Saturday, April 2, 2016

ನಾಕು ತಂತಿ - - ದ. ರಾ. ಬೇಂದ್ರೆ

..

ಆವು ಈವಿನ ನಾವು ನೀವಿಗೆ ಆನು ತಾನಾದ ತನ ನನಾ
ನಾನು ನೀನಿನ ಈನಿ ನಾನಿಗೆ ಬೇನೆ ಏನೋ? ಜಾಣೆ ನಾ
ಚಾರು ತಂತ್ರಿಯ ಚರಣ ಚರಣದ ಘನಘನಿತ ಚತುರಸ್ವನಾ
ಹತವೊ ಹಿತವೋ ಆ ಅನಾಹತಾ ಮಿತಿಮಿತಿಗೆ ಇತಿ ನನ ನನಾ
ಬೆನ್ನಿನಾನಿಕೆ ಜನನ ಜಾನಿಕೆ ಮನನವೇ ಸಹಿತಸ್ತನಾ

ಗೋವಿನ ಕೊಡುಗೆಯ ಹದಗದ ಹುಡಿಗಿ ಬೆಡಗಿಲೆ ಬಂದಳು ನಡುನಡುಗಿ
ಸಲಿಗೆಯ ಸುಲಿಗೆಯ ಬಯಕೆಯ ಒಲುಮೆ ಬಯಲಿನ ನೆಯ್ಯಾಯ ಸಿರಿಯುಡುಗಿ
ನಾಡಿಯ ನಡಿಗೆಯ ನಲುವಿನ ನಾಲಿಗೆ ನೆನೆದಿರೆ ಸೋಲುವ ಸೊಲ್ಲಿನಲಿ
ಮುಟ್ಟದ ಮಾಟದ ಹುಟ್ಟದ ಹುಟ್ಟಿಗೆ ಜೇನಿನ ಥಳಿಮಳಿ ಸನಿಹ ಹನಿ
ಬೆಚ್ಚಿದ ವೆಚ್ಚವು ಬಸರಿನ ಮೊಳಕೆ ಬಚ್ಚಿದ್ಯಾವುದೋ ನಾ ತಿಳಿಯೆ
ಭೂತದ ಭಾವ ಉದ್ಬವ ಜಾವ ಮೊಲೆ ಊಡಿಸುವಳು ಪ್ರತಿಭೆ ನವ

ಚಿತ್ತಿಮಳಿ ತತ್ತಿ ಹಾಕತಿತ್ತು ಸ್ವಾತಿ ಮುತ್ತಿನೊಳಗ
ಸತ್ತ್ಯೋ ಮಗನ ಅಂತ ಕೂಗಿದರು ಸಾವೀ ಮಗಳು ಭಾವಿ ಮಗಳು ಕೂಡಿ
ಈ ಜಗ ಅಪ್ಯಾ ಅಮ್ಮನ ಮಗ ಅಮ್ಮನೊಳಗ ಅಪ್ಯನ ಮೊಗ
ಅಪ್ಯನ ಕತ್ತಿಗೆ ಅಮ್ಮನ ನೊಗ ನಾ ಅವರ ಕಂದ ಶ್ರೀ ಗುರುದತ್ತ ಅಂದ

"ನಾನು" "ನೀನು" "ಆನು" "ತಾನು" ನಾಕು ನಾಕೆ ತಂತಿ
ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ
ಗಣನಾಯಕ ಮೈ ಮಾಯಕ ಸಾಯಿ ಸಾಯಕ ಮಾಡಿ
ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ


No comments:

Post a Comment

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......