Sunday, November 30, 2025

ನುಡಿಮುತ್ತು


 ಕಲ್ಪನೆಗೆ ಹೂ ವಾದರೇನು.., ಮುಳ್ಳಾದರೇನು ? ಕಲ್ಪಿಸುವವರ ಹೃದಯ ಮೃದುವಾಗಿದ್ದರೆ ಮುಳ್ಳು ಕೂಡ ಮೃದುವಾಗಿ ಹೂವಾಗ ಬಲ್ಲದು 

Friday, November 21, 2025

ಸಿಹಿಸುಳ್ಳು - ಮನದ ಮಾತನ್ನು ದಾಟಿಸಲೊಂದು ತೆಪ್ಪ - ರೋಹಿತ್ ಚಕ್ರತೀರ್ಥ

 


ಕೆ.ಎಸ್. ನರಸಿಂಹಸ್ವಾಮಿಯವರ "ಮೈಸೂರು ಮಲ್ಲಿಗೆ" ಕವನ ಸಂಕಲನದಲ್ಲಿ "ತೌರ ಸುಖದೊಳಗೆನ್ನ.." ಎಂಬೊಂದು ಕವಿತೆ ಇದೆ. ಇದನ್ನು ರತ್ನಮಾಲಾ ಪ್ರಕಾಶ್ ಹಾಡಿದ್ದಾರೆ. ಸಿ. ಅಶ್ವಥ್ ಈ ಕವಿತೆಗೆ ರಾಗ ಸಂಯೋಜಿಸಿದ್ದಾರೆ. ಅದೇಕೋ ಏನೋ, ಹಾಡಿನ ರಾಗ, ಧಾಟಿಗಳು ಈ ಕವಿತೆಯ ಅಂತಃಸತ್ತ್ವವನ್ನು ಕೊಂದುಬಿಟ್ಟಿವೆಯೇನೋ ಅನ್ನಿಸುತ್ತದೆ. ಯಾಕೆಂದರೆ ಇದೊಂದು ಹಾಸ್ಯಕವಿತೆ. ಇಲ್ಲಿನ ಹಾಸ್ಯವು ಸಮುದ್ರದ ತೆರೆಗಳ ಅಬ್ಬರದ ರೀತಿಯದಲ್ಲ; 'ಜೀವವಾಹಿನಿಯೊಂದು ಹರಿಯುತಿದೆ.." ಎಂಬಂಥ ಅಂತರ್ವಾಹಿನಿಯ ರೂಪದ್ದು. ಇದನ್ನು ಅತ್ಯಂತ ಲವಲವಿಕೆಯಿಂದ, ಕೀಟಲೆ ಮಾಡುವಂಥ ಧಾಟಿಯಲ್ಲಿ, ಪರಸ್ಪರ ಕಚಗುಳಿಯಿಟ್ಟು ನಕ್ಕುನಗಿಸುವಂಥ ರಾಗದಲ್ಲಿ ಹಾಡಬೇಕು. ಆದರೆ ಕ್ಯಾಸೆಟ್ಟಿನ ಹಾಡನ್ನು ಕೇಳಿದಾಗ ಯಾವುದೋ ಶೋಕಗೀತೆ ಹಾಡುತ್ತಿದ್ದಾರೆ ಎಂಬ ಭಾವನೆ ಬರುತ್ತದೆ. ಇರಲಿ, ಈ ಕವಿತೆಯಲ್ಲಿ ನಾನು ಹೇಳಹೊರಟಿರುವ ಸಂಗತಿಯನ್ನು ಈಗ ವಿವರಿಸುತ್ತೇನೆ.


ನರಸಿಂಹಸ್ವಾಮಿಯವರ ಈ ಕವಿತೆಯ ಪ್ರಾರಂಭವು ಅತ್ಯಂತ ಚೇತೋಹಾರಿಯಾಗಿದೆ. ಹೆಂಡತಿ ತವರಿಗೆ ಬಂದಿದ್ದಾಳೆ. ಬಹುಶಃ ಕನಿಷ್ಠ ಆರು ತಿಂಗಳಿAದ ಅಲ್ಲೇ ಇದ್ದಾಳೆ. ಅದಕ್ಕೆ ಸಾಕ್ಷಿ ಪದ್ಯದೊಳಗಿಂದಲೇ ಸಿಗುತ್ತದೆ - "ಐದು ತಿಂಗಳ ಕಂದ ನಗುತಲಿಹುದು"! ಅಂದರೆ ಸೀಮಂತದ ಬಳಿಕ ತೌರು ಸೇರಿಕೊಂಡವಳು ಇನ್ನೂ ಗಂಡನ ಮನೆಗೆ ಹೋಗಿಲ್ಲ. ಹೋಗಿಲ್ಲ ಮಾತ್ರವಲ್ಲ, ಕನಿಷ್ಠ ಇನ್ನೊಂದು ತಿಂಗಳು ಹೋಗುವ ಯೋಚನೆಯೂ ಆಕೆಗಿಲ್ಲ. ಯಾಕೆಂದರೆ ಕಾರಣ ಹೇಳುತ್ತಾಳೆ: "ತಾಯಡಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ, ಇನ್ನು ತಂಗಿಯ ಮದುವೆ ತಿಂಗಳಿಹುದು"! ಕೇವಲ ಒಂದು ತಿಂಗಳಲ್ಲಿ ತಂಗಿಯ ಮದುವೆ ಆಗಿಬಿಡುತ್ತದೆ, ಹಾಗಿರುವಾಗ ನಾನು ತೌರನ್ನು ಬಿಟ್ಟು ಬರುವುದು ಹೇಗೆ - ಇದವಳ ಪ್ರಶ್ನೆ. ಆದರೆ ಈ ಸಂಗತಿಯನ್ನು ಹೇಳಿ ಗಂಡನ ಎದೆಯನ್ನು ಘಾಸಿಗೊಳಿಸುವ ಮೊದಲು ಅವಳೊಂದು ಭೂಮಿಕೆ ನಿರ್ಮಿಸುತ್ತಾಳೆ. ಹಗಲು ನಿಮ್ಮ ನೆನಪು ನನ್ನನ್ನು ಹಿಂಡುತ್ತದೆ, ರಾತ್ರಿಯ ಕನಸಿನಲ್ಲಂತೂ ನೀವೇ ನೀವು - ಎಂದು ಹೇಳಿ ಗಂಡನ ಹೃದಯವನ್ನು ತನ್ನ ವಶಕ್ಕೆ ತೆಗೆದುಕೊಂಡುಬಿಡುತ್ತಾಳೆ. ಇದರ ನಂತರ ಬರುವ ಸಾಲು ದಾಂಪತ್ಯದ ಮೇರು ವ್ಯಾಖ್ಯಾನ ಎನ್ನಬಹುದು. ಬೃಂದಾವನದ ಹಣೆಗೆ ಕುಂಕುಮವನ್ನು ಇಡುವಾಗ ಅವಳಿಗೆ ಕಾಣಿಸುವುದು ಶ್ರೀತುಳಸಿ, ಕೃಷ್ಣತುಳಸಿ. ಇದು ಲಕ್ಷ್ಮೀನಾರಾಯಣರ ಪ್ರತೀಕ; ಆದರ್ಶ ದಾಂಪತ್ಯದ ಸಂಕೇತ. ನೀಲಾಂಬರದಲ್ಲಿ ಚಂದಿರನು ಬೆಳಗುವಾಗ, ಅವನ ಪ್ರೀತಿಪಾತ್ರ ಪತ್ನಿಯಾದ ರೋಹಿಣಿಯೂ ಸನ್ನಿಧಿಯಲ್ಲಿ ಬೆಳಗುತ್ತಾಳೆ. ಎಂಥ ಸುಮಧುರ, ಸಮನೋಹರ ಕವಿಸಾಲು! ಇದನ್ನು ಓದುವ ಓದುಗನೇ ಬಿಸಿಗೆ ಕರಗಿದ ಬೆಣ್ಣೆಯಂತೆ ಕರಗಿಹೋಗುವಾಗ ಆ ಪತಿಯಾದರೂ ಕಲ್ಲುಗುಂಡಾಗಿ ಉಳಿದಾನೆ? ಹಾಗೆ ಅವನನ್ನು ಕರಗಿಸಿ ತನ್ನ ಹಿಡಿತಕ್ಕೆ ತೆಗೆದುಕೊಂಡ ಮೇಲೆ ಈ ಹೆಣ್ಣು ತನ್ನ ಸುಳ್ಳಿನ ಸಂಚಿ ಬಿಚ್ಚುತ್ತಾಳೆ. ಐದಾಗಿದೆ, ಇನ್ನೊಂದು ತಿಂಗಳು ಕಳೆದೇ ಬರುವೆನೆಂಬ ಸೂಚನೆ ಕೊಡುತ್ತಾಳೆ. ಆಗ ಗಂಡ "ಒಮ್ಮೆ ತಕ್ಷಣ ರೈಲು ಹತ್ತಿ ಬಂದುಹೋಗಿಬಿಡು" ಎನ್ನುತ್ತಾನೆ ಎಂಬುದೂ ಅವಳಿಗೆ ಗೊತ್ತು. ಆಗ ಹೇಳುತ್ತಾಳೆ: ತಕ್ಷಣ ಹೊರಟುಬರಲು ತಾನೇನೋ ಸಿದ್ಧ. ಆದರೆ ನಾಳೆ ಮಂಗಳವಾರ, ನಾಡಿದ್ದು ನವಮಿ, ಬರುವುದು ಹೇಗೆ? ಅಲ್ಲಿಗೆ ಮತ್ತೂ ಎರಡು ದಿನಗಳ ಮುಂದೂಡಿಕೆ ಆದಂತಾಯಿತು. ಈ ಸೂಚನೆ ಗಂಡನಿಗೆ ಸಿಕ್ಕಿ ಸಿಟ್ಟು ಬರುತ್ತದೆಂಬಷ್ಟರಲ್ಲಿ ಅವಳ ಮುಲಾಮು ತಯಾರಿದೆ: "ಆಮೇಲೆ ನಿಲ್ಲುವೆನೆ ನಾನು ಇಲ್ಲೆ?"


ಈ ಕವಿತೆಯಲ್ಲಿ ಬರುವ ಸಿಹಿಸುಳ್ಳಿಗೆ ಇನ್ನೊಬ್ಬರನ್ನು ಚುಚ್ಚುವ, ಅವರಿಗೆ ಕೇಡು ಬಯಸುವ ದುರುದ್ದೇಶಗಳಿಲ್ಲ. ಆದರೆ ಒಂದು ಸಂದರ್ಭವನ್ನು ಚಾಣಾಕ್ಷತನದಿಂದ ಸಂಭಾಳಿಸುವ, ಮುಗ್ಧವಲ್ಲದ ಒಳ್ಳೆಯತನವಿದೆ. ಹೌದು, ಇದು ಮುಗ್ಧತನವಲ್ಲ. ಹಾಗಂತ ಕಪಟತನವೂ ಅಲ್ಲ. ಇಲ್ಲಿ ಹೆಂಡತಿ ಗಂಡನೊಡನೆ ಆಡಿದ ಮಾತುಗಳು ನಿರುದ್ದಿಶ್ಯವಲ್ಲ, ಹಾಗಂತ ದುರುದ್ದೇಶವಂತೂ ಖಂಡಿತ ಅಲ್ಲ. ಈ ಸಿಹಿಸುಳ್ಳೇ ಇಲ್ಲಿ ಕಾವ್ಯದ ಆಭರಣ.


ಸಿಹಿಸುಳ್ಳುಗಳಿಗೆ ಅನೇಕ ಉದಾಹರಣೆಗಳನ್ನು ಕೊಡಬಹುದು. ಉದಾಹರಣೆಗೆ ಮನೆಯಲ್ಲಿ ಮಗು ಕಾಗದದ ಮೇಲೆ ನಾಲ್ಕು ಗೆರೆ ಗೀಚಿ ನಿಮ್ಮತ್ತ ಚಾಚುತ್ತದೆ. ನೀವು "ಆಹಾ ಎಷ್ಟು ಚೆನ್ನಾಗಿದೆ!" ಎನ್ನುತ್ತೀರಿ. ಅದು ಸುಳ್ಳೆಂಬುದು ನಿಮಗೆ ಗೊತ್ತು; ತನ್ನ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆಯೆಂದು ಮಗು ನಂಬುತ್ತದೆ. ಇಲ್ಲಿ ಸುಳ್ಳುತನದ ನಿಜ ಗೊತ್ತಿದ್ದುದು ಒಬ್ಬರಿಗಷ್ಟೇ; ಇನ್ನೊಬ್ಬರು ಆ ಸುಳ್ಳನೇ ಸತ್ಯವೆಂದು ನಂಬಿದರು. ಇನ್ನೊಂದು ಉದಾಹರಣೆ ನೋಡೋಣ: ಯಾವುದೋ ಸಂದರ್ಭದಲ್ಲಿ ಉಭಯಕುಶಲೋಪರಿ ನಡೆಸುತ್ತ ಒಬ್ಬರು, "ನೀವು ಬೆಂಗಳೂರಿಗೆ ಬಂದರೆ ನಮ್ಮ ಮನೆಗೆ ಬರಲೇಬೇಕು" ಎಂದು ಪ್ರೀತಿಯ ಒತ್ತಾಯ ಹಾಕಿದರೆನ್ನಿ. ಆಗ ಎದುರಿನವರು "ಬರೋಣ, ಖಂಡಿತ ಬರೋಣ. ಮುಂದಿನ ಸಲ ನಿಮ್ಮ ಮನೆಗೆ ಬಂದೇ ಬರುವೆ" ಎನ್ನುತ್ತಾರೆ. ಇಲ್ಲಿ ಸುಳ್ಳಿನ ಸುಳ್ಳುತನ ಇಬ್ಬರಿಗೂ ಗೊತ್ತಿದೆ - ಅವರೇನೂ ಇವರನ್ನು ಮನಃಪೂರ್ವಕವಾಗಿ ಬರಲೇಬೇಕೆಂಬ ಆದೇಶದಂತೆ ಕರೆದೂ ಇಲ್ಲ; ಇವರು ಬರುತ್ತೇನೆಂಬ ಭರವಸೆ ಕೊಟ್ಟರೂ ಬರುವವರೇನೂ ಅಲ್ಲ. ಒಂದು ಶಿಷ್ಟಾಚಾರದಂತೆ ಈ ಸುಳ್ಳಿನ ಮಾತುಕತೆ ನಡೆಯಿತು. ಹಾಗಿದ್ದರೂ ಇಲ್ಲಿ ಸಿಹಿಸುಳ್ಳಿನ ಹಿಂದೆ ಒಂದು ಕಚಗುಳಿ ಇಲ್ಲ, ಮೃದುಹಾಸ್ಯವಿಲ್ಲ, ಪರಸ್ಪರರಿಗೆ ಏನನ್ನೋ ದಾಟಿಸುವ ಸೂಕ್ಷ್ಮವಿಲ್ಲ. ಇಂಥ ನೇರಾನೇರ, ಸರಳ, ಮುಗ್ಧ ಸುಳ್ಳಿನ ಮಾತುಕತೆಗೆ ಹಲವು ಉದಾಹರಣೆಗಳನ್ನು ಸಾಹಿತ್ಯದಿಂದ ಹೆಕ್ಕಿ ಕೊಡಬಹುದು.


