Showing posts with label ಶಿಶುನಾಳ ಶರೀಫರ ತತ್ವ ಪದಗಳು. Show all posts
Showing posts with label ಶಿಶುನಾಳ ಶರೀಫರ ತತ್ವ ಪದಗಳು. Show all posts

Tuesday, August 9, 2011

ಕುಂಬಾರಕಿ ಈಕಿ ಕುಂಬಾರಕಿ

ಕುಂಬಾರಕಿ ಈಕಿ ಕುಂಬಾರಕಿ ಈ
ಬ್ರಂಹಾಂಡವೆಲ್ಲ ತುಂಬಿಕೊಂಡಿರುವ

ಚಿನ್ನ ಎಂಬುವ ಮಣ್ಣನು ತರಿಸಿ
ತನು ಎಂಬುವ ನೀರನು ಹಣಿಸಿ
ಮನ ಎಂಬುವ ಹುದಲನು ಕಲಸಿ
ಗುಣ ಎಂಬುವ ಸೂಸನು ಹಾಕಿ

ಭಕ್ತಿ ಎಂಬುವ ತಿಗರಿಯ ಮಾಡಿ
ಧ್ಯಾನ ಎಂಬುವ ಬಡಗಿಯ ಊರಿ
ಮುನ್ನೂರರವತ್ತ ಸುತ್ತನು ತಿರಗಿ
ಗಡಗಿ ತಯಾರು ಮಾಡೂವಾಕಿ

ಆಚಾರ ಎಂಬುವ ಆವಿಗೆ ಮುಚ್ಚಿ
ಅರಿವು ಎಂಬುವ ಬೆಂಕಿಯ ಹಚ್ಚಿ
ಸಾವಿರ ಕೊಡಗಳ ಸುಟ್ಟು ಇಂದು
ಸಂತಿಗಿ ಓಯ್ದು ಮಾರುವಾಕಿ

ಮೂರು ಕಾಸಿಗೊಂದು ಕುಡಕಿಯ ಮಾರಿ
ಆರು ಕಾಸಿಗೊಂದು ಗಡಗಿಯ ಮಾರಿ
ವಸುಧೆಯೊಳು ಶಿಶುನಾಳಧೀಶನ ಮುಂದೆ
ಧ್ಯಾನದ ಮುಗಿಯೊಂದು ಇಡುವಾಕಿ

-ಶಿಶುನಾಳ ಶರೀಫ್

(ಕಾರಂಜಿ ಸಿನಿಮಾದಲ್ಲಿ ಈ ಹಾಡು ತುಂಬ ಸೊಗಸಾಗಿ ಮೂಡಿಬಂದಿದೆ.)

Monday, May 30, 2011

ಗಿರಣಿ ವಿಸ್ತಾರ ನೋಡಮ್ಮ

ಗಿರಣಿ ವಿಸ್ತಾರ ನೋಡಮ್ಮ
ಶರಣಿ ಕೂಡಮ್ಮ ||ಪಲ್ಲ||

ಧರಣಿಪತಿಯು ರಾಣಿ
ಕರುಣಾಕ ರಾಜ್ಯಕೆ
ತರಿಸಿದ ಘನಚೋದ್ಯವೋ ಚೀನಾದ ವಿದ್ಯವೋ ||ಅ.ಪ.||

ಜಲ ಅಗ್ನಿ ವಾಯು ಒಂದಾಗಿ
ಕಲೆತು ಚಂದಾಗಿ
ಜಲ ಅಗ್ನಿ ವಾಯು ಒಂದಾಗಿ
ನೆಲದಿಂದ ಗಗನಕ್ಕೆ ಮುಟ್ಟಿದಂತೆಸುವುದು
ಚಲುವ ಚನ್ನಿಗವಾದ ಕಂಭವೋ, ಹೊಗಿಯ ಬಿಂಬವೋ ||೧||

ಒಳಗೊಂದು ಬೇರೆ ಆಕಾರ
ತಿಳಕೋ ಚಮತ್ಕಾರ
ಒಳಗೊಂದು ಬೇರೆ ಆಕಾರ
ದಳಗಳೊಂಭತ್ತು ಚಕ್ರ ಸುಳಿವ ಸೂತ್ರಾಧಾರ
ಲಾಳಿ ಮೂರು ಕೊಳಿವಿಯೊಳು ಎಳೆ ತುಂಬುತದರೊಳು ||೨||

ಅಲ್ಲಿ ಬರದಿಟ್ಟರಳಿ ಹಿಂಜಿ
ಅಲ್ಯಾದವು ಹಂಜಿ
ಅಲ್ಲಿ ಬರದಿಟ್ಟರಳಿ ಹಿಂಜಿ
ಗಾಲಿಯೆರಡರ ಮೇಲೆ ಮೂಲಬ್ರಹ್ಮದ ಶೀಲ
ನಾಡಿ ಸುಷುಮ್ನನು ಕೂಡಿ ಅಲ್ಲಾಯ್ತೋ ಕುಕ್ಕಡಿ ||೩||

