ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Wednesday, October 30, 2013

ಲೇಖನ - ರಾಘವೇಂದ್ರ ಅಡಿಗ ಎಚ್ಚೆನ್.


ನನ್ನೆಲ್ಲಾ ಆತ್ಮೀಯ ಗೆಳೆಯರಿಗೆ ನನ್ನ ನಮಸ್ಕಾರ,
    ಕಳೆದ ತಿಂಗಳಲ್ಲಿ  ಕನ್ನ್ಡಡದ ಒಂದು ಅಪೂರ್ವ ಮತ್ತು ನೂತನ ಸ್ವರೂಪದ ಕೃತಿಯೊಂದರ ಬಿಡುಗಡೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನೆರವೇರಿತು.( ಆ ಸಂದರ್ಭದಲ್ಲಿ ನಾನೂ ಸಹ ಅಲ್ಲಿ ಇದ್ದೆ ಎನ್ನುವ ವಿಚಾರವೇ ನನಗೊಂದು ಖುಷಿಯ ಸಂಗತಿ.) ಕನ್ನಡ್ಶ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ಅಗ್ರರಲ್ಲಿ ಒಬ್ಬರಾದ ಡಾ. ಎಮ್. ಚಿದಾನಂದಮೂರ್ತಿಯವರ ‘ಕರ್ನಾಟದ ಅಂದಿನ ಶೇಷ್ಠರ ಇಂದಿನ ವಂಶಸ್ಥರು ಮತ್ತು ಕುರುಗಳು’ ಎನ್ನುವ ಹೆಸರಿನ ಕೃತಿಯು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಅದರಲ್ಲಿರುವ ವಿಷಯದ ದೃಷ್ಟಿಯಿಂದ ತೀರಾ ವಿನೂತನವಾದುದ ಅಷ್ಟೇ ಅಲ್ಲ ಬಹು ಮಔಲ್ಯಯುತವಾದುದು ಕೂಡ. ಲೇಖಕರೇ ಹೇಳುವಂತೆ ‘ಇಂತಹಾ ಒಂದು ಪುಸ್ತಕ ಕನ್ನಡದಲ್ಲಿ ಬರುತ್ತಿರುವುದು ಇದೇ ಮೊದಲು,ಇತರೆ ಭಾರತೀಯ ಭಾಷೇಗಳಲ್ಲಿಯೂ ಬಂದಂತಿಲ್ಲ’. ಈ ಒಂದು ಪುಸ್ತಕದಿಂದ ನಾವು-ನೀವು ಓದಿರುವ ಕನ್ನಡದ ಪ್ರಾಚೀನ ಕವಿಗಳು, ನಮ್ಮನ್ನಾಳಿದ ರಾಜ ಮಹಾರಾಜರ ವಂಶಸ್ಥರ ಕುರಿತಾಗಿ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳಬಹುದು.
    ಕನ್ನಡದ ಶ್ರೇಷ್ಠ ಸಂಶೋಧಕರೂ, ಚಿಂತಕರೂ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರೂ ಆಗಿರುವ ಡಾ. ಎಮ್. ಚಿದಾನಂದಮೂರ್ತಿಗಳ ಈ ಕಿರುಹೊತ್ತಿಗೆ ಅವರ ಹಲವು ವರ್ಷಗಳ ಪರಿಶ್ರಮದ ಫಲ. ಶತ ಶತಮಾನಗಳ ಹಿಂದೆ ಆಳಿಹೋದ ರಾಜವಂಶಸ್ಥರ, ನೂರಾರು-ಸಾವಿರಾರು ವರ್ಷಗಳ ಹಿಂದೆ ಬದುಕಿ ಕಾವ್ಯಗಳನ್ನು ರಚಿಸಿದ ಪ್ರಾಚೀನ ಕವಿಮಹೋದಯರ ಈಗಿನ ವಂಶಸ್ಥರು ಯಾರೆನ್ನುವುದನ್ನು ಪತ್ತೆ ಮಾಡಿ ಅವರನ್ನು ಸಂದರ್ಶಿಸಿ, ಅವರ ಬಳಿ ಇದ್ದ ಅಂದಿನ ಕಾಲದ ಕುರುಹುಗಳನ್ನು ನೋಡಿ ಅದರ ಬಗ್ಗೆ ಲೇಖನ ಅಥವಾ ಪುಸ್ತಕ ಬರೆಯುವುದು ಅಷ್ಟೇನೂ ಸುಲಭವಲ್ಲ. ಉದಾಹರಣೆಗೆ ಕನ್ನಡದ ಆದಿಕವಿ ಪಂಪನನ್ನು ತೆಗೆದುಕೊಂಡರೆ ಅವನ ಕಾಲ ಕ್ರಿ.ಶ.೯೦೨. ಅವನು ‘ವಿಕ್ರಮಾರ್ಜುನ ವಿಜಯ’ ಕಾವ್ಯವನ್ನು ಪೂರ್ಣಗೊಳಿಸಿದ್ದು ಕ್ರಿ.ಶ.೯೪೨ ರಲ್ಲಿ. ಅಂದರೆ ಇಂದಿಗೆ ಸುಮಾರು ಸಾವಿರದ ನೂರು ವರ್ಷಗಳಾದವು. ಹೀಗೆ ಸಾವಿರ ವರ್ಷಗಳ ಹಿಂದೆ ಬದುಕಿದ್ದ ಪಂಪನ ತಂದೆ ಹಾಗೂ ತಾಯಿಯ ವಂಶಸ್ಥರ ವಿವರಗಳಾನ್ನು ಪತ್ತೆ ಮಾಡುವುದು ಮತ್ತು ಅವರನ್ನು ಸ್ವತಃ ಸಂದರ್ಶಿಸಿ ಮತ್ತಷ್ಟು ಮಾಹಿತಿಯನ್ನು ಕಲೆಹಾಕಿ ಪುಸ್ತಕ ಪ್ರಕಟಿಸುವುದು ಬಲು ಅಪರೂಪದ ಸಂಗತಿ. ಹೀಗಾಗೆ ಇಂತಹಾ ಪುಸ್ತಕವು ಕನ್ನಡದಲ್ಲಿ ತೀರಾ ನೂತನವಾಗಿರುವುದು ಸಾಧ್ಯ.