ಉದಾಹರಣೆಗೆ, ಸಿಲಪ್ಪದಿಕಾರಮ್ ಕಾವ್ಯದಲ್ಲಿ ಕೋವಲನ್, ಕನ್ನಗಿಗೆ ತಾನು ಸೌಖ್ಯವೆಂಬ ಸಂದೇಶ ಕಳಿಸುತ್ತಾನೆ. ಅವನ ಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲವೆಂದು ಕನ್ನಗಿಗೆ ಗೊತ್ತಿದ್ದರೂ, ಅವಳಿಗೆ ಅದು ಗೊತ್ತೆಂದು ಕೋವಲನಿಗೆ ಗೊತ್ತಿದ್ದರೂ ಅವರಿಬ್ಬರೂ ಈ ಪರಸ್ಪರ ಕ್ಷೇಮಸಮಾಚಾರವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಓ. ಹೆನ್ರಿಯ "ದ ಗಿಫ್ಟ್ ಆಫ್ ಮೆಜಾಯ್" ಎಂಬ ಕತೆಯಲ್ಲಿ ಬರುವ ಜಿಮ್ ಮತ್ತು ಡೆಲ್ಲಾ ಪಾತ್ರಗಳೂ ಅಷ್ಟೆ. ಅವರಿಬ್ಬರೂ ಬಡವರು. ಗಂಡಹೆಂಡತಿಯರಾದ್ದರಿಂದ ತಮ್ಮ ಕುಟುಂಬದ ಬಡತವನ್ನು ಮುಚ್ಚಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಅವರಿಗೇನೂ ಇಲ್ಲ. ಜಿಮ್ ಅವಳಿಗಾಗಿ ಒಂದು ಹೇರ್ ಕ್ಲಿಪ್ಪನ್ನು ಉಡುಗೊರೆಯಾಗಿ ತರುತ್ತಾನೆ - ಅದಕ್ಕಾಗಿ ತನ್ನ ವಾಚನ್ನೇ ಮಾರಬೇಕಾಗಿ ಬರುತ್ತದೆ. ಅವನ ಕೈಗಡಿಯಾರಕ್ಕೆ ಒಂದೊಳ್ಳೆಯ ಚೈನನ್ನು ಅವಳು ಉಡುಗೊರೆಯಾಗಿ ತರುತ್ತಾಳೆ - ತನ್ನ ಆ ಕೇಶರಾಶಿಯನ್ನೇ ಮಾರಿಕೊಂಡು! "ಅಯ್ಯೋ, ನನಗೆ ಉಡುಗೊರೆ ಕೊಡುವುದಕ್ಕಾಗಿ ನಿನ್ನ ಕೂದಲನ್ನೇ ಕತ್ತರಿಸಿಕೊಂಡೆಯಾ? ಎಂದು ಅವನು ಗೋಳಾಡಿದಾಗ ಡೆಲ್ಲಾ "ಬಿಟ್ಹಾಕು! ಆ ಕೂದಲಿಗೇನು! ಕೆಲವೇ ದಿನಗಳಲ್ಲಿ ಕಳೆಯಂತೆ ಬೆಳೆದುಬಿಡುತ್ತೆ" ಎನ್ನುತ್ತಾಳೆ. ಅವಳಾಡಿದ್ದು ತನ್ನನ್ನು ಸಮಾಧಾನಪಡಿಸಲು ಎಂಬುದು ಅವನಿಗೂ ಗೊತ್ತು; ಹಾಗೆ ಹೇಳಿದರೂ ತನ್ನೊಳಗೆ ದುಃಖ ಉಮ್ಮಳಿಸಿಬರುತ್ತಿದೆ ಎಂಬುದು ಆಕೆಗೂ ಗೊತ್ತು. ಟಾಲ್‌ಸ್ಟಾಯ್‌ಯ "ವಾರ್ ಆ್ಯಂಡ್ ಪೀಸ್" ಕೃತಿಯಲ್ಲಿ ರಾಜಕುಮಾರ ಆಂದ್ರೆ ಯುದ್ಧಕ್ಕೆ ಹೊರಟಾಗ ತನ್ನ ಹೆಂಡತಿಗೆ, "ಎಲ್ಲವೂ ಒಳ್ಳೆಯದೇ ಆಗುತ್ತದೆ. ನೀನೇನೂ ಹೆದರಬೇಕಾಗಿಲ್ಲ" ಎನ್ನುವುದಿಲ್ಲವೇ? ಅದೂ ಇಂಥದೇ ಒಂದು ಸಿಹಿಸುಳ್ಳು ಎಂಬುದು ಅವರಿಬ್ಬರಿಗೂ ಗೊತ್ತಿದ್ದ ಸಂಗತಿಯೇ ತಾನೆ? "ಯುದ್ಧದ ಕೊನೆಯಲ್ಲಿ ಎಲ್ಲವೂ ಒಳ್ಳೆಯದೇ ಆಗುತ್ತದೆ" ಎಂದು ಯಾರು ಭಾವಿಸಲು ಸಾಧ್ಯ? ಟಾಗೋರರ "ಪೋಸ್ಟ್ ಮಾಸ್ಟರ್" ಎಂಬ ಕತೆಯಲ್ಲಿ, ಊರು ಬಿಟ್ಟು ಮತ್ತೆಲ್ಲಿಗೋ ಹೋಗಲು ಹೊರಟುನಿಂತ ಅಂಚೆಮಾಸ್ತರರನ್ನು ರತನ್ ಎಂಬ ಹುಡುಗಿ ಕೊನೆಯ ಬಾರಿಗೆಂಬಂತೆ ಭೇಟಿ ಮಾಡುತ್ತಾಳೆ. "ನಾನೆಲ್ಲಿಗೆ ಹೋಗ್ತೀನಿ! ಮತ್ತೆ ಬರ್ತೀನಿ!" ಎಂದು ಹೇಳುವ ಅವನಿಗೆ ಮತ್ತೆ ಬರುವ ಸಾಧ್ಯತೆ ಕ್ಷೀಣವೆಂದು ಗೊತ್ತಿದೆ. ಮತ್ತೆ ಬರ್ತಾನೋ ಇಲ್ಲವೋ ಎಂಬ ಕ್ಷೀಣ ಸಂಶಯವೊಂದು ಈ ಹುಡುಗಿಯೊಳಗೂ ಇದೆ. ಆ ಕ್ಷಣಕ್ಕೆ ಆ ಸುಳ್ಳನ್ನಲ್ಲದೆ ಬೇರೇನು ಹೇಳಲು ಸಾಧ್ಯ?


ಆದರೂ, ಆಗಲೇ ಹೇಳಿದಂತೆ ಈ ಸಿಹಿಸುಳ್ಳುಗಳ ಒಳಗೆ ಪರಸ್ಪರರನ್ನು ನೋಯಿಸಬಾರದೆಂಬ ಎಚ್ಚರದ ಹೊರತಾಗಿ ಕೀಟಲೆಯ ಬುದ್ಧಿ ಇಲ್ಲ; ನವಿರುಹಾಸ್ಯದ ಲೇಪವಿಲ್ಲ. ಸಿಹಿಸುಳ್ಳಿಗೆ ಅಂಥ ಹಾಸ್ಯದ ಲೇಪನ ಕೊಡುವುದರಲ್ಲಿ ಕೆ.ಎಸ್.ನ. ಗಟ್ಟಿಗರು. ಅವರ ಮತ್ತೊಂದು ಕವಿತೆ "ಶಾನುಭೋಗರ ಮಗಳು"ನಲ್ಲಿ ಈ ಹಾಸ್ಯಲೇಪಿತ ಸಿಹಿಸುಳ್ಳೇ ವಸ್ತು. ಶಾನುಭೋಗರ ಮನೆಗೆ ವಧು ನೋಡಲು ಬಂದ ವರನನ್ನು ನೋಡಿ ಶಾನುಭೋಗರ ಮಗಳು ಸೀತೆ ಒಳಕೋಣೆಗೆ ಹೋಗುತ್ತಾಳೆ. ಅವಳ ಅಭಿಪ್ರಾಯ ಕೇಳಲು ಹೋದ ಶಾನುಭೋಗರಿಗೆ ಅವಳು "ವೈದಿಕರ ಮನೆಗಳಲ್ಲಿ ಊಟ ಹೊತ್ತಾಗುವುದು, ನಾನೊಲ್ಲೆ" ಎನ್ನುತ್ತಾಳೆ! (ಇದೆಂಥ ಹಾಸ್ಯಾಸ್ಪದ ಕಾರಣ ಎನ್ನಬೇಡಿ. ೧೨ರ ಎಳವೆಗೆ, ಊಟ ತಡವಾಗುವುದು ಕೂಡ ದೊಡ್ಡ ಕಾರಣವೇ ಅಲ್ಲವೆ?) ಮಗಳ ಮಾತನ್ನು ಕೇಳಿ, ಅವಳ ಇಂಗಿತ ಅರ್ಥಮಾಡಿಕೊಂಡು ನಕ್ಕ ತಂದೆ ಹೊರಬಂದು ವರನ ಕಡೆಯವರಿಗೆ "ಒಳಗೆ ನಂದಾದೀಪ ನಂದಿಹೋಯಿತು" ಎಂದುಬಿಡುತ್ತಾರೆ. ಇದು ಅಪಶಕುನ. ಅಪಶಕುನವನ್ನು ಮೀರಿ ಮದುವೆ ಮಾಡಿಸಿಬಿಡಿ ಎಂದು ಯಾರೂ ಒತ್ತಾಯ ಹಾಕಲಾರರು. ಬಂದ ದಾರಿಗೆ ಸುಂಕವಿಲ್ಲವೆಂದು ವರ ಹೊರಟುಹೋಗುತ್ತಾನೆ. ಹುಡುಗಿ ಹೇಳಿದ್ದು ಒಂದು ಸುಳ್ಳು; ಅದನ್ನು ಅರ್ಥ ಮಾಡಿಕೊಂಡ ತಂದೆ ಹೇಳಿದ್ದು ಇನ್ನೊಂದು ಸುಳ್ಳು! ಆದರೆ ಈ ಸುಳ್ಳಿನಿಂದ ಹುಡುಗಿಯ ಬಾಳು ಉಳಿಯಿತು; ಅವಳೊಳಗಿನ ನಿಜಕಾರಣವೂ ಬದುಕಿಕೊಂಡಿತು; ಮದುವೆಯ ಸಂಬಂಧ ಕೂಡಿಬರಲಿಲ್ಲವೆಂಬುದು ಬಿಟ್ಟರೆ ಆ ಎರಡು ಕುಟುಂಬಗಳ ಸಂಬಂಧವೂ ಕಹಿಗೊಳ್ಳದೆ ಉಳಿಯಿತು. ಒಂದು ಸಿಹಿಸುಳ್ಳಿಂದ ಎಷ್ಟೆಲ್ಲ ಪ್ರಯೋಜನ! ಮರುದಿನ ನೀರಿಗೆ ಹೋದಾಗ ಆ ಹುಡುಗಿ ತನ್ನ ಓರಗೆಯ ಹುಡುಗಿಯರಿಗೆ "ವಧುಪರೀಕ್ಷೆಗೆ ಬಂದಿದ್ದ ಗಂಡು ತನ್ನ ಕೂದಲಿಗಿಂತ ಕಪ್ಪು" ಎಂದು ಹೇಳಿದಳೇನೋ ಹೌದು; ಆದರೆ ಅದೂ ನಿಜಕಾರಣವೆಂದು ಹೇಳುವಂತಿಲ್ಲ! ಹುಡುಗಿಯ ಅಂತರಂಗದ ನಿಜಕಾರಣವೆಂಬುದು ಯಾರಿಗೂ ತಿಳಿಯದಂತೆ ಈ ಎಲ್ಲ ಸುಳ್ಳುಗಳಿಂದ ಮುಚ್ಚಿಹೋಗಿ ಸುರಕ್ಷಿತವಾಯಿತು. ಅಂಥ ಕೆಲವು ಖಾಸಗಿ ಸತ್ಯಗಳನ್ನು ರಕ್ಷಿಸಿಕೊಳ್ಳಲು ಎಷ್ಟೋ ಸಲ ಸಿಹಿಸುಳ್ಳುಗಳನ್ನು ಬಲಿಹಾಕಬೇಕಾಗುತ್ತದೆ!


"ಸತ್ಯವನ್ನು ಹೇಳು, ಪ್ರಿಯವಾದ್ದನ್ನು ಹೇಳು, ಅಪ್ರಿಯವಾದ ಸತ್ಯ ಹೇಳಬೇಡ" ಎಂದರು ಪುರಾತನರು. ಹಾಗೆಯೇ "ಪ್ರಿಯವಾದ ಸುಳ್ಳನ್ನೂ ಹೇಳಬೇಡ. ಇದುವೇ ಸನಾತನಧರ್ಮ" ಎಂದೂ ಆದೇಶಿಸಿದರು. ಆದರೆ ಯಾರಿಗೂ ಕೇಡೆನಿಸದ, ಕೇಡು ಬಯಸದ, ಒಳಿತಾದ್ದನ್ನು ರಕ್ಷಿಸಬಲ್ಲ ಅಂಥ ಸಿಹಿಸುಳ್ಳುಗಳನ್ನು ಹೇಳಬಹುದು. ಹೇಳಬೇಕು ಕೂಡ. ಭಯಹುಟ್ಟಿಸುವ ಕಠೋರ ರೂಪದ ಸತ್ಯದ ದರ್ಶನ, ಸಹವಾಸ ಯಾರಿಗೆ ಬೇಕಾಗಿದೆ?

