ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Saturday, November 16, 2013





 


ಅದೊಂದು ಸಂಜೆಯ ಸಮಯ ಸುಡುವ ಸೂರ್ಯನೂ
ಕೆಲ ಸಮಯ ನೀರಲ್ಲಿ ಮುಳುಗಲು ಹೊರಟ...
ಆದರೆ ಮನದೊಳಗಿನ ಸುಡುವ ನೆನಪುಗಳು 
ಮಾತ್ರ ಎಂದೂ
ಕಣ್ಣೀರಿನ ಸಾಗರದಲ್ಲಿ ಮುಳುಗದು!

ಕೆಂಪಾದ ಬೆಳಕಿನ ಕಿರಣಗಳಲ್ಲಿ
ತಂಪಾದ  ಉದ್ಯಾನವನ ....
ಮರದ ಮೇಲೆ ಹಕ್ಕಿಗಳ ಸದ್ದು
ಮರದ ಕೆಳಗೆ ಯುವ ಜೋಡಿಗಳ ಗುಸುಗುಸು ...
ಆತ.....
ಹಾಗೆ ಅಲ್ಲಿನ ಕಲ್ಲು ಬೆಂಚಿನ ಮೇಲೆ ಕುಳಿತ
ಆತನನ್ನು  ನೆನಪಿನ ಗಾಡಿ ಹತ್ತುವರುಷಗಳ  
ಹಿಂದಕ್ಕೆ  ಕರೆದೊಯಿತು ....

ಅಂದು ಹೊಸದಾಗಿ ಬಾಡಿಗೆಗೆ ಬಂದ ದಿನ
ಹೆತ್ತವರು ಯಾವುದೋ ಒಂದು ಅಪಘಾತದಲ್ಲಿ ತೀರಿಕೊಂಡ ಮೇಲೆ
ತನ್ನ ಎರಡು ತಂಗಿಯರ ನೋಡಿಕೊಳ್ಳುವ ಜವಾಬ್ದಾರಿ ಆತನ ಮೇಲಿದೆ ..
ಅವರಿಗೆಂದು ಇದ್ದ ಒಂದೇ ಆಸರೆ ಅವರ ದೊಡ್ಡಪ್ಪ ಮಾತ್ರವೇ !
ಮನೆಯಿಂದ ಸ್ವಲ್ಪವೇ ದೂರದಲ್ಲಿ
ಇರುವ ಒಂದು ಮಹಡಿಯ ಮನೆಯಲ್ಲಿ ಆ ಹುಡುಗಿ ಇರುವುದು
ಹೆಸರು ಅನುಪಮ ..ಒಳ್ಳೆಯ ಮನಸಿನ ಸುಂದರ ಹುಡುಗಿ !
ಎದುರು ಮನೆಯಲ್ಲೇ ಆ ಹುಡುಗಿಯ ಗೆಳತಿಯಿರುವುದು
ಆದುದರಿಂದ ಆಗಾಗ ಮನೆಗೆ ಬಂದು ಹೋಗುವಾಗ
ನೋಡಿ ..ಅವರಿಬ್ಬರಿಗೂ
ಪರಿಚಯ ಎನ್ನುವ ಪುಸ್ತಕದೊಳಗಿದ್ದ ಸ್ನೇಹದ ನವಿಲುಗರಿ
ಪ್ರೀತಿಯ ಮರಿ ಹಾಕಿತು  !
ಅವಳು ಮನೆಗೆ ಎರಡನೆಯ ಮಗಳು ಮದುವೆ ವಯಸ್ಸಿನ ಅಕ್ಕ ಇದ್ದಾಳೆ!
ಅದು ಅಲ್ಲದೆ
ಆಕೆ ಮೇಲ್ಜಾತಿಗೆ ಸೇರಿದ ಹುಡುಗಿ
ಆತ ಕೀಲ್ಜಾತಿ ಹುಡುಗ !

ಪ್ರೀತಿಯ ಪ್ರಾರಂಭದ ದಿನಗಳಲ್ಲಿ
ಆಸೆಯ ಆಟವನ್ನೇ ನೋಡುತ್ತಾ ವಾಸ್ತವವನ್ನು ಮರೆಯುವವರೇ ಇಲ್ಲಿ ಹೆಚ್ಚು ಹಾಗೆ
ಆ ಜೋಡಿಗಳು ತಮ್ಮದೇ ಪ್ರೀತಿಯ ಜಗತ್ತಿನಲ್ಲಿ ನೋವೆನ್ನುವ ಸುಳಿವೇ ಇಲ್ಲದೆ ನೆಮ್ಮದಿಯಾಗಿರುತ್ತಾರೆ !
ಪ್ರೀತಿಸುವ ದಿನಗಳು ಬೆಟ್ಟದ ಮೇಲಿನಿಂದ ಉರುಳಿ ಬಿಟ್ಟ
ಗೋಲಿಯ ಹಾಗೆ ವೇಗವಾಗಿ ಉರುಳುತ್ತವೆ !

