Wednesday, July 15, 2015

ವೇಣಿ ಮಾಧವನ ತೋರಿಸೆ – ವಾದಿರಾಜರು

ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ
ಕಾಣದೆ ನಿಲ್ಲಲಾರೆನೆ||ಪಲ್ಲವಿ||

ಕಾಣುತ ಭಕ್ತರ ಕರುಣದಿ ಸಲಹುವ
ಜಾಣೆ ತ್ರಿವೇಣಿ ಸಾರೆ ಸುಖವಾಣಿ||ಅನುಪಲ್ಲವಿ||

ಬಂದೆನೆ ಬಹಳ ದೂರದಿ ಭವಸಾಗರ ತರಣಿ
ನಿಂದೆನೆ ನಿನ್ನ ತೀರದಿ
ಒಂದು ಗಳಿಗೆ ಹರಿಯ ಅಗಲಿ ನಾನಿರಲಾರೆ
ಮಂದಗಮನೆ ಎನ್ನ ಮುಂದಕೆ ಕರೆಯೆ ||೧||

ಶರಣಾಗತರ ಪಾಲಿಪುದು ತರಳೆ ನಿನ್ನ ಬಿರುದು
ಕರುಣದಿಂದೆನ್ನ ಪೊರೆಯೆ
ಸ್ಮರಣೆ ಮಾತ್ರದಿ ಭವತಾಪವ ಹರಿಸುವ
ಸ್ಮರನ ಪಿತ ಮುರಹರನ ಕರುಣದಿ ||೨||

ಸುಜನರಿಗೆಲ್ಲಾಧರಳೆ ಸುಖಶೀಲೆ ಕೇಳೆ
ಕುಜನ ಸಂಗವನು ಕೀಳೆ
ನಿಜಪದವಿಯನೀವ ಹಯವದನನ
ಪದ ರಜವ ತೋರಿಸೆ ಮದಗಜಗಮನೆ ||೩||

