ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Thursday, July 28, 2011

ಜನುಮದ ಜಾತ್ರಿ .............ದ.ರಾ.ಬೇಂದ್ರೆ

ನೇತ್ರಪಲ್ಲವಿಯಿಂದ ಸೂತ್ರಗೊಂಬೀ ಹಾಂಗ
ಪಾತ್ರ ಕುಣಿಸ್ಯಾನ ಒಲುಮೀಗೆ | ದಿನದಿನ
ಜಾತ್ರಿಯೆನಿಸಿತ್ತ ಜನುಮವು. ||೧||

ಹುಬ್ಬು ಹಾರಸಿದಾಗ ಹಬ್ಬ ಎನಿಸಿತು ನನಗ
‘ಅಬ್ಬ’ ಎನಬೇಡs ನನ ಗೆಣತಿ | ಸಾವಿರಕ
ಒಬ್ಬ ನೋಡವ್ವ ನನ ನಲ್ಲ. ||೨||


ಕಣ್ಣೆವಿ ಎತ್ತಿದರ ಹುಣ್ಣೀವಿ ತೆರಧ್ಹಾಂಗ
ಕಣ್ಣು ಏನಂತ ಬಣ್ಣಿಸಲೆ | ಚಿತ್ತಕ್ಕ
ಕಣ್ಣು ಬರೆಧ್ಹಾಂಗ ಕಂಡಿತ್ತು. ||೩||

ಹೇಸಿರಲು ಈ ಜೀವ ಆಸಿ ಹುಟ್ಟಿಸುತಿತ್ತು
ಮೀಸಿ ಮೇಲೆಳೆದ ಕಿರಿಬೆರಳು | ಕೆಂಗಯ್ಯ
ಬೀಸಿ ಕರೆದಾನ ನನಗಂತ. ||೪||

ತಂಬುಲತುಟಿ ನಗಿ ಹೊಂಬಿಸಲೆಂಬಂತೆ
ಬಿಂಬಿಸಿತವ್ವಾ ಎದಿಯಾಗ | ನಂಬೀಸಿ
ರಂಬೀಸಿತವ್ವಾ ಜೀವವ. ||೫||
-- ದ.ರಾ.ಬೇಂದ್ರೆ

ಕೃಪೆ: ಸುನಾಥ್
ಮೂಲ ಲೇಖನ: http://sallaap.blogspot.com/2011/07/blog-post.html

ಸಂಯಮವುಳ್ಳ ಶಕ್ತಿ

ಅದೊಂದು ಕರಾಟೆ ತರಬೇತಿ ನೀಡುವ ಶಾಲೆ. ಆ ಶಾಲೆಯ ಮುಖ್ಯಗುರುಗಳು ಈ ಕಲೆಗಾಗಿ ಜೀವನವನ್ನೇ ಮುಡಿಪಾಗಿಟ್ಟು ತಮ್ಮ ಶಿಷ್ಯರಿಗೆಲ್ಲ ಆದರ್ಶಪ್ರಾಯರಾದವರು. ಅವರಿಗೆ ಕರಾಟೆಯ ಪಾಠ ಹೊಟ್ಟೆಪಾಡಿನ ಉದ್ಯೋಗವಾಗಿರಲಿಲ್ಲ, ತರುಣ, ತರುಣಿಯರ ಜೀವನವನ್ನು ಪರಿಷ್ಕಾರಗೊಳಿಸುವ ಒಂದು ಕ್ರಿಯೆಯಾಗಿತ್ತು.

ಹಲವಾರು ಮಕ್ಕಳು, ತರುಣರು ಇಲ್ಲಿ ಕರಾಟೆ ಕಲಿಯುತ್ತಿದ್ದರು. ಒಬ್ಬ ಹುಡುಗ ಈ ಗುರುಗಳ ಹತ್ತಿರ ತನ್ನ ಐದನೇ ವಯಸ್ಸಿನಿಂದ ಕರಾಟೆ ಕಲಿಯಲು ಬರುತ್ತಿದ್ದ. ಹದಿನೈದು ವರ್ಷಗಳ ನಿರಂತರ ಪರಿಶ್ರಮದ ಸಾಧನೆಯಿಂದ ಆತ ಅತ್ಯಂತ ಶ್ರೇಷ್ಠ ಕರಾಟೆ ಪಟುವಾಗಿ ಹೊಮ್ಮಿದ. ಅತ್ಯಂತ ಶ್ರೇಷ್ಠ ಕರಾಟೆ ಸಾಧನೆ ಮಾಡಿದವನಿಗೆ  ಬ್ಲ್ಯಾಕ್ ಬೆಲ್ಟ್  ಅಂದರೆ ಕಪ್ಪುಪಟ್ಟಿಯನ್ನು ನೀಡಲಾಗುತ್ತದೆ.

ಅದನ್ನು ವಿಶೇಷ ಸಮಾರಂಭದಲ್ಲಿ ನೀಡಲು ಆಯೋಜಿಸಲಾಗಿತ್ತು. ಅದು ಆ ತರುಣನ ಕರಾಟೆ ಜೀವನದ ಮರೆಯಲಾಗದ ಸಂದರ್ಭ. ಆತ ತುಂಬ ಖುಷಿಯಾಗಿದ್ದ. ಆ ದಿನವೂ ಬಂತು.

ಕಾರ್ಯಕ್ರಮವನ್ನು ನೋಡಲು ತುಂಬ ಜನ ಬಂದಿದ್ದರು. ಹುಡುಗ ಎದ್ದು ತನ್ನ ಕಪ್ಪು ಪಟ್ಟಿಯನ್ನು ಪಡೆಯಲು ಗುರುವಿನ ಪೀಠದತ್ತ ಸಾಗಿದ.

`ಕಪ್ಪುಪಟ್ಟಿ ಪಡೆಯುವ ಎ್ಲ್ಲಲ ಅರ್ಹತೆಯನ್ನು ನೀನು ಪಡೆದುಕೊಂಡಿರುವುದು ಸಂತೋಷ, ಆದರೆ ಅದನ್ನು ಪಡೆಯುವುದಕ್ಕೆ ಮುನ್ನ ಇನ್ನೊಂದು ಮಹತ್ವದ ಪರೀಕ್ಷೆಯಲ್ಲಿ ಉತ್ತಿರ್ಣನಾಗಬೇಕು`  ಎಂದರು ಗಂಭೀರವಾಗಿ ಗುರುಗಳು.

`ನಾನು ಸಿದ್ಧವಾಗಿದ್ದೇನೆ ಗುರುಗಳೇ`  ಎಂದ ಶಿಷ್ಯ. ಬಹುಶಃ ಮತ್ತೊಂದು ದೈಹಿಕ ಪರೀಕ್ಷೆ ಇದ್ದಿರಬೇಕು ಎಂದು ಭಾವಿಸಿದ.`ಈಗ ನಾನು ಕೇಳುವ ಬಹುಮುಖ್ಯವಾದ ಪ್ರಶ್ನೆಗೆ ನೀನು ಸರಿಯಾದ ಉತ್ತರ ನೀಡಬೇಕು. ಈ ಕಪ್ಪುಪಟ್ಟಿಯ (ಬ್ಲ್ಯಾಕ್ ಬೆಲ್ಟ್ )  ನಿಜವಾದ ಅರ್ಥವೇನು?`

`ಗುರುಗಳೇ ಬಂದು ರೀತಿಯಲ್ಲಿ ಇದು ಮಹಾನ್ ಪ್ರಯಾಣದ ಅಂತಿಮ ಹಂತ. ದೀರ್ಘ ಕಾಲದ ಪರಿಶ್ರಮದ ಕಲಿಕೆಗೆ ದೊರೆತ ಪಾರಿತೋಷಕ.`ಗುರುಗಳು ಕ್ಷಣಕಾಲ ಯಾವ ಮಾತೂ ಆಡದೇ ನಿಂತು ನಂತರ ನಿಧಾನವಾಗಿ ಹೇಳಿದರು, `ನೀನು ಇನ್ನೂ ಕಪ್ಪು ಪಟ್ಟಿಗೆ ಸಿದ್ಧನಾಗಿಲ್ಲ, ಇನ್ನೊಂದು ವರ್ಷ ಪ್ರಯತ್ನಮಾಡಿ ಮರುವರ್ಷ ಬಾ.`
ಒಂದು ವರ್ಷದ ನಂತರ ಮತ್ತೆ ತರುಣ ಮೊಣಕಾಲೂರಿ ಗುರುವಿನ ಮುಂದೆ ಕಪ್ಪು ಪಟ್ಟಿಗಾಗಿ ಕುಳಿತ.

`ಈಗ ಹೇಳು ಕಪ್ಪುಪಟ್ಟಿಯ ನಿಜವಾದ ಅರ್ಥವೇನು?`  ಕೇಳಿದರು ಗುರುಗಳು.  `ಪರಿಶ್ರಮ ಸಾರ್ಥಕವಾದದ್ದರ ಸಂಕೇತ ಈ ಕಪ್ಪುಪಟ್ಟಿ` ಎಂದು ನುಡಿದ ಶಿಷ್ಯ.
ಗುರು ಮತ್ತೆ ಕ್ಷಣಕಾಲ ಸುಮ್ಮನಿದ್ದು ತಲೆ ಅಲ್ಲಾಡಿಸಿ ಅಸಮ್ಮತಿ ವ್ಯಕ್ತಪಡಿಸಿ,  `ಮಗೂ, ನೀನು ಇನ್ನೊಂದು ವರ್ಷ ಸಾಧನೆ ಮುನ್ನಡೆಸಿ ಬಾ` ಎಂದು ನಡೆದುಬಿಟ್ಟರು.

ಮುಂದಿನ ವರ್ಷ ಅದೇ ದಿನ ಗುರುಗಳು ಮತ್ತೆ ಅದೇ ಪ್ರಶ್ನೆ ಕೇಳಿದರು.  `ಈ ಕಪ್ಪುಪಟ್ಟಿಯ ನಿಜವಾದ ಅರ್ಥವೇನು?`ಈ ಬಾರಿ ಹುಡುಗ ನಿಧಾನವಾಗಿ ಹೇಳಿದ,  `ಗುರುಗಳೇ ಈ ಕಪ್ಪುಪಟ್ಟಿ ಸಾಧನೆಯ ಅಂತ್ಯವಲ್ಲ, ಪ್ರಾರಂಭ.