ಪರಮಾನೆಂಬುವ ಪಟ್ಟೇವೋ ಅಲ್ಲೆ
ಮಾರಾಟಕಿಟ್ಟೇವೋ
ಪರಮಾನೆಂಬುವ ಪಟ್ಟೇವೋ
ಧರೆಯೊಳು ಶಿಶುನಾಳ ದೇವಾಂಗ ಋಷಿಯಿಂದ
ನೇಸಿ ಹಚ್ಚಡ ಹೊಚ್ಚಿತೋ ಲೋಕ ಮೆಚ್ಚಿತೋ ||೪||

Sunday, May 29, 2011

ಮನಸೇ ಮನಸಿನ ಮನಸ ನಿಲ್ಲಿಸುವುದು

ಮನಸೇ ಮನಸಿನ ಮನಸ ನಿಲ್ಲಿಸುವುದು
ಮನಸಿನ ಮನ ತಿಳೀಯುವ ಮನ ಬ್ಯಾರೆಲೊ ಮನಸೇ.
ತನುತ್ರಯದೊಳು ಸುಳಿದಾಡುವ ಜೀವದ
ಗುಣವರಿತರೆ ನಿಜ ಬ್ಯಾರೆಲೊ ಮನಸೇ.

ದಶದಿಕ್ಕಿಗೆ ಹಾರಾಡುವ ಹಕ್ಕಿಯು
ವಶವಾಗಲಾಪರಿ ಬ್ಯಾರೆಲೊ ಮನಸೇ.
ಗೋವಿಂದ ಗುರುವಿನ ಚರಣ ಕಮಲದವಳು
ಗಾನಗೈಯೆಲೊ ಭ್ರಮರಾಳೀಯ ಮನಸೇ.

ವಿಷಯಗಳಲಿ ಸುಖಬಯಕೆ ಬಯಸಿ ಬಲು
ಕಸಿವಿಸಿಗೊಂಬುವುದೇತಕೊ ಮನಸೇ.
ಇಳೆಯೊಳು ಶಿಶುನಾಳಾಧೀಶ ನಿರ್ಮಲನ
ತಿಳಿದರೆ ಒಳಹೊರಗೊಂದೆಲೊ ಮನಸೇ.

Saturday, May 28, 2011

ಎಲ್ಲರಂಥವನಲ್ಲ ನನ ಗಂಡ

ಎಲ್ಲರಂಥವನಲ್ಲ ನನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ ಗಂಡ ||ಪಲ್ಲ||

ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲಿಗೋಗದ್ಹಾಂಗ ಮಾಡಿಟ್ಟಾ
ಕಾಲ್ಮುರಿದು ಬಿಟ್ಟಾ ||ಅ.ಪ.||

ಮಾತಾಪಿತರ ಮನೆಯೊಳಿರುತಿರಲು
ಮನಸೋತು ಮೂವರು
ಪ್ರೀತಿಗೆಳೆತನ ಮಾತಿನೊಳತಿರಲು
ಮೈನೆರೆತು ಮಾಯದಿ
ಘಾತವಾಯಿತು ಯವ್ವನವು ಬರಲು
ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲಿ ಕೂಡಿ ||೧||

ಅಕ್ಕತಂಗಿಯರಾರು ಮಂದಿಗಳಾ
ಅಗಲಿಸಿದನೈವರ
ಕಕ್ಕುಲಾತಿಯ ಅಣ್ಣತಮ್ಮಗಳಾ
ನೆದರೆತ್ತಿ ಮ್ಯಾಲಕ
ನೋಡಗೊಡದೇ ಹತ್ತು ದಿಕ್ಕುಗಳಾ
ಮಾಡಿದನೆ ಮರುಳಾ
ತೆಕ್ಕೆಯೊಳು ಬಿಗಿದಪ್ಪಿ ಸುರತಾ-
ನಂದಸುಖ ತಾಂಬೂಲ ರಸಗುಟ-
ಗಿಕ್ಕಿ ಅಕ್ಕರತಿಯಲಿ ನಗುವನು ತಾ
ಬಹು ಸುಗುಣನೀತಾ ||೨||

ತುಂಟನಿವ ಸೊಂಟಮುರಿ ಹೊಡೆದಾ
ಒಣ ಪಂಟುಮಾತಿನ
ಗಂಟಗಳ್ಳರ ಮನೆಗೆ ಬರಗೊಡದಾ
ಹದಿನೆಂಟು ಮಂದಿ
ಕುಂಟಲಿಯರ ಹಾದಿಯನು ಕಡಿದಾ
ಎನ್ನ ಕರವ ಪಿಡಿದಾ
ಕುಂಟಕುರುಡಾರೆಂಟು ಮಂದಿ
ಗಂಟು ಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ
ತಕ್ಕವನೆ ಸಿಕ್ಕಾ ||೩||

ಅತ್ತೆಮಾವರ ಮನೆಯ ಬಿಡಿಸಿದನೇ
ಮತ್ತೆಲ್ಲಿ ಮೂವರ
ಮಕ್ಕಳೈವರು ಮಮತೆಯ ಕೆಡಿಸಿದನೇ
ಎನ್ನನು ತಂದು
ರತ್ನಜ್ಯೋತಿಯ ಪ್ರಭೆಯೊಳಿರಿಸಿದನೇ
ಎನಗೊತ್ತಿನವನು
ಎತ್ತ ಹೋಗದೆ ಚಿತ್ತವಗಲದೆ
ಗೊತ್ತಿನಲಿ ಇಟ್ಟು ಎನ್ನನು
ಮುತ್ತಿನಾ ಮೂಗುತಿಯ ಕೊಟ್ಟಾನೇ
ಅವನೇನು ದಿಟ್ಟನೇ ||೪||

ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂಥ ಪುರುಷನು
ಬಂದು ದೊರಕಿದ ಪುಣ್ಯಫಲದಿಂದಾ
ಎನ್ನಂತರಂಗದ
ಕಾಂತ ಶ್ರೀ ಗುರುನಾಥ ಗೋವಿಂದಾ
ಶಿಶುನಾಳದಿಂದ
ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಗೆ ಒಯ್ದು
ಭ್ರಾಂತಿ ಭವ ದುರಿತವನು ಪರಿಹರಿಸಿ
ಚಿಂತೆಯನು ಮರಸಿ ||೫||

Friday, May 27, 2011

ದುಡ್ಡು ಕೆಟ್ಟದ್ದು ನೋಡಣ್ಣ - ದುಗ್ಗಾಣಿಗೆ

ದುಡ್ಡು ಕೆಟ್ಟದ್ದು ನೋಡಣ್ಣ - ದುಗ್ಗಾಣಿಗೆ
ದಡ್ಡನಾಗಬೇಡೋ, ತಿಂದೀ ನೀ ಮಣ್ಣ !
ದುಡ್ಡು ಕೆಟ್ಟದ್ದೊ ಹೆಡ್ಡ ಮೂಢಾತ್ಮ
ದೊಡ್ಡ ದೊಡ್ಡವರನ್ನೆ ಹೆಗ್ಗಾಲು ಇಡಿಸಿತು.

ದುಡ್ಡು ಕೆಟ್ಟದ್ದು ನೋಡಣ್ಣ
ಹೆಣ್ಣಿನ ಪೂಜೆಗೆ ಇಳಿಸಿ - ಮಣ್ಣಿನ
ಸಂತೇಲಿ ಇಲ್ಲದ ಮರ್ಯಾದೆ ಕೊಡಿಸಿ
ಮಿಣ್ಣನೆ ತಿಂದೀತು ಒಳಗ - ಮೆಲ್ಲನೆ

ಥಣ್ಣಗ ಮಾಡೀತು ಬೆಂಕಿಯ ಕಿಡಿ.
ರೊಕ್ಕ ಮುಕ್ಕಿಸೀತು ಮಣ್ಣು - ಅದ
ತಕ್ಕಂತೆ ಬಳಸಲು ತೆರೆಸೀತು ಕಣ್ಣು
ಮುಕ್ಕುವ ಚಪಲ ಏಕಿನ್ನು - ಮುಕ್ಕಿ

ಬಿಕ್ಕಳಿಸಲು ಕುಡಿಸೀತು ನೀರನ್ನು.
ಆಸೆ ಬಿದ್ದು ಮನದ ಮಾರಿ
ಹೊಂಟ್ಯಳೊ ಹುಡುಕುತ್ತ ನೂರೆಂಟು ಕೇರಿ
ಕಾಸು ಕಾಸನ್ನೂ ಹೆಕ್ಕಿ - ಮೂಳಿ
ಶಿಶುನಾಳಾಧಿಶನ ಮರೆತಾಳು ಸೊಕ್ಕಿ.

Thursday, May 26, 2011

ಬಿಡತೇನಿ ದೇಹ ಬಿಡತೇನಿ

ಬಿಡತೇನಿ ದೇಹ ಬಿಡತೇನಿ ||ಪಲ್ಲ||

ಬಿಡತೇನಿ ದೇಹವ ಕೊಡತೇನಿ ಭೂಮಿಗೆ
ಇಡತೇನಿ ಮಹಿಮಾದ ನಡತೆ ಹಿಡಿದು ದೇಹಾ ||೧||

ಪಾವಕಾಗುಹುತಿ ಮಾಡಿ ಜೀವನದಸು
ನಾ ಬೇರೆ ಬೈಲು ಬ್ರಹ್ಮದೊಳಾಡುತಲಿ ದೇಹಾ ||೨||

ಅವನಿಯೊಳು ಶಿಶುನಾಳಧೀಶನೆ ಗತಿಯೆಂದು
ಜವನಬಾಧೆಗೆದ್ದು ಶಿವಲೋಕದೊಳು ದೇಹಾ ಬಿಡತೇನಿ ||೩||

Wednesday, May 25, 2011

ಕೋಡಗನ್ನ ಕೋಳಿ ನುಂಗಿತ

ಕೋಡಗನ್ನ ಕೋಳಿ ನುಂಗಿತ
ನೋಡವ್ವ ತಂಗಿ ||ಪಲ್ಲ||

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ಲಿ ನುಂಗಿತ ||೧||

ಒಳ್ಳು ಒನಕಿಯ ನುಂಗಿ
ಬೀಸುಕಲ್ಲು ಗೂಟವ ನುಂಗಿ
ಕುಟ್ಟಲಿಕೆ ಬಂದ ಮುದುಕಿಯ ನೊಣವು ನುಂಗಿತ ||೨||

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನ ಕುಣಿಯು ನುಂಗಿತ ||೩||

ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕಟ ತಿರುವೊ ಅಣ್ಣನ ಮೇಳಿ ನುಂಗಿತ ||೪||