Friday, May 22, 2015

ಸಂಕಥನ - ಚುಕ್ಕುಬುಕ್ಕು

Courtesy:  ಚುಕ್ಕುಬುಕ್ಕು


(ಹೊಸ ಸಾಹಿತ್ಯ ಪತ್ರಿಕೆ ‘ಸಂಕಥನ’ದ ಮೊದಲ ಸಂಚಿಕೆ ಕಳೆದವಾರ ಹೊರಬಂದಿದೆ. ಅದಕ್ಕೆ ಸ್ವಾಗತ ಹಾಗೂ ಶುಭ ಕೋರುತ್ತಾ, ಮೊದಲ ಸಂಚಿಕೆ ಓದಿ ಗೌರಿ ಹಂಚಿಕೊಂಡಿರುವ ಅನಿಸಿಕೆಗಳನ್ನು ಇಲ್ಲಿ ಕೊಡುತ್ತಿದ್ದೇವೆ. ‘ಸಂಕಥನ’ಕ್ಕೆ ಚಂದಾದಾರರಾಗಲು ಸಂಪಾದಕ ರಾಜೇಂದ್ರ ಪ್ರಸಾದ್‌ ಅವರನ್ನು ಸಂಪರ್ಕಿಸಿ) 
ಕಾವ್ಯ, ಅಂಕಣಬರಹ, ಓದು, ತಿರುಗಾಟ, ಛಾಯಾಗ್ರಹಣ, ಸಂಘಟನೆ, ಅಡುಗೆ, ಜಗಳ ಹೀಗೆ ಬದುಕಿನ ಹಲವು ಆಯಾಮಗಳಲ್ಲಿ ತಮ್ಮನ್ನು ತಾವು ತೀವ್ರವಾಗಿ ತೊಡಗಿಸಿಕೊಂಡಿರುವ ರಾಜೇಂದ್ರ ಪ್ರಸಾದ್‌ ಅವರ ಹೊಸ ಸಾಹಸ 'ಸಂಕಥನ' ತ್ರೈಮಾಸಿಕ ಸಾಹಿತ್ಯ ಪತ್ರಿಕೆ.
ಕಳೆದ ಭಾನುವಾರ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಈ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ನಡೆಯಿತು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹೆಚ್ಚಿನಂಶ ಯುವಕರು ಮತ್ತು ಕೆಲವು ಹಿರಿಯರ ಸಮ್ಮಿಲನ 'ಸಂಕಥನ' ಪತ್ರಿಕೆಯ ಉದ್ದೇಶ, ಕಾರ್ಯವೈಖರಿಯನ್ನೂ ಸೂಕ್ತವಾಗಿ ಪ್ರತಿಬಿಂಬಿಸುವಂತಿತ್ತು. ಹಿರಿಯರಾದ ಸಿ.ಎನ್‌. ರಾಮಚಂದ್ರನ್‌, ಚಂದ್ರಶೇಖರ ಆಲೂರು, ಆರ್‌. ಪೂರ್ಣಿಮಾ ಅವರು ಆಡಿದ ಮಾತುಗಳೂ 'ಸಂಕಥನ' ಪತ್ರಿಕೆ ಸಾಧಿಸಿದ ಗುಣಗಳೊಟ್ಟಿಗೇ, ಒಳಗೊಳ್ಳಬೇಕಾದ ಅಂಶಗಳನ್ನೂ ಒತ್ತಿಹೇಳಿದ್ದನ್ನು ಮನಸ್ಸಿನಲ್ಲಿಟ್ಟುಕೊಂಡೇ ಈ ಮುದ್ದಾದ ಪತ್ರಿಕೆಯನ್ನು ಕೈಗೆತ್ತಿಕೊಂಡೆ.
ಆಕಾರ, ಮುಖಪುಟ ಚಿತ್ರ ಎಲ್ಲ ದೃಷ್ಟಿಯಿಂದಲೂ ನೋಡಿದ ಕೂಡಲೇ ಕೈಗೆತ್ತಿಕೊಳ್ಳಬೇಕು ಎನಿಸುವಷ್ಟು ಮುದ್ದಾಗಿದೆ.
'ಇದು ಇಂದಿನ ದುರಿತ ಕಾಲಘಟ್ಟದಲ್ಲಿ ಸಮಾಜ, ಧರ್ಮ ಮತ್ತು ರಾಜಕಾರಣ ಸೇರಿದಂತೇ ಎಲ್ಲಾ ಕ್ಷೇತ್ರಗಳೂ ಸಮೂಹ ಭ್ರಮೆಗಳಿಂದ ತುಂಬಿಕೊಳ್ಳುತ್ತಾ ಮನುಷ್ಯನ ನಡುವೆ ಪರಸ್ಪರ ಹೊಂದಾಣಿಕೆ ಸಂಘಟನೆಯ ಜೀವನವನ್ನು ವಿಘಟಿಸುತ್ತಾ ಇರುವ ಶಕ್ತಿಗಳ ವಿರುದ್ಧ ಜಾಗೃತಗೊಳ್ಳುವ ಪ್ರಯತ್ನ' ಎಂದು ಸಂಪಾದಕರು ಸಂಕಥನದ ಆಶಯವನ್ನು ತಿಳಿಸಿದ್ದಾರೆ. ಹಳೆಯ ಸಾಹಿತ್ಯ ಪತ್ರಿಕೆಗಳಲ್ಲಿನ ಅತ್ಯುತ್ತಮ ಅಂಶಗಳನ್ನು ಹೆಕ್ಕಿಕೊಂಡು ಹೊಸ ಗಂಟು ಕಟ್ಟಿಕೊಂಡು ಹೊಸ ಪಯಣ ಹೊರಡುವ ಆಶಯ ಅವರದು.
ಸಂಕಥನದ ಪರಿವಿಡಿಯನ್ನು ಒಮ್ಮೆ ನೋಡಿದರೆ ಸಾಕು, ಆ ಪತ್ರಿಕೆಯ 'ಎಲ್ಲವನ್ನೂ ಒಳಗೊಳ್ಳುವ' ಆಶಯ ಸ್ಪಷ್ಟವಾಗಿಯೇ ಗೋಚರಿಸುತ್ತದೆ.
