Saturday, April 30, 2011

ಜಿ. ಪಿ. ರಾಜರತ್ನಂ

'ಜಿ. ಪಿ. ರಾಜರತ್ನಂ' ರವರು ಹೆಸರಾಂತ ಗುಂಡ್ಲು ಪಂಡಿತ ವಂಶ ದಲ್ಲಿ ಡಿಸೆಂಬರ್ ೦೫, ೧೯೦೪ರಂದು ಜನಿಸಿದರು. ತಾಯಿಯ ಪ್ರೀತಿ ಇಲ್ಲದೆ ಬೆಳೆದ ರಾಜರತ್ನಂಗೆ, ತಂದೆಯೇ ಎಲ್ಲವೂ ಆಗಿದ್ದರು. ಅಜ್ಜಿಯ ಅಕ್ಕರೆಯಲ್ಲೂ ರಾಜರತ್ನಂ ಬೆಳೆದರು. ತಂದೆ ಬಡ ಮೇಸ್ಟ್ರು. ಸ್ವಾತಂತ್ರ್ಯ ಪೂರ್ವದಲ್ಲೇ (೧೯೩೧ರಲ್ಲಿ) ರಾಜರತ್ನಂ ಎಂ. ಎ (ಕನ್ನಡ) ದಲ್ಲಿ ಮುಗಿಸಿ, ಶಿಶು ವಿಹಾರ ಹಾಗೂ ತಂದೆಯ ಶಾಲೆಯಲ್ಲಿ ಆರಂಭಿಕ ಮೇಸ್ಟ್ರು ಆದರು. ಇದರ ಅನುಭವದ ಫಲವೇ ಮಕ್ಕಳ ಕುರಿತು ಬರೆದ `ತುತ್ತೂರಿ' ಶಿಶು ಗೀತೆ ಸಂಕಲನ'. ಕ್ರಮೇಣ ಆ ಕೆಲಸ ತೃಪ್ತವಾಗದೆ ಹೈದರಾಬಾದಿಗೂ ಕೆಲಸ ಹುಡುಕಿ ಹೋಗಿದ್ದುಂಟು. ಅಲ್ಲಿಂದ ನಿರಾಶರಾಗಿ ಬೆಂಗಳೂರಿಗೆ ಬಂದು ಜನಗಣತಿ ಕಛೇರಿಯಲ್ಲಿ ಕೆಲಸಕ್ಕೆ ಪ್ರಯತ್ನಿಸಿದರು. ಆದರೆ ಅಲ್ಲಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ರಾಜರತ್ನಂರವರಿಗೆ 'ಸಾಹಿತ್ಯ ಸೇವೆ' ಮುಂದುವರೆಸಲು ಉಪದೇಶಿಸಿದರು. ಅದರ ಫಲವೇ ಮುಂದೆ 'ರಾಜರತ್ನಂ' ಅವರಿಂದ 'ಉತ್ತಮ ಸಾಹಿತ್ಯ ನಿರ್ಮಾಣ'ಕ್ಕೆ ದಾರಿಯಾಯಿತು. ಬೌದ್ಧ ಸಾಹಿತ್ಯ ಇಂಥ ಉಪಯುಕ್ತ ಸಾಹಿತ್ಯದಲ್ಲೊಂದು 'ಮಿಂಚು'.

ರಾಜರತ್ನಂ ಅವರಿಗೆ ವೈವಾಹಿಕ ಜೀವನದಲ್ಲಿ ಸಾಕಷ್ಟು ನೋವುಂಟಾಯಿತು. ಪತ್ನಿ ಲಲಿತಮ್ಮ ಕಾಯಿಲೆ ಬಿದ್ದವರು ಉತ್ತಮವಾಗಲೇ ಇಲ್ಲ. ವಿಧಿವಶರಾದರು. ಅವರ ನೆನಪು ಹಸಿರಾಗಿದ್ದಾಗಲೇ ಸೀತಮ್ಮ ಅವರ 'ಬಾಳನಂದಾದೀಪ'ವಾಗಿ ಬಂದರು. ಬದುಕು ಸ್ಥಿರವಾಯಿತು. ಕಷ್ಟ ಕಾರ್ಪಣ್ಯಗಳ ನಡುವೆ ೧೯೩೮ರಲ್ಲಿ 'ಕನ್ನಡ ಪಂಡಿತ ಹುದ್ದೆ', ರಾಜರತ್ನಂ ಅವರನ್ನು ಹುಡುಕಿ ಬಂತು. ಮೈಸೂರು, ಬೆಂಗಳೂರು, ಶಿವಮೊಗ್ಗ, ತುಮಕೂರುಗಳಲ್ಲಿ ಅಧ್ಯಾಪಕರಾಗಿ, ಮೆಚ್ಚಿನ ಮೇಸ್ಟ್ರು ಆಗಿ ಖ್ಯಾತರಾದರು

"ರತ್ನನ ಪದಗಳು" ರಾಜರತ್ನಂ ಅವರ ವಿಶಿಷ್ಟ ಕೊಡುಗೆ. ಇದರಲ್ಲಿ ಅವರ ಜೀವನ ದರ್ಶನವಿದೆ. 'ಕುಡುಕ'ನೆಂಬ ಹೀಯಾಳಿಕೆಗೆ ಗುರಿಯಾದ ಬಡವನೊಬ್ಬನ ಕಾಣ್ಕೆ, ನೋವು, ನಲಿವು, ಒಲವು, ಗೆಲವು, ಸೋಲು ಎಲ್ಲಾ ಈ ಕಾವ್ಯದಲ್ಲಿ ಮೈದುಂಬಿವೆ. 'ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ' ಎಂಬ ಶಿಶು ಗೀತೆಯಿಂದ, ಎಂಡಕುಡುಕ ರತ್ನನ ಪದಗಳನ್ನಲ್ಲದೆ ನೂರಾರು ಕೃತಿಗಳನ್ನು ರಚಿಸಿ ಕನ್ನಡ ಕಾಯ್ದ, ಬೋಧಿಸಿದ `ಮೇಷ್ಟ್ರು' ಆಗಿ ಹೆಸರಾದವರು ಜಿ.ಪಿ.ರಾಜರತ್ನಂ ಅವರು. ಟಿ. ಪಿ.ಕೈಲಾಸಂ ಅವರ ಸಾಹಿತ್ಯ ಪ್ರಭಾವ, ಭಾಷೆ ಬಳಕೆ ರಾಜರತ್ನಂ ಅವರ ಮೇಲಾಗಿರುವುದು ಕಾಕತಾಳೀಯ ಇರಬಹುದು.

Friday, April 29, 2011

ಅನಂತ ಪ್ರಣಯ - ದ ರಾ ಬೇಂದ್ರ

ಉತ್ತರದ್ರುವದಿಂ ದಕ್ಷಿಣದ್ರುವಕೂ
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಜಿಸಿ ನಗೆಯಲಿ ಮೀಸುತಿದೆ.
ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ.
ಭುವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸೆಯಿಸಿತು
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ದ್ಃಅರೆಯ ಮಸೆಯಿಸಿತು.
ಅಕ್ಷಿನಮೀಲನ ಮಾಡದೆ ನಕ್ಷ-
ತ್ರದ ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬಾಧರದಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ.

Thursday, April 28, 2011

ಅನಂತ ಪೈ,

ಕಾರ್ಕಳದ ಸಾಲ್ಮರದ ಬಳಿಯ ಮನೆಯಲ್ಲಿ ಕೆಲಕಾಲ ವಾಸವಾಗಿದ್ದ ಹಾಗೂ ಕಾರ್ಕಳಕ್ಕೆ ಬಂದಾಗ ವಾಸ ಮಾಡುತ್ತಿದ್ದ ಅಂಕಲ್ ಪೈ ಮನೆ.  (ಚಿತ್ರ ಕೃಪೆ ಪ್ರಜಾವಾಣಿ )

ಮಕ್ಕಳ ಪ್ರೀತಿಯ ‘ಅಂಕಲ್ ಪೈ
ಭಾರತೀಯ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಮಕ್ಕಳಿಗಾಗಿ ಚಿತ್ರಕಥೆಗಳನ್ನ ರೂಪಿಸಿದ್ದ ಅಪರೂಪದ ಮೆದುಳು ಅನಂತ ಪೈ ೧೯೬೦ರ ದಶಕದಲ್ಲಿ ಮಕ್ಕಳಿಗಾಗಿನ ಸಚಿತ್ರ ಕಥಾಗುಚ್ಚಗಳೆಂದರೆ ಕೇವಲ ಪಾಶ್ಚಾತ್ಯ ಮೂಲದ ಕಾಮಿಕ್ಸ್ಗಳು ಹಾಗು ಅವುಗಳ ಎರವಲು ಸರಕು ಮಾತ್ರವೆ ಎನ್ನುವಂತಾಗಿದ್ದ ಭೀಕರ ದಿನಗಳಲ್ಲಿ.ಮುಂದಿನ ತಲೆಮಾರುಗಳ ಓದುವ ದಿಕ್ಕನ್ನೆ ನಿರ್ದೇಶಿಸಿ-ಉತ್ತಮ ಓದನ್ನ ರೂಪಿಸಿಕೊಟ್ಟ "ಅಮರ ಚಿತ್ರಕಥೆಗಳು" ಹಾಗು "ಪಂಚತಂತ್ರದ ಕಥೆಗಳು" ಅನಂತ ಪೈಗಳಿಂದ ಭಾರತೀಯ ಚಿಣ್ಣರಿಗೆ ಸಂದಿದ್ದ ಒಂದು ಅದ್ಭುತ ಕೊಡುಗೆ.ಇವರು ಮೂಲತಃ ನಮ್ಮ ಕರಾವಳಿಯ ಕಾರ್ಕಳದವರು ಎನ್ನೋದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.ಅವರನ್ನ ನೆನೆಯದಿದ್ದರೆ ಮಾತ್ರ ನಾವೆಲ್ಲಾ ನಿಸ್ಸಂಶಯವಾಗಿ ಕೃತಘ್ನರ ಸಾಲಿಗೆ ಸೇರುತ್ತೀವಿ.  (ಕೃಪೆ - ಮರೆತ ಮಾತುಗಳು)

ಅಂತರಂಗದ ಮೃದಂಗ

ಅಂತರಂಗದ ಮೃದಂಗ ಅಂತು ತೋಮ್-ತನಾನ
ಚಿತ್ತ ತಾಳ ಬಾರಿಸುತಲಿತ್ತು ಝಣ್-ಝಣಣಣಾಣ
ನೆನಹು ತಂತಿ ಮೀಟುತಿತ್ತು ತಮ್-ತನನತಾನ
ಹಲವು ಜನುಮದಿಂದ ಬಂದ ಯಾವುದೋನೋ ಧ್ಯಾನ
ಏಕ ನಾದದಂದನೊಂದು ತಾನದ ವಿತಾನ
ತನಗೆ ತಾನೇ ಸೋಲುತಿಹುದು ನೂಲುತಿಹುದು ಗಾನ
ಕಲ್ಪದಾದಿಯಲ್ಲೇ ನನ್ನ ನಿನ್ನ ವಿರಹವಾಗಿ
ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೇ ಹೋಗಿ
ಮರೆವೆಗೊಂಡು ಬಿದ್ದೆ ನಾನು ನೆಲದ ಮಣ್ಣು ತಾಗಿ
ಕತ್ತಲಲ್ಲೇ ಬೆಳಕು ಮಿಂಚಿ ಪಡೆದಿತೇಳು ಬಣ್ಣ
ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿತಣ್ಣ
ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ

ಆದಿಪರ್ವ: ೦೧. ಪೀಠಿಕಾ ಸಂಧಿ

ಶ್ರೀವನಿತೆಯರಸನೆ ವಿಮಲ ರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನನಿಕರ ದಾತಾರ
ರಾವಾಣಾಸುರ ಮಥನ ಶ್ರವಣ ಸು
ಧಾ ವಿನೂತನ ಕಥನ ಕಾರಣ
ಕಾವುದಾನತ ಜನವ ಗದುಗಿನ ವೀರನಾರಯಣ ೧

ಶರಣಸಂಗವ್ಯಸನ ಭುಜಗಾ
ಭರಣನಮರ ಕಿರೀಟ ಮಂಡಿತ
ಚರಣ ಚಾರುಚರಿತ್ರ ನಿರುಪಮ ಭಾಳಶಿಖಿನೇತ್ರ
ಕರಣನಿರ್ಮಲ ಭಜಕರಘ ಸಂ
ಹರಣ ದಂತಿ ಚಮೂರು ಚರ್ಮಾಂ
ಬರನೆ ಸಲಹುಗೆ ಭಕುತ ಜನರನು ಪಾರ್ವತೀರಮಣ ೨

ವರಮಣಿಗಳಿಂದೆಸೆವ ಮೌಳಿಯ
ಸರಸಿಜಾರಿಯ ಕಿರಣದೋಳಿಯ
ವಿರಚಿಸಿದ ಸಿಂಧೂರಭಾಳದಿ ಕುಣಿವ ಕುಂತಳದ
ಕರಿ ನಿಭಾಕೃತಿಯೆನಿಪ ವದನದ
ಕರದ ಪಾಶದ ಮೋದಕದ ವಿ
ಸ್ತರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ ೩

ಗಜಮುಖನೆ ಮೆರೆವೇಕದಂತನೆ
ನಿಜಗುಣಾನ್ವಿತ ಪರಶುಧಾರನೆ
ರಜತಗಿರಿಗೊಡೆಯನ ಕುಮಾರನೆ ವಿದ್ಯೆವಾರಿಧಿಯೆ
ಅಜನು ಹರಿ ರುದ್ರಾದಿಗಳು ನೆರೆ
ಭಜಿಸುತಿಹರನವರತ ನಿನ್ನನು
ತ್ರಿಜಗವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ ೪

ವಾರಿಜಾಸನೆ ಸಕಲಶಾಸ್ತ್ರ ವಿ
ಚಾರದುದ್ಭವೆ ವಚನರಚನೋ
ದ್ಧಾರೆ ಶ್ರುತಿ ಪೌರಾಣದಾಗಮ ಸಿದ್ದಿದಾಯಕಿಯೆ
ಶೌರಿ ಸುರಪತಿ ಸಕಲ ಮುನಿಜನ
ಸೂರಿಗಳಿಗನುಪಮದ ಯುಕುತಿಯೆ
ಶಾರದೆಯೆ ನರ್ತಿಸುಗೆ ನಲಿನೊಲಿದೆನ್ನ ಜಿಹ್ವೆಯಲಿ ೫

ಆದಿ ನಾರಾಯಣಿ ಪರಾಯಣಿ
ನಾದಮಯೆ ಗಜಲಕ್ಷ್ಮಿ ಸತ್ವಗು
ಣಾಧಿದೇವತೆ ಅಮರ ವಂದಿತ ಪಾದಪಂಕರುಹೆ
ವೇದಮಾತೆಯೆ ವಿಶ್ವತೋಮುಖೆ
ಯೈದು ಭೂತಾಧಾರಿಯೆನಿಪೀ
ದ್ವಾದಶಾತ್ಮ ಜ್ಯೋತಿರೂಪಿಯೆ ನಾದೆ ಶಾರದೆಯೆ ೬

ವೀರನಾರಾಯಣನೆ ಕವಿ ಲಿಪಿ
ಕಾರ ಕುವರವ್ಯಾಸ ಕೇಳುವ
ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು
ಚಾರುಕವಿತೆಯ ಬಳಕೆಯಲ್ಲ ವಿ
ಚಾರಿಸುವೊಡಳವಲ್ಲ ಚಿತ್ತವ
ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ ೭

ಶ್ರೀಮದಮರಾಧೀಶ ನತಪದ
ತಾಮರಸ ಘನವಿಪುಳ ನಿರ್ಮಲ
ರಾಮನುಪಮ ಮಹಿಮ ಸನ್ಮುನಿ ವಿನುತ ಜಗಭರಿತ
ಶ್ರೀಮದೂರ್ಜಿತ ಧಾಮ ಸುದಯಾ
ನಾಮನಾಹವ ಭೀಮ ರಘುಕುಲ
ರಾಮ ರಕ್ಷಿಸುವೂಲಿದು ಗದುಗಿನ ವೀರನಾರಯಣ ೮

