Wednesday, August 3, 2011

ರೋಷದ ಮಾತು

ರಾಮಾಯಣದ ಯುದ್ಧ ಕಾಂಡದಲ್ಲಿ ಬರುವ ಸನ್ನಿವೇಶ ಇದು. ರಾವಣನ ಮಗನಾದ ಇಂದ್ರಜಿತ್ತು ಯುದ್ಧಕ್ಕೆ ಬಂದು ಮಾಯಾಯುದ್ಧವನ್ನು ಪ್ರಾರಂಭಿಸುತ್ತಾನೆ. ಆಕಾಶದ ಮೋಡಗಳ ಹಿಂದೆ ಅವಿತುಕೊಂಡು ಬಾಣಗಳ ಮಳೆಗರೆಯುತ್ತಾನೆ. ಕ್ಷಣಕ್ಷಣಕ್ಕೆ ದಿಕ್ಕುಗಳನ್ನು ಬದಲಿಸುತ್ತ ಕಪಿಸೇನೆಯನ್ನು ಕಂಗೆಡಿಸುತ್ತಾನೆ. ನಂತರ ಮಾಯಾಸೀತೆಯನ್ನು ಯುದ್ಧಭೂಮಿಗೆ ಕರೆತರುತ್ತಾನೆ. ಈ ವಿವರಗಳನ್ನು ವಾಲ್ಮೀಕಿ ಮುನಿಗಳು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ.

ಆತ ಆ ಮಾಯಾಸೀತೆಯನ್ನು ಎಲ್ಲರ ಮುಂದೆಯೇ ಹೊಡೆಯುತ್ತಾನೆ. ಪೆಟ್ಟು ತಾಳಲಾರದೇ ಆ ಸೀತೆ  ಅಯ್ಯೋ ರಾಮ, ರಾಮ  ಎಂದು ಕೂಗಿಕೊಂಡು ಅಳುತ್ತಾಳೆ. ಇಂದ್ರಜಿತ್ತು ಆಕೆಯ ತಲೆಗೂದಲನ್ನು ಹಿಡಿದು ಎಳೆದು ಖಡ್ಗದಿಂದ ಹೊಡೆಯುತ್ತಾನೆ. ಈ ದೃಶ್ಯವನ್ನು ನೋಡಲಾಗದೇ ಆಂಜನೇಯ ಅವನಿಗೆ ಶಾಪಕೊಡುತ್ತಾನೆ, ಕಪಿಗಳನ್ನು ಸೇರಿಸಿಕೊಂಡು ಇಂದ್ರಜಿತ್ತುವಿನ ಕಡೆಗೆ ನುಗ್ಗುತ್ತಾನೆ.
ಆಗ ಇಂದ್ರಜಿತ್ತು ಮಾಯಾಸೀತೆಯನ್ನು ಕೊಂದು ಕೆಳಗೆ ಎಸೆದುಬಿಡುತ್ತಾನೆ. ಯಾವ ಹೆಂಗಸು ನೆಲಕ್ಕೆ ಹೀಗೆ ಬಿದ್ದರೆ ಅದು ದುಃಖಕಾರಕವೇ. ಅದರಲ್ಲೂ ಸೀತೆಯಂಥ ಸಾಧ್ವಿಗೆ ಈ ಸ್ಥಿತಿ ಬಂದಾಗ ಯಾರು ಸಹಿಸುತ್ತಾರೆ?

