ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Tuesday, April 26, 2011

ಬಸವಣ್ಣನ ವಚನಗಳು 501 - 516

೫೦೧.
ಭಿತ್ತಿಯಿಲ್ಲದ ಚಿತ್ತಾರದಂತೆ,
ಭಕ್ತಿಯಲ್ಲದ ಪ್ರಮಥನಾಗಿ ಎಂದಿಪ್ಪೆನಯ್ಯ
ಸತ್ಯವಿಲ್ಲದ ಶರಣನಾಗಿ ಎಂದಿಪ್ಪೆನಯ್ಯ!
ಗೆರೆಯಿಲ್ಲದ ಕೋಲಲ್ಲಿ
ಉದ್ದರೆಯನಿಕ್ಕಿದ ಭಂಡದ ಹರದನಂತಾದೆನಯ್ಯ!
ಕೂಡಲಸಂಗಮದೇವ.
೫೦೨.
ಹುಸಿಯಿಂದ ಜನಿಸಿದೆನಯ್ಯ
ಮರ್ತ್ಯಲೋಕದೊಳಯಿಂಕೆ!
ಹುಸಿಯಿಂದ ಲಿಂಗವ ಹೆಸರುಗೊಂಡು ಕರೆದೆನಯ್ಯ!
ಅದು ಎನಗೆ ಭಾವವೂ ಅಲ್ಲದೆ
ನಿರ್ಭಾವವೂ ಅಲ್ಲದೆ ನಿಂದಿತ್ತಯ್ಯ!
ಅದರ ಅವಯವಂಗಳೆಲ್ಲವು ಜಂಗಮವಯ್ಯ!
ಅದಕ್ಕೆ ಎನ್ನ ಉಳ್ಳ ಸಯದಾನವ ಮಾಡಿ ನೀಡಿದೆನಯ್ಯ,
ಆ ಪ್ರಸಾದಕ್ಕೆ ಶರಣೆಂದೆನಯ್ಯ!
ಅದು ಸಾರವೂ ಅಲ್ಲ, ನಿಸ್ಸಾರವೂ ಅಲ್ಲ!
ಆ ಪ್ರಸಾದದಲ್ಲಿ ನಾನೇ ತದ್ಗತನಾದೆ ಕಾಣಾ
ಕೂಡಲಸಂಗಮದೇವ.
೫೦೩.
ಕುರುಹಿಲ್ಲ ಕುರುಹಿಲ್ಲ ಲಿಂಗವೆಂದೆಂಬರೆ,
ತೆರಹಿಲ್ಲ ತೆರಹಿಲ್ಲ ಜಂಗಮವೆಂದೆಂಬರೆ-
ಇದೇ ನೋಡಾ ಶಿವಾಚಾರ!
ಇದೇ ನೋಡಾ ಶಿವದೊಡಕು!
"ಆತ್ಮಾನಾಂ ಪ್ರಕೃತಿಸ್ವಭಾವ" ಎಂದುದಾಗಿ
ಮುಟ್ಟಬಾರದ ಠಾವ ಮರೆಗೊಂಡಿಪ್ಪ
ಮಮ ಕರ್ತೃ ಕೂಡಲಸಂಗಮದೇವ.
೫೦೪.
ವೇದ ವೇದಿಸಲರಿಯದೆ,
ಅಭೇದ್ಯ ಲಿಂಗವೆಂದು ನಡನಡುಗಿತ್ತು!
ಶಾಸ್ತ್ರ ಸಾಧಿಸಲರಿಯದೆ,
ಅಸಾಧ್ಯಲಿಂಗವೆಂದು ಸಾರುತ್ತೈದಾವೆ!
ತರ್ಕ ತರ್ಕಿಸಲರಿಯದೆ,
ಅತರ್ಕ್ಯಲಿಂಗವೆಂದು ಮನಂಗೊಳ್ಳವು!
ಆಗಮ ಗಮನಿಸಲರಿಯದೆ,
ಅಗಮ್ಯವೆಂದು ಹೋದುವು!