Tuesday, November 4, 2025

ಹೀಗೂ ಇದ್ದರು ನಮ್ಮ ಹೆಮ್ಮೆಯ ಕನ್ನಡ ಸಾಹಿತಿಗಳು - ಸಂಗ್ರಹ


ಗಳಗನಾಥರು


ಗಳಗನಾಥರು

ಕನ್ನಡದ ಪುಸ್ತಕಗಳನ್ನು ತಲೆಯಲ್ಲಿ ಹೊತ್ತುಕೊಂಡು ಮಾರಾಟ ಮಾಡುತ್ತಿದ್ದ ಪುಣ್ಯಾತ್ಮರು ಇವರು.  ನಿಮ್ಮ ಮನೆಯಲ್ಲಿ ಲಕ್ಷ್ಮಿ ಇದ್ದರೆ ಸಾಲದು, ನಾನು ಸರಸ್ವತಿಯನ್ನು ಹೊತ್ತು ತಂದಿರುವೆ.  ಲಕ್ಷ್ಮಿಯೊಂದಿಗೆ ಸರಸ್ವತಿಯನ್ನು ಮನೆ ತುಂಬಿಸಿಕೊಳ್ಳಿ ಎಂದು ಹೇಳುತ್ತಾ, ರಾತ್ರಿ ದೇವಸ್ಥಾನದ ಅಂಗಳದಲ್ಲಿ ಮಲಗಿ, ಮಾರನೆಯ ದಿನ ಊರ ಕೆರೆ ಕಟ್ಟೆಗಳಲ್ಲಿ ಸ್ನಾನ ಮಾಡಿ, ಬೆಲ್ಲ ಕೊಬರಿ ತಿಂದುಕೊಂಡು ಊರೂರಿಗೆ ತಲೆಯ ಮೇಲೆ ಪುಸ್ತಕ ಹೊತ್ತು ಕನ್ನಡ ಸಾರಸ್ವತ ಲೋಕವನ್ನು ಮನೆ ಮನಗಳಿಗೆ ಹಂಚಿದವರು ನಮ್ಮ ಗಳಗನಾಥರು.  ಅವರು ಸತ್ತಮೇಲೆ ಅಂತ್ಯಸಂಸ್ಕಾರ ಮಾಡಲೂ ಇವರ ಮನೆಯವರ ಬಳಿ ಹಣವಿರಲಿಲ್ಲ. ಪುಸ್ತಕಗಳಿಂದಲೇ ಇವರ ಅಂತ್ಯಸಂಸ್ಕಾರ  ಮಾಡಬೇಕಷ್ಟೇಯೆಂದು ಅವರ ಮನೆಯವರು ಅ ಸಂದರ್ಭದಲ್ಲಿ ನೊಂದುಕೊಂಡು ನುಡಿದಿದ್ದರು.



ವಿ.ಸೀತಾರಾಮಯ್ಯ

ಇವರು ದಿನಾ ಬೆಳಿಗ್ಗೆ ಹೊಟೇಲಿನಿಂದ ಹತ್ತು ಇಡ್ಲಿ ತರಿಸುತ್ತಿದ್ದರಂತೆ.ಅದರಲ್ಲಿ ಒಂದು ಇಡ್ಲಿಯನ್ನಷ್ಟೇ ತಾವು ತಿಂದು ಉಳಿದ ಒಂಬತ್ತು ಇಡ್ಲಿಯನ್ನು ಪ್ರಾಣಿ ಪಕ್ಷಿಗಳಿಗೆ ತಿನ್ನಿಸುತ್ತಿದ್ದರು.  ಇದನ್ನು ಅವರು ತಮ್ಮ ಬದುಕಿನುದ್ದಕ್ಕೂ ದಿನಚರಿಯಂತೆ ಪಾಲಿಸುತ್ತಿದ್ದರು.  ತಾವೂ ಬದುಕುತ್ತಾ ಎಲ್ಲವನ್ನೂ ಬದುಕಿಸಬೇಕೆಂಬ ಅವರ ನಿರ್ಮಲ ಹೃದಯ ನಮಗೆ ದಾರಿದೀಪ. 


ದ.ರಾ.ಬೇಂದ್ರೆ:-🙏🏻 ಇವರೊಮ್ಮೆ ದಾರಿಯಲ್ಲಿ ನಡೆದುಕೊಂಡು ಬರಬೇಕಾದರೆ ಚಪ್ಪಲಿ ಕಿತ್ತುಹೋಗುತ್ತದೆ.  ಚಪ್ಪಲಿಯನ್ನು ಕೈಯಲ್ಲಿ ಹಿಡಿದು ಸ್ವಲ್ಪ ದೂರ ನಡೆದುಕೊಂಡು ಬಂದಮೇಲೆ, ದಾರಿಪಕ್ಕ ಕೂತಿದ್ದ ಚಮ್ಮಾರ ಸಿಗುತ್ತಾನೆ.  ಬಿರುಬಿಸಿಲು ಆಗಿದ್ದರಿಂದ ಬೇಂದ್ರೆ ಅಜ್ಜ ಛತ್ರಿಬಿಡಿಸಿಕೊಂಡಿದ್ದರು.  ಚಮ್ಮಾರ ತಮ್ಮ  ಚಪ್ಪಲಿಯನ್ನು ರಿಪೇರಿ ಮಾಡುವಾಗ ಅವರು ತಮ್ಮ ಛತ್ರಿಯನ್ನು ಬಿಸಿಲಲ್ಲಿದ್ದ ಚಮ್ಮಾರನಿಗೆ ಹಿಡಿದಿದ್ದರು..! ಇದರಿಂದ ಮುಜುಗರಗೊಂಡ ಚಮ್ಮಾರ, ನಾನು ದಿನಾ ಬಿಸಿಲಲ್ಲೇ ಕೂತು ಕೆಲಸ ಮಾಡುವವನು ನನಗಿದೆಲ್ಲ ಬೇಡ ಅಂದಿದ್ದಕ್ಜೆ ಬೇಂದ್ರೆ ಅಜ್ಜ ನೀನಿಗ ನಿನ್ನ ಕೆಲಸ ಮಾಡುತ್ತಿದ್ದೀಯ, ನಾನೀಗ ನನ್ನ ಕೆಲಸ ಮಾಡುತ್ತಿದ್ದೇನೆ ಅಂದರಂತೆ...!.   ಸರ್ವ ಸಮತಾ ಭಾವದ ವ್ಯಕ್ತಿತ್ವ ಅವರದಾಗಿತ್ತು. 



ಡಿವಿಜಿ:-🙏🏻



ಡಿವಿಜಿಯವರು ತಮ್ಮ ಹೆಂಡತಿಯನ್ನು ಆಪ್ತರೊಬ್ಬರ ಮದುವೆಗೆ ಹೋಗಲು ಹೇಳಿ ತಾವು ಬೇರೊಂದು ಕಾರ್ಯಕ್ರಮಕ್ಕೆ ಹೋಗಿದ್ದರು.ಕಾರ್ಯಕ್ರಮ ಮುಗಿಸಿ ಮನೆಗೆ ಬಂದಾಗ ಹೆಂಡತಿ ಮನೆಯಲ್ಲಿರೋದನ್ನು ನೋಡಿ ಸಿಟ್ಟಾದ ಡಿವಿಜಿ, ಮದುವೆಗೆ ಯಾಕೆ ಹೋಗಲಿಲ್ಲವೆಂದು ಹೆಂಡತಿಯನ್ನು ಪ್ರಶ್ನಿಸಿದರು.  ಅವರ ಪತ್ನಿ, ಮಗನನ್ನು ಕಳಿಸಿದ್ದೇನೆ ಅಂದರು.  ಡಿವಿಜಿ ಬಹಳ ಆತ್ಮೀಯರ ಮದುವೆ ಎಂದು ಹೇಳಿದ್ದೆನ್ನಲ್ಲ ನೀನೇ ಹೋಗಬೇಕಿತ್ತು ಎಂದು ಮತ್ತೊಮ್ಮೆ ಏರಿದ ಧ್ವನಿಯಲ್ಲಿ ಹೇಳಿದರು.  ಆಗ ಅವರ ಪತ್ನಿ,'ನನ್ನತ್ರ ಇರೋದು ಒಂದೇ ಸೀರೆ.  ಅದು ಕೂಡ ಅಲ್ಲಿ ಇಲ್ಲಿ ಹರಿದಿದೆ.ಅದನ್ನು ಉಟ್ಕೊಂಡು ಮದ್ವೆಗೆ ಹೋದ್ರೆ ನನ್ ಯಜಮಾನ್ರ ಮಾನ ಹೋಗುತ್ತೆ. ಅದ್ಕೆ ಮಗನನ್ನು ಕಳಿಸಿದೆ ಅಂದರಂತೆ.  ಈ ಮಾತನ್ನು ಕೇಳಿದ ಡಿವಿಜಿಯವರಿಗೆ ಮರು ಮಾತನಾಡಲು ಅವಕಾಶವೇ ಇರಲಿಲ್ಲ.

ತಿರುಕ ನೀನು ಈ ಬ್ರಹ್ಮಪುರಿಯೊಳಗೆ, 

ಸಿರಿಯಿದ್ದೊಡೇನು, ಪರಿಜನರಿದ್ದೋಡೇನು ? ಎನ್ನುವ ಮನಸ್ಸು ಅವರದಾಗಿತ್ತು.  


ಮಾಸ್ತಿ:-🙏🏻 ಜಿಲ್ಲಾಧಿಕಾರಿಯಾಗಿದ್ದ ಮಾಸ್ತಿಯವರು ಒಮ್ಮೆ ಊರಭೇಟಿಗೆ ತೆರಳಿರುತ್ತಾರೆ.  ದಾರಿ ಮಧ್ಯೆ ಬಾಯಾರಿಕೆ ಆದ್ದರಿಂದ ಸಾರ್ವಜನಿಕ ಬಾವಿಯಿಂದ ನೀರು ಸೇದುತ್ತಿದ್ದ ವ್ಯಕ್ತಿಯ ಬಳಿ ಒಂದು ಬೊಗಸೆ ಕುಡಿಯಲು ನೀರು ಕೇಳುತ್ತಾರೆ.  ಅವನು ನೀರನ್ನು ಸೇದಿ ಮಾಸ್ತಿಯವರಿಗೆ ಕೊಡುವ ಬದಲು ಪಕ್ಕದಲ್ಲಿರುವ ಟ್ಯಾಂಕಿಗೆ ಸುರಿಯುತ್ತಾನೆ.ಮಾಸ್ತಿಯವರಿಗೆ ಅವನು ನೀರು ಕೊಡದ್ದು ನೋಡಿ ಮುಜುಗರವಾಗುತ್ತದೆ.  ಮತ್ತೆ ಅವನು ಕೊಡವನ್ನು ಬಾವಿಗಿಳಿಸಿ ನೀರು ಸೇದುತ್ತಾನೆ.  ಈ ಬಾರಿ ಮಾಸ್ತಿಯವರನ್ನು ಕರೆದು ಬೊಗಸೆ ಹಿಡಿಯುವಂತೆ ಹೇಳಿ ನೀರು ಸುರಿಯುತ್ತಾನೆ.  ಮಾಸ್ತಿಯವರು ಆಶ್ಚರ್ಯದಿಂದ ಕೇಳುತ್ತಾರೆ ಆಗಲೆ ಯಾಕೆ ನೀನು ನನಗೆ ನೀರು ಕೊಡಲಿಲ್ಲ ಎಂದು.  ಅದಕ್ಕವನು ಸ್ವಾಮಿ ಈ ಬಾವಿ ತೋಡಿಸುವ ಮೊದಲು ಡಿಸಿಯವರು, ಯಾರೇ ನೀರು ಸೇದಿದರು ಮೊದಲ ಕೊಡವನ್ನು ಪಕ್ಕದಲ್ಲಿರುವ ಟ್ಯಾಂಕಿಗೆ ಸುರಿಯಬೇಕು, ಅ ನೀರು ಪ್ರಾಣಿಪಕ್ಷಿಗಳಿಗೆ ಕುಡಿಯೋಕೆ ಉಪಯೋಗವಾಗಬೇಕು ಎಂದಿದ್ದರು.ಹೀಗಾಗಿ ಈ ಊರಿನವರು ಅವರ ಅ ಮಾತನ್ನು ಪಾಲಿಸುತ್ತಿದ್ದೇವೆ ಎಂದ.  ಅಂದಹಾಗೆ ಹಾಗೆ ಆದೇಶ ಮಾಡಿದ್ದ ಡಿಸಿ ಮಾಸ್ತಿಯವರೇ ಆಗಿದ್ದರು...!  ಊರಿನವರ ಪ್ರಾಮಾಣಿಕತೆಯನ್ನು ನೋಡಿ ಮಾಸ್ತಿಯವರ ಕಣ್ಣುಗಳು ಒದ್ದೆಯಾಗಿದ್ದವು..!

ಸ್ವಾರ್ಥವಿಲ್ಲದಾ ಬದುಕು ಸರ್ವಕಾಲಕ್ಕೂ ಶ್ರೇಷ್ಠ ಎಂಬುದನ್ನು ತೋರಿಸಿಕೊಟ್ಟವರಿವರು.  


ದೇವುಡು ನರಸಿಂಹಶಾಸ್ತ್ರಿ

ದೇವುಡು ನರಸಿಂಹಶಾಸ್ತ್ರಿ


ಮಯೂರ ವರ್ಮನ ಬಗ್ಗೆ ಬೆಳಕು ಚೆಲ್ಲಿ ಐತಿಹಾಸಿಕ ಕಾದಂಬರ ಬರೆದರಿವರು.  ಅವರ ಕಾಲು ಗ್ಯಾಂಗರೀನ್ ಗೆ ಒಳಗಾದಾಗ ಅವರನ್ನು ಯಾವುದೋ ಒಂದು ಸಮಾರಂಭಕ್ಕೆ ನಾಲ್ಕು ಜನ ಎತ್ತಿಕೊಂಡು ಹೋಗುವಾಗ *ನೋಡ್ರಯಯ ನಾನೆಷ್ಟು ಅದೃಷ್ಠವಂತ, ಎಲ್ಲರೂ ಸತ್ತಾಗ ಅವರನ್ನು ನಾಲ್ಕು ಜನ ಹೊತ್ತೊಯ್ದರೆ ನಾನು ಬದುಕಿದ್ದಾಗಲೇ ನಾಲ್ಕು ಜನರ ಮೇಲೆ ಹೋಗುವ ಅದೃಷ್ಠಶಾಲಿ ಎಂದು ವಾಸ್ತವತೆಯನ್ನು ಅರುಹಿದ್ದವರು.  ದೇವರು ನನ್ನ ಕಾಲು ಕಿತ್ತುಕೊಂಡ ಆದರೆ ಕನ್ನಡ ಕಟ್ಟುವ ನನ್ನ ಕೈಂಕರ್ಯವನ್ನ ಅವನು ಕಿತ್ತುಕೊಳ್ಳಲಾರ ಎಂದು ಅಭಿಮಾನದಿಂದ ಹೇಳುತ್ತಿದ್ದವರು.  

