Wednesday, July 15, 2015

ಕೈಗಂಟಿದ ಅತ್ತರು (ಅನುಭವ) - ರಾಜೇಶ್ ಶ್ರೀವತ್ಸ


ನಾನು ಪ್ರೇತದ ಕೈ ಹಿಡಿದು ಮೇಲೆಬ್ಬಿಸಿದೆನೇ?
ನೈಸ್ ರಸ್ತೆಯ ಸೇತುವೆಯ ಕಡೆಗೆ ನಡೆಯುತ್ತಾ ಮನೆಯ ಕಡೆ ಸಾಗುತ್ತಿದ್ದೆ. ತಲೆ ಸಣ್ಣಗೆ ನೋಯುತ್ತಿತ್ತು ಮಾತ್ರೆ ತೆಗೆದುಕೊಂಡು ಮನೆಗೆ ಹೋಗಬೇಕು ಅಂದುಕೊಂಡೆ. ಕೆಲಸ ಮುಗಿಸಿ ಮನೆಯ ಕಡೆ ಸಾಗುತ್ತಿದ್ದ ಗಾರ್ಮೆಂಟ್ಸ್ ಕಂಪನಿಯ ಹುಡುಗಿಯರಿಂದ ರಸ್ತೆ ಗಿಜಿಗಿಡುತ್ತಿತ್ತು. ಎದುರಿನ ವಿಟ್ಟಸಂದ್ರದ ಕಡೆಯಿಂದ ಸುಮಾರು ಮೂವತ್ತು ವರ್ಷದ ಹೆಂಗಸು ನಡೆದು ಬರುತ್ತಿದ್ದಳು. ಸುಮಾರು ಐದೂವರೆ ಅಡಿ ಎತ್ತರ, ದಪ್ಪದೇಹ, ಗೌರವರ್ಣ, ಗುಂಗುರು ಕೂದಲು, ತಲೆ ತುಂಬಾ ಹೂವು, ಕಾಲಿನಲ್ಲಿ ಇಂಚಗಲದ ಬೆಳ್ಳಿ ಗೆಜ್ಜೆ, ಕೈತುಂಬಾ ಬಳೆ , ಕೈಯಲ್ಲಿ ಪ್ಲಾಸ್ಟಿಕ್ ವಯರ್ ಚೀಲ. ಹತ್ತಿರ ಬರುತ್ತಿದ್ದಂತೇ ಕತ್ತಿನಲ್ಲಿದ್ದ ದೊಡ್ಡ ಕರಿಮಣಿ ಚಂದ್ರಹಾರ, ಕಿವಿಯಲ್ಲಿ ಹಳೆಯಕಾಲದ ಹಂಸದ ಹರಳಿನ ಕಿವಿಯೋಲೆ ನೋಡಿ ಅಕೆ ಮುಸ್ಲಿಮ್ ಇರಬೇಕು ಅನ್ನಿಸಿತು. ಇಬ್ಬರೂ ನೈಸ್ ಸೇತುವೆಯ ಕಡೆ ನಡೆದೆವು. ಆಕೆ ಮುಂದೆ. ನಾನು ಹಿಂದೆ. ಸೇತುವೆಯ ಮಧ್ಯ ಬರುತ್ತಿದ್ದಂತೆ ಆಕೆ ಜರ್ರನೆ ಜಾರಿ ಬಿದ್ದಳು. ಕೈಲಿದ್ದ ಚೀಲದಿಂದ ಖಾಲಿ ಟಿಫನ್ ಡಬ್ಬಗಳು ಉರುಳುತ್ತಾ ಹೊರಬಿದ್ದವು. ನಾನು ಅರ್ರೇ!! ಪ್ಚ್ ಪ್ಚ್ ಅನ್ನುತ್ತ ನೆರವಿಗೆ ಹತ್ತಿರ ಹೋಗಿ ನೆರವಿಗೆ ಕೈ ಚಾಚಿದೆ. ಅತ್ತರಿನ ಘಂ ಮೂಗಿಗೆ ಬಡಿಯಿತು. ಆಕೆ ನನ್ನ ಕೈ ಹಿಡಿದು ಸಾವರಿಸಿಕೊಂಡು ಎದ್ದು ಕುಳಿತಳು. ಉರುಳಿ ಬಿದ್ದ ಮೂರು ಟಿಫನ್ ಬಾಕ್ಸ್‌ಗಳನ್ನು ಎತ್ತಿ ಅಕೆಗೆ ನೀಡಿದೆ. ಆಕೆ ನಗುತ್ತಾ ’ ತುಂಬಾ ಥಾಂಕ್ಸ್‌ರೀ. ಅಣ್ಣನ ಮನೆಗೆ ಹೋಗ್ತಾ ಇದ್ದೆ ಇವತ್ತು ಇಫ್ತೆಹಾರ್. ಯಾವಾಗಲೂ ಸೇತುವೆ ದಾಟುವಾಗ ಇಲ್ಲಿ ಜಾರಿ ಬೀಳ್ತೀನಿ ’ ಅಂದಳು. ಅಲ್ಲಾ ಇಷ್ಟು ಹೆಣ್ಣು ಮಕ್ಕಳು ಓಡಾಡುತ್ತಿದ್ದರೂ ಈ ಹೆಣ್ಣಿನ ಸಹಾಯಕ್ಕೆ ಒಬ್ಬರೂ ಬರಲಿಲ್ಲವಲ್ಲ ಅನಿಸಿ ಸುತ್ತ ನೋಡಿದೆ. ರಸ್ತೆಯಲ್ಲಿರುವವರೆಲ್ಲಾ ನನ್ನನ್ನೆ ನೋಡುತ್ತಿದ್ದಾರೆ ಅನ್ನಿಸಿ ಕಸಿವಿಸಿಯಾಯ್ತು. ಹತ್ತಿರ ನಡೆದು ಬರುತ್ತಿದ್ದ ಇಬ್ಬರು ಹುಡುಗಿಯರು ನನ್ನನ್ನೆ ನೋಡುತ್ತಾ ’ ಏನಾಯ್ತು ಸಾರು ಏನಾದ್ರು ಕಳೆದುಕೊಂಡ್ರಾ ’ ಎಂದು ನನ್ನ ಕಡೆ ನೋಡಿ ನಿಂತು ವಿಚಾರಿಸಿದರು. ನಾನು ಪೆಚ್ಚು ಪೆಚ್ಚಾಗಿ ಎನೂ ಇಲ್ಲ ಅನ್ನುತ್ತಾ ಸುತ್ತ ನೋಡಿದೆ ಅಷ್ಟರೊಳಗೆ ಆ ಹೆಣ್ಣು ಅಲ್ಲಿಂದ ಎದ್ದು ಮಾಯವಾಗಿದ್ದಳು. ಜನ ಜಂಗುಳಿಯಲ್ಲಿ ಸೇರಿ ಹೋಗಿರ ಬೇಕೆಂದು ಸುಮ್ಮನಾದೆ. ಸೇತುವೆ ದಾಟಿ ವೀರಭದ್ರ ಮೆಡಿಕಲ್ಸ್ ಕಡೆ ನಡೆದು ನಾಲ್ಕು ನೈಸಿಪ್ ಕೊಡಿ ಅಂತ ಕೇಳಿದೆ. ಅಂಗಡಿಯಾತನಿಗೆ ನನ್ನ ಮುಖ ಪರಿಚಯವಿದೆ. ಆತ ’ ಏನು ಸಾರು ತುಂಬಾ ತಲೆ ನೋವಾ? ಸೇತುವೆ ಮೇಲೆ ಯಾಕೆ ಕೂತು- ನಿಂತು ಮಾಡ್ತಾ ಇದ್ದ್ರಿ ? ತಲೆ ತಿರುಗಿತಾ? ಏನಾದ್ರು ಕಳೆದುಕೊಂಡ್ರಾ ? ’ ಅಂತ ಕೇಳಿದ. ನಾನು ಯಾರದೋ ಟಿಫನ್ ಬಾಕ್ಸ್ ಎತ್ತಿಕೊಡ್ತಾ ಇದ್ದೆ ಎಂದಷ್ಟೇ ಹೇಳಿ ಮನೆಯ ಕಡೆ ತಿರುಗಿದೆ.
ನಮ್ಮ ಲೇಔಟ್ ಗೇಟಿನಿಂದ ಅಷ್ಟು ದೂರದಲ್ಲಿ ಹೊಲದ ಮಧ್ಯದಲ್ಲಿ ಸ್ಥಳೀಯ ಪುಢಾರಿ ಕಂ ರೌಡಿ ಜಮೀಲ್ ಅಬ್ಬಾಸನ ಬಂಗಲೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಾ ಇದ್ದರು. ಶಾಮಿಯಾನದ ಬಾಗಿಲಲ್ಲೇ ದೊಡ್ಡ ಫ್ಲೆಕ್ಸ್ ಬೋರ್ಡ್ ಅದರ ಮೇಲೆ ಜಮೀಲ್‌ನ ಚಿತ್ರ. ಅವನ ಪಕ್ಕದಲ್ಲಿ ನಮ್ಮ ಏರಿಯಾದ ಎಲ್ಲಾ ಪುಢಾರಿಗಳ ಮುಂಡಗಳನ್ನು ಕತ್ತರಿಸಿ ಸಾಲಾಗಿ ಅಂಟಿಸಿದ್ದರು. ಪಕ್ಕದಲ್ಲೇ ಇನ್ನೊಂದು ಫ್ಲೆಕ್ಸ್ ಬೋರ್ಡ್ ಅದರ ಮೇಲೆ ಒಬ್ಬ ಹೆಣ್ಣಿನ ಚಿತ್ರಕ್ಕೆ ಗುಲಾಬಿ ಹೂವಿನ ಅಲಂಕಾರ. ಹತ್ತಿರ ಬರುತ್ತಿದ್ದಂತೇ ಅದು ಅಲ್ಲಿ ಸೇತುವೆಯ ಮೇಲೆ ಭೇಟಿಯಾದ ಹೆಣ್ಣಿನ ಚಿತ್ರವೆಂದು ಗುರುತಿಸಿದೆ. ಕೆಳಗೆ ಉರ್ದು ಭಾಷೆಯಲ್ಲಿ ಎನೋ ಬರೆದಿದ್ದರು. ಅಪಾರ್ಟ್ಮೆಂಟ್‌ನ ಗೇಟ್ ದಾಟುತ್ತಿದ್ದಂತೇ ನಮ್ಮ ಅಪಾರ್ಟ್ಮೆಂಟ್ ಮಾಲಿಕರ ಅಮ್ಮ ಎದುರಾದರು. ’ಏನಮ್ಮ ರಂಜಾನ್ ಊಟಕ್ಕೆ ಸಾಬರ ಮನೆಗೆ ಹೋಗಲಿಕ್ಕಿದೆಯಾ ’ ಅಂತ ತಮಾಷೆಗೆ ಕೇಳಿದೆ. ಅವರು ’ ಕರೆದಿದ್ದಾರಪ್ಪ . ಅದರೆ ಅಲ್ಲಿ ಎಲ್ಲಾ ರಾಜಕೀಯದವರೇ ತುಂಬಿರುತ್ತಾರೆ. ಅವರ ಮಧ್ಯ ನಮಗೇನು ಕೆಲಸ. ಹೋಗದವರಿಗೆಲ್ಲಾ ಜಮೀಲನೇ ಮನೆಗೆ ಪಾರ್ಸಲ್ ಕಳಿಸುತ್ತಾನೆ ’ ಎಂದರು . ಶಾಮಿಯಾನದ ಎದುರು ಒಬ್ಬ ಹೆಂಗಸಿನ ಚಿತ್ರ ಹಾಕಿದ್ದಾರಲ್ಲ ಆಕೆ ..’ ಎಂದು ನಾನು ವಿಚಾರಿಸುತ್ತಿದ್ದಂತೇ ಮಧ್ಯದಲ್ಲೇ ಅವರು ’ ಆಕೆನಾ? ಅವಳು ಜಮೀಲನ ತಂಗಿ ಜುಬೇದಾ. ಇಲ್ಲೇ ವಿಟ್ಟಸಂದ್ರದಲ್ಲಿ ಇದ್ದಳು. ಆರು ವರ್ಷದ ಹಿಂದೆ ಜಮೀಲ ಹೀಗೇ ಒಂದು ರಂಜಾನ್ ಉಪವಾಸದ ದಿನ ರಾತ್ರಿ ಊರಿಗೆಲ್ಲಾ ಊಟ ಇಟ್ಟಿದ್ದ. ಆಗಿನ್ನೂ ನೈಸ್ ಸೇತುವೆ ಕಟ್ಟುತ್ತಿದ್ದರು. ಸಂಜೆ ಆಕೆ ಮನೆಯಿಂದ ನಡೆದು ಬರುತ್ತಾ ಇದ್ದಳು. ಕಟ್ಟಿ ಮುಗಿಸುವ ತನಕ ಸೇತುವೆ ಮೇಲೆ ಹತ್ತಿ ಓಡಾಡ ಬಾರದೆಂದು ರಸ್ತೆ ಬಂದ್ ಮಾಡಿದ್ದರೂ ಜನ ಸೆಕ್ಯುರಿಟಿಯ ಕಣ್ಣು ತಪ್ಪಿಸಿ ಸೇತುವೆಯ ಮೇಲಿಂದಲೇ ಇತ್ತ ಬರುತ್ತಿದ್ದರು. ಇವಳಿಗೆ ಅಂದು ಗ್ರಹಚಾರ ಕಾದಿತ್ತು ಈಕೆಯೂ ತಡೆ ಗೋಡೆ ಹಾರಿ ಸೇತುವೆಯ ಮೇಲೆ ಓಡುತ್ತಾ ದಾಟುತ್ತಿದ್ದಳು ಜಲ್ಲಿ ಕಲ್ಲಿನ ಮೇಲೆ ಕಾಲಿಟ್ಟು ಜಾರಿ ಬಿದ್ದಳು. ತಲೆ ನೆಲಕ್ಕೆ ಬಡಿದು ಅಲ್ಲೇ ಸತ್ತಳು. ಭಾರೀ ಆಳು.. ಲಕ್ಷ್ಣಣವಾಗಿದ್ದಳು , ಸ್ಟೈಲಾಗಿ ಅಲಂಕಾರ ಮಾಡ್ಕೊಂಡು ಸೆಂಟ್ ಹಾಕ್ಕೊಂಡು, ಝಣ್ ಝಣ್ ಗೆಜ್ಜೆ ಸದ್ದು ಮಾಡ್ಕೊಂಡು ಓಡಾಡೋಳು , ಸಾಯುವಾಗ ಮದುವೆ ಆಗಿ ಐದು ತಿಂಗಳಾಗಿತ್ತು ಅಷ್ಟೆ. ಪಾಪ ಛೇ !! . ಈಗಲೂ ಆಗಾಗ ಚೀಲ ಹಿಡಿದುಕೊಂಡು ಸೇತುವೆ ಮೇಲೆ ನಡಿತಾ ಇರ್ತಾಳೆ ನಾವೇ ನೋಡಿದ್ದೀವಿ ಅಂತ ಸಿದ್ದರಾಜು, ತಾಯಪ್ಪ ಹೇಳ್ತಾರೆ. ಅವರು ಮೊದಲೇ ಕುಡುಕ್‌ ಬಡ್ಡೀಮಕ್ಕಳು ಅವರನ್ನ ಹೆಂಗೆ ನಂಬೋದು ? ಅಷ್ಟಕ್ಕೂ ಸಾಬರು ಸತ್ತರೆ ದೆವ್ವ ಆಗಲ್ವಂತಲ್ಲ? ಹಿಂಗಂದಕ್ಕೆ ಒಮ್ಮೆ ಆ ಜಮೀಲ ತಾಯಪ್ಪನನ್ನು ಕತ್ತರಿಸಿ ಹಾಕ್ತೀನಿ ಮಗನೆ, ನನ್ನ ತಂಗಿನ ಸೈತಾನ್ ಅಂತೀಯಾ ಅಂತ ಹೊಲದೊಳಗೆ ಅಟ್ಟಿಸಿಕೊಂಡು ಹೋಗಿದ್ದ...." ಅವರು ಹೇಳುತ್ತಲೇ ಇದ್ದರು.
ಹಾಗಾದರೆ ನಾನು ಕೈ ಚಾಚಿ ಎಬ್ಬಿಸಿದ್ದು ಜುಬೇದಳನ್ನೇ ? !! ನಾನು ಪ್ರೇತದ ಕೈ ಹಿಡಿದು ಮೇಲೆಬ್ಬಿಸಿದೆನೇ? ಕೈ ಉಜ್ಜಿಕೊಳ್ಳುತ್ತಾ ಮೂಸಿ ನೋಡಿಕೊಂಡೆ.. ಅತ್ತರಿನ ಪರಿಮಳ ಘಂ ಅಂದಿತು !!!

