ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Monday, April 11, 2011

ವಿಜ್ಞಾನ ಮತ್ತು ಸಮಾಜ - ಡಾ. ಹೆಚ್. ನರಸಿಂಹಯ್ಯ

ವಿಜ್ಞಾನ ಮತ್ತು ಸಮಾಜ
ವಿಜ್ಞಾನದ ಯಾವುದೇ ವಿಭಾಗವೂ ಸಮಾಜದ ಒಳಿತಿಗಾಗಿ ಉಪಯೋಗಕ್ಕೆ ಬರಬಲ್ಲದು. ಅನೇಕ ಕ್ಷೇತ್ರಗಳಲ್ಲಿ ರಸಾಯನಶಾಸ್ತ್ರದ ಬಳಕೆ ಕಂಡು ಬರುತ್ತದೆ. ರಾಸಾಯನಿಕ ಕ್ರಿಯೆ ಇಲ್ಲದ ಕಾರ್‍ಯಗಳು ಅಪರೂಪ. ಜೀವನವೇ ಬಹುಪಾಲು ರಸಾಯನಶಾಸ್ತ್ರವಾಗಿ ಕಂಡುಬರುತ್ತದೆ. ವಿeನದ ಈ ವಿಭಾಗದ ಪ್ರಾಧಾನ್ಯ ತುಂಬಾ ಹೆಚ್ಚಾಗಿದ್ದು, ಆಳವಾದ ಸಂಶೋಧನೆಯ ಮೂಲಕ ಮನುಷ್ಯಕುಲದ ಸಂತೋಷಕ್ಕಾಗಿ ಇದರ ಉಪಯೋಗವಾಗಬೇಕು.
ಸಂಶೋಧನೆ ದಿನದಿನಕ್ಕೆ ಹೆಚ್ಚು ದುಬಾರಿಯಾಗುತ್ತಿದೆ. ಭಾರತದಂತಹ ಅಭಿವೃದ್ಧಿಶೀಲ ದೇಶಗಳಿಗೆ ಇಷ್ಟೇ ಪ್ರಮುಖವಾದ ಅನೇಕ ಅವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿ ಇರುತ್ತದೆ. ವಿಜ್ಞಾನದ ಸಂಶೋಧನೆಯಲ್ಲಿ, ಗುಣಮಟ್ಟದಲ್ಲಾಗಲಿ, ಸಾಮರ್‍ಥ್ಯದಿಂದಾಗಲಿ ಭಾರತದ ವಿಜ್ಞಾನಿಗಳು, ಜಗತ್ತಿನ ಯಾವುದೇ ವಿಜ್ಞಾನಿಗಳಿಗೂ ಕಡಿಮೆ ಅಲ್ಲ. ವಿಜ್ಞಾನದ ಯೋಜನೆಗಳಿಗೆ, ಕಾರ್‍ಯಕ್ರಮಗಳಿಗೆ, ಅಪಾರ ಹಣವನ್ನು ಮುಂದುವರೆದ ದೇಶಗಳು ತೊಡಗಿಸುವಂತೆ ನಮ್ಮಲ್ಲಿ ಸಾದ್ಯವಿಲ್ಲದೆ ಇರುವುದರಿಂದ ಹೊಸ ಸಂಶೋಧನೆಗಳಲ್ಲಿ ಆ ದೇಶಗಳೊಡನೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಪರದೇಶಗಳನ್ನು ಸುಮ್ಮನೆ ಅನುಸರಿಸುವುದಕ್ಕಿಂತ ನಮ್ಮ ಸಮಾಜಕ್ಕೆ ಪ್ರಸ್ತುತವಾದ ಸಮಸ್ಯೆಗಳ ಕಡೆ ಸಂಶೋಧನೆ ಹೆಚ್ಚಿನ ಗಮನ ಕೊಡಬೇಕು.