ಇಂಥಃ ಮಹನೀಯರಿಂದಲೇ ಕನ್ನಡ ಉಳಿದು ಬೆಳಿದಿದ್ದು.  


ಟಿ ಎಸ್ ವೆಂಕಣ್ಣಯ್ಯ

ಟಿ ಎಸ್ ವೆಂಕಣ್ಣಯ್ಯ


ಮನೆಯಲ್ಲಿಯೇ ಕವಿಗೋಷ್ಠಿ ನಡೆಸಿ ಕನ್ನಡ ಕಟ್ಟಿದವರು.  ಒಮ್ಮೆ ಹೀಗೆ ಕವಿಗೋಷ್ಠಿ ಮನೆಯ ಮಹಡಿಯಲ್ಲಿ ನಡೆಯುತ್ತಿತ್ತು.  ಅವರ ಪುತ್ರ ಮರಣಿಸಿದ ಸುದ್ದಿಯನ್ನು ಅವರ ಶ್ರೀಮತಿ ಅವರ ಕಿವಿಯಲ್ಲಿ ಉಸುರಿಸಿದರು.   ಕವಿಗೋಷ್ಠಿಗೆ ಧಕ್ಕೆ ಬರಬಾರದೆಂದು ಮನಸ್ಸನ್ನು ಕಲ್ಲು ಮಾಡಿಕಂಡು ಕವಿಗೋಷ್ಠಿ ನಡೆಸಿ,  ಅದು ಮುಗಿದ ನಂತರ ಅವರ ಕಣ್ಣಾಲೆಗಳಲ್ಲಿ ಕಣ್ಣೀರು ಧುಮ್ಇಕ್ಕಿತ್ತು.   ಆಗ ಇತರರು ಇದಕ್ಕೆ ಕಾರಣ ಕೇಳಿದಾಗ ನಡೆದ ವಿಷಯವನ್ನು ಸಭೆಗೆ ಆಗ ತಿಳಿಸಿದರು.   ಆಗ ಅವರೆಲ್ಲರೂ ಹೀಗೇಕೆ ಮಾಡಿದಿರಿ ? ಎಂದು ಪ್ರಶ್ನಿಸಿದಾಗ ಕನ್ನಡ ಕಟ್ಟುವ ಕೆಲಸ ನಿಲ್ಲಬಾರದೆಂದೂ ಈ ರೀತಿ ಮಾಡಿದೆ ಎಂದು ಎಲ್ಲಕ್ಕೂ ಕನ್ನಡವೇ ಮಿಗಿಲು ಎಂದು ತೋರಿಸಿದ ಮಹಾತ್ಮರೀತ.  

ಕನ್ನಡ ಉಳಿದಿದ್ದೇ ಇಂಥಹವರ ಕೊಡುಗೆಯಿಂದ 


ಈ ಮೇರು ಸಾಹಿತಿಗಳು ನಮ್ಮ ನಾಡಿಗೆ ಆಸ್ತಿ |  ಸಿರಿಗನ್ನಡಂ ಗೆಲ್ಗೆ  

Krupe : Whatsapp / ಸಂಗ್ರಹ

ನುಡಿಮುತ್ತು

 ನಲ್ಬೆಳಗು

೩/೧೧/೨೦೨೫

ವಿಶ್ವ ಜೆಲ್ಲಿ ಮೀನು ದಿನ; ವಿಶ್ವ ಸ್ಯಾಂಡ್‌ವಿಚ್ ದಿನ

 ಕೆಳಗೆ ಬೀಳುವ ಬೀಜಕ್ಕೆ ಹೆದರುವ ಭಯವಿದ್ದರೆ  ಹೆಮ್ಮರವಾಗುತ್ತಿರಲಿಲ್ಲ;

 ಅದೇ ರೀತಿ ಸೋಲುತ್ತೇನೆoದು  ಪ್ರಯತ್ನವೇ ಪಡದೆ ಸುಮ್ಮನೆ ಇದ್ದಿದ್ದರೆ ಯಾರೂ ಇತಿಹಾಸ ಬರೆಯಲು ಆಗುತ್ತಿರಲಿಲ್ಲ

Friday, October 31, 2025

ಅಹಾ ! ನೀರೆ - ವಿನಾಯಕ

 *ಅಹಾ ! ನೀರೆ !*


   ೧


ಎಲ್ಲಿ ನೋಡಿದಲ್ಲೆಲ್ಲ ನೀರೇ ನೀರು ! 

ತಾನೇ ತಾನಾಗಿ ಮೆರೆಯುವ ಮೊರೆಯುವ ನೀರು ! 

ನನೆಕೊನೆಯಿಲ್ಲದ, ಚಿರಂಜೀವಿಯಾದ ನೀರು !

ಮುಗಿಲನಣಕಿಸುವ ದಟ್ಟನೀಲಿಯಾದ ನೀರು ! 

ಅಹಾ ! ನೀರೆ ! ನಿನ್ನ ಸೌಭಾಗ್ಯವೇ ಸೌಭಾಗ್ಯ !

ನಿನ್ನ ಚಿರಂಜೀವಿ ಪಟ್ಟವೇ ಪಟ್ಟ !


ತಬ್ಬುತಿರುವೆ ಬ್ರಹ್ಮಾಂಡವನೆಲ್ಲ ಸುತ್ತಿ ! 

ನಿನ್ನ ತೋಳ್ ತೆಕ್ಕೆಗೆ ಸಿಕ್ಕಿ ಪುಡಿಪುಡಿಯಾದವು ಖಂಡಖಂಡಗಳು ! 

ಇಂದ್ರನು ಬಂದಿಲ್ಲಿ ಮಳೆಗರೆಯಲಾರ : 

ಮಳೆಯ ಮೂಲಮಂತ್ರವನ್ನು ಕಲಿಯುವನಿಲ್ಲಿ ಬಂದು ! 

ವಾಯುವು ಬಂದಿಲ್ಲಿ ಬೀಸಲಾರ,-

ಈಸಬಹುದು ಬೇಕಾದರೆ ಮನಬಂದತ್ತ ! 

ಅಹಾ! ನೀರೆ ! ಅಂತಪಾರವಿಲ್ಲದ ನೀರೆ ! 

ದೇವರು ನಿನ್ನಳಿಯ ! ದೇವತೆಗಳು ನಿನ್ನಣುಗರು ! 

ಸರಿಯಿಲ್ಲ ನಿನ್ನ ವೈಭವಕೆ ! ಸಾಟಿಯಿಲ್ಲ ನಿನ್ನ ಮೈಸಿರಿಗೆ !


ಅಹಾ ! ನೀರೆ ! ದಿಕ್ಕಿಲ್ಲದ ಮಿಕ್ಕಿಲ್ಲದ ನೀರೆ ! 

ಯಾರಲ್ಲಿ ನಿಂತಿತು ನಿನ್ನ ನೀರು ? 

ಯಾರೆದೆಯನ್ನು ಹರಿಸಲಿಲ್ಲ ನೀರು ನೀರಾಗಿ ? 

ಸಾವಿಲ್ಲ ನೋವಿಲ್ಲ ನಿನಗೆ,- 

ಮರಣದಂಥ ಹರಣಗಳು ಚರಿಸುತಿಹವು 

ನಿನ್ನ ತಿಮಿಂಗಿಲತಿಮಿರೋದಕದಲ್ಲಿ ;


ಪ್ರಳಯ ಕಾಲದಿ ಎದ್ದೇಳುವವು ! 

ಲಾಲನೆ-ಪಾಲನೆಯಿಲ್ಲ ನಿನಗೆ,-

ನಿನ್ನ ಕ್ಷಾರೋದಕದಲ್ಲಿ ಪವಡಿಸಿದ ಕ್ಷೀರಸಾಗರಶಾಯಿ,-

ಸೃಷ್ಟಿಪಾಲಕ ತಾನು ! 

ಹುಟ್ಟಿಲ್ಲ ಮುಟ್ಟಿಲ್ಲ ನಿನಗೆ,-

ಮತ್ಸ್ಯಕೂರ್ಮಗಳಾಗಿ ನಿನ್ನ ತೊಡೆಯಲಾಡಿದ ದೇವ -

ಸೃಷ್ಟಿಕರ್ತನು ತಾನು ! 

ತ್ರಿಪುಟರಹಿತನಾಗಿರುವೆ, ಓ ! ಸಮುದ್ರರಾಜ ! 

ಓ ! ಸ್ವಯಂಭೂ !


~ *ವಿನಾಯಕ*

{'ಸಮುದ್ರ ಗೀತಗಳು' ಕವನ‌ಸಂಕಲನ}

Saturday, October 18, 2025

"RSS ಮತ್ತು DSS - ಒಂದು ತೌಲನಿಕ ಅಧ್ಯಯನ"- ಪ್ರವೀಣಕುಮಾರ M

RSS (ರಾಷ್ಟ್ರೀಯ ಸ್ವಯಂಸೇವಕ ಸಂಘ) ತನ್ನ 100 ನೇ ವರ್ಷದ ಸಂಭ್ರಮವನ್ನು ದೇಶದಾದ್ಯಂತ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಆ ಪಕ್ಷವನ್ನು  ಬೆಂಬಲಿಸುವ ಹಲವಾರು ಇತರ ಚಿಕ್ಕಪುಟ್ಟ ಪಕ್ಷಗಳು, ಚಿಕ್ಕಪುಟ್ಟ ಸಂಘಟನೆಗಳು ಹಾಗೂ ಚಿಕ್ಕಪುಟ್ಟ ಗುಂಪುಗಳು RSS ಅನ್ನು ಕಟುವಾಗಿ ವಿರೋಧಿಸುತ್ತಿವೆ,ನಿಂದಿಸುತ್ತಿವೆ ಮತ್ತು ಅದರ ನಾಗಾಲೋಟಕ್ಕೆ ಕಡಿವಾಣ ಹಾಕುವ ಮಾತುಗಳನ್ನಾಡುತ್ತಿವೆ!


ಈ ಸಂದರ್ಭದಲ್ಲಿ RSS ಹೆಸರಿಗೆ ಸಾಕಷ್ಟು ಹೋಲಿಕೆಯಿರುವ ಇನ್ನೊಂದು ಸಂಘಟನೆ DSS (ದಲಿತ ಸಂಘರ್ಷ ಸಮಿತಿ) ನೆನಪಾಗುತ್ತದೆ.


RSS ಗೆ 100 ವರ್ಷ ತುಂಬಿರಬಹುದು. ಆದರೆ DSS ಇತಿಹಾಸವೂ ಕಡಿಮೆಯೇನಿಲ್ಲ. ಕಳೆದ ವರ್ಷವಷ್ಟೇ ಅದಕ್ಕೆ 50 ವರ್ಷ ತುಂಬಿದೆ! ಆದರೆ ಅದರ 50 ನೇ ವರ್ಷದ ಸಂಭ್ರಮಾಚರಣೆ ಮಾತ್ರ ತೀರಾ ನೀರಸವಾಗಿತ್ತು. ಏಕೆಂದರೆ ಅದಾಗಲೇ ಹಲವಾರು ಚೂರುಗಳಾಗಿ ಒಡೆದು ಹೋಗಿರುವುದರಿಂದ ಪ್ರಚಾರವೇ ಇಲ್ಲದೆ ಅದರ ಸುವರ್ಣ ಸಂಭ್ರಮ ಮುಗಿದುಹೋಗಿತ್ತು :-( 


ಶಿಕ್ಷಣ-ಸಂಘಟನೆ-ಹೋರಾಟ ಎನ್ನುವ ಮೂರು ಪ್ರಮುಖ ವಿಷಯಗಳನ್ನು ಮೂಲ ಮಂತ್ರವಾಗಿಸಿಕೊಂಡು ಎರಡು-ಮೂರು ದಶಕಗಳ ಕಾಲ ಸಮರ್ಥವಾಗಿಯೇ ಅದು ಮುಂದುವರಿಯಿತು. ಆದರೆ ಆ ನಂತರದಲ್ಲಿ ನಿಧಾನವಾಗಿ ವೈಯುಕ್ತಿಕ ಲಾಭ, ವೈಯುಕ್ತಿಕ ಪ್ರತಿಷ್ಠೆ, ಪಕ್ಷರಾಜಕೀಯ ಮುಂತಾದ ವಿಚಾರಗಳಲ್ಲಿ ಪರಸ್ಪರ ಭಿನ್ನಾಭಿಪ್ರಾಯ ತಲೆದೋರಿ ಛಿದ್ರವಾಗುತ್ತಾ ಬಂತು. ಇಂದು ರಾಜ್ಯದಲ್ಲಿ DSS ಅಸ್ತಿತ್ವದಲ್ಲಿದ್ದರೂ ಸಹ ಅದರ ಹಿನ್ನೆಲೆ, ಇತಿಹಾಸ, ಸಾಧನೆ ಮುಂತಾದ ಯಾವ ವಿಚಾರಗಳೂ ಸ್ವತಃ ದಲಿತ ಯುವಕರಿಗೇ ತಿಳಿದಿಲ್ಲ!


ಒಂದು ಕಾಲದಲ್ಲಿ DSS ಒಂದು ವಿಚಾರವನ್ನು/ವಿವಾದವನ್ನು/ಹೋರಾಟವನ್ನು ಕೈಗೆತ್ತಿಕೊಂಡಿತು ಎಂದರೆ ಅದು ತಾರ್ಕಿಕ ಅಂತ್ಯವನ್ನು ಕಂಡಿತು ಎಂದೇ ಅರ್ಥ. ನಗರ, ಪಟ್ಟಣಗಳಲ್ಲಷ್ಟೇ ಅಲ್ಲದೆ ಹಳ್ಳಿ ಹಳ್ಳಿಗಳಲ್ಲೂ DSS ಖದರ್ ಹಾಗಿತ್ತು!