ಗುಡ್ಡ ಗಂವ್ಹರ ನುಂಗಿ
ಗಂವ್ಹರ ಇರಿವೆ ನುಂಗಿ
ಗುರುಗೋವಿಂದನ ಪಾದ ಆತ್ಮ ನುಂಗಿತ ||೫||

Tuesday, May 24, 2011

ಹುಟ್ಟಿದ ಹೊಲಿಮನಿ

ಹುಟ್ಟಿದ ಹೊಲಿಮನಿ
ಬಿಟ್ಟರೆ ಖಾಲಿಮನಿ
ಎಷ್ಟಿದ್ದರೇನಿದು ಗಳಿಗಿ ಮನಿ.


ವಸ್ತಿ ಇರುವ ಮನಿ
ಗಸ್ತಿ ತಿರುಗೋ ಮನಿ
ಶಿಸ್ತಿಲೆ ಕಾಣುವ ಶಿವನ ಮನಿ.

ಚಿಂತೆ ಕಾಂತೆಯ ಮನಿ
ಸಂತಿ ಸವತಿಯ ಮನಿ
ಅಂತು ಬಲ್ಲವರಿಗೆ ಆಡೂ ಮನಿ.


ಒಂಬತ್ತು ದ್ವಾರ ದಾಟಿ
ಗಂಟಿಕ್ಕಿ ಹೋಗುವಾಗ
ಗಂಟೆ ಬಾರಿಸಿದಂತೆ ಗಾಳಿಮನಿ.


ವಸುಧೆಯೊಳಗೆ ನಮ್ಮ
ಶಿಶುನಾಳಧೀಶನ
ಹಸನಾದ ಪದಗಳ ಹಾಡೂ ಮನಿ.

Monday, May 23, 2011

ಎಂಥಿಂಥಾದೆಲ್ಲಾನು ಬರಲಿ

ಎಂಥಿಂಥಾದೆಲ್ಲಾನು ಬರಲಿ
ಚಿಂತೆಯಂಬೋದು ನಿಜವಾಗಿರಲಿ ||ಪಲ್ಲ||
ಪರಾತ್ಪರನಾದ ಗುರುವಿನ
ಅಂತಃಕರಣ ಒಂದು ಬಿಡದಿರಲಿ ||ಅನುಪಲ್ಲ||

ಬಡತನೆಂಬುದು ಕಡೆತನಕಿರಲಿ
ವಡವಿ ವಸ್ತ ಹಾಳಾಗಿ ಹೋಗಲಿ
ನಡುವಂಥ ದಾರಿಯು ತಪ್ಪಿ
ಅಡವಿ ಸೇರಿದಂತಾಗಿ ಹೋಗಲಿ ||೧||

ಗಂಡಸ್ತಾನ ಇಲ್ಲದಂತಾಗಲಿ
ಹೆಂಡರು ಮಕ್ಕಳು ಬಿಟಗೊಟ್ಟು ಹೋಗಲಿ
ಕುಂಡಿ ಕುಂಡಿ ಸಾಲ್ದವರೊದೆಯಲಿ
ಬಂಡು ಮಾಡಿ ಜನರು ನಗಲಿ ||೨||

ನಂಬಿಗೆ ಎಳ್ಳಷ್ಟಿಲ್ಲದಂತಾಗಲಿ
ಅಂಬಲಿ ಎನಗೆ ಸಿಗದೆ ಹೋಗಲಿ
ಹುಂಬಸುಳೇಮಗನೆಂದು ಬೈಯಲಿ
ಕಂಬಾ ಮುರಕೊಂಡು ಎನ್ನ ಮ್ಯಾಲೆ ಬೀಳಲಿ ||೩||

ವ್ಯಾಪಾರುದ್ಯೋಗ ಇಲ್ಲದಾಂಗಾಗಲಿ
ಬುದ್ಧಿಯೆಂಬುದು ಮಸಣಿಸಿ ಹೋಗಲಿ
ಮದ್ದು ಹಾಕಿ ಎನ್ನನು ಕೊಲ್ಲಲಿ
ಹದ್ದು ಕಾಗಿ ಹರಕೊಂಡು ತಿನ್ನಲಿ ||೪||

ಭಾಷೆ ಪಂಥ ನಡಿದ್ಹಾಂಗಾಗಲಿ
ಹಾಸ್ಯ ಮಾಡಿ ಜನರೆಲ್ಲರು ನಗಲಿ
ಈ ಶಿಶುನಾಳಧೀಶ ಸದ್ಗುರುವಿನ
ಲೇಸಾದ ದಯವೊಂದು ಕಡೆತನಕಿರಲಿ ||೫||


