Monday, July 18, 2011

ಇವರು ನಮ್ಮವರು; -

ಕನ್ನಡ ಡಿಂಡಿಮ ಬಾರಿಸಿದ ಕನ್ನಡ ಕಣ್ಮಣಿಗಳ ಅಪರೂಪದ ಚಿತ್ರ:
ಎಡದಿಂದ-ನಾಡಿಗೇರ್,ಜಿ ಬಿ ಜೋಷಿ,ಕೆ ವಿ ಅಯ್ಯರ್,ಆಲೂರು ವೆಂಕಟ ರಾವ್,ವಿ ಬಿ ನಾಯಕ್,ಕರ್ಣ
  
Krupe _ ಕನ್ನಡಿಗರ ಒಕ್ಕೂಟ - Face book

Sunday, July 17, 2011

ಶಿವರಾತ್ರಿ

ಶಿವನಿಗ್ಯಾವುದು ಹಗಲು? ಯಾವುದವನಿಗೆ ರಾತ್ರಿ?
ನಿತ್ಯ ಜಂಗಮ ಮೂರ್ತಿಗಿರುಳು ಹಗಲಿನ ಫರಕು
ಇಲ್ಲ, ಹಗಲಾದಾಗ ಇಲ್ಲಿ, ಅಮೆರಿಕೆಯಲ್ಲಿ
ನಟ್ಟಿರುಳು. ಹಗಲರ್ಧ ; ಇರುಳರ್ಧ-ಅರ್ಧನಾ
ರೀಶ್ವರಗೆ. ಈ ಶಿವರಾತ್ರಿ ಎನ್ನುವುದೆ ಪಾರ್ವತಿ.
ಚಂದ್ರದಂಡೆಯ ಮುಡಿದು, ನಕ್ಷತ್ರನೆಕ್ಲೇಸ
ಧರಿಸಿರುವ ನಗೆಮುಗುಳ ಕಾಳಿ, ಶಂಕರನರಸಿ.
ಕೈಲಾಸಲಾಸ್ಯ ಮಾನಸದ ಕನ್ನಡಿಯಲ್ಲಿ.

ಚಂದ್ರಬೋಗಣಿ ತುಂಬ ತುಳುಕಾಡುತಿರೆ ಇರುಳು.
ತಿರುಪೆ ಮುಗಿಸಿದ ಜೋಗಿ ಧವಳಗಿರಿ ಬಾಗಿಲಲಿ
ನಿಂತು ಮೆಲ್ದನಿಯಲ್ಲಿ ಉಸುರಿದನು : "ಶಂಕರೀ...
ತೆರೆಯೆ ಬಾಗಿಲು ಬೇಗ ಆಲೋಲ ನೇತ್ರೆಯೇ,
ನನ್ನಧರಪಾತ್ರೆಯೇ, ಬಿಲ್ವವನಧಾತ್ರಿಯೇ,
ಉರಿವ ಹಗಲಿಗೆ ತಂಪನೆರೆವ ಶಿವರಾತ್ರಿಯೇ!"

-ಎಚ್. ಎಸ್. ವೆಂಕಟೇಶಮೂರ್ತಿ

Thursday, July 14, 2011

ಇರುಳ ಸಮಯ

ಇರುಳ ಸಮಯ ಸುರಿಮಳೆಯೊಳಗೆ
ದೋಣಿಗಳಿಳಿದಿವೆ ಹೊಳೆಯೊಳಗೆ

ಶ್ಯಾಮಲ ಸಾಗರವೇ ಗುರಿಯೆನ್ನುತ
ಸಾಗಿವೆ ಸಾವಿರ ದೋಣಿಗಳು |
ಸೆರಗೇ ಹಾಯಿ ! ಹೃದಯವೆ ಹುಟ್ಟು !
ದೋಣಿ ಹಿಂದೆ ಜಲವೇಣಿಗಳು ||