ನರರು ಸುರರು ಅಂತುವ ಕಾಣರು!
ನಮ್ಮ ಕೂಡಲಸಂಗಮದೇವನ ಪ್ರಮಾಣವ ಶರಣ ಬಲ್ಲ!
೫೦೫.
ಅಂತರಂಗ ಬಹಿರಂಗ
ಆತ್ಮಸಂಗ ಒಂದೇ ಅಯ್ಯ!
ನಾದ-ಬಿಂದು-ಕಳಾತೀತ
ಆದಿಯಾಧಾರ ನೀನೇ ಅಯ್ಯ!
ಆರೂಢದ ಕೂಟದ ಸುಖವ
ಕೂಡಲ ಸಂಗಯ್ಯ ತಾನೇ ಬಲ್ಲ!
೫೦೬.
ಕಾಮವೇಕೋ ಲಿಂಗಪ್ರೇಮಿಯೆನಿಸುವಂಗೆ ?
ಕಾಮವೇಕೋ ಶರಣವೇದ್ಯನೆನಿಸುವಂಗೆ ?
ಲೋಭವೇಕೋ ಭಕ್ತಿಲಾಭವ ಬಯಸುವಂಗೆ ?
ಮೋಹವೇಕೋ ಪ್ರಸಾದವೇದ್ಯನೆನಿಸುವಂಗೆ ?
ಮದಮತ್ಸರವುಳ್ಳವಂಗೆ ಹೃದಯ ಶುದ್ಧವೆಲ್ಲಿಯದೋ ?
ಹದುಳಿಗರಾದಲ್ಲಿಪ್ಪ ಕೂಡಲಸಂಗಮದೇವ |
೫೦೭.
ಎನ್ನ ನಡೆಯೊಂದು ಪರಿ |
ಎನ್ನ ನುಡಿಯೊಂದು ಪರಿ |
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯ |
ನುಡಿಗೆ ತಕ್ಕ ನಡೆಯ ಕಂಡರೆ
ಕೂಡಲಸಂಗಮದೇವ ತನ್ನೊಳಗಿಪ್ಪನಯ್ಯ |
೫೦೮.
ಬಡಪಶು ಪಂಕದಲ್ಲಿ ಬಿದ್ದರೆ
ಕಾಲ ಬಡಿವುದಲ್ಲದೆ ಬೇರೆ ಗತಿಯುಂಟೆ ?
ಶಿವ ಶಿವಾ ಹೋದಹೆ ಹೋದಹೆನಯ್ಯ |
ನಿಮ್ಮ ಮನದತ್ತಲೆನ್ನ ತೆಗೆಯಯ್ಯ |
ಪಶುವಾನು ಪಶುಪತಿ ನೀನು |
ತುಡುಗುಣಿಯಿಂದೆನ್ನ ಹಿಡಿದು ಬಡಿಯದ ಮುನ್ನ
ಒಡೆಯ, ನಿಮ್ಮ ಬೈಯದಂತೆ ಮಾಡು
ಕೂಡಲಸಂಗಮದೇವ.
೫೦೯.
ತನು ನಿಮ್ಮದೆಂದ ಬಳಿಕ ಎನಗೆ ಬೇರೆ ತನುವಿಲ್ಲ |
ಮನ ನಿಮ್ಮದೆಂದ ಬಳಿಕ ಎನಗೆ ಬೇರೆ ಮನವಿಲ್ಲ |
ಧನ ನಿಮ್ಮದೆಂದ ಬಳಿಕ ಎನಗೆ ಬೇರೆ ಧನವಿಲ್ಲ |
ಇಂತಿ ತ್ರಿವಿಧವೂ ನಿಮ್ಮದೆಂದರಿತ ಬಳೀಕ
ಎನಗೆ ಬೇರೆ ವಿಚಾರವುಂಟೇ ಕೂಡಲಸಂಗಮದೇವ ||
೫೧೦.
