ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Monday, December 11, 2023

ಆನೆಗಳ ಸಭೆಯ ತೀರ್ಮಾನದಂತೆ ಮುಖ್ಯಮಂತ್ರಿಗಳಿಗೆ ಬರೆದ ಪತ್ರ. - ಗುರುಮೂರ್ತಿ ಜೋಗಿಬೈಲು.

ಗೆ,

ಮಾನ್ಯ  ಮುಖ್ಯಮಂತ್ರಿಗಳು

ಕರ್ನಾಟಕ   ಸರ್ಕಾರ.

 ಮಾನ್ಯ   ಅರಣ್ಯ  ಸಚಿವರು

ಕರ್ನಾಟಕ  ಸರ್ಕಾರ .

ಮತ್ತು

ಹಿರಿಯ ಅರಣ್ಯ   ಅಧಿಕಾರಿಗಳು.

ಕರ್ನಾಟಕ   ಸರ್ಕಾರ .

 

ಯಿಂದಾ,

ಕಾಡಿನ   ಆನೆಗಳು.

 

ಮಾನ್ಯರೆ,

ಇತ್ತೀಚೆಗೆ   ನಮ್ಮ   ಗುಂಪಿನ  ಆನೆಯೊಂದನ್ನು   ಸೆರೆ  ಹಿಡಿಯುವ   ಕಾರ್ಯಾಚರಣೆಯಲ್ಲಿ  ಆನೆ  ಮರಣಿಸಿರುವುದು   ತಮ್ಮ  ಗಮನಕ್ಕೆ  ಬಂದಿದೆ   ಎಂದು  ಭಾವಿಸುತ್ತೇವೆ.   ಅಂತಹುದೇ   ಕಾರ್ಯಾಚರಣೆಯಲ್ಲಿ  ಮನುಷ್ಯರು   ಸೆರೆ  ಹಿಡಿದು   ಹಿಂಸಿಸಿ   ಸಾಕಿಕೊಂಡು  "ಅರ್ಜುನ"   ಎಂದು ಹೆಸರಿಟ್ಟುಕೊಂಡಿದ್ದ  ಆನೆಯೂ  ಮರಣಿಸಿದೆಯಷ್ಟೆ.

ಅದಕ್ಕಾಗಿ   ತಾವು ಸಂತಾಪ  ವ್ಯಕ್ತಪಡಿಸಿರುವ   ಸಂಗತಿ ತಿಳಿಯಿತು.  ತಮ್ಮ  ಸೂಕ್ಷ್ಮತೆಗೆ  ಅಭಾರಿಗಳಾಗಿದ್ದೇವೆ.

 ಮನುಷ್ಯ  ಲೋಕದ ತಾರತಮ್ಯದ ರೂಡಿಯಂತೆ  ಎರಡೂ  ಆನೆಗಳ   ಸಾವಿನ  ಬಗ್ಗೆಯೂ  ತಾರತಮ್ಯ ದಿಂದ  ಪ್ರತಿಕ್ರಿಯಿಸಿರುವುದು   ವಿಷಾದನೀಯ.

 ಕಾಡಿನ  ಆನೆಗಳಾದ   ನಮ್ಮ  ಬದುಕು   ಇಂದು   ಅತ್ಯಂತ  ಸಂಕಷ್ಟದಲ್ಲಿದೆ.   ನಾವು  ಒಡಾಡಿಕೊಂಡಿದ್ದ  ಬಹಳಷ್ಟು   ಪ್ರದೇಶಗಳು   ಕೃಷಿಗಾಗಿ,   ರಸ್ತೆಗಳ   ನಿರ್ಮಾಣಕ್ಕಾಗಿ,   ವಿವಿಧ   ಅಭಿವೃದ್ಧಿ  ಹೆಸರಿನ  ಯೋಜನೆಗಳಿಗಾಗಿ  ಬಳಸಲ್ಪಟ್ಟಿವೆ.   ನಾವು  ಓಡಾಡುತ್ತಿದ್ದ

