ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Monday, July 25, 2011

ಉಶೀನರ ಎಂಬ ಮಹಾದಾನಿ -

ನಮ್ಮ ದೇಶದಲ್ಲಿ ಅನೇಕ ದಾನಿಗಳು ಆಗಿ ಹೋಗಿದ್ದಾರೆ. ಅವರ ದಾನದ ಕಥೆಗಳು ಅನೇಕರಿಗೆ ಸ್ಫೂರ್ತಿ ನೀಡಿವೆ. ಆದರೆ ಕೆಲವೊಂದು ಪ್ರಸಂಗಗಳು ಹೆಚ್ಚು ಪ್ರಸಿದ್ಧಿಯನ್ನು ಪಡೆದಿಲ್ಲ. ಅಂಥ ಹೆಚ್ಚು ಪ್ರಚಾರ ಪಡೆಯದ ಒಬ್ಬ ದಾನಿ ಉಶೀನರ. ಈ ಕಥೆ ಮಹಾಭಾರತದ ವನಪರ್ವದಲ್ಲಿ ಬಂದಿದೆ.

ಉಶೀನರ ಭೋಜನಗರದಲ್ಲಿ  ಒಂದು ಕಾಲದಲ್ಲಿ  ಮಹಾಪ್ರತಾಪಶಾಲಿಯಾದ ರಾಜನಾಗಿದ್ದ. ಆತ ತುಂಬ ಉದಾರಿಯೆಂತಲೂ, ಪರೋಪಕಾರಿ ಹಾಗೂ ಮಹಾದಾನಿ ಎಂತಲೂ ಪ್ರಸಿದ್ಧನಾಗಿದ್ದ.

ಇವನ ದಾನಶೀಲತೆಯ ಕೀರ್ತಿ ಮೂರು ಲೋಕಗಳಲ್ಲೂ ಹರಡಿತ್ತು. ಈ ವಿಷಯ ದೇವತೆಗಳ ನಾಯಕನಾದ ದೇವೇಂದ್ರನನ್ನು ಮುಟ್ಟಿತು. ಬಹುಶಃ ಮಾನವರ ಸಾಧನೆಗಳು ದೇವತೆಗಳಲ್ಲೂ ಅಸೂಯೆಯನ್ನು ಉಂಟುಮಾಡುತ್ತಿದ್ದವೆಂದು ತೋರುತ್ತದೆ.

ಇಂದ್ರನಿಗೆ ಉಶೀನರನ ದಾನ ಮಾಡುವ ಮನಸ್ಸು ಯಾವ ಮಟ್ಟದವರೆಗೂ ಹೋಗಬಲ್ಲುದು ಎಂಬುದನ್ನು ಪರೀಕ್ಷಿಸುವ ಮನಸ್ಸಾಯಿತು. ಈ ಪರೀಕ್ಷೆ ನಡೆಸುವುದಕ್ಕಾಗಿ ಆತ ಇತರ ದೇವತೆಗಳ ಸಹಾಯ ಕೇಳಿದ.

ಅಗ್ನಿಯನ್ನು ಕರೆದು ಒಂದು ಪಾರಿವಾಳದ ರೂಪವನ್ನು ಪಡೆಯಲು ಹೇಳಿದ. ತಕ್ಷಣ ಪಾರಿವಾಳದ ರೂಪದಲ್ಲಿ ಅಗ್ನಿ ನಿಂತ. ಇಂದ್ರ ಸ್ವತಃ ತಾನೇ ನಾಯಿಯ ರೂಪ ತಾಳಿ ಪಾರಿವಾಳವನ್ನು ಹಿಡಿಯಲು ಬೆನ್ನು ಹತ್ತಿದ.

ಗಾಬರಿಯಾದ ಪಾರಿವಾಳ ಹಾರುತ್ತ ಹಾರುತ್ತ ಉಶೀನರನ ಬಳಿಗೆ ಬಂದಿತು. ರಾಜ ತುಂಬ ದಯಾಳುವಲ್ಲವೇ? ಅದಕ್ಕೆ ಶರಣಾಗತಿಯನ್ನು ನೀಡಿದ. ಅದರ ಹಿಂದೆಯೇ ನಾಯಿಯೂ ಓಡಿ ಬಂತು. ತನಗೆ ಆಹಾರವಾಗಬೇಕಿದ್ದ ಪಾರಿವಾಳದ ಕಡೆಗೆ ನುಗ್ಗಲು ನೋಡಿತು. ಅದನ್ನು ಉಶೀನರ ತಡೆದು ನಿಲ್ಲಿಸಿದ.

ಆಗ ನಾಯಿ ಹೇಳಿತು,  `ರಾಜಾ, ನೀನು ಮಾಡುವುದು ಅನ್ಯಾಯ. ಅದು ನನ್ನ ಆಹಾರ. ಅಲ್ಲಿಂದ ಇಲ್ಲಿಯವರೆಗೂ ಅದನ್ನು ಅಟ್ಟಿಸಿಕೊಂಡು ಬಂದಿದ್ದೇನೆ. ನನಗೆ ಬೆಳಿಗ್ಗಿನಿಂದ ಯಾವ ಆಹಾರವೂ ದೊರೆತಿಲ್ಲ.

