Tuesday, April 7, 2026

ಒಂದು ಸಂಕೀರ್ಣ ವಿಷಯದ ಬಗ್ಗೆ ಸರಳವಾಗಿ ತಿಳಿದುಕೊಳ್ಳೋಣ ಬನ್ನಿ! -ರೋಹಿತ್ ಚಕ್ರತೀರ್ಥ


ಇಂದು ಪ್ರಧಾನಿ ಮೋದಿಯವರು ಮಾನ್ಯ ಜನರಿಗೆ ಸಾಮಾನ್ಯವಾಗಿ ಅರ್ಥವಾಗದ ಅಥವಾ ತಲೆಯ ಮೇಲಿಂದ ಹಾರಿಹೋಗುವ ಒಂದು ವಿಷಯದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಮೂರು ಸಂಗತಿಗಳು ಬಹುಶಃ ಹೆಚ್ಚಿನವರಿಗೆ ಹೊಸತು: ಫಾಸ್ಟ್ ಬ್ರೀಡರ್ ರಿಯಾಕ್ಟರ್, ಕ್ರಿಟಿಕಾಲಿಟಿ ಮತ್ತು ಥೋರಿಯಂ. ಇದು ಭಾರತದ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಬಹುದೊಡ್ಡ ಜಿಗಿತ ಎಂಬಂತೆಯೂ ಪ್ರಧಾನಿಯವರು ಬರೆದಿದ್ದಾರೆ. ಆದರೆ ಏನು ಈ ಜಿಗಿತ, ಭಾರತ ಎಲ್ಲಿಂದ ಎಲ್ಲಿಯವರೆಗೆ ಜಿಗಿದಿದೆ ಎಂಬುದು ಬಹುತೇಕರಿಗೆ ಅಂದಾಜಾಗಿರಲಿಕ್ಕಿಲ್ಲ. 


ಇದನ್ನು ನಮ್ಮ ತಿಳಿವಳಿಕೆಗೆ ಅರ್ಥವಾಗುವ ಹೋಲಿಕೆಗಳನ್ನು ಬಳಸಿಕೊಂಡು ಅರ್ಥ ಮಾಡಿಕೊಳ್ಳಲು ಯತ್ನಿಸೋಣ. ಯಾವುದೇ ವಸ್ತುವಿನಿಂದ ಶಕ್ತಿ ಪಡೆಯಲು ಅದನ್ನು ಉರಿಸಬೇಕು (ನಮಗೂ ಅಷ್ಟೆ: ಯಾರಾದರೂ ನಮಗೆ ಉರಿಸಿದರೆ ತಾನೇ ನಮಗೂ ನಮ್ಮ ಶಕ್ತಿ ತೋರಿಸಬೇಕು ಅನ್ನಿಸುವುದು!). ಉರಿಸಿದಾಗ ಸಿಗುವ ಶಕ್ತಿ ಶಾಖದ ರೂಪದಲ್ಲಿರಬಹುದು, ಬೆಳಕಿನ ರೂಪದಲ್ಲಿರಬಹುದು ಅಥವಾ ಇನ್ನಾವುದಾದರೂ ರೂಪದಲ್ಲಿ ಇರಬಹುದು. ಅದನ್ನು ನಾವು ನಮಗೆ ನಮಗೆ ಬೇಕಾದಂತೆ ಬಳಸಿಕೊಳ್ಳುವುದರಲ್ಲಿ ನಮ್ಮ ಜಾಣ್ಮೆ ಇದೆ. ಉದಾಹರಣೆಗೆ ಕಲ್ಲಿದ್ದಲು ಉರಿಸಿ, ಅದರಿಂದ ನೀರು ಕಾಯಿಸಿ, ಆ ಕುದಿನೀರಿನ ಆವಿಯನ್ನು ಬಳಸಿಕೊಂಡು ರೈಲು ಓಡಿಸುವುದನ್ನು ನಾವು ಶತಮಾನಗಳ ಹಿಂದೆ ಕಂಡುಕೊಂಡೆವು. ಹಾಗೆಯೇ ಉರುವಲು ಉರಿಸಿ, ಅದರಿಂದ ನೀರು ಕಾಯಿಸಿ, ಹಬೆ ಎಬ್ಬಿಸಿ, ಅದರಿಂದ ಟರ್ಬೈನುಗಳನ್ನು ತಿರುಗಿಸಿ ವಿದ್ಯುತ್ ತಯಾರಿಸುವುದನ್ನೂ ಕಲಿತೆವು. ಪರಮಾಣು ರಿಯಾಕ್ಟರುಗಳಲ್ಲಿ ಆಗುವುದೂ ಇಷ್ಟೆ: ಟರ್ಬೈನುಗಳ ಚಕ್ರಗಳು ತಿರುಗಬೇಕಾದರೆ ಅವುಗಳನ್ನು ಉಗಿ (Steam) ದೂಡಬೇಕು. ಆ ಉಗಿಯನ್ನು ಎಬ್ಬಿಸಲು ಶಾಖ ಉತ್ಪತ್ತಿಯಾಗಬೇಕು. ಪರಮಾಣು ರಿಯಾಕ್ಟರುಗಳಲ್ಲಿ ವಿಕಿರಣಶೀಲ ಧಾತುಗಳನ್ನು (ಅಥವಾ ಧಾತುರೂಪಗಳನ್ನು) ಬಳಸಿ ಅಂಥ ಶಾಖವನ್ನು ಸೃಷ್ಟಿಸುತ್ತಾರೆ. ವಿಕಿರಣಶೀಲ ಧಾತುಗಳು ಕ್ಷಣಕ್ಷಣಕ್ಕೂ ಸಹಸ್ರ ಸಹಸ್ರ ಸಂಖ್ಯೆಯ ಕಣಗಳನ್ನು ಉತ್ಸರ್ಜಿಸುತ್ತ ಇರುವುದರಿಂದ ಆ ಕಣಗಳ ಹೊಡೆತಕ್ಕೆ ಶಾಖ ಸೃಷ್ಟಿಯಾಗುತ್ತದೆ. ಆ ಶಾಖವನ್ನು ಬಳಸಿಕೊಂಡು ನೀರು ಬಿಸಿ ಮಾಡಿ ಉಗಿ ಎಬ್ಬಿಸಬಹುದು. 


ಕಲ್ಲಿದ್ದಲನ್ನು ಉರುವಲಾಗಿ ಬಳಸುವುದಕ್ಕೂ ವಿಕಿರಣಶೀಲ ಯುರೇನಿಯಮ್ಮನ್ನು ಬಳಸುವುದಕ್ಕೂ ವ್ಯತಾಸವುಂಟು. ಕಲ್ಲಿದ್ದಲನ್ನು ಉರಿಸಿದರೆ ಕೊನೆಯಲ್ಲಿ ಬೂದಿ ಮಿಗುತ್ತದೆ. ಆದರೆ ಯುರೇನಿಯಂ ತುಂಡನ್ನು ಹಾಗೆ "ಕಾಯಿಸಿದಾಗ" ಅದರಿಂದ ಬೂದಿ, ಕೆಂಡ, ಭಸ್ಮ ಏನೊಂದೂ ಬರುವುದಿಲ್ಲ. ಆ ಯುರೇನಿಯಂ ತುಂಡು ಕಪ್ಪುಮಸಿ ಕೂಡ ಆಗುವುದಿಲ್ಲ. ಅದರಿಂದ ಹೊರಹಾರಿದ್ದು ವಿಕಿರಣಗಳು ಮಾತ್ರ (ಆಲ್ಫಾ, ಬೀಟಾ, ಗ್ಯಾಮಾ ಇತ್ಯಾದಿ ಕಣಗಳು). ಅವು ಬರಿಗಣ್ಣಿಗೆ ಕಾಣುವುದೂ ಇಲ್ಲ. ನಮ್ಮಲ್ಲಿ ಪರಮಾಣುಶಕ್ತಿಯ ಬಗ್ಗೆ ಎಷ್ಟೊಂದು ಅಜ್ಞಾನವಿದೆಯೆಂದರೆ "ಪ್ರಖ್ಯಾತ" ವಿಜ್ಞಾನ ಸಂವಹನಕಾರ ನಾಗೇಶ ಹೆಗಡೆಯವರು ಒಮ್ಮೆ ಯುರೇನಿಯಂನ್ನು ಸುಟ್ಟ ಮೇಲೆ ಬೂದಿಯನ್ನು ವಿಲೇವಾರಿ ಮಾಡುವುದು ದೊಡ್ಡ ಸಮಸ್ಯೆ ಎಂದು ಬರೆದಿದ್ದರು (ಆಮೇಲೆ, ತಪ್ಪು ತೋರಿಸಿಕೊಟ್ಟಾಗ, ಎಂದಿನಂತೆ ತನ್ನ ಮೊಲಕ್ಕೆ ಎರಡು ಕೊಂಬು, ಮೂರು ಕಾಲು ಎಂದು ವಾದಮಾಡಿದರು. ಬಿಡಿ, ಮಾತಾಡಿ ಪ್ರಯೋಜನವಿಲ್ಲ!)