ಶರಧಿಸುತೆ ಸನಕಾದಿ ವಂದಿತೆ
ಸುರನರೋರಗ ಮಾತೆ ಸುಜನರ
ಪೂರೆವ ದಾತೆ ಸುರಾಗ್ರಗಣ್ಯಸುಮೌನಿ ವರಸ್ತುತ್ಯೆ
ಪರಮ ಕರುಣಾ ಸಿಂಧು ಪಾವನ
ಚರಿತೆ ಪದ್ಮಜ ಮುಖ್ಯ ಸಕಲಾ
ಮರ ಸುಪೂಜಿತೆ ಲಕ್ಷ್ಮಿ ಕೊಡುಗೆಮಗಧಿಕ ಸಂಪದವ ೯

ಗಜಮುಖನ ವರಮಾತೆ ಗೌರಿಯೆ
ತ್ರಿಜಗದರ್ಚಿತ ಚಾರು ಚರಣಾಂ
ಭುಜೆಯೆ ಪಾವನಮೂರ್ತಿ ಪದ್ಮಜಮುಖ್ಯ ಸುರಪೂಜ್ಯೆ
ಭಜಕರಘ ಸಂಹರಣೆ ಸುಜನ
ವ್ರಜ ಸುಸೇವಿತೆ ಮಹಿಷ ಮರ್ದಿನಿ
ಭುಜಗ ಭೂಷಣನರಸಿ ಕೊಡು ಕಾರುಣ್ಯದಲಿ ಮತಿಯ ೧೦

ದುರಿತಕುಲಗಿರಿ ವಜ್ರದಂಡನು
ಧರೆಯ ಜಂಗಮ ಮೂರ್ತಿ ಕವಿ ವಾ
ರಿರುಹ ದಿನಮಣಿ ನಿಖಿಲ ಯತಿಪತಿ ದಿವಿಜವಂದಿತನು
ತರಳನನು ತನ್ನವನೆನುತ ಪತಿ
ಕರಿಸಿ ಮಗನೆಂದೊಲಿದು ಕರುಣದಿ
ವರವನಿತ್ತನು ದೇವ ವೇದವ್ಯಾಸ ಗುರುರಾಯ ೧೧

ವಂದಿತಾಮಳ ಚರಿತನಮರಾ
ನಂದ ಯದುಕುಲ ಚಕ್ರವರ್ತಿಯ
ಕಂದ ನತಸಂಸಾರ ಕಾನನ ಘನ ದವಾನಳನು
ನಂದನಂದನ ಸನ್ನಿಭನು ಸಾ
ನಂದದಿಂದಲೆ ನಮ್ಮುವನು ಕೃಪೆ
ಯಿಂದ ಸಲಹುಗೆ ದೇವ ಜಗದಾರಾಧ್ಯ ಗುರುರಾಯ ೧೨

ತಿಳಿಯ ಹೇಳುವೆ ಕೃಷ್ಣಕಥೆಯನು
ಇಳೆಯ ಜಾಣರು ಮೆಚ್ಚುವಂತಿರೆ
ನೆಲೆಗೆ ಪಂಚಮ ಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ
ಹಲವು ಜನ್ಮದ ಪಾಪ ರಾಶಿಯ
ತೊಳೆವ ಜಲವಿದು ಶ್ರೀಮದಾಗಮ
ಕುಲಕೆ ನಾಯಕ ಭಾರತಾಕೃತಿ ಪಂಚಮ ಶ್ರುತಿಯ ೧೩

ಪದದಪ್ರೌಢಿಯ ನವರಸಂಗಳ
ವುದಿತವೆನುವಭಿಧಾನ ಭಾವವ
ಬೆದಕಲಾಗದು ಬಲ್ಲ ಪ್ರೌಢರುಮಾ ಕಥಾಂತರಕೆ
ಇದ ವಿಚಾರಿಸೆ ಬರಿಯ ತೊಳಸಿಯ
ವುದಕದಂತಿರೆಯಲ್ಲಿ ನೋಳ್ಪುದು
ಪದುಮನಾಭನ ಮಹಿಮೆ ಧರ್ಮವಿಚಾರ ಮಾತ್ರವನು ೧೪

ಹಲಗೆ ಬಳಪವ ಪಿಡಿಯದೊಂದ
ಗ್ಗಳಿಕೆ ಪದವಿಟ್ಟಳುಪದೊಂದ
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ
ಬಳಸಿ ಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ ೧೫

ಕೃತಿಯನವಧರಿಸುವುದು ಸುಕವಿಯ
ಮತಿಗೆ ಮಂಗಳವೀವುದಧಿಕರು
ಮಥಿಸುವುದು ತಿದ್ದುವುದು ಮೆರೆವುದು ಲೇಸ ಸಂಚಿಪುದು
ನುತಗುಣರು ಭಾವುಕರು ವರಪಂ
ಡಿತರು ಸುಜನರು ಸೂಕ್ತಿಕಾರರು
ಮತಿಯನೀವುದು ವೀರನಾರಯಣನ ಕಿಂಕರಗೆ ೧೬

ತಿಣಿಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ ತಿಂ
ತಿಣಿಯ ರಘುವರ ಚರಿತೆಯಲಿ ಕಾಲಿಡಿಲು ತೆರಪಿಲ್ಲ
ಬಣಗು ಕವಿಗಳ ಲೆಕ್ಕಿಪನೆ ಸಾ
ಕೆಣಿಸದಿರು ಶುಕರೂಪನಲ್ಲವೆ
ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ ೧೭

ಹರಿಯ ಬಸುರೊಳಗಖಿಲ ಲೋಕದ
ವಿರಡವಡಗಿಹವೋಲು ಭಾರತ
ಶರಧಿಯೊಳಗಡಗಿಹವನೇಕ ಪುರಾಣ ಶಾಸ್ತ್ರಗಳು
ಪರಮ ಭಕ್ತಿಯಲೀ ಕೃತಿಯನವ
ಧರಿಸಿ ಕೇಳ್ದಾನರರ ದುರಿತಾಂ
ಕುರದ ಬೇರಿನ ಬೇಗೆಯೆಂದರುಹಿದನು ಮುನಿನಾಥ ೧೮

ಅರಸುಗಳಿಗಿದು ವೀರ ದ್ವಿಜರಿಗೆ
ಪರಮ ವೇದದ ಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ ೧೯

ವೇದ ಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನ ಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗ ಫಲ
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನ ಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ ೨೦

ಹೇಮ ಖುರ ಶೃಂಗಾಭರಣದಲಿ
ಕಾಮಧೇನು ಸಹಸ್ರ ಕಪಿಲೆಯ
ಸೋಮ ಸೂರ್ಯ ಗ್ರಹಣದಲಿ ಸುರನದಿಯ ತೀರದಲಿ
ಶ್ರೀಮುಕುಂದಾರ್ಪಣವೆನಿಸಿ ಶತ
ಭೂಮಿದೇವರಿಗಿತ್ತ ಫಲವಹು
ದೀ ಮಹಾಭಾರತದೊಳೊಂದಕ್ಷರವ ಕೇಳ್ದರಿಗೆ ೨೧

ಚೋರ ನಿಂದಿಸಿ ಶಶಿಯ ಬೈದಡೆ
ಕ್ಷೀರವನು ಕ್ಷಯರೋಗಿ ಹಳಿದರೆ
ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು
ಭಾರತದ ಕಥನ ಪ್ರಸಂಗವ
ಕ್ರೂರ ಕರ್ಮಿಗಳೆತ್ತ ಬಲ್ಲರು
ಘೋರತರ ರೌರವವ ಕೆಡಿಸುಗು ಕೇಳ್ದ ಸಜ್ಜನರ ೨೨

ವೇದಪುರುಷನ ಸುತನ ಸುತನ ಸ
ಹೋದರನ ಮೊಮ್ಮಗನ (ಪಾ: ಹೆಮ್ಮಗನ) ಮಗನ ತ
ಳೋದರಿಯ ಮಾತುಳನ ರೂಪ (ಮಾವ)ನನತುಳ ಭುಜಬಲದಿ
ಕಾದಿ ಗೆಲಿದವನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ ೨೩

ಕೃಪೆ :  http://gaduginabharata.blogspot.in/


Contributors

Wednesday, April 27, 2011

ಬಸವಣ್ಣನ ವಚನಗಳ ಭಾವಾರ್ಥ

ನೆಲನೊಂದೇ ಹೊಲಗೇರಿ ಶಿವಾಲಯಕ್ಕೆ
ಜಲವೊಂದೇ ಶೌಚಾ ಚಮನಕ್ಕೆ !
ಕುಲವೊಂದೇ ತನ್ನ ತಾನರಿದವಂಗೆ !
ಫಲವೊಂದೇ ಫಡದರ್ಶನ ಮುಕ್ತಿಗೆ
ನಬಿಲವೊಂದೇ ಕೂಡಲ ಸಂಗಮದೇವ ನಿಮ್ಮನರಿದವಂಗೆ

- ನಾವು ಆಚರಿಸುವ ಆಚರಣೆಗಳಿಂದ ಮಾತ್ರ ಉತ್ತಮ, ಅಧಮರೆನಿಸಿಕೊಳ್ಳುತ್ತೇವೆ ಜಾತಿಯಿಂದಲ್ಲ. ನೆಲ ಒಂದೇ ಅಲ್ಲಿ ಶಿವಾಲಯಕಟ್ಟಿದರೆ ಪುಣ್ಯಕ್ಷೇತ್ರ, ದುರಾಚಾರಿಗಳ ತಾಣವಾದರೆ ಅದು ಹೊಲಗೇರಿ. ನೀರು ಒಂದೇ ಅದು ಪೂಜೆಗೆ ಬಳಸಿದರೆ ತೀರ್ಥ, ಶೌಚಕ್ಕೆ ಬಳಸಿದರೆ ಕೊಳಕು ನೀರು. ಅಂತೆಯೇ ಕಾರ್ಯದಿಂದ ಮಾನವ ಕುಲವೊಂದೆ ಉತ್ತಮ. ಜ್ಞಾನದಿಂದ ಉತ್ತಮ, ಅಜ್ಞಾನದಿಂದ ಅಧಮ ಆಯಾಜಾತಿಗಳ ಗುರಿ ಒಂದೇ ಅದುವೇ ಮುಕ್ತಿ ಮೇಲು ಕೀಳೆಂದು ಜಾತಿಯನ್ನು ವಿಂಗಡಿಸುವದನ್ನು ಈ ವಚನದಲ್ಲಿ ಖಂಡಿಸಿದ್ದಾರೆ.
-------------------

ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿದ ಮೇಯಿತ್ತು!
ಕೊಂದಹರೆಂಬುದನರಿಯದೆ
ಬೆಂದೊಡಲ ಹೊರೆವುತ್ತಲಿದೆ?
ಅದಂದೆ ಹುಟ್ಟಿತ್ತು ಅದಂದೇ ಹೊಂದಿತ್ತು!!
ಕೊಂದವರುಳಿವರೆ ಕೂಡಲ ಸಂಗಮದೇವ

-ಬಲಿಕೊಡಲೆಂದು ತಂದ ಕುರಿಯು ತನಗೆ ಮುಂದೆ ಸಾವಿದೆ ಎಂದರಿಯದೆ ಬಾಗಿಲಿಗೆ ಕಟ್ಟಿದ ತೋರಣದ ಹಸಿರೆಲೆಗಳನ್ನು ತಿನ್ನುತ್ತಿರುವುದು. ತನ್ನೆದುರಲ್ಲಿ ತನ್ನ ಕೊರಳನ್ನು ಕತ್ತರಿಸಲು ಕತ್ತಿಮಸೆಯುತ್ತಿರುವರು ಎಂಬ ಅರಿವು ಅದಕ್ಕಿಲ್ಲ. ಈ ಮಾನವನಾದರೂ ಬಲಿ ಕುರಿಯಂತೆ, ಸಾವು ಈಗಲೋ ಆಗಲೋ ಬರಲು ಸಿದ್ಧವಾಗಿದ್ದರೂ, ಸುಖಕ್ಕೆ ಬಲಿಗಳಂತಹ ಹೀನ ಕಾರ್ಯಗಳನ್ನೆಸಗುತ್ತಿರುವನು.
-------------------

ದಯವಿಲ್ಲದ ಧರ್ಮವದೇವುದಯ್ಯ?
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ!
ದಯವೇ ಧರ್ಮದ ಮೂಲವಯ್ಯ
ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯ!

-ಎಲ್ಲಾ ಧರ್ಮಗಳು ಪ್ರತಿಪಾದಿಸುವದು ದಯೆ, ದಯವೇ ಧರ್ಮದ ಮೂಲಾಂಶ, ಸಮಷ್ಟಿ ಹಿತವನ್ನು ಸಾಧಿಸಬೇಕಾದರೆ ದಯವಿರಬೇಕು ಸಕಲ ಪ್ರಾಣಿಗಳಲ್ಲಿ. ದಯವೇ ಇಲ್ಲವಲ್ಲ ಅಲ್ಲಿ ದ್ವೇಷ ರಾಗಗಳ ವಿಜೃಂಭಿಸಿ ಸರ್ವನಾಶಕ್ಕೆ ಕಾರಣವಾಗುತ್ತದೆ. ಆಯಾ ಧರ್ಮ ಸ್ಥಾಪಕರು, ಪ್ರವರ್ತಕರು ದಯೆಗೆ ಪ್ರಥಮಸ್ಥಾನ ಕೊಟ್ಟಿದ್ದಲ್ಲದೆ ದಯವೇ ಧರ್ಮದ ಮೂಲಾಂಶವಾಗಿಸಿದ್ದಾರೆ.
-------------------

ಕೊಲುವನೇ ಮಾದಿಗ!
ಹೊಲಸ ತಿಂಬುವನೇ ಹೊಲೆಯ
ಕುಲವೇನೋ ಆವಂದಿರ ಕುಲವೇನೋ
ಸಕಲ ಜೀವಾತ್ಮರಿಗೆ ಲೇಸನೆ ಬಯಸುವ
ನಮ್ಮ ಕೂಡಲ ಸಂಗನ ಶರಣರೇ ಕುಲಜರು!

-ಮಾದಿಗ-ಹೊಲೆಯ ಎಂದು ಊರ ಹೊರಗಿರುವವರನ್ನು ಕರೆಯುವರು. ಆದರೆ ಮಾದಿಗ ಹೊಲೆಯ ಊರೊಳಗಿಲ್ಲವೇ? ಯಜ್ಞಯಾಗಾದಿಗಳ ನೆಪದಲ್ಲಿ ಪಶುಗಳನ್ನು ಆಹುತಿ ಕೊಟ್ಟು ಕೊಂದು ತಿನ್ನುವರು ಹೊಲೆಯರಲ್ಲವೇ? ಮಾದಿಗರಲ್ಲವೇ? ಯಾವನು ಹುಟ್ಟಿದ ಕುಲ ಏನಾದರೂ ಆರಿಗಲಿ, ಯಾರು ಸಕಲ ಜೀವಾತ್ಮರಿಗೆ ಒಳ್ಳೆಯದನ್ನು ಹಾರೈಸುವನೋ ಅವನೇ ಕುಲಜನು.
-------------------

ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ! ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ!!

