Saturday, September 26, 2015

ಹಾಸ್ಯ - ಕೃಪೆ - ವಾಟ್ಸ್ ಆಪ್


ಎಂಟು , ಹತ್ತು ವರುಷದ ಇಬ್ಬರು ಹುಡುಗರು ತುಂಟತನದಲ್ಲಿ ಪ್ರಖ್ಯಾತರಾಗಿದ್ದರು. ಕುಖ್ಯಾತರು ಕೂಡ. ಊರಲ್ಲಿ ಏನೇ ಕಿತಾಪತಿಯಾದರೂ ಅದರಲ್ಲಿ ಇವರಿಬ್ಬರ ಹೆಸರು ಇದ್ದೇ ಇರುತಿತ್ತು.. ಅವರ ಹೆತ್ತವರಿಗೆ ಸಹಜವಾಗಿಯೇ ಇದು ತಲೆಬಿಸಿಯ ಸಂಗತಿಯಾಗಿತ್ತು.  ಹೀಗಿರುವಾಗ ಅವರಮ್ಮನಿಗೆ ಒಬ್ಬ ಸ್ವಾಮೀಜಿಯ ಬಗ್ಗೆ ತಿಳಿದು ಬಂತು. ಅವರು ಇಂಥ ಎಷ್ಟೊ ಮಕ್ಕಳ ತಂಟತನವನ್ನು ಬುದ್ಧಿ ಹೇಳಿ ಕಡಿಮೆ ಮಾಡಿದ್ದರು. ಮಕ್ಕಳಿಬ್ಬರನ್ನೂ ಕರೆದುಕೊಂಡು ಸ್ವಾಮೀಜಿಯವರ ಬಳಿ ಹೋದಳು.
ವಿಷಯವೆಲ್ಲ ತಿಳಿದುಕೊಂಡು ಸ್ವಾಮೀಜಿ ಹೇಳಿದರು ಒಬ್ಬೊಬ್ಬರನ್ನೇ ಮಾತಾಡಿಸುತ್ತೇನೆ. ನಾಳೆ ಚಿಕ್ಕವನನ್ನು ಕಳುಹಿಸಿ ನನ್ನ ಹತ್ತಿರ.


ಸರಿ ಎಂದ ಅಮ್ಮ.. ಮಾರನೆ ದಿನ ಚಿಕ್ಕವನನ್ನು ಕಳುಹಿಸಿದರು. ಅವನನ್ನು ಸ್ವಲ್ಪ ಹೊತ್ತು ದಿಟ್ಟಿಸಿ ನೋಡಿದ ಸ್ವಾಮೀಜಿ ತಮ್ಮ ಕಂಚಿನ ಕಂಠದಿಂದ ದೇವರು ಎಲ್ಲಿದ್ದಾನೆ? ಎಂದು ಕೇಳಿದರು. ಹುಡುಗ ಮೌನವಾಗಿದ್ದ. ಪುನಃ ಹತ್ತಿರ ಬಂದು ದೇವರು ಎಲ್ಲಿದ್ದಾನೆ ಎಂದು ಕೇಳಿದರು.
ಆಗಲೂ ಮಾತಾಡದ ಹುಡುಗನ ಕೆನ್ನೆಯನ್ನು ತನ್ನ ಬೆರಳಿಂದ ತಿವಿದು ಅದೇ ಪ್ರಶ್ನೆಯನ್ನು ಕೇಳಿದರು.. ದೇವರು ಎಲ್ಲಿದ್ದಾನೆ?.
ಹುಡುಗ ಅಲ್ಲಿಂದ ಒಂದೇ ಉಸಿರಿಗೆ ಓಡಿ ಬಂದು ಮನೆ ಸೇರಿ ಮೂಲೆಯೊಂದರಲ್ಲಿ ಅಡಗಿ ಕೂತ.
ಅದನ್ನು ಕಂಡ ದೊಡ್ಡ ಹುಡುಗ ಹತ್ತಿರ ಬಂದು ಏನಾಯ್ತು ಎಂದು ಕೇಳಿದ.
ಚಿಕ್ಕವನು ನಡುಗುತ್ತ... ಅಣ್ಣಾ.... ಎಂದು ಅವನ ಕಿವಿಯಲ್ಲಿ ಗುಟ್ಟಾಗಿ ಹೇಳಿದ..
ಆ ಪುಟ್ಟ ಹುಡುಗನ ಉತ್ತರ ಅದೆಷ್ಟು ಮುಗ್ಧವಾಗಿತ್ತೆಂದರೆ ನನಗಂತೂ ನಗು ತಡೆಯಲೇ ಆಗಲಿಲ್ಲ..
ನೀವೂ ಓದಿ.
.
.
.
.
"ಅಣ್ಣಾ...ಈ ಸಲ ದೊಡ್ಡ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ ಕಣೊ... ದೇವರು ಕಾಣೆಯಾಗಿದ್ದಾನಂತೆ .. ಅದೂ ನಮ್ಮ ಮೇಲೆ ಬಂದಿದೆ."


