


2002ರ ಗೋದ್ರಾ ಹತ್ಯಾಕಾಂಡದ ಬಗ್ಗೆ ನರೇಂದ್ರ ಮೋದಿಯವರಿಗೆ ಕ್ಲೀನ್ ಚಿಟ್ ನೀಡಿದ್ದರೂ ಅದನ್ನೇ ವಿಷಯವಾಗಿಸಿಟ್ಟುಕೊಂಡು ಮೋದಿಯವರಮೇಲೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುತ್ರ ಎಂಬುದು ಬಿಟ್ಟರೆ ಪ್ರಧಾನಿ ಆಗುವುದಕ್ಕೆ ನಿಮಗೆ ಯಾವುದೇ ಯೋಗ್ಯತೆಯಿಲ್ಲ ಎಂದು ರಾಹುಲ್ ಗಾಂಧಿಯವರ ಮೇಲೆ, ಅಧಿಕಾರ ದಾಹದಿಂದ ಅಂತರಿಕ ಕಚ್ಚಾಟ ಶುರುವಾಗಿ ದೇಶ ಉದ್ದಾರ ಆಗುವುದಿಲ್ಲ ಎಂದು ತೃತೀಯ ರಂಗದವರ ಮೇಲೆ ಚುನಾವಣಾ ಭಾಷಣಗಳು ಭರ್ಜರಿಯಾಗಿಯೇ ನಡೆಯುತ್ತಿವೆ. ಇನ್ನೂ ಈಗಷ್ಟೇ ಬೆಳೆದು ಮಂಕಾಗುತ್ತಿರುವ ಆಮ್ ಆದ್ಮಿ ಪಾರ್ಟಿ ಗೆದ್ದರೆ ಬಹುಶಃ ದೆಹಲಿಯ ಬೀದಿಗಳಲ್ಲೇ ಸಂಸತ್ ಅಧಿವೇಶನ ನಡೆಸಿದರೂ ಆಶ್ಚರ್ಯ ಪಡುವಂತದ್ದು ಏನು ಇಲ್ಲ. ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಟ್ಟರೆ ಉಳಿದೆಲ್ಲಾ ರಾಜ್ಯಗಳಲ್ಲೆಲ್ಲ ಪಾದೇಶಿಕ ಪಕ್ಷಗಳದ್ದೇ ಕಾರುಬಾರು. ತಮಿಳುನಾಡಿನಲ್ಲಿ ಜಯಲಲಿತ ಪ್ರಧಾನಿ ಕುರ್ಚಿ ವಶಪಡಿಸಿಕೊಳ್ಳಲು ಕಾಯುತ್ತಿದ್ದಾರೆ. ಮಹಾರಾಷ್ಟ್ರ ಶಿವಸೇನೆ, ಆಂಧ್ರದಲ್ಲಂತು ಪ್ರಾದೇಶಿಕ ಪಕ್ಷಗಳಿಗೆ ಲೆಕ್ಕವೇ ಇಲ್ಲ. ಜಗನ್ ಮೋಹನ್ ರೆಡ್ಡಿ ಯವರ ವೈ‌ಎಸ್‌ಆರ್ ಕಾಂಗ್ರೆಸ್, ಚಂದ್ರಬಾಬು ನಾಯ್ಡು ಅವರ ಟಿ‌ಡಿ‌ಪಿ, ಚಂದ್ರಶೇಕರ್ ಅವರ ಟಿ‌ಆರ್‌ಎಸ್. ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರ ಜೈ ಸಮೈಕಾಂದ್ರ. ಇನ್ನೂ ಚಿತ್ರನಟ ಪವನ್ ಕಲ್ಯಾಣ್ ಹೊಸ ಪಕ್ಷ ಕಟ್ಟುವುದು ಬಹುತೇಕ ಕಚಿತವಾಗಿದೆ. ಸರ್ಕಾರ ರಚನೆಯಲ್ಲಿ ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷಗಳು ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ. ಬಿ‌ಜೆ‌ಪಿ ಅಧಿಕಾರ ಬಂದರೆ ಕರ್ನಾಟಕದಿಂದ ಯಡಿಯೂರಪ್ಪ ಈಗಾಗಲೇ ಕೃಷಿ ಮಂತ್ರಿ ಆಗಬೇಕೆಂಬ ಬಯಕೆ ವ್ಯಕ್ತ ಪಡಿಸಿದ್ದಾರೆ. ಸದಾನಂದ ಗೌಡ ಹಾಗೂ ಅನಂತ್ ಕುಮಾರ್ ಸಹ ಸಚಿವ ಸ್ಥಾನದ ಆಕಾಂಕ್ಷಿಗಳು. ನರೇಂದ್ರ ಮೋದಿಯವರಯವರಂತೂ ತಮ್ಮ ಭಾಷಣದ ಭರಾಟೆಯಿಂದ ಜನರನ್ನು ಆಕರ್ಷಿಸುತ್ತಿದ್ದಾರೆ. ಮೇಲ್ನೋಟಕ್ಕೆ ಕಂಡಂತೆ ಕಾಂಗ್ರೆಸ್ನಲ್ಲಿ ಪ್ರಭಲ ಪ್ರಧಾನಿ ಅಭ್ಯರ್ಥಿ ಯಾರೂ ಇಲ್ಲ. ಇದ್ದರೂ ಸೋನಿಯಾ ಗಾಂಧಿಯವರ ಮುಂದೆ ಹೇಳುವ ಗಂಡಸ್ತನ ಯಾರಿಗೂ ಇರುವಂತೆ ಕಾಣುತ್ತಿಲ್ಲ. ಕಾಂಗ್ರೆಸ್ ನ  ಹಿರಿಯ ನಾಯಕರೆಲ್ಲರೂ ರಾಹುಲ್ ಗಾಂಧಿಯವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಹೇಳುತ್ತಾರೆ, ಏಕೆ.? ಹಿರಿಯರಿಗಾರಿಗೂ ಪ್ರಧಾನಿ ಆಗುವ ಯೋಗ್ಯತೆ ಇಲ್ಲವೇ.? ಗೊತ್ತಿಲ್ಲ. ಹಗರಣಗಳ ಸರಮಾಲೆಯನ್ನೇ ಕೊರಳಿಗೆ ಸುತ್ತಿಕೊಂಡಿರುವ ಯುಪಿಎ ಈ ಭಾರಿ ಗೆಲ್ಲುವ ವಿಶ್ವಾಸವನ್ನು ಕಳೆದುಕೊಂಡಿದೆ. ಹತ್ತು ವರ್ಷದ ಮನ ಮೋಹನರ ಮೌನದ ಪರಿಣಾಮ ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂಬ ಆಸೆಗೆ ಎಳ್ಳು ನೀರು ಬಿಟ್ಟಂತಾಗಿದೆ. ನೆಹರೂ, ಇಂದಿರಾ ಮತ್ತು  ರಾಜೀವ್ ಗಾಂಧಿಯ ನಂತರ ಹುದ್ದೆ ಕಳೆದುಕೊಳ್ಳುವ ಬೀತಿ ಗಾಂಧಿ ಕುಟುಂಬಕ್ಕೆ 

ಇನ್ನು ಭಾರತೀಯ ಜನತಾ ಪಾರ್ಟಿಯಲ್ಲಿ ಪ್ರಧಾನಿ ಆಗುವ ಆಸೆಯನ್ನು ಹೊಂದಿದ್ದ ಅಡ್ವಾಣಿ, ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಆದರೂ ಮುಸುಕಿನ ಗುದ್ದಾಟ ನಡೆಯುತ್ತಾಲೇ ಇದೆ. ಸಮೀಕ್ಷೆಗಳ ಪ್ರಕಾರ ಮತದಾರ ಕಾಂಗ್ರೆಸ್ ಆಡಳಿತವನ್ನು ದಿಕ್ಕರಿಸಿ ಬಿ‌ಜೆ‌ಪಿ ಕೈ ಹಿಡಿಯುತ್ತಾನೆ ಎಂದು ಹೇಳಲಾಗುತ್ತಿದೆ. ಬಹುಶಃ ಅಟಲ್ ಬಿಹಾರಿ ವಾಜಪೇಯಿ ಯವರ ಮುಂದಿನ ಭಾರತವನ್ನು ನರೇಂದ್ರ ಮೋದಿ ಯವರಿಂದ ನೋಡಲು ಜನ ಬಯಸಿರುವ ಹಾಗಿದೆ.


ನರೇಂದ್ರ ಮೋದಿಗಿಂತ ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೆ ಸಂಭಂಧಿಸಿದಂತೆ ಭಾರಿ ಹಿಂದಿದ್ದಾರೆ. ಬಹುಶಃ ನರೇಂದ್ರ ಮೋದಿ ಯವರ ಗುಜರಾತನ್ನು ನೋಡಿಯೇ ಜನ ಈ ನಿರ್ಧಾರಕ್ಕೆ ಬಂದಿರಬಹುದು. ಆದರೆ ಹನ್ನೆರಡು ವರ್ಷದಲ್ಲಿ ಗುಜರಾತ್ನಲ್ಲಿ ಆಗಿರುವ ಅಭಿವೃದ್ದಿ ಮುಂದಿನ ಐದು ವರ್ಷಗಳಲ್ಲಿ ಇಡೀ ಭಾರತಕ್ಕೆ ಹರಡಲು ಸಾಧ್ಯವೇ..? ನರೇಂದ್ರ ಮೋಡಿಯವರ ಮೇಲೆ ಜನ ಇಟ್ಟಿರುವ ವಿಶ್ವಾಸ ಎಂತದ್ದು. ಈ ವಿಶ್ವಾಸ ಉಳಿಸಿಕೊಳ್ಳುವುದಕ್ಕೆ ಅವರ ಮಂತ್ರಿಮಂಡಲ ಸಹಕಾರ ನೀಡುತ್ತಾ.? ಕಾದು ನೋಡಬೇಕು. ಅಥವಾ ರಾಹುಲ್ ಪ್ರಧಾನಿಯಾದರೆ ಆಡಳಿತದ ಕಿಂಚಿತ್ತೂ ಅರಿವಿಲ್ಲದ ಈ ಮುಗ್ಧ ಹುಡುಗ ದೇಶವನ್ನು ಮುನ್ನಡೆಸಲು ಸಾಧ್ಯವೇ.? ಪಕ್ಷದ ಹಿರಿಯರ ಮಾತುಗಳನ್ನೇ ಕೇಳದ ಈಗಿನ ರಾಜಕಾರಣಿಗಳು ಈ ಬಾಲಕನ ಮಾತನ್ನು ಕೇಳುತ್ತಾರ.? ಯುವಕರಿಗೆ ಹೆಚ್ಚಿನ ಆದ್ಯತೆ ಕೊಟ್ಟು ಮತದಾರನನ್ನು