ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Thursday, February 28, 2013

ಸಂತನಾಗುವ ಪರಿ


ಶೇಖ್ ರ‌್ಯೂಗಾರಿ ಬಹುದೊಡ್ಡ ಸೂಫೀ ಸಂತ. ಅವನ ತಿಳುವಳಿಕೆ, ಚಿಂತನೆಗಳನ್ನು ವಿವರಿಸುವ ರೀತಿ ಅನನ್ಯವಾಗಿದ್ದವು. ಆಗಿನ ಕಾಲದ ಎಲ್ಲ ಸಂತರೂ ಅವನನ್ನು ತುಂಬ ಗೌರವಿಸುತ್ತಿದ್ದರು. ಆತ ಸಾಮಾನ್ಯವಾಗಿ ಹೆಚ್ಚು ಮಾತನಾಡುವವನಲ್ಲ.

ಆದರೆ ಮಾತನಾಡಿದ ಪ್ರತಿಯೊಂದು ವಾಕ್ಯವೂ ಅರ್ಥಗರ್ಭಿತವಾಗಿರುತ್ತಿತ್ತು. ಅವನ ಶಿಷ್ಯರಾಗಬೇಕೆಂದು ಅನೇಕ ಜನ ತರುಣರು ಅಪೇಕ್ಷೆಪಡುತ್ತಿದ್ದರು. ಶಿಷ್ಯರನ್ನು ಆಯ್ದುಕೊಳ್ಳುವುದರಲ್ಲಿ ಶೇಖ್ ತುಂಬ ಕಾಳಜಿ ವಹಿಸುತ್ತಿದ್ದ. ಅವನು ಅವರನ್ನು ಬಹಳ ಪರೀಕ್ಷೆ ಮಾಡಿ ತನ್ನಲ್ಲಿ, ತನ್ನ ಚಿಂತನೆಗಳಲ್ಲಿ ಪೂರ್ಣ ನಂಬಿಕೆ ಇದ್ದವರನ್ನು ಮಾತ್ರ ಆರಿಸಿಕೊಳ್ಳುತ್ತಿದ್ದ.

ಮನಸ್ಸು ತಯಾರಾಗಿರದಿದ್ದರೆ ಆ ತರುಣರ ವಯಸ್ಸೂ ಹಾಳು ಮತ್ತು ಸಂತತ್ವ ಹೃದಯಕ್ಕಿಳಿಯಲಾರದು. ಆದ್ದರಿಂದ ಬಂದವರಿಗೆ ಪರೀಕ್ಷೆಗಳನ್ನು ಕೊಟ್ಟು ಅವರ ನಿಷ್ಠೆಯನ್ನು, ಧೃಡಮನಸ್ಸನ್ನು ಪರೀಕ್ಷಿಸುತ್ತಿದ್ದ. ಹೀಗಿರುವಾಗ ಒಬ್ಬ ತರುಣ ಶೇಖ್ ಬಳಿಗೆ ಬಂದು ತನ್ನನ್ನು ಶಿಷ್ಯನನ್ನಾಗಿ ತೆಗೆದುಕೊಳ್ಳಬೇಕೆಂದು ಕೇಳಿಕೊಂಡ. ತರುಣ ಬುದ್ಧಿವಂತ. ಸಾಕಷ್ಟು ತಯಾರಿ ಮಾಡಿಕೊಂಡೇ ಬಂದಿದ್ದಾನೆ ಎಂದು ತಿಳಿಯುತ್ತಿತ್ತು.

ಯಾವ ಪರೀಕ್ಷೆ ಮಾಡಿದರೂ ಆತ ಅದರಲ್ಲಿ ತೇರ್ಗಡೆಯಾದ. ಆದರೂ ಶೇಖ್ ತರುಣನನ್ನು ಒಪ್ಪಿಕೊಳ್ಳದೇ ಒಂದು ವಾರದ ನಂತರ ತನ್ನನ್ನು ಬಂದು ಕಾಣಬೇಕೆಂದೂ ಆಗ ತೀರ್ಮಾನ ಮಾಡುವುದಾಗಿಯೂ ಹೇಳಿ ಕಳುಹಿಸಿದ. ಶೇಖ್‌ನ ಹಿರಿಯ ಶಿಷ್ಯರಿಗೆ ಇದು ತುಂಬ ಆಶ್ಚರ್ಯವೆನಿಸಿತು.

ಎಲ್ಲ ಪರೀಕ್ಷೆಗಳಲ್ಲೂ ಉತ್ತೀರ್ಣನಾದ ಈ ಬುದ್ಧಿವಂತನನ್ನು ಗುರುಗಳು ತೆಗೆದುಕೊಳ್ಳಬಹುದಾಗಿತ್ತು ಎನ್ನಿಸಿತು. ಎರಡು ದಿನಗಳ ನಂತರ ಶೇಖ್ ತನ್ನ ಅತ್ಯಂತ ಶ್ರಿಮಂತ ಸ್ನೇಹಿತನೊಬ್ಬನನ್ನು ಕರೆದ. ಅವನ ಖ್ಯಾತ ಉದ್ದಿಮೆಯಲ್ಲಿ ಈ ತರುಣನಿಗೊಂದು ಮುಖ್ಯವಾದ ಹುದ್ದೆಯನ್ನು ಕೊಡುವಂತೆಯೂ, ಅದಕ್ಕೆ ಹೆಚ್ಚಿನ ಸಂಬಳವನ್ನು ನೀಡಬೇಕೆಂದೂ ತಿಳಿಸಿದ. ಸ್ನೇಹಿತ ಮರು ಮಾತನಾಡಲಿಲ್ಲ.

ಮರುದಿನವೇ ತರುಣನನ್ನು ಕರೆಸಿ ಅವನ ಪರೀಕ್ಷೆ ಮಾಡಿದ ನೆಪ ಮಾಡಿ ಕೆಲಸಕ್ಕೆ ನಿಯಮಿಸಿಕೊಂಡ. ಹುಡುಗನಿಗೆ ಬಲು ಆಶ್ಚರ್ಯ. ಇಷ್ಟು ಅನಾಯಾಸವಾಗಿ ಕೆಲಸ ಸಿಕ್ಕೀತೆಂದು ಆತ ಊಹಿಸಿರಲಿಲ್ಲ. ಅದರಲ್ಲೂ ಇಷ್ಟು ದೊಡ್ಡ ಸಂಬಳವನ್ನು ಯಾವ ಅನುಭವವೂ ಇಲ್ಲದ ತನಗೆ ಯಾರು ಕೊಟ್ಟಾರು. ತುಂಬ ಸಂತೋಷದಿಂದ ಕೆಲಸ ಒಪ್ಪಿಕೊಂಡ.

ಅವನು ಕೆಲಸಕ್ಕೆ ಸೇರಿದ ಮರು ದಿನವೇ ಶೇಖ್ ಅವನನ್ನು ಬರ ಹೇಳಿದ. ಅನುಮಾನಿಸುತ್ತಲೇ ತರುಣ ಬಂದ. ಶೇಖ್,  `ಮಗೂ, ನೀನು ನನ್ನ ಶಿಷ್ಯತ್ವವನ್ನು ಅಪೇಕ್ಷಿಸಿ ಬಂದಿದ್ದೀಯಾ. ನಾನೂ ತುಂಬ ಆಲೋಚನೆ ಮಾಡಿದೆ. ಕೆಲವು ಪರೀಕ್ಷೆಗಳನ್ನು ಮಾಡಿದೆ. ಎಲ್ಲದರಲ್ಲೂ ನೀನು ಯಶಸ್ವಿಯಾಗಿರುವೆ.

ನಾಳೆಯಿಂದಲೇ ನೀನು ಆಶ್ರಮಕ್ಕೆ ಬಂದು ಸೇರಿಕೋ~  ಎಂದ. ತರುಣ ಶೇಖ್‌ನ ಕಣ್ಣುಗಳನ್ನು ನೋಡದಾದ. ತಲೆ ತಗ್ಗಿಸಿ ಹೇಳಿದ,  `ಸ್ವಾಮೀ, ನಾನು ತಮ್ಮ ತೀರ್ಮಾನಕ್ಕಾಗಿ ಎರಡು ದಿನ ಕಾಯ್ದೆ. ತಾವು ಏನೂ ಹೇಳಲಿಲ್ಲ. ಹಾಗಾದರೆ ನಾನು ನಿಮ್ಮ ಅಪೇಕ್ಷಿತ ಮಟ್ಟಕ್ಕೆ ಬಂದಿಲ್ಲವೆಂದು ನಿರಾಶನಾದೆ.

ನಿನ್ನೆಯ ದಿನವೇ ಬಹುದೊಡ್ಡ ಉದ್ದಿಮೆಯೊಂದು ನನ್ನನ್ನು ಕೆಲಸಕ್ಕೆ ಸೇರಿಸಿಕೊಂಡಿದೆ. ನನ್ನ ಪರಿವಾರದ ಹಿತದೃಷ್ಟಿಯಿಂದ ಅದು ಒಳ್ಳೆಯದೆಂದು ಒಪ್ಪಿಕೊಂಡಿದ್ದೇನೆ~ ಎಂದ. ಶೇಖ್ ನಕ್ಕು ಹೇಳಿದ,  `ಮಗೂ ಯಾವ  ಕೆಲಸ ದೊರೆಯಲಿಲ್ಲವೆಂದು ಸಂತನಾಗುವುದು ಸಲ್ಲದು. ಎಲ್ಲವಿದ್ದರೂ ಅದನ್ನು ತೊರೆದು ಬರುವುದು ಸಂತತ್ವ.

ಅದಕ್ಕೆ ಬುದ್ಧಿಯ ಚತುರತೆ ಬೇಡ, ಹೃದಯದ ನಿಷ್ಕಲ್ಮಷತೆ ಬೇಕು~ ಎಂದ. ಸಾಧುವಾಗುವುದು ಸಂತನಾಗುವುದು ಪ್ರಪಂಚದಿಂದ ವಿಮುಖನಾಗುವುದಲ್ಲ. ಬದಲಾಗಿ ಜೀವನದ ಜೀವಾಂತರಂಗದಲ್ಲಿ ಹೋಗುವುದು, ಸುತ್ತಮುತ್ತಲಿನ ಜನರ ಮನೋಧರ್ಮ ಬದಲಾಯಿಸುವುದು. ಆಸೆಗಳನ್ನು, ಆಕರ್ಷಣೆಗಳನ್ನು ಗೆಲ್ಲದ ಹೊರತು ಈ ಗುರಿ ಸಾಧ್ಯವಿಲ್ಲ.

Monday, February 25, 2013

ಮಾವಿನ ಹಣ್ಣಿನ ಕಥೆ


ನಮ್ಮ ಮಾವಿನ ಹಣ್ಣಿಗೆ ಬಹಳ ದೊಡ್ಡ ಇತಿಹಾಸವಿದೆ. ಈ ಹಣ್ಣಿನ ಮರ ನಮ್ಮ ದೇಶದಲ್ಲಿದ್ದು ಸುಮಾರು ನಾಲ್ಕು ಸಾವಿರ ವರ್ಷಗಳಾದುವಂತೆ. ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಅಲೆಕ್ಸಾಂಡರ ನಮ್ಮ ದೇಶಕ್ಕೆ ಬಂದಾಗ ಅವನಿಗೆ ಈ ಹಣ್ಣು ತುಂಬ ಇಷ್ಟವಾಗಿತ್ತಂತೆ.

ಇನ್ನೊಂದು ದಂತಕಥೆಯ ಪ್ರಕಾರ, ಮಾವಿನ ಹಣ್ಣನ್ನು ಲಂಕೆಯಿಂದ ನಮ್ಮ ದೇಶಕ್ಕೆ ತಂದದ್ದು ಆಂಜನೇಯನಂತೆ. ಅಶೋಕವನದಲ್ಲಿ ಸೀತೆಯನ್ನು ಕಂಡು ಉಂಗುರವನ್ನು ಕೊಟ್ಟ ಮೇಲೆ ಸಂತೋಷದಿಂದ ಮರದಿಂದ ಮರಕ್ಕೆ ಹಾರಿ ಸಿಕ್ಕ ಹಣ್ಣುಗಳನ್ನೆಲ್ಲ ತಿಂದನಂತೆ.

ಎಲ್ಲಕ್ಕಿಂತ ಮಾವಿನಹಣ್ಣು ತುಂಬ ಪ್ರಿಯವಾಗಿದ್ದರಿಂದ ಅದರ ಬೀಜಗಳನ್ನು ನಮ್ಮ ದೇಶಕ್ಕೆ ತಂದು ಹಾಕಿದನಂತೆ. ಇನ್ನೊಂದು ಕಥೆಯಂತೆ, ಪಾರ್ವತಿ-ಪರಮೇಶ್ವರರ ಮದುವೆಯಾದದ್ದು ಮಾವಿನ ಮರದ ಕೆಳಗೆ. ಆದ್ದರಿಂದಲೇ ಮನೆಯಲ್ಲಿ ಯಾವುದೇ ಶುಭ ಸಮಾರಂಭ ನಡೆದರೆ ಮಾವಿನ ಎಲೆಗಳಿಂದ ಅಲಂಕಾರ ಮಾಡುತ್ತಾರೆಂದು ಹೇಳುತ್ತಾರೆ.

ಬೌದ್ಧಧರ್ಮದಲ್ಲೂ ಮಾವಿನ ಮರಕ್ಕೆ ವಿಶೇಷ ಸ್ಥಾನವಿದೆ. ಬುದ್ಧನ ಜಾತಕ ಕಥೆಗಳಲ್ಲಿ ಇದರ ಪ್ರಸ್ತಾಪ ಬರುತ್ತದೆ. ಬುದ್ಧ ಎಷ್ಟೋ ಜನ್ಮಗಳ ಹಿಂದೆ ಮಹಾಕಪಿಯಾಗಿ ಜನ್ಮ ಎತ್ತಿದ್ದ.

ಅವನ ಜೊತೆಗೆ ಎಂಬತ್ತು ಸಾವಿರ ಕಪಿಗಳು ಇದ್ದವು. ರಾಜನಾದ ಮಹಾಕಪಿಯ ಜೊತೆಗೆ ಉಳಿದ ಕೋತಿಗಳು ಗಂಗಾತೀರದ ದಟ್ಟ ಕಾಡಿನಲ್ಲಿ ಒಂದು ಬೃಹತ್ ಮಾವಿನ ಮರದ ಮೇಲೆ ವಾಸವಾಗಿದ್ದವು. ಮಹಾಕಪಿ ಉಳಿದ ಕೋತಿಗಳಿಗೆ, `ಈ ಹಣ್ಣು ವಿಶೇಷವಾದದ್ದು.
ಇದರ ಒಂದು ಹಣ್ಣೂ ನೆಲದ ಮೇಲೆ ಬೀಳದ ಹಾಗೆ ನೋಡಿಕೊಳ್ಳಿ. ಒಂದು ಬಾರಿ ಮನುಷ್ಯರಿಗೆ ಮಾವಿನಹಣ್ಣಿನ ರುಚಿ ಗೊತ್ತಾಯಿತೋ ಅವರು ಈ ಹಣ್ಣಿಗಾಗಿ ನಮ್ಮನ್ನೆಲ್ಲ ನಾಶಮಾಡಲು ಹಿಂಜರಿಯುವವರಲ್ಲ~ ಎಂದು ಹೇಳಿದನಂತೆ. ಕೋತಿಗಳು ಹಾಗೆಯೇ ನೋಡಿಕೊಂಡವು.

ಆದರೆ, ಒಂದು ದಿನ ಮಾತ್ರ ಪೂರ್ತಿಯಾಗಿ ಮಾಗಿದ ಹಣ್ಣು ತೊಟ್ಟು ಕಳಚಿ ನದಿಯ ನೀರಿನಲ್ಲಿ ಬಿತ್ತು. ತೇಲುತ್ತ ಮುಂದೆ ಸಾಗಿತು. ಕೆಳಹರಿವಿನಲ್ಲಿ ಕಾಶೀನಗರದ ರಾಜ ಬ್ರಹ್ಮದತ್ತ ಗಂಗಾನದಿಯಲ್ಲಿ ಸ್ನಾನ ಮಾಡುತ್ತಿದ್ದ. ಈ ಹಣ್ಣು ತೇಲುತ್ತ ಅವನ ಕೈ ಸೇರಿತು.

ಇದೇನು ಬಣ್ಣದ ಹಣ್ಣು ಎಂದು ತೆಗೆದುಕೊಂಡು ತೀರಕ್ಕೆ ಬಂದು ಅದನ್ನು ಹಿಂಡಿ ರಸವನ್ನು ಬಾಯಿಯಲ್ಲಿ ಹಾಕಿಕೊಂಡ. ಪರಮಾನಂದವಾಯಿತು. ಇಂಥ ಹಣ್ಣನ್ನು ಎಂದೂ ಕಂಡಿರಲೂ ಇಲ್ಲ, ಸವಿದೂ ಇರಲಿಲ್ಲ. ತನ್ನ ಮಂತ್ರಿಗಳಿಗೆ, ಅಧಿಕಾರಿಗಳಿಗೆ ಈ ಹಣ್ಣಿನ ಮರವನ್ನು ಕಂಡು ಹಿಡಿದು ಅಂಥ ಮರವನ್ನಾಗಲೀ, ಬೀಜವನ್ನಾಗಲೀ ತನ್ನ ರಾಜ್ಯಕ್ಕೆ ತರಬೇಕೆಂದು ಆಜ್ಞೆ ಮಾಡಿದ.

ಎಷ್ಟೋ ದಿನಗಳ ನಂತರ ರಾಜನ ದೂತರು ಗಂಗಾನದಿಯ ಪ್ರವಾಹಕ್ಕೆ ವಿರುದ್ಧವಾಗಿ ನಡೆದು ಬಂದು ಕಾಡಿನಲ್ಲಿದ್ದ ಈ ಮರವನ್ನು ಕಂಡರು. ಮರದ ತುಂಬ ಹಣ್ಣುಗಳು. ಸುದ್ದಿ ತಿಳಿದು ರಾಜ ಬಂದ. ಮರದ ಮೇಲೆ ತುಂಬಿಕೊಂಡಿದ್ದ ಕೋತಿಗಳನ್ನು ನೋಡಿದ.

ಈ ಕೋತಿಗಳೆಲ್ಲ ಹಣ್ಣುಗಳನ್ನು ತಿಂದುಬಿಡುತ್ತವೆ ಎಂದುಕೊಂಡು  ಈ ಕೋತಿಗಳನ್ನು ಓಡಿಸಿ ಇಲ್ಲವೇ ಕೊಂದುಬಿಡಿ  ಎಂದು ಆಜ್ಞೆ ಮಾಡಿದ. ತನ್ನ ಪರಿವಾರದವರು ಸಾಯಬಾರದೆಂದು ಮಹಾಕಪಿ ನದಿಯ ತುದಿಯವರೆಗೂ ಚಾಚಿಕೊಂಡಿದ್ದ ಕೊಂಬೆಯೊಂದನ್ನು ಏರಿ ಆ ಕಡೆಗೆ ಹಾರಿತು.

ನಂತರ ಉದ್ದವಾದ ಕೋಲನ್ನು ತಂದು ಅದಕ್ಕೆ ಕಟ್ಟಿ ಕೋತಿಗಳಿಗೆಲ್ಲ ಅದರ ಮೂಲಕ ಇನ್ನೊಂದು ದಂಡೆಗೆ ಹೋಗಲು ಹೇಳಿತು. ಆ ಕೋಲು ಕೊಂಚ ಗಿಡ್ಡವಾದ್ದರಿಂದ ತನ್ನ ದೇಹವನ್ನೇ ಸೇತುವೆಯಂತೆ ಚಾಚಿ ಹಿಡಿದುಕೊಂಡಿತು. ಕೋತಿಗಳೆಲ್ಲ ಆ ಕಡೆಗೆ ಸಾಗಿದವು. ಆದರೆ ದೇವದತ್ತನೆಂಬ ಕೋತಿ ಮಹಾಕಪಿಯ ಮೇಲೆ ಸಿಟ್ಟಿನಿಂದ ದಾಟುವಾಗ ಅದರ ಬೆನ್ನನ್ನು ಒತ್ತಿ ತುಳಿದು ಮುರಿದುಬಿಟ್ಟಿತು. ಆದರೂ ಎಲ್ಲ ಕೋತಿಗಳೂ ದಾಟುವವರೆಗೆ ಮಹಾಕಪಿ ನೋವನ್ನು ತಾಳಿಕೊಂಡು ನಂತರ ಕುಸಿದು ಬಿದ್ದಿತು.

ಈ ಮಹಾಕಪಿಯ ತ್ಯಾಗ ಬುದ್ಧಿಯನ್ನು ಕಂಡು ರಾಜ ಬ್ರಹ್ಮದತ್ತ ಅದನ್ನು ಅರಮನೆಗೆ ತಂದು ಶುಶ್ರೂಷೆ ಮಾಡಿದ. ಅದು ಫಲಕಾರಿಯಾಗದೇ ಮಹಾಕಪಿ ಸತ್ತು ತನ್ನ ಅವತಾರ ಮುಗಿಸಿತು. ರಾಜ ಬ್ರಹ್ಮದತ್ತ ಆ ಕಪಿಯ ನೆನಪಿಗಾಗಿ ಮಾವಿನಗಿಡದ ಕೆಳಗೆ ಒಂದು ದೇವಸ್ಥಾನ  ಕಟ್ಟಿಸಿದ. ಹೀಗೆ ಮಾವಿನ ಹಣ್ಣಿನ ಮರದ ಕಥೆ ಬೆಳೆಯುತ್ತದೆ.

ಇದರ ತಾತ್ಪರ್ಯವಿಷ್ಟೇ. ನಾವು ಬಳಸುವ ಪ್ರತಿಯೊಂದು ವಸ್ತುವಿಗೆ ಒಂದು ಅದ್ಭುತ ಇತಿಹಾಸ, ಕತೆ ಇರುತ್ತದೆ. ಅದನ್ನು ತಿಳಿದು ಗಮನಿಸಿದಾಗ ಆ ವಸ್ತುವಿನ ಬಗ್ಗೆ ಗೌರವ, ಪ್ರೀತಿ ಬರುತ್ತದೆ. ಮಾವಿನ ಹಣ್ಣು ತಿನ್ನುವಾಗ ಈ ಕಥೆಗಳು ಜ್ಞಾಪಕವಾದರೆ ಹಣ್ಣಿನ ರುಚಿ ಹೆಚ್ಚುತ್ತದೆ.

Friday, February 22, 2013

ಪರಶುರಾಮ್

ಮೌನ ತಾಳಿತು ಈ ಮನ - ದಿಲೀಪ ಭಟ್


ಸಭಾಪರ್ವ: ೦೧. ರಾಜಸೂಯಾರಂಭ




ಸೂ: ಸಭೆಯೊಳೋಲಗದೊಳು ವಿರಿಂಚಿ
ಪ್ರಭವನನುಮತದಿಂದ ಧರಣೀ
ವಿಭು ಮಹಾಕ್ರತು ರಾಜಸೂಯವನೊಲಿದು ಕೈಕೊಂಡ

ಕೇಳು ಜನಮೇಜಯ ಧರಿತ್ರೀ
ಪಾಲ ಖಾಂಡವ ವನದ ವಹ್ನಿ
ಜ್ವಾಲೆ ತೆಗೆದುದು ಕೂಡೆ ಹೊಗೆದುದು ಹೊದರ ಹೊಸ ಮೆಳೆಯ
ಮೇಲುಗಾಳಗದುಬ್ಬಿನಲಿ ಸಿರಿ
ಲೋಲ ಸಹಿತರ್ಜುನನು ವಿಕ್ರಮ
ದೇಳಿಗೆಯ ಪರಿತೋಷದಲಿ ತಿರುಗಿದನು ಪಟ್ಟಣಕೆ ೧

ದೂತರೈದಿದರಿವರ ಸೂರೆಯ
ಕೈತವಕಿಗರು ಕೃತಕ ವಾರ್ತಾ
ಭೀತ ಪುರಜನ ಮುಖದ ದುಗುಡದ ದಡ್ಡಿಗಳನುಗಿದು
ಬೀತುದಿಂದ್ರನ ಬಲುಹು ವಿಗಡನ
ವೀತಿಹೋತ್ರನ ವಿಲಗ ತಿದ್ದಿ ವಿ
ಧೂತರಿಪುಬಲ ಬಂದನಿದೆಯೆಂದರು ಮಹೀಪತಿಗೆ ೨

ಹೂತುದರಸನ ಹರುಷಲತೆ ಪುರು
ಹೂತ ವಿಜಯದ ವಿಜಯ ವಾರ್ತಾ
ಶ್ರೋತ್ರ ಸುಖಸಂಪ್ರೀತಿ ನಯನ ಜಲಾಭಿಷೇಕದಲಿ
ಮಾತು ಹಿಂಚಿತು ಮುಂಚಿದುದು ನಯ
ನಾತಿಥಿವ್ರಜ ಮುಸುಕಿತಸುರ ವಿ
ಘಾತಿ ಪಾರ್ಥನನನಿಲಸುತ ನಕುಲಾದಿ ಬಾಂಧವರ ೩

ತಳಿತ ಗುಡಿಗಳು ಸಾಲ ಕಲಶದ
ನಿಳಯ ನಿಳಯದ ಬೀದಿ ಬೀದಿಯ
ತಳಿರ ತೋರಣದೋರಣದ ನವ ಮಕರತೋರಣದ
ತಳಿಗೆ ತುಂಬುಲದಾರತಿಯ ಮಂ
ಗಳಿತ ರಭಸದೊಳಖಿಳ ರಾಜಾ
ವಳಿಗಳೊಸಗೆಯುಳಿವರು ಹೊಕ್ಕರು ರಾಜಮಂದಿರವ ೪

ಹಿರಿಯರಂಘ್ರಿದ್ವಯಕೆ ಮಣಿದರು
ಕಿರಿಯರುಚಿತ ಕ್ಷೇಮ ಕುಶಲದಿ
ಪರಿ ರಚಿತ ಪರಿರಂಭ ಮಧುರ ವಚೋವಿಳಾಸದಲಿ
ಅರಸನಿವರನು ಮನ್ನಿಸಿದನಾ
ದರಿಸಿತನ್ಯೋನ್ಯಾನುರಾಗ
ಸ್ಫುರಿತ ತೇಜೋಭಾವ ವಿಭ್ರಮ ಭೂಪತಿವ್ರಾತ ೫

ಅರಸ ಕೇಳೈ ಬಳಿಕ ಹರಿ ನಿಜ
ಪುರಕೆ ಬಿಜಯಂಗೆಯ್ವ ವಾರ್ತೆಯ
ನೊರೆದನವನೀಪತಿಗೆ ಭೀಮ ಧನಂಜಯಾದ್ಯರಿಗೆ
ಅರಸಿಯರಿಗಭಿಮನ್ಯು ಧರ್ಮಜ
ನರ ವೃಕೋದರಸೂನು ಮೊದಲಾ
ಗಿರೆ ಸಮಸ್ತಜನಂಗಳನು ಮನ್ನಿಸಿದನುಚಿತದಲಿ ೬

ವರಮುಹೂರ್ತದೊಳಮೃತ ಯೋಗೋ
ತ್ಕರ ಶುಭಗ್ರಹ ದೃಷ್ಟಿಯಲಿ ಹಿಮ
ಕರಶುಭಾವಸ್ಥೆಯಲಿ ಕೇಂದ್ರಸ್ಥಾನ ಗುರುವಿನಲಿ
ಧರಣಿಸುರರಾಶೀರ್ವಚನ ವಿ
ಸ್ತರಣ ದಧಿ ದೂರ್ವಾಕ್ಷತೆಗಳು
ಬ್ಬರದ ವಾದ್ಯ ಗಡಾವಣೆಯಲಸುರಾರಿ ಹೊರವಂಟ ೭

ಕರಯುಗದ ಚಮ್ಮಟಿಕೆ ವಾಘೆಯ
ಲರಸ ರಥವೇರಿದನು ಮುಕ್ತಾ
ಭರದ ಭಾರದ ಸತ್ತಿಗೆಯ ಪಲ್ಲವಿಸಿದನು ಭೀಮ
ಹರಿಯುಭಯಪಾರ್ಶ್ವದಲಿ ಸಿತ ಚಾ
ಮರವ ಚಿಮ್ಮಿದನರ್ಜುನನು ಬಂ
ಧುರದ ಹಡಪದ ಹೆಗಲಲೈದಿದರರ್ಜುನಾನುಜರು ೮

ಪೌರಜನ ಪುರಜನ ನೃಪಾಲ ಕು
ಮಾರ ಸಚಿವ ಪಸಾಯ್ತ ಭಟ ಪರಿ
ವಾರ ಧೌಮ್ಯಪ್ರಮುಖ ಸೂರಿ ಸಮಾಜರೊಗ್ಗಿನಲಿ
ತೇರ ಬಳಿವಿಡಿದೈದಿದರು ಮುರ
ವೈರಿ ವಿರಹ ವಿಧೂತ ವದನಾಂ
ಭೋರುಹರ ಸಂತೈಸಿ ಬೀಳ್ಕೊಟ್ಟನು ಕೃಪಾಜಲಧಿ ೯

ಅರಿನೃಪರು ಕುಹಕಿಗಳು ನೀವೇ
ಸರಸ ಹೃದಯರಧರ್ಮಶೀಲರು
ಪರರು ನೀವತಿ ಧರ್ಮನಿಷ್ಠರು ಹಾನಿಯುಂಟದಕೆ
ಅರಸನಾರೋಗಳೆ ವಿಹಾರದೊ
ಳಿರುಳು ಹಗಲು ಮೃಗವ್ಯಸನದೆ
ಚ್ಚರಿನೊಳಿಹುದೆಂದನಿಬರನು ಬೀಳ್ಕೊಟ್ಟನಸುರಾರಿ ೧೦

ನಾಲಗೆಗಳಸುರಾರಿ ಗುಣ ನಾ
ಮಾಳಿಯಲಿ ತುರುಗಿದವು ಕಂಗಳು
ನೀಲಮೇಘಶ್ಯಾಮನಲಿ ಬೆಚ್ಚವು ವಿಹಾರದಲಿ
ಬಾಲಕೇಳೀ ಕಥನ ಸುಧೆಯೊಳ
ಗಾಳಿ ಮುಳುಗುತ ಕಳುಹುತನಿಬರು
ಸಾಲಭಂಜಿಕೆಯಂದವಾದರು ಕೃಷ್ಣವಿರಹದಲಿ ೧೧

ಕಳುಹಿ ಕಂಗಳು ಮರಳಿದವು ಮನ
ಕಳುಹದಾ ದ್ವಾರಾವತಿಗೆ ಮಂ
ಗಳ ಮಹೋತ್ಸವದೊಸಗೆ ನುಡಿಯಲಿ ಹೊಕ್ಕನಸುರಾರಿ
ಬಳಿಕಿವರು ನಿಜ ರಾಜಭವನ
ಸ್ಥಳಕೆ ಬಂದರು ಸೌಮನಸ್ಯದ
ಲಿಳೆಯ ಪಾಲಿಸುತಿರ್ದರವನೀಪಾಲ ಕೇಳೆಂದ ೧೨