ರಾಜೇಶ್ ಶ್ರೀವತ್ಸ, 

ಬರ್ಮುಡಾ ಹುಲ್ಲು - ರಾಜೇಶ್ ಶ್ರೀವತ್ಸ,


ನಿಮ್ಮ ಊರಿಗೆ ಮಂತ್ರಿ ಮಹೋದಯರು ವಕ್ಕರಿಸುತ್ತಿದ್ದಾರೆಂದರೆ ನಿಮ್ಮೂರಿನ ಉದ್ಯಾನವನ ರಾತ್ರಿ ಬೆಳಗಾಗುವುದರೊಳಗಾಗಿ ನಂದನವನದಂತೆ ಕಂಗೊಳಿಸುತ್ತದೆ ಅಲ್ಲವೆ? ಬೆಳೆದು ನಿಂತ ಹೂವಿನ ಗಿಡಗಳಂತೆ ಐದರಿಂದ ಹತ್ತಡೀಗೂ ಎತ್ತರದ ಸೈಕಸ್ ಹಾಗು ಕಣಗಲೆ ಮರಗಳು ಕೂಡಾ ತೋಟಗಾರಿಕ ಕೇಂದ್ರಗಳಲ್ಲಿ ಕುಂಡಗಳಲ್ಲಿ ಬೇಕಾದಾಗ ಲಭ್ಯವಾಗುತ್ತವೆ. ಸಾಮಾನ್ಯ ಬೋಗನ್ ವಿಲ್ಲೆಯ ಗಿಡಕ್ಕೆ ರೂ ೨೫೦ ಕಕ್ಕಬೇಕು ಅಷ್ಟೆ. ಇನ್ನು ಉತ್ತಮ ಜಾತಿಯ ಗಿಡಗಳಂತೂ ಇನ್ನೂ ದುಬಾರಿ. ಈ ಮಂತ್ರಿ ಮಹೋದಯರಿಗೆ ಸ್ವಾಗತ ಕೋರಲು ನಮ್ಮ ತೆರಿಗೆ ಹಣ ಎಷ್ಟು ಪೋಲಾಗುತ್ತಿರಬಹುದು ಊಹಿಸಿ ? ಇನ್ನು ಕುಂಡಗಳ ಜೊತೆಗೆ ಉದ್ಯಾನವನಗಳ ನೆಲಕ್ಕೆ ಹಾಸಲು ಹುಲ್ಲಿನ ಚಾಪೆಗಳೂ ಲಭ್ಯ.

