Friday, July 24, 2015

ಶ್ರೀ ಗಣೇಶಭಟ್ಟ ಕೊಪ್ಪಲತೋಟರ ಮೂರನೆಯ ಅಷ್ಟಾವಧಾನಕಾರ್ಯಕ್ರಕೆ ಅಮಂತ್ರಣ

ಆತ್ಮೀಯಮಿತ್ರರಿಗೆಲ್ಲ ನಮಸ್ಕಾರ,
ಇದೇ ತಿಂಗಳು ಇಪ್ಪತ್ತೈದನೆಯ ತಾರೀಖು ಶನಿವಾರದಂದು ಬೆಳಗ್ಗೆ ಹತ್ತುಗಂಟೆಗೆ ಬಸವನಗುಡಿ ರಸ್ತೆಯಲ್ಲಿರುವ ಗೋಖಲೆ ಸಾರ್ವಜನಿಕವಿಚಾರಸಂಸ್ಥೆಯಲ್ಲಿ ನಮ್ಮ ಯುವಮಿತ್ರರೂ ಸಾಹಿತ್ಯರಸಿಕರೂ ಆದ
ಶ್ರೀ ಗಣೇಶಭಟ್ಟ ಕೊಪ್ಪಲತೋಟರ ಮೂರನೆಯ ಅಷ್ಟಾವಧಾನಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದಕ್ಕೆ ಪ್ರಾಯೋಜಕರಾಗಿ ಒದಗಿ ಬಂದವರು ನಮ್ಮ ಪದ್ಯಪಾನ ಬಳಗದವರೇ ಆದ ಶ್ರೀ.ಸೋಮಶೇಖರಶರ್ಮ, ಶ್ರೀ.ರವಿಶಂಕರ್ ಮತ್ತು ಶ್ರೀ.ಶ್ರೀಧರ್ ಸಾಲಿಗ್ರಾಮ ಅವರ ಪೂಜ್ಯಮಾತಾಪಿತರು.ಇದಕ್ಕಾಗಿ ಅವರಿಗೆ ವಿಶೇಷಕೃತಜ್ಞತೆಗಳು.
ಶ್ರೀ ಗಣೇಶಭಟ್ಟ ಕೊಪ್ಪಲತೋಟ
ಈ ಅವಧಾನದಲ್ಲಿ ಪೃಚ್ಛಕರಾಗಿ ಪಾಲ್ಗೊಳ್ಳಲು ಪ್ರೀತಿಯಿಂದ ಒಪ್ಪಿದವರು :
ಶ್ರೀ. ಎಮ್ ಆರ್ ಚಂದ್ರಮೌಳಿ (ನಿಷೇಧಾಕ್ಷರಿ)
ಶ್ರೀ. ಮಂಜುನಾಥ ಕೊಳ್ಳೇಗಾಲ (ಸಮಸ್ಯಾಪೂರಣ)
ಶ್ರೀ. ಬಿ ಆರ್ ಪ್ರಭಾಕರ್ (ದತ್ತಪದೀ)
ಶ್ರೀಮತಿ. ಉಷಾ ಉಮೇಶ್ (ನ್ಯಸ್ತಾಕ್ಷರೀ)
ಶ್ರೀ. ಸುಧೀರ್ ಕೃಷ್ಣಸ್ವಾಮಿ (ಆಶುಕವಿತೆ)
ಶ್ರೀಮತಿ. ಶ್ರೀಲಲಿತಾ ರೂಪನಗುಡಿ (ಕಾವ್ಯವಾಚನ)
ಶ್ರೀ. ರಂಗನಾಥ ಪ್ರಸಾದ್ (ಸಂಖ್ಯಾಬಂಧ)
ಶ್ರೀ. ಆರ್ ಗಣೇಶ್ (ಅಪ್ರಸ್ತುತಪ್ರಸಂಗ)

ಅಷ್ಟಾವಧಾನಿ ಕೊಪ್ಪಲತೋಟರು ಕೇವಲ ಇಪ್ಪತ್ತಾರು ವರ್ಷಗಳ ಕಿರಿಯ ಹರೆಯದಲ್ಲಿಯೇ ಮಾಡಿರುವ ಸಾಹಿತ್ಯಸಾಧನೆ ಸ್ತುತ್ಯವಾಗಿದೆ. ಅವರು ಈಗಾಗಲೇ ಕಥೆ, ಕಾದಂಬರಿ, ಕವಿತೆ, ಖಂಡಕಾವ್ಯ ಮುಂತಾದ ಪ್ರಕಾರಗಳಲ್ಲಿ ದುಡಿದಿದ್ದಾರೆ. ಅಲ್ಲದೆ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಸಾಹಿತ್ಯಗಳಲ್ಲಿ ಒಳ್ಳೆಯ ಅಧ್ಯಯನವನ್ನೂ ಮಾಡಿದ್ದಾರೆ. ಜೊತೆಗೆ ಒಳ್ಳೆಯ ಧಾರೆ, ಧಾರಣ ಮತ್ತು ಪ್ರತಿಭೆ-ಪಾಂಡಿತ್ಯಗಳ ಹದವುಳ್ಳ ತಮ್ಮ ಮೊದಲ ಅವಧಾನದ ಮೂಲಕವೇ ವಿದ್ವದ್ರಸಿಕರಲ್ಲಿ ಹೊಸಭರವಸೆಯನ್ನೂ ಮೂಡಿಸಿದ್ದಾರೆ. ಇಂಥ ಮೇಧಾವಿಗಳಾದ ತರುಣರ ವಿಶಿಷ್ಟಕಲೆಯನ್ನು ಮೆಚ್ಚಿ ಆದರಿಸಲು ಕನ್ನಡಸಾಹಿತ್ಯರಸಿಕರೂ ಅವಧಾನಕಲಾಪ್ರೇಮಿಗಳೂ ಬರಬೇಕೆಂದು ವಿನಂತಿ. ಎಲ್ಲ ಕಾವ್ಯರಸಿಕರಿಗೂ ಆದರದ ಸ್ವಾಗತ.



ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಗಿರೀಶ್ ಕಾಸರವಳ್ಳಿ ಚಿತ್ರೋತ್ಸವ


ಜು. 25ರಿಂದ ಜು. 29ರವರೆಗೆ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಗಿರೀಶ್ ಕಾಸರವಳ್ಳಿ ಚಿತ್ರೋತ್ಸವ ಆಯೋಜನೆಗೊಂಡಿದೆ.  