ಮುರಹರನ ನೇಮದಲಿ ಮಯ ವಿ
ಸ್ತರಿಸಿದನು ಪದಿನಾಲ್ಕು ತಿಂಗಳು
ವರ ಸಭಾಮಂಟಪವನನಿಬರಿಗಿವ ಕೃತಜ್ಞನಲೆ
ಕಿರಣ ಲಹರಿಯ ವಿವಿಧ ರತ್ನೋ
ತ್ಕರದ ರಚನಾಶಿಲ್ಪವಿದು ದೇ
ವರಿಗಸಾಧ್ಯವು ಶಿವಶಿವಾಯೆನೆ ಮೆರೆದುದಾಸ್ಥಾನ ೧೩

ಹತ್ತು ಸಾವಿರ ಕೈ ಪ್ರಮಾಣದ
ಸುತ್ತುವಳಯದ ಮಣಿಯ ಶಿಲೆಗಳ
ತತ್ತವಣೆಗಳ ತೆಕ್ಕೆವೆಳಗಿನ ಲಳಿಯ ಲಹರಿಗಳ
ಸುತ್ತುವಳಯದ ಪದ್ಮರಾಗದ
ಭಿತ್ತಿಗಳ ವೈಡೂರ್ಯ ಶಿಲೆಗಳ
ಮತ್ತವಾರಣ ವರ ವಿಧಾನದಲೆಸೆದುದಾಸ್ಥಾನ ೧೪

ಕರೆಸಿದನು ಮಯನೆಂಟು ಸಾವಿರ
ಸರಿಗ ರಕ್ಕಸ ಕಿಂಕರರ ನಿಜ
ಶಿರದೊಳಾಂತರು ತಂದರಿಂದ್ರಪ್ರಸ್ಥಪುರವರಕೆ
ಅರಸ ಕಾಣಿಸಿಕೊಂಡನದನಾ
ದರಿಸಿದನು ಭೀಮಂಗೆ ಭಾರಿಯ
ವರ ಗದಾದಂಡವನು ಕಾಣಿಕೆಯಿತ್ತು ಪೊಡವಂಟ ೧೫

ಇದು ಪುರಾತನ ಸಗರ ವಂಶಾ
ಭ್ಯುದಯ ದುರ್ಜಯ ಯೌವನಾಶ್ವನ
ಗದೆ ಕೃತಾಂತನ ಕರದ ದಂಡವನಂಡಲೆವ ಬಲದ
ಮದದಲೊಪ್ಪುವುದೆನುತ ಮಯನತಿ
ಮುದದಿ ಬಳಿಕಾ ದೇವದತ್ತಾ
ಖ್ಯದ ಮಹಾ ಶಂಖವನು ಪಾರ್ಥಗೆ ಕೊಟ್ಟು ಕೈಮುಗಿದ ೧೬

ಒಸಗೆ ಮೆರೆದುದು ಮಯನ ಮಿಗೆ ಮ
ನ್ನಿಸಿದನವನಿಪನಂಗಚಿತ್ತದೊ
ಳಸುರ ಕಿಂಕರರನಿಬರನು ಸನ್ಮಾನ ದಾನದಲಿ
ಒಸೆದು ಕಳುಹಿದನಾತನನು ದೆಸೆ
ದೆಸೆಯ ಯಾಚಕ ನಿಕರ ನೂಕಿತು
ಮುಸುಕಿತೈ ಧರ್ಮಜನ ಕೀರ್ತಿಯ ಝಾಡಿ ಮೂಜಗವ ೧೭

ದಿವಸ ದಿವಸದೊಳುಂಡುದವನೀ
ದಿವಿಜ ಸಂತತಿ ಹತ್ತು ಸಾವಿರ
ವವರನೇನೆಂದೆಣಿಸುವೆನು ಮಾರ್ಗಣ ಮಹೋದಧಿಯ
ವಿವಿಧ ರತ್ನಾಭರಣ ಕಾಂಚನ
ನವ ದುಕೂಲದ ದಿಂಡಿನಲಿ ಬುಧ
ನಿವಹ ದಣಿದುದನಂತ ಕೃಪಣಾನಾಥ ಜನಸಹಿತ ೧೮

ಆ ಮಹೋತ್ಸವದೇಳು ದಿನವಭಿ
ರಾಮರಂಜಿತವಾಯ್ತು ಶುಭದಿನ
ರಾಮಣೀಯಕ ಲಗ್ನದಲಿ ಹೊಕ್ಕನು ಮಹಾಸಭೆಯ
ಭೂಮಿಪಾಲರನಂತ ಸುಜನ
ಸ್ತೋಮವನುಜರಮರ್ತ್ಯರೆನಿಪ ಸ
ನಾಮರಿದ್ದರು ರಾಯನೆಡಬಲವಂಕದಿದಿರಿನಲಿ ೧೯

ಹೊಳೆಹೊಳೆದುದಾಸ್ಥಾನ ಕಾಂತಾ
ವಳಿಯ ಕಂಗಳ ಬೆಳಕಿನಲಿ ತನಿ
ಮುಳುಗಿತೋಲಗ ಲಲಿತರಸ ಲಾವಣ್ಯಲಹರಿಯಲಿ
ವಿಳಸದಖಿಳಾಭರಣ ರತ್ನಾ
ವಳಿಯ ರಶ್ಮಿಯಲಡಿಗಡಿಗೆ ಪ್ರ
ಜ್ವಲಿಸಿತಾ ಸಭೆ ದೀಪ್ತಿಮಯ ವಿವಿಧಾನುಭಾವದಲಿ ೨೦

ಮೇಳದಲಿ ಗಂಧರ್ವರಿಪ್ಪ
ತ್ತೇಳು ತುಂಬುರ ಸಹಿತ ಶುದ್ಧದ
ಸಾಳಗದ ಸಂಕೀರ್ಣ ದೇಶಿಯ ವಿವಿಧ ರಚನೆಗಳ
ಬಾಳೆಯರ ಸುರಗಣಿಕೆಯರ ಮುಖ
ಚಾಳೆಯರ ಸಂಗೀತ ತಾಳದ
ತೂಳುವರೆ ತುಂಬಿದುದು ಕುಸುಮಾಯುಧನ ಕಳವಳವ ೨೧

ಆ ಮಹಾಸಭೆಯಲಿ ಯುಧಿಷ್ಠಿರ
ಭೂಮಿಪತಿ ದೂರದಲಿ ಕಂಡನು
ತಾಮರಸವಳ ನಯನ ಸನ್ನಿಭ ಭಾವ ಭಾವಿತನ
ಹಾ ಮಹಾದೇವೆತ್ತಣದುಭುತ
ಧಾಮವಿದು ದಿನಮಣಿಯ ತೇಜ
ಸ್ತೋಮವೆರಡರ ಧಾತುಯೆನುತೀಕ್ಷಿಸಿದರಾ ದೆಸೆಯ ೨೨

ಲಲಿತ ತೇಜಃಪುಂಜ ಮಿಗೆ ಥಳ
ಥಳಿಸಿತತಿ ದೂರದಲಿ ಬೆಳಗಿನ
ಗೊಳಸನುಡಿದಂತಾದುದಾಗಳೆ ತೋರಿತಾಕಾರ
ತಳಿತುದವಯವ ಶುದ್ಧವರ್ಣ
ಸ್ಥಳವು ನಿಮಿಷಕೆ ಮುನಿವರಾಕೃತಿ
ಹೊಳೆದುದಾಕ್ಷಣವೀತ ನಾರದನೆಂದುದಖಿಳಜನ ೨೩

ದಣಿಯದಾತನ ಬೆರಳು ನಾರಾ
ಯಣರವದ ವೀಣೆಯಲಿ ಹೃದಯಾಂ
ಗಣದ ಸೀಮೆಗೆ ಬಿಡಯವಾಗದು ಕೃಷ್ಣಪದ ಕೇಳಿ
ಪ್ರಣವರೂಪದ ಭಾವಶುದ್ಧಿಯ
ಕಣಿ ಮುರಾರಿಯ ತನ್ಮಯದ ನಿ
ರ್ಗುಣಮುನೀಶ್ವರನಿಳಿದನಿಂದ್ರಪ್ರಸ್ಥಪುರವರಕೆ ೨೪

ಬಂದನರಮನೆಗಾ ಮುನಿಯನಭಿ
ವಂದಿಸಿದುದಾಸ್ಥಾನವಿದಿರಲಿ
ನಿಂದುಬಿಜಯಂಗೈಸಿ ತಂದರು ಸಿಂಹವಿಷ್ಟರಕೆ
ಸಂದ ಮಧುಪರ್ಕಾದಿ ಸತ್ಕೃತಿ
ಯಿಂದ ಪೂಜಿಸಿ ವಿನಯ ಮಿಗೆ ನಗು
ತೆಂದನವನೀಪಾಲನುಚಿತೋಕ್ತಿಯಲಿ ನಾರದನ ೨೫

ಕುಶಲವೇ ನಿಮ್ಮಂಘ್ರಿಗಳಿಗಿಂ
ದೊಸಗೆಯಾಯಿತು ನಮಗೆ ದರುಶನ
ವಸಮ ಸಂಸ್ಕೃತಿ ವಹ್ನಿದಗ್ಧರಿಗಮೃತ ವರ್ಷವಲೆ
ಪಶುಪತಿಯ ಪರಮೇಷ್ಠಿಯಾ ಮುರ
ದ್ವಿಷನ ಸಾಮರ್ಥ್ಯದ ಸಗಾಢದ
ದೆ(ಎ)ಸಕ ನಿಮಗುಂಟೆಂದು ಕೊಂಡಾಡಿದನು ನಾರದನ ೨೬

ಕುಶಲವೆಮಗಿಂದೈದೆ ನೀನೀ
ವಸುಮತೀವಧುಗೊಳ್ಳಿದನೆ ಶೋ
ಭಿಸುವುದೇ ಭವದಾಜ್ಞೆಯಲಿ ವರ್ಣಾಶ್ರಮಾಚಾರ
ದೆಸೆದೆಸೆಗಳಮಳಾಗ್ನಿಹೋತ್ರ
ಪ್ರಸರ ಧೂಮಧ್ವಜಗಳೇ ನಿಂ
ದಿಸರಲೇ ದುರ್ಜನರು ಸುಜನನರನೆಂದನಾ ಮುನಿಪ ೨೭

ಅರ್ಥದಿಂ ಧರ್ಮವನು ಧರ್ಮದಿ
ನರ್ಥವನು ಧರ್ಮಾರ್ಥವೆರಡನು
ವ್ಯರ್ಥಕಾಮದಲಳಿಯಲೇ ರಾಜ್ಯಾಭಿಲಾಷೆಯಲಿ
ಅರ್ಥಸಾಧನ ಧರ್ಮಸಾಧನ
ವರ್ಥಧರ್ಮದಲುಭಯಲೋಕಕ
ನರ್ಥಸಾಧನ ಕಾಮವೆಂದನು ಮುನಿ ನೃಪಾಲಂಗೆ ೨೮

ಮಾನ್ಯರನು ಧಿಕ್ಕರಿಸೆಯಲೆಯವ
ಮಾನ್ಯರನು ಮನ್ನಿಸೆಯಲೇ ಸಂ
ಮಾನ್ಯರನು ಸತ್ಕರಿಸುವಾ ಹಳಿವಾ ವಿಕಾರಿಗಳ
ಅನ್ಯರನು ನಿನ್ನವರ ಮಾಡಿಯ
ನನ್ಯರನು ಬಾಹಿರರ ಮಾಡಿವ
ದಾನ್ಯರನು ನಿಗ್ರಹಿಸೆಯೆಲೆ ಭೂಪಾಲ ಕೇಳೆಂದ ೨೯

ಖಳರ ಖಂಡಿಸುವಾ ಮದವ್ಯಾ
ಕುಲರ ದಂಡಿಸುವಾ ದರಿದ್ರರ
ನೊಲಿದು ರಕ್ಷಿಸುವಾ ಸುಮಾಯಾವಿಗಳ ಶಿಕ್ಷಿಸುವ
ಕುಲಯುತರ ಕೊಂಡಾಡುವಾ ರಿಪು
ಬಲದ ತಲೆ ಚೆಂಡಾಡುವಾ ದು
ರ್ಬಲರನತಿ ಬಾಧಿಸೆಯಲೇ ಭೂಪಾಲ ಕೇಳೆಂದ ೩೦

ಜಾತಿಸಂಕರವಿಲ್ಲಲೇ ಜನ
ಜಾತದಲಿ ಹೀನೋತ್ತಮರು ನಿ
ರ್ಣೀತರೇ ನಿಜಮಾರ್ಗದಲಿ ಕುಲವಿಹಿತ ಧರ್ಮದಲಿ
ಖ್ಯಾತರೇ ಸತ್ಪುರುಷರಧಿಕ
ದ್ಯೂತಕೇಳಿಗಳಿಲ್ಲಲೇ ಮೃಗ
ಯಾತಿರೇಕವ್ಯಸನ ಕಿರಿದೇ ರಾಯ ನಿನಗೆಂದ ೩೧

ಗಸಣಿಯಿಲ್ಲಲೆ ನಿನಗೆ ಸಪ್ತ
ವ್ಯಸನದಲಿ ನಿನ್ನನುಜ ತನುಜರ
ಮುಸುಡಧರ್ಮದಲಿರದಲೇ ವೈದಿಕ ವಿಧಾನದಲಿ
ಸಸಿನವೇ ನಿನ್ನರಿತ ಖಳರಿಗೆ
ಹುಸಿಕರಿಗೆ ಡಂಬಕರಿಗಜ್ಞರಿ
ಗುಸುರುವಾ ನಿನ್ನಂತರಂಗವನೆಂದನಾ ಮುನಿಪ ೩೨

ಹುರುಡಿಗರನೇಕಾಂತದೊಳಗಾ
ದರಿಸುವರು ಭೇದಕರ ಬುದ್ಧಿಗೆ
ತೆರಹುಗೊಡುವರು ಕುಟಿಲರಿಗೆ ವಿಶ್ವಾಸಹೀನರಿಗೆ
ಮರುಳುಗೊಂಬರು ಖೂಳರಿಗೆ ಭಂ
ಡರಿಗೆ ತೆರುವರು ಧನವನೀ ಧರೆ
ಯರಸುಗಳಿಗಿದು ಸಹಜ ನಿನ್ನಂತಸ್ಥವೇನೆಂದ ೩೩

ಒಳಗೆ ಕುಜನರು ಹೊರಗೆ ಧರಣೀ
ವಳಯಮಾನ್ಯರು ಛತ್ರಚಮರದ
ನೆಳಲು ಖೂಳರಿಗಾತಪದ ಬಲುಬೇಗೆ ಬುಧಜನಕೆ
ಒಳಗೆ ರಾಜದ್ರೋಹಿಗಳು ಹೊರ
ವಳಯದಲಿ ಪತಿಕಾರ್ಯನಿಷ್ಠರು
ಬಳಸಿಹುದು ನೃಪಚರಿತ ನಿನ್ನಂತಸ್ಥವೇನೆಂದ ೩೪

ಖೂಳರೊಡನೆ ವಿನೋದ ಭಂಡರೊ
ಳಾಳಿ ಸ್ವಾಮಿದ್ರೋಹರೊಡನೆ ಸ
ಮೇಳ ನಂಬುಗೆ ಡಂಭರೊಡನೆ ವಿಕಾರಿಯೊಡನಾಟ
ಸೂಳೆಯರು ಸಮಜೀವಿಗಳು ಕುಲ
ಬಾಲಕಿಯರೋಗಡಿಕೆಯವರು ನೃ
ಪಾಲಜನಕಿದು ಸಹಜ ನಿನ್ನಂತಸ್ಥವೇನೆಂದ ೩೫

ಆರು ಗುಣದೊಳುಪಾಯ ನಾಲ್ಕರೊ
ಳೇರಿಹುದೆ ಮನ ರಾಜಧರ್ಮದ
ಮೂರುವರ್ಗದೊಳೆಚ್ಚರುಂಟೇ ನಯವಿಧಾನದಲಿ
ಮೂರು ಶಕ್ತಿಗಳೊಳಗೆ ಮನ ಬೇ
ರೂರಿಹುದೆ ಸಪ್ತಾಂಗದಲಿ ಮೈ
ದೋರಿಹೈ ಬೇಸರೆಯೆಲೇ ಭೂಪಾಲ ನೀನೆಂದ ೩೬

ಪ್ರಜೆಗಳನುರಾಗಿಗಳೆ ಸುಭಟ
ವ್ರಜಕೆ ಜೀವಿತ ಸಂದಿಹುದೆ ವರ
ಸುಜನರಿಗೆ ಸಂತೋಷವೇ ಮಧುರೋಕ್ತಿ ರಚನೆಯಲಿ
ವಿಜಯ ಭೀಮರು ಯಮಳರಿವರ
ಗ್ರಜರೊಳನುಜರಭಿನ್ನರೇ ಗಜ
ಬಜಿಕೆಯಂತಃಪುರದೊಳಿಲ್ಲಲೆ ರಾಯ ಕೇಳೆಂದ ೩೭

ವಿಹಿತಕಾಲದ ಮೇಲೆ ಸಂಧಿಯ
ನಹಿತರೊಳು ವಿರಚಿಸುವ ಮೇಣ್ವಿ
ಗ್ರಹದ ಕಾಲಕೆ ವಿಗಡಿಸುವುದೆಂಬರಸು ನೀತಿಯಲಿ
ವಿಹಿತವೇ ಮತಿ ವೈರಿ ರಾಯರ
ವಿಹರಣವನವರಾಳು ಕುದುರೆಯ
ಬಹಳತೆಯನಲ್ಪತೆಯನರಿವೈ ರಾಯ ನೀನೆಂದ ೩೮

ಒಂದರಾಯಕೆ ಬೀಯ ಸರಿ ಮ
ತ್ತೊಂದು ಕಡೆಯಲಿ ಹೀನ ಫಲವಿ
ನ್ನೊಂದು ಕಾರ್ಯದುಪೇಕ್ಷತೆಗೆ ಮೊದಲಿಲ್ಲ ಕಡೆಯಿಲ್ಲ
ಒಂದು ದುರ್ಘಟ ದೈವ ಸಾಧಿತ
ವೊಂದು ಶಂಕಿತ ಫಲವೆನಿಪ್ಪವ
ಹಿಂದುಗಳೆವೈ ಮಂತ್ರದಲಿ ಭೂಪಾಲ ಕೇಳೆಂದ ೩೯

ನೆನೆದ ಮಂತ್ರವ ನಿನ್ನೊಳಾಲೋ
ಚನೆಯ ನಿಶ್ಚಯವಿಲ್ಲದಿರಲೊ
ಬ್ಬನಲಿ ಮೇಣ್ ಹಲಬರಲಿ ಜಡರಲಿ ಮತಿವಿಹೀನರಲಿ
ಮನಬರಡರಲಿ ಸಲೆ ವಿಧಾವಂ
ತನಲಿ ಮಂತ್ರಾಲೋಚನೆಯ ಸಂ
ಜನಿಸಿ ಹರಹಿನೊಳಳಿಯೆಲೇ ಭೂಪಾಲ ಕೇಳೆಂದ ೪೦

ಕಿರಿದುಪೇಕ್ಷೆಯ ಬಹಳ ಫಲವನು
ಹೊರೆವುದಿದು ಮೇಣಲ್ಪಭೇದಕೆ
ಮುರಿವುದಿದು ವಿಕ್ರಮಕೆ ವಶವಿದು ನೀತಿಸಾಧ್ಯವಿದು
ಹರಿವುದಿದು ನಯ ಶಕ್ತಿಗೆಂಬುದ
ನರಿದು ನಡೆವೈ ರಾಜಧರ್ಮದ
ಹೊರಿಗೆಯನು ಮರೆದಿರೆಯೆಲೇ ಭೂಪಾಲ ಕೇಳೆಂದ ೪೧

ಪರರು ಮಾಡಿದ ಸದ್ಗುಣಂಗಳ
ಮರೆಯೆಯಲೆ ಪರರವಗುಣಂಗಳ
ಮರೆದು ಕಳೆವಾ ಮಾನ್ಯರಿಗೆ ನೀ ಮಾಡಿದವಗುಣವ
ಮೆರೆಯೆಯಲೆ ನೀ ಮಾಡಿದುಚಿತವ
ಮರೆದು ಕಳೆವಾಚಾರವಿದು ಸ
ತ್ಪುರುಷರಭಿಮತವಿದು ಕಣಾ ಭೂಪಾಲ ಕೇಳೆಂದ ೪೨

ಭಜಿಸುವಾ ಭಕ್ತಿಯಲಿ ದೈವ
ದ್ವಿಜ ಗುರುಸ್ಥಾನವನು ದೇಶ
ಪ್ರಜೆಯನರ್ಥಾಗಮದ ಗಡಣೆಗೆ ಘಾಸಿ ಮಾಡೆಯೆಲೆ
ಕುಜನರಭಿಮತಮಗ್ರ ದಂಡ
ವ್ಯಜನದಲಿ ಜನ ಜಠರ ವಹ್ನಿಯ
ಸೃಜಿಸೆಯೆಲೆ ಭವದೀಯ ರಾಜ್ಯಸ್ಥಿತಿಯ ಹೇಳೆಂದ ೪೩

ಆಣೆಗಪಜಯವಿಲ್ಲಲೇ ಕೀ
ಳಾಣೆ ಟಂಕದೊಳಿಲ್ಲಲೇ ನಿ
ತ್ರಾಣದಲಿ ಸಂಗರವ ಹೊಗೆಯೆಲೆ ಶೌರ್ಯ ಗರ್ವದಲಿ
ವಾಣಿಯವನುಚಿತದಲಿ ಧರ್ಮದ
ಲೂಣೆಯವನಹಿತರಲುಪೇಕ್ಷೆಯ
ಕೇಣವನು ದಾನದಲಿ ಮಾಡೆಲೆ ರಾಯ ಕೇಳೆಂದ ೪೪

ಕಳವು ಪುಸಿ ಹಾದರ ವಿರೋಧ
ಸ್ಖಲಿತವಾರಡಿಬಂದಿ ದಳವುಳ
ಬೆಳಗವಿತೆಯನ್ಯಾಯ ಪರಿಭವ ಠಕ್ಕು ಡೊಳ್ಳಾಸ
ಪಳಿವು ವಂಚನೆ ಜಾತಿ ಸಂಕರ
ಕೊಲೆ ವಿರೋಧವು ವಿಕೃತ ಮಾಯಾ
ವಳಿಗಳೆಂಬಿವು ನಿನ್ನೊಳಿಲ್ಲಲೆ ರಾಯ ಕೇಳೆಂದ ೪೫

ರಣಮುಖದೊಳಂಗನೆಯೊಳಾರೋ
ಗಣೆಯಲರಿಗಳ ಕೂಟದಲಿ ವಾ
ರಣ ತುರಗದೇರಾಟದಲಿ ವಿವಿಧಾಯುಧಂಗಳಲಿ
ಎಣೆ ನೃಪರ ಸೋಂಕಿನಲಿ ಸೆಜ್ಜೆಯ
ಲಣಿಯ ಮಜ್ಜನದಲಿ ಮಹಾಮೃಗ
ಗಣನೆಯೊಳಗೆಚ್ಚರಿಕೆಯುಂಟೇ ರಾಯ ನಿನಗೆಂದ ೪೬

ನುಡಿದೆರಡನಾಡದಿರು ಕಾರ್ಯವ
ಬಿಡದಿರಾವನೊಳಾದರೆಯು ನಗೆ
ನುಡಿಯ ಕುಂದದಿರೊಡೆಯದಿರು ಹೃದಯವನು ಕಪಟದಲಿ
ಬಡಮನವ ಮಾಡದಿರು ಮಾರ್ಗದೊ
ಳಡಿಯಿಡದಿರನುಜಾತ್ಮಜರೊಳೊ
ಗ್ಗೊಡೆಯದಿರು ನೃಪನೀತಿಯಿದು ಭೂಪಾಲ ಕೇಳೆಂದ ೪೭

ನೀತಿವಿಡಿದರಸಂಗೆ ಬಹಳ
ಖ್ಯಾತವದು ಜನರಾಗ ರಾಗ
ವ್ರಾತದಿಂ ಧನ ಧನದಿ ಪರಿಕರ ಪರಿಕರದಿ ಜಯವು
ಆತ್ತ ಜಯದಿಂ ಧರ್ಮ ಧರ್ಮ ಸ
ಮೇತದಿಂ ಸುರತುಷ್ಟಿ ತುಷ್ಟಿಯ
ನೀತಿಯಿಂದಿಹಪರವ ಗೆಲುವೈ ರಾಯ ನೀನೆಂದ ೪೮

ಮಂತ್ರವುಳ್ಳವನವನೆ ಹಿರಿಯನು
ಮಂತ್ರವುಳ್ಳವನವನೆ ರಾಯನು
ಮಂತ್ರವುಳ್ಳವನವನೆ ಸಚಿವ ನಿಯೋಗಿಯೆನಿಸುವನು
ಮಂತ್ರವಿಲ್ಲದ ಬರಿಯ ಬಲು ತಳ
ತಂತ್ರದಲಿ ಫಲವಿಲ್ಲವೈ ಸ್ವಾ
ತಂತ್ರವೆನಿಸಲ್ಕರಿವುದೇ ಭೂಪಾಲ ಕೇಳೆಂದ ೪೯

ಸತ್ಯವುಳ್ಳರೆ ಧರಣಿ ಸಾರುಗು
ಸತ್ಯವುಳ್ಳರೆ ಪದವಿ ಸಾರುಗು
ಸತ್ಯವುಳ್ಳರೆ ಸಕಲರಾಜ್ಯದ ವೀರಸಿರಿ ಸಾರ್ಗು
ಸತ್ಯವೇ ಬೇಹುದು ನೃಪರಿಗಾ
ಸತ್ಯ ಭುಜಬಲಗೂಡಿ ಮಂತ್ರದ
ಸತ್ಯವೇ ಸತ್ವಾಧಿಕವು ಭೂಪಾಲ ಕೇಳೆಂದ ೫೦

ಮೇಲನರಿಯದ ನೃಪನ ಬಾಳಿಕೆ
ಗಾಳಿಗೊಡ್ಡಿದ ಸೊಡರು ನೀರವ
ಜಾಲದೊಡ್ಡಣೆ ಸುರಧನುವಿನಾಕಾರ ಶವದುಡಿಗೆ
ಬಾಳಿಗೌಕಿದ ಕೊರಳು ಭುಜಗನ
ಹೇಳಿಗೆಯಲಿಕ್ಕಿದ ಕರವು ಬೆ
ಳ್ಳಾರ ಹೆಬ್ಬುಗೆಯವನ ಸಿರಿ ಭೂಪಾಲ ಕೇಳೆಂದ ೫೧

ಆಯವಿಲ್ಲದ ಬೀಯವನು ಪೂ
ರಾಯವಿಲ್ಲದ ಗಾಯವನು ನಿ
ರ್ದಾಯವಿಲ್ಲದ ಮಂತ್ರವನು ಲೇಸಾಗಿ ಮಿಗೆ ರಚಿಸಿ
ನ್ಯಾಯವಿಲ್ಲದ ನಡವಳಿಯನ
ನ್ಯಾಯ ಹೊದ್ದುವ ಪಾತಕವ ನಿಜ
ಕಾಯದಲಿ ನೀ ಧರಿಸೆಯೆಲೆ ಭೂಪಾಲ ಕೇಳೆಂದ ೫೨

ಫಲವಹುದ ಕೆಡಲೀಯದಳಿ ಪರಿ
ಮಳವ ಕೊಂಬಂದದಲೆ ನೀನಾ
ಳ್ವಿಳೆಯ ಕರದರ್ಥವನು ತೆಗೆವೈ ಪ್ರಜೆಯ ನೋಯಿಸದೆ
ಹಲವು ಸನ್ಮಾನದಲಿ ನಯದಲಿ
ಚಲಿಸದಿಪ್ಪಂದದಲಿ ರಾಜ್ಯವ
ನಿಲಿಸುವಭಿಮತ ಮಂತ್ರಿಯುಂಟೇ ರಾಯ ನಿನಗೆಂದ ೫೩

ಸೂಕರನ ತುಂಬಿಯ ಮರಾಳನ
ಭೇಕವೈರಿಯ ಕಾರುರಗ ಕಪಿ
ಕೋಕಿಲನ ಬರ್ಹಿಯ ಸುಧಾಕಿರಣನ ದಿನಾಧಿಪನ
ಆಕಸದ ದರ್ಪಣದ ಬಕ ರ
ತ್ನಾಕರನಲೊಂದೊಂದುಗುಣವಿರ
ಬೇಕು ನೃಪರಿಗೆ ನಿನ್ನೊಳುಂಟೇ ರಾಯ ಹೇಳೆಂದ ೫೪

ನೆಚ್ಚದಿರು ಸಿರಿಯನು ವೃಥಾ ಮದ
ಗಿಚ್ಚಿನುರಿಯಲಿ ಬೇಯದಿರು ಮಿಗೆ
ಬೆಚ್ಚಿ ಬೆದರದಿರೆರಡರಲಿ ಸತ್ಯವನು ಚಲಿಸದಿರು
ಮೆಚ್ಚದಿರಸತ್ಯವನು ಗುಣವನು
ಮುಚ್ಚದಿರು ಅಪಕೀರ್ತಿನಾರಿಯ
ಮೆಚ್ಚದಿರು ಮರುಳಾಗದಿರು ಭೂಪಾಲ ಕೇಳೆಂದ ೫೫

ಹಲವು ವಿನಿಯೋಗದಲಿ ಸುದತಿಯ
ರೊಲುಮೆಯಲಿ ಸಕಲಾಂಗದಲಿ ನಿ
ಸ್ಖಲಿತ ನಿಜವನೆ ಧರಿಸುವಾಶ್ರಮ ವರ್ಣಭೇದದಲಿ
ಹಳಿವು ನಿಗಾವಂಗದಲಿ ಬಳಿ
ಸಲಿಸದಲೆ ಪರತತ್ತ್ವದಲಿ ವೆ
ಗ್ಗಳಿಸದಲೆ ವೈರಾಗ್ಯಮತ ಭೂಪಾಲ ನಿನಗೆಂದ ೫೬

ಪರಿಜನಕೆ ದಯೆಯನು ಪರಸ್ತ್ರೀ
ಯರಲಿ ಭೀತಿಯ ಹಗೆಗಳಲಿ ನಿ
ಷ್ಕರುಣತೆಯ ಬಡವರಲಿ ದಾನವ ದೈವ ಗುರು ದ್ವಿಜರ
ಚರಣಸೇವೆಯಲಾರ್ತತೆಯ ಪಿಸು
ಣರ ನುಡಿಗಳಲಿ ಮೂರ್ಖತೆಯ ನೀ
ವಿರಚಿಪೆಯೊ ಬೇಸರುವೆಯೋ ಭೂಪಾಲ ಕೇಳೆಂದ ೫೭

