ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Saturday, January 27, 2024

ನುಡಿಮುತ್ತು.

 "'ಸಾಧ್ಯವಾದಷ್ಟೂ ಒಳ್ಳೆಯದನ್ನು ಮಾಡಿ. ಮಾಡಲಾಗದಿರುವ ಸ್ಥಿತಿಯಲ್ಲಿ ನೀವು ಇರುವುದೇ 

ಆದರೆ ಒಳ್ಳೆಯ ಯೋಚನೆಯನ್ನಾದರೂ ಮಾಡಿ.''  - ಬೆಳಗೆರೆ ಕೃಷ್ಣಶಾಸ್ತ್ರಿ


Monday, December 11, 2023

ಆನೆಗಳ ಸಭೆಯ ತೀರ್ಮಾನದಂತೆ ಮುಖ್ಯಮಂತ್ರಿಗಳಿಗೆ ಬರೆದ ಪತ್ರ. - ಗುರುಮೂರ್ತಿ ಜೋಗಿಬೈಲು.

ಗೆ,

ಮಾನ್ಯ  ಮುಖ್ಯಮಂತ್ರಿಗಳು

ಕರ್ನಾಟಕ   ಸರ್ಕಾರ.

 ಮಾನ್ಯ   ಅರಣ್ಯ  ಸಚಿವರು

ಕರ್ನಾಟಕ  ಸರ್ಕಾರ .

ಮತ್ತು

ಹಿರಿಯ ಅರಣ್ಯ   ಅಧಿಕಾರಿಗಳು.

ಕರ್ನಾಟಕ   ಸರ್ಕಾರ .

 

ಯಿಂದಾ,

ಕಾಡಿನ   ಆನೆಗಳು.

 

ಮಾನ್ಯರೆ,

ಇತ್ತೀಚೆಗೆ   ನಮ್ಮ   ಗುಂಪಿನ  ಆನೆಯೊಂದನ್ನು   ಸೆರೆ  ಹಿಡಿಯುವ   ಕಾರ್ಯಾಚರಣೆಯಲ್ಲಿ  ಆನೆ  ಮರಣಿಸಿರುವುದು   ತಮ್ಮ  ಗಮನಕ್ಕೆ  ಬಂದಿದೆ   ಎಂದು  ಭಾವಿಸುತ್ತೇವೆ.   ಅಂತಹುದೇ   ಕಾರ್ಯಾಚರಣೆಯಲ್ಲಿ  ಮನುಷ್ಯರು   ಸೆರೆ  ಹಿಡಿದು   ಹಿಂಸಿಸಿ   ಸಾಕಿಕೊಂಡು  "ಅರ್ಜುನ"   ಎಂದು ಹೆಸರಿಟ್ಟುಕೊಂಡಿದ್ದ  ಆನೆಯೂ  ಮರಣಿಸಿದೆಯಷ್ಟೆ.

ಅದಕ್ಕಾಗಿ   ತಾವು ಸಂತಾಪ  ವ್ಯಕ್ತಪಡಿಸಿರುವ   ಸಂಗತಿ ತಿಳಿಯಿತು.  ತಮ್ಮ  ಸೂಕ್ಷ್ಮತೆಗೆ  ಅಭಾರಿಗಳಾಗಿದ್ದೇವೆ.

 ಮನುಷ್ಯ  ಲೋಕದ ತಾರತಮ್ಯದ ರೂಡಿಯಂತೆ  ಎರಡೂ  ಆನೆಗಳ   ಸಾವಿನ  ಬಗ್ಗೆಯೂ  ತಾರತಮ್ಯ ದಿಂದ  ಪ್ರತಿಕ್ರಿಯಿಸಿರುವುದು   ವಿಷಾದನೀಯ.

 ಕಾಡಿನ  ಆನೆಗಳಾದ   ನಮ್ಮ  ಬದುಕು   ಇಂದು   ಅತ್ಯಂತ  ಸಂಕಷ್ಟದಲ್ಲಿದೆ.   ನಾವು  ಒಡಾಡಿಕೊಂಡಿದ್ದ  ಬಹಳಷ್ಟು   ಪ್ರದೇಶಗಳು   ಕೃಷಿಗಾಗಿ,   ರಸ್ತೆಗಳ   ನಿರ್ಮಾಣಕ್ಕಾಗಿ,   ವಿವಿಧ   ಅಭಿವೃದ್ಧಿ  ಹೆಸರಿನ  ಯೋಜನೆಗಳಿಗಾಗಿ  ಬಳಸಲ್ಪಟ್ಟಿವೆ.   ನಾವು  ಓಡಾಡುತ್ತಿದ್ದ

ದಾರಿಗಳಲ್ಲಿ   ಬೇಲಿಗಳು   ನಿರ್ಮಾಣವಾಗಿವೆ.  ನಮ್ಮ  ಕಾಡಿನ  ಪ್ರದೇಶವು   ನಿರಂತರವಾಗಿ  ಕಡಿಮೆಯಾಗುತ್ತಿರುವುದರಿಂದ    ನಮ್ಮ   ಗುಂಪುಗಳು   ಅನಿವಾರ್ಯವಾಗಿ   ಆಹಾರ ಹುಡುಕುತ್ತಾ   ಕೃಷಿ  ಪ್ರದೇಶಗಳಿಗೆ  ಬರುವಂತಾಗುತ್ತಿದೆ.   ಇದು   ಅಲ್ಲಿ ವಾಸಮಾಡುತ್ತಿರುವ  ಮನುಷ್ಯರು   ಮತ್ತು  ನಮ್ಮ  ನಡುವಿನ ಸಂಘರ್ಷಕ್ಕೆ   ಕಾರಣವಾಗುತ್ತಿದೆ.  ಇದು  ನಮ್ಮವರ  ಮತ್ತು   ಮನುಷ್ಯರ  ಜೀವನಷ್ಟಕ್ಕೆ   ಕಾರಣವಾಗುತ್ತಿದೆ.

 

ಮನುಷ್ಯರಂತೆಯೇನಾವು  ಆನೆಗಳೂ  ಮತ್ತು   ಎಲ್ಲಾ  ಜೀವಿಗಳಿಗೂ  ಕೂಡ    ಭೂಮಿಯ ಮೇಲೆ ಬದುಕುವ  ಹಕ್ಕು   ಇದೆ ಎಂಬುದನ್ನು  ತಾವುಗಳು   ಒಪ್ಪುತ್ತೀರಿ    ಎಂದು   ಭಾವಿಸುತ್ತೇವೆ.

ಅಂತೆಯೇ   ಕಾಡಿನಲ್ಲಿ  ಸ್ವಾತಂತ್ರ್ಯವಾಗಿ  ಬದುಕಿರುವ   ನಮ್ಮನ್ನು  ಬಲಾತ್ಕಾರವಾಗಿ  ಬಂಧಿಸಿ    ಹಿಂಸಿಸಿ   ಪಳಗಿಸಿಕೊಂಡು  ನಿಮ್ಮ   ಕೆಲಸಗಳಿಗಾಗಿ  ಆಡಂಬರದ  ಮೆರವಣಿಗೆಗಳಿಗಾಗಿ   ಬಳಸಿಕೊಳ್ಳುವುದು   ನಮ್ಮ   ಬದುಕುವ   ಹಕ್ಕಿನ  ಸ್ಪಷ್ಟ   ಉಲ್ಲಂಗನೆಯಾಗಿದೆ.

 

  ಎಲ್ಲಾ   ಸಮಸ್ಯೆಗಳಿಗೂ   ಶಾಶ್ವತ   ಪರಿಹಾರ   ರೂಪಿಸಬೇಕೆಂದು  ಮೂಲಕ   ವಿನಂತಿಸುತ್ತಿದ್ದೇವೆ.

 

ನಮ್ಮ   ಹಕ್ಕೊತ್ತಾಯಗಳು. 

*  ಕಾಡಿನಲ್ಲಿ   ನಾವು ವಾಸಿಸುತ್ತಿರುವ   ಪ್ರದೇಶಗಳನ್ನು  ನಮಗಾಗಿ  ಮತ್ತು ಇತರ   ಕಾಡಿನ ಜೀವಿಗಳಿಗಾಗಿ  ಬಿಟ್ಟುಕೊಡಬೇಕು. 

*ನಾವು  ವಾಸಿಸುವ   ಮತ್ತು  ಆಹಾರಕ್ಕಾಗಿ  ಓಡಾಡುವ    ದಾರಿಗಳನ್ನು   ಗುರುತಿಸಿ,      ಪ್ರದೇಶದಲ್ಲಿ   ಕೃಷಿ   ಮಾಡಿಕೊಂಡು   ಬದುಕುತ್ತಿರುವ  ರೈತ    ಜಮೀನುಗಳನ್ನು    ಸೂಕ್ತ   ಬೆಲೆ  ನೀಡಿ   ಕೊಂಡುಕೊಂಡು  ಕಾಡಿಗೆ  ಸೇರಿಸಬೇಕು.

 *ನಾವು   ವಾಸಿಸುತ್ತಿರುವ   ಪ್ರದೇಶದಲ್ಲಿ   ಯಾವುದೇ  ಅಭಿವೃದ್ಧಿ  ಯೋಜನೆಗಳನ್ನು   ಕೈಗೊಳ್ಳುವುದನ್ನು   ನಿಲ್ಲಿಸಬೇಕು.

 *   ನಾವು  ವಾಸಿಸುವ   ಆಸುಪಾಸಿನಲ್ಲಿ  ಇರುವ   ಜನರಿಗೂ   ನಮಗೂ  ಸಂಘರ್ಷ ವಾಗದಂತೆ  ಸೂಕ್ತ   ಮುನ್ನೆಚ್ಚರಿಕೆ   ಕ್ರಮಗಳನ್ನು  ಕೈಗೊಳ್ಳಬೇಕು

*  ನಮ್ಮನ್ನು  ಸೆರೆಹಿಡಿದು   ಹಿಂಸಿಸಿ   ಪಳಗಿಸುವ  ಪರಿಪಾಟವನ್ನು  ಸೂಕ್ತ  ಕಾನೂನು   ರೂಪಿಸುವ   ಮೂಲಕ  ತಡೆಗಟ್ಟಿ    ನಮ್ಮ   ಬದುಕುವ   ಹಕ್ಕನ್ನು   ಖಾತರಿಗೊಳಿಸಬೇಕು

*ನಮ್ಮನ್ನು   ಕೆಲಸಕ್ಕಾಗಿ,   ಮೆರವಣಿಗೆಗಳಿಗಾಗಿ   ಮತ್ತು   ಮನರಂಜನೆಗಾಗಿ   ಬಳಸುವುದನ್ನು   ನಿಷೇಧಿಸಬೇಕು.

 ಪರಿಸರ  ಪ್ರವಾಸೋದ್ಯಮದ  ಹೆಸರಲ್ಲಿ  ನಮ್ಮ   ಪ್ರದೇಶಕ್ಕೆ  ಬಂದು   ತೊಂದರೆ ನೀಡುವುದನ್ನು  ನಿಲ್ಲಿಸಬೇಕು.   ನಮಗೂ  ಸ್ವತಂತ್ರ್ಯ ವಾಗಿ   ಬದುಕುವ  ಹಕ್ಕು   ಇದೆ   ಎಂಬುದನ್ನ   ಗೌರವಿಸಬೇಕು

  ನಮ್ಮ      ಎಲ್ಲಾ   ಹಕ್ಕೊತ್ತಾಯಗಳನ್ನು    ಪರಿಗಣಿಸಿ    ಸೂಕ್ತ   ಕ್ರಮ  ಕೈಗೊಳ್ಳಬೇಕೆಂದು      ಮೂಲಕ  ಒತ್ತಾಯಿಸುತ್ತಿದ್ದೇವೆ.

 

ಇಂತಿ   ತಮ್ಮ  ಸಹಜೀವಿಗಳಾದ

ಕಾಡಿನ  ಆನೆಗಳು.

 

(   ನಮ್ಮ   ಮನವಿಯನ್ನು  ಸರ್ಕಾರಕ್ಕೂ   ಮತ್ತು   ನಮ್ಮ   ಪರವಾಗಿ ಚಿಂತಿಸುವವರ  ಗಮನಕ್ಕೂ  ತರಬೇಕಾಗಿ  ವಿನಂತಿ.

  ಬೆರಳಚ್ಚಿಸಿದವರು.  - ಗುರುಮೂರ್ತಿ  ಜೋಗಿಬೈಲು. )


ರಾಜನ ಮೂರು ಪ್ರಶ್ನೆಗಳು... ⁉ ( ಸಂಗ್ರಹ)

 - ರಾಜನ ಮೂರು ಪ್ರಶ್ನೆಗಳು... ⁉

ಪ್ರತಿದಿನವೂ ಶ್ರದ್ಧೆಯಿಂದ ಭಗವಂತನನ್ನು ಪೂಜಿಸುವವರೂ ಕೂಡಾ ಭಗವಂತ ನೆಂದರೆ ಏನು? ಯಾರು? ಎನ್ನುವ ಪ್ರಶ್ನೆಗೆ ಉತ್ತರಿಸಲಾರರು(ಬಹುಶಃ ಈ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು)

ಈ ಕಥೆಯನ್ನು ಕೇಳಿ --

ಒಬ್ಬ ರಾಜನಿಗೆ ಮೂರು ಅರ್ಥವಾಗದ ಪ್ರಶ್ನೆಗಳು ಬಹುವಾಗಿ ಕಾಡುತ್ತಿದ್ದವು --

೧  - ದೇವರು ಯಾವ ಕಡೆ ನೋಡುತ್ತಾನೆ?

೨  - ದೇವರು ಎಲ್ಲಿರುತ್ತಾನೆ?

೩  - ದೇವರು ಏನು ಮಾಡುತ್ತಾನೆ?