ಅದು ಬಂದು ನಿಂತಿದ್ದು ಎರಡು ವರುಷದ ನಂತರ ಮದುವೆಯ ವಿಷಯದಲ್ಲಿ
ಅಂದು!
ನಮ್ಮ ಮನೆಯಲ್ಲಿ ನಮ್ಮ ಅಕ್ಕನಿಗೆ ಹುಡುಗ ನೋಡಿದ್ದಾರೆ
ಹುಡುಗನ ತಮ್ಮನಿಗೆ ನನ್ನ ಮದುವೆ ಮಾಡಿಕೊಡಬೇಕು ಅಂತ ಇದ್ದಾರೆ
ಅಣ್ಣ ತಮ್ಮ ಇಬ್ಬರೂ ಒಳ್ಳೆ ವಿದ್ಯಾವಂತರು ಹಾಗೂ ಒಳ್ಳೆಯ ಕೆಲಸದಲ್ಲಿ ಇದ್ದಾರೆ
ನನಗೆ ಮದುವೆ ವಿಷಯ ಮಾತನಾಡುವಾಗೆಲ್ಲ ಮನದೊಳಗೆ ಏನೋ ಆತಂಕ !
ನನ್ನ ಅಕ್ಕನಿಗೆ ಜಾತಕದಲ್ಲಿ ದೋಷವಿದೆ ಹಾಗಾಗಿ ಅವಳಿಗೆ ಗಂಡು ಸಿಕ್ಕಿರಲಿಲ್ಲ
ಈಗ ಸಿಕ್ಕಿರುವ ಹುಡುಗನ ಮನೆಯವರು ನಮಗೆ ಎರಡು ಮಕ್ಕಳು ಇಬ್ಬರಿಗೂ ಒಂದೇ ಮನೆಯಲ್ಲಿ
ಹೆಣ್ಣು ತಂದು ಮದುವೆ ಮಾಡಬೇಕು ಎಂದು ಇದ್ದೀವಿ
ಎನ್ನುವ ಮಾತಿಗೆ ನಮ್ಮ ಹೆತ್ತವರು ಕೂಡ ಸರಿ ಎಂದರು !
ಆಗಸವೇ ಹಾರಾಡಿದರೂ ಗುಬ್ಬಚ್ಚಿ ಗೂಡು ಸೇರಲೇ ಬೇಕು
ಅವನಿಗೂ  ತನ್ನ ಬದುಕಿನ ವಾಸ್ತವದ ಅರಿವಾಗ ತೊಡಗಿತು !

ಈ ಭೂಮಿಯ ಮೇಲಿನ ತುಂಬಾ ಪ್ರೇಮಿಗಳಿಗೆ
ಪ್ರೀತಿಸುವ ಹಕ್ಕು ಇರುತ್ತದೆಯೇ ವಿನಃ  ಅವರನ್ನು ಪಡೆಯುವ ಅಧಿಕಾರ ಇರುವುದಿಲ್ಲ !

ಅವನ ಬದುಕನ್ನು ಒಮ್ಮೆ ತಿರುಗಿ ನೋಡಿದ ಹೆತ್ತವರು ಇಲ್ಲದ ತನ್ನ ಎರಡು ತಂಗಿಯರಿಗೆ
ತಾನೇ ತಂದೆ ತಾಯಿ ..
ಕೇವಲ ತನ್ನ  ಸಂತೋಷಕ್ಕಾಗಿ ಅವರನ್ನು ನಡು ಬೀದಿಯಲ್ಲಿ ಬಿಟ್ಟು ತಾನು ಮಾತ್ರ ಮದುವೆ ಮಾಡಿಕೊಂಡು  ಹೋಗಲಾಗದು ...ಎಲ್ಲವನ್ನೂ ನೆನದು 
ಆ ಜೋಡಿಗಳು ಇಬ್ಬರು 
 ಏನೂ ಮಾತನಾಡದೆ ಹಾಗೆ ತಲೆಯ ಅವರಿದ್ದ ದೇವಸ್ಥಾನದ 
ಸಣ್ಣ ಬಂಡೆ ಕಲ್ಲಿನ ಮೇಲೆ ಒರಗಿಸಿಕೊಂಡು ಆಕಾಶವನ್ನು ನೋಡುತ್ತಾ ಇದ್ದರು !

ಸರಿ ಅನು ..ನೀನು ನಿಮ್ಮ ಮನೆಯಲ್ಲಿ ತೋರಿಸಿರುವ ಹುಡುಗನನ್ನೇ ಮದುವೆಯಾಗು
ಈಗ ಕೇವಲ ನಮ್ಮಿಬ್ಬರ ಬದುಕನ್ನ ಮಾತ್ರ ನೋಡಕ್ಕೆ ಆಗಲ್ಲ
ನಿನ್ನ ಅಕ್ಕ ನನ್ನ ತಂಗಿಯರು ಇದ್ದಾರೆ ಅವರ ಕನಸುಗಳಿಗೆ ಸಮಾಧಿ 
ಕಟ್ಟಿ ನಾವು ನೆಮ್ಮದಿಯಾಗಿ
ಬಾಳಕ್ಕೆ ಆಗಲ್ಲ .....

