Sunday, April 12, 2026

ಕರಗಿತು ಕಂಪಿನ ಕರ್ಪೂರ... - ಮಹೇಶ ಭಟ್ಟ ಆರ್. ಹಾರ್ಯಾಡಿ


ಮೊನ್ನೆಯ ದಿನ (೧೦.೦೪.೨೬) ಬೆಳಗ್ಗೆ ನಾನು ಕಾಲೇಜಿಗೆ ಸೇರಿಕೊಂಡ ಸ್ವಲ್ಪ ಹೊತ್ತಿನಲ್ಲೇ ನನ್ನ ಶ್ರೀಮತಿ ಕರೆಮಾಡಿ 'ನಾಡೋಜ ಎಸ್. ಆರ್. ರಾಮಸ್ವಾಮಿ ಅವರು ಭೌತಿಕವಾಗಿ ಇನ್ನಿಲ್ಲ ಎಂಬ ಸುದ್ದಿ ಬರುತ್ತಿದೆ' ಎಂದು ಹೇಳಿದಾಗ 'ಕಂಠಃ ಸ್ತಂಭಿತಬಾಷ್ಪವೃತ್ತಿಕಲುಷಃ' ಎಂಬ ಕವಿವಾಣಿಯಂತೆ ಗಂಟಲು ಕಟ್ಟಿತು. 'ತಸ್ಮಾದಪರಿಹಾರ್ಯೇऽರ್ಥೇ ನ ತ್ವಂ ಶೋಚಿತುಮರ್ಹಸಿ' ಎಂಬ ಸಾಲನ್ನು ನೂರಾರು ಬಾರಿ ಹೇಳಿ ನಾಲಗೆಗೆ ಅಭ್ಯಾಸ ಇರಬಹುದು, ಆದರೆ ಹೃದಯಕ್ಕೆ ತಿಳಿದಿರಬೇಕಲ್ಲ! ಭಾವದ ಮುಂದೆ ಬುದ್ಧಿಯ ಹಾರಾಟ ಫಲಿಸುತ್ತದೆಯೇ? 


ಶತಾವಧಾನಿ ಆರ್. ಗಣೇಶರು ಸಲ್ಲಿಸಿದ ಅಂತರಂಗದ ಶ್ರದ್ಧಾಂಜಲಿಯ ಮಾತುಗಳನ್ನು ಕೇಳಿದೆ. ಸರ್ವಶ್ರೀ ಎಸ್. ಸೂರ್ಯಪ್ರಕಾಶ ಪಂಡಿತ್, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಶಶಿಕಿರಣ ಬಿ. ಎನ್., ಮಂಜುನಾಥ ಅಜ್ಜಂಪುರ, ದು. ಗು. ಲಕ್ಷ್ಮಣ, ರಮೇಶ ದೊಡ್ಡಾಪುರ, ನೀಲಕಂಠ ಕುಲಕರ್ಣಿ, ಸುದರ್ಶನ ಮುರಳೀಧರ, ಮಂಜುನಾಥ ಕೊಳ್ಳೇಗಾಲ, ಪು. ರವಿವರ್ಮ ಅವರ ಅನುಭವದ ಮಾತುಗಳನ್ನು ಓದಿದೆ. ರಾಮಸ್ವಾಮಿ ಅವರು ಗೋಖಲೆ ಸಾರ್ವಜನಿಕವಿಚಾರಸಂಸ್ಥೆಗೆ ಮುಖಮಾಡಿ ನಿಂತ ಚಿತ್ರವನ್ನು ಮತ್ತೆ ಮತ್ತೆ ನೋಡಿದೆ. ಮಡುಗಟ್ಟಿದ ಕಣ್ಣೀರು ಕಟ್ಟೆಯೊಡೆಯಿತು. ಏನು ಬರೆಯಲೆಂದು ತೋಚಲಿಲ್ಲ. ಆದರೂ ನನ್ನ ಅನುಭವವನ್ನು ನಾನೇ ಬರೆಯಬೇಕಷ್ಟೆ! ಬರೆದು ಹಗುರಾಗುವ ಪ್ರಯತ್ನ. 


ನನ್ನ ಮನಸ್ಸು ಸರಿ ಸುಮಾರು ೧೮-೨೦ ವರ್ಷಗಳ ಹಿಂದೆ ಹೋಗುತ್ತಿದೆ. ಅಭಿಜ್ಞಾನಪ್ರಕಾಶನದ ಮೂಲಕ ಪರಿಚಿತರಾಗಿ ಆತ್ಮೀಯರಾದ ಎಸ್. ಸೂರ್ಯಪ್ರಕಾಶ ಪಂಡಿತರ ಜೊತೆ ಒಂದು ಸಂಜೆ ಗೋಖಲೆ ಸಾರ್ವಜನಿಕವಿಚಾರಸಂಸ್ಥೆಗೆ ಹೋಗಿದ್ದೆ. ಅಲ್ಲಿ ಮೊದಲ ಬಾರಿಗೆ ಈ ಉನ್ನತ ವ್ಯಕ್ತಿತ್ವವನ್ನು ಕಂಡು ಅಂತಃಕರಣ ಕರಗಿದ ಅನುಭವ. ಪಂಡಿತರು ನನ್ನ ಪರಿಚಯವನ್ನು ರಾಮಸ್ವಾಮಿ ಅವರಿಗೆ ಹೇಳಿದ ಕೂಡಲೇ ನಾನು ಕಾಲಿಗೆರಗಿದೆ. ಬೆನ್ನು ತಟ್ಟಿ ತಮ್ಮ ನಿಡಿದಾದ ತೋಳಿನಿಂದ ನನ್ನ ಭುಜವನ್ನು ಬಳಸಿ ನಿಂತರು. ಬೇರೆ ಬೇರೆ ವಿಷಯಗಳ ಕುರಿತು ಮಾತಿನ ಲಹರಿ ಹರಿದಾಡುತ್ತಿತ್ತು. ಒಮ್ಮೆ ಖಲೀಲ್ ಗಿಬ್ರಾನ್, ಮತ್ತೊಮ್ಮೆ ಚಾರ್ಲ್ಸ್ ಡಿಕನ್ಸ್, ಇನ್ನೊಮ್ಮೆ ಡಿ. ವಿ. ಜಿ. ಮತ್ತು ವಿ. ಸೀತಾರಾಮಯ್ಯ, ಮತ್ತೊಮ್ಮೆ ಆನಂದವರ್ಧನ, ಇನ್ನೊಮ್ಮೆ ಬೆಳ್ಳಾವೆ ನರಹರಿ ಶಾಸ್ತ್ರಿಗಳು, ಮತ್ತೆ ಮನಶ್ಶಾಸ್ತ್ರ, ಪಾಕಶಾಸ್ತ್ರ, ಕ್ರೀಡೆ, ರಾಜಕಾರಣ, ಸಂಗೀತ, ಸಿನೇಮಾ ಹೀಗೆ ಸಾಗುತ್ತಿತ್ತು. ಇನ್ನು ಕೆಲವು ನನಗೆ ಕೇಳಿಯೂ ತಿಳಿಯದ ಫ್ರೆಂಚ್, ಜರ್ಮನ್ ಮೊದಲಾದ ಯಾವುದೋ ವೈದೇಶಿಕಭಾಷೆಯ ಲೇಖಕರ ವಿಚಾರವೂ ಬರುತ್ತಿತ್ತು. ಅವರು ನನಗೆ ಒರಗಿ ನಿಂತಾಗ 'ನಾವಿಬ್ಬರೂ ಒಟ್ಟಿಗೆ ಬಿದ್ದರೆ?' ಎಂದು ಹೆದರಿಕೆ ಆಗುತಿತ್ತು. ಇಷ್ಟೆಲ್ಲ ವಿಷಯಗಳ ಅರಿವು ಸೇರಿ ಈ ಭಾರವಾಯಿತೇನೋ ಎಂಬಂತೆ ಭಾಸವಾಗುತ್ತಿತ್ತು. ಗೋಖಲೆಯ ಉಪನ್ಯಾಸಗಳಲ್ಲಿ ಸ್ವಾಗತ ಮತ್ತು ವಂದನೆ ಸಲ್ಲಿಸುತ್ತಿದ್ದ ಇವರ ಮಾತು ಮುಂದಿನ ಉಪನ್ಯಾಸದ್ರುಮವನ್ನು ತನ್ನೊಳಗೆ ಅಡಗಿಸಿಕೊಂಡ ಬೀಜದಂತಿರುತ್ತಿತ್ತು. ಒಮ್ಮೊಮ್ಮೆ ಅಂದಿನ ಉಪನ್ಯಾಸಕ್ಕಿಂತ ಇವರ ಸ್ವಾಗತವೇ ರೋಚಕ ಎನಿಸುವಷ್ಟು ರಸವತ್ತಾಗಿರುತ್ತಿತ್ತೆನ್ನಿ!


ಇದಾದಮೇಲೆ ಆಗೊಮ್ಮೆ ಈಗೊಮ್ಮೆ ಬೆಂಗಳೂರಿಗೆ ಹೋದಾಗ ಅವರನ್ನು ನೋಡಿದಂತಾಯಿತೆಂದು ರಾಷ್ಟ್ರೋತ್ಥಾನದ ಕಚೇರಿಗೆ ಹೋದದ್ದೂ ಇದೆ. ನನ್ನ ಮದುವೆಯ ಕರೆಯೋಲೆಯನ್ನು ನೀಡಿ ಆಶೀರ್ವಾದ ಪಡೆಯಲು ಅವರ ತಪೋಭೂಮಿಗೆ ಹೋಗಿದ್ದೆ. ಆತ್ಮೀಯವಾಗಿ ಮಾತನಾಡಿ ಅವರ ಕೆಲವು ಪುಸ್ತಕಗಳನ್ನು ನನಗೆ ಉಡುಗೊರೆಯಾಗಿ ಇತ್ತು ಹರಸಿದರು. ಅವರ ಬಳಗದವರು ಬಲ್ಲಂತೆ ಖಡಕ್ ಕಾಫಿಯ ವಿನಿಕೆಯೂ ಆಯಿತು. ಕಷಾಯ, ಚಹಾ ಇತ್ಯಾದಿಗಳಿಗೆ ಒಗ್ಗಿಕೊಂಡ ನಾನು ಕರಾವಳಿಯ ವಾತಾವರಣದಲ್ಲಿ ನನ್ನ ದೇಹಪ್ರಕೃತಿಗೆ ಅನುಗುಣವಾಗಿ ಖಡಕ್ ಕಾಫಿಯಿಂದ ಸ್ವಲ್ಪ ದೂರವೇ. ಆದರೂ ಅವರ 'ಸ್ಟ್ರಾಂಗ್' ವಾತ್ಸಲ್ಯದ ಮುಂದೆ 'ಲೈಟ್' ಎನಿಸಿದ ಆ ಕಾಫಿಯನ್ನು ಹೀರಿದೆ. 