ಕೃಪೆ - ವಾಟ್ಸ್ ಆಪ್

Monday, August 10, 2015

ನಾಡೋಜ ಶ್ರೀ ಕಯ್ಯಾರ ಕಿಞ್ಞಣ್ಣ ರೈ - Rohith Chakrathirtha

ಕನ್ನಡದ ಅಕ್ಷರಗಳನ್ನು ಕೈಬಿಡಬೇಕು, ಮಹಾಪ್ರಾಣ ತೆಗೆಯಬೇಕು, ಕೊನೆಗೆ ಕನ್ನಡದ ಪ್ರಾಣವನ್ನೂ ಉಡಾಯಿಸಬೇಕು ಎಂದು ನಮ್ಮೊಳಗಿನ ಕನ್ನಡಿಗರೇ ಸಂಚು ಮಾಡುತ್ತಿರುವಾಗ ಕಾಸರಗೋಡಿನಂಥ ಪರಸ್ಥಳದಲ್ಲಿದ್ದು ಮಾನಸಿಕವಾಗಿ ಎಂದೆಂದೂ ಕನ್ನಡಿಗನೇ ಆಗಿ ಉಳಿದ ಮತ್ತು ತನ್ನ ತಾಯ್ನಾಡು ಕಾಸರಗೋಡನ್ನು ಕಡೆಯವರೆಗೂ ಕನ್ನಡನಾಡಿನ ಭಾಗವೆಂದೇ ತಿಳಿದ ರೈಗಳು ಪರೋಕ್ಷವಾಗಿ 'ಞ' ಎಂಬ ಪಾಪದ ಅಕ್ಷರವನ್ನೂ ಉಳಿಸಲು ಹೋರಾಡಿದರು ಎನ್ನಬಹುದು. ಯಾಕೆಂದರೆ ರೈದಂಪತಿ ತಮ್ಮೆರಡು ಹೆಸರುಗಳಲ್ಲೇ ನಾಲ್ಕು 'ಞ'ಗಳನ್ನು ಮಕ್ಕಳಂತೆ ಕಟ್ಟಿಕೊಂಡಿದ್ದರು.
ಹುಟ್ಟಿಸಿದ ತುಳುವಪ್ಪೆ, ಬೆಳೆಸಿದ ಕನ್ನಡತಾಯಿ ಇಬ್ಬರೂ ಬಡವಾಗಿದ್ದಾರೆ. 'ಞ' ಅಕ್ಷರ ಕೂಡ ತಬ್ಬಲಿಯಾಗಿದೆ.

