Tuesday, January 12, 2016

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು

ಮೂಡುವನು ರವಿ ಮೂಡುವನು
ಕತ್ತಲೊಡನೆ ಜಗಳಾಡುವನು
ಪಂಜೆ ಮಂಗೇಶ ರಾಯರು
ಮೂಡಣ ರಂಗಸ್ಥಳದಲಿ ನೆತ್ತರ
ಮಾಡುವನು ಕುಣಿದಾಡುವನು
ಬೆಳಕಿನ ಕಣ್ಣುಗಳಿ೦ದಾ ಸೂರ್ಯನು
ನೋಡುವನು ಬಿಸಿಲೂಡುವನು
ಚಿಲಿಪಿಲಿ ಹಾಡನು ಹಾಡಿಸಿ ಹಕ್ಕಿಯ
ಗೂಡಿನ ಹೊರ ಹೊರ ದೂಡುವನು
ಬಂಗಾರದ ಚೆಲು ಬಿಸಿಲ ಕಿರೀಟದ
ಶೃಂಗಾರದ ತಲೆ ಎತ್ತುವನು
ತೆಂಗಿನ ಕಂಗಿನ ತಾಳೆಯ ಬಾಳೆಯ
ಅಂಗಕೆ ರಂಗನು ಮೆತ್ತುವನು
ಮಾಡಿನ ಹುಲ್ಲಲಿ ಚಿನ್ನದ ಗೆರೆಯನು
ಎಳೆಯುವನು ರವಿ ಹೊಳೆಯುವನು
ಕೂಡಲ ಕೋಣೆಯ ಕತ್ತಲೆ ಕೊಳೆಯನು
ತೊಳೆಯುವನು ರವಿ ಹೊಳೆಯುವನು
ಮಲಗಿದ ಕೂಸಿನ ನಿದ್ದೆಯ ಕಸವನು
ಗುಡಿಸುವನು ಕಣ್ ಬಿಡಿಸುವನು
ಹುಲುಗಿಡ ಹೂವಿಗೆ ಪರಿ ಪರಿ ಬಣ್ಣವ
ತೊಡಿಸುವನು ಹನಿ ತೊಡೆಸುವನು
ಏರುವನು ರವಿ ಏರುವನು
ಬಾನೊಳು ಸಣ್ಣಗೆ ತೋರುವನು
ಏರಿದವನು ಚಿಕ್ಕವನಿರಬೇಕೆಲೆ
ಎಂಬಾ ಮಾತನು ಸಾರುವನು
ಕವಿ : ಪಂಜೆ ಮಂಗೇಶ ರಾಯರು

Wednesday, November 18, 2015

ಇಳಿದು ಬಾ ತಾಯೆ ಇಳಿದು ಬಾ - ಕುವೆಂಪು

ಇಳಿದು ಬಾ ತಾಯೆ ಇಳಿದು ಬಾ - ಕುವೆಂಪು

ಓಂ ಸಚ್ಚಿದಾನಂದ ತ್ರಿತ್ವ ಮುಖವಾದ ಪರಬ್ರಹ್ಮದಲ್ಲಿ
ಅಭವದೊತ್ತಾದೆ ಭವದ ಬಿತ್ತಾದೆ ಋತದ ಚಿತ್ತಾದೆ ನೀ
ಇಳಿದು ಬಾ ಇಳೆಗೆ ತುಂಬಿ ತಾ ಬೆಳೆಗೆ ಜೀವ ಕೇಂದ್ರದಲ್ಲಿ
ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತ ಪೃಥ್ವಿಯಲ್ಲಿ ||
ಋತದ ಚಿತ್ತಾಗಿ ವಿಶ್ವಗಳ ಸೃಜಿಸಿ ನಡೆಸುತಿಹ ಶಕ್ತಿಯೆ
ಅನ್ನ ಪ್ರಾಣಗಳ ಮನೋಲೋಕಗಳ ಸೂತ್ರಧರ ಯುಕ್ತಿಯೆ
ಅಖಿಲ ಬಂಧನದ ಹೃದಯದಲ್ಲಿ ಅವಿನಾಶಿ ಆಸಕ್ತಿಯೆ
ನಿನ್ನ ಅವತಾರವೆನ್ನ ಉದ್ಧಾರ ಬಾ ದಿವ್ಯ ಮುಕ್ತಿಯೆ
ಎಲ್ಲವನು ಮಾಡಿ ಎಲ್ಲರೊಳಗೂಡಿ ನೀನೆ ಎಲ್ಲವಾದೆ
ಜ್ಯೋತಿಯಾದರೂ ತಮೋಲೀಲೆಯಲಿ ಜಡದ ಮುದ್ರೆಯಾದೆ
ಎನಿತು ಕರೆದರೂ ಓಕೊಳ್ಳದಿರುವಚಿನ್ನಿದ್ರೆಯಾದೆ
ಬೆಳಗಿ ನನ್ನಾತ್ಮಕಿಳಿದು ಬಾ ತಾಯೆ ನೀನೆ ಬ್ರಹ್ಮ ಬೋಧೆ
ಇಳಿದು ಬಾ ತಾಯೆ ಇಳಿದು ಬಾ ||
ಗಾಳಿಗುಸಿರು ನೀ ಬೆಂಕಿಗುರಿಯು ನೀನುದಕಕದರ ಜೀವ
ಅಗ್ನಿ ಇಂದ್ರ ವರುಣಾರ್ಕ ದೇವರನು ಮಾಡಿ ನೋಡಿ ಕಾವ
ಶಿವನ ಶಕ್ತಿ ನೀ, ವಿಷ್ಣು ಲಕ್ಷ್ಮೀ ನೀ, ಚತುರ್ಮುಖನ ರಾಣಿ
ದಿವ್ಯ ವಿಜ್ಞಾನ ನನ್ನೊಳುದ್ಭವಿಸೆ ಮತಿಗಾಗಮಿಸು, ವಾಣಿ
ಹೃದಯ ಪದ್ಮ ತಾನರಳೆ ಕರೆವೆ ಬಾರಮ್ಮ ಬಾ, ಇಳಿದು ಬಾ
ಮನೋದ್ವಾರ ತಾ ಬಿರಿಯೆ ಕರೆವೆ ಜಗದಂಬೆ ಬಾ, ಇಳಿದು ಬಾ
ಅಗ್ನಿ ಹಂಸ ಗರಿಗೆದರೆ ಕರೆವೆ ಬಾ ತಾಯೆ ಬಾ, ಇಳಿದು ಬಾ
ಚೈತ್ಯ ಪುರುಷ ಯಜ್ಞಕ್ಕೆ ನೀನೆ ಅಧ್ವರ್ಯು, ಬಾ, ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ ||