ಮೋಹದವಳಲಿ ವೈದ್ಯರಲಿ ಮೈ
ಗಾಹಿನವರಲಿ ಬಾಣಸಿಗರಲಿ
ಬೇಹ ಮಂತ್ರಿಗಳಲಿ ವಿಧಾವಂತರಲಿ ಹಿರಿಯರಲಿ
ದೇಹರಕ್ಷಕರಲಿ ಸದೋದಕ
ವಾಹಿಯಲಿ ಹಡಪಾಳಿಯಲಿ ಪ್ರ
ತ್ಯೂಹವನು ವಿರಚಿಸೆಯಲೇ ಭೂಪಾಲ ಕೇಳೆಂದ ೫೮

ತರುಣಿಯಲಿ ಹಗೆಗಳಲಿ ಬಹಳೈ
ಶ್ವರಿಯದಲಿ ಶಸ್ತ್ರಾಂಗಿಯಲಿ ಸಂ
ಸ್ತರಣದಲಿ ಮದ್ಯಪನಲಬಲಾರ್ಥಿಯಲಿ ಶೃಂಗಿಯಲಿ
ಉರಗನಲಿ ನದಿಯಲಿ ಸಖಿಯರಾ
ತುರಿಯದಲಿ ದುರ್ಮಂತ್ರಿಯಲಿ ದು
ಶ್ಚರಿತನಲಿ ವಿಶ್ವಾಸಿಸೆಯಲೇ ಭೂಪ ಕೇಳೆಂದ ೫೯

ಢಾಳರನು ಢವಳರನು ಠಕ್ಕಿನ
ಠೌಳಿಕಾರರ ಕೃತಕ ಮಾಯಾ
ಜಾಲರನು ಕಾಹುರರನಂತರ್ವಾಹಕರ ಶಠರ
ಖೂಳರನು ಖಳರನು ವಿಕಾರಿಯ
ಜಾಳು ನುಡಿಗಳ ಜಡಮತಿಯನೀ
ನಾಳಿಗೊಂಬೆಯೊ ಲಾಲಿಸುವೆಯೊ ರಾಯ ಹೇಳೆಂದ ೬೦

ಆವಕಾಲದೊಳಾವಕಾರ್ಯವ
ದಾವನಿಂದಹುದವನ ಮನ್ನಿಪ
ಠಾವಿದೆಂಬುದನರಿದಿಹೈ ಮೃಗಜೀವಿಯಂದದಲಿ
ಲಾವಕರ ನುಡಿ ಕೇಳಿ ನಡೆದರೆ
ಭೂವಳದೇಕಾಧಿಪತ್ಯದ
ಠಾವು ಕೆಡುವುದನರಿದಿಹೈ ಭೂಪಾಲ ಕೇಳೆಂದ ೬೧

ಅರಸು ರಾಕ್ಷಸ ಮಂತ್ರಿಯೆಂಬುವ
ಮೊರೆವ ಹುಲಿ ಪರಿವಾರ ಹದ್ದಿನ
ನೆರವಿ ಬಡವರ ಭಿನ್ನಪವನಿನ್ನಾರು ಕೇಳುವರು
ಉರಿವುರಿವುತಿದೆ ದೇಶ ನಾವಿ
ನ್ನಿರಲು ಬಾರದೆನುತ್ತ ಜನ ಬೇ
ಸರಿನ ಬೇಗೆಯಲಿರದಲೇ ಭೂಪಾಲ ಕೇಳೆಂದ ೬೨

ಧನದುಲುರು ಧಾನ್ಯದಲಿ ನೆರೆದಿಂ
ಧನದಲುದಕದ ಹೆಚ್ಚುಗೆಯಲಂ
ಬಿನಲಿ ಶಸ್ತ್ರೌಘದಲಿ ಶಿಲ್ಪಿಯ ವರ ಶಿಲಾಳಿಯಲಿ
(ಬಿನಲಿ ಶಸ್ತ್ರೌಘದಲಿ ಶಿಲ್ಪಿಗಳ ಶಿಲಾಳಿಯಲಿ - ಪಾ)
ವನವಳಯ ಕೋಟಾವಳಯ ಜೀ
ವನವಳಯ ಗಿರಿವಳಯ ದುರ್ಗಮ
ವೆನಿಪ ದುರ್ಗಾವಳಿ ಸಮಗ್ರವೆ ಭೂಪ ಕೇಳೆಂದ ೬೩

ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ
ಪಸರಿಸುವುದಾ ಕೃಷಿಯನುದ್ಯೋ
ಗಿಸುವ ಜನವನು ಪಾಲಿಸುವುದಾ ಜನಪದವ ಜನದಿ
ವಸು ತೆರಳುವುದು ವಸುವಿನಿಂ ಸಾ
ಧಿಸುವಡಾವುದಸಾಧ್ಯವದರಿಂ
ಕೃಷಿವಿಹೀನನ ದೇಶವದು ದುರ್ದೇಶ ಕೇಳೆಂದ ೬೪

ಸತಿಯರೊಲುಮೆಯ ವಿಟರುಗಳನಾ
ಸತಿಯರ ಸ್ಥಿತಿಗತಿಗೆ ತಾನೆಂ
ದತಿಶಯೋಕ್ತಿಯ ನುಡಿವವರನರಮನೆಯ ಕಾಹಿಂಗೆ
ಪತಿಕರಿಸಿದರೆ ಜಗವರಿಯಲಾ
ಕ್ಷಿತಿಪರಭಿಮಾನವು ಮುಹೂರ್ತಕೆ
ಗತವಹುದು ನೀನರಿದಿಹೈ ಭೂಪಾಲ ಕೇಳೆಂದ ೬೫

ಖಡುಗ ಧಾರೆಯ ಮಧು ಮಹಾಹಿಯ
ಹೆಡೆಯ ಮಾಣಿಕ ವಜ್ರದಿಂ ಬಿಗಿ
ದೊಡಲಿಗೊಡ್ಡಿದ ಸುರಗಿ ಕಡುಗೆರಳಿದ ಮೃಗಾಧಿಪನ
ನಡುಗುಹೆಯೊಳಿಹ ಸುಧೆಯ ಘಟವೀ
ಪೊಡವಿಯೊಡೆತನ ಸದರವೇ ಕಡು
ಬಡವರಿಗೆ ದೊರೆಕೊಂಬುದೇ ಭೂಪಾಲ ಕೇಳೆಂದ ೬೬

ಮಗಗೆ ಮುನಿವನು ತಂದೆ ತಂದೆಗೆ
ಮಗ ಮುನಿವನೊಡಹುಟ್ಟಿದರು ಬಲು
ಪಗೆ ಕಣಾ ತನ್ನೊಳಗೆ ಭೂಪರ ಕುಲದ ವಿದ್ಯವಿದು
ಬಗೆಯ ನಿನ್ನೊಡಹುಟ್ಟಿದರು ಮಂ
ತ್ರಿಗಳೊಳಾಪ್ತರಖಿನ್ನರೇ ದಾ
ಯಿಗರೊಳಂತರ್ಬದ್ಧವುಂಟೇ ರಾಯ ನಿನಗೆಂದ ೬೭

ಮಲೆವ ರಾಯರ ಬೆನ್ನ ಕಷ್ಟವ
ನಲಗಿನಲಿ ಕೊಂಡಾಂತ ಮನ್ನೆಯ
ಕುಲದ ತಲೆ ಚೆಂಡಾಡಿ ಗಡಿಗಳ ದುರ್ಗದಲಿ ತನ್ನ
ಬಲು ಸಚಿವರನು ನಿಲಿಸಿ ತಾ ಪುರ
ದಲಿ ವಿನೋದದಲಿರುತ ಹರುಷದ
ಲಿಳೆಯ ಪಾಲಿಸುವವನರಸು ಭೂಪಾಲ ಕೇಳೆಂದ ೬೮

ಮನ್ನಣೆಯೊಳಲ್ಪತೆಯ ನುಡಿಯೊಳ
ಗುನ್ನತಿಯನೆಸಗುವುದು ಪರರಿಗೆ
ತನ್ನವರಿಗುಗ್ಗಡದ ಪರಿಕರಣೆಯನು ಮಾತಿನಲಿ
ಭಿನ್ನವನು ತೋರುವುದು ರಾಯರ
ಗನ್ನಗತಕ ಕಣಾ ವಿಪುಳ ಸಂ
ಪನ್ನಮತಿ ನಿನಗುಂಟೆ ಭೂಮೀಪಾಲ ಕೇಳೆಂದ ೬೯

ಧನದಿ ಪಂಡಿತರಶ್ವತತಿಯಾ
ಧನದಿ ಧಾರುಣಿ ಮಾನ ಮೇಣಾ
ಧನದಿ ಕಾಂತೆಯರಖಿಳ ವಸ್ತುಗಳೈದೆ ಸೇರುವುದು
ನೆನಹು ತೃಪ್ತಿಯೊಳೈದದದರಿಂ
ಧನವೆ ಸಾಧನವರಸಿಗಾ ಧನ
ವನಿತು ದೊರಕೊಳಲಿದಿರದಾರೈ ಧಾತ್ರಿಪತಿಗಳಲಿ ೭೦

ಶೂರ ಧೀರನುದಾರ ಧರ್ಮೋ
ದ್ಧಾರ ವಿವಿಧ ವಿಚಾರ ಸುಜನೋ
ದ್ಧಾರ ರಿಪುಸಂಹಾರ ಚತುರೋಪಾಯ ಸಾಕಾರ
ಸಾರಮಂತ್ರ ವಿಚಾರ ಭುವನಾ
ಧಾರ ಸುಜನಸ್ವಾಮಿ ಕಾರ್ಯಾ
ಗಾರನೆನಿಸುವ ಮಂತ್ರಿಯುಂಟೇ ರಾಯ ನಿನಗೆಂದ ೭೧

ತಿಳಿದವನ ಮತಿವಿದನ ಭಾಷಾ
ವಳಿ ಲಿಪಿಜ್ಞನ ಸಾಕ್ಷರಿಕ ಮಂ
ಡಲಿಕ ಸಾವಂತರನಶೇಷರನಿಂಗಿತವನರಿತು
ಸಲೆ ಕರೆವ ಕಳುಹಿಸುವ ನಿಲಿಸುವ
ಬಲುಹನುಳ್ಳನ ಸುಕೃತ ದುಷ್ಕೃತ
ಫಲಿತ ಕಾರ್ಯಕೆ ಮಂತ್ರಿಯುಂಟೇ ರಾಯ ನಿನಗೆಂದ ೭೨

ಜರೆ ನರೆಯ ಮೈಸಿರಿಯ ಕುಲವೃ
ದ್ಧರನು ಹೀನಾಂಗರನು ಹಿಂಸಾ
ಚರಿತರನು ಜಾತ್ಯಂಧರನು ಧನದಾಸೆಯಳಿದವರ
ಅರಮನೆಯ ಸಂರಕ್ಷಣಾರ್ಥದೊ
ಳಿರಿಸಿದರೆ ಮಾನೋನ್ನತಿಕೆ ವಿ
ಸ್ತರಣವಹುದಿದನರಿದಿಹೈ ಭೂಪಾಲ ಕೇಳೆಂದ ೭೩

ಗುಳಿತೆವರನೀಕ್ಷಿಸುತ ಬಟ್ಟೆಯ
ಮೆಳೆ ಮರಂಗಳ ಹೊಯ್ಲ ತಪ್ಪಿಸಿ
ನೆಳಲನರಸುತ ವೇಗಗತಿ ಸಾಮಾನ್ಯಗತಿಗಳಲಿ
ಬಳಿವಿಡಿದು ಭೂಭುಜರ ಯಾನಂ
ಗಳೊಳಗಳುಕದೆ ಧಗೆಯ ಸೈರಿಸಿ
ಬಳಸುವವನೇ ಛತ್ರಧಾರಕನರಸ ಕೇಳೆಂದ ೭೪

ಬೇಸರದೆ ಕಾಳೋರಗನನ
ಡ್ಡೈಸಿ ಕಟ್ಟಿರುವೆಗಳು ಮಿಗೆ ವೇ
ಡೈಸಿ ಕಡಿದರೆಯಟ್ಟುವಂದದಲಹಿತ ಬಲದೊಳಗೆ
ಓಸರಿಸದೊಳಹೊಕ್ಕು ಸಮರ ವಿ
ಳಾಸವನು ನೆರೆ ಮೆರೆದು ಕೇಶಾ
ಕೇಶಿಯಲಿ ಹಿಡಿದಿರಿವವನೆ ಕಾಲಾಳು ಕೇಳೆಂದ ೭೫

ಬಿಟ್ಟ ಸೂಠಿಯಲರಿನೃಪರ ನೆರೆ
ಯಟ್ಟಿ ಮೂದಲಿಸುತ್ತ ಮುಂದಣ
ಥಟ್ಟನೊಡೆಹಾಯ್ದಹಿತ ಬಲದೊಳಗಾನೆವರೆವರಿದು
ಹಿಟ್ಟುಗುಟ್ಟುತ ಹೆಣನ ಸಾಲುಗ
ಳೊಟ್ಟು ಮೆರೆಯಲು ಕಳನ ಚೌಕದ
ಲಟ್ಟಿಯಾಡಿಸಬಲ್ಲವನೆ ರಾವುತನು ಕೇಳೆಂದ ೭೬

ಹೆಬ್ಬಲವನೊಡತುಳಿದು ಧರಣಿಯ
ನಿಬ್ಬಗಿಯ ಮಾಡಿಸುತ ಪಾಯ್ದಳ
ದೊಬ್ಬುಳಿಯ ಹರೆಗಡಿದು ಕಾದಿಸುತಾನೆಗಳಮೇಲೆ
ಬೊಬ್ಬಿರಿದು ಶರಮಳೆಯ ಕರೆವುತ
ಲಬ್ಬರಿಸಿ ಬವರದಲಿ ರಿಪುಗಳಿ
ಗುಬ್ಬಸವನೆಸಗುವನೆ ಜೋಧನು ರಾಯ ಕೇಳೆಂದ ೭೭

ಒಂದುಕಡೆಯಲಿ ದಳ ಮುರಿದು ಮ
ತ್ತೊಂದು ದಿಕ್ಕಲಿ ಮನ್ನೆಯರು ಕವಿ
ದೊಂದು ದೆಸೆಯಲಿ ಬಲದೊಳೊಂದನೆಯಧಿಕಬಲವೆನಿಸಿ
ಬಂದು ಸಂತಾಪದಲಿ ಕಾಳಗ
ದಿಂದ ಪುರಳಲಿ ನಿಂದು ಕರಿಕರಿ
ಗುಂದುವ ಕ್ಷಿತಿಪಾಲನೇ ಭೂಪಾಲ ಕೇಳೆಂದ ೭೮

ಕುದುರೆಗಳನಾರೈದು ರಥವನು
ಹದುಳಿಸುತ ಸಾರಥಿಯನೋವುತ
ಲಿದಿರ ಮುರಿವುತ ತನ್ನ ಕಾಯಿದುಕೊಳುತ ಕೆಲಬಲನ
ಸದೆದು ಮರಳುವ ಲಾಗುವೇಗದ
ಕದನ ಕಾಲಾನಲನವನು ತಾ
ಮೊದಲಿಗನಲೈ ರಥಿಕರಿಗೆ ಭೂಪಾಲ ಕೇಳೆಂದ ೭೯

ದೊರೆಯ ಕಾಣುತ ವಂದಿಸುತ್ತಂ
ಕರಿಸುತಂತರಿಸುತ್ತ ಮಿಗೆ ಹ
ತ್ತಿರನೆನಿಸದತಿ ದೂರನೆನಿಸದೆ ಮಧ್ಯಗತನೆನಿಸಿ
ಪರಿವಿಡಿಯಲೋಲೈಸುತರಸನ
ಸಿರಿಮೊಗವನೀಕ್ಷಿಸುತ ಬೆಸೆಸಲು
ಕರಯುಗವನಾನುವನೆ ಸೇವಕನರಸ ಕೇಳೆಂದ ೮೦

ನರಕ ಕರ್ಮವ ಮಾಡಿಯಿಹದೊಳು
ದುರಿತಭಾಜನರಾಗಿ ಕಡೆಯಲಿ
ಪರಕೆ ಬಾಹಿರರಾಗಿ ನಾನಾ ಯೋನಿಯಲಿ ಸುಳಿದು
ಹೊರಳುವರು ಕೆಲಕೆಲರು ಭೂಪರು
ಧರಿಸುವರಲೈ ರಾಜಧರ್ಮದ
ಹೊರಿಗೆಯನು ಮರೆದಿರೆಯಲಾ ಭೂಪಾಲ ಕೇಳೆಂದ ೮೧

ನೃಗನ ಭರತನ ದುಂದುಮಾರನ
ಸಗರನ ಪುರೂರನ ಯಯಾತಿಯ
ಮಗನ ನಹುಷನ ಕಾರ್ತವೀರ್ಯನ ನಳನ ದಶರಥನ
ಹಗಲಿರುಳು ವಲ್ಲಭರ ವಂಶದ
ವಿಗಡರಲಿ ಯಮಸೂನು ಸರಿಯೋ
ಮಿಗಿಲೊ ಎನಿಸುವ ನೀತಿಯುಂಟೇ ರಾಯ ನಿನಗೆಂದ ೮೨

ಆ ಮುನೀಂದ್ರನ ವಚನ ರಚನಾ
ತಾಮರಸ ಮಕರಂದ ಕೇಳಿಯ
ಲೀ ಮಹೀಶ ಮಧುವ್ರತ(ಕರಣ?)ವುಬ್ಬಿತೊಲವಿನಲಿ
ರೋಮ ಪುಳಕದ ರುಚಿರ ಭಾವ
ಪ್ರೇಮಪೂರಿತ ಹರುಷರಸದು
ದ್ದಾಮ ನದಿಯಲಿ ಮುಳುಗಿ ಮೂಡಿದನರಸ ಕೇಳೆಂದ ೮೩

ಎಲೆ ಮುನಿಯೆ ನೀವ್ ರಚಿದೀ ನಿ
ರ್ಮಳ ನೃಪಾಲ ನಯ ಪ್ರಪಂಚವ
ಬಳಸಿದೆನು ಕೆಲ ಕೆಲವನಿನ್ನುರೆ ಬಳಸುವೆನು ಕೆಲವ
ಇಳಿದು ಧರಣಿಗೆ ಸುಳಿದು ನೀತಿ
ಸ್ಖಲಿತ ಜಡರನು ತಿದ್ದಿ ತಿಳುಹುವ
ಸುಲಭತನದಲಿ ದೇವಮುನಿ ನಿನಗಾರು ಸರಿಯೆಂದ ೮೪

ಮುನಿಯೆ ಬಿನ್ನಹವಿಂದು ನೀವಿಂ
ದ್ರನ ವಿರಿಂಚಿಯ ಯಮನ ವರುಣನ
ಧನಪತಿಯ ಶೇಷನ ಸಭಾಮಧ್ಯದಲಿ ಸುಳಿವಿರಲೆ
ಇನಿತು ರಚನೆಗೆ ಸರಿಯೊ ಮಿಗಿಲೋ
ಮನುಜ ಯೋಗ್ಯಸ್ಥಾನವೋ ಮೇ
ಣೆನಲು ನಗುತೆಂದನು ಮುನೀಶ್ವರನಾ ಯುಧಿಷ್ಠಿರಗೆ ೮೫

ಜನಪ ಕೇಳುತ್ಸೇದ ಶತ ಯೋ
ಜನ ತದರ್ಧದೊಳಗಲದಳತೆಯಿ
ದೆನಿಪುದಿಂದ್ರಸ್ಥಾನವಲ್ಲಿಹುದಖಿಳ ಸುರನಿಕರ
ಜನಪರಲ್ಲಿ ಯಯಾತಿಯಾತನ
ಜನಕ ನೃಗ ನಳ ಭರತ ಪೌರವ
ರೆನಿಪರಖಿಳ ಕ್ರತುಗಳಲಿ ಸಾಧಿಸಿದರಾ ಸಭೆಯ ೮೬

ವೈದಿಕೋಕ್ತಿಗಳಲಿ ಹರಿಶ್ಚಂ
ದ್ರಾದಿಯರು (ಆ?) ರಾಜಸೂಯದೊ
ಳಾದರನಿಬರೊಳಗ್ಗಳೆಯರಿಂದ್ರಂಗೆ ಸರಿ ಮಿಗಿಲು
ಆದೊಡಾ ಪುರುಹೂತ ಸಭೆಯೋ
ಪಾದಿ ಯಮನಾಸ್ಥಾನವಲ್ಲಿ ವಿ
ಷಾದದಲಿ ನಿಮ್ಮಯ್ಯನಿಹನಾತನ ಸಮೀಪದಲಿ ೮೭

ವರುಣ ಸಭೆಯೊಳಗಿಹವು ಭುಜಗೇ
ಶ್ವರ ಸಮುದ್ರ ನದೀನದಾವಳಿ
ಗಿರಿ ತರು ವ್ರಜವೆನಿಪ ಸಂಖ್ಯಾರಹಿತ ವಸ್ತುಗಳು
ಅರಸ ಕೇಳು ಕುಬೇರ ಸಭೆಯಾ
ಪರಿಯಗಲವೆಂಭತ್ತು ಯೋಜನ
ಹರಸಖನ ಸಿರಿ ಸದರವೇ ಭೂಪಾಲ ಕೇಳೆಂದ ೮೮

ಬಗೆಯೊಳಗೆ ಮೊಳೆವುದು ಚತುರ್ದಶ
ಜಗವೆನಲು ಜಾವಳವೆ ತಸ್ಯೋ
ಲಗದ ಸಿರಿ ಪರಮೇಷ್ಟಿಗೇನರಿದೈ ಮಹೀಪತಿಯೆ
ಸುಗಮ ಗಾನಿಯರುಪನಿಷದ ವಿ
ದ್ಯೆಗಳು ವೇದಕ್ರತು ಪುರಾಣಾ
ದಿಗಳು ಬಿರುದಾವಳಿಯ ಪಾಠಕರಾತನಿದಿರಿನಲಿ ೮೯

ಮುನಿಗಳೇ ಮಾಣಿಯರು ಮಂತ್ರಾಂ
ಗನೆಯರೋಲೆಯಕಾತಿಯರು ಸುರ
ಜನವೆ ಕಿಂಕರಜನವು ಸೂರ್ಯಾದಿಗಳೆ ಸಹಚರರು
ಘನ ಚತುರ್ದಶ ವಿದ್ಯೆ ಪಾಠಕ
ಜನವಲೈ ಪಾಡೇನು ಪದುಮಾ
ಸನನ ಪರುಠವವಾ ಸಭೆಗೆ ಸರಿ ಯಾವುದೈ ನೃಪತಿ ೯೦

ಇನಿಬರಾಸ್ಥಾನದಲಿ ಸುಕೃತಿಗ
ಳೆನಿಪ ತೇಜಸ್ವಿಗಳು ಗಡ ಸುರ
ಮುನಿ ಹರಿಶ್ಚಂದ್ರಂಗೆ ಸೇರಿದ ಸುಕೃತ ಫಲವೇನು
ಜನಪನಪದೆಸೆಗೇನು ದುಷ್ಕೃತ
ವೆನಲು ನಕ್ಕನು ರಾಜಸೂಯದ
ಘನವನರಿಯಾ ಧರ್ಮನಂದನಯೆಂದನಾ ಮುನಿಪ ೯೧

ಈ ಮಹಾಕ್ರತುವರವ ನೀ ಮಾ
ಡಾಮಹೀಶ್ವರ ಪಂಕ್ತಿಯಲ್ಲಿ ನಿ
ರಾಮಯನು ನಿಮ್ಮಯ್ಯನಿಹನು ಸತೇಜದಲಿ ಬಳಿಕ
ಸೋಮವಂಶದ ರಾಯರೊಳಗು
ದ್ದಾಮರಹ ಬಲುಗೈ ಕುಮಾರ
ಸ್ತೋಮ ನೀವಿರಲಯ್ಯಗೇನರಿದೆಂದನಾ ಮುನಿಪ ೯೨

ಮುನಿಯ ಮಾತಿನ ಬಲೆಗೆ ಸಿಲುಕಿತು
ಜನಪತಿಯ ಚೈತನ್ಯಮೃಗವೀ
ತನ ವಚೋ ವರುಷದಲಿ ನೆನೆದವು ಕರಣವೃತ್ತಿಗಳು
ಮನದಲಂಕುರವಾಯ್ತು ನಾಲಿಗೆ
ಗೊನೆಯಲೆರಡೆಲೆಯಾಯ್ತು ಯಜ್ಞದ
ನೆನವು ಭಾರವಣೆಯಲಿ ಬಿದ್ದುದು ಧರ್ಮನಂದನನ ೯೩

ಕಳುಹಿದನು ಸುರಮುನಿಯ
ನುದರದೊಳಿಳಿದುದಂತಸ್ತಾಪ ಯಜ್ಞದ
ಬಲುಹ ನೆನೆದಡಿಗಡಿಗೆ ಕಂಪಿಸಿ ಕೈಯ ಗಲ್ಲದಲಿ
ಒಲೆದೊಲೆದು ಭಾವದಲಿ ಮಿಗೆ ಕಳ
ವಳಿಸಿ ಪದುಳಿಸಿಕೊಳುತ ಭೂಪತಿ
ತಿಲಕ ಚಿಂತಿಸಿ ನೆನೆವುತಿದ್ದನು ವೀರನರಯಣನ ೯೪





ಕೃಪೆ :  http://gaduginabharata.blogspot.in/
Contributors

ಸಭಾಪರ್ವ: ೦೨. ಎರಡನೆಯ ಸಂಧಿ

ಸೂ. ಬಲಿಮಥನ ಫಲುಗುಣರು ಸಹಿತ
ಗ್ಗಳೆಯನೇಕಾ೦ಗದಲಿ ರಣದಲಿ
ಕಲಿ ಜರಾಸ೦ಧನನು ಸೀಳಿದು ಬಿಸುಟನಾ ಭೀಮ

ಕೇಳು ಜನಮೇಜಯ ದರಿತ್ರೀ
ಪಾಲಮ೦ತ್ರಾಳೋಚನೆಗೆ ಭೂ
ಪಾಲ ಕರಸಿದನನುಜರನು ಧೌಮ್ಯಾದಿ ಮ೦ತ್ರಿಗಳ
ಮೇಳವದ ತನಿವೆಳಗುಗಳ ಮಣಿ
ಮೌಳಿಮ೦ಡಿತರುಪ್ಪರದ ಪಡಿ
ಸೂಳು ಪಾಯವಧಾರಿನಲಿ ಹೊಕ್ಕರು ಸಭಾ ಸ್ಥಳವ ೧

ದ್ರುಪದ ಧೃಷ್ಟದ್ಯುಮ್ನ ಮತ್ಸ್ಯಾ
ಧಿಪತಿ ಕೇಕಯ ಪಾ೦ಡವಾತ್ಮಜ
ರು ಪತಿಕಾರ್ಯ ವಿಚಾರನಿಷ್ಠರು ಬ೦ದರೋಲಗಕೆ
ನೃಪತಿ ಹದನೇನಮರ ಮುನಿವರ
ನುಪಚರಿತ ಮ೦ತ್ರಾರ್ಥ ಸಿದ್ದಿಗೆ
ರಪಣ ನಮಗು೦ಟೀಗ ಬೆಸಸೆ೦ದರು ಯುಧಿಷ್ಠಿರಗೆ ೨

ಧರೆ ನಮಗೆ ವಶವರ್ತಿ ಖ೦ಡೆಯ
ಸಿರಿ ನಮಗೆ ಮೈವಳಿ ಯುಧಿಷ್ಠಿರ
ನರಸುತನ ನಳ ನಹುಷ ನೃಗ ಭರತಾದಿ ಭೂಮಿಪರ
ಮರೆಸಿತೆ೦ಬುದು ಲೋಕವೀ ನೀ
ಬ್ಬರದ ಹೆಸರೆಮಗಿ೦ದು ಬೊಪ್ಪನ
ಸಿರಿಯನೇವಣ್ಣಿಸುವೆನೆ೦ದನು ಸುಯ್ದು ಯಮಸೂನು ೩

ಅಲ್ಲಿಸುರರಲಿ ಸುಪ್ರತಿಷ್ಠಿತ
ನಲ್ಲ ಗಡ ಪಾ೦ಡು ಕ್ಷಿತೀಶ್ವರ
ನಿಲ್ಲಿವೈಭವಕೇನುಫಲ ನಾನವರ ಸದ್ಗತಿಗೆ
ಇಲ್ಲಿ ರಚಿಸಿದ ರಾಜಸೂಯದಿ
ನೆಲ್ಲವಹುದಯ್ಯ೦ಗೆ ಮಖವಿದು
ದುರ್ಲಭವು ಕೈ ಕೊ೦ಡೆವಾವುದು ಮ೦ತ್ರವಿದಕೆ೦ದ ೪

ಆಗಲಿದಕೇನರಸ ದೀಕ್ಷಿತನಾಗು
ನಿರುಪಮ ರಾಜಸೂಯಕೆ
ಭಾಗ ಧನವನು ಭೂಮಿಪರ ಸದೆದೆಳೆದು ತಹೆವೆ೦ದು
ಆ ಗರುವರುಬ್ಬೇಳೆ ತಪ್ಪೇ
ನಾಗಲೀ ಗೋವಿ೦ದ ಮತದಲಿ
ತೂಗಿ ನೋಡುವೆವಿದರ ತೂಕವನೆ೦ದನಾ ಭೂಪ ೫

ಕಳುಹಿದನು ಸಾರಥಿಯನಾ ರಥ
ಕೆಲವು ದಿವಸಕೆ ಕೃಷ್ಣ ಭವನ
ಸ್ಥಳದಹೊರ ಬಾಹೆಯಲಿ ಚಾಚಿತು ಚಪಳ ಗಮನದಲಿ
ಒಳಗೆ ಬ೦ದನು ಪಾವುಡದ ಮು೦
ದಿಳುಹಿದನು ಕೃಷ್ಣ೦ಗೆ ಪಾ೦ಡವ
ತಿಲಕನಟ್ಟಿದ ಹದನ ಬಿನ್ನಹ ಮಾಡಿದನು ಬಳಿಕ ೬

ತಿಳಿದನಲ್ಲಿಯ ರಾಜಕಾರ್ಯದ
ನೆಲೆಯನಕ್ರೂರಾದಿ ಸಚಿವರ
ತಿಳುಹಿದನು ಶಿಶುಪಾಲ ಕ೦ಸನ ಮಾವನ೦ತಿವರ
ಕೊಲುವಡೆದು ಹದ ನಮ್ಮ ಭಾವನ
ನಿಳಯದುತ್ಸಹ ಸೌಮನಸ್ಯವ
ಬಳಸುವರೆ ಹೊತ್ತಿದು ಮನೋರಥ ಸಿದ್ದಿ ನಮಗೆ೦ದ ೭