Sunday, May 22, 2011

ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ

ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ ||ಪಲ್ಲ||

ಕರ ಪಿಡಿದು ಎನ್ನ ಕರಣದೊಳಗೆ ಮೊದಲು
ವರಮಂತ್ರ ಬೋಧಿಸಿ ಕರವಿಟ್ಟು ಶಿರದೊಳು ||೧||

ಮಸ್ತಕ ಪಿಡಿದೆತ್ತಿ ಹಸ್ತದಿ ತರ್ಕೈಸಿ
ದುಸ್ತರ ಭವಬಾಧೆ ಕಸ್ತು ಬಿಸಾಕಿದಿ ||೨||

ಗುರುವರ ಗೋವಿಂದ ಪರಮಗಾರುಡಿಗ ನೀ—
ನಿರುತಿಹೆ ತಿಳಿಯದು ನರರಿಗೆ ಪರಿಯಿದು ||೩||

Saturday, May 21, 2011

ಒಳ್ಳೇ ನಾರಿ ಕಂಡೆ

.ಒಳ್ಳೇ ನಾರಿ ಕಂಡೆ
ಒಳ್ಳೇ ನಾರಿ ಕಂಡೆ - ಈಗಲೆ
ಒಳ್ಳೇ ನಾರಿ ಕಂಡೆ,
ಇಳೆಯ ತಳದಿ ತಪದೊಳು ನಿಂತು
ಕಳೆಯ ಋಷಿಗಳ ಮರಳು ಮಾಡುವ



ಕೈಯು ಕಾಲು - ಉಸುರು
ಮೈಯಿ ಮೊದಲೆ ಇಲ್ಲ;
ಚೆಲ್ಲುತ ಪರಮಾನಂದ ಎದಿಯೊಳು
ಎಲ್ಲವ ಬಿಡಿಸಿ ಕರುಣದಿ ಕಾಯುವ

ಮುಟ್ಟಲು ಕೊಲ್ಲುವಳೋ - ಕಾಮನ
ಕಟ್ಟಿ ಆಳುತಿಹಳೊ ;
ಬಟ್ಟಕುಂಚಕ, ಬರೆದಿಟ್ಟ ಕುಪ್ಪಸಕ
ನಟ್ಟು ಮನಸು ನಡೆಗೆಟ್ಟು ನಿಂತಿತೋ.

ಮೀಸಲು ನಗೆಯುವಳು - ಶಿಶುನಾಳಾ
ಧೀಶಗೆ ಸೋತವಳು ;
ವಾಸಿಸಿ ಗುಡಿಪುರದಿ - ಗೋವಿಂದನ
ದಾಸರನ್ನು ತಾ ಸೆಳೆಯುತಲಿಹಳು.

Friday, May 20, 2011

ಮೋಹದ ಹೆಂಡತಿ ಸತ್ತ ಬಳಿಕ

ಮೋಹದ ಹೆಂಡತಿ ಸತ್ತ ಬಳಿಕ
ಮಾವನ ಮನೆಯ ಹಂಗಿನ್ನ್ಯಾಕೋ ||ಪಲ್ಲ||
ಸಾವು ನೋವಿಗೆ ತರುವ ಬೀಗನ
ಮಾತಿನ ಹಂಗೊಂದೆನಗ್ಯಾಕೋ ||ಅನುಪಲ್ಲ||

ಖಂಡವನದಿ ಸೋಂಕಿ ತನ್ನ ಮೈಯೊಳು ತಾಕಿ
ಬಂಡೆದ್ದು ಹೋಗುವದು ಭಯವ್ಯಾಕೋ
ಮಂಡಲನಾಡಿಗೆ ಪಿಂಡದ ಗೂಡಿಗೆ
ಚಂಡಿತನದಿ ಚರಿಸ್ಯಾಡುವದ್ಯಾಕೋ ||೧||

ತಂದೆ ಗುರುಗೋವಿಂದನ ಸೇವಕ
ಕುಂದಗೋಳಕೆ ಬಂದು ನಿಂತಾನ್ಯಾಕೋ
ಬಂಧುರ ಶಿಶುನಾಳಧೀಶನ ದಯದಿಂದ
ಇಂದಿಗೆ ವಿಷಯದ ವ್ಯಸನಗಳ್ಯಾಕೋ ||೨||

Thursday, May 19, 2011

ನನ್ನ ಹೇಣ್ತೆ ನನ್ನ ಹೇಣ್ತೆ

ನನ್ನ ಹೇಣ್ತೆ ನನ್ನ ಹೇಣ್ತೆ
ನಿನ್ನ ಹೆಸರೇನ್ಹೇಳಲಿ ಗುಣವಂತೆ ||ಪಲ್ಲ||

ಘನಪ್ರೀತಿಲೆ ಈ ತನುತ್ರಯದೊಳು
ದಿನ ಅನುಗೂಡೂನು ಬಾ ಗುಣವಂತೆ ||ಅನುಪಲ್ಲ||

ಮೊದಲಿಗೆ ತಾಯ್ಯಾದಿ ನನ್ನ ಹೇಣ್ತೆ ಮತ್ತೆ
ಸದನಕ ಸೊಸಿಯಾದಿ ನನ್ನ ಹೇಣ್ತೆ ಮತ್ತೆ
ಮುದದಿಂದ ಮೋಹಿಸಿ ಮದುವ್ಯಾದವನಿಗೆ
ಮಗಳೆಂದೆನಿಸಿದೆ ನನ್ನ ಹೇಣ್ತೆ ||೧||