ಅಂಗದಿಚ್ಚೆಗೆ ಮದ್ದು ಮಾಸವ ತಿಂಬರು |
ಕಂಗಳಿಚ್ಚೆಗೆ ಪರವಧುವ ನೆರೆವರು |
ಲಿಂಗಲಾಂಛನಧಾರಿಯಾದಲ್ಲಿ ಫಲವೇನು ?
ಲಿಂಗಪಥವ ತಪ್ಪಿ ನಡೆವರು |
ಜಂಗಮ ಮುಖದಿಂದೆ ನಿಂದೆ ಬಂದರೆ
ಕೊಂಡ ಮಾರಿಂಗೆ ಹೋಹುದು ತಪ್ಪದು
ಕೂಡಲಸಂಗಮದೇವ |
೫೧೧.
ಕೋಪಿ ಮಜ್ಜನಕ್ಕೆರೆದರೆ ರಕ್ತದ ಧಾರೆ |
ಪಾಪಿ ಹೂವನೇರಿಸಿದರೆ ಮಸೆದಡಾಯುಧದ ಗಾಯ |
ಕೂಪವರನಾರನೂ ಕಾಣೆನು ಮಾದಾರಚೆನ್ನಯ್ಯನಲ್ಲದೆ |
ಕೂಪವರನಾರನೂ ಕಾಣೆನು ಡೋಹರಕಕ್ಕಯ್ಯನಲ್ಲದೆ |
ವ್ಯಾಪತ್ತಿಯುಳ್ಳವ ನಮ್ಮ ಮಡಿವಾಳ ಮಾಚಯ್ಯ |
ನಿನ್ನ ಪತ್ತಿಗರಿವರಯ್ಯ ಕೂಡಲಸಂಗಮದೇವ |
೫೧೨.
ಕೃಷಿ-ಕೃತ್ಯ-ಕಾಯಕದಿಂದಾದರೇನು ?
ತನು-ಮನವ ಬಳಲಿಸಿ ಪಾದವ ತಂದು ದಾಸೋಹವ ಮಾಡುವ
ಪರಮ ಸದ್ಭಕ್ತನ ಪಾದವ ತೋರಯ್ಯ ಎನಗೆ |
ಅದೆಂತೆನೆ :
ಆತನ ತನು ಶುದ್ಧ | ಆತನ ಮನ ಶುದ್ಧ |
ಆತನ ನಡೆ ಶುದ್ಧ | ನುಡಿಯೆಲ್ಲವು ಪಾವನ |
ಆತಂಗೆ ಉಪದೇಶವ ಮಾಡಿದಾತನೆ ಪರಮಸದ್ಗುರು |
ಅಂತಪ್ಪ ಸದ್ಭಕ್ತನ ಮನೆಯ ಕೈಲಾಸವೆಂದು ಹೊಕ್ಕು
ಲಿಂಗಾರ್ಚನೆಯ ಮಾಡುವ ಜಂಗಮವೇ ಜಗತ್ಪಾವನ |
ಇಂತಪ್ಪವರ ನಾನು ನೆರೆ ನಂಬಿ
ನಮೋ ನಮೋ ಎಂಬೆನಯ್ಯ ಕೂಡಲಸಂಗಮದೇವ |
೫೧೩.
ದೇವ ದೇವ ಬಿನ್ನಪವ ಅವಧಾರು |
ವಿಪ್ರ ಮೊದಲು ಅಂತ್ಯಜ ಕಡೆಯಾಗಿ
ಶಿವಭಕ್ತರಾದವರನೆಲ್ಲರನು ಒಂದೇ ಎಂಬೆ
ಹಾರುವ ಮೊದಲು ಶ್ವಪಚ ಕಡೆಯಾಗಿ
ಭವಿಯಾದವರನೆಲ್ಲರನು ಒಂದೇ ಎಂಬೆ |
ಈ ಹೀಂಗೆಂದು ನಂಬುವುದೆನ್ನ ಮನವು |
ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟುಸಂದೇಹವುಳ್ಳೆರೆ
ಹಲುದೋರ ಮೂಗ ಕೊಯಿ ಕೂಡಲಸಂಗಮದೇವ |
೫೧೪.