Wednesday, July 22, 2015

ವಂಶ ವೃಕ್ಷ ಕಾದಂಬರಿ ಕುರಿತಾದ ಅನಿಸಿಕೆಗೆ - ಶಿವಕುಮಾರ್

ನಮಸ್ಕಾರ !!
ವಂಶವೃಕ್ಷಕ್ಕೆ ಐವತ್ತು ವರ್ಷಗಳು ತುಂಬಿರಬಹುದು ಆದರೆ ನಾನು ಅದನ್ನು ಓದಿದ್ದು ನಾಲ್ಕು ವರ್ಷಗಳ ಹಿಂದೆ !! ನಂತರ ಐದು ಬಾರಿ ಇದನ್ನು ಓದಿದ್ದೆನೆ. ನನ್ನ ಹುಟ್ಟು ಹಬ್ಬಕ್ಕೆ ನನ್ನ ಆಪ್ತ ಗೆಳೆಯ ಶಂಕರ್ ಕವಲು ಕಾದಂಬರಿಯನ್ನು ಉಡುಗೊರೆಯಾಗಿ ಕೊಟ್ಟಿದ್ದ. ಆಗ ನಾನು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. (ಭೈರಪ್ಪನವರು ಇಲ್ಲೇ ಕಾರ್ಯ ನಿರ್ವಹಿಸಿ ನಿವೃತ್ತರಾದರು) ಆಗಿನಿಂದ ನಾನು ಭೈರಪ್ಪನವರ ಪುಸ್ತಕಗಳನ್ನು ಓದಲು ಶುರು ಮಾಡಿದ್ದು. ಅಲ್ಲಿದ್ದ ಶೀಘ್ರಲಿಪಿಗಾರರಾದ ಜಗದೀಶ್ ಭೈರಪ್ಪನವರ ಬಗ್ಗೆ ಬಹಳ ಹೇಳುತ್ತಿದ್ದರು (ಇವರ ಹೆಸರನ್ನು ಭೈರಪ್ಪನವರು ತಮ್ಮ ಭಿತ್ತಿ ಪುಸ್ತಕದಲ್ಲಿ
ನೆನಪಿಸಿಕೊಂಡಿದ್ದಾರೆ) ಮತ್ತು ಭೈರಪ್ಪನವರ ಅಭಿಮಾನಿ ಹಾಗು ಅವರ ಬೋಧನೆಯನ್ನು ಕೇಳಿದ್ದ ಮತ್ತು ಈಗ ಅದೇ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿರುವ ನನ್ನ ಗುರುಸಮಾನರಾದ ಡಾ. ಗೌರಮ್ಮ ಭೈರಪ್ಪನವರ ಬಗ್ಗೆ ಹೇಳುತ್ತಿದ್ದಲ್ಲದೆ ಅವರ ಕಾದಂಬರಿಗಳ ಬಗ್ಗೆ ನನ್ನೊಡನೆ ಚರ್ಚಿಸುತ್ತಿದರು. ನಂತರ ನಾನು ನ್ಯಾಯಾಂಗ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ ನಂತರ ಎರಡು ವರ್ಷಗಳ ಹಿಂದೆ ಚಾಮರಾಜನಗರಕ್ಕೆ ವರ್ಗವಾದೆ. ದಿನಾ ಬೆಳಿಗ್ಗೆ ೭. ೩೦ ಗಂಟೆಯ ರೈಲಿನಲ್ಲಿ ಪ್ರಯಾಣ ಮತ್ತೆ ಸಂಜೆ ೬ ಗಂಟೆಗೆ ವಾಪಾಸ್ಸು ಮೈಸೂರಿಗೆ ರೈಲಿನಲ್ಲಿ ಬರುತ್ತಿದ್ದೆ. ಹೋಗುವಾಗ ಬರುವಾಗ ಒಂದೂವರೆ ತಾಸಿನ ಸಮಯದಲ್ಲಿ ಭೈರಪ್ಪನವರ ಕಾದಂಬರಿಗಳನ್ನು ಓದುತ್ತಿದ್ದೆ. ರೈಲು ನಂಜನಗೂಡು ಮಾರ್ಗವಾಗಿ ಹೋಗುವಾಗ ಪ್ರತಿದಿನ ಕಾತ್ಯಾಯನಿ ಶೋತ್ರಿಗಳು ಮತ್ತಿತರೇ ಪಾತ್ರಗಳು ಜ್ಞಾಪಕಕ್ಕೆ ಬರುತ್ತವೆ. ಇಲ್ಲಿ ಇನ್ನೊಂದು ಹೇಳಲೇ ಬೇಕಾದ ವಿಚಾರವಿದೆ. ನೀವು ಯಾರಾದರು ನಂಜನಗೂಡಿಗೆ ಅಥವಾ ಚಾಮರಾಜನಗರಕ್ಕೆ ಮೇಲೆ ತಿಳಿಸಿದ ರೈಲಿನಲ್ಲಿ ಪ್ರಯಾಣ ಮಾಡುವ ಸಂಧರ್ಭ ಬಂದರೆ ಐದನೇ ಬೋಗಿಗೆ ಬಂದರೆ ಸೀಟ್ ನಂಬರ್ ೪೦ ರಿಂದ ೬೮ ರ ವರೆಗೆ ಭೈರಪ್ಪನವರ ಕಾದಂಬರಿಗಳ ಬಗ್ಗೆ ಮತ್ತು ಪಾತ್ರಗಳ ಬಗ್ಗೆ ಪ್ರತಿ ನಿತ್ಯ ಚರ್ಚೆ ನಡೆಯುತ್ತಲೇ ಇರುವುದನ್ನು ನೋಡಬಹುದು ! ನೀವು ಪಾಲ್ಗೊಳ್ಳಬಹುದು, ಇದರಲ್ಲಿ ಇರುವವರೆಲ್ಲ ವೃತ್ತಿಯಲ್ಲಿ ವಿವಿಧ ಇಲ್ಲಖೆಗಳವರು. ಭೈರಪ್ಪನವರ ಪುಸ್ತಕಗಳು ಇಲ್ಲಿ ಸರ್ಕ್ಯುಲೇಟ್ ಆಗುತ್ತಿರುತ್ತದೆ. ಹೀಗೆ ನಾವೆಲ್ಲಾ ಭೈರಪ್ಪನವರ ಪುಸ್ತಕಗಳನ್ನು ಓದಿ ಚರ್ಚಿಸುತ್ತಿರುತ್ತೇವೆ. ರೈಲು ನಂಜನಗೂಡಿನ ಸೇತುವೆ ದಾಟಿ ಗುಂಡ್ಲು ಹೊಳೆಯನ್ನು ದಾಟಿ ಹೋಗುವುದರೊಳಗೆ ಕಾತ್ಯಾಯಿನಿ ದಿನನಿತ್ಯ ಇದೇ ರೈಲಿನಲ್ಲಿ ಚಲಿಸಿರಬಹುದು ಎಂಬ ಭಾವ ಬಹುತೇಕರನ್ನು ಕಾಡಿದೆ. ಕೆಲವೊಮ್ಮೆ ಕಪಿಲಾ ನದಿಯಲ್ಲಿ ನೀರು ತುಂಬಿ ಹರಿಯುವಾಗ ಶೋತ್ರಿಗಳ ಮಗ ಹೀಗೆ ನದಿ ನೀರು ತುಂಬಿ ಹರಿಯುವಾಗ ಮೃತ ಪಟ್ಟಿರ ಬಹುದೇ ಎಂಬ ಆಲೋಚನೆ ಬರುತ್ತದೆ. ಇದು ನನ್ನೊಬ್ಬನ ಕಲ್ಪನೆಯಲ್ಲ. ನನ್ನೊಡನೆ ಈ ವಿಚಾರಗಳ ಬಗ್ಗೆ ಬಹುತೇಕರು ಚರ್ಚಿಸಿದ್ದಾರೆ. ಇವರು ಯಾರೂ ಫೇಸ್ ಬುಕ್ ನಲ್ಲಿ ಇಲ್ಲ.. ಸ್ಮಾರ್ಟ್ ಫೋನ್ ಇವರೆಲ್ಲರ ಬಳಿ ಇಲ್ಲ ! ಆದರೆ ಭೈರಪ್ಪನವರ ಬಗ್ಗೆ ಈ ಫೇಸ್ಬುಕ್ ಗ್ರೂಪ್ ನಲ್ಲಿ ಆಗುವ ಚರ್ಚೆಗಳಿಗಿಂತಲೂ ವಿಭಿನ್ನವಾದ ಚರ್ಚೆಗಳು ಆಗುತ್ತವೆ. ಇನ್ನು ಅನೇಕ ವಿಚಾರಗಳು ಇವೆ. ವಂಶವೃಕ್ಷಕ್ಕೆ ಐವತ್ತು ವರ್ಷಗಳು ತುಂಬಿದ ಈ ಸಂದರ್ಭದಲ್ಲಿ ವಂಶವೃಕ್ಷದ ಬಗ್ಗೆ ಒಂದುದಿನ ಮುಂದಿನವಾರದಲ್ಲಿ ನಾವೆಲ್ಲಾ ರೈಲಿನಲ್ಲಿ ಚರ್ಚೆ ಮಾಡಿ, ನಡೆದ ಸಂಗತಿಯನ್ನು ಇಲ್ಲಿ ಹಾಕುತ್ತೇನೆ. ಆ ಸಮದಯದ ಫೋಟೋ ತೆಗೆದು ಈ ಗ್ರೂಪಿನಲ್ಲಿ ಹಾಕುತ್ತೇನೆ.