ಎ೦ದು ವಸುದೇವಾದಿ ಯಾದವ
ವೃ೦ದವನು ಬಲಭದ್ರ ರಾಮನ
ಹಿ೦ದಿರಿಸಿ ಬಳಿಕಿ೦ದ್ರಸೇನನ ಕೂಡೆ ವೊಲವಿನಲಿ
ಬ೦ದನಿ೦ದ್ರಪ್ರಸ್ಥ ಪಟ್ಟಣ
ಕ೦ದು ವೊಸಗೆಯ ಗುಡಿಯ ತೋರಣ
ದಿ೦ದ ಕನ್ನಡಿ ಕಳಶದಲಿ ಕೊ೦ಡಾಡಿದರು ಹರಿಯ ೮

ಪುರಕೆ ಬಿಜಯ೦ಗೈಸಿ ತಂದರು
ಹರಿಯನರಮನೆಗನಿಬರಂತಃ
ಪುರದ ಕಾಣಿಕೆಗೊ೦ಡು ಬಾಂಧವ ಜನವನುಚಿತದಲಿ
ಹರಸಿ ಮಧುರ ಪ್ರೀತಿಯಿ೦ದಾ
ದರಿಸಿ ಮಂತ್ರಾಳೋಚನೆಯ ಮಂ
ದಿರದೊಳೇಕಾಂತದಲಿ ಭೂಪತಿಗೆಂದನಸುರಾರಿ ೯

ಏನು ಕರೆಸಿದಿರೈ ಪ್ರಯೋಜನ
ವೇನು ನಿಮ್ಮುತ್ಸಾಹ ಶಕ್ತಿಯೊ
ಳೇನು ದುರ್ಘಟವೇನು ಶ೦ಕಿತವೇನು ಸಂಸ್ಖಲಿತ
ದಾನವರ ಕೌರವರ ವೈರದೊ
ಳೇನು ವಿಗ್ರಹವಿಲ್ಲಲೇ ಹದ
ನೇನೆನಲುಕೃಷ್ಣ೦ಗೆ ಬಿನ್ನಹ ಮಾಡಿದನು ನೃಪತಿ ೧೦

ದನುಜರಲಿ ಕುರುಸೇನೆಯಲಿ ಭಯ
ವೆನಗೆ ಭಾರಿಯೆ ನಿಮ್ಮ ಘನ ಪದ
ವನಜವಿದು ಸೀಸಕವಲೇ ತನ್ನುತ್ತಮಾ೦ಗದಲಿ
ಮುನಿಯಹೇಳಿಕೆ ಬೊಪ್ಪಗಮರೇ೦
ದ್ರನಲಿ ಸಮರಸವಿಲ್ಲ ಗಡ ನ
ಮ್ಮಿನಿಬರಲಿ ಸಾಮರ್ಥ್ಯವಿದ್ದುದಕೇನು ಫಲವೆ೦ದ ೧೧

ಪಿತನ ಪರಮಪ್ರೀತಿಗುನ್ನತ
ಗತಿಗೆ ನಿರ್ಮಳ ರಾಜಸೂಯ
ಕ್ರತುವೆ ಸಾಧನವೆ೦ದು ಮುನಿಯುಪದೇಶಿಸಿದ ತನಗೆ
ಕ್ರತು ಮಹಾಕ್ರತು ಸಕಲ ಧರಣೀ
ಪತಿಗಳರ್ಥವ ಗುಣದಲೀಯರು
ವ್ರತವೆನಗೆ ಸ೦ಕಲ್ಪವಾಯ್ತಿದಕೇನು ಹದನೆ೦ದ ೧೨

ತಿರುಗಿದರೆ ಸ೦ಕಲ್ಪ ಹಾನಿಯ
ಪರಮ ಪಾತಕವಿದು ಮಹಾ ನಿ
ಷ್ಠುರದ ಮಖವಿನ್ನಮರ ಮುನಿಪತಿ ದೇವಲೋಕದಲಿ
ಹರಹುವನು ಪರಿಹಾಸ್ಯಮಯ ಸಾ
ಗರವ ದಾಟಿಸು ಜೀಯ ಭವ ಸಾ
ಗರದಿನಿದು ಮಿಗಿಲೇ ಮುರಾ೦ತಕಯೆ೦ದನಾ ಭೂಪ ೧೩

ನಕ್ಕನಸುರವಿರೋಧಿ ಮುನಿ ಹಾ
ಯಿಕ್ಕಿದನಲಾ ಬಲೆಯನಕಟಾ
ಸಿಕ್ಕಿದಿರಲಾ ಸ್ವಾಮಿದ್ರೋಹರು ಸದರವೇ ನೃಪರು
ಅಕ್ಕಜದ ಮಖವಿದರ ಚೂಣಿಗೆ
ಚುಕ್ಕಿಯಾಯಿತು ಮನ ಮಹೀಶನ
ಮಕ್ಕಳಾಟಿಗೆಯಾಯ್ತೆನುತ ತೂಗಿದನು ಸಿರಿಮುಡಿಯ ೧೪

ಕೆದರಿ ಸಪ್ತದ್ವೀಪಪತಿಗಳ
ಸದೆದು ರಚಿಸುವ ರಾಜಸೂಯದ
ಹದನನಂಗೈಸುವನದಾರೀ ವರ್ತಮಾನದಲಿ
ಸುದತಿಯರ ಸೂಳೆಯರ ಮು೦ದು
ಬ್ಬಿದೆಯಲಾ ನಾರದನ ಘಲ್ಲಣೆ
ಗಿದು ಸುದುರ್ಘಟವಿ೦ದು ಬಿದ್ದ ವಿಘಾತಿ ಬಲುಹೆ೦ದ ೧೫

ಮೊದಲಲೇ ನಿಮ್ಮವರು ನಿಮ್ಮ
ಭ್ಯುದಯವನುಸೇರುವರೆ ಕೌರವ
ರದರೊಳಗ್ಗದ ಕರ್ಣ ಶಕುನಿ ಜಯದ್ರಥಾದಿಗಳು
ಕುದುಕುಳಿಗಳೀಚೆಯಲಿ ಕ೦ಸನ
ಮುದಮುಖನ ಪರಿವಾರವಿದೆ ದೂ
ರದಲಿ ಮಗಧನ ಹೊರೆಯಲದನೇ ಬಣ್ಣಿಸುವೆನೆ೦ದ ೧೬

ಕಾಲಯವನಾ ದ೦ತವಕ್ರ ನೃ
ಪಾಲರಲಿ ದುರುದು೦ಬಿಯೈ ಶಿಶು
ಪಾಲ ಪೌ೦ಡ್ರಕರೆ೦ಬರಿಗೆ ಸಮದ೦ಡಿಯೆಮ್ಮೊಡನೆ
ಖೂಳರೀರ್ವರು ಹ೦ಸ ಡಿಬಿಕರು
ಸಾಲುವನ ಮುರ ನರಕರಾಳನ
ಮೇಳವವನೇನೆ೦ಬೆನೈ ಭೂಪಾಲ ಕೇಳೆ೦ದ ೧೭

ಕೆಲವರಿದರೊಳು ನಮ್ಮ ಕೈಯಲಿ
ಕೊಲೆಗೆ ಭ೦ಗಕೆ ಬ೦ದು ಬಿಟ್ಟರು
ಕೆಲಕೆ ಸರಿವವನಲ್ಲ ಮಲೆವರ ಮಾರಿ ಮಾಗಧನು
ಬಳಿಕೆಮಗೆ ಬಲವದ್ವಿರೋಧದ
ತೊಳಸು ಬಿದ್ದುದು ತೋಟಿಗಾರದೆ
ಜಲಧಿ ಮಧ್ಯದಲೂರ ಕಟ್ಟಿದೆವರಸ ಕೇಳೆ೦ದ ೧೮

ಮಾವದೇವನ ಮುರಿದಡಾತನ
ದೇವಿಯರು ಬಳಿಕೆಮ್ಮ ದೂರಿದ
ರಾವಿಗಡ ಮಗಧ೦ಗೆ ಮಥುರೆಯಮೇಲೆ (ಪಾ: ಮಧುರೆಯಮೇಲೆ) ದ೦ಡಾಯ್ತು
ನಾವು ನಾನಾ ದುರ್ಗದಲಿ ಸ೦
ಭಾವಿಸಿದೆವಾತನನು ನಿಮ್ಮೊಡ
ನಾವು ಕೂಡಿದೊಡಾತ ಮುನಿಯನೆ ಭೂಪ ಕೇಳೆ೦ದ ೧೯

ಅರಸ ಕೇಳ್ನೂರೊ೦ದು ವ೦ಶದ
ಧರಣಿಪರು ಮಾಗಧನಮನೆಯಲಿ
ಸೆರೆಯಲೈದರೆ ಬಿಡಿಸಬೇಕು ನಿರ೦ತರಾಯದಲಿ
ದುರುಳನವ ಭಗದತ್ತ ಬಾಹ್ಲಿಕ
ನರಕ ವೃದ್ಧಕ್ಷತ್ರ ಮೊದಲಾ
ದರಸುಗಳು ಬಲ ಗರ್ವಿತರಸ೦ಖ್ಯಾತರಹರೆ೦ದ ೨೦

ಅವರಿರಲಿ ಮತ್ತಿತ್ತಲುತ್ತರ
ದವನಿಪರು ದಕ್ಕಡರು ಧರಣೀ
ಧವರೊಳಧಿಕ ದೊಠಾರರಗ್ಗದ ಚೀನ ಬೋಟಕರು
ರವಿಯುದಯಗಿರಿ ಶಿಖರದಲಿ ಪಾ
ರ್ಥಿವರು ದಕ್ಷಿಣ ಚೋಳ ಪಾ೦ಡ್ಯ
ಪ್ರವರರದೆ ವಿಕ್ರಮ ಹಿರಣ್ಯ ಮದಾಂಧರವರೆ೦ದ ೨೧

ಔಕಿ ಚತುರ೦ಗದ ನೃಪಾಲರ
ನೂಕಬಹುದಿದಕೇನು ಯಾಗ
ವ್ಯಾಕರಣಕಿವರಿಬ್ಬರೇ ದೂಷಕರು ಧರಣಿಯಲಿ
ಈ ಕುಠಾರರು ಕದನ ಮುಖದವಿ
ವೇಕಿಗಳು ಶಿಶುಪಾಲ ಮಾಗಧ
ರಾಕೆವಾಳರು ವೈರಿರಾಯರೊಳರಸ ಕೇಳೆ೦ದ ೨೨

ಅಧಿಕರಿವರಿಬ್ಬರೊಳಗಾ ಮಾ
ಗಧನೆ ಬಲುಗೈ ರಾಜಸೂಯಕೆ
ಸದರವನು ನಾ ಕಾಣೆನಾತನ ಖ೦ಡೆಯದ ಮೊನೆಗೆ
ನಿಧನವಲ್ಲದೆ ಧನವ ನೆರಹುವ
ಹದನ ನೀನೇ ಕಾ೦ಬೆಯಾತನ
ವಧೆಯು ಹರಿಯದು ನಮ್ಮ ಕೈಯಲಿ ರಾಯ ಕೇಳೆ೦ದ ೨೩

ಕ೦ಸನನು ಕೆಡಹಿದೆವು ಮುರಿದೆವು
ಹ೦ಸ ಡಿಬಿಕರ ಪೌ೦ಡ್ರಕರ
ನಿರ್ವ೦ಶವೆನೆಸವರಿದೆವು ಮುರ ನರಕಾದಿ ದಾನವರ
ಹಿ೦ಸೆಯಿವನಲಿ ಹರಿಯದಿವ ನಿ
ಸ್ಸ೦ಶಯನು ವಿಜಯದಲಿ ಯಾಗ
ಧ್ವ೦ಸಕನ ನೆರೆ ಮುರಿವುಪಾಯವ ಕಾಣೆ ನಾನೆ೦ದ ೨೪

ಈಸು ಘನವೇ ಕೃಷ್ಣ ಯಾಗ
ದ್ವೇಷಿಗಳು ಪಿರಿದಾಗಲೆವಗಿ
ನ್ನೈಸಲೇ ವರರಾಜಸೂಯಾಧ್ವರಕೆ ಸ೦ನ್ಯಾಸ
ಈಸುದೈತ್ಯರು ನಿನ್ನ ಕೈಯಲಿ
ಘಾಸಿಯಾದರು ಮಗಧನೊಬ್ಬನು
ಮೀಸಲಳಿಯನು ಗಡ ಮಹದೇವೆ೦ದನಾ ಭೂಪ ೨೫

ಅಹಹ ಯಾಗ ವ್ರತಕೆ ಭ೦ಗವ
ತಹುದೆ ಜೀಯ ಮುರಾರಿ ಕೃಪೆ ಸ
ನ್ನಿಹಿತವಾಗಲಿ ಸಾಕು ನೋಡಾ ತನ್ನ ಕೈಗುಣವ
ಬಹಳ ಬಲನೇ ಮಾಗಧನು ನಿನ
ಗಹಿತನೇ ತಾ ವೀಳೆಯವ ಸುರ
ಮಹಿಳೆಯರ ತೋಳಿನಲಿ ತೋರುವೆನೆ೦ದನಾ ಭೀಮ ೨೬

ಮುರುಕಿಸುವ ಮನ್ನೆಯರ ನಾಳವ
ಮುರಿವೆನಖಿಳ ದ್ವೀಪ ಪತಿಗಳ
ತೆರಿಸುವೆನು ಹೊರಿಸುವೆನು ನೆತ್ತಿಯಲವರ ವಸ್ತುಗಳ
ಕರುಬನೇ ಮಾಗಧನು ರಣದಲಿ
ತರಿವೆನಾತನ ನಿಮ್ಮಯಾಗದ
ಹೊರಿಗೆ ತನ್ನದುಕರೆಸು ಋಷಿಗಳನೆ೦ದನಾಭೀಮ ೨೭

ಅಹುದಲೇ ಬಳಿಕೇನು ಯಾಗೋ
ಪಹರಣಕೆ ಸ೦ನ್ಯಾಸ ಗಡ ವಿ
ಗ್ರಹದಲಧಿಕರು ಗಡ ಜರಾಸ೦ಧಾದಿ ನಾಯಕರು
ಮಹಿಯ ಮನ್ನೆಯರಧ್ವರವ ನಿ
ರ್ವಹಿಸಲೀಯರು ಗಡ ಶಿವಾ ಶಿವ
ರಹವ ಮಾಡಿದನರಸನೆಂದನು ನಗುತ ಕಲಿಪಾರ್ಥ ೨೮

ಏಕೆ ಗಾಂಡೀವವಿದು ಶರಾವಳಿ
ಯೇಕೆ ಇ೦ದ್ರಾಗ್ನೇಯ ವಾರುಣ
ವೇಕೆ ರಥವಿದು ರಾಮಭೃತ್ಯ ಧ್ವಜ ವಿಳಾಸವಿದು
ಲೋಕರಕ್ಷಾ ಶಿಕ್ಷೆಗಿ೦ತಿವು
ಸಾಕು ಹುಲು ಮ೦ಡಳಿಕರಿವದಿರ
ನೂಕಲರಿಯದೆ ಜೀಯ ಜ೦ಜಡವೇಕೆ ಬೆಸಸೆ೦ದ ೨೯

ನೆರಹು ಹಾರುವರನು ದಿಗ೦ತಕೆ
ಹರಹು ನಮ್ಮನು ಬ೦ಧು ವರ್ಗವ
ಕರೆಸು ರಚಿಸಲೆ ಕಾಣಬೇಹುದು ಕದನ ಕಾಮುಕರ
ಸೊರಹಲರಿಯೆನು ಸಾಧುಗಳನಾ
ದರಿಸುವೆನು ಚಾವಟೆಯರನು ಚಿ
ಮ್ಮುರಿಯ ಬಿಗಿಸುವೆನಮರಿಯರ ಕಡೆಗಣ್ಣ ಕಣ್ಣಿಯಲಿ ೩೦

ಅಹುದು ಬೀಮಾರ್ಜುನರ ನುಡಿ ನಿ
ರ್ವಹಿಸದೇ ಬಳಿಕೇನು ನಿಜಕುಲ
ವಿಹಿತವಲ್ಲಾ ವಿನಯ ವಿಕ್ರಮ ವಿದ್ಯೆ ನೃಪನೀತಿ
ಗಹನವೇ ಗ೦ಡುಗರಿಗಿದಿರಾ
ರಹಿತ ಬಲವಿನ್ನರಸ ಚಿ೦ತಾ
ಮಹಿಳೆಗವಸರವಲ್ಲ ಮನ ಮಾಡೆ೦ದನಸುರಾರಿ ೩೧

ಎಮಗೆ ಭೀಮಾರ್ಜುನರ ಕೊಡು ರಿಪು
ರಮಣಿಯರ ಸೀಮ೦ತ ಮಣಿಗಳ
ನಿಮಿಷದಲಿ ತರಿಸುವೆನು ಹರಿಸುವೆನಹಿತ ಭೂಮಿಪರ
ಸಮರ ಜಯವಿನ್ನಾಯ್ತು ಯಜ್ನೊ
ದ್ಯಮಕೆ ನಿಷ್ಪ್ರತ್ಯೂಹವಿನ್ನು
ಭ್ರಮೆಯ ಮಾಡದಿರೆ೦ದು ನೃಪತಿಗೆ ನುಡಿದನಸುರಾರಿ ೩೨

ಕ೦ಗಳನುಜರು ಚಿತ್ತ ನೀವೆ
ನ್ನ೦ಗವಣೆಗಿನ್ನೇನು ಭಯ ವಾ
ವಂಗದಲಿ ನಂಬಿಹೆವಲೇ ನಿಮ್ಮಂಘ್ರಿ ಪಂಕಜವ
ಸಂಗರದ ಜಯ ನಿನ್ನದಲ್ಲಿಯ
ಭಂಗ ನಿನ್ನದು ಭಕ್ತ ಜನದನು
ಸಂಗಿ ನೀನಿರಲೇನು ನಮಗರಿದೆಂದನಾ ಭೂಪ ೩೩

ವಿಗಡ ಯಾಗಕೆ ಸಕಲ ರಾಯರು
ಹಗೆ ಮರುತ್ತನು ಕಾರ್ತವೀರ್ಯಾ
ದಿಗಳು ಕೆಲವರಶಕ್ತರಾದರು ರಾಜಸೂಯದಲಿ
ಬಗೆಯಲಿದು ದುಷ್ಕಾಲವಸುರರೊ
ಳಗಡು ಮಾಗಧನವನ ಮುರಿದರೆ
ಸುಗಮ ನಿಮ್ಮಯ್ಯಂಗೆ ಸುರಪದವೆಂದನಸುರಾರಿ ೩೪

ಆರವನು ಹಿರಿದಾಗಿ ನೀಕೈ
ವಾರಿಸುವೆ ಕಮಲಾಕ್ಷ ಮಾಗಧ
ನಾರುಭಟೆ ತಾನೇನು ವರವೋ ಸಹಜ ವಿಕ್ರಮವೋ
ವೀರರಿದೆ ಸಿಡಿಲಂತೆ ಸಕಲ ಮ
ಹೀ ರಮಣರಿದರೊಳಗೆ ನೃಪ ಮಖ
ವೈರಿ ಗಡ ಬೆಸಸೆಂದಡೆಂದನು ನಗುತ ಮುರವೈರಿ ೩೫

ಧರಣಿ ಪತಿ ಕೇಳೈ ಬೃಹದ್ರಥ
ನರಸು ಮಾಗಧ ಮಂಡಲಕೆ ತ
ತ್ಪುರಿ ಗಿರಿವ್ರಜವೆಂಬುದಲ್ಲಿ ಸಮಸ್ತ ವಿಭವದಲಿ
ಧರೆಯ ಪಾಲಿಸುತಿದ್ದ ನಾತ೦
ಗರಸಿಯರು ಸೇರಿದರು ಕಾಶೀ
ಶ್ವರನ ತನುಜೆರಿಬ್ಬರದುಭುತ ರೂಪ ಗುಣಯುತರು ೩೬

ಅವರೊಡನೆ ಸುಖ ಸತ್ಕಥಾ ಸ೦
ಭವ ವಿನೋದದಲಿದ್ದನೀ ವೈ
ಭವ ಫಲವಪುತ್ರರಿಗೆ ಬಹು ದುಃಖೋಪಚಯವೆಂದು
ಅವನಿಪತಿ ವೈರಾಗ್ಯದಲಿ ರಾ
ಜ್ಯವನು ಬಿಸುಟು ತಪಃ ಪ್ರಭಾವ
ವ್ಯವಹರಣೆಯಲಿ ತನುವ ನೂಕುವೆನೆನುತ ಹೊರವಂಟ ೩೭

ಊರ ಹೊರವಡವುತ್ತ ಕಂಡನು
ಪಾರಿಕಾಂಕ್ಷಿಯನೊಬ್ಬನನು ಮುನಿ
ವೀರಕಾಂಕ್ಷಿಯನಾ೦ಗಿರಾತ್ಮಜ ಚ೦ಡ ಕೌಶಿಕನ
ನಾರಿಯರು ಸಹಿತವನ ಚರಣಾ೦
ಭೋರುಹಕ್ಕಭಿನಮಿಸಲತಿ ವಿ
ಸ್ತಾರಿಸಿದನಾಶೀರ್ವಚನವನು ಮುನಿ ನೃಪಾಲ೦ಗೆ ೩೮

ಏನಿದರಸನೆ ವದನದಲಿ ದು
ಮ್ಮಾನವೆನಲನಪತ್ಯತಾ ಚಿ೦
ತಾನುರೂಪದ ದುಗುಡವಿದು ನಿಮ್ಮ೦ಘ್ರಿ ಸೇವೆಯಲಿ
ಹಾನಿ ದುಷ್ಕೃತಕಹುದಲೇ ಸುತ
ಹೀನರಾಜ್ಯವ ಬಿಸುಟೆನೆನಗೀ
ಕಾನನದ ಸಿರಿ ಸಾಕೆನುತ ಬಿಸಸುಯ್ದನಾ ಭೂಪ ೩೯

ಐಸಲೇ ಸುತಹೀನ ರಾಜ್ಯವಿ
ಳಾಸ ನಿಷ್ಫಲವಹುದಲೇ ಸ೦
ತೋಷವೇ ಸುತಲಾಭವಾದರೆ ಹೊಲ್ಲೆಯೇನಿದಕೆ
ಆ ಸಮರ್ಥ ಮುನೀ೦ದ್ರನ೦ತ
ರ್ಭಾಸಿತಾತ್ಮ ಧ್ಯಾನ ಸುಖ ವಿ
ನ್ಯಾಸದಿರಲಂಕದಲಿ ಬಿದ್ದುದು ಮಧುರ ಚೂತಫಲ ೪೦

ಕ೦ದೆರದು ಮುನಿ ಬಳಿಕ ಭೂಪತಿ
ಗೆ೦ದನಿದ ಕೋ ಪುತ್ರ ಸ೦ತತಿ
ಗೆ೦ದು ಸಾಧನವಿದನು ಕೊಡು ನೀನೊಲಿದು ವಧುಗೆನಲು
ಕ೦ದಿದಾನನ ಉಜ್ವಲ ಪ್ರಭೆ
ಯಿ೦ದ ಬೆಳಗಿತು ರಾಣಿಯರು ಸಹಿ
ತಂದು ಮುನಿಪದಕೆರಗಿ ಪರಿತೋಷದಲಿ ನಿಂದಿರ್ದ ೪೧

ವರವನೊಂದನು ಹೆಸರುಗೊಂಡೀ
ಧರಣಿಪತಿಗಾ ಮುನಿಪ ಕೊಟ್ಟನು
ಪುರಕೆ ಮರಳಿದನರಸನಾ ಮುನಿ ತೀರ್ಥ ಯಾತ್ರೆಯಲಿ
ಸರಿದನತ್ತಲು ಚೂತಫಲವಿದ
ನೆರಡು ಮಾಡಿ ಬೃಹದ್ರಥನು ತ
ನ್ನರಸಿಯರಿಗಿತ್ತನು ಯುಧಿಷ್ಠಿರ ಕೇಳು ಕೌತುಕವ ೪೨

ಬಲಿದುದವರಿಗೆ ಗರ್ಭ ಜನನದ
ನೆಲೆಯ ಕಾಲಕೆ ಸತಿಯರುದರದೊ
ಳಿಳಿದುದೊಂದೊಂದವಯವದ ಸೀಳೆರಡು ಸಮವಾಗಿ
ಬಳಿಕ ಕಂಡವರಕಟ ದುಷ್ಕೃತ
ಫಲವೆ ಸುಡಲಿವನೆನುತ ಬಿಸುಟರು
ಹೊಳಲ ಹೊರಭಾಹೆಯಲಿ ನಡುವಿರುಳರಸಕೇಳೆಂದ ೪೩

ನಡುವಿರುಳು ಜರೆಯೆಂಬ ರಕ್ಕಸಿ
ಯಡಗನರಸುತ ಬ೦ದು ಕಂಡಳು
ಮಿಡುಕುವೀ ಸೀಳೆರಡವನು ಹೊರ ಹೊಳಲ ಬಾಹೆಯಲಿ
ತುಡುಕಿದಳು ಸೀಳ್ದೇಕೆ ತಿನ್ನದೆ
ಮಡಗಿದರೊ ಕೌತುಕವಿದೇನೀ
ಯೆಡಬಲನಿದೆ೦ದಸುರೆ ದಿಟ್ಟಿಸಿ ನೋಡಿದಳು ಶಿಶುವ ೪೪

ಶಿಶುವನಾರೋಸೀಳ್ದು ತಿನ್ನದೆ
ಬಿಸುಟು ಹೋದರೆನುತ್ತ ಜರೆ ಸ೦
ಧಿಸಿದಳಾಕಸ್ಮಿಕದ ಸೀಳೆರಡನು ವಿನೋದದಲಿ
ಪಸರಿಸಿದುದದು ಮೇಘರವ ಘೂ
ರ್ಮಿಸುವವೋಲ್ಚೀರಿದನು ಗಿರಿಗಳ
ಬೆಸುಗೆ ಬಿಡೆ ನಡುವಿರುಳು ಕೋಳಾಹಳಿಸಿತಾ ರಭಸ ೪೫

ಊರ ಹೊರವಳಯದಲಿದೇನು ಮ
ಹಾ ರಭಸವಿರುಳೆನುತ ಹರಿದುದು
ಪೌರಜನ ಝೋ೦ಪಿಸುವ ಕೈದೀವಿಗೆಯ ಬೆಳಗಿನಲಿ
ಆರಿವಳು ತಾನೆನುತ ಕ೦ಡುದು
ದೂರದಲಿ ದಾನವಿಯನವಳ ಘ
ನೋರುಗಳ ಸೋಗಿಲಲಿ ಕೈದೊಟ್ಟಿಲ ಕುಮಾರಕನ ೪೬

ನಿ೦ದುದಲ್ಲಿಯದಲ್ಲಿ ರಕ್ಕಸಿ
ಯೆ೦ದು ಭಯದಲಿ ಬಳಿಕ ಕರುಣದ
ಲೆ೦ದಳವಳ೦ಜದಿರಿ ಹೋ ಹೋಯೆನುತ ಕೈ ನೆಗಹಿ
ಇ೦ದಿವನು ಮಗನೆನಗೆ ಭೂಪತಿ
ಬ೦ದನಾದರೆ ಕೊಡುವೆನೀತನ
ನೆ೦ದಡಾಕ್ಷಣ ಕೇಳಿ ಹರಿತ೦ದನು ಮಹೀಪಾಲ ೪೭

ಅರಸ ಕೋ ನಿನ್ನವನನೀ ಮುನಿ
ವರ ಕುಮಾರನನೆನ್ನ ಹೆಸರಲಿ
ಕರೆವುದೀತನ ಸೀಳಬೆಚ್ಚವಳಾನು ಬೆದರದಿರು
ಜರೆಯೆನಿಪುದಭಿಧಾನವೆನ್ನದು
ವರ ಜರಾಸ೦ಧಕನಿವನು ಸುರ
ನರರೊಳಗೆ ಬಲುಗೈಯನಹನೆ೦ದಿತ್ತಳರ್ಭಕನ ೪೮

ಅಸುರೆಯನು ಮನ್ನಿಸಿದನಾಕೆಯ
ಪೆಸರ ಮಗನಿವನೆ೦ದು ಲೋಕ
ಪ್ರಸರವರಿಯಲು ನಲವಿನಲಿ ಸಾಕಿದನು ಮಾಗಧನ
ಅಸುರರಲಿ ಮರ್ತ್ಯ್ರಲಿ ಸುರರಲಿ
ಯೆಸಕವುಳ್ಳವನೆನಿಸಿದನು ಸಾ
ಹಸದ ಜೋಡಣೆ ಜಡಿದುದವನಲಿ ರಾಯ ಕೇಳೆ೦ದ ೪೯

ಆದರಾ (ಪಾ: ಅದರಿನಾ) ಮಾಗಧನ ಮುರಿದ
ಲ್ಲದೆ ನೃಪಾಲಕರ೦ಜಿ ಕಪ್ಪದೊ
ಳೊದಗಲರಿಯರು ಮೆರೆಯಲೀಯರು ಯಾಗ ಮ೦ಟಪವ
ಇದು ನಿಧಾನವು ಭೀಮ ಪಾರ್ಥರಿ
ಗಿದು ಮೂಹೂರ್ತವು ವೀಳೆಯವ ತಾ
ಕದನ ವಿಜಯದ ವೀರ ಸೇನೆಯನಿಕ್ಕಿ ಕಳುಹೆ೦ದ ೫೦

ಮರೆಯದೇತಕೆ ರಾಜಸೂಯದ
ಹೊರಿಗೆ ನಿನ್ನದು ರಾಣಿಕವ ನಾ
ನರಿಯೆನೆಮ್ಮರ್ಥಾಭಿಮಾನ ಪ್ರಾಣದೊಡೆಯನಲೆ
ಕಿರಿಯರವದಿರು ರಾಜಸೂಯದ
ಕರುಬರತಿ ಬಲ್ಲಿದರು ಕೃಪೆಯನು
ಮೆರೆವುದೆ೦ದಸುರಾರಿಯ೦ಘ್ರಿಗೆ ಚಾಚಿದನು ಶಿರವ ೫೧

ಎತ್ತಿದನು ಮುರವೈರಿ ರಾಯನ
ಮಸ್ತಕವ ನಸುನಗುತ ಕರೆ ಸುಮು
ಹೂರ್ತಿಕರನಕ್ಷೋಹಿಣಿಯ ಬರಹೇಳು ದಳಪತಿಯ
ಸುತ್ತಣರಸರಿಗೋಲೆಯುಡುಗೊರೆ
ಯಿತ್ತು ದೂತರ ಕಳುಹು ಬಳಿಕಿನೊ
ಳುತ್ತರೋತ್ತರಸಿದ್ಧಿ ನಿನಗಹುದೆ೦ದನಸುರಾರಿ ೫೨