ಮರಳು ಮಾಡುವ ತಂತ್ರ ವರ್ಕೌಟ್ ಆಗುತ್ತಾ.? ಭಾರತವನ್ನೇ ಗೆಲ್ಲಿಸಲು ಹೊರಟಿರುವ ಭಾರತೀಯ ಜನತಾ ಪಾರ್ಟಿ ಅಧಿಕಾರದ ಗದ್ದುಗೆ ಹಿಡಿಯುತ್ತಾ.? ಹತ್ತು ವರ್ಷಗಳ ಕಾಂಗ್ರೆಸ್ ನ ಆಡಳಿತ ಜನಕ್ಕೆ ನಿಜವಾಗಿಯೂ ಬೇಸರವೆನಿಸಿದೆಯಾ.? ರಾಜ್ಯ ಕಾಂಗ್ರೆಸ್ ಅನ್ನು ಪರಿಗಣಿಸಿ ಅವರಿಗೆ ಅಧಿಕಾರ ಕೊಡುತ್ತರಾ.? ದೇಶದ ಪ್ರತಿಯೊಬ್ಬ ಮತದಾರನಿಗೂ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೆ ವ್ಯತ್ಯಾಸ ಗೊತ್ತಿದೆಯೇ.? ಬಹುಶಃ ಈ ಚುನಾವಣೆ ಎರಡು ಪಕ್ಷಗಳಿಗಿಂತ ಹೆಚ್ಚಾಗಿ ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿಯವರ ನಡುವಿನ ನೇರ ಹಣಾಹಣಿ. ಆದರೆ ರಾಹುಲ್ ಗಾಂಧಿಗೆ ಜನಪ್ರಿಯತೆ ಕಡಿಮೆ ಇರುವುದರಿಂದ ಬಿ‌ಜೆ‌ಪಿ ಪಾಳಯಕ್ಕೆ ಲಾಭವಾಗಬಹುದು. 2009ರಲ್ಲಿ ರಾಹುಲ್ ಗಾಂಧಿಯವರನ್ನು ಪ್ರಧಾನಿ ಮಾಡಿದ್ದಿದ್ದರೆ ಐದು ವರ್ಷದಲ್ಲಿ ಜನಪ್ರಿಯತೆ ಸಿಗುತ್ತಿತ್ತು. ಈಗ ಏಕಾಏಕಿ ತಂದು ನಿಲ್ಲಿಸಿದರೆ ಜನ ಮೆಚ್ಚುತ್ತರಾ.? ಸೋನಿಯಾ ಗಾಂಧಿಯವರ ಹಿಡಿತ ಸರ್ಕಾರದ ಮೇಲೆ ಇದ್ದೂ ಸಹ ಇಷ್ಟೊಂದು ಹಗರಣಗಳ ಸರಮಾಲೆ ಕೊರಳಿಗೆ ಸುತ್ತಿಕೊಂಡಿದ್ದು ಈ ಚುನಾವಯಲ್ಲಿ ಕಾಂಗ್ರೆಸ್ ಗೆ ಮಾರಕವಾಗಬಹುದು. 2002ರ ಗೋದ್ರಾ ಹತ್ಯಾಕಾಂಡವನ್ನು ಮನಸಲ್ಲಿಟ್ಟುಕೊಂಡು ಮುಸ್ಲಿಮರು ಬಿ‌ಜೆ‌ಪಿ ಯ ಕೈ ಬಿಡುತ್ತಾರ.? ಅಥವಾ ಅಭಿವೃದ್ದಿಯ ಮತ್ತು ಭ್ರಷ್ಟಾಚಾರ ಮುಕ್ತ ದೇಶವನ್ನು ಕಟ್ಟುವುದಕ್ಕೆ ಗೋದ್ರ ಹತ್ಯಾಕಾಂಡ ಮರೆಯಾಗುತ್ತ.? ಸಮೀಕ್ಷೆಗಳನ್ನೂ ತಿರುಚುವ ಶಕ್ತಿ ಮತದಾರನಿಗಿದೆ ಆದರೂ  ಮೇಲ್ನೋಟಕ್ಕೆ ಯುವ ಜನಾಂಗ ಮತ್ತು ವಿಧ್ಯಾವಂತರು ನರೇಂದ್ರ  ಮೋದಿಯವರ ಹಿಂದೆ ಬಿದ್ದಿರುವ ಹಾಗಿದೆ. ಇನ್ನು ಹಳ್ಳಿಗಳಲ್ಲಿ ಪಕ್ಷ ಎಷ್ಟೇ ಭ್ರಷ್ಟಾಚಾರದಲ್ಲಿ ತುಂಬಿ ತುಳುಕುತ್ತಿದ್ದರೂ ಅಮ್ಮನ ಪಕ್ಷ ಎಂದು ಕಾಂಗ್ರೆಸ್ ಗೆ ಮತ ಹಾಕುವವರು ಇವತ್ತಿಗೂ ಸಿಗುತ್ತಾರೆ. ನರೇಂದ್ರ ಮೋದಿಯವರಿಂದ ಜನ ಹೆಚ್ಚನ್ನು ನಿರೀಕ್ಷಿಸಿದ್ದಾರೆ. ಅದನ್ನೆಲ್ಲಾ ಅವರು ನಿಜ ಮಾಡುವರೆ.? ಕಾದು ನೋಡಬೇಕು. ಆದರೆ ಜನಸಾಮಾನ್ಯನ ಪ್ರತಿದಿನದ ಕೆಲಸಕ್ಕೆ  ಯಾವುದೇ ರಿಯಾಯಿತಿ ಸಿಗುವುದಿಲ್ಲ. 2014ರ ಮಹಾಸಮರದಷ್ಟು ಮಹತ್ವ ದೇಶದ ಇತಿಹಾಸದಲ್ಲೇ ಯಾವ ಚುನಾವಣೆಗೂ ಇರಲಿಲ್ಲ ಅನಿಸುತ್ತೆ.