ಈ ಮೂರು ಪ್ರಶ್ನೆಗಳಿಗೆ ಎಷ್ಟು ಯೋಚಿಸಿದರು ಸರಿಯಾದ ಉತ್ತರ ದೊರಕಲಿಲ್ಲ ದರ್ಬಾರಿನಲ್ಲಿ ರಾಜನು ಎಲ್ಲರೊಡನೆ  ಸಮಾವೇಶಗೊಂಡು ಅಲ್ಲಿ ಹಾಜರಿದ್ದ ಎಲ್ಲ ಪಂಡಿತರು ಮೇಧಾವಿಗಳನ್ನುದ್ದೇಷಿಸಿ ಈ ಎಲ್ಲಾ ಪ್ರಶ್ನೆಗಳಿಗೆ

ಸರಿಯಾದ ಉತ್ತರ ಕೊಟ್ಟವರಿಗೆ ಸೂಕ್ತವಾದ ಬಹುಮತಿಯನ್ನು ಕೊಡುವುದಾಗಿಯೂ ತಪ್ಪಿದರೆ/ ತಪ್ಪಿದ್ದಲ್ಲಿ ಉಗ್ರವಾದ ಶಿಕ್ಷೆಯನ್ನು ನೀಡುವುದಾಗಿಯೂ ತಿಳಿಸುತ್ತಾನೆ.ರಾಜನ ಶಿಕ್ಷೆಯ  ಭಯದಿಂದ ಉತ್ತರ ಕೊಡಲು ಯಾರು ಮುಂದೆ ಬರಲಿಲ್ಲ.ಇದೇ ವಿಷಯವಾಗಿ ರಾಜ್ಯದಲ್ಲೆಲ್ಲಾ ಡಂಗುರ ಸಾರಿಸಲಾಯಿತು.ಇದನ್ನು ಕೇಳಿಸಿಕೊಂಡ ದನಗಾಹಿ ಒಬ್ಬನು ಉತ್ತರ ಕೊಡುವುದಾಗಿ ಒಪ್ಪಿ

ಮುಂದೆ ಬಂದನು ಅವನನ್ನು ರಾಜನ ಆಸ್ಥಾನಕ್ಕೆ ಕರೆಸಲಾಯಿತು ಅವನು ಉತ್ತರಿಸುವ ಮೊದಲು ರಾಜನಿಗೆ ಒಂದು ವಿಷಯವನ್ನು ಹೇಳುತ್ತಾನೆ-- 

"ಹೇಳುವವನು ಗುರು ಅವನು ಮೇಲಿರಬೇಕು ಅದರಂತೆ ಕೇಳುವವನು ಶಿಷ್ಯ ಅವನು ಕೆಳಗಿರಬೇಕು"

-- ಅದಕ್ಕೆ ರಾಜನು ಸಮ್ಮತಿಸಿ ಸಿಂಹಾಸನದಿಂದ ಕೆಳಗಿಳಿದು ಕುಳಿತನು ದನಗಾಹಿ ಸಿಂಹಾಸನದ ಮೇಲೆ ಕೂರುತ್ತಾನೆ.

ನಂತರ ದನಗಾಹಿ ರಾಜನಿಗೆ ಪ್ರಶ್ನೆಗಳನ್ನು ಕೇಳಲು ಸೂಚಿಸುತ್ತಾನೆ* 


(1) - ಮೊದಲನೇ ಪ್ರಶ್ನೆ -ದೇವರು ಯಾವ ಕಡೆ ನೋಡುತ್ತಾನೆ?

- ಕೂಡಲೇ ದನಗಾಹಿ ಒಂದು ಉರಿಯುತ್ತಿರುವ ದೀಪವನ್ನು ತರಿಸಲು ಹೇಳುತ್ತಾನೆ ಅದರಂತೆ ಸಭೆಯ ಮಧ್ಯದಲ್ಲಿ ಉರಿಯುತ್ತಿರುವ ದೀಪವನ್ನು ತಂದಿಡಲಾಗುತ್ತದೆ. ರಾಜರೇ ಹೇಳಿ -ಈ ದೀಪ ಯಾವ ಕಡೆಗೆ ನೋಡುತ್ತಿದೆ- ನನ್ನ ಕಡೆಗೋ,

ನಿಮ್ಮ ಕಡೆಗೋ, ಮೇಲೆಯೋ, ಕೆಳಗಡೆಯೋ, ಪೂರ್ವಕ್ಕೋ , ಪಶ್ಚಿಮಕ್ಕೋ ಎನ್ನುತ್ತಾನೆ*

ಆಗ ರಾಜನು  - "ಎಲ್ಲ ಕಡೆಗೂ" ಎಂದು ಉತ್ತರಿಸುತ್ತಾನೆ ಆಗ ದನಗಾಹಿ ಇಷ್ಟು ಸಣ್ಣ ಜ್ಯೋತಿ ಎಲ್ಲಾ ಕಡೆಗೂ ನೋಡುತ್ತಿದೆಯಾದರೆ ಪರಂಜ್ಯೋತಿ ಸ್ವರೂಪನಾದ ಭಗವಂತನು ಎಲ್ಲ ಕಡೆಗೂ ನೋಡಲಾರನಾ, ಸಮಸ್ತ ಜೀವಿಗಳ ಕಣ್ಣಲ್ಲಿ ಬೆಳಕಾಗಿರುವ ಪರಂಜ್ಯೋತಿಯೇ ಪರಮಾತ್ಮ...!!🪔🙏

 (2) - ಎರಡನೇ ಪ್ರಶ್ನೆ "ದೇವರು ಎಲ್ಲಿರುವನು?"

ಆಗ ದನಗಾಹಿ ಒಂದು ಪಾತ್ರೆಯಲ್ಲಿ ಹಾಲನ್ನು ತರುವಂತೆ ಹೇಳುತ್ತಾನೆ ಹಾಲನ್ನು ತಂದಿರಿಸಿದಾಗ ರಾಜರೇ ಈ ಹಾಲಿನಲ್ಲಿ ತುಪ್ಪ ಎಲ್ಲಿರುವುದು ತೋರಿಸುವಿರಾ ಎನ್ನುವನು ಆಗ ರಾಜನು ಹಾಲನ್ನು ಕುದಿಸಿ, ಹೆಪ್ಪಿಟ್ಟು ಅದು ಮೊಸರಾದ ನಂತರ ಅದನ್ನು ಚೆನ್ನಾಗಿ ಕಡೆದರೆ ಬೆಣ್ಣೆ ಸಿಗುತ್ತೆ ನಂತರ ಅದನ್ನು ಹದವಾಗಿ ಕಾಯಿಸಿದಾಗ ತುಪ್ಪ ಸಿಗುತ್ತದೆ.

ಆಗ ದನಗಾಹಿ - ಸರಿಯಾಗಿ ಹೇಳಿದಿರಿ ರಾಜರೇ- ಅದೇ ರೀತಿ ಹೃದಯವೆಂಬ "ಹಾಲ"ನ್ನು "ಗುರು" ಎನ್ನುವ "ಬೆಂಕಿ"ಯಿಂದ ಚೆನ್ನಾಗಿ ಕಾಯಿಸಿ "ಮನಸ್ಸು" ಎನ್ನುವ ಹೆಪ್ಪನ್ನಿಟ್ಟು ಬರುವ ಮೊಸರನ್ನು "ಸಾಧನೆ" ಎಂಬ ಕಡಗೋಲಿನಿಂದ ಚೆನ್ನಾಗಿ ಕಡೆದರೆ "ಜ್ಞಾನ" ಎನ್ನುವ ಬೆಣ್ಣೆ ಸಿಗುತ್ತದೆ...!

ಆ ಬೆಣ್ಣೆಯನ್ನು "ಅಂತರಾತ್ಮ" ಎನ್ನುವ ಬೆಂಕಿಯಿಂದ ಹದವಾಗಿ ಕಾಯಿಸಿದರೆ "ಪರಮಾತ್ಮ' ಎನ್ನುವ ತುಪ್ಪ ಸಿಗುತ್ತದೆ*

(3) - ಮೂರನೇ ಪ್ರಶ್ನೆ- ದೇವರು ಏನು ಮಾಡುತ್ತಾನೆ?

ಆಗ ದನಗಾಹಿ ನಾನೊಬ್ಬ ದನಗಾಹಿ, ನೀವು ಈ ರಾಜ್ಯದ ಮಹಾರಾಜರು- ಕೆಳಗಿದ್ದ ನನ್ನನ್ನು ಸಿಂಹಾಸನದ ಮೇಲೆ ಕೂಡಿಸಿ,  ಸಿಂಹಾಸನದಲ್ಲಿದ್ದ

ನಿಮ್ಮನ್ನು ಕೆಳಗಿಳಿಸಿದ್ದು..!, ಇದೇ ಪರಮಾತ್ಮನ ಲೀಲೆ, ಸತ್ಕರ್ಮಗಳನ್ನು ಮಾಡುವ ಜೀವಿಗಳಿಗೆ ಮುಂದಿನ  ಜನ್ಮದಲ್ಲಿ ಉತ್ತಮ ಜನ್ಮವನ್ನು ನೀಡುವ,  ದುಷ್ಕರ್ಮ ಮಾಡುವವರಿಗೆ ಮುಂದಿನ ಜನ್ಮದಲ್ಲಿ ದುಸ್ತರ ಜೀವನ ನೀಡುವುದು ಪರಮಾತ್ಮನ ಕೆಲಸ...!🙏

ಈ ಉತ್ತರಗಳನ್ನು ಕೇಳುತ್ತಿದ್ದಂತೆ ಇಡೀ ಸಭೆಯು ಅಲ್ಲಿ ನೆರದಿದ್ದವರ ಕರತಾಡನದಿಂದ ಮಾರ್ಮೊಳಗಿತು

🕉 ಸರ್ವೇ ಜನಾಃ ಸುಖಿನೋ ಭವಂತು🕉


Thursday, December 29, 2022

ಶಿಕಾರಿ ಕಾದಂಬರಿ - ಯಶವಂತ ಚಿತ್ತಾಲ - 2

ನಸುಕಿನ ಮಬ್ಬು ಹಾಗೂ ತಂಪು ಎರಡೂ ಬರವಣಿಗೆಗೆ ಸ್ಫೂರ್ತಿ ನೀಡುವಂತವುಗಳು. ಬೆಳಗಿನ ಜಾವದ ಮುಹೂರ್ತ ಸೃಜನಶೀಲತೆಗೆ ಅತ್ಯಂತ ಉತ್ತೇಜಕವಾದದ್ದು. ನಿತ್ಯವ್ಯವಹಾರಗಳಲ್ಲಿ, ಅವುಗಳಿಂದಾಗಿ ಹುಟ್ಟುವ ರಾಗದ್ವೇಷಗಳಲ್ಲಿ, ಆತಂಕ ದುಗುಡಗಳಲ್ಲಿ ತೊಡಕಿಕೊಂಡಿರದ ಮನಸ್ಸಿನ ಯಾವುದೋ ಭಾಗ ಇಂತಹ ಹೊತ್ತಿನಲ್ಲಿ ಜಾಗೃತವಾಗಿರುತ್ತದೆ. ಸೃಷ್ಟಿ ಕಾರ್ಯದಲ್ಲಿ ತೊಡಗಿರುವ ಮನಸ್ಸಿನ ಅಂಶ ನಿತ್ಯ ವ್ಯವಹಾರದಲ್ಲಿ ತೊಡಗಿರುವ ಮನಸ್ಸಿನಿಂದ ತೀರ ಬೇರೆಯಾದದ್ದು. ✍ ಯಶವಂತ ಚಿತ್ತಾಲ {'ಶಿಕಾರಿ' ಕಾದಂಬರಿ}

ಶಿಕಾರಿ ಕಾದಂಬರಿ - ಯಶವಂತ ಚಿತ್ತಾಲ

ಬರೇ ಅವಿತುಕೊಳ್ಳುವ ತಾಣ ಹುಡುಕುತ್ತ ಓಡುತ್ತಿರಬೇಡ. ಎಲ್ಲ ಪರಾರಿಗೂ ಕೊನೆಯೆಂಬುದಿರಬೇಕು. ಒಮ್ಮೆಯಾದರೂ ಸ್ವಸ್ಥಾನಕ್ಕೆ ಮರಳುವ ಧೈರ್ಯ ಮಾಡಬೇಕಪ್ಪಾ. ರಾತ್ರಿ ಮಾಡಿಕೊಂಡ ನಿರ್ಧಾರವನ್ನು ದಿನಬೆಳಗಾಗುವುದರಲ್ಲಿ ಸಡಿಲುಗೊಳ್ಳಲು ಬಿಡಬಾರದು. ಬಿಗಿ ಹಿಡಿ. ಬಿಗಿಯಾಗು. ಗಟ್ಟಿಯಾಗು. ಕವಚ ಕುಂಡಲಗಳನ್ನು ಕಳಚು. ನೀನೇ ನಿನ್ನ ಸುತ್ತ ಬೆಳೆಯಿಸಿಕೊಂಡ ಚಿಪ್ಪನ್ನೊಡೆದು ಹೊರಕ್ಕೆ ಬರಬೇಕು. ತೆರೆ. ತೆರೆದುಕೋ.... ✍ ಯಶವಂತ ಚಿತ್ತಾಲ {'ಶಿಕಾರಿ' ಕಾದಂಬರಿ}

Wednesday, November 3, 2021

ಸಂಗ್ರಹ

ಇದು ನನಗೆ ವ್ಯಾಟ್ಸಪ್ ಬಂದ ಮೆಸೇಜ್, ಎಷ್ಟು ಚೆನ್ನಾಗಿ ಬರೆದಿದ್ದಾರೆ ,
ಓದಿದ ನನಗೆ ನಮ್ಮ ಮನೆಯ ಹಳೇ ದೀಪಾವಳಿ ಕಣ್ಣಮುಂದೆ ಬಂದಂತಾಯಿತು 👌👌👌

*ಪ್ಲವನಾಮ ಸಂವತ್ಸರದ* *ದೀಪಾವಳಿ ಹಬ್ಬದ ಆರಂಭದ ದಿನ* ಎಲ್ಲರಿಗೂ ಜಗತ್ತಿಗೂ‌‌‌ ಶುಭವನ್ನು‌ ಹಾರೈಸುತ್ತಾ....
 *ಇಂದು ನೀರು ತುಂಬುವ ಹಬ್ಬ* ಹೌದೇ??  ಹೌದು.
ಆದರೆ ನೀರು ತುಂಬಲು
*ಹಂಡೆ ಇಲ್ಲ. ಕೊಡವಿಲ್ಲ. ಬೋಸಿ ಇಲ್ಲವೇ ಇಲ್ಲ*
ಸುಣ್ಣದ ಪಟ್ಟೆ ಕೆಮ್ಮಣ್ಣು ಇಲ್ಲ. 
*ಹಂಡೆಯ ಸುತ್ತ ಸುತ್ತಲು ಮಾಲಿಂಗನ ಬಳ್ಳಿ* ಇಲ್ಲ. 

