Saturday, December 7, 2013

ಚಿಗುರು

ಮಿಂಚೆಂದರೆ ಮೋಡಕೆ ಮೀಸಲೆಂಬ
ನಂಬಿಕೆ ಸುಳ್ಳಾಯಿತು ಅಂದು
ನನ್ನೊಳಗೂ ಸಂಚಲಿಸ ಬಹುದು
ಗೊತ್ತಾಯಿತು ಆಕೆಯ ಕಂಡು

ಗೆಳೆತನದಲಿ ಮೊದಲಾಯಿತು ಪರಿಚಯ
ಪ್ರೇಮಾಂಕುರದ ಪಥದಲ್ಲಿ
ನಿದ್ದೆಗೂ ಮೀಸಲಿಡದ ಕನವರಿಕೆಗಳೇ
ಕಾಮನೆ ಜೊತೆಯಲ್ಲಿ

ಚಿಗುರಿದ ಮೀಸೆಗೂ ಕಾರಣವಿತ್ತು
ಕಾಣುವ ಹಂಬಲ ಆಕೆಯನು
ಒಂದೇ ಸಮನೆ ಗೊಂದಲ ಮನಸಲಿ
ಹೃದಯವೂ ಬೆಂಬಲಿಸಿತು ತಾನು

ಓದಿನ ಗೋಜಲಿ ಮೂಡಿದ ಅಂತರ
ದುಃಸ್ವಪ್ನವೇ ಅನಿಸಿರಬಹುದು
ಪಾಠಗಳೆಲ್ಲವೂ ಅವಳದೇ ಕುರಿತು
ಅರ್ಥದಲೊಳಾರ್ಥವಿರಬಹುದು

ನಕ್ಕರೆ ನವರಾತ್ರಿಯ ದೀಪೋತ್ಸವ
ಮಾತಿಗೆ ಸಿಕ್ಕರೆ ಸಕ್ಕರೆಯು
ಪ್ರೌಢತೆಯ ಮೂರುತಿಯಾಗಿದ್ದಳು
ನಾ ಮೆರೆಸಿದ ರಥ ಸಾರಥಿಯೂ

ಆಕೆ ಗಿರಿಜೆ, ಶಂಕರನಾಗೋ
ಯೋಗ್ಯತೆ ನಾ ಪಡೆದಿರಲಿಲ್ಲ
ನನ್ನೊಳ ಪ್ರೇಮ, ನುಡಿಸದ ಕೊಳಲು
ಆಕೆಗೆ ಕೇಳಿಸಲಾಗಿಲ್ಲ !!

                                 -- ರತ್ನಸುತ 

No comments:

Post a Comment

"RSS ಮತ್ತು DSS - ಒಂದು ತೌಲನಿಕ ಅಧ್ಯಯನ"- ಪ್ರವೀಣಕುಮಾರ M

RSS (ರಾಷ್ಟ್ರೀಯ ಸ್ವಯಂಸೇವಕ ಸಂಘ) ತನ್ನ 100 ನೇ ವರ್ಷದ ಸಂಭ್ರಮವನ್ನು ದೇಶದಾದ್ಯಂತ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಆ ಪಕ್ಷವನ್ನು  ಬೆಂಬಲಿಸುವ ...