ದಾರಿಗಳಲ್ಲಿ   ಬೇಲಿಗಳು   ನಿರ್ಮಾಣವಾಗಿವೆ.  ನಮ್ಮ  ಕಾಡಿನ  ಪ್ರದೇಶವು   ನಿರಂತರವಾಗಿ  ಕಡಿಮೆಯಾಗುತ್ತಿರುವುದರಿಂದ    ನಮ್ಮ   ಗುಂಪುಗಳು   ಅನಿವಾರ್ಯವಾಗಿ   ಆಹಾರ ಹುಡುಕುತ್ತಾ   ಕೃಷಿ  ಪ್ರದೇಶಗಳಿಗೆ  ಬರುವಂತಾಗುತ್ತಿದೆ.   ಇದು   ಅಲ್ಲಿ ವಾಸಮಾಡುತ್ತಿರುವ  ಮನುಷ್ಯರು   ಮತ್ತು  ನಮ್ಮ  ನಡುವಿನ ಸಂಘರ್ಷಕ್ಕೆ   ಕಾರಣವಾಗುತ್ತಿದೆ.  ಇದು  ನಮ್ಮವರ  ಮತ್ತು   ಮನುಷ್ಯರ  ಜೀವನಷ್ಟಕ್ಕೆ   ಕಾರಣವಾಗುತ್ತಿದೆ.

 

ಮನುಷ್ಯರಂತೆಯೇನಾವು  ಆನೆಗಳೂ  ಮತ್ತು   ಎಲ್ಲಾ  ಜೀವಿಗಳಿಗೂ  ಕೂಡ    ಭೂಮಿಯ ಮೇಲೆ ಬದುಕುವ  ಹಕ್ಕು   ಇದೆ ಎಂಬುದನ್ನು  ತಾವುಗಳು   ಒಪ್ಪುತ್ತೀರಿ    ಎಂದು   ಭಾವಿಸುತ್ತೇವೆ.

ಅಂತೆಯೇ   ಕಾಡಿನಲ್ಲಿ  ಸ್ವಾತಂತ್ರ್ಯವಾಗಿ  ಬದುಕಿರುವ   ನಮ್ಮನ್ನು  ಬಲಾತ್ಕಾರವಾಗಿ  ಬಂಧಿಸಿ    ಹಿಂಸಿಸಿ   ಪಳಗಿಸಿಕೊಂಡು  ನಿಮ್ಮ   ಕೆಲಸಗಳಿಗಾಗಿ  ಆಡಂಬರದ  ಮೆರವಣಿಗೆಗಳಿಗಾಗಿ   ಬಳಸಿಕೊಳ್ಳುವುದು   ನಮ್ಮ   ಬದುಕುವ   ಹಕ್ಕಿನ  ಸ್ಪಷ್ಟ   ಉಲ್ಲಂಗನೆಯಾಗಿದೆ.

 

  ಎಲ್ಲಾ   ಸಮಸ್ಯೆಗಳಿಗೂ   ಶಾಶ್ವತ   ಪರಿಹಾರ   ರೂಪಿಸಬೇಕೆಂದು  ಮೂಲಕ   ವಿನಂತಿಸುತ್ತಿದ್ದೇವೆ.

 

ನಮ್ಮ   ಹಕ್ಕೊತ್ತಾಯಗಳು. 

*  ಕಾಡಿನಲ್ಲಿ   ನಾವು ವಾಸಿಸುತ್ತಿರುವ   ಪ್ರದೇಶಗಳನ್ನು  ನಮಗಾಗಿ  ಮತ್ತು ಇತರ   ಕಾಡಿನ ಜೀವಿಗಳಿಗಾಗಿ  ಬಿಟ್ಟುಕೊಡಬೇಕು. 