ವಿಜ್ಞಾನಿಗಳು ತಮ್ಮ ಸಂಶೋಧನೆಗಳನ್ನು ಮುಂದುವರೆಸಿಕೊಂಡು ಹೋಗುವುದರ ಜತೆಗೆ ಬೇರೆ ಕೆಲವು ಕರ್ತವ್ಯಗಳನ್ನು ನಿರ್ವಹಿಸುವುದು ಅವಶ್ಯಕ. ವಿಜ್ಞಾನಿಗಳು ಹೆಚ್ಚಿನ ಶಿಕ್ಷಣ ಪಡೆದ ಧೀಮಂತರಾಗುವುದರಿಂದ ಅವರು ತಮ್ಮ eನವನ್ನು ಸಾಮಾನ್ಯ ವ್ಯಕ್ತಿಗಳ ಮನೋಭಾವನ್ನು ತಿದ್ದುವ ಕಾರ್ಯದಲ್ಲಿ ಉಪಯೋಗಿಸಿ, ಸಮಾಜದ ಸುಧಾರಣೆಗೆ ಸಹಾಯಕರಾಗಬೇಕು. ವಿಜ್ಞಾನದ ಮತ್ತು ವೈeನಿಕ ಮಾರ್ಗಗಳು ಜನಪ್ರಿಯವಾಗುವಲ್ಲಿ ವಿeನಿಯ ಪ್ರಾಮುಖ್ಯ ಬಹಳ ಹಿರಿದಾದುದು. ವಿಜ್ಞಾನಕ್ಕೆ ಸಂಬಂದಿಸಿದಂತೆ ಮಾತೃಭಾಷೆಗಳಲ್ಲಿ, ಇಂಗ್ಲೀಷನಲ್ಲಿ ಜನಪ್ರಿಯ ಲೇಖನಗಳನ್ನು ಬರೆಯುವುದು ಮತ್ತು ಉಪನ್ಯಾಸ ಕೊಡುವುದು-ಈ ದಿಸೆಯಲ್ಲಿ ವಿಜ್ಞಾನಿಗಳು ಪ್ರಯತ್ನಿಸಬೇಕು. ವಿಜ್ಞಾನಿಯ ಮನೋಭಾವವು ಅವನು ದಂತಗೋಪುರದಲ್ಲಿರುವ ಅಪೂರ್ವಬುದ್ಧಿಶಾಲಿ ಎಂಬ ಭಾವನೆಯನ್ನು ಜನರಲ್ಲಿ ಉಂಟುಮಾಡುವ ರೀತಿಯಲ್ಲಿ ಇರಬಾರದು. ಸಾಮಾನ್ಯ ಜನತೆ ವಿಜ್ಞಾನಿಯನ್ನು ವಿಶೇಷ ಜಾತಿಗೆ ಸೇರಿದ ಪ್ರಾಣಿ ಎಂದು ಅಂದುಕೊಳ್ಳುವಂತಾಗಬಾರದು. ಒಟ್ಟು ಸಮಾಜದ ದುಡಿಮೆಯಲ್ಲಿ, ಶಿಕ್ಷಣವನ್ನು ಪಡೆದಿರುವ ವಿಜ್ಞಾನಿ ಸಾಮಾನ್ಯ ಜನರ ಯೋಚನಾ ಶಕ್ತಿಯನ್ನು ಬೆಳೆಯಿಸುವಲ್ಲಿ ಶ್ರಮಿಸುವುದು ಆತನ ಕರ್ತವ್ಯವೇ ಹೊರತು ಉಪಕಾರವೇನೂ ಅಲ್ಲ. ಇಂತಹ ಸನ್ನಿವೇಶಗಳು ನಡೆಯುವ ಸಂದರ್ಭದಲ್ಲಿ ಜನಪ್ರಿಯ ಉಪನ್ಯಾಸಗಳನ್ನು, ಉಪಯುಕ್ತ ವಿಜ್ಞಾನ ಪ್ರದರ್ಶನಗಳನ್ನು ಏರ್ಪಡಿಸಿದರೆ ವಿಜ್ಞಾನದಲ್ಲಿ ಆಸಕ್ತರಾಗಿರುವ ಬಹುಸಂಖ್ಯಾತ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಸಹಾಯಕವಾಗುತ್ತದೆ.