ಸದಾ ಉನ್ನತದ ಸಾಧನೆಯೆಡೆಗೆ ತುಡಿಯುವ, ಎಂದಿಗೂ ಮುಗಿಯದ ಸಾಧನೆಯ ಪ್ರಯಾಣದ ಪ್ರಾರಂಭದ ಸಂಕೇತ. ಇದು ಅಸಾಮಾನ್ಯ ಶಕ್ತಿಯ ದ್ಯೋತಕವಲ್ಲ, ಶಕ್ತಿಯಿದ್ದೂ ಅದನ್ನು ದುರ್ಬಳಕೆ ಮಾಡದಿರುವ ಸಂಯಮದ ಸಂಕೇತ.`
ಗುರುಗಳು ತಲೆ ಅಲ್ಲಾಡಿಸಿ ಮೆಚ್ಚುಗೆ ಸೂಸಿ,  `ಈಗ ನೀನು ಕಪ್ಪುಪಟ್ಟಿಗೆ ಅರ್ಹನಾಗಿದ್ದೀಯಾ` ಎಂದು ಅವನನ್ನು ಅಪ್ಪಿಕೊಂಡು ಕಪ್ಪುಪಟ್ಟಿ ನೀಡಿದರು.

ರಾಕ್ಷಸರ ಹಾಗೆ ವಿಪರೀತ ಶಕ್ತಿ ಪಡೆಯುವುದು ದೊಡ್ಡದಲ್ಲ, ಭಾರೀ ಶಕ್ತಿ ಇದ್ದೂ ಅದನ್ನು ರಾಕ್ಷಸರ ಹಾಗೆ ಬಳಸದಿರುವುದು ಬಹುದೊಡ್ಡ ಶಕ್ತಿ. ಅದೇ ಸಂಯಮ.ಸಂಯಮವಿಲ್ಲದ ಶಕ್ತಿ ಘಾತಕವಾದದ್ದು. ಅದಕ್ಕೇ ಕವಿ ಹೇಳಿದ್ದು,  ವೈರಾಗ್ಯ, ಕಾರುಣ್ಯ ಮೇಳನವೇ ಧೀರತನ . ಕರುಣೆ, ಮತ್ತು ವೈರಾಗ್ಯವಿಲ್ಲದ ಶಕ್ತಿ ಅಪಾಯಕಾರಿಯಾದದ್ದು.

ಶಕ್ತಿ ಇದ್ದೂ ಅದನ್ನು ವೈರಾಗ್ಯದಿಂದ, ಕರುಣೆಯಿಂದ ಕಾಣುವ ಶಕ್ತಿಯೇ ಧೀರತನ, ಅದರಿಂದಲೇ ಜಗತ್ತಿನ ಬೆಳವಣಿಗೆ, ರಕ್ಷಣೆ ಸಾಧ್ಯವಾಗುತ್ತದೆ.

Krupe Prajavani  06 July 2011

Wednesday, July 27, 2011

ಸಂಸ್ಕಾರ.. ಮತ್ತು ಇತರ ಕಥೆಗಳು

ಕನ್ನಡದಲ್ಲಿ ದ್ವನಿ ಪುಸ್ತಕಗಳ ಸರಣಿಗೆ ಮತ್ತೋಂದು ಪುಸ್ತಕ.. ಸಂಸ್ಕಾರ.. ಮತ್ತು ಇತರ ಕಥೆಗಳು
ಅನಂತ ಮೂರ್ತಿಯವರ ಸಂಸ್ಕಾರ ಕಾದಂಬರಿಯನು ಸಿ ಅರ್ ಸಿಂಹ ವಾಚನ ಮಾಡಿದರೆ.
ಇತರೆ ಕಥೆಗಳು - ಕಾರ್ತಿಕ ಮತ್ತು ಸೂರ್ಯನ ಕುದರೆಯನ್ನು..ರೇಖಾ ಮತ್ತು ಋತ್ವಿಕ ಸಿಂಹ ರವರು ವಾಚನ ಮಾಡಿದರೆ....  9.23 ಗಂಟೆಗಳ.. ದ್ವನಿ ಪುಸ್ತಕ ಇದು...

http://www.bookstalk.in/

Monday, July 25, 2011

ಉಶೀನರ ಎಂಬ ಮಹಾದಾನಿ -

ನಮ್ಮ ದೇಶದಲ್ಲಿ ಅನೇಕ ದಾನಿಗಳು ಆಗಿ ಹೋಗಿದ್ದಾರೆ. ಅವರ ದಾನದ ಕಥೆಗಳು ಅನೇಕರಿಗೆ ಸ್ಫೂರ್ತಿ ನೀಡಿವೆ. ಆದರೆ ಕೆಲವೊಂದು ಪ್ರಸಂಗಗಳು ಹೆಚ್ಚು ಪ್ರಸಿದ್ಧಿಯನ್ನು ಪಡೆದಿಲ್ಲ. ಅಂಥ ಹೆಚ್ಚು ಪ್ರಚಾರ ಪಡೆಯದ ಒಬ್ಬ ದಾನಿ ಉಶೀನರ. ಈ ಕಥೆ ಮಹಾಭಾರತದ ವನಪರ್ವದಲ್ಲಿ ಬಂದಿದೆ.

ಉಶೀನರ ಭೋಜನಗರದಲ್ಲಿ  ಒಂದು ಕಾಲದಲ್ಲಿ  ಮಹಾಪ್ರತಾಪಶಾಲಿಯಾದ ರಾಜನಾಗಿದ್ದ. ಆತ ತುಂಬ ಉದಾರಿಯೆಂತಲೂ, ಪರೋಪಕಾರಿ ಹಾಗೂ ಮಹಾದಾನಿ ಎಂತಲೂ ಪ್ರಸಿದ್ಧನಾಗಿದ್ದ.

ಇವನ ದಾನಶೀಲತೆಯ ಕೀರ್ತಿ ಮೂರು ಲೋಕಗಳಲ್ಲೂ ಹರಡಿತ್ತು. ಈ ವಿಷಯ ದೇವತೆಗಳ ನಾಯಕನಾದ ದೇವೇಂದ್ರನನ್ನು ಮುಟ್ಟಿತು. ಬಹುಶಃ ಮಾನವರ ಸಾಧನೆಗಳು ದೇವತೆಗಳಲ್ಲೂ ಅಸೂಯೆಯನ್ನು ಉಂಟುಮಾಡುತ್ತಿದ್ದವೆಂದು ತೋರುತ್ತದೆ.

ಇಂದ್ರನಿಗೆ ಉಶೀನರನ ದಾನ ಮಾಡುವ ಮನಸ್ಸು ಯಾವ ಮಟ್ಟದವರೆಗೂ ಹೋಗಬಲ್ಲುದು ಎಂಬುದನ್ನು ಪರೀಕ್ಷಿಸುವ ಮನಸ್ಸಾಯಿತು. ಈ ಪರೀಕ್ಷೆ ನಡೆಸುವುದಕ್ಕಾಗಿ ಆತ ಇತರ ದೇವತೆಗಳ ಸಹಾಯ ಕೇಳಿದ.

ಅಗ್ನಿಯನ್ನು ಕರೆದು ಒಂದು ಪಾರಿವಾಳದ ರೂಪವನ್ನು ಪಡೆಯಲು ಹೇಳಿದ. ತಕ್ಷಣ ಪಾರಿವಾಳದ ರೂಪದಲ್ಲಿ ಅಗ್ನಿ ನಿಂತ. ಇಂದ್ರ ಸ್ವತಃ ತಾನೇ ನಾಯಿಯ ರೂಪ ತಾಳಿ ಪಾರಿವಾಳವನ್ನು ಹಿಡಿಯಲು ಬೆನ್ನು ಹತ್ತಿದ.

ಗಾಬರಿಯಾದ ಪಾರಿವಾಳ ಹಾರುತ್ತ ಹಾರುತ್ತ ಉಶೀನರನ ಬಳಿಗೆ ಬಂದಿತು. ರಾಜ ತುಂಬ ದಯಾಳುವಲ್ಲವೇ? ಅದಕ್ಕೆ ಶರಣಾಗತಿಯನ್ನು ನೀಡಿದ. ಅದರ ಹಿಂದೆಯೇ ನಾಯಿಯೂ ಓಡಿ ಬಂತು. ತನಗೆ ಆಹಾರವಾಗಬೇಕಿದ್ದ ಪಾರಿವಾಳದ ಕಡೆಗೆ ನುಗ್ಗಲು ನೋಡಿತು. ಅದನ್ನು ಉಶೀನರ ತಡೆದು ನಿಲ್ಲಿಸಿದ.

ಆಗ ನಾಯಿ ಹೇಳಿತು,  `ರಾಜಾ, ನೀನು ಮಾಡುವುದು ಅನ್ಯಾಯ. ಅದು ನನ್ನ ಆಹಾರ. ಅಲ್ಲಿಂದ ಇಲ್ಲಿಯವರೆಗೂ ಅದನ್ನು ಅಟ್ಟಿಸಿಕೊಂಡು ಬಂದಿದ್ದೇನೆ. ನನಗೆ ಬೆಳಿಗ್ಗಿನಿಂದ ಯಾವ ಆಹಾರವೂ ದೊರೆತಿಲ್ಲ.

ಈ ಪಾರಿವಾಳವೇ ನನ್ನ ಇಡೀ ಮನೆಮಂದಿಗೆಲ್ಲ ಆಹಾರ. ಇದು ಸಿಗದಿದ್ದರೆ ನನ್ನ ಹೆಂಡತಿ, ಮಕ್ಕಳು ಮತ್ತು ನಾನು ಉಪವಾಸದಿಂದ ಸಾಯಬೇಕಾಗುತ್ತದೆ. ಆದ್ದರಿಂದ ಪಾರಿವಾಳವನ್ನು ನನಗೆ ಕೊಟ್ಟು ಬಿಡು.`

ರಾಜ ಈಗಾಗಲೇ ಪಾರಿವಾಳಕ್ಕೆ ರಕ್ಷಣೆಯ ಅಭಯವನ್ನು ನೀಡಿದ್ದಾಗಿದೆ. ಅದನ್ನು ನಾಯಿಗೆ ಒಪ್ಪಿಸುವುದು ಸಾಧ್ಯವಿಲ್ಲ. ಆದರೆ ನಾಯಿಯ ವಾದವೂ ಸರಿಯಾದದ್ದೇ. ಅದಕ್ಕೆ ತನ್ನ ಆಹಾರವನ್ನು ಪಡೆದುಕೊಳ್ಳುವ ಅಧಿಕಾರವಿದೆ.

ಪಾರಿವಾಳವನ್ನು ಅದಕ್ಕೆ ಕೊಡದಿದ್ದರೆ ನಾಯಿಗೆ ಅಪಚಾರ ಮಾಡಿದಂತಾಗುತ್ತದೆ. ಹೀಗೆ ಯೋಚಿಸಿ ಉಶೀನರ ನಾಯಿಗೆ ಹೇಳಿದ, `ಪಾರಿವಾಳಕ್ಕೆ ನಾನು ರಕ್ಷಣೆ ನೀಡಿದ್ದರಿಂದ ಅದನ್ನು ನಿನಗೆ ಕೊಡಲಾರೆ.