*ನಾವು  ವಾಸಿಸುವ   ಮತ್ತು  ಆಹಾರಕ್ಕಾಗಿ  ಓಡಾಡುವ    ದಾರಿಗಳನ್ನು   ಗುರುತಿಸಿ,      ಪ್ರದೇಶದಲ್ಲಿ   ಕೃಷಿ   ಮಾಡಿಕೊಂಡು   ಬದುಕುತ್ತಿರುವ  ರೈತ    ಜಮೀನುಗಳನ್ನು    ಸೂಕ್ತ   ಬೆಲೆ  ನೀಡಿ   ಕೊಂಡುಕೊಂಡು  ಕಾಡಿಗೆ  ಸೇರಿಸಬೇಕು.

 *ನಾವು   ವಾಸಿಸುತ್ತಿರುವ   ಪ್ರದೇಶದಲ್ಲಿ   ಯಾವುದೇ  ಅಭಿವೃದ್ಧಿ  ಯೋಜನೆಗಳನ್ನು   ಕೈಗೊಳ್ಳುವುದನ್ನು   ನಿಲ್ಲಿಸಬೇಕು.

 *   ನಾವು  ವಾಸಿಸುವ   ಆಸುಪಾಸಿನಲ್ಲಿ  ಇರುವ   ಜನರಿಗೂ   ನಮಗೂ  ಸಂಘರ್ಷ ವಾಗದಂತೆ  ಸೂಕ್ತ   ಮುನ್ನೆಚ್ಚರಿಕೆ   ಕ್ರಮಗಳನ್ನು  ಕೈಗೊಳ್ಳಬೇಕು

*  ನಮ್ಮನ್ನು  ಸೆರೆಹಿಡಿದು   ಹಿಂಸಿಸಿ   ಪಳಗಿಸುವ  ಪರಿಪಾಟವನ್ನು  ಸೂಕ್ತ  ಕಾನೂನು   ರೂಪಿಸುವ   ಮೂಲಕ  ತಡೆಗಟ್ಟಿ    ನಮ್ಮ   ಬದುಕುವ   ಹಕ್ಕನ್ನು   ಖಾತರಿಗೊಳಿಸಬೇಕು

*ನಮ್ಮನ್ನು   ಕೆಲಸಕ್ಕಾಗಿ,   ಮೆರವಣಿಗೆಗಳಿಗಾಗಿ   ಮತ್ತು   ಮನರಂಜನೆಗಾಗಿ   ಬಳಸುವುದನ್ನು   ನಿಷೇಧಿಸಬೇಕು.

 ಪರಿಸರ  ಪ್ರವಾಸೋದ್ಯಮದ  ಹೆಸರಲ್ಲಿ  ನಮ್ಮ   ಪ್ರದೇಶಕ್ಕೆ  ಬಂದು   ತೊಂದರೆ ನೀಡುವುದನ್ನು  ನಿಲ್ಲಿಸಬೇಕು.   ನಮಗೂ  ಸ್ವತಂತ್ರ್ಯ ವಾಗಿ   ಬದುಕುವ  ಹಕ್ಕು   ಇದೆ   ಎಂಬುದನ್ನ   ಗೌರವಿಸಬೇಕು

  ನಮ್ಮ      ಎಲ್ಲಾ   ಹಕ್ಕೊತ್ತಾಯಗಳನ್ನು    ಪರಿಗಣಿಸಿ    ಸೂಕ್ತ   ಕ್ರಮ  ಕೈಗೊಳ್ಳಬೇಕೆಂದು      ಮೂಲಕ  ಒತ್ತಾಯಿಸುತ್ತಿದ್ದೇವೆ.

 

ಇಂತಿ   ತಮ್ಮ  ಸಹಜೀವಿಗಳಾದ

ಕಾಡಿನ  ಆನೆಗಳು.

 

(   ನಮ್ಮ   ಮನವಿಯನ್ನು  ಸರ್ಕಾರಕ್ಕೂ   ಮತ್ತು   ನಮ್ಮ   ಪರವಾಗಿ ಚಿಂತಿಸುವವರ  ಗಮನಕ್ಕೂ  ತರಬೇಕಾಗಿ  ವಿನಂತಿ.

