Tuesday, January 12, 2016

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು

ಮೂಡುವನು ರವಿ ಮೂಡುವನು
ಕತ್ತಲೊಡನೆ ಜಗಳಾಡುವನು
ಪಂಜೆ ಮಂಗೇಶ ರಾಯರು
ಮೂಡಣ ರಂಗಸ್ಥಳದಲಿ ನೆತ್ತರ
ಮಾಡುವನು ಕುಣಿದಾಡುವನು
ಬೆಳಕಿನ ಕಣ್ಣುಗಳಿ೦ದಾ ಸೂರ್ಯನು
ನೋಡುವನು ಬಿಸಿಲೂಡುವನು
ಚಿಲಿಪಿಲಿ ಹಾಡನು ಹಾಡಿಸಿ ಹಕ್ಕಿಯ
ಗೂಡಿನ ಹೊರ ಹೊರ ದೂಡುವನು
ಬಂಗಾರದ ಚೆಲು ಬಿಸಿಲ ಕಿರೀಟದ
ಶೃಂಗಾರದ ತಲೆ ಎತ್ತುವನು
ತೆಂಗಿನ ಕಂಗಿನ ತಾಳೆಯ ಬಾಳೆಯ
ಅಂಗಕೆ ರಂಗನು ಮೆತ್ತುವನು
ಮಾಡಿನ ಹುಲ್ಲಲಿ ಚಿನ್ನದ ಗೆರೆಯನು
ಎಳೆಯುವನು ರವಿ ಹೊಳೆಯುವನು
ಕೂಡಲ ಕೋಣೆಯ ಕತ್ತಲೆ ಕೊಳೆಯನು
ತೊಳೆಯುವನು ರವಿ ಹೊಳೆಯುವನು
ಮಲಗಿದ ಕೂಸಿನ ನಿದ್ದೆಯ ಕಸವನು
ಗುಡಿಸುವನು ಕಣ್ ಬಿಡಿಸುವನು
ಹುಲುಗಿಡ ಹೂವಿಗೆ ಪರಿ ಪರಿ ಬಣ್ಣವ
ತೊಡಿಸುವನು ಹನಿ ತೊಡೆಸುವನು
ಏರುವನು ರವಿ ಏರುವನು
ಬಾನೊಳು ಸಣ್ಣಗೆ ತೋರುವನು
ಏರಿದವನು ಚಿಕ್ಕವನಿರಬೇಕೆಲೆ
ಎಂಬಾ ಮಾತನು ಸಾರುವನು
ಕವಿ : ಪಂಜೆ ಮಂಗೇಶ ರಾಯರು