ನರಕ ಚತುರ್ದಶಿಯಂದು ಅಭ್ಯಂಗ ಸ್ನಾನಕ್ಕಾಗಿ ಧಗಧಗಿಸುವ ನೀರೊಲೆ ಇಲ್ಲ.
ಸೆಗಣಿ ಕದಡಿದ ನೀರು ಹಾಕಿ ಅಂಗಳ‌ ಸಾರಿಸಿ  ದೊಡ್ಡ ದೊಡ್ಡ ರಂಗೋಲಿ ಇಡುವ ಪೈಪೋಟಿ ಇಲ್ಲ. 
ಅಕ್ಕಿ ನೆನೆಸಿ, ನುಣ್ಣಗೆ ಒರಳಿನಲ್ಲಿ‌ ತಿರುವಿ,  ಹತ್ತಿಯ ತುಂಡಿನ ಸಹಾಯದಿಂದ ಹೊಸ್ತಿಲು, ಮೆಟ್ಟಿಲು ದೇವರ ಮುಂದೆ, ನಡುಮನೆ, ಕೋಣೆ ಕೋಣೆಗಳ ಗೋಡೆ ನೆಲದ ಅಂಚಿನಲ್ಲಿ ..  ಬೆರಳಿನಲ್ಲಿ ಇಡುತ್ತಿದ್ದ ಅಕ್ಕಿಹಿಟ್ಟಿನ ರಂಗೋಲಿ ಇಲ್ಲ...
ಸೆಗಣಿಯಿಂದ ಕೆರಕನನ್ನು ಮಾಡಿ, ಗುಂಡನೆಯ ಚೆಂಡು ಹೂ ಸಿಕ್ಕಿಸಿ, ಮನೆಯ ಪ್ರತಿ ಬಾಗಿಲಿನ ಹೊಸ್ತಿಲಿನ ಅಂಚಿನಲ್ಲಿ ಇಡಲು ಎಷ್ಟೊಮನೆಗಳಿಗೆ ಹೊಸ್ತಿಲೇ ಇಲ್ಲ

ಬೆಳಗಿನ ಜಾವ ಮೂರು ನಾಲ್ಕುಗಂಟೆಗೇ  ಎಣ್ಣೆ ನೀರಿಗಾಗಿ ಎಬ್ಬಿಸುತ್ತಿದ್ದ ಅಮ್ಮ, ನಡು ಮನೆ ಸಾರಿಸಿ ರಂಗೋಲಿ ಇಟ್ಟು ಮಣೆ ಹಾಕಿ ಮಕ್ಕಳನ್ನೆಲ್ಲಾ  ಸಾಲಾಗಿ  ಕೂರಿಸಿ, ಹಣೆಗೆ ಕುಂಕುಮವಿಟ್ಟು, ಬೆಳ್ಳಿಯ ಬಟ್ಟಲಲ್ಲಿ ಎಣ್ಣೆ ತಂದು‌, ಹೂವಿನಿಂದ ನೆತ್ತಿಗೆ ಮೂರುಬಾರಿ ಎಣ್ಣೆ ಇಟ್ಟು, ನಂತರ ತಲೆಗೆಲ್ಲಾ ಎಣ್ಣೆ ಹಚ್ಚಿ ಟಪ ಟಪ  ಬಡಿದು, ಕೈ ಕಾಲ್ಗಳಿಗೂ ಹಚ್ಚಿ   ಎರಡೂ ಕೆನ್ನೆ, ಕೈ ಕಾಲ್ಗಳಿಗೂ ಎಣ್ಣೆಯ ಬೊಟ್ಟಿಟ್ಟು ಆರತಿ ಮಾಡುತ್ತಿದ್ದ... *ಹಬ್ಬದ ನೀರು ಇಬ್ಬರಿಗೆ ಒಂದು ಚೊಂಬು*  ಎಂಬ ಗಾದೆಯಂತೆ  ಶೇಖರಿಸಿಡಲು ಸಾಧ್ಯವಾಗುತ್ತಿದ್ದ ಮಿತ ಪ್ರಮಾಣದ ನೀರಿನಲ್ಲೇ ಎಲ್ಲರಿಗೂ ಸ್ವತಃ ಕೈಯಾರೆ, ಸೌದೆ ಉರಿಯಿಂದ ಕಾಯುತ್ತಿದ್ದ ಹಂಡೆಯಿಂದ ಬೋಸಿಯಲ್ಲಿ ತುಂಬಿಕೊಂಡು ‌ನೀರು ಹಾಕುತ್ತಾ, *ಒಳ್ಳೆಯ ವಿದ್ಯಾಭ್ಯಾಸ ಪಡ್ದು, ಆಯಸ್ಸು ಆರೋಗ್ಯ, ಐಶ್ವರ್ಯ ಸುಖ ಶಾಂತಿಯಿಂದ ನೂರ್ಕಾಲ ಬಾಳು ಮಗು*  ಎಂದು ಪ್ರತಿಯೊಬ್ಬರಿಗೂ ಆಶೀರ್ವದಿಸುತ್ತಿದ್ದ *ಅಮ್ಮ...., *ಪೈಪೋಟಿಯ ಮೇಲೆ  *ನನಗೆ‌ ಮೊದಲು ನೀರು, ನನಗೆ ಮೊದಲು ನೀರು* ಎಂದು ಜಗಳ ಕಾಯುತ್ತಿದ್ದ ನಾವು ಒಡಹುಟ್ಟಿದವರು.....

*ಈಗಿನಂತೆ ೩೬೫ ದಿನವೂ ಯಾವ ಹೊತ್ತಿನಲ್ಲಿ ಬೇಕಾದರೂ ತಂದು ತಿನ್ನ ಬಹುದಾದ, ಒಬ್ಬಟ್ಟು  ಆಂಬೊಡೆ ಕರಿಗಡುಬು ಚಕ್ಕುಲಿ,ಮುಚ್ಚೊರೆ ಕೋಡುಬಳೆ, ಅತ್ರಾಸ, ಎರೆಯಪ್ಪ ಇತ್ಯಾದಿ ಇತ್ಯಾದಿ ಇತ್ಯಾದಿ ...ಊಹೂಂ ....ಅಂದು ಹಬ್ಬದ ದಿನಗಳಲ್ಲಿ ಮಾತ್ರ ಮಾಡುತ್ತಿದ್ದುದರಿಂದ ಹಬ್ಬದ ಪ್ರಮುಖ  ಆಕರ್ಷಣೆಗಳಲ್ಲೊಂದು ವಿಶೇಷ ಭಕ್ಷ್ಯಗಳೂ ಆಗಿದ್ದವಲ್ಲವೇ??,*

*ಧೀಮಂತ ವ್ಯಕ್ತಿತ್ವದ ಆಜಾನುಬಾಹು ಅಪ್ಪ ತಮ್ಮ ಕಂಚಿನ ಕಂಠದಿಂದ ಮಂತ್ರಗಳನ್ನು ಹೇಳುತ್ತಿದ್ದರೆ ಒಂದು ಅಲೌಕಿಕ ವಾತಾವರಣ ಸೃಷ್ಟಿಯಾಗುತ್ತಿತ್ತು*
ನಾವು ಮಕ್ಕಳು ಚಿನುಕುರುಳಿ ಚಟಚಟ ಗುಟ್ಟಿಸುತ್ತಾ ಮತಾಪು ಹಚ್ಚಿ  ಹಿಗ್ಗುತ್ತಿದ್ದೆವು. 
ಸಾಂಗವಾಗಿ, ಸಾವಕಾಶವಾಗಿ ಅಭಿಷೇಕ ಪೂಜೆ ನಡೆದು, ಮಾಡಿದ ಎಲ್ಲಾ ಅಡುಗೆಯ ಸ್ವಲ್ಪ ಭಾಗವನ್ನು ಅಮ್ಮ, ಕುಡಿ ಬಾಳೆ ಎಲೆಯಲ್ಲಿ  ಪಾಂಗಿತವಾಗಿ ಬಡಿಸಿಟ್ಟು ತಂದರೆ, ಅಪ್ಪ ಮಂಡಲ 
ಮಾಡಿ ಎಲ್ಲವನ್ನೂ ಹಣ್ಣು ಕಾಯಿ ತಾಂಬೂಲದ ಜೊತೆ ನೈವೇದ್ಯ ಮಾಡಿ....

ಚಟಪಟ ಪಟಾಕಿಯ ಆಟದಲ್ಲಿ ಮಗ್ನರಾಗಿದ್ದರೂ‌ ಅಡುಗೆ ಮನೆಯಿಂದ ಹೊಮ್ಮುತ್ತಿದ್ದ ತರೆಹಾವರಿ ಭಕ್ಷ್ಯ ಭೋಜ್ಯಗಳ ಸುವಾಸನೆ ಮೂಗೊಡೆಯುತ್ತಿತ್ತು.....

*ಮಂಗಳಾರತಿಗೆ ಬನ್ನಿ* ಎಂಬ ಕರೆಗೇ ಕಾಯುತ್ತಿದ್ದ‌ ನಾವೆಲ್ಲ ಒಳಗೆ ದುಡದುಡನೆ ಧಾವಿಸಿ ಬಂದು ..... *ಅಪ್ಪನ ಉಚ್ಚ ಕಂಠದಿಂದ ಹೊಮ್ಮುತ್ತಿದ್ದ ಮಂತ್ರದೊಂದಿಗೆ ಮಂಗಳಾರತಿ ಮುಗಿದು*.... ನಾವೆಲ್ಲ ಮಂಗಳಾರತಿ ತೆಗೆದುಕೊಂಡು.... ಅಪ್ಪ ದೀರ್ಘದಂಡ ನಮಸ್ಕರಿಸಿದ ಮೇಲೆ.... ನಾವು  ಅಕ್ಕತಂಗಿಯರು, ಅಮ್ಮ,  ತಮ್ಮನೂ ದನಿಗೂಡಿಸಿ ಒಂದಿಷ್ಟು ದೇವರ ನಾಮವನ್ನು ಹಾಡಿ....  ಅಕ್ಷತೆ ಹೂವು ಹಾಕಿ ನಮಸ್ಕರಿಸಿಯಾದ ಮೇಲೆ... ಅಪ್ಪ ಪ್ರಸಾದದ ಹೂ ಕೊಟ್ಟು ಆಶೀರ್ವದಿಸಿ.. ತೀರ್ಥ ಕೊಡುತ್ತಿದ್ದರು.,   ನಾವು ಕಣ್ಣಿಗೊತ್ತಿಕೊಂಡು ತೀರ್ಥ ಸೇವಿಸಿದ ತಕ್ಷಣ,  ಅಮ್ಮ ಮಾಡಿಟ್ಟಿದ್ದ ಆಂಬೊಡೆಯನ್ನೊ ಬೋಂಡವನ್ನೊ  ಒಂದೆರಡನ್ನು ಲಪಟಾಯಿಸಿ ಗಬಕ್ಕೆಂದು ಬಾಯಿಗೆ ಹಾಕಿಕೊಂಡರೆ..... ಆಹಾ!!!! ಆಹಾ!!!!...

 ಕೋಸಂಬರಿ ಪ್ರಿಯರಾದ ನಾನು ಮತ್ತು ನನ್ನ ಅಕ್ಕ ಯಥಾಶಕ್ತಿ ಕೋಸಂಬರಿ ಸೇವೆಯನ್ನೂ ಮಾಡಿಕೊಳ್ಳುತ್ತಿದ್ದೆವು....

ಸಾಲಾಗಿ ಕುಡಿ ಬಾಳೆ ಎಲೆ ಹಾಕಿ,  ಊಟದ ಚಾಪೆ ಹಾಕಿ ... ಅಭಿಗ್ಯಾರ ಮಾಡಿ... ಶಾತ್ರೊಕ್ತವಾಗಿ ಒಂದೊಂದೇ ವ್ಯಂಜನಗಳನ್ನು ಎಲೆಯ ಮೇಲೆ ಅವುಗಳ ನಿಯತ ಜಾಗದಲ್ಲೆ ಬಡಿಸಿ ಕಡೆಯಲ್ಲಿ ತೊವ್ವೆ ತುಪ್ಪ ಹಾಕಿ..... ಅಪ್ಪ  ಪರಿಶಂಚನೆ ಮಾಡಿ, ಅನ್ನ ಬ್ರಹ್ಮನಿಗೆ‌ ನಮಸ್ಕರಿಸಿ ಊಟ ಆರಂಭಿಸಿದ ನಂತರವೇ ನಮ್ಮ ಉದರಾಗ್ನಿ‌ ಶಾಂತಿಯ, ರುಚಿ ರುಚಿ‌ ಪಾಕದ ಸಂತೃಪ್ತ ಭೋಜನದ ರಸಮಯ ಆರಂಭ.... 

ಸಂಜೆ  ದೀಪ ಬೆಳಗಿಸುವ ಸಂಭ್ರಮ.

ಬಲಿಪಾಡ್ಯಮಿಯ ದಿನ  ಮರದ ಮಣೆಯ ಮೇಲೆ, ಸಗಣಿಯಲ್ಲಿ ಬಲೀಂದ್ರನ ಕೋಟೆಯ ವಿನ್ಯಾಸ ರಚಿಸಿ, ಚೆಂಡು ಹೂವು ಸೆಕ್ಕಿಸಿ, ಕೆರಕನನ್ನೂ ಸುತ್ತ ಯಥೇಚ್ಛವಾಗಿ ದೀಪಗಳನ್ನೂ ಇಟ್ಟು, ಬಲೀಂದ್ರನನ್ನು ಆವಾಹಿಸಿ, ಪೂಜಿಸಿ *ಹಾಲು ಹಳ್ಳವಾಗಿ, ಬೆಣ್ಣೆ ಬೆಟ್ಟವಾಗಿ ಬಲಿಚಕ್ರವರ್ತಿಯ ರಾಜ್ಯ ಮೂರು ಲೋಕದಲ್ಲೂ ಹರಡಲಿ* ಎಂದು ಹೇಳಿ‌ ನಮಸ್ಕರಿಸಿ ನಂತರ, ಬಲೀಂದ್ರನ ಎದುರಿಗೇ ಸುರುಸುರು ಬತ್ತಿ ಹಚ್ಚಿದ ನಂತರವೇ ಬೇರೆ ಢಮ್ ಢಮ್ ಢಮಾರ್ ಆಟಂ ಬಾಂಬ್, ಲಕ್ಷ್ಮೀ ಬಾಂಬ್, ಇತ್ಯಾದಿ ಪಟಾಕಿಗಳ, ಹೂವಿನ ಕುಂಡ, ಭೂಚಕ್ರ, ವಿಷ್ಣುಚಕ್ರಗಳ‌ನ್ನು ಹಚ್ಚಿ ಕುಣಿಯುವ ಸಂಭ್ರಮ

ಮನೆಯ ಒಂಭತ್ತು ಜನಕ್ಕೆ ಹೊಸ ಬಟ್ಟೆ ತರಲು ಸಾಧ್ಯವಾಗದಿದ್ದರೂ ಅದೊಂದು ಕೊರತೆ ಎಂದು‌ ಯಾರಿಗೂ ಯಾವತ್ತೂ‌ ಅನಿಸುತ್ತಿರಲಿಲ್ಲ.