ಹಾಗಾದರೆ ಪರಮಾಣು ರಿಯಾಕ್ಟರುಗಳಲ್ಲಿ ತ್ಯಾಜ್ಯವೆಂಬುದು (Nuclear waste) ಇರುವುದಿಲ್ಲವೇ ಎಂದು ಕೇಳಿದರೆ ಖಂಡಿತ ಇರುತ್ತದೆ. ಯುರೇನಿಯಂ ಅನ್ನು ಉರುವಲಾಗಿ ಉಪಯೋಗಿಸಿದ ನಂತರ ಅದು ವಿಕಿರಣಶೀಲವಾಗಿಯೇ ಇರುತ್ತದೆ. ಅಂಥ ಸಲಾಕೆಗಳನ್ನು ವಿಲೇವಾರಿ ಮಾಡುವುದು ದೊಡ್ಡ ತಲೆನೋವು ಹೌದು - ಅವನ್ನು ಭೂಮಿಯಲ್ಲಿ ನೂರಾರು ಮೀಟರ್ ಆಳಕ್ಕೆ ಹೊಂಡ ತೋಡಿ, ಕಾಂಕ್ರೀಟು ಗೋಡೆಗಳಿಂದ ಮಾಡಿದ ಕೋಣೆಗಳಲ್ಲಿಟ್ಟು ಭದ್ರಪಡಿಸಬೇಕು. ಸ್ವಲ್ಪ ಎಚ್ಚರ ಮರೆತರೆ ಆ ಸಲಾಕೆಗಳಿಂದ ಹೊರಹಾರುವ ಅದೃಶ್ಯ ವಿಕಿರಣಗಳು ಭೂಮಿಯ ಮೇಲಿರುವವರ ಮೇಲೆ ಏನೇನೋ ಭಾನಗಡಿ ಮಾಡಿಯಾವು. ಪರಮಾಣು ರಿಯಾಕ್ಟರುಗಳಲ್ಲಿ ಆ ಎಲ್ಲ ಎಚ್ಚರಿಕೆ ತೆಗೆದುಕೊಂಡೇ ಕೆಲಸ ಮಾಡುವುದು. ನಮ್ಮ ಕೈಗಾದಲ್ಲಿ ಉರುವಲಾಗಿ ಬಳಸಿದ ವಿಕಿರಣಶೀಲ ಸಲಾಕೆಗಳನ್ನು ಆಮೇಲೆ ಪಕ್ಕದ ತೋಡುಗಳಲ್ಲೋ ಹೊಲಗದ್ದೆಗಳಲ್ಲೋ ಎಸೆಯುವುದಿಲ್ಲ - ಆದರೆ ಹಾಗೆ ಮಾಡುತ್ತಾರೆಂಬ ರೇಂಜಿಗೆ ಒಂದು ಕಾಲದಲ್ಲಿ ಪ್ರಗತಿಪರ ಚಿಂತಕರು ಬಾಯಿ ಬಡಿದುಕೊಂಡದ್ದು ಹೌದು!


ಪರಮಾಣು ರಿಯಾಕ್ಟರುಗಳಲ್ಲಿ ವಿದ್ಯುತ್ ಉತ್ಪಾದನೆಗೆ ಯುರೇನಿಯಂ-233 ಎಂಬ ಒಂದು ಧಾತುರೂಪ ಬೇಕು. ಏಕಂ ಸತ್ ವಿಪ್ರಾ ಬಹುಧಾ ವದನ್ತಿ ಎಂಬಂತೆ ಯುರೇನಿಯಂ ಎಂಬ ಒಂದು ಧಾತುವಿಗೆ ಯು233, ಯು234, ಯು235, ಯು238 ಮುಂತಾದ ಹತ್ತಾರು ರೂಪಗಳು. ಇವನ್ನು ಐಸೋಟೋಪುಗಳು (Isotopes) ಎನ್ನುತ್ತೇವೆ. ಇಲ್ಲಿರುವ 233, 234 ಇತ್ಯಾದಿ ಸಂಖ್ಯೆಗಳನ್ನು ರಾಶಿಸಂಖ್ಯೆ (Mass Number) ಎನ್ನುತ್ತೇವೆ. ಈ ಐಸೋಟೋಪುಗಳಲ್ಲಿ ಕೆಲವು ಸ್ಥಿರ, ಕೆಲವು ಅಸ್ಥಿರ. ಕೆಲವು ಬಹುಪ್ರಮಾಣದಲ್ಲಿ ಸಿಗುತ್ತವೆ, ಇನ್ನು ಕೆಲವು ಕಡಿಮೇ ಅಂದರೆ ಕಡಿಮೆ ಪ್ರಮಾಣದಲ್ಲಿ ಸಿಗುವಂಥವು. ಉದಾಹರಣೆಗೆ ಯು235, ಯು238 ಮುಂತಾದವು ಹೆಚ್ಚು ಪ್ರಮಾಣದಲ್ಲಿ ಅಲ್ಲಲ್ಲಿ ಸಿಗುತ್ತವೆ. ಆದರೆ ಅವುಗಳಿಂದ ನೇರವಾಗಿ ಅಂಥ ಪ್ರಯೋಜನವಿಲ್ಲ. ಯಾಕೆಂದರೆ ಅವು ಉತ್ಸರ್ಜಿಸುವ (ಹೊರಚಿಮ್ಮಿಸುವ) ಕಣಗಳ ಸಂಖ್ಯೆ ಕಡಿಮೆ. ಯು233 ಹಾಗಲ್ಲ; ಅದು ದೀಪಾವಳಿಯ ನೆಲಚಕ್ರದಂತೆ ಪಟುವಾದ ಕಣಗಳನ್ನು ರಪರಪರಪನೆ ಹೊರಹಾರಿಸುತ್ತದೆ. ಆದರೆ ಯು233-ನ ಪ್ರಮಾಣ ಜಗತ್ತಲ್ಲಿ ಭಾಳ ಭಾಳ ಕಡಿಮೆ. ಯಾವತ್ತೂ ಅಷ್ಟೆ ನೋಡಿ: ಬೇಕಾದ್ದು ಹೆಚ್ಚಿರುವುದಿಲ್ಲ, ಬೇಡವಾದ್ದು ಬೇಕಾದಷ್ಟಿರುತ್ತದೆ! 


ನಮ್ಮಲ್ಲಿ ಪರಮಾಣು ರಿಯಾಕ್ಟರುಗಳಲ್ಲಿ ವಿದ್ಯುತ್ ಉತ್ಪಾದನೆಗೆ ನಮಗೆ ಬೇಕಿರುವುದು ಯು233 ಎಂಬ ಐಸೋಟೋಪು. ಅದು ಜಗತ್ತಿನಲ್ಲಿ ಸಿಗುವುದು ಬಹಳ ಕಡಮೆ. ಇದರ "ಭಾರೀ ದಾಸ್ತಾನು" ಇದೆ ಎಂದು ಹೇಳಿಕೊಂಡ ಅಮೆರಿಕ, ರಷ್ಯಗಳು ಇಡೀ ಇತಿಹಾಸದುದ್ದಕ್ಕೆ ತಯಾರು ಮಾಡಿರಬಹುದಾದ ಯುರೇನಿಯಂ 2 ಟನ್‌ಗಿಂತ ಕಡಿಮೆ! ಅಲ್ಲದೆ ಯು233ನ್ನು ಯಾವ ದೇಶವೂ ಮಾರಾಟ ಮಾಡುವಂತಿಲ್ಲ; ಉತ್ಪಾದಿಸುವುದಂತೂ ದೂರದ ಮಾತು. ಗಲ್ಫ್ ರಾಷ್ಟ್ರಗಳು ನೆಲದಲ್ಲಿ ಬಾವಿ ತೋಡಿ ಕಲ್ಲೆಣ್ಣೆ ತೆಗೆದು ಹಡಗುಗಳಲ್ಲಿ ತುಂಬಿ ಮಾರಿದಂತೆ ಇದನ್ನು ಮಾಡಲು ಬರುವುದಿಲ್ಲ. ಇಡೀ ದೇಶಕ್ಕೆ ದೇಶವನ್ನೇ ಬಗೆದು ಗುಡ್ಡೆಹಾಕಿದರೂ ಹತ್ತಿಪ್ಪತ್ತು ಕೆಜಿ ಈ ಐಸೋಟೋಪು ಸಿಗುವುದೂ ಕಷ್ಟವೆ. ಅಂಥ ವಿರಳಾತಿವಿರಳ ಐಸೋಟೋಪು ಇದು.