-ಕಳ್ಳತನ ಮಾಡಬೇಡ,ಕೊಲ್ಲಬೇಡ,ಸಿಟ್ಟುಮಾಡಬೇಡ, ಪರರ ದೂಷಣೆ ಮಾಡಬೇಡ, ಆತ್ಮ ಪ್ರಶಂಶೆಯಲ್ಲಿ ತೊಡಗಬೇಡ - ಇವುಗಳನ್ನು ಪಾಲಿಸುತ್ತ ಬಂದಲ್ಲಿ ಅಂತರಂಗವೂ-ಬಹಿರಂಗವೂ ಶುದ್ಧಿಯಾಗಿರುವುದು, ಇದೇ ಮಾರ್ಗ ದೇವರನೊಲಿಸುಕೊಳ್ಳುವದು. ಆತ್ಮೋದ್ಧಾರಕ್ಕೆ ಆತ್ಮಶುದ್ಧಿಗೆ ಇದೇ ಸರಳ ಮಾರ್ಗ ಎಂಬಂತೆ ಬಸವಣ್ಣ ತಿಳಿಸಿದ್ದಾರೆ.

ಅಲ್ಲಮಪ್ರಭುವಿನ ವಚನಗಳು

೧.
ಶಿಲೆಯೊಳಗಣ ಪಾವಕನಂತೆ
ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ವೃಕ್ಷದಂತೆ
ಶಬ್ದದೊಳಗಣ ನಿಶ್ಯಬ್ದದಂತೆ
ಗುಹೇಶ್ವರ, ನಿಮ್ಮ ಶರಣಸಂಬಂಧ.
೨.
ಜಲದೊಳಗಿದ್ದ ಕಿಚ್ಚು
ಜಲವ ಸುಡದೆ, ಜಲವು ತಾನಾಗಿದ್ದಿತು ನೋಡಾ!
ನೆಲೆಯನಱದು ನೋಡಿಹೆನೆಂದಡೆ
ಅದು ಜಲವು ತಾನಲ್ಲ !
ಕುಲದೊಳಗಿದ್ದು, ಕುಲವ ಬೆರಸದೆ,
ನೆಲೆಗೆಟ್ಟುನಿಂದುದನಾರುಬಲ್ಲರು !
ಹೊಱಗೊಳಗೆ ತಾನಾಗಿದ್ದು ಮತ್ತೆ
ತಲೆದೋಱದಿಪ್ಪುದು, ಗುಹೇಶ್ವರ, ನಿಮ್ಮ ನಿಲುವು ನೋಡಾ !
ಪಿಂಡಜ್ಞಾನ ಸ್ಥಲ
೩.
ಆದಿಯಾಧಾರವಿಲ್ಲದಂದು
ಹಮ್ಮು ಬಿಮ್ಮುಗಳಿಲ್ಲದಂದು
ಸುರಾಳನಿರಾಳವಿಲ್ಲದಂದು
ಸಚರಾಚರವೆಲ್ಲ ರಚನೆಗೆ ಬಾರದಂದು
ಗುಹೇಶ್ವರ, ನಿಮ್ಮ ಶರಣನುದಯಿಸಿದನಂದು
೪.
ಅಯ್ಯ,
ಜಲ-ಕೂರ್ಮ-ಗಜ-ಫಣಿಯ ಮೇಲೆ ಧರೆ ವಿಸ್ತರಿಸಿ ನಿಲ್ಲದಂದು,
ಗಗನವಿಲ್ಲದಂದು, ಪವನನ ಸುಳುಹಿಲ್ಲದಂದು,
ಅಗ್ನಿಗೆ ಕಳೆದೋಱದಂದು,
ಯುಗ-ಜುಗಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು,
ನಿಜವನಱಿದಿಹೆನೆಂಬ ತ್ರಿಜಗದಧಿಪತಿಗಳಿಲ್ಲದಂದು :
ತೋಱುವ ಬೀಱುವ ಪರಿಭಾವದಲ್ಲಿ ಭರಿತ
ಅಗಮ್ಯ ಗುಹೇಶ್ವರಲಿಂಗವು.
೫.
ಎನ್ನ ನಾನಱಿಯದ ಮುನ್ನ
ನೀನೇನಾಗಿದ್ದೆ ಹೇಳಾ ?
ಮುನ್ನ ನೀ ಬಾಯಿ ಮುಚ್ಚಿಕೊಂಡಿದ್ದೆಯೆಂಬುದ
ನಾ ನಿನ್ನ ಕಣ್ಣಿಂದ ಕಂಡೆನು !
ಎನ್ನ ನಾನಱಿದ ಬಳಿಕ
ಇನ್ನು ನೀ ಬಾಯ್ದೆಱೆದು ಮಾತನಾಡಿದರೆ
ಅದನೆನ್ನ ಕಣ್ಣಿಂದ ನೀ ಕಂಡು ನಾಚಿದೆ ನೋಡಾ !
ಎನ್ನ ಕಾಬ ನಿನಗೆ, ನಿನ್ನ ಕಾಬ ಎನಗೆ
ಸಂಚದ ನೋಟ ಒಂದೆ ನೋಡಾ !
ಗುಹೇಶ್ವರ, ನಿನ್ನ ಬೆಡಗಿನ ಬಿನಾಣವನಱಿದೆ ನೋಡಾ !
೬.
ಮಾಯದ ಬಲೆಯಲ್ಲಿ ಸಿಲುಕಿದ
ಮರುಳ ನಾನೆಂದಱಿದ ಪರಿಯ ನೋಡಾ !
ತನ್ನ ವಿನೋದಕ್ಕೆ ಬಂದು
ನಿಶ್ಚಿಂತ ನಿರಾಳ ಗುಹೇಶ್ವರನೆಂದಱಿಯದ ಪರಿಯ ನೋಡಾ !
ಮಾಯಾವಿಲಾಸ ವಿಡಂಬನ ಸ್ಥಲ
೭.
ಕಾಯದ ಮೊದಲಿಂಗೆ ಬೀಜವಾವುದೆಂದಱಿಯದೀ ಲೋಕ !
ಇಂದ್ರಿಯಂಗಳು ಬೀಜವಲ್ಲ !
ಆ ಕಳಾಭೇದ ಬೀಜವಲ್ಲ !
ಸ್ವಪ್ನ ಬಂದೆಱಗಿತ್ತಲ್ಲಾ !
ಇದಾವಂಗೂ ಶುದ್ಧ ಸುಯಿಧಾನವಲ್ಲ ಕಾಣಾ ಗುಹೇಶ್ವರ.
೮.
ಗಗನದ ಮೇಲೊಂದಭಿನವ ಗಿಳಿ ಹುಟ್ಟಿ
ಸಯಸಂಭ್ರಮದಲ್ಲಿ ಮನೆಯ ಮಾಡಿತ್ತು !
ಒಂದು ದಿನ ಗಿಳಿ ಇಪ್ಪತೈದು ಗಿಳಿಯಾಯಿತ್ತು !
ಬ್ರಹ್ಮನಾ ಗಿಳಿಗೆ ಹಂಜರವಾದ
ವಿಷ್ಣುವಾ ಗಿಳಿಗೆ ಕೊಱೆಕೂಳಾದ
ರುದ್ರನಾ ಗಿಳಿಗೆ ತಾ ಕೋಲಾದ !
ಇಂತೀ ಮೂವರ ಮುಂದಣ ಕಂದನ ನುಂಗಿ
ದೃಷ್ಟನಾಮ ನಷ್ಟವಾಯಿತ್ತು-ಇದೆಂತೋ ಗುಹೇಶ್ವರ ?!
೯.
ನೆಲದ ಬೊಂಬೆಯ ಮಾಡಿ
ಜಲವ ಬಣ್ಣವನುಡಿಸಿ
ಹಲವು ಪರಿಯಾಶ್ರಮದಲ್ಲಿ ಉಲಿವ ಗೆಜ್ಜೆಯ ಕಟ್ಟಿ
ವಾಯುವನಲಸಂಚಕ್ಕೆ ಅರಳೆಲೆಯ ಶೃಂಗಾರವ ಮಾಡಿ
ಆಡಿಸುವ ಯಂತ್ರವಾಹಕನಾರೋ ?
ಬಯಲ ಕಂಭಕ್ಕೆ ತಂದು
ಸಯವೆಂದು ಪರವ ಕಟ್ಟಿದೆಡೆ
ಸಯವದ್ವಯವಾಯಿತ್ತು-ಏನೆಂಬೆ ಗುಹೇಶ್ವರ.
೧೦.
ಜಂಬೂದ್ವೀಪದ ವ್ಯವಹಾರಿ
ಖಂಡಭಂಡವ ತುಂಬಿ
ಕುಂಭಿನಿಯುದರದ ಮೇಲೆ ಪಸರವನಿಕ್ಕಿದ.
ಉಷ್ಣ-ತೃಷ್ಣೆ ಘನವಾಗಿ
ಕಡಲೇಳು ಸಮುದ್ರವ ಕುಡಿದು
ನೀರಡಸಿ, ಅಱಲುಗೊಂಡು ಬೆಱಗಾದ !
ಶಿಶು ತಾಯ ಹೆಣನ ಹೊತ್ತುಕೊಂದು ಹೆಸರು ಹೇಳುತ್ತೈದಾನೆ
ಗುಹೇಶ್ವರನೆಂಬ ನಿಲವ ವಸುಧೆಯಾಕೃತಿ ನುಂಗಿತ್ತು.
೧೧.
ದೇವರೆಲ್ಲರ ಹೊಡೆತಂದು
ದೇವಿಯರೊಳಗೆ ಕೂಡಿತ್ತು-ಮಾಯೆ !
ಹರಹರಾ, ಮಾಯೆಯಿಯ್ದೆಡೆಯ ನೋಡಾ !
ಎರಡೆಂಬತ್ತು ಕೋಟಿ ಪ್ರಮಥಗಣಂಗಳು
ಅಂಗಾಲ ಕಣ್ಣವರು, ಮೈಯೆಲ್ಲ ಕಣ್ಣವರು
ನಂದಿವಾಹನ-ರುದ್ರರು
ಇವರೆಲ್ಲರೂ
ಮಾಯೆಯ ಕಾಲುಗಾಹಿನ ಸರಮಾಲೆ ಕಾಣ ಗುಹೇಸ್ವರ !
೧೨.
ಊರ ಮಧ್ಯದ ಕಣ್ಣ ಕಾಡಿನೊಳಗೆ
ಬಿದ್ದೈದಾವೆ ಐದು ಹೆಣನು.
ಅಂದು ಬಂದು ಅಳುವರು ಬಳಗ ಘನವಾದ ಕಾರಣ,
ಹೆಣನೂ ಬೇಯದು, ಕಾಡೂ ನಂದದು
ಮಾಡ ಉರಿಯಿತ್ತು ಗುಹೇಶ್ವರ !
೧೩.
ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ ಹೋಗಿ
ಮೇದು ಬಂದೆನೆಂದರೆ-ಅದ ಕಂಡು ಬೆಱಗಾದೆ !
ರಕ್ಕಸಿಯ ಮನೆಗೆ ಹೋಗಿ
ನಿದ್ರೆಗೆಯ್ದು ಬಂದೆನೆಂದರೆ-ಅದ ಕಂಡು ಬೆಱಗಾದೆ !
ಜವನ ಮನೆಗೆ ಹೋಗಿ
ಸಾಯದೆ ಬದುಕಿ ಬಂದೆನೆಂದರೆ-ಅದ ಕಂಡು ಬೆಱಗಾದೆ !
ಗುಹೇಶ್ವರ.
೧೪.
ಹೃದಯಕಂದದ ಮೇಲೆ ಹುಟ್ಟಿತ್ತು
ಹರಿದು-ಹಬ್ಬಿ-ಕೊಬ್ಬಿ ಹಲವು ಫಲವಾಯಿತ್ತು ನೋಡಿರೇ
ಪರಿಪರಿಯ ಫಲಂಗಳನು-ಬೇಡಿದವರಿಗಿತ್ತು -
ಆ ಫಲವ ಬಯಸಿದವರು ಜಲದೊಳಗೆ ಬಿದ್ದರೆ
ನೋಡಿ ನಗುತ್ತಿದ್ದೆನ್ತು - ಗುಹೇಶ್ವರ.
೧೫.
ಅರಗಿನ ಪುತ್ಥಳಿಯನುರಿ ಕೊಂಡಡೆ
ಉದಕ ಬಾಯಾಱಿ ಬಳಲುತ್ತಿದೆ !
ಅಗೆಯಿಂ ಭೋ! ಭಾವಿಯನಗೆಯಿಂ ಭೋ !
ಅಗೆದಾತ ಸತ್ತ-ಭಾವಿ ಬತ್ತಿತ್ತು.
ಇದು ಕಾರಣ ನೆಱೆ ಮೂಱು ಲೋಕ
ಬಱುಸೂಱೆವೋಯಿತ್ತು-ಗುಹೇಶ್ವರ.
೧೬.
ಅಂಗದ ಕೊನೆಯ ಮೇಲಣ ಕೋಡಗ
ಕೊಂಬು-ಕೊಂಬಿಗೆ ಹಾರಿತ್ತು ಅಯ್ಯ.
ಒಂದು ಸೋಜಿಗ-
ಕೈಯ ನೀಡಲು ಮೈಯೆಲ್ಲವ ನುಂಗಿತ್ತು !
ಒಯ್ಯನೆ ಕರೆದಡೆ ಮುಂದೆ ನಿಂದಿತ್ತು !
ಮು(ಮೆ)ಯ್ಯಾಂತಡೆ ಬಯಲಾಯಿತ್ತು ಗುಹೇಶ್ವರ !!
೧೭.
ಭೂತ ಭೂತವ ಕೂಡಿ ಅದ್ಭುತವಾಗಿತ್ತು :
ಕಿಚ್ಚು ಕೋಡಿತ್ತು, ನೀರು ನೀರಡಸಿತ್ತು ;
ಉರಿಪವನದೋಷದೊಳಗಿದ್ದು ವಾಯುವಿಮ್ಮಡಿಸಿತ್ತ ಕಂಡೆ
ಗುಹೇಶ್ವರ.
೧೮.
ಅಡವಿಯೊಳಗೆ ಕಳ್ಳರು
ಕಡವಸದ ಸ್ವಾಮಿಯನು ಹುಡುಕಿ ಹುಡುಕಿ
ಅರಸುತ್ತೈದಾರೆ !
ಸೊಡರು ನಂದಿ ಕಾಣದೆ
ಅನ್ನಪಾನದ ಹಿರಿಯರೆಲ್ಲರೂ ತಮ್ಮ ತಾವಱಿಯದೆ
ಅಧರಪಾನವನುಂಡು ತೇಗಿ
ಸುರಾಪಾನವ ಬೇಡುತ್ತೈದಾರೆ.
ಅಱಿದ ಹಾರುವನೊಬ್ಬನು
ಅರಿದ ತಲೆಯ ಹಿಡಿದುಕೊಂಡು
ಅಧ್ಯಾತ್ಮವಿಕಾರದ ನೆತ್ತರ ಕುಡಿದನು
ನೋಡಾ-ಗುಹೇಸ್ವರ.
೧೯.
ಮಾಯದ ಕೈಯಲ್ಲಿ ಓಲೆಕಂಠವ ಕೊಟ್ಟರೆ
ಲಗುನ-ಮಿಗುನವ ಬರೆಯಿತ್ತು ನೋಡಾ !
ಅರಗಿನ ಪುತ್ಥಳಿಗೆ ಉರಿಯ ಸೀರೆಯನುಡಿಸಿದರೆ
ಅದು ಸಿರಿಯ ಸಿಂಗಾರವಾಯಿತ್ತು ನೋಡಾ !
ಅಂಬರದೊಳಗಾಡುವ ಗಿಳಿ