🌟 *ಹಬ್ಬ* 🌟  *ಎಂಬ ಪದದಲ್ಲೇ ಸಂಭ್ರಮ ಸಡಗರ ಸಂತೋಷ ತುಂಬಿ ತುಂಬಿ ತುಳುಕುತ್ತಿತ್ತಾಗಿ ಆಗೆಲ್ಲ ನಮಗೆ ಕೊರತೆಗಳ ನಡುವೆಯೂ ಹಬ್ಬ ಹಬ್ಬವೇ ಆಗಿ ಸಂತೋಷ,  ಸಡಗರ ಸಂಭ್ರಮಗಳನ್ನೇ ಉಡುತ್ತಿದ್ದೆವು.*ತೊಡುತ್ತಿದ್ದೆವು*.

*ಒಳಗೂ ಹೊರಗೂ ಹಬ್ಬವನ್ನೇ ತುಂಬಿಕೊಂಡು ನಲಿಯುತ್ತಿದ್ದೆವು....*

*ಇಂದು......???  ಕಾಲಾಯ ತಸ್ಮೈ ನಮಃ... ಅಷ್ಟೇ*
✍🏼ಸಂಗ್ರಹ: HNS 

ಇದನ್ನು ಓದಿ ನನ್ನ ಮನಃಪಟಲದ
ಹಳೆಯ ನೆನಪುಗಳ ಸುರಿಮಳೆ. ಮನಸ್ಸಿಗೆ ಸಿಂಚನವಾಯ್ತು 
ಬರಹ ಚೇತೊಹಾರಿ ಇಂದಿನವರಿಗೆ ಇದೆಲ್ಲದರ ಅನುಭವ ಗೋವಿಂದ 
*ಆಂದಿನವರಿಗೆ ಆನಂದವೊ *ಅನಂದ.*

Saturday, October 16, 2021

ಸುಭಾಷಿತ

ಮುರಿದ ಲೇಖನಿಯು ಒಳ್ಳೆಯದನ್ನು  ಬರೆಯಲು ಬಿಡುವುದಿಲ್ಲ, ಅಂತೆಯೇ ಅಸೂಯೆಯ ಗುಣವು  ಉತ್ತಮ ಜೀವನ ನಡೆಸಲು ಬಿಡುವುದಿಲ್ಲ! 

Friday, October 15, 2021

ಸುಭಾಷಿತ

ಸುಭಾಷಿತ

ಸಂಬಂಧಗಳಲ್ಲಿ ಏನನ್ನಾದರೂ ಅಪೇಕ್ಷಿಸುವುದು ಸ್ವಾರ್ಥವಲ್ಲ, ಆದರೆ ಏನಾದರು ಅಪೇಕ್ಷೆ ಇಟ್ಟುಕೊಂಡೇ ಸಂಬಂಧಕಟ್ಟಿಕೊಳ್ಳುವುದು ಸ್ವಾರ್ಥ ಎನಿಸುವುದು. 

ಸುಭಾಷಿತ

ಹಣ - ಸಂಪತ್ತಿನ ದಾಹ ಎನ್ನುವುದು ತುಂಬಾ ಬಿಸಿಯಾಗಿರುತ್ತದೆ.  ಎಲ್ಲಕ್ಕಿಂತ ಮೊದಲು ಸಂಬಂಧಗಳನ್ನು ಸುಟ್ಟು ಭಸ್ಮ ಮಾಡುತ್ತದೆ. 

Wednesday, October 14, 2020

ಪರ್ವತ - ಜಯಂತ ಕಾಯ್ಕಿಣಿ

 ॥ *ಪರ್ವತ* ॥


ಒಂದು ಪರ್ವತ ನನಗೆ ಏನು ಹೇಳುತ್ತದೆ

ಊದಿಕೊಂಡ ಗುಟ್ಟಿನಂತೆ ಒಡೆಯದೆ

ನಕ್ಕರೆ ಫಕ್ಕನೆ ತೆರೆಯದೆ ಗಾಳಿಗೆ ಹಾಳೆಯಂತೆ ಹಾರದೆ 

ಒಳ ಸ್ನಾಯುಗಳ ತೋರದೆ ಏನು ಹೇಳುತ್ತದೆ 

ನಡು ರಾತ್ರಿಗಳ ಅವಿತಿಟ್ಟು ಇಕೋ

ಬೇಕಾದರೆ ಬಿಟ್ಟೇನು ಎಂಬಂತೆ ಅಪಾರ

ಕಥೆಗಳನ್ನು ಅಜ್ಜಿಗಳೊಂದಿಗೇ ಬೆನ್ನ ಹಿಂದೆ

ಕಾದಿರಿಸಿದಂತೆ ಯಾವ ಯಶದ ನೋವಿಗೆ ಇಳಿದ ಪರದೆ 

ಸನಿಹ ನಕ್ಷತ್ರ ಸುಳಿದರೂ ಕಣ್ಣು ಮಿಟುಕಿಸದ ಅದು 

ಮತೀಯ ರಸ್ತೆಯಲ್ಲಿ ಬಿದ್ದ ಕತ್ತರಿಸಿದ ರುಂಡ 

ಯುದ್ಧಸನ್ನದ್ಧನಾಗಿಯೇ ನಿದ್ದೆ ಹೋದ ಯೋಧ 

ಅಡ್ಡ ಬಂದ ಅದರ ಬೆನ್ನಿಂದ ಪ್ರತಿ ಸೂರ್ಯೋದಯಕ್ಕೆ 

ಯಾವ ಹೊಸ ಸಂದೇಶ ಬಂದಂತಿಲ್ಲ ಬದಲಿಗೆ 

ಪ್ರತಿ ರಾತ್ರಿಗೊಂದು ನವೀನ ಒಡಪು

ಬಾಡುವ ಬೆಳಕಿನಲ್ಲಿ ಸಂಜೆ ಆಡುತ್ತ ವೇಳೆ ಮರೆತ 

ಮಕ್ಕಳಿಗೆ ಹಠಾತ್ತನೆ ಭೀತಿ ಗೋವರ್ಧನ ಕುಸಿದಂತೆ 

ತಾಯಿ ಮಡಿಲಿಗೆ ಓಡುತ್ತವೆ ಅವು

ಹಜಾರದಲ್ಲಿ ಕೂತ ಅತಿಥಿಗಳ ನಡುವಿಂದ

ರಸ್ತೆ ಬದಿ ಕಣ್ಮುಚ್ಚಿ ನಿಂತ ಟ್ರಕ್ಕುಗಳ ನಡುವೆ 

ರಂಗವಲ್ಲಿ ಇಕ್ಕುವಳು ವೃದ್ದ ಮಹಿಳೆ

ಕೊನೆಯ ಲೋಕಲ್‌ಗಳು ಶೆಡ್ ಸೇರಿದನಂತರ 

ಶಸ್ತ್ರಕ್ರಿಯೆ ಮುಗಿಸಿ ಕೈ ತೊಳೆಯುತ್ತಿರುವ ಮಂದಿ 

ಕಿಟಕಿಯಿಂದ ನೋಡುತ್ತಾರೆ 

ಹೊಸ ರಾಗವನ್ನು ನೀವಿ ಎಚ್ಚರಿಸುತಿಹ ಪರ್ವತ 

ಸಾಯುವ ಶಿಶುಗಳ ಎದುರು ತನ್ನ

ಮರಗಳನ್ನು ಅಡವಿಟ್ಟಿದೆ


✍ *ಜಯಂತ ಕಾಯ್ಕಿಣಿ*

{'ಶ್ರಾವಣ ಮಧ್ಯಾಹ್ನ' ಕವನ ಸಂಕಲನ}

Monday, September 7, 2020

ಪ್ರೌಢಶಾಲಾ ಶಿಕ್ಷಕರ ಗೋಳು ಕೇಳುವವರಾರು?

 

                                                            ಪ್ರೌಢಶಾಲಾ ಶಿಕ್ಷಕರ ಗೋಳು ಕೇಳುವವರಾರು?

ಇಂದು ಹತ್ತನೇ ತರಗತಿಯ ಫಲಿತಾಂಶ ಎನ್ನುವುದು ಒಂದು ಯುದ್ದ ಎನ್ನುವಂತೆ ಆಗಿದೆ. 8 ತರಗತಿಯಿಂದ ಪ್ರೌಢ ಶಾಲೆಗೆ ಮಗು ಬಂದ ದಿನದಿಂದ ಅವರನ್ನು 10 ನೇ ತರಗತಿ ಫಲಿತಾಂಶಕ್ಕಾಗಿ ತಯಾರು ಮಾಡಲಾಗುತ್ತಿದೆ. ಸಂಪೂರ್ಣ ಪ್ರೌಢ ಶಿಕ್ಷಣ ವ್ಯವಸ್ಥೆ ಹತ್ತನೇ ತರಗತಿಯ  ಪರಿಕ್ಷೆ  ನಡೆದು ಅದರಲ್ಲಿ ಮಕ್ಕಳು ಏನು ಬರೆಯುತ್ತಾರೆ ಎಂಬುದನ್ನು ಅಂಕದಿಂದ ನೋಡಿ ತಿಳಿದುಕೊಳ್ಳುವ ಉದ್ದೇಶಕ್ಕಾಗಿಯೇ ಬದುಕುತ್ತಾ ಇರುವಂತೆ ಕಾಣುವುದು. ನಮ್ಮ ಸಮಾಜದಲ್ಲಿ ದಿನೇ ದಿನೇ ಹೆಚ್ಚುತ್ತಾ ಇರುವ ಅಂಕದ ಹುಚ್ಚು ಸಾಮಾನ್ಯ ಜನರಿಂದ ಹಿಡಿದು ಜನಪ್ರತಿನಿಧಿಗಳ ವರೆಗೆ,  ಶೈಕ್ಷಣಿಕ ವ್ಯವಸ್ಥೆಯ ಎಲ್ಲಾ ಸ್ತರದ ಆಡಳಿತಗಾರರಿಗೆ ಅತಿಯಾಗಿಯೇ ಹಿಡಿದಿರುವುದು.

ಯಾವಾಗ 10 ನೇ ತರಗತಿಯ ಫಲಿತಾಂಶವನ್ನು ಹೆಚ್ಚು  ಮಾಡುವ ಉದ್ದೇಶದಿಂದ ನಮ್ಮ ಪರೀಕ್ಷಾ ಮೌಲ್ಯಾಂಕನ ಪದ್ದತಿಯನ್ನೇ ಬದಲಿಸಿದ್ದೆವೋ ಅಂದಿನಿಂದ ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವ ಸಂಪೂರ್ಣ ವ್ಯವಸ್ಥೆ  ಬದಲಾಯಿತು. ಅಂಕ ನೀಡುವಲ್ಲಿಯೂ ಶಿಕ್ಷಕರು ಧಾರಾಳವಾಗಿ ನೀಡ ತೊಡಗಿದರು. ಕಾಲ ಕ್ರಮೇಣ 100 ಕ್ಕೆ 100 ಫಲಿತಾಂಶ ಎಂಬ ಮಾಪನ   ಪ್ರಾರಂಭವಾಯಿತು.  ಅದು ಇನ್ನೂ ಮುಂದುವರೆದು ಇಂದು ಶಾಲೆಗೆ ಒಂದು ರ್ಯಾಂಕ ಬೇಕು ಎಂಬಲ್ಲಿಗೆ ಬಂದು ತಲುಪಿರುವುದು. ಒಟ್ಟಾರೇ ಇಂತಹ ಶೈಕ್ಷಣಿಕ ವ್ಯವಸ್ಥೆಯಿಂದ ನೇರವಾಗಿ ಮಕ್ಕಳು ಸಾಕಷ್ಟು ತೊಂದರೆ ಅನುಭವಿಸುತ್ತಾ ಇರುವರು. ಜೊತೆಗೆ ತಮ್ಮ ಸಹಜ ಬಾಲ್ಯವನ್ನು ಯಾಂತ್ರಿಕೃತವಾಗಿ ಕಳೆಯುತ್ತಾ ಇರುವರು. ಇದರ ಜೊತೆಗೆ  ವಿಷಯವನ್ನು ಭೋದಿಸುವ ಎಲ್ಲಾ ಪ್ರೌಢ ಶಾಲಾ ಶಿಕ್ಷಕರು ಒಂದು ರೀತಿಯ ಒತ್ತಡಕ್ಕೆ ಗುರಿಯಾಗಿರುವರು.   ಶಿಕ್ಷಕರು ಸಹಾ ಯಂತ್ರಗಳಂತೆ ಒಂದೇ ಉದ್ದೇಶಕ್ಕಾಗಿ ಕಾರ್ಯನಿರ್ವಹಿಸುವಂತೆ ಆಗಿರುವುದು. ಇದಕ್ಕೆ ಕಾರಣವಾದ  ಶಿಕ್ಷಕರ ಮೇಲೆ ಒತ್ತಡ ಹೇರುತ್ತಿರುವ ಅಂಶಗಳನ್ನು ಕೆಳಗಿನಂತೆ ಗಮನಿಸಬಹುದಾಗಿದೆ.

ಮೇಲಾಧಿಕಾರಿಗಳ ಒತ್ತಡ :  ತಾಲ್ಲೂಕಾ ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾದವರಿಗೆ ತನ್ನ ವ್ಯಾಪ್ತಿಯ ಎಲ್ಲಾ ಶಾಲೆಯ ಫಲಿತಾಂಶವನ್ನು 100 ಕ್ಕೆ 100 ಮಾಡುವ ಉತ್ಸಾಹ ಮೂಲಕ ಜಿಲ್ಲಾ ಹಂತದ ಅಧಿಕಾರಿಗಳನ್ನು ಸಂತುಷ್ಟ ಪಡಿಸುವ ಧಾವಂತ ಕೆಲವರಿಗೆ, ಇನ್ನೂ ಕೆಲವರಿಗೆ ಮೇಲ ಹಂತದ ಅಧಿಕಾರಿಗಳ ಭಯ, ಅನಗತ್ಯವಾಗಿ ಮೂಗು ತೂರಿಸುವ ಜನಪ್ರತಿನಿಧಗಳ ಹೆದರಿಗೆ ಎಲ್ಲವೂ ಒಟ್ಟರೇ ತಾಲ್ಲೂಕಾ ಹಂತದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಿಕ್ಷಕರೊಂದಿಗೆ ಹೆಚ್ಚಿನ ಒತ್ತಡ ಹಾಕಲು ಕಾರಣವಾಗಿರುವುದು.  ಏನಾದರೂ ಮಾಡಿ ನಾವು  ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಬೇಕು ಎಂಬ ಒತ್ತಡವನ್ನು ಶಿಕ್ಷಕರ ಮೇಲೆ ಹಾಕುವರು.