ಆದರೆ ಇದು ಎಷ್ಟೊಂದು ಪಟುವೆಂದರೆ ಇದರಿಂದ ಅತ್ಯಧಿಕ ಪ್ರಮಾಣದ ಶಕ್ತಿಯನ್ನು ಉತ್ಪಾದಿಸಬಹುದು. ಉದಾಹರಣೆಗೆ ಒಂದು ಕೆಜಿ ಯು233 ಕಚ್ಚಾಪದಾರ್ಥದಿಂದ ಸರಿಸುಮಾರು 82 ಟೆರಾಜೂಲುಗಳಷ್ಟು ಶಕ್ತಿಯನ್ನು ಉತ್ಪಾದಿಸಬಹುದು. ಇದು ಸರಿಸುಮಾರು 23,000 ಮೆಗಾವಾಟ್‌ಗಳಷ್ಟು ವಿದ್ಯುತ್ ಶಕ್ತಿಗೆ ಸಮ. ಏನಾದರೂ ಅರ್ಥ ಆಯಿತಾ? ಆಗಿಲ್ಲವಾ? ಹಾಗಾದರೆ ಈ ಹೋಲಿಕೆ ನೋಡಿ: ಒಂದು ಕೆಜಿ ಕಲ್ಲಿದ್ದಲಿಂದ 24 ಮೆಗಾಜೂಲ್ ಶಕ್ತಿ ಉತ್ಪಾದಿಸಬಹುದು. ಅದೇ ಒಂದು ಕೆಜಿ ಯು233 ಉರುವಲಿಂದ 8,20,00,000 ಮೆಗಾಜೂಲ್ ಶಕ್ತಿ ಉತ್ಪಾದಿಸಬಹುದು. ಅಂದರೆ ಒಂದು ಕೆಜಿ ಯು233 ಉರುವಲು ಉತ್ಪಾದಿಸುವ ಶಕ್ತಿಯು 30 ಲಕ್ಷ ಕೆಜಿ ಕಲ್ಲಿದ್ದಲು ಉತ್ಪಾದಿಸುವ ಶಕ್ತಿಗೆ ಸಮ. ಅರ್ಥ ಆಯ್ತಲ್ಲ! ಅಂದರೆ ಕೆಲವೇ ಕೆಲವು ಗ್ರಾಂಗಳಷ್ಟು ಯು233 ಇದ್ದರೂ ಸಾಕು, ಒಂದು ರಿಯಾಕ್ಟರಿನಲ್ಲಿ ಸಾಕುಸಾಕು ಅನ್ನಿಸುವಷ್ಟು ವಿದ್ಯುತ್ ತಯಾರಿಸಬಹುದು ಎಂದಾಯಿತು.


ಈಗ ಮುಖ್ಯ ವಿಷಯಕ್ಕೆ ಬರುವಾ. ನಮ್ಮಲ್ಲಿ ಸಮುದ್ರದಂಡೆಯಲ್ಲಿ (ಮುಖ್ಯವಾಗಿ ಕೇರಳದ ಸಮುದ್ರ ಕಿನಾರೆಯ ಹೊಯಿಗೆಯಲ್ಲಿ) ಸಾಕಷ್ಟು ಪ್ರಮಾಣದಲ್ಲಿ ಥೋರಿಯಂ ಎಂಬ ಧಾತುವಿನ ಅಂಶವಿದೆ. ಈ ಥೋರಿಯಂ ಎಂಬುದು ಅದರಷ್ಟಕ್ಕೆ ಅದು ನಿರುಪಯೋಗಿ, ನಿರಪಾಯಕಾರಿ. ಆದರೆ ಅದನ್ನು ಯು233 ಆಗಿ ಪರಿವರ್ತಿಸಲು ಸಾಧ್ಯವಿದೆ! ಥೋರಿಯಂನ 232 ಎಂಬ ಐಸೋಟೋಪಿಗೆ ನ್ಯೂಟ್ರಾನುಗಳನ್ನು ಡಿಕ್ಕಿ ಹೊಡೆಸಿದಾಗ ಅದು ಥೋರಿಯಂ-233 ಆಗಿ ಬದಲಾಗುತ್ತದೆ. ಆದರೆ ಇದು ತುಂಬ ಅಸ್ಥಿರವಾದ ಐಸೋಟೋಪ್. ಅಂದರೆ ಕೆಲವೇ ಕೆಲವು ಕ್ಷಣಗಳಲ್ಲಿ ಇದು ತನ್ನೊಳಗಿನ ಎಲೆಕ್ಟ್ರಾನುಗಳನ್ನು ಹೊರಚೆಲ್ಲಿಕೊಂಡು ಪ್ರೊಟಾಕ್ಟಿನಿಯಮ್-233 ಎಂಬ ಧಾತುರೂಪಕ್ಕೆ ಬದಲಾಗುತ್ತದೆ. ಈ ಧಾತುರೂಪ ಕೂಡ ಅಸ್ಥಿರ. ಇದು ತಕ್ಷಣವೇ ಬೀಟಾ ಕಣಗಳನ್ನು ಹೊರಹಾಕಿ, ಯುರೇನಿಯಂ-233 ಆಗಿ ಬದಲಾಗುತ್ತದೆ. ಈ ಯು233 ಉಂಟಲ್ಲ - ಇದೇ ನಮಗೆ ಶಕ್ತಿ ಉತ್ಪಾದನೆಗೆ ಬೇಕಾದ ಮುಖ್ಯವಾದ ಉರುವಲು. ಹಾಗಾಗಿ ಥೋರಿಯಂ ಅನ್ನು ಫರ್ಟೈಲ್ ಮೆಟೀರಿಯಲ್ (Fertile Material) ಎಂದೂ ಯು233 ಅನ್ನು ಫಿಸೈಲ್ ಫ್ಯೂಲ್ (Fissile Fuel) ಎಂದೂ ಕರೆಯುತ್ತಾರೆ. ಒಂದು ಉರುವಲುಚೋದಕ, ಇನ್ನೊಂದು ನಿಜವಾದ ಉರುವಲು. ಹಸು ಹುಲ್ಲು ತಿಂದು ಸೆಗಣಿ ಹಾಕುತ್ತದೆ; ಆ ಸೆಗಣಿಯನ್ನು ಬೆರಣಿ ತಟ್ಟಿ ನಾವು ಉರುವಲಾಗಿ ಬಳಸುತ್ತೇವಲ್ಲ, ಹಾಗೆ. ಥೋರಿಯಂ ಹುಲ್ಲು ಇದ್ದಂತೆ; ಯುರೇನಿಯಂ-233 ಬೆರಣಿ ಇದ್ದಂತೆ. ಇಷ್ಟು ದಿನ ನಮ್ಮಲ್ಲಿ ಹುಲ್ಲಿತ್ತು; ಆದರೆ ಆ ಹುಲ್ಲನ್ನು ಸೆಗಣಿ ಮಾಡುವ ಹಸು ಇನ್ನೂ ಪ್ರಯೋಗಶಾಲೆಯಲ್ಲಿತ್ತು.


ಆಗಲೇ ಹೇಳಿದಂತೆ ಥೋರಿಯಂ - ಅದರ ಪಾಡಿಗದು ನಿರುಪದ್ರವಿ. ಅದಕ್ಕೆ ನ್ಯೂಟ್ರಾನ್ ಕಣವನ್ನು ಹೊಡೆಸಿದಾಗಷ್ಟೇ ಅದರೊಳಗಿಂದ ವಿಕಿರಣಶೀಲ ಕಣಗಳು ಹೊರಹಾರುವುದು. ಈ ಅತಿ ವೇಗದ ಅತ್ಯಧಿಕ ಶಕ್ತಿಯ ನ್ಯೂಟ್ರಾನ್ ಕಣಗಳನ್ನು ಹೊಡೆಸುವುದೂ ಒಂದು ದೊಡ್ಡ ಸಾಹಸವೇ. ಆದರೆ ಒಂದು ಮ್ಯಾಜಿಕ್ ಮಾಡಬಹುದು: ಅದೇನೆಂದರೆ ಮೊದಲ ಸಲ, ಕೆಲಸ ಶುರುಮಾಡುವಾಗ ಮಾತ್ರ - ಒಂದಷ್ಟು ನ್ಯೂಟ್ರಾನ್ ಕಣಗಳನ್ನು ಥೋರಿಯಂ-232ಗೆ ತಾಡಿಸಬಹುದು. ಆಮೇಲೆ ಥೋರಿಯಂ-232 ಎಂಬುದು ಥೋರಿಯಂ-233 ಆಗಿ, ನಂತರ ಪ್ರೊಟಾಕ್ಟಿನಿಯಂ-233 ಆಗಿ, ಅಲ್ಲಿಂದ ಯುರೇನಿಯಂ-233 ಆದ ಮೇಲೆ ಆ ಯುರೇನಿಯಂ ಒಂದಷ್ಟು ನ್ಯೂಟ್ರಾನ್ ಕಣಗಳನ್ನು ಹೊರಚಿಮ್ಮಿಸುತ್ತದಲ್ಲ, ಆ ನ್ಯೂಟ್ರಾನ್ ಕಣಗಳೇ ಮತ್ತೆ ಥೋರಿಯಂನ್ನು ಬಡಿಯುವ ಹಾಗೆ ಮಾಡಿ ಇಡೀ ಚಕ್ರವು (Cycle. Not 'wheel'!) ತನ್ನಷ್ಟಕ್ಕೆ ತಾನೇ ಸುತ್ತತೊಡಗುವ ಹಾಗೆ ಮಾಡಬಹುದು! ಇಲ್ಲಿ, ಕೊನೆಯಲ್ಲಿರುವ ಯುರೇನಿಯಂ ಉರುವಲಿಂದ ಹೊರಹಾರುವ ನ್ಯೂಟ್ರಾನುಗಳ ಸಂಖ್ಯೆ ಅಗತ್ಯಕ್ಕಿಂತ ಹೆಚ್ಚಾದರೆ ಅದು ಅಪಾಯಕರ. ಅಗತ್ಯಕ್ಕಿಂತ ಕಡಿಮೆಯಾದರೆ ಮತ್ತೆ ಹೊಸ ನ್ಯೂಟ್ರಾನುಗಳನ್ನು ಹೊರಗಿನಿಂದ ಸಪ್ಲೈ ಮಾಡುತ್ತಲೇ ಇರಬೇಕು. ಆದರೆ ಇಡೀ ಚಕ್ರವು ತನ್ನಷ್ಟಕ್ಕೆ ತಾನೇ ಸುತ್ತುತ್ತಲೇ ಇರುವಂತೆ ಮಾಡಲು ಯುರೇನಿಯಂ-233ರಿಂದ ಒಂದು ನಿರ್ದಿಷ್ಟ ಸಂಖ್ಯೆಯ ನ್ಯೂಟ್ರಾನುಗಳಷ್ಟೇ ಹೊರಹಾರುವಂತೆ ವ್ಯವಸ್ಥೆ ಮಾಡಿಕೊಂಡರೆ ಕೆಲಸ ಸಲೀಸು. ಈ ಅತ್ಯಪರೂಪದ ಸಮತೋಲನಕ್ಕೆ ಹೆಸರು ಕ್ರಿಟಿಕಾಲಿಟಿ (Criticality). ಅರ್ಥ ಆಯ್ತಲ್ಲ?