ಅತ್ತಿಗಿ ನಾದುನಿ ನನ್ನ ಹೇಣ್ತೆ
ನಮ್ಮತ್ಯಾಗಿ ನಡಿದೀಯೇ ನನ್ನ ಹೇಣ್ತೆ
ತುತ್ತು ನೀಡಿ ಎನ್ನೆತ್ತಿ ಆಡಿಸಿದಿ
ಹೆತ್ತವ್ವನೆನಸಿದೆ ನನ್ನ ಹೇಣ್ತೆ
ಚಿಕ್ಕಮ್ಮನ ಸರಿ ನೀ ನನ್ನ ಹೇಣ್ತೆ ಎನಗ
ತಕ್ಕವಳೆನಿಸಿದೆ ನನ್ನ ಹೇಣ್ತೆ ||೨||

ಅಕ್ಕರದಲ್ಲಿ ಅನಂತಕಾಲಾ ನಮ್ಮ
ಅಕ್ಕಾಗಿ ನಡೆದೆಲ್ಲ ನೀ ನನ್ನ ಹೇಣ್ತೆ
ಬಾಳೊಂದು ಚಲ್ವಿಕೆ ನನ್ನ ಹೇಣ್ತೆ
ಆಳಾಪಕೆಳಸಿದೆ ನನ್ನ ಹೇಣ್ತೆ
ಜಾಳಮಾತಲ್ಲವು ಜಗದೊಳು ಮೋಹಿಸಿ
ಸೂಳೆ ಎಂದೆನಿಸಿದೆ ನನ್ನ ಹೇಣ್ತೆ ||೩||

ಮಂಗಳರೂಪಳೆ ನನ್ನ ಹೇಣ್ತೆ
ಅರ್ಧಾಂಗಿಯೆನಿಸಿದೆ ನನ್ನ ಹೇಣ್ತೆ
ಶೃಂಗಾರದಿ ಸವಿ ಸಕ್ಕರೆ ಉಣಿಸುವ
ತಂಗೆಂದೆನಬೇಕ ನನ್ನ ಹೇಣ್ತೆ
ಕುಶಲದಿ ಕೂಡಿದ ನನ್ನ ಹೇಣ್ತೆ
ವಸುಧಿಯೊಳು ಶಿಶುನಾಳಧೀಶನಡಿಗೆ ಹೆಣ್ಣು
ಶಿಶುವಾಗಿ ತೋರಿದಿ ನನ್ನ ಹೇಣ್ತೆ
ನಿನ್ನ ಹೆಸರೇನು ಹೇಳಲಿ ಗುಣವಂತೆ ||೪||

Wednesday, May 18, 2011

ಗುಡಿಯ ನೋಡಿರಣ್ಣಾ ದೇಹದ

ಗುಡಿಯ ನೋಡಿರಣ್ಣಾ ದೇಹದ
ಗುಡಿಯ ನೋಡಿರಣ್ಣಾ ||ಪಲ್ಲ||

ಗುಡಿಯ ನೋಡಿರಿದು
ಪೊಡವಿಗೆ ಒಡೆಯನು
ಆಡಗಿಕೊಂಡು ಕಡುಬೆಡಗಿನೊಳಿರುತಿಹ
ಗುಡಿಯ ನೋಡಿರಣ್ಣಾ ||ಅನುಪಲ್ಲ||

ಮೂರು ಮೂಲೆಯ ಕಲ್ಲು ಅದರೊಳು
ಜಾರುತಿರುವ ಕಲ್ಲು
ಧೀರ ನಿರ್ಗುಣನು ಸಾರ ಸಗುಣದಲಿ
ತೋರಿ ಅಡಗಿ ತಾ ಬ್ಯಾರ್ಯಾಗಿರುತಿಹ
ಗುಡಿಯ ನೋಡಿರಣ್ಣಾ ||೧||

ಆರು ಮೂರು ಕಟ್ಟಿ ಮೇಲಕೆ
ಏರಿದನು ಘಟ್ಟಿ
ಭೇರಿ ಕಾಳಿ ಶಂಖ
ಭಾರಿ ಸುನಾದದಿ
ಮೀರಿದಾನಂದ ತೋರಿ ಹೊಳೆಯುತಿಹ
ಗುಡಿಯ ನೋಡಿರಣ್ಣಾ ||೨||

ಸಾಗುತಿಹವು ದಿವಸ ಬಹುದಿನ
ಹೋಗಿ ಮಾಡಿ ಪಾಯ್ಸ
ಯೋಗಿ ರಾಜ ಶಿಶುನಾಳಧೀಶ ತಾ—
ನಾಗಿ ಪರಾತ್ಪರ ಬ್ರಹ್ಮರೂಪನಿಹ
ಗುಡಿಯ ನೋಡಿರಣ್ಣಾ ||೩||

Tuesday, May 17, 2011

ಸ್ನೇಹ ಮಾಡಬೇಕಿಂತವಳ!