ಅನುದಾನಿತ/ಅನುಧಾರಹಿತ ಶಾಲೆಯಲ್ಲಿ ಆಡಳಿತ ಮಂಡಳೀ ಒತ್ತಡ : ಅನುಧಾನಿತ ಶಾಲೆಯ ಶಿಕ್ಷಕರ ಸ್ಥಿತಿ ಇನ್ನೂ ಕಷ್ಟ. ಒಂದು ಕಡೆ ತಾಲ್ಲೂಕಾ ಅಧಿಕಾರಿಗಳು, ಇನ್ನೊಂದಡೆ ಘಟಾನುಘಟಿ ಆಡಳಿತ ಮಂಡಳಿಯ ಸದಸ್ಯರನ್ನು ಎದುರಿಸುವುದು. ಎಲ್ಲಾ ಸದಸ್ಯರು ಪುಕ್ಕಟೆ ಸಲಹೆ ನೀಡಲು ಬರುವರು. ಆಗಾಗ ಸಭೆಯಲ್ಲಿ ಅವರಿಗೆ ತಮ್ಮ ವಿಷಯದ ಬಗ್ಗೆ ತಿಳಿಸಬೇಕು. ಒಟ್ಟರೇ ಅನುದಾನಿತ ಶಾಲೆಯ ಶಿಕ್ಷಕರಾದವರು ಆಡಳಿತ ಮಂಡಳಿ, ಮುಖ್ಯಶಿಕ್ಷಕರು, ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಜೊತೆಗೆ 100 ಕ್ಕೆ 100 ಫಲಿತಾಂಶ ತಮ್ಮ ವಿಷಯದಲ್ಲಿ ಬರುವಂತೆ ಆಗಬೇಕು. ಇದರಲ್ಲಿಯೂ ಮೀಸಲಾತಿಯಿಂದಾಗಿ ಬೇರೆ ಬೇರೆ ಜಿಲ್ಲೆಯಿಂದ ಬಂದ ಶಿಕ್ಷಕರಂತು ಇನ್ನೂ ಹೆಚ್ಚಿನ ಸವಾಲನ್ನು ಎದುರಿಸಬೇಕಾಗುವುದು. ( ಒತ್ತಡ ಸ್ಥಳೀಯ ಶಿಕ್ಷಕರಿಗೆ ಕಡಿಮೆ.. ಯಾಕೆಂದರೆ ಅವರ ಡೊನೇಷನ..ಜಾತಿಯ ಪ್ರಭಾವ, ರಾಜಕೀಯ ಪ್ರಭಾವವು ಹೆಚ್ಚಾಗಿರುವುದು) ಅನುಧಾನ ರಹಿತ ಶಾಲೆಗಳಲ್ಲಿ ಶಿಕ್ಷಕರ ನೌಕರಿಯ ಅಸ್ತಿತ್ವದ ಬಗ್ಗೆ ಮಾತನಾಡುತ್ತಾ ಒತ್ತಡ ಹೇರಲಾಗುವುದು.

ಮುಖ್ಯ ಶಿಕ್ಷಕರ ಒತ್ತಡ : ಮುಖ್ಯ ಶಿಕ್ಷಕರಾದವರು ಶಿಕ್ಷಕರು ಮತ್ತು ಮೇಲ ಅಧಿಕಾರಿಗಳ/ಜನಪ್ರತಿಗಳ/ ಆಡಳಿತ ಮಂಡಳಿಯ ನಡುವಿನ ಪೋಸ್ಟಮ್ಯಾನ ರೀತಿ ಕಾಯ9ನಿವ9ಹಿಸಬೇಕಾಗಿದೆ. ಆದರೂ ದಿನನಿತ್ಯ ಸಿಗುವವರು ಶಿಕ್ಷಕರು ಅವರ ಮೇಲೆ ಹೆಚ್ಚಿನ ಒತ್ತಡ ಇದ್ದೆ ಇರುವುದು. ಅದರಲ್ಲಿಯೂ ಗಣಿತ, ವಿಜ್ಞಾನ ಮತ್ತು ಇಂಗ್ಲೀಷ ಶಿಕ್ಷಕರಾದವರು ಹೆಚ್ಚು ಕಡಿಮೆ ಮುಖ್ಯ ಶಿಕ್ಷಕರ ವೈರಿಗಳಂತೆ ಕಂಡು ಬರುವರು. ಎಲ್ಲಾ ವಿಚಯಲ್ಲಿ 100 ಕ್ಕೆ 100 ಫಲಿತಾಂಶ ತರುವ ಹೊಣೆ ಮುಖ್ಯ ಶಿಕ್ಷಕರ ಮೇಲೆ ಇರುವುದರಿಂದ ಒತ್ತಡವನ್ನು ಶಿಕ್ಷಕರ ಮೇಲೆ ಬೇರೆ ಬೇರೆ ರೀತಿಯಲ್ಲಿ ತಿಳಿಸಲು ಪ್ರಯತ್ನಿಸುವರು. ಅದು ಶಿಕ್ಷಕರಿಗೆ ಒತ್ತಡವಾಗಿ ಪರಿಣಮಿಸಿರುವುದು.

ಜಪ್ರತಿನಿಧಗಳ ಮೀತಿ ಮಿರಿದ ಆಸಕ್ತಿ : ಸ್ಥಾಯಿ ಸಮಿತಿ ಸದಸ್ಯರು, ಎಂಎಲ್ಎ, ತಾಲ್ಲೂಕಾ ಪಂಚಾಯತ್ ಸದಸ್ಯರು ರೀತಿಯ ಎಲ್ಲಾ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಶಾಲೆಯಲ್ಲಿ ಒಂದು ರ್ಯಾಂಕ ಬಂದರೆ ಅಥವಾ ಶಾಲೆ ಉತ್ತಮ ಫಲಿತಾಂಶ ದಾಖಲಿಸಿದರೆ ಅದಕ್ಕೆ ತಾವೆಲ್ಲರೂ ಕಾರಣಿಕರ್ತರು ಎಂಬು ಪೋಸು ನೀಡಿ ದಿನಪತ್ರಿಕೆಯಲ್ಲಿ ಕಾಣಿಸಿಕೊಳ್ಳುವರು.  ಅದೇ ಫಲಿತಾಂಶ ಉತ್ತಮವಾಗಿರದೇ ಇದ್ದರೇ ಅದಕ್ಕೆ ಆಯಾ ವಿಷಯದ ಶಿಕ್ಷಕರನ್ನು ಹೊಣೆಯನ್ನಾಗಿಸಿ ಮನಸ್ಸಿಗೆ ಬಂದಂತೆ ತಮ್ಮ ವ್ಯಾಪ್ತಿ ಮೀರಿ ವತರ್ಿಸುವರು. ಶಿಕ್ಷಕರ ಸಮಸ್ಯೆಯನ್ನು ಆಲಿಸುವ ಬದಲು ತಮ್ಮದೇ ಉಪನ್ಯಾಸ ನೀಡಿ ಒತ್ತಡವನ್ನು ಹೇರುವರು. ಹಾಲಿ ಮಾಜಿಗಳೆಲ್ಲರೂ ಸ್ಪಧರ್ೆಗೆ ಬಿದ್ದವರೆಂತೆ ರ್ಯಾಂಕ ವಿಜೇತರನ್ನು ಸನ್ಮಾನಿಸಿ ಪ್ರಚಾರಕ್ಕಾಗಿ ಹಪಹಪಿಸುತ್ತಿರುವುದನ್ನು ಕಾಣಬಹುದು. ಜನಪ್ರತಿನಿಧಿಗಳ ವರ್ತನೆ ಶಿಕ್ಷಕರಲ್ಲಿ ಒತ್ತಡ ಹೆಚ್ಚಾಗಲು ಕಾರಣವಾಗಿರುವುದು.

ಪಾಲಕರ ಒತ್ತಡ : ಎಲ್ಲವುಗಳ ನಡುವೆ ಪಾಲಕರ ಒತ್ತಡ. ಮಕ್ಕಳಿಗೆ ಹೊಡೆದರೆ ಅದು ತಪ್ಪು, ಅತಿ ಹೆಚ್ಚು ಬೈದರೂ ತಪ್ಪು ಮಕ್ಕಳೀಗೆ ಹೆಚ್ಚು ಅಂಕ ಬೇಕು. ಇದು ಪಾಲಕರ ಮನಸ್ಥಿತಿ.  ಹತ್ತನೇ ತರಗತಿ ಮಕ್ಕಳ ಪಾಲಕರಿಗೆ ಬೆಳ್ಳಿಗೆ 5 ಗಂಟೆಗೆ ಪೋನ ಮಾಡಿ ಮಕ್ಕಳನ್ನು ಓದಿಸಲು ಎಬ್ಬಿಸುವದು, ರಾತ್ರಿ 10 ಗಂಟೆಗೆ ಪೋನ ಮಾಡಿ ಮಕ್ಕಳು ಏನು ಮಾಡಿದರು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಇದು ಪರಿಕ್ಷೇಗಿಂತ 4-5 ತಿಂಗಳು ಮುಂಚಿನಿಂದ ಪ್ರಾರಂಭವಾಗುವುದು. ಮಹಿಳಾ ಶಿಕ್ಷಕರು ರಾತ್ರಿ ಪೋನ ಮಾಡಿದಾದ ಏನೇನೋ ಅರ್ಥ ಮಾಡಿಕೊಂಡು ಕೆಲವು ಪಾಲಕರು ಮರುದಿನ ಶಾಲೆಗೆ ಬಂದಿರುವ ಉದಾಹರಣೆಯೂ ಇದೆ. ಒಟ್ಟಾರೇ  ಪಾಲಕರ ಒತ್ತಡ ಸಹಾ ಶಿಕ್ಷಕರ ಮೇಲೆ ಅತಿಯಾಗುತ್ತಾ ಇರುವುದು.

ಮೇಲೆ ಕಾಣಿಸಿದ ಎಲ್ಲಾ ರೀತಿಯಿಂದಲ್ಲೂ ಪ್ರೌಢ ಶಾಲಾ ಶಿಕ್ಷಕರ ಮೇಲೆ ಒತ್ತಡ ಇರುವುದು.  ಉತ್ತಮ ಫಲಿತಾಂಶ ಮತ್ತು  ರ್ಯಾಂಕ ಒತ್ತಡದ ನಡುವೆ ಶಿಕ್ಷಕರ ಕ್ರೀಯಾ ಶೀಲತೆ ಎಂಬುದು ನಶಿಸಿ ಹೋಗುತ್ತಿರುವುದು. ಪ್ರೌಢ ಶಾಲಾ ಮಕ್ಕಳಲ್ಲಿ ಸ್ವಂತಿಯನ್ನು ಬೆಳೆಸುವುದು, ಒಂದು ವಿಷಯದಲ್ಲಿ  ಆಸಕ್ತಿಯನ್ನು ಬೆಳೆಸುವುದು, ವಿಭಿನ್ನವಾಗಿ  ಆಲೋಚನೆ ಮಾಡುವ ಸಾಮಥ್ರ್ಯವನ್ನು ಬೆಳೆಸುವುದು, ತರ್ಕ ಮಾಡುವ ಸಾಮಥ್ರ್ಯ ಬೆಳೆಸುವುದು ಎಲ್ಲವೂ ಮರೆಯಾಗಿ 100 ಕ್ಕೆ 100 ಅಂಕ ಗಳಿಸುವುದು, 100 ಕ್ಕೆ 100 ಶಾಲಾ ಫಲಿತಾಂಶ ದಾಖಲಿಸುವುದು  ಹೇಗೆ ಎಂಬುದರ ಹಿಂದೆ ಬಿದ್ದಿರುವರು. ಎಲ್ಲೋ ಒಂದಿಬ್ಬರು ಸ್ವಲ್ಪ ಆಸಕ್ತಿ ತೋರಿಸಿ ವಿಜ್ಞಾನ ಮೇಳ, ಸಾಹಿತ್ಯ, ಭಾಷಣ ಎಂದು ಮಕ್ಕಳ ಬಗ್ಗೆ ಗಮನ ನೀಡಿದರೆ  ಅದಕ್ಕೆ ಮುಖ್ಯ ಶಿಕ್ಷಕರಿಂದ, ಪಾಲಕರಿಂದ, ಆಡಳಿತ ಮಂಡಳಿಯಿಂದ  ತಡೆಯಾಗುವುದು, ಅವೆಲ್ಲಾ ಸರಿ ಮೊದಲು ಫಲಿತಾಂಶದ ಬಗ್ಗೆ ಗಮನ ನೀಡಿ ಎಂಬ ಪುಕ್ಕಟೆ ಸಲಹೆ ಬರುವುದು ಒಟ್ಟಾರೆ ಪ್ರೌಢ ಶಾಲಾ ಶಿಕ್ಷಕರಲ್ಲಿ ಸ್ವಂತಿಕೆ ಎಂಬುದು ನಶಿಸಿ ಯಂತ್ರಗಳಂತೆ ಕಾರ್ಯನಿರ್ವಹಿಸುತ್ತಾ ಇರುವರು.

ಎಲ್ಲಾ ಒತ್ತಡಗಳ ನಡುವೆಯೂ ಕೆಲವೊಂದು ಶಿಕ್ಷಕರು ವಿಭಿನ್ನವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತಾ ಇರುವರು.  ಆದರೇ ದಿನ ಕಳೆದಂತೆ ಸಂಖ್ಯೆ ಕಡಿಮೆಯಾಗುತ್ತಾ ಇರುವುದು. ನಮ್ಮ ಶೈಕ್ಷಣೀಕ ವ್ಯವಸ್ಥೆಯೇ ಅಂಕ ಪದ್ದತಿಯೆಂಬ ಹುಚ್ಚು ಕುದುರೆಯನ್ನು ಏರಿ ಸಾಗುತ್ತಿರುವಾಗ ವ್ಯವಸ್ಥೆಯ ಪ್ರಮುಖ ಭಾಗವಾಗಿರುವ ಶಿಕ್ಷಕರು ವಿಭಿನ್ನವಾಗಿ ಯೋಚಿಸುದಾದರೂ ಹೇಗೆ? ಶಿಕ್ಷಕರ ಗೋಳು ಕೇಳುವವರಾದರು  ಯಾರು?