Wednesday, November 18, 2015

ಇಳಿದು ಬಾ ತಾಯೆ ಇಳಿದು ಬಾ - ಕುವೆಂಪು

ಇಳಿದು ಬಾ ತಾಯೆ ಇಳಿದು ಬಾ - ಕುವೆಂಪು

ಓಂ ಸಚ್ಚಿದಾನಂದ ತ್ರಿತ್ವ ಮುಖವಾದ ಪರಬ್ರಹ್ಮದಲ್ಲಿ
ಅಭವದೊತ್ತಾದೆ ಭವದ ಬಿತ್ತಾದೆ ಋತದ ಚಿತ್ತಾದೆ ನೀ
ಇಳಿದು ಬಾ ಇಳೆಗೆ ತುಂಬಿ ತಾ ಬೆಳೆಗೆ ಜೀವ ಕೇಂದ್ರದಲ್ಲಿ
ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತ ಪೃಥ್ವಿಯಲ್ಲಿ ||
ಋತದ ಚಿತ್ತಾಗಿ ವಿಶ್ವಗಳ ಸೃಜಿಸಿ ನಡೆಸುತಿಹ ಶಕ್ತಿಯೆ
ಅನ್ನ ಪ್ರಾಣಗಳ ಮನೋಲೋಕಗಳ ಸೂತ್ರಧರ ಯುಕ್ತಿಯೆ
ಅಖಿಲ ಬಂಧನದ ಹೃದಯದಲ್ಲಿ ಅವಿನಾಶಿ ಆಸಕ್ತಿಯೆ
ನಿನ್ನ ಅವತಾರವೆನ್ನ ಉದ್ಧಾರ ಬಾ ದಿವ್ಯ ಮುಕ್ತಿಯೆ
ಎಲ್ಲವನು ಮಾಡಿ ಎಲ್ಲರೊಳಗೂಡಿ ನೀನೆ ಎಲ್ಲವಾದೆ
ಜ್ಯೋತಿಯಾದರೂ ತಮೋಲೀಲೆಯಲಿ ಜಡದ ಮುದ್ರೆಯಾದೆ
ಎನಿತು ಕರೆದರೂ ಓಕೊಳ್ಳದಿರುವಚಿನ್ನಿದ್ರೆಯಾದೆ
ಬೆಳಗಿ ನನ್ನಾತ್ಮಕಿಳಿದು ಬಾ ತಾಯೆ ನೀನೆ ಬ್ರಹ್ಮ ಬೋಧೆ
ಇಳಿದು ಬಾ ತಾಯೆ ಇಳಿದು ಬಾ ||
ಗಾಳಿಗುಸಿರು ನೀ ಬೆಂಕಿಗುರಿಯು ನೀನುದಕಕದರ ಜೀವ
ಅಗ್ನಿ ಇಂದ್ರ ವರುಣಾರ್ಕ ದೇವರನು ಮಾಡಿ ನೋಡಿ ಕಾವ
ಶಿವನ ಶಕ್ತಿ ನೀ, ವಿಷ್ಣು ಲಕ್ಷ್ಮೀ ನೀ, ಚತುರ್ಮುಖನ ರಾಣಿ
ದಿವ್ಯ ವಿಜ್ಞಾನ ನನ್ನೊಳುದ್ಭವಿಸೆ ಮತಿಗಾಗಮಿಸು, ವಾಣಿ
ಹೃದಯ ಪದ್ಮ ತಾನರಳೆ ಕರೆವೆ ಬಾರಮ್ಮ ಬಾ, ಇಳಿದು ಬಾ
ಮನೋದ್ವಾರ ತಾ ಬಿರಿಯೆ ಕರೆವೆ ಜಗದಂಬೆ ಬಾ, ಇಳಿದು ಬಾ
ಅಗ್ನಿ ಹಂಸ ಗರಿಗೆದರೆ ಕರೆವೆ ಬಾ ತಾಯೆ ಬಾ, ಇಳಿದು ಬಾ
ಚೈತ್ಯ ಪುರುಷ ಯಜ್ಞಕ್ಕೆ ನೀನೆ ಅಧ್ವರ್ಯು, ಬಾ, ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ ||



ಹಗಲಲ್ಲದ ಇರುಳಲ್ಲದ ನಡುಗಾಲದ - ರಾಜೇಂದ್ರ ಪ್ರಸಾದ್

ಹಗಲಲ್ಲದ ಇರುಳಲ್ಲದ ನಡುಗಾಲದ
ನೆತ್ತಿಯ ಮೇಲೆ ಎಷ್ಟೊಂದು ಉರಿದೀಪ
ಎದೆಯ ಮೇಲೆ ತೇಲಿ ಬಿಟ್ಟಂತೆ!
ಎತ್ತ ನೋಡಿದರತ್ತ ಸಾವಿನ ದೋಣಿಗಳು
ನನ್ನನೇ ಅಟ್ಟಿಸಿಕೊಂಡು ಬಂದಂತೆ
ಬಿಡಿದೆ ಬಾಗಿಲವರೆಗೆ ಬಂದು ಅಲ್ಲಿಯೇ ಕಾಯ್ದಂತೆ
ರುಂಡವಿಲ್ಲದ ಹಾರುಪಕ್ಷಿಗಳು ಯಮಪಾಶವ
ಹಿಡಿದು ಮನೆಯ ಮೇಲಣ ಮುಗಿಲೆಲ್ಲಾ ಸುತ್ತಿದಂತೆ.
ದೇಹ ಬೆವರುತ್ತಿದೆ ಬಿಸಿಹಬೆಯಂತೆ.
ಹನುಮಾss ಇಟ್ಟು ಮರೆತ ಸಂಜೀವಿನಿ ಎಲ್ಲೋ ?
ಮರೆತದ್ದು ಮಣ್ಣಾಗಲಿ ಚಮ್ಮಾರನ ಮನೆಯ
ಗಲ್ಲೇಬಾನಿಯನಾದರೂ ಮೊಗೆದು ತಾರೋ ಸಂಜೀವರಾಯ
ನಿನ್ನ ಮನೆಕಾಯ, ಉಸಿರು ಸಿಕ್ಕಿಕೊಂಡಿದೆ.
ಬಾಗಿಲಲ್ಲಿ ದೋಣಿ
ಮುಗಿಲಲ್ಲಿ ಪಕ್ಷಿ
ಎದೆಯಲ್ಲಿ ದೀಪ
ನನ್ನ ಕಾಯುತ್ತಿವೆ. ~