ಇನ್ನೂ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿ‌ಎ, ಕಾಂಗ್ರೆಸ್ ನೇತೃತ್ವದ ಯುಪಿಎ ಇವೆರಡನ್ನೂ ನಂಬದ ಮತದಾರ ತೃತೀಯ ರಂಗದ ಕಡೆ ವಾಲಿದ್ದಾನೆ. ಚುನಾವಣೆ ಸಮಯದಲ್ಲಿ ಮಾತ್ರ ಅಸ್ತಿತ್ವಕ್ಕೆ ಬರುವ ತೃತೀಯ ರಂಗದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯ, ರೆವಲ್ಯೂಶನರಿ ಸೋಸಿಯಲಿಸ್ಟ್ ಪಾರ್ಟಿ, ಆಲ್ ಇಂಡಿಯ ಫಾರ್ವರ್ಡ್ ಬ್ಲಾಕ್, ಸಮಾಜವಾದಿ ಪಾರ್ಟಿ, ಜನತಾ ದಳ(ಯುನೈಟೆಡ್), ಜನತಾ ದಳ(ಸೆಕ್ಯುಲರ್), ಜಾರ್ಖಾಂಡ್ ವಿಕಾಸ್ ಮೋರ್ಚಾ, ಪೀಪಲ್ಸ್ ಪಾರ್ಟಿ ಆಫ್ ಪಂಜಾಬ್ ಹಾಗೂ ಇತರೆ ಪಕ್ಷಗಳು ಇವೆ. ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿದೆ. ಭಾರತೀಯ ಜನತಾ ಪಾರ್ಟಿ ಈಗಾಗಲೇ ನರೇಂದ್ರ ಮೋದಿಯವರ ಹೆಸರನ್ನು ಪ್ರಧಾನಿ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಿಸಿದೆ

ಕಾಂಗ್ರೆಸ್ ನಲ್ಲಿ ಗಾಂಧಿ ಕುಟುಂಬೇತರ ಪ್ರಧಾನಿ ಅಭ್ಯರ್ಥಿಯ ಕೊರತೆಯಾದರೆ, ತೃತೀಯ ರಂಗದಲ್ಲಿ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಿಗೆ ಲೆಕ್ಕವಿಲ್ಲ, ಜೆ‌ಡಿಯು ನ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಾಜಿ ಪ್ರಧಾನಿ ಜೆ‌ಡಿ‌ಎಸ್ ನ ಎಚ್.ಡಿ.ದೇವೇಗೌಡ, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ, ಆಮ್ ಆದ್ಮಿ ಪಾರ್ಟಿಯ ಅರವಿಂದ ಕೇಜ್ರಿವಾಲ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎಸ್‌ಪಿ ಯ ಮುಲಾಯಂ ಸಿಂಗ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಬಿ‌ಎಸ್‌ಪಿ ಯ ಕುಮಾರಿ ಮಾಯಾವತಿ ಇವರು ಪ್ರಮುಖರು. ಪ್ರಾದೇಶಿಕ ಪಕ್ಷಗಳೆಲ್ಲಾ ಸೇರಿ ತೃತೀಯ ರಂಗ ರಚಿಸಿಕೊಂಡಿದ್ದಾರೆ, ಪ್ರತಿಯೊಂದು ಪಕ್ಷದಲ್ಲೂ ಒಬ್ಬೊಬ್ಬ ಪ್ರಧಾನಿ ಇರುವುದರಿಂದ ಪ್ರಧಾನಿ ಆಯ್ಕೆ ತಲೆ ನೋವಾಗಿ ಪರಿಣಮಿಸಬಹುದು. ಒಂದು ವೇಳೆ ತೃತೀಯ ರಂಗ ಬಹುಮತ ಪಡೆದರೂ ಸರ್ಕಾರ ರಚಿಸುವಲ್ಲಿ ವಿಪಲವಾಗಬಹುದು. ಕಾರಣ ಒಂದೇ ಹುದ್ದೆಗೆ ಹತ್ತಾರು ಅಭ್ಯರ್ಥಿಗಳು. ಅನುಸರಿಸಿಕೊಂಡು ಹೋಗುವ ಜಾಯಮಾನ ಯಾರಿಗೂ ಇಲ್ಲ ಏಕೆ.? ಅಧಿಕಾರದ ದಾಹ. ಅನುಸರಿಸಿಕೊಂಡು ಪ್ರಧಾನಿಯನ್ನು ಆರಿಸಿದರೂ ಸರ್ಕಾರಕ್ಕೆ ಭವಿಷ್ಯವಿಲ್ಲ. ಸಾಕ್ಷಿ ಇತಿಹಾಸದ ಪುಟಗಳು. ಸರ್ಕಾರ ರಚನೆಯ ಸಮಯದಲ್ಲಿ ಅನುಸರಿಸಿಕೊಳ್ಳದೆ ತೃತೀಯ ರಂಗ ಬಿಟ್ಟು ಯುಪಿಎ ಅಥವಾ ಎನ್‌ಡಿಎ ಕಡೆಗೆ ವಾಲುವ ಪಕ್ಷಗಳೇ ಹೆಚ್ಚು. ಎನ್‌ಡಿಎ ತೆಕ್ಕೆಯಲ್ಲಿದ್ದ ಜೆ‌ಡಿ‌ಯೂ, ನರೇಂದ್ರ ಮೋದಿ ಹೆಸರು ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸುತ್ತಿದ್ದಂತೆ ಹೊರ ನಡೆದು ತೃತೀಯ ರಂಗ ರಚಿಸಿದರು. ಇದರಿಂದ ಈ ಚುನಾವಣೆ ಬಿಹಾರದಲ್ಲಿ ಜೆ‌ಡಿ‌ಯೂ ಗೆ ಲಾಭ ತಂದು ಕೊಡುವ ಹಾಗೆ ಕಾಣುತ್ತಿಲ್ಲ. ಉತ್ತರಪ್ರದೇಶದಲ್ಲಿ ಎಸ್‌ಪಿ ಆಡಳಿತವಿದ್ದರೂ, ಆಡಳಿತ ವಿರೋಧಿ ಅಲೆ ಕಾಣುತ್ತಿದ್ದು ಬಿ‌ಜೆ‌ಪಿಗೆ ಲಾಭವಾಗುವ ಸಾಧ್ಯತೆ ಇದೆ. ಬಿ‌ಎಸ್‌ಪಿ ಹೀನಾಯ ಸೋಲು ಅನುಭವಿಸುತ್ತದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ದೇವೇಗೌಡರು ಕರ್ನಾಟಕದಿಂದ ಮೂರು ಸಂಸದರನ್ನು ಕೊಟ್ಟರೆ ಹೆಚ್ಚು. ಜಯಲಲಿತಾ ಮಾತ್ರ 20-22 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಉಳಿದಂತೆ ಗುಜರಾತ್. ಗೋವ, ಮಧ್ಯ ಪ್ರದೇಶ್, ದೆಹಲಿ, ರಾಜಸ್ಥಾನ್ ಹಾಗೂ ಛತ್ತೀಸ್ ಘರ್ ನಲ್ಲಿ ಬಿ‌ಜೆ‌ಪಿ ಪರ ಭಾರಿ ಅಲೆ ಇದೆ.  ಕರ್ನಾಟಕ 50-50, ಬಿ‌ಜೆ‌ಪಿ ಮತ್ತು ಕಾಂಗ್ರೆಸ್ ಸಮಬಲದ ಹೋರಾಟ. ಆಮ್ ಆದ್ಮಿ ಪಾರ್ಟಿ ಯ ಎಫೆಕ್ಟ್ ಕರ್ನಾಟಕದಲ್ಲಿ ಕಾಣುತ್ತಿಲ್ಲ.  
 

ಎನ್‌ಡಿಎ, ಯುಪಿಎ ಹಾಗೂ ತೃತೀಯ ರಂಗ ಮೂರನ್ನೂ ಸೇರದೇ ಒಂಟಿಯಾಗಿ ಕೆಲವೊಂದು ಪಕ್ಷಗಳಿವೆ. ಈ ಪಕ್ಷಗಳು ಗೆದ್ದ ಎತ್ತಿನ ಬಾಲ ಹಿಡಿಯುವ ಬುದ್ಧಿವಂತರು. ಇವರು ಚುನಾವಣಾ ಫಲಿತಾಂಶದ ನಂತರ ಸರ್ಕಾರ ರಚಿಸುವ ಪಕ್ಷಕ್ಕೆ ಬೆಂಬಲ ಸೂಚಿಸಿ ಒಂದೆರಡು ಸಚಿವ ಸ್ಥಾನಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ತೆಲುಗು ದೇಶಂ ಪಾರ್ಟಿ, 1999ರಿಂದ 2004ರ ವಾಜಪೇಯಿ ಅವರ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು. ಇವರು ಈ ಭಾರಿ ಸಹ ಎನ್‌ಡಿಎ ಗೆ ಬೆಂಬಲ ಸೂಚಿಸಬಹುದು. ವೈ‌ಎಸ್‌ಆರ್ ಕಾಂಗ್ರೆಸ್, ಆಂಧ್ರದ ಮಾಜಿ ಮುಖ್ಯಮಂತ್ರಿ ರಾಜಶೇಕರ್ ರೆಡ್ಡಿ ನಿಧನದ ನಂತರ ಕಾಂಗ್ರೆಸ್ಸ್ ನಿಂದ ಹೊರನಡೆದು ಅವರ ಪುತ್ರ ಜಗನ್ ಸ್ಥಾಪಿಸಿದ ಪಕ್ಷ ಇವರೂ ಸಹ ಎನ್‌ಡಿಎ ತೆಕ್ಕೆಕೆ ಬೀಳಬಹುದು. ಆಂಧ್ರ ವಿಭಜನೆಯನ್ನು ಖಂಡಿಸಿ ಕಾಂಗ್ರೆಸ್ ನಿಂದ ಹೊರ ನಡೆದು ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಸ್ಥಾಪಿಸಿರುವ ಜೈ ಸಮೈಕಾಂಧ್ರ ಪಕ್ಷ ತೃತೀಯ ರಂಗಕ್ಕೆ ಬೆಂಬಲ ಸೂಚಿಸಬಹುದು. ಪ್ರತ್ಯೇಕ ತೆಲಾಂಗಣಕ್ಕಾಗಿ ಹೋರಾಡಿದ್ದ ತೆಲಾಂಗಣ ರಾಷ್ಟ್ರೀಯ ಸಮಿತಿ ಪಕ್ಷ ಕಾಂಗ್ರೆಸ್ ಅನ್ನು ಬೆಂಬಲಿಸುವ ಸಾಧ್ಯತೆಯಿದೆ. ಇನ್ನೂ ತಮಿಳುನಾಡಿನ ಕರುಣಾನಿಧಿ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಓಡಿಶಾದ ಬಿಜು ಪಟ್ನಾಯಕ್ ಚುನಾವಣಾ ಫಲಿತಾಂಶದ ನಂತರ ಗೆದ್ದ ಎತ್ತಿನ ಬಾಲ ಹಿಡಿಯಬಹುದು.