ಪಂಜರದೊಳಗಣ ಬೆಕ್ಕ ನುಂಗಿ
ರಂಭೆಯ ತೋಳಿಂದಗಲಿತ್ತು ನೋಡಾ-ಗುಹೇಶ್ವರ.
೨೦.
ಕೋಣನ ಕೊಂಬಿನ ತುದಿಯಲ್ಲಿ
ಏಳುನೂರೆಪ್ಪತ್ತು ಸೇದೆಯ ಭಾವಿ.
ಭಾವಿಯೊಳಗೊಂದು ಬಗರಿಗೆ
ಬಗರಿಗೆಯೊಳಗೊಬ್ಬ ಸೂಳೆ ನೋಡಯ್ಯ !
ಆ ಸೂಳೆಯ ಕೊರಳಲ್ಲಿ
ಏಳುನೂರೆಪ್ಪತ್ತಾನೆ ನೀಱಿತ್ತ ಕಂಡೆ-ಗುಹೇಶ್ವರ.
೨೧.
ಹುಲಿಯ ತಲೆಯ ಹುಲ್ಲೆ
ಹುಲ್ಲೆಯ ತಲೆಯ ಹುಲಿ-
ಈ ಎರಡರ ನಡು ಒಂದಾಯಿತ್ತು !
ಹುಲಿಯಲ್ಲ - ಹುಲ್ಲೆಯಲ್ಲ
ಕೆಲದಲೊಂದು ಬಂದು ಮೆಲುಕಾಡಿತ್ತು ನೋಡಾ.
ತಲೆಯಿಲ್ಲದ ಮುಂಡ
ತಱಗೆಲೆಯ ಮೇದರೆ
ಎಲೆಮಱೆಯಾಯಿತ್ತು ಗುಹೇಶ್ವರ.
೨೨.
ತೋಟವ ಬಿತ್ತಿದರೆಮ್ಮವರು
ಕಾಹ ಕೊಟ್ಟರು ಜವನವರು
ನಿತ್ಯವಿಲ್ಲದ ಸಂಸಾರ ವೃಥಾ ಹೋಯಿತ್ತಲ್ಲಾ !
ಗುಹೇಶ್ವರನಿಕ್ಕಿದ ಕಿಚ್ಚು
ಹೊತ್ತಿಕ್ಕಲುಂಟು, ಅಟ್ಟುಣ್ಣಲಿಲ್ಲ.
೨೩.
ನಿರ್ಣಯವನಱಿಯದ ಮನವೇ
ದುಗುಡವನಾಹಾರಂಗೊಂಡೆಯಲ್ಲಾ !
ಮಾಯಾಸೂತ್ರವಿದೇನೋ !
ಕಂಗಳೊಳಗಣ ಕತ್ತರೆ ತಿಳಿಯದಲ್ಲಾ !
ಬೆಳಗಿನೊಳಗಣ ಶೃಂಗಾರ ಬಳಲುತ್ತಿದೆ ಗುಹೇಶ್ವರ !
ಸಂಸಾರಹೇಯ ಸ್ಥಲ
೨೪.
ಸಂಸಾರವೆಂಬ ಹೆಣ ಬಿದ್ದಿರೆ
ತಿನಬಂದ ನಾಯ ಜಗಳವ ನೋಡಿರೇ !
ನಾಯ ಜಗಳವ ನೋಡಿ
ಹೆಣನೆದ್ದು ನಗುತ್ತಿದೆ
ಗುಹೇಶ್ವರನೆಂಬ ಲಿಂಗವಲ್ಲಿಲ್ಲ ಕಾಣಿರೇ !
೨೫.
ಹಳ್ಳದೊಳಗೊಂದು ಹುಳ್ಳಿ ಬರುತ್ತಿರಲು
ನೊರೆತೆರೆಗಳು ತಾಗಿದವಲ್ಲಾ !
ಸಂಸಾರವೆಂಬ ಸಾಗರದೊಳಗೆ
ಸುಖ-ದು:ಖಂಗಳು ತಾಗಿದವಲ್ಲಾ !
ಇದು ಕಾರಣ
ರೂಪಾದ ಜಗಕ್ಕೆ ಪ್ರಳಯವಾಯಿತ್ತು ಗುಹೇಶ್ವರ.
೨೬.
ಕರೆಯದೇ ಬಂದುದ
ಹೇಳದೆ ಹೋದುದ-ಆರೂ ಅಱಿಯರಲ್ಲಾ !
ಅಂದಂದಿಗೆ ಬಂದ ಪ್ರಾಣಿಗಳು-ಆರೂ ಅಱಿಯರಲ್ಲಾ !
ಗುಹೇಶ್ವರಲಿಂಗ ಉಣ್ಣದೇ ಹೋದುದ-ಆರೂ ಅಱಿಯರಲ್ಲ !
೨೭.
ಆಯಿತ್ತೆ ಉದಯಮಾನ
ಹೋಯಿತ್ತೆ ಅಸ್ತಮಾನ
ಉಳಿದವಲ್ಲಾ ನೀರಲಾದ ನಿರ್ಮಿತಂಗಳೆಲ್ಲವೂ !
ಕತ್ತಲೆಗವಿಯಿತ್ತು
ಮೂಱು ಲೋಕದೊಳಗೆ
ಇದಱಚ್ಚುಗವೇನು ಹೇಳಾ ಗುಹೇಶ್ವರ ? !
೨೮.
ಕಾಲುಗಳೆರಡೂ ಗಾಲಿ ಕಂಡಯ್ಯ
ದೇಹವೆಂಬುದೊಂದು ತುಂಬಿದ ಬಂಡಿ ಕಂಡಯ್ಯ
ಬಂಡಿಯ ಹೊಡೆವರೈವರು ಮಾನಿಸರು
ಒಬ್ಬರಿಗೊಬ್ಬರು ಸಮವಿಲ್ಲಯ್ಯ.
ಅದಱಿಚ್ಛೆಯನಱಿದು ಹೊಡೆಯದಿದ್ದರೆ
ಅದುಱಚ್ಚು ಮುಱಿಯಿತ್ತು ಗುಹೇಶ್ವರ.
೨೯.
ಆರಕ್ಕೆಯ ಸಿರಿಗೆ ಆರಕ್ಕೆ ಚಿಂತಿಸುವರು !
ಆರಕ್ಕೆಯ ಬಡತನಕ್ಕೆ ಆರಕ್ಕೆ ಮುಱುಗುವರು !
ಇದಾರಕ್ಕೆ ಆರಕ್ಕೆ ?
ಇದೇನಕ್ಕೆ ಏನಕ್ಕೆ ?
ಮಾಯದ ಬೇಳುವೆ ಹುರುಳಿಲ್ಲ
ಕೊಂದು ಕೂಗಿತ್ತು ನೋಡಾ ಗುಹೇಶ್ವರ.
೩೦.
ಮಾನದ ತೋರಿಹ ಆವಿಂಗೆ
ಕೊಳಗದ ತೋರಿಹ ಕೆಚ್ಚಲು
ತಾಳಮರದುದ್ದವೆರಡು ಕೋಡು ನೋಡಾ !
ಅದುನಱಸ ಹೋಗಿ ಆಱು ದಿನ
ಅದು ಕೆಟ್ಟು ಮೂಱು ದಿನ !
ಅಘಟಿತಘಟಿತ ಗುಹೇಶ್ವರ,
ಅಱಸುವ ಬಾರೈ ತಲೆಹೊಲದಲ್ಲಿ !
೩೧.
ಕುಲದಲಧಿಕನು ಹೋಗಿ
ಹೊಲೆಗೇರಿಯಲ್ಲಿ ಮನೆಯ ಕಟ್ಟಿದರೆ
ಕುಲಗೆಡದಿಪ್ಪ ಪರಿಯ ನೋಡಾ !
ಆತನ ಕುಲದವರೆಲ್ಲರೂ ಮುಖವ ನೋಡಲೊಲ್ಲದೈದಾರೆ.
ಕುಲವುಳ್ಳವರೆಲ್ಲರು ಕೈವಿಡಿದರು
ಕುಲಗೆಟ್ಟವನೆಂದು ತಿಳಿದು
ವಿಚಾರಿಸಲು ಹೊಲೆಗೆಟ್ಟು ಹೋಯಿತ್ತು
ಕಾಣಾ ಗುಹೇಶ್ವರ.
ಗುರುಕರುಣ ಸ್ಥಲ
೩೨.
ಕಂಡುದ ಹಿಡಿಯಲೊಲ್ಲದೆ
ಕಾಣದುದನಱಸಿ ಹಿಡಿದಹೆನೆಂದರೆ
ಸಿಕ್ಕದೆಂಬ ಬಳಲಿಕೆ ನೋಡಾ !
ಕಂಡುದನೆ ಕಂಡು
ಗುರುಪಾದವ ಹಿಡಿದಲ್ಲಿ
ಕಾಣದುದ ಕಾಣಬಹುದು ಗುಹೇಶ್ವರ.
೩೩.
ಕಾಣದುದನಱಸುವರಲ್ಲದೆ ಕಂಡುದನಱಸುವರೇ ?!
ಘನಕ್ಕೆ ಘನವಾದ ವಸ್ತು
ತಾನೆ ಗುರುವಾದ, ತಾನೆ ಲಿಂಗವಾದ, ತಾನೆ ಜಂಗಮವಾದ
ತಾನೆ ಪ್ರಸಾದವಾದ, ತಾನೆ ಮಂತ್ರವಾದ, ತಾನೆ ಯಂತ್ರವಾದ
ತಾನೆ ಸಕಲವಿದ್ಯಾಸ್ವರೂಪನಾದ:
ಇಂತಿವೆಲ್ಲವನೊಳಕೊಂಡು
ಎನ್ನ ಕರಸ್ಥಲಕ್ಕೆ ಬಂದ ಬಳಿಕ
ಇನ್ನು ನಿರ್ವಿಕಾರ-ಗುಹೇಶ್ವರ.
೩೪.
ಕೃತಯುಗದಲ್ಲಿ
ಶ್ರೀಗುರು ಶಿಷ್ಯಂಗೆ ಬಡಿದು
ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
ತ್ರೇತಾಯುಗದಲ್ಲಿ
ಶ್ರೀಗುರು ಶಿಷ್ಯಂಗೆ ಬೈದು
ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
ದ್ವಾಪರ ಯುಗದಲ್ಲಿ
ಶ್ರೀಗುರು ಶಿಷ್ಯಂಗೆ ಝಂಕಿಸಿ
ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
ಕಲಿಯುಗದಲ್ಲಿ
ಶ್ರೀಗುರು ಶಿಷ್ಯಂಗೆ ವಂದಿಸಿ
ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
ಗುಹೇಶ್ವರ,
ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆಱಗಾದೆನು.
೩೫.
ಅಯ್ಯ, ನೀನೆನಗೆ ಗುರುವಪ್ಪಡೆ
ನಾ ನಿನಗೆ ಶಿಷ್ಯನಪ್ಪಡೆ,
ಎನ್ನ ಕರಣಾದಿ ಗುಣಂಗಳ ಕಳೆದು
ಎನ್ನ ಕಾಯದ ಕರ್ಮವ ತೊಡೆದು
ಎನ್ನ ಪ್ರಾಣದ ಧರ್ಮವ ತೊಡೆದು
ಎನ್ನ ಪ್ರಾಣದ ಧರ್ಮವ ನಿಲಿಸಿ,
ನೀನೆನ್ನ ಕಾಯದಲಡಗಿ
ನೀನೆನ್ನ ಪ್ರಾಣದಲಡಗಿ
ನೀನೆನ್ನ ಭಾವದಲಡಗಿ,
ನೀನೆನ್ನ ಕರಸ್ಥಲಕ್ಕೆ ಬಂದು
ಕಾರುಣ್ಯವ ಮಾಡು ಗುಹೇಶ್ವರ.
೩೬.
ಕಸ್ತುರಿಯ ಮೃಗ ಬಂದು ಸುಳಿಯಿತ್ತಯ್ಯ
ಸಕಲವಿಸ್ತಾರದ ರೂಹು ಬಂದು ನಿಂದಿತ್ತಯ್ಯ.
ಆವ ಗ್ರಹ ಬಂದು ಸೋಕಿತ್ತೆಂದಱಿಯೆನಯ್ಯ
ಆವ ಗ್ರಹ ಬಂದು ಹಿಡಿಯಿತ್ತೆಂದಱಿಯೆನಯ್ಯ.
ಹೃದಯಕಮಲಮಧ್ಯದಲ್ಲಿ
ಗುರುವನಱಿದು, ಪೂಜಿಸಿ,
ಗುರು ವಿಖ್ಯಾತನೆಂಬುದ ನಾನಱಿದೆನಯ್ಯ
ಗುರುಗುಹೇಶ್ವರನಲ್ಲಿ ಹಿಂದಣ ಹುಟ್ಟಱತು ಹೋದುದ ಕಂಡೆನಯ್ಯ.
೩೭.
ಎಣ್ಣೆ-ಬತ್ತಿ-ಪ್ರಣಿತೆ ಕೂಡಿ
ಜ್ಯೋತಿಯ ಬೆಳಗಯ್ಯ !
ಅಸ್ಥಿ-ಮಾಂಸ-ದೇಹ
ಪ್ರಾಣನಿ:ಪ್ರಾಣವಾಯಿತ್ತು !!
ದೃಷ್ಟಿವರಿದು ಮನ ಮುಟ್ಟಿದ ಪರಿ ಇನ್ನೆಂತೋ ?
ಮುಟ್ಟಿ ಲಿಂಗವ ಕೊಂಡಡೆ
ಕೆಟ್ಟಿತ್ತು ಜ್ಯೋತಿಯ ಬೆಳಗು !
ಇದು ಕಷ್ಟಕರವೆಂದಱಿದೆನು ಗುಹೇಶ್ವರ.
೩೮.
ಪಾತಾಳದಿಂದತ್ತ ಮಾತ ಬಲ್ಲವರಿಲ್ಲ
ಗಗನದಿಂದ ಮೇಲೆ ಅನುಭಾವ ತಾನಿಲ್ಲ
ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ
ಹೊಱಗಣ ಹೊಱಗನು ಅಱಿಯಬಲ್ಲವರಿಲ್ಲ
ಹಿಂದಣ ಹಿಂದನು
ಮುಂದಣ ಮುಂದನು
ತಂದೆ ತೋಱಿದನು ನಮ್ಮ ಗುಹೇಶ್ವರನು.
೩೯.
ಎತ್ತಣ ಮಾಮರ
ಎತ್ತಣ ಕೋಗಿಲೆ ?
ಎತ್ತಣಿಂದೆತ್ತ ಸಂಬಂಧವಯ್ಯ ?!
ಬೆಟ್ಟದ ನೆಲ್ಲಿಯ ಕಾಯಿ
ಸಮುದ್ರದೊಳಗಣ ಉಪ್ಪು
ಎತ್ತಣಿಂದೆತ್ತ ಸಂಬಂಧವಯ್ಯಾ ?!
ಗುಹೇಶ್ವರಲಿಂಗಕ್ಕೆಯೂ
ಎನಗೆಯೂ
ಎತ್ತಣಿಂದೆತ್ತ ಸಂಬಂಧವಯ್ಯ ?!
೪೦.
ಕಾಣಬಾರದ ಲಿಂಗವು
ಕರಸ್ಥಲಕ್ಕೆ ಬಂದರೆ
