ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Wednesday, July 15, 2015

ಬರ್ಮುಡಾ ಹುಲ್ಲು - ರಾಜೇಶ್ ಶ್ರೀವತ್ಸ,


ನಿಮ್ಮ ಊರಿಗೆ ಮಂತ್ರಿ ಮಹೋದಯರು ವಕ್ಕರಿಸುತ್ತಿದ್ದಾರೆಂದರೆ ನಿಮ್ಮೂರಿನ ಉದ್ಯಾನವನ ರಾತ್ರಿ ಬೆಳಗಾಗುವುದರೊಳಗಾಗಿ ನಂದನವನದಂತೆ ಕಂಗೊಳಿಸುತ್ತದೆ ಅಲ್ಲವೆ? ಬೆಳೆದು ನಿಂತ ಹೂವಿನ ಗಿಡಗಳಂತೆ ಐದರಿಂದ ಹತ್ತಡೀಗೂ ಎತ್ತರದ ಸೈಕಸ್ ಹಾಗು ಕಣಗಲೆ ಮರಗಳು ಕೂಡಾ ತೋಟಗಾರಿಕ ಕೇಂದ್ರಗಳಲ್ಲಿ ಕುಂಡಗಳಲ್ಲಿ ಬೇಕಾದಾಗ ಲಭ್ಯವಾಗುತ್ತವೆ. ಸಾಮಾನ್ಯ ಬೋಗನ್ ವಿಲ್ಲೆಯ ಗಿಡಕ್ಕೆ ರೂ ೨೫೦ ಕಕ್ಕಬೇಕು ಅಷ್ಟೆ. ಇನ್ನು ಉತ್ತಮ ಜಾತಿಯ ಗಿಡಗಳಂತೂ ಇನ್ನೂ ದುಬಾರಿ. ಈ ಮಂತ್ರಿ ಮಹೋದಯರಿಗೆ ಸ್ವಾಗತ ಕೋರಲು ನಮ್ಮ ತೆರಿಗೆ ಹಣ ಎಷ್ಟು ಪೋಲಾಗುತ್ತಿರಬಹುದು ಊಹಿಸಿ ? ಇನ್ನು ಕುಂಡಗಳ ಜೊತೆಗೆ ಉದ್ಯಾನವನಗಳ ನೆಲಕ್ಕೆ ಹಾಸಲು ಹುಲ್ಲಿನ ಚಾಪೆಗಳೂ ಲಭ್ಯ.