ನನ್ನ ಚಿಕ್ಕಪ್ಪ ಕೀರ್ತಿಶೇಷ ಹಾರ್ಯಾಡಿ ಮಂಜುನಾಥ ಭಟ್ಟರು ಉತ್ಥಾನದಲ್ಲಿ ದಶಕಕ್ಕೂ ಹೆಚ್ಚು ಕಾಲ ರಾಮಸ್ವಾಮಿಗಳ ಒಡನಾಟ ಪಡೆದುಕೊಂಡ ಭಾಗ್ಯವಂತರು. ನಾವು ಒಟ್ಟಿಗೆ ಸೇರಿದಾಗಲೆಲ್ಲ ರಾಮಸ್ವಾಮಿ ಅವರ ವಿಷಯ ಬಂದೇ ಬರುತ್ತಿತ್ತು. ನಮ್ಮ ಚಿಕ್ಕಪ್ಪನಿಗೆ ಅನಾರೋಗ್ಯ ಆದಾಗ ತಮ್ಮ ವಯಸ್ಸು, ದೈಹಿಕ ಬಾಧೆಗಳನ್ನೂ ಲೆಕ್ಕಿಸದೆ ಮಹಡಿಯ ಮೆಟ್ಟಿಲುಗಳನ್ನು ಹತ್ತಿ ಬಂದು ಯೋಗಕ್ಷೇಮ ವಿಚಾರಿಸಿದ ಎತ್ತರದ ವ್ಯಕ್ತಿತ್ವ ರಾಮಸ್ವಾಮಿ ಅವರದು. ಚಿಕ್ಕಪ್ಪ ಭೌತಿಕವಾಗಿ ಇನ್ನಿಲ್ಲವಾದಾಗ ಉತ್ಥಾನಕ್ಕಾಗಿ ನನ್ನಿಂದಲೇ ಶ್ರದ್ಧಾಂಜಲಿಲೇಖನವನ್ನು ಬರೆಸಿದರು. 


ಎಷ್ಟೋ ಬಾರಿ ಅವರ ಜೊತೆಗೊಂದು ಫೋಟೋ ತೆಗೆಸಿಕೊಳ್ಳಬೇಕೆಂದು ಮನಸಾಗುತ್ತಿತ್ತು. ಆದರೆ ಅವರೆದುರು ನಿಂತಾಗ ಮಾತ್ರ ಅದೆಲ್ಲವನ್ನೂ ಮರೆಸುವಷ್ಟು ನಮ್ಮನ್ನು ಆವರಿಸುತ್ತಿದ್ದರು. ಆ ಅನುಭೂತಿಯ ಮುಂದೆ ಇದಾವುದೂ ನೆನಪಿಗೆ ಬರುತ್ತಿರಲಿಲ್ಲ. ಇನ್ನೊಮ್ಮೆ ರಾಮಸ್ವಾಮಿ ಅವರ ಭೇಟಿ ಆದಾಗ ಒಂದು ಫೋಟೋ ತೆಗೆದುಕೊಡಬೇಕು ಎಂದು ಇತ್ತೀಚೆಗೆ ಯಾವಾಗಲೋ ಆತ್ಮೀಯರಾದ ವಿಘ್ನೇಶ್ವರ ಭಟ್ಟರಿಗೆ ಹೇಳಿದ್ದೆ. ಆದರೆ ಆ ದಿನ ಬರಲೇ ಇಲ್ಲ. ಆದರೆ ಅವರು ನನ್ನ ಭುಜ ಬಳಸಿ ನಿಂತ ಚಿತ್ರ ಎಂದಿಗೂ ಸ್ಮೃತಿಪಟಲದಿಂದ ಮಾಸದು. ಅಂತಹ ಒಂದು ಪಾರಿಜಾತದ ಘಮಲನ್ನು ನನ್ನ ಅಂತರಂಗದಲ್ಲಿ ತುಂಬಿಕೊಳ್ಳಲು ಮೊದಲಿಗೆ ಕಾರಣರಾಗಿ ಒದಗಿಬಂದ ಆತ್ಮೀಯರಾದ ಸೂರ್ಯಪ್ರಕಾಶ ಪಂಡಿತರಿಗೆ ನಾನು ಋಣಿ. 


ಮತ್ತೊಮ್ಮೆ ಯಾವಾಗಲೋ ರಾಮಸ್ವಾಮಿ ಅವರು ಉಡುಪಿಗೆ ಬಂದಾಗ ನಮ್ಮ ಎಸ್.ಎಮ್. ಎಸ್. ಪಿ. ಸಂಸ್ಕೃತ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿರುವ ಡಿ. ವಿ. ಜಿ. ಅವರ ಕೈಬರೆಹ ಇದ್ದ ಗೀತಶಾಕುಂತಲ ಪುಸ್ತಕವನ್ನು ತೋರಿಸಿದೆ. ಅದನ್ನು ನೋಡಿ 'ಇದು ಡಿ. ವಿ. ಜಿ. ಅವರ ಕೈಬರೆಹ ಹೌದು. ಅವರು ಎಷ್ಟೋ ಜನರಿಗೆ ಹೀಗೆ ಪುಸ್ತಕಗಳನ್ನು ಕಳುಹಿಸುತ್ತಿದ್ದರು' ಎಂದು ಹೇಳಿದರು. ರಾಮಸ್ವಾಮಿ ಅವರೂ ತಮ್ಮ ಗುರುವಿನಂತೆಯೇ. ಆತ್ಮೀಯ ಮಿತ್ರ ಶಶಿಕಿರಣ ಬಿ. ಎನ್. ಎಷ್ಟೋ ಪುಸ್ತಕಗಳನ್ನು ಕಳುಹಿಸಿದಾಗ ನಾನು ಅದರ ಮೊಬಲಗನ್ನು ಕೊಡುವ ವಿಚಾರ ಕೇಳಿದರೆ 'ನಿಮಗೆ ಕಳುಹಿಸಬೇಕೆಂದು ರಾಮಸ್ವಾಮಿ ಅವರ ಆದೇಶ ಆಗಿದೆ. ಅದರಂತೆ ಕಳುಹಿಸಿದ್ದೇನೆ. ಮತ್ತೇನೂ ನನಗೆ ತಿಳಿದಿಲ್ಲ' ಎಂದಾಗ ನಾನು ಮೂಕನಾಗುತ್ತಿದ್ದೆ. ಇಂತಹ ಸಮಯದಲ್ಲಿ ನಾನು ಅಲ್ಲಿರುವ ಒಂದಷ್ಟು ವಿಷಯಗಳನ್ನು ತಿಳಿದು ನಾಲ್ಕಾರು ಜನರೊಂದಿಗೆ ಹಂಚಿಕೊಂಡರೆ ಋಷಿಋಣನಿರ್ಯಾತನದ ಕಡೆಗೆ ಹೆಜ್ಜೆ ಇರಿಸಿದಂತಾಗುತ್ತದೆ ಎಂಬ ಭಾವ ಬಲವಾಗುತ್ತಿತ್ತು. 


ಹಲವಾರು ಬಾರಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಗ್ರಂಥಾಲಯಕ್ಕೆ ಭೇಟಿ ನೀಡಿ ತಾಸುಗಟ್ಟಲೆ ಕುಳಿತು ಓದಿರುವುದೂ ಇದೆ. ಒಮ್ಮೆ ಹೀಗೆ ಓದುವಾಗ ಮಧ್ಯಾಹ್ನ ಊಟದ ಹೊತ್ತು ಸಮೀಪಿಸಿತು. ಆಗ ಗ್ರಂಥಾಲಯವನ್ನು ನೋಡಿಕೊಳ್ಳುತ್ತಿದ್ದ ಶ್ರೀ ಕೃಷ್ಣಮೂರ್ತಿ ಅವರ ಬಳಿ 'ನೀವು ಊಟ ಮಾಡಿ ಬನ್ನಿ, ನಾನು ಮತ್ತೆ ಬರುತ್ತೇನೆ' ಎಂದೆ. ಆಗ ಅವರು ಆತ್ಮೀಯತೆಯಿಂದ 'ಎಷ್ಟು ಹೊತ್ತು ಬೇಕಿದ್ದರೂ ಇಲ್ಲೇ ಇದ್ದು ಓದಬಹುದು, ಯಾವ ಕಪಾಟನ್ನೂ ನೋಡಬಹುದು. ಯಜಮಾನರು ನಿಮಗೆ ಯಾವ ಪುಸ್ತಕ ಬೇಕಾದರೂ ಒದಗಿಸಲು ಹೇಳಿದ್ದಾರೆ' ಎಂದರು. ಎರಡು-ಮೂರು ದಿನಗಳಿಂದ ಬಂದು ಓದುತ್ತಿದ್ದುದನ್ನು ಅದು ಹೇಗೋ ಗಮನಿಸಿಕೊಂಡು ನಾನಾಗಿ ಕೇಳದೆ ಇದ್ದರೂ ಈ ವ್ಯವಸ್ಥೆಯನ್ನು ಕಲ್ಪಿಸಿದ ರಾಮಸ್ವಾಮಿ ಅವರ ಪ್ರೀತಿಗೆ ಏನೆನ್ನಲಿ?!


ಕೊನೆಯದಾಗಿ ರಾಮಸ್ವಾಮಿ ಅವರನ್ನು ನಾನು ನೋಡಿದ್ದು ವಿದ್ವಾಂಸರಾದ ಎಚ್. ವಿ. ನಾಗರಾಜ ರಾಯರ ಅಭಿವಂದನಸಮಾರಂಭದಲ್ಲಿ. ಅಂದು ನಾನು 'ಕನ್ನಡದಲ್ಲಿ ರಾಯರ ಅನೂದಿತ ಕೃತಿಗಳು ಮತ್ತು ಸ್ವತಂತ್ರ ಕೃತಿಗಳು' ಎಂಬ ವಿಷಯದ ಮೇಲೆ ಮಾತನಾಡಿದೆ. ರಾಮಸ್ವಾಮಿ ಅವರು ಎದುರು ಸಾಲಿನಲ್ಲಿ ಕುಳಿತು ಕೇಳುತ್ತಿದ್ದರೆ ನನಗೆ ರೋಮಾಂಚನ. ವೈಯಾಕರಣಶಿರೋಮಣಿ ಚಾರುದೇವ ಶಾಸ್ತ್ರಿಗಳು ಹೇಳಿದ ಅನುವಾದದ ಲಕ್ಷಣವನ್ನು ನಾನು ಉಲ್ಲೇಖಿಸುತ್ತಿದ್ದಂತೆ ತಲೆದೂಗಿ ತೋರಿದ ಮುಗುಳ್ನಗು ಮತ್ತು ಕಂಗಳಲ್ಲಿ ಕಾಣಿಸಿದ ಹೊಳಪು ನನ್ನ ಮನಃಪಟಲದಿಂದ ಇನ್ನೂ ಮಾಸಿಲ್ಲ. ಆ ವಯಸ್ಸಿನಲ್ಲೂ ಇರುವ ಅಂತಹ ಅಕ್ಷರಪ್ರೀತಿ ಅಚ್ಚರಿಯೇ ಸರಿ! ಕಾರ್ಯಕ್ರಮ ಮುಗಿಸಿ ಹೊರಬರುತ್ತಿದ್ದಂತೆ ಸಿಕ್ಕು 'ಒಟ್ಟಾರೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯಿತು. ನಿಮ್ಮ ವಿಷಯನಿರೂಪಣೆ ಚೆನ್ನಾಗಿತ್ತು' ಎಂದರು. ಇದಕ್ಕಿಂತ ದೊಡ್ಡ ಸಂತೃಪ್ತಿಯ ವಿಷಯ ಏನಿದೆ ನನಗೆ?! ಗೋಖಲೆಯಲ್ಲಿ ನಡೆದ ನನ್ನ ಉಪನ್ಯಾಸ, ಅವಧಾನಗಳ ಮೇಲೂ ಇದೇ ಆಸ್ಥೆ ಅವರಿಗಿತ್ತು ಎಂದು ನನ್ನ ಚಿಕ್ಕಪ್ಪನಿಂದ ನನಗೆ ತಿಳಿಯುತ್ತಿತ್ತು. ಇಂತಹ ಮಹನೀಯರ ಕಣ್ಗಾಪಿನಲ್ಲಿ ಬರೆಯಲು, ಮಾತನಾಡಲು ತಿಲದಷ್ಟಾದರೂ ಅವಕಾಶವಾಯಿತು ಎನ್ನುವುದೇ ಒಂದು ಧನ್ಯತೆಯ ವಿಷಯ. ಯಾಕೆಂದರೆ ನಾವು ತಪ್ಪಿದರೆ ಅವರು ತಿದ್ದಿ ಕೈಹಿಡಿದು ಮುನ್ನಡೆಸುತ್ತಾರೆ ಎಂಬ ಧೈರ್ಯ.


