Sunday, March 20, 2011

ಗಿಳಿಯು ಪಂಜರದೊಳಿಲ್ಲ ಶ್ರೀ ರಾಮ ರಾಮ

ಗಿಳಿಯು ಪಂಜರದೊಳಿಲ್ಲ ಶ್ರೀ ರಾಮ ರಾಮ
ಬರಿದೆ ಪಂಜರವಾಯ್ತಲ್ಲ

ಅಕ್ಕ ನಿನ್ನ ಮಾತು ಕೇಳಿ
ಚಿಕ್ಕದೊಂದು ಗಿಳಿಯ ಸಾಕಿದೆ
ಅಕ್ಕ ನಿಲ್ಲದ ವೇಳೆಯಲ್ಲಿ
ಬೆಕ್ಕು ಕೊಂಡು ಹೋಯಿತಯ್ಯೋ

ಅರ್ತಿಗೆಂದು ಗಿಳಿಯ ಸಾಕಿದೆ
ಮುತ್ತಿನ ಹಾರವೇ ಹಾಕಿದೆ
ಮುತ್ತುಗೊಂಡು ಗಿಳಿಯು ತಾನು
ಎತ್ತಲೋಡಿ ಹೋಯಿತಯ್ಯೋ

ಹಸಿರು ಬಣ್ಣದ ಗಿಳಿಯು
ಕುಶಲ ಬುದ್ಧಿಯ ಗಿಳಿಯು
ಅಸುವು ಕುಂದಿ ಗಿಳಿಯು ತಾನು
ಹಸನಗೆಡಿಸಿ ಹೋಯಿತಯ್ಯೋ

ಮುಪ್ಪಾಗ ಬೆಣ್ಣೆಯನ್ನು
ತಪ್ಪದೇ ನಾ ಹಾಕಿ ಸಾಕಿದೆ
ಒಪ್ಪದಿಂದ ಗಿಳಿಯು ಈಗ
ತೆಪ್ಪನೆ ಹಾರಿ ಹೋಯಿತಯ್ಯೋ

ರಾಮ ರಾಮ ಎನ್ನೊ ಗಿಳಿ
ಕೋಮಲ ಕಾಯದ ಗಿಳಿ
ಸಮಾಜ ಪೋಷಕ ತಾನು
ಪ್ರೇಮದಿ ಸಾಕಿದ ಗಿಳಿ

ಒಂಬತ್ತು ಬಾಗಿಲ ಮನೆಯಲ್ಲಿ
ತುಂಬಿದ ಸಂದಣಿ ಇರಲು
ಕುಂಭ ಮುರಿದು ಡಿಂಬ ಬಿದ್ದು
ಅಂಬರಕ್ಕೆ ಹಾರಿತಯ್ಯೋ

ಅಂಗೈಯಲ್ಲಿ ಆಡೋ ಗಿಳಿ
ಮುಂಗೈ ಮೇಲಣ ಗಿಳಿ
ರಂಗ ಪುರಂದರ ವಿಠ್ಠಲನಂತೆ
ರಂಗದಿ ಭಜಿಸುವ ಗಿಳಿ

No comments:

Post a Comment

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......