                                                -    ರಾಜೇಂದ್ರ ಪ್ರಸಾದ್

Monday, October 26, 2015

ಚುಟುಕ - ಸಂತೋಷ್ ಕುಮಾರ್ ಎಲ್. ಎಂ.

---1 ---

ಬತ್ತಿಯ ಬಾಯಿಗೆ
ಬೆಂಕಿಯಿಟ್ಟವನ ಆಶಯ
ಬೆಳಕಷ್ಟೇ!
ಮುಗಿಯುವ
ಅದರ ಆಯಸ್ಸಲ್ಲ

---2---------


ಗೂಡು ಕಟ್ಟಿದ್ದ ಮರವ
ಧರೆಗುರುಳಿಸಿದ ಕಾರಣ
ಹುಡುಕುತ್ತಿದ್ದ ಹಕ್ಕಿಗೆ
ವಿಳಾಸವಿಲ್ಲ...
ಹಕ್ಕಿಯೂ ಶಪಿಸಿತು,
ಉರುಳಿಸಿದ ದುರುಳನಿಗೂ
ಮುಂದೊಂದು ದಿನ
ವಿಳಾಸವಿಲ್ಲ!

ಅತೀ ಎತ್ತರದ ಕಟ್ಟಡಗಳ ಮೇಲೆ ಹಗ್ಗ ಕಟ್ಟಿ ನಡೆದ - Philippe Petit




ಚಿಕ್ಕವನಿದ್ದಾಗ ಫ್ರಾನ್ಸಿನ ಬೀದಿಗಳಲ್ಲಿ ತಿರುಗುತ್ತ, ಜನಗಳು ಅಚ್ಚರಿಪಡುವ ಪುಟ್ಟ ಪುಟ್ಟ ಸಾಹಸ ಪ್ರದರ್ಶನಗಳನ್ನು ನೀಡುತ್ತ ಸಂಪಾದಿಸುವ ಹುಡುಗ Philippe Petit. ಇದರ ಬಗ್ಗೆ ಅವರ ಅಪ್ಪ ಅಮ್ಮನಿಗೆ ಕೊಂಚವೂ ಇಷ್ಟವಿರುವುದಿಲ್ಲ. ಸರ್ಕಸ್ಸೊಂದರಲ್ಲಿ ಹಗ್ಗದ ಮೇಲೆ ನಡೆಯುವ ಸರ್ಕಸ್ಸಿನವನೊಬ್ಬನ ಕೌಶಲ್ಯದಿಂದ ಪ್ರೇರಿತನಾಗುವ Philippe Petitಗೆ ಮುಂದೆ ತಾನೂ ಈ ಸಾಹಸವನ್ನು ಮಾಡಬೇಕೆಂಬ ಆಸೆಯಾಗುತ್ತದೆ. ಅದನ್ನು ಕಲಿಯುತ್ತ ಸಾಗುವ ಹಾದಿಯಲ್ಲಿ ಆತ ಹಗ್ಗ ಕಟ್ಟಿ ಮಧ್ಯೆ ನಡೆಯಲು ಅನುಕೂಲವಾಗಬಲ್ಲ ಎರಡು ಎತ್ತರದ ವಸ್ತುಗಳನ್ನು ಸದಾ ಹುಡುಕುತ್ತಿರುತ್ತಾನೆ.