ಏರಿಳಿಯುವ ಅಲೆ! ಮುಂದೆ ಇದಿರು ಹೊಳೆ !
ಜಗ್ಗುವುವೇ ಈ ಹಾಯಿಗಳು ?
ಎದೆಯನೆ ಸೀಳುವ ಹೋಳು ಬಂಡೆಗಳು
ಆ ಎನ್ನುವ ಸುಳಿಬಾಯಿಗಳು ||

ಮುಳುಗಿಸೊ ಅಥವಾ ತೇಲಿಸೊ ರಥವ
ಧೃತಿಯೊಂದೇ ಗತಿ ಹಾಡುತಿವೆ |
ಮುಳುಗುವ ಹೊರತೂ ತೇಲದು ದೋಣಿ
ಹಾಯಿ ವಿದಾಯವ ಹೇಳುತಿವೆ ||

-ಹೆಚ್. ಎಸ್. ವೆಂಕವೇಶಮೂರ್ತಿ

Wednesday, July 13, 2011

ಕಾಲವಲ್ಲದ ಕಾಲ

ಕಾಲವಲ್ಲದ ಕಾಲ
ಧೋಮಳೆಯ ಸುರಿಸುತಿವೆ
ಮೋಡಗಳ ಅಣಕಿಸುತ ನಿನ್ನ ಕಣ್ಣು |
ಮನೆಯೊಳಗೆ ಇದ್ದರೂ ಮಳೆಯಲ್ಲಿ ತೋಯುತಿಹೆ
ನಿಟ್ಟಿಸುತ ತೆರೆದಿರುವ ಬಾಗಿಲನ್ನು ||

ಮೋಡ ಮುಸುಕಿದ ಇರುಳು ಆಗಸದ ತಾರೆಗಳು
ಕಾಣದಾಗಿವೆ ಮೇಲೆ ಬಾನಿನಲ್ಲಿ
ಮೋಡ ಮುಸುಕಿದ್ದರೂ ಮಳೆ ಸುರಿಯುತಿದ್ದರೂ
ಜೋಡಿ ನಕ್ಷತ್ರಗಳು ಕಣ್ಣಿನಲ್ಲಿ ||

ಹೊರಗೆ ತಣ್ಣಗೆ ಗಾಳಿ ನಡುಗುತಿವೆ ಮರ ಗಿಡಾ
ಒಳಗೆ ಬಿಸಿಯುಸಿರ ಹಬೆ ಹಾಯುತ್ತಿದೆ |
ಕಂಬನಿಯ ತನಿಮಳೆಗೆ ನೆಂದ ಮಾತಿನ ಹಕ್ಕಿ
ತುಟಿಯಂಚಿನಲಿ ತೊಪ್ಪ ತೋಯುತ್ತಿದೆ ||

ಸುರಿವ ಕಂಬನಿಯಲ್ಲಿ ಕಣ್ಣ ಕಾಡಿಗೆ ಕರಗಿ
ಕೆನ್ನೆಸರಪಳಿಯನ್ನು ಬರೆಯುತ್ತಿದೆ |
ಮಾಮರದ ಮೇಲೊಂದು ಕೂ ಎಂಬ ಕೋಗಿಲೆ
ಕೂಗು ಬಾಗಿಲವರೆಗು ಹಾಯುತ್ತಿದೆ ||

- ಹೆಚ್.ಎಸ್. ವೆಂಕಟೇಶಮೂರ್ತಿ

Tuesday, July 12, 2011

ದೂರವಿಡೆ ಸಖಿ

ದೂರವಿಡೆ ಸಖಿ
ದೂರವಿಡೆ |
ಕೈಯವೀಣೆಯನು ದೂರವಿಡೆ ||

ವೀಣೆಯ ನಾದವ ಕೇಳಿ ಚಂದ್ರಮನ
ರಥದ ಜಿಂಕೆಗಳು ಓಡದಿವೆ |
ನೆರಳು ಹೊರಳುತಿದೆ ; ಇರುಳು ಕೆರಳುತಿದೆ
ಬೆಳದಿಂಗಳ ಮಳೆ ಬಾರದಿದೆ ||