 ಡಾ|| ಶಿವಕುಮಾರ್

ಹಕ್ಕಿ ಹಾರುತಿದೆ ನೋಡಿದಿರಾ? - ದ ರಾ ಬೇಂದ್ರೆ,

ದ ರಾ ಬೇಂದ್ರೆ, 
ಹಕ್ಕಿ ಹಾರುತಿದೆ ನೋಡಿದಿರಾ?
ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತುಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ?

ಕರಿನರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ -ಗರಿಯುಂಟು
ಕೆನ್ನನ ಹೊನ್ನನ ಬಣ್ಣ-ಬಣ್ಣಗಳ
ರೆಕ್ಕೆಗಳೆರಡೂ ಪಕ್ಕದೊಲುಂಟು
ಹಕ್ಕಿ ಹಾರುತಿದೆ ನೋಡಿದಿರಾ?

ನೀಲಮೇಘಮಂಡಲ-ಸಮ ಬಣ್ಣ
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ
ಚಿಕ್ಕಿಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ?

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ?

ಯುಗ-ಯುಗಗಳ ಹಣೆ ಬರಹವ ಒರಸಿ
ಮನ್ವಂತರಗಳ ಭಾಗ್ಯವ ತರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ?

ಮುಟ್ಟಿದೆ ದಿಗ್ಮಂಡಲ ಅಂಚ
ಆಚಿಗೆ ಚಾಚಿದೆ ತನ್ನಯ ಕುಂಚ
ಬ್ರಹ್ಮಾಂಡಲಗಳ ಒಡೆಯಲು ಎಂದೊ
ಬಲ್ಲರು ಯಾರಾ ಹಾಕಿದ ಹೊಂಚ!
ಹಕ್ಕಿ ಹಾರುತಿದೆ ನೋಡಿದಿರಾ?


ನಾದಲೀಲೆ - ಕುರುಡು ಕಾಂಚಾಣ

ದ.ರಾ. ಬೇಂದ್ರೆ (ಅಂಬಿಕಾತನಯದತ್ತ) | ನಾದಲೀಲೆ
ಕುರುಡು ಕಾಂಚಾಣ ಕುಣಿಯುತಲಿತ್ತು
ಕಾಲಿಗೆ ಬಿದ್ದವರ ತುಳಿಯುತಲಿತ್ತೊs
ಕುರುಡು ಕಾಂಚಾಣ || ಪಲ್ಲವಿ ||

ಬಾಣಂತಿಯೆಂಬಾ ಸಾ-
ಬಾಣದ ಬಿಳುಪಿನಾ
ಕಾಣದ ಕಿರುಗೆಜ್ಜೆ ಕಾಲಾಗೆ ಇತ್ತೋ
ಸಣ್ಣ ಕಂದಮ್ಮಗಳ
ಕಣ್ಣೀನ ಕವಡಿಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;

ಬಡವರ ಒಲವಿನ
ಬಡಬಾsನಲದಲ್ಲಿ
ಸುಡು ಸುಡು ಪಂಜವು ಕೈಯೊಳಗಿತ್ತೊ;
ಕಂಬನಿ ಕುಡಿಯುವ
ಹುಂಬ ಬಾಯಿಲೆ ಮೈ-
ದುಂಬಿದಂತಧೊ ಉಧೊ ಎನ್ನುತ್ತಲಿತ್ತೊ;

ಕೂಲಿ ಕಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯೊಳಗಿತ್ತೊ;
ಗುಡಿಯೊಳಗೆ ಗಣಣ ಮಾ-
ಹಡಿಯೊಳಗೆ ತನನ ಅಂ-
ಗಡಿಯೊಳಗ ಝಣಣ ನುಡಿಗೊಡುತ್ತಿತ್ತೋ;

ಹ್ಯಾಂಗಾರೆ ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತೋ, ಹೆಗಲಿ ಎತ್ತೋ.

(ಅಂಬಿಕಾತನಯದತ್ತ) | ಭಾವಗೀತೆ | ಶ್ರಾವಣ
ಮುಗಿಲ ಮಾರಿಗೆ ರಾಗರತಿಯಾ....
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ನೆಲದ ಅಂಚಿಗೆ ಮಂಜಿನ ಮುಸುಕೂ
ಹ್ಯಾಂಗೋ ಬಿದ್ದಿತ್ತಾ, ಗಾಳಿಗೆ ಮೇಲಕ್ಕೆದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ

ಬಿದಿಗಿ ಚಂದ್ರನ ಚೊಗಚಿ ನಗಿವು
ಮೆಲ್ಲಗ ಓಡಿತ್ತ, ಮ್ಯಾಲಕ ಬೆಳ್ಳಿನ ಕೂಡಿತ್ತ
ಬಿದಿಗಿ ಚಂದ್ರನ ಚೊಗಚಿ ನಗಿವು
ಮೆಲ್ಲಗ ಓಡಿತ್ತ, ಮ್ಯಾಲಕ ಬೆಳ್ಳಿನ ಕೂಡಿತ್ತ
ಇರುಳ ಹರಳಿನ ಅರಳ ಮಲ್ಲಿಗೆ
ಜಾವಿಗೆ ಹಾಂಗಿತ್ತ, ಸೂಸ್ಯಾವ ಚಿಕ್ಕೆ ಹತ್ತಿತ್ತ

ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ

ಬೊಗಸೆಗಣ್ಣಿನ ಬಯಕೆ ಹೆಣ್ಣು
ನೀರಿಗೆ ಹೋಗಿತ್ತ.. ತಿರುಗಿ ಮನೆಗೆ ಸಾಗಿತ್ತ..
ಬೊಗಸೆಗಣ್ಣಿನ ಬಯಕೆ ಹೆಣ್ಣು
ನೀರಿಗೆ ಹೋಗಿತ್ತ.. ತಿರುಗಿ ಮನೆಗೆ ಸಾಗಿತ್ತ..
ಕಾಮಿ ಬೆಚ್ಚಿಹಾಂಗ ಭಾವಿಹಾದಿ
ಕಾಲಾಗ ಸುಳಿದಿತ್ತ.. ಎರಗಿ ಹಿಂದಕ್ಕುಳಿದಿತ್ತ..

ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ

ಮಳ್ಳ ಗಾಳಿ ಸುಳಿದಳ್ಳ ಕೈಲೆ
ಸೆರಗನು ಹಿಡಿದಿತ್ತ.. ಮತ್ತ ಮತ್ತ ಬೆರಗಿಲೆ ಬಿಡತಿತ್ತ..
ಮಳ್ಳ ಗಾಳಿ ಸುಳಿದಳ್ಳ ಕೈಲೆ
ಸೆರಗನು ಹಿಡಿದಿತ್ತ.. ಮತ್ತ ಮತ್ತ ಬೆರಗಿಲೆ ಬಿಡತಿತ್ತ..
ಒಂದು ಮನದ ಗಿಳಿ ಹಿಂದ ನೆಳ್ಳಿಗೆ
ಹುಣ್ಣಿವೆ ಬರಲಿತ್ತ.. ತನ್ನಾ ಮೈಮನ ಮರೆತಿತ್ತ..

ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ನೆಲದ ಅಂಚಿಗೆ ಮಂಜಿನ ಮುಸುಕೂ
ಹ್ಯಾಂಗೋ ಬಿದ್ದಿತ್ತಾ, ಗಾಳಿಗೆ ಮೇಲಕ್ಕೆದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ
ಮುಗಿಲ ಮಾರಿಗೆ ರಾಗರತಿಯಾ....ನಾನು ಬಡವಿ, ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು ||ಪ ||

ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣು ಕಟ್ಟುವಂತ ಮೂರ್ತಿ
ಕಿವಿಗೆ ಮೆಚ್ಚಿನೋಲೆ

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುತ್ತೆ
ಅದೇ ಗಳಿಗೆ ಮೈಯ ತುಂಬ

ನನಗೆ ನವಿರು ಬತ್ತೆ

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂಧಿ
ಕೆನ್ನೆ ತುಂಬ ಮುತ್ತು
ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವಫಲವ
ತುಟಿಗೆ ಹಾಲು ಜೇನು
ದ ರಾ ಬೇಂದ್ರೆ,  

Monday, July 20, 2015

ತಬ್ಬಲಿಯು ನೀನಾದೆ ಮಗನೆ - ಗಣೇಶ ಕೊಪ್ಪಲತೋಟ



   ಹೆಸರನ್ನು ಓದಿ ತಕ್ಷಣ ಭೈರಪ್ಪನವರ ಕಾದಂಬರಿಯ ಬಗ್ಗೆ ಬರೆಯುತ್ತಿದ್ದೇನೆ ಎಂದು ತಿಳಿದುಕೊಳ್ಳಬೇಡಿ. ಪುಣ್ಯಕೋಟಿಯ ಹಾಡಿನಲ್ಲಿ ಬರುವ ಈ ಸಾಲಿನಿಂದ ಭೈರಪ್ಪನವರು ಒಂದು ಕಾದಂಬರಿಯನ್ನು ಬರೆದದ್ದಂತೂ ಹೌದು. ಇತ್ತೀಚಿಗೆ ಸ್ವರ್ಣವಲ್ಲಿ ಮಠದಲ್ಲಿ ಅವರ 'ಕವಲು' ಕಾದಂಬರಿಯ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದಾಗ ಅದರಲ್ಲಿ "ಪುಣ್ಯಕೋಟಿಯಂತಹ ಮೌಲ್ಯಯುತ ಕಥೆಗಳು ಇಂದಿನ ಪಟ್ಯಪುಸ್ತಕಗಳಲ್ಲಿ  ಕಾಣುತ್ತಿಲ್ಲ.ಹಸು ಮಾತನಾಡುವುದೆಲ್ಲ unscientific ಎಂದು ಹೇಳಿಬಿಡುತ್ತಾರೆ. ಅದರ ಮೌಲ್ಯವನ್ನು ಅರಿತುಕೊಳ್ಳುತ್ತಿಲ್ಲ" ಎಂದು ವಿಷಾದ ವ್ಯಕ್ತಪಡಿಸಿದರು.


ಮೌಲ್ಯ ಶಿಕ್ಷಣ ಎಂಬುದು ಬೋಧಿಸಿ ಅದಕ್ಕೊಂದು ಪರೀಕ್ಷೆ ಇಟ್ಟು ಅದರಿಂದ ತಿಳಿದುಕೊಳ್ಳುವಂತಹದ್ದಲ್ಲ.' ಎಂದೂ ಹೇಳಿದರು.ಆಗ ನನಗೆ ಅನ್ನಿಸಿದ್ದು ಮೌಲ್ಯ ಶಿಕ್ಷಣದ ಮೌಲ್ಯವನ್ನು ಮಕ್ಕಳು ಚಿಕ್ಕವರಾಗಿದ್ದಾಗಿನಿಂದಲೇ ತಿಳಿಸಿ ಹೇಳಬೇಕು ಎಂದು.ಹಿರಿಯರು ತಂದೆತಾಯಿಯರು ನಡೆದಂತೆ ಮಕ್ಕಳು ಅನುಸರಿಸುತ್ತಾರೆ.
ನಿತ್ಯವೂ ದೇವರಿಗೆ ಕೈಮುಗಿಯುವ ತಾಯಿಯೊಡನೆ ಮಗಳೂ ಕೈ ಮುಗಿಯುತ್ತಾಳೆ. ಅಪ್ಪ ಸಿಗರೇಟು ಸೇದುವುದನ್ನು  ನೋಡಿದ ಮಗ ಅದನ್ನೇ ಅನುಕರಿಸುತ್ತಾನೆ. ಹೀಗಾಗಿ ತಮ್ಮ ಮಕ್ಕಳ ಉನ್ನತಿಗೆ ಹಾಗು ಮೌಲ್ಯಯುತ ಜೀವನಕ್ಕೆ ತಂದೆತಾಯಿಯರೂ ಮೌಲ್ಯಯುತವಾಗಿ ಬದುಕುವುದು ಅವಶ್ಯಕ.


          ಹಠಮಾರಿ ಮಗನೊಬ್ಬನ ತಾಯಿಗೆ ಏನು ಮಾಡಿದರೂ ಮಗನನ್ನು ತಿದ್ದಲಾಗಲಿಲ್ಲ. ಶಾಲೆಯಿಂದ ಸಣ್ಣ ಪುಟ್ಟ ವಸ್ತುಗಳನ್ನು ಕದ್ದು ತರುತ್ತಿದ್ದ. ಅವನು ದೊಡ್ಡವನಾದಾಗ ತಾಯಿ ಒಂದು ದಿನ ನಿಶ್ಚಯ ಮಾಡಿ ಹೇಳಿದಳು "ಮಗೂ ಕದಿಯುವುದು ಕೆಟ್ಟ ಕೆಲಸ ಎಂದು ನಿನಗೆ ಗೊತ್ತಿಲ್ಲವೇ? " ಎಂದು. ಆಗ ಮಗ "ನನಗೆ ಬೇಕಾದ್ದನ್ನು ನಾನೂ ಮಾಡುತ್ತೀನಿ" ಎಂದ. ಅದಕ್ಕೆ ತಾಯಿ "ಸರಿ ಹಾಗಾದರೆ ನೀನು ಒಂದೊಂದು ಕಳ್ಳತನ ಮಾಡಿದಾಗಲೂ ನಾನೂ ಒಂದೊಂದು ಮೊಳೆ ತಂದು ಈ ಗೋಡೆಗೆ ಹೊಡೆಯುತ್ತೇನೆ" ಎಂದಳು. ಅವನು ಅದರಿಂದ ತನ್ನ ಗಂಟೇನು ಹೋಗುವುದಿಲ್ಲ ಎಂದು ಸುಮ್ಮನಿದ್ದ. ಕೆಲವು ತಿಂಗಳು ಕಳೆದ ನಂತರ ಗೋಡೆಯ ಮೇಲೆಲ್ಲಾ ಮೊಳೆಗಳಿದ್ದವು. ಮತ್ತೂ ಕೆಲವು ಕಾಲ ಕಳೆದ ನಂತರ ಒಮ್ಮೆ ಮಗ ಆ ಗೋಡೆಯನ್ನು ನೋಡಿ "ಛೆ.. ಎಷ್ಟೊಂದು ಕಳ್ಳತನ ಮಾಡಿಬಿಟ್ಟೆ.ತಪ್ಪು ಮಾಡಿಬಿಟ್ಟೆ." ಎಂದು ಪಶ್ಚಾತ್ತಾಪ ಪಟ್ಟು ತಾಯಿಯ ಬಳಿ ಕ್ಷಮೆ ಯಾಚಿಸಿದ.ತನು ಕದ್ದದ್ದೆಲ್ಲವನ್ನು ಹಿಂತಿರುಗಿಸುವುದಾಗಿ ಹೇಳಿದ. ಅವನ ತಾಯಿ ಆಗ ಗೋಡೆಯ ಮೇಲಿದ್ದ ಮೊಳೆಗಳನ್ನೆಲ್ಲ ಕಿತ್ತು ಹಾಕಿದಳು. ಗೋಡೆಯ ಮೇಲಿದ್ದ ಕಲೆಗಳನ್ನು ತೋರಿಸಿ " ನೋಡಿದೆಯಾ? ಒಂದು ಬಾರಿ ಕೆಟ್ಟ ಕೆಲಸ ಮಾಡಿದರೂ ಅಳಿಸಲಾಗದ ಕಲೆ ಬಿದ್ದು ಹೋಗುತ್ತದೆ. ಈಗ ನೀನು ಸುಮ್ಮನಿದ್ದರೆ ಆ ಕಲೆಗಳು ಹಾಗೆ ಇರುತ್ತವೆ.ಅದನ್ನು ಹೋಗಲಾಡಿಸಲು ಒಳ್ಳೆ ಕೆಲಸಗಳನ್ನು ಮಾಡು. ಸುಣ್ಣ ತುಂಬಿಸಿ ಅದನ್ನು ಮುಚ್ಚು." ಎಂದಳು.  ಎಷ್ಟು ಅರ್ಥವತ್ತಾದ ಮಾತು. ಕೆಟ್ಟ ಕೆಲಸದಿಂದ ಕಳಂಕ ಬರುತ್ತದೆ ಅದನ್ನು ಹೋಗಲಾಡಿಸಲು ಒಳ್ಳೆ ಕೆಲಸಗಳನ್ನು ಮಾಡಬೇಕು. ಅದೇ ಒಳ್ಳೆ ಕೆಲಸಗಳಲ್ಲೇ ತೊಡಗಿಕೊಂಡಿದ್ದರೆ ಎಂತಹ ಸುಂದರವಾಗುತ್ತದೆ ಈ ಜೀವನ!