ಯಾವುದೋ ಒಂದು ದೃಶ್ಯದಲ್ಲಿ ಹಲ್ಲು ನೋವಾಗಿ Dental Clinic ಗೆ ಹೋದಾಗ, ಅಲ್ಲಿಟ್ಟ ಮ್ಯಾಗಜೈನುಗಳ ಪೈಕಿ ಒಂದರಲ್ಲಿ ಪ್ರಪಂಚದ ಅತೀ ಎತ್ತರದ ಕಟ್ಟಡ ನ್ಯೂಯಾರ್ಕಿನ WTCಯ ಬಗೆಗಿನ ಮಾಹಿತಿ ಇವನ ಕಣ್ಣಿಗೆ ಬೀಳುತ್ತದೆ. ಕೇವಲ ಅದರ ಚಿತ್ರ ನೋಡಿಯೇ ರೋಮಾಂಚನಗೊಂಡು, ಜೀವನದಲ್ಲೊಮ್ಮೆ ತಾನು ಆ ಜೋಡಿ ಕಟ್ಟಡಗಳ ಮಧ್ಯೆ ಹಗ್ಗ ಕಟ್ಟಿ ನಡೆಯಬೇಕೆಂಬ ಮಹದಾಶೆ ಆ ಕ್ಷಣದಲ್ಲೇ ಅವನೆದೆಯೊಳಗೆ ಚಿಗುರೊಡೆಯುತ್ತದೆ. ಇಂಟರ್ನೆಟ್ಟುಗಳಿಲ್ಲದ ಎಪ್ಪತ್ತರ ದಶಕಗಳಲ್ಲಿ ಕೇವಲ ಪುಸ್ತಕಗಳಲ್ಲಿ, ವೃತ್ತಪತ್ರಿಕೆಗಳಲ್ಲಿ ಬರುವ ಆ ಕಟ್ಟಡದ ಬಗೆಗಿನ ಮಾಹಿತಿಯನ್ನು ಸಂಗ್ರಹಿಸುತ್ತ ತಯಾರಿ ಶುರುವಿಟ್ಟುಕೊಳ್ಳುತ್ತಾನೆ.
ಈ ಮಧ್ಯೆ ಮನೆಯಿಂದ ಹೊರಹಾಕಿಸಿಕೊಳ್ಳುವ Philippe Petitಗೆ Annie ಪರಿಚಯವಾಗುತ್ತಾಳೆ. ಈತ ತನ್ನ ಮಹತ್ವಾಕಾಂಕ್ಷೆಯನ್ನು ಅವಳಲ್ಲಿ ಹೇಳಿಕೊಂಡಾಗ ತನ್ನಿಂದಾದ ಸಹಾಯ ಮಾಡಲು ಜೊತೆಯಾಗುತ್ತಾಳೆ. ಇನ್ನೇನಿದ್ದರೂ ಆ ಗುರಿಯೆಡೆಗೆ ತನ್ನ ಪ್ರಯಾಣವಷ್ಟೆ. ಮೊದಲೇ ಬೇರೆ ದೇಶ. ಇಂತಹ ಆತ್ಮಹತ್ಯೆಗೆ ಸರಿಸಮಾನಾದ ಅಪಾಯಕಾರಿ ಸಾಹಸವನ್ನು ಯಾವುದೇ ದೇಶದ ಕಾನೂನು ಬೆಂಬಲಿಸುವುದಿಲ್ಲ. ಹಾಗಿದ್ದಾಗ ಈ ಕಾರ್ಯವನ್ನು ಸಾಧಿಸುವ ಹಾದಿಯಲ್ಲಿ ಆತನ ಸಿಹಿ-ಕಹಿ ಅನುಭವಗಳೇನು? Philippe Petit (ಪಾತ್ರದಲ್ಲಿ Joseph Gordon-Levitt) ತನ್ನ ಅನುಭವ ಹೇಗಿತ್ತು ಅನ್ನುವುದನ್ನು ನಮ್ಮೆದುರಿಗೆ ನಿಂತು ನಿರೂಪಿಸುತ್ತ ಇಡೀ ಚಿತ್ರದ ಪೂರ್ತಿ ಆವರಿಸಿಕೊಳ್ಳುತ್ತಾನೆ. ಪ್ರತೀ ಹೆಜ್ಜೆಯಲ್ಲಿ ಇನ್ನು ಸಾಧ್ಯವೇ ಇಲ್ಲ ಅನ್ನುವಷ್ಟು