ಮಾನ್ಯ ಡಿವಿಜಿಯವರಂತೆ ಇವರೂ ಕೂಡ ಬರೆದ ಸೊಗಸಾದ ವ್ಯಕ್ತಿಚಿತ್ರಗಳು ನನಗೆ ಬಹಳ ಇಷ್ಟ. ಇಂತಹ ಮಹನೀಯರ ಸೇವೆಯನ್ನು ಯಾವುದಾದರೂ ರೂಪದಲ್ಲಿ ಮಾಡಿದರೆ ಅದು ಆತ್ಮೋನ್ನತಿಗೆ ದಾರಿಯಾಗುತ್ತದೆ ಎಂಬ ಚಿಂತನೆ ನನಗೆ ಇತ್ತಾದರೂ ಅವರಿಂದ ಎಲ್ಲೋ ದೂರದಲ್ಲಿ ಇರುವ ನಾನು ಅದನ್ನು ಹೇಗೆ ಮಾಡಿಯೇನು ಎಂಬ ಯೋಚನೆ ಕಾಡುತ್ತಿತ್ತು. ಒಮ್ಮೆ ಸೂರ್ಯಪ್ರಕಾಶ ಪಂಡಿತರು 'ರಾಮಸ್ವಾಮಿ ಅವರ ಮಹಾಭಾರತದ ಬೆಳವಣಿಗೆ/ಮಹಾಭಾರತ ಬೆಳೆದ ಬಗೆ ಎಂಬ ಪುಸ್ತಕವನ್ನು ಪುನರ್ಮುದ್ರಣ ಮಾಡಬೇಕು. ಒಮ್ಮೆ ಕರಡಚ್ಚನ್ನು ನೋಡುವ ಕೆಲಸ ಆಗಬೇಕು' ಎಂದರು. ಇದೇ ಸರಿಯಾದ ಅವಕಾಶ ಎಂದು ತಿಳಿದು ಶ್ರದ್ಧೆಯಿಂದ ಆ ಕೆಲಸವನ್ನು ಮಾಡಿದೆ. ಪಂಡಿತರು ಅಭಿಜ್ಞಾನದ ಗೆಳೆಯರೊಂದಿಗೆ ರಾಮಸ್ವಾಮಿ ಅವರು ಇದ್ದಲ್ಲಿಗೆ ತೆರಳಿ ಅವರ ಕರಕಮಲಗಳಿಂದಲೇ ಸರಳವಾಗಿ ಅದನ್ನು ಬಿಡುಗಡೆ ಮಾಡಿಸಿದರು. ಅದಾಗಿ ಸ್ವಲ್ಪ ಸಮಯ ಕಳೆದ ಬಳಿಕ ಗೋಖಲೆಯಲ್ಲಿ ನಡೆದ ನಮ್ಮದೇ ಅಭಿಜ್ಞಾನಸಂಸ್ಥೆಯ ಕಾರ್ಯಕ್ರಮವೊಂದಕ್ಕೆ ರಾಮಸ್ವಾಮಿ ಅವರು ಬಂದಿದ್ದರು. ಕಾರ್ಯಕ್ರಮ ಮುಗಿದ ಮೇಲೆ ಒಬ್ಬರು ಬಂದು (ಯಾರೆಂದು ನೆನಪಾಗುತ್ತಿಲ್ಲ) 'ಪಂಡಿತರು ರಾಮಸ್ವಾಮಿಗಳ ಜೊತೆಗಿದ್ದಾರೆ. ನಿಮ್ಮನ್ನು ಕರೆಯುತ್ತಿದ್ದಾರೆ' ಎಂದರು. ನಾನು ಅವರಿದ್ದಲ್ಲಿಗೆ ಹೋದೆ. ಆಗ ಅಲ್ಲಿ ಇನ್ನೊಬ್ಬರು ಮಾತನಾಡುತ್ತಿದ್ದರು. ಅವರ ಮಾತು ಮುಗಿದ ಮೇಲೆ ನಾನು ಕಾಲಿಗೆರಗಿದೆ. ಹರಸಿದರು, ಬೆನ್ನು ನೇವರಿಸಿ ಹೊರಟರು. ನಾನು ಕರಡಚ್ಚನ್ನು ತಿದ್ದಿರುವ ಕೆಲಸ ಅವರಿಗೆ ತೃಪ್ತಿ ಆಗಿದ್ದರೆ ಅದು ನನ್ನ ಪುಣ್ಯ. ಅದು ಅವರಿಗೆ ತಿಳಿದಿದೆಯೋ ಇಲ್ಲವೋ ನಾನರಿಯೆ. ಆದರೆ ಅವರ ಹಸ್ತಾಕ್ಷರ ಇರುವ 'ಮಹಾಭಾರತದ ಬೆಳೆದ ಬಗೆ' ಪುಸ್ತಕವನ್ನು ಅವರದೇ ಕೈಗಳಿಂದ ಪಡೆಯಬೇಕೆಂಬ ಕನಸು ಕನಸಾಗಿಯೇ ಉಳಿಯಿತು!


ಯುಗವೊಂದು ಮುಗಿದಂತೆ ಭಾಸವಾಗುತ್ತಿದೆ. ಕೆಲವರ ಅಗಲಿಕೆ ಅಂತಹ ಭಾವವನ್ನು ಉಂಟುಮಾಡುತ್ತದೆ. ಮನೆಯ ಹಿರಿಯಜ್ಜನನ್ನು ಕಳೆದುಕೊಂಡ ಭಾವ. ರಘುವಂಶದ ಎಂಟನೆಯ ಸರ್ಗದಲ್ಲಿ ಅಜಮಹಾರಾಜನ ಆಳ್ವಿಕೆಯನ್ನು ಕೊಂಡಾಡುವ ಒಂದು ಪದ್ಯ ಬರುತ್ತದೆ. 'ಅಹಮೇವ ಮತೋ ಮಹೀಪತೇರಿತಿ ಸರ್ವಃ ಪ್ರಕೃತಿಷ್ವಚಿಂತಯತ್ | ಉದಧೇರಿವ ನಿಮ್ನಗಾಶತೇಷ್ವಭವನ್ನಾಸ್ಯ ವಿಮಾನನಾ ಕ್ವಚಿತ್||' ಪ್ರಜೆಗಳಲ್ಲಿ ಎಲ್ಲರೂ ಕೂಡ 'ಅಜಮಹಾರಾಜನಿಗೆ ನಾನೇ ಇಷ್ಟನಾದವನು' ಎಂದು ಭಾವಿಸುತ್ತಿದ್ದರು. ಅವನು ನೂರಾರು ನದಿಗಳಿಗೆ ಸಮುದ್ರದಂತೆ ಇದ್ದನು, ಯಾರನ್ನೂ ನಿರಾಕರಿಸುತ್ತಿರಲಿಲ್ಲ. ಈ ಮಾತು ರಾಮಸ್ವಾಮಿ ಅವರಿಗೂ ಅನ್ವಯಿಸುತ್ತದೆ. ರಾಮಸ್ವಾಮಿ ಅವರ ಬಳಕೆಗೆ ಬಂದ ಯಾರನ್ನು ಕೇಳಿದರೂ 'ಅವರಿಗೆ ನಾನೆಂದರೆ ಪ್ರೀತಿ' ಎನ್ನುತ್ತಾರೆ. ಪ್ರತಿಯೊಬ್ಬರಿಗೂ ಆ ಭಾವ ಮೂಡಬೇಕಾದರೆ ಎಲ್ಲರನ್ನೂ ಅದೆಷ್ಟು ಪ್ರೀತಿಸುತ್ತಿದ್ದರು ಎಂಬುದು ಮನದಟ್ಟಾಗುತ್ತದೆ. ರಾಮಸ್ವಾಮಿ ಅವರು ಪಚ್ಚೆಕರ್ಪೂರದಂತೆ. ತೀರ್ಥದಲ್ಲಿ ಕರಗಿದ ಮಾತ್ರಕ್ಕೆ ಪಚ್ಚೆಕರ್ಪೂರ ಇಲ್ಲ ಎನ್ನಲಾಗುತ್ತದೆಯೇ? ಸವಿಯನ್ನು, ತಂಪನ್ನು, ಕಂಪನ್ನು ಸೊಂಪಾಗಿ ತುಂಬುವ ಇಂತಹ ಪಚ್ಚೆಕರ್ಪೂರಗಳ ಸಮಾಯೋಗದಿಂದಲೇ ತಾನೇ ಸನಾತನಸಂಸ್ಕೃತಿತೀರ್ಥವು ಸದಾಕಾಲ ಸಕಲರಿಗೂ ಸ್ವಾದ್ಯವೆನಿಸಿರುವುದು. ಅಂತಹ ಪಾವನತೀರ್ಥದ ನಾಲ್ಕಾರು ಹನಿಗಳು ನಮ್ಮನ್ನೂ ಸೋಕಲಿ‌.