ಹನುಮಂತ ಕಪಿಸೇನೆಯನ್ನು ಕರೆದುಕೊಂಡು ಶ್ರೀರಾಮನ ಸನ್ನಿಧಿಗೆ ಬಂದು ಇಂದ್ರಜಿತ್ತು ಸೀತೆಗೆ ಹೊಡೆದದ್ದನ್ನು ನಂತರ ಆಕೆಯನ್ನು ಕೊಂದುಹಾಕಿದ್ದನ್ನು ಹೇಳುತ್ತಾನೆ. ಈ ಮಾತನ್ನು ಕೇಳಿ ಶ್ರೀರಾಮನು ದುಃಖದಿಂದ ಬಸವಳಿದು, ಬುಡವನ್ನು ಕತ್ತರಿಸಿದ ಮರದಂತೆ ಎಚ್ಚರ ತಪ್ಪಿ ಬೀಳುತ್ತಾನೆ. ಅಣ್ಣ ಹೀಗೆ ಮೂರ್ಛೆ ಹೋಗಿ ಬಿದ್ದದ್ದನ್ನು ಕಂಡು ಲಕ್ಷ್ಮಣ ತನ್ನಣ್ಣನನ್ನು ಎರಡೂ ಕೈಗಳಿಂದ ಅಪ್ಪಿಕೊಂಡು ದುಃಖಪಡುತ್ತಾನೆ. ಅವನ ಮನಸ್ಸಿನ ರೋಷ ಭುಗಿಲ್ಲೆಂದು ಎದ್ದಿದೆ. ಅವನ ಮಾತುಗಳು ಆ ಕೋಪವನ್ನು ಪ್ರಕಟಿಸುತ್ತವೆ.

 ಶುಭೇ ವರ್ತ್ಮನಿ ತಿಷ್ಠಂತಂ ತ್ವಾಮಾರ್ಯ ವಿಜಿತೇಂದ್ರಿಯಮ್
ಅನರ್ಥೇಭ್ಯೋ ನ ಶಕ್ನೋತಿ ತ್ರಾತುಂ ಧರ್ಮೋ ನಿರರ್ಥಕಃ 
-ಸರ್ಗ 83, ಶ್ಲೋಕ 14.

ಅಣ್ಣಾ, ಜಿತೇಂದ್ರಿಯನಾಗಿ ಸದಾಚಾರದಲ್ಲೇ ನಿರತನಾದವನು ನೀನು. ಧರ್ಮವು ನಿನ್ನನ್ನು ಅನರ್ಥಗಳಿಂದ ಪಾರುಮಾಡಲು ಶಕ್ತವಾಗಲಿಲ್ಲ. ಧರ್ಮವೆಂಬುದು  ನಿರರ್ಥಕ.

ದುಃಖತಪ್ತನಾದ ಲಕ್ಷ್ಮಣನ ಬಾಯಿಯಿಂದ ಎಂಥ ಮಾತು ಬರುತ್ತದೆ ನೋಡಿ. ಇದು ಇಂದಿಗೂ ಅನೇಕ ಸಜ್ಜನ, ಸಾತ್ವಿಕ ಜನರ ಮಾತೂ ಹೌದು. ಪ್ರಾಮಾಣಿಕವಾಗಿ ಬದುಕಿದ ವ್ಯಕ್ತಿಗೆ ಅನ್ಯಾಯವಾದಾಗ ಅವರು ಹೇಳುವ ಮಾತೂ ಇದೇ ಅಲ್ಲವೇ? 

ಧರ್ಮವೆಂಬುದು ನಿರರ್ಥಕವಾದದ್ದು. ನಮಗೆಲ್ಲ ಹೀಗೆ ಪದೇ ಪದೇ ಎನ್ನಿಸುತ್ತಿಲ್ಲವೇ? ಈ ಮಾತುಗಳಲ್ಲಿ ಎಷ್ಟೊಂದು ಹತಾಶೆ, ಉದ್ವೇಗ ತುಂಬಿದೆ!

ಲಕ್ಷ್ಮಣ ಇನ್ನೂ ಮುಂದುವರಿದು ಹಣವಿಲ್ಲದವನ ಪಾಡು ಯಾರಿಗೂ ಬೇಡ, ಎಲ್ಲವೂ ಹಣವಿದ್ದವರಿಗೆ ಮಾತ್ರ ದಕ್ಕುತ್ತದೆ ಎಂದು ಸಂಕಟಪಡುತ್ತಾನೆ.