    ಸ್ನೇಹಿತರೇ, ಚಿದಾನಂದಮೂರ್ತಿಗಳೇ ಹೇಳಿಕೊಳ್ಳುವಂತೆ- “‘ನನ್ನ ಹಲವು ವರ್ಷಗಳ ನಿರಂತರ ಸಂಶೋಧನೆ ಕಾರ್ಯದಲ್ಲಿ ಸಾಕಷ್ಟು ದೈಹಿಕ, ಮಾನಸಿಕ ಶ್ರಮ, ಆಂತರಿಕ ಹತಾಶೆ, ಕಾತುರಗಳನ್ನು ಅನುಭವಿಸಿದ್ದೇನೆ ಹಲವು ರೋಮಾಂಚಕ ಕ್ಷಣಗಳನ್ನು ಅನುಭವಿಸಿದ್ದೇನೆ.......... ಈ ಕಿರು ಕೃತಿಯನ್ನೋದಿದವರಿಗೆ ನಮ್ಮ ಹಿಂದಿನ ಕವಿಗಳು, ಮಹನೀಯರು, ಹೃದಯಕ್ಕೆ ಹತ್ತಿರವಾಗುತ್ತಾರೆ, ಆಪ್ತರಾಗುತ್ತಾರೆ’’.
    ಈ ಪುಸ್ತಿಕೆಯಲ್ಲಿ ಒಟ್ಟು ಹದಿನೇಳು ಅಧ್ಯಾಯಗಳಿದ್ದು ಮೊದಲನೇ ಅಧ್ಯಾಯವು ‘ಪ್ರವೇಶಿಕೆ’. ಇದರಲ್ಲಿ ಚಿದಾನಂದಮೂರ್ತಿಗಳು ತಾವು ಕನ್ನಡ ನಾಡಿನ ಶ್ರೇಷ್ಠರ ಈಗಿನ ವಂಶಸ್ಥರನ್ನು ಹುಡುಕಲು ಸಿಕ್ಕ ಸ್ಪೂರ್ತಿಯ ಕುರಿತಾಗಿ ಹೇಳಿಕೊಂಡಿದ್ದಾರೆ. ಅವರು ಇಂಗ್ಲೆಂಡಿಗೆ ಭೇಟಿ ಕೊಟ್ಟಾಗ ಅಲ್ಲಿನ ಮಹಾಕವಿ ವರ್ಡ್ಸ್ ವರ್ತನ ಮನೆಗೆ ಹೋದಾಗಿನ ಸಂದರ್ಭವನ್ನು ಹಂಚಿಕೊಂಡಿದ್ದಾರೆ. ಇನ್ನು ಎರಡನೇ ಅಧ್ಯಾಯದಿಂದ ಹದಿನೇಳನೆ ಅಧ್ಯಾಯದವರೆಗೆ ಪಂಪನಿಂದ ಮೊದಲ್ಗೊಂಡು ನಾನ್ಯದೇವ, ಬಸವಣ್ಣ, ಹರಿಹರ, ರಾಘವಾಂಕ, ಕುಮಾರವ್ಯಾಸ, ವಿಜಯನಗರದ ದೊರೆಗಳು, ಚಾಮರಸ, ಸೋದೆ, ಕೆಳದಿಯ ಅರಸರು, ಕಿತ್ತೂರು ರಾಣಿ ಚೆನ್ನಮ್ಮ, ಕೊಡಗು ಮತ್ತು ಮೈಸೂರಿನ ಅರಸರ ಈಗಿನ ವಂಶಸ್ಥರು ಹಾಗೂ ಅವರ ಕುರುಹುಗಳನ್ನು ಅವರ ಛಾಯಾಚಿತ್ರ ಹಾಗೂ ಸಂಪರ್ಕ ದೂರವಾಣಿ ಸಂಖ್ಯೆಗಳ ಸಹಿತವಾದ ಮಾಹಿತಿಯನ್ನು ನೀಡುತ್ತಾರೆ.