ರಾಮಸ್ವಾಮಿ ಅವರು ಕನ್ನಡದಲ್ಲಿ ಆಯಾ ಪ್ರಸಂಗಕ್ಕೆ ಬೇಕಾಗುವಂತೆ ಪದಗಳನ್ನು ಟಂಕಿಸುತ್ತಿದ್ದ ರೀತಿ, ಹಳೆಯ ವಿಶಿಷ್ಟ ಪದಗಳನ್ನು ತಮ್ಮ ಬರೆವಣಿಗೆಯಲ್ಲೋ, ಮಾತಿನಲ್ಲೋ ಬಳಸಿ ಭಾಷೆಯಲ್ಲಿ ಅದನ್ನು ಉರ್ಜಿತಗೊಳಿಸುತ್ತಿದ್ದ ರೀತಿ ಅನನ್ಯ. ಅವರಂತೆ ಯಾವುದೇ ವಿಷಯದ ಆಳ-ಅಗಲ ಎರಡನ್ನೂ ಅರಿತ ವಿದ್ವಾಂಸರು ವಿರಳ. ಅವರ ವಿಚಾರಲಹರಿ ಅನ್ನಮಯಕೋಶದಿಂದ ಆನಂದಮಯಕೋಶದ ತನಕ ಹರವಿಕೊಂಡಿದೆ. ಅದಕ್ಕೆ ದೇಶ, ಕಾಲ, ಭಾಷೆಗಳ ಹಂಗಿಲ್ಲ. ಅವರ ಬರೆವಣಿಗೆ ಎಷ್ಟು ಮಿಗಿಲೋ, ಬಾಳಿನ ಆದರ್ಶ ಅದಕ್ಕಿಂತಲೂ ಮಿಗಿಲು. ತಮ್ಮ ಗುರುಪಂಕ್ತಿಯ ಮಾನ್ಯ ಡಿ. ವಿ. ಗುಂಡಪ್ಪನವರ 'ನಮ್ಮ ಪಾಲಿಗೆ ಬಂದ ಜಗದ್ಭಾಗವನ್ನು ಸ್ವೋಪಭೋಗಸಾಮಗ್ರಿ ಎಂದುಕೊಳ್ಳದೆ ಈಶ್ವರನಿರಿಸಿದ ನ್ಯಾಸವಸ್ತುವೆಂದು ಭಾವಿಸಿ ಪಾಲಿಸುವುದು' ಎನ್ನುವ ಮಾತನ್ನು ಉಸಿರಾಡಿದ, ಲೋಕಸಂಗ್ರಹದ ಸಾಕಾರಮೂರ್ತಿ ಮಾನ್ಯ ಎಸ್. ಆರ್. ರಾಮಸ್ವಾಮಿ ಅವರ ಜೀವಿತವಿಭೂತಿಗೆ ತಲೆಬಾಗಿ ವಂದಿಸುವೆ. ಆಗಲಾದರೂ ಅವರು ಮತ್ತೊಮ್ಮೆ ಬಂದು ವಾತ್ಸಲ್ಯ ತುಂಬಿ ತೂಗಿ ತೊನೆಯುವ ಭಾರವಾದ ತಮ್ಮ ತೋಳಿನಿಂದ ನನ್ನ ಭುಜವನ್ನೊಮ್ಮೆ ಬಳಸಿ ನಿಲ್ಲುವರೇ? ಇದೊಂದು ನಿರುತ್ತರ ಪ್ರಶ್ನಮಾರ್ಗ!


* ಮಹೇಶ ಭಟ್ಟ ಆರ್. ಹಾರ್ಯಾಡಿ

. ಎಸ್ ಆರ್ ರಾಮಸ್ವಾಮಿ ಅವರಿಗೆ ಶ್ರದ್ಧಾಂಜಲಿ - ಎಸ್‌. ಸೂರ್ಯಪ್ರಕಾಶ ಪಂಡಿತ್

 


ಇಂದು ನಮ್ಮನ್ನು ಭೌತಿಕವಾಗಿ ಅಗಲಿದ ಎಸ್‌. ಆರ್. ರಾಮಸ್ವಾಮಿಯವರು ನನ್ನ ಗುರುಗಳು; ಪತ್ರಕರ್ತನಾಗಿ ಅವರಿಂದಲೇ ನಾನು ಮೊದಲ ಪಾಠಗಳನ್ನು ಕಲಿತದ್ದು; ಎಡಿಟಿಂಗ್, ಅನುವಾದ – ಇಂಥ ಹಲವು ವಿಷಯಗಳ ಸೂಕ್ಷ್ಮವಾದ ಮರ್ಮಗಳನ್ನು ಅವರು ಕಲಿಸಿದರು. ಆದರೆ ಯಾವುದನ್ನೂ ಪ್ರತ್ಯಕ್ಷವಾಗಿ ಅಲ್ಲ, ಪರೋಕ್ಷರೂಪದಲ್ಲಿ. ದೇವತೆಗಳು ಪರೋಕ್ಷಪ್ರಿಯರಂತೆ! ಹೌದು, ರಾಮಸ್ವಾಮಿಯವರೂ ಒಂದು ವಿಧದಲ್ಲಿ ‘ದೇವಮಾನವ’!! ನನ್ನ ಪುಣ್ಯವಿಶೇಷ ಎಂದರೆ ರಾಮಸ್ವಾಮಿಯವರು ಪತ್ರಕರ್ತರಾಗಿ ಕರ್ತವ್ಯವನ್ನು ನಿರ್ವಹಿಸಿದ ಸಂಸ್ಥೆಯಲ್ಲಿಯೇ ನಾನು ಕೂಡ ಪತ್ರಕರ್ತನಾದುದು.


ರಾಮಸ್ವಾಮಿಯವರ ಬಗ್ಗೆ ಸಾಕಷ್ಟು ಬರೆದಿರುವೆ, ಮಾತನಾಡಿರುವೆ. ಆದರೂ ಇನ್ನೂ ಮಾತನಾಡುವುದಕ್ಕೂ ಬರೆಯುವುದಕ್ಕೂ ಸಾಕಷ್ಟು ಸಂಗತಿಗಳು ಇವೆ; ಆದರೆ ಸದ್ಯಕ್ಕೆ ಇಂದು ಅದನ್ನೆಲ್ಲ ಬರೆಯಲು ಆಗುತ್ತಿಲ್ಲವಷ್ಟೆ.


ರಾಮಸ್ವಾಮಿಯವರನ್ನು ಮೊದಲು ನೇರವಾಗಿ ನೋಡಿದ್ದು 1994ರಲ್ಲಿ, ಶಂಕರಮಠದಲ್ಲಿ. ಶತಾವಧಾನಿ ಆರ್‌. ಗಣೇಶ್‌ ಅವರೇ ಅವರನ್ನು ಮೊದಲು ನನಗೆ ಕಾಣಿಸಿದ್ದು.


ರಾಮಸ್ವಾಮಿಯವರು ಪತ್ರಕರ್ತ ಮಾತ್ರವಲ್ಲ, ದೊಡ್ಡ ವಿದ್ವಾಂಸರು ಕೂಡ. ಅವರ ಮನೆತನವೇ ವಿದ್ವಾಂಸರ ಮನೆತನ. ಸಂಸ್ಕೃತವ್ಯಾಕರಣವನ್ನೂ ವೇದಾಂತವನ್ನೂ ಸಾಂಪ್ರದಾಯಿಕ ವಿಧಾನದಲ್ಲಿಯೇ ಕಲಿತಿದ್ದರು. ಮಾಗಡಿ ಲಕ್ಷ್ಮೀನರಸಿಂಹಶಾಸ್ತ್ರಿ, ಎನ್‌. ರಂಗನಾಥಶರ್ಮಾ ಅವರಂಥ ವಿದ್ವಾಂಸರಲ್ಲಿ ಅವರಿಗೆ ಪಾಠವಾಗಿದ್ದಿತು. ಇನ್ನು ಡಿವಿಜಿ ಅವರಂಥ ‘ವಿರಕ್ತರಾಷ್ಟ್ರಕ’ರ ಗರಡಿಯಲ್ಲಿ ನಿತ್ಯವೂ ಸಾಹಿತ್ಯ, ಸಂಸ್ಕೃತಿ, ಸಾರ್ವಜನಿಕ ವಿಚಾರಗಳ ಸಾಮು. ಸಿ. ವಿ. ರಾಮನ್‌, ರೋರಿಚ್‌ರಂಥ ಹಲವರು ಸ್ವನಾಮಧನ್ಯರ ಸಂಪರ್ಕವೂ ಇತ್ತು ಅವರಿಗೆ. ರಾಮಸ್ವಾಮಿಯವರ ಅಣ್ಣ ಕೂಡ ದೊಡ್ಡ ಪತ್ರಕರ್ತರಾಗಿದ್ದರು. ಸಾಮಾನ್ಯವಾಗಿ ಪತ್ರಕರ್ತರು – ನಮ್ಮ ಕಾಲದವರು – ಅಧ್ಯಯನಶೀಲರಲ್ಲ ಎಂಬ ಅಭಿಪ್ರಾಯ ಜನಜನಿತವಾಗಿದೆ. ರಾಮಸ್ವಾಮಿ ಅವರು ಇದಕ್ಕೆ ಅಪವಾದ; ಅಧ್ಯಯನಶೀಲತೆಯ ಇನ್ನೊಂದು ರೂಪವೇ ರಾಮಸ್ವಾಮಿಗಳು ಎಂದರೆ ಈ ಮಾತೇನೂ ಅತ್ಯುಕ್ತಿಯಾಗದು.


ರಾಮಸ್ವಾಮಿಯವರಂಥ ವಿದ್ವಾಂಸರು ನಮಗೆ ಎಂದಾದರೂ ಸಿಕ್ಕಿಯಾರು; ಅವರಂಥ ಪತ್ರಕರ್ತರೂ ಮುಂದೆಮ್ಮೊ ಸಿಕ್ಕಿಯಾರು. ಆದರೆ ಅವರಂಥ ಅಂತಃಕರಣವುಳ್ಳ ವ್ಯಕ್ತಿಗಳು ಸಿಕ್ಕಿಯಾರೆ – ಎಂಬುದು ಅನುಮಾನ. ಎಷ್ಟೊಂದು ಜನರಿಗೆ ಅವರು ‘ಮಾತೃವಾತ್ಸಲ್ಯ’ದಂಥ ಶುದ್ಧಪ್ರೀತಿಯನ್ನು ಉಣಬಡಿಸುತ್ತಿದ್ದರು – ಎಂಬುದನ್ನು ಯೋಚಿಸಿದಾಗ, ‘ಒಬ್ಬ ವ್ಯಕ್ತಿ ಇಷ್ಟೊಂದು ಜನರನ್ನು ಪ್ರೀತಿಸಲು ಸಾಧ್ಯವೆ’ ಎನಿಸುತ್ತದೆ. ಅದೂ ಜಾತಿ, ಮತ, ವಿದ್ಯೆ, ಅಂತಸ್ತುಗಳ ಎಣಿಕೆಗೆ ಆಸ್ಪದವಿಲ್ಲದೆ!


ಇತ್ತೀಚಿಗೆ ನನ್ನ ಜೀವನದಲ್ಲಿ ನಡೆದ ಘಟನೆಯೊಂದನ್ನೇ ಇಲ್ಲಿ ಉಲ್ಲೇಖಿಸಬಹುದು.


