ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Sunday, December 29, 2013

ತಾಳ ತಪ್ಪಿದ ನನ್ನೆದೆಯ ಘಜಲ್...!

ತಾಳ ತಪ್ಪಿದ
ನನ್ನೆದೆಯ ಘಜಲ್...!

ನನ್ನೆದೆಯ ಘಜಲ್
ಒಂದು ಅರ್ಥವಿರುತಿತ್ತು
ಅವಳ ಅಂದದ ಗೆಜ್ಜೆಗಳು
ಮೈದುಂಬಿ ಚೆಂದದಿ ಕುಣಿದಿದ್ದರೆ ಮಾತ್ರ

ಆದರೆ,
ಬರೆದಿಟ್ಟ ಸಾವಿರ ಸಾಲುಗಳಿಗೆ
ಸಾಹುಕಾರಳಾಗಲೊಲ್ಲದೆ
ಎಸಳಾಗಿ ನೆಲೆ ನಿಂತ
ಹುಸಿ-ಹಸಿರ ಮೇಲಿನ ಮಂಜಿನಂತೆ
ಪದೇ-ಪದೇ ಕರಗಿ ನೀರಾಗುತ್ತಾಳವಳು!

ನೀರಾಗಿ ಹರಿವ ಮಂಜಿನ ಸೋನೆ
ನಯನದೂರ ಕನಸುಗಳಿಗೆ ಸೋಂಕು ತಗುಲಿಸಿ
ಕೋಥ ಹೊಡೆಯುತ್ತದೆ!

ಕ್ಷಿತಿಜದೆಡೆಗೆ ತಲುಪಿ
ಮುಗಿಲಿಗೆ ಮುತ್ತಿಕ್ಕ ಬಯಸುವ
ದಿಗಂತ ಕನಸುಗಳು
ಅವಳಿರದ ನೋವು ಕಂಡು
ಕ್ಷಾಮಕ್ಕೊಳಗಾದ ಎದೆಗೆ
ನೋವಿನ ನಿದ್ದೆಯ ಹಾದಿ ತೋರಿಸುತ್ತವೆ.

ಭಾವಗಳ ಬೆಸುಗೆಯಲಿ ಹಾಡಾಗಬೇಕಿದ್ದ  
ನನ್ನೆದೆಯ ಘಜಲ್ ತಾಳತಪ್ಪಿ
ಅರ್ಥವಿಲ್ಲದ ಬರಿಯ ಖಂಡ ಕಾವ್ಯವಾಗುತ್ತದೆ

-ಚೇತನ್ ಸೊಲಗಿ, ಮುಂಡರಗಿ

Friday, December 27, 2013

ಕನ್ನಡ ಸಾಹಿತ್ಯ ಲೋಕಕ್ಕೆ ಮೂರು ಯುವ ಕವಿಗಳ ಕವನ ಸಂಕಲನ ಅರ್ಪಣೆ


ಕನ್ನಡ ಸಾಹಿತ್ಯ ಲೋಕಕ್ಕೆ ಮೂರು ಯುವ  ಕವಿಗಳ  ಕವನ ಸಂಕಲನ ಅರ್ಪಣೆ
ಶರತ್ ಚಕ್ರವರ್ತಿ , ರಾಜೇಂದ್ರ ಪ್ರಸಾದ್ , ಪ್ರವರ ಕೊಟ್ಟೂರು




ದೆಹಲಿಯಲ್ಲಿ 10 ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ- 2013



ಚುಮ್ಮು ಚುಮ್ಮುಚಳಿಯ ವಾತಾವರಣದ ನಡುವೆ ನವದೆಹಲಿಯ ಆರ್ ಕೆ ಪುರಂ ದೆಹಲಿ ಕನಾ೯ಟಕ

ಸಂಘದ ಸಭಾಭವನದಲ್ಲಿ 10 ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ ಇತ್ತಿಚೆಗೆ

ನಡೆಯಿತು. ಹೃದಯವಾಹಿನಿ ಕನ್ನಡ ಬಳಗ ಮತ್ತು ದಿಲ್ಲಿ ಗಣೇಶ ಮಿತ್ರ ಮಂಡಳಿ ಹಮ್ಮಿಕೊಂಡ

ಈ ಸಮ್ಮೇಳನವನ್ನು ಯಕ್ಷಗಾನ ಕಲಾವಿದರಿಂದ ಉದ್ಘಾಟಿಸಿದ್ದು ವಿಶೇಷವಾಗಿತ್ತು.

