Showing posts with label ಡಾ.ಜಿ. ಎಸ್. ಶಿವರುದ್ರಪ್ಪ.... Show all posts
Showing posts with label ಡಾ.ಜಿ. ಎಸ್. ಶಿವರುದ್ರಪ್ಪ.... Show all posts

Monday, June 27, 2011

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ ....

ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ ಚಿತ್ರಿಸಿ ಚಿಂತಿಸಿ ಸುರಿಯುತಿದೆ
ಎಲ್ಲಿರುವುದೊ ಅದು , ಎಂತಿರುವುದೊ ಅದು
ನೋಡಬಲ್ಲೆನೆ ಒಂದುದಿನ ಕಡಲನು ಕೂಡಬಲ್ಲೆನೆ ಒಂದುದಿನ . . . .

ಸಾವಿರ ಹೊಳೆಗಳು ತುಂಬಿ ಹರಿದರು ಒಂದೇಸಮನಾಗಿಹುದಂತೆ
ಸುನೀಲ ವಿಸ್ತರ ತರಂಗಶೋಭಿತ ಗಂಭಿರಾಂಬುಧಿ ತಾನಂತೆ
ಮುನ್ನೀರಂತೆ , ಅಪಾರವಂತೆ
ಕಾಣಬಲ್ಲೆನೆ ಒಂದುದಿನ,ಅದರೊಳು ಕರಗಲಾರೆನೆ ಒಂದುದಿನ . . . .

ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು
ಎಂದಿಗಾದರು ಕಾಣದ ಕಡಲನು ಸೇರಬಲ್ಲೆನೇನು
ಸೇರಬಹುದೆ ನಾನು,ಕಡಲ ನೀಲಿಯೊಳು, ಕರಗಬಹುದೆ ನಾನು . . . .

-ಜಿ. ಎಸ್. ಶಿವರುದ್ರಪ್ಪ

Sunday, June 26, 2011

ದೀಪವಿರದ ದಾರಿಯಲ್ಲಿ

ದೀಪವಿರದ ದಾರಿಯಲ್ಲಿ
ತಡವರಿಸುವ ನುಡಿಗಳೆ
ಕಂಬನಿಗಳ ತಲಾತಲದಿ
ನಂದುತಿರುವ ಕಿಡಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

ನೀಲಿಯಲ್ಲಿ ಮೈಯಿಲ್ಲದೆ
ತೇಲಾಡುವ ಹನಿಗಳೆ
ಬಾಯಿಲ್ಲದ ಮೌನದಲ್ಲಿ
ಅಲೆಯುತಿರುವ ದನಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

ಜಲವಿಲ್ಲದ ನೆಲಗಳಲ್ಲಿ
ಕಮರುತಿರುವ ಕುಡಿಗಳೆ
ಬಿರು ಬಿಸಿಲಿನ ತುಳಿತದಲ್ಲಿ
ಸೊರಗಿ ಹೋದ ಮಿಡಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

ಶೃತಿಯಿಲ್ಲದ ವಾದ್ಯದಲ್ಲಿ
ಗತಿಯಿಲ್ಲದ ಸ್ವರಗಳೆ
ಬಿರುಗಾಳಿಗೆ ಗರಿವುದುರಿದ
ಹೊಂಗನಸಿನ ಮರಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

-ಡಾ.ಜಿ. ಎಸ್. ಶಿವರುದ್ರಪ್ಪ...

Thursday, June 23, 2011

ಮಬ್ಬು ಕವಿದರೇನು

ಮಬ್ಬು ಕವಿದರೇನು
ನಿನ್ನ ಹಬ್ಬಿದಿರುಳ ದಾರಿಗೆ
ನಡೆ ಮುಂದಕೆ ಧೈರ್ಯದಿಂದ
ಅರುಣೋದಯ ತೀರಕೆ

ಹಳೆ ನೆನಪುಗಳುದುರಲಿ ಬಿಡು
ಬೀಸುವ ಚಳಿ ಗಾಳಿಗೆ
ತರಗೆಲೆಗಳ ಚಿತೆಯುರಿಯಲಿ
ಚೈತ್ರೋದಯ ಜ್ವಾಲೆಗೆ

ಹೊಸ ಭರವಸೆ ಚಿಗುರುತಲಿವೆ
ಎಲೆ ಉದುರಿದ ಕೊಂಬೆಗೆ
ಅರಳಿ ನಗುವ ಹೂಗಳಲ್ಲಿ
ಪುಟಿಯುತಲಿವೆ ನಂಬಿಕೆ

ಹಗಲಿರುಳಿನ ಕುದುರೆಗಳನು
ಹೂಡಿದ ರಥ ಸಾಗಿದೆ
ಯುಗ ಯುಗಗಳ ಹಾದಿಯಲ್ಲಿ
ಋತು ಚಕ್ರಗಳುರುಳಿವೆ

Wednesday, June 8, 2011

ಎದೆ ತುಂಬಿ ಹಾಡಿದೆನು

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು
ಇಂದು ನಾ ಹಾಡಿದರೂ ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ
ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ನಾ ಬಲ್ಲೆ ಅದರಿಂದ
ಹಾಡುವೆನು ಮೈ ದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ಎನಗಿಲ್ಲ ಚಿಂತೆ
-- ಜಿ.ಎಸ್.ಶಿವರುದ್ರಪ್ಪ

ಅಭೀರ' ಕಾದಂಬರಿ - ಅರ್ಜುನ್ ದೇವಾಲದಕೆರೆ

 ವಿದ್ಯೆ ಕಲಿಸುವವನು ಗುರುವಲ್ಲ, ಅವನು ಶಿಕ್ಷಕ. ವಿದ್ಯೆ ಕಲಿಸಿದ ಮೇಲೂ, ಬದುಕಿನ ಏಳು-ಬೀಳುಗಳಲ್ಲಿ ಕೊನೆವರೆಗೂ ಕೈ ಹಿಡಿದು ನಡೆಸುತ್ತಾನಲ್ಲ, ಅವನು ಗುರು. ತಾಂತ್ರಿಕ ಲೋ...