ಮಾತು–ವಿಮರ್ಶೆ, ಸಂದರ್ಶನ, ಪುಸ್ತಕಲೋಕ, ಸಿನಿಮೋಪಾಖ್ಯಾನ, ಕಥನ, ಕವಿತೆ, ಬಿಡಿಕವಿತೆಗಳು ಹೀಗೆ ಏಳು ವಿಭಾಗಗಳಲ್ಲಿ ವೈವಿಧ್ಯಮಯ ಬರಹಗಳು ಇವೆ. ಮೊದಲ ಸಂಚಿಕೆಯಲ್ಲಿ ವಿಶೇಷವಾಗಿ ಗಮನಸೆಳೆದದ್ದು ಪ್ಯಾಬ್ಲೋ ನೆರೊಡಾನ ಸಂದರ್ಶನ. 'ಪ್ಯಾರೀಸ್‌ ರಿವ್ಯೂ' ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಈ ಸಂದರ್ಶನವನ್ನು ಯುವ ಕವಯಿತ್ರಿ ಸ್ಮಿತಾ ಮಾಕಳ್ಳಿ ಸಶಕ್ತವಾಗಿ ಕನ್ನಡಕ್ಕೆ ತಂದಿದ್ದಾರೆ. ಸಾಹಿತ್ಯದ ಓದಿನಷ್ಟೇ ಲೇಖಕರ ಬಗ್ಗೆಯೂ ಕುತೂಹಲ ಬೆಳೆಸಿಕೊಂಡಿರುವ ನನ್ನಂಥವರಿಗೆ ಬಹಳೇ ರುಚಿಸುವ ಸಂದರ್ಶನವಿದು. ನೆರೋಡಾ ಹಸಿರು ಶಾಯಿಯಲ್ಲಿ ಪದ್ಯ ಬರೆಯುತ್ತಿದ್ದ ಎನ್ನುವುದರಿಂದ ಹಿಡಿದು 'ಬೆಂಕಿಯಿಂದ ನಿಮ್ಮ ಪುಸ್ತಕಗಳನ್ನು ಉಳಿಸಿಕೊಳ್ಳಬೇಕಾದಲ್ಲಿ ಯಾವುದನ್ನು ಉಳಿಸಿಕೊಳ್ಳುತ್ತೀರಿ?' ಎಂಬ ಪ್ರಶ್ನೆಗೆ 'ಯಾವುದನ್ನೂ ಇಲ್ಲ, ಅದಕ್ಕೆ ಬದಲಾಗಿ ಒಂದು ಹುಡುಗಿಯನ್ನು ರಕ್ಷಿಸುತ್ತೇನೆ' ಎಂಬ ಮಾತುಗಳವರೆಗೆ ಎಲ್ಲವನ್ನೂ ಬೆರಗು, ಕುತೂಹಲದಿಂದ ಓದಿಕೊಂಡೆ.
'ಮಾತು–ವಿಮರ್ಶೆ' ವಿಭಾಗವೊಂದರಲ್ಲಿಯೇ ಆರು ಲೇಖನಗಳಿವೆ. ಪ್ರತಿಯೊಂದೂ ವಿಭಿನ್ನ ನೆಲೆಗಳನ್ನು ಶೋಧಿಸುತ್ತವೆ. ಸ್ವತಃ ಸಾಹಿತ್ಯ ಪತ್ರಿಕೆಯೊಂದನ್ನು ಶ್ರದ್ಧೆ ಮತ್ತು ಬದ್ಧತೆಯಿಂದ ರೂಪಿಸುತ್ತಾ ಬಂದಿರುವ ಡಿ.ವಿ. ಪ್ರಹ್ಲಾದ್‌ ಅವರ 'ನಾಲ್ಕು ಮತ್ತೊಂದರ ನಡುವೆ' ಲೇಖನ ನನಗೆ ತುಂಬ ಇಷ್ಟವಾಯ್ತು. ಒಂದು ಸಾಹಿತ್ಯ ಪತ್ರಿಕೆ ರೂಪುಗೊಳ್ಳಲು ಬೇಕಾದ ವಾತಾವರಣ, ಅವುಗಳ ಸಾರ್ಥಕತೆ– ನಿರರ್ಥಕತೆಗಳ ಬಗ್ಗೆ ವಿವರಿಸುತ್ತಲೇ ಇಂದಿನ ಜಡ್ಡುಗಟ್ಟಿದ ಪರಿಸ್ಥಿತಿಯ ಬಗ್ಗೆ ಚುರುಕಾಗಿಯೇ ಚಾಟಿ ಬೀಸಿದ್ದಾರೆ.
ಈ ವಿಭಾಗದ ಇನ್ನೊಂದು ಮುಖ್ಯ ಲೇಖನ ಎಚ್‌.ಎಸ್‌. ಅನುಪಮಾ ಅವರ 'ಮಾತೃಭಾಷಾ ಶಿಕ್ಷಣ'. ಮಾತೃಭಾಷಾ ಶಿಕ್ಷಣ ಆಂದೋಲನದ ಅಂಗವಾಗಿ ಧಾರವಾಡದ ಕರ್ನಾಟಕ ಜನಸಾಹಿತ್ಯ ಸಂಘಟನೆ ಏರ್ಪಡಿಸಿದ್ದ ಎರಡು ದಿನದ 'ಮಾತೃಭಾಷಾ ಮಾಧ್ಯಮದ ಕುರಿತ ರಾಷ್ಟ್ರೀಯ ಚಿಂತನಾ ಶಿಬಿರ'ದ ಕುರಿತಾದ ಬರಹವಿದು. ಕಾರ್ಯಕ್ರಮದ ವರದಿಯಂತೇ ಆರಂಭವಾಗುವ ಈ ಲೇಖನ ನಂತರ ಸಂವಾದವಾಗಿ ಬೆಳೆಯುತ್ತದೆ. ಮಾತೃಭಾಷಾ ಶಿಕ್ಷಣದ ಆಂದೋಲನದ ಅವಶ್ಯಕತೆಯ ಜತೆಜತೆಗೇ ಭಾಷಾ ಚಳವಳಿಯಲ್ಲಿನ 'ಅತಿ'ತನಗಳು ಕಟ್ಟುವ ಚೌಕಟ್ಟಿನ ಅಪಾಯಗಳ ಕುರಿತೂ ಈ ಲೇಖನ ಕೆಲವು ಬಹು ಮುಖ್ಯ ಅನುಮಾನ–ಪ್ರಶ್ನೆಗಳನ್ನು ಎತ್ತುತ್ತದೆ.