ನಾಡೋಜ ಶ್ರೀ ಕಯ್ಯಾರ ಕಿಞ್ಞಣ್ಣ ರೈ



Friday, July 24, 2015

ಶ್ರೀ ಗಣೇಶಭಟ್ಟ ಕೊಪ್ಪಲತೋಟರ ಮೂರನೆಯ ಅಷ್ಟಾವಧಾನಕಾರ್ಯಕ್ರಕೆ ಅಮಂತ್ರಣ

ಆತ್ಮೀಯಮಿತ್ರರಿಗೆಲ್ಲ ನಮಸ್ಕಾರ,
ಇದೇ ತಿಂಗಳು ಇಪ್ಪತ್ತೈದನೆಯ ತಾರೀಖು ಶನಿವಾರದಂದು ಬೆಳಗ್ಗೆ ಹತ್ತುಗಂಟೆಗೆ ಬಸವನಗುಡಿ ರಸ್ತೆಯಲ್ಲಿರುವ ಗೋಖಲೆ ಸಾರ್ವಜನಿಕವಿಚಾರಸಂಸ್ಥೆಯಲ್ಲಿ ನಮ್ಮ ಯುವಮಿತ್ರರೂ ಸಾಹಿತ್ಯರಸಿಕರೂ ಆದ
ಶ್ರೀ ಗಣೇಶಭಟ್ಟ ಕೊಪ್ಪಲತೋಟರ ಮೂರನೆಯ ಅಷ್ಟಾವಧಾನಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದಕ್ಕೆ ಪ್ರಾಯೋಜಕರಾಗಿ ಒದಗಿ ಬಂದವರು ನಮ್ಮ ಪದ್ಯಪಾನ ಬಳಗದವರೇ ಆದ ಶ್ರೀ.ಸೋಮಶೇಖರಶರ್ಮ, ಶ್ರೀ.ರವಿಶಂಕರ್ ಮತ್ತು ಶ್ರೀ.ಶ್ರೀಧರ್ ಸಾಲಿಗ್ರಾಮ ಅವರ ಪೂಜ್ಯಮಾತಾಪಿತರು.ಇದಕ್ಕಾಗಿ ಅವರಿಗೆ ವಿಶೇಷಕೃತಜ್ಞತೆಗಳು.
ಶ್ರೀ ಗಣೇಶಭಟ್ಟ ಕೊಪ್ಪಲತೋಟ
ಈ ಅವಧಾನದಲ್ಲಿ ಪೃಚ್ಛಕರಾಗಿ ಪಾಲ್ಗೊಳ್ಳಲು ಪ್ರೀತಿಯಿಂದ ಒಪ್ಪಿದವರು :
ಶ್ರೀ. ಎಮ್ ಆರ್ ಚಂದ್ರಮೌಳಿ (ನಿಷೇಧಾಕ್ಷರಿ)
ಶ್ರೀ. ಮಂಜುನಾಥ ಕೊಳ್ಳೇಗಾಲ (ಸಮಸ್ಯಾಪೂರಣ)
ಶ್ರೀ. ಬಿ ಆರ್ ಪ್ರಭಾಕರ್ (ದತ್ತಪದೀ)
ಶ್ರೀಮತಿ. ಉಷಾ ಉಮೇಶ್ (ನ್ಯಸ್ತಾಕ್ಷರೀ)
ಶ್ರೀ. ಸುಧೀರ್ ಕೃಷ್ಣಸ್ವಾಮಿ (ಆಶುಕವಿತೆ)
ಶ್ರೀಮತಿ. ಶ್ರೀಲಲಿತಾ ರೂಪನಗುಡಿ (ಕಾವ್ಯವಾಚನ)
ಶ್ರೀ. ರಂಗನಾಥ ಪ್ರಸಾದ್ (ಸಂಖ್ಯಾಬಂಧ)
ಶ್ರೀ. ಆರ್ ಗಣೇಶ್ (ಅಪ್ರಸ್ತುತಪ್ರಸಂಗ)