                 ಆದರೆ ಈಗಿನ ಪರಿಸ್ಥಿತಿ ಹೇಗಾಗುತ್ತಿದೆ ಎಂದರೆ ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ, ಅಜ್ಜ ಅಜ್ಜಿ ಇಬ್ಬರೂ ವೃದ್ಧಾಶ್ರಮದಲ್ಲಿದ್ದಾರೆ.ಮಕ್ಕಳು ಭಾರವಾದ ಪುಸ್ತಕದ ಹೊರೆ ಹೊತ್ತು ಕಾನ್ವೆಂಟ್ ಗೆ ಹೋಗುತ್ತಾರೆ ಅಥವಾ ಇನ್ನು ಚಿಕ್ಕವರಾದರೆ ತಂದೆ ತಾಯಿಯರು ಮಕ್ಕಳನ್ನು ನೋಡಿಕೊಳ್ಳುವ ದಾದಿಯರಿಗೆ  ಸಾವಿರಾರು ರೂಪಾಯಿ ತೆತ್ತು ಅವರ ಬಳಿ ಬಿಟ್ಟು ಹೋಗುತ್ತಾರೆ. ಇಂತಹ ಮಕ್ಕಳಿಗೆ ಎಲ್ಲಿಂದ ಸಿಗಬೇಕು ನೈತಿಕ ಅಥವಾ ಮೌಲ್ಯ ಶಿಕ್ಷಣ? ಅಜ್ಜ ಅಜ್ಜಿಯರು ಮೊಮ್ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದರೆ ಅವರು ಅಲ್ಪ ಸ್ವಲ್ಪ ಮೌಲ್ಯಯುತ ಜ್ಞಾನವನ್ನು ಮಕ್ಕಳಿಗೆ ಉಣಿಸಬಹುದು. ಅನವರತ " ಓದು ಓದು ಓದು" ಎಂದು ಹೇಳುತ್ತಿದ್ದಾರೆ ಮಕ್ಕಳಲ್ಲಿರುವ ಉಳಿದ ಪ್ರತಿಭೆಗಳು ಬೆಳಕಿಗೆ ಬರುವುದಿಲ್ಲ, ಓದೂ ಅಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಮಕ್ಕಳು ಆಟವಾಡಿಕೊಂಡು ನಲಿದಾಡುತ್ತಾ ಕಲಿಯಬೇಕು.ಇಲ್ಲದಿದ್ದರೆ ಜೀವನ ಕೇವಲ ಯಾಂತ್ರಿಕವಾಗುತ್ತದೆ. ಹಿಂದೆ ಸಮಾಜದಲ್ಲಿದ್ದ ಎಲ್ಲ ಸಮಸ್ಯೆಗಳಿಗಿಂತ ಭೀಕರವಾಗಿ ಇಂದು ಈ ಸಮಸ್ಯೆ ನಮ್ಮೆಲ್ಲರ ಮುಂದೆ ನಿಂತಿದೆ. ಅದನ್ನು ಸಮರ್ಥವಾಗಿ ಎದುರಿಸುವ ಉಪಾಯವೂ ನಮ್ಮ ಬಳಿಯಲ್ಲೇ ಇದೆ.
             ತಂದೆ ತಾಯಿಯರಿದ್ದೂ ತಬ್ಬಲಿಗಳಂತಾಗಿರುವ ಇಂದಿನ ಮಕ್ಕಳನ್ನು 'ಕಿಡ್ಸ್ ಗಾರ್ಡಿಂಗ್ ಹೋಂ' ನಲ್ಲೋ ಅಥವಾ ಮತ್ತೆಲ್ಲೋ ಬಿಡುವಾಗಲಾದರೂ ತಾಯಂದಿರಿಗೆ ಎಂದೋ ಕೇಳಿದ "ತಬ್ಬಲಿಯು ನೀನಾದೆ ಮಗನೆ" ಹಾಡು ನೆನಪಿಗೆ ಬರಲಿ..