ಸ್ವಾತಂತ್ರ್ಯ ನಂತರದ ಭಾರತದಲ್ಲಿ ಅಸ್ತಿತ್ವಕ್ಕೆ ಬಂದ ಸರ್ಕಾರಗಳ ಹಗರಣಗಲಿಗೆ ಲೆಕ್ಕವೇ ಇಲ್ಲ. ನಕಲಿ ಗಾಂಧಿ ಕುಟುಂಬದಿಂದ ಶುರುವಾದ ಪ್ರಧಾನಿ ಹುದ್ದೆ ಅವರ ಅಧಿಕಾರದ ಲಾಲಸೆಗೆ ಒಂದೇ ಕುಟುಂಬದ ಸಾಲು ಸಾಲು ಪ್ರಧಾನಿಗಳು. ಕಳೆದ ಹತ್ತು ವರ್ಷಗಳಲ್ಲಿ ಗಾಂಧಿ ಕುಟುಂಬದ ಹಿಡಿತದ ಸರ್ಕಾರದಲ್ಲಿ ಅಭಿವೃದ್ದಿಗಿಂತ ಹಗರಣಗಳೇ ಹೆಚ್ಚು. ಸಮರ್ಥವಾದ ಹೊಡೆತ ಕೊಟ್ಟು ಜನರಿಗೆ ಆತ್ಮ ವಿಶ್ವಾಸ ತುಂಬಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಇನ್ನೊಮ್ಮೆ ಆಯ್ಕೆಯಾಗುವಲ್ಲಿ ವಿಫಲರಾದರು. ಈ ಭಾರಿಯಾದರೂ  ಭಾರತವನ್ನು ವಿಶ್ವಗುರುವನ್ನಾಗಿ ಮಾಡುವ ಸಮರ್ಥ ಪ್ರಧಾನಿ ಆಯ್ಕೆಯಾಗುತ್ತಾರ.? ಕಾಲ್ಕೆರೆದು ಕದನಕ್ಕೆ ಬರುವ ಶತ್ರು ರಾಷ್ಟ್ರಗಳಾದ ಪಾಕಿಸ್ತಾನ, ಚೈನಾ, ಮಯನ್ಮಾರ್, ಬಾಂಗ್ಲಾದೇಶ್ ಗಳಿಗೆ  ಎದೆ ಕೊಟ್ಟು ನಿಲ್ಲುವ ಮಹಾಪುರುಷನ ಉದಯ ಆಗುತ್ತಾ.? ಬಲವಾದ ಗಡಿ ನಿರ್ಮಾಣವಾಗುತ್ತಾ.? ಸ್ವಾಮಿ ವಿವೇಕಾನಂದರ ಭಾರತ ನಿರ್ಮಾಣವಾಗುತ್ತಾ.? ಭಾರತದ ಅಭಿವೃದ್ದಿಗೆ ಮುನ್ನುಡಿ ಬರೆಯುತ್ತದೆಯೇ ಈ ಚುನಾವಣೆ.? ರೈತ ದೇಶದ ಬೆನ್ನೆಲುಬು, ಬೆನ್ನೆಲುಬೇ ಇಲ್ಲದ ದೇಶ ಹೇಗೆ ಉದ್ದಾರವಾಗುತ್ತದೆ. ರೈತರನ್ನು ಉತ್ತೇಜಿಸುವ ಸರ್ಕಾರ ಬರುತ್ತಾ.? ಭಾರತದಲ್ಲಿ ವಿದ್ಯುತ್ ನೋಡದ ಸ್ಥಳಗಳು ವಿದ್ಯುತ್ ನೋಡುತ್ತವಾ.? ಡಾಂಬಾರು ನೋಡದ ರಸ್ತೆ ಡಾಂಬಾರು ನೋಡುತ್ತವಾ.? ದೇಶೀಯ ಕ್ರೀಡೆಗಳು ಮರುಕಳಿಸುತ್ತವಾ.? ವಿಜಯನಗರದ ಶ್ರೀ ಕೃಷ್ಣದೇವರಾಯಣ ಸಾಮ್ರಾಜ್ಯ ಮತ್ತೆ ಉದಯವಾಗುತ್ತಾ.? ಪಾಶ್ಚಾತ್ಯ ಸಂಸ್ಕೃತಿಯಿಂದ ಮುಚ್ಚಿ ಹೀಗಿರುವ ಭಾರತ ಸಂಸ್ಕೃತಿ ಮತ್ತೆ ಕಣ್ಣಿಗೆ ಕಾಣಿಸುತ್ತಾ.? ಒಟ್ಟಾರೆ ಜಗತ್ತೇ ಭಾರತದ ಕಡೆ ಮುಖಮಾಡಿ ನೋಡುವ ಕಾಲ ಸನಿಹವಾಗಿದೆಯಾ? ಪ್ರಧಾನಿ ಹುದ್ದೆಗೆ ಮರಿಯಾದೆ ತರುವ ಮೂರನೇ ವ್ಯಕ್ತಿ ಯಾಗುತ್ತಾರಾ ಈ ಭಾರಿಯ ಪ್ರಧಾನಿ.? ನಿರೀಕ್ಷಿಸಿ..