ಆದರೆ ನೀನೂ ಉಪವಾಸ ಬೀಳಬಾರದು. ಅದಕ್ಕೆ ಪಾರಿವಾಳದ ತೂಕದ ಮಾಂಸವನ್ನು ನನ್ನ ದೇಹದಿಂದ ಕೊಡುತ್ತೇನೆ` ಎಂದು ಹೇಳಿ ತಕ್ಕಡಿಯನ್ನು ತರಿಸಿ ಅದರ ಒಂದು ತಟ್ಟೆಯಲ್ಲಿ ಪಾರಿವಾಳವನ್ನಿಟ್ಟು ಮತ್ತೊಂದರಲ್ಲಿ ತನ್ನ ದೇಹದ ಭಾಗಗಳನ್ನು ಕತ್ತರಿಸಿ ಹಾಕುತ್ತ ಬಂದ.

ಅದೆಷ್ಟು ಮಾಂಸವನ್ನು ಹಾಕಿದರೂ ಪಾರಿವಾಳದ ತಟ್ಟೆ ಮೇಲಕ್ಕೇರುತ್ತಲೇ ಇಲ್ಲ! ಕೊನೆಗೆ ತಾನೇ ತಟ್ಟೆಯಲ್ಲಿ ಕುಳಿತು ತನ್ನ ಇಡೀ ದೇಹವನ್ನೇ ಸಮರ್ಪಿಸಿಕೊಂಡ. ಈ ಸರ್ವಾರ್ಪಣ ಭಾವವನ್ನು ಕಂಡು ಇಂದ್ರ, ಅಗ್ನಿ ತೃಪ್ತರಾಗಿ, ಪ್ರತ್ಯಕ್ಷವಾಗಿ ಅವನು ಮತ್ತೆ ಮೊದಲಿನಂತಾಗುವಂತೆ ವರ ನೀಡಿದರು. ಅವನ ಖ್ಯಾತಿ ಮತ್ತಷ್ಟು ಹೆಚ್ಚಿತು.

ಘನವಾದ ತತ್ವವೊಂದಕ್ಕೆ ದಿನರಾತ್ರಿ ಮನಸೋತು, ಬೇರೆ ಏನನ್ನೂ ಚಿಂತಿಸದೇ ಸದಾ ಅದೇ ತತ್ವಕ್ಕೇ ತನ್ನನ್ನು ತೆತ್ತುಕೊಂಡು ಜೀವಭಾರವನ್ನು ಮರೆತ ಇಂಥ ಮಹಾನುಭಾವರ ಜೀವನ ಅಸಾಮಾನ್ಯವಾದದ್ದು

Krupe: : Prajavani  - July 15, 2011
http://www.prajavani.net/web/include/story.php?news=1649&section=136&menuid=14

Sunday, July 24, 2011

ವಿಚಿತ್ರ ತೀರ್ಮಾನ

ಅವನೊಬ್ಬ ಹತ್ತಿಯ ವ್ಯಾಪಾರಿ. ತಾನು ರೈತರಿಂದ ಹತ್ತಿಯನ್ನು ಕೊಂಡು, ಅದನ್ನು ಬಿಗಿಯಾಗಿ ಹಗ್ಗದಿಂದ ಕಟ್ಟಿ ದಿಂಡುಗಳನ್ನು ಮಾಡಿ ಪಟ್ಟಣಕ್ಕೆ ಒಯ್ದು ಹೆಚ್ಚಿನ ಹಣಕ್ಕೆ ಮಾರಿ ಬರುತ್ತಿದ್ದ. ಅವನ ಜೀವನ ಸುಖವಾಗಿ ಸಾಗುತ್ತಿತ್ತು.

ಒಂದು ದಿನ ಹೀಗೆ ಐವತ್ತು ಹತ್ತಿಯ ದಿಂಡುಗಳನ್ನು ಬಂಡಿಯಲ್ಲಿ ತೆಗೆದುಕೊಂಡು ಹೋಗುತ್ತಿರುವಾಗ ದಾರಿಯಲ್ಲಿ ಊಟಕ್ಕೆಂದು ಮರದ ಕೆಳಗೆ ಕುಳಿತ. ಊಟವಾದ ಮೇಲೆ ವಿಶ್ರಾಂತಿ ಪಡೆಯಲು ಮಲಗಿದ. ಆ ಮರದ ಕೆಳಗೆ ಒಂದು ಸುಂದರವಾದ ಬುದ್ಧನ ವಿಗ್ರಹ. ಅದರ ಮುಂದೆಯೇ ಮಲಗಿದ. ಎಚ್ಚರವಾದ ಮೇಲೆ ನೋಡುತ್ತಾನೆ,

ತನ್ನ ಬಂಡಿ ಪೂರ್ತಿ ಖಾಲಿಯಾಗಿದೆ. ಎಲ್ಲ ಹತ್ತಿಯ ದಿಂಡುಗಳನ್ನು ಯಾರೋ ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ! ಯಾರನ್ನಾದರೂ ಕೇಳೋಣವೆಂದರೆ ಬುದ್ಧನ ವಿಗ್ರಹದ ಹೊರತು ಯಾರೂ ಅಲ್ಲಿ ಇಲ್ಲ. ಅವನು ತಕ್ಷಣವೇ ಹೋಗಿ ನ್ಯಾಯಾಧಿಕಾರಿಗೆ ದೂರು ಒಪ್ಪಿಸಿದ.

ಆ ನ್ಯಾಯಾಧೀಶ ಎಲ್ಲ ವಿಷಯವನ್ನು ಕೇಳಿ ತಿಳಿದುಕೊಂಡು ಒಂದು ತೀರ್ಮಾನಕ್ಕೆ ಬಂದ. ಆ ಹತ್ತಿಯ ದಿಂಡುಗಳನ್ನು ಬುದ್ಧನ ವಿನಾ ಇನ್ನಾರೂ ಕದ್ದಿರುವುದಕ್ಕೆ ಸಾಧ್ಯವಿಲ್ಲ, ಯಾಕೆಂದರೆ ಅಲ್ಲಿ ಮತ್ತಾರೂ ಇರಲಿಲ್ಲ. ಆದ್ದರಿಂದ ಬುದ್ಧನನ್ನು ನ್ಯಾಯಾಲಯಕ್ಕೆ ಕರೆತರುವಂತೆ ಅಪ್ಪಣೆ ಮಾಡಿದ. ಅಧಿಕಾರಿಗಳು ಕಷ್ಟಪಟ್ಟು ವಿಗ್ರಹವನ್ನು ಹೊತ್ತು ತಂದರು.

ನ್ಯಾಯಾಲಯದಲ್ಲಿ ಜನಸಂದಣಿ. ಇದೆಂಥ ವಿಚಾರಣೆ? ಬುದ್ಧನ ವಿಗ್ರಹ ಹತ್ತಿಯ ದಿಂಡುಗಳನ್ನು ಕಳವು ಮಾಡುವುದುಂಟೇ? ಒಂದು ವೇಳೆ ಬುದ್ಧನೇ ಕಳವು ಮಾಡಿದ್ದು ನಿಜವೆಂದು ತೀರ್ಮಾನವಾದರೆ ದಿಂಡುಗಳನ್ನು ವ್ಯಾಪಾರಿಗೆ ಯಾರು ಕೊಡುವವರು?

ನ್ಯಾಯಾಧೀಶ ಗಂಭೀರವಾಗಿ ಬಂದು ತನ್ನ ಆಸನದಲ್ಲಿ ಕುಳಿತ. ಎಲ್ಲರೂ ಕುತೂಹಲದಿಂದ ಕಲಾಪವನ್ನು ಗಮನಿಸುತ್ತಿದ್ದರು. ನ್ಯಾಯಾಧೀಶ ವ್ಯಾಪಾರಿಗೆ ಮತ್ತೊಮ್ಮೆ ತನ್ನ ತಕರಾರನ್ನು ವಿವರಿಸಲು ಹೇಳಿದ. ಆತ ಚಾಚೂ ತಪ್ಪದಂತೆ ಎಲ್ಲವನ್ನೂ ವಿವರಿಸಿ. ತನ್ನ ಕಳವಾದ ಮಾಲನ್ನು ಹೇಗಾದರೂ ಹುಡುಕಿಕೊಡುವಂತೆ ಬೇಡಿಕೊಂಡ. ನ್ಯಾಯಾಧೀಶ ಅದೇ ಗಂಭೀರತೆಯಿಂದ ನ್ಯಾಯಾಲಯದಲ್ಲಿ ಇಡಲಾಗಿದ್ದ ಬುದ್ಧನ ವಿಗ್ರಹಕ್ಕೆ ಕೇಳಿದ,  `ಈ ತಕರಾರಿನ ಬಗ್ಗೆ ನಿನಗೇನಾದರೂ ಹೇಳುವುದು ಇದೆಯೇ?`  ಜನರೆಲ್ಲ ಗೊಳ್ಳೆಂದು ನಕ್ಕರು. ವಿಗ್ರಹ ಮಾತನಾಡುವುದುಂಟೇ? ನ್ಯಾಯಾಧೀಶ ಮೇಜು ಕುಟ್ಟಿ ಹೇಳಿದ,  `ಸದ್ದು, ನ್ಯಾಯಾಲಯದಲ್ಲಿ ಈ ರೀತಿಯ ಗಲಾಟೆ ಆಗಕೂಡದು`.  ಜನ ಸ್ತಬ್ಧರಾದರು.

ಮತ್ತೆ ನ್ಯಾಯಾಧೀಶ ಬುದ್ಧನ ವಿಗ್ರಹದ ಕಡೆಗೆ ನೋಡಿ ಹೇಳಿದ,  `ನಿನಗೆ ಹೇಳುವುದು ಏನೂ ಇಲ್ಲದಿದ್ದರೆ ನಾನು ತೀರ್ಪು ನೀಡಬೇಕಾಗುತ್ತದೆ ಮತ್ತು ನಾನು ನೀಡುವ ತೀರ್ಪಿಗೆ ನೀನು ಬದ್ಧನಾಗಬೇಕಾಗುತ್ತದೆ.` ವಿಗ್ರಹ ಏನು ಹೇಳೀತು?