ಅಷ್ಟಾವಧಾನಿ ಕೊಪ್ಪಲತೋಟರು ಕೇವಲ ಇಪ್ಪತ್ತಾರು ವರ್ಷಗಳ ಕಿರಿಯ ಹರೆಯದಲ್ಲಿಯೇ ಮಾಡಿರುವ ಸಾಹಿತ್ಯಸಾಧನೆ ಸ್ತುತ್ಯವಾಗಿದೆ. ಅವರು ಈಗಾಗಲೇ ಕಥೆ, ಕಾದಂಬರಿ, ಕವಿತೆ, ಖಂಡಕಾವ್ಯ ಮುಂತಾದ ಪ್ರಕಾರಗಳಲ್ಲಿ ದುಡಿದಿದ್ದಾರೆ. ಅಲ್ಲದೆ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಸಾಹಿತ್ಯಗಳಲ್ಲಿ ಒಳ್ಳೆಯ ಅಧ್ಯಯನವನ್ನೂ ಮಾಡಿದ್ದಾರೆ. ಜೊತೆಗೆ ಒಳ್ಳೆಯ ಧಾರೆ, ಧಾರಣ ಮತ್ತು ಪ್ರತಿಭೆ-ಪಾಂಡಿತ್ಯಗಳ ಹದವುಳ್ಳ ತಮ್ಮ ಮೊದಲ ಅವಧಾನದ ಮೂಲಕವೇ ವಿದ್ವದ್ರಸಿಕರಲ್ಲಿ ಹೊಸಭರವಸೆಯನ್ನೂ ಮೂಡಿಸಿದ್ದಾರೆ. ಇಂಥ ಮೇಧಾವಿಗಳಾದ ತರುಣರ ವಿಶಿಷ್ಟಕಲೆಯನ್ನು ಮೆಚ್ಚಿ ಆದರಿಸಲು ಕನ್ನಡಸಾಹಿತ್ಯರಸಿಕರೂ ಅವಧಾನಕಲಾಪ್ರೇಮಿಗಳೂ ಬರಬೇಕೆಂದು ವಿನಂತಿ. ಎಲ್ಲ ಕಾವ್ಯರಸಿಕರಿಗೂ ಆದರದ ಸ್ವಾಗತ.



ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಗಿರೀಶ್ ಕಾಸರವಳ್ಳಿ ಚಿತ್ರೋತ್ಸವ


ಜು. 25ರಿಂದ ಜು. 29ರವರೆಗೆ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಗಿರೀಶ್ ಕಾಸರವಳ್ಳಿ ಚಿತ್ರೋತ್ಸವ ಆಯೋಜನೆಗೊಂಡಿದೆ.  