ಪ್ರಧಾನಿ ಯೋಬ್ಬರೇ ಸಮರ್ಥ ಮತ್ತು  ಭ್ರಷ್ಟಾಚಾರ ವಿರೋಧಿಯಾಗಿದ್ದರೇ ಸಾಕೇ.? ಮಿತ್ರಪಕ್ಷಗಳು, ಮಂತ್ರಿ ಮಂಡಲ, ಪಕ್ಷದ ವರಿಷ್ಠರು, ಸಂಸದರು, ಶಾಸಕರು, ಸಚಿವಾಲಯಗಳ ಅಧಿಕಾರಿಗಳು, ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸಹ ಭ್ರಷ್ಟಾಚಾರ ವಿರೋದಿಗಳಾಗಬೇಕು. ಲೋಕ್ ಪಾಲ್ ಬಿಲ್ ಮಂಡಿಸಿದರೆ ಭ್ರಷ್ಟಾಚಾರ ನಿರ್ಮೂಲನೆ ಹಾಗುವುದೇ.? ಖಂಡಿತ ಇಲ್ಲ. ಪ್ರಧಾನಿಯಿಂದ ಹಿಡಿದು ಪಿ‌ಡಿ‌ಓ ಅಧಿಕಾರಿ ವರೆಗೆ ಎಲ್ಲರೂ ಭ್ರಷ್ಟಾಚಾರ ವಿರೋಧಿಗಳಾಗಬೇಕು. ಆಗುತ್ತದೆಯೇ? ಖಂಡಿತಾ ಇಲ್ಲ. ಆ ದೇವರೇ ಇಳಿದು ಬಂದರೂ ಇದು ಸಾಧ್ಯವಿಲ್ಲ. ಲಂಚ ಕೊಡುವವನು ನಿರಾಕರಿಸಬೇಕು, ಲಂಚ ತೆಗೆದುಕೊಳ್ಳುವವನೂ ನಿರಾಕರಿಸಬೇಕು.  ಆಗ ಮಾತ್ರವೇ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ. ಇದನ್ನು ಬಿಟ್ಟು ಯಾವುದೇ ಬಿಲ್ ತಂದರು ಬ್ರಷ್ಟಾಚಾರ ತಡೆಯುವಲ್ಲಿ ಸಪಲವಾಗುವುದಿಲ್ಲ.  ಸಮರ್ಥ ಅಭ್ಯರ್ಥಿಗೆ ಮತ ಹಾಕಿ. ಮುಂದಿನ ಐದು ವರ್ಷಗಳಲ್ಲಿ ಭಾರತವನ್ನು ವಿಶ್ವಮಟ್ಟದಲ್ಲಿ ನಳನಳಿಸುವಂತೆ ಮಾಡೋಣ... 


ರೂಪೇಶ್ ಆರ್ 

Thursday, March 13, 2014

ಮಹಾಬಲ - ಅತಿಬಲ - ರಾಜೇಶ್ ಶ್ರೀವತ್ಸ

Add caption
’ರಾಮ-ಲಕ್ಷ್ಮಣರಿಗೆ , ವಿಶ್ವಾಮಿತ್ರ ಅತಿಬಲ-ಮಹಾಬಲ ಮಂತ್ರಗಳನ್ನು ಉಪದೇಶಮಾಡುವಾಗ ಎರಡು ಗಿಡಗಳು ಕೇಳಿಸಿಕೊಂಡು ಶಕ್ತಿಯನ್ನು ಮೈದುಂಬಿಸಿಕೊಂಡವಂತೆ. ಅದನ್ನು ಕಂಡ ವಿಶ್ವಾಮಿತ್ರ ಅವುಗಳಿಗೆ ಅತಿಬಲ-ಮಹಾಬಲ ಎಂದೇ ಹೆಸರಿಸಿ... "ಹೋಗಿ ಎಲ್ಲೆಡೆ ಬೆಳೆದು ಶಕ್ತಿ ಹಂಚಿ ಜನೋಪಕಾರಿಯಾಗಿ" ಎಂದು ಅಶೀರ್ವಾದ ಮಾಡಿದನಂತೆ. ಎಲ್ಲೆಡೆ ಬೆಳೆಯುವ ಈ ಸಸ್ಯಗಳನ್ನು ಮುಲಾಜಿಲ್ಲದೆ ಕಿತ್ತು ನಾಶ ಮಾಡುವವರೇ ಹೆಚ್ಚು. ಅದಕ್ಕೇ ಒಳ್ಳೆಯವರು ಈ ಪ್ರಪಂಚದಲ್ಲಿ ಇರಬಾರದು...’ ಇದು ನಮ್ಮ ಅಜ್ಜ ಈ ಗಿಡಗಳನ್ನು ಕಂಡಾಗಲೆಲ್ಲ ಹೇಳುತಿದ್ದ ಕಥೆ.
