ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Wednesday, February 24, 2016

ಕಟ್ಟುವೆವು ನಾವು - ಗೋಪಾಲಕೃಷ್ಣ ಅಡಿಗ ಗಾಯನ : ಚಂದ್ರಶೇಖರ ಕೆದಿಲಾಯ, ಮೋಹನ ರಾಗ , ಜಂಪೆ ತಾಳ

ಕಟ್ಟುವೆವು ನಾವು ಹೊಸ ನಾಡೊಂದನು,
                - ರಸದ ಬೀಡೊಂದನು.
ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರೆಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ,
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು!

      ನಮ್ಮೆದೆಯ ಕನಸುಗಳ ಕಾಮಧೇನು
      ಆದಾವು, ಕರೆದಾವು ವಾಂಛಿತವನು;
      ಕರೆವ ಕೈಗಿಹುದಿದೋ ಕಣಸುಗಳ ಹರಕೆ;
      ಗುರಿ ತಪ್ಪದೊಮ್ಮುಖದ ಬಯಕೆ ಬೆಮ್ಬಳಕೆ!

ಜಾತಿಮತ ಭೇದಗಳ ಕಂದಕವು ಸುತ್ತಲೂ,
ದುರ್ಭೇದ್ಯವೆನೆ ಕೋಟೆ ಕೊತ್ತಲಗಳು;
ರೂಢಿ ರಾಕ್ಷಸನರಸುಗೈಯುವನು, ತೊಳ್ತಟ್ಟಿ 
ತೊಡೆತಟ್ಟಿ ಕರೆಯುವನು ಸಂಗ್ರಾಮಕೆ!

     ನಾವು ಹಿಂದೆಗೆವೆವೇ? ವೀರ ತರುಣರು ನಾವು!
     ಒಂದೆ ನೆಗೆತಕೆ ನೆಗೆವೆವೋ ಕಂದಕವನು,
     ಕುಟ್ಟಿ ಪುಡಿಮಾಡುವೆವು ಕೋಟೆಗಳನು,
     ಎದೆಯ ಮೆಟ್ಟಿ ಮುರಿಯುವೆವಸುರರಟ್ಟೆಗಳನು!

ಕೋಟೆಗೋಡೆಗೆ ನಮ್ಮ ಹೆನಗಲೇ ಮೆಟ್ಟಿಲು,
ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲು
ಆದಾವು; ಅನ್ಜುವೆದೆ ನಮ್ಮದಲ್ಲ;
ಸೋಲುಬಗೆ ವೀರನಿಗೆ ಸಲ್ಲ, ಹೊಲ್ಲ! 

      ಎಡರುಗಳ ಕಡಲುಗಳನೀಸಿ ಬರುವೆವು, ಘೋರ
      ನೈರಾಶ್ಯದಗ್ನಿ ಮುಖದಲ್ಲುಕೂಡ 
      ಹೊಕ್ಕು ಹೊರಡುವೆವೆಲ್ಲ ತೊಡಕುಗಳ ಒಡಕುಗಳ
      ಬಿಡಿಸಿ, ಇದಿಗೊಳಿಸಿ ಕಟ್ಟುವೆವು ನಾಡ!

ಇಂದು ಬಾಳಿದು ಕೂಲ ಕಾಲೆಗವು; ಹೊಟ್ಟೆಯೇ
ಕೇಂದ್ರವಾಗಿದೆ ನರನ ಜೀವಿತಕ್ಕೆ;
ಅನ್ನದನ್ಯಾಯದಾವಾಗ್ನಿಯಲಿ ಕರಗುತಿದೆ
ನರತೆ, ಸಂಸ್ಕೃತಿ, ಪ್ರೀತಿ, ದಿವದ ಬಯಕೆ!

      ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
      ಸಮಬಗೆಯ ಸಮಸುಖದ ಸಮದುಃಖದ
      ಸಾಮರಸ್ಯದ ಸಮಗಾನಲಹರಿಯ ಮೇಲೆ 
      ತೀರಿಬರಲಿದೆ ನೋಡು ನಮ್ಮ ನಾಡು!

ಇಲ್ಲೆ ಈ ಎಡೆಯಲ್ಲೆ , ನಮ್ಮ ಮುಂಗಡೆಯಲ್ಲೆ,
ಅಳಲುಗಳ ಹೆಡೆಯಲ್ಲೆ,
ಸೋಲುಗಳ ತೊಡೆಯಲ್ಲೆ 
ಅರಳೀತು ನಮ್ಮ ನಾಡು;
ನಮ್ಮೆದೆಯ ತುಂಬಿರುವ ಅದರ ನರಗಂಪು ಹೊರ
ಹೊಮ್ಮುವುದು ಕಾದು ನೋಡು! 

      ಉತ್ಸಾಹ ಉದ್ವೇಗ ಉದ್ರೇಕಗಳ ವೀರ
      ಯುವಜನದ ನಾಡ ಗುಡಿಯು;
      ಅದರ ಹಾರಾಟಕ್ಕೆ ಬಾನೆ ಗಡಿಯೂ,
      ಬರಲು ಬಿಡೆವೆಂದಿಗೂ ಅದಕೆ ತಡೆಯು!
      ತಡೆವವರು ಬನ್ನಿರೋ, ಹೊದೆವವರು ಬನ್ನಿರೋ,
      ಕೆಡೆನುಡಿವ ಕೆಡೆಬಗೆವ ಕೆಡುಕು ಜನರೇ ಬನ್ನಿ!
      ಕೊಟ್ಟೆವಿದೋ ವೀಳೆಯವನು; 
      ನಿಮ್ಮಲ್ಲರನು ತೊಡೆದು ನಿಮ್ಮ ಮಸಣದ ಮೇಲೆ
      ಕಟ್ಟುವೆವು ನಾವು ಹೊಸ ನಾಡೊಂದನು,
             - ಸುಖದ ಬೀಡೊಂದನು!
                           
            ('ಕಟ್ಟುವೆವು ನಾವು' ಕವನ ಸಂಕಲನದಿಂದ)



No comments:

Post a Comment