ಪರಪ್ಪನ ಅಗ್ರಹಾರ, ಕೋಣೇನ ಅಗ್ರಹಾರ, ವಿಟ್ಟಸಂದ್ರ, ಬಸವಾಪುರ, ತೋಗೂರುಗಳ ಅಳಿದುಳಿದ ಹೊಲಗಳಲ್ಲಿ ಈ ಚಿನ್ನದ ಬೆಳೆಯನ್ನು ಹುಲುಸಾಗಿ ಬೆಳೆಯುತ್ತಾರೆ. ಗರಿಕೆಯ ಹಾಗೆ ಕಾಣುವ ಗರಿಕೆಗಿಂತ ಚಿಕ್ಕ ಎಲೆಗಳ ಈ ಹುಲ್ಲಿನ ಹೆಸರು ಬರ್ಮುಡಾ ಹುಲ್ಲು.ಗರಿಕೆಗಿಂತಲೂ ಹಸಿರು, ಕಾಲಿಟ್ಟರೆ ಮೆತ್ತಗೆ ಸ್ಪಂಜಿನ ಮೇಲೆ ಕಾಲಿಟ್ಟಂತೆ ಭಾಸವಾದರೂ ಗರಿಕೆಯಷ್ಟು ಕೋಮಲವಲ್ಲ. ಮುಟ್ಟಿದರೆ ಪ್ಲಾಸ್ಟಿಕ್ ಎಳೆ ಮುಟ್ಟಿದ ಅನುಭವವಾಗುತ್ತದೆ. ಬಿತ್ತನೆಗಾಗಿ ಬೇರಿರುವ ಹುಲ್ಲಿನ ಗಂಟುಗಳನ್ನು ಕತ್ತರಿಸಿ ಇಟ್ಟುಕೊಳ್ಳುತ್ತಾರೆ. ಚಪ್ಪಟೆಯಾಗಿ ಉಳುಮೆ ಮಾಡಿದ ಭೂಮಿಯ ಮೇಲೆ ಆ ಹುಲ್ಲಿನ ಗಂಟುಗಳನ್ನು ಬಿತ್ತುತ್ತಾರೆ. ಇದಕ್ಕೆ ಉಪಯೋಗಿಸುವ ನೀರು ಹಾಗು ಗೊಬ್ಬರದ ಪ್ರಮಾಣವನ್ನು ಕೇಳಲೇ ಬೇಡಿ. ಬತ್ತದ ಬೆಳೆಯಷ್ಟೇ ನೀರು ಗೊಬ್ಬರ ಬೇಕೇನೋ ..!! ದಿನಕ್ಕೆರಡು ಬಾರಿ ನೀರುಣಿಸಿ.. ವಾರಕ್ಕೊಮ್ಮೆ ರಸಾಯನಿಕ ಗೊಬ್ಬರ ಎರಚಿ, ಅಗತ್ಯ ಬಿದ್ದಾಗ ಕೀಟನಾಶಕ ಸಿಂಪಡಿಸಿ, ಕಳೆ ಹಾಗು ಕೊಳೆತ ಒಣಗಿದ ಹುಲ್ಲಿನ ಕುಡಿಗಳನ್ನು ಆಗಾಗ ಬೇರ್ಪಡಿಸಿದರೆ ಮೂರು ತಿಂಗಳಿಗೆ ಸೊಗಸಾದ ಹುಲ್ಲಿನ ಹಾಸಿಗೆ ಲಭ್ಯ. ಕೊಯಿಲಿಗೆ ೧ ವಾರಕ್ಕೆ ಮುನ್ನ ಯಂತ್ರದಿಂದ ಅಡ್ಡಾದಿಡ್ಡಿ ಬೆಳೆದಿರುವ ಕುಡಿಗಳನ್ನು ಮಟ್ಟ ಮಾಡಿದರೆ ಆಯ್ತು. ಯಂತ್ರಗಳು ಕರ್ರೋ ಶಬ್ದ ಮಾಡುತ್ತಾ ಅಳತೆಗೆ ತಕ್ಕನಾಗಿ ಹುಲ್ಲುಹಾಸನ್ನು ಕತ್ತರಿಸುತ್ತಾ ಸಾಗುತ್ತವೆ. ಕಾರ್ಮಿಕರು ಅದನ್ನು ಹಸಿರು ಒಳಗೆ ಕೆಳಗಿನ ಮಣ್ಣು ಮೇಲೆ ಮಾಡಿ ಚಾಪೆಯಂತೆ ಸುತ್ತಿ ಲಾರಿಯಲ್ಲಿ ಪೇರಿಸಿ ಸಾಗಿಸುತ್ತಾರೆ. ಒಂದು ಚದರ ಅಡಿ ಹುಲ್ಲುಹಾಸಿನ ಬೆಲೆ ಸುಮಾರು ರೂ.೬೦ ರಿಂದ ರೂ.೧೦೦ರವರೆಗೆ. ಇಷ್ಟೆಲ್ಲಾ ಬೆಲೆಕೊಟ್ಟು ನಿಮ್ಮ ತೋಟಕ್ಕೆ ಈ ಹುಲ್ಲನ್ನು ತಂದು ಹಾಸಿದರೆ ಹೊಸ ಪರಿಸರಕ್ಕೆ ಹೊಂದಿಕೊಳ್ಳಲಾಗದೆ ಒಂದು ತಿಂಗಳಲ್ಲೇ ಒಣಗಿ ಹೋಗುತ್ತದೆ frown emoticon . ಬೇಸಿಗೆಯಲ್ಲಿ ಬೆಲೆ ಹೆಚ್ಚು. ಕತ್ತರಿಸಲಾಗದೆ ಅಂಚುಗಳಲ್ಲಿ ಉಳಿದ ಹುಲ್ಲಿಗೂ ಬೆಲೆ ಇದೆ. ಅವುಗಳನ್ನು ಹೊಸೂರಿನ ಹೂವಿನ ಮಾರುಕಟ್ಟೆಗೆ ಸಾಗಿಸಿದರಾಯ್ತು. ಅಲ್ಲಿ ಸೊಗಸಾಗಿ ಹಾರ ಮಾಡಿ ಎಲ್ಲೆಡೆಗೆ ಸಾಗಿಸುತ್ತಾರೆ. ಭಕ್ತರು ಇದೇ ಗರಿಕೆಯೆಂದು ಗಣೇಶನಿಗೇ ಮೋಸ ಮಾಡಿ ಅವನ ಕೊರಳಿಗೆ ಹಾಕುತ್ತಾರೆ. ತಮಿಳುನಾಡು, ಆಂಧ್ರಗಳಲ್ಲಂತೂ ಅದನ್ನು ಗರಿಕೆಯೆಂದೇ ಜನ ಒಫ್ಫಿಕೊಂಡಿದ್ದಾರೆ.  