ಆದರೆ ಬರಬರುತ್ತಾ ಬಹುತೇಕ ನಾಯಕರು ಒಂದು ಪಕ್ಷದ ಪರ, ಕೆಲವು ನಾಯಕರ ಪರ  ಕೆಲಸ ಮಾಡುವುದರಲ್ಲಿ ಮಗ್ನರಾದರು. ದಲಿತಪರ ಹೋರಾಟಗಳಿಗಿಂತಾ ಆಂತರಿಕ ಹೋರಾಟಗಳೇ ಹೆಚ್ಚಾದವು. ಕೊನೆಗೆ ಅನೇಕ ಬಣಗಳಾಗಿ ಒಡೆದು ಹೋಳಾಗುವ ಮುಖಾಂತರ ನೂರಾರು ಸಂಘಟನೆಗಳಲ್ಲಿ ಅದೂ ಒಂದು ಎನ್ನುವಂತಾಯಿತು.


RSS ಮುಖವಾಣಿ ಎನ್ನಲಾಗುವ 'ಆರ್ಗನೈಸರ್' ಪತ್ರಿಕೆಯಂತೆಯೇ DSS ಕೂಡ   'ಪಂಚಮ' ಎನ್ನುವ ತನ್ನದೇ ಆದ ಪತ್ರಿಕೆಯೊಂದನ್ನು ಹೊಂದಿತ್ತು. ಪಂಚಮ ಪತ್ರಿಕೆಯು ದಲಿತ ಲೇಖಕರಿಗೆ, ದಲಿತರ ಆಕ್ರೋಶ, ನೋವು, ದುಗುಡ, ದುಮ್ಮಾನಗಳಿಗೆ  ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿತ್ತು. RSS ಮುಖವಾಣಿ ಎನ್ನಲಾಗುವ 'ಆರ್ಗನೈಸರ್' ಈಗಲೂ ಇದೆ.  DSS ನ ಪಂಚಮ ಮಾತ್ರ ಎಲ್ಲಿಯೂ ಕಾಣಿಸುತ್ತಿಲ್ಲ!


ಹಾಗೆ ನೋಡಿದರೆ ಪ್ರಬಲವಾಗಿ ಬೆಳೆಯಲು RSS ಗಿಂತಲೂ DSS ಗೇ ಹೆಚ್ಚು ಅವಕಾಶಗಳಿದ್ದವು. ಪ್ರತಿ ನಿತ್ಯ ಹೋರಾಟಕ್ಕೆ ಬೇಕಾದ ಒಂದಿಲ್ಲೊಂದು ವಿಚಾರಗಳು ಅದಕ್ಕೆ ದೊರೆಯುತ್ತಿದ್ದವು. ರಾಜ್ಯದಾದ್ಯಂತ ಲಕ್ಷಾಂತರ ಜನ ಕಾರ್ಯಕರ್ತರು ರಾತ್ರಿ ಹಗಲೆನ್ನದೆ DSS ಗಾಗಿ ದುಡಿಯಲು ಹೆಗಲು ಕೊಟ್ಟು ನಿಂತಿದ್ದರು. ಹಳ್ಳಿ ಹಳ್ಳಿಗಳಲ್ಲಿ ಕಾರ್ಯಕರ್ತರ ಪಡೆ ಸಿದ್ಧವಾಗಿತ್ತು. ಕೇವಲ ಕರ್ನಾಟಕವಷ್ಟೇ ಅಲ್ಲದೆ, ರಾಷ್ಟ್ರಮಟ್ಟದಲ್ಲೂ ಅತ್ಯಂತ ಕ್ರಿಯಾಶೀಲ ಚಳುವಳಿ ಎನ್ನುವ ಹೆಗ್ಗಳಿಕೆಯನ್ನು DSS  ಅದಾಗಲೇ ಪಡೆದುಕೊಂಡಿತ್ತು!


ಆದರೆ ಕಾಂಗ್ರೆಸ್ ಪಕ್ಷ ಮತ್ತದರ ನಾಯಕರುಗಳು DSS ನ ದಾರಿ ತಪ್ಪಿಸಿದರು. ತಮ್ಮ ಪರವಾದ ಹೋರಾಟಗಳಿಗೆ ಅವರನ್ನು ಬಳಸಿಕೊಳ್ಳತೊಡಗಿದರು. DSS ನ ಒಬ್ಬೊಬ್ಬ ನಾಯಕರೂ ಕಾಂಗ್ರೆಸ್ಸಿನ ಒಬ್ಬೊಬ್ಬ ನಾಯಕರ ಬೆಂಬಲಿಗರಾಗಿ ಗುರುತಿಸಿಕೊಳ್ಳುವುದರಲ್ಲೇ ಹೆಚ್ಚು ಆಸಕ್ತಿ ತೋರಿಸತೊಡಗಿದರು. ಅದೆಷ್ಟೋ ಕಡೆಗಳಲ್ಲಿ DSS ಚಳುವಳಿಯು ಕಾಂಗ್ರೆಸ್ ನಾಯಕರ ಪರವಾದ ಚಳುವಳಿಯಾಗಿ ಬದಲಾಯಿತು. ಇದರಿಂದಾಗಿ ಮೂಲ ಉದ್ದೇಶಕ್ಕೆ ನಿಷ್ಠರಾಗಿ ಉಳಿದ ಮುಖಂಡರುಗಳು ನಿಧಾನವಾಗಿ ಚಳುವಳಿಯಿಂದಲೇ ಹಿಂದೆ ಸರಿದರು. ಅವರ ಮುಂದಿನ ಪೀಳಿಗೆಯನ್ನೂ DSS ಒಳಗೆ ಕಳಿಸಲಿಲ್ಲ.


DSS ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದು ತಪ್ಪೇ? RSS ಬಿಜೆಪಿಯನ್ನು ಬೆಂಬಲಿಸುತ್ತಿಲ್ಲವೇ? ಹೀಗೆ ನೀವು ಕೇಳಬಹುದು. ಆದರೆ ಬಿಜೆಪಿ RSS ಪ್ರೇರಿತವಾಗಿಯೇ ಹುಟ್ಟಿದ ಪಕ್ಷ. ಆ ಪಕ್ಷವೂ ಸಂಘಪರಿವಾರದ್ದೇ ಒಂದು ಭಾಗ. ಬಿಜೆಪಿಗೆ ಪ್ರಧಾನ ಸಂಘಟನಾ ಕಾರ್ಯದರ್ಶಿಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಅಧಿಕೃತವಾಗಿಯೇ ಕಳಿಸುತ್ತದೆ. ಆದರೆ DSS ಮತ್ತು ಕಾಂಗ್ರೆಸ್ ನಡುವಿನ ಸಂಬಂಧ ಹಾಗಲ್ಲ. ಕಾಂಗ್ರೆಸ್ ಬ್ರಿಟಿಷರ ಮೂಲದ ಒಂದು ಪಕ್ಷವೇ ಹೊರತೂ DSS ಮೂಲದ್ದಲ್ಲ.

ಹೀಗಿರುವಾಗ ಕಾಂಗ್ರೆಸ್ ಪರವಾಗಿ ಹೋರಾಟ ಮಾಡುವುದು DSS ನಾಯಕರ ಕೆಲಸವಾಗಬಾರದಾಗಿತ್ತು. ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ DSS ಮುಖಾಂತರವೇ ಒಂದು ರಾಜಕೀಯ ಪಕ್ಷವನ್ನು ಹುಟ್ಟು ಹಾಕಿ ಸ್ವಂತ ಬಲದಿಂದ ಅಧಿಕಾರಕ್ಕೇರುವಷ್ಟು ಶಕ್ತಿ ದಲಿತ ಸಂಘರ್ಷ ಸಮಿತಿಗಿತ್ತು. ಆದರೆ ಇದ್ಯಾವುದನ್ನೂ ಮಾಡದಂತೆ ಕಾಂಗ್ರೆಸ್ ಪಕ್ಷ ಉಪಾಯವಾಗಿ ಅವರನ್ನು ತಡೆದು ನಿಲ್ಲಿಸಿಬಿಟ್ಟಿತು!


ಒಂದು ಉದಾಹರಣೆ ಕೊಡುವುದಾದರೆ: ದೇವನೂರು ಮಹಾದೇವ ಅವರನ್ನು  ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಲ್ಲಿ ಒಬ್ಬರು ಎಂದೂ ಗುರುತಿಸಲಾಗುತ್ತದೆ. ಆದರೆ ಈಗ ಅವರು ದಲಿತ ಸಂಘರ್ಷ ಸಮಿತಿಯ ಪರವಾಗಿ ಎಷ್ಟು ಸಕ್ರಿಯರಾಗಿದ್ದಾರೆ? ಕಾಂಗ್ರೆಸ್ ಪರವಾಗಿ ಎಷ್ಟು ಸಕ್ರಿಯರಾಗಿದ್ದಾರೆ? ಗಮನಿಸಿದರೆ ತಿಳಿಯುತ್ತದೆ.


ಇದಿಷ್ಟೇ ಅಲ್ಲದೆ 'ಕರ್ನಾಟಕ ಸರ್ವೋದಯ ಪಕ್ಷ' ಮುಂತಾದ ಹಲವಾರು ಹೆಸರಿನಲ್ಲಿ ಏನೇನೋ ಮಾಡುತ್ತಿರುವಂತೆ ನಟಿಸುತ್ತಾರೆ. ಆದರೆ ಚುನಾವಣಾ ಹತ್ತಿರ ಬರುತ್ತಿದ್ದಂತೆಯೇ ತಮ್ಮ ಬೆಂಬಲಿಗರೆಲ್ಲರನ್ನೂ ಕಾಂಗ್ರೆಸ್ ಬಾಗಿಲಿಗೆ ಕರೆದುಕೊಂಡುಹೋಗಿ ನಿಲ್ಲಿಸುತ್ತಾರೆ!


ಮೊನ್ನೆ ತಾನೇ ಅವರು "RSS ಗೆ ನೂರಾಯಿತಂತೆ ಹೌದಾ!" ಎಂದು ದೊಡ್ಡ ಲೇಖನವೊಂದನ್ನು ಬರೆದು ಎಲ್ಲ ಕಾಂಗ್ರೆಸ್ ನಾಯಕರ ಮುಖಾಂತರ ಅದನ್ನು ಹಂಚಿಸಿದರು. ಆದರೆ ಕಳೆದ ವರ್ಷವಷ್ಟೇ ಐವತ್ತು ವರ್ಷ ಪೂರ್ತಿಗೊಳಿಸಿದ DSS ಕುರಿತು ಅವರು ಎಷ್ಟು ಲೇಖನಗಳನ್ನು ಬರೆದರು? ಎಷ್ಟು ಭಾಷಣಗಳನ್ನು ಮಾಡಿದರು? ಎಷ್ಟು ಚರ್ಚೆಗಳನ್ನು ಮಾಡಿದರು? ಬಹುತೇಕ ಇಲ್ಲವೇ ಇಲ್ಲ ಎನ್ನುವಷ್ಟು!!


ಫೇಸ್ ಬುಕ್, ವಾಟ್ಸಪ್ ಗಳಲ್ಲಿ ಅವರಿವರು ಬರೆದ ಸಣ್ಣಪುಟ್ಟ ಬರಹಗಳನ್ನೆಲ್ಲಾ ಸೇರಿಸಿ "RSS ಆಳ ಅಗಲ" ಎನ್ನುವ ಪುಸ್ತಕವೊಂದನ್ನು ಬರೆದು, PDF ಮಾಡಿ ಕಾಂಗ್ರೆಸ್ ಕಾರ್ಯಕರ್ತರ ಮೂಲಕ ಉಚಿತವಾಗಿ ಹಂಚಿಸಿದರು. ಆದರೆ ಅದೇ ಸಮಯವನ್ನು ಮತ್ತು ಬುದ್ಧಿಶಕ್ತಿಯನ್ನು ಉಪಯೋಗಿಸಿಕೊಂಡು ಅವರೇಕೆ "DSS ಆಳ ಅಗಲ" ಎನ್ನುವ DSS ಪರವಾದ ಪುಸ್ತಕವನ್ನು ಬರೆಯಲಿಲ್ಲ? ಸ್ವತಃ ಸ್ಥಾಪಕರಲ್ಲಿ ಒಬ್ಬರು ಎಂದು ಹೇಳಿಕೊಳ್ಳುವವರೇ DSS ಕುರಿತು ಅಷ್ಟೊಂದು ನಿರಾಸಕ್ತಿ ತೋರಿಸುವಾಗ, ಇನ್ನು ಉಳಿದವರ ಬಗ್ಗೆ ಹೇಳಲಿಕ್ಕೇನಿರುತ್ತದೆ?


ಕಳೆದ ಒಂದೆರಡು ವರ್ಷಗಳಿಂದ ಒಳಮೀಸಲಾತಿ ಕುರಿತು ದಲಿತ ಸಮುದಾಯದಲ್ಲಿ ದೊಡ್ಡದಾದ ಕಂದಕವೇ ಏರ್ಪಟ್ಟಿದೆ. ದಲಿತರ ಅಸ್ಮಿತೆ, ದಲಿತರ ಧ್ವನಿ, ದಲಿತರ ಕವಿ, ದಲಿತರ ಸಾಹಿತಿ ಎಂದೇ ಬಿಂಬಿಸಿಕೊಳ್ಳುವ ದೇವನೂರು ಮಹಾದೇವ ಅವರು ಅಂತಹ ಒಡಕನ್ನು ಸರಿಪಡಿಸಲು ಏನೇನು ಮಾಡಿದ್ದಾರೆ? ಎಷ್ಟು ಹೇಳಿಕೆಗಳನ್ನು ಕೊಟ್ಟಿದ್ದಾರೆ? ಎಷ್ಟು ಬಣಗಳನ್ನು ಕರೆದು ಕೂರಿಸಿ ಮಾತನಾಡಿಸಿ, ಸಮಾಧಾನಿಸಿ ಕಳಿಸಿದ್ದಾರೆ? ಬಹುಶಃ ಇಲ್ಲವೇ ಇಲ್ಲ ಎನ್ನುವಷ್ಟು!


