Sunday, April 12, 2026

. ಎಸ್ ಆರ್ ರಾಮಸ್ವಾಮಿ ಅವರಿಗೆ ಶ್ರದ್ಧಾಂಜಲಿ - ಎಸ್‌. ಸೂರ್ಯಪ್ರಕಾಶ ಪಂಡಿತ್

 


ಇಂದು ನಮ್ಮನ್ನು ಭೌತಿಕವಾಗಿ ಅಗಲಿದ ಎಸ್‌. ಆರ್. ರಾಮಸ್ವಾಮಿಯವರು ನನ್ನ ಗುರುಗಳು; ಪತ್ರಕರ್ತನಾಗಿ ಅವರಿಂದಲೇ ನಾನು ಮೊದಲ ಪಾಠಗಳನ್ನು ಕಲಿತದ್ದು; ಎಡಿಟಿಂಗ್, ಅನುವಾದ – ಇಂಥ ಹಲವು ವಿಷಯಗಳ ಸೂಕ್ಷ್ಮವಾದ ಮರ್ಮಗಳನ್ನು ಅವರು ಕಲಿಸಿದರು. ಆದರೆ ಯಾವುದನ್ನೂ ಪ್ರತ್ಯಕ್ಷವಾಗಿ ಅಲ್ಲ, ಪರೋಕ್ಷರೂಪದಲ್ಲಿ. ದೇವತೆಗಳು ಪರೋಕ್ಷಪ್ರಿಯರಂತೆ! ಹೌದು, ರಾಮಸ್ವಾಮಿಯವರೂ ಒಂದು ವಿಧದಲ್ಲಿ ‘ದೇವಮಾನವ’!! ನನ್ನ ಪುಣ್ಯವಿಶೇಷ ಎಂದರೆ ರಾಮಸ್ವಾಮಿಯವರು ಪತ್ರಕರ್ತರಾಗಿ ಕರ್ತವ್ಯವನ್ನು ನಿರ್ವಹಿಸಿದ ಸಂಸ್ಥೆಯಲ್ಲಿಯೇ ನಾನು ಕೂಡ ಪತ್ರಕರ್ತನಾದುದು.


ರಾಮಸ್ವಾಮಿಯವರ ಬಗ್ಗೆ ಸಾಕಷ್ಟು ಬರೆದಿರುವೆ, ಮಾತನಾಡಿರುವೆ. ಆದರೂ ಇನ್ನೂ ಮಾತನಾಡುವುದಕ್ಕೂ ಬರೆಯುವುದಕ್ಕೂ ಸಾಕಷ್ಟು ಸಂಗತಿಗಳು ಇವೆ; ಆದರೆ ಸದ್ಯಕ್ಕೆ ಇಂದು ಅದನ್ನೆಲ್ಲ ಬರೆಯಲು ಆಗುತ್ತಿಲ್ಲವಷ್ಟೆ.


ರಾಮಸ್ವಾಮಿಯವರನ್ನು ಮೊದಲು ನೇರವಾಗಿ ನೋಡಿದ್ದು 1994ರಲ್ಲಿ, ಶಂಕರಮಠದಲ್ಲಿ. ಶತಾವಧಾನಿ ಆರ್‌. ಗಣೇಶ್‌ ಅವರೇ ಅವರನ್ನು ಮೊದಲು ನನಗೆ ಕಾಣಿಸಿದ್ದು.