ನಮ್ಮ ದೇಶದಲ್ಲಿ ವಿಜ್ಞಾನಿಗಳು ಹಲವಾರು ಸಂದರ್ಭಗಳಲ್ಲಿ ಪರಸ್ಪರ ವಿರುದ್ಧವಾದ ಎರಡು ರೀತಿಯ ಮನೋಭಾವವನ್ನು ವ್ಯಕ್ತಪಡಿಸುವುದು ದುರದೃಷ್ಟ. ಪ್ರಯೋಗಶಾಲೆಗಳಲ್ಲಿ ಅವರು ಹೆಚ್ಚಿನ ವಿಚಾರಶಕ್ತಿಯನ್ನು, ವೈಜ್ಞಾನಿಕ ಮನೋಭಾವನ್ನು ವ್ಯಕ್ತಪಡಿಸುತ್ತಾರೆ. ಆದರೆ ಜೀವನದಲ್ಲಿ ಅವರ ಯೋಚನಾಶಕ್ತಿ ರಜೆ ತೆಗೆದುಕೊಂಡಿದೆಯೋ ಏಂಬಂತೆ ಅವೈಜ್ಞಾನಿಕವಾಗಿ ವರ್ತಿಸುತ್ತಾರೆ. ಒಂದೇ ಮನಸ್ಸು ತರ್ಕಬದ್ದವಾಗಿ, ಅತಾರ್ಕಿಕವಾಗಿ ಯೋಚಿಸುತ್ತದೆ. ಯೋಚನೆಯಲ್ಲಿ ಏಕಸೂತ್ರತೆಯೆ ಕಂಡುಬರುವುದಿಲ್ಲ. ಅವನ ಮೆದುಳಿನಲ್ಲಿ ಎರಡು ಸ್ವಿಚ್‌ಗಳು ಇದ್ದಂತೆ ತೋರುತ್ತದೆ. ಒಂದು ಸ್ವಿಚ್ ತರ್ಕಬದ್ದವಾಗಿ ಯೋಚಿಸುತ್ತಿದ್ದರೆ, ಎರಡೆನೆಯ ಸ್ವಿಚ್ ತರ್ಕವಿಲ್ಲದೆ ಯೋಚಿಸುತ್ತಿರುತ್ತದೆ. ಇದಕ್ಕಿಂತ ಮತ್ತಾವ ಪವಾಡ ಬೇಕು?
ಅಧ್ಯಾಪಕನು ತರಗತಿಯಲ್ಲಿ ಸಿದ್ಧಾಂತವನ್ನು ವೈಜ್ಞಾನಿಕವಾಗಿ ಪಾಠ ಹೇಳುತ್ತಾನೆ. ಆದರೆ ಇದೇ ವ್ಯಕ್ತಿ ಚರ್ಚಿನಲ್ಲಿ ಅಥವಾ ದೇವಸ್ಥಾನದಲ್ಲಿ ಯಾವುದೇ ಸಂಕೋಚವಿಲ್ಲದೆ ವಿಜ್ಞಾನಕ್ಕೆ ಅಸಂಗತವಾದ ವಿಕಾಸವಾದವನ್ನು ನಂಬಿಕೆಯ ಮೂಲಕ ಬೋಧಿಸುತ್ತಾನೆ. ಮನುಷ್ಯ ಯಶಸ್ವಿಯಾಗಿ ಚಂದ್ರನನ್ನು ತಲುಪಿ ಬಂದಿದ್ದಾನೆ. ಆದರೂ ಗ್ರಹಣದ ಬಗೆಗೆ ಎರಡು ಸಿದ್ಧಾಂತಗಳಿವೆ, ಒಂದು ತರಗತಿಯಲ್ಲಿ ಬೋಧನೆಗೆ, ಮತ್ತೊಂದು ಮನೆಯಲ್ಲಿ ಆಚರಣೆಗೆ. ಭೌತಶಾಸ್ತ್ರವನ್ನು ಪಾಠ ಹೇಳುತ್ತಾ, ಹಸ್ತ ಸಾಮುದ್ರಿಕವನ್ನು ನಂಬುವವರುಂಟು. ಹಾಗೆಯೇ ಹಲವಾರು ವಿಜ್ಞಾನಿಗಳು