ರಾಜೇಶ್ ಶ್ರೀವತ್ಸ, 




ಇಗು ಒಂದು ಸುಂದರ ಸಂಸಾರ -









ನಾನೂ ಇಫ಼್ತಾರ್‌ಗೆ ಹೋಗಿದ್ದೆ. - ರಾಜೇಶ್ ಶ್ರೀವತ್ಸ,


ನಮ್ಮ ಮನೆಯ ಹಿಂದೆ ಉಲ್ಲಾಳದ ಬ್ಯಾರಿ ಮೊಹಮ್ಮದ್ ಅಬುಕರ್ ಅವರ ಮನೆ. ಅವರ ಹೆಂಡತಿ ಆಯೇಷಾ, ಇನ್ನೂ ಒಂದಿಬ್ಬರು ಸಂಬಂಧಿಕರು ಅವರ ಮಕ್ಕಳು ಅಂತ ಮನೆ ತುಂಬಾ ಜನ-ಮಕ್ಕಳು. ಆ ಮಕ್ಕಳ ಹೆಸರು ನಮಗೆ ನೆನಪಿನಲ್ಲೇ ಉಳಿಯುತ್ತಿರಲಿಲ್ಲ. ಅಬೀದಾ, ನಸೀಮ, ಜುಲ್ಫಿ, ರಫಿಕ್... ಹೀಗೆ. ಯಾರ್ಯಾರು ಯಾರ ಮಕ್ಕಳು ಅಂತ ಕೂಡ ಅರ್ಥವಾಗ್ತಾ ಇರಲಿಲ್ಲ. ಒಟ್ಟಿನಲ್ಲಿ ನಮ್ಮ ಪಾಲಿಗೆ ಅವರೆಲ್ಲ ಬ್ಯಾರಿಮಕ್ಕಳು. ಆಯೇಷಾ ನಮಗೆಲ್ಲಾ ಐಸಮ್ಮ . ಐಸಮ್ಮ ಸುಮಾರು ನಮ್ಮ ಅಮ್ಮನ ಸಮ ವಯಸ್ಸಿನವರು. ಮನೆಗಳ ಮುಖ ಬೇರೆ ಬೇರೆ ರಸ್ತೆಗಿದ್ದರೂ ಇಬ್ಬರ ಹಿತ್ತಿಲೂ ಒಂದೇ ಕಡೆ ಇರುವುದರಿಂದ ಅಮ್ಮ ಹಾಗು ಐಸಮ್ಮ ನಿತ್ಯ ಒಂದೇ ಸಮಯದಲ್ಲಿ ಹರಟೆ ಹೊಡೆಯುತ್ತಾ ಬಟ್ಟೆ ಒಗೆಯುತ್ತಿದ್ದರು. ಆಗಾಗ ಬಟ್ಟೆ ಕಲ್ಲಿಗೆ ಬಡೆಯುವ ಸದ್ದನ್ನೂ ಮೀರಿ ಕೇಳುವಂತೆ ಮಾತನಾಡಬೇಕಾದಾಗ ಜೋರಾಗಿ ಸ್ವರ ಎತ್ತರಿಸುತ್ತಿದ್ದರು. ಆಗಾಗ ಮೆಲ್ಲಗೆ ಸಣ್ಣ ದನಿಯಲ್ಲಿ. ದೂರದಿಂದ ಇದನ್ನು ಕೇಳುತ್ತಿದ್ದ ನೆರೆಹೊರೆಯ ಕೆಲವರು ಇವರಿಬ್ಬರೂ ನಿತ್ಯ ಬಟ್ಟೆ ಒಗೆಯುವಾಗ ಜಗಳಾಡುತ್ತಾರೆ ಎಂದು ಅಂದುಕೊಂಡಿದ್ದರಂತೆ.
ಸಣ್ಣ ಮಕ್ಕಳಾದ ನಮಗೆ ಐಸಮ್ಮನ ಕಿವಿಯ ಅಂಚಿನುದ್ದಕ್ಕೂ ತೂತುಗಳು ಹಾಗು ಅದಕ್ಕೆ ಪೋಣಿಸಿದ ಚಿನ್ನದ ಸುರುಟೆ, ಸುರುಟೆಗೆ ಜೋಲಾಡುವ ಹರಳುಗಳ ಗೊಂಚಲುಗಳು ಮಹಾ ಆಕರ್ಷಣೆ. ಅವರನ್ನು ಕಂಡಾಗಲೆಲ್ಲಾ ಅಷ್ಟೊಂದು ತೂತು ಮಾಡಿಸಿಕೊಳ್ಳುವಾಗ ನೋವಾಗಲಿಲ್ವಾ? ರಕ್ತ ಬರಲಿಲ್ವಾ? ಸುರುಟೆ ಭಾರ ಆಗೋಲ್ವಾ? ಎಷ್ಟು ಚಿನ್ನ ಇದೆ ನಿಮ್ಮ ಹತ್ತಿರ ? ನೀವು ತುಂಬಾ ಶ್ರೀಮಂತರು ಅಲ್ವಾ? ಎಂದು ಪದೇ ಪದೇ ಕೇಳುತ್ತಿದ್ದೆವು. ಇಂದು ಅವರು ನಮ್ಮ ಪ್ರಶ್ನೆಗಳಿಗೆ ಉತ್ತರ ಹೇಳಿದರೂ ನಾಳೆ ಮತ್ತೆ ಅದೇ ಪ್ರಶ್ನೆಗಳನ್ನು ಕೇಳುತ್ತಿದ್ದೆವು. ಅವರು ಸ್ವಲ್ಪವೂ ಬೇಸರವಿಲ್ಲದೆ ಮತ್ತೆ ಉತ್ತರಿಸುತ್ತಿದ್ದರು. ನಮ್ಮ ಮಗ ಈ ಸಲ ಇಸ್ಕೂಲ್ ಪರೀಕ್ಷೆಯಲ್ಲಿ ಫೈಲಾಗಿದ್ದಾನೆ ಅಂದರೆ ’ಗಣಪತಿಗೆ ಹಣ್ಣು ಕಾಯಿ ಮಾಡಿಸಿ ನಿಮ್ಮ ಮಗ ಮುಂದಿನ ಪರೀಕ್ಷೆಯಲ್ಲಿ ಪಾಸ್ ಆಗ್ತಾನೆ’, ಮಗಳಿಗೆ ಅಮ್ಮ ಆಗಿದೆ ಅಂದರೆ ’ ಪರಿಮಳಮ್ಮನಿಗೆ ಹಣ್ಣುಕಾಯಿ ಮಾಡ್ತೀನಿ ಅಂತ ಹರಕೆ ಹೊತ್ತುಕೊಳ್ಳಿ’ ಎಂದು ಬಿಟ್ಟಿ ಸಲಹೆ ಕೊಡುತ್ತಿದ್ದೆವು. ಆಗಲೂ ಅವರು ನಕ್ಕು ಸರಿ ಹಾಗೇ ಮಾಡ್ತೀನಿ ಎಂದು ನುಡಿಯುತ್ತಿದ್ದರು. ಅವರು ಅಗಾಗ ಸಂಜೆ ವಿಧ ವಿಧದ ಮೀನುಗಳನ್ನು ತಂದು ತೊಳೆಯುವಾಗ ನಾವು ಅದನ್ನು ನೋಡಲು ಬೇಲಿ ತೂರಿ ಅವರ ಸುತ್ತ ಹೋಗಿ ನಿಲ್ಲುತ್ತಿದ್ದೆವು. ಎಲ್ಲಿ ಆ ಮೀನಿನ ಕಣ್ಣು ತೋರಿಸಿ, ಈ ಮೀನಿನ ಬಾಲ ತೋರಿಸಿ, ಇದರ ಹೊಟ್ಟೆಯಲ್ಲಿ ಮರಿ ಇದೆಯಾ? ಇದು ಗಂಡಾ? ಇದು ಹೆಣ್ಣಾ ? ಮೀನು ತಿಂತೀರಲ್ಲಾ ನಿಮಗೆ ಪಾಪ ಬರೋಲ್ವಾ ? ನೀವು ನಮ್ಮ ಜಾತಿಗೆ ಸೇರಿಬಿಡಿ. ಈ ವಾಸನೆ ಮೀನು ತಿನ್ನೋದು ತಪ್ಪುತ್ತೆ ಅಂತ ಅವರ ತಲೆ ತಿಂದು ತೇಗುತ್ತಿದ್ದೆವು.