ಪ್ರಾರಂಭದಲ್ಲಿಯೇ ಬಾಲಮಿತ್ರ ಪ್ರತಿಷ್ಠಾನ ಸರಳೇಬೆಟ್ಟು, ಮಣಿಪಾಲ ಇವರಿಂದ ಚಕ್ರವೂಹ್ಯ

ಯಕ್ಷಗಾನ ಪ್ರದಶಿ೯ತವಾಯಿತು.

ಈ ಸಮ್ಮೇಳನದ ಅಧ್ಯಕ್ಷರಾಗಿ ಉತ್ತರಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್

ಅಧ್ಯಕ್ಷರಾದ ರೋಹಿದಾಸ ನಾಯಕ ಅವರು ಆಯ್ಕೆಯಾಗಿದ್ದರು.

ಸಮ್ಮೇಳನದಲ್ಲಿ ಪ್ರಾಸ್ಥಾವಿಕವಾಗಿ ಹೃದಯವಾಹಿನಿ ಕನ್ನಡ ಬಳಗದ ಕೆ.ಪಿ ಮಂಜುನಾಥ ಅವರು

ಮಾತನಾಡಿ ಹೊರ ರಾಜ್ಯ ಮತ್ತು ಹೊರ ದೇಶದಲ್ಲಿ ಕನ್ನಡವನ್ನು ಬೆಳೆಸುವ ಹಿನ್ನಲೆಯಲ್ಲಿ ಕಳೆದ

ಹತ್ತು ವರ್ಷಗಳಿಂದ ನಡೆಸುಕೊಂಡು ಬರುತ್ತಿದ್ದ ಚಟುವಟಿಕೆಯನ್ನು ವಿವರಿಸಿದರು.






ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದೆಹಲಿ ಕನ್ನಡ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಮತ್ತು

ದೆಹಲಿ ಕನ್ನಡ ಮಿತ್ರ ಮಂಡಳಿಯ ಅಧ್ಯಕ್ಷ ಶರೀಪ ಅವರು ಭಾಗವಹಿಸಿದ್ದರು.

ಅಧ್ಯಕ್ಷತೆ ವಹಿಸಿದ್ದ ರೋಹಿದಾಸ ನಾಯಕ ಮಾತನಾಡಿ, ಈ ಸಮ್ಮೇಳನದ ದೇಶದ ರಾಜಧಾನಿಯಲ್ಲಿ

ನಡೆಯುತ್ತಿರುವುದರಿಂದ ಈ ಸಮ್ಮೇಳನಕ್ಕೆ ಹೆಚ್ಚಿನ ಮಹತ್ವ ಇರುವುದು. ಕನ್ನಡ ಭಾಷೆಯೂ

ಸಹ ರಾಷ್ಟ್ರ ಭಾಷೆಯಂತೆಯೇ ಮಹತ್ವ ಪಡೆದಿರುವ ಭಾಷೆಯಾಗಿದೆ ಎಂದು ಅಭಿಪ್ರಾಯ ಪಟ್ಟರು.

ಕನ್ನಡಿಗರು ತಮ್ಮ ಭಾಷೆಗಾಗಿ ಮತ್ತು ಗಡಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ಬಂದ ಬಗ್ಗೆ ಕಳವಳ

ವ್ಯಕ್ತಪಡಿಸಿದರು. ಕನ್ನಡ ಭಾಷೆ ಬೆಳದು ಬಂದ ಹಿನ್ನಲೆಯನ್ನು ಸಂಪೂರ್ಣವಾಗಿ ವಿವರಿಸಿದರು.