ಜ್ಯೋತಿಷ್ಯವನ್ನು ನಂಬುವುದು ಅಪರೂಪವೇನೂ ಅಲ್ಲ. ಒಬ್ಬ ವಿಜ್ಞಾನಿಯು ವಸ್ತುಸ್ಥಿರತೆಯ ವಿಶ್ವನಿಯಮವು ಅಥವಾ ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ವಸ್ತು ಮತ್ತು ಚೈತನ್ಯಗಳ ಸ್ಥಿರತೆಯ ನಿಯಮವು ಪುಟ್ಟಪರ್ತಿ ಹಾಗೂ ವೈಟ್‌ಫೀಲ್ಡ್‌ಗಳಿಗೆ ಅನ್ವಯಿಸುವುದಿಲ್ಲವೆಂದು ಹೇಳಿದರೆ ಅದು ಶತಮೂರ್ಖತನ. ಎಚ್.ಎಂ.ಟಿ ಕೈಗಡಿಯಾರವೊಂದು ಶೂನ್ಯದಲ್ಲಿ ಸೃಷ್ಟಿಯಾಗುತ್ತದೆ ಎಂದು ನಂಬುವುದು ಮೂರ್ಖತನವಲ್ಲವೆ? ನೀರು, ಪೆಟ್ರೋಲ್ ಆಗಿ ಪರಿವರ್ತನೆ ಆಗಬಲ್ಲದು, ಕ್ಯಾನ್ಸರ್, ಡಯಾಬಿಟಿಸ್ ನಂತಹ ರೋಗಗಳು `ಬೂದಿ` ಹಚ್ಚುವುದರಿಂದ ವಾಸಿಯಾಗುತ್ತವೆ ಎಂದು ಹೇಳುವುದರಲ್ಲಿ ಏನಾದರೂ ಆರ್ಥವಿದೆಯೆ? ಆಶಿಕ್ಷಿತನೊಬ್ಬ ಹೀಗೆ ಹೇಳಿದರೆ ಅವನನ್ನು ಕ್ಷಮಿಸಬಹುದು. ಆದರೆ ವಿದ್ಯಾವಂತರು ಈ ರೀತಿಯ ಆಭಿಪ್ರಾಯಗಳನ್ನು ವ್ಯಕ್ತಪಡಿಸುವುದಲ್ಲದೆ, ಈ ರೀತಿಯ ಪವಾಡಗಳ ಬಗ್ಗೆ ತಮ್ಮ ಗಾಢವಾದ ನಂಬಿಕೆಗಳನ್ನು ವ್ಯಕ್ತಪಡಿಸುವುದು ಶೋಚನೀಯ. ಇದು ನಿಜವಾದರೆ ಜಗತ್ತಿನಲ್ಲಿ ವಿeನದಲ್ಲಿ ನಡೆದಿರುವ ಎಲ್ಲ ಶೋಧನೆಗಳು ಅರ್ಥರಹಿತವಾಗುತ್ತವೆ. ನಮ್ಮ ದೇಶದಲ್ಲಿ ಮೂಢನಂಬಿಕೆಗಳು ತುಂಬಿ ತುಳುಕುತ್ತಿದ್ದು ಜಗತ್ತಿನ ವಿಚಾರವಂತರ ನಡುವೆ ನಗೆಗೀಡಾಗುವಂತೆ ಮಾಡಿವೆ. ಮೂಢ ನಂಬಿಕೆಯನ್ನು ಪ್ರತಿಪಾದಿಸುವ ವಿದ್ಯಾವಂತನು, ಮೂಢನಂಬಿಕೆಯನ್ನು ಹೊಂದಿರುವ ಅವಿದ್ಯಾವಂತನಿಗಿಂತ ಹೆಚ್ಚು ಆಪಾಯಕಾರಿ ಎಂದು ಹೇಳುವ ಅವಶ್ಯಕತೆಯೇ ಇಲ್ಲ.