       ಸರ್ವೇ ಭವಂತು ಸುಖಿನಃ


 ಗಣೇಶ ಕೊಪ್ಪಲತೋಟ  


Wednesday, July 15, 2015

ಕೈಗಂಟಿದ ಅತ್ತರು (ಅನುಭವ) - ರಾಜೇಶ್ ಶ್ರೀವತ್ಸ


ನಾನು ಪ್ರೇತದ ಕೈ ಹಿಡಿದು ಮೇಲೆಬ್ಬಿಸಿದೆನೇ?
ನೈಸ್ ರಸ್ತೆಯ ಸೇತುವೆಯ ಕಡೆಗೆ ನಡೆಯುತ್ತಾ ಮನೆಯ ಕಡೆ ಸಾಗುತ್ತಿದ್ದೆ. ತಲೆ ಸಣ್ಣಗೆ ನೋಯುತ್ತಿತ್ತು ಮಾತ್ರೆ ತೆಗೆದುಕೊಂಡು ಮನೆಗೆ ಹೋಗಬೇಕು ಅಂದುಕೊಂಡೆ. ಕೆಲಸ ಮುಗಿಸಿ ಮನೆಯ ಕಡೆ ಸಾಗುತ್ತಿದ್ದ ಗಾರ್ಮೆಂಟ್ಸ್ ಕಂಪನಿಯ ಹುಡುಗಿಯರಿಂದ ರಸ್ತೆ ಗಿಜಿಗಿಡುತ್ತಿತ್ತು. ಎದುರಿನ ವಿಟ್ಟಸಂದ್ರದ ಕಡೆಯಿಂದ ಸುಮಾರು ಮೂವತ್ತು ವರ್ಷದ ಹೆಂಗಸು ನಡೆದು ಬರುತ್ತಿದ್ದಳು. ಸುಮಾರು ಐದೂವರೆ ಅಡಿ ಎತ್ತರ, ದಪ್ಪದೇಹ, ಗೌರವರ್ಣ, ಗುಂಗುರು ಕೂದಲು, ತಲೆ ತುಂಬಾ ಹೂವು, ಕಾಲಿನಲ್ಲಿ ಇಂಚಗಲದ ಬೆಳ್ಳಿ ಗೆಜ್ಜೆ, ಕೈತುಂಬಾ ಬಳೆ , ಕೈಯಲ್ಲಿ ಪ್ಲಾಸ್ಟಿಕ್ ವಯರ್ ಚೀಲ. ಹತ್ತಿರ ಬರುತ್ತಿದ್ದಂತೇ ಕತ್ತಿನಲ್ಲಿದ್ದ ದೊಡ್ಡ ಕರಿಮಣಿ ಚಂದ್ರಹಾರ, ಕಿವಿಯಲ್ಲಿ ಹಳೆಯಕಾಲದ ಹಂಸದ ಹರಳಿನ ಕಿವಿಯೋಲೆ ನೋಡಿ ಅಕೆ ಮುಸ್ಲಿಮ್ ಇರಬೇಕು ಅನ್ನಿಸಿತು. ಇಬ್ಬರೂ ನೈಸ್ ಸೇತುವೆಯ ಕಡೆ ನಡೆದೆವು. ಆಕೆ ಮುಂದೆ. ನಾನು ಹಿಂದೆ. ಸೇತುವೆಯ ಮಧ್ಯ ಬರುತ್ತಿದ್ದಂತೆ ಆಕೆ ಜರ್ರನೆ ಜಾರಿ ಬಿದ್ದಳು. ಕೈಲಿದ್ದ ಚೀಲದಿಂದ ಖಾಲಿ ಟಿಫನ್ ಡಬ್ಬಗಳು ಉರುಳುತ್ತಾ ಹೊರಬಿದ್ದವು. ನಾನು ಅರ್ರೇ!! ಪ್ಚ್ ಪ್ಚ್ ಅನ್ನುತ್ತ ನೆರವಿಗೆ ಹತ್ತಿರ ಹೋಗಿ ನೆರವಿಗೆ ಕೈ ಚಾಚಿದೆ. ಅತ್ತರಿನ ಘಂ ಮೂಗಿಗೆ ಬಡಿಯಿತು. ಆಕೆ ನನ್ನ ಕೈ ಹಿಡಿದು ಸಾವರಿಸಿಕೊಂಡು ಎದ್ದು ಕುಳಿತಳು. ಉರುಳಿ ಬಿದ್ದ ಮೂರು ಟಿಫನ್ ಬಾಕ್ಸ್‌ಗಳನ್ನು ಎತ್ತಿ ಅಕೆಗೆ ನೀಡಿದೆ. ಆಕೆ ನಗುತ್ತಾ ’ ತುಂಬಾ ಥಾಂಕ್ಸ್‌ರೀ. ಅಣ್ಣನ ಮನೆಗೆ ಹೋಗ್ತಾ ಇದ್ದೆ ಇವತ್ತು ಇಫ್ತೆಹಾರ್. ಯಾವಾಗಲೂ ಸೇತುವೆ ದಾಟುವಾಗ ಇಲ್ಲಿ ಜಾರಿ ಬೀಳ್ತೀನಿ ’ ಅಂದಳು. ಅಲ್ಲಾ ಇಷ್ಟು ಹೆಣ್ಣು ಮಕ್ಕಳು ಓಡಾಡುತ್ತಿದ್ದರೂ ಈ ಹೆಣ್ಣಿನ ಸಹಾಯಕ್ಕೆ ಒಬ್ಬರೂ ಬರಲಿಲ್ಲವಲ್ಲ ಅನಿಸಿ ಸುತ್ತ ನೋಡಿದೆ. ರಸ್ತೆಯಲ್ಲಿರುವವರೆಲ್ಲಾ ನನ್ನನ್ನೆ ನೋಡುತ್ತಿದ್ದಾರೆ ಅನ್ನಿಸಿ ಕಸಿವಿಸಿಯಾಯ್ತು. ಹತ್ತಿರ ನಡೆದು ಬರುತ್ತಿದ್ದ ಇಬ್ಬರು ಹುಡುಗಿಯರು ನನ್ನನ್ನೆ ನೋಡುತ್ತಾ ’ ಏನಾಯ್ತು ಸಾರು ಏನಾದ್ರು ಕಳೆದುಕೊಂಡ್ರಾ ’ ಎಂದು ನನ್ನ ಕಡೆ ನೋಡಿ ನಿಂತು ವಿಚಾರಿಸಿದರು. ನಾನು ಪೆಚ್ಚು ಪೆಚ್ಚಾಗಿ ಎನೂ ಇಲ್ಲ ಅನ್ನುತ್ತಾ ಸುತ್ತ ನೋಡಿದೆ ಅಷ್ಟರೊಳಗೆ ಆ ಹೆಣ್ಣು ಅಲ್ಲಿಂದ ಎದ್ದು ಮಾಯವಾಗಿದ್ದಳು. ಜನ ಜಂಗುಳಿಯಲ್ಲಿ ಸೇರಿ ಹೋಗಿರ ಬೇಕೆಂದು ಸುಮ್ಮನಾದೆ. ಸೇತುವೆ ದಾಟಿ ವೀರಭದ್ರ ಮೆಡಿಕಲ್ಸ್ ಕಡೆ ನಡೆದು ನಾಲ್ಕು ನೈಸಿಪ್ ಕೊಡಿ ಅಂತ ಕೇಳಿದೆ. ಅಂಗಡಿಯಾತನಿಗೆ ನನ್ನ ಮುಖ ಪರಿಚಯವಿದೆ. ಆತ ’ ಏನು ಸಾರು ತುಂಬಾ ತಲೆ ನೋವಾ? ಸೇತುವೆ ಮೇಲೆ ಯಾಕೆ ಕೂತು- ನಿಂತು ಮಾಡ್ತಾ ಇದ್ದ್ರಿ ? ತಲೆ ತಿರುಗಿತಾ? ಏನಾದ್ರು ಕಳೆದುಕೊಂಡ್ರಾ ? ’ ಅಂತ ಕೇಳಿದ. ನಾನು ಯಾರದೋ ಟಿಫನ್ ಬಾಕ್ಸ್ ಎತ್ತಿಕೊಡ್ತಾ ಇದ್ದೆ ಎಂದಷ್ಟೇ ಹೇಳಿ ಮನೆಯ ಕಡೆ ತಿರುಗಿದೆ.
ನಮ್ಮ ಲೇಔಟ್ ಗೇಟಿನಿಂದ ಅಷ್ಟು ದೂರದಲ್ಲಿ ಹೊಲದ ಮಧ್ಯದಲ್ಲಿ ಸ್ಥಳೀಯ ಪುಢಾರಿ ಕಂ ರೌಡಿ ಜಮೀಲ್ ಅಬ್ಬಾಸನ ಬಂಗಲೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಾ ಇದ್ದರು. ಶಾಮಿಯಾನದ ಬಾಗಿಲಲ್ಲೇ ದೊಡ್ಡ ಫ್ಲೆಕ್ಸ್ ಬೋರ್ಡ್ ಅದರ ಮೇಲೆ ಜಮೀಲ್‌ನ ಚಿತ್ರ. ಅವನ ಪಕ್ಕದಲ್ಲಿ ನಮ್ಮ ಏರಿಯಾದ ಎಲ್ಲಾ ಪುಢಾರಿಗಳ ಮುಂಡಗಳನ್ನು ಕತ್ತರಿಸಿ ಸಾಲಾಗಿ ಅಂಟಿಸಿದ್ದರು. ಪಕ್ಕದಲ್ಲೇ ಇನ್ನೊಂದು ಫ್ಲೆಕ್ಸ್ ಬೋರ್ಡ್ ಅದರ ಮೇಲೆ ಒಬ್ಬ ಹೆಣ್ಣಿನ ಚಿತ್ರಕ್ಕೆ ಗುಲಾಬಿ ಹೂವಿನ ಅಲಂಕಾರ. ಹತ್ತಿರ ಬರುತ್ತಿದ್ದಂತೇ ಅದು ಅಲ್ಲಿ ಸೇತುವೆಯ ಮೇಲೆ ಭೇಟಿಯಾದ ಹೆಣ್ಣಿನ ಚಿತ್ರವೆಂದು ಗುರುತಿಸಿದೆ. ಕೆಳಗೆ ಉರ್ದು ಭಾಷೆಯಲ್ಲಿ ಎನೋ ಬರೆದಿದ್ದರು. ಅಪಾರ್ಟ್ಮೆಂಟ್‌ನ ಗೇಟ್ ದಾಟುತ್ತಿದ್ದಂತೇ ನಮ್ಮ ಅಪಾರ್ಟ್ಮೆಂಟ್ ಮಾಲಿಕರ ಅಮ್ಮ ಎದುರಾದರು. ’ಏನಮ್ಮ ರಂಜಾನ್ ಊಟಕ್ಕೆ ಸಾಬರ ಮನೆಗೆ ಹೋಗಲಿಕ್ಕಿದೆಯಾ ’ ಅಂತ ತಮಾಷೆಗೆ ಕೇಳಿದೆ. ಅವರು ’ ಕರೆದಿದ್ದಾರಪ್ಪ . ಅದರೆ ಅಲ್ಲಿ ಎಲ್ಲಾ ರಾಜಕೀಯದವರೇ ತುಂಬಿರುತ್ತಾರೆ. ಅವರ ಮಧ್ಯ ನಮಗೇನು ಕೆಲಸ. ಹೋಗದವರಿಗೆಲ್ಲಾ ಜಮೀಲನೇ ಮನೆಗೆ ಪಾರ್ಸಲ್ ಕಳಿಸುತ್ತಾನೆ ’ ಎಂದರು . ಶಾಮಿಯಾನದ ಎದುರು ಒಬ್ಬ ಹೆಂಗಸಿನ ಚಿತ್ರ ಹಾಕಿದ್ದಾರಲ್ಲ ಆಕೆ ..’ ಎಂದು ನಾನು ವಿಚಾರಿಸುತ್ತಿದ್ದಂತೇ ಮಧ್ಯದಲ್ಲೇ ಅವರು ’ ಆಕೆನಾ? ಅವಳು ಜಮೀಲನ ತಂಗಿ ಜುಬೇದಾ. ಇಲ್ಲೇ ವಿಟ್ಟಸಂದ್ರದಲ್ಲಿ ಇದ್ದಳು. ಆರು ವರ್ಷದ ಹಿಂದೆ ಜಮೀಲ ಹೀಗೇ ಒಂದು ರಂಜಾನ್ ಉಪವಾಸದ ದಿನ ರಾತ್ರಿ ಊರಿಗೆಲ್ಲಾ ಊಟ ಇಟ್ಟಿದ್ದ. ಆಗಿನ್ನೂ ನೈಸ್ ಸೇತುವೆ ಕಟ್ಟುತ್ತಿದ್ದರು. ಸಂಜೆ ಆಕೆ ಮನೆಯಿಂದ ನಡೆದು ಬರುತ್ತಾ ಇದ್ದಳು. ಕಟ್ಟಿ ಮುಗಿಸುವ ತನಕ ಸೇತುವೆ ಮೇಲೆ ಹತ್ತಿ ಓಡಾಡ ಬಾರದೆಂದು ರಸ್ತೆ ಬಂದ್ ಮಾಡಿದ್ದರೂ ಜನ ಸೆಕ್ಯುರಿಟಿಯ ಕಣ್ಣು ತಪ್ಪಿಸಿ ಸೇತುವೆಯ ಮೇಲಿಂದಲೇ ಇತ್ತ ಬರುತ್ತಿದ್ದರು. ಇವಳಿಗೆ ಅಂದು ಗ್ರಹಚಾರ ಕಾದಿತ್ತು ಈಕೆಯೂ ತಡೆ ಗೋಡೆ ಹಾರಿ ಸೇತುವೆಯ ಮೇಲೆ ಓಡುತ್ತಾ ದಾಟುತ್ತಿದ್ದಳು ಜಲ್ಲಿ ಕಲ್ಲಿನ ಮೇಲೆ ಕಾಲಿಟ್ಟು ಜಾರಿ ಬಿದ್ದಳು. ತಲೆ ನೆಲಕ್ಕೆ ಬಡಿದು ಅಲ್ಲೇ ಸತ್ತಳು. ಭಾರೀ ಆಳು.. ಲಕ್ಷ್ಣಣವಾಗಿದ್ದಳು , ಸ್ಟೈಲಾಗಿ ಅಲಂಕಾರ ಮಾಡ್ಕೊಂಡು ಸೆಂಟ್ ಹಾಕ್ಕೊಂಡು, ಝಣ್ ಝಣ್ ಗೆಜ್ಜೆ ಸದ್ದು ಮಾಡ್ಕೊಂಡು ಓಡಾಡೋಳು , ಸಾಯುವಾಗ ಮದುವೆ ಆಗಿ ಐದು ತಿಂಗಳಾಗಿತ್ತು ಅಷ್ಟೆ. ಪಾಪ ಛೇ !! . ಈಗಲೂ ಆಗಾಗ ಚೀಲ ಹಿಡಿದುಕೊಂಡು ಸೇತುವೆ ಮೇಲೆ ನಡಿತಾ ಇರ್ತಾಳೆ ನಾವೇ ನೋಡಿದ್ದೀವಿ ಅಂತ ಸಿದ್ದರಾಜು, ತಾಯಪ್ಪ ಹೇಳ್ತಾರೆ. ಅವರು ಮೊದಲೇ ಕುಡುಕ್‌ ಬಡ್ಡೀಮಕ್ಕಳು ಅವರನ್ನ ಹೆಂಗೆ ನಂಬೋದು ? ಅಷ್ಟಕ್ಕೂ ಸಾಬರು ಸತ್ತರೆ ದೆವ್ವ ಆಗಲ್ವಂತಲ್ಲ? ಹಿಂಗಂದಕ್ಕೆ ಒಮ್ಮೆ ಆ ಜಮೀಲ ತಾಯಪ್ಪನನ್ನು ಕತ್ತರಿಸಿ ಹಾಕ್ತೀನಿ ಮಗನೆ, ನನ್ನ ತಂಗಿನ ಸೈತಾನ್ ಅಂತೀಯಾ ಅಂತ ಹೊಲದೊಳಗೆ ಅಟ್ಟಿಸಿಕೊಂಡು ಹೋಗಿದ್ದ...." ಅವರು ಹೇಳುತ್ತಲೇ ಇದ್ದರು.
ಹಾಗಾದರೆ ನಾನು ಕೈ ಚಾಚಿ ಎಬ್ಬಿಸಿದ್ದು ಜುಬೇದಳನ್ನೇ ? !! ನಾನು ಪ್ರೇತದ ಕೈ ಹಿಡಿದು ಮೇಲೆಬ್ಬಿಸಿದೆನೇ? ಕೈ ಉಜ್ಜಿಕೊಳ್ಳುತ್ತಾ ಮೂಸಿ ನೋಡಿಕೊಂಡೆ.. ಅತ್ತರಿನ ಪರಿಮಳ ಘಂ ಅಂದಿತು !!!

ರಾಜೇಶ್ ಶ್ರೀವತ್ಸ, 

ಬರ್ಮುಡಾ ಹುಲ್ಲು - ರಾಜೇಶ್ ಶ್ರೀವತ್ಸ,


ನಿಮ್ಮ ಊರಿಗೆ ಮಂತ್ರಿ ಮಹೋದಯರು ವಕ್ಕರಿಸುತ್ತಿದ್ದಾರೆಂದರೆ ನಿಮ್ಮೂರಿನ ಉದ್ಯಾನವನ ರಾತ್ರಿ ಬೆಳಗಾಗುವುದರೊಳಗಾಗಿ ನಂದನವನದಂತೆ ಕಂಗೊಳಿಸುತ್ತದೆ ಅಲ್ಲವೆ? ಬೆಳೆದು ನಿಂತ ಹೂವಿನ ಗಿಡಗಳಂತೆ ಐದರಿಂದ ಹತ್ತಡೀಗೂ ಎತ್ತರದ ಸೈಕಸ್ ಹಾಗು ಕಣಗಲೆ ಮರಗಳು ಕೂಡಾ ತೋಟಗಾರಿಕ ಕೇಂದ್ರಗಳಲ್ಲಿ ಕುಂಡಗಳಲ್ಲಿ ಬೇಕಾದಾಗ ಲಭ್ಯವಾಗುತ್ತವೆ. ಸಾಮಾನ್ಯ ಬೋಗನ್ ವಿಲ್ಲೆಯ ಗಿಡಕ್ಕೆ ರೂ ೨೫೦ ಕಕ್ಕಬೇಕು ಅಷ್ಟೆ. ಇನ್ನು ಉತ್ತಮ ಜಾತಿಯ ಗಿಡಗಳಂತೂ ಇನ್ನೂ ದುಬಾರಿ. ಈ ಮಂತ್ರಿ ಮಹೋದಯರಿಗೆ ಸ್ವಾಗತ ಕೋರಲು ನಮ್ಮ ತೆರಿಗೆ ಹಣ ಎಷ್ಟು ಪೋಲಾಗುತ್ತಿರಬಹುದು ಊಹಿಸಿ ? ಇನ್ನು ಕುಂಡಗಳ ಜೊತೆಗೆ ಉದ್ಯಾನವನಗಳ ನೆಲಕ್ಕೆ ಹಾಸಲು ಹುಲ್ಲಿನ ಚಾಪೆಗಳೂ ಲಭ್ಯ.