ರಂಜಾನ್ ಉಪವಾಸ ಶುರುವಾದಾಗ ’ನಿಮ್ಮದೆಂತ ಕಳ್ಳ ಉಪವಾಸ ರಾತ್ರಿಯೆಲ್ಲಾ ಗಡದ್ದಾಗಿ ತಿಂದು ಹಗಲು ನಿದ್ದೆ ಮಾಡ್ತೀರಿ ’ ಅಂತ ಆಡಿಕೊಂಡು ನಾವು ಬಿದ್ದು ಬಿದ್ದು ನಗುತ್ತಾ ಗೇಲಿ ಮಾಡಿದರೂ ಅವರ ನಗು ಮಾತ್ರ ನಮಗೆ ಉತ್ತರ. ಒಮ್ಮೆ ರಂಜ಼ಾನ್ ಮಾಸದಲ್ಲಿ ಅಕ್ಕ ವಿಶಾಖ ಊರಿಂದ ಬಂದಿದ್ದಳು. ಅವಳ ಮೇಲೆ ಐಸಮ್ಮನಿಗೆ ನಮಗಿಂತ ಸ್ವಲ್ಪ ಹೆಚ್ಚು ಪ್ರೀತಿ. ಅಂದು ಸಂಜೆ ಮಸೀದಿಯಿಂದ ಬಾಂಗ್ ಕೂಗಿದ ಅರ್ಧ ಘಂಟೆಯ ನಂತರ ನಮಾಜ಼್ ಮುಗಿಸಿ ಹೊರಬಂದ ಐಸಮ್ಮ, ಆಟ ಮುಗಿಸಿ ಹೊರಗೆ ಕೈ ಕಾಲು ತೊಳೆಯುತ್ತಿದ್ದ ನಮ್ಮನ್ನು ( ನಾನು, ವಿಶಾಖ , ನನ್ನ ತಮ್ಮ) ಶ್..! ಎಂದು ಗುಟ್ಟಾಗಿ ಕರೆದರು. ನಾವು ಹೊರಗಿನಿಂದಲೇ ನಮ್ಮಮ್ಮನಿಗೆ ದೇವಸ್ಥಾನಕ್ಕೆ ಹೋಗಿ ಬರ್ತೇವೆ ಎಂದು ಕೂಗಿ ಹೇಳಿ ಬೇಲಿ ನುಸುಳಿ ಐಸಮ್ಮನ ಮನೆಗೆ ಹೋದೆವು. ಒಳಗೆ ಬಣ್ಣ ಬಣ್ಣದ ದುಬೈ ಕಂಬಳಿಯ ಮೇಲೆ ಅವರ ಮನೆಯಲ್ಲಿದ್ದ ಏಳೆಂಟು ಮಕ್ಕಳು ಸಾಲಾಗಿ ಕುಳಿತು ನಮ್ಮನ್ನೇ ಕಾಯುತ್ತಿದ್ದರು. ಮೊದಲಿಗೆ ಎಲ್ಲರಿಗೂ ದೊಡ್ದ ದೊಡ್ಡ ಗಾಜಿನ ಲೋಟಗಳಲ್ಲಿ ಕಾಮಕಸ್ತೂರಿ ಬೀಜ ಹಾಕಿದ ನಿಂಬೆಹಣ್ಣಿನ ಶರಬತ್ತು. ಅದಾದ ಮೇಲೆ ಒಂದಷ್ಟು ಒಣಗಿದ ದ್ರಾಕ್ಷಿ, ಖರ್ಜೂರ, ಗೋಡಂಬಿ, ಅಂಜೂರ. ಬೇರೆ ಬೇರೆ ಹಸಿ ಹಣ್ಣಿನ ಚೂರುಗಳು. ಕಾಯಿದೋಸೆ ಪುದೀನಾ ಚಟ್ಣಿ. ಚಟ್ಣಿ ಬೇಡ ಎಂದು ರಾಗ ತೆಗೆದ ನನ್ನ ತಮ್ಮನಿಗೆ ನೆಂಚಿಕೊಳ್ಳಲು ಗುಲ್ಕನ್. ಹೆಸರು ಬೇಳೆ ಪಾಯಸ, ಕೊಬ್ಬರಿ ಸಕ್ಕರೆ ಹಾಕಿದ ಖರ್ಜಿಕಾಯಿ. ಕೇರಳದ ಹಲ್ವಾ, ಕೊಬ್ರಿ ಬಿಸ್ಕೆಟ್. ತಿನ್ನಿ ತಿನ್ನಿ ಎಂಬ ಒತ್ತಾಯದ ಜೊತೆಗೆ ನಿಮ್ಮ ಮನೆಯಲ್ಲಿ ಶುದ್ಧ ಅಲ್ವಾ ಅದಕ್ಕೆ ಎಲ್ಲಾ ಹೊಸ ಗ್ಲಾಸ್ ಮತ್ತೆ ತಟ್ಟೆ ಯಲ್ಲಿ ನಿಮಗೆ ಕೊಡ್ತಾ ಇದ್ದೀನಿ, ಇದರಲ್ಲಿ ಮೊಟ್ಟೆ ಮೀನು ಏನೂ ಇಲ್ಲ ಹೆದರಬೇಡಿ ಎಂಬ ಸಮಾಧಾನ. ಅವರ ಮನೆಯ ಮಕ್ಕಳೆಲ್ಲಾ ತಿನ್ನುವುದು ಬಿಟ್ಟು ನಮ್ಮನ್ನು ನೋಡುತ್ತಾ ಗುಸು ಗುಸು ನಗುತ್ತಾ ಇದ್ದರು. ಅವರಿಗೆ ಏನೋ ಖುಷಿ. ತಿನ್ನುವಾಗ ನಮ್ಮ ಪ್ರತಿಕ್ರಿಯೆ ಹೇಗಿದೆ ಎಂದು ಹಿರಿಯರೂ ಆಗಾಗ ಇಣುಕಿ ನೋಡುತ್ತಿದ್ದರು. ಅಂತೂ ನಮಗೆ ವಿಐಪಿ ಟ್ರೀಟ್‌ಮೆಂಟ್. ಎಲ್ಲಾ ತಿಂದು ಮುಗಿದ ಮೇಲೆ ಕೆಂಪು ಸಿಪ್ಪೆಯ ಚಂದ್ರ ಬಾಳೆ ಹೊಟ್ಟೆಗೆ ತುರುಕಿ, ಹೊಟ್ಟೆ ಭಾರವಾಗಿ ಮೇಲೆ ಏಳಲಾರದೆ ಎದ್ದೆವು. ಐಸಮ್ಮನೇ ನಮ್ಮ ಕೈಗಳನ್ನು ಹೊಸಾ ಸಣ್ಣ ರೆಕ್ಸೋನಾ ಸೋಪ್‌ನಿಂದ ತೊಳೆದು ಏಲಕ್ಕಿ ನಿಂಬೆ ಹಾಕಿದ ಬಿಸಿ ಪಾನಕ ಕುಡಿಸಿ ಮನೆಯಲ್ಲಿ ಹೇಳ ಬೇಡಿ ಆಯ್ತಾ ಅಂತ ಭಾಷೆ ತೆಗೆದುಕೊಂಡರು. ಐಸಮ್ಮನ ಮೈದುನ ನಮ್ಮ ಮನೆಯ ಹಿತ್ತಲಲ್ಲಿ ಲೈಟ್ ಹಾಕಿಲ್ಲ ಎಂದು ಖಚಿತ ಪಡಿಸಿಕೊಂಡು ಕಳ್ಳ ಹೆಜ್ಜೆಗಳಿಂದ ಕರೆದುಕೊಂಡು ಬಂದು ಒಬ್ಬೊಬ್ಬರನ್ನೆ ಎತ್ತಿ ಬೇಲಿಯಿಂದ ಈಚೆ ದಾಟಿಸಿ ಹೋದನು.
ರಾತ್ರಿ ಓದುತ್ತಾ ಕೂರುವ ನಾಟಕವಾಡುವಾಗ ನನ್ನ ತಮ್ಮ ಗುಲ್ಕನ್ ಚೆನ್ನಾಗಿತ್ತು ಅಂದರೆ , ವಿಶಾಖ ಕಾಮಕಸ್ತೂರಿ ಬೀಜ ಹಾಕಿದ ಶರಬತ್ತು ಚೆನ್ನಾಗಿತ್ತು ಅಂದಳು. ನಾನು ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದ ಗೋಡಂಬಿ ದ್ರಾಕ್ಷಿ ಖರ್ಜೂರ ತೋರಿಸುತ್ತಾ ನನಗೆ ಇದು ಚೆನ್ನಾಗಿತ್ತು ಅಂದೆ.
ಅದಾದ ಬಹಳ ವರ್ಷಗಳ ಮೇಲೆ ಹೈದರಾಬಾದಿನಲ್ಲಿದ್ದಾಗ ಪ್ರೀತಿಯಿಂದ ಒತ್ತಾಯ ಮಾಡಿ ಕರೆದ ನನ್ನ ಸ್ನೇಹಿತನ ಮನೆಗೆ ಇಫ಼್ತಾರ್‌ಗೆ ಹೋಗಿದ್ದೆ. ಅದರ ಮಾರನೆಯ ದಿನವೇ ಕಂಪನಿಯ ಕಾಟಾಚಾರದ ಇಫ಼್ತಾರ್‌ ಕೂಟದಲ್ಲಿ ನೀರೂ ಕುಡಿಯದೆ ಮಡಿಯ ನೆಪ ಹೇಳಿ ವಾಪಾಸ್ ಬಂದಾಗ ಕೆಲವರು ತಿಕ್ಕಲು ಅಂದುಕೊಂಡಿರಬಹುದು. ಈಗಲೂ ಇಫ಼್ತಾರ್‌ ಅಂದ ಕೂಡಲೆ ಐಸಮ್ಮ ಪ್ರೀತಿ ವಾತ್ಸಲ್ಯದಿಂದ ಊಟಮಾಡಿಸಿದ್ದು ನೆನಪಾಗುತ್ತದೆ.
ರಾಜೇಶ್ ಶ್ರೀವತ್ಸ, 