ಹೊಸ ಶಿಕ್ಷಣ ನೀತಿ ಜಾರಿಯಾಗುತ್ತಿದೆ. ಶಿಕ್ಷಣ ನೀತಿಯ ಬಗ್ಗೆ ಬರುತ್ತಿರುವ ಸುದ್ದಿಗಳು ಸ್ವರ್ಗವನ್ನೇ ಧರೆಗೆ ಇಳಿಸುವಂತೆ ಇರುವುದು. ಮೌಲ್ಯಾಂಕನ ಪದ್ದತಿಯಲ್ಲಿ ಬದಲಾವಣೆ ಹೊಸ ಶಿಕ್ಷಣ ನೀತಿಯಿಂದ ಆಗಬಹುದು ಎಂಬ ಆಶಾ ಭಾವನೆ ಇದೆ. ಅದೇ ಆಶಾ ಭಾವನೆಯೊಂದಿಗೆ ಪ್ರೌಢ ಶಾಲಾ ಶಿಕ್ಷಕರು ಮುಂದೆ ಸಾಗಬೇಕಾಗಿದೆ.

                                                                               

                                                                                                                                ವಿವೇಕ ಬೆಟ್ಕುಳಿ                                                                                                                                                                                                                                                                                                                  8722954123

Friday, September 4, 2020

ವಿದ್ಯಾಗಮ ಯೋಜನೆಯ ಮೂಲಕ ಕೊರೋನಾ ರಾಯಭಾರಿಗಳಾಗುತ್ತಿರುವ ಶಿಕ್ಷಕರು

 ವಿದ್ಯಾಗಮ ಯೋಜನೆಯ ಮೂಲಕ ಕೊರೋನಾ ರಾಯಭಾರಿಗಳಾಗುತ್ತಿರುವ ಶಿಕ್ಷಕರು

ನಮ್ಮ ಶಿಕ್ಷಣ ಇಲಾಖೆಗೆ ಏನಾಗಿದಿಯೋ ತಿಳಿಯದು. ಕಲಿಕೆಯ ಹೆಸರಿನಲ್ಲಿ ಹಳ್ಳಿಗೆ ಶಿಕ್ಷಕರು ಬೀದಿ ಬೀದಿಯಲ್ಲಿ ಪಾಠ ಮಾಡಲು ಪ್ರಾರಂಭಿಸಿರುವರು. ಶಾಲಾ ಪ್ರಾರಂಭ ಮಾಡಮಾಡಬಾರದು ಅದರಿಂದ ಮಕ್ಕಳಲ್ಲಿ ಕೋವಿಡ ಹರಡುವ ಸಾಧ್ಯತೆ ಹೆಚ್ಚು ಎಂದು ಒಂದು ಕಡೆ ಹೇಳುತ್ತಾ ಈಗ ಶಿಕ್ಷಕರೆ ಕೋವಿಡನ್ನು ಮಕ್ಕಳು ಇದ್ದಲಿಗೆ ತೆಗೆದುಕೊಂಡು ಹೋಗುವ ಕಾರ್ಯ ಮಾಡುತ್ತಿರುವರು. ರಾಜ್ಯದಲ್ಲಿ ಪ್ರತಿ ಹಳ್ಳಿಗೂ ಸಂಪರ್ಕದಲ್ಲಿರುವ ಇರುವ ಶಿಕ್ಷಕರು ವಿದ್ಯಾಗಮ ಯೋಜನೆಯ ಮೂಲಕ ಸಮುದಾಯದಲ್ಲಿ ಕೋವಿಡ ಪ್ರಸರಿಸಲು ಕಾರಣರಾಗುತ್ತಿರುವರು. ಈಗಾಗಲೇ ಜಿಲ್ಲೆಯಲ್ಲಿ ಒಂದೆರಡು ಸುದ್ದಿಗಳ ಹರಿದಾಡುತ್ತಿರುವುದು. ಶಿಕ್ಷಕರಿಗೆ ಸಂಬಂಳ ಕೊಡುತ್ತೇವೆ ಎಂಬ ಒಂದೇ ಒಂದು ಕಾರಣಕ್ಕಾಗಿ ಅವರಿಗೆ ಕೆಲಸ ನೀಡಬೇಕು ಎಂಬ ಮನಸ್ಥಿತಿಯಲ್ಲಿ ನಮ್ಮ ಶಿಕ್ಷಣ ಇಲಾಖೆ ಜಿದ್ದಿಗೆ ಬಿದ್ದರುವಂತೆ ಕಾಣುತ್ತಿರುವುದು. ಆ ಮುಖಾಂತರ ಮುಂದೆ ಸಮುದಾಯಕ್ಕೆ ಕಾಯಿಲೆ ಹರಡಲು ಕಾರಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. 

ಇನ್ನೂ ಒಂದು-ಎರಡು ತಿಂಗಳು ಮಕ್ಕಳು ಅವರದೇ ಆದ ರೀತಿಯಲ್ಲಿ ಕಲಿತರೇ ಏನಾದರೂ ತೊಂದರೇ ಇದೆಯೇ? ಕಲಿಕೆ ಎಂಬುದು ನಿರಂತರವಾಗಿ ಆಗುತ್ತಾ ಇರುವುದು. ಅದಕ್ಕೆ ಶಿಕ್ಷಕರ ಅಗತ್ಯವಿದೆ, ಹಾಗೆಂದು ಶಿಕ್ಷಕರು ಇಲ್ಲದೇ ಇದ್ದರೂ ಮಕ್ಕಳು ಕಲಿತೆ ಕಲಿಯುವರು ಅದಕ್ಕೆ ಅಗತ್ಯ ಬೆಂಬಲ ಬೇಕು.  ಹೀಗೆ ಇರುವಾಗ ಇಂತಹ ಸಂದಿಗ್ದ ಸ್ಥಿತಿಯಲ್ಲಿ ನಮ್ಮ ಶಿಕ್ಷಣ ಇಲಾಖೆ ಯಾಕೆ ಇಂತಹ ತೀಮರ್ಾನವನ್ನು ಮಾಡಿರುವದೋ ತಿಳಿಯದು.  

ಶಿಕ್ಷಕರನ್ನು ಶೈಕ್ಷಣಕ ಚಟುವಟಿಕೆಗಳಲ್ಲಿ ತೊಡಗಿಸಬೇಕೆಂಬ ಉದ್ದೇಶ ಇಲಾಖೆಗೆ ಇರುವುದು ಒಳ್ಳೆಯದು. ಆದರೇ ಆ ಮೂಲಕ ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡುವುದು ಎಷ್ಟು ಸರಿ?

ಆಥರ್ಿಕ ವರ್ಷದ ಕೊನೆಯಲ್ಲಿ ಬಂದ ಬಜೆಟನ್ನು ಖಚು೯ ಮಾಡಲು ತರಬೇತಿಯನ್ನಯ ಸಿಕ್ಕ ಸಿಕ್ಕಿದವರಿಗೆಲ್ಲಾ ನೀಡಿ ಮುಗಿಸುವುವದು ಪ್ರತಿ ವರ್ಷ ನಡೆಯುತ್ತಾ ಇರುವುದು. ಈಗ ಯಾಕೆ ಅಂತಹ ತರಬೇತಿಗಳನ್ನು ವ್ಯವಸ್ಥಿತಿವಾಗಿ ಮಾಡುತ್ತಿಲ್ಲ. ಅಗತ್ಯವಾದ ಸರಣಿ ತರಬೇತಿಗಳ ಮೂಲಕ ಶಿಕ್ಷಕರನ್ನು ಶೈಕ್ಷಣಿಕ ಚಟುವಟಿಕೆಯಲ್ಲಿ ಇರುವಂತೆ ಮಾಡಬಹುದಲ್ಲವೇ? 

ವಿವಿಧ ವಿಷಯ ಸಂಬಂಧಿತ ತರಬೇತಿಗಳು, ಹೊಸ ಶಿಕ್ಷಣ ನೀತಿಯ ಬಗ್ಗೆ, ಕಲಿಕಾ ಉಪಕರಣ ತಯಾರಿ, ಸಮುದಾಯದ ತೊಡಗಿಸುವಿಕೆ, ಮಗುವಿನ ಮನಸ್ಥಿತಿ ಅರಿಯುವುದು, ಮೌಲ್ಯಾಂಕನ ಪದ್ದತಿ, ಇಂತಹ ಹಲವು ವಿಚಾರಗಳ ಜೊತೆಗೆ ಬೇರೆ ಬೇರೆ ರಾಜ್ಯ ದೇಶಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಆಗಿರುವ ಕೆಲಸ ಅದರ ಪರಿಣಾಮ ಇಂತಹ ನೂರಾರು ವಿಚಾರಗಳ ಬಗ್ಗೆ ಶಿಕ್ಷಕರಿಗೆ ತಿಳಿಸುವ ಅಗತ್ಯವಿದೆ. ಆ ಮೂಲಕ ಎಲ್ಲಾ ಶಿಕ್ಷಕರನ್ನು ತೊಡಗಿಸಿಕೊಳ್ಳುವ ಸಾಧ್ಯತೆ ಇರುವುದು. ಅದಕ್ಕೆ ತಕ್ಕಂತೆ  ಸಿಆರ್ ಸಿ ಡಯೆಟ್, ಬ್ಲಾಕ ಮತ್ತು ಜಿಲ್ಲಾ ಹಂತದಲ್ಲಿ ಅಧಿಕಾರಿವರ್ಗವೂ ಇರುವುದು. ಸಂಪನ್ಮೂಲ ವ್ಯಕ್ತಿಗಳು ಇರುವರು. 

ಇದೆಲ್ಲವನ್ನು ಬಿಟ್ಟು, ಶಿಕ್ಷಕರನ್ನು ಊರಿನಲ್ಲಿ ಬೀದಿಗೆ ಬಿಟ್ಟು ಮಕ್ಕಳಿಗೆ ಪಾಠ ಮಾಡಲು ಹೇಳುವುದು ಎಷ್ಟುರ ಮಟ್ಟಿಗೆ ಸರಿ? 

ಈ ಬಗ್ಗೆ ಧ್ವನಿ ಎತ್ತಬೇಕಾದ ಶಿಕ್ಷಕರ ಸಂಘಟನೆಗಳು ಏನಾದವು? ಜನಪ್ರತಿಗಳು ಏನು ಮಾಡುತ್ತಿರುವರು? ಅಥವಾ ಯಾರಿಗೂ ಈ ಬಗ್ಗೆ ಆಸಕ್ತಿ ಇಲ್ಲವೇ? ವಿರೋಧಿಸುವವರ ಧ್ವನಿಯನ್ನು ತಡೆಯತ್ತಿರುವವರಾದರೂ ಯಾರು? 

ಬೇರೆ ಬೇರೆ ಊರುಗಳಿಂದ ಮುಖ್ಯವಾಗಿ ಪಟ್ಟಣಗಳಿಂದ ಹಳ್ಳಿಗೆ ಹೋಗಿ ಪಾಠ ಮಾಡುವ ಶಿಕ್ಷಕರು ಈ ಸಂದರ್ಭದಲ್ಲಿ ಸಮುದಾಯಕ್ಕೆ ಕೋವಿಡ ತೆಗೆದುಕೊಂಡು ಹೋಗುವ ರಾಯಭಾರಿಗಳಂತೆ ಕಾಣುತ್ತಿರುವರು. ಸಕರ್ಾರ ಹಾಗೂ ಅಧಿಕಾರಗಳು ಆದೇಶ ಪಾಲನೆ ಮಾತ್ರ ತಮ್ಮ ಕಾರ್ಯ ಎಂಬಂತೆ ಎಲ್ಲಾ ಜವಬ್ದಾರಿ ಸ್ಥಾನದಲ್ಲಿ ಇರುವವರು ತಮ್ಮ ಜವಬ್ದಾರಿಯಿಂದ ನುಣುಚಿಕೊಳ್ಳುತ್ತಿರುವರು.

ಉತ್ತರಕನ್ನಡ ಜಿಲ್ಲೆಯ ಒಂದೆರಡು ಕಡೆ ಮಕ್ಕಳಿಂದ ಶಿಕ್ಷಕರಿಗೆ, ಅಥವಾ ಶಿಕ್ಷಕರಿಂದ ಮಕ್ಕಳಿಗೆ ಹೇಗೋ ಸೋಂಕು ಕಾಣಿಸಿ ಕೊಂಡಿರುವ ಸುದ್ದಿ ಇದೆ. ಇದೇ ರೀತಿಯಾಗಿ ಎಲ್ಲಾ ಹಳ್ಳಿಗಳಲ್ಲಿ ಸೋಂಕು ವ್ಯಾಪಿಸುವ ಸಾಧ್ಯತೆ  ಇರುವುದು.

ಆತುರದ ನಿಧಾ೯ರ ಮಾಡುವ ಶಿಕ್ಷಣ ಇಲಾಖೆ, ಆದೇಶ ಪಾಲನೆಗೆ ಅಷ್ಟೇ ಸೀಮಿತವಾಗಿರುವ ಅಧಿಕಾರಿ ವರ್ಗ, ಪ್ರಚಾರದ ಗುಂಗಿನಲ್ಲಿ ಸಿಲುಕಿರುವ ಜನಪ್ರತಿಗಳು ಇವರನ್ನು ನಂಬಿದರೆ ಅನಾಹುತವೆ ಹೆಚ್ಚು.  ಯಾರಿಗೆ ಮಕ್ಕಳ ಬಗ್ಗೆ ಕಾಳಜಿ ಇದೆಯೋ ಶಿಕ್ಷಣಕ್ಕಿಂತ ಮಕ್ಕಳ ಆರೋಗ್ಯ ಮುಖ್ಯ ಎಂದು ಅನಿಸುತ್ತಾ ಇದೆಯೋ ಅಂತಹ ಪಾಲಕರು  ಸ್ವಂತ ನಿಧಾ೯ರ ತೆಗೆದುಕೊಂಡು  ತಮ್ಮ ಮಕ್ಕಳ ಬಗ್ಗೆ ತಾವೇ ಕಾಳಜಿ ವಹಿಸಬೇಕಾಗಿದೆ. 

ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ಆದರೂ ಶಿಕ್ಷಕರ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಅವರ ಆರೋಗ್ಯ ಮತ್ತು ಗೌರವವನ್ನು ಕಾಪಾಡುವದು, ಜೊತೆಗೆ ಮಕ್ಕಳ ಆರೋಗ್ಯವನ್ನು ಕಾಪಾಡಬೇಕಾಗಿದೆೆ. ಸಂಬಂಧಿಸಿದವರು ಗಮನ ಹರಿಸಿದರೆ ಒಳ್ಳೆಯದು. 

                                                                                                          ವಿವೇಕ ಬೆಟ್ಕುಳಿ

                                                                                                           8722954123


 

Wednesday, March 4, 2020

ಹಿರಿಯರು ಹೇಳಿಕೊಟ್ಟ ಊಟದ ಕಲೆ

ನಿಯಮಗಳು :

1.    ಕಾರೆ ಸೊಪ್ಪನ್ನು ತಿಂದರೂ ಕಾಯಕದಿಂದಲೇ ಗಳಿಸಿರಬೇಕು. ....
2.    ಊಟಕ್ಕೆ ಕುಳಿತುಕೊಳ್ಳುವ ಮೊದಲು ಕುಳಿತುಕೊಳ್ಳುವ ಜಾಗ ಶುಚಿಯಾಗಿರಬೇಕು…..
3.    ಬಾಯಿ ಮುಕ್ಕಳಿಸಿ ಶುಚಿಯಾಗಿ ಕೈತೊಳೆದುಕೊಳ್ಳಬೇಕು....
4.    ಗುರುನಾಮ ಸ್ಮರಣೆ ಮಾಡಿ ನೆಲದ ಮೇಲೆಯೇ ಚಕ್ಕಂಬಕ್ಕಾಲು ಹಾಕಿ ಕುಳಿತುಕೊಳ್ಳಬೇಕು.....
5.    ಊಟಕ್ಕೆ ಕುಳಿತಾಗ ನೆತ್ತಿಯ ಮೇಲೆ ಪೇಟ - ಪಟಗಾ ಸುತ್ತಿರುವುದಾಗಲೀ…. ಟೋಪಿಯಾಗಲೀ  ಇರಬಾರದು….
6.    ಕರವಸ್ತ್ರವಾಗಲೀ ಒಲ್ಲಿ ಟವಲ್ ಆಗಲೀ ನಿಮ್ಮ ಜೊತೆಗಿರಬೇಕು……
7.    ಊಟದೆಲೆ ಅಥವಾ ತಟ್ಟೆ ಈಗಾಗಲೇ ಶುಚಿಯಾಗಿಟ್ಟಿದ್ದರೂ ಮತ್ತೊಮ್ಮೆ ಕೊಂಚ ನೀರಿನಲ್ಲಿ ತೊಳೆಯಬೇಕು. …
8.    ಊಟಕ್ಕೆ ಕುಳಿತಾಗ ಪಾದರಕ್ಷೆಗಳನ್ನು ಧರಿಸಿರಬಾರದು…..
9.    ಊಟ ಮಾಡುವ ವೇಳೆಯಲ್ಲಿ ಕಸ ಗುಡಿಸಬಾರದು…… ಒಂದೇ ಸಮನೆ ದಿಟ್ಟಿಸಬಾರದು….
10.    ಯಾರೊಬ್ಬರೂ ಅತ್ತಿಂದಿತ್ತ ಓಡಾಡಬಾರದು…..
11.    ಕುಡಿಯುವ ನೀರು ತುಂಬಿದ ಚೆಂಬು -ಲೋಟ ಪಕ್ಕದಲ್ಲಿರಬೇಕು,….
12.    ಗಂಟಲು ಮೇಲೆತ್ತಿ ಲೋಟದಲ್ಲಿಯೇ ನೀರು ಕುಡಿಯಬೇಕು,…. ಕಚ್ಚಿ ಕುಡಿಯಬಾರದು……
13.    ನಾಯಿಮರಿ ಅಥವಾ ನಮ್ಮ ಜೀವಿಗಳಿಗಾಗಿ ಮೊದಲು ಒಂದು ತುತ್ತು ತೆಗೆದಿರಿಸಬೇಕು.....
14.    ಊಟದ ವೇಳೆಗೆ ಯಾರಾದರೂ ಬಳಿಗೆ ಬಂದರೆ ಮೊದಲು ಅವರಿಗೆ ಊಟ ನೀಡಲು ಆದ್ಯತೆ ಕೊಡಬೇಕು...
15.    ನೀರು ಅಥವಾ ಸಾರಿನಲ್ಲಿ ಒಮ್ಮೆ ಅಂಗೈ ತೇವ ಮಾಡಿಕೊಳ್ಳಬೇಕು…..
16.    ಅಂಗೈ ಮುಂಗೈ ಮೂತಿಗಳಿಗೆ ಅನ್ನ - ಮುದ್ದೆ ಅಥವಾ ತಿನ್ನುವ ಯಾವುದೂ ಮೆತ್ತಿಕೊಳ್ಳದಂತೆ ನಾಜೂಕಾಗಿರಬೇಕು…...
17.    ತೊಡೆಯ ಮೇಲಾಗಲೀ ನೆಲದ ಮೇಲಾಗಲೀ ದರ್ಬಾರಿನಂತೆ ಎಡಗೈ ಹೂರಿಕೊಂಡಿರಬಾರದು.... 
18.    ತಲೆ ಮೈಕೈ ಕೆರೆದುಕೊಳ್ಳಬಾರದು…. ಕಣ್ಣು ಉಜ್ಜಬಾರದು…. ಅತ್ತಲಿತ್ತ ಪದೇ ಪದೇ ತಲೆ ಎತ್ತಿ ನೋಡಬಾರದು
19.    ನಾವು ತಿನ್ನುವ ಶಬ್ಧ ಪಕ್ಕದಲ್ಲಿ ಕುಳಿತವರಿಗೆ ಕೇಳಿಸಬಾರದು.... ಲೊಸ ಲೊಸ ಲೊಸಗುಟ್ಟುತ್ತಾ ಅಥವಾ ಗಬಗಬ ಬುಕ್ಕಬಾರದು...
20.    ಉಣ್ಣುವ ತುತ್ತು ಎಣಿಸಬಾರದು.....ಮುದ್ದೆ - ರೊಟ್ಟಿ ಎಣಿಸಬಾರದು.... ಊಟಕ್ಕೆ ನೀಡುವಾಗಲೇ ಆಳು ನೋಡಿ ಅನ್ನ ಬಡಿಸಬೇಕು
21.    ಇಷ್ಟು ತಿಂದ - ಅಷ್ಟು ತಿಂದ ಎಂದು ಮಾತನಾಡಬಾರದು....
22.    ಗಂಭೀರವಾದ ಯಾವ ಸಂಗತಿಗಳನ್ನೂ ಪ್ರಸ್ತಾಪಿಸಬಾರದು.... (ಈಗಿನ ಸೇರ್ಪಡೆ: ಟೀವಿ ಮೊಬೈಲ್ ಇತ್ಯಾದಿ ನೋಡಬಾರದು)
23.    ನೆತ್ತಿಗೇರಿಸಿಕೊಳ್ಳುವಂತೆ ನಗುವುದಾಗಲೀ ಮಾತಾಡುವುದಾಗಲೀ ಮಾಡಬಾರದು…..
24.    ಊಟಕ್ಕೆ ನೀಡುವ ವ್ಯಕ್ತಿಯನ್ನು ಹೊರತುಪಡಿಸಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳಬೇಕು….
25.    ಕುಳಿತು ಸಾವಧಾನವಾಗಿ ತಿನ್ನಬೇಕೇ ಹೊರತು ನಿಂತುಕೊಂಡು, ಓಡಾಡುತ್ತಾ ಅಥವಾ ಪ್ರಯಾಣಿಸುತ್ತಾ ತಿನ್ನಬಾರದು….
26.    ಮಧ್ಯದಲ್ಲಿ ಅವಶ್ಯಕವಿದ್ದರೆ ಅರ್ಥಮಾಡಿಕೊಂಡು ಊಟಕ್ಕೆ ಬಡಿಸುವವರು ನೀಡಬೇಕೇ ಹೊರತು ಇಷ್ಟು ಸಾಕ - ಅಷ್ಟು ಸಾಕ ಎಂದು ಅಳತೆ ಪ್ರಮಾಣಗಳಲ್ಲಿ ತೋರಿಸಿ ಕೇಳಬಾರದು.
27.    ತಂಗಳಾದರೂ ಸರಿಯೇ ಬಿಸಿಯೆಂದು ಭಾವಿಸಿ ಕಣ್ಣಿಗೊತ್ತಿಕೊಂಡು ಆರೋಗಿಸಬೇಕು...... ಒಂದು ಅಗುಳನ್ನೂ ವ್ಯರ್ಥ ಮಾಡಬಾರದು
28.    ತಿನ್ನುವ ಪದಾರ್ಥವನ್ನು ಇಲಿ ಗೆಬರಾಡಿದಂತೆ ತರಿದು ತಿನ್ನಬಾರದು….. ಅಥವಾ ಕೈನಲ್ಲಿ ತೂಗಿಸಿಕೊಂಡು ತಿನ್ನಬಾರದು…..
29.    ಊಟದೆಲೆ ತಟ್ಟೆಯ ಪಕ್ಕದಲ್ಲಿ ಪದಾರ್ಥ ಚೆಲ್ಲಾಡಬಾರದು…..
30.    ಬಿಸಿ ಆರಿಸಿಕೊಂಡು ತಿನ್ನಬೇಕು….. ತುಟಿಗಳನ್ನು ಮುಚ್ಚಿಡಿದು ಬಾಯೊಳಗೇ ನಮುಲಿ ನುಂಗಬೇಕು….
31.    ಒಮ್ಮೆ ಬಾಯಿಗಿರಿಸಿಕೊಳ್ಳಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಬೆರಳುಗಳಿಂದ ತೆಗೆದುಕೊಳ್ಳಬೇಕೇ ಹೊರತು ಅಂಗೈ ಬಳಸಬಾರದು….
32.    ಊಟ ಮುಗಿದ ಬಳಿಕ ಅಗತ್ಯವಿರುವಷ್ಟು ನೀರು ಕುಡಿಯಬೇಕು…..
33.    ಊಟದ ಬಳಿಕ ಅಭ್ಯಾಸವಿದ್ದಲ್ಲಿ ತಾಂಬೂಲ ಸವಿಯಬೇಕು….  ಕಳ್ಳೇಬೀಜ, ಚಿನಕ್ಹುರುಳಿ, ಹಣ್ಣು ಮುಂತಾದವು ಸೇವಿಸಬಹುದು…..
34.    ಊಟ ಕೊಟ್ಟವರ ಬಳಿ ಕೃತಜ್ಞತೆಯ ನಾಲ್ಕು ಮಾತಾಡಬೇಕು...
35.    ಊಟ ಮುಗಿದ ಕೂಡಲೇ.. ಊಟಕ್ಕೆ ಕುಳಿತ ಜಾಗದಲ್ಲಿ ಅರೆಗಳಿಗೆಯೂ ಕೂರಬಾರದು...
36.    ಕೈತೊಳೆದುಕೊಂಡು ಊಟ ಮಾಡಿದವರೇ ಊಟದ ತಟ್ಟೆಯನ್ನು ತೊಳೆದಿಡಬೇಕು....
37.    ಹೊತ್ತು ಮೀರಿಯಾಗಲೀ ಹೊತ್ತಿಗೆ ಮುಂಚಿತವಾಗಲೀ ಊಟ ಮಾಡಬಾರದು...
38.    ಉಪ್ಪು ಹುಳಿ ಖಾರ ಯಾವುದೇ ವ್ಯತ್ಯಾಸಗಳಿದ್ದರೂ ಅಸಮಾಧಾನ ವ್ಯಕ್ತಪಡಿಸುವುದಾಗಲೀ ಸಿಟ್ಟಿಗೇಳುವುದಾಗಲೀ ಮಾಡಬಾರದು....
39.    ಊಟ ಮಾಡುವಾಗ ಊಟವನ್ನಷ್ಟೇ ಮಾಡಬೇಕು ಹೊರತು ಇನ್ನೊಂದು ಮತ್ತೊಂದು ಕೆಲಸ ಮಾಡಬಾರದು....
40.    ಇನ್ನೊಂದು ಮಾಡಿಕೊಂಡೇ ಊಟ ಮಾಡಬಾರದು.... ಅಥವಾ ಊಟ ಮಾಡಿಕೊಂಡೇ ಇನ್ನೊಂದು ಮಾಡಬಾರದು.
41.    ಊಟ ಮಾಡಿ ಮೈ ಮುರಿಯಬಾರದು
42.    ಊಟದ ಬಳಿಕ ಗಾಳಿಗೆ ಮೈಯೊಡ್ಡಿ ನಾಲ್ಕೆಜ್ಜೆ ನಡೆದರೆ ಚೆಂದ
43.    ಎದೆ ಬಗ್ಗಿಸಿ ಊಟ ಮಾಡಬೇಕೇ ಹೊರತು ಎದೆ ಸೆಟೆದು (ಸೇದಿಕೊಂಡು) ಊಟ ಮಾಡಬಾರದು
44.    ಎಂಜಲ ಕೈನಲ್ಲಿ ತಟ್ಟೆ ಲೋಟ ಇತರೆ ಯಾವುದೇ ಪಾತ್ರೆ ಪಗಡಿ ಮುಟ್ಟಬಾರದು
45.    ಸಾರಿನ ಚೌಟು ಅನ್ನಕ್ಕೂ ಅನ್ನದ ಚಮಚವನ್ನು ಪಾಯಸಕ್ಕೂ ಮುಟ್ಟಿಸದೆ ಹೀಗೆ ಎಲ್ಲವೂ ಪ್ರತ್ಯೇಕವಾಗಿ ಇರಿಸಬೇಕು
46.    ಎಂಜಲು ಮಾಡಿದ ಪದಾರ್ಥಗಳನ್ನು ಇತರರಿಗೆ ನೀಡಬಾರದು
47.    ಊಟದ ಬಳಿಕವೂ ಬಾಯಿ ಮುಕ್ಕಳಿಸುವುದನ್ನು ಮರೆಯಬಾರದು
48.    ಊಟ ಮಾಡಿದ ತಕ್ಷಣವೇ ಮಲಗಬಾರದು ಅಥವಾ ಮಲಗಿಕೊಂಡು ಏನನ್ನೂ ತಿನ್ನಬಾರದು
49.    ಊಟದ ನಡುವೆ ಇನ್ನೂ ಹೆಚ್ಚಿನ ಅಗತ್ಯ ಅಹಾರ ಬೇಗ ಬರಲಿಲ್ಲವೆಂದು ಕೂಗುವುದಾಗಲೀ ಪಾತ್ರೆ ಶಬ್ದ ಮಾಡುವುದಾಗಲೀ ಮುಂತಾದ ಅಸಮಾಧಾನ ತೋರಬಾರದು.
50.    ನಿದ್ರೆಗಣ್ಣಿನಲ್ಲಿ ತೂಕಡಿಸುತ್ತಾ ಊಟ ಮಾಡಬಾರದು.
51.    ಮೊದಲು ತಟ್ಟೆಯಲ್ಲಿ ಬಡಿಸಿದ ಆಹಾರವನ್ನು ನೋಡಿಕೊಂಡು, ಇನ್ನೂ ಬೇಕೆನಿಸಿದರೆ ಮಾತ್ರ ಹಾಕಿಸಿಕೊಳ್ಳಬೇಕು. ತಟ್ಟೆಯಲ್ಲಿ ಸ್ವಲ್ಪವೂ ಉಳಿಯದಂತೆ ಊಟ ಮಾಡಬೇಕು.
52.    ಊಟದ ಕಲೆ ಅಂದರೆ 'ಊಟ ಮಾಡುವುದೂ ಒಂದು ಕಲೆ' .
53.    ಯಾರಾದರೂ ಈ ಕಲೆಗಳನ್ನು ರೂಢಿಸಿಕೊಂಡರೆ ಉಂಡ ಅನ್ನಹಾರ ಚೆನ್ನಾಗಿ ಪಚನವಾಗಿ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ.
54.    ಈ ರೀತಿ ಊಟ ಮಾಡುವವರನ್ನು ನೋಡಿ, ನಾವೂ ಹೀಗೆಯೇ ಊಟ ಮಾಡಬೇಕು ಅಂತ ಬೇರೆಯವರು ಭಾವಿಸುವಂತೆ ಊಟ ಮಾಡಬೇಕು.