ಸ್ನೇಹ ಮಾಡಬೇಕಿಂತವಳ!
ಸ್ನೇಹ ಮಾಡಬೇಕಿಂಥವಳ! - ಒಳ್ಳೇ

ಮೋಹದಿಂದಲಿ ಬಂದು - ಕೂಡುವಂಥವಳ
ಚಂದ್ರಗಾವಿ ಶೀರೀನುಟ್ಟು - ದಿವ್ಯ
ಕೆಂದಾವರಿ ಮಗ್ಗಿ ಕುಪ್ಪಸ ತೊಟ್ಟು
ಬಂದಳು ಮಂದಿರ ಬಿಟ್ಟು - ನಾಲ್ಕು

ಮಂದಿಯೊಳು ಬಂದು ನಾಚುವಳೆಷ್ಟು!
ಅರಗಿಳಿ ಸಮ ಇವಳ ನುಡಿಯು - ಚೆಲ್ವ
ಸುಳಿನಾಭಿ ಕುಚಕುಂಭಗಳ ಹಂಸನಡೆಯು
ಥಳಥಳಿಸುವ ತೋಳ್ತೊಡೆಯು - ಒಳ್ಳೇ

ಬಳುಬಳುಕುವ ನಡುವು ತಳಿರಡಿಯು.
ಮುಕ್ತ ಕಾಮಿನಿ ಎನ್ನ ಕಾಡಿ - ಮೋಹ
ಮತ್ತ ಸುರತಸುಖ ಸುಡುವಂತೆ ಕೂಡಿ
ಹುಟ್ಟನ್ನೇ ಕಳೆದಳೊ ಖೋಡಿ - ದೇವ
ಶಿಶುನಾಳಾಧೀಶನ ಪಾದಕೆ ದೂಡಿ!

Saturday, May 14, 2011

ಅಗ್ಗದ ಅರಿವಿ ತಂದು

ಅಗ್ಗದ ಅರಿವಿ ತಂದು
ಹಿಗ್ಗಿ ಹೊಲಿಸಿದೆ ಅಂಗಿ
ಹೆಗ್ಗಣ ಒಯ್ತವ್ವ ತಂಗಿ ಈ ಅಂಗಿ.

ಅಗಣಿತ ವಿಷಯದ
ಆರುಗೇಣೀನ ಕವಚ
ಬಗಲಿನ ಬೆವರನು ಕುಡಿದು
ಸಿಗದೆ ಹೋಯಿತವ್ವ ತಂಗಿ ಈ ಅಂಗಿ.

ಬುದ್ದಿಗೇಡಿಗಳಾಗಿ
ನಿದ್ದಿ ಕೆಡಿಸಿಕೊಂಡು
ಎದ್ದು ನೋಡಲು ಕರ್ಮದ
ಗುದ್ದಿನೊಳಡಗಿತ್ತವ್ವ ತಂಗಿ ಈ ಅಂಗಿ.

ಕಳೆದೆನೀಪರಿ ರಾತ್ರಿ
ಬೆಳಗಾಗೋ ಸಮಯದಿ
ಚೆಲುವ ಶಿಶುನಾಳಾಧೀಶನು
ಉಳುವಿ ಕೊಟ್ಯಾನವ್ವ ತಂಗಿ ಈ ಅಂಗಿ.

Friday, May 13, 2011

ಬಿದ್ದಿಯಬ್ಬೇ ಮುದುಕಿ

ಬಿದ್ದಿಯಬ್ಬೇ ಮುದುಕಿ
ಬಿದ್ದೀಯಬ್ಬೇ.

ನೀ ದಿನ ಹೋದಾಕಿ
ಇರು ಭಾಳ ಜೋಕಿ
ಬಿದ್ದೀಯಬೇ ಮುದುಕಿ ಬಿದ್ದೀಯಬೇ.

ಸದ್ಯಕಿದು ಹುಲುಗೂರ ಸಂತಿ
ಗದ್ದಲದೊಳಗ್ಯಾಕ ನಿಂತಿ?
ಬಿದ್ದು ಇಲ್ಲಿ ಒದ್ದಾಡಿದರ
ಎದ್ದು ಹ್ಯಾಂಗ ಹಿಂದಕ ಬರತಿ?

ಬುದ್ದಿಗೇಡಿ ಮುದುಕಿ ನೀನು ಬಿದ್ದೀಯಬೇ.
ಬುಟ್ಟಿಯಲ್ಲಿ ಪತ್ತಲ ಇಟ್ಟಿ
ಅದನು ಉಟ್ಟ ಹೊತ್ತೊಳು ಜೋಕಿ;
ಕೆಟ್ಟಗಂಟಿ ಚೌಡೇರು ಬಂದು

ಉಟ್ಟುದನ್ನೆ ಕದ್ದಾರ ಜೋಕಿ!
ಬುದ್ಧಿಗೇಡಿ ಮುದುಕಿ ನೀನು ಬಿದ್ದೀಯಬೇ.
ಶಿಶುನಾಳಾಧೀಶನ ಮುಂದೆ
ಕೊಸರಿ ಕೊಸರಿ ಹೋಗಬ್ಯಾಡ,

ಹಸನವಿಲ್ಲ ಹರಯ ಸಂದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಬುದ್ದಿಗೇಡಿ ಮುದುಕಿ ನೀನು ಬಿದ್ದೀಯಬೇ.