ಎನಗಿದು ಸೋಜಿಗ ! ಎನಗಿದು ಸೋಜಿಗ !
ಅಹುದೆನಲಮ್ಮೆನು ಅಲ್ಲೆನಲಮ್ಮೆನು,
ಗುಹೇಶ್ವರಲಿಂಗ ನಿರಾಳ !
ನಿರಾಕಾರ ಸಾಕಾರವಾಗಿ
ಎನ್ನ ಕರಸ್ಥಲಕ್ಕೆ ಬಂದರೆ
ಹೇಳಲಮ್ಮೆ ಕೇಳಲಮ್ಮೆ.
೪೧.
ಜ್ಯೋತಿಯೊಳಗಣ ಕರ್ಪುರಕ್ಕೆ
ಅಪ್ಪುವಿನೊಳಗಿಪ್ಪ ಉಪ್ಪಿಂಗೆ
ಶ್ರೀ ಗುರುವಿನ ಹಸ್ತದೊಳಗಿಪ್ಪ ಶಿಷ್ಯಂಗೆ-
ಈ ಮೂಱಕ್ಕೆಯೂ
ಬೇಱೆ ಕ್ರಿಯಾವರ್ತನೆಯುಂಟೆ ಗುಹೇಶ್ವರ ?
೪೨.
ಗುರುಶಿಷ್ಯ ಸಂಬಂಧವನಱಸಲೆಂದು ಹೋದರೆ
ತಾನೆ ಗುರುವಾದ
ತಾನೆ ಶಿಷ್ಯನಾದ
ತಾನೆ ಲಿಂಗವಾದ.
ಗುಹೇಶ್ವರ,
ನಿಮ್ಮ ಶರಣನ ಕಾಯದ ಕೈಯಲ್ಲಿ ಲಿಂಗವ ಕೊಟ್ಟರೆ
ಭಾವ ಬತ್ತಲೆಯಾಯಿತ್ತು !
ಭಕ್ತ ಸ್ಥಲ
೪೩.
ಭವಿಯ ತಂದು ಭಕ್ತನ ಮಾಡಿ
ಪೂರ್ವಾಶ್ರಯವ ಕಳೆದ ಬಳಿಕ ಮರಳಿ ಪೂರ್ವವನೆತ್ತಿ ನುಡಿವ
ಗುರುದ್ರೋಹಿಯ ಮಾತ ಕೇಳಲಾಗದು,
ಹೆಸರಿಲ್ಲದ ಲಿಂಗಕ್ಕೆ ಹೆಸರಿಡುವ
ಲಿಂಗದ್ರೋಹಿಯ ಮಾತ ಕೇಳಲಾಗದು.
ಪೂರ್ವದಲ್ಲಿ ನಾಮವಿಲ್ಲದ ಗುರು
ಹೆಸರಿಲ್ಲದ ಲಿಂಗ, ಹೆಸರಿಲ್ಲದ ಶಿಷ್ಯ
ಇಂತೀ ತ್ರಿವಿಧಸ್ಥಲವನಱಿಯದೆ ಕೆಟ್ಟರು ಗುಹೇಶ್ವರ.
೪೪.
ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಭತ್ತವಿಲ್ಲದಿದ್ದರೆ
ಆ ಬೆವಸಾಯದ ಗೊರ[=ಡ]ವೇತಕಯ್ಯ ?
ಕ್ರಯವಿಕ್ರಯವ ಮಾಡಿ ಮನೆಯ ಸಂಚು ನಡೆಯದನ್ನಕ್ಕ
ಆ ಕ್ರಯವಿಕ್ರಯದ ಗೊರ[=ಡ]ವೇತಕಯ್ಯ ?
ಒಡೆಯನನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿದ್ದರೆ
ಆ ಓಲಗದ ಗೊರ[=ಡ]ವೇತಕಯ್ಯ ?
ಭಕ್ತನಾಗಿ ಭವಂನಾಸ್ತಿಯಾಗದಿದ್ದರೆ
ಆ ಉಪದೇಶವ ಕೊಟ್ಟ ಗುರು
ಕೊಂಡ ಶಿಷ್ಯ
ಇವರಿಬ್ಬರ ಮನೆಯಲ್ಲಿ ಮಾರಿ ಹೊಗಲಿ
ಗುಹೇಶ್ವರಲಿಂಗವತ್ತಲೆ ಹೊಗಲಿ.
೪೫.
ಮೇರುವ ಸಾರಿಗೆ ಕಾಗೆ ಹೊಂಬಣ್ಣವಾಗದಿದ್ದರೆ
ಆ ಮೇರುವಿಂದತ್ತಣ ಹುಲುಮೊರಡಿಯೆ ಸಾಲದೇ ?
ದೇವ, ನಿಮ್ಮ ಪೂಜಿಸಿ ಧಾವತಿಗೊಂಬಡೆ
ಆ ಧಾವತಿಯಿಂದ ಮುನ್ನಿನ ವಿಧಿಯೇ ಸಾಲದೇ?
ಗುಹೇಶ್ವರ, ನಿಮ್ಮ ಪೂಜಿಸಿ ಸಾವಡೆ
ನಿಮ್ಮಿಂದ ಹೊಱಗಣ ಜವನೆ ಸಾಲದೆ!
೪೬.
ಕಾಳರಕ್ಕಸಿಗೊಬ್ಬ ಮಗ ಹುಟ್ಟಿ
ಕಾಯದ ರಾಶಿಯ ಮೊಗೆವುತ್ತ ಸುರಿವುತ್ತಲಿದ್ದನಯ್ಯ !
ಕಾಳರಕ್ಕಸಿಯ ಮೂಗು ಮೊಲೆಯ ಕೊಯ್ದು
ದೇವಕನ್ನಿಕೆಯ ಮಱೆಹೊಕ್ಕು
ಬಾಯ ತುತ್ತೆಲ್ಲವನು ಉಣಲೊಲ್ಲದೆ ಕಾಱಿದಡೆ
ಆತನೆ ಭಕ್ತನೆಂಬೆ !
೪೭.
ಅಕ್ಷರವ ಬಲ್ಲೆವೆಂದು
ಅಹಂಕಾರವಡೆಗೊಂದು ಲೆಕ್ಕಗೊಳ್ಳರಯ್ಯ,
ಗುರುಹಿರಿಯರು ತೋರಿದ ಉಪದೇಶದಿಂದ
ವಾಗದ್ವೈತವ ಕಲಿತು, ವಾದಿಪರಲ್ಲದೆ
ಆಗು-ಹೋಗೆಂಬುದನಱಿಯರು,
ಭಕ್ತಿಯನಱಿಯರು-ಯುಕ್ತಿಯನಱಿಯರು-ಮುಕ್ತಿಯನಱಿಯರು
ಮತ್ತೂ ವಾದಿಗಳೆನಿಸುವರು
ಹೋದರು, ಗುಹೇಶ್ವರ, ಸಲೆ ಕೊಂಡ ಮಾಱಿಂಗೆ !
೪೮.
ಐದು ಮುಖದಂಗನೆಗೆ ಹದಿನೈದು ದೇಹ ನೋಡ ;
ಆ ಅಂಗನೆಯ ಮನೆಯೊಳಗಿದ್ದು
ತಾವಾರೆಂಬುದನಱಿಯದೆ
ಬಾಯಿಗೆ ಬಂದಂತೆ ನುಡಿವರು,
ಗುಹೇಶ್ವರ, ನಿಮ್ಮನಱಿಯದ ಜಡರುಗಳು.
೪೯.
ಎಣ್ಣೆ ಬೇಱೆ, ಬತ್ತಿ ಬೇಱೆ
ಎರಡೂ ಕೂಡಿ ಸೊಡರಾಯಿತ್ತು.
ಪುಣ್ಯ ಬೇಱೆ, ಪಾಪ ಬೇಱೆ
ಎರಡೂ ಕೂಡಿ ಒಡಲಾಯಿತ್ತು.
ಮಿಗಬಾರದು, ಮಿಗದಿರಬಾರದು,
ಒಡಲಿಚ್ಚೆಯ ಸಲಿಸದೆ ನಿಮಿಷವಿರಬಾರದು,
ಕಾಯಗುಣವಳಿದು,
(ಮಾಯ ಜ್ಯೋತಿ ವಾಯುವ ಕೂಡದ ಮುನ್ನ)
ಭಕ್ತಿಯ ಮಾಡಬಲ್ಲಾತನೇ ದೇವ, ಗುಹೇಶ್ವರ.
೫೦.
ಹೊನ್ನು ಮಾಯೆಯೆಂಬರು
ಹೊನ್ನು ಮಾಯೆಯಲ್ಲ.
ಹೆಣ್ಣು ಮಾಯೆಯೆಂಬರು
ಹೆಣ್ಣು ಮಾಯೆಯಲ್ಲ.
ಮಣ್ಣು ಮಾಯೆಯೆಂಬರು
ಮಣ್ಣು ಮಾಯೆಯಲ್ಲ.
ಮನದ ಮುಂದಣ ಆಶೆಯೇ ಮಾಯೆ ಕಾಣಾ
ಗುಹೇಶ್ವರ !
೫೧.
ಕಳ್ಳಗಂಜಿ ಕಾಡ ಹೊಕ್ಕಡೆ
ಹುಲಿ ತಿನ್ನದೆ ಮಾಬುದೇ ?
ಹುಲಿಗಂಜಿ ಹುತ್ತವ ಹೊಕ್ಕಡೆ
ಸರ್ಪ ತಿನ್ನದೆ ಮಾಬುದೇ ?
ಕಾಲಕ್ಕಂಜಿ ಭಕ್ತನಾದಡೆ ಕರ್ಮ ತಿನ್ನದೆ ಮಾಬುದೇ ?
ಇಂತೀ ಮೃತ್ಯುವಿನ ಬಾಯ ತುತ್ತಾದ
ವೇಷಡಂಬಕರನೇನೆಂಬೆ - ಗುಹೇಶ್ವರ !
೫೨.
ಐದು ಸರ್ಪಂಗಳಿಗೆ
ತನುವೊಂದು, ದಂತವೆರಡು !
ಸರ್ಪ ಕಡಿದು ಸತ್ತ ಹೆಣನು ಸುಳಿದಾಡುವುದ ಕಂಡೆ !
ಈ ನಿತ್ಯವನಱಿಯದ ಠಾವಿನಲ್ಲಿ
ಭಕ್ತಿಯೆಲ್ಲಿಯದೊ ಗುಹೇಶ್ವರ ?!
೫೩.
ಆರೂ ಇಲ್ಲದಾರಣ್ಯದೊಳಗೆ ಮನೆಯ ಕಟ್ಟಿದರೆ
ಕಾಡುಗಿಚ್ಚು ಎದ್ದು ಬಂದು ಹತ್ತಿತಲ್ಲ !
ಆ ಉರಿಯೊಳಗೆ ಮನೆ ಬೇವಲ್ಲಿ
ಮನೆಯೊಡೆಯನೆತ್ತ ಹೋದನೋ ?!
ಆ ಉರಿಯೊಳಗೆ ಬೆಂದ ಮನೆ
ಚೇಗೆಯಾಗದುದ ಕಂಡು
ಮನೆಯೊಡೆಯನಳಲುತ್ತ ಬಳಲುತ್ತೈದಾನೆ.
ಗುಹೇಶ್ವರ.
ನಿಮ್ಮ ಒಲವಿಲ್ಲದ ಠಾವ ಕಂಡು
ಹೇಸಿ ತೊಲಗಿದೆನಯ್ಯ !
೫೪.
ಪ್ರಣಿತೆಯೂ ಇದೆ
ಬತ್ತಿಯೂ ಇದೆ -
ಜ್ಯೋತಿಯ ಬೆಳಗುವಡೆ
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ ?!
ಗುರುವಿದೆ
ಲಿಂಗವಿದೆ -
ಶಿಷ್ಯನ ಸುಜ್ಞಾನವಂಕುರಿಸದನ್ನಕ್ಕರ ಭಕ್ತಿಯೆಲ್ಲಿಯದೋ ?!
ಸೋಹಮೆಂಬುದ ಕೇಳಿ, ದಾಸೋಹವ ಮಾಡದಿದ್ದರೆ
ಅತಿಗಳೆದನು ಗುಹೇಶ್ವರ.
೫೫.
ಘನತರಚಿತ್ರದ ರೂಹ ಬರೆಯಬಹುದಲ್ಲದೆ
ಪ್ರಾಣವ ಬರೆಯಬಹುದೇ ?
ಅಯ್ಯ,
ದಿವ್ಯಾಗಮಂಗಳು ಹೇಳಿದ ಕ್ರೀಯಲು ದೀಕ್ಷೆಯ ಮಾಡಬಹುದಲ್ಲದೆ
ಭಕ್ತಿಯ ಮಾಡಬಹುದೇ ?
ಅಯ್ಯ,
ಪ್ರಾಣವಹ ಭಕ್ತಿಯ ತನ್ಮಯ ನೀನು !
ಈ ಗುಣವುಳ್ಳಲ್ಲಿ ನೀನಿಹೆ
ಇಲ್ಲದಲ್ಲಿ ನೀನಿಲ್ಲ, ಗುಹೇಶ್ವರ.
೫೬.
ಕಾಯಕ್ಕೆ ಮಜ್ಜನ
ಪ್ರಾಣಕ್ಕೆ ಓಗರ
ಇವ ಮಾಡಲೆ ಬೇಕು,
ಸುಳಿವ ಸುಳುಹುಳ್ಳನ್ನಕ್ಕರ
ಇವ ಮಾಡಲೆ ಬೇಕು
ಗುಹೇಶ್ವರನೆಂಬ ಲಿಂಗಕ್ಕೆ
ಆತ್ಮನುಳ್ಳಕ್ಕರ ಭಕ್ತಿಯ ಮಾಡಲೆ ಬೇಕು.
೫೭.
ಅದ್ವೈತವ ನುಡಿದು ಅಹಂಕಾರಿಯಾದೆನಯ್ಯ
ಬ್ರಹ್ಮವ ನುಡಿದು ಭ್ರಮಿತನಾದೆನಯ್ಯ
ಶೂನ್ಯವ ನುಡಿದು ಸುಖದು:ಖಕ್ಕೆ ಗುರಿಯಾದೆನಯ್ಯ
ಗುಹೇಶ್ವರ, ನಿಮ್ಮ ಶರಣ ಸಂಗನ ಬಸವಣ್ಣನ ಸಾನ್ನಿಧ್ಯದಿಂದ
ನಾನು ಸದ್ಭಕ್ತನಾದೆನಯ್ಯ.
೫೮.
'ದೇವ' ಕಂಡಾ.
'ಭಕ್ತ' ಕಂಡಾ
ವಕರಳಿ ಮರಳಿ ಶರಣೆಂಬ ಕಂಡಾ !
ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ !
ಸಾವನ್ನಕ್ಕರ ಸರ ಉಂಟೇ, ಗುಹೇಶ್ವರ.
೫೯.
ಮುಂದು ಜಾವದಲೆದ್ದು
ಲಿಂಗದಂಘ್ರಿಯ ಮುಟ್ಟಿ,
ಸುಪ್ರಭಾತ ಸಮಯದಲ್ಲಿ
ಶಿವಭಕ್ತರ ಮುಖವ ನೋಡುವುದು,
ಹುಟ್ಟಿದುದಕ್ಕಿದೆ ಸಫಲ ನೋಡಾ !
ಸತ್ಯವಚನವಿಂತೆಂದುದು ;
"ಇವಿಲ್ಲದವರ ನಾನೊಲ್ಲೆ"
ಗುಹೇಶ್ವರ.
೬೦.
ಆಚಾರವಱಿಯದೆ
ವಿಭವವಳಿಯದೆ ;
ಕೋಪವಡಗದೆ
ತಾಪ ಮುಱಿಯದೆ-
ಬಱಿದೆ ಭಕ್ತರಾದೆವೆಂದು
ಬೆಬ್ಬನೆ ಬೆಱೆವವರ ಕೇಡಿಂಗೆ ನಾನು ಮಱುಗುವೆನು ಕಾಣಾ