ಅತಿಬಲ
Add caption
ಸುಂದರವಾದ ಹಳದಿ ಅಥವ ಮಿಶ್ರ ವರ್ಣದ ಹೂವುಗಳನ್ನು ಮಧ್ಯಾಹ್ನ ಅರಳಿಸುವ ಈ ಸಸ್ಯ ’ಅತಿಬಲ’.ಹೂವುಗಳು ಅರಳಿದ ಕೆಲವೇ ಘಂಟೆಗಳಲ್ಲಿ ಮುದುಡಿಹೊಗುತ್ತದೆ. ಹೃದಯಾಕಾರದ ಎಲೆಗಳು ಅಂಟು ಅಂಟಾದ ಸಣ್ಣ ಸಣ್ಣ ರೋಮಗಳನ್ನು ಹೊಂದಿರುತ್ತದೆ. ನಮ್ಮ ನಾಡಿನ ಎಲ್ಲೆಡೆ ಧಾರಾಳವಾಗಿ ಪಾಳು ಜಾಗಗಳಲ್ಲಿ ಬೆಳೆಯುತ್ತದೆ. ಮಲೆನಾಡಿನಲ್ಲಿ ಸ್ವಲ್ಪ ಅಪರೂಪವಾಗಿ ಕಾಣಸಿಗುತ್ತದೆ. ಕೈ-ಕಾಲು ಸೆಳೆತ ಇರುವವರು ಇದರ ಸೊಪ್ಪನ್ನು ಅರೆದು ಲೇಪ ಹಚ್ಚುವರು. ತುದಿಯಿಂದ ಬೇರಿನವರೆಗೆ ಪ್ರತಿಯೊಂದು ಅಂಗವೂ ಔಷಧಿಯಾಗಿ ಬಳಕೆಯಾಗುತ್ತದೆ. ಇದರಿಂದ ಮಾಡಿದ ಎಣ್ಣೆ ಮೈಕೈ ನೋವಿನ ಶಮನಕ್ಕಾಗಿ ಉಪಯೋಗಿಸುವರು. ಸಮೂಲಾಗ್ರ ಕಷಾಯವನ್ನು ಹೆಣ್ಣು ಮಕ್ಕಳ ದೇಹಪುಷ್ಟಿಗಾಗಿ ನೀಡುವರು.
'ಉಯ್ಯಾಲೆ ಗೌರಿ' ವ್ರತ ಮಾಡುವವರು ಏ ಹೂವುಗಳನ್ನು ಒಣಗಿಸಿ ಕಾಪಿಟ್ಟು ಪೂಜೆಯಲ್ಲಿ ಉಪಯೋಗಿಸುವರು. ಗೌರಿಗೆ ತುಂಬಾ ಪ್ರಿಯವಂತೆ ಈ ಹೂವು. ಶ್ರೀಮುಡಿ ,ತುರುಬೆ ಹೂ ಇತರೆ ಹೆಸರುಗಳು.
ಮಹಾಬಲ
ಎಲ್ಲೆಡೆ ಕಾಣಿಸಿಕೊಳ್ಳುವ ಮತ್ತೊಂದು ಔಷಧಿಯ ಸಸ್ಯ.. ಮಲೆನಾಡಿಗರಿಗೆ ಚಿರಪರಿಚಿತ ಕಡ್ಲೆಗಿಡ. ಬತ್ತ, ಕಾಫಿ ಕಣಗಳಲ್ಲಿ ಫಸಲನ್ನು ಒಟ್ಟು ಮಾಡುವ ಪರಕೆಯಾಗಿ ಈ ಗಿಡದ ಕಡ್ದಿಗಳನ್ನು ಬಳಸುತ್ತಾರೆ. ಬೆಣ್ಣೆಗರಗ, ಗೂಬೆ ಕಡಲೆ, ಕಳ್ಳ ಕಡಲೆ ಇತರೆ ಹೆಸರುಗಳು.
೭ ತಿಂಗಳಿಗೆ ಹುಟ್ಟಿದ ಮಕ್ಕಳಿಗೆ ಇಡೀ ಗಿಡವನ್ನು ಜಜ್ಜಿ ಬೇಯಿಸಿ ಬರುವ ಗಂಜಿಯಂತಹ ದ್ರವವನ್ನು ಕುಡಿಸುತ್ತಿದ್ದರು. ಇತರೆ ಉಪಯೊಗಗಳು ನನಗೆ ಗೊತ್ತಿಲ್ಲ. ನಿಮಗೆ ಗೊತ್ತಿದ್ದರೆ ತಿಳಿಸಿ.


ರಾಜೇಶ್ ಶ್ರೀವತ್ಸ