Wednesday, July 22, 2015

ವಂಶ ವೃಕ್ಷ ಕಾದಂಬರಿ ಕುರಿತಾದ ಅನಿಸಿಕೆಗೆ - ಶಿವಕುಮಾರ್

ನಮಸ್ಕಾರ !!
ವಂಶವೃಕ್ಷಕ್ಕೆ ಐವತ್ತು ವರ್ಷಗಳು ತುಂಬಿರಬಹುದು ಆದರೆ ನಾನು ಅದನ್ನು ಓದಿದ್ದು ನಾಲ್ಕು ವರ್ಷಗಳ ಹಿಂದೆ !! ನಂತರ ಐದು ಬಾರಿ ಇದನ್ನು ಓದಿದ್ದೆನೆ. ನನ್ನ ಹುಟ್ಟು ಹಬ್ಬಕ್ಕೆ ನನ್ನ ಆಪ್ತ ಗೆಳೆಯ ಶಂಕರ್ ಕವಲು ಕಾದಂಬರಿಯನ್ನು ಉಡುಗೊರೆಯಾಗಿ ಕೊಟ್ಟಿದ್ದ. ಆಗ ನಾನು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. (ಭೈರಪ್ಪನವರು ಇಲ್ಲೇ ಕಾರ್ಯ ನಿರ್ವಹಿಸಿ ನಿವೃತ್ತರಾದರು) ಆಗಿನಿಂದ ನಾನು ಭೈರಪ್ಪನವರ ಪುಸ್ತಕಗಳನ್ನು ಓದಲು ಶುರು ಮಾಡಿದ್ದು. ಅಲ್ಲಿದ್ದ ಶೀಘ್ರಲಿಪಿಗಾರರಾದ ಜಗದೀಶ್ ಭೈರಪ್ಪನವರ ಬಗ್ಗೆ ಬಹಳ ಹೇಳುತ್ತಿದ್ದರು (ಇವರ ಹೆಸರನ್ನು ಭೈರಪ್ಪನವರು ತಮ್ಮ ಭಿತ್ತಿ ಪುಸ್ತಕದಲ್ಲಿ
ನೆನಪಿಸಿಕೊಂಡಿದ್ದಾರೆ) ಮತ್ತು ಭೈರಪ್ಪನವರ ಅಭಿಮಾನಿ ಹಾಗು ಅವರ ಬೋಧನೆಯನ್ನು ಕೇಳಿದ್ದ ಮತ್ತು ಈಗ ಅದೇ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿರುವ ನನ್ನ ಗುರುಸಮಾನರಾದ ಡಾ. ಗೌರಮ್ಮ ಭೈರಪ್ಪನವರ ಬಗ್ಗೆ ಹೇಳುತ್ತಿದ್ದಲ್ಲದೆ ಅವರ ಕಾದಂಬರಿಗಳ ಬಗ್ಗೆ ನನ್ನೊಡನೆ ಚರ್ಚಿಸುತ್ತಿದರು. ನಂತರ ನಾನು ನ್ಯಾಯಾಂಗ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ ನಂತರ ಎರಡು ವರ್ಷಗಳ ಹಿಂದೆ ಚಾಮರಾಜನಗರಕ್ಕೆ ವರ್ಗವಾದೆ. ದಿನಾ ಬೆಳಿಗ್ಗೆ ೭. ೩೦ ಗಂಟೆಯ ರೈಲಿನಲ್ಲಿ ಪ್ರಯಾಣ ಮತ್ತೆ ಸಂಜೆ ೬ ಗಂಟೆಗೆ ವಾಪಾಸ್ಸು ಮೈಸೂರಿಗೆ ರೈಲಿನಲ್ಲಿ ಬರುತ್ತಿದ್ದೆ. ಹೋಗುವಾಗ ಬರುವಾಗ ಒಂದೂವರೆ ತಾಸಿನ ಸಮಯದಲ್ಲಿ ಭೈರಪ್ಪನವರ ಕಾದಂಬರಿಗಳನ್ನು ಓದುತ್ತಿದ್ದೆ. ರೈಲು ನಂಜನಗೂಡು ಮಾರ್ಗವಾಗಿ ಹೋಗುವಾಗ ಪ್ರತಿದಿನ ಕಾತ್ಯಾಯನಿ ಶೋತ್ರಿಗಳು ಮತ್ತಿತರೇ ಪಾತ್ರಗಳು