ನಿಧಾನವಾಗಿ ನ್ಯಾಯಾಧೀಶ ತೀರ್ಪು ಕೊಟ್ಟ.  `ಅಪರಾಧಿ ಬುದ್ಧನೇ. ಅವನೇ ಹತ್ತಿಯ ದಿಂಡುಗಳನ್ನು ಕದ್ದು ಬೇರೆಯವರಿಗೆ ಮಾರಿದ್ದಾನೆ. ಯಾಕೆಂದರೆ ಅಪರಾಧ ನಡೆದಾಗ ಅವನ ವಿನಾ ಮತ್ತಾರೂ ಇರಲೇ ಇಲ್ಲ. ಆದ್ದರಿಂದ ಮೂರು ದಿನದ ಒಳಗಾಗಿ ಆತ ಕದ್ದ ಮಾಲನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು.` ಜನಕ್ಕೆ ನಗು ತಡೆಯಲಾಗಲಿಲ್ಲ. ಈ ನ್ಯಾಯಾಧೀಶನ ಮೂರ್ಖತನಕ್ಕೆ ಅವರು ಕೈ ತಟ್ಟಿ ಜೋರಾಗಿ ನಕ್ಕರು.

ನ್ಯಾಯಾಲಯ ಗದ್ದಲಮಯವಾಯಿತು. ತಕ್ಷಣ ನ್ಯಾಯಾಧೀಶ ಹೇಳಿದ,  `ನಾನು ಆಗಲೇ ನಿಮಗೆ ತಾಕೀತು ಮಾಡಿದ್ದೆ, ನ್ಯಾಯಾಲಯದ ಗೌರವಕ್ಕೆ ಕುಂದುಬರದ ಹಾಗೆ ನಡೆದುಕೊಳ್ಳಬೇಕು ಎಂದು. ನೀವು ಅದಕ್ಕೆ ಭಂಗ ತಂದಿದ್ದೀರಿ. ಆದ್ದರಿಂದ ನಿಮಗೆಲ್ಲ ಶಿಕ್ಷೆ ನೀಡಲೇಬೇಕು. ಅಧಿಕಾರಿಗಳು ಇಲ್ಲಿರುವ ಎಲ್ಲರ ಹೆಸರು, ವಿಳಾಸಗಳನ್ನು ಬರೆದುಕೊಳ್ಳಬೇಕು. ಮತ್ತು ಪ್ರತಿಯೊಬ್ಬರೂ ಇನ್ನು ನಾಲ್ಕು ತಾಸಿನಲ್ಲಿ ಮೂರು ಮೂರು ಹತ್ತಿಯ ದಿಂಡುಗಳನ್ನು ದಂಡವಾಗಿ ತಂದು ನ್ಯಾಯಾಲಯಕ್ಕೆ ಒಪ್ಪಿಸಬೇಕು.`

ಅನಿವಾರ್ಯವಾಗಿ ಎಲ್ಲರೂ ಮೂರು ದಿಂಡುಗಳನ್ನು ತಂದಿಟ್ಟರು. ಮೂಟೆಗಳನ್ನು ಕಳೆದುಕೊಂಡ ವ್ಯಾಪಾರಿ ಈ ರಾಶಿಗಳೊಳಗೆ ತನ್ನ ದಿಂಡುಗಳನ್ನು ಗುರುತಿಸಿದ. ಯಾಕೆಂದರೆ ಅವನು ತನ್ನ ದಿಂಡುಗಳ ಮೇಲೆ ನೀಲಿ ಬಣ್ಣದ ಗುರುತು ಮಾಡಿದ್ದ. ನ್ಯಾಯಾಧೀಶನ ಬುದ್ಧಿವಂತಿಕೆಯಿಂದ ನಿಜವಾದ ಕಳ್ಳರು ಸಿಕ್ಕಿಬಿದ್ದರು.

ಕೆಲವೊಂದು ಬಾರಿ ಕೆಲವು ವಿಚಾರಗಳು ಮೇಲ್ನೋಟಕ್ಕೆ ವಿಚಿತ್ರ, ಅಸಂಬದ್ಧ ಎನ್ನಿಸಿದರೂ ಆಳದಲ್ಲಿ ನೋಡಿದಾಗ ಚಿಂತನೆ ಕಂಡುಬರುತ್ತದೆ. ಆದ್ದರಿಂದ ಯಾವುದೇ ಚಿಂತನೆ, ನಮ್ಮ ಮನಸ್ಸಿಗೆ ಸರಿ ತೋರಲಿಲ್ಲವೆಂದಾಗ ಅದನ್ನು ಅಪ್ರಸ್ತುತ, ಅಪ್ರಯೋಜಕ ಎಂದು ತಳ್ಳಿಹಾಕುವುದು ಬುದ್ಧಿವಂತಿಕೆಯ ಲಕ್ಷಣವಲ್ಲ.  22- July 11

Saturday, July 23, 2011

ಧರ್ಮಶ್ರಿ , ಮತ್ತು ಕಂಬರರವ ಸಿಂಗಾರೆವ್ವ ಮತ್ತು ಅರಮನೆ


ಕನ್ನಡದಲ್ಲಿ ದ್ವನಿ ಪುಸ್ತಕಗಳ.. ಯುಗ ಪ್ರರಂಭವಾಗಿದೆ.. ಎಸ್ ಎಲ್  ಭೈರಪ್ಪರವ ಧರ್ಮಶ್ರಿ , ಮತ್ತು ಕಂಬರರವ ಸಿಂಗಾರೆವ್ವ ಮತ್ತು ಅರಮನೆ,, ಮತ್ತು ೩-೪ ಪುಸ್ತಕಗಳು ತುಂಬ ದಿನಗಳ ಹಿಂದೆ.. ಬಿಡುಗಡೆಯಗಿದೆ..

ಓದುಲು ಸಮಯ ಇಲ್ಲದವರು ಕೇಳಿ ಅನಂದೆಸಬಹುದು...

ಕನ್ನಡಿಗರೆ... ಕೊಂಡು ಕೇಳಿ.. ಮತ್ತು ಪುಸ್ತಕಗಳು ಪ್ರಕಟವಾಗಲು.. ಸಹಕರ ನೀಡಿ

ಆರ್ಥರ್ ಆಶ್

ಆರ್ಥರ್ ಆಶ್ ಟೆನಿಸ್ ಇತಿಹಾಸದಲ್ಲಿ ಬಹುದೊಡ್ಡ ಹೆಸರು. ಅದು ಬರೀ ಟೆನಿಸ್ ನಲ್ಲಿ ಮಾತ್ರ ದೊಡ್ಡ ಹೆಸರಲ್ಲ. ಆಶಾವಾದಕ್ಕೆ, ಸಮಾಜ ಸುಧಾರಣೆಗೆ, ಅಸಮಾನತೆಯ ನಿವಾರಣೆಗೆ ತನ್ನನ್ನು ಆಳವಾಗಿ ತೊಡಗಿಸಿಕೊಂಡ ಹೆಸರು ಆರ್ಥರ್ ಆಶ್.

ಆರ್ಥರ್ ಆಶ್ ಹುಟ್ಟಿದ್ದು ಜುಲೈ 10, 1948 ರಂದು ಅಮೆರಿಕೆಯ ವರ್ಜಿನಿಯಾದ ರಿಚ್‌ಮಂಡ್‌ನಲ್ಲಿ. ತಂದೆ ಬ್ರೂಕ್‌ಫೀಲ್ಡ್ ಆಟದ ಮೈದಾನದ ಹೊರಗಿದ್ದ ಕಾರುಗಳನ್ನು ನಿಲ್ಲಿಸುವ ಸ್ಥಳದ ವಿಶೇಷ ಪೋಲೀಸ್ ಆಗಿದ್ದರು. ಮಗನನ್ನು ತುಂಬ ಪ್ರೀತಿಯಿಂದ ಆದರೆ ಶಿಸ್ತಿನಿಂದ ಬೆಳೆಸಿದರು. ಈ ಹುಡುಗ ಬೆಳೆದದ್ದೇ ಟೆನಿಸ್ ಮೈದಾನಗಳಲ್ಲಿ. ಮೈ ತುಂಬಿಕೊಳ್ಳದೇ ಕಡ್ಡಿಯ ಹಾಗೆ ಆರಡಿ ಒಂದು ಇಂಚು ಎತ್ತರಕ್ಕೆ ಬೆಳೆದ.

ತನ್ನ ಏಳನೇ ವಯಸ್ಸಿಗೆ ಟೆನಿಸ್ ಆಡಲು ಪ್ರಾರಂಬಿಸಿದ ಆಶ್, ಹದಿನೇಳನೇ ವಯಸ್ಸಿಗೆ ರಾಷ್ಟ್ರೀಯ ಜ್ಯೂನಿಯರ್ ಚಾಂಪಿಯನ್ ಆದ. ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯಲು ವಿದ್ಯಾರ್ಥಿವೇತನ ಪಡೆದು ಹೋದ. ವರ್ಣಭೇದ ನೀತಿ ಹೆಚ್ಚಾಗಿದ್ದ ಕಾಲದಲ್ಲಿ ಈ ಕಪ್ಪು ಹುಡುಗ ಮುಂದೆ ಬೆಳೆಯುವುದು ತುಂಬ ಕಷ್ಟವಿತ್ತು. ಎಷ್ಟೋ ಟೆನಿಸ್ ಮೈದಾನಗಳಲ್ಲಿ ಈತನಿಗೆ ಪ್ರವೇಶ ದೊರೆಯುತ್ತಿರಲಿಲ್ಲ. ಆದರೆ ಅವನ ಏಕಾಗ್ರ ಚಿತ್ತ ಮತ್ತು ಸತತ ಪ್ರಯತ್ನ ಯಾವುದನ್ನೂ ಲೆಕ್ಕಿಸದೇ ಮುಂದೆ ನಡೆಸುತ್ತಿತ್ತು.

1966 ರಲ್ಲಿ ಆತ ಅಮೆರಿಕೆಯ ಡೆವಿಸ್ ಕಪ್ ತಂಡಕ್ಕೆ ಆಯ್ಕೆಯಾಗಿದ್ದ ಮೊದಲ ಕಪ್ಪು ವ್ಯಕ್ತಿಯಾಗಿದ್ದ. 1968 ರಲ್ಲಿ ಅಮೆರಿಕೆಯ ಓಪನ್ ಟೆನಿಸ್‌ನ ಚಾಂಪಿಯನ್ನಾಗಿ ಜಗತ್ತನ್ನು ಬೆರಗುಗೊಳಿಸಿದ. ಮುಂದೆ 1970 ರಲ್ಲಿ ಆಸ್ಟ್ರೇಲಿಯನ್ ಓಪನ್ ಟೆನಿಸ್‌ನ ಚಾಂಪಿಯನ್ ಆದ. 1975 ರಲ್ಲಿ ಪ್ರಪಂಚದ ಅತ್ಯಂತ ಶ್ರೇಷ್ಠ ಹಾಗೂ ಪ್ರತಿಷ್ಠೆಯ ಇಂಗ್ಲೆಂಡಿನ ವಿಂಬಲ್ಡನ್ ಪ್ರಶಸ್ತಿಯನ್ನು ಆಗಿನ ಚಾಂಪಿಯನ್ ಆಗಿದ್ದ ಜಿಮ್ಮಿ ಕಾನರ್ಸನನ್ನು ಸೋಲಿಸಿ ಗೆದ್ದ. ಹಾಗೆ ಪ್ರಶಸ್ತಿ ಪಡೆದ ಮೊದಲ ಕರಿಯ ವ್ಯಕ್ತಿ ಎಂದು ಮನ್ನಣೆ ಪಡೆದ, ಪ್ರಪಂಚದ ನಂಬರ್ ಒಂದನೇ ಆಟಗಾರನಾದ.