ಗೋತ್ರನಾಮವ ಬೆಸಗೊಂಡರೆ
ಮಾತ ನೂಂಕದೆ ಸುಮ್ಮನಿದ್ದಿರಿದೇಕಯ್ಯ ?
ತಲೆಯ ಕುತ್ತಿ ನೆಲನ ಬರುವುತಿದ್ದಿದೇನಯ್ಯ ?
ಗೋತ್ರ ಮಾದಾರ ಚೆನ್ನಯ್ಯ
ಡೋಹಾರ ಕಕ್ಕಯ್ಯನೆಂಬುದೇನು ?
ಕೂಡಲಸಂಗಯ್ಯ.
೫೧೫.
ಕುಲಮದಕ್ಕೆ ಹೋರಿ ಜಂಗಮಬೇಧವ ಮಾಡುವೆ |
ಫಲವೇನು ? ನಿತ್ಯಲಿಂಗಾರ್ಚನೆ ಪ್ರಾಯಶ್ಚಿತ್ತ |
ಛಲಮದಕ್ಕೆ ಹೋರಿ ಲಿಂಗ ಭೇದವ ಮಾಡುವೆ
ಜಂಗುಳಿಯ ಕಾವ ಗೋವಳ ಹಲವು ಪಶುವ ನಿವಾರಿಸುವಂತೆ |
ತನುಭಕ್ತನಾಯಿತ್ತೆನ್ನ ಮನ ಭವಿ |
ಕೂಡಲಸಂಗಮದೇವ
೫೧೬.
ಬ್ರಹ್ಮಪದವಿಯನೊಲ್ಲೆ |
ವಿಷ್ಣುಪದವಿಯನೊಲ್ಲೆ |
ರುದ್ರಪದವಿಯನೊಲ್ಲೆ |
ನಾನು ಮತ್ತಾವ ಪದವಿಯನೊಲ್ಲೆನಯ್ಯ |
ಕೂಡಲಸಂಗಮದೇವ
ನಿಮ್ಮ ಸದ್ಭಕ್ತರ ಪಾದವನರಿದಿಪ್ಪ
ಮಹಾಪದವಿಯನೆ ಕರಿಶಿಸಯ್ಯ |
೫೦೬.
ಕಾಮವೇಕೋ ಲಿಂಗಪ್ರೇಮಿಯೆನಿಸುವಂಗೆ ?
ಕಾಮವೇಕೋ ಶರಣವೇದ್ಯನೆನಿಸುವಂಗೆ ?
ಲೋಭವೇಕೋ ಭಕ್ತಿಲಾಭವ ಬಯಸುವಂಗೆ ?
ಮೋಹವೇಕೋ ಪ್ರಸಾದವೇದ್ಯನೆನಿಸುವಂಗೆ ?
ಮದಮತ್ಸರವುಳ್ಳವಂಗೆ ಹೃದಯ ಶುದ್ಧವೆಲ್ಲಿಯದೋ ?
ಹದುಳಿಗರಾದಲ್ಲಿಪ್ಪ ಕೂಡಲಸಂಗಮದೇವ |
೫೦೭.
ಎನ್ನ ನಡೆಯೊಂದು ಪರಿ |
ಎನ್ನ ನುಡಿಯೊಂದು ಪರಿ |
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯ |
ನುಡಿಗೆ ತಕ್ಕ ನಡೆಯ ಕಂಡರೆ
ಕೂಡಲಸಂಗಮದೇವ ತನ್ನೊಳಗಿಪ್ಪನಯ್ಯ |
೫೦೮.
ಬಡಪಶು ಪಂಕದಲ್ಲಿ ಬಿದ್ದರೆ
ಕಾಲ ಬಡಿವುದಲ್ಲದೆ ಬೇರೆ ಗತಿಯುಂಟೆ ?