 ಯಸ್ಯಾರ್ಥಸ್ತಸ್ಯ ಮಿತ್ರಾಣಿ ಯಸ್ಯಾರ್ಥಾಸ್ತಸ್ಯ ಬಾಂಧವಾಃ
ಯಸ್ಯಾರ್ಥಾಃ ಸ ಪುಮಾನ್ ಲೋಕೇ ಯಸ್ಯಾರ್ಥಾಃ ಸ ಚ ಪಂಡಿತಃ
ಯಸ್ಯಾರ್ಥಾಃ ಸ ಚ ವಿಕ್ರಾಂತೋ ಯಸ್ಯಾರ್ಥಾಃ ಸ ಚ ಬುದ್ಧಿಮಾನ್
ಯಸ್ಯಾರ್ಥಾಃ ಸ ಮಹಾಭಾಗೋ ಯಸ್ಯಾರ್ಥಾಃ ಸ ಗುಣಾಧಿಕಃ 

 ಹಣವಿದ್ದವನಿಗೆ ಎಲ್ಲರೂ ಮಿತ್ರರೇ, ಎಲ್ಲರೂ ಬಂಧುಗಳೇ! ಈ ಲೋಕದಲ್ಲಿ
ಹಣವಂತನೇ ಪುರುಷ, ಹಣವಂತನೇ ಪಂಡಿತ; ಹಣವುಳ್ಳವನೇ ಪರಾಕ್ರಮಿ,
ಅವನೇ ಬುದ್ಧಿವಂತ! ಹಣವುಳ್ಳವನೇ ದೊಡ್ಡ ಮನುಷ್ಯ, ಅವನೇ ಗುಣಶಾಲಿ. ಇದು ರಾಮಾಯಣದ ಕಾಲದ ಮಾತೇ ಎಂದು ಆಶ್ಚರ್ಯವಾಗುತ್ತದಲ್ಲವೇ? ಮನಸ್ಸು ವಿಹ್ವಲವಾದಾಗ, ನೋವಿನಲ್ಲಿ ಬೆಂದುಹೋದಾಗ ಇಂಥ ಮಾತು ಯಾವ ಕಾಲದಲ್ಲೂ ಬರುತ್ತವೆ. ಶಕ್ತಿಯಿಲ್ಲದಿದ್ದರೂ ಕೇವಲ ಹಣದ ಬೆಂಬಲದಿಂದ, ಅಹಂಕಾರದಿಂದ ಮೆರೆಯುವವರನ್ನು ಕಂಡಾಗ, ಅಧರ್ಮದಿಂದಲೇ ಅಧಿಕಾರವನ್ನು, ಅದರ ಮೂಲಕ ಜನಮನ್ನಣೆಯನ್ನು ಪಡೆದವರನ್ನು ನೋಡಿದಾಗ ಧರ್ಮ ನಿಷ್ಪ್ರಯೋಜಕ ಎನ್ನಿಸೀತು. ಆದರೆ ಅದು ಸರಿಯಲ್ಲ. ಮುಂದೆ ರಾಮಾಯಣದಲ್ಲಿ ಇದೇ ಲಕ್ಷ್ಮಣ ಅಣ್ಣ ಶ್ರೀರಾಮನ ಧರ್ಮರಕ್ಷಣೆಗೆ ಒತ್ತಾಸೆಯಾಗಿ ನಿಂತು ಹೋರಾಡಿ ಅಧರ್ಮಿ ರಾವಣನ ಪರಿವಾರವನ್ನು ಕೊಂದದ್ದನ್ನು ನೋಡಿದ್ದೇವೆ. ಇಂದಿಗೂ ಕೆಲಕಾಲ ಮದಾಂಧರಾಗಿ, ಅಧರ್ಮದಿಂದ ಹಣಗಳಿಸಿ ಮೆರೆದು ಈಗ ಜೈಲಿನ ಕಂಬಿಗಳ ಹಿಂದೆ ತೋರಿಕೆಯ ಪಶ್ಚಾತ್ತಾಪದ ಕಣ್ಣೀರು ಸುರಿಸುವವರನ್ನೂ ಕಂಡಿದ್ದೇವೆ.