    ಇಂದಿಗೆ ಸರಿಸುಮಾರು ಸಾವಿರದ ನೂರು ವರ್ಷಗಳ ಹಿಂದೆ ಇದ್ದಂತಹಾ ಪಂಪ ಕವಿಯ ವಂಶಸ್ಥರು ಇಂದಿಗೂ ಧಾರವಾಡದ ಅಣ್ಣಿಗೇರಿಯಲ್ಲಿದ್ದು ಕನ್ನಡದ ಮುಖ್ಯ ವಿದ್ವಂಸರುಗಳಾಲ್ಲಿ ಒಬ್ಬರಾದ ಜಿ. ಬ್ರಹ್ಮಪ್ಪನವರು ಇಂದಿನ ವಂಶಸ್ಥರನ್ನು ಪ್ರಥಮವಾಗಿ ಪತ್ತೆ ಮಾಡಿರುತ್ತಾರೆ. ಪಂಪನ ತಂದೆಯ ಕಡೆಯ ವಂಶಸ್ಥರಾದ ಭೀಮಪ್ಪಯ್ಯ ದೇಶಪಾಂಡೆ ಹಾಗೂ ತಾಯಿಯ ಕಡೆಯ ವಂಶಸ್ಥರಾದ ಗೋವಿಂದ ಭಟ್ ಜೋಶಿಯವರಿಬ್ಬರೂ ಅಣ್ಣಿಗೇರಿಯಲ್ಲಿಯೇ ಇರುವುದು ಇನ್ನೊಂದು ವಿಶೇಷ. ಅಲ್ಲದೆ ಆಂಧ್ರದ ಕುರಿಕಾಲವೆಂಬಲ್ಲಿ ದೊರಕಿದ ಪಂಪನ ತಮ್ಮ ಜಿನವಲ್ಲಭನ ಶಾಸನದಲ್ಲಿ ಉಲ್ಲೇಖಿಸಲಾದ ಕವಿತಾಗುಣಾರ್ಣವ ಕೆರೆಯನ್ನೂ ಸಹ ಪತ್ತೆಹಚ್ಚಲಾಗಿದ್ದು ಈಗದನ್ನು ಅಲ್ಲಿನ ಜನರು ‘ಉಡನ್ ಚೆರವು’ ಎನ್ನುವ ಹೆಸರಿನಲ್ಲಿ ಗುರುತಿಸುತ್ತಾರೆ.
    ನೇಪಾಳವನ್ನಾಳಿದ ‘ಕರ್ನಾಟ’ವಂಶದ ದೊರೆಗಳಲ್ಲಿ ನಾನ್ಯದೇವನ ಹೆಸರು ಅತಿ ಮುಖ್ಯವಾಗಿ ಕೇಳಿಬರುತ್ತದೆ. ಕಲ್ಯಾಣ ಚಾಲುಕ್ಯ ಚಕ್ರವರ್ತಿ ಆರನೇ ವಿಕ್ರಮಾದಿತ್ಯನ ಸಮಂತನಾಗಿದ್ದುಕೊಂಡು ಆಳ್ವಿಕೆ ನಡೆಸಿದ ನಾನ್ಯದೇವನ ಕಾಲ ಸುಮಾರಾಗಿ ಕ್ರಿ.ಶ. ೧೧೦೦ ಆಗಿರುತ್ತದೆ. ಅಂತಹಾ ನಾನ್ಯದೇವಾ ವಂಶಸ್ಥರೌ ಇಂದಿಗೂ ನೇಪಾಳದಲ್ಲಿ ವಾಸವಾಗಿದ್ದಾರೆ. ನೇಪಾಳದ ಕಟ್ಮಂಡುವಿನಲ್ಲಿ ನೆಲೆಸಿರುವ ಶೀ ದೇವ್ ವೈದ್ಯ ದಂಪತಿಗಳು ಕನ್ನಡ ನಾನ್ಯದೇವನ ವಂಶಸ್ತಹ್ರೆನ್ನುವುದು ಅವರಲ್ಲಿರುವ ವಂಶವೃಕ್ಷದ ದಾಖಲೆಯಿಂದ ದೃಢಪಟ್ಟಿದೆ. (ಇಲ್ಲಿ ನಾವು ಗಮನ್ಸಬಹುದಾದ ಅಂಶವೆಂದರೆ ನಾನ್ಯದೇವನ ಹೆಸರಿನಲ್ಲಿನ ‘ದೇವ’ ಎನ್ನುವ ಪದ ಇಂದಿಗೂ ಆ ವಂಶಿಗರ ಹೆಸರಿನೊಂದಿಗೆ ಸೇರಿಕೊಂಡು ಬಂದಿದೆ!)
    ಇನ್ನು ಕನ್ನಡದ ಶ್ರೇಷ್ಠ ವಚನಕಾರ ಯುಗಪುರುಷ ಜಗಜ್ಯೋತಿ ಬಸವೇಶ್ವರ ಎಂದೆಲ್ಲಾ ಕರೆಸಿಕೊಳ್ಳುವ ಬಸವಣ್ಣನ ವಂಶಸ್ಥರು ಇಂದೂ ಸಹ ಬಾಗೇವಾಡಿಯಲ್ಲಿದ್ದಾರೆ. ಶೀ ಕಿರಣ್ ಕುಲಕರ್ಣಿಯವರು ಬಸವಣ್ಣನ ತಂದೆಯ ಕಡೆಯ ಈಗಿನ ವಂಶಸ್ಥರಾಗಿದ್ದಾರೆ. ಇನ್ನೊಂದು ವಿಚಾರವೆಂದರೆ ಎಲ್ಲರೂ ಸಾಧಾರಣವಾಗಿ ತಿಳಿದಿರುವಂತೆ ಬಸವಣ್ಣ ಜನ್ಮಸ್ಥಾನವು ಬಾಗೇವಾಡಿಯಾಗಿರದೆ ಆತನ ತಾಯಿಯ ತೌರು ಮನೆಯಾದ ಇಂಗುಳೇಶ್ವರವಾಗಿರುತ್ತದೆ. ಬಸವಣ್ಣನ ತಂದೆ ಮಾದರಸನ ಮೊದಲ ಪತ್ನಿ ಹೆರ್ರಿಗೆ ಸಮಯದಲ್ಲಿ ತೀರಿಇಕೊಳ್ಳುತ್ತಾಳೆ. ಮಾದರಸನು ಮಾದಲಾಂಬಿಕೆಯನ್ನು ಎರಡನೆ ವಿವಾಹವಾಗುತ್ತಾನೆ. ಎಂದರೆ ಬಸವಣ್ಣ ಮಾದಎ=ರಸನ ಎರಡನೆ ಪತ್ನಿಯ ಮಗನಾಗಿದ್ದು ಮಾದಲಾಂಬಿಕೆಯ ತೌರೂರು ಇಂಗುಳೇಶ್ವರದಲ್ಲಿ ಜನಿಸುತ್ತಾನೆ. ಮಾದರಸನ ಮೊದಲ ಪತ್ನಿಯ ಮಗ ದೇವರಾಜನೆನ್ನುವುದು ಕ್ರಿ.ಶ್.೧೨೬೦ ರ ಶಿಲಾಶಾಸನವೊಂದರಲ್ಲಿ ಉಲ್ಲೇಖಗೊಂಡಿದೆ. ಈ ದೇವರಾಜನ ವಂಶಸ್ಥರೂ ಸಹ ಬೆಳಗಾವಿಯ ಅರ್ಜುನವಾಡವೆಂಬಲ್ಲಿ ಇಂದು ನೆಲೆಸಿರುವುದನ್ನು ಲೇಖಕರು ಪತ್ತೆ ಮಾಡಿದ್ದಾರೆ. ಬಸವಣ್ಣನ ತಾಯಿಯ ವಂಶಸ್ಥರಾದ ಅರವಿಂದ ಕುಲಕರ್ಣಿಗಳು ಇಂದಿಗೂ ಇಂಗುಳೇಶ್ವರದಲ್ಲಿ ನೆಲೆಸಿದ್ದಾರೆ. ಅಂದಹಾಫ಼ೆ ಬಸವಣ್ಣನ ಇಂದಿನ ವಂಶಸ್ಥರ ಬಗ್ಗೆ ಪ್ರಥಮವಾಗಿ ಗುರುತಿಸಿದವರು ಕನ್ನಡದ ಶೇಷ್ಠ ವಿದ್ವಾಂಸರಾಗಿದ್ದ ಡಾ. ಸಿದ್ದಯ್ಯ ಪುರಾಣಿಕರು.
    ಬಸವಣ್ಣನ ಸಮಕಾಲೀನಳಾಗಿದ್ದ ಕನ್ನಡದ ಶೇಷ್ಠ ವಚನಗಾರ್ತಿ ಅಕ್ಕಮಹಾದೇವಿಯ ವಂಶಸ್ಥರು ಗೋಕಾಕದಲ್ಲಿ ನೆಲೆಸಿದ್ದು ಈಗಿರುವ ಮೃತ್ಯುಂಜಯ ಹಳೆ ಪಟ್ಟಣಶೇಟ್ಟಿ ಯೆನ್ನುವವರು ಅಕ್ಕನ ದೊಡಡಪ್ಪನ ಕಡೆಯ ವಂಶಸ್ಥರಾಗಿರುತ್ತಾರೆಂದು ಅವರ ಬಳಿಯಿರುವ ವಂಶಾವಳಿ ದಾಖಲೆಗಳಿಂದ ಚಿದಾನಂದಮೂರ್ತಿಗಳು ಪತ್ತೆ ಮಾಡಿರುತ್ತಾರೆ.
    ಕನ್ನಡದಲ್ಲಿ ‘ಗಿರಿಜಾ ಕಲ್ಯಾಣ’ದಂತಹಾ ಚಂಪೂ ಕಾವ್ಯದೊಂದಿಗೆ ಅನೇಕ ಶಿವಶರಣಾರ ಜೀವನದ ಕುರಿತಾಗಿ ರಗಳೆಗಳನು ರಚಿಸಿ ಖ್ಯಾತನಾದಂತಹಾ ಹರಿಹರ ಕವಿಯು ವಾಸವಿದ್ದ ಮನೆಯ ಜಾಗವನ್ನು ಪತ್ತೆ ಮಾಡಿದ ವಿವರಗಳು(ಹಂಪೆಯ ವಿರೂಪಾಕ್ಷ ದೇವಾಲಯದ ಪಕ್ಕದ ಮನ್ಮಥ್ ಕುಂಡದ ದಡದಲ್ಲಿ) ಹಾಗೇ ಹರಿಹರನ ಸೋದರಳಿಯನಾದ ‘ಹರಿಶ್ಚಂದ್ರ ಕಾವ್ಯ’, ‘ವೀರೇಶ ಚರಿತೆ’, ‘ಸಿದ್ದರಾಮ ಚಾರಿತ್ರ್ಯ’ದಂತಹಾ ಷಟ್ಪದಿ ಕಾವ್ಯಗಳನ್ನು ಕನ್ನಡಕ್ಕೆ ನೀಡಿದ ‘ಷಟ್ಪದಿ ಬ್ರಹ್ಮ’ನೆಂದು ಖ್ಯಾತನಾದ  ರಾಘವಾಂಕನ ಸಮಾಧಿ ಸ್ಥಳವನ್ನೂ ಇಂದಿನ ಬೇಲೂರಿನಲ್ಲಿರುವ ಪಾತಾಳೇಶ್ವರ ದೇಗುಲವೆಂದು ಪತ್ತೆ ಹಚ್ಚಲಾಗಿದೆ. ಜತೆಗೆ ಕನ್ನಡದ ಇನ್ನೊಬ್ಬ ಮಹತ್ವದ ಕವಿಯಾಗಿದ್ದ ಕೆರೆಯ ಪದ್ಮರಸನು ಕಟ್ಟಿಸಿದ್ದ ಕೆರೆಯನ್ನೂ ಸಹ ಪತ್ತೆಯಾಗಿದ್ದು ಬೇಲೂರಿನಲ್ಲಿರುವ ಬಿಷ್ಟಮ್ಮನ ಕೆರೆಯೇ ಪದ್ಮರಸನು ಅಂದು ಕಟ್ಟಿಸಿದ್ದ ಕೆರೆಯಾಗಿದೆ.