ಸಲಿಂಗ ಕಾಮದ ಕುರಿತು ಐತಿಹಾಸಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸುವ ಕೃಷಿಕ್‌ ಎ.ವಿ. ಅವರ 'ಸಲಿಂಗ ಪ್ರೇಮ' ಲೇಖನ, ಜಿ.ಸಿ. ಕುಮಾರಪ್ಪ ಎನ್ನುವ ಗಾಂಧಿವಾದಿ ಸಾಧಕರನ್ನು ಪರಿಚಯಿಸುವ ಜಗದೀಶ ಕೊಪ್ಪ ಅವರ ಲೇಖನವೂ ಇಷ್ಟವಾಯಿತು.
ಈ ಸಂಚಿಕೆಯಲ್ಲಿ ಒಟ್ಟು ನಾಲ್ಕು ಕಥೆಗಳಿವೆ. ಬಾದಲ್‌ ನಂಜುಂಡಸ್ವಾಮಿ ಅವರ 'ಈಸ್ತೊರೀಯ ದೆ ಫಿದೆನ್ಶಿಯೋ' ಕಥೆ ವಿಭಿನ್ನ ಕಥಾವಸ್ತು ಮತ್ತು ಆವರಣದಿಂದ ಗಮನ ಸೆಳೆಯುತ್ತದೆ. ಇಲ್ಲಿನ ನಾಲ್ಕೂ ಕಥೆಗಳೂ ಭಾಷೆ, ಪರಿಸರ, ವಸ್ತುಗಳ ದೃಷ್ಟಿಯಿಂದ ಭಿನ್ನವಾಗಿರುವುದಷ್ಟೇ ಅಲ್ಲದೇ ಈ ಎಲ್ಲ ಕಥೆಗಾರರೂ ಹೊಸಬರು ಎನ್ನುವುದೂ ಮಹತ್ವದ ಸಂಗತಿ.
ಪುಸ್ತಕಲೋಕದಲ್ಲಿ ನರೇಂದ್ರ ಪೈ ಅವರು ಅರುಣ್‌ ಕೊಲಟ್ಕರ್‌ ಅವರ 'ಜೆಜೂರಿ' ಮತ್ತು ಎಸ್‌. ಸುರೇಂದ್ರನಾಥ್‌ ಅವರ 'ಗಾಳಿಗೆ ಬಿದ್ದ ಚಂದ್ರನ ತುಂಡುಗಳು' ಪುಸ್ತಕಗಳನ್ನು ತುಂಬ ಆಪ್ತವಾಗಿ ಪರಿಚಯಿಸಿದ್ದಾರೆ. ವಿಮರ್ಶೆಯ ಕಟುತನವಿಲ್ಲದ ಆಪ್ತವಾದ ಭಾಷೆಯ ಈ ಬರಹ ಪುಸ್ತಕಗಳ ಬಗ್ಗೆ ಕುತೂಹಲ ಹುಟ್ಟಿಸುವಂತಿವೆ.
ಸಂಪಾದಕ ರಾಜೇಂದ್ರ ಪ್ರಸಾದ್‌ ಅವರ ಕಾವ್ಯಪ್ರೇಮ ಪತ್ರಿಕೆಯಲ್ಲಿಯೂ ಧಾರಾಳವಾಗಿಯೇ ವ್ಯಕ್ತವಾಗಿವೆ. ಹದಿನೈದು ಕವಿಗಳ ಅದಕ್ಕೂ ಹೆಚ್ಚು ಕವಿತೆ, ಕಿರುಗವಿತೆಗಳು ಇವೆ. ಎಂ.ಆರ್. ಕಮಲಾ, ಎಂ.ಎಸ್‌. ರುದ್ರೇಶ್ವರಸ್ವಾಮಿ, ಅಶೋಕ ಶೆಟ್ಟರ್‌, ಬಸವರಾಜ ಸೂಳಿಬಾವಿ ಅವರಂತಹ ಹಿರಿಯರ ಜತೆಗೆ ರಾಜಶೇಖರ ಬಂಡೆ, ಸಂಯುಕ್ತಾ ಅವರಂತಹ ಹೊಸ ಕವಿಯ ಕವಿತೆಗಳೂ ಇವೆ. ಚಿದಂಬರ್‌ ನರೇಂದ್ರ ಅವರ ಅನುವಾದವಿದೆ.
ವೈವಿಧ್ಯಮಯವಾದ ವಸ್ತು–ವಿಷಯ, ಪ್ರಕಾರಗಳಿಂದ ಎಲ್ಲವನ್ನೂ ಒಳಗೊಳ್ಳುವ ಸಂಪಾದಕರ ಹಂಬಲದಿಂದ 'ಸಂಕಥನ'ದ ಮೊದಲ ಸಂಚಿಕೆ ಬಗೆಬಗೆಯ ಭಕ್ಷ್ಯಗಳನ್ನು ಬಡಿಸಿಟ್ಟ ಊಟದ ಬಾಳೆಯಂತೆಯೇ ಕಾಣಿಸುತ್ತದೆ. ಅದೇ ಸಂತಸದಿಂದ ಓದಿನ ಊಟಕ್ಕೆ ಕೂತರೆ ಊಟದ ಮಧ್ಯ ಸಿಕ್ಕ ಕೆಲವು ಕಲ್ಲುಗಳ ಕುರಿತೂ ಬರೆಯದಿದ್ದರೆ ಅಪ್ರಾಮಾಣಿಕತೆಯಾಗುತ್ತದೆ.
ಮೊದಲನೇಯದಾಗಿ ಓದಿನುದ್ದಕ್ಕೂ ರಸ್ತೆಯ ನಡುವಿನ ಹೊಂಡದಂತೆ ಅಡಚಣೆ ಮಾಡುವುದು ಕಾಗುಣಿತ ದೋಷಗಳು. ಪೂರ್ಣವಿರಾಮ, ಅಲ್ಪವಿರಾಮಗಳ ದೋಷ, ವ್ಯಾಕರಣ ದೋಷ, ಅಕ್ಷರಗಳ ತಪ್ಪುಗಳು ಆಸ್ವಾದನೆಗೆ ಅಲ್ಲಲ್ಲಿ ತಡೆ ಮಾಡುತ್ತವೆ. ಫಾಂಟ್‌ಗಳು, ತಲೆಬರಹದ ಆಕಾರ, ಗಾತ್ರಗಳ ಕಡೆ ಇನ್ನಷ್ಟು ಗಮನ ಬೇಕಾಗಿದೆ ಅನ್ನಿಸಿತು. ಕಥೆಗಳು, ಲೇಖನಗಳ ನಡುವೆ ಅಲ್ಲಲ್ಲಿ ಬಾಕ್ಸ್‌ಗಳಲ್ಲಿ ಇಣುಕುವ ಕಿರುಗವಿತೆಗಳೂ ಕಿರಿಕಿರಿ ಉಂಟುಮಾಡುತ್ತವೆ. ಓದುಗರು ಒಂದು ಕತೆಯನ್ನೋ ಲೇಖನವನ್ನೋ ತನ್ಮಯರಾಗಿ ಓದುತ್ತಿರುವಾಗ ಮಧ್ಯದಲ್ಲಿಯೇ ತಲೆಹಾಕಿ 'ಇದೊಂದು ಪದ್ಯ ಓದು' ಎಂದು ರಸಭಂಗ ಮಾಡಿದಂತೆ ಭಾಸವಾಗುತ್ತದೆ. ಈ ಬಿಡಿಕವಿತೆಗಳನ್ನೆಲ್ಲಾ ಒಂದೇ ಕಡೆ ಒಟ್ಟಾಗಿ ಪ್ರಕಟಿಸಿದ್ದರೆ ಸೂಕ್ತವಾಗುತ್ತಿತ್ತು. ಕೃಷ್ಣ ಗಿಳಿಯಾರ್‌ ಅವರ ಚಿತ್ರಗಳು ಗಮನ ಸೆಳೆಯುತ್ತವೆ. ಅಂತರ್ಜಾಲದಲ್ಲಿನ ಚಿತ್ರಗಳ ಬಳಕೆ ಜಾಸ್ತಿಯಾಯಿತೇನೋ.
ಈ ಸಂಚಿಕೆಯಲ್ಲಿ ನನ್ನಲ್ಲಿ ಅತ್ಯಂತ ಅಸಮಧಾನ ಹುಟ್ಟಿಸಿದ ಸಂಗತಿ ಎಂದರೆ ಮರುಮುದ್ರಣ.
'ಪ್ರಕಟಿತ/ ಅಪ್ರಕಟಿತ ಎಂಬ ಯಾವ ಮುಲಾಜಿಲ್ಲದೇ ಒಂದಷ್ಟು ಹೊಸ ಬರಹಗಳೊಂದಿಗೆ ಫೇಸ್ಬುಕ್‌ ಮತ್ತು ಬ್ಲಾಗ್‌ಗಳಲ್ಲಿ ಪ್ರಕಟಗೊಂಡು ಯಾರ ಕಣ್ಣಿಗೂ ಬೀಳದೇ ಎಲೆಮರೆಯಲ್ಲಿದ್ದ ಮತ್ತಷ್ಟು ಬರಹಗಳನ್ನು ಸೇರಿಸಿ ಈ ಪ್ರಥಮ ಸಂಚಿಕೆಯನ್ನು ರೂಪಿಸಿದ್ದೇವೆ' ಎಂದು ಸಂಪಾದಕರು ಪ್ರಾಮಾಣಿಕವಾಗಿ ಹೇಳಿಕೊಂಡುಬಿಟ್ಟಿದ್ದಾರೆ. ನೆರೋಡಾನ ಸಂದರ್ಶನದಂತಹ ಮಹತ್ವದ ಬರಹಗಳನ್ನು ಬೇರೆ ಭಾಷೆಯಿಂದ ಅನುವಾದಿಸಿ ಮರುಮುದ್ರಿಸುವುದರಲ್ಲಿ ಅರ್ಥವಿದೆ. ಆದರೆ ಫೇಸ್‌ಬುಕ್‌ ಮತ್ತು ಬ್ಲಾಗ್‌ಗಳಲ್ಲಿ ಪ್ರಕಟವಾದ ಬರಹಗಳನ್ನು ಇಷ್ಟು ಪ್ರಮಾಣದಲ್ಲಿ ಸಾಹಿತ್ಯ ಪತ್ರಿಕೆಯೊಂದರಲ್ಲಿ ಬಳಸಿಕೊಳ್ಳುವ ಅಗತ್ಯ ಇದೆಯಾ ಎಂಬುದು ನನ್ನನ್ನು ತೀವ್ರವಾಗಿ ಕಾಡಿತು. ಅದರ ಬದಲು ಇದೇ ಲೇಖಕರಿಂದ ಹೊಸ ಬರಹಗಳನ್ನು ಬರೆಸಬಹುದಿತ್ತಲ್ಲವೇ? ಇಲ್ಲವೇ ಹೊಸ ಲೇಖಕರನ್ನು ಸಂಪರ್ಕಿಸಿಯಾದರೂ ಬರೆಸಬಹುದಿತ್ತು.
ಪುಸ್ತಕದ ಆರಂಭದ ಡಿ.ವಿ. ಪ್ರಹ್ಲಾದ್‌ ಲೇಖನದಲ್ಲಿ ಬರುವ ಮಾತುಗಳು: 'ಪ್ರತಿ ಸಂಚಿಕೆಯೂ ಒಂದು ಪ್ರಕ್ರಿಯೆ (process). ಅದರ ಲೇಖಕರು, ಓದುಗರು, ಸಂಪಾದಕರು ಇದೊಂದು ಪರಸ್ಪರ ಸಂಬಂಧವುಳ್ಳ ಸುಂದರ ತ್ರಿವಳಿ. ಇವರುಗಳ ಸಹಸ್ಪಂದನೆಯಲ್ಲಿ ಪ್ರತಿಸಂಚಿಕೆಯೂ ಒಂದು 'ಸಂಭವಿಸುವ' ಸಂಗತಿ ಆಗಬೇಕು. ಒಂದು ಪ್ರಾಡಕ್ಟ್‌ ಆಗಬಾರದು.'
ಈ ಮಾತುಗಳು ಸಂಕಥನದ ಮುಂದಿನ ಸಂಚಿಕೆಯ ರೂಪಣೆಗೆ ದಾರಿ ತೋರುವಂಥವು. ಪತ್ರಿಕೆ 'ಪ್ರಾಡಕ್ಟ್‌' ಆಗುವ ಅಪಾಯವನ್ನು ರಾಜೇಂದ್ರ ತುಂಬ ಚೆನ್ನಾಗಿಯೇ ಬಲ್ಲರು. ಆದ್ದರಿಂದಲೇ ಆ ಅಪಾಯದಿಂದ ತಪ್ಪಿಸಿಕೊಳ್ಳುವ ದಾರಿಯನ್ನೂ ಅವರಿಗೆ ಯಾರೂ ಹೇಳಿಕೊಡಬೇಕಾಗಿಲ್ಲ. ಈಗ ಬೇಕಾಗಿರುವುದು ಇನ್ನೊಂದಿಷ್ಟು ಶ್ರಮ ಮತ್ತು ಎಚ್ಚರ ಅಷ್ಟೇ!
‘ಸಂಕಥನ’ದ ಮುಂದಿನ ಸಂಚಿಕೆಗಾಗಿ ಕುತೂಹಲ ಮತ್ತು ನಿರೀಕ್ಷೆಯಿಂದ ನಾವೆಲ್ಲರೂ ಕಾಯುತ್ತಿದ್ದೇವೆ ಎನ್ನುವ ಎಚ್ಚರ ರಾಜೇಂದ್ರ ಅವರ ಉತ್ಸಾಹವನ್ನು ಹೆಚ್ಚಿಸಲಿ.
ಶುಭಾಷಯಗಳು.