ಅಧರ್ಮ ದೀಪಾವಳಿಯಲ್ಲಿ ಮಕ್ಕಳು ಹಚ್ಚುವ ಬೆಂಕಿಯ ಕುಂಡದಂತೆ. ಅದು ಬಣ್ಣಬಣ್ಣದ ಕಿರಣಗಳನ್ನು, ಕಿಡಿಗಳನ್ನು ಹಾರಿಸುತ್ತ ಕಣ್ಣು ಕೋರೈಸುವಾಗ ತುಂಬ ಆಕರ್ಷಕವಾಗಿ ಕಾಣುತ್ತದೆ. ಆದರೆ ಅದು ಉರಿಯುವುದು ಕ್ಷಣಕಾಲ ಮಾತ್ರ. ಮತ್ತೆ ಅಂಧಕಾರ. ಧರ್ಮ, ದೇವರ ಮುಂದೆ ಹಚ್ಚಿದ ನಂದಾದೀಪ. ಅದು ಕಣ್ಣು ಕೋರೈಸಲಾರದು, ಆದರೆ ಹೆಚ್ಚು ಕಾಲ ಬದುಕುವಂಥದ್ದು, ನೆಮ್ಮದಿ ನೀಡುವಂಥದ್ದು. ಅದು ನಮಗೆ ಬೇಕಾದದ್ದು.

Krupe: Prajavani : 18 July 2011
http://www.prajavani.net/web/include/story.php?news=1665&section=136&menuid=14

Thursday, July 28, 2011

ಜನುಮದ ಜಾತ್ರಿ .............ದ.ರಾ.ಬೇಂದ್ರೆ

ನೇತ್ರಪಲ್ಲವಿಯಿಂದ ಸೂತ್ರಗೊಂಬೀ ಹಾಂಗ
ಪಾತ್ರ ಕುಣಿಸ್ಯಾನ ಒಲುಮೀಗೆ | ದಿನದಿನ
ಜಾತ್ರಿಯೆನಿಸಿತ್ತ ಜನುಮವು. ||೧||

ಹುಬ್ಬು ಹಾರಸಿದಾಗ ಹಬ್ಬ ಎನಿಸಿತು ನನಗ
‘ಅಬ್ಬ’ ಎನಬೇಡs ನನ ಗೆಣತಿ | ಸಾವಿರಕ
ಒಬ್ಬ ನೋಡವ್ವ ನನ ನಲ್ಲ. ||೨||


ಕಣ್ಣೆವಿ ಎತ್ತಿದರ ಹುಣ್ಣೀವಿ ತೆರಧ್ಹಾಂಗ
ಕಣ್ಣು ಏನಂತ ಬಣ್ಣಿಸಲೆ | ಚಿತ್ತಕ್ಕ
ಕಣ್ಣು ಬರೆಧ್ಹಾಂಗ ಕಂಡಿತ್ತು. ||೩||

ಹೇಸಿರಲು ಈ ಜೀವ ಆಸಿ ಹುಟ್ಟಿಸುತಿತ್ತು
ಮೀಸಿ ಮೇಲೆಳೆದ ಕಿರಿಬೆರಳು | ಕೆಂಗಯ್ಯ
ಬೀಸಿ ಕರೆದಾನ ನನಗಂತ. ||೪||

ತಂಬುಲತುಟಿ ನಗಿ ಹೊಂಬಿಸಲೆಂಬಂತೆ
ಬಿಂಬಿಸಿತವ್ವಾ ಎದಿಯಾಗ | ನಂಬೀಸಿ
ರಂಬೀಸಿತವ್ವಾ ಜೀವವ. ||೫||
-- ದ.ರಾ.ಬೇಂದ್ರೆ