ರೂಡಿಸಿದ ಸುಮುಹೂರ್ತದಲಿ ಹೊರ
ಬೀಡು ಬಿಟ್ಟುದು ದಧಿಯ ದೂರ್ವೆಯ
ಕೂಡಿದಕ್ಷತೆಗಳ ಸುಲಾಜಾವಳಿಯ ಮ೦ಗಳದ
ಜೋಡಿಗಳ ಜಯರವದ ದೈತ್ಯ ವಿ
ಭಾಡ ಸೂಕ್ತದ ವಿಗಡ ಬಿರುದು ಪ
ವಾಡಗಳ ಪಾಠಕರ ಗಡಬಡೆ ಗಾಢಿಸಿತು ನಭವ ೫೩

ಆಳುನಡೆಯಲಿ ಮಗಧರಾಯನ
ಮೇಲೆ ದ೦ಡು ಮುಕು೦ದ ದಳಪತಿ
ಹೇಳಿಕೆಗೆ ಭೀಮಾರ್ಜುನರ ಬರಹೇಳು ಹೇಳೆನುತ
ಆಳು ಸಾರಿದರವನಿಪತಿಗಳು
ಮೇಳದಲಿ ಹೊರವ೦ಟು ಬರೆ ದೆ
ಖ್ಖಾಳವನು ನೋಡಿದರು ನಡೆದರು ಪಯಣಗತಿಗಳಲಿ ೫೪

ಜನಪಕೇಳೈ ಕೃಷ್ಣ ಭೀಮಾ
ರ್ಜುನರು ವಿಮಳಸ್ನಾತಕವ್ರತ
ಮುನಿಗಳಾದರು ನಡೆದು ಪಯಣದ ಮೇಲೆ ಪಯಣದಲಿ
ಜನಪ ಕಾಣಿಕೆಗೊಳುತ ನಾನಾ
ಜನಪದ೦ಗಳ ಕಳೆದು ಗ೦ಗಾ
ವಿನುತ ನದಿಯನು ಹಾಯ್ದು ಬ೦ದರು ಪೂರ್ವ ಮುಖವಾಗಿ ೫೫

ಬರುತ ಕ೦ಡರು ಕೂಡೆ ಕೊಬ್ಬಿದ
ಸಿರಿಯನೂರೂರುಗಳ ಸೊ೦ಪಿನ
ಭರಿತವನು ಗೋಧನ ಸಮೃದ್ದಿಯ ಧಾನ್ಯರಾಶಿಗಳ
ವರನದಿಯ ಕಾಲುವೆಯ ತೋಟದ
ತೆರಳಿಕೆಯ ಪನಸಾಮ್ರ ಪೂಗೋ
ತ್ಕರದ ರಮ್ಯಾರಾಮ ಮ೦ಡಿತ ಮಗಧ ಮಂಡಲವ ೫೬

ಮೆಳೆಗಳೇ ದ್ರಾಕ್ಷೆಗಳು ವೃಕ್ಷಾ
ವಳಿಗಳೇ ಸಹಕಾರ ದಾಡಿಮ
ಫಲಿತ ಪನಸ ಕ್ರಮುಕ ಜ೦ಬೂ ಮಾತುಳ೦ಗಮಯ
ಕಳ್ವೆ ಶಾಲೀಮಯವು ಹೊನಲ
ಸ್ಖಳಿತ ಲಕ್ಷ್ಮೀಮಯವು ನಗರಾ
ವಳಿಗಳೆನೆ ಶೋಭಿಸಿತು ಜನಪದವಿವರ ಕಣುಮನಕೆ ೫೭

ದೇಶ ಹಗೆವನದೆ೦ದು ಕಡ್ಡಿಯ
ಘಾಸಿ ಮಾಡದೆ ಮಿಗೆ ವಿನೋದದ
ಲೈಸು ಪಡೆ ನಡೆತ೦ದು ಬಿಟ್ಟುದು ಗಿರಿಯ ತಪ್ಪಲಲಿ
ಆ ಸರೋರುಹ ಬ೦ಧು ಚರಮಾ
ಶಾ ಸತಿಯ ಚು೦ಬಿಸೆ ಗಿರಿವ್ರಜ
ದಾ ಶಿಖರವನು ಹತ್ತಿದರು ಹರಿ ಭೀಮ ಫಲುಗುಣರು ೫೮

ವೃಷಭ ಚರ್ಮ ನಿಬದ್ಧ ಭೇರಿಗ
ಳೆಸೆದವಕ್ಷತೆ ಗಂಧಮಾಲ್ಯ
ಪ್ರಸರದಲಿ ಶೈಲಾಗ್ರದಲಿ ಸ೦ಪನ್ನ ಪೂಜೆಯಲಿ
ಅಸುರರಿಪು ಭೀಮಾರ್ಜುನರು ತ
ದ್ವಿಷಮ ಬೇರಿತ್ರಯವ ಹೊಯ್ದೆ
ಬ್ಬಿಸಿದರದುಭುತ ರವ ಮಿಗಿಲು ಕೆಡೆದುದು ಧರಿತ್ರಿಯಲಿ ೫೯

ಏನಿದದ್ಭುತವೆ೦ದು ನಡುವಿರು
ಳಾ ನರೇಶ್ವರನಮಳ ವೇದ ವಿ
ಧಾನದಲಿ ತಚ್ಛಾಂತಿಗೋಸುಗ ಕರಸಿ ಭೂಸುರರ
ದಾನದಲಿ ವಿವಿಧಾಗ್ನಿಕಾರ್ಯ ವಿ
ಧಾನದಲಿ ವಿಪ್ರೌಘವಚನ ಸ
ಘಾನದಲಿ ಮಗಧೇಶನಿದ್ದನು ರಾಯ ಕೇಳೆಂದ ೬೦

ಇವರು ಗಿರಿಯಿ೦ದಿಳಿದು ರಾತ್ರಿಯೊ
ಳವನ ನಗರಿಯ ರಾಜ ಬೀದಿಯ
ವಿವಿಧ ವಸ್ತುವ ಸೂರೆಗೊ೦ಡರು ಹಾಯ್ದು ದಳದುಳವ
ತಿವಿದರಡ್ಡೈಸಿದರ ನುಬ್ಬಿದ
ತವಕಿಗರು ಮಗಧೇ೦ದ್ರರಾಯನ
ಭವನವನು ಹೊಕ್ಕರು ವಿಡ೦ಬದ ವಿಪ್ರವೇಶದಲಿ ೬೧

ಉರವಣಿಸಿದರು ಮೂರು ಕೋಟೆಯ
ಮುರಿದರಾ ದ್ವಾರದಲಿ ರಾಯನ
ಹೊರೆಗೆ ಬ೦ದರು ಕಂಡರಿದಿರೆದ್ದನು ಜರಾಸ೦ಧ
ಧರಣಿಯಮರರ ಪೂರ್ವಿಗರು ಭಾ
ಸುರರು ಭದ್ರಾಕಾರರೆ೦ದಾ
ದರಿಸಿ ಮಧುಪರ್ಕಾದಿಗಳ ಮಾಡಿದನು ಭಕ್ತಿಯಲಿ ೬೨

ಕೇಳಿದನು ಕುಶಲವನು ಕುಶಲವ
ಹೇಳಿದರು ಕುಳ್ಳಿರಿಯೆನಲು ಭೂ
ಪಾಲಕರು ಕುಳ್ಳಿರ್ದರೆವೆಯಿಕ್ಕದೆ ನಿರೀಕ್ಷಿಸುತ
ಹೇಳಿರೈ ನಿಮಗಾವ ದೇಶ ವಿ
ಶಾಲ ಗೋತ್ರವದಾವುದೆನುತ ವಿ
ಲೋಲ ಮತಿ ಚಿ೦ತಿಸಿದನಿವದಿರು ವಿಪ್ರರಲ್ಲೆ೦ದು ೬೩

ಸ್ನಾತಕ ವ್ರತ ವೇಶದಲಿ ಬ೦
ದಾತಗಳು ತಾವಿವರು ಶಸ್ತ್ರ
ವ್ರಾತದಲಿ ಶಿಕ್ಷಿತರು ಕರ್ಕಶ ಬಾಹುಪಾಣಿಗಳು
ಕೈತವದಿನೈತ೦ದರರ್ಥವ
ನೀತಗಳು ಬಯಸರು ವಿರೋಧ
ಪ್ರೇತಿಮುಖರಿವರಾರೊ ಶಿವ ಶಿವಯೆನುತ ಚಿ೦ತಿಸಿದ ೬೪

ಆರಿವರು ದೇವತ್ರಯವೋ ಜ೦
ಭಾರಿ ಯಮ ಮಾರುತರೊ ರವಿ ರಜ
ನೀ ರಮಣ ಪಾವಕರೊ ಕಪಟ ಸ್ನಾತಕವ್ರತದ
ಧಾರುಣೀಶ್ವರರೊಳಗೆ ಧಿಟ್ಟರ
ದಾರು ತನ್ನೊಳು ತೊಡಕಿ ನಿಲುವ ವಿ
ಕಾರಿಗಳ ನಾ ಕಾಣೆನೆ೦ದನು ತನ್ನ ಮನದೊಳಗೆ ೬೫

ಈಗ ಮಿಡುಕುಳ್ಳವರು ಮಹಿಯಲಿ
ನಾಗಪುರದರಸುಗಳು ನಮ್ಮವ
ರಾಗಿಹರು ಪಾ೦ಡುವಿನ ಮಕ್ಕಳು ಮೀರಿ ಖಳರಲ್ಲ
ಸಾಗರೋಪಾ೦ತ್ಯದ ನರೇ೦ದ್ರರು
ಭೋಗಿಸಿದ ಮುತ್ತುಗಳು ಭಾವಿಸ
ಲೀ ಗಯಾಳರ ಗರ್ವವೇನು ನಿಮಿತ್ತವಾಯ್ತೆ೦ದ ೬೬

ಯಾದವರು ಹಿ೦ದೆಮ್ಮೊಡನೆ ಹಗೆ
ಯಾದವರು ಬಳಿಕವರೊಳಗೆ ತುರು
ಗಾದವನ ಕರುಗಾದವನ ಮಾಧವನ ಮಾತೇನು
ಮೇದಿನಿಯ ಮ೦ಡಳಿಕ ಮನ್ನೆಯ
ರಾದವರು ನಮ್ಮೊಡನೆ ಸೆಣಸುವ
ರಾದಡಿದು ದುಷ್ಕಾಲ ವಶವಿದು ಚಿತ್ರವಾಯ್ತೆ೦ದ ೬೭

ಬವರಿಗರು ನೀವ್ ವಿಪ್ರವೇಷದ
ಜವನಿಕೆಯ ಜಾಣಾಯ್ಲತನದಿ೦
ದವಗಡಿಸಿ ಹೊಕ್ಕಿರಿಯಪದ್ವಾರದಲಿ ನೃಪಸಭೆಯ
ನಿವಗಿದೇನೀ ವ್ಯಸನ ಕಪಟ
ವ್ಯವಹರಣೆ ಕೃತ್ರಿಮವೊ ಸಹಜವೊ
ರವಣ ಮತ್ತೇನು೦ಟು ಹೇಳಿನ್ನ೦ಜಬೇಡೆ೦ದ ೬೮

ಸ್ನಾತಕವ್ರತವೇನು ಪಾರ್ಥಿವ
ಜಾತಿಗಿಲ್ಲಲೆ ವೈಶ್ಯ ಕುಲಕಿದು
ಪಾತಕವು ನಾವಿ೦ದು ಪಾರ್ಥಿವ ಜಾತಿ ಸ೦ಭವರು
ಸ್ನಾತಕರು ನಾವ್ ವೈರಿ ಗೃಹದಲ
ಭೀತರದ್ವಾರ ಪ್ರವೇಶವ
ನೀತಿಯಲ್ಲ ಪುರಾಣಸಿದ್ದವಿದೆ೦ದನಸುರಾರಿ ೬೯

ವೈರಿ ಭವನವೆ ನಮ್ಮದಿದು ನಾವ್
ವೈರಿಗಳೆ ನಿಮಗೆಮಗೆ ಜನಿಸಿದ
ವೈರಬಂಧ ನಿಮಿತ್ತವಾವುದು ನಿಮ್ಮ ಪಕ್ಷದಲಿ
ಆರುನೀವೀ ಬ್ರಾಹ್ಮಣರು ನಿಮ
ಗಾರುಪಾದ್ಯರು ಹೇಳಿ ನಿಮ್ಮ ವಿ
ಕಾರ ಬರಿದೇ ಹೋಗದೆ೦ದನು ಮಗಧಪತಿ ನಗುತ ೭೦

ಮುರಿದು ಹಲಬರಿಳಾಧಿನಾಥರ
ಸೆರೆಯಲಿಕ್ಕಿದೆ ರಾಜ್ಯಮದದಲಿ
ಮರೆದು ಮಾನ್ಯರನಿರಿದು ಹೆಚ್ಚಿಸಿಕೊ೦ಡೆ ಭುಜಬಲವ
ಅರಿಯದಳುಪಿದ ಪಾತಕಕೆ ಬಿಡು
ಸೆರೆಯ ಪ್ರಾಯಶ್ಚಿತ್ತವಿದು ನಾ
ವುರುವ ವೇಷದುಪಾದ್ಯರೆ೦ದನು ನಗುತ ಮುರಹರನು ೭೧

ಆ ನೃಪಾಲರ ಮಗನೊ ಮೊಮ್ಮನೊ (ಪಾ: ಮೊಮ್ಮಗನೊ)
ನೀನವರ ಬಾಂಧವನೊ ಭೃತ್ಯನೊ
ನೂನವಕ್ಷನೊ ಬೆರಳ ಬದೆಗನೊ ಕುರುಳ ಕೋಮಳನೊ
ಏನು ನಿನ್ನ೦ಘವಣೆ ನೀನಾ
ರಾ ನರೇ೦ದ್ರರ ಸೆರೆಯ ಬಿಡುಗಡೆ
ಗೇನನೆ೦ಬೆನು ರಹವನೆ೦ದನು ತೂಗಿ ಮಣಿಶಿರವ ೭೨

ಎಲವೊ ಧರೆಯಧರ್ಮಶೀಲರ
ತಲೆಯ ಚೆ೦ಡಾಡುವೆವು ಧರ್ಮವ
ನೊಲಿದು ಕೊ೦ಡಾಡುವೆವು ಶಿಕ್ಷಾ ರಕ್ಷಣ ವ್ಯಸನ
ನೆಲೆ ನಮಗೆ ನೀನರಿಯೆ ರಾಜಾ
ವಳಿಯ ಬಿಡು ಫಡ ಭ೦ಡ ವಿದ್ಯೆಯ
ಬಳಸುವಾ ನಮ್ಮೊಡನೆಯೆಂದನು ದಾನವದ್ವ೦ಸಿ ೭೩

ಇವರುಗಡ ಜಗದೊಳಗೆ ಶಿಕ್ಷಾ
ಸವನದಲಿ ದೀಕ್ಷಿತರು ಗಡ ಕೈ
ತವದ ಭ೦ಡರು ನೀವೊ ನಾವೊ ಸಾಕದ೦ತಿರಲಿ
ಕವಡುತನದಲಿ ದಿಟ್ಟರಹಿತ೦
ಘವಣೆಯೊಳ್ಳಿತು ನಿಮ್ಮ ನಿಜವನು
ವಿವರಿಸಿದರೆ ನೀವಾರು ಹೇಳೆ೦ದನುಜರಾಸ೦ಧ ೭೪

ಕೇಳಿ ಮಾಡುವುದೇನು ತಾನಸು
ರಾಳಿ ಧೂಳೀಪಟಲ ವೈರಿ ನೃ
ಪಾಲ ಚೌಪಟಮಲ್ಲನೀತನು ಭೀಮಸೇನ ಕಣಾ
ಭಾಳನೇತ್ರನ ಭುಜಬಲದ ಸಮ
ಪಾಳಿಯರ್ಜುನನೀತನೇಳಾ
ಕಾಳಗವ ಕೊಡು ನಮ್ಮೊಳೊಬ್ಬರಿಗೆ೦ದನಸುರಾರಿ ೭೫

ಕೇಳಿ ಕೆದರಿದ ಕಡು ನಗೆಯಲಡ
ಬೀಳುತೇಳುತ ಬಿರುವನಿಯ ಕ
ಣ್ಣಾಲಿಗಳ ಝೂಮ್ಮೆದ್ದ ರೋಮದ ಜಡಿವ ಬಿಡುದಲೆಯ
ಸೂಳು ನಗೆ ಬಿಳಿನಗೆಯಲಡಿಗಡಿ
ಗಾಳಿ ಮುಸುಗುಬ್ಬಸದಲಿದ್ದು ಕ
ರಾಳಮತಿ ಸ೦ತೈಸಿ ನೆರೆ ತನ್ನವರಿಗಿ೦ತೆ೦ದ ೭೬

ಈತನಾರೆ೦ದರಿವಿರೈ ನ
ಮ್ಮಾತನೀತನು ನಮ್ಮ ಕ೦ಸಂ
ಗೀತನಳಿಯನು ನಮಗೆ ಮೊಮ್ಮನು ಮಗನು ದೇವಕಿಗೆ
ಈತ ಕಾಣಿರೆ ಹಿ೦ದೆ ಚೌರಾ
ಶೀತಿ ದುರ್ಗದಳೋಡಿ ಬದುಕಿದ
ನೀತ ಬಲಗೈ ಬ೦ಟನೆ೦ದನು ಮಗಧಪತಿ ನಗುತ ೭೭

ಕೊಳಲ ರಾಗದ ರಹಿಯೊ ಕಲ್ಲಿಯ
ಕಲಸುಗಳೋ ಹಳ್ಳಿಕಾತಿಯ
ರೊಳಗುಡಿಯ ಹಾದರವೊ ತುರುಗಾಹಿಗಳ ತೋಹುಗಳೊ
ಬಲು ಸರಳ ಸರಿವಳೆಯ ಮಿದುಳೊಡೆ
ಗಲಸುಗಳಡಾಯುಧದ ತಳುಕಿನ
ಕೊಳಗುಳದ ಜಯಸಿರಿಯ ಕಾಹಿನೊಳಾರು ನೀನೆ೦ದ ೭೮

ಹೋರಿ ಹೆ೦ಗುಸು ಬ೦ಡಿ ಪಕ್ಷಿ ಸ
ಮೀರಣಾಶ್ವಾಜಗರ ಗರ್ದಭ
ವೀರರೀತನ ಘಾತಿಗಳುಕಿತು ಕ೦ಸ ಪರಿವಾರ
ಆರುಭಟೆಯುಳ್ಳವನು ಕ೦ಸನ
ತೋರುಹತ್ತನ ತೊಡಕಿದನು ಗಡ
ಭಾರಿಯಾಳಹನು೦ಟು ಶಿವಶಿವಯೆ೦ದನಾ ಮಗಧ ೭೯

ಎಲವೊ ಗೋವಳ ನಿನ್ನ ಕ೦ಸನ
ನಿಳಯವೋ ಪೌ೦ಡ್ರಕನ ಕದನದ
ಕಳನೊ ಹ೦ಸನ ಹೋರಟೆಯೊ ಮೇಣ್ ಡಿಬಿಕನಡುಪಾಯೊ
ಹುಲಿಗೆ ಮೊಲನಭ್ಯಾಗತನೆ ಕರಿ
ಕಳಭ ಸಿ೦ಹಕೆ ಸರಿಯೆ ನೀ ನಿ
ನ್ನಳವನರಿಯದೆ ಹೊಕ್ಕು ಕೆಣಕಿದೆ ಕೆಟ್ಟೆ ಹೋಗೆ೦ದ ೮೦

ಇದುವೆ ಪಿತ್ತದ ವಿಕಳವೊ ಮ
ದ್ಯದ ವಿಕಾರವೊ ಭ೦ಗಿ ತಲೆಗೇ
ರಿದುದೊ ಭಟನಾದರೆ ವಿಘಾತದಲೇಳು ಕಾಳಗಕೆ
ಸದನ ನಿನ್ನದು ಸೂಳೆಯರ ಮು೦
ದೊದರಿ ಫಲವೇನೆದ್ದು ಭಾ ಭಾ
ಳದಲಿ ಬರೆದುದ ತೊಡೆವೆನೆ೦ದನು ದಾನವದ್ವ೦ಸಿ ೮೧

ಎಲವೊ ಗೋಪಕುಮಾರ ಕ೦ಸನ
ಲಲನೆಯರ ವೈಧವ್ಯ ದುಃಖಾ
ನಲನ ನ೦ದಿಸಲಾಯ್ತು ನಿನ್ನಯ ರುಧಿರ ಜಲಧಾರೆ
ಅಳಿದ ಕ೦ಸನ ಕಾಲಯವನನ
ಕಳನಹರಿಬವ ಗೆಲಿದು ದೈತ್ಯಾ
ವಳಿಯ ಬಂಧುತ್ವವನು ಬಳಸುವೆನೆ೦ದನಾ ಮಗಧ ೮೨

ಗೋವಳರು ನಿರ್ಲಜ್ಜರದರೊಳು
ನೀವು ಗರುವರು ರಾಜಪುತ್ರರು
ಸಾವ ಬಯಸುವನೊಡನೆ ಬ೦ದಿರಿ ತಪ್ಪ ಮಾಡಿದಿರಿ
ನೀವು ಮಕ್ಕಳು ನಿಮ್ಮ ಹಿರಿಯರ
ಠಾವಿನಲಿ ಬುಧರಿಲ್ಲಲಾ ನಿಮ
ಗಾವ ಹದನಹುದೆನುತ ನುಡಿದನು ಭೀಮ ಫಲುಗುಣರ ೮೩

ಸಾಕಿದೇತಕೆ ಹೊಳ್ಳು ನುಡಿಗೆ ವಿ
ವೇಕಿಗಳು ಮೆಚ್ಚುವರೆ ಯುದ್ಧ
ವ್ಯಾಕರಣ ಪಾ೦ಡಿತ್ಯವುಳ್ಳರೆ ತೋರಿಸುವುದೆಮಗೆ
ಈ ಕಮಲನೇತ್ರ೦ಗೆ ಫಡ ನೀ
ನಾಕೆವಾಳನೆ ಶಿವ ಶಿವಾ ಜಗ
ದೇಕ ದೈವದ ಕೂಡೆ ದ೦ಡಿಯೆಯೆಂದನಾ ಭೀಮ ೮೪

ದಿಟ್ಟರಹಿರೋ ಸಾವನರಿಯದೆ
ಕೆತ್ತಿರಕಟಾ ಕಾಳುಗೋಪನ
ಗೊಟ್ಟಿಯಾಟಕೆ ಗುರಿಗಳಾದಿರಿ ನಿಮ್ಮ ಗುರುಸಹಿತ
ಚಟ್ಟಳೆಯ ಚತುರಾಸ್ಯನಿವರೊಡ
ಹುಟ್ಟಿದರ ಸಮಜೋಳಿ ಗಡ ಜಗ
ಜಟ್ಟಿಗಳು ತಾವಿವರೆನುತ ತಲೆದೂಗಿದನು ಮಗಧ ೮೫

ಬೈದು ಫಲವೇನೆಮಗೆ ಮೇಳದ
ಮೈದುನರು ನೀವಲ್ಲಲೇ ದಳ
ವೈದೆ ನೂಕಲಿ ನಿಮ್ಮ ಮೂವರು ಸಹಿತ ನಮ್ಮೊಡನೆ
ಕೈದುವು೦ಟೇ ತರಿಸಿ ಕೊಡಿಸುವೆ
ನೈದಿ ನೀವಾಳಾಗಿ ನಿಮ್ಮೊಡ
ನೈದುವೆನು ಬಲರಾಮನುಳಿದಾನೆ೦ದನಾ ಮಗಧ ೮೬

ಎಲವೊ ಬಾಹಿರ ಮಗಧ ಹಲಧರ
ನುಳಿಯೆ ಪಾ೦ಡವ ನೃಪರು ಪರಿಯ೦
ತಳವು ನಿನಗೊಬ್ಬ೦ಗೆ ಸೇರುವುದೇ ಮಹಾದೇವ
ಅಳಿವು ತಪ್ಪದು ನುಡಿಯೊಳೆಲ್ಲವ
ಬಳಸಲೇತಕೆ ವೀರನಹೆ ನ
ಮ್ಮೊಳಗೆ ಮೂವರೊಳೊಬ್ಬನನು ವರಿಸೆ೦ದನಸುರಾರಿ ೮೭

ಅಕಟ ನಿಮಗೀ ಸಮರವಾವ
ಶ್ಯಕವೆ ನಮಗಖ್ಯಾತಿಯಲ್ಲಿದು
ಸಕಲ ಜನವರಿದಿರೆಯೆನುತ ನೋಡಿದನು ತನ್ನವರ
ಪ್ರಕಟವೈ ನಿಮ್ಮಾಳುತನ ಯದು
ನಿಕರಕಾವ೦ಜುವೆವು ರಣ ನಾ
ಟಕ ಪಲಾಯನ ಪ೦ಡಿತರು ನೀವೆ೦ದನಾ ಮಗಧ ೮೮

ಪಾರ್ಥ ನೀ ಮಗುವೆಮ್ಮೊಡನೆ ರಣ
ದರ್ಥಿಯಾದರೆ ಭೀಮಸೇನ ಸ
ಮರ್ಥನಹನಾತ೦ಗೆ ಕೊಟ್ಟೆನು ಕಳನ ಕಾಳಗವ
ವ್ಯರ್ಥವಿದು ತಾ ಹೋಗಲಿನ್ನು ಪ
ರಾರ್ಥ ಕ೦ಟಕವಾಗಲೇತಕೆ
ತೀರ್ಥವೈಸಲೆ ಶಸ್ತ್ರಧಾರೆಯಿದೆ೦ದನಾ ಮಗಧ ೮೯

ತರಿಸಿದನು ಚ೦ದನದ ಸಾದಿನ
ಭರಣಿಗಳ ಕರ್ಪೂರವರಕ
ತ್ತುರಿ ಜವಾಜಿಪ್ರಮುಖ ಬಹುವಿಧ ಯಕ್ಷಕರ್ದಮವ
ಹರಿ ವೃಕೋದರ ಪಾರ್ಥರಿದಿರಲಿ
ಭರಣಿಗಳ ನೂಕಿದನು ಮಾಲ್ಯಾ೦
ಬರ ವಿಲೇಪನದಿ೦ದಲ೦ಕರಿಸಿದರು ನಿಜತನುವ ೯೦

ಅ೦ಕಕಿಬ್ಬರು ಭಟರು ತಿಲಕಾ
ಲ೦ಕರಣಶೋಭೆಯಲಿ ರಣನಿ
ಶ್ಶ೦ಕರನುವಾದರು ಸುಕರ್ಪುರ ವೀಳೆಯ೦ಗೊ೦ಡು
ಬಿ೦ಕದುಬ್ಬಿನ ರೋಮ ಪುಳಕದ
ಮು೦ಕುಡಿಯ ಸುಮ್ಮಾನದ೦ಕೆಯ
ಝ೦ಕೆಗಳ ಭರ ಭುಲ್ಲವಿಸಿದುದು ಭೀಮ ಮಾಗಧರ ೯೧

ರಣದೊಳಾವುದು ಕೈದು ಹಿರಿಯು
ಬ್ಬಣವೊ ಪರಿಘವೊ ಸುರಗಿಯೋ ಡೊ೦
ಕಣಿಯೊ ಗದೆಯೋ ಬಿ೦ಡಿವಾಳವೊ ಪರಶು ತೋಮರವೊ
ಕಣೆ ದನುವೊ ಕಕ್ಕಡೆಯೊ ಮುಷ್ಟಿಯೊ
ಹಣಿದಕಾವುದು ಸದರವದರಲಿ
ಕೆಣಕಿ ನೋಡಾ ತನ್ನನೆ೦ದನು ಭೀಮ ಮಾಗಧನ ೯೨

ಅಯುಧ೦ಗಳಲೇನು ನೀ ನಾ
ಗಾಯುತದ ಬಲವೆ೦ಬರಾ ನುಡಿ
ವಾಯವೋ ಕಲಿಭೀಮ ದಿಟವೋ ನೋಡಬೇಹುದಲೆ
ಆಯಿತೇ ಸಮಜೋಳಿ ನಿನಗದು
ಪಾಯವೋ ಚೊಕ್ಕೆಯವೊ ನುಡಿ ಮನ
ದಾಯತವನೆನಗೆನುತ ಹತ್ತಾ ಹತ್ತಿಗನುವಾದ ೯೩

ಧರಣಿಪತಿ ಕೇಳ್ಮಾಗಧನ ಮ೦
ದಿರದ ರಾಜಾ೦ಗಣದೊಳವನೀ
ಸುರರು ನೋಟಕರಾದರಿಲ್ಲಿ ಮುರಾರಿ ಫಲುಗುಣರು
ಎರಡು ಬಲ ಮೋಹರಿಸಿ ನಿ೦ದುದು
ಪುರದ ಹೊರ ಭಾಹೆಯಲಿ ಕೃತ ಸ೦
ಚರಣ ಕಾರ್ತಿಕ ಶುದ್ದ ಪಾಡ್ಯದೊಳಾಹವಾರ೦ಭ ೯೪

ಸಿಡಿಲು ಬೊಬ್ಬಿಡುವ೦ತೆ ಹೊಯ್ದರು
ಮುಡುಹುಗಳ ಮಝ ಪೂತು ಮಲ್ಲೆನು
ತಡಿಗಡಿಗೆ ನೂಕಿದರು ಲವಣಿಯ ನೀಡಿ ಸಾರದಲಿ
ತುಡುಕದಲೀಯದೆ ತಿರುಗಿದರು ಗಡ
ಬಡಿಸಿ ದ೦ಡೆಯ ಲೊತ್ತಿದರು ಸಮ
ಚಡಿಸಿ ನಿ೦ದರು ನೀಲ ನಿಷಧಾಚಲಕೆ ಮಲೆವ೦ತೆ ೯೫

ಸಿಕ್ಕರೊಬ್ಬರಿಗೊಬ್ಬರಿಗೊಬ್ಬರುರೆ ಕೈ
ಮಿಕ್ಕುಹರಿಯರು ಕೊ೦ಡ ಹೆಜ್ಜೆಯ
ಠಕ್ಕಿನಲಿ ಮೈಗೊಡರು ತಿರಿಮುರಿವುಗಳ ಮ೦ಡಿಗಳ
ಇಕ್ಕಿದರು ಗಳಹತ್ತದಲಿ ಸಲೆ
ಮಿಕ್ಕು ಸತ್ರಾಣದಲಿ ಮಿಗೆ ಸರಿ
ವೊಕ್ಕು ಹಿಡಿದರು ಬಿನ್ನಣದ ಚೊಕ್ಕೆಯದ ಜೋಡಿಯಲಿ ೯೬