ದೇವನೂರು ಮಹಾದೇವ ಅವರನ್ನು ಹತ್ತಿರದಿಂದ ನೋಡಿದವರು ಹೇಳುವ ಪ್ರಕಾರ "ದಲಿತರ ಪರವಾದ ಕಾರ್ಯಕ್ರಮಗಳಿಗೆ ಆಹ್ವಾನಿಸಿದರೆ ವಯಸ್ಸಿನ ಕಾರಣ, ಆರೋಗ್ಯದ ಕಾರಣವನ್ನು ಮುಂದೊಡ್ಡಿ ತಪ್ಪಿಸಿಕೊಳ್ಳುತ್ತಾರೆ. ಆದರೆ ಬಿಜೆಪಿ ವಿರುದ್ಧದ ಅಥವಾ RSS ವಿರುದ್ಧದ ಅಥವಾ ಕಾಂಗ್ರೆಸ್ ನಾಯಕರ ಪರವಾದ ಕಾರ್ಯಕ್ರಮಗಳಿಗೆ ಆಹ್ವಾನಿಸಿದರೆ ಲಗುಬಗೆಯಿಂದ ಎದ್ದು ಬರುತ್ತಾರೆ!"


RSS ಏಕೆ ನೂರಾಗಿ ನೂರೊಂದರತ್ತ ಮುನ್ನುಗ್ಗುತ್ತಿದೆ ಮತ್ತು DSS ಏಕೆ ನೂರರಲ್ಲಿ ಒಂದಾಯಿತು ಎನ್ನುವುದಕ್ಕೆ ಬಹುಶಃ ಇದೊಂದೇ ಉದಾಹರಣೆ ಸಾಕು ಎನಿಸುತ್ತದೆ.

Friday, October 17, 2025

ಮರೆಯದಾ ನೆನಪು - ರವೀಂದ್ರ್ ಆರ್

 ಮರೆತು ಹೋಗೆಂದರು ಮರೆಯದಾ ನೆನಪು

ಮನದಿ ಮುಳ್ಳನಿಟ್ಟು ಮುದಪಡುವ ನೆನಪು

ಮಸುಕಿದ ಪ್ರೀತಿಯಲಿ ಮೊಂಬತ್ತಿ ಈ ನೆನಪು 

ಮೆರಾದಾಡಿ ಮರೆಯಾದ ಪ್ರೀತಿಯ ನೆನಪಿಸುವ ನೆನಪು

ಮನದನ್ನೆಯ ಮುಗುಳ್ನಗುವ ಮೆಲುಕಿಸುವ ನೆನಪು 

ಮುಸ್ಸಂಜೆಯ ಮೆದುಗಾಳಿಗೆ ಮದವೇರುವ ನೆನಪು 

ಮನಮೆಚ್ಚಿಸಿ ಮನಮುರಿಸಿ ಮೆರೆದಾಡುವ ನೆನಪು 

ನಾ ನೆನೆಯದಾ ನೆನಪ ನೆನಪಿಸಿ ನೀನೇಕೆ ನೋಯಿಸುವೆ ನೆನಪೇ???

ತಪ್ಪುಗಳು

 ತಪ್ಪುಗಳು


----------

ಭಾಷೆಯೇ ಇಲ್ಲದ

ದೇವರನು

ಭಾಷೆಯಲಿ

ಬಂಧಿಸಿದೆ.

ಸೀಮಾತೀತನ

ತೀರ್ಥಕ್ಷೇತ್ರದಲಿ

ಸಂಧಿಸಿದೆ.

ಗುರುತಿಗಾಗಿ

ಇಟ್ಟುಕೊಂಡ

ಹೆಸರುಗಳಿಂದಲೇ

ಅವನನ್ನೂ

ಕರೆದುಕೊಂಡೆ.

ಇಷ್ಟವಾದ

ರೂಪದಲ್ಲೇ

ಪ್ರತಿಮೆಯನ್ನು

ಮಾಡಿಕೊಂಡೆ.

ಕಟ್ಟಕಡೆಗೆ

ಎಲ್ಲದರ

ಒಳಮರ್ಮದ

ಅರಿವಾದಾಗ

ನನ್ನನೇ ನಾ

ಜರಿದುಕೊಂಡೆ

ಕ್ಷಮಿಸು ಎಂದು

ಬೇಡಿಕೊಂಡೆ.

( ಶಂಕರಾಚಾರ್ಯರ ಶ್ಲೋಕದಿಂದ ಪ್ರೇರಿತ) 

        ...ಎಂ.ಎ.ಎಸ್  

ಎಂ ಎ  ಸಾದಿಕ್ ಉಲ್ಲಾ , ಶಿಕ್ಷಕರು , ಸ ಪ ಪೂ ಕಾ

ಯಳಗೋಡು,  ಚಿತ್ರದುರ್ಗ ತಾ & ಜಿ 

ರಿಟೈರ್ ಆದ ಮೇಲೆ ಹೇಗೆ ಟೈಮ್ ಪಾಸ್ ಮಾಡುತ್ತಿದ್ದೀರಿ......?"

 🥸 ರಿಟೈರ್ಡ್ ಆದ ವ್ಯಕ್ತಿಯನ್ನು ಸಹಜವಾಗಿ ಬಹಳ ಜನ ಕೇಳುತ್ತಾರೆ 👉 ರಿಟೈರ್ ಆದ ಮೇಲೆ ಹೇಗೆ ಟೈಮ್ ಪಾಸ್ ಮಾಡುತ್ತಿದ್ದೀರಿ......?",


🤠ಅದಕ್ಕೆ ನಾನು  ಕೊಟ್ಟ ಉತ್ತರ "ಟೈಮ್ ಪಾಸಾ"...? ಓಹ್, ನಿನ್ನೆಯದೆ ಒಂದು ಉದಾಹರಣೆ ಹೇಳುತ್ತೇನೆ ಕೇಳಿಸಿಕೊಳ್ಳಿರಿ ~~

ನಿನ್ನೆ ಜ್ಯುವೆಲ್ಲರೀ ಅಂಗಡಿಯೊಂದರಲ್ಲಿ ಕೇವಲ 10 ನಿಮಿಷ ಕಳೆದ ನಾನು ಮತ್ತು ನನ್ನ ಹೆಂಡತಿ ಹೊರಗಡೆ ಬಂದೆವು..!

ಕೈಯಲ್ಲಿ ದಂಡ ಕಟ್ಟುವ ಚಲನ್ ಬುಕ್ ನೊಂದಿಗೆ ಕಾರಿನ ಹತ್ತಿರ ಪೊಲೀಸ್ ಒಬ್ಬರು ನಮ್ಮನ್ನು ಕುರಿತು, ಬರ್ರಿ,..ಬರ್ರಿ...ನಿಮ್ಮಂಥವರಿಗೆ ಬುದ್ಧಿ ಹೇಳಿ ಹೇಳಿ ಸಾಕಾಗೇತಿ.....1000 ರೂಪಾಯಿ ದಂಡ ಕಟ್ರಿ ಅವಾಗ ಗೊತ್ತಾಕೇತಿ....

ಆವಾಗ ನಾನಂದೆ "ಈಗಷ್ಟೇ ಜಸ್ಟ್ ಹತ್ತೇ ನಿಮಿಷ ಒಳಗೆ ಹೋಗಿ ಹೊರಗ್ ಬಂದೇವಿ ಅಷ್ಟರಲ್ಲಿ ಸಾವಿರ ರೂಪಾಯಿ ಅಂದ್ರೆ ಹೆಂಗ,.... ಇದೊಂದ್ ಸಲ ದಯಮಾಡಿ ಬಿಟ್ಟುಬಿಡ್ರಿ"

ಆಗ ಪೊಲೀಸ್ ಎಲ್ಲರೂ ಹೇಳುದೂ ಹಿಂಗ ssss  ಯಾವಾಗ ಸಾವಿರ ರುಪಾಯ್ ದಂಡ ಕಟ್ಟತೀರಿ ಅವಾಗ ಗೊತ್ತಾಕೇತಿ

ಆಗ "ನಾನು ರಿಟೈರ್ಡ್ ಅದೇನಿ, ನನ್ನ ಬಿಳೇ ಕೂದಲಕ್ಕರ ಕಿಮ್ಮತ್ ಕೊಟ್ಟು ಬಿಟ್ ಬಿಡ್ರಿ ಅಂದೆ

ಪೊಲೀಸ್ ಮೊದಲು ಒಪ್ಪದಿದ್ರೂ ಮತ್ತೆ ನನಗೆ ಹೇಳಿದ.... ಲಕ್ಷಗಟ್ಟಲೆ ರೊಕ್ಕ ಕೊಟ್ಟು ಕಾರ್ ತಗೋತೀರಿ, ಜ್ಯುವೆಲ್ಲರೀ  ಖರೀದಿ ಮಾಡ್ತೀರಿ.. 1000 ರುಪಾಯ್ ಕಟ್ಟಾಕ  ರಿಪಿ- ರಿಪೀ ಮಾಡ್ತೀರಿ.... ನಿಮ್ಮ ವಯಸ್ಸಿಗೆ ಮರ್ಯಾದೆ ಕೊಡ್ತೀನಿ, 200 ರೂಪಾಯಿ ಕೊಟ್ಟು ಹೋಗ್ರಿ" ಅಂದ.

ನಾನು 200 ರುಪಾಯ್ ಕೊಟ್ರ ಅದಕ್ಕ ಪಾವತಿ ಕೊಡ್ತೀರಿಲ್ಲೋ ಅಂದೆ.

ಅದನ್ನು ತಿರಸ್ಕರಿಸಿದ ಅವನು ಪಾವತಿ ಬೇಕು ಅಂದರ ಕಾಯದೇಸಿರ್ 1000 ರೂಪಾಯಿ ಕೊಡರಿ ಅಂದ.

ನಾನು 200 ರುಪಾಯ್ ನೇ ಕೊಡೋದು ಅದಕ್ಕ ನೀವು ಕಾಯದೇಸೀರ್ ಪಾವತಿ ಕೊಡ್ಬೇಕು ಅಂತ ದೃಢವಾಗಿ ಹೇಳಿದೆ. 

ಪೊಲೀಸಪ್ಪನಿಗೆ ಸಿಟ್ಟು ಬಂದು ನನಗೇ ಕಾಯ್ದೆ ಬಗ್ಗೆ ಹೇಳುತ್ತೀರಾ....ಕಾರಿನ ಒಂದು ಮಿರರ್ ಗ್ಲಾಸ್ ಒಡೆದಿದೆ,...... ಹಳೇ ನಂಬರ್ ಪ್ಲೇಟ್ ತೆಗೆದು ಹೊಸಾ HSRP ಗೆ ಕನ್ವರ್ಟ್ ಆಗಿದ್ದನ್ನುಹಾಕಿಸಿಲ್ಲ ,....ಇಂಧನದ ಪೋಲ್ಯೂಷನ್ ಟೆಸ್ಟ್ 4 ತಿಂಗಳ ಹಿಂದೇ ಎಕ್ಸ್ ಪೈರ ಆಗಿದೆ. ಅದಕ್ಕೆ ಎಲ್ಲಾ ಸೇರಿ ಒಟ್ಟು  ದಂಡ 8000/- ರೂಪಾಯಿ ಆಗುತ್ತೆ ಕಟ್ಟಿರಿ ಅಂದ.

*ಆಗ ನಾನು ನನ್ನ ಹೆಂಡತಿಗೆ ಹೇಳಿದೆ ಇನ್ನು  ಪೊಲೀಸನನ್ನು ನೀನೇ ಸಂಭಾಳಿಸು ಅಂತ

ಪಕ್ಕಕ್ಕೆ ಸರಿದು ನಿಂತೆ.

ಅವಳು ತನ್ನದೇ ಆದ 

ಶೈಲಿಯಲ್ಲಿ ಪೊಲೀಸ್ ನೊಂದಿಗೆ ಚೌಕಾಸಿ ಮಾಡಲಿಕ್ಕೆ ಹತ್ತಿ ನಿಮಗೇನು ಅಕ್ಕ-ತಂಗೇರ್ ಇಲ್ಲೇನ್.. ದಯಾ - ದಾಕ್ಷಿಣ್ಯ ಇಲ್ಲೇನ್...ನನ್ನ ಜಗಾದಾಗ್ ನಿಮ್ಮ ಚಿಗವ್ವ ಇದ್ದರ ಹಿಂಗss ಮಾಡತಿ ದ್ದರೆನ್ ಅಂತ ಮತ್ತ 15-20 ನಿಮಿಷ ಜಗ್ಗಿದಳು.*

ಅಷ್ಟೊತ್ತಿಗೆ ಸಿಟಿ ಬಸ್ ಬಂದು ನಿಲ್ಲಲು ತಡಮಾಡದೆ ಅದನ್ನು ಹತ್ತಿಬಿಟ್ಟೆವು ಯಾಕೆಂದರೆ ಆ ಕಾರ್ ನಮ್ಮದು ಆಗಿರಲಿಲ್ಲ.!!!!! 

ಪಾಪ ಪೊಲೀಸಪ್ಪ ತೆರದ ಬಾಯಿಂದ ನಮ್ಮ ಕಡೆ ನೋಡುತ್ತಾ ತಲೆ ಚಚ್ಚಿಕೊಂಡ.

ನಾನು ನನ್ನ ಸ್ನೇಹಿತನಿಗೆ ಹೇಳಿದೆ, ಇದು ಟೈಮ್ ಪಾಸಿನ ಕೇವಲ ಒಂದು ಉದಾಹರಣೆ,ಇಂಥಾ ನೂರಾರು ನಮ್ಮ ಸ್ಟಾಕ್ ನಲ್ಲಿವೆ. 

  ಕೃಪೆ:  ಅನಾಮಿಕ / Whatsapp 

Friday, May 30, 2025

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

 




"ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..."
"ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..."
"ಲೋಕದ ಕಣ್ಣಿಗೆ ರಾಧೆಯೂ ಕೂಡ ..."
"ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ..." 
ಹುಚ್ಚು ಖೋಡಿ  ಮನಸು, ಅದು ಹದಿನಾರರ ವಯಸು..."
ಡಾ ಹೆಚ್ಚೆಸ್ವಿ ಅವರ, ಮನಸೂರೆಗೊಂಡ  ಈ ಮಧುರ ಭಾವ  ಗೀತೆಗಳನ್ನು ಕೇಳದ, ಗುನುಗುನಿಸದ ಸಾಹಿತ್ಯಾಸಕ್ತ ಕನ್ನಡಿಗರಿಲ್ಲ ಎಂದೇ ಹೇಳಬಹುದು. 