ಕೃಪೆ: ಸುನಾಥ್
ಮೂಲ ಲೇಖನ: http://sallaap.blogspot.com/2011/07/blog-post.html

ಸಂಯಮವುಳ್ಳ ಶಕ್ತಿ

ಅದೊಂದು ಕರಾಟೆ ತರಬೇತಿ ನೀಡುವ ಶಾಲೆ. ಆ ಶಾಲೆಯ ಮುಖ್ಯಗುರುಗಳು ಈ ಕಲೆಗಾಗಿ ಜೀವನವನ್ನೇ ಮುಡಿಪಾಗಿಟ್ಟು ತಮ್ಮ ಶಿಷ್ಯರಿಗೆಲ್ಲ ಆದರ್ಶಪ್ರಾಯರಾದವರು. ಅವರಿಗೆ ಕರಾಟೆಯ ಪಾಠ ಹೊಟ್ಟೆಪಾಡಿನ ಉದ್ಯೋಗವಾಗಿರಲಿಲ್ಲ, ತರುಣ, ತರುಣಿಯರ ಜೀವನವನ್ನು ಪರಿಷ್ಕಾರಗೊಳಿಸುವ ಒಂದು ಕ್ರಿಯೆಯಾಗಿತ್ತು.

ಹಲವಾರು ಮಕ್ಕಳು, ತರುಣರು ಇಲ್ಲಿ ಕರಾಟೆ ಕಲಿಯುತ್ತಿದ್ದರು. ಒಬ್ಬ ಹುಡುಗ ಈ ಗುರುಗಳ ಹತ್ತಿರ ತನ್ನ ಐದನೇ ವಯಸ್ಸಿನಿಂದ ಕರಾಟೆ ಕಲಿಯಲು ಬರುತ್ತಿದ್ದ. ಹದಿನೈದು ವರ್ಷಗಳ ನಿರಂತರ ಪರಿಶ್ರಮದ ಸಾಧನೆಯಿಂದ ಆತ ಅತ್ಯಂತ ಶ್ರೇಷ್ಠ ಕರಾಟೆ ಪಟುವಾಗಿ ಹೊಮ್ಮಿದ. ಅತ್ಯಂತ ಶ್ರೇಷ್ಠ ಕರಾಟೆ ಸಾಧನೆ ಮಾಡಿದವನಿಗೆ  ಬ್ಲ್ಯಾಕ್ ಬೆಲ್ಟ್  ಅಂದರೆ ಕಪ್ಪುಪಟ್ಟಿಯನ್ನು ನೀಡಲಾಗುತ್ತದೆ.

ಅದನ್ನು ವಿಶೇಷ ಸಮಾರಂಭದಲ್ಲಿ ನೀಡಲು ಆಯೋಜಿಸಲಾಗಿತ್ತು. ಅದು ಆ ತರುಣನ ಕರಾಟೆ ಜೀವನದ ಮರೆಯಲಾಗದ ಸಂದರ್ಭ. ಆತ ತುಂಬ ಖುಷಿಯಾಗಿದ್ದ. ಆ ದಿನವೂ ಬಂತು.

ಕಾರ್ಯಕ್ರಮವನ್ನು ನೋಡಲು ತುಂಬ ಜನ ಬಂದಿದ್ದರು. ಹುಡುಗ ಎದ್ದು ತನ್ನ ಕಪ್ಪು ಪಟ್ಟಿಯನ್ನು ಪಡೆಯಲು ಗುರುವಿನ ಪೀಠದತ್ತ ಸಾಗಿದ.

`ಕಪ್ಪುಪಟ್ಟಿ ಪಡೆಯುವ ಎ್ಲ್ಲಲ ಅರ್ಹತೆಯನ್ನು ನೀನು ಪಡೆದುಕೊಂಡಿರುವುದು ಸಂತೋಷ, ಆದರೆ ಅದನ್ನು ಪಡೆಯುವುದಕ್ಕೆ ಮುನ್ನ ಇನ್ನೊಂದು ಮಹತ್ವದ ಪರೀಕ್ಷೆಯಲ್ಲಿ ಉತ್ತಿರ್ಣನಾಗಬೇಕು`  ಎಂದರು ಗಂಭೀರವಾಗಿ ಗುರುಗಳು.