  ಬೆರಳಚ್ಚಿಸಿದವರು.  - ಗುರುಮೂರ್ತಿ  ಜೋಗಿಬೈಲು. )


ರಾಜನ ಮೂರು ಪ್ರಶ್ನೆಗಳು... ⁉ ( ಸಂಗ್ರಹ)

 - ರಾಜನ ಮೂರು ಪ್ರಶ್ನೆಗಳು... ⁉

ಪ್ರತಿದಿನವೂ ಶ್ರದ್ಧೆಯಿಂದ ಭಗವಂತನನ್ನು ಪೂಜಿಸುವವರೂ ಕೂಡಾ ಭಗವಂತ ನೆಂದರೆ ಏನು? ಯಾರು? ಎನ್ನುವ ಪ್ರಶ್ನೆಗೆ ಉತ್ತರಿಸಲಾರರು(ಬಹುಶಃ ಈ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು)

ಈ ಕಥೆಯನ್ನು ಕೇಳಿ --

ಒಬ್ಬ ರಾಜನಿಗೆ ಮೂರು ಅರ್ಥವಾಗದ ಪ್ರಶ್ನೆಗಳು ಬಹುವಾಗಿ ಕಾಡುತ್ತಿದ್ದವು --

೧  - ದೇವರು ಯಾವ ಕಡೆ ನೋಡುತ್ತಾನೆ?

೨  - ದೇವರು ಎಲ್ಲಿರುತ್ತಾನೆ?

೩  - ದೇವರು ಏನು ಮಾಡುತ್ತಾನೆ?

ಈ ಮೂರು ಪ್ರಶ್ನೆಗಳಿಗೆ ಎಷ್ಟು ಯೋಚಿಸಿದರು ಸರಿಯಾದ ಉತ್ತರ ದೊರಕಲಿಲ್ಲ ದರ್ಬಾರಿನಲ್ಲಿ ರಾಜನು ಎಲ್ಲರೊಡನೆ  ಸಮಾವೇಶಗೊಂಡು ಅಲ್ಲಿ ಹಾಜರಿದ್ದ ಎಲ್ಲ ಪಂಡಿತರು ಮೇಧಾವಿಗಳನ್ನುದ್ದೇಷಿಸಿ ಈ ಎಲ್ಲಾ ಪ್ರಶ್ನೆಗಳಿಗೆ

ಸರಿಯಾದ ಉತ್ತರ ಕೊಟ್ಟವರಿಗೆ ಸೂಕ್ತವಾದ ಬಹುಮತಿಯನ್ನು ಕೊಡುವುದಾಗಿಯೂ ತಪ್ಪಿದರೆ/ ತಪ್ಪಿದ್ದಲ್ಲಿ ಉಗ್ರವಾದ ಶಿಕ್ಷೆಯನ್ನು ನೀಡುವುದಾಗಿಯೂ ತಿಳಿಸುತ್ತಾನೆ.ರಾಜನ ಶಿಕ್ಷೆಯ  ಭಯದಿಂದ ಉತ್ತರ ಕೊಡಲು ಯಾರು ಮುಂದೆ ಬರಲಿಲ್ಲ.ಇದೇ ವಿಷಯವಾಗಿ ರಾಜ್ಯದಲ್ಲೆಲ್ಲಾ ಡಂಗುರ ಸಾರಿಸಲಾಯಿತು.ಇದನ್ನು ಕೇಳಿಸಿಕೊಂಡ ದನಗಾಹಿ ಒಬ್ಬನು ಉತ್ತರ ಕೊಡುವುದಾಗಿ ಒಪ್ಪಿ