ಇಷ್ಟು ದಿನ ನಮ್ಮ ದೇಶದ ಸಮುದ್ರ ಕಿನಾರೆಯಲ್ಲಿ ರಾಶಿರಾಶಿಯಾಗಿ ಥೋರಿಯಂ ನಿಕ್ಷೇಪ ಬಿದ್ದುಕೊಂಡು ನಿದ್ದೆಮಾಡುತ್ತಿತ್ತು. ಜಗತ್ತಿನ ಒಟ್ಟು ಥೋರಿಯಂ ನಿಕ್ಷೇಪದ 25% ನಮ್ಮ ದೇಶವೊಂದರಲ್ಲೇ ಇದೆ. ಈ ಥೋರಿಯಂನ್ನು ಯು233 ಆಗಿ ಮಾಡಿಕೊಳ್ಳುವ ಚಾಕಚಕ್ಯತೆ, ತಂತ್ರಜ್ಞಾನ ನಮಗೆ ಇರಲಿಲ್ಲ ಅಷ್ಟೆ. ಈಗ ಅಂಥ ತಂತ್ರಜ್ಞಾನ ನಮ್ಮ ಕೈವಶ ಆಗಿದೆ ಎಂಬುದೇ ಪ್ರಧಾನಿಯವರ ಟ್ವೀಟಿನ ಭಾವಾರ್ಥ. ಹೀಗೆ ಮಾಡಬಹುದು ಎಂದು ಭಾರತದ ಪರಮಾಣು ಚೈತನ್ಯದ ಜನಕ ಹೋಮಿ ಜಹಾಂಗೀರ್ ಭಾಭಾ ಐವತ್ತು ವರ್ಷಗಳ ಹಿಂದೆಯೇ ಹೇಳಿದ್ದರು. ಅವರು ಸ್ವಿತ್ಸರ್ಲೆಂಡ್ ಪಕ್ಕ ವಿಮಾನ ಅಪಘಾತದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಕೇರಳಕ್ಕೆ ಇಸ್ರೋ ಕೆಲಸಗಳಿಗೆಂದು ನಿರಂತರ ಓಡಾಡಿಕೊಂಡಿದ್ದ ಮತ್ತು ಭಾಭಾರ ಪರಮಾಪ್ತರಾಗಿದ್ದ ವಿಕ್ರಂ ಸಾರಾಭಾಯಿ ಒಂದು ಮುಂಜಾನೆ ಕೇರಳದಲ್ಲೇ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು. ಇಂಥ ಹಲವು ಸಂಶಯಾಸ್ಪದ ಸಾವುಗಳಿಂದಾಗಿ ದೇಶದ ಪರಮಾಣು ತಂತ್ರಜ್ಞಾನ ಕ್ಷೇತ್ರ ದಶಕಗಳಷ್ಟು ಹಿಂದಕ್ಕೆ ಹೋಗಿತ್ತು. ಪರಮಾಣು ಎಂದರೆ ಸಾಕು ಪ್ರತಿಭಟನೆಯ ಬಾವುಟ, ಘೋಷಣೆ, ಘೇರಾವ್, ಹರತಾಳಗಳನ್ನು ಹಿಡಿದುಕೊಂಡು ಬರುವ ಪ್ರಗತಿಪರ ಚಿಂತಕರ ದಂಡುದಂಡುಗಳನ್ನೇ ಈ ದೇಶದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಬೆಳೆಸಲಾಗಿತ್ತು. ಇಷ್ಟೆಲ್ಲಾ ಅಡೆತಡೆ-ತಡೆಅಡೆಗಳನ್ನು ಮೀರಿ ಇದೀಗ ಭಾರತ ಥೋರಿಯಂನ್ನು ಯುರೇನಿಯಂ ಆಗಿ ಪರಿವರ್ತಿಸಿಕೊಂಡು ವಿದ್ಯುತ್ ಉತ್ಪಾದಿಸಿಕೊಳ್ಳುವ ಹಂತಕ್ಕೆ ಪದಾರ್ಪಣೆ ಮಾಡಿದೆ. ಭಾರತದಲ್ಲಿ ಈಗ ಇರುವ ಥೋರಿಯಂ ದಾಸ್ತಾನನ್ನು ಬಳಸಿಕೊಂಡು ಈ ದೇಶವನ್ನು ಮುಂದಿನ 60,000 ವರ್ಷಗಳ ಕಾಲ ವಿದ್ಯುತ್ತಿನಿಂದ ಬೆಳಗುತ್ತಿರಬಹುದು.


ಮಿಕ್ಕಿದ್ದೆಲ್ಲ ನೀವೇ ಲೆಕ್ಕ ಹಾಕಿ!

Friday, March 27, 2026

ಶ್ರೀ ರಾಮ ನವಮಿಯ ಶುಭಾಶಯಗಳು

 ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಪ್ರಭುವಾಗದೆ ಪ್ರತಿನಿಧಿಯಾಗಿ ಸಾಮಾನ್ಯರಿಗೂ ಬೆಲೆ ಕೊಟ್ಟು , ಸ್ವಂತದ್ದಾಗಲಿ, ಸಂಸಾರದ್ದಾಗಲಿ, ಸಮಾಜದ್ದಾಗಲಿ, ಹೆಣ್ಣಾಗಲಿ, ಗಂಡಾಗಲಿ ಲೋಪ ಕಂಡುಬಂದರೆ ನಿರ್ಣಯ ತೆಗೆದುಕೊಳ್ಳುವಲ್ಲಿಸಮರ್ಥನಾಗಿ ನ್ಯಾಯ ಒದಗಿಸಿರುವ ಮೂರ್ತಿಯೇ ಶ್ರೀರಾಮಚಂದ್ರ. 


ಸ್ವಂತಕ್ಕಲ್ಲ ; ಸಮಾಜಕ್ಕೆ ಎಲ್ಲ ಎಂಬುದೇ ಅವರ ಧ್ಯೇಯ. ಜನಗಳ ಸಂತೋಷಕ್ಕಾಗಿ ರಾಜ್ಯ ಆಳಬೇಕೇ ವಿನಾ ತನ್ನ ಸ್ವಂತಕ್ಕಾಗಿ ಅಲ್ಲ ಎಂಬುದನ್ನು ತೋರಿಸಿಕೊಟ್ಟ ಆದರ್ಶಮೂರ್ತಿ.

 ಕುಟುಂಬ, ಸಮಾಜ, ದೇಶ ಮೂರರಲ್ಲೂ ಹೇಗೆ ವರ್ತಿಸಬೇಕು ಎಂಬುದನ್ನು ತೋರಿಸಿಕೊಟ್ಟ ಮಹಾಮೂರ್ತಿ. ಅವಿಭಕ್ತ ಕುಟುಂಬದ ಸಾಕಾರಮೂರ್ತಿ.

 ಹಾಗಾಗಿಯೇ ಕನ್ನಡದಲ್ಲಿರಾಷ್ಟ್ರಕವಿ ಕುವೆಂಪು ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಶ್ರೀರಾಮನ ಆದರ್ಶಗಳನ್ನು 32 ಗುಣಗಳಿಂದ ವಿಮರ್ಶಿಸಿದ್ದಾರೆ. ಸಂಸ್ಕೃತದಲ್ಲಿಚಾಣಕ್ಯ 10 ಗುಣದಲ್ಲಿಬಣ್ಣಿಸಿದರೆ ಕುವೆಂಪು ಅದರ ಮೂರು ಪಟ್ಟುಹೆಚ್ಚು ಬಣ್ಣಿಸಿದ್ದಾರೆ. 


ಸತ್ಯಸ್ಯ ಸತ್ಯ ನಿತ್ಯ ಕಥನಂಕಣ ಎಂದಿದ್ದಾರೆ. ಸತ್ಯದ ಪ್ರತಿಪಾದನೆಯಲ್ಲಿನಿತ್ಯ ನಡೆಯುವಂತಹ, ನಿತ್ಯ ನೋಡುವಂತಹ ರೀತಿ ನೀತಿಯೇ ಶ್ರೀರಾಮನ ಆದರ್ಶ. ಅದಕ್ಕಾಗಿಯೇ 'ರಾಮಾಯಣಂ ವಿರಾಮಾಯಣಂ ಕಣಾ' ಎಂದಿದ್ದಾರೆ. 


ಶ್ರೀ ರಾಮ ನವಮಿಯ ಶುಭಾಶಯಗಳು.  ಶುಭದಿನ !!


Courtesy : Shivakumar - Mysore 


Click here to join WhatsApp channel 

Friday, March 20, 2026

ನುಡಿಮುತ್ತು


ನಿಮ್ಮ ಮನಸ್ಸಿನ ಮೇಲೆ ನಿಮಗೆ ಅಧಿಕಾರವಿದೆ - 

ಹೊರಗಿನ ಘಟನೆಗಳ ಮೇಲೆ ಅಲ್ಲ. 

ಇದನ್ನು ಅರಿತುಕೊಳ್ಳಿ, 

ಮತ್ತು ನೀವು ಶಕ್ತಿಯನ್ನು ಕಂಡುಕೊಳ್ಳುವಿರಿ.🪻

-----------------------------------------------------------------------------------------------------------------------

ರಣಾಂಗಣದಲ್ಲಿ ಸೋತಾಗ ಯುದ್ಧ ಅಂತ್ಯವಾಗುತ್ತದೆ... 

ಜೀವನದಲ್ಲಿ ಸೋತಾಗ ಯುದ್ಧ ಆರಂಭವಾಗುತ್ತದೆ ! 

-----------------------------------------------------------------------------------------------------------------------

ಪುಸ್ತಕಗಳು ಮತ್ತು ಸ್ನೇಹಿತರನ್ನು ಯಾವಾಗಲೂ ಎಚ್ಚರಿಕೆಯಿಂದ ಆರಿಸಿ.

 ಏಕೆಂದರೆ ಪುಸ್ತಕಗಳು ನಮ್ಮ ಆಲೋಚನೆಗಳ ಮೇಲೆ ಪ್ರಭಾವ ಬೀರುತ್ತವೆ.

               ಮತ್ತು   ಸ್ನೇಹಿತರು ನಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತಾರೆ.🪻

-----------------------------------------------------------------------------------------------------------------------

Click here to join WhatsApp channel 

Monday, March 16, 2026

ನುಡಿಮುತ್ತು

 ಹಳೆಯ ನಕ್ಷೆಯನ್ನು ಹಿಡಿದುಕೊಂಡು ನೀವು ಹೊಸ ಪ್ರಪಂಚವನ್ನು ಅನ್ವೇಷಿಸಲು ಎಂದಿಗೂ ಸಾಧ್ಯವಿಲ್ಲ...!




Tuesday, February 24, 2026

ಸೋದರಿ ನಿವೇದಿತಾ

 ಪಾಶ್ಚಾತ್ಯರಿಗೆ ಶಂಕರಾಚಾರ್ಯರಂಥಹ ವ್ಯಕ್ತಿಯೊಬ್ಬರನ್ನು ಊಹಿಸಿಕೊಳ್ಳಲು ಕೂಡ ಕಷ್ಟ. ನಾವು, ಅಂದರೆ ಪಾಶ್ಚಾತ್ಯರು ಅಸ್ಸಿಸಿಯ ಫ್ರಾನ್ಸಿಸ್ಸನ ದೈವಭಕ್ತಿಯನ್ನು ಆಶ್ಚರ್ಯ ಸಂತೋಷದಿಂದ ಸ್ಮರಿಸುತ್ತೇವೆ. ಅಬೆಲ್‌ರಾಡನ ಬುದ್ದಿ ಶಕ್ತಿ, ಮಾರ್ಟಿನ್ ಲೂಥರನ ರಾಜಕೀಯ ದಕ್ಷತೆಯನ್ನು ಕಲ್ಪಿಸಿಕೊಳ್ಳಬಲ್ಲೆವು. ಆದರೆ ಈ ಎಲ್ಲಾ ಗುಣಗಳೂ ಒಂದೇ ಕಡೆ ಸಂಘಟಿತವಾಗಿರುವ ಒಬ್ಬ ವ್ಯಕ್ತಿಯನ್ನು ಯಾರು ತಾನೆ ಊಹಿಸಿಕೊಳ್ಳಬಲ್ಲರು? ಸ್ವಾಮಿ ವಿವೇಕಾನಂದರು ಸಾವಿರದಷ್ಟಾದಾಗ ಒಬ್ಬ ಶಂಕರಚಾರ್ಯರು ಕಾಣುತ್ತಾರೆ.

-ಸೋದರಿ ನಿವೇದಿತಾ

Sunday, November 30, 2025

ನುಡಿಮುತ್ತು


 ಕಲ್ಪನೆಗೆ ಹೂ ವಾದರೇನು.., ಮುಳ್ಳಾದರೇನು ? ಕಲ್ಪಿಸುವವರ ಹೃದಯ ಮೃದುವಾಗಿದ್ದರೆ ಮುಳ್ಳು ಕೂಡ ಮೃದುವಾಗಿ ಹೂವಾಗ ಬಲ್ಲದು 

Friday, November 21, 2025

ಸಿಹಿಸುಳ್ಳು - ಮನದ ಮಾತನ್ನು ದಾಟಿಸಲೊಂದು ತೆಪ್ಪ - ರೋಹಿತ್ ಚಕ್ರತೀರ್ಥ

 


ಕೆ.ಎಸ್. ನರಸಿಂಹಸ್ವಾಮಿಯವರ "ಮೈಸೂರು ಮಲ್ಲಿಗೆ" ಕವನ ಸಂಕಲನದಲ್ಲಿ "ತೌರ ಸುಖದೊಳಗೆನ್ನ.." ಎಂಬೊಂದು ಕವಿತೆ ಇದೆ. ಇದನ್ನು ರತ್ನಮಾಲಾ ಪ್ರಕಾಶ್ ಹಾಡಿದ್ದಾರೆ. ಸಿ. ಅಶ್ವಥ್ ಈ ಕವಿತೆಗೆ ರಾಗ ಸಂಯೋಜಿಸಿದ್ದಾರೆ. ಅದೇಕೋ ಏನೋ, ಹಾಡಿನ ರಾಗ, ಧಾಟಿಗಳು ಈ ಕವಿತೆಯ ಅಂತಃಸತ್ತ್ವವನ್ನು ಕೊಂದುಬಿಟ್ಟಿವೆಯೇನೋ ಅನ್ನಿಸುತ್ತದೆ. ಯಾಕೆಂದರೆ ಇದೊಂದು ಹಾಸ್ಯಕವಿತೆ. ಇಲ್ಲಿನ ಹಾಸ್ಯವು ಸಮುದ್ರದ ತೆರೆಗಳ ಅಬ್ಬರದ ರೀತಿಯದಲ್ಲ; 'ಜೀವವಾಹಿನಿಯೊಂದು ಹರಿಯುತಿದೆ.." ಎಂಬಂಥ ಅಂತರ್ವಾಹಿನಿಯ ರೂಪದ್ದು. ಇದನ್ನು ಅತ್ಯಂತ ಲವಲವಿಕೆಯಿಂದ, ಕೀಟಲೆ ಮಾಡುವಂಥ ಧಾಟಿಯಲ್ಲಿ, ಪರಸ್ಪರ ಕಚಗುಳಿಯಿಟ್ಟು ನಕ್ಕುನಗಿಸುವಂಥ ರಾಗದಲ್ಲಿ ಹಾಡಬೇಕು. ಆದರೆ ಕ್ಯಾಸೆಟ್ಟಿನ ಹಾಡನ್ನು ಕೇಳಿದಾಗ ಯಾವುದೋ ಶೋಕಗೀತೆ ಹಾಡುತ್ತಿದ್ದಾರೆ ಎಂಬ ಭಾವನೆ ಬರುತ್ತದೆ. ಇರಲಿ, ಈ ಕವಿತೆಯಲ್ಲಿ ನಾನು ಹೇಳಹೊರಟಿರುವ ಸಂಗತಿಯನ್ನು ಈಗ ವಿವರಿಸುತ್ತೇನೆ.