ವೇಣಿ ಮಾಧವನ ತೋರಿಸೆ – ವಾದಿರಾಜರು

ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ
ಕಾಣದೆ ನಿಲ್ಲಲಾರೆನೆ||ಪಲ್ಲವಿ||

ಕಾಣುತ ಭಕ್ತರ ಕರುಣದಿ ಸಲಹುವ
ಜಾಣೆ ತ್ರಿವೇಣಿ ಸಾರೆ ಸುಖವಾಣಿ||ಅನುಪಲ್ಲವಿ||

ಬಂದೆನೆ ಬಹಳ ದೂರದಿ ಭವಸಾಗರ ತರಣಿ
ನಿಂದೆನೆ ನಿನ್ನ ತೀರದಿ
ಒಂದು ಗಳಿಗೆ ಹರಿಯ ಅಗಲಿ ನಾನಿರಲಾರೆ
ಮಂದಗಮನೆ ಎನ್ನ ಮುಂದಕೆ ಕರೆಯೆ ||೧||

ಶರಣಾಗತರ ಪಾಲಿಪುದು ತರಳೆ ನಿನ್ನ ಬಿರುದು
ಕರುಣದಿಂದೆನ್ನ ಪೊರೆಯೆ
ಸ್ಮರಣೆ ಮಾತ್ರದಿ ಭವತಾಪವ ಹರಿಸುವ
ಸ್ಮರನ ಪಿತ ಮುರಹರನ ಕರುಣದಿ ||೨||

ಸುಜನರಿಗೆಲ್ಲಾಧರಳೆ ಸುಖಶೀಲೆ ಕೇಳೆ
ಕುಜನ ಸಂಗವನು ಕೀಳೆ
ನಿಜಪದವಿಯನೀವ ಹಯವದನನ
ಪದ ರಜವ ತೋರಿಸೆ ಮದಗಜಗಮನೆ ||೩||