ಜ್ಞಾಪಕಕ್ಕೆ ಬರುತ್ತವೆ. ಇಲ್ಲಿ ಇನ್ನೊಂದು ಹೇಳಲೇ ಬೇಕಾದ ವಿಚಾರವಿದೆ. ನೀವು ಯಾರಾದರು ನಂಜನಗೂಡಿಗೆ ಅಥವಾ ಚಾಮರಾಜನಗರಕ್ಕೆ ಮೇಲೆ ತಿಳಿಸಿದ ರೈಲಿನಲ್ಲಿ ಪ್ರಯಾಣ ಮಾಡುವ ಸಂಧರ್ಭ ಬಂದರೆ ಐದನೇ ಬೋಗಿಗೆ ಬಂದರೆ ಸೀಟ್ ನಂಬರ್ ೪೦ ರಿಂದ ೬೮ ರ ವರೆಗೆ ಭೈರಪ್ಪನವರ ಕಾದಂಬರಿಗಳ ಬಗ್ಗೆ ಮತ್ತು ಪಾತ್ರಗಳ ಬಗ್ಗೆ ಪ್ರತಿ ನಿತ್ಯ ಚರ್ಚೆ ನಡೆಯುತ್ತಲೇ ಇರುವುದನ್ನು ನೋಡಬಹುದು ! ನೀವು ಪಾಲ್ಗೊಳ್ಳಬಹುದು, ಇದರಲ್ಲಿ ಇರುವವರೆಲ್ಲ ವೃತ್ತಿಯಲ್ಲಿ ವಿವಿಧ ಇಲ್ಲಖೆಗಳವರು. ಭೈರಪ್ಪನವರ ಪುಸ್ತಕಗಳು ಇಲ್ಲಿ ಸರ್ಕ್ಯುಲೇಟ್ ಆಗುತ್ತಿರುತ್ತದೆ. ಹೀಗೆ ನಾವೆಲ್ಲಾ ಭೈರಪ್ಪನವರ ಪುಸ್ತಕಗಳನ್ನು ಓದಿ ಚರ್ಚಿಸುತ್ತಿರುತ್ತೇವೆ. ರೈಲು ನಂಜನಗೂಡಿನ ಸೇತುವೆ ದಾಟಿ ಗುಂಡ್ಲು ಹೊಳೆಯನ್ನು ದಾಟಿ ಹೋಗುವುದರೊಳಗೆ ಕಾತ್ಯಾಯಿನಿ ದಿನನಿತ್ಯ ಇದೇ ರೈಲಿನಲ್ಲಿ ಚಲಿಸಿರಬಹುದು ಎಂಬ ಭಾವ ಬಹುತೇಕರನ್ನು ಕಾಡಿದೆ. ಕೆಲವೊಮ್ಮೆ ಕಪಿಲಾ ನದಿಯಲ್ಲಿ ನೀರು ತುಂಬಿ ಹರಿಯುವಾಗ ಶೋತ್ರಿಗಳ ಮಗ ಹೀಗೆ ನದಿ ನೀರು ತುಂಬಿ ಹರಿಯುವಾಗ ಮೃತ ಪಟ್ಟಿರ ಬಹುದೇ ಎಂಬ ಆಲೋಚನೆ ಬರುತ್ತದೆ. ಇದು ನನ್ನೊಬ್ಬನ ಕಲ್ಪನೆಯಲ್ಲ. ನನ್ನೊಡನೆ ಈ ವಿಚಾರಗಳ ಬಗ್ಗೆ ಬಹುತೇಕರು ಚರ್ಚಿಸಿದ್ದಾರೆ. ಇವರು ಯಾರೂ ಫೇಸ್ ಬುಕ್ ನಲ್ಲಿ ಇಲ್ಲ.. ಸ್ಮಾರ್ಟ್ ಫೋನ್ ಇವರೆಲ್ಲರ ಬಳಿ ಇಲ್ಲ ! ಆದರೆ ಭೈರಪ್ಪನವರ ಬಗ್ಗೆ ಈ ಫೇಸ್ಬುಕ್ ಗ್ರೂಪ್ ನಲ್ಲಿ ಆಗುವ ಚರ್ಚೆಗಳಿಗಿಂತಲೂ ವಿಭಿನ್ನವಾದ ಚರ್ಚೆಗಳು ಆಗುತ್ತವೆ. ಇನ್ನು ಅನೇಕ ವಿಚಾರಗಳು ಇವೆ. ವಂಶವೃಕ್ಷಕ್ಕೆ ಐವತ್ತು ವರ್ಷಗಳು ತುಂಬಿದ ಈ ಸಂದರ್ಭದಲ್ಲಿ ವಂಶವೃಕ್ಷದ ಬಗ್ಗೆ ಒಂದುದಿನ ಮುಂದಿನವಾರದಲ್ಲಿ ನಾವೆಲ್ಲಾ ರೈಲಿನಲ್ಲಿ ಚರ್ಚೆ ಮಾಡಿ, ನಡೆದ ಸಂಗತಿಯನ್ನು ಇಲ್ಲಿ ಹಾಕುತ್ತೇನೆ. ಆ ಸಮದಯದ ಫೋಟೋ ತೆಗೆದು ಈ ಗ್ರೂಪಿನಲ್ಲಿ ಹಾಕುತ್ತೇನೆ.