ಡಾ ಹೊದಿಗೆರೆ ಶಾನ್ ಭಾಗ್ ವೆಂಕಟೇಶ ಮೂರ್ತಿ(೨೩.೦೬.೧೯೪೪) ಹೆಚ್ಚೆಸ್ವಿ ಎಂದೇ ಸಾರಸ್ವತ ಲೋಕದಲ್ಲಿ ಪರಿಚಿತರು. ಕವಿ, ಕಾದಂಬರಿಕಾರ, ನಾಟಕಕಾರ, ಪ್ರಬಂಧಕಾರ, ಶಿಶು ಸಾಹಿತಿ, ಅನುವಾದಕ, ವಿಮರ್ಶಕ, ಕನ್ನಡ ಸಿನಿಮಾ ಹಾಗೂ ಕಿರುತೆರೆಯ ಧಾರಾವಾಹಿಗಳಿಗೆ  ಗೀತೆ, ಸಂಭಾಷಣಾ ರಚನೆಕಾರ... ಹೆಚ್ಚೆಸ್ವಿ ಅವರ ಹಲವು ಮುಖಗಳಿವು!ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಸಮಕಾಲೀನ ಸಂದರ್ಭದ ಮುಖ್ಯ ಕವಿ ಎಂದು ಅವರನ್ನು ಗುರುತಿಸಲಾಗಿದೆ. 

ಡಾ ಎಚ್ ಎಸ್ ವೆಂಕಟೇಶ ಮೂರ್ತಿ  ಅವರ ಮುತ್ತಜ್ಜ ಕೆಲ್ಲೋಡು ಪುಟ್ಟಪ್ಪ ಪ್ರಸಿದ್ಧ ಗಮಕಿಗಳು. ಅಜ್ಜ ಭೀಮರಾಯರು ಮೃದಂಗ ವಾದಕರು ಹಾಗೂ ನಾಟಕ ಪ್ರಿಯರು. ಹಾಗಾಗಿ ಸಾಹಿತ್ಯ, ಸಂಗೀತದ ಪ್ರೇಮ ಹೆಚ್ಚೆಸ್ವಿ ಅವರಿಗೆ ರಕ್ತಗತವಾಗಿಯೇ ಬಂದದ್ದು .

ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿಹಳ್ಳಿಯಲ್ಲಿ ಪ್ರೌಢಶಾಲೆಯ ಕ್ರಾಫ಼್ಟ್ ಟೀಚರಾಗಿ ವೃತ್ತಿ ಆರಂಭಿಸಿದ ಹೆಚ್ಚೆಸ್ವಿ, ಬೆಂಗಳೂರಿನ ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾದವರು.  ಮೆಕ್ಯಾನಿಕಲ್ ಇಂಜಿನಿಯರಿಂಗನಲ್ಲಿ ಡಿಪ್ಲೊಮಾ ಪಡೆದರೂ ಕನ್ನಡ ಸಾಹಿತ್ಯವೇ ಅವರನ್ನು ಸೆಳೆದಿದ್ದರಿಂದ ನಂತರದಲ್ಲಿ ಕನ್ನಡ ಎಂ ಎ ಮಾಡಿದರು. 
ಕಲ್ಬುರ್ಗಿಯಲ್ಲಿ ನಡೆದ ಎಂಭತ್ತೈದನೇ ಅಖಿಲ ಭ್ಹಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಡಿವಿಜಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಅವರ ಮುಡಿಯಲ್ಲಿವೆ. ಅವರ ಬಗ್ಗೆ ಇನ್ನಷ್ಟು ಮಾಹಿತಿ.

೧.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಮೊದಲ ಕವನ ಸಂಕಲನದ ಹೆಸರೇನು?  
       *'ಪರಿವೃತ್ತ' 

೨.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಮಹಾ ಪ್ರಬಂಧದ ವಸ್ತು ಯಾವುದು? 
       *'ಕನ್ನಡದಲ್ಲಿ ಕಥನ ಕವನಗಳು'

೩.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಎರಡು ಕಥಾ ಸಂಕಲನಗಳು ಯಾವುವು? 
       *'ಬಾನಸವಾಡಿಯ ಬೆಂಕಿ' ಮತ್ತು 'ಪುಟ್ಟಾರಿಯ ಮತಾಂತರ'

೪.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಅನುವಾದಿಸಿದ ಕಾಳಿದಾಸನ ಕಾವ್ಯ ಯಾವುದು? 
       *'ಋತುಸಂಹಾರ' ವನ್ನು 'ಋತುವಿಲಾಸ' ಎಂದು ಅನುವಾದಿಸಿದ್ದಾರೆ. ಈ ಕೃತಿಗೆ ಕೇಂದ್ರ ಸಾಹಿತ್ಯ  ಅಕಾಡೆಮಿ ಅನುವಾದ ಪುರಸ್ಕಾರ ಲಭಿಸಿದೆ.

೫.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಆತ್ಮಕಥನದ ಹೆಸರೇನು? 
       *'ಎಚ್ಚೆಸ್ವಿ ಅನಾತ್ಮ ಕಥನ'

೬.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಟಿ ಎನ್  ಸೀತಾರಾಂ ಅವರ ಯಾವ ಧಾರಾವಾಹಿಗೆ  ಶೀರ್ಷಿಕೆ ಗೀತೆ ರಚಿಸಿದ್ದಾರೆ? 
       *'ಮುಕ್ತಾ'

೭.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಮಹಾ ಕಾವ್ಯ ಯಾವುದು? 
        * 'ಬುದ್ಧ ಚರಣ'

೮.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಯಾವ ಯಾವ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ? 
       *ಸಿಂದಬಾದನ ಆತ್ಮಕಥೆ(ಕವನ ಸಂಕಲನ)
       *ಹರಿಗೋಲು(ಕವನ ಸಂಕಲನ)
       *ಅಗ್ನಿಮುಖಿ( ಕಾದಂಬರಿ)
       *ಒಂದು ಸೈನಿಕ ವೃತ್ತಾಂತ( ನಾಟಕ)
       *ಹೂವಿನ ಶಾಲೆ( ಮಕ್ಕಳ ಸಾಹಿತ್ಯ)

೯.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ವೈಚಾರಿಕ ಪ್ರಬಂಧ ಸಂಪುಟದ ಹೆಸರೇನು?
       * 'ಈ ಮುಖೇನ'

೧೦.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ನಿರ್ದೇಶಿಸಿದ ಸಿನಿಮಾ ಯಾವುದು?
       *'ಹಸಿರು ರಿಬ್ಬನ್'



Monday, May 5, 2025

ಒಂದು ಘಟನೆ - ಕೃಪೆ: ವಾಟ್ಸಾಪ್

 ಹರಿದುಹೋದ ಧೋತಿ ಮತ್ತು ಹರಿದ ಅಂಗಿಯನ್ನು ಧರಿಸಿದ ವ್ಯಕ್ತಿ ತನ್ನ 15-16 ವರ್ಷದ ಮಗಳ ಜೊತೆ 

ದೊಡ್ಡ ಹೋಟೆಲ್ ಗೆ ಹೋದರು. ಇಬ್ಬರೂ ಕುರ್ಚಿಯ ಮೇಲೆ ಕುಳಿತಿದ್ದನ್ನು ನೋಡಿ , ವೇಟರ್ ಬಂದು ಎರಡು ನೀರಿನ  ಲೋಟ ಇಟ್ಟು ಕೇಳಿದ. ತಮಗೇನು ಬೇಕು? ಆಗ ಆ ವ್ಯಕ್ತಿ

" ನನ್ನ ಮಗಳಿಗೆ ಹತ್ತನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಬಂದರೆ ನಗರದ ಅತಿದೊಡ್ಡ ಹೋಟೆಲ್ ನಲ್ಲಿ ದೋಸೆ ತಿನ್ನಿಸುತ್ತೇನೆ ಎಂದು ಭರವಸೆ ನೀಡಿದ್ದೆ.

ಇದು  ಆ ಭರವಸೆಯನ್ನು ನನ್ನ  ಮಗಳು ಈಡೇರಿಸಿದ್ದಾಳೆ. ದಯವಿಟ್ಟು ಮಗಳಿಗಾಗಿ ಒಂದು ದೋಸೆ ತನ್ನಿ. ? ವೇಟರ್ ಕೇಳಿದ " ಆಯಿತು ತಮಗೇನು ತರಬೇಕು?"   ನನ್ನ ಬಳಿ ಕೇವಲ ಒಂದು ದೊಸೆ ಸಾಕಾಗುವಷ್ಟು ಮಾತ್ರ ಹಣವಿದೆ ಅವಳಿಗಷ್ಟೆ ಕೊಟ್ಟರೆ ಸಾಕು.ಎಂದ.ಈ  ಮಾತು ಕೇಳಿ ವೇಟರ್ ನ ಮನಸು ಕರಗಿತು. ಮಾಲೀಕನ ಬಳಿ ಹೋಗಿ   ಅವನು ವ್ಯಕ್ತಿ ಮತ್ತು ಮಗಳ ಕಥೆ ಹೇಳಿದ.ಮುಂದುವರಿದು ಇವರಿಬ್ಬರಿಗೂ ನನ್ನ ಪರವಾಗಿ ತಿಂಡಿ  ನೀಡಬೇಕೆಂದು ನಿರ್ಧರಿಸಿದ್ದೇನೆ.  ನೀವು ಅವರ ಬಿಲ್ ಹಣವನ್ನು ನನ್ನ ಸಂಬಳದಿಂದ ಕಡಿತಗೊಳಿಸಬಹುದು. ಈ ಮಾತನ್ನು ಕೇಳಿದ ಹೊಟೆಲ್ ಮಾಲಿಕನಿಗೂ ಅವರಿಬ್ಬರ ಮೇಲೆ ಮರುಕವಾಯಿತು ಹಾಗೂ ವೆಯ್ಟರ್ ನ ಅಭಿಮಾನ ಕಂಡು  ಸಂತುಷ್ಟನಾಗಿ "ಅವರಿಬ್ಬರಿಗೆ  ಹೋಟೆಲ್ ಪರವಾಗಿ ಇಂದು ನಾವು ಅಭಿನಂದನಾ ಪಾರ್ಟಿ ಕೊಡೋಣ ಎಂದು ಮಾಲೀಕರು ಹೇಳಿದರು".  

ಹೋಟೆಲ್ ಮಾಲೀಕರು ಎಲ್ಲ ಸಿಬ್ಬಂದಿಯವರನ್ನು ಸೇರಿಸಿ ಟೇಬಲ್ ನ್ನು ಚೆನ್ನಾಗಿ ಅಲಂಕರಿಸಲು ಹೇಳಿದರು.ಹಾಗೂ ಬಡ ಹುಡುಗಿಯ ಯಶಸ್ಸನ್ನು ಗ್ರಾಹಕರೊಂದಿಗೆ ಸಂಭ್ರಮಿಸಿ ಅವರಿಬ್ಬರಿಗೆ ಹೊಟ್ಟೆ ತುಂಬುವಷ್ಟು ತಿಂಡಿ  ಹಾಗೂ ಸಿಹಿ ಹಂಚಿ ಆಚರಿಸಿದರು.ಜೊತೆಗೆ ಮಾಲೀಕರು   ದೊಡ್ಡ ಚೀಲದಲ್ಲಿ  ಸಿಹಿ ತಿಂಡಿ ಪ್ಯಾಕ್ ನೀಡಿ ತಮ್ಮ ನೆರೆಹೊರೆಯಲ್ಲಿ ಹಂಚಲು  ಕೊಟ್ಟರು. ಇಷ್ಟೆಲ್ಲಾ ಗೌರವ ಪಡೆದ ಅವರಿಗೆ ಹೊಟೆಲ ನವರ ಬಗ್ಗೆ ಧನ್ಯತಾಭಾವದಿಂದ ಕಣ್ಣಲ್ಲಿ ನೀರು ಜಿನುಗತೊಡಗಿತ್ತು.                                                        .

ಸಮಯ ಕಳೆಯಿತು. ಒಂದು ದಿನ ಅದೇ ಹುಡುಗಿ I.A.S. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅದೇ ಊರಿಗೆ ಬಂದಳು. ಮೊದಲು ಆಪ್ತ ಸಹಾಯಕನನ್ನು ಅದೇ ಹೋಟೆಲ್ ಗೆ ಕಳುಹಿಸಿ, "ಕಲೆಕ್ಟರ್ ಸಾಹಿಬಾ" ತಿಂಡಿ ತಿನ್ನಲು ಬರುತ್ತಾರೆ ಎಂದು ಹೊಟೆಲ್ ಮಾಲಿಕರಿಗೆ ತಿಳಿಸುವಂತೆ ಹೇಳಿದರು. ಹೋಟೆಲ್ ಮಾಲೀಕರು ತಕ್ಷಣ  ಹೊಟೆಲ್ ಹಾಗೂ ಟೇಬಲ್ ಗಳನ್ನು ತಮ್ಮ ಸಹಾಯಕರ  ಸಹಾಯದಿಂದ ಸುಂದರವಾಗಿ ಅಲಂಕರಿಸಿದರು. ಈ ಸುದ್ದಿ ಕೇಳಿ ಇಡೀ ಹೋಟೆಲ್ ಗ್ರಾಹಕರಿಂದ ತುಂಬಿ ತುಳುಕಿತು.

ಕಲೆಕ್ಟರ್ ತನ್ನ ಪೋಷಕರೊಂದಿಗೆ ಹೋಟೆಲ್ ತಲುಪಿದರು.  ಎಲ್ಲರೂ ಅವರ ಗೌರವಕ್ಕೆ ನಿಂತರು. ಹೋಟೆಲ್ ಮಾಲೀಕರು ಅವರಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.  ಅವಳು ನೇರವಾಗಿ  ಹೋಟೆಲ್ ಮಾಲೀಕ ಮತ್ತು ವೆಟರ್ ನ ಕಾಲಿಗೆ  ನಮಸ್ಕರಿಸಿ ಹೇಳಿದಳು - ' ಬಹುಶಃ ನೀವಿಬ್ಬರೂ ನನ್ನನ್ನು ಗುರುತಿಸಲಿಲ್ಲ. ದೋಸೆ ಕೊಡೋಕೆ ಅಪ್ಪನ ಬಳಿ ದುಡ್ಡಿಲ್ಲದ ಹುಡುಗಿ ನಾನು. ಆ ದಿನ ನೀವಿಬ್ಬರೂ ಮಾನವೀಯತೆಯು ಇನ್ನೂ ಇದೆ ಎನ್ನುವದಕ್ಕೆ ನೈಜ  ಉದಾಹರಣೆ ಕೊಟ್ಟಿದ್ದಿರಿ. ನನ್ನ ನೆರೆಹೊರೆಗೆ ಹಂಚಲು ಸಿಹಿತಿಂಡಿಯ ಪ್ಯಾಕ್  ನೀಡಿ ಗೌರವಿಸಿದ್ದಿರಿ.