ಮುಂದೆ ಬಂದನು ಅವನನ್ನು ರಾಜನ ಆಸ್ಥಾನಕ್ಕೆ ಕರೆಸಲಾಯಿತು ಅವನು ಉತ್ತರಿಸುವ ಮೊದಲು ರಾಜನಿಗೆ ಒಂದು ವಿಷಯವನ್ನು ಹೇಳುತ್ತಾನೆ-- 

"ಹೇಳುವವನು ಗುರು ಅವನು ಮೇಲಿರಬೇಕು ಅದರಂತೆ ಕೇಳುವವನು ಶಿಷ್ಯ ಅವನು ಕೆಳಗಿರಬೇಕು"

-- ಅದಕ್ಕೆ ರಾಜನು ಸಮ್ಮತಿಸಿ ಸಿಂಹಾಸನದಿಂದ ಕೆಳಗಿಳಿದು ಕುಳಿತನು ದನಗಾಹಿ ಸಿಂಹಾಸನದ ಮೇಲೆ ಕೂರುತ್ತಾನೆ.

ನಂತರ ದನಗಾಹಿ ರಾಜನಿಗೆ ಪ್ರಶ್ನೆಗಳನ್ನು ಕೇಳಲು ಸೂಚಿಸುತ್ತಾನೆ* 


(1) - ಮೊದಲನೇ ಪ್ರಶ್ನೆ -ದೇವರು ಯಾವ ಕಡೆ ನೋಡುತ್ತಾನೆ?

- ಕೂಡಲೇ ದನಗಾಹಿ ಒಂದು ಉರಿಯುತ್ತಿರುವ ದೀಪವನ್ನು ತರಿಸಲು ಹೇಳುತ್ತಾನೆ ಅದರಂತೆ ಸಭೆಯ ಮಧ್ಯದಲ್ಲಿ ಉರಿಯುತ್ತಿರುವ ದೀಪವನ್ನು ತಂದಿಡಲಾಗುತ್ತದೆ. ರಾಜರೇ ಹೇಳಿ -ಈ ದೀಪ ಯಾವ ಕಡೆಗೆ ನೋಡುತ್ತಿದೆ- ನನ್ನ ಕಡೆಗೋ,

ನಿಮ್ಮ ಕಡೆಗೋ, ಮೇಲೆಯೋ, ಕೆಳಗಡೆಯೋ, ಪೂರ್ವಕ್ಕೋ , ಪಶ್ಚಿಮಕ್ಕೋ ಎನ್ನುತ್ತಾನೆ*

ಆಗ ರಾಜನು  - "ಎಲ್ಲ ಕಡೆಗೂ" ಎಂದು ಉತ್ತರಿಸುತ್ತಾನೆ ಆಗ ದನಗಾಹಿ ಇಷ್ಟು ಸಣ್ಣ ಜ್ಯೋತಿ ಎಲ್ಲಾ ಕಡೆಗೂ ನೋಡುತ್ತಿದೆಯಾದರೆ ಪರಂಜ್ಯೋತಿ ಸ್ವರೂಪನಾದ ಭಗವಂತನು ಎಲ್ಲ ಕಡೆಗೂ ನೋಡಲಾರನಾ, ಸಮಸ್ತ ಜೀವಿಗಳ ಕಣ್ಣಲ್ಲಿ ಬೆಳಕಾಗಿರುವ ಪರಂಜ್ಯೋತಿಯೇ ಪರಮಾತ್ಮ...!!🪔🙏

 (2) - ಎರಡನೇ ಪ್ರಶ್ನೆ "ದೇವರು ಎಲ್ಲಿರುವನು?"