ಈ ರೀತಿಯ ವಿಚಿತ್ರ, ಪ್ರಕೃತಿಯನ್ನು ಮೀರಿದ ಶಕ್ತಿಯ ಬಗ್ಗೆ ನಂಬಿಕೆಯನ್ನು ಹೊಂದಿರುವವರು. ಮುಗ್ಧ ಜನ ಅಷ್ಟೇ ಅಲ್ಲ, ಜನಜನಿತರಾದ ಶಿಕ್ಷಣವೇತ್ತರೂ ಸೇರಿದ್ದಾರೆ. ಇಂತಹ ಸ್ಥಿತಿಯ ಬಗ್ಗೆ, ವಿಜ್ಞಾನಿಗಳ ಪ್ರತಿಕ್ರಿಯೆ ಯಾವ ಬಗೆಯದು? ಅವುಗಳನ್ನು ಗಮನಿಸದೆ ಇರುವುದು ಸರಿಯೆ? ವಿಜ್ಞಾನಿಗಳು ಮತ್ತು ಬುದ್ಧಿಜೀವಿಗಳು ಇಂತಹವರ ಬಗ್ಗೆ ಹೊಂದುವ ಉದಾಸೀನಭಾವ, ನಿಷ್ಕ್ರಿಯತೆ ಸಮಾಜಕ್ಕೆ ತುಂಬಾ ಹಾನಿಯನ್ನುಂಟು ಮಾಡುತ್ತದೆ. ಈ ರೀತಿಯ ತಟಸ್ಥ ಮನೋಭಾವ ಅರ್ಥರಹಿತ, ಅವೈಜ್ಞಾನಿಕ ವಿಚಾರಗಳಿಗೆ ಪರೋಕ್ಷವಾಗಿ ಸಮರ್ಥನೆ ಕೊಟ್ಟಂತೆ ಆಗುತ್ತದೆ. ಮೌನವು ಸಮ್ಮತಿಯ ಲಕ್ಷಣ ಆಗಿ ಬಿಡಬಹುದು.
ಸತ್ಯಶೋಧನೆಯ ಹಂಬಲದಿಂದ, ಸಮಾಜದ ಸುಧಾರಣೆಯ ಉದ್ಧೇಶದಿಂದ ಈ ರೀತಿಯ ಅಸಾಮಾನ್ಯ ಪ್ರಕ್ರಿಯೆಗಳನ್ನು ಕುರಿತು ವೈಜ್ಞಾನಿಕವಾಗಿ ಪರಿಶೀಲನೆ ನಡೆದು ಸಮಾಜಕ್ಕೆ ಸತ್ಯ ಸಂಗತಿಯು ತಿಳಿಯುವ ಅವಶ್ಯಕತೆ ಇದೆ. ಇಲ್ಲವಾದಲ್ಲಿ ವಿಜ್ಞಾನ ಮತ್ತು ಮೂಢನಂಬಿಕೆಗಳು, ಎರಡನ್ನೂ ಒಟ್ಟಾಗಿ ಸಮಾಜದಲ್ಲಿ ಉಳಿಸಿಕೊಂಡತಾಗುತ್ತದೆ. ಪ್ರಯೋಗ ಶಾಲೆಯಲ್ಲಿ ನಡೆಯುವ ಸಾಂಪ್ರಾದಾಯಿಕ ಸಂಶೋಧನೆಯಷ್ಟೆ ಈ ರೀತಿಯ ವೈಜ್ಞಾನಿಕ ಪರಿಶೀಲನೆಯೂ ಜರೂರಿಂದ ನಡೆಯಬೇಕಾದ ಕೆಲಸ.
ಯಾವುದೇ ವ್ಯಕ್ತಿ ನೀರನ್ನು ಪೆಟ್ರೋಲ್‌ನ್ನಾಗಿ ಪರಿವರ್ತಿಸಲು ಸಾಧ್ಯವಿದ್ದರೆ, ಅವನ ಶಕ್ತಿಯನ್ನು ಇಂಧನ ಸಮಸ್ಯೆಯ ಪರಿಹಾರಕ್ಕೆ ಸೂಕ್ತವಾಗಿ ಉಪಯೋಗಿಸಿಕೊಳ್ಳಬೇಕು. ಅದು ಸುಳ್ಳು ಘೋಷಣೆಯಾಗಿದ್ದರೆ ಆ ವ್ಯಕ್ತಿಯು ಎಷ್ಟೇ ಪ್ರಬಾವಶಾಲಿಯಾಗಿದ್ದರೂ, ಮೋಸದ ಅಪಾದನೆಯ ಕಾರಣ ಶಿಕ್ಷೆಗೆ ಒಳಪಡಿಸಬೇಕು. ಆಹಾರ ವಸ್ತುಗಳ, ಔಷದಿಗಳ ಕಲಬೆರಕೆ, ಅಸಮರ್ಕವಾದ ತೂಕ ಅಳತೆಯ ಉಯೋಗ ಮುಂತಾದ ವಂಚನೆಯ ಗುಂಪಿಗೆ (ಇವು) ಸೇರುತ್ತವೆ.