 ನಿಮ್ಮಿಬ್ಬರಿಂದಲೇ ಇಂದು ನಾನು ಈ ಹಂತಕ್ಕೆ ಬರಲು ಪ್ರಯತ್ನ ಪಟ್ಟೆ . ನಾನು ನಿಮ್ಮಿಬ್ಬರನ್ನು ಯಾವಾಗಲೂ  ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಇವತ್ತು ಈ ಪಾರ್ಟಿ ನನ್ನಿಂದ. ಎಲ್ಲಾ ಗ್ರಾಹಕರು ಮತ್ತು ಹೋಟೆಲ್ ಸಿಬ್ಬಂದಿಗಳ ಬಿಲ್ ನಾನು ಕಟ್ಟುತ್ತೇನೆ.  ಇವತ್ತಿನಿಂದ ನಿಮ್ಮಿಬ್ಬರ ಸುಖ ದುಃಖಗಳಿಗೆ ನಾನೂ ಭಾಗಿ.ಎಂದು ಹೇಳಿದಳು.ಇವತ್ತು ಹೊಟೆಲ್ ಮಾಲಿಕ  ಹಾಗೂ ವೆಯ್ಟರನ ಕಣ್ಣುಗಳು ತೆವ ವಾಗಿದ್ದವು.     

 ಯಾವುದೇ ಬಡವರ ಬಡತನವನ್ನು ನೋಡಿ ಅಪಹಾಸ್ಯ ಮಾಡುವ ಬದಲು, ಅವರ ಪ್ರತಿಭೆಯನ್ನು ಸರಿಯಾಗಿ ಗೌರವಿಸಿದರೆ ಆ ಸಂತೃಪ್ತ ಭಾವ ಅವರಲ್ಲಿ ಯಾವತ್ತೂ ಹಚ್ಚಹಸುರನಾಗಿ ಇರುತ್ತದೆ.    

Sunday, April 20, 2025

ವ್ಯತಿರಿಕ್ತ' ಕಾದಂಬರಿ

 ಜೀವನದ ಧಾವಂತದಲ್ಲಿ ನಮ್ಮನ್ನು ನಾವು ಒಂದೆಡೆ ನಿಂತು ಆತ್ಮಾವಲೋಕನಕ್ಕೆ ಆಸ್ಪದ ನೀಡಬೇಕಾಗುತ್ತದೆ. 


ನಮ್ಮ ಭಾವನೆಗೆ ಅನುಗುಣವಾಗಿ ನಾವು ಇತರರನ್ನು ಸುಲಭವಾಗಿ ಅಳೆದು ಬಿಡುತ್ತೇವೆ. ಆದರೆ ನಮ್ಮನ್ನು ನಾವು ಅರಿತುಕೊಳ್ಳಲು ಹೋಗುವುದೇ ಇಲ್ಲ. ಕಲ್ಮಷ ತುಂಬಿದ ನೀರಿನಲ್ಲಿ ಯಾವುದೇ ಬಾಹ್ಯ ಘರ್ಷಣೆ ನಿಂತ ಬಳಿಕ ಕ್ರಮೇಣ ಆ ಕಲ್ಮಷಗಳೆಲ್ಲಾ ಅಡಿಗೆ ಹೋಗಿ ಮೇಲಿನ ನೀರು ತಿಳಿಯಾಗುತ್ತದೆ. ಅದು ಬಳಸಲು ಯೋಗ್ಯವಾಗುತ್ತದೆ.


✍️ *ವಿವೇಕಾನಂದ ಕಾಮತ್* 

'ವ್ಯತಿರಿಕ್ತ' ಕಾದಂಬರಿ

Wednesday, April 9, 2025

ಪರೀಕ್ಷೆಯಲ್ಲಿ ಅಂಕ ಕಡಿಮೆ ಯಾದರೇನು?......... ಜೀವನದಲ್ಲಿ ಹೆಚ್ಚು ಅಂಕ ಗಳಿಸಬಹುದಲ್ಲವೇ? - ಡಾ.ಶಶಿಕಿರಣ್ ಶೆಟ್ಟಿ, ಉಡುಪಿ

 PUC ರಿಸಲ್ಟ್ ಬಂದಿದೆ ಸಂತೋಷ 580,600 ಪ್ಲಸ್ ಅಂಕ ತೆಗೆದವರಿಗೆ ಅಭಿನಂದನೆಗಳು ಅದೂ ಸಂತೋಷ  ಪತ್ರಿಕೆ, ಟಿವಿ, ಯಲ್ಲೇ ಇರಲಿ, ವಾಟ್ಸಪ್ ಗ್ರೂಪ್ನಲ್ಲಿ, ಸೋಷಿಯಲ್ ಮಿಡಿಯಾ ಎಲ್ಲೇ ಇರಲಿ ಅವರ ಮಗ 600+, ಇವರ ಮಗಳು 610 ಅಂತೆ ಎನ್ನುವುದರ ನಡುವೆ, ಏನೂ ತಪ್ಪು ಮಾಡದ 50% ಮಾರ್ಕ್ ತೆಗೆದ, ಫೇಲ್ ಆದ ಮಕ್ಕಳನ್ನು ಕೇಳುವವರಿಲ್ಲ ನೋಡಿ😥😥.....

ಇನ್ನೇಷ್ಟೋ ಕಡೆ ನೀನು ವೇಸ್ಟ್ ಬಾಡಿ, ನಮ್ಮ ಮರ್ಯಾದೆ ತೆಗೆದೆ, ನಮ್ಮ ಶಾಲೆಗೆ ಕಪ್ಪು ಚುಕ್ಕೆ, ದನ ಮೇಯಿಸು, ಸಾಯ್ಬಾರದಿತ್ತಾ😥, ಅವರ ಮಗ ನೋಡು,ಇವರ ಮಗಳನ್ನು ನೋಡು ಮುಂತಾದ ಚುಚ್ಚು ನುಡಿ ಇದು ಬೆಳೆಯುವ ಸಿರಿ ಯೊಂದನ್ನು ಮೊಳಕೆಯಲ್ಲೇ ಚಿವುಟುವ ಸಮಾಜ, ಬಾಂದವರು, ಒಡಹುಟ್ಟಿದವರು, ತಂದೆ ತಾಯಿ ಒಮ್ಮೆ ಇವರ ಬಗ್ಗೆ ಯೋಚಿಸ ಬಾರದೇಕೆ??

5 ಬೆರಳು ಒಂದೇ ರೀತಿ ಆಗಲು ಸಾಧ್ಯವಿಲ್ಲ ಎನ್ನುವ ಸತ್ಯ ನಮಗೇಕೆ ಅರ್ಥವಾಗುವುದಿಲ್ಲ?, ಸಮಾಜದಲ್ಲಿ ಯಶಸ್ವೀ ವ್ಯಕ್ತಿ ಆಗಬೇಕಾದರೆ rank ಬರುವುದು ಅನಿವಾರ್ಯವೇ? ಟಾಟಾ ಬಿರ್ಲಾ, ಅದಾನಿ, ಅಂಬಾನಿ, ಸಚಿನ್ ತೆಂಡೂಲ್ಕರ್ ನಂತಹ rank ಬಾರದ ಅದೆಷ್ಟು ಯಶಸ್ವೀ ವ್ಯಕ್ತಿ ಗಳಿಲ್ಲವೇ?...👌🙏🙏

ಬನ್ನಿ ಸ್ವಲ್ಪ ಬದಲಾಗೋಣ...

🌹1) ಕಡಿಮೆ ಅಂಕ ಬಂದ ಮಕ್ಕಳನ್ನು ಪ್ರೀತಿ ಯಿಂದ ಮಾತಾಡೋಣ

🌹2) ಅವರಲ್ಲಿ ಧೈರ್ಯ ತುಂಬೋಣ

🌹3) ಪರ್ಯಾಯ ಆಯ್ಕೆ ಗಳ ಬಗ್ಗೆ ತಿಳಿ ಹೇಳೋಣ

🌹4)ಎರಡನೇ ಯತ್ನದಲ್ಲಿ ಯಶಸ್ವೀ ಯಾದವರ ಕಥೆ ಹೇಳೋಣ..

🌹5) 1 ವರ್ಷ sslc ಮಾತ್ರ ಹೋಗಿದ್ದು ಜೀವನ ಇನ್ನೂ ಇದೆ ಎನ್ನುವ ಸತ್ಯ ತಿಳಿ ಹೇಳೋಣ..

🌹6) ಅವರಲ್ಲಿರುವ ಟ್ಯಾಲೆಂಟ್ ಅನ್ನು ಗುರುತಿಸೋಣ...


ಒಟ್ಟಲ್ಲಿ ರೆಕ್ಕೆ ಮುರಿದ ಹಕ್ಕಿಗೆ ಉಪಚಾರಿಸಿ ಹೊಸರೆಕ್ಕೆ ಕಟ್ಟಿ ಆಗಸಕ್ಕೆ ಹಾರಿ ಬಿಡೋಣ 🙏🙏...

ಕೊನೆಗೊಂದು ಎಲ್ಲೊ ಓದಿದ ಕಥೆಯೊಂದನ್ನು ಹೇಳುತ್ತೇನೆ ಕೇಳಿ.. ಅಪ್ಪ ಈಗಷ್ಟೇ ತಂದ ಹೊಸ ಕಾರಿನ ಕೆಂಪು ಪೈಂಟ್ ಮೇಲೆ ಚಿಕ್ಕ ಮಗ ಕಲ್ಲಲ್ಲಿ ಏನೋ ಗೀಚುತಿದ್ದ ಸಿಟ್ಟಲ್ಲಿದ್ದ ಅಪ್ಪ ಅಲ್ಲೇ ಇದ್ದ ಕಬ್ಬಿಣದ ರೋಡ್ ಅಲ್ಲಿ ಮಗನ ಕೈಗೆ ಹೊಡೆದನಂತೆ ಮಗನ ಕೈ ಫ್ರಾಕ್ಚರ್ ಆಗಿತ್ತು🥱, ಆಸ್ಪತ್ರೆ ಗೆ ಕೊಂಡು ಹೋದರೆ ಹೊಡೆತ ಜೋರಾಗಿ ಬಿದ್ದಿದ್ದರಿಂದ ಹೆಬ್ಬೆರಳು ಪುಡಿ ಪುಡಿ ಆಗಿದ್ದು ಮಗು ವಿನ ಹೆಬ್ಬೆರಳು ಕತ್ತರಿಸಬೇಕು ಎಂದು ಬೆರಳು ಕತ್ತರಿಸಿದರಂತೆ 😥.. ಅಪ್ಪ ಬೇಸರದಿಂದ ಮನೆಗೆ ಬಂದರೆ ಕೆಂಪು ಕಾರ್ ಮೇಲೆ ಅಪ್ಪ ಈ ಲವ್ ಯು ಎಂದು ಕಲ್ಲಲ್ಲಿ ಗೀಚಿದ್ದ ಮಗ.. ಅಲ್ಲಿ ರಕ್ತ ದ ಕಲೆ ಗಳಿದ್ದವು... ಅಪ್ಪ ದುಃಖ ತಡೆಯಲಾರದೇ ಅಲ್ಲೇ ಕೂತಿದ್ದ.. ಹಿಂದೆ ನಿಂದ ಬಂದ ಮಗ ಬ್ಯಾಂಡೆಜ್ ಮಾಡಿದ್ದ ಕೈ ತೋರಿಸಿ ಹೇಳಿದನಂತೆ ಅಪ್ಪ ನೀನು ಟೆನ್ಶನ್ ತಗೋಬೇಡ ನಾನು ಬರೆಯೋದು ಎಡ ಕೈ ಯಲ್ಲಿ ಮೊನ್ನೆ ಬಲ ಕೈ ಅಲ್ಲಿ ಟ್ರೈ ಮಾಡುತಿದ್ದೆ, ಬಲ ಕೈ ಹೆಬ್ಬೆರಳು ಹೋದರೆ ಹೊಗಲಿ ಬಿಡು ಅಂದನಂತೆ😔🥱.....

ನಿಜ ಇಂತಹ ಮಕ್ಕಳ ನಿಷ್ಕಲ್ಮಶ ಪ್ರೀತಿ,ಮಮತೆ ಯನ್ನು ಅರಿಯುವ ತಂದೆ ತಾಯಿಗಳಾಗೋಣ.. ಮಾರ್ಕ್ ಕಮ್ಮಿ ಬಂತೆಂದು ಅವರ ಮುಗ್ಧ ಹೃದಯಕ್ಕೆ ನೋವು ಕೊಟ್ಟು ನಾಳೆ ಮಕ್ಕಳನ್ನು ಕಳೆದುಕೊಂಡು ಬೇಸರಿಸುವ ಮೊದಲು ಎಚ್ಚರ ದಿಂದ ಇರೋಣ.

SSLC, PUC  ಯಲ್ಲಿ ಕಡಿಮೆ ಅಂಕ ಬಂದ /ಫೇಲ್ ಆದ ಅದೆಷ್ಟೋ ವಿದ್ಯಾರ್ಥಿಗಳು ಜೀವನವೆಂಬ ಪರೀಕ್ಷೆ ಯಲ್ಲಿ ಪಾಸ್ ಆಗಿದ್ದಾರೆ, ಕೆಲವರoತು ಜೀವನದಲ್ಲಿ Rank ಬಂದಿದ್ದಾರೆ.. ಹಾಗಾಗಿ ಇದಿಷ್ಟು ನೆನಪಿರಲಿ....ಅವರಿಗೊಂದು ಅವಕಾಶ ಕೊಡಿ

ಯಾಕೆಂದರೆ....

ಪರೀಕ್ಷೆ ಯಲ್ಲಿ ಅಂಕ ಕಡಿಮೆಯಾದರೇನು?.... ಜೀವನದಲ್ಲಿ ಹೆಚ್ಚು ಅಂಕ ಗಳಿಸಬಹುದಲ್ಲವೇ?? 🙏🙏

ನುಡಿಮುತ್ತು

 ಕಲ್ಪನೆಗೆ ಹೂ ವಾದರೇನು.., ಮುಳ್ಳಾದರೇನು ? ಕಲ್ಪಿಸುವವರ ಹೃದಯ ಮೃದುವಾಗಿದ್ದರೆ ಮುಳ್ಳು ಕೂಡ ಮೃದುವಾಗಿ ಹೂವಾಗ ಬಲ್ಲದು