ನರಸಿಂಹಸ್ವಾಮಿಯವರ ಈ ಕವಿತೆಯ ಪ್ರಾರಂಭವು ಅತ್ಯಂತ ಚೇತೋಹಾರಿಯಾಗಿದೆ. ಹೆಂಡತಿ ತವರಿಗೆ ಬಂದಿದ್ದಾಳೆ. ಬಹುಶಃ ಕನಿಷ್ಠ ಆರು ತಿಂಗಳಿAದ ಅಲ್ಲೇ ಇದ್ದಾಳೆ. ಅದಕ್ಕೆ ಸಾಕ್ಷಿ ಪದ್ಯದೊಳಗಿಂದಲೇ ಸಿಗುತ್ತದೆ - "ಐದು ತಿಂಗಳ ಕಂದ ನಗುತಲಿಹುದು"! ಅಂದರೆ ಸೀಮಂತದ ಬಳಿಕ ತೌರು ಸೇರಿಕೊಂಡವಳು ಇನ್ನೂ ಗಂಡನ ಮನೆಗೆ ಹೋಗಿಲ್ಲ. ಹೋಗಿಲ್ಲ ಮಾತ್ರವಲ್ಲ, ಕನಿಷ್ಠ ಇನ್ನೊಂದು ತಿಂಗಳು ಹೋಗುವ ಯೋಚನೆಯೂ ಆಕೆಗಿಲ್ಲ. ಯಾಕೆಂದರೆ ಕಾರಣ ಹೇಳುತ್ತಾಳೆ: "ತಾಯಡಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ, ಇನ್ನು ತಂಗಿಯ ಮದುವೆ ತಿಂಗಳಿಹುದು"! ಕೇವಲ ಒಂದು ತಿಂಗಳಲ್ಲಿ ತಂಗಿಯ ಮದುವೆ ಆಗಿಬಿಡುತ್ತದೆ, ಹಾಗಿರುವಾಗ ನಾನು ತೌರನ್ನು ಬಿಟ್ಟು ಬರುವುದು ಹೇಗೆ - ಇದವಳ ಪ್ರಶ್ನೆ. ಆದರೆ ಈ ಸಂಗತಿಯನ್ನು ಹೇಳಿ ಗಂಡನ ಎದೆಯನ್ನು ಘಾಸಿಗೊಳಿಸುವ ಮೊದಲು ಅವಳೊಂದು ಭೂಮಿಕೆ ನಿರ್ಮಿಸುತ್ತಾಳೆ. ಹಗಲು ನಿಮ್ಮ ನೆನಪು ನನ್ನನ್ನು ಹಿಂಡುತ್ತದೆ, ರಾತ್ರಿಯ ಕನಸಿನಲ್ಲಂತೂ ನೀವೇ ನೀವು - ಎಂದು ಹೇಳಿ ಗಂಡನ ಹೃದಯವನ್ನು ತನ್ನ ವಶಕ್ಕೆ ತೆಗೆದುಕೊಂಡುಬಿಡುತ್ತಾಳೆ. ಇದರ ನಂತರ ಬರುವ ಸಾಲು ದಾಂಪತ್ಯದ ಮೇರು ವ್ಯಾಖ್ಯಾನ ಎನ್ನಬಹುದು. ಬೃಂದಾವನದ ಹಣೆಗೆ ಕುಂಕುಮವನ್ನು ಇಡುವಾಗ ಅವಳಿಗೆ ಕಾಣಿಸುವುದು ಶ್ರೀತುಳಸಿ, ಕೃಷ್ಣತುಳಸಿ. ಇದು ಲಕ್ಷ್ಮೀನಾರಾಯಣರ ಪ್ರತೀಕ; ಆದರ್ಶ ದಾಂಪತ್ಯದ ಸಂಕೇತ. ನೀಲಾಂಬರದಲ್ಲಿ ಚಂದಿರನು ಬೆಳಗುವಾಗ, ಅವನ ಪ್ರೀತಿಪಾತ್ರ ಪತ್ನಿಯಾದ ರೋಹಿಣಿಯೂ ಸನ್ನಿಧಿಯಲ್ಲಿ ಬೆಳಗುತ್ತಾಳೆ. ಎಂಥ ಸುಮಧುರ, ಸಮನೋಹರ ಕವಿಸಾಲು! ಇದನ್ನು ಓದುವ ಓದುಗನೇ ಬಿಸಿಗೆ ಕರಗಿದ ಬೆಣ್ಣೆಯಂತೆ ಕರಗಿಹೋಗುವಾಗ ಆ ಪತಿಯಾದರೂ ಕಲ್ಲುಗುಂಡಾಗಿ ಉಳಿದಾನೆ? ಹಾಗೆ ಅವನನ್ನು ಕರಗಿಸಿ ತನ್ನ ಹಿಡಿತಕ್ಕೆ ತೆಗೆದುಕೊಂಡ ಮೇಲೆ ಈ ಹೆಣ್ಣು ತನ್ನ ಸುಳ್ಳಿನ ಸಂಚಿ ಬಿಚ್ಚುತ್ತಾಳೆ. ಐದಾಗಿದೆ, ಇನ್ನೊಂದು ತಿಂಗಳು ಕಳೆದೇ ಬರುವೆನೆಂಬ ಸೂಚನೆ ಕೊಡುತ್ತಾಳೆ. ಆಗ ಗಂಡ "ಒಮ್ಮೆ ತಕ್ಷಣ ರೈಲು ಹತ್ತಿ ಬಂದುಹೋಗಿಬಿಡು" ಎನ್ನುತ್ತಾನೆ ಎಂಬುದೂ ಅವಳಿಗೆ ಗೊತ್ತು. ಆಗ ಹೇಳುತ್ತಾಳೆ: ತಕ್ಷಣ ಹೊರಟುಬರಲು ತಾನೇನೋ ಸಿದ್ಧ. ಆದರೆ ನಾಳೆ ಮಂಗಳವಾರ, ನಾಡಿದ್ದು ನವಮಿ, ಬರುವುದು ಹೇಗೆ? ಅಲ್ಲಿಗೆ ಮತ್ತೂ ಎರಡು ದಿನಗಳ ಮುಂದೂಡಿಕೆ ಆದಂತಾಯಿತು. ಈ ಸೂಚನೆ ಗಂಡನಿಗೆ ಸಿಕ್ಕಿ ಸಿಟ್ಟು ಬರುತ್ತದೆಂಬಷ್ಟರಲ್ಲಿ ಅವಳ ಮುಲಾಮು ತಯಾರಿದೆ: "ಆಮೇಲೆ ನಿಲ್ಲುವೆನೆ ನಾನು ಇಲ್ಲೆ?"


ಈ ಕವಿತೆಯಲ್ಲಿ ಬರುವ ಸಿಹಿಸುಳ್ಳಿಗೆ ಇನ್ನೊಬ್ಬರನ್ನು ಚುಚ್ಚುವ, ಅವರಿಗೆ ಕೇಡು ಬಯಸುವ ದುರುದ್ದೇಶಗಳಿಲ್ಲ. ಆದರೆ ಒಂದು ಸಂದರ್ಭವನ್ನು ಚಾಣಾಕ್ಷತನದಿಂದ ಸಂಭಾಳಿಸುವ, ಮುಗ್ಧವಲ್ಲದ ಒಳ್ಳೆಯತನವಿದೆ. ಹೌದು, ಇದು ಮುಗ್ಧತನವಲ್ಲ. ಹಾಗಂತ ಕಪಟತನವೂ ಅಲ್ಲ. ಇಲ್ಲಿ ಹೆಂಡತಿ ಗಂಡನೊಡನೆ ಆಡಿದ ಮಾತುಗಳು ನಿರುದ್ದಿಶ್ಯವಲ್ಲ, ಹಾಗಂತ ದುರುದ್ದೇಶವಂತೂ ಖಂಡಿತ ಅಲ್ಲ. ಈ ಸಿಹಿಸುಳ್ಳೇ ಇಲ್ಲಿ ಕಾವ್ಯದ ಆಭರಣ.