ಇದಿಷ್ಟೇ ಆಗಿದ್ದರೆ ಅದೊಂದು ಕ್ರೀಡಾಪಟುವಿನ ಸಾಧನೆಯ ಕಥೆಯಾಗುತ್ತಿತ್ತು. ಆದರೆ ಆತ ವರ್ಣಭೇದ ನೀತಿಯ  ವಿರುದ್ಧ ಹೊರಾಡಿದ್ದೂ ಒಂದು ವಿಶೇಷ ಗಾಥೆ.

ಬಹಿಷ್ಕಾರವಿದ್ದರೂ ಆಗ ದಕ್ಷಿಣ ಆಫ್ರಿಕೆಗೆ ಹೋಗಿ ನೆದರ್ಲೆಂಡಿನ ಬಿಳಿಯ ಆಟಗಾರ ಆಕರ್‌ನೊಡನೆ ಸೇರಿ ಡಬಲ್ಸ್ ಪ್ರಶಸ್ತಿಯನ್ನು ಗೆದ್ದ. ಅಷ್ಟೇ ಅಲ್ಲ ಅಲ್ಲಿಯ ಜನರ ಮನಸ್ಸನ್ನು ಗೆದ್ದ. ಅವರು ಆತನಿಗೊಂದು ವಿಶೇಷ ಹೆಸರು ನೀಡಿದರು -  ಸಿಫೋ . ಝುಲು ಭಾಷೆಯಲ್ಲಿ ಸಿಫೋ ಎಂದರೆ  ಭಗವಂತ ನೀಡಿದ ಕಾಣಿಕೆ .

 1979 ರಲ್ಲಿ ಅವನಿಗೆ ಹೃದಯಘಾತವಾಗಿ ನಾಲ್ಕು ರಕ್ತನಾಳಗಳ ಬದಲಾವಣೆಯಂತಹ ಭಾರೀ ಶಸ್ತ್ರಚಿಕಿತ್ಸೆಯಾದರೂ ಪಾರಾಗಿ ಬದುಕಿದ. ಅಷ್ಟಾದರೂ ಅಮೆರಿಕೆಯ ತಂಡಕ್ಕೆ ತರಬೇತುದಾರನಾಗಿ ಮುಂದುವರೆದ. 1983 ರಲ್ಲಿ ಮತ್ತೊಮ್ಮೆ ಹೃದಯಘಾತವಾಗಿ ಶಸ್ತ್ರಚಿಕಿತ್ಸೆಗೆ ಒಳಗಾದ. ಇದಕ್ಕಿಂತ ಹೆಚ್ಚಿನ ಆಘಾತವೆಂದರೆ 1988 ರಲ್ಲಿ ಅವನಿಗೆ ಭಯಂಕರವಾದ ಏಡ್ಸ್ ರೋಗ ತಗುಲಿದೆ ಎಂದು ಗೊತ್ತಾಯಿತು. ಬಹುಶಃ ಎರಡು ಬಾರಿ ಶಸ್ತ್ರಚಿಕಿತ್ಸೆಯಾದಾಗ ನೀಡಿದ ಯಾವುದೋ ರಕ್ತದಲ್ಲಿ ಬಂದ ಸೋಂಕು ಅದು. ಮುಂದೆ ಆರು ವರ್ಷ ಅದರೊಡನೆ ಹೋರಾಟ. ಏಡ್ಸ್ ರೋಗದ ವಿರುದ್ಧ ನಡೆದ ಹೋರಾಟಗಳಿಗೆಲ್ಲ ನೇತಾರನಾದ. ಇದರೊಂದಿಗೆ ತನ್ನ ಜೀವನ ಚರಿತ್ರೆ ಬರೆದ. ಅವನ ಗ್ರಂಥ,  `ಯಶಸ್ಸಿನೆಡೆಗೆ ಕಠಿಣ ದಾರಿ`  (ಎ ಹಾರ್ಡ್ ರೋಡ್ ಟು ಗ್ಲೋರಿ) 1,600 ಪುಟಗಳ ಬೃಹತ್ ಗ್ರಂಥ. ಇದು ಎಷ್ಟು ಮೆಚ್ಚಿಗೆ ಪಡೆಯಿತೆಂದರೆ ಅವನಿಗೆ ಅಮೆರಿಕೆಯ ಅನೇಕ ವಿಶ್ವವಿದ್ಯಾಲಯಗಳ ಡಾಕ್ಟರೇಟ್ ನೀಡಲಾಯಿತು.

ಅವನಿಗಾದ ನೋವನ್ನು ಕಂಡು ಅಭಿಮಾನಿಯೊಬ್ಬ ಕೇಳಿದ,  `ಭಗವಂತ ನೀನೇಕೆ ಹೀಗೆ ಮಾಡಿದೆ ಎಂದು ಕೇಳಬಾರದೇ?`  ಅದಕ್ಕೆ ಆಶ್ ಕೊಟ್ಟ ಉತ್ತರ ಅಸಾಮಾನ್ಯ. ಅತ ಹೇಳಿದ,  `ಪ್ರಪಂಚದಲ್ಲಿ ಐದಾರು ಕೋಟಿ ಹುಡುಗರು ಟೆನಿಸ್ ಆಡಲು ಪ್ರಾರಂಭಿಸಿರಬೇಕು. ಅದರಲ್ಲಿ ಒಂದು ಐದಾರು ಲಕ್ಷ ತರುಣರು ರಾಜ್ಯ ಮಟ್ಟದಲ್ಲಿ, ಐದು ಸಾವಿರ ತರುಣರು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಿರಬಹುದು. ಅವರಲ್ಲಿ ಕೇವಲ ಐವತ್ತು ಜನ ವಿಂಬಲ್ಡನ್‌ನ ಪ್ರಾಥಮಿಕ ಹಂತಕ್ಕೆ ಆಯ್ಕೆಯಾಗುತ್ತಾರೆ. ಕೇವಲ ಎಂಟು ಜನ ಕ್ವಾರ್ಟರ್ ಫೈನಲ್ಲಿಗೆ, ನಾಲ್ಕು ಜನ ಸೆಮಿ ಫೈನಲ್ಲಿಗೆ ಮತ್ತು ಕೊನೆಗೆ ಇಬ್ಬರು ಫೈನಲ್ಲಿಗೆ ತಲುಪುತ್ತಾರೆ. ಅವರಲ್ಲೊಬ್ಬ ಮಾತ್ರ ಚಾಂಪಿಯನ್ ಎನ್ನಿಸಿಕೊಳ್ಳುತ್ತಾನೆ. ಅಂತಹ ಒಬ್ಬ ಅದೃಷ್ಟಶಾಲಿ ನಾನಾಗಿದ್ದೆ. ಆ ವಿಂಬಲ್ಡನ್ ಪಾರಿತೋಷಕವನ್ನು ಕೈಯಲ್ಲಿ ಹಿಡಿದು ಸಂತೋಷದಲ್ಲಿ ತೇಲಾಡುತ್ತಿರುವಾಗ ನಾನು ಆಕಾಶದ ಕಡೆಗೆ ನೋಡಿ,  ಭಗವಂತಾ ನನಗೇಕೆ ಇಂಥ ಸಂತೋಷ ಕೊಟ್ಟೆ, ಎಂದು ಕೇಳಿದೆನೇ? ಈಗ ಏಕೆ ಈ ಪ್ರಶ್ನೆ ಕೇಳಲಿ?`  ಇಂಥ ಸಮತೋಲನ ಮನಃಸ್ಥಿತಿ ಹೊಂದಿದ್ದವನು ಆಶ್. ಅವನು 1993 ರ ಫೆಬ್ರವರಿ 6ರಂದು ಆತ ದೇಹ ಬಿಟ್ಟ. ಆದರೆ ಜನರ ಮನಸ್ಸಿನಲ್ಲಿ ಉಳಿದುಬಿಟ್ಟ. ಎಲ್ಲಿಂದ ಎಲ್ಲಿಗೆ ಜೀವನದ ಪಯಣ? ಸಾಧನೆಗೆ ಮಿತಿಗಳಿಲ್ಲ. ನಮ್ಮ ಮನಸ್ಸಿನ ಮಿತಿಗಳೇ ನಮ್ಮ ಜೀವನದ ಧೋರಣೆಗಳನ್ನು, ಸಾಧನೆಯ ಮಿತಿಗಳನ್ನು ನಿರ್ಧರಿಸುತ್ತವೆ. ನಾವೇ ಹಾಕಿಕೊಂಡ ಈ ಮಿತಿಗಳನ್ನು ಮೀರಲು ಪ್ರಯತ್ನಿಸೋಣ.

Krupe - Prajavani ; 08 July 2011

Friday, July 22, 2011

ನಂಬಿಕೆಯೇ ದೇವರು

ರಾಜೀವನ ಆರೋಗ್ಯ ಚೆನ್ನಾಗಿಯೇ ಇತ್ತು. ಅವನಿಗೆ ವಯಸ್ಸು ನಲವತ್ತಾಗಿದ್ದರೂ ಇಪ್ಪತ್ತೈದರ ಹುಡುಗನ ಹಾಗೆ ಸಂತೋಷವಾಗಿ ಚಟುವಟಿಕೆಯಿಂದ ಕೆಲಸಮಾಡಿಕೊಂಡಿದ್ದ. ಒಂದು ದಿನ ತುಂಬ ತಲೆನೋವು ಕಾಣಿಸಿಕೊಂಡಿತು.

ಯಾವುದೋ ಮಾತ್ರೆ ತೆಗೆದುಕೊಂಡ. ತಾತ್ಪೂರ್ತಿಕವಾಗಿ ನೋವು ಕಡಿಮೆಯಾದಂತೆ ಅನಿಸಿದರೂ ಮತ್ತೆ ಮರುಕಳಿಸಿತು. ಮರುದಿನ ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ ಎಡಕಣ್ಣಲ್ಲಿ ಒಂದು ಕೆಂಪು ಚುಕ್ಕಿ ಕಂಡಂತಾಯಿತು. ಸಂಜೆಯ ಹೊತ್ತಿಗೆ ಅದು ಕಣ್ಣು ತುಂಬೆಲ್ಲ ಹರಡಿಕೊಂಡು ಕಣ್ಣೇ ಕಾಣದಂತಾಯಿತು. ಮರುದಿನವೇ ವೈದ್ಯರ ಕಡೆಗೆ ಹೋದ.

