ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Sunday, July 15, 2012

ಜಾತಿಯೆಂಬ ಪೀಡೆ.....

ಪಂಪನೂ ಅಂದಿದ್ದ "ಮಾನವ ಜಾತಿ ತಾನೊಂದೆ ವಲಂ" ಅಂತ. ಅಲ್ಲಿಗೆ ಆದಿಕವಿಯ ಕಾಲಕ್ಕೂ ಆದಿಯಲ್ಲೇ ಜಾತಿ ಸಮಸ್ಯೆ ಗಾಢವಾಗಿತ್ತು ಎನ್ನೋದು ಸ್ಪಷ್ಟ. ಭಾರತ ಉಪಖಂಡದ ಹಿಂದೂ ಧರ್ಮಕ್ಕಂಟಿದ ಪಿಡುಗು ಮಾತ್ರ ಎನ್ನುವಂತೆ ಬಿಂಬಿಸಲಾಗುವ ಈ ಜಾತಿಯ ಪೆಡಂಭೂತ ವಿಶ್ವ ಭ್ರಾತ್ವತ್ವ ಸಾರುವ ಇಸ್ಲಾಂ, ಕ್ರೈಸ್ತಗಳಂತಹ ಸೆಮಟಿಕ್'ಧರ್ಮಗಳನ್ನೂ ಬಿಟ್ಟಿಲ್ಲ. ಅಸ್ಪರ್ಶ್ಯತೆಯ ಅನಿಷ್ಟ ಇಲ್ಲಿ ಕೆಳ ಜಾತಿಯೆಂದು ಪರಿಗಣಿತವಾದ ವರ್ಗಕ್ಕೆ ಶಾಪವಾಗಿ ಅಂಟಿದ್ದರೆ ಅಲ್ಲದು ಸುನ್ನಿ-ಶಿಯಾ-ವಹಾಬಿ-ಕುರ್ದ್-ನವಾಯತ್, ಅರ್ಮೇನಿಯನ್-ಕ್ಯಾಥೊಲಿಕ್-ಪ್ರಾಟೆಂಟೆಸ್ಟ್ -ಸಿರಿಯನ್ ಹೀಗೆ ಪಂಗಡ, ಭಾಷೆ ಹಾಗೂ ಬುಡಕಟ್ಟುಗಳ ಆಚರಣೆಗೆ ಅನುಗುಣವಾಗಿ ಪರಸ್ಪರರನ್ನು ಅಸ್ಪರ್ಶ್ಯರನ್ನಾಗಿಯೂ , ಬದ್ಧದ್ವೇಷಿಗಳನ್ನಾಗಿಯೂ ಮಾಡಿದೆ.

ಇಂದಿಗೂ ಜಾತಿಯ ನಿರ್ಧಾರ ವ್ಯಕ್ತಿಯ ಹುಟ್ಟಿನೊಂದಿಗೆ ಆಗುತ್ತದೆ ಅನ್ನುವ ಸುರಳೀತ ತತ್ವಕ್ಕೆ ಜೋತು ಬಿದ್ದಿರುವ ನಮ್ಮ ಸಮಾಜದ ಹೀನ ಮನಸ್ಥಿತಿಗೆ ಮದ್ದಿಲ್ಲ. ಜಾತಿಯಲ್ಲಿ ಕೀಳೆಂದು ಪರಿಗಣಿತವಾದ ವರ್ಗ ತಮ್ಮ ಸಾಮಾಜಿಕ ಆಚರಣೆಗಳಲ್ಲಿ ಮೇಲ್ವರ್ಗದ ಮಂದಿಯಂತೆ ಬಹಿರಂಗ ಆಡಂಬರಕ್ಕೆ ಒತ್ತು ಕೊಟ್ಟರೆ ಒಳಗೊಳಗೇ ಕುದಿಯುವ ರೋಗಗ್ರಸ್ತ ಮನಸ್ಥಿತಿ, ಕೆಲವರ್ಗದವನೊಬ್ಬ ವಿದ್ಯಾವಂತನಾಗಿ ಉನ್ನತ ಹುದ್ದೆಗೇರಿದ ಕೂಡಲೆ ತನ್ನವರನ್ನೇ ಅಸ್ಪರ್ಶ್ಯವಾಗಿಸುವ ವಿಕೃತ ನವ ಬ್ರಾಮ್ಹಣನಾಗುವ ವ್ಯಂಗ್ಯ, ಜಾತಿಯ ಗುರಾಣಿ ಯನ್ನ ತಾವೆಸಗುವ ಅನಾಚಾರಕ್ಕೆಲ್ಲ ಪರವಾನಗಿಯಂತೆ ಹೊತ್ತು ವ್ಯಥಾ ಅಮಾಯಕರಿಗೆ ಕಿರುಕುಳ ಕೊಡುವ ದಮನಿತ ವರ್ಗದ ದುಷ್ಟ ಧುರಂಧರರ ಆಟಾಟೋಪ. ಇವೆಲ್ಲದರದ ಮಧ್ಯೆ ಮೂಕ ಪ್ರೆಕ್ಷಕರಾಗುವ ದೌರ್ಭಾಗ್ಯದ ಅನಿವಾರ್ಯ ಸರದಿ ನೇರ ಮನಸ್ಸಿನ ನ್ಯಾಯ ಪರರಿಗಿದೆ. ಇದರರ್ಥ ಇಷ್ಟೆ ಯಾವಾಗಲೂ ಒಬ್ಬರೆ ಅಮಾಯಕರಾಗಿದ್ದು-ಇನ್ನೊಬ್ಬರು ಬಲಿಪಶುಗಳಾಗಿಯೇ ಇರುತ್ತಾರೆ ಅನ್ನುವುದೊಂದು ಸ್ವಕಲ್ಪಿತ ಅಮಾಯಕತೆ.