Friday, May 22, 2015

ಸಂಕಥನ - ಚುಕ್ಕುಬುಕ್ಕು

Courtesy:  ಚುಕ್ಕುಬುಕ್ಕು


(ಹೊಸ ಸಾಹಿತ್ಯ ಪತ್ರಿಕೆ ‘ಸಂಕಥನ’ದ ಮೊದಲ ಸಂಚಿಕೆ ಕಳೆದವಾರ ಹೊರಬಂದಿದೆ. ಅದಕ್ಕೆ ಸ್ವಾಗತ ಹಾಗೂ ಶುಭ ಕೋರುತ್ತಾ, ಮೊದಲ ಸಂಚಿಕೆ ಓದಿ ಗೌರಿ ಹಂಚಿಕೊಂಡಿರುವ ಅನಿಸಿಕೆಗಳನ್ನು ಇಲ್ಲಿ ಕೊಡುತ್ತಿದ್ದೇವೆ. ‘ಸಂಕಥನ’ಕ್ಕೆ ಚಂದಾದಾರರಾಗಲು ಸಂಪಾದಕ ರಾಜೇಂದ್ರ ಪ್ರಸಾದ್‌ ಅವರನ್ನು ಸಂಪರ್ಕಿಸಿ) 
ಕಾವ್ಯ, ಅಂಕಣಬರಹ, ಓದು, ತಿರುಗಾಟ, ಛಾಯಾಗ್ರಹಣ, ಸಂಘಟನೆ, ಅಡುಗೆ, ಜಗಳ ಹೀಗೆ ಬದುಕಿನ ಹಲವು ಆಯಾಮಗಳಲ್ಲಿ ತಮ್ಮನ್ನು ತಾವು ತೀವ್ರವಾಗಿ ತೊಡಗಿಸಿಕೊಂಡಿರುವ ರಾಜೇಂದ್ರ ಪ್ರಸಾದ್‌ ಅವರ ಹೊಸ ಸಾಹಸ 'ಸಂಕಥನ' ತ್ರೈಮಾಸಿಕ ಸಾಹಿತ್ಯ ಪತ್ರಿಕೆ.
ಕಳೆದ ಭಾನುವಾರ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಈ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ನಡೆಯಿತು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹೆಚ್ಚಿನಂಶ ಯುವಕರು ಮತ್ತು ಕೆಲವು ಹಿರಿಯರ ಸಮ್ಮಿಲನ 'ಸಂಕಥನ' ಪತ್ರಿಕೆಯ ಉದ್ದೇಶ, ಕಾರ್ಯವೈಖರಿಯನ್ನೂ ಸೂಕ್ತವಾಗಿ ಪ್ರತಿಬಿಂಬಿಸುವಂತಿತ್ತು. ಹಿರಿಯರಾದ ಸಿ.ಎನ್‌. ರಾಮಚಂದ್ರನ್‌, ಚಂದ್ರಶೇಖರ ಆಲೂರು, ಆರ್‌. ಪೂರ್ಣಿಮಾ ಅವರು ಆಡಿದ ಮಾತುಗಳೂ 'ಸಂಕಥನ' ಪತ್ರಿಕೆ ಸಾಧಿಸಿದ ಗುಣಗಳೊಟ್ಟಿಗೇ, ಒಳಗೊಳ್ಳಬೇಕಾದ ಅಂಶಗಳನ್ನೂ ಒತ್ತಿಹೇಳಿದ್ದನ್ನು ಮನಸ್ಸಿನಲ್ಲಿಟ್ಟುಕೊಂಡೇ ಈ ಮುದ್ದಾದ ಪತ್ರಿಕೆಯನ್ನು ಕೈಗೆತ್ತಿಕೊಂಡೆ.
ಆಕಾರ, ಮುಖಪುಟ ಚಿತ್ರ ಎಲ್ಲ ದೃಷ್ಟಿಯಿಂದಲೂ ನೋಡಿದ ಕೂಡಲೇ ಕೈಗೆತ್ತಿಕೊಳ್ಳಬೇಕು ಎನಿಸುವಷ್ಟು ಮುದ್ದಾಗಿದೆ.
'ಇದು ಇಂದಿನ ದುರಿತ ಕಾಲಘಟ್ಟದಲ್ಲಿ ಸಮಾಜ, ಧರ್ಮ ಮತ್ತು ರಾಜಕಾರಣ ಸೇರಿದಂತೇ ಎಲ್ಲಾ ಕ್ಷೇತ್ರಗಳೂ ಸಮೂಹ ಭ್ರಮೆಗಳಿಂದ ತುಂಬಿಕೊಳ್ಳುತ್ತಾ ಮನುಷ್ಯನ ನಡುವೆ ಪರಸ್ಪರ ಹೊಂದಾಣಿಕೆ ಸಂಘಟನೆಯ ಜೀವನವನ್ನು ವಿಘಟಿಸುತ್ತಾ ಇರುವ ಶಕ್ತಿಗಳ ವಿರುದ್ಧ ಜಾಗೃತಗೊಳ್ಳುವ ಪ್ರಯತ್ನ' ಎಂದು ಸಂಪಾದಕರು ಸಂಕಥನದ ಆಶಯವನ್ನು ತಿಳಿಸಿದ್ದಾರೆ. ಹಳೆಯ ಸಾಹಿತ್ಯ ಪತ್ರಿಕೆಗಳಲ್ಲಿನ ಅತ್ಯುತ್ತಮ ಅಂಶಗಳನ್ನು ಹೆಕ್ಕಿಕೊಂಡು ಹೊಸ ಗಂಟು ಕಟ್ಟಿಕೊಂಡು ಹೊಸ ಪಯಣ ಹೊರಡುವ ಆಶಯ ಅವರದು.
ಸಂಕಥನದ ಪರಿವಿಡಿಯನ್ನು ಒಮ್ಮೆ ನೋಡಿದರೆ ಸಾಕು, ಆ ಪತ್ರಿಕೆಯ 'ಎಲ್ಲವನ್ನೂ ಒಳಗೊಳ್ಳುವ' ಆಶಯ ಸ್ಪಷ್ಟವಾಗಿಯೇ ಗೋಚರಿಸುತ್ತದೆ.
ಮಾತು–ವಿಮರ್ಶೆ, ಸಂದರ್ಶನ, ಪುಸ್ತಕಲೋಕ, ಸಿನಿಮೋಪಾಖ್ಯಾನ, ಕಥನ, ಕವಿತೆ, ಬಿಡಿಕವಿತೆಗಳು ಹೀಗೆ ಏಳು ವಿಭಾಗಗಳಲ್ಲಿ ವೈವಿಧ್ಯಮಯ ಬರಹಗಳು ಇವೆ. ಮೊದಲ ಸಂಚಿಕೆಯಲ್ಲಿ ವಿಶೇಷವಾಗಿ ಗಮನಸೆಳೆದದ್ದು ಪ್ಯಾಬ್ಲೋ ನೆರೊಡಾನ ಸಂದರ್ಶನ. 'ಪ್ಯಾರೀಸ್‌ ರಿವ್ಯೂ' ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಈ ಸಂದರ್ಶನವನ್ನು ಯುವ ಕವಯಿತ್ರಿ ಸ್ಮಿತಾ ಮಾಕಳ್ಳಿ ಸಶಕ್ತವಾಗಿ ಕನ್ನಡಕ್ಕೆ ತಂದಿದ್ದಾರೆ. ಸಾಹಿತ್ಯದ ಓದಿನಷ್ಟೇ ಲೇಖಕರ ಬಗ್ಗೆಯೂ ಕುತೂಹಲ ಬೆಳೆಸಿಕೊಂಡಿರುವ ನನ್ನಂಥವರಿಗೆ ಬಹಳೇ ರುಚಿಸುವ ಸಂದರ್ಶನವಿದು. ನೆರೋಡಾ ಹಸಿರು ಶಾಯಿಯಲ್ಲಿ ಪದ್ಯ ಬರೆಯುತ್ತಿದ್ದ ಎನ್ನುವುದರಿಂದ ಹಿಡಿದು 'ಬೆಂಕಿಯಿಂದ ನಿಮ್ಮ ಪುಸ್ತಕಗಳನ್ನು ಉಳಿಸಿಕೊಳ್ಳಬೇಕಾದಲ್ಲಿ ಯಾವುದನ್ನು ಉಳಿಸಿಕೊಳ್ಳುತ್ತೀರಿ?' ಎಂಬ ಪ್ರಶ್ನೆಗೆ 'ಯಾವುದನ್ನೂ ಇಲ್ಲ, ಅದಕ್ಕೆ ಬದಲಾಗಿ ಒಂದು ಹುಡುಗಿಯನ್ನು ರಕ್ಷಿಸುತ್ತೇನೆ' ಎಂಬ ಮಾತುಗಳವರೆಗೆ ಎಲ್ಲವನ್ನೂ ಬೆರಗು, ಕುತೂಹಲದಿಂದ ಓದಿಕೊಂಡೆ.
'ಮಾತು–ವಿಮರ್ಶೆ' ವಿಭಾಗವೊಂದರಲ್ಲಿಯೇ ಆರು ಲೇಖನಗಳಿವೆ. ಪ್ರತಿಯೊಂದೂ ವಿಭಿನ್ನ ನೆಲೆಗಳನ್ನು ಶೋಧಿಸುತ್ತವೆ. ಸ್ವತಃ ಸಾಹಿತ್ಯ ಪತ್ರಿಕೆಯೊಂದನ್ನು ಶ್ರದ್ಧೆ ಮತ್ತು ಬದ್ಧತೆಯಿಂದ ರೂಪಿಸುತ್ತಾ ಬಂದಿರುವ ಡಿ.ವಿ. ಪ್ರಹ್ಲಾದ್‌ ಅವರ 'ನಾಲ್ಕು ಮತ್ತೊಂದರ ನಡುವೆ' ಲೇಖನ ನನಗೆ ತುಂಬ ಇಷ್ಟವಾಯ್ತು. ಒಂದು ಸಾಹಿತ್ಯ ಪತ್ರಿಕೆ ರೂಪುಗೊಳ್ಳಲು ಬೇಕಾದ ವಾತಾವರಣ, ಅವುಗಳ ಸಾರ್ಥಕತೆ– ನಿರರ್ಥಕತೆಗಳ ಬಗ್ಗೆ ವಿವರಿಸುತ್ತಲೇ ಇಂದಿನ ಜಡ್ಡುಗಟ್ಟಿದ ಪರಿಸ್ಥಿತಿಯ ಬಗ್ಗೆ ಚುರುಕಾಗಿಯೇ ಚಾಟಿ ಬೀಸಿದ್ದಾರೆ.
ಈ ವಿಭಾಗದ ಇನ್ನೊಂದು ಮುಖ್ಯ ಲೇಖನ ಎಚ್‌.ಎಸ್‌. ಅನುಪಮಾ ಅವರ 'ಮಾತೃಭಾಷಾ ಶಿಕ್ಷಣ'. ಮಾತೃಭಾಷಾ ಶಿಕ್ಷಣ ಆಂದೋಲನದ ಅಂಗವಾಗಿ ಧಾರವಾಡದ ಕರ್ನಾಟಕ ಜನಸಾಹಿತ್ಯ ಸಂಘಟನೆ ಏರ್ಪಡಿಸಿದ್ದ ಎರಡು ದಿನದ 'ಮಾತೃಭಾಷಾ ಮಾಧ್ಯಮದ ಕುರಿತ ರಾಷ್ಟ್ರೀಯ ಚಿಂತನಾ ಶಿಬಿರ'ದ ಕುರಿತಾದ ಬರಹವಿದು. ಕಾರ್ಯಕ್ರಮದ ವರದಿಯಂತೇ ಆರಂಭವಾಗುವ ಈ ಲೇಖನ ನಂತರ ಸಂವಾದವಾಗಿ ಬೆಳೆಯುತ್ತದೆ. ಮಾತೃಭಾಷಾ ಶಿಕ್ಷಣದ ಆಂದೋಲನದ ಅವಶ್ಯಕತೆಯ ಜತೆಜತೆಗೇ ಭಾಷಾ ಚಳವಳಿಯಲ್ಲಿನ 'ಅತಿ'ತನಗಳು ಕಟ್ಟುವ ಚೌಕಟ್ಟಿನ ಅಪಾಯಗಳ ಕುರಿತೂ ಈ ಲೇಖನ ಕೆಲವು ಬಹು ಮುಖ್ಯ ಅನುಮಾನ–ಪ್ರಶ್ನೆಗಳನ್ನು ಎತ್ತುತ್ತದೆ.