`ನಾನು ಸಿದ್ಧವಾಗಿದ್ದೇನೆ ಗುರುಗಳೇ`  ಎಂದ ಶಿಷ್ಯ. ಬಹುಶಃ ಮತ್ತೊಂದು ದೈಹಿಕ ಪರೀಕ್ಷೆ ಇದ್ದಿರಬೇಕು ಎಂದು ಭಾವಿಸಿದ.`ಈಗ ನಾನು ಕೇಳುವ ಬಹುಮುಖ್ಯವಾದ ಪ್ರಶ್ನೆಗೆ ನೀನು ಸರಿಯಾದ ಉತ್ತರ ನೀಡಬೇಕು. ಈ ಕಪ್ಪುಪಟ್ಟಿಯ (ಬ್ಲ್ಯಾಕ್ ಬೆಲ್ಟ್ )  ನಿಜವಾದ ಅರ್ಥವೇನು?`

`ಗುರುಗಳೇ ಬಂದು ರೀತಿಯಲ್ಲಿ ಇದು ಮಹಾನ್ ಪ್ರಯಾಣದ ಅಂತಿಮ ಹಂತ. ದೀರ್ಘ ಕಾಲದ ಪರಿಶ್ರಮದ ಕಲಿಕೆಗೆ ದೊರೆತ ಪಾರಿತೋಷಕ.`ಗುರುಗಳು ಕ್ಷಣಕಾಲ ಯಾವ ಮಾತೂ ಆಡದೇ ನಿಂತು ನಂತರ ನಿಧಾನವಾಗಿ ಹೇಳಿದರು, `ನೀನು ಇನ್ನೂ ಕಪ್ಪು ಪಟ್ಟಿಗೆ ಸಿದ್ಧನಾಗಿಲ್ಲ, ಇನ್ನೊಂದು ವರ್ಷ ಪ್ರಯತ್ನಮಾಡಿ ಮರುವರ್ಷ ಬಾ.`
ಒಂದು ವರ್ಷದ ನಂತರ ಮತ್ತೆ ತರುಣ ಮೊಣಕಾಲೂರಿ ಗುರುವಿನ ಮುಂದೆ ಕಪ್ಪು ಪಟ್ಟಿಗಾಗಿ ಕುಳಿತ.

`ಈಗ ಹೇಳು ಕಪ್ಪುಪಟ್ಟಿಯ ನಿಜವಾದ ಅರ್ಥವೇನು?`  ಕೇಳಿದರು ಗುರುಗಳು.  `ಪರಿಶ್ರಮ ಸಾರ್ಥಕವಾದದ್ದರ ಸಂಕೇತ ಈ ಕಪ್ಪುಪಟ್ಟಿ` ಎಂದು ನುಡಿದ ಶಿಷ್ಯ.
ಗುರು ಮತ್ತೆ ಕ್ಷಣಕಾಲ ಸುಮ್ಮನಿದ್ದು ತಲೆ ಅಲ್ಲಾಡಿಸಿ ಅಸಮ್ಮತಿ ವ್ಯಕ್ತಪಡಿಸಿ,  `ಮಗೂ, ನೀನು ಇನ್ನೊಂದು ವರ್ಷ ಸಾಧನೆ ಮುನ್ನಡೆಸಿ ಬಾ` ಎಂದು ನಡೆದುಬಿಟ್ಟರು.

ಮುಂದಿನ ವರ್ಷ ಅದೇ ದಿನ ಗುರುಗಳು ಮತ್ತೆ ಅದೇ ಪ್ರಶ್ನೆ ಕೇಳಿದರು.  `ಈ ಕಪ್ಪುಪಟ್ಟಿಯ ನಿಜವಾದ ಅರ್ಥವೇನು?`ಈ ಬಾರಿ ಹುಡುಗ ನಿಧಾನವಾಗಿ ಹೇಳಿದ,  `ಗುರುಗಳೇ ಈ ಕಪ್ಪುಪಟ್ಟಿ ಸಾಧನೆಯ ಅಂತ್ಯವಲ್ಲ, ಪ್ರಾರಂಭ.