ಹಗಲಲ್ಲದ ಇರುಳಲ್ಲದ ನಡುಗಾಲದ - ರಾಜೇಂದ್ರ ಪ್ರಸಾದ್

ಹಗಲಲ್ಲದ ಇರುಳಲ್ಲದ ನಡುಗಾಲದ
ನೆತ್ತಿಯ ಮೇಲೆ ಎಷ್ಟೊಂದು ಉರಿದೀಪ
ಎದೆಯ ಮೇಲೆ ತೇಲಿ ಬಿಟ್ಟಂತೆ!
ಎತ್ತ ನೋಡಿದರತ್ತ ಸಾವಿನ ದೋಣಿಗಳು
ನನ್ನನೇ ಅಟ್ಟಿಸಿಕೊಂಡು ಬಂದಂತೆ
ಬಿಡಿದೆ ಬಾಗಿಲವರೆಗೆ ಬಂದು ಅಲ್ಲಿಯೇ ಕಾಯ್ದಂತೆ
ರುಂಡವಿಲ್ಲದ ಹಾರುಪಕ್ಷಿಗಳು ಯಮಪಾಶವ
ಹಿಡಿದು ಮನೆಯ ಮೇಲಣ ಮುಗಿಲೆಲ್ಲಾ ಸುತ್ತಿದಂತೆ.
ದೇಹ ಬೆವರುತ್ತಿದೆ ಬಿಸಿಹಬೆಯಂತೆ.
ಹನುಮಾss ಇಟ್ಟು ಮರೆತ ಸಂಜೀವಿನಿ ಎಲ್ಲೋ ?
ಮರೆತದ್ದು ಮಣ್ಣಾಗಲಿ ಚಮ್ಮಾರನ ಮನೆಯ
ಗಲ್ಲೇಬಾನಿಯನಾದರೂ ಮೊಗೆದು ತಾರೋ ಸಂಜೀವರಾಯ
ನಿನ್ನ ಮನೆಕಾಯ, ಉಸಿರು ಸಿಕ್ಕಿಕೊಂಡಿದೆ.
ಬಾಗಿಲಲ್ಲಿ ದೋಣಿ
ಮುಗಿಲಲ್ಲಿ ಪಕ್ಷಿ
ಎದೆಯಲ್ಲಿ ದೀಪ
ನನ್ನ ಕಾಯುತ್ತಿವೆ. ~

                                                -    ರಾಜೇಂದ್ರ ಪ್ರಸಾದ್

Monday, October 26, 2015

ಚುಟುಕ - ಸಂತೋಷ್ ಕುಮಾರ್ ಎಲ್. ಎಂ.

---1 ---

ಬತ್ತಿಯ ಬಾಯಿಗೆ
ಬೆಂಕಿಯಿಟ್ಟವನ ಆಶಯ
ಬೆಳಕಷ್ಟೇ!
ಮುಗಿಯುವ
ಅದರ ಆಯಸ್ಸಲ್ಲ

---2---------


ಗೂಡು ಕಟ್ಟಿದ್ದ ಮರವ
ಧರೆಗುರುಳಿಸಿದ ಕಾರಣ
ಹುಡುಕುತ್ತಿದ್ದ ಹಕ್ಕಿಗೆ
ವಿಳಾಸವಿಲ್ಲ...
ಹಕ್ಕಿಯೂ ಶಪಿಸಿತು,
ಉರುಳಿಸಿದ ದುರುಳನಿಗೂ
ಮುಂದೊಂದು ದಿನ
ವಿಳಾಸವಿಲ್ಲ!

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......