ಪರಪ್ಪನ ಅಗ್ರಹಾರ, ಕೋಣೇನ ಅಗ್ರಹಾರ, ವಿಟ್ಟಸಂದ್ರ, ಬಸವಾಪುರ, ತೋಗೂರುಗಳ ಅಳಿದುಳಿದ ಹೊಲಗಳಲ್ಲಿ ಈ ಚಿನ್ನದ ಬೆಳೆಯನ್ನು ಹುಲುಸಾಗಿ ಬೆಳೆಯುತ್ತಾರೆ. ಗರಿಕೆಯ ಹಾಗೆ ಕಾಣುವ ಗರಿಕೆಗಿಂತ ಚಿಕ್ಕ ಎಲೆಗಳ ಈ ಹುಲ್ಲಿನ ಹೆಸರು ಬರ್ಮುಡಾ ಹುಲ್ಲು.ಗರಿಕೆಗಿಂತಲೂ ಹಸಿರು, ಕಾಲಿಟ್ಟರೆ ಮೆತ್ತಗೆ ಸ್ಪಂಜಿನ ಮೇಲೆ ಕಾಲಿಟ್ಟಂತೆ ಭಾಸವಾದರೂ ಗರಿಕೆಯಷ್ಟು ಕೋಮಲವಲ್ಲ. ಮುಟ್ಟಿದರೆ ಪ್ಲಾಸ್ಟಿಕ್ ಎಳೆ ಮುಟ್ಟಿದ ಅನುಭವವಾಗುತ್ತದೆ. ಬಿತ್ತನೆಗಾಗಿ ಬೇರಿರುವ ಹುಲ್ಲಿನ ಗಂಟುಗಳನ್ನು ಕತ್ತರಿಸಿ ಇಟ್ಟುಕೊಳ್ಳುತ್ತಾರೆ. ಚಪ್ಪಟೆಯಾಗಿ ಉಳುಮೆ ಮಾಡಿದ ಭೂಮಿಯ ಮೇಲೆ ಆ ಹುಲ್ಲಿನ ಗಂಟುಗಳನ್ನು ಬಿತ್ತುತ್ತಾರೆ. ಇದಕ್ಕೆ ಉಪಯೋಗಿಸುವ ನೀರು ಹಾಗು ಗೊಬ್ಬರದ ಪ್ರಮಾಣವನ್ನು ಕೇಳಲೇ ಬೇಡಿ. ಬತ್ತದ ಬೆಳೆಯಷ್ಟೇ ನೀರು ಗೊಬ್ಬರ ಬೇಕೇನೋ ..!! ದಿನಕ್ಕೆರಡು ಬಾರಿ ನೀರುಣಿಸಿ.. ವಾರಕ್ಕೊಮ್ಮೆ ರಸಾಯನಿಕ ಗೊಬ್ಬರ ಎರಚಿ, ಅಗತ್ಯ ಬಿದ್ದಾಗ ಕೀಟನಾಶಕ ಸಿಂಪಡಿಸಿ, ಕಳೆ ಹಾಗು ಕೊಳೆತ ಒಣಗಿದ ಹುಲ್ಲಿನ ಕುಡಿಗಳನ್ನು ಆಗಾಗ ಬೇರ್ಪಡಿಸಿದರೆ ಮೂರು ತಿಂಗಳಿಗೆ ಸೊಗಸಾದ ಹುಲ್ಲಿನ ಹಾಸಿಗೆ ಲಭ್ಯ. ಕೊಯಿಲಿಗೆ ೧ ವಾರಕ್ಕೆ ಮುನ್ನ ಯಂತ್ರದಿಂದ ಅಡ್ಡಾದಿಡ್ಡಿ ಬೆಳೆದಿರುವ ಕುಡಿಗಳನ್ನು ಮಟ್ಟ ಮಾಡಿದರೆ ಆಯ್ತು. ಯಂತ್ರಗಳು ಕರ್ರೋ ಶಬ್ದ ಮಾಡುತ್ತಾ ಅಳತೆಗೆ ತಕ್ಕನಾಗಿ ಹುಲ್ಲುಹಾಸನ್ನು ಕತ್ತರಿಸುತ್ತಾ ಸಾಗುತ್ತವೆ. ಕಾರ್ಮಿಕರು ಅದನ್ನು ಹಸಿರು ಒಳಗೆ ಕೆಳಗಿನ ಮಣ್ಣು ಮೇಲೆ ಮಾಡಿ ಚಾಪೆಯಂತೆ ಸುತ್ತಿ ಲಾರಿಯಲ್ಲಿ ಪೇರಿಸಿ ಸಾಗಿಸುತ್ತಾರೆ. ಒಂದು ಚದರ ಅಡಿ ಹುಲ್ಲುಹಾಸಿನ ಬೆಲೆ ಸುಮಾರು ರೂ.೬೦ ರಿಂದ ರೂ.೧೦೦ರವರೆಗೆ. ಇಷ್ಟೆಲ್ಲಾ ಬೆಲೆಕೊಟ್ಟು ನಿಮ್ಮ ತೋಟಕ್ಕೆ ಈ ಹುಲ್ಲನ್ನು ತಂದು ಹಾಸಿದರೆ ಹೊಸ ಪರಿಸರಕ್ಕೆ ಹೊಂದಿಕೊಳ್ಳಲಾಗದೆ ಒಂದು ತಿಂಗಳಲ್ಲೇ ಒಣಗಿ ಹೋಗುತ್ತದೆ frown emoticon . ಬೇಸಿಗೆಯಲ್ಲಿ ಬೆಲೆ ಹೆಚ್ಚು. ಕತ್ತರಿಸಲಾಗದೆ ಅಂಚುಗಳಲ್ಲಿ ಉಳಿದ ಹುಲ್ಲಿಗೂ ಬೆಲೆ ಇದೆ. ಅವುಗಳನ್ನು ಹೊಸೂರಿನ ಹೂವಿನ ಮಾರುಕಟ್ಟೆಗೆ ಸಾಗಿಸಿದರಾಯ್ತು. ಅಲ್ಲಿ ಸೊಗಸಾಗಿ ಹಾರ ಮಾಡಿ ಎಲ್ಲೆಡೆಗೆ ಸಾಗಿಸುತ್ತಾರೆ. ಭಕ್ತರು ಇದೇ ಗರಿಕೆಯೆಂದು ಗಣೇಶನಿಗೇ ಮೋಸ ಮಾಡಿ ಅವನ ಕೊರಳಿಗೆ ಹಾಕುತ್ತಾರೆ. ತಮಿಳುನಾಡು, ಆಂಧ್ರಗಳಲ್ಲಂತೂ ಅದನ್ನು ಗರಿಕೆಯೆಂದೇ ಜನ ಒಫ್ಫಿಕೊಂಡಿದ್ದಾರೆ.  

ರಾಜೇಶ್ ಶ್ರೀವತ್ಸ, 




No comments:

Post a Comment