 ಡಾ|| ಶಿವಕುಮಾರ್

ಹಕ್ಕಿ ಹಾರುತಿದೆ ನೋಡಿದಿರಾ? - ದ ರಾ ಬೇಂದ್ರೆ,

ದ ರಾ ಬೇಂದ್ರೆ, 
ಹಕ್ಕಿ ಹಾರುತಿದೆ ನೋಡಿದಿರಾ?
ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತುಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ?

ಕರಿನರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ -ಗರಿಯುಂಟು
ಕೆನ್ನನ ಹೊನ್ನನ ಬಣ್ಣ-ಬಣ್ಣಗಳ
ರೆಕ್ಕೆಗಳೆರಡೂ ಪಕ್ಕದೊಲುಂಟು
ಹಕ್ಕಿ ಹಾರುತಿದೆ ನೋಡಿದಿರಾ?

ನೀಲಮೇಘಮಂಡಲ-ಸಮ ಬಣ್ಣ
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ
ಚಿಕ್ಕಿಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ?

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ?

ಯುಗ-ಯುಗಗಳ ಹಣೆ ಬರಹವ ಒರಸಿ
ಮನ್ವಂತರಗಳ ಭಾಗ್ಯವ ತರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ?

ಮುಟ್ಟಿದೆ ದಿಗ್ಮಂಡಲ ಅಂಚ
ಆಚಿಗೆ ಚಾಚಿದೆ ತನ್ನಯ ಕುಂಚ
ಬ್ರಹ್ಮಾಂಡಲಗಳ ಒಡೆಯಲು ಎಂದೊ
ಬಲ್ಲರು ಯಾರಾ ಹಾಕಿದ ಹೊಂಚ!
ಹಕ್ಕಿ ಹಾರುತಿದೆ ನೋಡಿದಿರಾ?


ನಾದಲೀಲೆ - ಕುರುಡು ಕಾಂಚಾಣ

ದ.ರಾ. ಬೇಂದ್ರೆ (ಅಂಬಿಕಾತನಯದತ್ತ) | ನಾದಲೀಲೆ
ಕುರುಡು ಕಾಂಚಾಣ ಕುಣಿಯುತಲಿತ್ತು
ಕಾಲಿಗೆ ಬಿದ್ದವರ ತುಳಿಯುತಲಿತ್ತೊs
ಕುರುಡು ಕಾಂಚಾಣ || ಪಲ್ಲವಿ ||

ಬಾಣಂತಿಯೆಂಬಾ ಸಾ-
ಬಾಣದ ಬಿಳುಪಿನಾ
ಕಾಣದ ಕಿರುಗೆಜ್ಜೆ ಕಾಲಾಗೆ ಇತ್ತೋ
ಸಣ್ಣ ಕಂದಮ್ಮಗಳ
ಕಣ್ಣೀನ ಕವಡಿಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;

ಬಡವರ ಒಲವಿನ
ಬಡಬಾsನಲದಲ್ಲಿ
ಸುಡು ಸುಡು ಪಂಜವು ಕೈಯೊಳಗಿತ್ತೊ;
ಕಂಬನಿ ಕುಡಿಯುವ
ಹುಂಬ ಬಾಯಿಲೆ ಮೈ-
ದುಂಬಿದಂತಧೊ ಉಧೊ ಎನ್ನುತ್ತಲಿತ್ತೊ;

ಕೂಲಿ ಕಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯೊಳಗಿತ್ತೊ;
ಗುಡಿಯೊಳಗೆ ಗಣಣ ಮಾ-
ಹಡಿಯೊಳಗೆ ತನನ ಅಂ-
ಗಡಿಯೊಳಗ ಝಣಣ ನುಡಿಗೊಡುತ್ತಿತ್ತೋ;

ಹ್ಯಾಂಗಾರೆ ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತೋ, ಹೆಗಲಿ ಎತ್ತೋ.