ಸಿಹಿಸುಳ್ಳುಗಳಿಗೆ ಅನೇಕ ಉದಾಹರಣೆಗಳನ್ನು ಕೊಡಬಹುದು. ಉದಾಹರಣೆಗೆ ಮನೆಯಲ್ಲಿ ಮಗು ಕಾಗದದ ಮೇಲೆ ನಾಲ್ಕು ಗೆರೆ ಗೀಚಿ ನಿಮ್ಮತ್ತ ಚಾಚುತ್ತದೆ. ನೀವು "ಆಹಾ ಎಷ್ಟು ಚೆನ್ನಾಗಿದೆ!" ಎನ್ನುತ್ತೀರಿ. ಅದು ಸುಳ್ಳೆಂಬುದು ನಿಮಗೆ ಗೊತ್ತು; ತನ್ನ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆಯೆಂದು ಮಗು ನಂಬುತ್ತದೆ. ಇಲ್ಲಿ ಸುಳ್ಳುತನದ ನಿಜ ಗೊತ್ತಿದ್ದುದು ಒಬ್ಬರಿಗಷ್ಟೇ; ಇನ್ನೊಬ್ಬರು ಆ ಸುಳ್ಳನೇ ಸತ್ಯವೆಂದು ನಂಬಿದರು. ಇನ್ನೊಂದು ಉದಾಹರಣೆ ನೋಡೋಣ: ಯಾವುದೋ ಸಂದರ್ಭದಲ್ಲಿ ಉಭಯಕುಶಲೋಪರಿ ನಡೆಸುತ್ತ ಒಬ್ಬರು, "ನೀವು ಬೆಂಗಳೂರಿಗೆ ಬಂದರೆ ನಮ್ಮ ಮನೆಗೆ ಬರಲೇಬೇಕು" ಎಂದು ಪ್ರೀತಿಯ ಒತ್ತಾಯ ಹಾಕಿದರೆನ್ನಿ. ಆಗ ಎದುರಿನವರು "ಬರೋಣ, ಖಂಡಿತ ಬರೋಣ. ಮುಂದಿನ ಸಲ ನಿಮ್ಮ ಮನೆಗೆ ಬಂದೇ ಬರುವೆ" ಎನ್ನುತ್ತಾರೆ. ಇಲ್ಲಿ ಸುಳ್ಳಿನ ಸುಳ್ಳುತನ ಇಬ್ಬರಿಗೂ ಗೊತ್ತಿದೆ - ಅವರೇನೂ ಇವರನ್ನು ಮನಃಪೂರ್ವಕವಾಗಿ ಬರಲೇಬೇಕೆಂಬ ಆದೇಶದಂತೆ ಕರೆದೂ ಇಲ್ಲ; ಇವರು ಬರುತ್ತೇನೆಂಬ ಭರವಸೆ ಕೊಟ್ಟರೂ ಬರುವವರೇನೂ ಅಲ್ಲ. ಒಂದು ಶಿಷ್ಟಾಚಾರದಂತೆ ಈ ಸುಳ್ಳಿನ ಮಾತುಕತೆ ನಡೆಯಿತು. ಹಾಗಿದ್ದರೂ ಇಲ್ಲಿ ಸಿಹಿಸುಳ್ಳಿನ ಹಿಂದೆ ಒಂದು ಕಚಗುಳಿ ಇಲ್ಲ, ಮೃದುಹಾಸ್ಯವಿಲ್ಲ, ಪರಸ್ಪರರಿಗೆ ಏನನ್ನೋ ದಾಟಿಸುವ ಸೂಕ್ಷ್ಮವಿಲ್ಲ. ಇಂಥ ನೇರಾನೇರ, ಸರಳ, ಮುಗ್ಧ ಸುಳ್ಳಿನ ಮಾತುಕತೆಗೆ ಹಲವು ಉದಾಹರಣೆಗಳನ್ನು ಸಾಹಿತ್ಯದಿಂದ ಹೆಕ್ಕಿ ಕೊಡಬಹುದು.


ಉದಾಹರಣೆಗೆ, ಸಿಲಪ್ಪದಿಕಾರಮ್ ಕಾವ್ಯದಲ್ಲಿ ಕೋವಲನ್, ಕನ್ನಗಿಗೆ ತಾನು ಸೌಖ್ಯವೆಂಬ ಸಂದೇಶ ಕಳಿಸುತ್ತಾನೆ. ಅವನ ಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲವೆಂದು ಕನ್ನಗಿಗೆ ಗೊತ್ತಿದ್ದರೂ, ಅವಳಿಗೆ ಅದು ಗೊತ್ತೆಂದು ಕೋವಲನಿಗೆ ಗೊತ್ತಿದ್ದರೂ ಅವರಿಬ್ಬರೂ ಈ ಪರಸ್ಪರ ಕ್ಷೇಮಸಮಾಚಾರವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಓ. ಹೆನ್ರಿಯ "ದ ಗಿಫ್ಟ್ ಆಫ್ ಮೆಜಾಯ್" ಎಂಬ ಕತೆಯಲ್ಲಿ ಬರುವ ಜಿಮ್ ಮತ್ತು ಡೆಲ್ಲಾ ಪಾತ್ರಗಳೂ ಅಷ್ಟೆ. ಅವರಿಬ್ಬರೂ ಬಡವರು. ಗಂಡಹೆಂಡತಿಯರಾದ್ದರಿಂದ ತಮ್ಮ ಕುಟುಂಬದ ಬಡತವನ್ನು ಮುಚ್ಚಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಅವರಿಗೇನೂ ಇಲ್ಲ. ಜಿಮ್ ಅವಳಿಗಾಗಿ ಒಂದು ಹೇರ್ ಕ್ಲಿಪ್ಪನ್ನು ಉಡುಗೊರೆಯಾಗಿ ತರುತ್ತಾನೆ - ಅದಕ್ಕಾಗಿ ತನ್ನ ವಾಚನ್ನೇ ಮಾರಬೇಕಾಗಿ ಬರುತ್ತದೆ. ಅವನ ಕೈಗಡಿಯಾರಕ್ಕೆ ಒಂದೊಳ್ಳೆಯ ಚೈನನ್ನು ಅವಳು ಉಡುಗೊರೆಯಾಗಿ ತರುತ್ತಾಳೆ - ತನ್ನ ಆ ಕೇಶರಾಶಿಯನ್ನೇ ಮಾರಿಕೊಂಡು! "ಅಯ್ಯೋ, ನನಗೆ ಉಡುಗೊರೆ ಕೊಡುವುದಕ್ಕಾಗಿ ನಿನ್ನ ಕೂದಲನ್ನೇ ಕತ್ತರಿಸಿಕೊಂಡೆಯಾ? ಎಂದು ಅವನು ಗೋಳಾಡಿದಾಗ ಡೆಲ್ಲಾ "ಬಿಟ್ಹಾಕು! ಆ ಕೂದಲಿಗೇನು! ಕೆಲವೇ ದಿನಗಳಲ್ಲಿ ಕಳೆಯಂತೆ ಬೆಳೆದುಬಿಡುತ್ತೆ" ಎನ್ನುತ್ತಾಳೆ. ಅವಳಾಡಿದ್ದು ತನ್ನನ್ನು ಸಮಾಧಾನಪಡಿಸಲು ಎಂಬುದು ಅವನಿಗೂ ಗೊತ್ತು; ಹಾಗೆ ಹೇಳಿದರೂ ತನ್ನೊಳಗೆ ದುಃಖ ಉಮ್ಮಳಿಸಿಬರುತ್ತಿದೆ ಎಂಬುದು ಆಕೆಗೂ ಗೊತ್ತು. ಟಾಲ್‌ಸ್ಟಾಯ್‌ಯ "ವಾರ್ ಆ್ಯಂಡ್ ಪೀಸ್" ಕೃತಿಯಲ್ಲಿ ರಾಜಕುಮಾರ ಆಂದ್ರೆ ಯುದ್ಧಕ್ಕೆ ಹೊರಟಾಗ ತನ್ನ ಹೆಂಡತಿಗೆ, "ಎಲ್ಲವೂ ಒಳ್ಳೆಯದೇ ಆಗುತ್ತದೆ. ನೀನೇನೂ ಹೆದರಬೇಕಾಗಿಲ್ಲ" ಎನ್ನುವುದಿಲ್ಲವೇ? ಅದೂ ಇಂಥದೇ ಒಂದು ಸಿಹಿಸುಳ್ಳು ಎಂಬುದು ಅವರಿಬ್ಬರಿಗೂ ಗೊತ್ತಿದ್ದ ಸಂಗತಿಯೇ ತಾನೆ? "ಯುದ್ಧದ ಕೊನೆಯಲ್ಲಿ ಎಲ್ಲವೂ ಒಳ್ಳೆಯದೇ ಆಗುತ್ತದೆ" ಎಂದು ಯಾರು ಭಾವಿಸಲು ಸಾಧ್ಯ? ಟಾಗೋರರ "ಪೋಸ್ಟ್ ಮಾಸ್ಟರ್" ಎಂಬ ಕತೆಯಲ್ಲಿ, ಊರು ಬಿಟ್ಟು ಮತ್ತೆಲ್ಲಿಗೋ ಹೋಗಲು ಹೊರಟುನಿಂತ ಅಂಚೆಮಾಸ್ತರರನ್ನು ರತನ್ ಎಂಬ ಹುಡುಗಿ ಕೊನೆಯ ಬಾರಿಗೆಂಬಂತೆ ಭೇಟಿ ಮಾಡುತ್ತಾಳೆ. "ನಾನೆಲ್ಲಿಗೆ ಹೋಗ್ತೀನಿ! ಮತ್ತೆ ಬರ್ತೀನಿ!" ಎಂದು ಹೇಳುವ ಅವನಿಗೆ ಮತ್ತೆ ಬರುವ ಸಾಧ್ಯತೆ ಕ್ಷೀಣವೆಂದು ಗೊತ್ತಿದೆ. ಮತ್ತೆ ಬರ್ತಾನೋ ಇಲ್ಲವೋ ಎಂಬ ಕ್ಷೀಣ ಸಂಶಯವೊಂದು ಈ ಹುಡುಗಿಯೊಳಗೂ ಇದೆ. ಆ ಕ್ಷಣಕ್ಕೆ ಆ ಸುಳ್ಳನ್ನಲ್ಲದೆ ಬೇರೇನು ಹೇಳಲು ಸಾಧ್ಯ?