ಈ ಪಾರಿವಾಳವೇ ನನ್ನ ಇಡೀ ಮನೆಮಂದಿಗೆಲ್ಲ ಆಹಾರ. ಇದು ಸಿಗದಿದ್ದರೆ ನನ್ನ ಹೆಂಡತಿ, ಮಕ್ಕಳು ಮತ್ತು ನಾನು ಉಪವಾಸದಿಂದ ಸಾಯಬೇಕಾಗುತ್ತದೆ. ಆದ್ದರಿಂದ ಪಾರಿವಾಳವನ್ನು ನನಗೆ ಕೊಟ್ಟು ಬಿಡು.`

ರಾಜ ಈಗಾಗಲೇ ಪಾರಿವಾಳಕ್ಕೆ ರಕ್ಷಣೆಯ ಅಭಯವನ್ನು ನೀಡಿದ್ದಾಗಿದೆ. ಅದನ್ನು ನಾಯಿಗೆ ಒಪ್ಪಿಸುವುದು ಸಾಧ್ಯವಿಲ್ಲ. ಆದರೆ ನಾಯಿಯ ವಾದವೂ ಸರಿಯಾದದ್ದೇ. ಅದಕ್ಕೆ ತನ್ನ ಆಹಾರವನ್ನು ಪಡೆದುಕೊಳ್ಳುವ ಅಧಿಕಾರವಿದೆ.

ಪಾರಿವಾಳವನ್ನು ಅದಕ್ಕೆ ಕೊಡದಿದ್ದರೆ ನಾಯಿಗೆ ಅಪಚಾರ ಮಾಡಿದಂತಾಗುತ್ತದೆ. ಹೀಗೆ ಯೋಚಿಸಿ ಉಶೀನರ ನಾಯಿಗೆ ಹೇಳಿದ, `ಪಾರಿವಾಳಕ್ಕೆ ನಾನು ರಕ್ಷಣೆ ನೀಡಿದ್ದರಿಂದ ಅದನ್ನು ನಿನಗೆ ಕೊಡಲಾರೆ.

ಆದರೆ ನೀನೂ ಉಪವಾಸ ಬೀಳಬಾರದು. ಅದಕ್ಕೆ ಪಾರಿವಾಳದ ತೂಕದ ಮಾಂಸವನ್ನು ನನ್ನ ದೇಹದಿಂದ ಕೊಡುತ್ತೇನೆ` ಎಂದು ಹೇಳಿ ತಕ್ಕಡಿಯನ್ನು ತರಿಸಿ ಅದರ ಒಂದು ತಟ್ಟೆಯಲ್ಲಿ ಪಾರಿವಾಳವನ್ನಿಟ್ಟು ಮತ್ತೊಂದರಲ್ಲಿ ತನ್ನ ದೇಹದ ಭಾಗಗಳನ್ನು ಕತ್ತರಿಸಿ ಹಾಕುತ್ತ ಬಂದ.

ಅದೆಷ್ಟು ಮಾಂಸವನ್ನು ಹಾಕಿದರೂ ಪಾರಿವಾಳದ ತಟ್ಟೆ ಮೇಲಕ್ಕೇರುತ್ತಲೇ ಇಲ್ಲ! ಕೊನೆಗೆ ತಾನೇ ತಟ್ಟೆಯಲ್ಲಿ ಕುಳಿತು ತನ್ನ ಇಡೀ ದೇಹವನ್ನೇ ಸಮರ್ಪಿಸಿಕೊಂಡ. ಈ ಸರ್ವಾರ್ಪಣ ಭಾವವನ್ನು ಕಂಡು ಇಂದ್ರ, ಅಗ್ನಿ ತೃಪ್ತರಾಗಿ, ಪ್ರತ್ಯಕ್ಷವಾಗಿ ಅವನು ಮತ್ತೆ ಮೊದಲಿನಂತಾಗುವಂತೆ ವರ ನೀಡಿದರು. ಅವನ ಖ್ಯಾತಿ ಮತ್ತಷ್ಟು ಹೆಚ್ಚಿತು.

ಘನವಾದ ತತ್ವವೊಂದಕ್ಕೆ ದಿನರಾತ್ರಿ ಮನಸೋತು, ಬೇರೆ ಏನನ್ನೂ ಚಿಂತಿಸದೇ ಸದಾ ಅದೇ ತತ್ವಕ್ಕೇ ತನ್ನನ್ನು ತೆತ್ತುಕೊಂಡು ಜೀವಭಾರವನ್ನು ಮರೆತ ಇಂಥ ಮಹಾನುಭಾವರ ಜೀವನ ಅಸಾಮಾನ್ಯವಾದದ್ದು

Krupe: : Prajavani  - July 15, 2011
http://www.prajavani.net/web/include/story.php?news=1649&section=136&menuid=14

No comments:

Post a Comment