ಪರಪ್ಪನ ಅಗ್ರಹಾರ, ಕೋಣೇನ ಅಗ್ರಹಾರ, ವಿಟ್ಟಸಂದ್ರ, ಬಸವಾಪುರ, ತೋಗೂರುಗಳ ಅಳಿದುಳಿದ ಹೊಲಗಳಲ್ಲಿ ಈ ಚಿನ್ನದ ಬೆಳೆಯನ್ನು ಹುಲುಸಾಗಿ ಬೆಳೆಯುತ್ತಾರೆ. ಗರಿಕೆಯ ಹಾಗೆ ಕಾಣುವ ಗರಿಕೆಗಿಂತ ಚಿಕ್ಕ ಎಲೆಗಳ ಈ ಹುಲ್ಲಿನ ಹೆಸರು ಬರ್ಮುಡಾ ಹುಲ್ಲು.ಗರಿಕೆಗಿಂತಲೂ ಹಸಿರು, ಕಾಲಿಟ್ಟರೆ ಮೆತ್ತಗೆ ಸ್ಪಂಜಿನ ಮೇಲೆ ಕಾಲಿಟ್ಟಂತೆ ಭಾಸವಾದರೂ ಗರಿಕೆಯಷ್ಟು ಕೋಮಲವಲ್ಲ. ಮುಟ್ಟಿದರೆ ಪ್ಲಾಸ್ಟಿಕ್ ಎಳೆ ಮುಟ್ಟಿದ ಅನುಭವವಾಗುತ್ತದೆ. ಬಿತ್ತನೆಗಾಗಿ ಬೇರಿರುವ ಹುಲ್ಲಿನ ಗಂಟುಗಳನ್ನು ಕತ್ತರಿಸಿ ಇಟ್ಟುಕೊಳ್ಳುತ್ತಾರೆ. ಚಪ್ಪಟೆಯಾಗಿ ಉಳುಮೆ ಮಾಡಿದ ಭೂಮಿಯ ಮೇಲೆ ಆ ಹುಲ್ಲಿನ ಗಂಟುಗಳನ್ನು ಬಿತ್ತುತ್ತಾರೆ. ಇದಕ್ಕೆ ಉಪಯೋಗಿಸುವ ನೀರು ಹಾಗು ಗೊಬ್ಬರದ ಪ್ರಮಾಣವನ್ನು ಕೇಳಲೇ ಬೇಡಿ. ಬತ್ತದ ಬೆಳೆಯಷ್ಟೇ ನೀರು ಗೊಬ್ಬರ ಬೇಕೇನೋ ..!! ದಿನಕ್ಕೆರಡು ಬಾರಿ ನೀರುಣಿಸಿ.. ವಾರಕ್ಕೊಮ್ಮೆ ರಸಾಯನಿಕ ಗೊಬ್ಬರ ಎರಚಿ, ಅಗತ್ಯ ಬಿದ್ದಾಗ ಕೀಟನಾಶಕ ಸಿಂಪಡಿಸಿ, ಕಳೆ ಹಾಗು ಕೊಳೆತ ಒಣಗಿದ ಹುಲ್ಲಿನ ಕುಡಿಗಳನ್ನು ಆಗಾಗ ಬೇರ್ಪಡಿಸಿದರೆ ಮೂರು ತಿಂಗಳಿಗೆ ಸೊಗಸಾದ ಹುಲ್ಲಿನ ಹಾಸಿಗೆ ಲಭ್ಯ. ಕೊಯಿಲಿಗೆ ೧ ವಾರಕ್ಕೆ ಮುನ್ನ ಯಂತ್ರದಿಂದ ಅಡ್ಡಾದಿಡ್ಡಿ ಬೆಳೆದಿರುವ ಕುಡಿಗಳನ್ನು ಮಟ್ಟ ಮಾಡಿದರೆ ಆಯ್ತು. ಯಂತ್ರಗಳು ಕರ್ರೋ ಶಬ್ದ ಮಾಡುತ್ತಾ ಅಳತೆಗೆ ತಕ್ಕನಾಗಿ ಹುಲ್ಲುಹಾಸನ್ನು ಕತ್ತರಿಸುತ್ತಾ ಸಾಗುತ್ತವೆ. ಕಾರ್ಮಿಕರು ಅದನ್ನು ಹಸಿರು ಒಳಗೆ ಕೆಳಗಿನ ಮಣ್ಣು ಮೇಲೆ ಮಾಡಿ ಚಾಪೆಯಂತೆ ಸುತ್ತಿ ಲಾರಿಯಲ್ಲಿ ಪೇರಿಸಿ ಸಾಗಿಸುತ್ತಾರೆ. ಒಂದು ಚದರ ಅಡಿ ಹುಲ್ಲುಹಾಸಿನ ಬೆಲೆ ಸುಮಾರು ರೂ.೬೦ ರಿಂದ ರೂ.೧೦೦ರವರೆಗೆ. ಇಷ್ಟೆಲ್ಲಾ ಬೆಲೆಕೊಟ್ಟು ನಿಮ್ಮ ತೋಟಕ್ಕೆ ಈ ಹುಲ್ಲನ್ನು ತಂದು ಹಾಸಿದರೆ ಹೊಸ ಪರಿಸರಕ್ಕೆ ಹೊಂದಿಕೊಳ್ಳಲಾಗದೆ ಒಂದು ತಿಂಗಳಲ್ಲೇ ಒಣಗಿ ಹೋಗುತ್ತದೆ frown emoticon . ಬೇಸಿಗೆಯಲ್ಲಿ ಬೆಲೆ ಹೆಚ್ಚು. ಕತ್ತರಿಸಲಾಗದೆ ಅಂಚುಗಳಲ್ಲಿ ಉಳಿದ ಹುಲ್ಲಿಗೂ ಬೆಲೆ ಇದೆ. ಅವುಗಳನ್ನು ಹೊಸೂರಿನ ಹೂವಿನ ಮಾರುಕಟ್ಟೆಗೆ ಸಾಗಿಸಿದರಾಯ್ತು. ಅಲ್ಲಿ ಸೊಗಸಾಗಿ ಹಾರ ಮಾಡಿ ಎಲ್ಲೆಡೆಗೆ ಸಾಗಿಸುತ್ತಾರೆ. ಭಕ್ತರು ಇದೇ ಗರಿಕೆಯೆಂದು ಗಣೇಶನಿಗೇ ಮೋಸ ಮಾಡಿ ಅವನ ಕೊರಳಿಗೆ ಹಾಕುತ್ತಾರೆ. ತಮಿಳುನಾಡು, ಆಂಧ್ರಗಳಲ್ಲಂತೂ ಅದನ್ನು ಗರಿಕೆಯೆಂದೇ ಜನ ಒಫ್ಫಿಕೊಂಡಿದ್ದಾರೆ.  

ರಾಜೇಶ್ ಶ್ರೀವತ್ಸ, 




ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......