ಶಿವ ಶಿವಾ ಹೋದಹೆ ಹೋದಹೆನಯ್ಯ |
ನಿಮ್ಮ ಮನದತ್ತಲೆನ್ನ ತೆಗೆಯಯ್ಯ |
ಪಶುವಾನು ಪಶುಪತಿ ನೀನು |
ತುಡುಗುಣಿಯಿಂದೆನ್ನ ಹಿಡಿದು ಬಡಿಯದ ಮುನ್ನ
ಒಡೆಯ, ನಿಮ್ಮ ಬೈಯದಂತೆ ಮಾಡು
ಕೂಡಲಸಂಗಮದೇವ.
೫೦೯.
ತನು ನಿಮ್ಮದೆಂದ ಬಳಿಕ ಎನಗೆ ಬೇರೆ ತನುವಿಲ್ಲ |
ಮನ ನಿಮ್ಮದೆಂದ ಬಳಿಕ ಎನಗೆ ಬೇರೆ ಮನವಿಲ್ಲ |
ಧನ ನಿಮ್ಮದೆಂದ ಬಳಿಕ ಎನಗೆ ಬೇರೆ ಧನವಿಲ್ಲ |
ಇಂತಿ ತ್ರಿವಿಧವೂ ನಿಮ್ಮದೆಂದರಿತ ಬಳೀಕ
ಎನಗೆ ಬೇರೆ ವಿಚಾರವುಂಟೇ ಕೂಡಲಸಂಗಮದೇವ ||
೫೧೦.
ಅಂಗದಿಚ್ಚೆಗೆ ಮದ್ದು ಮಾಸವ ತಿಂಬರು |
ಕಂಗಳಿಚ್ಚೆಗೆ ಪರವಧುವ ನೆರೆವರು |
ಲಿಂಗಲಾಂಛನಧಾರಿಯಾದಲ್ಲಿ ಫಲವೇನು ?
ಲಿಂಗಪಥವ ತಪ್ಪಿ ನಡೆವರು |
ಜಂಗಮ ಮುಖದಿಂದೆ ನಿಂದೆ ಬಂದರೆ
ಕೊಂಡ ಮಾರಿಂಗೆ ಹೋಹುದು ತಪ್ಪದು
ಕೂಡಲಸಂಗಮದೇವ |
೫೧೧.
ಕೋಪಿ ಮಜ್ಜನಕ್ಕೆರೆದರೆ ರಕ್ತದ ಧಾರೆ |
ಪಾಪಿ ಹೂವನೇರಿಸಿದರೆ ಮಸೆದಡಾಯುಧದ ಗಾಯ |
ಕೂಪವರನಾರನೂ ಕಾಣೆನು ಮಾದಾರಚೆನ್ನಯ್ಯನಲ್ಲದೆ |
ಕೂಪವರನಾರನೂ ಕಾಣೆನು ಡೋಹರಕಕ್ಕಯ್ಯನಲ್ಲದೆ |
ವ್ಯಾಪತ್ತಿಯುಳ್ಳವ ನಮ್ಮ ಮಡಿವಾಳ ಮಾಚಯ್ಯ |
ನಿನ್ನ ಪತ್ತಿಗರಿವರಯ್ಯ ಕೂಡಲಸಂಗಮದೇವ |
೫೧೨.
ಕೃಷಿ-ಕೃತ್ಯ-ಕಾಯಕದಿಂದಾದರೇನು ?