ನೋವಿನ ಪರಿಯನು ನೊಂದವರರಿವರು
ನೋಯದೆ ನೋಯುವ ಬಗೆಯುಂಟೆ ?
ಚಂದಿರನಾದನು ಬೆಂಕಿಯ ಗೂಡು
ನೊಂದ ಬಳಿಕ ನೀನದ ನೋಡು ||

ಮರುಳುಗೊಳ್ಳುವುವು ಚುಕ್ಕಿಯ ಜಿಂಕೆ
ವೀಣೆಯ ಮುಚ್ಚಿಡೆ ಜೀವಸಖೀ |
ಚಂದ್ರ ಮಹೋತ್ಸವ ಮುಂದಕೆ ಸಾಗಲಿ
ವಿರಹಿಗಳಿಗೆ ಕಾರಿರುಳೆ ಸಖೀ ||

- ಹೆಚ್. ಎಸ್. ವೆಂಕಟೇಶಮೂರ್ತಿ

Wednesday, July 6, 2011

ಅಕ್ಕಮಹಾದೇವಿ


ಅರಿವೆನೆಂದರೆ ಅರಿಯಬಾರದು ನೋಡಾ
ಘನಕ್ಕೆ ಘನ ತಾ ನೋಡಾ
ಚನ್ನಮಲ್ಲಿಕಾರ್ಜುನ ನಿರ್ಣಯವಿಲ್ಲದೆಪೋದೆನು||

- ಜಗದೊಡೆಯ ಮಲ್ಲಿಕಾರ್ಜುನನು(ಈಶ್ವರ) ಎಲ್ಲಾ ಶಕ್ತಿಗಳಿಗಿಂತಲೂ ಅಗಾಧ ಹಾಗೂ ಶಕ್ತಿಯುಳ್ಳವನು, ಅವನನ್ನು ತಿಳಿಯುವುದು ತುಂಬಾ ಕಠಿಣ ಅವನನ್ನು ತಿಳಿದುಕೊಂಡೆನೆಂದರೆ ನನ್ನ ಜೀವನವೇ ಅದೃಷ್ಟಶಾಲಿ(ಧನ್ಯ).

-----------

ಈಳೆ, ನಿಂಬೆ, ಮಾವು ಮಾದಲಿಕೆಗೆ ಹುಳಿನೀರನೆರೆದವರಾರಯ್ಯ
ಕಬ್ಬು, ಬಾಳೆ, ಹಲಸು, ಗರಿಕೇಳಕೆ ಸಿಹಿನೀರೆರದವರಾರಯ್ಯ!
ಕಳೆವಸಾಲೆಗ ಓಗರದ ಉದಕವನೆರೆದವರಾರಯ್ಯ!
ಮರುಗ, ಮಲ್ಲಿಗೆ, ಪಚ್ಚೆಗೆ, ಪರಿಮಳದುದಕವನೆರೆದವರಾರಯ್ಯ
ಇಂತೀ ಜಲವು ಒಂದೇ ಆಕಾರವು ಒಂದೇ ಹಲವು ದ್ರವ್ಯಂಗಳ
ಕೂಡಿ ತನ್ನ ಪರಬೇಕಾಗಿ ಹಾಗೆ ಎನ್ನ ದೇವ ಚನ್ನಮಲ್ಲಿಕಾರ್ಜುನಯ್ಯನು
ಹಲವು ಜಗಂಗಳ ಕೂಡಿಕೊಂಡಿರ್ದರೇನು? ತನ್ನ ಪರಿ ಬೇರೆ!