ಸಲಿಂಗ ಕಾಮದ ಕುರಿತು ಐತಿಹಾಸಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸುವ ಕೃಷಿಕ್‌ ಎ.ವಿ. ಅವರ 'ಸಲಿಂಗ ಪ್ರೇಮ' ಲೇಖನ, ಜಿ.ಸಿ. ಕುಮಾರಪ್ಪ ಎನ್ನುವ ಗಾಂಧಿವಾದಿ ಸಾಧಕರನ್ನು ಪರಿಚಯಿಸುವ ಜಗದೀಶ ಕೊಪ್ಪ ಅವರ ಲೇಖನವೂ ಇಷ್ಟವಾಯಿತು.
ಈ ಸಂಚಿಕೆಯಲ್ಲಿ ಒಟ್ಟು ನಾಲ್ಕು ಕಥೆಗಳಿವೆ. ಬಾದಲ್‌ ನಂಜುಂಡಸ್ವಾಮಿ ಅವರ 'ಈಸ್ತೊರೀಯ ದೆ ಫಿದೆನ್ಶಿಯೋ' ಕಥೆ ವಿಭಿನ್ನ ಕಥಾವಸ್ತು ಮತ್ತು ಆವರಣದಿಂದ ಗಮನ ಸೆಳೆಯುತ್ತದೆ. ಇಲ್ಲಿನ ನಾಲ್ಕೂ ಕಥೆಗಳೂ ಭಾಷೆ, ಪರಿಸರ, ವಸ್ತುಗಳ ದೃಷ್ಟಿಯಿಂದ ಭಿನ್ನವಾಗಿರುವುದಷ್ಟೇ ಅಲ್ಲದೇ ಈ ಎಲ್ಲ ಕಥೆಗಾರರೂ ಹೊಸಬರು ಎನ್ನುವುದೂ ಮಹತ್ವದ ಸಂಗತಿ.
ಪುಸ್ತಕಲೋಕದಲ್ಲಿ ನರೇಂದ್ರ ಪೈ ಅವರು ಅರುಣ್‌ ಕೊಲಟ್ಕರ್‌ ಅವರ 'ಜೆಜೂರಿ' ಮತ್ತು ಎಸ್‌. ಸುರೇಂದ್ರನಾಥ್‌ ಅವರ 'ಗಾಳಿಗೆ ಬಿದ್ದ ಚಂದ್ರನ ತುಂಡುಗಳು' ಪುಸ್ತಕಗಳನ್ನು ತುಂಬ ಆಪ್ತವಾಗಿ ಪರಿಚಯಿಸಿದ್ದಾರೆ. ವಿಮರ್ಶೆಯ ಕಟುತನವಿಲ್ಲದ ಆಪ್ತವಾದ ಭಾಷೆಯ ಈ ಬರಹ ಪುಸ್ತಕಗಳ ಬಗ್ಗೆ ಕುತೂಹಲ ಹುಟ್ಟಿಸುವಂತಿವೆ.
ಸಂಪಾದಕ ರಾಜೇಂದ್ರ ಪ್ರಸಾದ್‌ ಅವರ ಕಾವ್ಯಪ್ರೇಮ ಪತ್ರಿಕೆಯಲ್ಲಿಯೂ ಧಾರಾಳವಾಗಿಯೇ ವ್ಯಕ್ತವಾಗಿವೆ. ಹದಿನೈದು ಕವಿಗಳ ಅದಕ್ಕೂ ಹೆಚ್ಚು ಕವಿತೆ, ಕಿರುಗವಿತೆಗಳು ಇವೆ. ಎಂ.ಆರ್. ಕಮಲಾ, ಎಂ.ಎಸ್‌. ರುದ್ರೇಶ್ವರಸ್ವಾಮಿ, ಅಶೋಕ ಶೆಟ್ಟರ್‌, ಬಸವರಾಜ ಸೂಳಿಬಾವಿ ಅವರಂತಹ ಹಿರಿಯರ ಜತೆಗೆ ರಾಜಶೇಖರ ಬಂಡೆ, ಸಂಯುಕ್ತಾ ಅವರಂತಹ ಹೊಸ ಕವಿಯ ಕವಿತೆಗಳೂ ಇವೆ. ಚಿದಂಬರ್‌ ನರೇಂದ್ರ ಅವರ ಅನುವಾದವಿದೆ.
ವೈವಿಧ್ಯಮಯವಾದ ವಸ್ತು–ವಿಷಯ, ಪ್ರಕಾರಗಳಿಂದ ಎಲ್ಲವನ್ನೂ ಒಳಗೊಳ್ಳುವ ಸಂಪಾದಕರ ಹಂಬಲದಿಂದ 'ಸಂಕಥನ'ದ ಮೊದಲ ಸಂಚಿಕೆ ಬಗೆಬಗೆಯ ಭಕ್ಷ್ಯಗಳನ್ನು ಬಡಿಸಿಟ್ಟ ಊಟದ ಬಾಳೆಯಂತೆಯೇ ಕಾಣಿಸುತ್ತದೆ. ಅದೇ ಸಂತಸದಿಂದ ಓದಿನ ಊಟಕ್ಕೆ ಕೂತರೆ ಊಟದ ಮಧ್ಯ ಸಿಕ್ಕ ಕೆಲವು ಕಲ್ಲುಗಳ ಕುರಿತೂ ಬರೆಯದಿದ್ದರೆ ಅಪ್ರಾಮಾಣಿಕತೆಯಾಗುತ್ತದೆ.
ಮೊದಲನೇಯದಾಗಿ ಓದಿನುದ್ದಕ್ಕೂ ರಸ್ತೆಯ ನಡುವಿನ ಹೊಂಡದಂತೆ ಅಡಚಣೆ ಮಾಡುವುದು ಕಾಗುಣಿತ ದೋಷಗಳು. ಪೂರ್ಣವಿರಾಮ, ಅಲ್ಪವಿರಾಮಗಳ ದೋಷ, ವ್ಯಾಕರಣ ದೋಷ, ಅಕ್ಷರಗಳ ತಪ್ಪುಗಳು ಆಸ್ವಾದನೆಗೆ ಅಲ್ಲಲ್ಲಿ ತಡೆ ಮಾಡುತ್ತವೆ. ಫಾಂಟ್‌ಗಳು, ತಲೆಬರಹದ ಆಕಾರ, ಗಾತ್ರಗಳ ಕಡೆ ಇನ್ನಷ್ಟು ಗಮನ ಬೇಕಾಗಿದೆ ಅನ್ನಿಸಿತು. ಕಥೆಗಳು, ಲೇಖನಗಳ ನಡುವೆ ಅಲ್ಲಲ್ಲಿ ಬಾಕ್ಸ್‌ಗಳಲ್ಲಿ ಇಣುಕುವ ಕಿರುಗವಿತೆಗಳೂ ಕಿರಿಕಿರಿ ಉಂಟುಮಾಡುತ್ತವೆ. ಓದುಗರು ಒಂದು ಕತೆಯನ್ನೋ ಲೇಖನವನ್ನೋ ತನ್ಮಯರಾಗಿ ಓದುತ್ತಿರುವಾಗ ಮಧ್ಯದಲ್ಲಿಯೇ ತಲೆಹಾಕಿ 'ಇದೊಂದು ಪದ್ಯ ಓದು' ಎಂದು ರಸಭಂಗ ಮಾಡಿದಂತೆ ಭಾಸವಾಗುತ್ತದೆ. ಈ ಬಿಡಿಕವಿತೆಗಳನ್ನೆಲ್ಲಾ ಒಂದೇ ಕಡೆ ಒಟ್ಟಾಗಿ ಪ್ರಕಟಿಸಿದ್ದರೆ ಸೂಕ್ತವಾಗುತ್ತಿತ್ತು. ಕೃಷ್ಣ ಗಿಳಿಯಾರ್‌ ಅವರ ಚಿತ್ರಗಳು ಗಮನ ಸೆಳೆಯುತ್ತವೆ. ಅಂತರ್ಜಾಲದಲ್ಲಿನ ಚಿತ್ರಗಳ ಬಳಕೆ ಜಾಸ್ತಿಯಾಯಿತೇನೋ.
ಈ ಸಂಚಿಕೆಯಲ್ಲಿ ನನ್ನಲ್ಲಿ ಅತ್ಯಂತ ಅಸಮಧಾನ ಹುಟ್ಟಿಸಿದ ಸಂಗತಿ ಎಂದರೆ ಮರುಮುದ್ರಣ.
'ಪ್ರಕಟಿತ/ ಅಪ್ರಕಟಿತ ಎಂಬ ಯಾವ ಮುಲಾಜಿಲ್ಲದೇ ಒಂದಷ್ಟು ಹೊಸ ಬರಹಗಳೊಂದಿಗೆ ಫೇಸ್ಬುಕ್‌ ಮತ್ತು ಬ್ಲಾಗ್‌ಗಳಲ್ಲಿ ಪ್ರಕಟಗೊಂಡು ಯಾರ ಕಣ್ಣಿಗೂ ಬೀಳದೇ ಎಲೆಮರೆಯಲ್ಲಿದ್ದ ಮತ್ತಷ್ಟು ಬರಹಗಳನ್ನು ಸೇರಿಸಿ ಈ ಪ್ರಥಮ ಸಂಚಿಕೆಯನ್ನು ರೂಪಿಸಿದ್ದೇವೆ' ಎಂದು ಸಂಪಾದಕರು ಪ್ರಾಮಾಣಿಕವಾಗಿ ಹೇಳಿಕೊಂಡುಬಿಟ್ಟಿದ್ದಾರೆ. ನೆರೋಡಾನ ಸಂದರ್ಶನದಂತಹ ಮಹತ್ವದ ಬರಹಗಳನ್ನು ಬೇರೆ ಭಾಷೆಯಿಂದ ಅನುವಾದಿಸಿ ಮರುಮುದ್ರಿಸುವುದರಲ್ಲಿ ಅರ್ಥವಿದೆ. ಆದರೆ ಫೇಸ್‌ಬುಕ್‌ ಮತ್ತು ಬ್ಲಾಗ್‌ಗಳಲ್ಲಿ ಪ್ರಕಟವಾದ ಬರಹಗಳನ್ನು ಇಷ್ಟು ಪ್ರಮಾಣದಲ್ಲಿ ಸಾಹಿತ್ಯ ಪತ್ರಿಕೆಯೊಂದರಲ್ಲಿ ಬಳಸಿಕೊಳ್ಳುವ ಅಗತ್ಯ ಇದೆಯಾ ಎಂಬುದು ನನ್ನನ್ನು ತೀವ್ರವಾಗಿ ಕಾಡಿತು. ಅದರ ಬದಲು ಇದೇ ಲೇಖಕರಿಂದ ಹೊಸ ಬರಹಗಳನ್ನು ಬರೆಸಬಹುದಿತ್ತಲ್ಲವೇ? ಇಲ್ಲವೇ ಹೊಸ ಲೇಖಕರನ್ನು ಸಂಪರ್ಕಿಸಿಯಾದರೂ ಬರೆಸಬಹುದಿತ್ತು.
ಪುಸ್ತಕದ ಆರಂಭದ ಡಿ.ವಿ. ಪ್ರಹ್ಲಾದ್‌ ಲೇಖನದಲ್ಲಿ ಬರುವ ಮಾತುಗಳು: 'ಪ್ರತಿ ಸಂಚಿಕೆಯೂ ಒಂದು ಪ್ರಕ್ರಿಯೆ (process). ಅದರ ಲೇಖಕರು, ಓದುಗರು, ಸಂಪಾದಕರು ಇದೊಂದು ಪರಸ್ಪರ ಸಂಬಂಧವುಳ್ಳ ಸುಂದರ ತ್ರಿವಳಿ. ಇವರುಗಳ ಸಹಸ್ಪಂದನೆಯಲ್ಲಿ ಪ್ರತಿಸಂಚಿಕೆಯೂ ಒಂದು 'ಸಂಭವಿಸುವ' ಸಂಗತಿ ಆಗಬೇಕು. ಒಂದು ಪ್ರಾಡಕ್ಟ್‌ ಆಗಬಾರದು.'
ಈ ಮಾತುಗಳು ಸಂಕಥನದ ಮುಂದಿನ ಸಂಚಿಕೆಯ ರೂಪಣೆಗೆ ದಾರಿ ತೋರುವಂಥವು. ಪತ್ರಿಕೆ 'ಪ್ರಾಡಕ್ಟ್‌' ಆಗುವ ಅಪಾಯವನ್ನು ರಾಜೇಂದ್ರ ತುಂಬ ಚೆನ್ನಾಗಿಯೇ ಬಲ್ಲರು. ಆದ್ದರಿಂದಲೇ ಆ ಅಪಾಯದಿಂದ ತಪ್ಪಿಸಿಕೊಳ್ಳುವ ದಾರಿಯನ್ನೂ ಅವರಿಗೆ ಯಾರೂ ಹೇಳಿಕೊಡಬೇಕಾಗಿಲ್ಲ. ಈಗ ಬೇಕಾಗಿರುವುದು ಇನ್ನೊಂದಿಷ್ಟು ಶ್ರಮ ಮತ್ತು ಎಚ್ಚರ ಅಷ್ಟೇ!
‘ಸಂಕಥನ’ದ ಮುಂದಿನ ಸಂಚಿಕೆಗಾಗಿ ಕುತೂಹಲ ಮತ್ತು ನಿರೀಕ್ಷೆಯಿಂದ ನಾವೆಲ್ಲರೂ ಕಾಯುತ್ತಿದ್ದೇವೆ ಎನ್ನುವ ಎಚ್ಚರ ರಾಜೇಂದ್ರ ಅವರ ಉತ್ಸಾಹವನ್ನು ಹೆಚ್ಚಿಸಲಿ.
ಶುಭಾಷಯಗಳು.

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......