    ಕನ್ನಡದ ಇನ್ನೊಬ್ಬ ಮಹತ್ವದ ಕವಿಯಾದ ಕುಮಾರವ್ಯಾಸ ಅಥವಾ ಗದುಗಿನ ನಾರಣಪ್ಪನ ವಂಶಸ್ಥರ ವಿವರಗಳೂ ಈ ಪುಸ್ತಿಕದಲ್ಲಿ ನಮಗೆ ದೊರೆಯುತ್ತವೆ. ಅಂದಹಾಗೆ ‘ಕರ್ಣಾಟ ಭಾರತ ಕಥಾಮಂಜರಿ’ ಅಥವಾ ಕುಮಾರವ್ಯಾಸ ಭಾರತವನ್ನು ಬರೆದಿರುವ ಕನ್ನಡದ ಖ್ಯಾತ ಕವಿ ನಾರಣಪ್ಪನ ಹುಟ್ಟೂರು ಇಂದಿನ ಹುಬ್ಬಳ್ಳಿಯಿಂದ ಮೂವತ್ತೈದು ಕಿಲೋಮೀಟರ್ ದೂರದಲ್ಲಿರುವ ಕೋಳಿವಾಡವಾಗಿದ್ದು ಅಲ್ಲಿ ಇಂದಿಗೂ ಅವನ ವಂಶಸ್ಥರಾದ ದತ್ತಾತ್ರೇಯ ಪಾಟೀಲ ಕುಲಕರ್ಣಿಯವರು ವಾಸವಿದ್ದಾರೆ. ಕುಮಾರವ್ಯಾಸನ ತಮ್ಮನ ವಂಶಜರು ಸಹ ಕೋಳಿವಾಡದಲ್ಲಿದ್ದು ಕುಮಾರವ್ಯಾಸನ ನಂತರ ಒಂಭತ್ತನೇ ತಲೆಮಾರಿನಿಂದ ಕೋಳಿವಾಡದ ಗೌಡಿಕಿ ಹಾಗೂ ಕುಲಕರ್ಣಿತ್ವವು ಈ ಮನೆತನದವರ ಪಾಲಿಗೆ ಬಂದಿತು
    ಇನ್ನು ಕನ್ನಡ ನಾಡಿನ ಮತ್ತು ದಕ್ಷಿಣ ಭಾರತದ ಮುಖ್ಯ ರಾಜವಂಶಗಳಲ್ಲಿ ಒಂದಾದ ವಿಜಯನಗರದ ಅರಸರ ವಂಶಜರು ಮತ್ತು ವಿಜಯನಗರದ ರಾಜಗುರುಗಳಾಗಿದ್ದ ಶೀ ವಿದ್ಯಾರಣ್ಯ ಮಹಾಸ್ವಾಮಿಗಳ ಮಠದ ಪರಂಪರೆಗಳ ಬಗ್ಗೆಯೂ  ಪುಸ್ತಕದಲ್ಲಿ ವಿವರಿಸಲಾಗಿದೆ. ಕ್ರಿ.ಶ.೧೫೬೫ ರ ರಕ್ಕಸಗಿ-ತಂಡರಗಿ ಯುದ್ದದಲ್ಲಿ ಪರಾಜಯಗೊಳ್ಳುವುದರೊಂದಿಗೆ ವಿಜಯನಗರದ ವೈಭವದ ಆಳ್ವಿಕೆ ಮುಕ್ತಾಯಗೊಂಡಿತು. ಆದರೆ ಅಳಿಯ ರಾಮರಾಯನ ನಂತರ ಆರಂಭಗೊಂಡ ಅರವೀಡು ವಂಶದ ಅರಸರು ಆಂಧ್ರದ ಪೆನುಗೊಂಡೆ ಮೊದಲಾದೆಡೆಗಳಲ್ಲಿ ನೆಲೆಸಿ ಆಡಳಿತವನ್ನು ಮುಂದುವರಿಸಿದರು. ಆ ಅರವೀಡು ವಂಶದ ದೊರೆಗಳ ವಂಶಸ್ಥರು ಇಂದಿಗೂ ಹೊಸಪೇಟೆಯಲ್ಲಿ ವಾಸವಿದ್ದಾರೆ. ರಾಜಾ ಅಚ್ಯುತರಾಯರು(೧೯೩೬-೨೦೦೮) ಮತ್ತವರ ಪತ್ನಿಯವರಾದ ರಾಣಿ ಚಂದ್ರಕಾಂತಾದೇವಿ ಹಾಗೂ ಅವರ ಪುತ್ರರಾದ ರಾಜಾ ಶೀಕೃಷ್ಣದೇವರಾಯರು ಇಂದು ಹೊಸಪೇಟೆಯಲ್ಲಿ ನೆಲೆಸಿದ್ದು ಲೇಖಕ ಚಿದಾನಂದಮೂರ್ತಿಗಳ ಮನೆಗೂ ಒಮ್ಮೆ ಬಂದಿದ್ದರು. ಹಾಗೇ ರಾಜಾ ಅಚ್ಯುತರಾಯ ದಂಪತಿಗಳನ್ನು ರಾಜಧಾನಿ ಬೆಂಗಳೂರಿಗೆ ಕರೆಸಿ ಸನ್ಮಾನವನ್ನು ಸಹ ನೆರವೇರಿಸಲಾಗಿತ್ತು.