ಸದಾ ಉನ್ನತದ ಸಾಧನೆಯೆಡೆಗೆ ತುಡಿಯುವ, ಎಂದಿಗೂ ಮುಗಿಯದ ಸಾಧನೆಯ ಪ್ರಯಾಣದ ಪ್ರಾರಂಭದ ಸಂಕೇತ. ಇದು ಅಸಾಮಾನ್ಯ ಶಕ್ತಿಯ ದ್ಯೋತಕವಲ್ಲ, ಶಕ್ತಿಯಿದ್ದೂ ಅದನ್ನು ದುರ್ಬಳಕೆ ಮಾಡದಿರುವ ಸಂಯಮದ ಸಂಕೇತ.`
ಗುರುಗಳು ತಲೆ ಅಲ್ಲಾಡಿಸಿ ಮೆಚ್ಚುಗೆ ಸೂಸಿ,  `ಈಗ ನೀನು ಕಪ್ಪುಪಟ್ಟಿಗೆ ಅರ್ಹನಾಗಿದ್ದೀಯಾ` ಎಂದು ಅವನನ್ನು ಅಪ್ಪಿಕೊಂಡು ಕಪ್ಪುಪಟ್ಟಿ ನೀಡಿದರು.

ರಾಕ್ಷಸರ ಹಾಗೆ ವಿಪರೀತ ಶಕ್ತಿ ಪಡೆಯುವುದು ದೊಡ್ಡದಲ್ಲ, ಭಾರೀ ಶಕ್ತಿ ಇದ್ದೂ ಅದನ್ನು ರಾಕ್ಷಸರ ಹಾಗೆ ಬಳಸದಿರುವುದು ಬಹುದೊಡ್ಡ ಶಕ್ತಿ. ಅದೇ ಸಂಯಮ.ಸಂಯಮವಿಲ್ಲದ ಶಕ್ತಿ ಘಾತಕವಾದದ್ದು. ಅದಕ್ಕೇ ಕವಿ ಹೇಳಿದ್ದು,  ವೈರಾಗ್ಯ, ಕಾರುಣ್ಯ ಮೇಳನವೇ ಧೀರತನ . ಕರುಣೆ, ಮತ್ತು ವೈರಾಗ್ಯವಿಲ್ಲದ ಶಕ್ತಿ ಅಪಾಯಕಾರಿಯಾದದ್ದು.

ಶಕ್ತಿ ಇದ್ದೂ ಅದನ್ನು ವೈರಾಗ್ಯದಿಂದ, ಕರುಣೆಯಿಂದ ಕಾಣುವ ಶಕ್ತಿಯೇ ಧೀರತನ, ಅದರಿಂದಲೇ ಜಗತ್ತಿನ ಬೆಳವಣಿಗೆ, ರಕ್ಷಣೆ ಸಾಧ್ಯವಾಗುತ್ತದೆ.

Krupe Prajavani  06 July 2011

Wednesday, July 27, 2011

ಸಂಸ್ಕಾರ.. ಮತ್ತು ಇತರ ಕಥೆಗಳು

ಕನ್ನಡದಲ್ಲಿ ದ್ವನಿ ಪುಸ್ತಕಗಳ ಸರಣಿಗೆ ಮತ್ತೋಂದು ಪುಸ್ತಕ.. ಸಂಸ್ಕಾರ.. ಮತ್ತು ಇತರ ಕಥೆಗಳು
ಅನಂತ ಮೂರ್ತಿಯವರ ಸಂಸ್ಕಾರ ಕಾದಂಬರಿಯನು ಸಿ ಅರ್ ಸಿಂಹ ವಾಚನ ಮಾಡಿದರೆ.
ಇತರೆ ಕಥೆಗಳು - ಕಾರ್ತಿಕ ಮತ್ತು ಸೂರ್ಯನ ಕುದರೆಯನ್ನು..ರೇಖಾ ಮತ್ತು ಋತ್ವಿಕ ಸಿಂಹ ರವರು ವಾಚನ ಮಾಡಿದರೆ....  9.23 ಗಂಟೆಗಳ.. ದ್ವನಿ ಪುಸ್ತಕ ಇದು...

http://www.bookstalk.in/

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......