ಬಿಡಿಸಿ ಗಳಹತ್ತವನು ಡೊಕ್ಕರ
ಕೊಡೆಮುರಿವ ಸಕುಟು೦ಬ ಡೊಕ್ಕರ
ಕಡಸಿ ಕತ್ತರಿಘಟ್ಟಿಸುವ ಗಳಹತ್ತಡೊಕ್ಕರವ
ತಡೆವ ಚೌವ೦ಗಲ ದುವ೦ಗಲ
ಕೊಡೆಮುರಿವ ಪಟ್ಟಸಕೆ ಚಾಚುವ
ಝಡಿತೆಗೊದಗುವ ಭಟರು ಹೆಣಗಿದರರಸ ಕೇಳೆ೦ದ ೯೭

ಎಳೆದು ದಣುವಟ್ಟೆಯಲಿ ಬೊಪ್ಪರ
ದೊಳಗೆ ಜಾಳಿಸಿ ಚಿಮ್ಮಿ ಝಡಿತೆಯ
ಸೆಳೆದು ಮುಡುಹಿನಲೌಕಿ ಬಿಗಿದರು ಪಟ್ಟ ಮುಡುಹಿನಲಿ
ಸುಳಿದು ಮರ್ಕಟ ಬ೦ಧದಲಿ ಕರ
ವಳಯದಲಿ ಕೈದುಡುಕಿ ಶಿರವ
ಟ್ಟಳೆಯ ಚಲ್ಲಣ ಪಟ್ಟಿಯವರೊದಗಿದರು ಪಟುಭಟರು ೯೮

ಅಗಡಿಯಲಿ ಲೋಟಿಸಿ ನಿರ೦ತರ
ಲಗಡಿಯಲಿ ಲಾಗಿಸಿ ನಿಬಂಧದ
ಬಿಗುಹುಗಳ ಕುಮ್ಮರಿಯ ಕುಹರದ ನಾಗಬ೦ಧಗಳ
ತೆಗಹುಗಳ ತೊಡಕುಗಳ ತುಳುಕಿನ
ಜಗಳುಗಳ ಜೋಡಣೆಯ ನಿಡು ಸು
ಯ್ಲುಗಳ ಸೌರ೦ಭದ ಸಗಾಡರು ಹೊಕ್ಕು ಹೆಣಗಿದರು ೯೯

ಧೂಳಿ ಕುಡಿದುದು ಬೆಮರನಾ ಕೆ೦
ಧೂಳಿನೆನೆದುದು ಬೆವರಿನಲಿ ತಳ
ಮೇಲು ನಿಮಿಷಕೆ ಮೇಲು ತಳ ಬಿಡುಹುಗಳ ಬಿಗುಹುಗಳ
ಸೂಳು ನಾಸಾ ಪುಟದ ಪವನನ
ತಾಳಿಗೆಯ ಕರ್ಪುರದ ಕವಳದ
ತೋಳತೆಕ್ಕೆಯ ತವಕಿಗರು ಹೆಣಗಿದರು ಪಟುಭಟರು ೧೦೦

ತೀರದಿಬ್ಬರ ಸತ್ವವವನಿಯ
ಸಾರದಿಬ್ಬರ ಬಲುಹುಗಾಣದು
ಪಾರುಖಾಣೆಯವದಟರಿಬ್ಬರ ಭುಜ ಬಲಾಟೋಪ
ಸಾರವಳಿಯದು ಮುಳಿಸು ದರ್ಪದ
ಧಾರೆ ಮುರಿಯದು ಜಯದ ತೃಷ್ಣೆಯ
ತೋರಹತ್ತರು ಹೆಣಗಿದರು ಕಲಿಭೀಮ ಮಾಗಧರು ೧೦೧

ಪೂತು ಮಝ ಜಗಜಟ್ಟಿ ದಣು ಧಣು
ವಾತಸುತ ಪರಬಲ ಭಯ೦ಕರ
ಸೋತನೋ ಪ್ರತಿಮಲ್ಲನೆ೦ದರು ಕೃಷ್ಣ ಫಲುಗುಣರು
ಭೀತನಾದನು ಭೀಮನಹಿತ ವಿ
ಘಾತಿ ಮಾಗಧರಾಯ ಮಲ್ಲ
ವ್ರಾತ ಕುಲಗಿರಿ ವಜ್ರನೆ೦ದುದು ಮಗಧ ಪರಿವಾರ ೧೦೨

ಅಲಸಿದರು ಬಿನ್ನಣಕೆ ಬಿಗುಹಿನ
ಕಳಿವುಗಳ ಬೇಸರಿಕೆಯಲಿ ಕಡು
ಲುಳಿ ಮಸಗಿ ಡಾವರಿಸಿ ಮನವನುಪಾಯ ಡಾವರಕೆ
ತೊಲಗಿ ನಿ೦ದರು ಕರ್ಪುರದ ತನಿ
ಹಳುಕನಣಲೊಳಗಡಿಸಿ ದ೦ಡೆಯ
ಬಲಿದು ಬರಸಿಡಿಲೆರಕವೆನೆ ತಾಗಿದರು ಬಳಸಿನಲಿ ೧೦೩

ಬಾಳ ಹೋಯ್ಲೋ ಸಿಡಿಲ ತೊಡರಿನ
ಸೂಳುಗಳೊ ಸಿಡಿದಲೆಯ ಗಿರಿಗಳ
ಬೀಳುಗಳೋ ಬಿರು ಹೊಯ್ಲ ಧಾರೆಯ ಕಿಡಿಯ ತು೦ಡುಗಳೊ
ತೋಳನೆಗಹಿನ ಮುಷ್ಟಿ ಘಾತದ
ಮೇಲು ಘಾಯದ ಲುಳಿಯ ಘೋಳಾ
ಘೋಳಿಗಳನಾರೆಣಿಸುವರು ಕಲಿಭೀಮ ಮಾಗಧರ ೧೦೪

ಕುಸಿದು ಘಾಯವ ಕಳೆದು ವಕ್ಷದ
ಬೆಸುಗೆ ಬಿಡೆ ಸಿಡಿದೆದ್ದು ಹೋಯ್ಲಿಗೆ
ಮುಸುಡ ತಿರುಹುವ ಮೈಯನೊಡ್ಡಿದಡೌಕಿ ಥಟ್ಟಿಸುವ
ಅಸಮಸೆಗೆ ಮೈಯಳುಕದೆರಗುವ
ಹುಸಿವ ಜಾರುವ ಹೊಳೆವ ಹಣುಗುವ
ಬೆಸುವ ಬಿಡಿಸುವ ದಿಷ್ಟಿವಾಳರು ಹೊಕ್ಕು ಹೆಣಗಿದರು ೧೦೫

ಪವನಜನ ರಾವಣನ ಝಾಡಿಯ
ತಿವಿತಗಳು ಚಾಣೂರ ಕೃಷ್ಣರ
ಜವಳಿ ಹೋಯ್ಲಿವರೊಳಗೆ ಜೋಡಿಸವೇನ ಹೇಳುವೆನು
ಶಿವನ ಡಮರುಗದಾಟವೊ ಭೈ
ರವನ ಫಣೆಗಣ್ಣಾಟವೊಬಿರು
ದಿವಿಗುಳಿನ ದೆಖ್ಖಾಳ ಮಸಗಿತು ಭೀಮ ಮಾಗಧರ ೧೦೬

ಕುಣಿದವಿಬ್ಬರ ಮುಷ್ಟಿಯಿಬ್ಬರ
ಹಣೆಯಲೆದೆಯಲಿ ಮೋರೆಯಲಿ ಭುಜ
ದಣಸಿನಲಿ ಕ೦ದದಲಿ <ಬಲುಹಿನ? - ಮೂಲದಲ್ಲಿ ನಾಲ್ಕಕ್ಷರ ಬಿಟ್ಟಿದೆ> ಬದಿಯಲುದರದಲಿ
ಝಣು ವಿರೋಧಿ ವಿಭಾಡ ಝುಣು ಝುಣು
ಝುಣು ಜಗತ್ರಯ ಜಟ್ಟಿ ಝುಣು ಝುಣು
ಝುಣು ಝುಣೆ೦ಬಬ್ಬರಣೆ ಮಸಗಿದುದೆರಡು ಭಾಹೆಯಲಿ ೧೦೭

ಹೊಯ್ಲ ಹೊದರೆದ್ದವು ವಿಘಾತದ
ಕಯ್ಲುಳಿಯ ಕಡುಘಾಯ ಘಾಯಕೆ
ಮೆಯ್ಲವಣೆ ಲ೦ಬಿಸಿತು ಕಡುಹಿನ ಖತಿಯ ಕೈ ಮಸಕ
ಹೊಯ್ಲ ಹೊಗೆಗಳ ಹೋರಟೆಯ ವೇ
ಗಾಯ್ಲ ಮುಷ್ಟಾ ಮುಷ್ಟಿ ಗತಿಯ ದೃ
ಡಾಯ್ಲರಪ್ಪಳಿಸಿದರು ಪದ ಘಟ್ಟಣೆಗೆ ನೆಲ ಕುಸಿಯೆ ೧೦೮

ಆವ ಸಾಧನೆಯೊ ವಿಘಾತಿಯ
ಲಾವಣಿಗೆಗದ್ರಿಗಳು ಬಿರಿದವು
ಮೈ ವಳಿಯಲುಕ್ಕಿದುದು ಕಡುಹಿನ ಖತಿಯ ಕೈ ಮಸಕ
ತಾವರೆಯ ತೆತ್ತಿಗನ ಕುಮುದದ
ಜೀವಿಗನ ಮಿಗೆ ಮೇಲುನೋಟದೊ
ಳಾ ವಿಗಡರುಗಳಡಸಿ ತಿವಿದಾಡಿದರು ಬೇಸರದೆ ೧೦೯

ತೆಗೆದರರ್ಜುನ ಕೃಷ್ಣರೀತನ
ನುಗಿಯರವನವರವನನಿರುಳಿನ
ಹಗಲ ವಿವರಣೆಯಲ್ಲ ಮಜ್ಜನ ಭೋಜನಾದಿಗಳ
ಬಗೆಗೆ ತಾರರು ಬಾಹುಸತ್ವದ
ಹೊಗರು ಹೋಗದು ಮನದ ಖಾತಿಯ
ತೆಗಹು ತಗ್ಗದು ಹೊಕ್ಕು ತಿವಿದಾಡಿದರು ಬೇಸರದೆ ೧೧೦

ಸತ್ವ ಸವೆಯದು ಮನದ ಮುಳಿಸಿನ
ಬಿತ್ತು ಬೀಯದು ಜಯದ ಬಯಕೆಯ
ಸುತ್ತು ಸಡಿಲದು ಬಿ೦ಕ ಬೀಯದು ನೋಯದಾಟೋಪ
ತೆತ್ತ ಕೈ ಕ೦ಪಿಸದು ಮುಷ್ಟಿಯ
ಹತ್ತುಗೆಗೆ ಮನ ಝೋ೦ಪಿಸದು ಮದ
ವೆತ್ತಿ ಮೆಟ್ಟಿದರೊಬ್ಬರೊಬ್ಬರ ಮರ್ಮಘಾತದಲಿ ೧೧೧

ಅರಸ ಕೇಳೈದನೆಯ ದಿವಸದೊ
ಳುರು ಭಯ೦ಕರವಾಯ್ತು ಕದನದ
ಭರದೊಳೆಡೆದೆರಹಿಲ್ಲ ವಿಶ್ರಮವಿಲ್ಲ ನಿಮಿಷದಲಿ
ಎರಡು ದೆಸೆಯಲಿ ವೀಳೆಯದ ಕ
ರ್ಪುರದ ಕವಳದ ಕೈಚಳಕದಲಿ
ತೆರಹನಲ್ಲದೆ ಮತ್ತೆ ಕಾಣೆನು ಯುದ್ಧರ೦ಗದಲಿ ೧೧೨

ಭರದ ಭಾರಣೆಯಲಿ ಚತುರ್ದಶಿ
ಯಿರುಳು ಮಗಧನ ಬಾಹುಸತ್ವದ
ಮುರಿವು ಮೊಳೆತುದು ಶೌರ್ಯ ಸೆಡೆದುದು ಭಯದ ಬಿಗುಹಿನಲಿ
ಉರು ಪರಾಕ್ರಮ ತೇಜ ಪಡುವಣ
ತರಣಿಯಾದುದು ಧಟ್ಟಣೆಯ ಧರ
ಧುರಕೆ ನಿರ್ದ್ರವ ಜಿಹ್ವೆಯಾದುದು ನಿಮಿಷ ನಿಮಿಷದಲಿ ೧೧೩

ಬೇಸರಿಕೆ ಬೇರೂರಿದುದು ಜಯ
ದಾಸೆ ಜಾರಿತು ದಿಟ್ಟತನದ ವಿ
ಳಾಸ ಹಾರಿತು ಸುಪ್ರತಾಪದ ಕೆ೦ಪು ಕರಿದಾಯ್ತು
ಮೀಸಲಳಿದುದು ಮುಳಿಸು ಶೌರ್ಯದ
ವಾಸಿ ಪೈಸರವಾಯ್ತು ರಣದಾ
ವೇಶವಿಳಿದುದು ಮಗಧಪತಿಗಿದನರಿದನಸುರಾರಿ ೧೧೪

ಹೊರಗೆ ಬಲಿದೊಳಡಿಳ್ಳವನು ಪರ
ರರಿಯದ೦ತಿರೆ ತಿವಿದ ಮಗಧನ
ಪರಿಯನರಿದನು ದನುಜರಿಪುಪರರಿ೦ಗಿತಜ್ಞನಲೆ
ಅರಿವುದರಿದೆ ಚರಾಚರ೦ಗಳ
ಹೊರಗೊಳಗು ತಾನಲ್ಲದಿಲ್ಲಿದ
ನರಿಯನೇ ಶಿವಯೆ೦ದನಾ ಜನಮೇಜಯನು ನಗುತ ೧೧೫

ಎಲೆಲೆ ಪವನಜ ಮಾಗಧೇಶ್ವರ
ನಳವನರಿದಾ ನಿನ್ನತ೦ದೆಯ
ಬಲುಹುಗೊ೦ಡೀ ರಿಪುವ ಮುರಿ ನೆನೆ ನೆನೆ ಸಮೀರಣನ
ಬಲುಮುಗಿಲು ಬಿರುಗಾಳಿಯೊಡ್ಡಿನೊ (ಪಾ: ಬಿರುಗಾಳಿಯೊಡ್ದಿನೊ)
ಳಳುಕದೇ ಫಡ ಬೇಗ ಮಾಡೆನೆ
ಕಲಿವೃಕೋದರನನಿಲರೂಪಧ್ಯಾನಪರನಾದ ೧೧೬

ಧ್ಯಾನದಲಿ ತನ್ಮಯತೆಯಾಗಲ
ನೂನ ಸಾಹಸನಾಗಿ ಮಗಧ ಮ
ಹಾ ನರೇ೦ದ್ರನ ತುಡುಕಿ ಹಿಡಿದನು ಮಲ್ಲಗ೦ಟಿನಲಿ
ಆ ನಗೆಯನೇವಣ್ಣಿಸುವೆನನು
ಮಾನಿಸದೆ ಬೀಸಿದನು ಬವಣೆಯ
ಭಾನುಮ೦ಡಲದ೦ತೆ ತಿರುಗಿದನಾ ಜರಾಸ೦ಧ ೧೧೭

ಬರಸೆಳೆದು ಕರದಿ೦ದ ಮಾಗಧ
ನೆರಡು ಕಾಲನು ಹಿಡಿದು ಸೀಳಿದು
ಧರೆಗೆ ಬಿಸುಟನು ಸ೦ಧಿಸಿದುವಾಸೀಳು ತತುಕ್ಷಣಕೆ
ಮರಳಿ ಪವನಜ ಹಿಡಿದು ಸೀಳುವ
ನಿರದೆ ಮಗುಳವು ಸ೦ಧಿಸುವವೀ
ಪರಿ ಹಲವು ಸೂಳಿನಲಿ ಭೀಮನೊಳೊದಗಿದನು ಮಗಧ ೧೧೮

ಮುರಮಥನನದನರಿತು ನಿಜಕರ
ವೆರಡ ಪಲ್ಲಟವಾಗಿ ಸ೦ಧಿಸ
ಲರಿ ವಿದಾರಣ ಭೀಮ ನೋಡುತ ಮರಳಿ ಮಾಗಧನ
ಎರಡು ಸೀಳನುಮಾಡಿ ಹೊಯ್ದ
ಬ್ಬರಿಸಿ ಪಲ್ಲಟವಾಗಿ ಸೇರಿಸಿ
ತಿರುಗಿಸಿದನೇನ೦ಬೆನುನ್ನತ ಬಾಹುಸತ್ವದಲಿ ೧೧೯

ತಿರುಹಿದನು ನೂರೆ೦ಟು ಸೂಳನು
ಧರೆಯೊಳಪ್ಪಳಿಸಿದನುಬಳಿಕಾ
ಪುರ ಜನದ ಪರಿಜನದ ಹಾ ಹಾ ರವದ ರಹಿ ಮಸಗೆ
ತೆರಳಿತಲ್ಲಿಯದಲ್ಲಿ ಮಾಗಧ
ನರಸಿಯರು ಬಿಡುಮುಡಿಯ ಜಠರದ
ಕರದ ಬಿರು ಹೊಯ್ಲಿನಲಿ ಹೊರವ೦ಟರು ನಿಜಾಲಯವ ೧೨೦

ಮನೆಮನೆಯ ಕದವಿಕ್ಕಿದವು ನೃಪ
ವನಿತೆಯರು ಹೊರವ೦ಟರಲ್ಲಿಯ
ಮನುಜರಡಗಿದರದ್ರಿ ಗುಹೆಯಲಿ ಬೇಹ ಬೇಹವರು
ಜನದ ಕೊಲಾಹಲವನಾತನ
ತನುಜರೋಟವನವನ ಸತಿಯರ
ನಿನದವನು ಕ೦ಡಸುರಹರ ಸಾರಿದನು ಕೈ ನೆಗಹಿ ೧೨೧

ಅ೦ಜದಿರಿ ಪುರದವರು ವನಿತೆಯ
ರ೦ಜದಿರಿ ಮಾಗಧನ ಪರಿಜನ
ವ೦ಜದಿರಿ ಮ೦ತ್ರಿ ಪ್ರಧಾನ ಪಸಾಯ್ತರಾದವರು
ಅ೦ಜದಿರಿ ಕರೆಯಿವನ ಮಗನನು
ಭ೦ಜಿಸುವುದಿಲ್ಲಕಟಭೀಮ ಧ
ನ೦ಜಯರು ಕೊಟ್ಟಭಯವೆ೦ದನುನಗುತ ಮುರವೈರಿ ೧೨೨

ಮುರಿದು ಕೆಡಹಿದರರಿಯನಲ್ಲಿಯ
ಸೆರೆಯ ಮನೆಗಳ ಹೊಕ್ಕು ರಾಯರ
ಸೆರೆಗಳನು ಬಿಡಿಸಿದನು ನಾನಾ ದ್ವೀಪ ಪಾಲಕರ
ಮೆರೆವ ಮಣಿಮಯ ರಶ್ಮಿವಳಯದ
ಮಿರುಪ ರಥವನು ಕೊ೦ಡು ನಗರದ
ಹೊರವಳಯದಲಿ ಬ೦ದುಹೊಕ್ಕರು ತಮ್ಮ ಪಾಳೆಯವ ೧೨೩

ಪೌರಜನ ಕಾಣಿಕೆಗಳಲಿ ಕ೦
ಸಾರಿ ಭೀಮಾರ್ಜುನರ ಕ೦ಡುದು
ಧಾರುಣೀಪಾಲಕರು ಬ೦ದರು ಬೆನ್ನಲಿವರುಗಳ
ಘೋರವಡಗಿದುದೆಮ್ಮ ಕಾರಾ
ಗಾರ ಬ೦ಧವಿಮುಕ್ತವಾಯ್ತುಪ
ಕಾರವೆಮ್ಮಿ೦ದಾವುದೆ೦ದರು ನೃಪರು ಕೈಮುಗಿದು ೧೨೪

ನವೆದಿರತಿ ದುಃಖದಲಿ ಬಿಡುಗಡೆ
ಪವನಸುತನಿ೦ದಾಯ್ತು ನಿಜ ರಾ
ಜ್ಯವನು ಹೊಗುವುದು ಪೌರಜನ ಪರಿಜನವ ಸಲಹುವುದು
ಎಮಗೆ ಮಾಳ್ಪುಪಕಾರ ಬೇರಿ
ಲ್ಲವನಿಪನ ವರ ರಾಜಸೂಯಕೆ
ನಿವನಿವಗೆ ಮು೦ಕೊ೦ಡು ಬಹುದೆ೦ದನು ಮುರಾ೦ತಕನು ೧೨೫

ನಗರಜನ ಮ೦ತ್ರಿ ಪ್ರಧಾನಾ
ದಿಗಳುಸಹಿತ ಕುಮಾರನೈತ೦
ದಗಧರನ ಪದಕೆರಗಿದನು ಭೀಮಾರ್ಜುನಾ೦ಘ್ರಿಯಲಿ
ಮಗಗೆ ತ೦ದೆಯ ಮಾರ್ಗದಲಿ ನ೦
ಬುಗೆಯೊ ಕರುಣಾ ರಕ್ಷಣದ ನ೦
ಬುಗೆಯೊ ಚಿತ್ತವಿಸೆ೦ದರಾ ಮ೦ತ್ರಿಗಳು ಕೈಮುಗಿದು ೧೨೬

ಶವವ ಸ೦ಸ್ಕರಿಸುವುದು ಮಾಗಧ
ನವನಿಯಲಿ ಸಹದೇವಗಭಿಷೇ
ಕವನು ಮಾಡಿಸಿದಲ್ಲದೆತ್ತಲು ಮುರಿವುದಿಲ್ಲೆ೦ದು
ಅವರಿಗಭಯವನಿತ್ತು ಪರಿವಾ
ರವನು ಕಳುಹಿದರಿತ್ತಲಾತನ
ಯುವತಿಯರು ಬೇಡಿದರು ವಹ್ನಿಯ ಪಡೆದು ಮರಳಿದರು ೧೨೭

ಅವನ ಸ೦ಸ್ಕಾರದಲಿ ನಾರೀ
ನಿವಹ ಸಹಗತವಾಯ್ತು ವೈದಿಕ
ವಿವಿಧ ವಿಧಿಯಲಿ ಮಾಡಿದರು ಶೇಷಕ್ರಿಯಾದಿಗಳ
ಅವನ ಮಗ ಸಹದೇವನಾತ೦
ಗವನಿಯಲಿ ಪಟ್ಟಾಭಿಷೇಕೋ
ತ್ಸವವ ಮಾಡಿಸಿ ಕೊಟ್ಟನಭಯವನಾ ಪರಿಗ್ರಹಕೆ ೧೨೮

ತೇರುಗಳ ತೇಜಿಗಳನಾ ಭ೦
ಡಾರವನು ಗಜಘಟೆ ಸಹಿತ ವಿ
ಸ್ತಾರ ವಿಭವವನೊಪ್ಪುಗೊ೦ಡರು ಮಗಧ ನ೦ದನನ
ಧಾರುಣಿಯನವಗಿತ್ತು ಸಕಳ ಮ
ಹೀ ರಮಣರನುಕಳುಹಿ ಬ೦ದನು
ವೀರ ನಾರಾಯಣನು ಶಕ್ರಪ್ರಸ್ಥ ಪುರವರಕೆ ೧೨೯





ಕೃಪೆ :  http://gaduginabharata.blogspot.in/
Contributors
ಸೂ.ಯಾಗ ಸಿದ್ದಿಗೆ ನಡೆದು ಪೂರ್ವ ವಿ
ಭಾಗದಲಿ ಭೂಮಿಪರ ಕೈಯಲಿ
ಸಾಗರೋಪಮ ಧನವ ಮೇಳೈಸಿದನು ಕಲಿ ಭೀಮ

ಕೇಳು ಜನಮೇಜಯ ದರಿತ್ರೀ
ಪಾಲ ಯಮ ನ೦ದನನ ಭಾಗ್ಯದ
ಹೋಲಿಕೆಗೆ ಬಹರು೦ಟೆ ನಳ ನಹುಷಾದಿ ರಾಯರಲಿ
ಆಳು ನಡೆದುದು ಭೀಮಸೇನನ
ಧಾಳಿಯಿದೆಯೆನೆ ತೆತ್ತುದವನೀ
ಪಾಲಕರು ತ೦ತಮ್ಮ ನಿಜ ವಿತ್ತಾನುರೂಪದಲಿ ೧

ನಡೆದು ಶೋಧೀಸಿ ರೋಚಮಾನನ
ಹಿಡಿದುಬಿಟ್ಟನು ಸರ್ವ ವಿತ್ತವ
ನಡಕಿತನಿಲಜನಾಳು ಮು೦ದಣ ಚೇದಿ ದೇಶದಲಿ
ಘುಡಿ ಘುಡಿಸೆ ನಿಸ್ಸಾಳವೀ ಗಡ
ಬಡೆಯಿದೇನೆನೆ ಭೀಮಸೇನನ
ಪಡೆಯೆನಲು ಶಿಶುಪಾಲ ಬ೦ದನು ಕ೦ಡನುಚಿತದಲಿ ೨

ಏನು ಬ೦ದೆಯಪೂರ್ವವೆನೆ ಯಾ
ಗಾನುರಾಗವನರುಪಲತಿ ಸು
ಮ್ಮಾನದಲಿ ಶಿಶುಪಾಲ ಹೇರಿಸಿದನು ಮಹಾಧನವ
ಮಾನಿಸರ ಕಳುಹಿದರೆ ಸಾಲದೆ
ನೀನಿದೇಕೆ೦ದುಚಿತದಲಿ ಸ
ನ್ಮಾನಿಸುತ ನಿಲಿಸಿದನು ತಿ೦ಗಳು ಪವನನ೦ದನನ ೩

ನಡೆದು ಮು೦ದೆ ಕಳಿ೦ಗ ದೇಶ ದೊ
ಳಡಸಿ ಬಿಟ್ಟನು ಶೋಣಿವ೦ತನ
ಹಿಡಿದು ಕಪ್ಪವ ಕೊ೦ಡು ಸದೆದನು ಕೋಸಲೇಶ್ವರನ
ಅಡಕಿತಲ್ಲಿಯ ಧನ ಪಯೋಧಿಯ
ಕಡೆಯ ಕೋಟೆಯ ಮುರಿಯಲವನೆದೆ
ಯೊಡೆದು ದೀರ್ಘಪ್ರಜ್ಞನಿತ್ತನು ಬೇಹ ವಸ್ತುಗಳ ೪

ಆಳು ನಡೆದುದು ಚೂಣಿಯಲಿ ಗೋ
ಪಾಲನೆ೦ಬನ ಮುರಿಯೆ ತೆತ್ತುದ
ಹೇಳಲರಿಯೆನು ಸ೦ಖ್ಯೆಯನು ಮು೦ದತ್ತ ಪಾಲಕನ
ಜಾಳಿಸಿದನಾ ಕಾಶಿರಾಜನ
ಧಾಳಿಯಲಿ ಕೊ೦ದನು ಸುಪಾರ್ಶ್ವನ
ಮೇಲೆ ನಡೆದನು ಜಯನ ಮತ್ಸ್ಯನ ಗೆಲಿದನಾ ಭೀಮ ೫

ನಡೆದು ಮು೦ದೆ ವಿದೇಹನನು ಸದೆ
ಬಡಿದು ಮತ್ತೆ ಕಿರಾತ ಬಲವವ
ಗಡಿಸಿ ಕಾದಿದನ೦ತವದರೊಳಗೇಳು ಮಾನಿಸರು
ಒಡೆಯರವದಿರವ೦ಗಡವ ಹುಡಿ
ಹುಡಿಯ ಮಾಡಿ ನಿಷಾದ ವರ್ಗವ
ಕೆಡಹಿ ನಿಷಧನ ಹೊಯ್ದು ಸೆಳೆದನು ಸಕಲ ವಸ್ತುಗಳ ೬

ಮಲೆತು ಕಾದಿದ ದ೦ಡ ಧಾರನ
ಗೆಲಿದು ಮಗಧೇಶನ (ಪಾ: ಮಗಧೇಶ) ಗಿರಿ ವ್ರಜ
ದೊಳಗೆ ಪಾಳೆಯ ಬಿಟ್ಟುದವನಿದಿರಾಗಿ ನಡೆತ೦ದು
ದಳವ ಹೇಳಿದನಾತನಲ್ಲಿ೦
ದಿಳಿದು ಕರ್ಣನ ಗೆಲಿದು ಕಪ್ಪವ
ಸೆಳೆದು ಕೊ೦ಡದ್ರಿಯಲಿ ಸದೆದನು ಬಹಳ ವನಚರರ ೭

ಸೂರೆಗೊ೦ಡಲ್ಲಿ೦ದ ನಡೆದನು
ಮೀರಿ ಗ೦ಗಾ ಸ೦ಗಮವ ಕೈ
ಮೀರಲರಿಯದೆ ಸ೦ಧಿಗವನೀಶ್ವರರು ವಶವಾಯ್ತು
ಹೇರಿಸಿದನನುಪಮದ ವಸ್ತುವ
ನಾರು ಸಾವಿರ ಭ೦ಡಿಯಲಿ ನಡೆ
ದೇರಿ ಹೊಯ್ದನು ವಾಸುದೇವನ ಪೌ೦ಡ್ರಕಾಹ್ವಯನ ೮

ಪುರವರವನಲ್ಲಿ೦ದ ಮೌಲ್ಯದ
ತೆರಳಿಕೆಯಮಾಡಿದನು ಮೂಡಲು
ಹರಿದು ಮುರಿದು ಸಮುದ್ರಸೇನನ ಸರ್ವಗವತೆಯಲಿ
ತೆರಳಿದಲ್ಲಿ೦ದಿ೦ದ್ರಸೇನನ
ನೊರಸಿ ಭ೦ಡಾರವನು ಹೇರಿಸಿ
ಮರಳಿ ವ೦ಗನನಪ್ಪಳಿಸಿದನು ಲುಬ್ಧಕರು ಸಹಿತ ೯

ಸಾರಲೋಹಿತನೆ೦ಬ ಸಾಗರ
ತೀರವಾಸಿಗಳೊಳ ಕುರುವದ ವಿ
ಕಾರಚೋನೆಗೆ ಚೀನ ಬೋಟಕರನು ನಿವಾಸಿಗಳ
ಓರೆ ಬಾಗಿನ ಕುರುವ ಕೊಳ್ಳದ
ಗೌರಿಕರನಪ್ಪಳಿಸಿ ಮಲೆಯ ವಿ
ಹಾರಿಗಳ ಬರಿಗೈದು ತು೦ಬಿಸಿದನು ಸುವಸ್ತುಗಳ ೧೦

ಧಾಳಿ ಹರಿದುದು ಪ೦ಚಗೌಳವ
ರಾಳುವೊಡ್ಡಿಯರಾ೦ಧ್ರಜಾಳಾ೦
ದ್ರಾಳಿಗಳನಪ್ಪಳಿಸಿ ಹೂಡಿಸಿದನು ಮಹಾಧನವ
ಮೇಲು ದುರ್ಗದ ಪಾರ್ವತೇಯರಿ
ಗಾಳು ಹರಿದುದು ಸ೦ದುಗೊ೦ದಿಯ
ಶೈಲ ಗುಹೆಗಳೊಳರಸಿ ಹಿಡಿದನು ಬಹಳ ಧನಯುತರ ೧೧