ಹತ್ತಾರು ಪರೀಕ್ಷೆಗಳನ್ನು ನಡೆಸಿ ರಾಜೀವನ ಎಡಕಣ್ಣಿಗೆ ರಕ್ತ ಸರಬರಾಜು ಮಾಡುವ ರಕ್ತನಾಳದಲ್ಲಿ ತಡೆಯುಂಟಾಗಿದ್ದು ಆ ಕಣ್ಣು ಪೂರ್ತಿ ದೃಷ್ಟಿ ಕಳೆದುಕೊಂಡಿದೆ ಎಂತಲೂ ಅದನ್ನು ಸರಿಮಾಡುವುದು ಸಾಧ್ಯವಿಲ್ಲವೆಂದೂ ವೈದ್ಯರು ತಿಳಿಸಿದರು. ಇದು ಏಕೆ ಆಯಿತು ಎಂಬುದು ತಿಳಿಯದಾಗಿದೆ ಎಂದರು. ಈ ಆಘಾತವೇ ಸಾಕಾಗಿತ್ತು.

ಮಾರನೆಯ ದಿನ ಬೆಳಿಗ್ಗೆ ಎದ್ದು ಮನೆಯಿಂದ ಹೊರಗೆ ಕಾಲಿಡುತ್ತಿದ್ದಂತೆ ತಲೆಗೆ ಸುತ್ತುಬಂದಂತಾಗಿ ರಾಜೀವ ಕುಸಿದುಬಿದ್ದ. ಮತ್ತೆ ಅವನನ್ನು ಆಸ್ಪತ್ರೆಗೆ ಸೇರಿಸಿದರು.

ಈ ಬಾರಿ ಹೃದಯತಜ್ಞರು ಪರೀಕ್ಷೆಗಳನ್ನು ನಡೆಸಿದರು. ಅವರ ತೀರ್ಮಾನ ಇನ್ನೂ ಭಯಂಕರವಾಗಿತ್ತು. ಇದೊಂದು ಅತ್ಯಂತ ಅಪರೂಪದ ರೋಗ ತಾಕಾಯಾಸಸ್ ಆರ್ಟಿರಿಟಿಸ್ ರೋಗವಂತೆ. ಇದರಿಂದ ರಕ್ತನಾಳಗಳಲ್ಲಿ ಉರಿ, ಊತ, ಉಂಟಾಗುತ್ತ ಅವು ಸಣ್ಣದಾಗುತ್ತ ಹೋಗುತ್ತವಂತೆ. ತಕ್ಷಣವೇ ಆಪರೇಷನ್ ಮಾಡದೇ ಹೋದರೆ ಬದುಕುವುದು ದುಸ್ತರ.

ನಾಲ್ಕು ದಿನಗಳ ಹಿಂದೆಯೇ ಆರೋಗ್ಯವಾಗಿದ್ದ ರಾಜೀವನಿಗೆ ಸಿಡಿಲು ಬಡಿದಂತಾಯಿತು. ನಾಲ್ಕೇ ದಿನಗಳಲ್ಲಿ ಅದೆಷ್ಟು ಬದಲಾವಣೆ? ರಾಜೀವ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದ. ಮತ್ತೊಬ್ಬರಿಗೆ ಈ ಪರಿಯ ತೊಂದರೆ ಬಂದರೆ ಯಾವ ಚಿಂತೆ ಮಾಡಬೇಡಿ ಎಲ್ಲ ಸರಿಹೋಗುತ್ತದೆ ಎಂದು ಹೇಳುವುದು ಬಹಳ ಸುಲಭ. ಆ ಪರಿಸ್ಥಿತಿ ತಮಗೇ ಬಂದಾಗ ಯಾವ ಹೊರಗಿನ ಸಮಾಧಾನ ಧೈರ್ಯವನ್ನು ಕೊಡುವುದಿಲ್ಲ. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಸೇರಿಕೊಂಡ ರಾಜೀವ ದಿನದಿನಕ್ಕೆ ಹತಾಶನಾಗುತ್ತಿದ್ದ. ತನ್ನ ನಂತರ ಹೆಂಡತಿ ಹಾಗೂ ಸಣ್ಣ ವಯಸ್ಸಿನ ಮಗನ ಜೀವನ ನಡೆಯುವ ಬಗೆ ಹೇಗೆ ಎಂದು ಚಿಂತಿಸತೊಡಗಿದ. ಅವನ ಪರಿವಾರದವರೂ ಎದೆ ಒಡೆದುಕೊಂಡಿದ್ದರು.

ಆಸ್ಪತ್ರೆಯಲ್ಲಿ ಅವನನ್ನು ಕಾಣಲು ಸ್ನೇಹಿತರು ಬರುತ್ತಿದ್ದರು. ಕೆಲವರು ಶುಭಸಂದೇಶದ ಪತ್ರಗಳನ್ನು ಕೊಟ್ಟು ಹೋಗುತ್ತಿದ್ದರು. ರಾಜೀವನನ್ನು ತಪಾಸಿಸಲು ಬಂದ ಆಸ್ಪತ್ರೆಯ ವೈದ್ಯರೂ ಒಂದು ಶುಭಸಂದೇಶದ ಕಾರ್ಡನ್ನು ಕೊಟ್ಟು ಹೋದರು. ನಂತರ ರಾಜೀವ ಅದನ್ನು ಗಮನವಿಟ್ಟು ನೋಡಿದ. ಅದರ ಮುಖಪುಟದ ಮೇಲೆ ಸುಂದರವಾದ ಶ್ರೀ ಕೃಷ್ಣನ ಚಿತ್ರವಿದೆ. ಆದರೆ ಶ್ರೀ ಕೃಷ್ಣ ವೈದ್ಯರ ಹಾಗೆ ಗೌನು ಹಾಕಿಕೊಂಡಿದ್ದಾನೆ, ಕೊರಳಲ್ಲಿ ಸ್ಟೆಥಾಸ್ಕೋಪ್ ಇದೆ. ಚಿತ್ರದ ಮೇಲೊಂದು ಸುಂದರ ಬರಹ,  `ನಮ್ಮ ಮುಖ್ಯ ಶಸ್ತ್ರಚಿಕಿತ್ಸಕ.` ಅದನ್ನು ನೋಡಿ ರಾಜೀವನಿಗೆ ಏನೋ ಧೈರ್ಯ ಬಂದಂತಾಯಿತು. ತಾನು ಅತ್ಯಂತ ಸಮರ್ಥ ಶಸ್ತ್ರಚಿಕಿತ್ಸಕನ ಕೈಯಲ್ಲಿ ತನ್ನ ದೇಹವನ್ನು ಒಪ್ಪಿಸಿದ್ದೇನೆ ಎನ್ನಿಸಿತು. ಆಪರೇಷನ್ ಮಾಡುವ ವೈದ್ಯರ ಹೃದಯದಲ್ಲಿರುವ ಭಗವಂತ ತನ್ನನ್ನು ರಕ್ಷಿಸುತ್ತಾನೆ ಎಂಬ ಭಾವನೆ ಬಂತು. ಮನಸ್ಸು ನಿರಾಳವಾಯಿತು. ಹೆಂಡತಿ, ಸ್ನೇಹಿತರೊಂದಿಗೆ ನಗುನಗುತ್ತ ಹಿಂದಿನ ದಿನ ಕಳೆದ. ಮರುದಿನವೇ ಆಪರೇಷನ್ ಇದ್ದರೂ ಚೆನ್ನಾಗಿ ನಿದ್ರೆ ಮಾಡಿದ. ಮರುದಿನ ಆಪರೇಷನ್ ಥೇಟರಿಗೆ ಕರೆದುಕೊಂಡು ಹೋಗುವಾಗ ಹೆಂಡತಿಗೆ ಹೇಳಿದ, `ನನಗೇನಾಗುತ್ತದೆ ಎಂಬ ಚಿಂತೆಯಿಲ್ಲ. ಭಗವಂತನ ಕೈಯಲ್ಲಿ ಒಪ್ಪಿಸಿಕೊಂಡು ಬಿಟ್ಟಿದ್ದೇನೆ. ನೀನು ಭಯಪಡಬೇಡ.`

ಎಂಟು ತಾಸುಗಳ ಆಪರೇಷನ್ ನಡೆಯಿತು. ಅವನ ರಕ್ತನಾಳಗಳನ್ನೆಲ್ಲ ಸರಿಪಡಿಸಿದರು ವೈದ್ಯರು. ಮೂರು ದಿನಗಳ ದೀರ್ಘ ಮಂಪರಿನಿಂದ ಹೊರಬಂದ ರಾಜೀವ. ಅವನಿಗೆ ಪುನರ್ಜನ್ಮವಾಗಿತ್ತು. ಈಗಲೂ ಅವನ ಎಡಗಣ್ಣು ಕಾಣುವುದಿಲ್ಲ, ಮೊದಲಿನ ಹಾಗೆ ಹಾರಾಟ ಮಾಡುವಂತಿಲ್ಲ. ಆದರೂ ತನ್ನನ್ನು ನಿಭಾಯಿಸಿಕೊಂಡು ಬದುಕಿದ್ದಾನೆ. ಬದುಕಿನಲ್ಲಿ ಆಶಾವಾದ ಉಳಿಸಿಕೊಂಡಿದ್ದಾನೆ, ಉತ್ಸಾಹ ಬೆಳೆಸಿಕೊಂಡಿದ್ದಾನೆ. ಇದು ಪವಾಡವಲ್ಲ. ವೈದ್ಯರ ಪರಿಶ್ರಮ ಹಾಗೂ ವಿಜ್ಞಾನದ ಪ್ರಗತಿಯ ಸಾಧನೆ. ಇದರೊಂದಿಗೆ ಮನಸ್ಸಿಗೆ ಚೈತನ್ಯ ತಂದ ನಂಬಿಗೆಯ ಫಲ. ಯಾವುದೇ ನಂಬುಗೆ ಪವಾಡಸದೃಶ ಬದಲಾವಣೆಯನ್ನು ತರಬಲ್ಲದು.

ಬಾಳಿನ ಬುನಾದಿ ನಂಬಿಕೆ. ಈ ನಂಬಿಕೆ ವ್ಯಕ್ತಿಗಳ ಮೇಲೆ ಇರಬಹುದು, ಸಂಸ್ಥೆಗಳ ಮೇಲೆ, ದೇಶದ ಮೇಲೆ, ಮಾನವ ಸ್ವಭಾವಗಳ ಮೇಲೆ ಅಥವಾ ಭಗವಂತನ ಮೇಲಿರಬಹುದು. ನಮ್ಮ ನಂಬಿಕೆಯೇ ನಮ್ಮನ್ನು ದೇವರಾಗಿ ಕಾಪಾಡುತ್ತದೆ.