ಆದರೆ ಸುಳ್ಳು ದೇವಮಾನವರು, ಮತ್ತಿತರರು ಶತಮಾನಗಳಿಂದ ಮುಗ್ಧ ಬಡ ಜನತೆಯನ್ನು ದೇವರು, ಧರ್ಮದ ಹೆಸರಿನಲ್ಲಿ ವಂಚಿಸುತ್ತಾ ಬಂದಿದ್ದಾರೆ. ಅವರುಗಳ ಶಿಕ್ಷೆಗೆ ಒಳಪಡುವುದಿರಲಿ, ಅಪಾರವಾದ ಸಂಪತನ್ನು ಗಳಿಸಿ ವಿಲಾಸೀ ಜೀವನವನ್ನು ನಡೆಸುತ್ತಿದ್ದಾರೆ. ವಿಜ್ಞಾನದ ಪ್ರಚಲಿತ ನಿಯಮಗಳನ್ನು ಮೀರುವ ಪವಾಡಗಳ ಬಗ್ಗೆ ವಿಜ್ಞಾನಿಗಳು ಪ್ರಬಲವಾಗಿ ವಿರೋಧಿಸಿ ಅವುಗಳ ಕೆಡುಕನ್ನು ತಪ್ಪಿಸಬೇಕು. ಯಾವುದೇ ಅವೈಜ್ಞಾನಿಕವಾದ ಹೇಳಿಕೆ ಪರೀಕ್ಷೆಗೆ ಗುರಿಪಡಿಸಬೇಕು. ಪ್ರತಿಯೊಂದು ಮೂಢನಂಬಿಕೆಯೂ ಪರಿಶೀಲನೆಗಳ ಮೂಲಕ ನಿರಾಕರಣವಾಗಬೇಕು. ಭಯ ಮತ್ತು ಅಜ್ಞಾನಗಳಿಂದ ರೂಪಿತವಾಗಿರು ಮೂಢನಂಬಿಕೆಗಳು, ಆತ್ಮವಿಶ್ವಾಸವನ್ನು ಖಂಡಿಸುತ್ತವೆ; ಸ್ವತಂತ್ರ ಆಲೋಚನೆಯನ್ನು ಮೊಟಕುಗೊಳಿಸುತ್ತವೆ. ಮಾಟ ಮಂತ್ರದಂತಹ ಪ್ರಗತಿವಿರೋಧಿ ಚಟುವಟಿಕೆಗಳು ನಮ್ಮ ಸಮಾಜಕ್ಕೆ ಹೆಚ್ಚಿನ ಆಘಾತವನ್ನುಂಟುಮಾಡಿವೆ.
ವಿಜ್ಞಾನಿಗಳು ಅತ್ಯಂತ ವಿನಮ್ರವಾಗಿ ತಮ್ಮ ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ರಹಸ್ಯವಾಗಿಸುವುದು (Mystifying) ಹೆಚ್ಚಿನ ಗೊಂದಲ ಉಂಟುಮಾಡಬಹುದು. ಉನ್ನತ ಶಿಕ್ಷಣಾಲಯಗಳಲ್ಲಿ ವೈಜ್ಞಾನಿಕ ಪರಿಶೀಲನೆಯ ಯೋಜನೆಗಳು ಕಾರ್ಯಗತವಾಗಬೇಕು. ಪವಾಡಗಳು, ಮೂಢನಂಬಿಕೆಗಳು, ಮಂತ್ರವಾದ ಮುಂತಾದವುಗಳ ಬಗ್ಗೆ ವಿಜ್ಞಾನದ ಸಭೆಗಳಲ್ಲಿ, ಸಮ್ಮೇಳನಗಳಲ್ಲಿ, ಚರ್ಚಿಸಬೇಕು. ಸಮಾಜದ ಮೇಲೆ ಪ್ರಭಾವ ಬೀರುತ್ತಿರುವ ಸಮಸ್ಯೆಗಳಿಂದ ವಿಜ್ಞಾನಿಯು ಪ್ರತ್ಯೇಕವಾಗಿ ಇರುವುದು ಸಾಧ್ಯವಿಲ್ಲ. ವಿಜ್ಞಾನಿಯು ತನ್ನ ಶೋಧನೆಯ ಪರಿಧಿಯನ್ನು ವಿಸ್ತರಿಸಿಕೊಳ್ಳಬೇಕು. ಸಂಶೋಧನೆಯು