ತಮ್ಮ ಭಾಷಣದ ಕೊನೆಯಲ್ಲಿ ಇತಿಹಾಸ ನಗರ, ಇಂದ್ರಪ್ರಸ್ಥವಾದ ದೆಹಲಿಯಲ್ಲಿ ಈ ಸಮ್ಮೇಳನ

ನಡೆಯುತ್ತಿರುವುದರಿಂದ ಇದು ಕನ್ನಡಿಗೆರಿಗೆ ಅಭಿಮಾನದ ಸಂಗತಿ ಸಹಾ ಆಗಿರುವುದು. ಈ ಸಮ್ಮೇಳನ

ಚಿರಕಾಲ ಎಲ್ಲರ ನೆನಪಿನಲ್ಲಿರುವಂತೆ ಆಗಲಿ ಎಂದು ಆಶಿಸಿದರು. ತಮ್ಮ 15 ನಿಮಿಷದ ಭಾಷಣದಲ್ಲಿ

ಅವರು ಕನ್ನಡ ನಾಡು ನುಡಿಯ ಬಗ್ಗೆ ಅದರ ಘನತೆಯ ಬಗ್ಗೆ ವಿಸ್ತಾರವಾಗಿ ತಿಳಿಸಿದರು.

ಸಮ್ಮೇಳನದಲ್ಲಿ ನೂಪುರ ಕಲಾ ಸಂಸ್ಥೆ ದಾವಣಗೆರೆ ಇವರಿಂದ ಪ್ರದಶಿ೯ತವಾದ ಜಾನಪದ ನೃತ್ಯ

ಮತ್ತು ವಚನ ವೈಭವ, ಕುಮಾರಿ ಶ್ವೇತ ಮತ್ತು ತಂಡ ತರಿಕೆರೆ ಇವರಿಂದ ನಡೆದ ವೀರಗಾಸೆ, ರೂಪ

ಗರೀಶ್ ನಿದೇ೯ಶನದಲ್ಲಿ ನಡೆದ ನೃತ್ಯ ರೂಪಕ, ಕುಮಾರಿ ಕೃತಿಕಾ ದಯಾನಂದ್ರವರಿಂದ ನಡೆದ ನೃತ್ಯ

ಪ್ರದರ್ಶನ, ಸ್ವಾಮಿ ಗ್ರೂಫ್ ಬೆಂಗಳೂರು-ಗೋನಾಸ್ವಾಮಿ ಇವರತಂಡದಿಂದ ಹಾಸ್ಯ ಸಂಜೆ

ಕಾರ್ಯಕ್ರಮಗಳು ನೆರೆದಿದ್ದ ಜನರನ್ನು ಮನಸೂರೆಗೊಳಿಸಿದವು.

ಜಯಪ್ರಕಾಶ ರಾವ್ ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಶ್ರೀ

ಯಾಕೂಬ್ ಖಾದರ್ ಗುಲ್ವಾಡಿ ಶ್ರೀ ಎನ್ ಆರ್ ಗಜು, ಶ್ರೀಮತಿ ವಿಜಯಲಕ್ಷ್ಮೀ ನಾಯಕ್, ಶ್ರೀಮತಿ

ಸಂಧ್ಯಾ ಭಟ್, ಶ್ರೀಮತಿ ಪ್ರಮೀಳಾ ಮಹಾದೇವ್, ಶ್ರೀ ಎನ್ ಮಹಾದೇವ್ ಇವರುಗಳು ತಮ್ಮ

ಕವನವನ್ನು ವಾಚಿಸಿದರು.

ಮಾಧ್ಯಮ ಮತ್ತು ಹೊರನಾಡು ಕನ್ನಡಿಗರ ಗೋಷ್ಠಿಯಲ್ಲಿ ಶ್ರೀ ಶ್ರೀನಿವಾಸ ಕರಿಯಪ್ಪ,

ಶ್ರೀಮತಿ ರೇಣುಕಾ ನಿಡಗುಂದಿ, ಶ್ರೀ ಶಿವಣ್ಣ ಶೀತರ್, ಶ್ರೀ ಗಂಗಾಧರ ಕೊಪ್ಪ, ಅವರು

ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಶ್ರೀ ಆಸ್ಕರ ಫೆನಾ೯೦ಡೀಸ್ ಅವರು ಭಾಗವಹಿಸಿದ್ದರು. ಈ