ನನ್ನ ತಾಯಿಯವರ ಅಂತಿಮ ವಿಧಿ–ವಿಧಾನಗಳು ನಡೆದ ದಿನ ಅಷ್ಟೂ ಹೊತ್ತು ರಾಮಸ್ವಾಮಿಯವರು ರುದ್ರಭೂಮಿಯಲ್ಲಿದ್ದು, ಅಂದಿನ ಎಲ್ಲ ಸಂಸ್ಕಾರಗಳು ಮುಗಿದ ಮೇಲೆ ಸಾಂತ್ವನವನ್ನು ಹೇಳಿಹೊರಟರು. ಅಷ್ಟು ಹೊತ್ತು ಒಂದೆಡೆ ಕುಳಿತುಕೊಳ್ಳಲೂ ಅವರಿಗೆ ಕಷ್ಟವಾಗಿದ್ದ ಸಮಯ ಅದು; ಆದರೂ ಅವರು ಬಂದರು, ಕೊನೆ ತನಕ ಇದ್ದರು. ಅವರ ಆರೋಗ್ಯಪರಿಸ್ಥಿತಿಯನ್ನು ನೋಡಿ ಅವರನ್ನು ತಾಯಿಯವರ ವೈಕುಂಠಸಮಾರಾಧನೆಗೆ ಕರೆಯುವ ಧೈರ್ಯವನ್ನು ಮಾಡಲಿಲ್ಲ. ‘ಕರೆಯುವುದು ಬೇಡ; ಕರೆದರೆ ಬರುತ್ತಾರೆ; ಬಂದರೆ ಕಷ್ಟ ಪಡುತ್ತಾರೆ‘ – ಎಂಬುದು ನನ್ನ ಕಾಳಜಿ. ಆದರೆ ರಾಮಸ್ವಾಮಿಯವರು ವೈಕುಂಠಸಮಾರಾಧನೆಯ ದಿನ ಬಂದೇ ಬಂದರು; ಕೊನೆ ತನಕ ಇದ್ದರು; ಹತ್ತಿರದ ಬಂಧುಗಳು ಕೊಡುವ ‘ಶುಭವಸ್ತ್ರ’ವನ್ನೂ ಕೊಟ್ಟರು; ‘ಇನ್ನು ಎಲ್ಲವೂ ಶುಭವಾಗಲಿ’ ಎಂದು ಹರಸಿದರು. ಇದು ರಾಮಸ್ವಾಮಿಗಳು. ಇದು ರಾಮಸ್ವಾಮಿಗಳಂಥವರಿಗೆ ಮಾತ್ರ ಸಾಧ್ಯ. ಇಂದಿನ ದಿನಗಳಲ್ಲಿ ಜನರು ಕರೆದರೆ ಬರುವುದೇ ಕಷ್ಟ. ಹೀಗಿರುವಾಗ ‘ಈ ಸಮಯದಲ್ಲಿ ನಾನು ಅಲ್ಲಿ ಇರಬೇಕಾದ್ದು ನನ್ನ ಧರ್ಮ; ಕರ್ತವ್ಯ’ ಎಂದು ಮನೆಯ ‘ದೊಡ್ಡವರಾಗಿ’ ಯೋಚಿಸಿ ಬಂದವರು ರಾಮಸ್ವಾಮಿಯವರು. ದಿಟವಾದ ಬಂಧುತ್ವ ಎಂದರೆ ಇದೇ ಅಲ್ಲವೆ? ರಕ್ತಸಂಬಂಧಕ್ಕೂ ಮೀರಿದ್ದು ಈ ಭಾವಸಂಬಂಧ. ಈ ಬಂಧದ ಸೂತ್ರ ಇರುವುದು ಇಲ್ಲಿ, ಈ ಲೋಕದ ಪ್ರತ್ಯಕ್ಷಪ್ರಮಾಣದಲ್ಲಿ ಅಲ್ಲ, ಆ ಲೋಕದ ಪರೋಕ್ಷಸ್ವರೂಪದಲ್ಲಿ. ಆತ್ಮಬಂಧುಗಳಿಗೆ ಶರೀರಸಂಬಂಧದ ಹಂಗು ಇರದು; ಯಾವ ಕಾಲಕ್ಕೂ ನಮ್ಮ ಒಡಲಿಗೆ ಒಳಿತನ್ನು ಒದಗಿಸಬಲ್ಲ ಶುದ್ಧ ಚೈತನ್ಯವೊಂದೇ ಸಂಬಂಧದ ಬೆಸುಗೆಗೆ ಸಾಕಾಗಿರುತ್ತದೆ. ಈ ಚೈತನ್ಯವಸ್ತುವನ್ನೇ ಲೋಕವ್ಯವಹಾರದಲ್ಲಿ ‘ಪ್ರೀತಿ’ ಎಂದು ವ್ಯವಹರಿಸುತ್ತಿರುತ್ತವೆ. ರಾಮಸ್ವಾಮಿಯವರ ಪ್ರೀತಿಯ ಆಳ ಕಡಲಿನಷ್ಟು; ಎತ್ತರ ಪರ್ವತದಷ್ಟು....


– ಎಸ್‌. ಸೂರ್ಯಪ್ರಕಾಶ ಪಂಡಿತ್

Tuesday, April 7, 2026

ಒಂದು ಸಂಕೀರ್ಣ ವಿಷಯದ ಬಗ್ಗೆ ಸರಳವಾಗಿ ತಿಳಿದುಕೊಳ್ಳೋಣ ಬನ್ನಿ! -ರೋಹಿತ್ ಚಕ್ರತೀರ್ಥ


ಇಂದು ಪ್ರಧಾನಿ ಮೋದಿಯವರು ಮಾನ್ಯ ಜನರಿಗೆ ಸಾಮಾನ್ಯವಾಗಿ ಅರ್ಥವಾಗದ ಅಥವಾ ತಲೆಯ ಮೇಲಿಂದ ಹಾರಿಹೋಗುವ ಒಂದು ವಿಷಯದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಮೂರು ಸಂಗತಿಗಳು ಬಹುಶಃ ಹೆಚ್ಚಿನವರಿಗೆ ಹೊಸತು: ಫಾಸ್ಟ್ ಬ್ರೀಡರ್ ರಿಯಾಕ್ಟರ್, ಕ್ರಿಟಿಕಾಲಿಟಿ ಮತ್ತು ಥೋರಿಯಂ. ಇದು ಭಾರತದ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಬಹುದೊಡ್ಡ ಜಿಗಿತ ಎಂಬಂತೆಯೂ ಪ್ರಧಾನಿಯವರು ಬರೆದಿದ್ದಾರೆ. ಆದರೆ ಏನು ಈ ಜಿಗಿತ, ಭಾರತ ಎಲ್ಲಿಂದ ಎಲ್ಲಿಯವರೆಗೆ ಜಿಗಿದಿದೆ ಎಂಬುದು ಬಹುತೇಕರಿಗೆ ಅಂದಾಜಾಗಿರಲಿಕ್ಕಿಲ್ಲ. 


ಇದನ್ನು ನಮ್ಮ ತಿಳಿವಳಿಕೆಗೆ ಅರ್ಥವಾಗುವ ಹೋಲಿಕೆಗಳನ್ನು ಬಳಸಿಕೊಂಡು ಅರ್ಥ ಮಾಡಿಕೊಳ್ಳಲು ಯತ್ನಿಸೋಣ. ಯಾವುದೇ ವಸ್ತುವಿನಿಂದ ಶಕ್ತಿ ಪಡೆಯಲು ಅದನ್ನು ಉರಿಸಬೇಕು (ನಮಗೂ ಅಷ್ಟೆ: ಯಾರಾದರೂ ನಮಗೆ ಉರಿಸಿದರೆ ತಾನೇ ನಮಗೂ ನಮ್ಮ ಶಕ್ತಿ ತೋರಿಸಬೇಕು ಅನ್ನಿಸುವುದು!). ಉರಿಸಿದಾಗ ಸಿಗುವ ಶಕ್ತಿ ಶಾಖದ ರೂಪದಲ್ಲಿರಬಹುದು, ಬೆಳಕಿನ ರೂಪದಲ್ಲಿರಬಹುದು ಅಥವಾ ಇನ್ನಾವುದಾದರೂ ರೂಪದಲ್ಲಿ ಇರಬಹುದು. ಅದನ್ನು ನಾವು ನಮಗೆ ನಮಗೆ ಬೇಕಾದಂತೆ ಬಳಸಿಕೊಳ್ಳುವುದರಲ್ಲಿ ನಮ್ಮ ಜಾಣ್ಮೆ ಇದೆ. ಉದಾಹರಣೆಗೆ ಕಲ್ಲಿದ್ದಲು ಉರಿಸಿ, ಅದರಿಂದ ನೀರು ಕಾಯಿಸಿ, ಆ ಕುದಿನೀರಿನ ಆವಿಯನ್ನು ಬಳಸಿಕೊಂಡು ರೈಲು ಓಡಿಸುವುದನ್ನು ನಾವು ಶತಮಾನಗಳ ಹಿಂದೆ ಕಂಡುಕೊಂಡೆವು. ಹಾಗೆಯೇ ಉರುವಲು ಉರಿಸಿ, ಅದರಿಂದ ನೀರು ಕಾಯಿಸಿ, ಹಬೆ ಎಬ್ಬಿಸಿ, ಅದರಿಂದ ಟರ್ಬೈನುಗಳನ್ನು ತಿರುಗಿಸಿ ವಿದ್ಯುತ್ ತಯಾರಿಸುವುದನ್ನೂ ಕಲಿತೆವು. ಪರಮಾಣು ರಿಯಾಕ್ಟರುಗಳಲ್ಲಿ ಆಗುವುದೂ ಇಷ್ಟೆ: ಟರ್ಬೈನುಗಳ ಚಕ್ರಗಳು ತಿರುಗಬೇಕಾದರೆ ಅವುಗಳನ್ನು ಉಗಿ (Steam) ದೂಡಬೇಕು. ಆ ಉಗಿಯನ್ನು ಎಬ್ಬಿಸಲು ಶಾಖ ಉತ್ಪತ್ತಿಯಾಗಬೇಕು. ಪರಮಾಣು ರಿಯಾಕ್ಟರುಗಳಲ್ಲಿ ವಿಕಿರಣಶೀಲ ಧಾತುಗಳನ್ನು (ಅಥವಾ ಧಾತುರೂಪಗಳನ್ನು) ಬಳಸಿ ಅಂಥ ಶಾಖವನ್ನು ಸೃಷ್ಟಿಸುತ್ತಾರೆ. ವಿಕಿರಣಶೀಲ ಧಾತುಗಳು ಕ್ಷಣಕ್ಷಣಕ್ಕೂ ಸಹಸ್ರ ಸಹಸ್ರ ಸಂಖ್ಯೆಯ ಕಣಗಳನ್ನು ಉತ್ಸರ್ಜಿಸುತ್ತ ಇರುವುದರಿಂದ ಆ ಕಣಗಳ ಹೊಡೆತಕ್ಕೆ ಶಾಖ ಸೃಷ್ಟಿಯಾಗುತ್ತದೆ. ಆ ಶಾಖವನ್ನು ಬಳಸಿಕೊಂಡು ನೀರು ಬಿಸಿ ಮಾಡಿ ಉಗಿ ಎಬ್ಬಿಸಬಹುದು. 


ಕಲ್ಲಿದ್ದಲನ್ನು ಉರುವಲಾಗಿ ಬಳಸುವುದಕ್ಕೂ ವಿಕಿರಣಶೀಲ ಯುರೇನಿಯಮ್ಮನ್ನು ಬಳಸುವುದಕ್ಕೂ ವ್ಯತಾಸವುಂಟು. ಕಲ್ಲಿದ್ದಲನ್ನು ಉರಿಸಿದರೆ ಕೊನೆಯಲ್ಲಿ ಬೂದಿ ಮಿಗುತ್ತದೆ. ಆದರೆ ಯುರೇನಿಯಂ ತುಂಡನ್ನು ಹಾಗೆ "ಕಾಯಿಸಿದಾಗ" ಅದರಿಂದ ಬೂದಿ, ಕೆಂಡ, ಭಸ್ಮ ಏನೊಂದೂ ಬರುವುದಿಲ್ಲ. ಆ ಯುರೇನಿಯಂ ತುಂಡು ಕಪ್ಪುಮಸಿ ಕೂಡ ಆಗುವುದಿಲ್ಲ. ಅದರಿಂದ ಹೊರಹಾರಿದ್ದು ವಿಕಿರಣಗಳು ಮಾತ್ರ (ಆಲ್ಫಾ, ಬೀಟಾ, ಗ್ಯಾಮಾ ಇತ್ಯಾದಿ ಕಣಗಳು). ಅವು ಬರಿಗಣ್ಣಿಗೆ ಕಾಣುವುದೂ ಇಲ್ಲ. ನಮ್ಮಲ್ಲಿ ಪರಮಾಣುಶಕ್ತಿಯ ಬಗ್ಗೆ ಎಷ್ಟೊಂದು ಅಜ್ಞಾನವಿದೆಯೆಂದರೆ "ಪ್ರಖ್ಯಾತ" ವಿಜ್ಞಾನ ಸಂವಹನಕಾರ ನಾಗೇಶ ಹೆಗಡೆಯವರು ಒಮ್ಮೆ ಯುರೇನಿಯಂನ್ನು ಸುಟ್ಟ ಮೇಲೆ ಬೂದಿಯನ್ನು ವಿಲೇವಾರಿ ಮಾಡುವುದು ದೊಡ್ಡ ಸಮಸ್ಯೆ ಎಂದು ಬರೆದಿದ್ದರು (ಆಮೇಲೆ, ತಪ್ಪು ತೋರಿಸಿಕೊಟ್ಟಾಗ, ಎಂದಿನಂತೆ ತನ್ನ ಮೊಲಕ್ಕೆ ಎರಡು ಕೊಂಬು, ಮೂರು ಕಾಲು ಎಂದು ವಾದಮಾಡಿದರು. ಬಿಡಿ, ಮಾತಾಡಿ ಪ್ರಯೋಜನವಿಲ್ಲ!)


ಹಾಗಾದರೆ ಪರಮಾಣು ರಿಯಾಕ್ಟರುಗಳಲ್ಲಿ ತ್ಯಾಜ್ಯವೆಂಬುದು (Nuclear waste) ಇರುವುದಿಲ್ಲವೇ ಎಂದು ಕೇಳಿದರೆ ಖಂಡಿತ ಇರುತ್ತದೆ. ಯುರೇನಿಯಂ ಅನ್ನು ಉರುವಲಾಗಿ ಉಪಯೋಗಿಸಿದ ನಂತರ ಅದು ವಿಕಿರಣಶೀಲವಾಗಿಯೇ ಇರುತ್ತದೆ. ಅಂಥ ಸಲಾಕೆಗಳನ್ನು ವಿಲೇವಾರಿ ಮಾಡುವುದು ದೊಡ್ಡ ತಲೆನೋವು ಹೌದು - ಅವನ್ನು ಭೂಮಿಯಲ್ಲಿ ನೂರಾರು ಮೀಟರ್ ಆಳಕ್ಕೆ ಹೊಂಡ ತೋಡಿ, ಕಾಂಕ್ರೀಟು ಗೋಡೆಗಳಿಂದ ಮಾಡಿದ ಕೋಣೆಗಳಲ್ಲಿಟ್ಟು ಭದ್ರಪಡಿಸಬೇಕು. ಸ್ವಲ್ಪ ಎಚ್ಚರ ಮರೆತರೆ ಆ ಸಲಾಕೆಗಳಿಂದ ಹೊರಹಾರುವ ಅದೃಶ್ಯ ವಿಕಿರಣಗಳು ಭೂಮಿಯ ಮೇಲಿರುವವರ ಮೇಲೆ ಏನೇನೋ ಭಾನಗಡಿ ಮಾಡಿಯಾವು. ಪರಮಾಣು ರಿಯಾಕ್ಟರುಗಳಲ್ಲಿ ಆ ಎಲ್ಲ ಎಚ್ಚರಿಕೆ ತೆಗೆದುಕೊಂಡೇ ಕೆಲಸ ಮಾಡುವುದು. ನಮ್ಮ ಕೈಗಾದಲ್ಲಿ ಉರುವಲಾಗಿ ಬಳಸಿದ ವಿಕಿರಣಶೀಲ ಸಲಾಕೆಗಳನ್ನು ಆಮೇಲೆ ಪಕ್ಕದ ತೋಡುಗಳಲ್ಲೋ ಹೊಲಗದ್ದೆಗಳಲ್ಲೋ ಎಸೆಯುವುದಿಲ್ಲ - ಆದರೆ ಹಾಗೆ ಮಾಡುತ್ತಾರೆಂಬ ರೇಂಜಿಗೆ ಒಂದು ಕಾಲದಲ್ಲಿ ಪ್ರಗತಿಪರ ಚಿಂತಕರು ಬಾಯಿ ಬಡಿದುಕೊಂಡದ್ದು ಹೌದು!


ಪರಮಾಣು ರಿಯಾಕ್ಟರುಗಳಲ್ಲಿ ವಿದ್ಯುತ್ ಉತ್ಪಾದನೆಗೆ ಯುರೇನಿಯಂ-233 ಎಂಬ ಒಂದು ಧಾತುರೂಪ ಬೇಕು. ಏಕಂ ಸತ್ ವಿಪ್ರಾ ಬಹುಧಾ ವದನ್ತಿ ಎಂಬಂತೆ ಯುರೇನಿಯಂ ಎಂಬ ಒಂದು ಧಾತುವಿಗೆ ಯು233, ಯು234, ಯು235, ಯು238 ಮುಂತಾದ ಹತ್ತಾರು ರೂಪಗಳು. ಇವನ್ನು ಐಸೋಟೋಪುಗಳು (Isotopes) ಎನ್ನುತ್ತೇವೆ. ಇಲ್ಲಿರುವ 233, 234 ಇತ್ಯಾದಿ ಸಂಖ್ಯೆಗಳನ್ನು ರಾಶಿಸಂಖ್ಯೆ (Mass Number) ಎನ್ನುತ್ತೇವೆ. ಈ ಐಸೋಟೋಪುಗಳಲ್ಲಿ ಕೆಲವು ಸ್ಥಿರ, ಕೆಲವು ಅಸ್ಥಿರ. ಕೆಲವು ಬಹುಪ್ರಮಾಣದಲ್ಲಿ ಸಿಗುತ್ತವೆ, ಇನ್ನು ಕೆಲವು ಕಡಿಮೇ ಅಂದರೆ ಕಡಿಮೆ ಪ್ರಮಾಣದಲ್ಲಿ ಸಿಗುವಂಥವು. ಉದಾಹರಣೆಗೆ ಯು235, ಯು238 ಮುಂತಾದವು ಹೆಚ್ಚು ಪ್ರಮಾಣದಲ್ಲಿ ಅಲ್ಲಲ್ಲಿ ಸಿಗುತ್ತವೆ. ಆದರೆ ಅವುಗಳಿಂದ ನೇರವಾಗಿ ಅಂಥ ಪ್ರಯೋಜನವಿಲ್ಲ. ಯಾಕೆಂದರೆ ಅವು ಉತ್ಸರ್ಜಿಸುವ (ಹೊರಚಿಮ್ಮಿಸುವ) ಕಣಗಳ ಸಂಖ್ಯೆ ಕಡಿಮೆ. ಯು233 ಹಾಗಲ್ಲ; ಅದು ದೀಪಾವಳಿಯ ನೆಲಚಕ್ರದಂತೆ ಪಟುವಾದ ಕಣಗಳನ್ನು ರಪರಪರಪನೆ ಹೊರಹಾರಿಸುತ್ತದೆ. ಆದರೆ ಯು233-ನ ಪ್ರಮಾಣ ಜಗತ್ತಲ್ಲಿ ಭಾಳ ಭಾಳ ಕಡಿಮೆ. ಯಾವತ್ತೂ ಅಷ್ಟೆ ನೋಡಿ: ಬೇಕಾದ್ದು ಹೆಚ್ಚಿರುವುದಿಲ್ಲ, ಬೇಡವಾದ್ದು ಬೇಕಾದಷ್ಟಿರುತ್ತದೆ! 


ನಮ್ಮಲ್ಲಿ ಪರಮಾಣು ರಿಯಾಕ್ಟರುಗಳಲ್ಲಿ ವಿದ್ಯುತ್ ಉತ್ಪಾದನೆಗೆ ನಮಗೆ ಬೇಕಿರುವುದು ಯು233 ಎಂಬ ಐಸೋಟೋಪು. ಅದು ಜಗತ್ತಿನಲ್ಲಿ ಸಿಗುವುದು ಬಹಳ ಕಡಮೆ. ಇದರ "ಭಾರೀ ದಾಸ್ತಾನು" ಇದೆ ಎಂದು ಹೇಳಿಕೊಂಡ ಅಮೆರಿಕ, ರಷ್ಯಗಳು ಇಡೀ ಇತಿಹಾಸದುದ್ದಕ್ಕೆ ತಯಾರು ಮಾಡಿರಬಹುದಾದ ಯುರೇನಿಯಂ 2 ಟನ್‌ಗಿಂತ ಕಡಿಮೆ! ಅಲ್ಲದೆ ಯು233ನ್ನು ಯಾವ ದೇಶವೂ ಮಾರಾಟ ಮಾಡುವಂತಿಲ್ಲ; ಉತ್ಪಾದಿಸುವುದಂತೂ ದೂರದ ಮಾತು. ಗಲ್ಫ್ ರಾಷ್ಟ್ರಗಳು ನೆಲದಲ್ಲಿ ಬಾವಿ ತೋಡಿ ಕಲ್ಲೆಣ್ಣೆ ತೆಗೆದು ಹಡಗುಗಳಲ್ಲಿ ತುಂಬಿ ಮಾರಿದಂತೆ ಇದನ್ನು ಮಾಡಲು ಬರುವುದಿಲ್ಲ. ಇಡೀ ದೇಶಕ್ಕೆ ದೇಶವನ್ನೇ ಬಗೆದು ಗುಡ್ಡೆಹಾಕಿದರೂ ಹತ್ತಿಪ್ಪತ್ತು ಕೆಜಿ ಈ ಐಸೋಟೋಪು ಸಿಗುವುದೂ ಕಷ್ಟವೆ. ಅಂಥ ವಿರಳಾತಿವಿರಳ ಐಸೋಟೋಪು ಇದು.


ಆದರೆ ಇದು ಎಷ್ಟೊಂದು ಪಟುವೆಂದರೆ ಇದರಿಂದ ಅತ್ಯಧಿಕ ಪ್ರಮಾಣದ ಶಕ್ತಿಯನ್ನು ಉತ್ಪಾದಿಸಬಹುದು. ಉದಾಹರಣೆಗೆ ಒಂದು ಕೆಜಿ ಯು233 ಕಚ್ಚಾಪದಾರ್ಥದಿಂದ ಸರಿಸುಮಾರು 82 ಟೆರಾಜೂಲುಗಳಷ್ಟು ಶಕ್ತಿಯನ್ನು ಉತ್ಪಾದಿಸಬಹುದು. ಇದು ಸರಿಸುಮಾರು 23,000 ಮೆಗಾವಾಟ್‌ಗಳಷ್ಟು ವಿದ್ಯುತ್ ಶಕ್ತಿಗೆ ಸಮ. ಏನಾದರೂ ಅರ್ಥ ಆಯಿತಾ? ಆಗಿಲ್ಲವಾ? ಹಾಗಾದರೆ ಈ ಹೋಲಿಕೆ ನೋಡಿ: ಒಂದು ಕೆಜಿ ಕಲ್ಲಿದ್ದಲಿಂದ 24 ಮೆಗಾಜೂಲ್ ಶಕ್ತಿ ಉತ್ಪಾದಿಸಬಹುದು. ಅದೇ ಒಂದು ಕೆಜಿ ಯು233 ಉರುವಲಿಂದ 8,20,00,000 ಮೆಗಾಜೂಲ್ ಶಕ್ತಿ ಉತ್ಪಾದಿಸಬಹುದು. ಅಂದರೆ ಒಂದು ಕೆಜಿ ಯು233 ಉರುವಲು ಉತ್ಪಾದಿಸುವ ಶಕ್ತಿಯು 30 ಲಕ್ಷ ಕೆಜಿ ಕಲ್ಲಿದ್ದಲು ಉತ್ಪಾದಿಸುವ ಶಕ್ತಿಗೆ ಸಮ. ಅರ್ಥ ಆಯ್ತಲ್ಲ! ಅಂದರೆ ಕೆಲವೇ ಕೆಲವು ಗ್ರಾಂಗಳಷ್ಟು ಯು233 ಇದ್ದರೂ ಸಾಕು, ಒಂದು ರಿಯಾಕ್ಟರಿನಲ್ಲಿ ಸಾಕುಸಾಕು ಅನ್ನಿಸುವಷ್ಟು ವಿದ್ಯುತ್ ತಯಾರಿಸಬಹುದು ಎಂದಾಯಿತು.