(ಅಂಬಿಕಾತನಯದತ್ತ) | ಭಾವಗೀತೆ | ಶ್ರಾವಣ
ಮುಗಿಲ ಮಾರಿಗೆ ರಾಗರತಿಯಾ....
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ನೆಲದ ಅಂಚಿಗೆ ಮಂಜಿನ ಮುಸುಕೂ
ಹ್ಯಾಂಗೋ ಬಿದ್ದಿತ್ತಾ, ಗಾಳಿಗೆ ಮೇಲಕ್ಕೆದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ
ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ

ಬಿದಿಗಿ ಚಂದ್ರನ ಚೊಗಚಿ ನಗಿವು
ಮೆಲ್ಲಗ ಓಡಿತ್ತ, ಮ್ಯಾಲಕ ಬೆಳ್ಳಿನ ಕೂಡಿತ್ತ
ಬಿದಿಗಿ ಚಂದ್ರನ ಚೊಗಚಿ ನಗಿವು
ಮೆಲ್ಲಗ ಓಡಿತ್ತ, ಮ್ಯಾಲಕ ಬೆಳ್ಳಿನ ಕೂಡಿತ್ತ
ಇರುಳ ಹರಳಿನ ಅರಳ ಮಲ್ಲಿಗೆ
ಜಾವಿಗೆ ಹಾಂಗಿತ್ತ, ಸೂಸ್ಯಾವ ಚಿಕ್ಕೆ ಹತ್ತಿತ್ತ

ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ

ಬೊಗಸೆಗಣ್ಣಿನ ಬಯಕೆ ಹೆಣ್ಣು
ನೀರಿಗೆ ಹೋಗಿತ್ತ.. ತಿರುಗಿ ಮನೆಗೆ ಸಾಗಿತ್ತ..
ಬೊಗಸೆಗಣ್ಣಿನ ಬಯಕೆ ಹೆಣ್ಣು
ನೀರಿಗೆ ಹೋಗಿತ್ತ.. ತಿರುಗಿ ಮನೆಗೆ ಸಾಗಿತ್ತ..
ಕಾಮಿ ಬೆಚ್ಚಿಹಾಂಗ ಭಾವಿಹಾದಿ
ಕಾಲಾಗ ಸುಳಿದಿತ್ತ.. ಎರಗಿ ಹಿಂದಕ್ಕುಳಿದಿತ್ತ..

ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ

ಮಳ್ಳ ಗಾಳಿ ಸುಳಿದಳ್ಳ ಕೈಲೆ
ಸೆರಗನು ಹಿಡಿದಿತ್ತ.. ಮತ್ತ ಮತ್ತ ಬೆರಗಿಲೆ ಬಿಡತಿತ್ತ..
ಮಳ್ಳ ಗಾಳಿ ಸುಳಿದಳ್ಳ ಕೈಲೆ
ಸೆರಗನು ಹಿಡಿದಿತ್ತ.. ಮತ್ತ ಮತ್ತ ಬೆರಗಿಲೆ ಬಿಡತಿತ್ತ..
ಒಂದು ಮನದ ಗಿಳಿ ಹಿಂದ ನೆಳ್ಳಿಗೆ
ಹುಣ್ಣಿವೆ ಬರಲಿತ್ತ.. ತನ್ನಾ ಮೈಮನ ಮರೆತಿತ್ತ..

ಮುಗಿಲ ಮಾರಿಗೆ ರಾಗರತಿಯಾ....
ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ
ನೆಲದ ಅಂಚಿಗೆ ಮಂಜಿನ ಮುಸುಕೂ
ಹ್ಯಾಂಗೋ ಬಿದ್ದಿತ್ತಾ, ಗಾಳಿಗೆ ಮೇಲಕ್ಕೆದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ
ಮುಗಿಲ ಮಾರಿಗೆ ರಾಗರತಿಯಾ....ನಾನು ಬಡವಿ, ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು ||ಪ ||

ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣು ಕಟ್ಟುವಂತ ಮೂರ್ತಿ
ಕಿವಿಗೆ ಮೆಚ್ಚಿನೋಲೆ

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುತ್ತೆ
ಅದೇ ಗಳಿಗೆ ಮೈಯ ತುಂಬ

ನನಗೆ ನವಿರು ಬತ್ತೆ

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂಧಿ
ಕೆನ್ನೆ ತುಂಬ ಮುತ್ತು
ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವಫಲವ
ತುಟಿಗೆ ಹಾಲು ಜೇನು
ದ ರಾ ಬೇಂದ್ರೆ,  

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......