ಅಡೆತಡೆಗಳು ಎದುರಾಗುತ್ತವೆ. ಅವುಗಳನ್ನೆಲ್ಲ ದಾಟಿ ಮುಂದೆ ಕಾಲಿಟ್ಟಾಗ ಅವನೆದುರಿಗಿದ್ದದ್ದು ಶೂನ್ಯದೆಡೆಗೆ ಸಾಗಿದಂತೆ ಕಾಣುವ ಹಗ್ಗವಷ್ಟೇ. ಭಯಂಕರ, ಮೈರೋಮಾಂಚನಗೊಳಿಸುವ,ಸುತ್ತಲಿನ ನೋಟ ವಿಹಂಗಮವೆನಿಸುವ, ಅತೀ ಎತ್ತರದ ಕಟ್ಟಡಗಳ ಮಧ್ಯದ ಒಂದು ನೂಲಿನಂತೆ ಕಾಣುವ ಹಗ್ಗದ ಮೇಲೆ ಆತ ಕಾಲಿಟ್ಟಾಗ ಚಿತ್ರಮಂದಿರದಲ್ಲಿ ಕುಳಿತ ಪ್ರೇಕ್ಷಕನಿಗೆ ತಾನೇ ಅಲ್ಲಿ ಕಾಲಿಟ್ಟಂತೆ ಭಾಸವಾಗುತ್ತದೆ. ಚಿತ್ರದ ಆರಂಭದಲ್ಲೇ ನಮಗೆ ಆತ ಸುರಕ್ಷಿತವಾಗಿ ಹಗ್ಗದ ಮೇಲೆ ನಡೆದು ಬರುತ್ತಾನೆ ಎನ್ನುವ ವಿಷಯ ಗೊತ್ತಿದ್ದರೂ ಚಿತ್ರ ಮುಗಿದು ಗಡಿಯಾರ ನೋಡಿಕೊಂಡರೆ ನಮಗೆ ಗೊತ್ತಿಲ್ಲದಂತೆ ಎರಡು ಗಂಟೆ ಕಳೆದು ಹೋಗಿರುತ್ತದೆ. ಅಷ್ಟು ಕುತೂಹಲಭರಿತವಾಗಿ ಕೊಂಚವೂ ಬೇಸರವಾಗದಂತೆ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಚಿತ್ರಕ್ಕಾಗಿ ದುಡಿದವರ ನೈಪುಣ್ಯತೆ ಎದ್ದು ಕಾಣುತ್ತದೆ.
ಇದು ಕಾಲ್ಪನಿಕ ಕಥೆಯಲ್ಲ. ಅತೀ ಎತ್ತರದ ಕಟ್ಟಡಗಳ ಮೇಲೆ ಹಗ್ಗ ಕಟ್ಟಿ ನಡೆದು ಪ್ರಸಿದ್ಧಿಯಾದ ವ್ಯಕ್ತಿ Philippe Petit, ತಮ್ಮ ಅನುಭವವನ್ನು "To Reach the Clouds" ಅನ್ನುವ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಅದೇ ಪುಸ್ತಕವನ್ನಾಧರಿಸಿ "The Walk" ಚಿತ್ರವನ್ನು ತಯಾರಿಸಲಾಗಿದೆ. ಅವಕಾಶ ಸಿಕ್ಕರೆ ನೀವೂ ಒಮ್ಮೆ ಚಿತ್ರಮಂದಿರದಲ್ಲಿ ನೋಡಿ.
ಸಂತೋಷ್ ಕುಮಾರ್ ಎಲ್. ಎಂ.