ಆಗಿದ್ರೆ ನಾವು ದೂರ ಆಗೋದೊಂದೇ ಇದಕ್ಕೆ ಪರಿಹಾರನ ?
ಹೌದು ಅನು ಬೀಳೋ ಎಲ್ಲಾ ಮಳೆ ಹನಿಗಳೂ ಕಡಲ ಸೇರಲ್ಲ ಹಾಗೆ
ಈ ಭೂಮಿ ಮೇಲೆ ಪ್ರೀತಿಸೋರೆಲ್ಲಾ ಪ್ರೀತಿಸುವವರನ್ನೇ ಮದುವೆ ಆಗಲ್ಲ !
ಪ್ರೀತಿ ಅನ್ನೋದು ಕಲ್ಪನೆ ಆದರೆ ಬದುಕು ಅನ್ನೋದು ವಾಸ್ತವ
ಅದನ್ನ ಅರ್ಥ ಮಾಡಿಕೊಳ್ಳಲೇ ಬೇಕು ...

ಅವಳು ಹಾಗೆ ಕಣ್ಣೀರ ಒರಸಿಕೊಂಡು...
ಸರಿ ನಾನ್ ಬರ್ತೀನಿ ಸಾರಿ ಹೋಗ್ತೀನಿ ...
ಎಂದು ತಿರುಗಿ ನೋಡುತ್ತಲೇ ಹೊರಟು ಹೋದಳು ...

ಅವನು ಕೂಡ ಅವಳ ಬೀದಿಯ ಪಕ್ಕದಲ್ಲೇ ಇದ್ದ
ಮನೆಯ ಖಾಲಿ ಮಾಡಿ ದೂರದಲ್ಲಿ ಬೇರೆಯೊಂದು ಮನೆಯ ಮಾಡಿದ
ಅವಳನ್ನು ಮತ್ತೆ ನೋಡಲೇ ಇಲ್ಲ
ಅಲ್ಲೇ ತಂಗಿಗಳಿಗೆ ಮದುವೆ ಮಾಡಿಕೊಟ್ಟು
ಬೆಂಗಳೂರಿಗೆ ಬಂದು ನೆಲಸಿದ ......
ಆ ಉದ್ಯಾನವನದಲ್ಲಿ ....
ಮುಳುಗುವ ನೇಸರನ ನೋಡುವ ಹಲವರ ಬದುಕಿನಲ್ಲಿ
ಅವರೊಳಗೆ ಇರುವ ಎಂದೂ ಮರೆಯಾಗದ ನೆನಪುಗಳು ಉದಯಿಸುತ್ತವೆ
ಅವನಿಗೂ ತನ್ನೆಲ್ಲಾ ನೆನಪುಗಳ ಒಂದು ಕ್ಷಣ ನೆನದು ಕಣ್ಣು ತುಂಬಿ ಬಂದವು
ಹಾಗೆ ಆ ಕಣ್ಣೀರ ರೆಪ್ಪೆಯ ತಡೆಗೋಡೆಯಲ್ಲಿ ಬಂಧಿಸಿ ಕಣ್ಣ ಮುಚ್ಚಿದ !

ಹಿಂದಿನಿಂದ ಅನು ಬಂದು ಕೈಯ ಹಿಡಿದಳು ...
ಆತ ತಿರುಗಿದ
ಅಪ್ಪ ಬಾ ಮನೆಗೆ ಹೋಗೋಣ
ಕತ್ತಲಾಯಿತು ನಾನು ಪಾರ್ಕ್ ನಲ್ಲಿ ಎಲ್ಲಾ ಆಟಗಳನ್ನು ಆಡಿ ಆಯ್ತು ..
ಹಾಗೆ ಹೋಗುವಾಗ ಅಮ್ಮನಿಗೆ ಮಲ್ಲಿಗೆ  ಹೂ ತೆಗೆದುಕೊಂಡು ಹೋಗಬೇಕು ಅಂದಲ್ಲ ಪಕ್ಕದಲ್ಲೇ ಜಿಲೇಬಿ ಅಂಗಡಿಯಲ್ಲಿ ನನಗೆ ಜಿಲೇಬಿ ಬೇಕು .....
ಸರಿ ಅನು ಬಾ ಹೋಗೋಣ .....
ಎಂದು ತನ್ನ ಐದು ವರ್ಷದ ಮಗಳ ಕರೆದುಕೊಂಡು ನಡೆದ..
ಅವನ ಮೊದಲ ಪ್ರೀತಿ ಮಗಳಾಗಿತ್ತು...............!!  

ಸಮಯದ ಸಂತೆಯಲ್ಲಿ ಬಿಟ್ಟು ಬರಲು ಹೊರಟವನನ್ನು
ಪಟ್ಟು ಬಿಡದೆ ಕೈ ಬೆರಳ ಹಿಡಿದು ಬರುತ್ತಿತ್ತು ಎಂದೂ  ಕಳೆದು ಹೋಗದ ನೆನಪುಗಳು !

-ಪ್ರಕಾಶ್  ಶ್ರೀನಿವಾಸ್ 

No comments:

Post a Comment