ನಾಲ್ಕು ಗೋಡೆಗಳ ಮಧ್ಯಕ್ಕೆ ಸೀಮಿತವಾಗದೆ, ಜೀವನ ಮತ್ತು ಅಲ್ಲಿನ ಸಮಸ್ಯೆಗಳು ಅವನ ಸಂಶೋಧನಾ ಕ್ಷೇತ್ರವಾಗಬೇಕು. ಹಲವಾರು ಅತಾರ್ಕಿಕವಾದ ನಡವಳಿಕೆಗಳಿಂದ ಸಮಾಜವು ಅನ್ಯಾಯಕ್ಕೆ ಒಳಪಟ್ಟಿದ್ದು, ಉಸಿರು ಕಟ್ಟುವ ವಾತಾವರಣವಿದೆ. ಅದನ್ನು ಶುದ್ಧಗೊಳಿಸುವಲ್ಲಿ ವಿಜ್ಞಾನಿಗಳು ಇನ್ನೂ ಪ್ರಯತ್ನಿಸದೆ ಇರುವುದು ಸರಿಯಲ್ಲ. ಈ ಸಮಾವೇಶದಲ್ಲಿ ಪರಿಸರದ ಪರಿಶುದ್ಧತೆಯ ಬಗ್ಗೆ ಸಂಪ್ರಬಂಧವೊಂದಿದೆಯೆಂದು ತಿಳಿದು ಸಂತೋಷವಾಯಿತು. ಈ ಸಂಪ್ರಬಂಧದ ಉದ್ಧೇಶ ನೀರು ಮತ್ತು ಗಾಳಿಯಿಂದ ಉಂಟಾಗುವ ಮಾಲಿನ್ಯವನ್ನು ಕುರಿತದ್ದು, ಇವುಗಳಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ ಎನ್ನುವುದು ನಿಜ. ಆದರೆ ಮಾನಸಿಕ ಬದುಕನ್ನು ಕಲುಷಿತಗೊಳಿಸಿರುವುದು ಹೆಚ್ಚು ಅಪಾಯಕಾರಿ. ಅದ್ದರಿಂದ ಮನುಷ್ಯನನ್ನು ಕಲುಷಿತಗೊಳಿಸಿರುವ ಎಲ್ಲ ಅಂಶಗಳ ಕಡೆಗೂ ಸೂಕ್ಷ್ಮವಾಗಿ ಗಮನಹರಿಸಿ, ಅವುಗಳನ್ನು ತ್ಯಜಿಸಿವುದು ಬಹಳ ಮುಖ್ಯ.
ವಿಜ್ಞಾನದ ಫಲಿತಗಳ ಬಗ್ಗೆ ಹೆಚ್ಚಿನ ಆದ್ಯತೆ ಕೊಡುವುದು, ವಿಜ್ಞಾನಿಗಳಲ್ಲಿ ಮತ್ತು ಸಮಾಜದಲ್ಲಿ ವಿಶೇಷವಾಗಿ ಕಂಡುಬರುತ್ತದೆ. ನನ್ನ ಅಭಿಪ್ರಾಯದಲ್ಲಿ ವಿಜ್ಞಾನದ ಮೂಲ ಉದ್ಧೇಶಗಳು (Basic Postualtes) ಕೂಡ ಅಷ್ಟೇ ಮುಖ್ಯ. ವಿಜ್ಞಾನದ ಬೆಲೆಯು ಅಪರಿಮಿತ ವಿಷಯ ಸಂಗ್ರಹ, ಅಂಕಿ ಅಂಶಗಳಿಗಳಷ್ಟೇ ಸೀಮಿತವಾಗಿರದೇ, ವೈಜ್ಞಾನಿಕ ಮನೋಧರ್ಮದಲ್ಲಿ ನಿಂತಿದೆ. ವೈಜ್ಞಾನಿಕ ಮನೋಧರ್ಮ ಮತ್ತು ಪದ್ಧತಿಗಳ ಬಗ್ಗೆ ಪಾಠಗಳು, ಪಠ್ಯಪುಸ್ತಕಗಳಲ್ಲಿ ಸೇರ್ಪಡೆಯಾಗಬೇಕು. ಎಲ್ಲ ಅಧ್ಯಾಪಕರು, ಎಲ್ಲ ವಿಜ್ಞಾನದ ಅಧ್ಯಾಪಕರು ವೈಜ್ಞಾನಿಕ iನೋಧರ್ಮವನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು. ನಮ್ಮ ದೇಶವು ನೂರಾರು ವರ್ಷಗಳಿಂದ ಎದುರಿಸುತ್ತಿರುವ ಜಟಿಲವಾದ ಸಮಸ್ಯೆಗಳನ್ನು ವೈಜ್ಞಾನಿಕ ಮಾರ್ಗದಿಂದ ಮಾತ್ರ ಪರಿಹರಿಸಲು ಸಾಧ್ಯ. ನಮ್ಮ ಸಮಾಜ ಎದುರಿಸುತ್ತಿರುವ ಜಾತಿಯಂತಹ ಸಾಮಾಜಿಕ ಪಿಡುಗುಗಳ ಪರಿಹಾರ ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವಗಳಿಂದ ಮಾತ್ರ ಸಾಧ್ಯ. ಆಗಮಾತ್ರ ಮಾನವೀಯ ಮೌಲ್ಯ ಮತ್ತು ನೀತಿ ಅವಲಂಬಿತ ವಿಶ್ವಧರ್ಮ ರೂಪಿತವಾಗಬಹುದು. ಧರ್ಮವು ನೀತಿಸ್ವರೂಪವನ್ನು ಹೊಂದಿರುವಂತಹದು. ಈ ರೀತಿಯ ಧರ್ಮವು ರಾಷ್ಟ್ರೀಯತೆಗಳ ಮೂಲವಾದ ಬೇಲಿಯನ್ನು ದಾಟಿ ಸ್ಥಾಪಿತವಾಗಬೇಕಾದರೆ ವಿಶ್ವಮಾನ್ಯತೆಯನ್ನು ಹೊಂದಿರುವ ವಿಜ್ಞಾನದ ತತ್ವಗಳನ್ನು ಅನ್ವಯಿಸುವುದರಿಂದ ಮಾತ್ರ ಸಾಧ್ಯ.
ವಿಜ್ಞಾನ ಮತ್ತು ಅದರ ಬಳಕೆಯು, ವೈಜ್ಞಾನಿಕ ಮನೋಧರ್ಮವನ್ನು ಪಡೆದು ಕಾರ್ಯಪ್ರವೃತ್ತವಾದರೆ ಬಡತನದ ನಿರ್ಮೂಲನ, ಶೋಷಣೆಯ ನಾಶ ಸಾಧ್ಯ. ಅದು ಪ್ರಗತಿವಿರೋಧೀ ಸಿದ್ಧಾಂತಗಳನ್ನು, ಸ್ವಹಿತಾಸಕ್ತಿಯನ್ನು ದೂರಮಾಡ ಬಲ್ಲದು.
ವಿಜ್ಞಾನಿಗಳಾಗಿ ನಾವು ನಮ್ಮ ಆತ್ಮಸಾಕ್ಷಿಗೆ, ವಿಜ್ಞಾನಕ್ಕೆ ಹಾಗೂ ಅದರ ಮಾರ್ಗಗಳಿಗೆ ಪ್ರಾಮಾಣಿಕರಾಗಿರೋಣ. ಜೀವನೋಪಾಯ ಮಾರ್ಗವಾಗಿ ವಿಜ್ಞಾನ ಇರುವುದು ಬೇಡ. ನಮಗೆ ಅದರಲ್ಲಿ ಜೀವಂತ ನಂಬಿಕೆ ಇರಬೇಕು. ನಾವು ತರ್ಕಬದ್ಧವಾಗಿ ದೈರ್ಯದಿಂದ ವರ್ತಿಸಿದಾಗ ಮಾತ್ರ ಸಮಾಜದ ಸುಧಾರಣೆ ಸಾಧ್ಯ.

1 comment:

  1. gurumurthy. m s/o
    marigowda beeranahalli (v)
    kadur(t)
    chikamagalore(d)
    s.biduri(p)

    ReplyDelete