    ಶೀ ವಿರೂಪಾಕ್ಷ ದೇವಾಲಯದ ಹಿಂಭಾಗದಲ್ಲಿ ‘ಶೀ ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಸಂಸ್ಥಾನ ಮಠ’ ವಿದ್ದು ಅದು ಹಿಂದೆ ವಿದ್ಯಾರಣ್ಯ ಮಹಾಸ್ವಾಮಿಗಳು ವಾಸವಿದ್ದ ಜಾಗವಾಗಿದೆ. ಇಂದಿಗೂ ಆ ಪರಂಪರೆಯನ್ನು ಮುಂದುವರಿಸಿರುವ ಗುರುಗಳನ್ನು ನಾವು ಅಲ್ಲಿ ಕಾಣುತ್ತೇವೆ. ವಿಜಯನಗರ ಸ್ಥಾಪಕರಾದ ಹಕ್ಕ-ಬುಕ್ಕರ ಕುಲಗುರುಗಳಾಗಿದ್ದ ಕಾಶೀವಿಲಾಸ ಕ್ರಿಯಾಶಕ್ತಿಗಳವರು ವಾಸವಿದ್ದ ಗುಹೆಯನ್ನು ಗುರುತಿಸಲಾಗಿದೆ. ಈ ಗುರುಗಳ ಪರಂಪರೆಯು ವಿದ್ಯಾರಣ್ಯ ಸಂಸ್ಥಾನದಂತೆ ಮುಂದುವರಿದಿರುವುದಿಲ್ಲ.
    ಇನ್ನು ಕನ್ನಡದ ಮಹತ್ವದ ಕವಿಗಳಾದ ಚಾಮರಸ, ‘ಭರತೇಶ ವೈಭವ’ದ ಕರ್ತೃ ರತ್ನಾಕರ ವರ್ಣಿ, ಕನ್ನಡ ಬಸವಪುರಾಣವನ್ನು ಬರೆದ ಭೀಮಕವಿಯ ವಂಶಸ್ತಹ್ರು ಹಾಗೂ ಕುರುಹುಗಳ ಕುರಿತು ಸಹ ಈ ಪುಸ್ತಿಕೆಯಲ್ಲಿ ಚರ್ಚಿಸಲಾಗಿದೆ. ‘ಪ್ರಭುಲಿಂಗ ಲೀಲೆ’ಯ ಕರ್ತೃ ವಾದ ಚಾಮರಸನು ವಾಸವಿದ್ದ ಗುಹೆಯನ್ನು ಹಂಪಿಯಲ್ಲಿ ಗುರುತಿಸಲಾಗಿದ್ದು ರತ್ನಾಕರ ವರ್ಣಿಯ ವಂಶಸ್ಥರು ಮೂಡಬಿದಿರೆಯಲ್ಲಿರುವ ಜೈನ ಕುಟುಂಬದವರಾದ ರವಿರಾಜ ಶೆಟ್ಟರು ರತ್ನಾಕರ ವರ್ಣಿಯ ಇಂದಿನ ವಂಶಸ್ಥರಾಗಿರುತ್ತಾರೆ. ಭೀಮಕವಿಯ ಸಮಾಧಿ ಆಂಧ್ರದ ಅನಂತಪುರದ ಗಡೇಕಲ್ಲು ಗ್ರಾಮದಲ್ಲಿರುವುದನ್ನು ಪತ್ತೆ ಹಚ್ಚಲಾಗಿದೆ. ಇನ್ನು ಫಾಲ್ಕುರಿಕೆ ಸೋಮನಾಥನ ವಂಶಸ್ಥರು ಮಾಗಡಿ ತಾಲ್ಲೂಕು ಕಲ್ಯದಲ್ಲಿ ವಾಸವಿದ್ದು ಶೀ ಕೆ.ಪಿ. ಮಲ್ಲಿಕಾರ್ಜುನಾರಾದ್ಯರು ಸೋಮನಾಥನ ಇಂದಿನ ವಂಶಸ್ಥರಾಗಿದ್ದಾರೆ. ಇನ್ನು ಸೋಮನಾಥನ ಸಮಾಧಿ ಕಲ್ಯದ ಬೆಟ್ಟದ ಮೇಲಿರುವ ಕಲ್ಲೇಶ್ವರ ಬೆಟ್ತದ ಮೇಲಿದೆ ಎನ್ನುವುದು ಬೆಳಕಿಗೆ ಬಂದಿದೆ.