ತನು-ಮನವ ಬಳಲಿಸಿ ಪಾದವ ತಂದು ದಾಸೋಹವ ಮಾಡುವ
ಪರಮ ಸದ್ಭಕ್ತನ ಪಾದವ ತೋರಯ್ಯ ಎನಗೆ |
ಅದೆಂತೆನೆ :
ಆತನ ತನು ಶುದ್ಧ | ಆತನ ಮನ ಶುದ್ಧ |
ಆತನ ನಡೆ ಶುದ್ಧ | ನುಡಿಯೆಲ್ಲವು ಪಾವನ |
ಆತಂಗೆ ಉಪದೇಶವ ಮಾಡಿದಾತನೆ ಪರಮಸದ್ಗುರು |
ಅಂತಪ್ಪ ಸದ್ಭಕ್ತನ ಮನೆಯ ಕೈಲಾಸವೆಂದು ಹೊಕ್ಕು
ಲಿಂಗಾರ್ಚನೆಯ ಮಾಡುವ ಜಂಗಮವೇ ಜಗತ್ಪಾವನ |
ಇಂತಪ್ಪವರ ನಾನು ನೆರೆ ನಂಬಿ
ನಮೋ ನಮೋ ಎಂಬೆನಯ್ಯ ಕೂಡಲಸಂಗಮದೇವ |
೫೧೩.
ದೇವ ದೇವ ಬಿನ್ನಪವ ಅವಧಾರು |
ವಿಪ್ರ ಮೊದಲು ಅಂತ್ಯಜ ಕಡೆಯಾಗಿ
ಶಿವಭಕ್ತರಾದವರನೆಲ್ಲರನು ಒಂದೇ ಎಂಬೆ
ಹಾರುವ ಮೊದಲು ಶ್ವಪಚ ಕಡೆಯಾಗಿ
ಭವಿಯಾದವರನೆಲ್ಲರನು ಒಂದೇ ಎಂಬೆ |
ಈ ಹೀಂಗೆಂದು ನಂಬುವುದೆನ್ನ ಮನವು |
ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟುಸಂದೇಹವುಳ್ಳೆರೆ
ಹಲುದೋರ ಮೂಗ ಕೊಯಿ ಕೂಡಲಸಂಗಮದೇವ |
೫೧೪.
ಗೋತ್ರನಾಮವ ಬೆಸಗೊಂಡರೆ
ಮಾತ ನೂಂಕದೆ ಸುಮ್ಮನಿದ್ದಿರಿದೇಕಯ್ಯ ?
ತಲೆಯ ಕುತ್ತಿ ನೆಲನ ಬರುವುತಿದ್ದಿದೇನಯ್ಯ ?
ಗೋತ್ರ ಮಾದಾರ ಚೆನ್ನಯ್ಯ
ಡೋಹಾರ ಕಕ್ಕಯ್ಯನೆಂಬುದೇನು ?
ಕೂಡಲಸಂಗಯ್ಯ.
೫೧೫.
ಕುಲಮದಕ್ಕೆ ಹೋರಿ ಜಂಗಮಬೇಧವ ಮಾಡುವೆ |
ಫಲವೇನು ? ನಿತ್ಯಲಿಂಗಾರ್ಚನೆ ಪ್ರಾಯಶ್ಚಿತ್ತ |
ಛಲಮದಕ್ಕೆ ಹೋರಿ ಲಿಂಗ ಭೇದವ ಮಾಡುವೆ
ಜಂಗುಳಿಯ ಕಾವ ಗೋವಳ ಹಲವು ಪಶುವ ನಿವಾರಿಸುವಂತೆ |
ತನುಭಕ್ತನಾಯಿತ್ತೆನ್ನ ಮನ ಭವಿ |
ಕೂಡಲಸಂಗಮದೇವ
೫೧೬.
ಬ್ರಹ್ಮಪದವಿಯನೊಲ್ಲೆ |
ವಿಷ್ಣುಪದವಿಯನೊಲ್ಲೆ |
ರುದ್ರಪದವಿಯನೊಲ್ಲೆ |
ನಾನು ಮತ್ತಾವ ಪದವಿಯನೊಲ್ಲೆನಯ್ಯ |
ಕೂಡಲಸಂಗಮದೇವ
ನಿಮ್ಮ ಸದ್ಭಕ್ತರ ಪಾದವನರಿದಿಪ್ಪ
ಮಹಾಪದವಿಯನೆ ಕರಿಶಿಸಯ್ಯ |

No comments:

Post a Comment