ಈಗ ಮುಖ್ಯ ವಿಷಯಕ್ಕೆ ಬರುವಾ. ನಮ್ಮಲ್ಲಿ ಸಮುದ್ರದಂಡೆಯಲ್ಲಿ (ಮುಖ್ಯವಾಗಿ ಕೇರಳದ ಸಮುದ್ರ ಕಿನಾರೆಯ ಹೊಯಿಗೆಯಲ್ಲಿ) ಸಾಕಷ್ಟು ಪ್ರಮಾಣದಲ್ಲಿ ಥೋರಿಯಂ ಎಂಬ ಧಾತುವಿನ ಅಂಶವಿದೆ. ಈ ಥೋರಿಯಂ ಎಂಬುದು ಅದರಷ್ಟಕ್ಕೆ ಅದು ನಿರುಪಯೋಗಿ, ನಿರಪಾಯಕಾರಿ. ಆದರೆ ಅದನ್ನು ಯು233 ಆಗಿ ಪರಿವರ್ತಿಸಲು ಸಾಧ್ಯವಿದೆ! ಥೋರಿಯಂನ 232 ಎಂಬ ಐಸೋಟೋಪಿಗೆ ನ್ಯೂಟ್ರಾನುಗಳನ್ನು ಡಿಕ್ಕಿ ಹೊಡೆಸಿದಾಗ ಅದು ಥೋರಿಯಂ-233 ಆಗಿ ಬದಲಾಗುತ್ತದೆ. ಆದರೆ ಇದು ತುಂಬ ಅಸ್ಥಿರವಾದ ಐಸೋಟೋಪ್. ಅಂದರೆ ಕೆಲವೇ ಕೆಲವು ಕ್ಷಣಗಳಲ್ಲಿ ಇದು ತನ್ನೊಳಗಿನ ಎಲೆಕ್ಟ್ರಾನುಗಳನ್ನು ಹೊರಚೆಲ್ಲಿಕೊಂಡು ಪ್ರೊಟಾಕ್ಟಿನಿಯಮ್-233 ಎಂಬ ಧಾತುರೂಪಕ್ಕೆ ಬದಲಾಗುತ್ತದೆ. ಈ ಧಾತುರೂಪ ಕೂಡ ಅಸ್ಥಿರ. ಇದು ತಕ್ಷಣವೇ ಬೀಟಾ ಕಣಗಳನ್ನು ಹೊರಹಾಕಿ, ಯುರೇನಿಯಂ-233 ಆಗಿ ಬದಲಾಗುತ್ತದೆ. ಈ ಯು233 ಉಂಟಲ್ಲ - ಇದೇ ನಮಗೆ ಶಕ್ತಿ ಉತ್ಪಾದನೆಗೆ ಬೇಕಾದ ಮುಖ್ಯವಾದ ಉರುವಲು. ಹಾಗಾಗಿ ಥೋರಿಯಂ ಅನ್ನು ಫರ್ಟೈಲ್ ಮೆಟೀರಿಯಲ್ (Fertile Material) ಎಂದೂ ಯು233 ಅನ್ನು ಫಿಸೈಲ್ ಫ್ಯೂಲ್ (Fissile Fuel) ಎಂದೂ ಕರೆಯುತ್ತಾರೆ. ಒಂದು ಉರುವಲುಚೋದಕ, ಇನ್ನೊಂದು ನಿಜವಾದ ಉರುವಲು. ಹಸು ಹುಲ್ಲು ತಿಂದು ಸೆಗಣಿ ಹಾಕುತ್ತದೆ; ಆ ಸೆಗಣಿಯನ್ನು ಬೆರಣಿ ತಟ್ಟಿ ನಾವು ಉರುವಲಾಗಿ ಬಳಸುತ್ತೇವಲ್ಲ, ಹಾಗೆ. ಥೋರಿಯಂ ಹುಲ್ಲು ಇದ್ದಂತೆ; ಯುರೇನಿಯಂ-233 ಬೆರಣಿ ಇದ್ದಂತೆ. ಇಷ್ಟು ದಿನ ನಮ್ಮಲ್ಲಿ ಹುಲ್ಲಿತ್ತು; ಆದರೆ ಆ ಹುಲ್ಲನ್ನು ಸೆಗಣಿ ಮಾಡುವ ಹಸು ಇನ್ನೂ ಪ್ರಯೋಗಶಾಲೆಯಲ್ಲಿತ್ತು.


ಆಗಲೇ ಹೇಳಿದಂತೆ ಥೋರಿಯಂ - ಅದರ ಪಾಡಿಗದು ನಿರುಪದ್ರವಿ. ಅದಕ್ಕೆ ನ್ಯೂಟ್ರಾನ್ ಕಣವನ್ನು ಹೊಡೆಸಿದಾಗಷ್ಟೇ ಅದರೊಳಗಿಂದ ವಿಕಿರಣಶೀಲ ಕಣಗಳು ಹೊರಹಾರುವುದು. ಈ ಅತಿ ವೇಗದ ಅತ್ಯಧಿಕ ಶಕ್ತಿಯ ನ್ಯೂಟ್ರಾನ್ ಕಣಗಳನ್ನು ಹೊಡೆಸುವುದೂ ಒಂದು ದೊಡ್ಡ ಸಾಹಸವೇ. ಆದರೆ ಒಂದು ಮ್ಯಾಜಿಕ್ ಮಾಡಬಹುದು: ಅದೇನೆಂದರೆ ಮೊದಲ ಸಲ, ಕೆಲಸ ಶುರುಮಾಡುವಾಗ ಮಾತ್ರ - ಒಂದಷ್ಟು ನ್ಯೂಟ್ರಾನ್ ಕಣಗಳನ್ನು ಥೋರಿಯಂ-232ಗೆ ತಾಡಿಸಬಹುದು. ಆಮೇಲೆ ಥೋರಿಯಂ-232 ಎಂಬುದು ಥೋರಿಯಂ-233 ಆಗಿ, ನಂತರ ಪ್ರೊಟಾಕ್ಟಿನಿಯಂ-233 ಆಗಿ, ಅಲ್ಲಿಂದ ಯುರೇನಿಯಂ-233 ಆದ ಮೇಲೆ ಆ ಯುರೇನಿಯಂ ಒಂದಷ್ಟು ನ್ಯೂಟ್ರಾನ್ ಕಣಗಳನ್ನು ಹೊರಚಿಮ್ಮಿಸುತ್ತದಲ್ಲ, ಆ ನ್ಯೂಟ್ರಾನ್ ಕಣಗಳೇ ಮತ್ತೆ ಥೋರಿಯಂನ್ನು ಬಡಿಯುವ ಹಾಗೆ ಮಾಡಿ ಇಡೀ ಚಕ್ರವು (Cycle. Not 'wheel'!) ತನ್ನಷ್ಟಕ್ಕೆ ತಾನೇ ಸುತ್ತತೊಡಗುವ ಹಾಗೆ ಮಾಡಬಹುದು! ಇಲ್ಲಿ, ಕೊನೆಯಲ್ಲಿರುವ ಯುರೇನಿಯಂ ಉರುವಲಿಂದ ಹೊರಹಾರುವ ನ್ಯೂಟ್ರಾನುಗಳ ಸಂಖ್ಯೆ ಅಗತ್ಯಕ್ಕಿಂತ ಹೆಚ್ಚಾದರೆ ಅದು ಅಪಾಯಕರ. ಅಗತ್ಯಕ್ಕಿಂತ ಕಡಿಮೆಯಾದರೆ ಮತ್ತೆ ಹೊಸ ನ್ಯೂಟ್ರಾನುಗಳನ್ನು ಹೊರಗಿನಿಂದ ಸಪ್ಲೈ ಮಾಡುತ್ತಲೇ ಇರಬೇಕು. ಆದರೆ ಇಡೀ ಚಕ್ರವು ತನ್ನಷ್ಟಕ್ಕೆ ತಾನೇ ಸುತ್ತುತ್ತಲೇ ಇರುವಂತೆ ಮಾಡಲು ಯುರೇನಿಯಂ-233ರಿಂದ ಒಂದು ನಿರ್ದಿಷ್ಟ ಸಂಖ್ಯೆಯ ನ್ಯೂಟ್ರಾನುಗಳಷ್ಟೇ ಹೊರಹಾರುವಂತೆ ವ್ಯವಸ್ಥೆ ಮಾಡಿಕೊಂಡರೆ ಕೆಲಸ ಸಲೀಸು. ಈ ಅತ್ಯಪರೂಪದ ಸಮತೋಲನಕ್ಕೆ ಹೆಸರು ಕ್ರಿಟಿಕಾಲಿಟಿ (Criticality). ಅರ್ಥ ಆಯ್ತಲ್ಲ?