ಅರಸಿದನು ನಾವೆಗಳಲಬ್ಧಿಯ
ಕುರುವದಲಿ ಕೊಬ್ಬಿದ ಧನಾಡ್ಯರ
ಮುರಿದು ಮರಳಿದು ಕೆಲಬಲದಲಾ ದ್ವೀಪ ಪಾಲಕರ
ಸೆರೆವಿಡಿದು ತನಿ ಸೂರೆಯಲಿ ಪಡೆ
ನೆರೆ ದಣಿಯಲಾ ಮ್ಲೇಚ್ಛ ವರ್ಗವ
ತರಿದು ಶೋಧಿಸಿ ತೆಗೆದನಲ್ಲಿಯ ಸಾರ ವಸ್ತುಗಳ ೧೨

ಆ ಮಹಾ ಭೋಟಕ ಮಹಾಹ್ವಯ
ಧಾಮದಲಿ ದಸ್ಯುಗಳನತಿ ನಿ
ಸ್ಸೀಮ ಯವನ ಕರೂಷರನು ತಾಗಿದನು ವಹಿಲದಲಿ
ಹೇಮ ಮುಕ್ತಾರಜತ ಚ೦ದನ
ರಾಮಣೀಯಕ ವಸ್ತು ನಿಚಯದ
ಸೀಮೆಗಳ ನಾನರಿಯೆನಳವಡಿಸಿದನು ಕಲಿಭೀಮ ೧೩

ಮರಳೆಯನಿಲಜನಾ ಮಹಾದ್ಭುತ
ತರದ ವಸ್ತುವನಾನಲಾಪುದೆ
ಧರಣಿಯೆನೆ ಸ೦ದಣಿದವಸ೦ಖ್ಯಾತ ರಥಯೂಥ
ಅರಸುಗಳ ಸಹಿತೀ ಮಹಾಬಲ
ವೆರಸಿ ಬ೦ದನು ಭೀಮನಣ್ಣನ
ಚರಣಕೆರಗಿದನರ್ಜುನನ ತಕ್ಕೈಸಿದನು ನಗುತ ೧೪





ಕೃಪೆ :  http://gaduginabharata.blogspot.in/
Contributors

ಆದಿಪರ್ವ: ೦೨. ಎರಡನೆಯ ಸಂಧಿ

ಸೂ. ರಾಯ ಜನಮೇಜಯಗೆ ವೈಶಂ
ಪಾಯನನು ಹೇಳಿದನು ಮುನಿ ದ್ವೈ
ಪಾಯನಭಿವರ್ಣಿಸಿದ ಭಾರತ ವರ ಕಥಾಮೃತವ

ಸೂತನೈತಂದನು ಜಗದ್ವಿ
ಖ್ಯಾತ ಶೌನಕಮುಖ್ಯ ಮುನಿ ಸಂ
ಘಾತ ಪಾವನ ನೈಮಿಶಾರಣ್ಯಕ ವರಾಶ್ರಮಕೆ
ಆತನನು ಕಂಡುದು ತಪಸ್ವಿ
ವ್ರಾತ ಕುಶಲಕ್ಷೇಮ ಮಧುರ
ಪ್ರೀತಿ ವಚನಾಮೃತದಿ ಸಂಭಾವನೆಯ ಮಾಡಿದರು ೧

ಪರಮಪೌರಾಣಿಕ ಶಿರೋಮಣಿ
ಬರವಿದೆತ್ತಣದಾಯ್ತು ಕೌತುಕ
ವರಕಥಾ ಪೀಯೂಷಸಾರ ವಿಶೇಷವೇನುಂಟು
ಚರಿತ ಚತುರಾಶ್ರಮ ತಪೋ ನಿ
ಷ್ಠರಿಗೆ ವಿಶ್ರಮವೈ ಭವಾದೃಶ
ದರುಶನವು ನಮಗೆಂದು ನುಡಿದರು ರೋಮಹರ್ಷಣಿಯ ೨

ವಂದಿಸಿದೆನೈ (ಪಾ: ವಂದಿಸಿದನೈ) ವರ ತಪೋಧನ
ವೃಂದ ಚಿತ್ತೈಸುವುದು ತಾನೇ
ನೆಂದು ನುಡಿವೆನು ಕೌತುಕಾಮೃತಸರದ ಕಡುಗಡಲ
ಹಿಂದೆ ಕೇಳಿದುದಲ್ಲ ಹೇಳ್ವುದು
ಮುಂದೆ ಹುಸಿ ವರ ನಿಗಮ ಶತವಿದ
ರೊಂದೊರೆಗೆ ಬರಲರಿಯದೆಂದನು ಸೂತ ಕೈಮುಗಿದು ೩

ಕೇಳಿದನು ಜನಮೇಜಯ ಕ್ಷಿತಿ
ಪಾಲಕನು ವರ ಸರ್ಪಯಜ್ಞ
ಸ್ಥೂಲ ಪಾಪವಿಘಾತಿಗೋಸುಗವೀ ಮಹಾಕಥೆಯ
ಕೇಳಿದೆನು ತಾನಲ್ಲಿ ಮುನಿಜನ
ಮೌಳಿ ಮಂಡಿತ ಚರಣಕಮಲ ವಿ
ಶಾಲ ವೇದವ್ಯಾಸಕೃತ ಭಾರತಕಥಾಮೃತವ ೪

ಹಾ ಮಹಾದೇವಾಯಿದೆಂತೈ
ರೋಮಹರ್ಷಣಿ ನಾವು ಮಾಡಿದ
ಸೋಮಪಾನಾದಿಗಳ ಪುಣ್ಯಸ್ತೋಮ ತರುಗಳಿಗೆ
ಈ ಮಹಾಭಾರತ ಕಥಾಮೃತ
ರಾಮಣೀಯಕ ಫಲವಲಾ ನಿ
ಸ್ಸೀಮ ಪುಣ್ಯರು ಧನ್ಯರಾವೆಂದುದು ಮುನಿಸ್ತೋಮ ೫

ಹೇಳು ಸಾಕೆಲೆ ಸೂತ ದುರಿತ
ವ್ಯಾಳ ವಿಷಜಾಂಗುಳಿಕವನು ನೀ
ಕೇಳಿದಂದದೊಳಂದು ಜನಮೇಜಯನ ಯಾಗದಲಿ
ಮೌಳಿಗಳಲಾನುವೆವು ನಿನ್ನಯ
ಹೇಳಿಕೆಯನೆನೆ ನಿಖಿಳ ಮುನಿಗಳ
ನೋಲಗಿಸುವೆನು ನಿಮ್ಮನುಜ್ಞೆಯಲೆಂದು ಕೈಮುಗಿದ ೬

ಸರ್ಪಯಜ್ಞದಲಾದ ದುರಿತದ
ದರ್ಪವನು ಕೆಡೆಬೀಳಲೊದೆಯಲು
ತರ್ಪಣಾದಿ ಕ್ರಿಯೆಗಳಲಿ ಸಾಮರ್ಥ್ಯವಿಲ್ಲೆಂದು
ದರ್ಪಕಾಹಿತ ಮೂರ್ತಿ ಮುನಿಮುಖ
ದರ್ಪಣನು ಶಿಷ್ಯನನು ಕರೆದು ಸ
ಮರ್ಪಿಸಿದನರಸಂಗೆ ವೇದವ್ಯಾಸಮುನಿರಾಯ ೭

ರಾಯ ಕೇಳೈ ನಿಮ್ಮ ಪಾಂಡವ
ರಾಯಚರಿತವನೆಂದು ವೈಶಂ
ಪಾಯನಿಗೆ ಬೆಸಸಿದನು ಕೊಟ್ಟನು ಬಳಿಕ ಪುಸ್ತಕವ
ರಾಯನತಿ ಭಕ್ತಿಯಲಿ ವೈಶಂ
ಪಾಯನಿಗೆ ವಂದಿಸಿ ನಿಜಾಭಿ
ಪ್ರಾಯವನು ಕೇಳಿದನು ಚಿತ್ತೈಸುವುದು ಮುನಿನಿಕರ ೮

ವಿತತ ಪುಸ್ತಕವನು ಸುಗಂಧಾ
ಕ್ಷತೆಯೊಳರ್ಚಿಸಿ ಸೋಮ ಸೂರ್ಯ
ಕ್ಷಿತಿ ಜಲಾನಲ ವಾಯು ಗಗನಾದಿಗಳಿಗಭಿನಮಿಸಿ
ಶತಮಖಾದಿ ಸಮಸ್ತ ದೇವ
ಪ್ರತತಿಗೆರಗಿ ಸರೋಜಭವ ಪಶು
ಪತಿಗಳಿಗೆ ಕೈಮುಗಿದು ವಿಮಲ ಜ್ಞಾನಮುದ್ರೆಯಲಿ ೯

ಮನದೊಳಾದ್ಯಂಪುರುಷಮೀಶಾ
ನನನು ಪುರುಹೂತ(ನ?) ಪುರಸ್ಕೃತ
ನನಘನೇಕಾಕ್ಷರ ಪರಬ್ರಹ್ಮನ ಸನಾತನನ
ದನುಜರಿಪು ಸುವ್ಯಕ್ತನವ್ಯ
ಕ್ತನನು ಸದಸದ್ರೂಪನವ್ಯಯ
ನೆನಿಪ ವಿಷ್ಣುವ ನೆನೆದು ಮುನಿ ವಿಸ್ತರಿಸಿದನು ಕಥೆಯ ೧೦

ವೇದ ನಾಲ್ಕದರಂಗವಾರ
ಷ್ಟಾದಶಾದಿ ಪುರಾಣ ಸ್ಮೃತಿಗಳೊ
ಳಾದಪೂರ್ವೋತ್ತರದ ಮೀಮಾಂಸದ ಪರಿಕ್ರಮದ
ವಾದ ವಿಲಸನ್ನ್ಯಾಯವನು ಶ
ಬ್ದೋದಧಿಯನಳವಡಿಸಿ ರಚಿಸಿದ
ಬಾದರಾಯಣನಂಘ್ರಿಯನು ಭಜಿಸಿದನು ಮನದೊಳಗೆ ೧೧

ಅರಸ ಕೇಳೈ ನಾರದಾದ್ಯರು
ಸರಸಿರುಹ ಸಂಭವನ ಸಭೆಯೊಳು
ವರಮಹಾಭಾರತವ ಕೊಂಡಾಡಿದರು ಭಕ್ತಿಯಲಿ
ವರ ಮಹತ್ವದಿ ಭಾರವತ್ವದಿ
ವರಮಹಾಭಾರತವಿದೊಂದೇ
ದುರಿತದುರ್ಗ ವಿಭೇದಕರವೀರೇಳು ಲೋಕದಲಿ ೧೨

ಹೇಳಿದನು ಪೌಲೋಮ ಚರಿತೋ
ದ್ಧಾಲಕಾಖ್ಯರ ಚರಿತವನು ಮುನಿ
ಹೇಳಿದನು ಫಣಿನಿಕರ ಗರುಡಾಸ್ತಿಕರ ಸಂಭವವ
ಮೇಲೆ ಬಳಿಕ ಪರೀಕ್ಷಿದವನೀ
ಪಾಲ ಶಾಪದ ಮರಣವನು ನೆರೆ
ಹೇಳಿದನು ಮುನಿಗಳಿಗೆ ಸರ್ಪಾಧ್ವರದ ಸಂಗತಿಯ ೧೩

ಕೇಳಿದನು ಜನಮೇಜಯಕ್ಷಿತಿ
ಪಾಲ ವೈಶಂಪಾಯನನು ತಾ
ಕೀಳು ದುರಿತಂಗಳಿಗೆ ಪ್ರಾಯಶ್ಚಿತ್ತ ರೂಪದಲಿ
ಕೇಳಿರೈ ಮುನಿನಿಕರವೀ ಕಲಿ
ಕಾಲದಲಿ ಫಲಿಸುವುದು ಲಕ್ಷ್ಮೀ
ಲೋಲ ನಾಮಸ್ತುತಿಮಹಾಭಾರತ ಕಥಾಶ್ರವಣ ೧೪

ರಾಯ ಚಿತ್ತೈಸೆಂದು ವೈಶಂ
ಪಾಯಮುನಿ ಹೇಳಿದನು ಕಮಲದ
ಳಾಯತಾಕ್ಷನ ಬಾಲಕೇಳಿ ವಿಧೂತ ಕಿಲ್ಬಿಷವ
ಕಾಯ ಕಲ್ಮಷಹರವಖಿಳ ನಿ
ಶ್ರೇಯಸದ ಸದ್ರೂಪುವಿನ ಸಂ
ದಾಯಕವ ನಿರ್ಮಲ ಮಹಾಭಾರತ ಕಥಾಮೃತವ ೧೫

ಆದಿ ಸೃಷ್ಟಿಯೊಳುದಿಸಿದರು ದ
ಕ್ಷಾದಿ ವಿಮಲ ನವಪ್ರಜೇಶ್ವರ
ರಾದರಂಬುಜಭವನ ಲೀಲಾಮಾತ್ರ ಸೂತ್ರದಲಿ
ಆದನವರೊಳಗತ್ರಿಮುನಿ ಬಳಿ
ಕಾದನಾ ಮುನಿಪತಿಗೆ ಜಗದಾ
ಹ್ಲಾದಕರ ಹಿಮಕಿರಣನಾತನಲಾಯ್ತು ಶಶಿವಂಶ ೧೬

ಸೋಮನಿಂ ಬುಧನಾ ಬುಧಂಗೆಯು
ಭೂಮಿಯಲ್ಲಿ ಪುರೂರವನು ಬಳಿ
ಕಾ ಮಹೀಪತಿಗೂರ್ವಶಿಯೊಳಾಯುಃ ಕುಮಾರಕನು
ಆ ಮಹೀಶಗೆ ನಹುಷ ನಹುಷಂ
ಗಾ ಮಹಾತ್ಮ ಯಯಾತಿ ಬಳಿಕೀ
ಸೋಮಕುಲವೆರಡಾಯ್ತು ಯದು ಪೂರುಗಳ ದೆಸೆಯಿಂದ ೧೭

ಯದುಪರಂಪರೆಯಿಂದ ಯಾದವ
ರುದಿಸಿದರು ಪೂರುವಿನ ದೆಸೆಯಿಂ
ದಿದುವೆ ಕೌರವ ವಂಶವಾಯ್ತು ಯಯಾತಿ ಪೌತ್ರರಲಿ
ವಿದಿತ ಪೂರ್ವೋತ್ತರದ ಯದು ವಂ
ಶದ ಕಥಾವಿಸ್ತಾರವನು ಹೇ
ಳಿದನು ದುಷ್ಯಂತನಲಿ ಶಾಕುಂತಲೆಯ ಕಥೆ ಸಹಿತ ೧೮

ಭರತನಾ ದುಷ್ಯಂತನಿಂದವ
ತರಿಸಿದನು ತತ್ಪೂರ್ವ ನೃಪರಿಂ
ಹಿರಿದು ಸಂದನು ಬಳಿಕ ಭಾರತವಂಶವಾಯ್ತಲ್ಲಿ
ಭರತಸೂನು ಸುಹೋತ್ರನಾತನ
ವರಕುಮಾರಕ ಹಸ್ತಿ ಹಸ್ತಿನ
ಪುರಿಗೆ ಹೆಸರಾಯ್ತಾತನಿಂದವೆ ನೃಪತಿ ಕೇಳೆಂದ ೧೯

ವರಕುಮಾರರ ಪಂಕ್ತಿಯಲಿ ಸಂ
ವರಣನಾತಗೆ ಸೂರ್ಯಪುತ್ರಿಗೆ
ಕುರು ಮಹೀಪತಿ ಜನಿಸಿದನು ಬಳಿಕಾಯ್ತು ಕುರುವಂಶ
ವರ ಪರಂಪರೆಯೋಳ್ ಪ್ರತೀಪನು
ಧರಣಿಪತಿಯಾತನಲಿ ಸಂತನು
ಧರೆಗಧೀಶ್ವರನಾಗಿ ಬೆಳಗಿದನರಸ ಕೇಳೆಂದ ೨೦

ಸರಸಿಜಾಸನ ಕೊಟ್ಟ ಶಾಪದಿ
ಯರಸಿಯಾದಳು ಗಂಗೆ ಬಳಿಕಿ
ಬ್ಬರಿಗೆ ಮಕ್ಕಳು ವಸುಗಳೆಂಟು ವಸಿಷ್ಠ ಶಾಪದಲಿ
ನಿರಪರಾಧಿಗಳೇಳು ಜನನಾಂ
ತರಕೆ ಮರಣವ ಕಂಡರುಳಿದಂ
ಗಿರವು ಭೂಲೋಕದಲಿ ಬಲಿದುದು ಭೀಷ್ಮನಾಮದಲಿ ೨೧

ಶಾಪ ಹಿಂಗಿತು ಸುರನದಿಗೆ ಬಳಿ
ಕಾ ಪರಾಕ್ರಮಿ ಭೀಷ್ಮ ಶಂತನು
ಭೂಪತಿಗೆ ಮಗನಾಗಿ ಬೆಳಗಿನಖಿಳ ದಿಕ್ತಟವ
ಭೂಪ ಕೇಳೈ ಉಪರಿಚರ ವಸು
ರೂಪಗರ್ಭವು ಮೀನ ಬಸುರಲಿ
ವ್ಯಾಪಿಸಿತು ಜನಿಸಿದುದು ಮಿಥುನವು ಮತ್ಸ್ಯ ಜಠರದಲಿ ೨೨

ಬಳಿಕ ಮತ್ಸ್ಯದ ಬಸಿ(ಪಾ: ಸು)ರಲುದಿಸಿದ
ನಳಿನಲೋಚನೆ ಮತ್ಸ್ಯಗಂಧಿನಿ
ಬೆಳೆವುತಿರ್ದಳು ಸಂಗವಾಯ್ತು ಪರಾಶರವ್ರತಿಯ
ಬಳಿಕ ಯೋಜನಗಂಧಿಯಲ್ಲಿಂ
ದಿಳಿದನಭ್ರಶ್ಯಾಮನುರು ಪಿಂ
ಗಳ ಜಟಾಪರಿಬದ್ಧ ವೇದವ್ಯಾಸ ಮುನಿರಾಯ ೨೩

ನೆನೆ ವಿಪತ್ತಿನೊಳೆಂದು ತಾಯನು
ತನುಜ ಬೀಳ್ಕೊಂಡನು ಪರಾಶರ
ಮುನಿ ಪುನಃ ಕನ್ಯತ್ವವನು ಕರುಣಿಸಿದನಾ ಸತಿಗೆ
ವಿನುತ ಯಮುನಾ ತೀರದಲಿ ಮಾ
ನಿನಿಯ ಕಂಡನು ಬೇಂಟೆಯಾಡುತ
ಜನಪ ಶಂತನು ಮರುಳುಗೊಂಡನು ಮದನನೆಸುಗೆಯಲಿ ೨೪

ಪರಿಮಳದ ಬಳಿವಿಡಿದು ಬಂದೀ
ತರುಣಿಯನು ಕಂಡಾರು ನೀನೆಂ
ದರಸ ಬೆಸಗೊಳುತೆಸುವ ಕಾಮನ ಶರಕೆ ಮೈಯೊಡ್ಡಿ
ಅರಮನೆಗೆ ನಡೆಯೆನಲು ತಂದೆಯ
ಪರಮ ವಚನವಲಂಘ್ಯವೆನೆ ಕಾ
ತರಿಸಿ ಭಗ್ನ ಮನೋರಥನು ಮರಳಿದನು ಮಂದಿರಕೆ ೨೫

ವಿರಹದಾವುಗೆ ಕಿಚ್ಚು ಭೂಮೀ
ಶ್ವರನ ಮುಸುಕಿತು ಬಲಿದವಸ್ಥೆಯ
ನರಸ ಬಣ್ಣಿಸಲರಿಯೆನೇಳೆಂಟೊಂಬತರ ಬಳಿಯ
ಮರಣವೀತಂಗೆಂಬ ಜನದು
ಬ್ಬರದ ಗುಜುಗುಜುವರಿದು ಯಮುನಾ
ವರನದಿಯ ತೀರಕ್ಕೆ ಬಂದನು ಭೀಷ್ಮ ವಹಿಲದಲಿ ೨೬

ಕರೆಸಿದನು ಧೀವರನನಯ್ಯಂ
ಗರಸಿಯಾಗಲಿ ನಿನ್ನ ಮಗಳೆನ
ಲರಸಿಯಾದರೆ ಮಗಳ ಮಕ್ಕಳು ರಾಜ್ಯವಾಳುವರೆ
ಅರಿದು ಸಲಿಸುವಡಿದನು ನೇ ಬರಿ
ಯರಸುತನ ನಮಗೇಕೆನಲು ಧೀ
ವರನ ಮಾತಿಂಗೀತನೆಂದನು ರಾಯ ಕೇಳೆಂದ ೨೭

ಆದರಿಲ್ಲಿಂ ಮೇಲೆ ನಾರಿಯ
ರಾದವರು ಭಾಗೀರಥಿಗೆ ಸರಿ
ಮೇದಿನಿಯ ಸಲಿಸುವೆನು ನಿನ್ನಯ ಮಗಳ ಮಕ್ಕಳಿಗೆ
ಈ ದಿವಿಜರೀ ಹರಿ ಹರ ಬ್ರ
ಹ್ಮಾದಿ ದೇವರು ಸಾಕ್ಷಿ ಹೋಗೆಂ
ದಾ ದಯಾಂಬುಧಿ ನಗುತ ನಿನ್ನಯ ಮಗಳ ಕರೆಸೆಂದ ೨೮

ತರಿಸಿದನು ದಂಡಿಗೆಯ ದಂಡಿಯ
ಚರರ ನೆಲನುಗ್ಗಡಣೆಯಲಿ ಸರ
ಸಿರುಹಮುಖಿಯನು ತಂದು ಮದುವೆಯ ಮಾಡಿದನು ಪಿತಗೆ
ಉರವಣಿಸಿ ಮಗ ನುಡಿದ ಭಾಷೆಯ
ನರಸ ಕೇಳಿದು ಬಳಿಕ ಭೀಷ್ಮಗೆ
ವರವನಿತ್ತನು ಮರಣವದು ನಿನ್ನಿಚ್ಛೆ ಹೋಗೆಂದ ೨೯

ಬಳಿಕ ಯೋಜನಗಂಧಿಯಲಿ ಮ
ಕ್ಕಳುಗಳವತರಿಸಿದರು ದೀಪ್ತ
ಜ್ವಲನತೇಜನರು ಕಲ್ಪಭೂಜರು ಹಿಮಕರಾನ್ವಯಕೆ
ಲಲಿತ ಮಂಗಳ ಜಾತಕರ್ಮಾ
ವಳಿಯ ಚಿತ್ರಾಂಗದನನಾ ನೃಪ
ತಿಲಕ ನೆಗಳೆ ವಿಚಿತ್ರವೀರ್ಯನ ನಾಮಕರಣದಲಿ ೩೦

ಇರಲಿರಲು ಶಂತನು ಮಹೀಪತಿ
ಸುರರೊಳಗೆ ಸೇರಿದನು ಬಳಿಕೀ
ಧರಣಿಯೊಡೆತನವಾಯ್ತು ಚಿತ್ರಾಂಗದ ಕುಮಾರಂಗೆ
ಅರಸ ಕೇಳೈ ಕೆಲವು ಕಾಲಾಂ
ತರದಲಾತನು ಕಾದಿ ಗಂಧ
ರ್ವರಲಿ ಮಡಿದನು ಪಟ್ಟವಾಯ್ತು ವಿಚಿತ್ರವೀರ್ಯಂಗೆ ೩೧

ರಾಯ ಕೇಳೈ ಸಕಲ ರಾಜ್ಯ
ಶ್ರೀಯನಾತಂಗಿತ್ತು ಭೀಷ್ಮನು
ತಾಯ ಚಿತ್ತವ ಪಡೆದು ಮೆಚ್ಚಿಸಿದನು ಜಗತ್ರಯವ
ರಾಯ ಕುವರನ ಮದುವೆಗಬ್ಜದ
ಳಾಯತಾಕ್ಷಿಯರನು ವಿಚಾರಿಸಿ
ಹಾಯಿದನು ದಳದುಳದೊಳೊಂದು ವಿವಾಹ ಮಂಟಪಕೆ ೩೨

ಅಲ್ಲಿ ನೆರೆದಾ ಕ್ಷತ್ರವರ್ಗವ
ಚೆಲ್ಲಬಡಿದು ವಿವಾಹ ಶಾಲೆಯ
ಚೆಲ್ಲೆಗಂಗಳ ಕಮಲಮುಖಿಯರ ಮೂವರನು ಪಿಡಿದು
ಘಲ್ಲಣೆಯ ಖಂಡೆಯದ ಚೌಪಟ
ಮಲ್ಲ ಭೀಷ್ಮನು ಪುರಕೆ ತಂದವ
ರೆಲ್ಲರನು ತಮ್ಮಂಗೆ ಮದುವೆಯ ಮಾಡಲನುವಾದ ೩೩

ಆ ಕಮಲಲೋಚನೆಯರೊಳು ಮೊದ
ಲಾಕೆ ಭೀಷ್ಮನ ಗಂಡನೆಂದೇ
ನೂಕಿ ಭಾಷೆಯ ಮಾಡಿ ನಿಂದಳು ಛಲದ ಬಿಗುಹಿನಲಿ
ಆಕೆ ಮಾಣಲಿ ಮಿಕ್ಕವರು ಬರ
ಲೀ ಕುಮಾರಂಗೆಂದು ವೈದಿಕ
ಲೌಕಿಕೋತ್ಸವದಿಂದ ಮದುವೆಯ ಮಾಡಿದನು ಭೀಷ್ಮ ೩೪

ಅರಸ ಚಿತ್ತೈಸಂಬೆಯೆಂಬಳು
ದುರುಳೆ ಭೀಷ್ಮನ ಕೂಟವಲ್ಲದೆ
ಮರಣದೆಡೆಯಲಿ ಬೆರಸಿದಲ್ಲದೆ ಪಂಥವಿಲ್ಲೆಂದು
ಪರಶುರಾಮನ ಭಜಿಸಿ ಹಸ್ತಿನ
ಪುರಕೆ ತಂದಳು ಹೇಳಿಸಿದಳೀ
ಸುರನದೀನಂದನನು ಮಾಡಿದ ಪರಿಯ ಕೇಳೆಂದ ೩೫

ಸತಿಯನೊಲ್ಲೆನು ಬ್ರಹ್ಮಚರ್ಯ
ಸ್ಥಿತಿಗೆ ತಪ್ಪುವನಲ್ಲ ನೀವನು
ಚಿತವ ನೆನೆದರೆ ನಡೆಯಿ ಕೊಟ್ಟೆನು ಕಾಳಗವ ನಿಮಗೆ
ವ್ರತದನಿಧಿ ಕುರುಭೂಮಿಯಲಿ ಶರ
ತತಿಯಲಿಪ್ಪತ್ತೊಂದು ದಿನ ಭೃಗು
ಸುತನೊಡೆನೆ ಕಾದಿದನು ವಿರಥನ ಮಾಡಿದನು ಭೀಷ್ಮ ೩೬

ನುಡಿಯ ಭಂಗಿಸಲೆಂದು ಗುರುವವ
ಗಡಿಸಿ ಹೊಕ್ಕರೆ ಸರಳಮೊನೆಯಲಿ
ಕೊಡಹಿ ಬಿಸುಟನು ಬಿಟ್ಟುದಿಲ್ಲ ಮಹಾವ್ರತಸ್ಥಿತಿಯ
ನುಡಿಯ ಮೀರದ ನಮ್ಮ ಶಿಷ್ಯನ
ನೊಡಬಡಿಸಿಕೊಳ್ಳೆಂದು ನಾರಿಗೆ
ನುಡಿದು ತನ್ನಾಶ್ರಮಕೆ ಸರಿದನು ಪರಶುರಾಮಮುನಿ ೩೭

ಅಂಬೆ ಭೀಷ್ಮನ ಬೈದು ಕಂಬನಿ
ದುಂಬಿ ಹೋದಳು ತಪಕೆ ಬಳಕೀ
ಯಂಬಿಕೆಯನಂಬಾಲೆಯನು ರಮಿಸಿದನು ನೃಪಸೂನು
ಬೆಂಬಲಕೆ ಕಲಿಭೀಷ್ಮನಿರೆ ಚತು
ರಂಬುಧಿಯ ಮಧ್ಯದ ನೃಪಾಲ ಕ
ದಂಬವೀತಂಗಿದಿರೆ ಸಲಹಿದನಖಿಳ ಭೂತಳವ ೩೮





ಕೃಪೆ :  http://gaduginabharata.blogspot.in/
Contributors

ಅರಣ್ಯಪರ್ವ: ೦೪. ನಾಲ್ಕನೆಯ ಸಂಧಿ

ಸೂ. ಭಜಿಸಿದನು ನರನಿಂದ್ರಕೀಲದೊ
ಳಜ ಸುರಾರ್ಚಿತ ಚರಣ ಕಮಲನ
ತ್ರಿಜಗದಧಿಪತಿಯನು ಮಹಾನಟರಾಯ ಧೂರ್ಜಟಿಯ

ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡು ಕುಮಾರರಟವಿಯ
ಪಾಳಿಯಲಿ ಪರುಠವಿಸಿದರು ಪದಯುಗ ಪರಿಭ್ರಮವ
ಲೋಲಲೋಚನೆ ಸಹಿತ ತತ್ಕುಲ
ಶೈಲದಲಿ ತದ್ವಿಪಿನದಲಿ ತ
ತ್ಕೂಲಪತಿಗಳ ತೀರದಲಿ ತೊಳಲಿದರು ಬೇಸರದೆ ೧

ಫಳ ಮೃಗಾವಳಿ ಸವೆದುದಿನ್ನೀ
ಹಳುವು ಸಾಕಿನ್ನೊಂದರಣ್ಯ
ಸ್ಥಳವ ನೋಡಲಿ ಕಟಕ ನಡೆಯಲಿ ವಿಪ್ರಸಂಕುಲದ
ಸುಲಭವೀ ವನವೆಂದು ತಮ್ಮೊಳು
ತಿಳಿದು ಪಾರ್ಥ ಯುಧಿಷ್ಠಿರರು ಮುನಿ
ಕುಲ ಸಹಿತ ನಲವಿಂದ ಹೊಕ್ಕರು ದ್ವೈತಕಾನನವ ೨

