Wednesday, July 13, 2011

ಕಾಲವಲ್ಲದ ಕಾಲ

ಕಾಲವಲ್ಲದ ಕಾಲ
ಧೋಮಳೆಯ ಸುರಿಸುತಿವೆ
ಮೋಡಗಳ ಅಣಕಿಸುತ ನಿನ್ನ ಕಣ್ಣು |
ಮನೆಯೊಳಗೆ ಇದ್ದರೂ ಮಳೆಯಲ್ಲಿ ತೋಯುತಿಹೆ
ನಿಟ್ಟಿಸುತ ತೆರೆದಿರುವ ಬಾಗಿಲನ್ನು ||

ಮೋಡ ಮುಸುಕಿದ ಇರುಳು ಆಗಸದ ತಾರೆಗಳು
ಕಾಣದಾಗಿವೆ ಮೇಲೆ ಬಾನಿನಲ್ಲಿ
ಮೋಡ ಮುಸುಕಿದ್ದರೂ ಮಳೆ ಸುರಿಯುತಿದ್ದರೂ
ಜೋಡಿ ನಕ್ಷತ್ರಗಳು ಕಣ್ಣಿನಲ್ಲಿ ||

ಹೊರಗೆ ತಣ್ಣಗೆ ಗಾಳಿ ನಡುಗುತಿವೆ ಮರ ಗಿಡಾ
ಒಳಗೆ ಬಿಸಿಯುಸಿರ ಹಬೆ ಹಾಯುತ್ತಿದೆ |
ಕಂಬನಿಯ ತನಿಮಳೆಗೆ ನೆಂದ ಮಾತಿನ ಹಕ್ಕಿ
ತುಟಿಯಂಚಿನಲಿ ತೊಪ್ಪ ತೋಯುತ್ತಿದೆ ||

ಸುರಿವ ಕಂಬನಿಯಲ್ಲಿ ಕಣ್ಣ ಕಾಡಿಗೆ ಕರಗಿ
ಕೆನ್ನೆಸರಪಳಿಯನ್ನು ಬರೆಯುತ್ತಿದೆ |
ಮಾಮರದ ಮೇಲೊಂದು ಕೂ ಎಂಬ ಕೋಗಿಲೆ
ಕೂಗು ಬಾಗಿಲವರೆಗು ಹಾಯುತ್ತಿದೆ ||

- ಹೆಚ್.ಎಸ್. ವೆಂಕಟೇಶಮೂರ್ತಿ

No comments:

Post a Comment

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......