ಗುಹೇಶ್ವರ.
೬೧.
ಆಸೆಗೆ ಸತ್ತುದು ಕೋಟಿ !
ಆಮಿಷಕ್ಕೆ ಸತ್ತುದು ಕೋಟಿ !
ಹೊನ್ನು-ಹೆಣ್ಣು-ಮಣ್ಣಿಂದು ಸತ್ತುದು ಕೋಟಿ !
ಗುಹೇಶ್ವರ,
ನಿಮಗಾಗಿ ಸತ್ತವರನಾರನೂ ಕಾಣೆ !!
೬೨.
ಹೃದಯಕಮಲದೊಳಗೊಂದು
ಮಱಿದುಂಬಿ ಹುಟ್ಟಿತ್ತು !
ಹಾರಿ ಹೋಗಿ ಆಕಾಶವ ನುಂಗಿತ್ತಯ್ಯಾ !!
ಆ ತುಂಬಿಯ ಗಱಿಯ ಗಾಳಿಯಲ್ಲಿ
ಮೂಱು ಲೋಕವೆಲ್ಲವೂ ತಲೆಕೆಳಗಾಯಿತ್ತು !!!
ಪಂಚವರ್ಣದ ಹಂಸೆಯ ಪಂಜರವ ಖಂಡಿಸಿದರೆ
ಗಱಿ ಮುಱಿದು, ತುಂಬಿ ನೆಲಕ್ಕುರುಳಿತ್ತು !
ನಿಜದುದಯದ ಬೆಡಗಿನ ಕೀಲ -
ಗುಹೇಶ್ವರ,
ನಿಮ್ಮ ಶರಣರನುಭಾವಸಂಗದಲ್ಲಿದ್ದು ಕಂಡೆನಯ್ಯ.
೬೩.
ಕಬ್ಬಿನಲ್ಲಿ ಬಿಲ್ಲ ಮಾಡಿ
ಪರಿಮಳದಲ್ಲಿ ಅಂಬ ಮಾಡಿ
ನಲ್ಲೋ ಬಿಲ್ಲಾಳೇ,
ಎನ್ನ ಮನದಲ್ಲಿ ಎಸೆಯ ಬಲ್ಲೆಯಲ್ಲಾ
ಗುಹೇಶ್ವರನೆಂಬ ಲಿಂಗವನು ?!
೬೪.
ಅಮರಾವತಿಯ ಪಟ್ಟಣದೊಳಗೆ
ದೇವೇಂದ್ರನಾಳುವ ನಂದನವನವಯ್ಯ !
ಅತ್ತ ಸಾರೆಲೆ ಕಾಮ, ಮೋಹವೆ ನಿನಗೆ ?
ಲೋಕಾದಿಲೋಕವನೆಲ್ಲವ ಮರುಳುಮಾಡಿದೆ-
ಕಾಮ, ಗುಹೇಶ್ವರಲಿಂಗವನಱಿ ಭೋ!
೬೫.
ಎಸೆಯದಿರು, ಎಸೆಯದಿರು
ಕಾಮ, ನಿನ್ನ ಬಾಣ ಹುಸಿಯಲೇಕೋ ?
ಲೋಭ-ಮೋಹ-ಮದ-ಮತ್ಸರ
ಇವು ಸಾಲದೇ ನಿನಗೆ ?
ಗುಹೇಶ್ವರಲಿಂಗದ ವಿರಹದಲ್ಲಿ ಬೆಂದವರ
ಮರಳಿ ಸುಡಲುಂಟೇ ಮರುಳು ಕಾಮ ?!
೬೬.
ಬಿಸುವಂತೆ ! ಜವಳಿಗಂಭ !!
ಲೇಸಾಯಿತ್ತು ಮನೆ
ಲೇಸಾಯಿತ್ತು ಮೇಲುವೊದಿಕೆ
ಮಗುಳೆ ಆ ಅಂಗಕ್ಕೆ ಕಿಚ್ಚನಿಕ್ಕಿ
ಮನೆಯನಿಂಬುಮಾಡಿದೆ ಲಿಂಗಜಂಗಮಕ್ಕೆ !
ಹುಟ್ಟುಗೆಟ್ಟು ಬಟ್ಟಬಯಲಲ್ಲಿ ನಾನಿದೇನೆ ಗುಹೇಶ್ವರ.
೬೭.
ತನು ತರತರಂಬೋಗಿ
ಮನವು ನಿಮ್ಮಲ್ಲಿ ಸಿಲುಕಿತ್ತಯ್ಯ.
ನೋಟವೇ ಪ್ರಾಣವಾಗಿ
ಆಪ್ಯಾಯನ ನಿಮ್ಮಲ್ಲಿ ಅಱಿತುದಯ್ಯ
ಸಿಲುಕಿತ್ತು ಶೂನ್ಯದೊಳಗೆ
ಗುಹೇಶ್ವರ ನಿರಾಳವಯ್ಯ.
೬೮.
ಮನ ಬಸುಱಾದರೆ ಕೈ ಬೆಸಲಾಯಿತ್ತ ಕಂಡೆ !
ಕರ್ಪುರದ ಕಂಪ ಕಿವಿ ಕುಡಿಯಿತ್ತ ಕಂಡೆ !
ಮುತ್ತಿನ ಢಾಳವ ಮೂಗು ನುಂಗಿತ್ತ ಕಂಡೆ !
ಕಂಗಳು ಹಸಿದು ವಜ್ರವ ನುಂಗಿತ್ತ ಕಂಡೆ !
ಒಂದು ನೀಲದೊಳಗೆ ಮೂಱು ಲೋಕವಡಗಿತ್ತ ಕಂಡೆ !
ಗುಹೇಶ್ವರ.
೬೯.
ನಿಚ್ಚಕ್ಕೆ ನಿಚ್ಚ ಒತ್ತೆಯ ಬೇಡಿದಡೆ
ಅಚ್ಚಿಗವಾಯಿತ್ತವ್ವಾ, ನಮ್ಮ ನಲ್ಲಂಗೆ
ಕಿಚ್ಚನೆ ಹೊತ್ತುಕೊಂಡು
ಅಚ್ಚನೆಯಾಡಲು
ಅಚ್ಚುಗವಾಯಿತ್ತವ್ವಾ, ನಮ್ಮ ನಲ್ಲಂಗೆ !
ಅಚ್ಚನೆಯ ಗಳಿಹವನಿಳುಹಿದರೆ
ಬಳಿಕ ನಿಶ್ಚಿಂತವಾಯಿತ್ತು, ಗುಹೇಶ್ವರ !!!
೭೦.
ಆಸೆಯೆಂಬ ಕೂಸನೆತ್ತಲು
ರೋಷವೆಂಬ ತಾಯಿ ಮುಂದೆ ಬಂದಿಪ್ಪಳು ನೋಡಾ !
ಇಂತೆರಡಿಲ್ಲದ ಕೂಸನೆತ್ತಬಲ್ಲಡೆ
ಅವ ಅಚ್ಚ ಶೀಲವಂತನೆಂಬೆ ಕಾಣಾ ಗುಹೇಶ್ವರ.
೭೧.
ತಾಯಿ ಬಂಜೆಯಾದಲ್ಲದೆ ಶಿಶು ಗತವಾಗದು.
ಬೀಜ ನಷ್ಟವಾದಲ್ಲದೆ ಸಸಿ ಗತವಾಗದು
ನಾಮ ನಷ್ಟವಿಲ್ಲದೆ ನೇಮ ನಷ್ಟವಾಗದು
ಮೊದಲುಗೆಟ್ಟಲ್ಲದೆ ಲಾಭದಾಸೆ ಬಿಡದು
ಗುಹೇಶ್ವರಲಿಂಗದ ನಿಜವನೆಯ್ದುವಡೆ
ಪೂಜೆಯ ಫಲ ಮಾದಲ್ಲದೆ ಭವಂ ನಾಸ್ತಿಯಾಗದು.
೭೨.
ಬೆಟ್ಟಕ್ಕೆ ಚಳಿಯಾದಡೆ
ಏನ ಹೊದಿಸುವಿರಯ್ಯ !
ಬಯಲು ಬತ್ತಲೆಯಾದಡೆ
ಏನ ನುಡಿಸುವರಯ್ಯ ?
ಭಕ್ತನು ಭವಿಯಾದಡೆ
ಏನನುಪಮಿಸುವೆನಯ್ಯ - ಗುಹೇಶ್ವರ ?
೭೩.
ಸತ್ತ ಬಳಿಕ ಮುಕ್ತಿಯ ಹಡೆದಹೆನೆಂದು
ಪೂಜಿಸ ಹೋದರೆ
ಆ ದೇವರೇನ ಕೊಡುವರೋ ?
ಸಾಯದೆ-ನೋಯದೆ-ಸ್ವತಂತ್ರನಾಗಿ
ಸಂದು-ಭೇದವಿಲ್ಲದಿಪ್ಪ, ಗುಹೇಶ್ವರ, ನಿಮ್ಮ ಶರಣ.
ಮಾಹೇಶ್ವರ ಸ್ಥಲ
೭೪.
ಕುರೂಪಿ
ಸುರೂಪಿಯ ನೆನೆದಡೆ
ಸುರೂಪಿಯಪ್ಪನೆ ?
ಆ ಸುರೂಪಿ
ಕುರೂಪಿಯ ನೆನದಡೆ
ಕುರೂಪಿಯಪ್ಪನೆ ?
ಧನವುಳ್ಳವರ ನೆನೆದಡೆ ದರಿದ್ರ ಹೋಹುದೇ ?
ಪುರಾತರ ನೆನೆದು ಕೃತಾರ್ಥರಾದೆವೆಂಬರು !
ತಮ್ಮಲ್ಲಿ ಭಕ್ತಿನಿಷ್ಠೆಯಿಲ್ಲದವರ ಕಂಡಡೆ
ಮೆಚ್ಚನು ಗುಹೇಶ್ವರನು.
೭೫.
ಕಾರಣವಿಲ್ಲ, ಕಾರ್ಯವಿಲ್ಲ.
ಏತಕ್ಕೆ ಭಕ್ತರಾದೆವೆಂಬಿರೋ ?
ಐವರ ಬಾಯ ಎಂಜಲನುಂಬಿರಿ !
ಐವರು ಸ್ತ್ರೀಯರ ಮುಖವನಱಿಯಿರಿ !
ಮೂಱು ಸಂಕಲೆಯ ಕಳೆಯಲಱಿಯಿರಿ !
ಕಾಯವಿಡಿದು ಲಿಂಗವ ಮುಟ್ಟಿಹೆನೆಂಬ
ಭ್ರಮೆಯ ನೋಡಾ, ಗುಹೇಶ್ವರ.
೭೬.
ಉದಯವಾಯಿತ್ತ ಕಂಡು
ಉದರಕ್ಕೆ ಕುದಿವರಯ್ಯ !
ಕತ್ತಲೆಯಾಯಿತ್ತ ಕಂಡು
ಮಜ್ಜನಕ್ಕೆಱೆವರಯ್ಯ ! ಲಿಂಗಕ್ಕೆ ನೇಮವಿಲ್ಲ !
ಇರುಳಿಗೊಂದು ನೇಮ !
ಹಗಲಿಗೊಂದು ನೇಮ ! ಲಿಂಗಕ್ಕೆ ನೇಮವಿಲ್ಲ !
ಕಾಯ ಒಂದೆಸೆ
ಜೀವ ಒಂದೆಸೆ
ಗುಹೇಶ್ವರನೆಂಬ ಲಿಂಗವು ತಾನೊಂದೆಸೆ !
೭೭.
ಅಗ್ರವಣಿ-ಪತ್ರೆ-ಧೂಪ-ದೀಪನಿವಾಳಿಯಲ್ಲಿ
ಪೂಜಿಸಿ ಪೂಜಿಸಿ ಬಳಲುತ್ತೈದಾರೆ !
ಏನೆಂದಱಿಯರು ! ಎಂತೆಂದಱಿಯರು !
ಜನಮರುಳೋ ಜಾತ್ರೆ ಮರುಳೋ-
ಎಂಬಂತೆ ಎಲ್ಲರೂ ಪೂಜಿಸಿ
ಏನನೂ ಕಾಣದೆ
ಲಯವಾಗಿ ಹೋದರು, ಗುಹೇಶ್ವರ.
೭೮.
ಮಜ್ಜನಕ್ಕೆಱೆದು ಫಲವ ಬೇಡುವರಯ್ಯ
ತಮಗೆಲ್ಲಿಯದೋ ಆ ಫಲವು ಸೀತಾಳಕ್ಕಲ್ಲದೆ ?
ಪತ್ರೆ-ಪುಷ್ಪದಲ್ಲಿ ಪೂಜಿಸಿ ಫಲವು ಬೇಡುವರಯ್ಯ
ತಮಗೆಲ್ಲಿಯದೋ ಆ ಫಲವು ಗಿಡುಗಳಿಗಲ್ಲದೆ ?
ಸಯಿಧಾನವರ್ಪಿಸಿ ಪ್ರಸಾದದ ಫಲವ ಬೇಡುವರಯ್ಯ
ತಮಗೆಲ್ಲಿಯದೋ ಆ ಫಲವು ಹದಿನೆಂಟು ಧಾನ್ಯಕ್ಕಲ್ಲದೆ ?
ಲಿಂಗದೊಡೆಯ ಲಿಂಗಕ್ಕೆ ಕೊಟ್ಟು
ಫಲವ ಬೇಡುವ ಸರ್ವಾನ್ಯಾಯಿಗಳನೇನೆಂಬೆ ಗುಹೇಶ್ವರ.
೭೯.
ಜಾಲಗಾಱನ ಕಾಲು ಮುಳ್ಳು ತಾಗಿ ನೊಂದಿತ್ತೆಂಬಂತೆ
ಸೂನೆಗಾಱನ ಮನೆಯಲ್ಲಿ ಹೆಣ ಹೋಗಿ ಅಳುವಂತೆ
ಕನ್ನಗಳ್ಳನ ಮನೆಯಲ್ಲಿ ಬಟ್ಟಲು ಹೋಗಿ ಮಱುಗುವಂತೆ
ಠಕ್ಕನ ಪೂಜೆಗೆ ಮೆಚ್ಚುವನೇ ನಮ್ಮ ಗುಹೇಶ್ವರನು ?
೮೦.
ಸಾಸವೆಯಷ್ಟು ಸುಖಕ್ಕೆ
ಸಾಗರದಷ್ಟು ದುಃಖ ನೋಡಾ !
ಘಳಿಗೆಯ ಬೇಟವ ಮಾಡಿಹೆನೆಂಬ
ಪರಿಯ ನೋಡಾ !
ತನ್ನನಿಕ್ಕಿ ನಿಧಾನವ ಸಾಧಿಸಿಹೆನೆಂದಡೆ
ಬಿನ್ನಾಣ ತಪ್ಪಿತ್ತು ಗುಹೇಶ್ವರ.
೮೧.
ಮಜ್ಜನಕ್ಕೆಱೆವರೆಲ್ಲಾ ಇದ್ದಲ್ಲಿ ಫಲವೇನು ?
ಮುದ್ರೆಧಾರಿಗಳಪ್ಪರಯ್ಯ !
ಲಿಂಗದಲ್ಲಿ ನಿಷ್ಠೆಯಿಲ್ಲ
ಜಂಗಮದಲ್ಲಿ ಪ್ರೇಮಿಗಳಲ್ಲ
ವೇಷಲಾಂಛನಧಾರಿಗಳಪ್ಪರಯ್ಯ !
ನೋಡಿ ಮಾಡುವ ಭಕ್ತಿ ಸಜ್ಜನಸಾರಾಯವಲ್ಲ
ಗುಹೇಶ್ವರ ಮೆಚ್ಚನಯ್ಯ !
೮೨.
ಕೊಟ್ಟ ಕುದುರೆಯನೇಱಲಱಿಯದೆ
ಮತ್ತೊಂದು ಕುದುರೆಯ ಬಯಸುವರು
ವೀರರೂ ಅಲ್ಲ ! ಧೀರರೂ ಅಲ್ಲ !!
ಇದು ಕಾರಣ
ನೆಱೆ ಮೂಱು ಲೋಕವೆಲ್ಲವೂ
ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ
ಗುಹೇಶ್ವರನೆಂಬ ಲಿಂಗವನವರೆತ್ತಬಲ್ಲರೋ ?
೮೩.
ಜೀವವಿಲ್ಲದ ಹೆಣನ ಹಿಡಿದಾರುವರಯ್ಯ