Saturday, September 26, 2015

ಹಾಸ್ಯ - ಕೃಪೆ - ವಾಟ್ಸ್ ಆಪ್


ಎಂಟು , ಹತ್ತು ವರುಷದ ಇಬ್ಬರು ಹುಡುಗರು ತುಂಟತನದಲ್ಲಿ ಪ್ರಖ್ಯಾತರಾಗಿದ್ದರು. ಕುಖ್ಯಾತರು ಕೂಡ. ಊರಲ್ಲಿ ಏನೇ ಕಿತಾಪತಿಯಾದರೂ ಅದರಲ್ಲಿ ಇವರಿಬ್ಬರ ಹೆಸರು ಇದ್ದೇ ಇರುತಿತ್ತು.. ಅವರ ಹೆತ್ತವರಿಗೆ ಸಹಜವಾಗಿಯೇ ಇದು ತಲೆಬಿಸಿಯ ಸಂಗತಿಯಾಗಿತ್ತು.  ಹೀಗಿರುವಾಗ ಅವರಮ್ಮನಿಗೆ ಒಬ್ಬ ಸ್ವಾಮೀಜಿಯ ಬಗ್ಗೆ ತಿಳಿದು ಬಂತು. ಅವರು ಇಂಥ ಎಷ್ಟೊ ಮಕ್ಕಳ ತಂಟತನವನ್ನು ಬುದ್ಧಿ ಹೇಳಿ ಕಡಿಮೆ ಮಾಡಿದ್ದರು. ಮಕ್ಕಳಿಬ್ಬರನ್ನೂ ಕರೆದುಕೊಂಡು ಸ್ವಾಮೀಜಿಯವರ ಬಳಿ ಹೋದಳು.
ವಿಷಯವೆಲ್ಲ ತಿಳಿದುಕೊಂಡು ಸ್ವಾಮೀಜಿ ಹೇಳಿದರು ಒಬ್ಬೊಬ್ಬರನ್ನೇ ಮಾತಾಡಿಸುತ್ತೇನೆ. ನಾಳೆ ಚಿಕ್ಕವನನ್ನು ಕಳುಹಿಸಿ ನನ್ನ ಹತ್ತಿರ.


ಸರಿ ಎಂದ ಅಮ್ಮ.. ಮಾರನೆ ದಿನ ಚಿಕ್ಕವನನ್ನು ಕಳುಹಿಸಿದರು. ಅವನನ್ನು ಸ್ವಲ್ಪ ಹೊತ್ತು ದಿಟ್ಟಿಸಿ ನೋಡಿದ ಸ್ವಾಮೀಜಿ ತಮ್ಮ ಕಂಚಿನ ಕಂಠದಿಂದ ದೇವರು ಎಲ್ಲಿದ್ದಾನೆ? ಎಂದು ಕೇಳಿದರು. ಹುಡುಗ ಮೌನವಾಗಿದ್ದ. ಪುನಃ ಹತ್ತಿರ ಬಂದು ದೇವರು ಎಲ್ಲಿದ್ದಾನೆ ಎಂದು ಕೇಳಿದರು.
ಆಗಲೂ ಮಾತಾಡದ ಹುಡುಗನ ಕೆನ್ನೆಯನ್ನು ತನ್ನ ಬೆರಳಿಂದ ತಿವಿದು ಅದೇ ಪ್ರಶ್ನೆಯನ್ನು ಕೇಳಿದರು.. ದೇವರು ಎಲ್ಲಿದ್ದಾನೆ?.
ಹುಡುಗ ಅಲ್ಲಿಂದ ಒಂದೇ ಉಸಿರಿಗೆ ಓಡಿ ಬಂದು ಮನೆ ಸೇರಿ ಮೂಲೆಯೊಂದರಲ್ಲಿ ಅಡಗಿ ಕೂತ.
ಅದನ್ನು ಕಂಡ ದೊಡ್ಡ ಹುಡುಗ ಹತ್ತಿರ ಬಂದು ಏನಾಯ್ತು ಎಂದು ಕೇಳಿದ.
ಚಿಕ್ಕವನು ನಡುಗುತ್ತ... ಅಣ್ಣಾ.... ಎಂದು ಅವನ ಕಿವಿಯಲ್ಲಿ ಗುಟ್ಟಾಗಿ ಹೇಳಿದ..
ಆ ಪುಟ್ಟ ಹುಡುಗನ ಉತ್ತರ ಅದೆಷ್ಟು ಮುಗ್ಧವಾಗಿತ್ತೆಂದರೆ ನನಗಂತೂ ನಗು ತಡೆಯಲೇ ಆಗಲಿಲ್ಲ..
ನೀವೂ ಓದಿ.
.
.
.
.
"ಅಣ್ಣಾ...ಈ ಸಲ ದೊಡ್ಡ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ ಕಣೊ... ದೇವರು ಕಾಣೆಯಾಗಿದ್ದಾನಂತೆ .. ಅದೂ ನಮ್ಮ ಮೇಲೆ ಬಂದಿದೆ."


ಕೃಪೆ - ವಾಟ್ಸ್ ಆಪ್

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......