ಆದರೂ, ಆಗಲೇ ಹೇಳಿದಂತೆ ಈ ಸಿಹಿಸುಳ್ಳುಗಳ ಒಳಗೆ ಪರಸ್ಪರರನ್ನು ನೋಯಿಸಬಾರದೆಂಬ ಎಚ್ಚರದ ಹೊರತಾಗಿ ಕೀಟಲೆಯ ಬುದ್ಧಿ ಇಲ್ಲ; ನವಿರುಹಾಸ್ಯದ ಲೇಪವಿಲ್ಲ. ಸಿಹಿಸುಳ್ಳಿಗೆ ಅಂಥ ಹಾಸ್ಯದ ಲೇಪನ ಕೊಡುವುದರಲ್ಲಿ ಕೆ.ಎಸ್.ನ. ಗಟ್ಟಿಗರು. ಅವರ ಮತ್ತೊಂದು ಕವಿತೆ "ಶಾನುಭೋಗರ ಮಗಳು"ನಲ್ಲಿ ಈ ಹಾಸ್ಯಲೇಪಿತ ಸಿಹಿಸುಳ್ಳೇ ವಸ್ತು. ಶಾನುಭೋಗರ ಮನೆಗೆ ವಧು ನೋಡಲು ಬಂದ ವರನನ್ನು ನೋಡಿ ಶಾನುಭೋಗರ ಮಗಳು ಸೀತೆ ಒಳಕೋಣೆಗೆ ಹೋಗುತ್ತಾಳೆ. ಅವಳ ಅಭಿಪ್ರಾಯ ಕೇಳಲು ಹೋದ ಶಾನುಭೋಗರಿಗೆ ಅವಳು "ವೈದಿಕರ ಮನೆಗಳಲ್ಲಿ ಊಟ ಹೊತ್ತಾಗುವುದು, ನಾನೊಲ್ಲೆ" ಎನ್ನುತ್ತಾಳೆ! (ಇದೆಂಥ ಹಾಸ್ಯಾಸ್ಪದ ಕಾರಣ ಎನ್ನಬೇಡಿ. ೧೨ರ ಎಳವೆಗೆ, ಊಟ ತಡವಾಗುವುದು ಕೂಡ ದೊಡ್ಡ ಕಾರಣವೇ ಅಲ್ಲವೆ?) ಮಗಳ ಮಾತನ್ನು ಕೇಳಿ, ಅವಳ ಇಂಗಿತ ಅರ್ಥಮಾಡಿಕೊಂಡು ನಕ್ಕ ತಂದೆ ಹೊರಬಂದು ವರನ ಕಡೆಯವರಿಗೆ "ಒಳಗೆ ನಂದಾದೀಪ ನಂದಿಹೋಯಿತು" ಎಂದುಬಿಡುತ್ತಾರೆ. ಇದು ಅಪಶಕುನ. ಅಪಶಕುನವನ್ನು ಮೀರಿ ಮದುವೆ ಮಾಡಿಸಿಬಿಡಿ ಎಂದು ಯಾರೂ ಒತ್ತಾಯ ಹಾಕಲಾರರು. ಬಂದ ದಾರಿಗೆ ಸುಂಕವಿಲ್ಲವೆಂದು ವರ ಹೊರಟುಹೋಗುತ್ತಾನೆ. ಹುಡುಗಿ ಹೇಳಿದ್ದು ಒಂದು ಸುಳ್ಳು; ಅದನ್ನು ಅರ್ಥ ಮಾಡಿಕೊಂಡ ತಂದೆ ಹೇಳಿದ್ದು ಇನ್ನೊಂದು ಸುಳ್ಳು! ಆದರೆ ಈ ಸುಳ್ಳಿನಿಂದ ಹುಡುಗಿಯ ಬಾಳು ಉಳಿಯಿತು; ಅವಳೊಳಗಿನ ನಿಜಕಾರಣವೂ ಬದುಕಿಕೊಂಡಿತು; ಮದುವೆಯ ಸಂಬಂಧ ಕೂಡಿಬರಲಿಲ್ಲವೆಂಬುದು ಬಿಟ್ಟರೆ ಆ ಎರಡು ಕುಟುಂಬಗಳ ಸಂಬಂಧವೂ ಕಹಿಗೊಳ್ಳದೆ ಉಳಿಯಿತು. ಒಂದು ಸಿಹಿಸುಳ್ಳಿಂದ ಎಷ್ಟೆಲ್ಲ ಪ್ರಯೋಜನ! ಮರುದಿನ ನೀರಿಗೆ ಹೋದಾಗ ಆ ಹುಡುಗಿ ತನ್ನ ಓರಗೆಯ ಹುಡುಗಿಯರಿಗೆ "ವಧುಪರೀಕ್ಷೆಗೆ ಬಂದಿದ್ದ ಗಂಡು ತನ್ನ ಕೂದಲಿಗಿಂತ ಕಪ್ಪು" ಎಂದು ಹೇಳಿದಳೇನೋ ಹೌದು; ಆದರೆ ಅದೂ ನಿಜಕಾರಣವೆಂದು ಹೇಳುವಂತಿಲ್ಲ! ಹುಡುಗಿಯ ಅಂತರಂಗದ ನಿಜಕಾರಣವೆಂಬುದು ಯಾರಿಗೂ ತಿಳಿಯದಂತೆ ಈ ಎಲ್ಲ ಸುಳ್ಳುಗಳಿಂದ ಮುಚ್ಚಿಹೋಗಿ ಸುರಕ್ಷಿತವಾಯಿತು. ಅಂಥ ಕೆಲವು ಖಾಸಗಿ ಸತ್ಯಗಳನ್ನು ರಕ್ಷಿಸಿಕೊಳ್ಳಲು ಎಷ್ಟೋ ಸಲ ಸಿಹಿಸುಳ್ಳುಗಳನ್ನು ಬಲಿಹಾಕಬೇಕಾಗುತ್ತದೆ!


"ಸತ್ಯವನ್ನು ಹೇಳು, ಪ್ರಿಯವಾದ್ದನ್ನು ಹೇಳು, ಅಪ್ರಿಯವಾದ ಸತ್ಯ ಹೇಳಬೇಡ" ಎಂದರು ಪುರಾತನರು. ಹಾಗೆಯೇ "ಪ್ರಿಯವಾದ ಸುಳ್ಳನ್ನೂ ಹೇಳಬೇಡ. ಇದುವೇ ಸನಾತನಧರ್ಮ" ಎಂದೂ ಆದೇಶಿಸಿದರು. ಆದರೆ ಯಾರಿಗೂ ಕೇಡೆನಿಸದ, ಕೇಡು ಬಯಸದ, ಒಳಿತಾದ್ದನ್ನು ರಕ್ಷಿಸಬಲ್ಲ ಅಂಥ ಸಿಹಿಸುಳ್ಳುಗಳನ್ನು ಹೇಳಬಹುದು. ಹೇಳಬೇಕು ಕೂಡ. ಭಯಹುಟ್ಟಿಸುವ ಕಠೋರ ರೂಪದ ಸತ್ಯದ ದರ್ಶನ, ಸಹವಾಸ ಯಾರಿಗೆ ಬೇಕಾಗಿದೆ?

ಒಂದು ಸಂಕೀರ್ಣ ವಿಷಯದ ಬಗ್ಗೆ ಸರಳವಾಗಿ ತಿಳಿದುಕೊಳ್ಳೋಣ ಬನ್ನಿ! -ರೋಹಿತ್ ಚಕ್ರತೀರ್ಥ

ಇಂದು ಪ್ರಧಾನಿ ಮೋದಿಯವರು ಮಾನ್ಯ ಜನರಿಗೆ ಸಾಮಾನ್ಯವಾಗಿ ಅರ್ಥವಾಗದ ಅಥವಾ ತಲೆಯ ಮೇಲಿಂದ ಹಾರಿಹೋಗುವ ಒಂದು ವಿಷಯದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಮೂರು ಸಂಗತಿಗಳು...