ಪ್ರತಿಯಿಲ್ಲದ ಪ್ರತಿಗೆ ಪ್ರತಿಯ ಮಾಡುವರಯ್ಯ
ಶಿರವಿಲ್ಲದ ಮುಂಡಕ್ಕೆ ಸೇಸೆಯನಿಕ್ಕುವರು ಗುಹೇಶ್ವರ !
೮೪.
ಆದ್ಯರಲ್ಲ ! ವೇದ್ಯರಲ್ಲ !
ಸಾಧ್ಯರಲ್ಲದ ಹಿರಿಯರ ನೋಡಾ !
ತನುವಿಕಾರ ! ಮನವಿಕಾರ !
ಇಂದ್ರಿಯವಿಕಾರದ ಹಿರಿಯರ ನೋಡಾ !
ಶಿವಚಿಂತೆ ಶಿವಜ್ಞಾನಿಗಳ ಕಂಡರೆ
ಅಳವಾಡಿ ನುಡಿವರು
ಗುಹೇಶ್ವರನಱಿಯದ ಕರ್ಮಿಗಳಯ್ಯ !
೮೫.
ಆಳವಱಿಯದ ಭಾಷೆ
ಬಹುಕುಳವಾದ ನುಡಿ
ಇಂತೆರಡಱ ನುಡಿ ಹುಸಿಯಯ್ಯ !
ಬಹುಭಾಷಿತರು, ಸುಭಾಷಿತವರ್ಜಿತರು
"ಶರಣಸತಿ ಲಿಂಗಪತಿ" ಎಂಬರು
ಹುಸಿಯಯ್ಯ !
ಇಂತಪ್ಪವರ ಕಂಡು ನಾಚಿದೆನಯ್ಯ ಗುಹೇಶ್ವರ.
೮೬.
ದೇಶ ಗುಱಿಯಾಗಿ
ಲಯವಾಗಿ ಹೋದವರ ಕಂಡೆ !
ತಮಂಧ ಗುಱಿಯಾಗಿ
ಲಯವಾಗಿ ಹೋದವರ ಕಂಡೆ !
ಕಾಮ ಗುಱಿಯಾಗಿ
ಬೆಂದುಹೋದವರ ಕಂಡೆ !
ನೀ ಗುಱಿಯಾಗಿ
ಲಯವಾಗಿ ಹೋದವರನಾರನೂ ಕಾಣೆ ಗುಹೇಶ್ವರ.
೮೭.
ಮರನೊಳಗಣ ಪತ್ರೆ ಫಲಂಗಳು
ಮರ ಕಾಲವಶದಲ್ಲಿ ತೋರುವಂತೆ,
ಹರನೊಳಗಣ ಪ್ರಕೃತಿಸ್ವಭಾವಂಗಳು
ಹರಭಾವದಿಚ್ಚೆಗೆ ತೋಱುವವು !
ಲೀಲೆಯಾದಡುಮಾಪತಿ
ಲೀಲೆ ತಪ್ಪಿದಡೆ ಸ್ವಯಂಭು ಗುಹೇಶ್ವರ.
೮೮.
ಓಡಿನೊಳಗುಂಟೆ ಕನ್ನಡಿಯ ನೋಟ ?
ಮರುಳಿನ ಕೂಟ ವಿಪರೀತಚರಿತ್ರ !
ನೋಟದ ಸುಖ ತಾಗಿ ಕೋಟಲೆಗೊಂಡೆನು
ಗುಹೇಶ್ವರನೊಬ್ಬನೆ ಅಚಳ
ಉಳಿದವರೆಲ್ಲರೂ ಸೂತಕಿಗಳು.
೮೯.
ಸತಿ ಭಕ್ತೆಯಾದಡೆ ಹೊಲೆಗಂಜಲಾಗದು.
ಪತಿ ಭಕ್ತನಾದಡೆ ಕುಲಕಂಜಲಾಗದು.
ಸತಿ-ಪತಿಯೆಂಬ ಅಂಗಸುಖ ಹಿಂಗಿ
ಲಿಂಗವೆ ಪತಿಯಾದ ಬಳಿಕ
ಸತಿಗೆ ಪತಿಯುಂಟೆ?
ಪತಿಗೆ ಸತಿಯುಂಟೆ?
ಪಾಲುಂಡು ಮೇಲುಂಬರೇ ಗುಹೇಶ್ವರ ?!
೯೦.
ಪಂಚೇಂದ್ರಿಯ ಸಪ್ತಧಾತುವನತಿಗಳೆದಲ್ಲಿ
ಘನವೇನೋ ?
ಕಾಮ-ಕ್ರೋಧ-ಲೋಭ-ಮೋಹ-
ಮದ-ಮತ್ಸರವಿಷಯವನತಿಗಳೆದಲ್ಲಿ
ಫಲವೇನೋ ?
ಇವೆಲ್ಲವ ಕೊಂದ ಪಾಪ ನಿಮ್ಮ ತಾಗುವುದು,
ಗುಹೇಶ್ವರ.
೯೧.
ಲಿಂಗ ಒಳಗೋ ಹೊಱಗೋ ?
ಬಲ್ಲಡೆ ನೀವು ಹೇಳಿರೇ !
ಲಿಂಗ ಎಡನೋ ಬಲನೋ ?
ಬಲ್ಲಡೆ ನೀವು ಹೇಳಿರೇ !
ಲಿಂಗ ಮುಂದೋ ಹಿಂದೋ ?
ಬಲ್ಲಡೆ ನೀವು ಹೇಳಿರೇ !
ಲಿಂಗ ಸ್ಥೂಲವೋ ಸೂಕ್ಷ್ಮವೋ ?
ಬಲ್ಲಡೆ ನೀವು ಹೇಳಿರೇ !
ಲಿಂಗ ಪ್ರಾಣವೋ, ಪ್ರಾಣ ಲಿಂಗವೋ ?
ಬಲ್ಲಡೆ ನೀವು ಹೇಳಿರೇ ? ಗುಹೇಶ್ವರ.
೯೨.
ತನುವಿಂಗೆ ತನುವಾಗಿ
ಮನಕ್ಕೆ ಮನವಾಗಿ
ಜೀವಕ್ಕೆ ಜೀವವಾಗಿ ಇದ್ದುದನಾರು ಬಲ್ಲರೋ ?!
ಅದು ದೂರವೆಂದು
ಸಮೀಪವೆಂದು
ಮಹಂತ ಗುಹೇಶ್ವರನೊಳಗೆಂದು
ಹೊಱಗೆಂದು
ಬಱುಸೂಱೆವೋದರು !
ಪ್ರಸಾದಿ ಸ್ಥಲ
೯೩.
ಲಿಂಗಾರ್ಚನೆಯಿಲ್ಲದ ಮುನ್ನ
ಸಿಂಗಿಯಾನಾರೋಗಿಸಿದಿರಿ
ಸಂಜೆ ಸಮಾಧಿಗಳಿಲ್ಲದ ಮುನ್ನ ಉಂಡಿರಿ ಚೆನ್ನನ ಮನೆಯಲ್ಲಿ
ಚಿತ್ರಗುಪ್ತರಱಿಯದ ಮುನ್ನ ಎತ್ತಿದಿರಿ ಕಾಂಚಿಯ ಪುರವ
ಬೈಚಿಟ್ಟಿರಿ ಕೈಲಾಸವ ನಿಮ್ಮ ಚಿಕ್ಕುಟಾಧಾರದಲ್ಲಿ
ಈರೇಳು ಭುವನಂಗಳೆಲ್ಲವೂ ನಿಮ್ಮ ರೋಮಕೂಪದಲ್ಲಡಗಿದವು
ಪ್ರಾಣಾಪಾನ ವ್ಯಾನೋದಾನ ಸಮಾನರಹಿತ ಗುಹೇಶ್ವರ.
೯೪.
ತ್ರಿವಿಧ ನಿತ್ಯವ
ತ್ರಿವಿಧ ಅನಿತ್ಯವ ಬಲ್ಲವರಾರೋ ?
ತ್ರಿವಿಧಕ್ಕೆ ತ್ರಿವಿಧವನಿತ್ತು
ತ್ರಿವಿಧಪ್ರಸಾದದ ಕೊಳಬಲ್ಲಡೆ
ಆತನ ಧೀರನೆಂಬೆ !
ಆತನ
ಗುಹೇಶ್ವರಲಿಂಗದಲ್ಲಿ ಅಚ್ಚಪ್ರಸಾದಿಯೆಂಬೆ !
೯೫.
ಬೇಡದ ಮುನ್ನ ಮಾಡಬಲ್ಲಡೆ ಭಕ್ತ
ಬೇಡುವನೆ ಲಿಂಗಜಂಗಮ ?
ಬೇಡುವರಿಗೆಯೂ
ಬೇಡಿಸಿಕೊಂಬವರಿಗೆಯೂ
ಪ್ರಸಾದವಿಲ್ಲ ಗುಹೇಶ್ವರ.
೯೬.
ಒಳಗ ತೊಳೆಯಲಱಿಯದೇ
ಹೊಱಗ ತೊಳೆದು ಕುಡಿಯುತ್ತಿದ್ದರಯ್ಯ !
ಪಾದೋದಕ-ಪ್ರಸಾದವನಱಿಯದೆ
ಬಂದ ಬಟ್ಟೆಯಲ್ಲಿ ಮುಳುಗುತ್ತೈದಾರೆ ಗುಹೇಶ್ವರ.
೯೭.
ಮಾಡಿದ ಓಗರ ಮಾಡಿದಂತೆ ಇದ್ದಿತು
ನೀಡುವ ಕೈಗಳೆಡೆಯಾಡುತ್ತಿದ್ದವು.
ಲಿಂಗಕ್ಕರ್ಪಿತವ ಮಾಡಿದೆನೆಂಬರು.
ಒಂದಱಲೊಂದು ಸವೆಯದು ನೋಡಾ
ಲಿಂಗನಾರೋಗಣೆಯ ಮಾಡಿದನೆಂಬರು
ತಾವುಂಡು ನಿಮ್ಮ ದೂಱುವರು ಗುಹೇಶ್ವರ.
೯೮.
ತನ್ನ ಮುಟ್ಟಿ ನೀಡಿದುದೇ ಪ್ರಸಾದ.
ತನ್ನ ಮುಟ್ಟದೇ ನೀಡಿದುದೇ ಓಗರ.
ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದಿ.
ಇದುಕಾರಣ-
ಇಂತಪ್ಪ ಭೃತ್ಯಾಚಾರಿಗಲ್ಲದೆ ಪ್ರಸಾದವಿಲ್ಲ ಗುಹೇಶ್ವರ.
೯೯.
ಆಧಿಯಿಲ್ಲದಿದ್ದಡೆ
ಲಿಂಗಪ್ರಸಾದಿಯೆಂಬೆ !
ವ್ಯಾಧಿಯಿಲ್ಲದಿದ್ದಡೆ
ಜಂಗಮಪ್ರಸಾದಿಯೆಂಬೆ !
ಲೌಕಿಕ ಸೋಂಕದಿದ್ದಡೆ
ಸಮಯಪ್ರಸಾದಿಯೆಂಬೆ !
ಇಂತೀ ತ್ರಿವಿಧಪ್ರಸಾದಸಂಬಂಧಿಯಾದಾತನ
ಅಚ್ಚಪ್ರಸಾದಿಯೆಂಬೆನು ಕಾಣಾ ಗುಹೇಶ್ವರ.
೧೦೦.
ಪದವನರ್ಪಿಸಬಹುದಲ್ಲದೆ
ಪದಾರ್ಥವನರ್ಪಿಸಬಾರದು !
ಓಗರವನರ್ಪಿಸಬಹುದಲ್ಲದೆ
ಪ್ರಸಾದವನರ್ಪಿಸಬಾರದು !
ಗುಹೇಶ್ವರ, ನಿಮ್ಮ ಶರಣರು
ಹಿಂದ ನೋಡಿ ಮುಂದನರ್ಪಿಸಿದರು !
ಪ್ರಾಣಲಿಂಗಿ ಸ್ಥಲ
೧೦೧.
ಪ್ರಣವಮಂತ್ರವ ಕರ್ಣದಲಿ ಹೇಳಿ
ಶ್ರೀಗುರು ಶಿಷ್ಯನ ಅಂಗದ ಮೇಲೆ
ಲಿಂಗಪ್ರತಿಷ್ಠೆಯ ಮಾಡಿದ ಬಳಿಕ
ಪ್ರಾಣದಲಿ ಲಿಂಗವಿಪ್ಪುದೆಂಬ
ವ್ರತಗೇಡಿಗಳ ಮಾತ ಕೇಳಲಾಗದು.
ಒಳಗಿಪ್ಪನೇ ಲಿಂಗದೇವನು
ಮಲ-ಮೂತ್ರ-ಮಾಂಸದ ಹೇಸಿಕೆಯೊಳಗೆ ?
ಅಲ್ಲಿ ಪ್ರಾಣವಿಪ್ಪುದಲ್ಲದೆ ಲಿಂಗವಿಪ್ಪುದೇ ?
ಆ ಪ್ರಾಣವ ತಂದು
ತನ್ನ ಇಷ್ಟಲಿಂಗದಲ್ಲಿರಿಸಿ ನೆರೆಯ ಬಲ್ಲಡೆ
ಆತನೆ ಪ್ರಾಣಲಿಂಗಸಂಬಂಧಿ !
ಅಲ್ಲದವರ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು ?
೧೦೨.
ಕದಳಿಯ ಬನವ ಹೊಕ್ಕು
ಹೊಲಬ ತಿಳಿಯದನ್ನಕ್ಕ,
ಬಯಲ ಗಾಳಿಯ ಹಿಡಿದು
ಘಟ್ಟಿ ಮಾಡದನ್ನಕ್ಕ,
ಬಱಿದೆ ಬಹುದೇ ಶಿವಜ್ಞಾನ ?
ಷಡುವರ್ಗವಳಿಯದನ್ನಕ್ಕ
ಅಷ್ಟಮದವಳಿಯದನ್ನಕ್ಕ
ಬಱಿದೆ ಬಹುದೇ ಶಿವಸಂಪದ ?
ಮದಮತ್ಸರವ ಮಾಡಲಿಲ್ಲ !
ಹೊದಕುಳಿಗೊಳಲಿಲ್ಲ
ಗುಹೇಶ್ವರಲಿಂಗ ಕಲ್ಪಿತದೊಳಗಲ್ಲ !
೧೦೩.
ಶಬ್ದ ಸ್ಪರ್ಶ ರೂಪ ರಸ ಗಂಧ
ಪಂಚೇಂದ್ರಿಯ ಸಪ್ತಧಾತು ಅಷ್ಟಮದದಿಂದ
ಮುಂದುಗಾಣದವರು ನೀವು ಕೇಳಿರೇ !
ಲಿಂಗವಾರ್ತೆಯ ವಚನರಚನೆಯ
ಮಾತನಾಡುವಿರಯ್ಯ !
ಸಂಸಾರದ ಮುಚ್ಚು ಬಿಡದನ್ನಕ್ಕರ
ಸೂಕ್ಷ್ಮಶಿವಪಥವು ಸಾಧ್ಯವಾಗದು.
ಗುಹೇಶ್ವರಲಿಂಗದಲಿ
ವಾಕು ಪಾಕವಾದಡೇನು ?
ಮನ ಪಾಕವಾಗದನ್ನಕ್ಕರ ?!
೧೦೪.
ಮರ್ತ್ಯಲೋಕದ ಮಾನವರು
ದೇಗುಲದೊಳಗೊಂದು ದೇವರ ಮಾಡಿದಡೆ
ಆನು ಬೆಱಗಾದೆನಯ್ಯ !
ನಿಚ್ಚಕ್ಕೆ ನಿಚ್ಚ ಅರ್ಚನೆಪೂಜನೆಯ ಮಾಡಿಸಿ
ಭೋಗವ ಮಾಡುವರ ಕಂಡು ನಾನು ಬೆಱಗಾದೆನು
ಗುಹೇಶ್ವರ,
ನಿಮ್ಮ ಶರಣರು ಹಿಂದೆ ಲಿಂಗವನಿರಿಸಿ ಹೋದರು.
೧೦೫.
ಭಾವದಲೊಬ್ಬ ದೇವರ ಮಾಡಿ
ಮನದಲೊಂದು ಭಕ್ತಿಯ ಮಾಡಿ
ಕಾಯದ ಕೈಯಲ್ಲಿ ಕಾರ್ಯವುಂಟೆ ?