    ಅಂತೆಯೇ ವಿಜಯನಗರ ಕಾಲಾನಂತರ ನಮ್ಮನ್ನಾಳಿದ ಸೋದೆ, ಕೆಳದಿ, ಹಾಲೇರಿ ಹಾಗೂ ಮೈಸೂರು ಅರಸರ ವಂಶಸ್ಥರ ವಿಚಾರವಾಗಿಯೂ ಚಿದಾನಂದಮೂರ್ತಿಗಳಿ ಈ ಹೊತ್ತಿಗೆಯಲ್ಲಿ ದಾಖಲಿಸಿದ್ದಾರೆ.  ಸೋದೆ ವಂಶಸ್ಥರಲ್ಲಿ ಆಳ್ವಿಕೆ ನಡೆಸಿದ ಮಲ್ಲಮ್ಮಾಜಿಯವರ ವಂಶ್ಸಸ್ಥರು ಇಂದು ಗೋವಾದಲ್ಲಿ ನೆಲೆಸಿದ್ದು ಸವಾಯಿ ಸದಾಶಿವ ರಾಜೇಂದ್ರ ಒಡೆಯರು ಮತ್ತವರ ಮಕ್ಕಾಳು ಗೋವಾದ ಬಾಂದೇವಾಡಿ(ಬಾಂದೋವ್) ಎನ್ನುವಲ್ಲಿ ಇದ್ದಾರೆ. ವಿಜಯನಗರದ ಬಲಿಷ್ಟ ಸಾಮಂತ ರಾಜ್ಯವಾಗಿದ್ದ ಶಿವಮೊಗ್ಗದ ಕೆಳದಿ ಅರಸರ ಈಗಿನ ವಂಶಸ್ಥರಾದ ಲಿಂಗರಾಜ ನಾಯಕ್ ಹುಬ್ಬಳ್ಳಿಯಲ್ಲಿನ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯಾಗಿರುವುದು ಬಹು ಮುಖ್ಯ ಸಂಗತಿಯಾಗಿದೆ. ಹಾಗೆಯೇ ‘ಕೆಳದಿ ನೃಪವಿಜಯ’ದ ಕರ್ತೃವಾದ ಲಿಂಗಣ್ಣ ಕವಿಯ ತಂದೆ- ತಾಯಿಯರ ವಂಶಸ್ಥರೂ ನಮ್ಮ ನಡುವೆ ಇದ್ದಾರೆ. ಇನ್ನು ಮಡಿಕೇರಿಯ ಹಾಲೇರಿ ದೊರೆಗಳ ಈಗಿನ ವಂಶಸ್ಥರು ಪೂನಾದಲ್ಲಿ ವಾಸವಾಗಿದ್ದು ಲೇಖಕರು ಅವರೊಂದಿಗೆ ದೂರವಾಣಿ ಮುಖಾಂತರ ಸಂಭಾಷಿಸಿದ್ದಾರೆ. ಗಂಗಾಧರ ಚಿರುಮೆ ಮತ್ತು ನಳಿನಿ ಗಂಗಾಧರ ಚಿರುಮೆಯವರುಗಳು ಮಡಿಕೇರಿ ಅರಸರ ವಂಶಸ್ಥರೆನ್ನುವುದು ಅವರ ಬಳಿಯಿರುವ ವಂಶವೃಕ್ಷದಿಂದ ಸಾಬೀತಾಗಿದೆ. ಹಾಗೆಯೇ ಮೈಸೂರಿನ ಒಡೆಯರ ಈಗಿನ ವಂಶಸ್ಥರಾದ ಶೀಕಂಠದತ್ತ ಒಡೆಯರುಗಳು ಮೈಸೂರು ಅರಮನೆಯಲ್ಲಿ ವಾಸವಿದ್ದಾರೆ.
    ಬೆಳಗಾವಿ ಜಿಲ್ಲೆಯ ಕಿತ್ತೂರು ಅದನ್ನಾಳಿದ ಚೆನ್ನಮ್ಮ ರಾಣಿಯಿಂದ ಪ್ರಸಿದ್ದವಾಗಿರುವ ಸ್ಥಳ. ಚಿಕ್ಕ ರಾಜ್ಯವಾಗಿದ್ದ ಕಿತ್ತೂರನ್ನುಅ ಬ್ರಿಟಿಷರು ತಮ್ಮಾಲು ಮುಂದಾದಾಗ ಧೈರ್ಯದಿಂದ ಕಾದಾಡಿ ಸ್ವಾತಂತ್ರ್ಯಕ್ಕಾಗಿ ತನ್ನನ್ನೇ ಬಲಿಕೊಟ್ತ ನಾಡು ಕಿತ್ತೂರು. ಅಂತಹಾ ನಾಡನ್ನಾಳಿದ ಚೆನ್ನಮ್ಮ ತಾಯಿಯ ಕೆಚ್ಚೆದೆಯ ಹೋರಾಟ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಭರತ ಖಂಡದಲ್ಲಿಯೇ ಬಲು ಪ್ರಸಿದ್ದವಾದುದು. ಇಂತಹಾ ಚೆನ್ನಮ್ಮ ರಾಣಿಯ ವಂಶಸ್ಥರು ಸೋಮಶೇಖರ ದೇಸಾಯಿಗಳು ಇಂದು ಬೆಳಗಾವಿಯ ಖಾನಾಪುರದಲ್ಲಿ ನೆಲೆಸಿದ್ದಾರೆ.