ಸಂದರ್ಭದಲ್ಲಿ 2013 ರ ಹೃದಯವಂತರು ಪ್ರಶಸ್ತಿಯನ್ನು ಶ್ರೀ ಬಿ.ಟಿ ಬಂಗೇರಾ, ಶ್ರೀ ರಮೇಶ ಡಿ.ಸಿ

ಬೆಂಗಳೂರು, ಶ್ರೀ ಭಾಸ್ಕರ ಶೆಟ್ಟಿ, ಶ್ರೀ ಎಂ ಮಹಾದೇವ್ ಗುಲಬಗಾ, ಶ್ರೀ ಎ. ಸಯ್ಯದ್ ಅಸ್ಗರ್,

ಬೆಂಗಳೂರು. ಶ್ರೀ ಸೆಲ್ವರಾಜ್ ಕೆ ಬೆಂಗಳೂರು, ಶ್ರೀ ಪಿ ರಾಜಪ್ಪ ವಿಶ್ವಕರ್ಮ. ಮೈಸೂರು ಇವರಿಗೆ ನೀಡಿ

ಗೌರವಿಸಲಾಯಿತು.



ಬಾಲಮಿತ್ರ ಪ್ರತಿಷ್ಠಾನ ಸರಳೇಬೆಟ್ಟು ಮಣಿಪಾಲ ಇವರಿಂದ ಚಕ್ರವೂಹ್ಯ ಯಕ್ಷಗಾನ 
ಪ್ರದರ್ಶನ

















ವಿವೇಕ ಬೆಟ್ಕುಳಿ-7376703047

Saturday, December 7, 2013

ಚಿಗುರು

ಮಿಂಚೆಂದರೆ ಮೋಡಕೆ ಮೀಸಲೆಂಬ
ನಂಬಿಕೆ ಸುಳ್ಳಾಯಿತು ಅಂದು
ನನ್ನೊಳಗೂ ಸಂಚಲಿಸ ಬಹುದು
ಗೊತ್ತಾಯಿತು ಆಕೆಯ ಕಂಡು

ಗೆಳೆತನದಲಿ ಮೊದಲಾಯಿತು ಪರಿಚಯ
ಪ್ರೇಮಾಂಕುರದ ಪಥದಲ್ಲಿ
ನಿದ್ದೆಗೂ ಮೀಸಲಿಡದ ಕನವರಿಕೆಗಳೇ
ಕಾಮನೆ ಜೊತೆಯಲ್ಲಿ

ಚಿಗುರಿದ ಮೀಸೆಗೂ ಕಾರಣವಿತ್ತು
ಕಾಣುವ ಹಂಬಲ ಆಕೆಯನು
ಒಂದೇ ಸಮನೆ ಗೊಂದಲ ಮನಸಲಿ
ಹೃದಯವೂ ಬೆಂಬಲಿಸಿತು ತಾನು

ಓದಿನ ಗೋಜಲಿ ಮೂಡಿದ ಅಂತರ
ದುಃಸ್ವಪ್ನವೇ ಅನಿಸಿರಬಹುದು
ಪಾಠಗಳೆಲ್ಲವೂ ಅವಳದೇ ಕುರಿತು
ಅರ್ಥದಲೊಳಾರ್ಥವಿರಬಹುದು

ನಕ್ಕರೆ ನವರಾತ್ರಿಯ ದೀಪೋತ್ಸವ
ಮಾತಿಗೆ ಸಿಕ್ಕರೆ ಸಕ್ಕರೆಯು
ಪ್ರೌಢತೆಯ ಮೂರುತಿಯಾಗಿದ್ದಳು
ನಾ ಮೆರೆಸಿದ ರಥ ಸಾರಥಿಯೂ

ಆಕೆ ಗಿರಿಜೆ, ಶಂಕರನಾಗೋ
ಯೋಗ್ಯತೆ ನಾ ಪಡೆದಿರಲಿಲ್ಲ
ನನ್ನೊಳ ಪ್ರೇಮ, ನುಡಿಸದ ಕೊಳಲು
ಆಕೆಗೆ ಕೇಳಿಸಲಾಗಿಲ್ಲ !!

                                 -- ರತ್ನಸುತ