ಆಗ ದನಗಾಹಿ ಒಂದು ಪಾತ್ರೆಯಲ್ಲಿ ಹಾಲನ್ನು ತರುವಂತೆ ಹೇಳುತ್ತಾನೆ ಹಾಲನ್ನು ತಂದಿರಿಸಿದಾಗ ರಾಜರೇ ಈ ಹಾಲಿನಲ್ಲಿ ತುಪ್ಪ ಎಲ್ಲಿರುವುದು ತೋರಿಸುವಿರಾ ಎನ್ನುವನು ಆಗ ರಾಜನು ಹಾಲನ್ನು ಕುದಿಸಿ, ಹೆಪ್ಪಿಟ್ಟು ಅದು ಮೊಸರಾದ ನಂತರ ಅದನ್ನು ಚೆನ್ನಾಗಿ ಕಡೆದರೆ ಬೆಣ್ಣೆ ಸಿಗುತ್ತೆ ನಂತರ ಅದನ್ನು ಹದವಾಗಿ ಕಾಯಿಸಿದಾಗ ತುಪ್ಪ ಸಿಗುತ್ತದೆ.

ಆಗ ದನಗಾಹಿ - ಸರಿಯಾಗಿ ಹೇಳಿದಿರಿ ರಾಜರೇ- ಅದೇ ರೀತಿ ಹೃದಯವೆಂಬ "ಹಾಲ"ನ್ನು "ಗುರು" ಎನ್ನುವ "ಬೆಂಕಿ"ಯಿಂದ ಚೆನ್ನಾಗಿ ಕಾಯಿಸಿ "ಮನಸ್ಸು" ಎನ್ನುವ ಹೆಪ್ಪನ್ನಿಟ್ಟು ಬರುವ ಮೊಸರನ್ನು "ಸಾಧನೆ" ಎಂಬ ಕಡಗೋಲಿನಿಂದ ಚೆನ್ನಾಗಿ ಕಡೆದರೆ "ಜ್ಞಾನ" ಎನ್ನುವ ಬೆಣ್ಣೆ ಸಿಗುತ್ತದೆ...!

ಆ ಬೆಣ್ಣೆಯನ್ನು "ಅಂತರಾತ್ಮ" ಎನ್ನುವ ಬೆಂಕಿಯಿಂದ ಹದವಾಗಿ ಕಾಯಿಸಿದರೆ "ಪರಮಾತ್ಮ' ಎನ್ನುವ ತುಪ್ಪ ಸಿಗುತ್ತದೆ*

(3) - ಮೂರನೇ ಪ್ರಶ್ನೆ- ದೇವರು ಏನು ಮಾಡುತ್ತಾನೆ?

ಆಗ ದನಗಾಹಿ ನಾನೊಬ್ಬ ದನಗಾಹಿ, ನೀವು ಈ ರಾಜ್ಯದ ಮಹಾರಾಜರು- ಕೆಳಗಿದ್ದ ನನ್ನನ್ನು ಸಿಂಹಾಸನದ ಮೇಲೆ ಕೂಡಿಸಿ,  ಸಿಂಹಾಸನದಲ್ಲಿದ್ದ

ನಿಮ್ಮನ್ನು ಕೆಳಗಿಳಿಸಿದ್ದು..!, ಇದೇ ಪರಮಾತ್ಮನ ಲೀಲೆ, ಸತ್ಕರ್ಮಗಳನ್ನು ಮಾಡುವ ಜೀವಿಗಳಿಗೆ ಮುಂದಿನ  ಜನ್ಮದಲ್ಲಿ ಉತ್ತಮ ಜನ್ಮವನ್ನು ನೀಡುವ,  ದುಷ್ಕರ್ಮ ಮಾಡುವವರಿಗೆ ಮುಂದಿನ ಜನ್ಮದಲ್ಲಿ ದುಸ್ತರ ಜೀವನ ನೀಡುವುದು ಪರಮಾತ್ಮನ ಕೆಲಸ...!🙏

ಈ ಉತ್ತರಗಳನ್ನು ಕೇಳುತ್ತಿದ್ದಂತೆ ಇಡೀ ಸಭೆಯು ಅಲ್ಲಿ ನೆರದಿದ್ದವರ ಕರತಾಡನದಿಂದ ಮಾರ್ಮೊಳಗಿತು

🕉 ಸರ್ವೇ ಜನಾಃ ಸುಖಿನೋ ಭವಂತು🕉