    ಹೀಗೆ ಹಿಂದೆ ನಮ್ಮ ನಾಡನ್ನಾಳಿದ ಅದೆಷ್ಟೋ ರಾಜ ಮನೆತನಗಳಾ ಮತ್ತು ಕನ್ನ್ಡದಲ್ಲಿ ಮಹಾಕಾವ್ಯಗಳಾನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ಅತ್ಯಮೂಲ್ಯ ಕೊಡುಗೆಯನ್ನು ನೀಡಿದ ಮಹಾಕವಿಗಳಾ ವಂಶಸ್ಥರುಗಳು ಇಂದಿಗೂ ನಮ್ಮ-ನಿಮ್ಮ ನಡುವೆ ಇದ್ದಾರೆನ್ನುವುದೇ ನಮಗೊಂದು ಹೆಮ್ಮೆ. ಅಂತಹಾ ವಂಶಸ್ಥರ ವಿವರಗಳು ಮತ್ತು ಅಂದಿನವರ ವಾಸವಿದ್ದ ಸ್ಥಳದ ಕುರುಹುಗಳನ್ನು ಹುಡುಕಿ ಅದನ್ನು ಜನಸಾಮಾನ್ಯರಿಗೆ ತಿಳಿಯಪಡಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಅಂತಹಾ ಒಂದು ಪ್ರಯತ್ನವು ಈ ಕಿರು ಹೊತ್ತಿಗೆಯಲ್ಲಿ ಆಗಿರುವುದನ್ನು ನಾವು ಕಾಣುತ್ತೇವೆ. ಹೀಗಾಗಿ ಇಂತಹಾ ಒಂದು ಪುಸ್ತಕವನ್ನು ಪ್ರತಿಯೊಬ್ಬರೂ ಓದಬೇಕು ಮತ್ತು ಬೇರೆಯವರಿಗೆ ಓದುವಂತೆ ಸಲಹೆಮಾಡಬೇಕೆನ್ನುವುದು ನನ್ನ ಆಶಯ. ಹಾಗೆಯೇ ಇನ್ನೊಂದು ವಿಚಾರವನ್ನು ಹೇಳುವುದಾದಲ್ಲಿ ಇಂತಹಾ ಒಂದು ಪುಸ್ತಕ ಇಂಗ್ಲೀಷ್ ಸೇರಿದಂತೆ ಭಾರತದ ಬೇರೆ ಭಾಷೆಗಳಿಗೂ ಅನುವಾದವಾಗಬೇಕಿದೆ. ಆ ಮೂಲಕ ಕನ್ನಡ ನಾಡಿನ ಇತಿಹಾಸ- ಸಾಂಸ್ಕೃತಿಕ ಪರಂಪರೆ ಇಡೀ ವಿಶ್ವದಲ್ಲಿ ಪಸರಿಸುವಂತಾಗಬೇಕಿದೆ.
    ಇನ್ನು ಈ ಕೃತಿಯ ಪ್ರಸ್ತಾವನೆಯಲ್ಲಿ ಲೇಖಕರೇ ಹೇಳುವಂತೆ- “ಇದು ಕೇವಲ ಮಾಹಿತಿ ಮುಖಿಯಾದ ಕೃತಿ............ವಿಚಾರ್ಸಿದರೆ ಇನ್ನೂ ಕೆಲವು ಶ್ರೇಷ್ಠರ, ರಾಜವಂಶದ ಈಗಿನ ವಂಶಸ್ಥರ ವಿಚಾರಗಳನ್ನು ತಿಳಿಯಬಹುದು” . ಎಂದರೆ ಈ ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಸಂಶೋಧನೆಗೆ ಅವಕಾಶಗಳುಂಟು ಎಂದಾಯಿತು. ಮುಂದಿನ ಪೀಳಿಗೆಯವರೂ ಈ ಕಾರ್ಯದಲ್ಲಿ ಕೈಜೋಡಿಸಿದರೆ ಇನ್ನಷ್ಟು ಇತಿಹಾಸದಲ್ಲಿನ ನಿಘೂಢ ಸತ್ಯಗಳು ತೆರೆದುಕೊಳ್ಳುತ್ತವೆನ್ನುವುದರಲ್ಲಿ ಯಾವ ಅನುಮಾನವಿಲ್ಲ. (ಇನ್ನೊಂದು ಮುಖ್ಯ ವಿಚಾರವೆಂದರೆ ಈ ಪುಸ್ತಿಕೆಯಲ್ಲಿ ನೀಡಿರ್ವ ಎಲ್ಲಾ ವಂಶಸ್ಥರು, ಕುರುಹುಗಳ ಕುರಿತಾಗಿ ಪ್ರತ್ಯೇಕ ಛಾಯಾಚಿತ್ರಗಳಿವೆ, ಮತ್ತು ಕೆಲ ವಂಶೀಕರ ದೂರವಾಣಿ ಸಂಖ್ಯೆಗಳನ್ನು ಸಹ ನೀಡಲಾಗಿದೆ. )
    ಒಟ್ಟಾರೆಯಾಗಿ ಕನ್ನಡಲ್ಲಿ ಇದೊಂದು ನೂತನ ಪ್ರಯತ್ನ/ ಈ ಪ್ರಯತ್ನಕ್ಕೆ ಶಿಕಾರವನ್ನು ಹಿರಿಯರಾದ ಚಿದಾನಂದಮೂರ್ತಿಗಳು ಹಾಕಿಕೊಟ್ಟಿದ್ದಾರೆ. ಅವರ ಈ ಪ್ರಯತ್ನಕ್ಕೆ ನಾವೆಲ್ಲರೂ ಈ ಪುಸ್ತಿಕೆಯನ್ನು ಓದುವಮೂಲಕ ಪ್ರೋತ್ಸಾಹಿಸೋಣ. ಹಾಗೆಯೇ ಸಾಧ್ಯವಾದರೆ ಇಂತಹಾ ಇನ್ನಷ್ಟು ವಿಚಾರಗಳನ್ನು ಬೆಳಕಿಗೆ ತರುವಲ್ಲಿ ನೆರವಾಗೋಣ.
    ನಮಸ್ಕಾರ.







Inline image 1
ರಾಘವೇಂದ್ರ ಅಡಿಗ ಎಚ್ಚೆನ್. 

No comments:

Post a Comment