Krup: Prajavani   21 July 211

Thursday, July 21, 2011

ಲೋಕದ ಕಣ್ಣಿಗೆ ರಾಧೆಯು ಕೂಡ

ಲೋಕದ ಕಣ್ಣಿಗೆ ರಾಧೆಯು ಕೂಡ
ಎಲ್ಲರಂತೆ ಒಂದು ಹೆಣ್ಣು
ನನಗು ಆಕೆ ಕೃಷ್ಣನ ತೋರುವ
ಪ್ರೀತಿಯು ನೀಡಿದ ಕಣ್ಣು ...

ತಿಂಗಳ ರಾತ್ರಿ ತೊರೆಯ ಸಮೀಪ
ಉರಿದರೆ ಯಾವುದೋ ದೀಪ
ಯಾರೊ ಮೋಹನ ಯಾವ ರಾಧೆಗೋ
ಪಡುತಿರುವನು ಪರಿತಾಪ ...

ನಾನು ನನ್ನದು ನನ್ನವರೆನ್ನುವ
ಹಲವು ತೊಡಕುಗಳ ಮೀರಿ
ಭಾವಿಸಿ ಸೇರಲು ಬೃಂದಾವನವ
ರಾಧೆ ತೋರುವಳು ದಾರಿ ....

ಮಹಾಪ್ರವಾಹ... ಮಹಾಪ್ರವಾಹ
ಮಹಾಪ್ರವಾಹ... ಮಹಾಪ್ರವಾಹ
ತಡೆಯುವರಿಲ್ಲ ಪಾತ್ರವಿರದ ತೊರೆ ಪ್ರೀತಿ
ತೊರೆದರು ತನ್ನ ತೊರೆಯದು ಪ್ರಿಯನ
ರಾಧೆಯ ಪ್ರೀತಿಯ ನೀತಿ ಇದು
ರಾಧೆಯ ಪ್ರೀತಿಯ ನೀತಿ ....
- ಎಚ್.ಎಸ್.ವೆಂಕಟೇಶಮೂರ್ತಿ

Wednesday, July 20, 2011

ಡಾ . ಗುರುರಾಜ ಕರ್ಜಗಿ - ಕಿರು ಪರಿಚಯ

ಡಾ . ಗುರುರಾಜ ಕರ್ಜಗಿ ಯವರು ಶಿಕ್ಷನ ತಜ್ಞರು. ಇವರು ಮೂರೂ ದಶಕಗಲಿಗಿಂತಲೂ ಹೆಚ್ಚುಕಾಲ ಉನ್ನತ ಮಟ್ಟದ ವಿದ್ಯಾಸಂಸ್ಥೆ ಕಟ್ಟಿ , ಬೆಳೆಸಿ, ಪ್ರಾಧ್ಯಾಪಕರಾಗಿ , ಸಾವಿರಾರು ವಿದ್ಯಾರ್ಥಿಗಳ ಕನುಸುಗಳಿಗೆ ಬೆಳಕಾಗಿ, ಅವರ ಭವಿಷ್ಯವನ್ನು ಉಜ್ಜಲವಾಗಿಸಿದವರು. ವಿಶ್ವದಾದ್ಯಂತ ಶಿಷ್ಯ ಪರಂಪರೆಯನ್ನ್ನು ಹೊಂದಿರುವ ಇವರು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟನ್ನು ಪಡೆದುಕೊಂಡಿದ್ದಾರೆ. ೨೨ಕ್ಕೂಹೆಚ್ಚು ಸಂಶೋಧನಾ ಲೇಖನಗಳನು ದೇಶ ವಿದೇಶಗಳ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ .

ವಿ.ವಿ. ಎಸ್. ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ೧೬ ವರ್ಷಗಳ ಕಾಲ ಪ್ರಾಂಶುಪಾಲರಾಗಿ , ಜೈನ್ ಅಂತರರಾಷ್ಟ್ರೀಯ ವಸತಿ ಶಾಲೆಯಾ ಸ್ಥಾಪಕ ಪ್ರಾಂಶುಪಾಲರಾಗಿ ಹಾಗು ನಿರ್ದೇಶಕರಾಗಿ , ಅಂತರರಾಷ್ಟ್ರೀಯ ಸೃಜನಶೀಲ ಅಧ್ಯಾಪನ ಕೇಂದ್ರದ (iACT) ಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು ಈಗ ಸೃಜನಶೀಲ ಅಧ್ಯಾಪನ ಕೇಂದ್ರದ (ACT) ಅಧ್ಯಕ್ಷರಾಗಿದ್ದಾರೆ , ಇವರ ಅನುಭವದ ಮೂಸೆಯಿಂದ ಕತೆಗಳೂ , ಲೇಖನಗಳೂ, ಪಠ್ಯ ಪುಸ್ತಕಗಳು ಮುಡಿಬಂದಿವೆ . ಸೃಜನ ಶೀಲತೆ , ಸಂವಹನಕಲೆ , ಮುಂತಾದದುಗಳಲಿ ಆಸಕ್ತಿ ಹೊಂದಿರುವ ಡಾ ಕರಜಗಿಯವರು ತಮ್ಮ ಧನಾತ್ಮಕ ಚಿಂತನೆಗಳು , ಕಾರ್ಯಕ್ಷಮತೆ ಹಾಗೂ ಮಾನವೀ ಮೌಲ್ಯಗಳಿಗಾಗಿ ಚಿರಪರಿಚಿತರು ಇವರ ಉಪನ್ಯಾಸ ಹಾಗು ಕಾರ್ಯಾಗಾಳಿಗೆ , ಭಾರತ ಮತ್ತು ವಿದೇಶಗಳಿಲಿಯೂ ತುಂಬ ಬೇಡಿಕೆ ಇದೆ .

Monday, July 18, 2011

ಇವರು ನಮ್ಮವರು; -

ಕನ್ನಡ ಡಿಂಡಿಮ ಬಾರಿಸಿದ ಕನ್ನಡ ಕಣ್ಮಣಿಗಳ ಅಪರೂಪದ ಚಿತ್ರ:
ಎಡದಿಂದ-ನಾಡಿಗೇರ್,ಜಿ ಬಿ ಜೋಷಿ,ಕೆ ವಿ ಅಯ್ಯರ್,ಆಲೂರು ವೆಂಕಟ ರಾವ್,ವಿ ಬಿ ನಾಯಕ್,ಕರ್ಣ
  
Krupe _ ಕನ್ನಡಿಗರ ಒಕ್ಕೂಟ - Face book

Sunday, July 17, 2011

ಶಿವರಾತ್ರಿ

ಶಿವನಿಗ್ಯಾವುದು ಹಗಲು? ಯಾವುದವನಿಗೆ ರಾತ್ರಿ?
ನಿತ್ಯ ಜಂಗಮ ಮೂರ್ತಿಗಿರುಳು ಹಗಲಿನ ಫರಕು
ಇಲ್ಲ, ಹಗಲಾದಾಗ ಇಲ್ಲಿ, ಅಮೆರಿಕೆಯಲ್ಲಿ
ನಟ್ಟಿರುಳು. ಹಗಲರ್ಧ ; ಇರುಳರ್ಧ-ಅರ್ಧನಾ
ರೀಶ್ವರಗೆ. ಈ ಶಿವರಾತ್ರಿ ಎನ್ನುವುದೆ ಪಾರ್ವತಿ.
ಚಂದ್ರದಂಡೆಯ ಮುಡಿದು, ನಕ್ಷತ್ರನೆಕ್ಲೇಸ
ಧರಿಸಿರುವ ನಗೆಮುಗುಳ ಕಾಳಿ, ಶಂಕರನರಸಿ.
ಕೈಲಾಸಲಾಸ್ಯ ಮಾನಸದ ಕನ್ನಡಿಯಲ್ಲಿ.

ಚಂದ್ರಬೋಗಣಿ ತುಂಬ ತುಳುಕಾಡುತಿರೆ ಇರುಳು.
ತಿರುಪೆ ಮುಗಿಸಿದ ಜೋಗಿ ಧವಳಗಿರಿ ಬಾಗಿಲಲಿ
ನಿಂತು ಮೆಲ್ದನಿಯಲ್ಲಿ ಉಸುರಿದನು : "ಶಂಕರೀ...
ತೆರೆಯೆ ಬಾಗಿಲು ಬೇಗ ಆಲೋಲ ನೇತ್ರೆಯೇ,
ನನ್ನಧರಪಾತ್ರೆಯೇ, ಬಿಲ್ವವನಧಾತ್ರಿಯೇ,
ಉರಿವ ಹಗಲಿಗೆ ತಂಪನೆರೆವ ಶಿವರಾತ್ರಿಯೇ!"

-ಎಚ್. ಎಸ್. ವೆಂಕಟೇಶಮೂರ್ತಿ

Thursday, July 14, 2011

ಇರುಳ ಸಮಯ

ಇರುಳ ಸಮಯ ಸುರಿಮಳೆಯೊಳಗೆ
ದೋಣಿಗಳಿಳಿದಿವೆ ಹೊಳೆಯೊಳಗೆ

ಶ್ಯಾಮಲ ಸಾಗರವೇ ಗುರಿಯೆನ್ನುತ
ಸಾಗಿವೆ ಸಾವಿರ ದೋಣಿಗಳು |
ಸೆರಗೇ ಹಾಯಿ ! ಹೃದಯವೆ ಹುಟ್ಟು !
ದೋಣಿ ಹಿಂದೆ ಜಲವೇಣಿಗಳು ||

ಏರಿಳಿಯುವ ಅಲೆ! ಮುಂದೆ ಇದಿರು ಹೊಳೆ !
ಜಗ್ಗುವುವೇ ಈ ಹಾಯಿಗಳು ?
ಎದೆಯನೆ ಸೀಳುವ ಹೋಳು ಬಂಡೆಗಳು
ಆ ಎನ್ನುವ ಸುಳಿಬಾಯಿಗಳು ||

ಮುಳುಗಿಸೊ ಅಥವಾ ತೇಲಿಸೊ ರಥವ
ಧೃತಿಯೊಂದೇ ಗತಿ ಹಾಡುತಿವೆ |
ಮುಳುಗುವ ಹೊರತೂ ತೇಲದು ದೋಣಿ
ಹಾಯಿ ವಿದಾಯವ ಹೇಳುತಿವೆ ||