ಕಳೆದ ಶತಮಾನದ ಅರವತ್ತರ ದಶಕದವರೆಗೂ ಅಷ್ಟೇನೂ ಪ್ರಸಿದ್ಧರಾಗಿರದಿದ್ದ ಬಾಬಾ ಸಾಹೇಬರು ಧಡೀರನೆ ದಲಿತರ-ದಮನಿತರ ಸ್ವಾಭಿಮಾನದ ಸಂಕೇತವಾಗುವುದನ್ನು ನೋಡಿ ಸಂಭ್ರಮಿಸುವ ಅಂತಂದುಕೊಂಡರೆ ಸರಕಾರಿ ಇಲಾಖೆಯೊಂದಕ್ಕೆ ಸಪ್ತಕ ಶನಿಯಂತೆ ಅಮರಿಕೊಂಡು ಸಿಕ್ಕ ಸಿಕ್ಕಲ್ಲಿ ಕನ್ನ ಕೊರೆದ ಹರಾಮಿ ಹಣದಲ್ಲಿ "ಶಿವಾ ರಾಮಾ' ಅಂತ ಬೆಳ್ಳಿತೆರೆಯ ಮೇಲೆ ಮೆರೆಯುವ ಮೂದೇವಿಗಳು, ನೋಟಿನ ಭಾರಿ ಹಾರವನ್ನ ನಿರ್ಲಜ್ಜವಾಗಿ ಹಾಕಿಸಿಕೊಂಡು "ಮಾಯೆ" ಮೆರೆಯುವ- ಕಂಡಕಂಡಲ್ಲಿ ಸರಕಾರಿ ಖರ್ಚಿನಲ್ಲಿ ತಮ್ಮ ಪಕ್ಷದ ಅಧಿನಾಯಕನ, ತನ್ನ, ಸಾಲದ್ದಕ್ಕೆ ಜೊತೆಗೆ ಪಕ್ಷದ ಚಿನ್ಹೆಯಾದ ಹಾಥಿಯನ್ನೂ ಕೆತ್ತಿಸಿ ಕಂಡಕಂಡಲ್ಲಿ ನಿಲ್ಲಿಸಿ ಜನರ ಕಿಸೆಗೆ ನಾಚಿಕೆಯಿಲ್ಲದೆ ಕತ್ತರಿ ಹಾಕುವ "ಮತಿ" ಹೀನರು ಹೇಸಿಗೆ ಹುಟ್ಟಿಸುತ್ತಾರೆ.

ಎಲ್ಲರಿಗೂ ಒಂದೇ ಬಣ್ಣದ ರಕ್ತ, ಎರಡೆ ಕಿವಿ-ಎರಡೆ ಕಣ್ಣು, ಎರಡೆರಡೆ ಕೈ ಬಾಯಿ ಇರುವಾಗ ಅದು ಹೇಗೆ ಒಬ್ಬ ಇನ್ನೊಬ್ಬನಿಂದ ಮೇಲು? ಅಥವಾ ಕೀಳು? ಎನ್ನುವ ತರ್ಕವನ್ನೆ ಅಮೀರ್ ಖಾನ್ ಕಳೆದ ಭಾನುವಾರ "ಸತ್ಯಮೇವ ಜಯತೆ"ಯಲ್ಲಿ ಬೆನ್ನು ಹತ್ತಿದ್ದರು. ಆದರೆ ದೇಶದ ಒಂದು ಧಾರ್ಮಿಕತೆಯ ಲೋಪದೋಷಗಳನ್ನ ಮಾತ್ರ ಒರೆಗೆ ಹಚ್ಚಿದ್ದು ಕಾರ್ಯಕ್ರಮವನ್ನ ಸಂಪೂರ್ಣಗೊಳಿಸದ ಒಂದು ಮಿತಿಯಾಯಿತು. ಇಂತಹ ಸಾಮಾಜಿಕ ಪಿಡುಗುಗಳನ್ನ ಮನಸುಗಳ ಒಳ ಮನೆಯಿಂದ ತೊಳೆದು ಹಾಕುವ ಮಾರ್ಜಕಗಳ ಅನ್ವೇಷಣೆ ಇನ್ನೂ ಆಗಿಲ್ಲ ನಿಜ, ಆದರೆ ಇಂತಹ ಕಾರ್ಯಕ್ರಮಗಳಿಂದ ಒಬ್ಬಿಬ್ಬರಾದರೂ ಪರಿವರ್ತನೆಯತ್ತ ಪ್ರಾಂಜಲವಾಗಿ ಮನಸು ಮಾಡಿಯಾರು ಅನ್ನುವ ಉಮೇದಿರಲಿ . ಅದೇ ಈ ಕಾರ್ಯಕ್ರಮದ ಉದ್ದೇಶವೂ ಆಗಿತ್ತು ಅಂತಲೆ ಆಶಿಸೋಣ.

http://www.youtube.com/watch?v=lJ3XV_6hJac

No comments:

Post a Comment