ವಾಯಕ್ಕೆ ಬಳಲುವರು ನೋಡಾ !
ಎತ್ತನೇಱಿ ಎತ್ತನಱಸುವರು ಎತ್ತ ಹೋದರೈ
ಗುಹೇಶ್ವರ ?
೧೦೬.
ಹೊಟ್ಟೆಯ ಮೇಲೆ
ಕಟ್ಟೋಗರದ ಮೊಟ್ಟೆಯ ಕಟ್ಟಿದರೇನು?
ಹಸಿವು ಹೋಹುದೇ ?
ಅಂಗದ ಮೇಲೆ ಲಿಂಗ ಸ್ವಾಯತವಾದರೇನು ?
ಭಕ್ತನಾಗಬಲ್ಲನೆ ?
ಇಟ್ಟ ಕಲ್ಲು ಮೆಳೆಯ ಮೇಲೆ ಸಿಕ್ಕಿದಡೆ
ಆ ಕಲ್ಲು ಲಿಂಗವೆ ?
ಆ ಮೆಳೆ ಭಕ್ತನೆ ?
ಇಟ್ಟಾತ ಗುರುವೆ ?
ಇಂತಪ್ಪನವರ ಕಂಡರೆ ನಾಚುವೆನಯ್ಯ ಗುಹೇಶ್ವರ.
೧೦೭.
ಇಷ್ಟಲಿಂಗವನು ಪ್ರಾಣಲಿಂಗವೆಂಬ
ಕಷ್ಟವೆಲ್ಲಿಯದೋ ?
ಇಷ್ಟಲಿಂಗ ಹೋದರೆ ಪ್ರಾಣಲಿಂಗ ಹೋಗದು ನೋಡಾ !
ಇಷ್ಟಲಿಂಗ-ಪ್ರಾಣಲಿಂಗವೆಂಬ ಬೇಧವನು
ಗುಹೇಶ್ವರ, ನಿಮ್ಮ ಶರಣ ಬಲ್ಲ.
೧೦೮.
ವ್ರತಗೇಡಿ, ವ್ರತಗೇಡಿ ಎಂಬವ ತಾನೆ ವ್ರತಗೇಡಿ,
ವ್ರತಗೆಡಲಿಕೇನು ಹಾಲಂಬಿಲವೆ ?
ವ್ರತಗೆಟ್ಟ ಬಳಿಕ ಘಟ ಉಳಿಯಬಲ್ಲುದೇ ?
ಕಾಯದೊಳಗೆ ಜೀವ ಉಳ್ಳನ್ನಕ್ಕರ
ಅದೇ ಪ್ರಾಣಲಿಂಗವು ಕಾಣಾ ಗುಹೇಶ್ವರ.
೧೦೯.
ಅಂಗದ ಕಳೆಯಲೊಂದು ಲಿಂಗವ ಕಂಡೆ
ಲಿಂಗದ ಕಳೆಯಲೊಂದು ಅಂಗವ ಕಂಡೆ !
ಅಂಗದ ಲಿಂಗದ ಸಂದಣಿಯನಱಸಿ ಕಂಡೆ ನೋಡಿರೇ !
ಇಲ್ಲಿ ಐದಾನೆ ಶಿವನು !
ಬಲ್ಲಡೆ ಇರಿಸಿಕೊಳ್ಳಿರೇ ಕಾಯವಳಿಯದ ಮುನ್ನ !!
ನೋಡಬಲ್ಲಡೆ ಗುಹೇಶ್ವರಲಿಂಗಕ್ಕೆ ಬೇರೆ ಠಾವುಂಟೆ ಹೇಳಿರೇ.
೧೧೦.
ಪೂಜಿಸಿ ಕೆಳಯಿಂಕೆ ಇಳುಹಲದೇನೋ ?
ಅನಾಗತ ಪೂಜೆಯ ಮಾಡಲದೇನೋ ?
ದೇಹವೇ ಪಿಂಡಿಗೆ
ಜೀವವೇ ಲಿಂಗ-ಗುಹೇಶ್ವರ.
೧೧೧.
ಅಱಿದಱಿದು ಅಱಿವು ಬಱುದೊಱಿವೋಯಿತ್ತು !
"ಕುಱುಹ[ತೋಱ]ದಡೆಂತೂ ನಂಬರು,
ತೆಱಹಿಲ್ಲದ ಘನವ ನೆನೆದು
ಗುರುಶರಣೆಂಬುದಲ್ಲದೆ ಮಱಹು ಬಂದೀತೆಂ"ದು
ಗುರು ಕುಱುಹ ತೋಱಿದನಲ್ಲದೆ
ಬಲ್ಲಡೆ ಗುಹೇಶ್ವರಲಿಂಗವು ಹೃದಯದಲೈದಾನೆ.
೧೧೨.
ಉದಕ ಮೂರುತಿಯಾಗಿ
ಉದಯವಾಯಿತ್ತು ಪಿಂಡಿಗೆಯಲ್ಲಿ
ಮೂಲ ಸ್ಥಾನ ಸ್ಥಾಪ್ಯವಾಯಿತ್ತು
ಸ್ವದೇಹಶಿವಪುರದಲ್ಲಿ !
ವಾಯು ಪೂಜಾರಿಯಾಗಿ
ಪರಿಮಳದಿಂಡೆದಂಡೆಯ ಕಟ್ಟಿ
ಪೂಜಿಸುತ್ತಿರ್ದುದೋ ನವದ್ವಾರಶಿವಾಲಯದಾದಿಮಧ್ಯಸ್ಥಾನದಲ್ಲಿ
ಗುಹೇಶ್ವರನೆಂಬುದಲ್ಲಿಯೆ ನಿಂದಿತ್ತು.
೧೧೩.
ಕಾಲೇ ಕಂಭಗಳಾದವೆನ್ನ
ದೇಹವೇ ದೇಗುಲವಾದುವಯ್ಯ !
ಎನ್ನ ನಾಲಗೆಯೆ ಘಂಟೆ
ಶಿರ ಸುವರ್ಣದ ಕಳಸವಿದೇನಯ್ಯ !
ಸ್ವರವೇ ಲಿಂಗಕ್ಕೆ ಸಿಂಹಾಸನವಾಗಿರ್ದುದು !
ಗುಹೇಶ್ವರ,
ನಿಮ್ಮ ಪ್ರಾಣಲಿಂಗಪ್ರತಿಷ್ಠೆ ಪಲ್ಲಟವಾಗದಂತಿದ್ದೆನಯ್ಯ.
೧೧೪.
ಪ್ರಾಣಲಿಂಗಕ್ಕೆ ಕಾಯವೇ ಸೆಜ್ಜೆ
ಆಕಾಶಗಂಗೆಯಲ್ಲಿ ಮಜ್ಜನ
ಹೂವಿಲ್ಲದ ಪರಿಮಳದ ಪೂಜೆ
ಹೃದಯಕಮಲದಲ್ಲಿ ಶಿವಶಿವಾ ಎಂಬ ಶಬ್ದ
ಇದು ಅದ್ವೈತ ಕಾಣಾ ಗುಹೇಶ್ವರ.
೧೧೫.
ಹೊತ್ತಾರೆ ಪೂಜಿಸಲುಬೇಡ ಕಂಡಾ !
ಬೈಗೆ ಪೂಜಿಸಲುಬೇಡ ಕಂಡಾ !
ಇರುಳುವನೂ ಹಗಲುವನೂ ಕಳೆದು ಪೂಜಿಸಬೇಕು ಕಂಡಾ !
ಇಂತಪ್ಪ ಪೂಜೆಯ ಪೂಜಿಸುವರ
ಎನಗೆ ತೋಱಯ್ಯ ಗುಹೇಶ್ವರ.
೧೧೬.
ಅಂಗದಲ್ಲಿ ಮಾಡುವ ಸುಖವದು
ಲಿಂಗಕ್ಕೆ ಭೂಷಣವಾಯಿತ್ತು.
ಕಾಡುಗಿಚ್ಚಿನ ಕೈಯಲ್ಲಿ
ಕರಡವ ಕೊಯ್ಸುವಂತೆ-
ಹಿಂದೆ ಮೆದೆಯಿಲ್ಲ !
ಮುಂದೆ ಹುಲ್ಲಿಲ್ಲ !!
ಅಂಗ-ಲಿಂಗವೆಂಬನ್ನಕ್ಕರ ಫಲದಾಯಕ,
ಲಿಂಗೈಕ್ಯವದು ಬೇಱೆ ಗುಹೇಶ್ವರ.
೧೧೭.
ಎನ್ನ ಮನದ ಕೊನೆಯ ಮೊನೆಯ ಮೇಲೆ
ಅಂಗವಿಲ್ಲದ ರೂಪನ ಕಂಡು ಮರುಳಾದೆನವ್ವ !
ಆತನ ಕಂಡು ಬೆಱಗಾದೆನವ್ವ-
ಎನ್ನಂತರಂಗದ ಆತುಮನೊಳಗೆ
ಅನಿಮಿಷನಿಜೈಕ್ಯ ಗುಹೇಶ್ವರನ ಕಂಡು !
೧೧೮.
ಮನದ ಸುಖವ ಕಂಗಳಿಗೆ ತಂದರೆ
ಕಂಗಳ ಸುಖವ ಮನಕ್ಕೆ ತಂದರೆ
ನಾಚಿತ್ತು, ಮನ ನಾಚಿತ್ತು !
ಸ್ಥಾನಪಲ್ಲಟವಾದಡೆ
ವ್ರತಕ್ಕೆ ಭಂಗ ಗುಹೇಶ್ವರ.
೧೧೯.
ಎನಗೊಂದು ಲಿಂಗ
ನಿನಗೊಂದು ಲಿಂಗ
ಮನೆಗೊಂದು ಲಿಂಗವಾಯಿತ್ತು !
ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ !
ಉಳಿ ಮುಟ್ಟಿದ ಲಿಂಗವ
ಮನ ಮುಟ್ಟಬಲ್ಲುದೇ ಗುಹೇಶ್ವರ ?
೧೨೦.
ಅರಳಿಯ ಮರದ ಮೇಲೆ
ಒಂದು ಹಂಸೆ ಗೂಡನಿಕ್ಕಿತ್ತ ಕಂಡೆ !
ಆ ಗೂಡಿನೊಳಗೊಬ್ಬ ಹೆಂಗೂಸು
ಉಯ್ಯಾಲೆಯಾಡುತ್ತಿದ್ದಳು.
ಉಯ್ಯಾಲೆ ಹಱಿದು
ಹೆಂಗೂಸು ನೆಲಕ್ಕೆ ಬಿದ್ದು ಸತ್ತಡೆ
ಪ್ರಾಣಲಿಂಗವ ಕಾಣಬಹುದು ಕಾಣಾ ಗುಹೇಶ್ವರ.
೧೨೧.
ಪೃಥ್ವಿಗೆ ಹುಟ್ಟಿದ ಶಿಲೆ
ಕಲ್ಲುಕುಟಿಕಂಗೆ ಹುಟ್ಟಿದ ಮೂರುತಿ
ಮಂತ್ರಕ್ಕೆ ಲಿಂಗವಾಯಿತ್ತಲ್ಲಾ !
ಆ ಮೂವರಿಗೆ ಹುಟ್ಟಿದ ಮಗನ
ಲಿಂಗವೆಂದು ಕೈವಿಡಿವ
ಅಚ್ಚವ್ರತಗೇಡಿಗಳನೇನೆಂಬೆ ಗುಹೇಶ್ವರ.
೧೨೨.
ಮೂಱು ಪುರದ ಹೆಬ್ಬಾಗಿಲೊಳಗೊಂದು
ಕೋಡಗ ಕಟ್ಟಿದುದ ಕಂಡೆ !
ಅದು ಕಂಡಕಂಡವರನೇಡಿಸುತ್ತಿದ್ದಿತು ನೋಡಾ !
ಪುರದರಸು ತನ್ನ ಪಾಯದಳ ಸಹಿತ ಬಂದರೆ
ಒಂದೇ ಬಾರಿ ಮುಱಿದು ನುಂಗಿತ್ತ ಕಂಡೆ !
ಆ ಕೋಡಗಕ್ಕೆ ಒಡಲುಂಟು, ತಲೆಯಿಲ್ಲ ;
ಕಾಲುಂಟು, ಹೆಜ್ಜೆಯಿಲ್ಲ ;
ಕೈಯುಂಟು, ಬೆರಳಿಲ್ಲ ;
ಇದು ಕರಚೋದ್ಯ ನೋಡಾ !
ತನ್ನ ಕರೆದವರ ಮುನ್ನವೇ ತಾ ಕರೆವುದು ಆ ಕೋಡಗ
ತನ್ನ ಬಸಿಱಲ್ಲಿ ಬಂದ ಮದಗಜದ ನೆತ್ತಿಯನೇಱಿ
ಗಾಳಿಯ ಧೂಳಿಯ ಕೂಡಿ ಓಲಾಡುತ್ತಿಹುದ ಕಂಡೆ !
ವಾಯದ ಗಗನದ ಮೇಲೆ
ತನ್ನ ಕಾಯವ ಪುಟನೆಗೆದು ತೋಱುತ್ತಿಹುದ ಕಂಡೆ !
ಹತ್ತು ಮುಖದ ಸರ್ಪನ
ತನ್ನ ಹೇಳಿಗೆಯೊಳಗಿಕ್ಕಿ ಆಡಿಸುತ್ತಿಹುದ ಕಂಡೆ !
ಐವರು ಕೊಡಗೂಸುಗಳ ಕಣ್ಣಿಂಗೆ
ಕಣ್ಣಡವ ಕಟ್ಟುತ್ತಿಹುದ ಕಂಡೆ !
ಹತ್ತು ಕೇರಿಗಳೊಳಗೆ ಸುಳಿವ ಹರಿಯ ನೆತ್ತಿಯ ಮೆಟ್ಟಿ
ಹುಬ್ಬನಾಡಿಸುವುದ ಕಂಡೆ !
ಆ ಕೋಡಗದ ಕೈಯಲ್ಲಿ ಮಾಣಿಕ್ಯವ ಕೊಟ್ಟಡೆ
ನೋಡುತ್ತ ನೋಡುತ್ತ ಬೆಱಗಾದುದು ಕಂಡೆ !
ಕೂಡಲಿಲ್ಲ ಕಳೆಯಲಿಲ್ಲ ! ಗುಹೇಶ್ವರನ ನಿಲುವು
ಪ್ರಾಣಲಿಂಗ ಸಂಬಂಧವಿಲ್ಲದವರಿಗೆ ಕಾಣಬಾರದು.
೧೨೩.
ಕಲ್ಲ ಮನೆಯ ಮಾಡಿ
ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದರೆ
ದೇವರೆತ್ತ ಹೋದರೋ?
ಲಿಂಗಪ್ರತಿಷ್ಠೆಯ ಮಾಡಿದವಂಗೆ
ನಾಯಕನರಕ ಗುಹೇಶ್ವರ.
೧೨೪.
ದೇಹವೇ ದೇವಾಲಯವಾಗಿದ್ದ ಮೇಲೆ
ಮತ್ತೆ ಬೇರೆ ದೇಗುಲಕ್ಕೆ ಎಡೆಯಾಡುವರಿಗೆ
ಏನ ಹೇಳುವೆನಯ್ಯ ?
ಗುಹೇಶ್ವರ, ನೀ ಕಲ್ಲಾದೆಡೆ ನಾನೇನಪ್ಪೆನು ?!
೧೨೫.
ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದರಲ್ಲಾ !
ಅಂಗಸಂಗಿಗಳೆಲ್ಲಾ ಮಹಾಘನವನಱಿಯದೆ ನಿಂದರೊ !
ಹುಸಿಯನೆ ಕೊಯ್ದು
ಹುಸಿಯನೆ ಪೂಜಿಸಿ
ಗಸಣಿಗೊಳಗಾದರು ಗುಹೇಶ್ವರ.

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......