-ಹೆಚ್. ಎಸ್. ವೆಂಕವೇಶಮೂರ್ತಿ

Wednesday, July 13, 2011

ಕಾಲವಲ್ಲದ ಕಾಲ

ಕಾಲವಲ್ಲದ ಕಾಲ
ಧೋಮಳೆಯ ಸುರಿಸುತಿವೆ
ಮೋಡಗಳ ಅಣಕಿಸುತ ನಿನ್ನ ಕಣ್ಣು |
ಮನೆಯೊಳಗೆ ಇದ್ದರೂ ಮಳೆಯಲ್ಲಿ ತೋಯುತಿಹೆ
ನಿಟ್ಟಿಸುತ ತೆರೆದಿರುವ ಬಾಗಿಲನ್ನು ||

ಮೋಡ ಮುಸುಕಿದ ಇರುಳು ಆಗಸದ ತಾರೆಗಳು
ಕಾಣದಾಗಿವೆ ಮೇಲೆ ಬಾನಿನಲ್ಲಿ
ಮೋಡ ಮುಸುಕಿದ್ದರೂ ಮಳೆ ಸುರಿಯುತಿದ್ದರೂ
ಜೋಡಿ ನಕ್ಷತ್ರಗಳು ಕಣ್ಣಿನಲ್ಲಿ ||

ಹೊರಗೆ ತಣ್ಣಗೆ ಗಾಳಿ ನಡುಗುತಿವೆ ಮರ ಗಿಡಾ
ಒಳಗೆ ಬಿಸಿಯುಸಿರ ಹಬೆ ಹಾಯುತ್ತಿದೆ |
ಕಂಬನಿಯ ತನಿಮಳೆಗೆ ನೆಂದ ಮಾತಿನ ಹಕ್ಕಿ
ತುಟಿಯಂಚಿನಲಿ ತೊಪ್ಪ ತೋಯುತ್ತಿದೆ ||

ಸುರಿವ ಕಂಬನಿಯಲ್ಲಿ ಕಣ್ಣ ಕಾಡಿಗೆ ಕರಗಿ
ಕೆನ್ನೆಸರಪಳಿಯನ್ನು ಬರೆಯುತ್ತಿದೆ |
ಮಾಮರದ ಮೇಲೊಂದು ಕೂ ಎಂಬ ಕೋಗಿಲೆ
ಕೂಗು ಬಾಗಿಲವರೆಗು ಹಾಯುತ್ತಿದೆ ||

- ಹೆಚ್.ಎಸ್. ವೆಂಕಟೇಶಮೂರ್ತಿ

Tuesday, July 12, 2011

ದೂರವಿಡೆ ಸಖಿ

ದೂರವಿಡೆ ಸಖಿ
ದೂರವಿಡೆ |
ಕೈಯವೀಣೆಯನು ದೂರವಿಡೆ ||

ವೀಣೆಯ ನಾದವ ಕೇಳಿ ಚಂದ್ರಮನ
ರಥದ ಜಿಂಕೆಗಳು ಓಡದಿವೆ |
ನೆರಳು ಹೊರಳುತಿದೆ ; ಇರುಳು ಕೆರಳುತಿದೆ
ಬೆಳದಿಂಗಳ ಮಳೆ ಬಾರದಿದೆ ||

ನೋವಿನ ಪರಿಯನು ನೊಂದವರರಿವರು
ನೋಯದೆ ನೋಯುವ ಬಗೆಯುಂಟೆ ?
ಚಂದಿರನಾದನು ಬೆಂಕಿಯ ಗೂಡು
ನೊಂದ ಬಳಿಕ ನೀನದ ನೋಡು ||

ಮರುಳುಗೊಳ್ಳುವುವು ಚುಕ್ಕಿಯ ಜಿಂಕೆ
ವೀಣೆಯ ಮುಚ್ಚಿಡೆ ಜೀವಸಖೀ |
ಚಂದ್ರ ಮಹೋತ್ಸವ ಮುಂದಕೆ ಸಾಗಲಿ
ವಿರಹಿಗಳಿಗೆ ಕಾರಿರುಳೆ ಸಖೀ ||

- ಹೆಚ್. ಎಸ್. ವೆಂಕಟೇಶಮೂರ್ತಿ

Wednesday, July 6, 2011

ಅಕ್ಕಮಹಾದೇವಿ


ಅರಿವೆನೆಂದರೆ ಅರಿಯಬಾರದು ನೋಡಾ
ಘನಕ್ಕೆ ಘನ ತಾ ನೋಡಾ
ಚನ್ನಮಲ್ಲಿಕಾರ್ಜುನ ನಿರ್ಣಯವಿಲ್ಲದೆಪೋದೆನು||

- ಜಗದೊಡೆಯ ಮಲ್ಲಿಕಾರ್ಜುನನು(ಈಶ್ವರ) ಎಲ್ಲಾ ಶಕ್ತಿಗಳಿಗಿಂತಲೂ ಅಗಾಧ ಹಾಗೂ ಶಕ್ತಿಯುಳ್ಳವನು, ಅವನನ್ನು ತಿಳಿಯುವುದು ತುಂಬಾ ಕಠಿಣ ಅವನನ್ನು ತಿಳಿದುಕೊಂಡೆನೆಂದರೆ ನನ್ನ ಜೀವನವೇ ಅದೃಷ್ಟಶಾಲಿ(ಧನ್ಯ).

-----------

ಈಳೆ, ನಿಂಬೆ, ಮಾವು ಮಾದಲಿಕೆಗೆ ಹುಳಿನೀರನೆರೆದವರಾರಯ್ಯ
ಕಬ್ಬು, ಬಾಳೆ, ಹಲಸು, ಗರಿಕೇಳಕೆ ಸಿಹಿನೀರೆರದವರಾರಯ್ಯ!
ಕಳೆವಸಾಲೆಗ ಓಗರದ ಉದಕವನೆರೆದವರಾರಯ್ಯ!
ಮರುಗ, ಮಲ್ಲಿಗೆ, ಪಚ್ಚೆಗೆ, ಪರಿಮಳದುದಕವನೆರೆದವರಾರಯ್ಯ
ಇಂತೀ ಜಲವು ಒಂದೇ ಆಕಾರವು ಒಂದೇ ಹಲವು ದ್ರವ್ಯಂಗಳ
ಕೂಡಿ ತನ್ನ ಪರಬೇಕಾಗಿ ಹಾಗೆ ಎನ್ನ ದೇವ ಚನ್ನಮಲ್ಲಿಕಾರ್ಜುನಯ್ಯನು
ಹಲವು ಜಗಂಗಳ ಕೂಡಿಕೊಂಡಿರ್ದರೇನು? ತನ್ನ ಪರಿ ಬೇರೆ!

- ಕಿತ್ತಳೆ, ನಿಂಬೆ, ಮಾವು, ಮುಂತಾದುವುಗಳಿಗೆ ಹುಳಿ. ಕಬ್ಬು, ಬಾಳೆ, ಹಲಸು, ನಾರಿಕೇಳಫಲ ಇವುಗಳಿಗೆ ಸಿಹಿ, ಒಗರು ಮತ್ತು ಮರುಗ, ಮಲ್ಲಿಗೆ, ಪಚ್ಚೆಗಳಿಗೆ ಪರಿಮಳ(ಸುವಾಸನೆ) ಇವುಗಳನ್ನೆಲ್ಲ ನೀಡಿದವರು ಯಾರು..? ಇವೆಲ್ಲ ದೇವನಿರ್ಮಿತ, ಇವುಗಳೆಲ್ಲವೂ ನೀರು, ಭೂಮಿ, ಆಕಾಶವನ್ನೇ ಅವಲಂಬಿಸಿರುತ್ತವೆ ಹಾಗೆ ಜಗತ್ತಿನಲ್ಲಿರುವ ಎಲ್ಲಾ ಜೀವರಾಶಿಗಳೂ ದೇವರ ಸನ್ನಿಧಿಯಲ್ಲಿ ಬದುಕು ಸಾಗಿಸುವಂತಹವು ಆದರೂ ಆ ದೇವನ ರೀತಿ ಮಾತ್ರ ನಮಗೆ ಅಳವಡದು.

---------------

ಅಯ್ಯ ದೂರದಲಿರ್ದಿಹೆ ಎಂದು ಬಾಯಾರಿ ಬಳಲುತಿರ್ದೆ
ಅಯ್ಯ ಸಾರಿಬಂದು ನೀನೆನ್ನ ಕರಸ್ಥಲದಲ್ಲಿ ಮೂರ್ತಿಗೊಂಡೆ
ಇನ್ನಾರಂತೆ ಎಲ್ಲವೂ ಲಿಂಗ ಆಗ ನಿಮ್ಮಲ್ಲಿ ನೆಟ್ಟವು ನೋಡಯ್ಯ
ಚನ್ನಮಲ್ಲಿಕಾರ್ಜುನ ನಿಮ್ಮ ನೆನ್ನ ಕರಸ್ಥಲದಲಿ
ನೋಡಿ, ನೋಡಿ, ಕಂಗಳೇ ಪ್ರಾಣವಾಗಿರ್ದೆನಯ್ಯ ||

- ದೇವನೇ ನೀನು ಬಹು ದೂರದಲ್ಲಿರುವೆ ಎಂದು, ನೀರಿನ ದಾಹ ತಡೆಯದೆ ಬಳಲುವವರಂತೆ ಪರಿತಪಿಸುತ್ತಲಿದ್ದೆ. ಆದರೆ ನೀನು ಒಂದು ಸಾರಿ ನನ್ನ ಕರಸ್ಥಳದಲ್ಲಿ ಪ್ರಸನ್ನವಾದೇ ನೋಡು ಅಂದೇ ನನ್ನ ಮನ ನಿನ್ನಲ್ಲಿ ಲೀನವಾಯಿತು. ದೇವನೆ ನಿನ್ನನ್ನು ಪ್ರೇಮದಿಂದ ಕಂಡ ಈ ಕಂಗಳೇ ಪ್ರಾಣವಾದವಯ್ಯ, ನಾನೇ ಪುಣ್ಯವಂತಳು......

Friday, July 1, 2011

ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು

ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು || ನಾನು ||


ಹತ್ತಿರಿರಲಿ ದೂರವಿರಲಿ ಅವನೇ ರಂಗಸಾಲೆ
ಕಣ್ಣು ಕಟ್ಟುವಂಥ ಮೂರ್ತಿ ಕಿವಿಗೆ ಮೆಚ್ಚಿನೋಲೆ || ನಾನು ||


ಆತ ಕೊಟ್ಟ ವಸ್ತು ಒಡವೆ ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂಧಿ ಕೆನ್ನೆತುಂಬ ಮುತ್ತು || ನಾನು ||


ಕುಂದು ಕೊರತೆ ತೋರಲಿಲ್ಲ ಬೇಕು ಹೆಚ್ಚಿಗೇನು
ಹೊಟ್ಟೆಗಿತ್ತ ಜೀವಫಲವ ತುಟಿಗೆ ಹಾಲು ಜೇನು || ನಾನು ||