ಅರಸ ಕಳುಹಿದ ದೂತನಾ ಗಜ
ಪುರವ ಹೊಕ್ಕು ತದೀಯ ವಾರ್ತಾ
ಭರದ ವಿವರವನರಿದು ಬಂದನು ಕಂಡನವನಿಪನ
ಕುರುನೃಪಾಲನ ಮದವನಾತನ
ಸಿರಿಯನಾತನ ಬಲುಹನಾತನ
ಪರಿಯನರುಹಿದನಬುಜಮುಖಿ ಪವನಜರು ಕಳವಳಿಸೆ ೩

ಮೂದಲಿಸಿದಳು ದ್ರುಪದ ತನುಜೆ ವೃ
ಕೋದರನನರ್ಜುನನವನಿಪ
ನಾದಿಯಾದೈವರನು ಕೌರವನೃಪನ ಪತಿಕರಿಸಿ
ಆದೊಡಿದೆ ಕುರುರಾಜ ವಂಶ
ಚ್ಛೇದ ಧೀರ ಕುಠಾರವೆನುತ ವೃ
ಕೋದರನು ತೂಗಿದನು ಗದೆಯನು ಗಾಢಕೋಪದಲಿ ೪

ಏಕಿದೇಕೆ ವೃಥಾ ನಿಶಾಟ
ವ್ಯಾಕರಣ ಪಾಂಡಿತ್ಯವಕಟ ವಿ
ವೇಕ ರಹಿತನೆ ನೀ ವೃಕೋದರ ದ್ರುಪದ ಸುತೆಯಂತೆ
ಸಾಕು ಸಾಕೈ ತಮ್ಮ ಸತ್ಯವೆ
ಸಾಕು ನಮಗೆ ಮದೀಯ ಪುಣ್ಯ
ಶ್ಲೋಕತೆಯನುಳುಹೆಂದು ಗಲ್ಲವ ಹಿಡಿದನನಿಲಜನ ೫

ಅರಸಿ ನಿನ್ನಯ ಶೋಕವಹ್ನಿಯೊ
ಳುರಿವುದರಿನೃಪಜಲಧಿ ಕೇಳಂ
ಬುರುಹಲೋಚನೆ ನಿನ್ನ ಲೋಚನವಾರಿ ಪೂರದಲಿ
ಕುರುನೃಪಾಲನ ಸತಿಯ ಶೋಕ
ಸ್ಫುರದನಲನುಜ್ವಲಿಸುವುದು ರಿಪು
ವಿರಚಿತದ ವಿಪರೀತಕಿದು ವಿಪರೀತವಹುದೆಂದ ೬

ಆ ಸಮಯದಲಿ ಬಂದನಗ್ಗದ
ಭೂಸುರ ಶ್ರೀಕಂಠನೋ ಪ
ದ್ಮಾಸನನ ಪಲ್ಲಟವೊ ಕಮಲಾಂಬಕನ ಚುಂಬಕವೊ
ಭಾಸುರ ಕ್ರತುಶತದ ರೂಪ ವಿ
ಳಾಸವೊ ಶ್ರುತಿಕೋಟಿ ಕನ್ಯಾ
ವಾಸಭವನವೊ ದೇವ ವೇದವ್ಯಾಸ ಮುನಿರಾಯ ೭

ಹಾ ಮಹಾ ದೇವಾಯಿದಾರು ಮ
ಹಾ ಮುನೀಶ್ವರರೆನುತ ಮುನಿಪ
ಸ್ತೋಮವೆದ್ದುದು ಧರ್ಮನಂದನನವರಿಗಿದಿರಾಗಿ
ಪ್ರೇಮ ಪುಳಕದ ನಯನ ಸಲಿಲದ
ರೋಮಹರ್ಷದ ಸತ್ಯಭಾವದ
ಭೂಮಿಪತಿ ಮೈಯಿಕ್ಕಿದನು ಮುನಿವರನ ಚರಣದಲಿ ೮

ವಿವಿಧ ಮುನಿಗಳ ಗೋತ್ರನಾಮ
ಪ್ರವರ ಸಹಿತಭಿವಾದ ಕರ್ಮೋ
ತ್ಸವವ ಕೈಕೊಳುತನಿಬರನು ಮನ್ನಿಸಿದನುಚಿತದಲಿ
ಯುವತಿ ಪದಕೆರಗಿದೊಡೆ "ಭೂಯಾತ್
ತವ ಮನೋರಥ" ವೆನುತ ನಸುನಗು
ತವನಿಪಾಲನ ಪರ್ಣಶಾಲೆಗೆ ಮುನಿಪನೈತಂದ ೯

ಇದೆ ಪವಿತ್ರ ಪಲಾಶ ಪತ್ರದ
ಲುದಕವರ್ಘ್ಯಾಚಮನ ಪಾದ್ಯ
ಕ್ಕಿದೆ ವಿಮಳ ದರ್ಭೋಪರಚಿತಾಸನ ವಿಳಾಸದಲಿ
ಇದನು ಕಾಂಚನ ಪಾತ್ರಜಲವೆಂ
ದಿದು ವರಾಸನವೆಂದು ಕೈಕೊಂ
ಬುದು ಯಥಾ ಸಂಭವದಲೆಂದನು ಧರ್ಮನಂದನನು ೧೦

ಈ ಪವಿತ್ರೋದಕವಲೇ ದೋ
ಷಾಪಹರ ದರ್ಭಾಸನದಲಿಂ
ದೀ ಪೃಥಿವಿ ಸರ್ವಾಧಿಪತ್ಯವು ಸೇರುವುದು ನಿನಗೆ
ಭೂಪಕೇಳೈ ಜೇನುನೊಣದ ಮ
ಧೂಪಚಯವವಕಿಲ್ಲಲೇ ಸ
ರ್ವಾಪಹಾರವು ಪರರಿಗಾ ಕೌರವನ ಸಿರಿಯೆಂದ ೧೧

ಒಡಲು ಬೀಳಲಿ ಮೇಣು ತಮ್ಮದಿ
ರಡವಿಯಲಿ ಹಾಯಿಕ್ಕಿ ಹೋಗಲಿ
ಮಡದಿ ಮುನಿಯಲಿ ಬಸಿದು ಬೀಳಲಿ ಧರಣಿ ಕುರುಪತಿಗೆ
ಎಡೆಯಲುಳಿವಿವರಾಗು ಹೋಗಿನ
ಗೊಡವೆಯೆನಗಿಲ್ಲೆನ್ನ ಸತ್ಯದ
ನುಡಿಗೆ ಹಾದರವಿಲ್ಲದಂತಿರೆ ಕರುಣಿಸುವುದೆಂದ ೧೨

ಬಾಧೆಯುಂಟೇ ನಿನ್ನ ಸತ್ಯಕೆ
ಸಾಧಿಸುವುದವಧಿಯನು ನಿನ್ನ ವಿ
ರೋಧಿಗಳಿಗೆ ನಿವಾಸವಹುದು ಕೃತಾಂತಲೋಕದಲಿ
ಆಧಿಪತ್ಯ ಭ್ರಮಿತರಲಿ ರಾ
ಜ್ಯಾದಿಯಲಿ ಕಡೆಗೊಂಡಿರಖಿಲ ನಿ
ರೋಧವನು ಕಡನನು ಸವೃದ್ಧಿಕವಾಗಿ ಕೊಡಿಯೆಂದ ೧೩

ಆವುದರಿದಿವರಿಗೆ ಭವತ್ಕರು
ಣಾವಲೋಕನವುಂಟು ಪುನರಪಿ
ದೇವಕೀ ನಂದನನಲೊದಗುವ ಮೇಲು ನೋಟದಲಿ
ಈ ವಿಪತ್ತೇಸರದು ಪಾಂಡವ
ಜೀವಿಗಳು ನೀವಿಬ್ಬರಿರಲೆಂ
ದಾ ವಿಭಾಂಡಕ ಶೌನಕಾದಿಗಳೆಂದರಾ ಮುನಿಗೆ ೧೪

ಕರೆಸಿ ದ್ರುಪದಾತ್ಮಜೆಯ ಕಂಬನಿ
ಯೊರತೆಯಾರಲು ನುಡಿದನಾಕೆಯ
ಕರಣದಲಿ ಕಿವಿಗೊಂಡ ಕಳಕಳವನು ವಿಭಾಡಿಸಿದ
ಧರಣಿಪತಿಗೇಕಾಂತ ಭವನದೊ
ಳೊರೆದನೀಶ್ವರ ವಿಷಯ ಮಂತ್ರಾ
ಕ್ಷರವನಂಗೋಪಾಂಗ ಮುದ್ರಾಶಕ್ತಿಗಳು ಸಹಿತ ೧೫

ಇದು ಮಹೀಶರ ಶೋಕಹರವಿಂ
ತಿದು ವಿರೋಧಿಬಲ ಪ್ರಭಂಜನ
ವಿದು ಸಕಲ ಪುರುಷಾರ್ಥ ಸಾಧನವಖಿಳ ದುರಿತಹರ
ಇದು ಮಹಾಧಿವ್ಯಾಧಿಹರವಿಂ
ತಿದನು ನೀ ಕೊಳ್ಳರ್ಜುನಂಗೊರೆ
ವುದು ರಹಸ್ಯದೊಳೆಂದು ಮುನಿ ಕರುಣಿಸಿದನರಸಂಗೆ ೧೬

ಪಾರ್ಥ(ಪಾ: ಪ್ರಾರ್ಥ)ನೈದುವುದಿಂದ್ರ ಕೀಲದೊ
ಳರ್ಥಿಸಲಿ ಶಂಕರನನಖಿಳ
ಸ್ವಾರ್ಥ ಸಿದ್ಧಿಗೆ ಬೀಜವಿದು ಬೇರೊಂದು ಬಯಸದಿರು
ವ್ಯರ್ಥರವದಿರು ನಿನ್ನ ಹಗೆಯ ಕ
ದರ್ಥನದೊಳಿನ್ನೇನು ಜಗಕೆ ಸ
ಮರ್ಥನೊಬ್ಬನೆ ಶಂಭು ಕೃಪೆ ಮಾಡುವನು ನಿನಗೆಂದ ೧೭

ಇಂದುಮುಖಿಯನು ಭೀಮನನು ಯಮ
ನಂದನನರ್ಜುನನ ಯಮಳರ
ನಂದು ಕೊಂಡಾಡಿದನು ಮೈದಡವಿದನು ಮೋಹದಲಿ
ಬಂದು ಸಂದಣಿಸಿದ ಮುನಿ ದ್ವಿಜ
ವೃಂದವನು ಮನ್ನಿಸಿ ನಿಜಾಶ್ರಮ
ಮಂದಿರಕೆ ಮುದದಿಂದ ಬಿಜಯಂಗೈದನಾ ಮುನಿಪ ೧೮

ಅರಸ ಕೇಳೈ ಮುನಿಪನತ್ತಲು
ಸರಿದನಿತ್ತಲು ಪಾರ್ಥನನು ನೃಪ
ಕರೆದು ವೇದವ್ಯಾಸನಿತ್ತುಪದೇಶ ವಿಸ್ತರವ
ಅರುಹಿದನು ಕೈಲಾಸ ಸೀಮಾ
ವರುಷದಲ್ಲಿಹುದಿಂದ್ರ ಕೀಲದ
ಗಿರಿ ಮಹೇಶ ಕ್ಷೇತ್ರವಲ್ಲಿಗೆ ಹೋಗು ನೀನೆಂದ ೧೯

ಅಲ್ಲಿ ಭಜಿಸುವದಮಳ ಗಿರಿಜಾ
ವಲ್ಲಭನನಾಮ್ನಾಯ ಜಿಹ್ವೆಗೆ
ದುರ್ಲಭನನಧಿ ದೈವವನು ಬ್ರಹ್ಮೇಂದ್ರ ಭಾಸ್ಕರರ
ಬಲ್ಲೆನೆಂಬರ ಬಹಳ ಗರ್ವವ
ಘಲ್ಲಿಸುವ ಗಡ ತನ್ನ ಭಕ್ತರು
ಬಲ್ಲಿದರು ತನಗೆಂಬ ಬೋಳೆಯರರಸನಿಹನೆಂದ ೨೦

ಏಳು ನೀ ಪ್ರತ್ಯೂಷದಲಿ ಶಶಿ
ಮೌಳಿ ಮೈದೋರಲಿ ತದೀಯ ಶ
ರಾಳಿಗಳು ಸಿದ್ಧಿಸಲಿ ಸೇರಲಿ ಶಿವನ ಕೃಪೆ ನಿನಗೆ
ಸೋಲದಿರು ಸುರಸತಿಯರಿಗೆ ಸ
ಮ್ಮೇಳವಾಗದಿರವರೊಡನೆ ಕೈ
ಮೇಳವಿಸುವುದು ಕಾಮವೈರಿಯ ಚರಣಕಮಲದಲಿ ೨೧

ಮುಗ್ಗದಿರು ಮಾಯೆಯಲಿ ಮದದಲಿ
ನೆಗ್ಗದಿರು ರೋಷದ ವಿಡಂಬದ
ಲಗ್ಗಳೆಯತನದಿಂದಹಂಕೃತಿ ಭರದಿ ಮೆರೆಯದಿರು
ಅಗ್ಗಿಸದಿರಾತ್ಮನನು ಲೋಭದೊ
ಳೊಗ್ಗದಿರು ಲಘುವಾಗದಿರು ಮಿಗೆ
ಹಿಗ್ಗದಿರು ಹೊಗಳಿಕೆಗೆ ಮನದಲಿ ಪಾರ್ಥ ಕೇಳೆಂದ ೨೨

ಆಡದಿರಸತ್ಯವನು ಕಪಟವ
ಮಾಡದಿರು ನಾಸ್ತಿಕರೊಡನೆ ಮಾ
ತಾಡದಿರು ಕೆಳೆಗೊಳ್ಳದಿರು ವಿಶ್ವಾಸಘಾತಕರ
ಖೋಡಿಗಳೆಯದಿರಾರುವನು ಮೈ
ಗೂಡದಿರು ಪರವಧುವಿನಲಿ ರಣ
ಖೇಡನಾಗದಿರೆಂದು ನುಡಿದನು ನೃಪತಿಯರ್ಜುನಗೆ ೨೩

ಕ್ರೂರರಿಗೆ ಶಠರಿಗೆ ವೃಥಾಹಂ
ಕಾರಿಗಳಿಗತಿ ಕುಟಿಲರಿಗೆಯುಪ
ಕಾರಿಯಪಘಾತರಿಗೆ ಭೂತದ್ರೋಹಿ ಜೀವರಿಗೆ
ಜಾರರಿಗೆ ಜಡರಿಗೆ ನಿಕೃಷ್ಟಾ
ಚಾರರಿಗೆ ಪಿಸುಣರಿಗೆ ಧರ್ಮವಿ
ದೂರರಿಗೆ ಕಲಿಪಾರ್ಥ ಕೇಳ್ ಪರಲೋಕವಿಲ್ಲೆಂದ ೨೪

ಭ್ರಾತೃ ಮಿತ್ರ ವಿರೋಧಿಕಗೆ ಪಿತೃ
ಮಾತೃಘಾತಿಗೆ (ಪಾ: ಮಾತೃವಿಘಾತಿಗೆ) ಖಳನಿಗುತ್ತಮ
ಜಾತಿನಾಶಕನಿಂಗೆ (ಪಾ: ಜಾತಿನಾಶಕಂಗೆ) ವರ್ಣಾಶ್ರಮ ವಿದೂಷಕಗೆ
ಜಾತಿಸಂಕರಕಾರಗಾ ಕ್ರೋ
ಧಾತಿರೇಕಗೆ ಗಾಢ ಗರ್ವಿಗೆ
ಭೂತವೈರಿಗೆ ಪಾರ್ಥ ಕೇಳ್ ಪರಲೋಕವಿಲ್ಲೆಂದ ೨೫

ಸ್ವಾಮಿಕಾರ್ಯ ವಿಘಾತಕಂಗತಿ
ಕಾಮುಕಗೆ ಮಿಥ್ಯಾಪವಾದಿಗೆ
ಭೂಮಿದೇವ ದ್ವೇಷಿಗತ್ಯಾಶಿಗೆ ಬಕವ್ರತಿಗೆ
ಗ್ರಾಮಣಿಗೆ ಪಾಷಂಡಗಾತ್ಮ ವಿ
ರಾಮಕಾರಿಗೆ ಕೂಟಸಾಕ್ಷಿಗೆ
ನಾಮಧಾರಿಗೆ ಪಾರ್ಥ ಕೇಳ್ ಪರಲೋಕವಿಲ್ಲೆಂದ ೨೬

ಅದರಿನಾವಂಗುಪಹತಿಯ ಮಾ
ಡದಿರು ಸಚರಾಚರದ ಚೈತ
ನ್ಯದಲಿ ನಿನ್ನನೆ ಬೆರಸಿ ಕಾಬುದು ನಿನ್ನ ತನುವೆಂದು
ಬೆದರದಿರು ಬಲುತಪಕೆ ಶೂಲಿಯ
ಪದಯುಗವ ಮರೆಯದಿರು ಹರಿಯನು
ಹೃದಯದಲಿ ಪಲ್ಲಟಿಸದಿರು ಸುಖಿಯಾಗು ಹೋಗೆಂದ ೨೭

ಕರುಣಿಸಲಿ ಕಾಮಾರಿ ಕೃಪೆಯಿಂ
ವರ ಮಹಾಸ್ತ್ರವನಿಂದ್ರ ಯಮ ಭಾ
ಸ್ಕರ ಹುತಾಶನ ನಿರುತಿ ವರುಣ ಕುಬೇರ ಮಾರುತರು
ಸುರರು ವಸುಗಳು ಸಿದ್ಧ ವಿದ್ಯಾ
ಧರ ಮಹೋರಗ ಯಕ್ಷ ಮನು ಕಿಂ
ಪುರುಷರೀಯಲಿ ನಿನಗೆ ವಿಮಳ ಸ್ವಸ್ತಿವಾಚನವ ೨೮

ಎನೆ ಹಸಾದವೆನುತ್ತೆ ಯಮ ನಂ
ದನಗೆ ಭೀಮಂಗೆರಗಿದನು ಮುನಿ
ಜನಕೆ ಮೈಯಿಕ್ಕಿದನು ಮುಳುಗಿದನಕ್ಷತೌಘದಲಿ
ವನಜಮುಖಿ ಮುನಿ ವಧುಗಳಾಶೀ
ರ್ವಿನುತ ದಧಿ ದೂರ್ವಾಕ್ಷತೆಯನು
ಬ್ಬಿನಲಿ ಕೈಕೊಳುತನಿಬರನು ಮನ್ನಿಸಿದನುಚಿತದಲಿ ೨೯

ನೆನೆಯದಿರು ತನುಸುಖವ ಮನದಲಿ
ನೆನೆ ವಿರೋಧಿಯ ಸಿರಿಯನೆನ್ನಯ
ಘನತರದ ಪರಿಭವವ ನೆನೆ ನಿಮ್ಮಗ್ರಜರ ನುಡಿಯ
ಮುನಿವರನ ಮಂತ್ರೋಪದೇಶವ
ನೆನೆವುದಭವನ ಚರಣ ಕಮಲವ
ನೆನುತ ದುರುಪದಿಯೆರಗಿದಳು ಪಾರ್ಥನ ಪದಾಬ್ಜದಲಿ ೩೦

ಹರನ ಚರಣವ ಭಜಿಸುವೆನು ದು
ರ್ಧರ ತಪೋನಿಷ್ಠೆಯಲಿ ಕೇಳೆಲೆ
ತರುಣಿ ಪಾಶುಪತಾಸ್ತ್ರವಾದಿಯ ದಿವ್ಯಮಾರ್ಗಣವ
ಪುರಹರನ ಕೃಪೆಯಿಂದ ಪಡೆದಾ
ನರಿಗಳನು ಸಂಹರಿಸಿ ನಿನ್ನಯ
ಪರಿಭವಾಗ್ನಿಯ ನಂದಿಸುವೆ ನಿಲ್ಲೆಂದನಾ ಪಾರ್ಥ ೩೧

ಬಿಗಿದ ಬತ್ತಳಿಕೆಯನು ಹೊನ್ನಾ
ಯುಗದ ಖಡುಗ ಕಠಾರಿ ಚಾಪವ
ತಗೆದನಳವಡೆಗಟ್ಟಿ ಬದ್ದುಗೆದಾರ ಗೊಂಡೆಯವ
ದುಗುಡ ಹರುಷದ ಮುಗಿಲ ತಲೆಯೊ
ತ್ತುಗಳಿಗಿಟ್ಟೆಡೆಯಾಗಿ ಗುಣ ಮೌ
ಳಿಗಳ ಮಣಿ ಕಲಿಪಾರ್ಥ ಬೀಳ್ಕೊಂಡನು ನಿಜಾಗ್ರಜನ ೩೨

ಹರಡೆ ವಾಮದೊಳುಲಿಯೆ ಮಧುರ
ಸ್ವರದಲಪಸವ್ಯದಲಿ ಹಸುಬನ
ಸರ ಸಮಾಹಿತಮಾಗೆ ಸೂರ್ಯೋದಯದ ಸಮಯದಲಿ
ಹರಿಣ ಭಾರದ್ವಾಜನುಡಿಕೆಯ
ಸರಟ ನಕುಲನ ತಿದ್ದುಗಳ ಕು
ಕ್ಕುರನ ತಾಳಿನ ಶಕುನವನು ಕೈಕೊಳುತ ನಡೆತಂದ ೩೩

ನೀಲಕಂಠನ ಮನದ ಬಯಕೆಗೆ
ನೀಲಕಂಠನೆ ಬಲಕೆ ಬಂದುದು
ಮೇಲುಪೋಗಿನ ಸಿದ್ಧಿ ದೈತ್ಯಾಂತಕನ ಬುದ್ಧಿಯಲಿ
ಕಾಲಗತಿಯಲಿ ಮೇಲೆ ಪರರಿಗೆ
ಕಾಲಗತಿಯನು ಕಾಬೆನೈಸಲೆ
ಶೂಲಧರನೇ ಬಲ್ಲನೆನುತೈತಂದನಾ ಪಾರ್ಥ ೩೪

ಅರಸ ಕೇಳೈ ಬರುತ ಭಾರತ
ವರುಷವನು ದಾಂಟಿದನು ತಂಪಿನ
ಗಿರಿಯ ತಪ್ಪಲನಿಳಿದಿನಾ ಹರಿವರುಷ ಸೀಮೆಯಲಿ
ಬೆರಸಿದನು ಬಳಿಕುತ್ತರೋತ್ತರ
ಸರಣಿಯಲಿ ಸೈನಡೆದು ಹೊಕ್ಕನು
ಸುರರ ಸೇವ್ಯವನಿಂದ್ರಕೀಲ ಮಹಾ ವನಾಂತರವ ೩೫

ಗಿಳಿಯ ಮೃದು ಮಾತುಗಳ ಮರಿಗೋ
ಗಿಲೆಯ ಮಧುರ ಧ್ವನಿಯ ಹಂಸೆಯ
ಕಳರವದ ಮರಿ ನವಿಲ ಕೇಕಾ ರವದ ನಯಸರದ
ಮೆಲುದನಿಯ ಪಾರಿವದ ತುಂಬಿಯ
ಲಲಿತ ಗೀತದ ವನ ವನದ ಸಿರಿ ಬಗೆ
ಗೊಳಿಸಿತೈ ಪೂರ್ವಾಭಿಭಾಷಣದಲಿ ಧನಂಜಯನ ೩೬

ಸೊಂಪೆಸೆವ ಕೋಗಿಲೆಯ ಸರ ದೆಸೆ
ತಂಪೆಸೆವ ತಂಬೆಲರ ಹುವ್ವಿನ
ಜೊಂಪವನು ಜೊಂಪಿಸುವ ಮರಿದುಂಬಿಗಳ ಮೇಳವದ
ಪೆಂಪೊಗುವ ತಾವರೆಗೊಳಂಗಳ
ತಂಪಿನೊದವಿನ ವನದ ಸೊಗಸಿನ
ಸೊಂಪು ಸೆಳೆದುದು ಮನವನೀತನನರಸ ಕೇಳೆಂದ ೩೭

ಚಾರುತರ ಪರಿಪಕ್ವ ನವ ಖ
ರ್ಜೂರ ರಸಧಾರಾ ಪ್ರವಾಹ ಮ
ನೋರಮೇಕ್ಷು ವಿಭೇದ ವಿದ್ರುಮರಸದ ದಾಳಿಂಬ
ಭೂರಿ ಜಂಬ ಮಧೂಕ ಪನಸ
ಸ್ಫಾರ ರಸಪೂರಾನುಕಲಿತ ವಿ
ಹಾರ ಸುರಮಹಿಳಾಭಿರಂಜಿಸುವಖಿಳ ವನಭೂಮಿ ೩೮

ವಿಲಸದಭ್ರದಲಿಹ ಮಹಾ ತರು
ಕುಲದಿನಮರನದೀಸ್ತನಂಧಯ
ಫಲರಸದ ಸವಿಗಳಲಿ ದಿಕ್ಕೂಲಂಕಷೋನ್ನತಿಯ
ಸುಳಿವ ಪರಿಮಳ ಪವನನಿಂ ಕಂ
ಗೊಳಿಸಿತರ್ಜುನ ಕಾಮ್ಯ ಸಿದ್ಧಿ
ಸ್ಥಳದೊಳಂತರ್ಮಿಥುನ ಕಾನನವರಸ ಕೇಳೆಂದ ೩೯

ಇಲ್ಲಿ ನಿಲ್ಲರ್ಜುನ ತಪೋವನ
ಕಿಲ್ಲಿ ನೆಲೆ ಶ್ರುತಿಯುವತಿ ಸೂಸುವ
ಚೆಲ್ಲೆಗಂಗಳ ಮೊನೆಗೆ ಮೀಸಲುಗುಡದ ಮೈಸಿರಿಯ
ದುರ್ಲಲಿತದಷ್ಟಾಂಗ ಯೋಗದ
ಕೊಲ್ಲಣಿಗೆಯಲಿ ಕೂಡದಪ್ರತಿ
ಮಲ್ಲ ಶಿವನ ಕ್ಷೇತ್ರವಿದೆಯೆಂದುದು ನಭೋನಿನದ ೪೦

ಧರಣಿಪನ ಬೀಳ್ಕೊಂಡು ಮಾರ್ಗಾಂ
ತರದೊಳಾರಡಿಗೈದು ಹೊಕ್ಕನು
ಹರನ ಕರುಣಾ ಸಿದ್ಧಿ ಸಾಧನವೆನಿಪ ಗಿರಿವನವ
ಮರುದಿವಸದುದಯದಲಿ ಮಿಂದನು
ಸರಸಿಯಲಿ ಸಂದ್ಯಾಭಿಮುಖದಲಿ
ತರಣಿಗರ್ಘ್ಯವನಿತ್ತು ದೇವವ್ರಜಕೆ ಕೈಮುಗಿದ ೪೧

ವಿನುತ ಶಾಂಭವ ಮಂತ್ರಜಪ ಸಂ
ಜನಿತ ನಿರ್ಮಲ ಭಾವಶುದ್ಧಿಯ
ಮನದೊಳರ್ಜುನನೆತ್ತಿ ನಿಂದನು ದೀರ್ಘ ಬಾಹುಗಳ
ನೆನಹು ನೆಮ್ಮಿತು ಶಿವನನಿತರದ
ನನೆಕೊನೆಯ ತೆರಳಿಕೆಯ ತೊಡಚೆಯ
ಮನದ ಸಂಚಲವೀಚುವೋದುದು ಕಲಿ ಧನಂಜಯನ ೪೨

ಮುಗುಳುಗಂಗಳ ಮೇಲು ಗುಡಿದೋ
ಳುಗಳ ಮಿಡುಕುವ ತುಟಿಯ ತುದಿಗಾ
ಲುಗಳ ಹೊರಿಗೆಯ ತಪದ ನಿರಿಗೆಯ ನಿಷ್ಪ್ರಕಂಪನದ
ಬಿಗಿದ ಬಿಲ್ಲಿನ ಬೆನ್ನ ಬತ್ತಳಿ
ಕೆಗಳ ಕಿಗ್ಗಟ್ಟಿನ ಕಠಾರಿಯ
ಹೆಗಲಡಾಯುಧ ಹೊಸತಪಸಿ ತೊಡಗಿದನು ಬಲುತಪವ ೪೩

ಅರಸ ಕೇಳೈ ವಿಪ್ರವೇಷವ
ಧರಿಸಿ ಧರೆಗಿಳಿದನು ಸುರೇಶ್ವರ
ತರಹರಿಸದೀ ಮಾತನೆಂದನು ನಿಜಕುಮಾರಂಗೆ
ಮರಿಚ ಮೌಕ್ತಿಕ ಲೋಹ ಹೇಮಾ
ಭರಣ ಚರ್ಮ ದುಕೂಲ ಮಿಳಿ ಹಾ
ದರಿಯ ಹೂವಿನ ದಂಡೆಗೇಕನಿವಾಸವೇಕೆಂದ ೪೪

ಆವ ಸೇರಿಕೆ ಜಪಕೆ ಚಾಪ ಶ
ರಾವಳಿಗೆ ಶಮೆ ದಮೆಗೆ ಖಡ್ಗಕಿ
ದಾವ ಸಮ್ಮೇಳನ ವಿಭೂತಿಗೆ ಕವಚ ಸೀಸಕಕೆ
ಆವುದಿದರಭಿಧಾನ ತಪವೋ
ಡಾವರಿಗ ವಿದ್ಯಾ ಸಮಾಧಿಯೊ
ನೀವಿದೆಂತಹ ಋಷಿಗೆಳೆಂಬುದನರಿಯೆ ನಾನೆಂದ ೪೫

ಕಂದೆರೆದು ನೋಡಿದನು ನೀವೇ
ನೆಂದರೆಯು ಹೃದಯಾಬ್ಜ ಪೀಠದ
ಲಿಂದುಮೌಳಿಯನಿರಿಸಿ ಮೆಚ್ಚಿಸುವೆನು ಸಮಾಧಿಯಲಿ
ಇಂದಿನೀ ಬಹಿರಂಗ ಚಿಹ್ನೆಯ
ಕುಂದು ಹೆಚ್ಚಿಸಲೇನು ಫಲವೆನ
ಲಂದು ತಲೆದೂಗಿದನು ಸುರಪತಿ ತೋರಿದನು ನಿಜವ ೪೬

ಮಗನೆ ನಿನ್ನಯ ಮನದ ನಿಷ್ಠೆಗೆ
ಸೊಗಸಿದೆನು ಪಿರಿದಾಗಿ ಹರನಿ
ಲ್ಲಿಗೆ ಬರಲಿ ಕರುಣಿಸಲಿ ನಿನ್ನ ಮನೋಭಿವಾಂಛಿತವ
ಹಗೆಗೆ ಹರಿವಹುದೆಂದು ಸುರ ಮೌ
ಳಿಗಳ ಮಣಿ ಸರಿದನು ವಿಮಾನದ
ಲಗಧರನ ಮೈದುನನ ಮಹಿಮೆಯನಿನ್ನು ಕೇಳೆಂದ ೪೭





ಕೃಪೆ :  http://gaduginabharata.blogspot.in/
Contributors