Friday, April 10, 2015

ವೇದದಲ್ಲಿ ಎಲ್ಲವೂ ಇದೆ, ಅದರಲ್ಲಿ ಇಲ್ಲದ ಸಂಗತಿಗಳೇ ಇಲ್ಲ ... ಕರಣo ಪವನ್ ಪ್ರಸಾದ್

ವೇದದಲ್ಲಿ ಎಲ್ಲವೂ ಇದೆ, ಅದರಲ್ಲಿ ಇಲ್ಲದ ಸಂಗತಿಗಳೇ ಇಲ್ಲ, ಅನಂತವಾದುದು ವೇದ ಎಂಬ ಉತ್ಪ್ರೇಕ್ಷೆಗಳ ಹೊರತಾಗಿ.ಅವುಗಳ ಬಗ್ಗೆ ಪ್ರಾಥಮಿಕ ಅಂಶಗಳಾದರು ನಮಗೆ ಗೊತ್ತಿರಬೇಕು, ತಿಳಿದವರು ... ಎಲ್ಲರಿಗೂ ತಿಳಿಸುವ ಕಾರ್ಯ ಮಾಡಬೇಕು ಎಂದು ಈ ನಡುವಿನಲ್ಲಿ ನನಗನ್ನಿಸಿತು. ಒಬ್ಬ ಮಹನೀಯ ನಾಲ್ಕು ವೇದಗಳಲ್ಲಿ ಒಂದಾದ ಆಯುರ್ವೇದವನ್ನು ಜಗತ್ತಿಗೆ ಕೊಟ್ಟ ವಿಶ್ವ ಗುರು ಭಾರತ ಎಂದುಬಿಟ್ಟ. ನನಗೆ ನನ್ನ ಗ್ರಹಿಕೆಯ ಬಗೆಗೇ ಅನುಮಾನ ಹಾದುಬಿಟ್ಟಿತು. ನನ್ನ ಅಧ್ಯಯನವೇ ತಪ್ಪೇನೋ ಎನ್ನಿಸಿ ಬಿಟ್ಟಿತು. ಇಂದಿನ ಒಂದಷ್ಟು ಯುವ ಪೀಳಿಗೆಯ ಕೆಲ ಉದ್ವೇಗಿಗಳು ವೇದಗಳ ಬಗ್ಗೆ ಇಲ್ಲದ್ದನ್ನೆಲ್ಲ ಸೇರಿಸಿ ಗುಲ್ಲು ಮಾಡಿ, ಸಾಮಾಜಿಕ ತಾಣದಲ್ಲೋ ಇನ್ನೆಲ್ಲೋ ಏನೂ ತಿಳಿಯದೆ, ಕುಚೋದ್ಯರ ಕುಹಕಕ್ಕೆ ಒಳಗಾದದ್ದನ್ನು ಕಂಡಿದ್ದೇನೆ. ಸ್ನೇಹಿತರಾದ ನವೀನ್ ಭಟ್ ಹೇಳಿದ್ದರು "ಸಂಸ್ಕೃತ ಗೊತ್ತಿರುವವರು ಅತಿ ಮಾಡುವುದಿಲ್ಲ, ಸಂಸ್ಕೃತದ ಬಗ್ಗೆ ಮಾತನಾಡುವವರು ಅತಿ ಮಾಡುತ್ತಾರೆ" ಎಂದು. ವೇದದ ಪ್ರಾಥಮಿಕ ವಿಚಾರಗಳಿಗೂ ಇದು ಅನ್ವಯ ಎಂದು ಭಾವಿಸುತ್ತೇನೆ. ಈ ಸಂದರ್ಭದಲ್ಲಿ ವೇದಗಳ ಕಿರು ಪರಿಚಯದ ಈ ಚಾರ್ಟ್ ಮಾಡಿ ಹಾಕುವುದು ಸೂಕ್ತ ಎನ್ನಿಸಿತು,ಇಲ್ಲಿ ಇನ್ನೇನಾದರೂ ಸೇರಿಸುವ ಹಾಗೂ ತಿದ್ದುವ ಸಂಗತಿ ಇದ್ದರೆ ಪ್ರಾಜ್ಞರು ತಿದ್ದಿ ಇತರರಿಗೆ ಹಂಚಿ. ಇದು ಅವಶ್ಯವಾದದು ಏಕೆಂದರೆ ಮೂರ್ಖರ ಮಾತಿಗಿಂತ, ತಿಳಿದವರ ಮೌನ ಅಪಾಯಕಾರಿ.

ಪದ ತಿದ್ದುಪಡಿಗಳು :   ಅರಣ್ಯಕ= ಆರಣ್ಯಕ  ;  ಮಾದ್ವನಾದೀನ= ಮಾಧ್ಯಂದಿನ  
ಕಣ್ವ= ಕಾಣ್ವ ;  ಮೈತ್ತಿರಾಯಣ =ಮೈತ್ರಾಯಣ ; ಕೌತುಮ = ಕೌಥುಮ

ಕರಣo ಪವನ್ ಪ್ರಸಾದ್


Thursday, February 12, 2015

ದೇಶದ ರಾಜಕೀಯಕ್ಕೇ ಹೊಸ ಆಶಾ ಕಿರಣವಾದ ಆಮ ಆದ್ಮೀ ಪಕ್ಷದ ಗೆಲುವು............