ರಾಮಸ್ವಾಮಿಯವರು ಪತ್ರಕರ್ತ ಮಾತ್ರವಲ್ಲ, ದೊಡ್ಡ ವಿದ್ವಾಂಸರು ಕೂಡ. ಅವರ ಮನೆತನವೇ ವಿದ್ವಾಂಸರ ಮನೆತನ. ಸಂಸ್ಕೃತವ್ಯಾಕರಣವನ್ನೂ ವೇದಾಂತವನ್ನೂ ಸಾಂಪ್ರದಾಯಿಕ ವಿಧಾನದಲ್ಲಿಯೇ ಕಲಿತಿದ್ದರು. ಮಾಗಡಿ ಲಕ್ಷ್ಮೀನರಸಿಂಹಶಾಸ್ತ್ರಿ, ಎನ್‌. ರಂಗನಾಥಶರ್ಮಾ ಅವರಂಥ ವಿದ್ವಾಂಸರಲ್ಲಿ ಅವರಿಗೆ ಪಾಠವಾಗಿದ್ದಿತು. ಇನ್ನು ಡಿವಿಜಿ ಅವರಂಥ ‘ವಿರಕ್ತರಾಷ್ಟ್ರಕ’ರ ಗರಡಿಯಲ್ಲಿ ನಿತ್ಯವೂ ಸಾಹಿತ್ಯ, ಸಂಸ್ಕೃತಿ, ಸಾರ್ವಜನಿಕ ವಿಚಾರಗಳ ಸಾಮು. ಸಿ. ವಿ. ರಾಮನ್‌, ರೋರಿಚ್‌ರಂಥ ಹಲವರು ಸ್ವನಾಮಧನ್ಯರ ಸಂಪರ್ಕವೂ ಇತ್ತು ಅವರಿಗೆ. ರಾಮಸ್ವಾಮಿಯವರ ಅಣ್ಣ ಕೂಡ ದೊಡ್ಡ ಪತ್ರಕರ್ತರಾಗಿದ್ದರು. ಸಾಮಾನ್ಯವಾಗಿ ಪತ್ರಕರ್ತರು – ನಮ್ಮ ಕಾಲದವರು – ಅಧ್ಯಯನಶೀಲರಲ್ಲ ಎಂಬ ಅಭಿಪ್ರಾಯ ಜನಜನಿತವಾಗಿದೆ. ರಾಮಸ್ವಾಮಿ ಅವರು ಇದಕ್ಕೆ ಅಪವಾದ; ಅಧ್ಯಯನಶೀಲತೆಯ ಇನ್ನೊಂದು ರೂಪವೇ ರಾಮಸ್ವಾಮಿಗಳು ಎಂದರೆ ಈ ಮಾತೇನೂ ಅತ್ಯುಕ್ತಿಯಾಗದು.


ರಾಮಸ್ವಾಮಿಯವರಂಥ ವಿದ್ವಾಂಸರು ನಮಗೆ ಎಂದಾದರೂ ಸಿಕ್ಕಿಯಾರು; ಅವರಂಥ ಪತ್ರಕರ್ತರೂ ಮುಂದೆಮ್ಮೊ ಸಿಕ್ಕಿಯಾರು. ಆದರೆ ಅವರಂಥ ಅಂತಃಕರಣವುಳ್ಳ ವ್ಯಕ್ತಿಗಳು ಸಿಕ್ಕಿಯಾರೆ – ಎಂಬುದು ಅನುಮಾನ. ಎಷ್ಟೊಂದು ಜನರಿಗೆ ಅವರು ‘ಮಾತೃವಾತ್ಸಲ್ಯ’ದಂಥ ಶುದ್ಧಪ್ರೀತಿಯನ್ನು ಉಣಬಡಿಸುತ್ತಿದ್ದರು – ಎಂಬುದನ್ನು ಯೋಚಿಸಿದಾಗ, ‘ಒಬ್ಬ ವ್ಯಕ್ತಿ ಇಷ್ಟೊಂದು ಜನರನ್ನು ಪ್ರೀತಿಸಲು ಸಾಧ್ಯವೆ’ ಎನಿಸುತ್ತದೆ. ಅದೂ ಜಾತಿ, ಮತ, ವಿದ್ಯೆ, ಅಂತಸ್ತುಗಳ ಎಣಿಕೆಗೆ ಆಸ್ಪದವಿಲ್ಲದೆ!


ಇತ್ತೀಚಿಗೆ ನನ್ನ ಜೀವನದಲ್ಲಿ ನಡೆದ ಘಟನೆಯೊಂದನ್ನೇ ಇಲ್ಲಿ ಉಲ್ಲೇಖಿಸಬಹುದು.