Thursday, May 12, 2011

ಅಳಬೇಡ ತಂಗಿ ಅಳಬೇಡ ನಿನ್ನ

ಅಳಬೇಡ ತಂಗಿ ಅಳಬೇಡ ನಿನ್ನ
ಕಳುಹಬಂದವರಿಲ್ಲಿ ಉಳುಹಿಕೊಂಬುವರಿಲ್ಲ ||ಪಲ್ಲ||

ಖಡೀಕೀಲೆ ಉಡಿಯಕ್ಕಿ ಹಾಕಿದರವ್ವಾ ಒಳ್ಳೆ
ದುಡಕೀಲೆ ಮುಂದಕ ನೂಕಿದರವ್ವಾ
ಮಿಡಕ್ಯಾಡಿ ಮದಿವ್ಯಾದಿ ಮೋಜು ಕಾಣವ್ವ ಮುಂದ
ಹುಡುಕ್ಯಾಡಿ ಮಾಯದ ಮರವೇರಿದೆವ್ವಾ ||೧||

ಮಿಂಡೇರ ಬಳಗವು ಬೆನ್ನ್ಹತ್ತಿ ಬಂದು ನಿನ್ನ
ರಂಡೇರೈವರು ಕೂಡಿ ನಗುತಲಿ ನಿಂದು
ಕಂಡವರ ಕಾಲ್ಬಿದ್ದು ಕೈಮುಗಿದು ನಿಂತರ
ಗಂಡನ ಮನಿ ನಿನಗ ಬಿಡದವ್ವ ತಂಗಿ ||೨||

ರಂಗೀಲಿ ಉಟ್ಟೀದಿ ರೇಶ್ಮಿದಡಿಶೀರಿ ಮತ್ತs
ಹಂಗನೂಲಿನ ಪರವಿ ಮರತೆವ್ವ ನಾರಿ
ಮಂಗಳ ಮೂರುತಿ ಶಿಶುನಾಳಧೀಶನ
ಅಂಗಳಕ ನೀ ಹೊರತಾದೆವ್ವ ಗೌರಿ ||೩||

Wednesday, May 11, 2011

ಸೋರುತಿಹುದು ಮನೆಯ ಮಾಳಿಗಿ

ಸೋರುತಿಹುದು ಮನೆಯ ಮಾಳಿಗಿ
ಅಜ್ನಾನದಿಂದ
ಸೋರುತಿಹುದು ಮನೆಯ ಮಾಳಿಗಿ.

ಸೋರುತಿಹುದು ಮನೆಯ ಮಾಳಿಗಿ
ದಾರು ಗಟ್ಟಿ ಮಾಳ್ಪರಿಲ್ಲ
ಕಾಳ ಕತ್ತಲೆಯೊಳಗೆ ನಾನು
ಮೇಲಕೇರಿ ಹೋಗಲಾರೆ.

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರುಕು ಚಪ್ಪರ ಜೇರುಗಿಂಡಿ
ಮೇಲಕೇರಿ ಹೋಗಲಾರೆ.

ಕರಕಿ ಹುಲ್ಲು ಕಸವು ಹತ್ತಿ
ಹರಿದು ಸಾಲು ಇರಬಿ ಮುತ್ತಿ
ಜಲದ ಭರದಿ ಸರಿಯೆ ಮಣ್ಣು
ಒಳಗೆ ಹೊರಗೆ ಏಕವಾಗಿ.

ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬು ಮಳೆಯು
ಎಂತೊ ಶಿಶುನಾಳಧೀಶನ ತಾನು
ನಿಂತು ಪೊರೆವನು ಎಂದು ನಂಬಿದೆ

Tuesday, May 10, 2011

ಕೂ ಕೂ ಎನುತಿದೆ ಬೆಳವಾ

ಕೂ ಕೂ ಎನುತಿದೆ ಬೆಳವಾ-ಬಂದು
ಹೊಕ್ಕಿತು ಭವವೆಂಬ ದುಖಃದ ಹಳುವ


ಪುರುಷನ ಬುಟ್ಟೀಲಿ ಇಟ್ಟು- ಬಹು
ಹರುಷದಿ ಹಳ್ಳದೂಳ್ ತೇಲಾಕ ಬಿಟ್ಟು

ಮನವೆಂಬ ಗೂಡಿನೊಳಿಟ್ಟು- ತನ್ನ
ತನುವೆಂಬ ಮರ್ಅದೊಳು ಹಾರಾಕ ಬಿಟ್ಟು

ಆನಂದದೊಳು ತಾನಿರಲು- ಸ್ವಾ
ನಂದಿ ರೆಖ್ಖೆಯ ಕೆದರುತಲಿರಲು,

ಜ್ನಾನದ ಬೆಳಕಿನೊಳಿಹುದು- ದೇವ
ಶಿಶುನಾಳಾಧೀಶ ಗೋವಿಂದನ ವರವು.

“ಇಗೋ, ಬೆಂಗಳೂರು ಹೀಗಿತ್ತು”ಜಿ. ವೆಂಕಟಸುಬ್ಬಯ್ಯ -

“ ಇಗೋ , ಬೆಂಗಳೂರು ಹೀಗಿತ್ತು ” ಜಿ . ವೆಂಕಟಸುಬ್ಬಯ್ಯ   ಅರವತ್ತು ವರ್ಷಗಳ ಹಿಂದೆ ಬೆಂಗಳೂರು ಇಷ್ಟು ದೊಡ್ಡದಾಗಿರಲಿಲ್ಲ . ಆಗ ಎರಡು ಬೆಂಗಳೂರು ಇತ್ತು ...