- ಕಿತ್ತಳೆ, ನಿಂಬೆ, ಮಾವು, ಮುಂತಾದುವುಗಳಿಗೆ ಹುಳಿ. ಕಬ್ಬು, ಬಾಳೆ, ಹಲಸು, ನಾರಿಕೇಳಫಲ ಇವುಗಳಿಗೆ ಸಿಹಿ, ಒಗರು ಮತ್ತು ಮರುಗ, ಮಲ್ಲಿಗೆ, ಪಚ್ಚೆಗಳಿಗೆ ಪರಿಮಳ(ಸುವಾಸನೆ) ಇವುಗಳನ್ನೆಲ್ಲ ನೀಡಿದವರು ಯಾರು..? ಇವೆಲ್ಲ ದೇವನಿರ್ಮಿತ, ಇವುಗಳೆಲ್ಲವೂ ನೀರು, ಭೂಮಿ, ಆಕಾಶವನ್ನೇ ಅವಲಂಬಿಸಿರುತ್ತವೆ ಹಾಗೆ ಜಗತ್ತಿನಲ್ಲಿರುವ ಎಲ್ಲಾ ಜೀವರಾಶಿಗಳೂ ದೇವರ ಸನ್ನಿಧಿಯಲ್ಲಿ ಬದುಕು ಸಾಗಿಸುವಂತಹವು ಆದರೂ ಆ ದೇವನ ರೀತಿ ಮಾತ್ರ ನಮಗೆ ಅಳವಡದು.

---------------

ಅಯ್ಯ ದೂರದಲಿರ್ದಿಹೆ ಎಂದು ಬಾಯಾರಿ ಬಳಲುತಿರ್ದೆ
ಅಯ್ಯ ಸಾರಿಬಂದು ನೀನೆನ್ನ ಕರಸ್ಥಲದಲ್ಲಿ ಮೂರ್ತಿಗೊಂಡೆ
ಇನ್ನಾರಂತೆ ಎಲ್ಲವೂ ಲಿಂಗ ಆಗ ನಿಮ್ಮಲ್ಲಿ ನೆಟ್ಟವು ನೋಡಯ್ಯ
ಚನ್ನಮಲ್ಲಿಕಾರ್ಜುನ ನಿಮ್ಮ ನೆನ್ನ ಕರಸ್ಥಲದಲಿ
ನೋಡಿ, ನೋಡಿ, ಕಂಗಳೇ ಪ್ರಾಣವಾಗಿರ್ದೆನಯ್ಯ ||

- ದೇವನೇ ನೀನು ಬಹು ದೂರದಲ್ಲಿರುವೆ ಎಂದು, ನೀರಿನ ದಾಹ ತಡೆಯದೆ ಬಳಲುವವರಂತೆ ಪರಿತಪಿಸುತ್ತಲಿದ್ದೆ. ಆದರೆ ನೀನು ಒಂದು ಸಾರಿ ನನ್ನ ಕರಸ್ಥಳದಲ್ಲಿ ಪ್ರಸನ್ನವಾದೇ ನೋಡು ಅಂದೇ ನನ್ನ ಮನ ನಿನ್ನಲ್ಲಿ ಲೀನವಾಯಿತು. ದೇವನೆ ನಿನ್ನನ್ನು ಪ್ರೇಮದಿಂದ ಕಂಡ ಈ ಕಂಗಳೇ ಪ್ರಾಣವಾದವಯ್ಯ, ನಾನೇ ಪುಣ್ಯವಂತಳು......

Friday, July 1, 2011

ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು

ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು || ನಾನು ||


ಹತ್ತಿರಿರಲಿ ದೂರವಿರಲಿ ಅವನೇ ರಂಗಸಾಲೆ
ಕಣ್ಣು ಕಟ್ಟುವಂಥ ಮೂರ್ತಿ ಕಿವಿಗೆ ಮೆಚ್ಚಿನೋಲೆ || ನಾನು ||


ಆತ ಕೊಟ್ಟ ವಸ್ತು ಒಡವೆ ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂಧಿ ಕೆನ್ನೆತುಂಬ ಮುತ್ತು || ನಾನು ||


ಕುಂದು ಕೊರತೆ ತೋರಲಿಲ್ಲ ಬೇಕು ಹೆಚ್ಚಿಗೇನು
ಹೊಟ್ಟೆಗಿತ್ತ ಜೀವಫಲವ ತುಟಿಗೆ ಹಾಲು ಜೇನು || ನಾನು ||

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......