ನನ್ನ ತಾಯಿಯವರ ಅಂತಿಮ ವಿಧಿ–ವಿಧಾನಗಳು ನಡೆದ ದಿನ ಅಷ್ಟೂ ಹೊತ್ತು ರಾಮಸ್ವಾಮಿಯವರು ರುದ್ರಭೂಮಿಯಲ್ಲಿದ್ದು, ಅಂದಿನ ಎಲ್ಲ ಸಂಸ್ಕಾರಗಳು ಮುಗಿದ ಮೇಲೆ ಸಾಂತ್ವನವನ್ನು ಹೇಳಿಹೊರಟರು. ಅಷ್ಟು ಹೊತ್ತು ಒಂದೆಡೆ ಕುಳಿತುಕೊಳ್ಳಲೂ ಅವರಿಗೆ ಕಷ್ಟವಾಗಿದ್ದ ಸಮಯ ಅದು; ಆದರೂ ಅವರು ಬಂದರು, ಕೊನೆ ತನಕ ಇದ್ದರು. ಅವರ ಆರೋಗ್ಯಪರಿಸ್ಥಿತಿಯನ್ನು ನೋಡಿ ಅವರನ್ನು ತಾಯಿಯವರ ವೈಕುಂಠಸಮಾರಾಧನೆಗೆ ಕರೆಯುವ ಧೈರ್ಯವನ್ನು ಮಾಡಲಿಲ್ಲ. ‘ಕರೆಯುವುದು ಬೇಡ; ಕರೆದರೆ ಬರುತ್ತಾರೆ; ಬಂದರೆ ಕಷ್ಟ ಪಡುತ್ತಾರೆ‘ – ಎಂಬುದು ನನ್ನ ಕಾಳಜಿ. ಆದರೆ ರಾಮಸ್ವಾಮಿಯವರು ವೈಕುಂಠಸಮಾರಾಧನೆಯ ದಿನ ಬಂದೇ ಬಂದರು; ಕೊನೆ ತನಕ ಇದ್ದರು; ಹತ್ತಿರದ ಬಂಧುಗಳು ಕೊಡುವ ‘ಶುಭವಸ್ತ್ರ’ವನ್ನೂ ಕೊಟ್ಟರು; ‘ಇನ್ನು ಎಲ್ಲವೂ ಶುಭವಾಗಲಿ’ ಎಂದು ಹರಸಿದರು. ಇದು ರಾಮಸ್ವಾಮಿಗಳು. ಇದು ರಾಮಸ್ವಾಮಿಗಳಂಥವರಿಗೆ ಮಾತ್ರ ಸಾಧ್ಯ. ಇಂದಿನ ದಿನಗಳಲ್ಲಿ ಜನರು ಕರೆದರೆ ಬರುವುದೇ ಕಷ್ಟ. ಹೀಗಿರುವಾಗ ‘ಈ ಸಮಯದಲ್ಲಿ ನಾನು ಅಲ್ಲಿ ಇರಬೇಕಾದ್ದು ನನ್ನ ಧರ್ಮ; ಕರ್ತವ್ಯ’ ಎಂದು ಮನೆಯ ‘ದೊಡ್ಡವರಾಗಿ’ ಯೋಚಿಸಿ ಬಂದವರು ರಾಮಸ್ವಾಮಿಯವರು. ದಿಟವಾದ ಬಂಧುತ್ವ ಎಂದರೆ ಇದೇ ಅಲ್ಲವೆ? ರಕ್ತಸಂಬಂಧಕ್ಕೂ ಮೀರಿದ್ದು ಈ ಭಾವಸಂಬಂಧ. ಈ ಬಂಧದ ಸೂತ್ರ ಇರುವುದು ಇಲ್ಲಿ, ಈ ಲೋಕದ ಪ್ರತ್ಯಕ್ಷಪ್ರಮಾಣದಲ್ಲಿ ಅಲ್ಲ, ಆ ಲೋಕದ ಪರೋಕ್ಷಸ್ವರೂಪದಲ್ಲಿ. ಆತ್ಮಬಂಧುಗಳಿಗೆ ಶರೀರಸಂಬಂಧದ ಹಂಗು ಇರದು; ಯಾವ ಕಾಲಕ್ಕೂ ನಮ್ಮ ಒಡಲಿಗೆ ಒಳಿತನ್ನು ಒದಗಿಸಬಲ್ಲ ಶುದ್ಧ ಚೈತನ್ಯವೊಂದೇ ಸಂಬಂಧದ ಬೆಸುಗೆಗೆ ಸಾಕಾಗಿರುತ್ತದೆ. ಈ ಚೈತನ್ಯವಸ್ತುವನ್ನೇ ಲೋಕವ್ಯವಹಾರದಲ್ಲಿ ‘ಪ್ರೀತಿ’ ಎಂದು ವ್ಯವಹರಿಸುತ್ತಿರುತ್ತವೆ. ರಾಮಸ್ವಾಮಿಯವರ ಪ್ರೀತಿಯ ಆಳ ಕಡಲಿನಷ್ಟು; ಎತ್ತರ ಪರ್ವತದಷ್ಟು....


– ಎಸ್‌. ಸೂರ್ಯಪ್ರಕಾಶ ಪಂಡಿತ್

No comments:

Post a Comment

. ಎಸ್ ಆರ್ ರಾಮಸ್ವಾಮಿ ಅವರಿಗೆ ಶ್ರದ್ಧಾಂಜಲಿ - ಎಸ್‌. ಸೂರ್ಯಪ್ರಕಾಶ ಪಂಡಿತ್

  ಇಂದು ನಮ್ಮನ್ನು ಭೌತಿಕವಾಗಿ ಅಗಲಿದ ಎಸ್‌. ಆರ್. ರಾಮಸ್ವಾಮಿಯವರು ನನ್ನ ಗುರುಗಳು; ಪತ್ರಕರ್ತನಾಗಿ ಅವರಿಂದಲೇ ನಾನು ಮೊದಲ ಪಾಠಗಳನ್ನು ಕಲಿತದ್ದು; ಎಡಿಟಿಂಗ್, ಅನುವಾದ ...