ಇಷ್ಟು ದಿನ ನಮ್ಮ ದೇಶದ ಸಮುದ್ರ ಕಿನಾರೆಯಲ್ಲಿ ರಾಶಿರಾಶಿಯಾಗಿ ಥೋರಿಯಂ ನಿಕ್ಷೇಪ ಬಿದ್ದುಕೊಂಡು ನಿದ್ದೆಮಾಡುತ್ತಿತ್ತು. ಜಗತ್ತಿನ ಒಟ್ಟು ಥೋರಿಯಂ ನಿಕ್ಷೇಪದ 25% ನಮ್ಮ ದೇಶವೊಂದರಲ್ಲೇ ಇದೆ. ಈ ಥೋರಿಯಂನ್ನು ಯು233 ಆಗಿ ಮಾಡಿಕೊಳ್ಳುವ ಚಾಕಚಕ್ಯತೆ, ತಂತ್ರಜ್ಞಾನ ನಮಗೆ ಇರಲಿಲ್ಲ ಅಷ್ಟೆ. ಈಗ ಅಂಥ ತಂತ್ರಜ್ಞಾನ ನಮ್ಮ ಕೈವಶ ಆಗಿದೆ ಎಂಬುದೇ ಪ್ರಧಾನಿಯವರ ಟ್ವೀಟಿನ ಭಾವಾರ್ಥ. ಹೀಗೆ ಮಾಡಬಹುದು ಎಂದು ಭಾರತದ ಪರಮಾಣು ಚೈತನ್ಯದ ಜನಕ ಹೋಮಿ ಜಹಾಂಗೀರ್ ಭಾಭಾ ಐವತ್ತು ವರ್ಷಗಳ ಹಿಂದೆಯೇ ಹೇಳಿದ್ದರು. ಅವರು ಸ್ವಿತ್ಸರ್ಲೆಂಡ್ ಪಕ್ಕ ವಿಮಾನ ಅಪಘಾತದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಕೇರಳಕ್ಕೆ ಇಸ್ರೋ ಕೆಲಸಗಳಿಗೆಂದು ನಿರಂತರ ಓಡಾಡಿಕೊಂಡಿದ್ದ ಮತ್ತು ಭಾಭಾರ ಪರಮಾಪ್ತರಾಗಿದ್ದ ವಿಕ್ರಂ ಸಾರಾಭಾಯಿ ಒಂದು ಮುಂಜಾನೆ ಕೇರಳದಲ್ಲೇ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು. ಇಂಥ ಹಲವು ಸಂಶಯಾಸ್ಪದ ಸಾವುಗಳಿಂದಾಗಿ ದೇಶದ ಪರಮಾಣು ತಂತ್ರಜ್ಞಾನ ಕ್ಷೇತ್ರ ದಶಕಗಳಷ್ಟು ಹಿಂದಕ್ಕೆ ಹೋಗಿತ್ತು. ಪರಮಾಣು ಎಂದರೆ ಸಾಕು ಪ್ರತಿಭಟನೆಯ ಬಾವುಟ, ಘೋಷಣೆ, ಘೇರಾವ್, ಹರತಾಳಗಳನ್ನು ಹಿಡಿದುಕೊಂಡು ಬರುವ ಪ್ರಗತಿಪರ ಚಿಂತಕರ ದಂಡುದಂಡುಗಳನ್ನೇ ಈ ದೇಶದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಬೆಳೆಸಲಾಗಿತ್ತು. ಇಷ್ಟೆಲ್ಲಾ ಅಡೆತಡೆ-ತಡೆಅಡೆಗಳನ್ನು ಮೀರಿ ಇದೀಗ ಭಾರತ ಥೋರಿಯಂನ್ನು ಯುರೇನಿಯಂ ಆಗಿ ಪರಿವರ್ತಿಸಿಕೊಂಡು ವಿದ್ಯುತ್ ಉತ್ಪಾದಿಸಿಕೊಳ್ಳುವ ಹಂತಕ್ಕೆ ಪದಾರ್ಪಣೆ ಮಾಡಿದೆ. ಭಾರತದಲ್ಲಿ ಈಗ ಇರುವ ಥೋರಿಯಂ ದಾಸ್ತಾನನ್ನು ಬಳಸಿಕೊಂಡು ಈ ದೇಶವನ್ನು ಮುಂದಿನ 60,000 ವರ್ಷಗಳ ಕಾಲ ವಿದ್ಯುತ್ತಿನಿಂದ ಬೆಳಗುತ್ತಿರಬಹುದು.


ಮಿಕ್ಕಿದ್ದೆಲ್ಲ ನೀವೇ ಲೆಕ್ಕ ಹಾಕಿ!

Friday, March 27, 2026

ಶ್ರೀ ರಾಮ ನವಮಿಯ ಶುಭಾಶಯಗಳು

 ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಪ್ರಭುವಾಗದೆ ಪ್ರತಿನಿಧಿಯಾಗಿ ಸಾಮಾನ್ಯರಿಗೂ ಬೆಲೆ ಕೊಟ್ಟು , ಸ್ವಂತದ್ದಾಗಲಿ, ಸಂಸಾರದ್ದಾಗಲಿ, ಸಮಾಜದ್ದಾಗಲಿ, ಹೆಣ್ಣಾಗಲಿ, ಗಂಡಾಗಲಿ ಲೋಪ ಕಂಡುಬಂದರೆ ನಿರ್ಣಯ ತೆಗೆದುಕೊಳ್ಳುವಲ್ಲಿಸಮರ್ಥನಾಗಿ ನ್ಯಾಯ ಒದಗಿಸಿರುವ ಮೂರ್ತಿಯೇ ಶ್ರೀರಾಮಚಂದ್ರ. 


ಸ್ವಂತಕ್ಕಲ್ಲ ; ಸಮಾಜಕ್ಕೆ ಎಲ್ಲ ಎಂಬುದೇ ಅವರ ಧ್ಯೇಯ. ಜನಗಳ ಸಂತೋಷಕ್ಕಾಗಿ ರಾಜ್ಯ ಆಳಬೇಕೇ ವಿನಾ ತನ್ನ ಸ್ವಂತಕ್ಕಾಗಿ ಅಲ್ಲ ಎಂಬುದನ್ನು ತೋರಿಸಿಕೊಟ್ಟ ಆದರ್ಶಮೂರ್ತಿ.

 ಕುಟುಂಬ, ಸಮಾಜ, ದೇಶ ಮೂರರಲ್ಲೂ ಹೇಗೆ ವರ್ತಿಸಬೇಕು ಎಂಬುದನ್ನು ತೋರಿಸಿಕೊಟ್ಟ ಮಹಾಮೂರ್ತಿ. ಅವಿಭಕ್ತ ಕುಟುಂಬದ ಸಾಕಾರಮೂರ್ತಿ.

 ಹಾಗಾಗಿಯೇ ಕನ್ನಡದಲ್ಲಿರಾಷ್ಟ್ರಕವಿ ಕುವೆಂಪು ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಶ್ರೀರಾಮನ ಆದರ್ಶಗಳನ್ನು 32 ಗುಣಗಳಿಂದ ವಿಮರ್ಶಿಸಿದ್ದಾರೆ. ಸಂಸ್ಕೃತದಲ್ಲಿಚಾಣಕ್ಯ 10 ಗುಣದಲ್ಲಿಬಣ್ಣಿಸಿದರೆ ಕುವೆಂಪು ಅದರ ಮೂರು ಪಟ್ಟುಹೆಚ್ಚು ಬಣ್ಣಿಸಿದ್ದಾರೆ. 


ಸತ್ಯಸ್ಯ ಸತ್ಯ ನಿತ್ಯ ಕಥನಂಕಣ ಎಂದಿದ್ದಾರೆ. ಸತ್ಯದ ಪ್ರತಿಪಾದನೆಯಲ್ಲಿನಿತ್ಯ ನಡೆಯುವಂತಹ, ನಿತ್ಯ ನೋಡುವಂತಹ ರೀತಿ ನೀತಿಯೇ ಶ್ರೀರಾಮನ ಆದರ್ಶ. ಅದಕ್ಕಾಗಿಯೇ 'ರಾಮಾಯಣಂ ವಿರಾಮಾಯಣಂ ಕಣಾ' ಎಂದಿದ್ದಾರೆ. 


ಶ್ರೀ ರಾಮ ನವಮಿಯ ಶುಭಾಶಯಗಳು.  ಶುಭದಿನ !!


Courtesy : Shivakumar - Mysore 


Click here to join WhatsApp channel 

Friday, March 20, 2026

ನುಡಿಮುತ್ತು


ನಿಮ್ಮ ಮನಸ್ಸಿನ ಮೇಲೆ ನಿಮಗೆ ಅಧಿಕಾರವಿದೆ - 

ಹೊರಗಿನ ಘಟನೆಗಳ ಮೇಲೆ ಅಲ್ಲ. 

ಇದನ್ನು ಅರಿತುಕೊಳ್ಳಿ, 

ಮತ್ತು ನೀವು ಶಕ್ತಿಯನ್ನು ಕಂಡುಕೊಳ್ಳುವಿರಿ.🪻

-----------------------------------------------------------------------------------------------------------------------

ರಣಾಂಗಣದಲ್ಲಿ ಸೋತಾಗ ಯುದ್ಧ ಅಂತ್ಯವಾಗುತ್ತದೆ... 

ಜೀವನದಲ್ಲಿ ಸೋತಾಗ ಯುದ್ಧ ಆರಂಭವಾಗುತ್ತದೆ ! 

-----------------------------------------------------------------------------------------------------------------------

ಪುಸ್ತಕಗಳು ಮತ್ತು ಸ್ನೇಹಿತರನ್ನು ಯಾವಾಗಲೂ ಎಚ್ಚರಿಕೆಯಿಂದ ಆರಿಸಿ.

 ಏಕೆಂದರೆ ಪುಸ್ತಕಗಳು ನಮ್ಮ ಆಲೋಚನೆಗಳ ಮೇಲೆ ಪ್ರಭಾವ ಬೀರುತ್ತವೆ.

               ಮತ್ತು   ಸ್ನೇಹಿತರು ನಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತಾರೆ.🪻

-----------------------------------------------------------------------------------------------------------------------

Click here to join WhatsApp channel 

Monday, March 16, 2026

ನುಡಿಮುತ್ತು

 ಹಳೆಯ ನಕ್ಷೆಯನ್ನು ಹಿಡಿದುಕೊಂಡು ನೀವು ಹೊಸ ಪ್ರಪಂಚವನ್ನು ಅನ್ವೇಷಿಸಲು ಎಂದಿಗೂ ಸಾಧ್ಯವಿಲ್ಲ...!




Tuesday, February 24, 2026

ಸೋದರಿ ನಿವೇದಿತಾ

 ಪಾಶ್ಚಾತ್ಯರಿಗೆ ಶಂಕರಾಚಾರ್ಯರಂಥಹ ವ್ಯಕ್ತಿಯೊಬ್ಬರನ್ನು ಊಹಿಸಿಕೊಳ್ಳಲು ಕೂಡ ಕಷ್ಟ. ನಾವು, ಅಂದರೆ ಪಾಶ್ಚಾತ್ಯರು ಅಸ್ಸಿಸಿಯ ಫ್ರಾನ್ಸಿಸ್ಸನ ದೈವಭಕ್ತಿಯನ್ನು ಆಶ್ಚರ್ಯ ಸಂತೋಷದಿಂದ ಸ್ಮರಿಸುತ್ತೇವೆ. ಅಬೆಲ್‌ರಾಡನ ಬುದ್ದಿ ಶಕ್ತಿ, ಮಾರ್ಟಿನ್ ಲೂಥರನ ರಾಜಕೀಯ ದಕ್ಷತೆಯನ್ನು ಕಲ್ಪಿಸಿಕೊಳ್ಳಬಲ್ಲೆವು. ಆದರೆ ಈ ಎಲ್ಲಾ ಗುಣಗಳೂ ಒಂದೇ ಕಡೆ ಸಂಘಟಿತವಾಗಿರುವ ಒಬ್ಬ ವ್ಯಕ್ತಿಯನ್ನು ಯಾರು ತಾನೆ ಊಹಿಸಿಕೊಳ್ಳಬಲ್ಲರು? ಸ್ವಾಮಿ ವಿವೇಕಾನಂದರು ಸಾವಿರದಷ್ಟಾದಾಗ ಒಬ್ಬ ಶಂಕರಚಾರ್ಯರು ಕಾಣುತ್ತಾರೆ.

-ಸೋದರಿ ನಿವೇದಿತಾ

ಕರಗಿತು ಕಂಪಿನ ಕರ್ಪೂರ... - ಮಹೇಶ ಭಟ್ಟ ಆರ್. ಹಾರ್ಯಾಡಿ

ಮೊನ್ನೆಯ ದಿನ (೧೦.೦೪.೨೬) ಬೆಳಗ್ಗೆ ನಾನು ಕಾಲೇಜಿಗೆ ಸೇರಿಕೊಂಡ ಸ್ವಲ್ಪ ಹೊತ್ತಿನಲ್ಲೇ ನನ್ನ ಶ್ರೀಮತಿ ಕರೆಮಾಡಿ 'ನಾಡೋಜ ಎಸ್. ಆರ್. ರಾಮಸ್ವಾಮಿ ಅವರು ಭೌತಿಕವಾಗಿ ...