Friday, February 14, 2020

ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು : ನಾಟಕಕಾರ, ಕತೆಗಾರ, ನಟ, ಚಿಂತಕ ಎಸ್. ಎನ್. ಸೇತುರಾಮ್ ಅವರ ಮುನ್ನುಡಿ

 ಪೌರತ್ವ ತಿದ್ದುಪಡಿ ಕಾಯಿದೆಯ ವಿರೋಧದ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಸಲ್ಮಾನ ಧುರೀಣರೊಬ್ಬರು ಭಾಷಣದಲ್ಲಿ ಘೋಷಿಸಿದ್ದು . .”ಜಗತ್ತಿನ ಎಲ್ಲ ಮುಸಲ್ಮಾನರೂ ನನ್ನ ಅಣ್ಣ ತಮ್ಮಂದಿರು”.  ಸತ್ಯವೇ !  ಬರೀ ಮುಸಲ್ಮಾನರೇಕೆ ? ಜಗತ್ತಿನ ಎಲ್ಲ ಮನುಷ್ಯರೂ ನನ್ನ ಅಣ್ಣ ತಮ್ಮಂದಿರೇ. ವಸುಧೈವ ಕುಟುಂಬಕಂ ಎಂದು ನಂಬಿದವನು ನಾನು.  ಸರಹದ್ದುಗಳ ಅವಶ್ಯಕತೆ ಇರಲಿಲ್ಲ. ಗಡಿ ಕಾಯುವ ಸೈನಿಕ ಬೇಕಿರಲಿಲ್ಲ. ಪೌರತ್ವದ ಪ್ರಶ್ನೆಯೇ ಇರಲಿಲ್ಲ. ನನಗಂತೂ ಏನೂ ಬೇಕೇ ಇರಲಿಲ್ಲ.


ತಪ್ಪೋ ಸರಿಯೋ !  ಮುಂಚೂಣಿಯಲ್ಲಿದ್ದ ವಿದ್ಯಾವಂತ ಧುರೀಣರು ದೇಶದ ಸ್ವಾತಂತ್ರ್ಯದ ಸಮಯದಲ್ಲಿ, ಅವರ ವಿವೇಕದಲ್ಲಿ, ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸಿದರು. ಧುರೀಣರಲ್ಲಿ ಮುಕ್ಕಾಲು ಮೂರು ವಾಸಿ ವಕೀಲರು... ಭಾವಕ್ಕಿಂತ ತರ್ಕವೇ ಮುಖ್ಯವಾಯಿತೇನೋ !  ಮೇಜಿನ ಮೇಲಿನ ಭೂಪಟದಲ್ಲಿ ಗೆರೆಗಳನ್ನು ಎಳೆದು ಸರಹದ್ದುಗಳನ್ನು ಗುರುತಿಸಿದಾಗ, ಅದೂ ಧರ್ಮದ ಆಧಾರದ ಮೇಲೆ ಗುರುತಿಸಿದಾಗ, ಇಲ್ಲಿರುವ ಆ ಧರ್ಮದವ ಮತ್ತು ಅಲ್ಲಿರುವ ಈ ಧರ್ಮದವನ ಮನಃಸ್ಥಿತಿಯ ಅರಿವೇ ಇರಲಿಲ್ಲ.
ಮನುಷ್ಯ ಯಂತ್ರವಲ್ಲ. ನೆನಪುಗಳ, ಭಾವಗಳ ಮುದ್ದೆ. ಇದು ನನ್ನ ನೆಲ. ನಾನು ನಡೆದಾಡಿದ ಹಾದಿ. ನನ್ನ ಶಾಲೆ. ನಾನು ಈಜಿದ ನದಿ, ಕೆರೆ. ನನ್ನ ಅಪ್ಪ, ಅಮ್ಮ, ಅಜ್ಜಂದಿರ ಜಾಗ. ನನ್ನ ಪೂಜಾ ಸ್ಥಳ. ಇದೆಲ್ಲದರ ಗುರುತು ಮತ್ತು ಹತ್ತು ತಲೆಮಾರುಗಳ ಪ್ರಜ್ಞೆಯಲ್ಲಿ ಅವನ ಅಸ್ತಿತ್ವ.

ಬದುಕು ಅನ್ನುವುದು ಬರೀ ದೈಹಿಕ ತುರ್ತಲ್ಲ. ಅದೊಂದು ಭಾವನಾತ್ಮಕ ಇರುವು. ನೆಲ ಅಂದ ಮೇಲೆ ಬರೀ ನೆಲ, ಇದೇನು ಅದೇನು, ಅನ್ನುವುದಾದರೆ, ಸುಖಕ್ಕೆ ಹೆಂಡತಿ, ಇವಳೇನು.. ಅವಳೇನು ..ಅಂದ ಹಾಗೇನೇ. ಮಾನಸಿಕವಾಗಿ ನನ್ನ ನೆಲ ಅನ್ನುವುದೊಂದು ನೆಲೆ. ಬುಡ ಕಿತ್ತು ಹೊರಡುವುದು ಸುಲಭವಲ್ಲ.

ನೆಲೆ ಇಲ್ಲದವರು ವಲಸೆ ಹೋದರು. ಇದ್ದವರು ಅಲ್ಲಲ್ಲೇ ಉಳಿದರು. ಸಮಸ್ಯೆ ಶುರುವಾದದ್ದೇ ಅಲ್ಲಿ. ಮುಸಲ್ಮಾನ ಬಂಧುಗಳಿಗೆ ಅಂತ ಹೇಳಿ ಪೂರ್ವ ಪಶ್ಚಿಮ ಪಾಕಿಸ್ತಾನವಾಯಿತು. ಆದರೆ ಸ್ಥಿತಿವಂತ ಹಿಂದೂಗಳು ಅಲ್ಲೇ ಉಳಿದರು. ಮನೆಯಲ್ಲಿ ಸ್ವಂತ ತಮ್ಮ, ಹೆಂಡತಿ, ಮಕ್ಕಳು ಹಸಿವೆಯಲ್ಲಿ ನರಳ್ತಿದ್ದಾರೆ.  ಪಕ್ಕದ ಹಿಂದೂವಿನ ನೆಲದಲ್ಲಿ ಪೈರು ನಳನಳಿಸ್ತಿದೆ. ಅವನ ಗೋದಾಮಿನಲ್ಲಿ ಧಾನ್ಯ ತುಂಬಿದೆ. ಕೊಟ್ಟಿಗೆಯಲ್ಲಿ ಕೆಚ್ಚಲು ತುಂಬಿದ ಹಸು ಮೆಲುಕು ಹಾಕುತ್ತಿದೆ. ಕರು ಅಂಗಳದಲ್ಲಿ ಕುಣೀತಿದೆ. “ನನ್ನ ಆಸ್ತಿಯನ್ನು ಇವನು ಆಕ್ರಮಿಸಿಕೊಂಡಿದ್ದಾನೆ” ಅನ್ನೋದು ಸಹಜವಾಗಿ ಉದ್ಭವಿಸಿದ ಭಾವ. ಇಲ್ಲಿ ಮನೆಯಲ್ಲಿ ಹಸುಗೂಸು ಹಸಿವಿನಲ್ಲಿ ಹಾಲಿಗೆ ಕಿರ್ ಅಂತಿದ್ದಾಗ, ಅಲ್ಲಿ ಅವನು ಅದೇ ಹಾಲನ್ನ ಧಾರಾಳವಾಗಿ ಕಲ್ಲು ಮೂರ್ತಿಯ ಮೇಲೆ ಸುರೀತಿದ್ದರೆ ಕಣ್ಣು ಕೆಂಪಗಾಗತ್ತೆ. ಹೊಡೆದೋಡಿಸಬೇಕು ಅನ್ನಿಸತ್ತೆ. ಈ ಮನಃಸ್ಥಿತಿಯಲ್ಲಿ, ಇಲ್ಲದವರು ಗುಂಪಾಗಿ, ಇದ್ದವರನ್ನು ಎಬ್ಬಿಸುವ ಪ್ರಯತ್ನ ಸಹಜ. ಇದಕ್ಕೆ ಆಳುವವರು ಕುಮ್ಮಕ್ಕು ಕೊಟ್ಟು ಧರ್ಮದ ಅಫೀಮೂ ಬೆರೆತರೆ, ಕ್ರೌರ್ಯ ಸ್ವಾಭಾವಿಕವಾಗೇ ಉದ್ಭವಿಸತ್ತೆ. ಈ ಕ್ರೌರ್ಯಕ್ಕೆ ಈಡಾಗಿ 1970 ರಲ್ಲಿ ಅಂದಿನ ಪಶ್ಚಿಮ ಪಾಕಿಸ್ತಾನ ಇಂದಿನ ಬಾಂಗ್ಲಾದೇಶದಿಂದ ಮನೆ ಮಾರು ಕಳಕೊಂಡು ಬಂದು ಇಲ್ಲಿ ನಿರಾಶ್ರಿತರಾಗಿ ಸಿಂಧನೂರಿನಲ್ಲಿ ನೆಲೆ ಕಾಣುತ್ತಿರುವ ಜೀವಗಳ ನೆನಪುಗಳನ್ನು ಈ ಪುಸ್ತಕದ ಬರಹಗಳು ದಾಖಲಿಸುತ್ತವೆ.

ಮನುಷ್ಯನ್ನ ಎಬ್ಬಿಸುವುದು ಬಹಳ ಸುಲಭ. ಮೊದಲು ಬೆಳೆ ನಾಶ ಮಾಡಿ. ಅರ್ಧ ಕುಗ್ಗುತ್ತಾನೆ. ಅವನ ಗೋದಾಮುಗಳನ್ನು ಲೂಟಿ ಮಾಡಿ. ಮತ್ತಷ್ಟು ಕರಗತಾನೆ. ದನ ಕರುಗಳನ್ನ ಸಾಗಿಸಿ, ನೆಲ ಕಚ್ತಾನೆ. ಪೂಜಾ ಸ್ಥಳಗಳನ್ನ ಅಪವಿತ್ರ ಮಾಡಿ - -ಗುಡಿಗೋಪುರಗಳನ್ನ ಕೆಡವಿ, ಒಂಟಿಯಾಗ್ತಾನೆ. ಅಸ್ತಿತ್ವ ಸಾಯತ್ತೆ. ಹೆಂಡತಿಯ ಸೆರಗೆಳಿ. ಪ್ರೀತಿಯ ಮಗಳನ್ನ ಅವನೆದುರಿಗೇ ಬೆತ್ತಲು ಮಾಡಿ ಸಾಮೂಹಿಕ ಅತ್ಯಾಚಾರಕ್ಕೆ ಈಡು ಮಾಡಿ. ಹೆಂಡತಿ ಹೆಂಡತಿಯಾಗಿ ಉಳಿಯಲ್ಲ. ಮಗಳು ಮಗಳಾಗಿ ಉಳಿಯಲ್ಲ. ಈಗ ಅವನು ಪೂರ್ಣ ನಿರಾಶ್ರಿತ ! ಅಲೆಮಾರಿ !

ಎಲ್ಲರೂ ಅಸಭ್ಯರೇನಲ್ಲ. ಆದರೆ ಇದರ ಚೈತನ್ಯವಿರುವ ಅಸಭ್ಯರು ಇದ್ದಾರೆ ಎನ್ನುವುದು ಸತ್ಯ. ರಾಜಕಾರಣ ಧರ್ಮದ ಅನೈತಿಕ ನೆಂಟಸ್ತಿಕೆಯಲ್ಲಿ ಹುಟ್ಟೋದು ಸೈತಾನ. ಅವನಿಗೆ ಇಂತಹದ್ದೇ ಅನ್ನುವ ಧರ್ಮವಿಲ್ಲ. ಎಲ್ಲ ಧರ್ಮಗಳಲ್ಲೂ ಅಷ್ಟೇ. ಜೊತೆಗಿಷ್ಟು ವಿದ್ಯೆ ಬೆರೆಸಿ ವಿವೇಕ ಕಳೆದರೆ ವಿನಾಶದ ಯಂತ್ರ ತಯಾರಾಗತ್ತೆ. ಈ ವಿನಾಶದ ಯಂತ್ರಕ್ಕೆ ಈಡಾಗಿ, ನೆಲೆ ಅಸ್ತಿತ್ವ ಕಳಕೊಂಡು ಐವತ್ತು ವರ್ಷದ ನಂತರವೂ ಬೆಂಗಾಡು ಸಿಂಧನೂರಿನಲ್ಲಿ ಕೂತು ನೆಲೆ ತಡಕ್ತಿರೋರ ಬದುಕು ಬವಣೆಯ ಚಿತ್ರಣ ಇಲ್ಲಿದೆ.


Courtesy :  Ayodhya Books