ದೇಶದ ರಾಜಕೀಯಕ್ಕೇ ಹೊಸ ಆಶಾ ಕಿರಣವಾದ ಆಮ ಆದ್ಮೀ ಪಕ್ಷದ ಗೆಲುವು............
 ಇಂದು ಪ್ರಕಟವಾದ ದೆಹಲಿ ರಾಜ್ಯದ ಚುನಾವಣಾ ಫಲಿತಾಂಶದಲ್ಲಿ ಆಮ ಆದ್ಮೀ ಪಕ್ಷಕೆ ದೊರೆತ ಭರ್ಜರಿ ಜಯ ದೇಶದ ರಾಜಕೀಯಕ್ಕೆ ಆಶಾ ಕಿರಣವಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ.
ಕಾಂಗ್ರೇಸ್ಸನ ಭೃಷ್ಟತೆ, ಬಿಜಿಪಿಯ ಕೋಮವಾದ ರಾಜಕಾರಣ, ಉಳಿದ ಪ್ರಾದೇಶಿಕ ಪಕ್ಷಗಳ ಸ್ವಾರ್ಥ ರಾಜಕಾರಣದಿಂದಲ್ಲೇ ಕಳೆದ 25 ವರ್ಷಗಳಿಂದ ಭಾರತದ ರಾಜಕೀಯ ಕಲ್ಮಶವಾಗಿತ್ತು.   ನಿಷ್ಠಾವಂತ ಮಯಾ೯ದಸ್ಥ ವ್ಯಕ್ತಿಗಳು ರಾಜಕೀಯ ಕ್ಷೇತ್ರಕ್ಕೆ ಬರಬಾರದು ಎಂಬತಹ ಸ್ಥಿತಿಗೆ ಭಾರತದ ರಾಜಕೀಯ ಕಲ್ಮಶವಾಗಿತ್ತು.
 ಇಂತಹ ಸಂದರ್ಭದಲ್ಲಿ ಅಣ್ಣಾಹಜಾರೆ ಹೋರಾಟದ ಕೂಸಾಗಿ ಹುಟ್ಟಿದ ಆಮ ಆದ್ಮೀ ಪಕ್ಷವು ಉದಯವಾದ 8 ತಿಂಗಳ ಒಳಗೆ ಉತ್ತಮ ಪ್ರದರ್ಶನವನ್ನು ನೀಡಿತು. ಕಾಂಗ್ರೆಸ್ಸನ ಬಾಹ್ಯ ಬೆಂಬಲದೊಂದಿಗೆ 49 ದಿನ ಸಕಾರ ರಚಿಸಿದ ಪಕ್ಷ ನಂತರ ಸಕಾ೯ರವನ್ನು ವಿಸಜಿ೯ಸಿತು. ವ್ಯವಸ್ಥೆಯೊಂದನ್ನು ಬದಲಿಸುವ ತುಡಿತದಲ್ಲಿದ್ದ ಪಕ್ಷ ಅಧಿಕಾರದಿಂದ ಕೆಳಗಿಳಿದಿದ್ದು ದುಡುಕಿನ ನಿಧಾ೯ರವೆಂದು ಬಿಂಬಿತವಾಯಿತು.
ಅದೇ ಸಮಯದಲ್ಲಿ ಎದುರಾದ ಲೋಕಸಭೆಗೆ  ಅತಿ ಆಸೆಯಿಂದ ಸೂಕ್ತ ತಯಾರಿ ಇಲ್ಲದೇ ಹೋಯಿತು  ಕಾರಣದಿಂದಲ್ಲೇ ಸೋಲನ್ನು ಅನುಭವಿಸಿತು. ಆದರೇ ಸೋಲನ್ನು ಸ್ವೀಕಾರ ಮಾಡಿ ತಕ್ಷಣ ಕಾರ್ಯಪ್ರವೃತವಾಗಿ ಆಮ ಆದ್ಮೀ ಪಕ್ಷ ದೆಹಲಿಯ ಚುನಾವಣೆಗೆ ತಯಾರಿ ಮಾಡಿ ಕಳೆದು ಹೋದ ತನ್ನ ಕಳೆಯನ್ನು 8 ತಿಂಗಳ ಅವಧಿಯೊಳಗೆ ಇನ್ನೂ ಹೆಚ್ಚು ಕಳೆಯೊಂದಿಗೆ ಪುನರ್ ಸ್ಥಾಪಿಸಿಕೊಂಡಿರುವುದು. ಇದರ ಪರಿಣಾಮವೇ ಇಂದು 70 ಕ್ಷೇತ್ರದಲ್ಲಿ  ಆಮ ಆದ್ಮೀ ಪಕ್ಷ ಸಿಂಹಪಾಲನ್ನು ಗೆದ್ದು ಇತಿಹಾಸ ಬರೆದಿರುವುದು.
ಆಮ ಆದ್ಮೀ ಪಕ್ಷಕೆ ಕೊನೆಯ ಗಳಿಗೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ನೇರವಾಗಿ ಎದುರಿಸಲಾಗದೇ ಇಲ್ಲ ಸಲ್ಲದ ಆಪಾದನೇ ಮಾಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಲು ಪ್ರಯತಿಸಿತು. ಬಿಜೆಪಿಯ 120 ಎಂಪಿಗಳು ಬಿಜೆಪಿಯ ಗೆಲುವಿಗೆ ಕೊನೆ ಗಳಿಗೆಯಲ್ಲಿ ಎಲ್ಲಾ ರೀತಿಯಿಂದಲ್ಲೂ ಪ್ರಯತ್ನ ಪಟ್ಟರು. ಆದರೇ ದೆಹಲಿಯ ಜನತೆ ಎಲ್ಲವನ್ನು ಅರ್ಥಮಾಡಿಕೊಂಡು ಯಾವ ಆಪಾದನೆಗೂ ಬೆಲೆ ನೀಡದೆ ಆಮ ಆದ್ಮೀ ಪಕ್ಷಕೆ ಪ್ರಚಂಡ ಬಹುಮತ ನೀಡಿರುವುದು. ಆಮ ಆದ್ಮೀ ಪಕ್ಷದ ಬಗ್ಗೆ ಬೇರೆ ಪಕ್ಷಗಳು ಮಾಡಿದ ಅಪಪ್ರಚಾರ ಎಲ್ಲವು ಆಮ ಆದ್ಮೀಗೆ ಪಕ್ಷಕೆ ವರವಾಗಿ ಪರಿಣಮಿಸಿತು. ಕಾರಣ ಪಕ್ಷದ ಪಾರದರ್ಶಕತೆ ಬಗ್ಗೆ ಯಾವುದೇ ಅನುಮಾನ ಇರಲಿಲ್ಲ. ಎಲ್ಲ ಪರಿಣಾಮವಾಗಿ ದೇಶದ ರಾಜಧಾನಿಯಲ್ಲಾದ ರೀತಿಯ ರಾಜಕೀಯ ಫಲಿತಾಂಶ ಉಳಿದ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯ ಗಂಟೆಯಾಗಿರುವುದು
ದೇಶದ ರಾಜಧಾನಿಯಲ್ಲಿ ಆಮ ಆದ್ಮೀಯ ಪ್ರಚಂಡ ವಿಜಯ ದೇಶದ ಮುಂಬರುವ ರಾಜಕಾರಣದಲ್ಲಿ ಮಹತ್ತರ ಬದಲಾವಣೆ ತರುವುದರಲ್ಲಿ ಯಾವುದೇ ಸಂಶಯ ಇಲ್ಲ.
ಎಲ್ಲಾ ರಾಜಕೀಯ ಪಕ್ಷಗಳು ಸಹಾ ತಮ್ಮ ಪಕ್ಷದ ನೀತಿಗಳ ಬಗ್ಗೆ ಅವಲೋಕನ ಮಾಡಿಕೊಳ್ಳುತ್ತಾ  ಬದಲಾವಣೆಗಳನ್ನು ಮಾಡಿಕೊಳ್ಳುವ ಅಗತ್ಯವಿದೆ.
                ರಾಜಕೀಯ ಪಾಟರ್ಿಗಳ ದೇಣಿಗೆಯ ಬಗ್ಗೆ ಆಮ ಆದ್ಮೀ ಪಾಟಿ೯ಯ ತರಹ ಪಾರದರ್ಶಕತೆ ಇರುವುದು ಅಗತ್ಯವಿದೆ.
                ಬಿಜೆಪಿ ತನ್ನ ಸಹಚರ ಸಂಸ್ಥೆಗಳು ನಡೆಸುತ್ತಿರುವ ಘರ ವಾಪಸ್ಸಿಯಂತಹ ಚಟುವಟಿಕೆಯನ್ನು ತಕ್ಷಣ ನಿಲ್ಲಿಸಬೇಕಾಗಿದೆ.
                ಕಾಂಗ್ರೆಸ್ಸ ಪಕ್ಷ ತನ್ನ ಸೋಲನ್ನು ಒಪ್ಪಿಕೊಂಡು, ಆಗಿರುವ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಬೇಕು. ಭೃಷ್ಟಾಚಾರವನ್ನು ತೆಗೆದು ಹಾಕುವ ಹಿನ್ನಲೆಯಲ್ಲಿ  ಪಾಟಿ೯ಯಲ್ಲಿಯೇ ಅಮೂಲಾಗ್ರ ಬದಲಾವಣೆ ತರಲು ಪ್ರಾರಂಭಿಸಬೇಕು.
                ಸಮಾಜವಾದಿ ಪಕ್ಷ, ಬಹುಜನ, ಜನತಾದಳದ ಪರಿವಾರಗಳು ಎಲ್ಲಾ ಪಾಟಿ೯ಗಳು ತಮ್ಮ ತಮ್ಮ ಪಕ್ಷವನ್ನು ಶುಚಿಗೊಳಿಸುವ ಕಾರ್ಯವನ್ನು ಪ್ರಾರಂಭಿಸಬೇಕು. ಮೊದಲು ಪಕ್ಷದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಆಮ ಆದ್ಮೀ ಪಕ್ಷ ಅನುಸರಿಸುತ್ತಿರುವಂತಹ ನಿಯಮವನ್ನು ರೂಢಿಸಿಕೊಳ್ಳಬೇಕು.
                ಎಲ್ಲಾ ಪಕ್ಷಗಳು ವಿಷಯಾಧಾರಿತವಾಗಿ ರಾಜಕೀಯ ಮಾಡಬೇಕು ವಿನಹ ಜಾತಿ/ ಧರ್ಮ ರಾಜಕೀಯವನ್ನಲ್ಲ.
                ಜನಸಾಮಾನ್ಯರನ್ನು, ರೈತರನ್ನು ಕಡೆಗಣಿಸಿ ಮುಖ್ಯವಾಗಿ ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗುವಂತಹ ರೀತಿ ಕಾರ್ಯನಿರ್ವಹಿಸುವ ದೃಷ್ಠಿಯನ್ನು ಬಿಜೆಪಿ ಮುಖ್ಯವಾಗಿ ಬದಲಾಯಿಸಿಕೊಳ್ಳುವ ಅಗತ್ಯವಿದೆ.
                ಜನಸಾಮಾನ್ಯರ ಮೂಲಭೂತ ಅಗತ್ಯಗಳಾದ ಶುದ್ದ ಕುಡಿಯುವ ನೀರು, ವಸತಿ, ಉತ್ತಮ ಶಿಕ್ಷಣ, ಉತ್ತಮ ಆರೋಗ್ಯದ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ದೃಷ್ಠಿ ಏನು ಎಂಬುದನ್ನು ಪುನ: ವಿಮಶಿ೯ಸಿ ಪಸ್ಥುತಪಡಿಸಬೇಕಾದ ಅಗತ್ಯತೆ ಇರುವುದು.
                ಕೊಲೆಗಡುಕರು, ಭೃಷ್ಠಾಚಾರಿಗಳು, ಕಪಟಿಗಳು, ಮೋಸಗಾರರು ಬಹುತೇಕ ಎಲ್ಲಾ ಪಕ್ಷಗಳಲ್ಲಿಯೂ ಇರುವರು ಇಂತವರನ್ನು ಹೊರಗೆ ಕಳುಹಿಸುವ ಕಾರ್ಯವನ್ನು ಎಲ್ಲಾ ಪಾಟಿ೯ಗಳು ತಕ್ಷಣ ಪ್ರಾರಂಭಿಸಬೇಕಾಗಿದೆ.
ಒಟ್ಟಾರೆ ಶುದ್ದ, ಪಾರದರ್ಶಕ ಆಡಳಿತದ ಭರವಸೆಗೆ ದೆಹಲಿಯಲ್ಲಿ ಸಿಕ್ಕ ಜಯ ನಿಜವಾಗಿಯೂ ಆಮ ಆದ್ಮೀಯದೇ ಜಯವಾಗಿರುವುದು. ಆಯ್ಕೆಯಾದ ಎಲ್ಲಾ ಜನಪ್ರತಿನಿಧಿಗಳು ವಾಸ್ತವದಲ್ಲಿ  ಜನರ ಪ್ರತಿನಿಧಿಯಾಗಿ ತಾವು ನೀಡಿದ ಆಶ್ವಾಸನೆಯಂತೆ ಕಾರ್ಯನಿಹಿಸಿ ದೇಶದಲ್ಲಿ ರಾಜಕೀಯದ ಚಿತ್ರಣ ಬದಲಾಗುವಂತೆ ಮಾಡುವ ಮಹತ್ವದ ಜವಬ್ದಾರಿ ಇಂದು ಅರವಿಂದ ಕ್ರೇಜಿವಾಲ್ ಮತ್ತು ಆಮ ಆದ್ಮೀ ಪಕ್ಷದ ಮುಂದಿದೆ.
ಚುನಾವಣೆ ಕೇವಲ ದೇಹಲಿಗೆ ಮಾತ್ರ ಸೀಮಿತ ಎಂದು ಅಸಡ್ಡೆ ತೋರದೆ ಎಲ್ಲಾ ರಾಜಕೀಯ ಪಕ್ಷಗಳು  ಗಂಭೀರವಾಗಿ ಚಿಂತಿಸಲು ಇದು ಸಕಾಲವಾಗಿದೆ.
ಕೊನೆಯದಾಗಿ ಪ್ರಾಮಾಣಿಕರು ರಾಜಕೀಯ ಕ್ಷೇತ್ರಕ್ಕೆ ಬರುವ ಭರವಸೆ ಮೂಡಿಸಿದ ದೆಹಲಿ ಜನತಗೆ ಮತ್ತು ಆಮ ಆದ್ಮೀ ಪಕ್ಷಕ್ಕೆ ತುಂಬು ಹೃದಯದ ಧನ್ಯವಾದಗಳು...

ವಿವೇಕ ಬೆಟ್ಕುಳಿ







ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......